ಅಂಕಣ
Sunday Read: ಹೊಸ ಪುಸ್ತಕ: ಚಾಂಡಾಳನೊಬ್ಬನ ಆತ್ಮವಿಮರ್ಶೆ
ಮನೋರಂಜನ್ ಬ್ಯಾಪಾರಿ ಅವರ ʼInterrogating my Chandala Life- An Autobiography of a Dalit’ ಕೃತಿಯನ್ನು ಡಾ.ಎಚ್. ಎಸ್ ನಾಗಭೂಷಣ ಅವರು ʼಚಾಂಡಾಳನೊಬ್ಬನ ಆತ್ಮವಿಮರ್ಶೆ- ದಲಿತನೊಬ್ಬನ ಆತ್ಮಕಥನʼ ಎಂದು ಕನ್ನಡಕ್ಕೆ ತಂದಿದ್ದಾರೆ. ಅದರಿಂದ ಆಯ್ದ ಒಂದು ಭಾಗ ಇಲ್ಲಿದೆ.
ಕ್ಯಾನ್ಸರ್ ರೋಗ ಬಂದವನು ಮತ್ತಾವ ರೋಗಕ್ಕೂ ಹೆದರುವುದಿಲ್ಲವಂತೆ, ಹಾಗೆಯೇ ಪೊಲೀಸ್ಗೆ ಸಿಕ್ಕಿಹಾಕಿಕೊಂಡವನು ಯಾವುದೇ ಟಿಕೇಟ್ ಕಲೆಕ್ಟರ್ಗೂ ಹೆದರುವುದಿಲ್ಲವಂತೆ. ಹವಾಲ್ದಾರನ ಜೊತೆ ರಿಕ್ಷಾದಲ್ಲಿ ಜೀಬಾನ್ ಪೊಲೀಸ್ ಕ್ವಾರ್ಟರ್ಸ್ ತಲುಪಿದ. ಒಂದು ಮನೆಯ ಬೀಗ ತೆಗೆದು ಒಳಹೋದರು. ಒಳಗೆ ವಿಶೇಷ ಏನೂ ಇರಲಿಲ್ಲ. ಒಂದೆರಡು ಮಂಚಗಳು, ಲುಂಗಿ, ಪೊಲೀಸ್ ಸಮವಸ್ತ್ರ… ಒಂದಿಷ್ಟು ಈರುಳ್ಳಿ, ಆಲೂಗಡ್ಡೆ ನೆಲದ ಮೇಲಿತ್ತು. ಒಂದಿಷ್ಟು ಗೋಧಿ ಹಿಟ್ಟು, ಸಾಸಿವೆ ಎಣ್ಣೆ, ಮಸಾಲೆ ಪದಾರ್ಥ. ಒಂದೆರಡು ಬಕೆಟ್ ಇದ್ದಿಲು ಹಾಗೂ ಒಂದು ಒಲೆ ಮತ್ತು ಒಂದು ಡ್ರಂ ಇದ್ದವು.
‘ಒಲೆ ಹಚ್ಚೋಕೆ ಬರುತ್ತಾ?’
‘ಬರುತ್ತೆ’.
‘ಹಾಗಾದ್ರೆ ಒಲೆ ಹಚ್ಚಿ ಹಿಟ್ಟನ್ನು ಜರಡಿಗೆ ಹಾಕು’.
ಗೋಧಿ ಹಿಟ್ಟನ್ನು ಕಲಸಿ, ಚಪಾತಿ ಮಾಡಿ ಆಲೂಪಲ್ಯ ಮಾಡಿದ.
‘ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ತಗೊಂಡು ಬಾ. ಮಾಲಿಷ್ ಮಾಡು’, ಒಂದೆಡೆ ಕಿತ್ತು ತಿನ್ನೋ ಹಸಿವು. ಇನ್ನೊಂದೆಡೆ ಪೊಲೀಸನ ಆಜ್ಞೆ. ವಿಧಿಯಿಲ್ಲದೆ ಮಾಲಿಷ್ ಮಾಡಿದೆ. ಸುಮಾರು ಒಂದೂವರೆ ಗಂಟೆ ಮಾಲಿಷ್ ಮಾಡಿಸಿಕೊಂಡ.
‘ಸಾಕು. ರಸ್ತೆಯ ಆ ಬದಿಯಲ್ಲಿ ಬಾವಿ ಇದೆ. ಸ್ನಾನಕ್ಕೆ ನೀರು ತಗೊಂಡು ಬಾ’ ಎಂದು ಕಳಿಸಿದ. ಆರು ಬಕೆಟ್ ನೀರು ತಂದು ಡ್ರಂಗೆ ಸುರಿದೆ. ಆರಾಮಾಗಿ ಸ್ನಾನಮಾಡಿ, ತಲೆಬಾಚಿ ನಾಲ್ಕು ಚಪಾತಿ ತಿಂದ. ತನ್ನ ಮಂಚದ ಮೇಲೆ ಕುಳಿತು, ತಂಬಾಕು ತೀಡಿ ಬಾಯಿಗೆ ಹಾಕಿಕೊಂಡು ‘ನಡಿ ಬೇಗ ಸ್ನಾನಮಾಡಿ ಊಟ ಮಾಡು’ ಎಂದ. ಅಲ್ಲಿ ಉಳಿದಿದ್ದು ಎರಡು ಚಪಾತಿಗಳು.
ಜೀಬಾನ್ ಡ್ರಂನಲ್ಲಿ ಉಳಿದಿದ್ದ ಸ್ವಲ್ಪ ನೀರಿನಲ್ಲೇ ಸ್ನಾನಮಾಡಿ ಉಳಿದಿದ್ದ ಚಪಾತಿ ಪಲ್ಯ ತಿಂದ. ಪೊಲೀಸು ಮತ್ತೆ ಸಮವಸ್ತ್ರ ಧರಿಸಿ ಮನೆಗೆ ಬೀಗಹಾಕಿ, ಜೀಬಾನ್ಗೆ ವರಾಂಡದಲ್ಲಿರಲು ತಿಳಿಸಿ ತನ್ನ ಕಛೆರಿ ಕಡೆ ನಡೆದ. ಊಟವಿಲ್ಲದೆ, ನಿದ್ದೆಯಿಲ್ಲದೆ ಕಂಗೆಟ್ಟು ಹೋಗಿದ್ದ. ವರಾಂಡವನ್ನು ಸ್ವಚ್ಛಗೊಳಿಸಿ ಅಲ್ಲಿಯೇ ಬಿದ್ದುಕೊಂಡ. ಮತ್ತೆ ಎಚ್ಚರವಾದದ್ದು ಎದುರುಗಡೆ ಕೆಲ ಮಕ್ಕಳು ಆಟವಾಡುವಾಗ ಆಗುತ್ತಿದ್ದ ಶಬ್ದದಿಂದ. ಮಕ್ಕಳು ಜೋರಾಗಿ ನಗ್ತಾ ಖುಷಿಯಲ್ಲಿ ಆಡ್ತಾ ಇದ್ರು. ಅವರನ್ನು ನೋಡುವಾಗ ಜೀಬಾನ್ಗೆ ತಾನು ಕಳೆದು ಕೊಂಡ ಬಾಲ್ಯದ ಆಟಗಳ ಬಗ್ಗೆ ಬೇಸರವಾಯ್ತು. ಈ ಮಕ್ಕಳೆಲ್ಲಾ ಸರ್ಕಾರಿ ನೌಕರರ ಮಕ್ಕಳು. ತಿಂಗಳಿಗೆ ಸರಿಯಾಗಿ ಸಂಬಳ. ಸರ್ಕಾರಿ ನೌಕರರು ಒಂದು ರೀತಿ ಸರ್ಕಾರ ತೆಗೆದು ಕೊಂಡಿರುವ ದತ್ತು ಮಕ್ಕಳ ಹಾಗೆ. ಅವರಿಗೆ ಸಂಬಳವೂ ಬರುತ್ತದೆ. ಲಂಚವೂ ಸಿಗುತ್ತದೆ.
ಕತ್ತಲಾಗತೊಡಗಿತು. ಮಕ್ಕಳು ಆಟ ನಿಲ್ಲಿಸಿದರು. ದೂರದಿಂದ ಆಜಾನ್ ಕೇಳುತ್ತಿತ್ತು. ರಾತ್ರಿ ಎಂಟಕ್ಕೆ ಪೊಲೀಸು ಬಂದ. ಒಂದು ಸಣ್ಣ ನಗು ಕೊಟ್ಟು- ‘ಇನ್ನೂ ಇಲ್ಲೇ ಇದಿಯಾ?’ ಎಂದ. ಮತ್ತೆ ಗೋಧಿ ಹಿಟ್ಟು ಅಳೆದು ಕೊಟ್ಟು ಜೊತೆಗೆ ಆಲೂ ಹಾಗೂ ತರಕಾರಿ ನೀಡಿ ಚಪಾತಿ-ಪಲ್ಯ ಮಾಡಲು ಹೇಳಿದ. ಊಟಮಾಡಿ ತನ್ನ ಮಂಚದ ಮೇಲೆ ಮಲಗಿದ. ಅವನ ಕೈ ಅಳೆತೆಯಲ್ಲೇ ಜೀಬಾನ್ ಮಲಗಿದ. ಹೆದರಿಕೊಂಡೇ ಮಲಗಿದ್ದ. ಹದಿನಾರು ವಯಸಿನ ಮೃದುದೇಹದ ಜೀಬಾನ್ಗೆ ನಿದ್ದೆ ಬರುವುದು ಕಷ್ಟವಾಗಿತ್ತು. ಎಲ್ಲೋ ದೂರದಲ್ಲಿ ರಣಹದ್ದೊಂದು ಪುಟ್ಟ ಹಕ್ಕಿಯ ಮೇಲೆರೆಗಿತ್ತು. ಎಲ್ಲೆಲ್ಲೂ ಕತ್ತಲು. ಇದು ಸಹಜವಾದ ಕತ್ತಲಲ್ಲ. ಬೇಕೆಂದೇ ಬೆಳಕನ್ನು ಮರೆಮಾಡಿದ ಕತ್ತಲು. ಅದೊಂದು ಕೆಟ್ಟ ಕೊಳಕು ರಾತ್ರಿ. ಎಲ್ಲವೂ ಅಸಹಜವೆನಿಸುತ್ತಿತ್ತು. ಭೂಮಿ ಬಹುಶಃ ತನ್ನ ಪಥ ಬದಲಿಸಿರಬೇಕು. ಮನುಷ್ಯನ ವಿಕಾಸವಾದ ವಿರುದ್ಧ ದಿಕ್ಕಿನತ್ತ ನಡೆದು ಮತ್ತೆ ಅನಾಗರಿಕತೆ, ಅಮಾನವೀಯತೆ ಮರುಕಳಿಸಿದೆಯೆ? ಹಸಿದ ಪ್ರಾಣಿಯಂತೆ ಆ ಹವಾಲ್ದಾರ ಜೀಬಾನ್ ಮೇಲೆರೆಗಿದ. ಬಾಯಿಯಿಂದ ಏನೇ ಶಬ್ಧ ಬರುವ ಮೊದಲು ಪೊಲೀಸು ಎಚ್ಚರಿಸಿದ- ‘ಕಿರುಚಿದರೆ ನಿನ್ನ ಕುತ್ತಿಗೆ ಕತ್ತರಿಸಿ ಬಿಡ್ತೀನಿ’.
ತನ್ನೆಲ್ಲಾ ಕೊಳಕು, ಜಿಗುಟು ಪೌರುಷವನ್ನು ಜೀಬಾನ್ನ ದೇಹದೊಳಗೆ ಸುರಿಸಿದ. ಜೀಬಾನ್ ಎಲ್ಲವನ್ನು ಅವುಡು ಕಚ್ಚಿಕೊಂಡು ಸಹಿಸಿಕೊಂಡ. ಈ ಮುಂಚೆ ಒಂದೆರಡು ಸಂದರ್ಭಗಳಲ್ಲಿ ಹೇಗೋ ತಪ್ಪಿಸಿಕೊಂಡಿದ್ದ. ಆದರೆ ಇಂದು ಯಾರು ಕಾನೂನನ್ನು ಕಾಪಾಡಬೇಕೋ ಅವರಿಂದಲೇ ರಕ್ಷಣೆ ಪಡೆಯಲು ಸಾಧ್ಯವಾಗಲಿಲ್ಲ. ಆತ ಜೀಬಾನ್ನ ದೇಹ ಮಾತ್ರ ಅಲ್ಲ, ಅವನ ಆತ್ಮ ಹಾಗೂ ಅಸ್ಮಿತೆಯ ಮೇಲೆ ಅತ್ಯಾಚಾರವೆಸಗಿದ್ದ. ಅದೆಂತಹ ನೋವು ಯಾತನೆ. ಜೀಬಾನ್ನ ಈವರೆಗಿನ ಈ ಪುಟ್ಟ ಜೀವನದಲ್ಲಿ ಅದೇನೇನು ಅವಮರ್ಯಾದೆಗಳನ್ನು ಅನುಭವಿಸಿದ್ದನೋ, ಅವೆಲ್ಲವೂ ಇದರ ಮುಂದೆ ಏನೂ ಅಲ್ಲ ಎನಿಸಿತು. ಅಬ್ಬ, ಅತ್ಯಾಚಾರವೆನ್ನುವುದು ಅದೆಷ್ಟು ಭೀಕರ. ಸಂತ್ರಸ್ತರಿಗೆ ಜೀವನವೇ ಸಾಕು ಎನಿಸಿಬಿಡುತ್ತದೆ. ಅತ್ಯಾಚಾರ ನಡೆಯುವುದು ಗಂಡಸರಿಂದ ಮಹಿಳೆಯರ ಮೇಲೆ ಮಾತ್ರ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ ಇದು ಮಹಿಳೆಯಿಂದ ಪುರುಷನ ಮೇಲೆ, ಮಹಿಳೆಯಿಂದ ಮಹಿಳೆಯ ಮೇಲೆ ಅಥವಾ ಪುರುಷರಿಂದ ಪುರುಷರ ಮೇಲೂ ನಡೆಯಬಹುದು. ಸಾಮಾನ್ಯವಾಗಿ ಇದರ ಬಗ್ಗೆ ಯಾವ ಕಾಳಜಿಯೂ ಇರುವುದಿಲ್ಲ. ಯಾಕೆಂದರೆ ಇದು ಎಲ್ಲೋ ಅಪರೂಪಕ್ಕೆ ನಡೆಯುವ ಕೃತ್ಯ. ಆದರೆ ವಾಸ್ತವವೆಂದರೆ, ಇದು ಕ್ರೂರ ಜಗತ್ತಿಗೆ ಗೊತ್ತಾಗದ ಹಾಗೆ ಸತತವಾಗಿ ನಡೆಯುವ ಕ್ರಿಯೆ. ಪ್ರಾಣಿಗಳನ್ನೂ ಬಿಡುವುದಿಲ್ಲ. ಸಿಬ್ಪುರ ಪೊಲೀಸ್ ಲೈನ್ನಲ್ಲಿ ಪೇದೆಯೊಬ್ಬ ನಾಯಿಯ ಮೇಲೆ ಅತ್ಯಾಚಾರ ಮಾಡಿದ ಘಟನೆ ನಿಮಗೆ ನೆನಪಿರಬಹುದು. ಅದು ದೊಡ್ಡ ಸುದ್ದಿಯಾಗಲಿಲ್ಲ. ಅದೇ ಒಂದು ಮಹಿಳೆಯ ಮೇಲೆ ಅತ್ಯಾಚಾರ ನಡೆದರೆ ಅದು ದೊಡ್ಡ ಸುದ್ದಿ. ಸಂತ್ರಸ್ತ ಮಹಿಳೆಯ ಬಗ್ಗೆ ಎಲ್ಲರಿಗೂ ಅನುಕಂಪ. ಅದೇ ಒಬ್ಬ ಹುಡುಗನ ಮೇಲೆ ನಡೆದರೆ ಅದು ತಮಾಷೆಯ, ನಗೆಪಾಟಲಿನ ವಿಚಾರ. ಹಾಗಾಗಿ ಜೀಬಾನ್ ಈ ವಿಚಾರವನ್ನು ಬೇರೆಯವರಿಗೆ ಹೇಗೆ ತಾನೆ ಹೇಳಿಯಾನು? ಪೊಲೀಸ್ ವಿರುದ್ಧ ಪೊಲೀಸ್ ಸ್ಟೇಷನ್ನಲ್ಲಿ ದೂರು ಕೊಡಲು ಸಾಧ್ಯವೇ?
ಅಂತೂ ಬೆಳಗಾಯಿತು. ಪೊಲೀಸು ಬೆಳಗಿನ ವಾಯುವಿಹಾರಕ್ಕೆ ಹೋಗಿದ್ದ. ಎಲ್ಲಾ ಒಂದು ರೀತಿಯ ಕೊಳಕು ಕೊಳಕು ಎನಿಸತೊಡಗಿತು. ತಾನೊಂದು ಜನರು ಮೂತ್ರ ಮಾಡುವ ಚರಂಡಿ ಎನಿಸತೊಡಗಿತು. ತನ್ನ ಅವಮಾನ ಎಲ್ಲರಿಗೂ ಗೊತ್ತಾಗಿ ಬಿಟ್ಟಿದೆಯೇನೋ ಎನಿಸಿ ಅಳಬೇಕೆನಿಸಿತು. ಎಲ್ಲರೂ ತನ್ನನ್ನೇ ನೋಡಿ ಮುಸಿಮುಸಿ ನಗುತ್ತಿದ್ದಾರೆಂಬ ಭಾವನೆ ಬರತೊಡಗಿತು.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ದಿಗಂಬರ: ಬೀಗ ಹಾಕಿದ ಕದ, ತೆರೆಯದ ಮನಗಳು
ಮೈಮನಗಳೆಲ್ಲಾ ಕೋಪದ ಜ್ವಾಲೆಯಲ್ಲಿ ಉರಿಯತೊಡಗಿದವು. ತನ್ನೊಳಗಿದ್ದ ಒರಟು ಗೂಳಿ ಈ ಪೊಲೀಸು ಸಿಕ್ಕರೆ ತನ್ನ ಕೊಂಬುಗಳಿಂದ ಚುಚ್ಚಲು ಕಾಯುತ್ತಿತ್ತು. ಕೋಪ ವಿವೇಕವನ್ನು ಹಾಳುಗೆಡವುತ್ತದಂತೆ. ಅಷ್ಟು ಕೋಪ ಬರದಿದ್ದರೂ, ಸರ್ಕಾರದ ಕೃಪಾಪೋಷಿತ, ಎಂಭತ್ತು-ಎಂಭತ್ತೈದು ಕೆಜಿ ತೂಕದ, ಆರಡಿ ಎತ್ತರದ ಆ ಹವಾಲ್ದಾರ್ಗೆ ಬುದ್ಧಿ ಕಲಿಸಲೇಬೇಕು. ಮಹಿಳೆಯ ಮೇಲೆ ಅತ್ಯಾಚಾರವೆಸಗಿದರೆ, ಭಾರತೀಯ ದಂಡಸಂಹಿತೆಯ ಪ್ರಕಾರ ಗರಿಷ್ಟ ಏಳು ವರ್ಷಗಳ ಕಾರಾಗೃಹ ಶಿಕ್ಷೆಯಾಗಬಹುದು. ಪ್ರತಿ ಐವತ್ತನಾಲ್ಕು ನಿಮಿಷಗಳಿಗೆ ಈ ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತದಂತೆ. ಹುಡುಗರ ಮೇಲೂ ಅಷ್ಟೇ ಸಂಖ್ಯೆಯ ಅತ್ಯಾಚಾರಗಳು ನಡೆಯುತ್ತಿರಬಹುದು. ಮಹಿಳೆಯರ ಮೇಲಿನ ಅತ್ಯಾಚಾರಿಗಳಿಗೆ ಶಿಕ್ಷೆಯಾಗಿವೆ. ಆದರೆ ಹುಡುಗರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳಿಗೆ ಶಿಕ್ಷೆಯಾದ ನಿದರ್ಶನ ಎಲ್ಲೂ ಇಲ್ಲ. ಇನ್ನು ಜೀಬಾನ್ಗೆ ನ್ಯಾಯ ಸಿಗುವುದು ಸಾಧ್ಯವೇ? ಯಾರದೋ ಹಸು ಬಂದು ಬೆಳೆಯನ್ನೆಲ್ಲಾ ಮೇಯ್ದು ಹೋದರೆ, ಆ ಗದ್ದೆಯ ರೈತನಿಗೆ ನ್ಯಾಯ ಸಿಕ್ಕೀತೆ? ಇಲ್ಲ. ನಾನೇ ಅವನಿಗೆ ಶಿಕ್ಷೆ ಕೊಡ್ತೀನಿ. ರಾತ್ರಿ ಮಲಗಿದ ಮೇಲೆ ಮನೆಗೆ ಬೀಗಹಾಕಿ, ಮನೆಗೆ ಬೆಂಕಿ ಹಚ್ಚುತ್ತೇನೆ. ಎಂದುಕೊಂಡ.
ತನ್ನ ಹೆಸರು, ವಿಳಾಸ ಪತ್ತೆ ಇಲ್ಲದ್ದರಿಂದ ತನ್ನನ್ನು ಯಾರೂ ಹಿಡಿಯಲು ಸಾಧ್ಯವಿಲ್ಲ. ಬೆಂಕಿ ಹಾಕಲು ಹತ್ತು-ಇಪ್ಪತ್ತು ಲೀಟರ್ ಪೆಟ್ರೋಲ್ ಬೇಕು. ಏನು ಮಾಡುವುದು? ಯೋಚನೆ ಮಾಡಿ, ಮಾಡಿ ಕಡೆಗೆ ಒಂದು ಸರಳವಾದ ಆದರೆ ಅಷ್ಟೇ ಕ್ಲಿಷ್ಟಕರವಾದ ಒಂದು ಯೋಜನೆ ಹೊಳೆಯಿತು. ವರಾಂಡದಲ್ಲಿ ಒಂದು ಕನ್ನಡಿ, ಒಂದಿಷ್ಟು ಮುಖ ಕ್ಷೌರದ ಬ್ಲೇಡುಗಳಿದ್ದವು. ಆ ಹವಾಲ್ದಾರ್ ಇಲ್ಲೇ ತಾನೆ ಶೇವಿಂಗ್ ಮಾಡಿಕೊಂಡು, ತಲೆ ಬಾಚಿಕೊಳ್ಳುವುದು. ಒಂದು ಹರಿತವಾದ ಬ್ಲೇಡ್ ಆರಿಸಿಕೊಂಡ. ಒಂದೇ ಒಂದು ಹೊಡೆತಕ್ಕೆ, ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಅವನ ಶಿಶ್ನವನ್ನು ಬುಡದಿಂದ ಕತ್ತರಿಸಿ ಹಾಕಿಬಿಡಬೇಕು.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಹಸ್ತಿನಾವತಿ: ಕನಸು ವಾಸ್ತವಗಳ ನಡುವಿನ ತೂಗುಯ್ಯಾಲೆ
ಕೃತಿ: ಚಾಂಡಾಳನೊಬ್ಬನ ಆತ್ಮವಿಮರ್ಶೆ (ಅನುವಾದ)
ಲೇಖಕ: ಮನೋರಂಜನ್ ಬ್ಯಾಪಾರಿ
ಅನುವಾದಕ: ಡಾ.ಎಚ್. ಎಸ್ ನಾಗಭೂಷಣ
ಪ್ರಕಾಶನ: ಸೃಷ್ಟಿ ಪ್ರಕಾಶನ
ಬೆಲೆ: 325 ರೂ
ಅಂಕಣ
ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!
ವಿಶ್ವದಾದ್ಯಂತ ಸೈಬರ್ ವಂಚಕರು ನಮ್ಮ ಎರಡು ದುರ್ಬಲತೆಯನ್ನು ಬಳಸಿಕೊಳ್ಳಲು ನೋಡುತ್ತಿರುತ್ತಾರೆ. ಮೊದಲನೆಯದು ಭಯ, ಎರಡನೆಯದು ದುರಾಸೆ. ಹಾಗಾಗಿ, ಇಂದಿನ ಈ ಸೈಬರ್ ಬ್ರಹ್ಮಾಂಡದಲ್ಲಿ ವ್ಯವಹರಿಸುವಾಗ ಜಾಣರಾಗಿ, ಜಾಗರೂಕರಾಗಿರಿ. ಸುಖವಾದ ಸೈಬರ್ ಸರ್ಫ್ಗೆ ಹನ್ನೆರಡು ಸೂತ್ರಗಳು ಇಲ್ಲಿವೆ.
ಅಗರ್ತಲಾದ ಇಕ್ಫಾಯಿ (ICAFI) ಯೂನಿವರ್ಸಿಟಿಯಿಂದ ಹೊರಡ್ತಾ ಇದ್ದೆ. ಆಗ ನನ್ನ ಫೇಸ್ಬುಕ್ ಗೆಳೆಯರೊಬ್ಬರು ಕರೆ ಮಾಡಿ ಅವರ ಪರಿಚಿತರೊಬ್ಬರು ಸೈಬರ್ ವಂಚನೆಗೀಡಾಗಿದ್ದಾರೆ. ಅವರಿಗೆ ನಿಮ್ಮ ಸಲಹೆ, ಮಾರ್ಗದರ್ಶನ ಬೇಕು, ನಿಮ್ಮ ನಂಬರ್ ಕೊಡಬಹುದಾ ಎಂದರು. ಅವರಿಗೆ ಒಪ್ಪಿಗೆ ಕೊಟ್ಟು ಏರ್ಪೋರ್ಟ್ ತಲುಪಿದೆ. ಅಲ್ಲಿ ಲಗೇಜ್ ಚೆಕ್ಇನ್, ಸೆಕ್ಯೂರಿಟಿ ಚೆಕ್ಇನ್ ಮುಗಿಸುವಷ್ಟರಲ್ಲಿ ಒಂದು ಅಪರಿಚಿತ ನಂಬರ್ನಿಂದ ಪೋನ್ ರಿಂಗಣಿಸಿತು. ನನ್ನ ಸ್ನೇಹಿತರ ಪರಿಚಿತರಿರಬಹುದೆಂದು ಉತ್ತರಿಸಿದೆ. ಅವರೇ ಕರೆ ಮಾಡಿದ್ದರು.
ʼನಾನು ಚಕ್ರಪಾಣಿ (ಹೆಸರು ಬದಲಾಯಿಸಿದ್ದೇನೆ), ನಿಮ್ಮ ಫೇಸ್ಬುಕ್ ಸ್ನೇಹಿತರು ಹೇಳಿದ್ರಲ್ಲ, ನಾನೇʼ ಅಂದರು. ಅವರು ಯಾವುದೋ ಕೆಲಸದಲ್ಲಿದ್ದಾಗ ಅವರ ಬ್ಯಾಂಕಿನಿಂದ ಒಂದು SMS ಬಂತಂತೆ. ಅದರಲ್ಲಿ ಅವರ KYC ನವೀಕರಿಸದಿದ್ದರೆ ಅಕೌಂಟ್ ಬ್ಲಾಕ್ ಆಗುತ್ತೆ ಅಂತ ಇತ್ತಂತೆ. ತಕ್ಷಣ ನವೀಕರಿಸುವುದಕ್ಕೆ ಈ ಲಿಂಕ್ ಕ್ಲಿಕ್ ಮಾಡಿ ಎಂದು ಒಂದು ಲಿಂಕ್ ಕೊಟ್ಟಿದ್ರಂತೆ. ಕೆಲಸದ ನಡುವೆ ಬಂದ ಈ SMSಗೆ ಗಾಬರಿಯಿಂದ ಗಡಿಬಿಡಿಯಲ್ಲಿ ಕ್ಲಿಕ್ ಮಾಡಿ ತಮ್ಮ ಮಾಹಿತಿಯನ್ನು ಕೊಟ್ಟರಂತೆ. ಸ್ವಲ್ಪ ಹೊತ್ತಿನಲ್ಲೇ ಅವರ ಅಕೌಂಟಿನಿಂದ ತೊಂಬತ್ತು ಸಾವಿರ ರೂಪಾಯಿ ಡೆಬಿಟ್ ಆಗಿದೆ ಎಂದು ಇನ್ನೊಂದು ಮೆಸೇಜ್ ಬಂತಂತೆ. OTP ಕೂಡ ಬರದೇ ಅಕೌಂಟಿನಿಂದ ಹಣ ಹೋಗಿದೆ, ಏನು ಮಾಡೋದು ಅಂತ ಅಲವತ್ತುಕೊಂಡರು. ಅವರಿಗೆ ಧೈರ್ಯ ಹೇಳಿ ಮೊಟ್ಟಮೊದಲು ಕೈಗೊಳ್ಳಬೇಕಾದ ಕಾರ್ಯಗಳನ್ನು ತಿಳಿಸಿ, ನಾನು ಬೆಂಗಳೂರಿನ ವಿಮಾನ ಹತ್ತಿದೆ.
ಬೆಂಗಳೂರಿಗೆ ಬಂದು ಒಂದೆರಡು ದಿನಗಳ ನಂತರ ಮತ್ತೆ ಚಕ್ರಪಾಣಿಯವರಿಗೆ ಕರೆ ಮಾಡಿ ಮಾತನಾಡಿದೆ. ಅವರೂ ಕೂಡ ಅವರ ಊರಿನ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದರು. ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (https://www.cybercrime.gov.in/) ನಲ್ಲೂ ಅವರ ದೂರು ದಾಖಲಿಸಲು ಸಲಹೆ ನೀಡಿದೆ. ಮತ್ತು ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರೊ. ಅನಂತ ಪ್ರಭು ಅವರ ನೆರವನ್ನೂ ಪಡೆದುಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದೆ. ಅದೇ ರೀತಿ ಅನಂತ ಪ್ರಭುಗಳಿಗೂ ಮೆಸೇಜ್ ಮಾಡಿ ಚಕ್ರಪಾಣಿಯವರಿಗೆ ಬೇಕಾದ ಸಹಾಯ ಮಾಡಲು ಕೇಳಿಕೊಂಡೆ.
ಕಳೆದ ವಾರ, ಚಕ್ರಪಾಣಿಯವರು ಕರೆ ಮಾಡಿ ಹಣ ಪುನಃ ಅಕೌಂಟಿನಲ್ಲಿ ಬಂದಿದೆ ಎಂದು ಬಹಳ ಸಂತೋಷದಿಂದ ಹೇಳಿದರು. ಆದರೆ ಸದ್ಯಕ್ಕೆ ಬ್ಲಾಕ್ ಆಗಿದೆ. ಕೆಲವು ದಿನಗಳಲ್ಲಿ ವ್ಯವಹಾರಕ್ಕೆ ಸಿಗಬಹುದು ಅಂತ ಹೇಳಿದರು. ಸಕಾಲಿಕ ಸಲಹೆಗಳಿಗೆ ಧನ್ಯವಾದಗಳನ್ನೂ ಹೇಳಿದರು. ನಾನು ಅವರಿಗೆ ರಿಸರ್ವ್ ಬ್ಯಾಂಕಿನ ಸೈಬರ್ ಸೆಕ್ಯೂರಿಟಿಯ ಧ್ಯೇಯ ವಾಕ್ಯದಿಂದ “ಜಾಣರಾಗಿ, ಜಾಗರೂಕರಾಗಿರಿ” ಎಂದು ಹಾರೈಸಿದೆ.
ಕೋವಿಡ್ ಮಹಾಮಾರಿಯ ಸಮಯದಿಂದ ನಮ್ಮೆಲ್ಲರ ಆನ್ಲೈನ್ ವಹಿವಾಟು ಜಾಸ್ತಿ ಆಗಿದೆ. ಈ ಸಂದರ್ಭದಲ್ಲಿ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಕೋವಿಡ್ ಕಾಲದಲ್ಲಿ ರೋಗ ಬಾರದಂತೆ ಹೇಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೆವೋ ಹಾಗೆ ಸೈಬರ್ ಲೋಕದಲ್ಲಿ ವ್ಯವಹರಿಸುವಾಗಲೂ ಕೆಲವು ಅತಿ ಮುಖ್ಯವಾದ ಸುರಕ್ಷತಾ ಸಲಹೆಗಳನ್ನು ಪಾಲಿಸಿದರೆ ನಮ್ಮ ಆನ್ಲೈನ್ ಜೀವನವೂ ನಿರಾತಂಕವಾಗಿರುತ್ತದೆ.
ದೇವರು ನಾವಿರುವ ಭೂಮಿಯನ್ನು ಮತ್ತು ಜೀವ ವೈವಿಧ್ಯವನ್ನು ಸೃಷ್ಟಿಸಿದಂತೆ, ನಾವು ಸೈಬರ್ಸ್ಪೇಸ್ ಎಂಬ ಹೊಸ ಬ್ರಹ್ಮಾಂಡವನ್ನು ರಚಿಸಿದ್ದೇವೆ. ಎಲ್ಲದರಂತೆ ಅದರಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇದೆ. ಈ ಹೊಸ ಆಯಾಮಗಳು ಅದ್ಭುತಗಳಿಗಿಂತ ಹೆಚ್ಚು ಅನಾಹುತಗಳನ್ನು ಹುಟ್ಟುಹಾಕುವುದೇ ಎಂದು ನಮಗೆ ಇನ್ನೂ ತಿಳಿದಿಲ್ಲ, ಆದರೆ ಹಿಂತಿರುಗಲು ತುಂಬಾ ತಡವಾಗಿದೆ.
ಇದನ್ನೂ ಓದಿ: ವಾಕಿಂಗ್ ಚಿತ್ರಗಳು: ಚಾಟ್ ಜಿಪಿಟಿ- ರೋಬಾಟ್ ಪರ್ಫೆಕ್ಟು, ಹಲವು ಎಡವಟ್ಟು
ನಾವು ತಂತ್ರಜ್ಞಾನ ಮತ್ತು ಇಂಟರ್ನೆಟ್ಟಿನ ಮೇಲೆ ಎಷ್ಟು ಅವಲಂಬಿತರಾಗಿದ್ದೇವಲ್ವಾ? ಬೆಳಿಗ್ಗೆ ಎದ್ದೊಡನೆ ಕಣ್ಮುಂದೆ ಬರೋದು ಮೊಬೈಲ್ ಮತ್ತು ಅದರಲ್ಲಿ ಬಂದ ಮೆಸೇಜುಗಳ ಅವಲೋಕನ. ಹೀಗಿರುವಾಗ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕಲ್ವೇ? ಅದಕ್ಕಾಗಿ ಈ ಕೆಳಗಿನ ಕೆಲವು ಸಲಹೆಗಳನ್ನು ಪಾಲಿಸಬಹುದು. ಸುಖವಾದ ಸೈಬರ್ ಸರ್ಫ್ಗೆ ಹನ್ನೆರಡು ಸೂತ್ರಗಳು.
- ಕ್ಲಿಕ್ಕಿಸುವ ಮೊದಲು ಯೋಚಿಸಿ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಅಂತ ಗಾದೆನೇ ಇದೆ ಅಲ್ವಾ?
- ಸುಭದ್ರವಾದ ಮತ್ತು ವಿಭಿನ್ನವಾದ ಪಾಸ್ವರ್ಡ್ಗಳನ್ನು ಬಳಸಿ.
- ನಿಮ್ಮ ಎಲ್ಲಾ ಆನ್ಲೈನ್ ಅಕೌಂಟುಗಳಿಗೂ ಮಲ್ಟಿ-ಫ್ಯಾಕ್ಟರ್ ಅಥೆಂಟಿಫಿಕೇಷನ್ (MFA) ಅಥವಾ ಎರಡು ಫ್ಯಾಕ್ಟರ್ ಸೆಕ್ಯೂರಿಟಿ ಅಳವಡಿಸಿಕೊಳ್ಳಿ.
- ನಿಮ್ಮ ಮೊಬೈಲ್ ಮತ್ತು ಲ್ಯಾಪ್ಟಾಪ್/ಡೆಸ್ಕ್ಟಾಪ್ಗಳ ಸಾಫ್ಟವೇರನ್ನು ನಿಯಮಿತವಾಗಿ ಅಪ್ಡೇಟ್ ಮಾಡ್ಕೊಳ್ತಿರಿ.
- ಫೈರ್ ವಾಲ್ ಮತ್ತು anti-ವೈರಸ್ ಬಳಸಿ.
- ಆನ್ಲೈನ್ನಲ್ಲಿ ಡೆಬಿಟ್ ಕಾರ್ಡನ್ನು ಆದಷ್ಟೂ ಕಡಿಮೆ ಬಳಸಿ.
- ಸೈಬರ್ ಜಗತ್ತಿನ ಸುರಕ್ಷತೆಯ ಬಗ್ಗೆ ಜಾಣರಾಗಿರಿ.
- ಅಪರಿಚಿತ ಮತ್ತು ಅಸುರಕ್ಷಿತ ಜಾಲತಾಣಗಳಿಗೆ ಭೇಟಿ ಮಾಡಬೇಡಿ.
- ಅನವಶ್ಯಕ ಡೌನ್ಲೋಡ್ ಮಾಡಬೇಡಿ.
- ನಿಮ್ಮ ಮುಖ್ಯವಾದ ದತ್ತಾಂಶ (data)ವನ್ನು ಬ್ಯಾಕಪ್ ಮಾಡ್ಕೊಳಿ.
- ಉಚಿತವಾಗಿ ಸಿಗುತ್ತೆ ಅಂತ ಸಾರ್ವಜನಿಕ ವೈಫೈ(WiFi) ಬಳಸಬೇಡಿ.
- ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಏರ್ಪೋರ್ಟ್ಗಳಲ್ಲಿ ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ಗಳನ್ನು ಚಾರ್ಜ್ಗೆ ಹಾಕುವಾಗ ಡೇಟಾ ಅಥವಾ ವೈಫೈ ಆಫ್ ಮಾಡಿಕೊಳ್ಳಿ. ನಿಮ್ಮ ಡಿವೈಸನ್ನು ಪೂರ್ತಿ ಆಫ್ ಮಾಡಿ ಚಾರ್ಜ್ ಮಾಡೋದು ಬಹಳ ಒಳ್ಳೆಯದು.
ವಿಶ್ವದಾದ್ಯಂತ ಸೈಬರ್ ವಂಚಕರು ನಮ್ಮ ಎರಡು ದುರ್ಬಲತೆಯನ್ನು ಬಳಸಿಕೊಳ್ಳಲು ನೋಡುತ್ತಿರುತ್ತಾರೆ. ಮೊದಲನೆಯದು ಭಯ, ಎರಡನೆಯದು ಆಸೆ (ದುರಾಸೆ). ಮೇಲಿನ ಘಟನೆಯಲ್ಲಿ ಬಳಕೆಯಾಗಿದ್ದು ಭಯ. ಎಲ್ಲಿ ತಮ್ಮ ಅಕೌಂಟ್ ಬ್ಲಾಕ್ ಆಗಿಬಿಡುವುದೋ ಎನ್ನುವ ಭಯದಲ್ಲಿ ಚಕ್ರಪಾಣಿಯವರು smsನಲ್ಲಿದ್ದ ಲಿಂಕ್ ಒತ್ತಿಬಿಟ್ಟರು. ಇನ್ನೊಂದು ರೀತಿಯ ವಂಚನೆಯಲ್ಲಿ ನಮ್ಮಲ್ಲಿ ಆಸೆ (ದುರಾಸೆ) ಹುಟ್ಟಿಸಿ ನಮ್ಮಿಂದ ಅವರಿಗೆ ಬೇಕಾದ ಮಾಹಿತಿ ಪಡೆಯುತ್ತಾರೆ.
ಹಾಗಾಗಿ, ಇಂದಿನ ಈ ಸೈಬರ್ ಬ್ರಹ್ಮಾಂಡದಲ್ಲಿ ವ್ಯವಹರಿಸುವಾಗ ಜಾಣರಾಗಿ, ಜಾಗರೂಕರಾಗಿರಿ.
(ಸೈಬರ್ ಸುರಕ್ಷತೆಯ ಬಗ್ಗೆ ಮನದಟ್ಟು ಮಾಡಿಕೊಡುವ ಈ ನೂತನ ಅಂಕಣ ಪ್ರತಿವಾರ ಪ್ರಕಟವಾಗಲಿದೆ)
ಇದನ್ನೂ ಓದಿ: ಗ್ಲೋಕಲ್ ಲೋಕ ಅಂಕಣ | ಮೆಟಾವರ್ಸ್ ಮುಂದಿರುವ ಸವಾಲುಗಳು
ಅಂಕಣ
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
ಈಗ ರಂಜಾನ್ ಮಾಸ. ಮುಸ್ಲಿಂ ಬಾಂಧವರು ಇಡೀ ದಿನ ಉಪವಾಸ (Ramzan Fasting) ಆಚರಿಸಿ ದೇಹ ಮತ್ತು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವ ಮಹಾ ಸಂಕಲ್ಪದಲ್ಲಿದ್ದಾರೆ. ಹಾಗಿದ್ದರೆ ಈ ಉಪವಾಸದ ಹಿಂದಿನ ವೈಜ್ಞಾನಿಕ ಸಂಗತಿಗಳೇನು? ಹಾಶಿಂ ಬನ್ನೂರು ವಿವರಿಸಿದ್ದಾರೆ.
ಹಾಶಿಂ ಬನ್ನೂರು (ಲೇಖಕರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ)
ಇಸ್ಲಾಮಿಕ್ ಹಿಜರಿ ಕ್ಯಾಲೆಂಡರ್ ಪ್ರಕಾರ ಹನ್ನೆರಡು ತಿಂಗಳುಗಳಲ್ಲಿ ಅತ್ಯಂತ ಶ್ರೇಷ್ಠವಾದಂತಹ ತಿಂಗಳಾಗಿದೆ ಪವಿತ್ರ ರಮಳಾನ್. ಎಲ್ಲಾ ತಿಂಗಳುಗಳ ರಾಜ ಎಂಬ ಕೀರ್ತಿಯೂ ಈ ತಿಂಗಳಿಗಿದೆ. ಇಸ್ಲಾಮಿನ ಪವಿತ್ರ ಗ್ರಂಥ ಖುರ್-ಆನ್ ಅವತರಣಗೊಂಡದ್ದು ಈ ತಿಂಗಳಲ್ಲಿ. ಅಲ್ಲದೇ ಹಲವಾರು ಇಸ್ಲಾಮಿಕ್ ಚಾರಿತ್ರಿಕ ಘಟನೆಗಳಿಗೆ ಈ ತಿಂಗಳು ಸಾಕ್ಷಿಯಾಗಿದೆ.
ಇಸ್ಲಾಮಿನ ಕರ್ಮಶಾಸ್ತ್ರ ಪಂಚ ಸ್ಥಂಭಗಳಲ್ಲಿರುವ ಎರಡನೇಯ ಝಕಾತ್ (ದಾನ) ನೀಡುವುದು ಮತ್ತು ಮೂರನೇ ಉಪವಾಸ ವ್ರತಾಚರಣೆ ಕರ್ಮ ಈ ತಿಂಗಳ ಪ್ರಮುಖ ಆರಾಧನೆಯಾಗಿದೆ. ಅನಾರೋಗ್ಯ, ದೀರ್ಘ ಯಾತ್ರೆ ಮತ್ತು ಮುಟ್ಟಿನಂತಹ ಸಮಸ್ಯೆ ಇರುವವರನ್ನು ಹೊರತುಪಡಿಸಿ ಷರತ್ತುಗಳ ಅನ್ವಯದೊಂದಿಗೆ ಪ್ರತಿಯೊಬ್ಬ ಮುಸ್ಲಿಮನಿಗೂ ಈ ತಿಂಗಳ ವ್ರತಾಚರಣೆ ಕಡ್ಡಾಯವಾಗಿದೆ.
ವ್ರತಾಚರಣೆಯಿಂದ ಆಧ್ಯಾತ್ಮಿಕತೆಯ ವರ್ಧನೆ ಹಾಗೂ ದೇಹ ಇಚ್ಛೆಯನ್ನು ತ್ಯಜಿಸಿ ದೈವ ಇಚ್ಛೆಯನ್ನು ಮೈಗೂಡಿಸಿಕೊಂಡು ಪುಣ್ಯ ಪ್ರಾಪ್ತಿಯೇ ಮೂಲ ಉದ್ದೇಶ. ಹೆಚ್ಚಿನ ಸಮಯಗಳ ಕಾಲ ಖಾಲಿ ಹೊಟ್ಟೆಯಲ್ಲಿ ಇರುವುದರಿಂದ ಆಧ್ಯಾತ್ಮಿಕತೆ ಹೆಚ್ಚಿಸಲು ಮತ್ತು ಧ್ಯಾನಾರಾಧನೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ಕೇವಲ ಖಾಲಿ ಹೊಟ್ಟೆಯಲ್ಲಿ ಇರುವುದರಿಂದ ವ್ರತಾಚರಣೆ ಸಂಪೂರ್ಣವಲ್ಲ ನಮ್ಮ ಮನಸ್ಸು ಶುದ್ಧೀಕರಣಗೊಳಿಸಿ ದುಶ್ಚಟಗಳಿಂದ ದೂರವಿದ್ದು ಕಾಮಾಸಕ್ತಿಯಿಂದ ಮುಕ್ತವಾಗಿರಬೇಕು.
ಒಂದು ತಿಂಗಳ ಕಾಲ ನಿರಂತರವಾಗಿ ವ್ರತಾಚರಣೆಯಿಂದ ಹಲವಾರು ಉಪಯೋಗಗಳಿವೆ. ಇದು ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಸಾಬೀತಾಗಿದೆ, ಇದಕ್ಕೆ ಪುರಾವೆಗಳು ಇವೆ. ಮನುಷ್ಯನಲ್ಲಿ ಚಿಂತನಾ ಶಕ್ತಿ ವೃದ್ಧಿಸುತ್ತದೆ, ದೇಹದೊಳಗಿನ ಟ್ಯಾಕ್ಸಿನ್ ಗಳು ನಿವಾರಣೆಯಾಗುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗಾಗಿಯೇ ಆಧುನಿಕ ವಿಜ್ಞಾನಿಗಳು ಹಲವಾರು ಮಾರಕ ರೋಗಗಗಳಿಗೆ ಉಪವಾಸ ವ್ರತಾಚರಣೆ ಸಿದ್ಧೌಷಧ ಎಂದು ಹೇಳಿದ್ದಾರೆ.
ಹೆಚ್ಚಿದ ದೀರ್ಘಾಯುಷ್ಯ, ಜೀವಕೋಶಗಳ ಪುನರುತ್ಪಾದನೆ ಮತ್ತು ದುರಸ್ತಿ, ಹೆಚ್ಚಿದ ನ್ಯೂರಾನ್ ಉತ್ಪಾದನೆ, ಹೆಚ್ಚು ಸಮತೋಲಿತ ಇನ್ಸುಲಿನ್ ಮಟ್ಟಗಳು ಮತ್ತು ಸುಧಾರಿತ ಮೆದುಳಿನ ಪ್ಲಾಸ್ಟಿಟಿ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಉಪವಾಸವು ಒದಗಿಸುತ್ತದೆ ಎಂದು ಪಾಶ್ಚಿಮಾತ್ಯ ಔಷಧ ವಿಜ್ಞಾನವು ಈಗ ಗುರುತಿಸುತ್ತದೆ.
ಉಪವಾಸದ ಬಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಸ್ಟೋಕ್ರಾಟರ್ ರಂತಹ ಅನೇಕ ವೈದ್ಯರು ತಮ್ಮ ಬಳಿ ಬರುವ ರೋಗಿಗಳಿಗೆ ವ್ರತಾಚರಿಸುವಂತೆ ನಿರ್ದೇಶಿಸುತ್ತಿದ್ದರು ಎಂದು ಚರಿತ್ರೆಯ ಪುಟಗಳಿಂದ ತಿಳಿದು ಬರುತ್ತದೆ.
ಅಲ್ಲದೆ ಉಪವಾಸ ಹಾರ್ಟ್ ಅಟ್ಯಾಕ್, ಫ್ಯಾಟ್, ಕೊಲೆಸ್ಟ್ರಾಲ್, ರಕ್ತದೊತ್ತಡ, ಅಸ್ತಮಾ, ಚರ್ಮದ ಸಮಸ್ಯೆಗಳಿಗೆ ಸುಲಭ ಪರಿಹಾರ, ಕ್ಷಯ ಹಾಗೂ ಮಲೇರಿಯ ರೋಗಿಗಳು ಉಪವಾಸ ಕೈಗೊಂಡರೆ ಬೇಗನೆ ಗುಣಮುಖರಾಗಬಹುದೆಂದು ಅಧುನಿಕ ಸಂಶೋಧಕರ ಅಭಿಪ್ರಾಯ.
ವಿಶ್ವವಿಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್ಸ್ಟೀನ್ ‘ಮಾನವ ಪೂರ್ಣ ಆರೋಗ್ಯದಿಂದಿರಬೇಕಾದರೆ ವ್ರತಚರಣೆ ಅನಿವಾರ್ಯ’ ಎಂದಿದ್ದಾರೆ. ‘ಅನೇಕ ಅಲೋಪತಿ ಔಷಧಗಳಿಂದ ಗುಣವಾಗದ ರೋಗಗಳನ್ನು ಉಪವಾಸದ ಮೂಲಕ ನಾನು ಗುಣಪಡಿಸುತ್ತಿದ್ದೆ. ಈ ಕುರಿತು ಜನರು ಹೆಚ್ಚು ಜಾಗೃತವಾದರೆ ಹಲವು ಮಾರಕ ರೋಗಗಳನ್ನು ತಡೆಯಲು ಖಂಡಿತಾ ಸಾಧ್ಯವಿದೆ’ ಎಂದು ಖ್ಯಾತ ವೈದ್ಯ ಡಾ. ಝಹರ್ ಬರ್ಟ್ ಹೇಳುತ್ತಾರೆ.
ಲಂಡನ್ ವಿಶ್ವವಿದ್ಯಾನಿಲಯದ ಡಾ. ಅಲೆಕ್ಸ್ ಕಂಫರ್ಟ್ ಎಂಬ ವಿಶ್ವವಿಖ್ಯಾತ ಸಂಶೋಧಕ ಕೆಲವು ಇಲಿಗಳಗೆ ಆಹಾರ ನೀಡಿಯೂ, ಇನ್ನೂ ಕೆಲವು ಇಲಿಗಳಿಗೆ ಆಹಾರ ನೀಡದೆಯೂ ಸಂಶೋಧನೆ ನಡೆಸಿದಾಗ, ಉಪವಾಸವಿದ್ದ ಇಲಿಗಳು ಆಹಾರ ತಿಂದ ಇಲಿಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ ಎಂದು ಸಾಬೀತಾಯಿತು.
ಜಗತ್ತಿನ ಮನುಷ್ಯರೆಲ್ಲರೂ ಕೆಲವೊಂದು ಸಂದರ್ಭಗಳಲ್ಲಿ ಉಪವಾಸ ಕೈಗೊಂಡರೆ ದೀರ್ಘಾಯುಷ್ಯ ಲಭಿಸುತ್ತದೆ ಎಂದು ಡಾ. ಅಲೆಕ್ಸ್ ಕಂಫರ್ಟ್ ಅವರ ಅಭಿಮತ. ಬ್ಯಾಕ್ಟೀರಿಯಗಳ ಮನೆಯಾದ ಹೊಟ್ಟೆಗೆ ಉಪವಾಸದ ಸಮಯದಲ್ಲಿ ಅನ್ನ ಸೇರದಿರುವುದರಿಂದ ಜಠರದ ಮೇಲೆ ಒತ್ತಡ ಕಡಿಮೆಯಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ. ಹೀಗೆ ಹಲವಾರು ವಿಜ್ಞಾನಿಗಳು ವೃತಾಚರಣೆಯ ಉಪಯೋಗಗಳ ಕುರಿತು ಸಂಶೋಧನೆಗಳು ನಡೆಸಿದ್ದಾರೆ ಅಲ್ಲದೇ ಬುದ್ಧಿ ಜೀವಿಗಳು ಮತ್ತು ಆರೋಗ್ಯ ತಜ್ಞರಿಂದಲೂ ಸಾಬೀತಾಗಿದೆ.
ಒಟ್ಟಿನಲ್ಲಿ ಎಲ್ಲಾ ವಿಧ ಮಾನವ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ, ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶ. ಬದುಕಿನಲ್ಲಿ ಮಾಡಿದ ಪಾಪ ಕರ್ಮಗಳಿಗೆ ಕ್ಷಮೆ ಯಾಚಿಸುತ್ತಾ, ಮನಸ್ಸಿನಲ್ಲಿ ಮೂಡುವ ದುಷ್ಟ ಚಿಂತನೆಗಳಿಂದ ವಿಮೋಚನೆ ಪಡೆಯಬೇಕಾದ ಕಾಲ. ಶಾಂತಿ ಸುಖ ನೆಮ್ಮದಿಯಿಂದ ಇರಬೇಕಾದ ಸಮಯ. ಬಡವರಿಗೆ ದಾನ ಧರ್ಮಗಳನ್ನು ಮಾಡುವ ಮೂಲಕ ಇನ್ನೊಬ್ಬರ ಕಷ್ಟದಲ್ಲೂ ಪಾಲ್ಗೊಳ್ಳಲು ಝಕಾತ್ ನೀಡುವುದು ಕೂಡ ಕಡ್ಡಾಯವಾಗಿಸಿದೆ. ರಂಝಾನ್ ತಿಂಗಳಿನಲ್ಲಿ ಬಡವರು ಶ್ರೀಮಂತರು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಂದಾಗಿ ಪ್ರೀತಿ ವಿಶ್ವಾಸದಿಂದ ಕೂಡಿ ಹಬ್ಬವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ : Summer Juices: ರಂಜಾನ್ ತಿಂಗಳಲ್ಲಿ ದೇಹ ತಂಪಾಗಿರಿಸಲು ಕುಡಿಯಲೇ ಬೇಕಾದ ಪಾನೀಯಗಳಿವು!
ಅಂಕಣ
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
ರಾಜ ಮಾರ್ಗ ಅಂಕಣ : ನೀವು ನಂಬಲೇಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು ಉಳಿದಿರುವುದು ಆರು ದಿನ ಮಾತ್ರ. ನೀವು ಇದುವರೆಗೆ ಏನೂ ಓದಿಲ್ಲ ಅಂದರೂ, ಇನ್ನು ಓದಿದರೂ ಪಾಸಾಗಬಹುದು. ಅಂಥ ತಂತ್ರಗಳನ್ನು ಹೇಳುತ್ತಿದ್ದಾರೆ ಹೈಸ್ಕೂಲಿನಲ್ಲಿ ಗಣಿತ ಶಿಕ್ಷಕರೂ ಆಗಿರುವ ಅಂಕಣಕಾರ ರಾಜೇಂದ್ರ ಭಟ್ ಕೆ.
ಪ್ರೀತಿಯ ಎಸೆಸೆಲ್ಸಿ ವಿದ್ಯಾರ್ಥಿಗಳೇ, ನಿಮಗೆಲ್ಲಾ ಮೊದಲಾಗಿ ನಮ್ಮ ಶುಭಾಶಯಗಳು
ನೀವು ನಿಮ್ಮ ಜೀವನದ ಮೊದಲ ಬೋರ್ಡ್ ಪರೀಕ್ಷೆಯನ್ನು ಬರೆಯುತ್ತಿದ್ದೀರಿ. ಇದು ನೀವು ಎದುರಿಸುವ ಮೊದಲ ರಾಜ್ಯಮಟ್ಟದ ಪರೀಕ್ಷೆ. ಮುಂದೆ ನೀವು ಎದುರಿಸುವ ಹಲವು ಬೋರ್ಡ್ ಪರೀಕ್ಷೆಗಳಿಗೆ ಇದು ಖಂಡಿತವಾಗಿಯೂ ಪಂಚಾಂಗ ಆಗುತ್ತದೆ.
2023ರ ಎಸೆಸೆಲ್ಸಿ ಪರೀಕ್ಷೆಗೆ ಈಗಾಗಲೇ ಕ್ಷಣಗಣನೆಯು ಆರಂಭ ಆಗಿದೆ. ಮಾರ್ಚ್ 31, ಶುಕ್ರವಾರ ನಿಮ್ಮ ಪರೀಕ್ಷೆಗಳು ಆರಂಭ ಆಗಲಿವೆ. ನಿಮಗೆ ಕಳೆದ ವರ್ಷ ಮೇ 16ರಿಂದ ಇಂದಿನ ದಿನದವರೆಗೂ ನಿಮ್ಮ ಅಧ್ಯಾಪಕರ ಮಾರ್ಗದರ್ಶನದಲ್ಲಿ ಉತ್ತಮವಾದ ತರಬೇತಿಯು ದೊರಕಿದ್ದು ಪರೀಕ್ಷೆಗೆ ಮಾನಸಿಕವಾಗಿ ಪ್ರಿಪೇರ್ ಆಗ್ತಾ ಇದ್ದೀರಿ. ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಕೊರೊನಾ ಕಾರಣಕ್ಕೆ ನಿಮಗೆ ಬಿಗಿಯಾದ ಪರೀಕ್ಷೆಯೇ ಇಲ್ಲದೆ ಎಲ್ಲರೂ ಪಾಸಾಗಿ ಇಂದು ಹತ್ತನೇ ತರಗತಿಯಲ್ಲಿ ಇದ್ದೀರಿ.
ಆದ್ದರಿಂದ ಈ ವರ್ಷದ ಪರೀಕ್ಷೆಯು ನಿಮಗೆ ನಿಜವಾದ ಅಗ್ನಿಪರೀಕ್ಷೆಯೇ ಆಗಬಹುದು. ಆದರೆ ಆತಂಕ ಮಾಡುವ ಅಗತ್ಯವೇ ಇಲ್ಲ. ಆತಂಕ ಮಾಡಿದರೆ ನಿಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗದೆ ಹೋಗಬಹುದು. ಆದ್ದರಿಂದ ಕೂಲ್ ಆಗಿ ಒಂದೆಡೆ ಕುಳಿತು ಕೊನೆಯ ಕ್ಷಣದ ಕೆಲವು ಸಿದ್ಧತೆಗಳನ್ನು ಮಾಡಿದರೆ ಗೆಲುವು ಖಂಡಿತ ನಿಮ್ಮದೆ ಆಗುತ್ತದೆ.
ಈ ವರ್ಷ ನಿಮಗೆ ಇನ್ನೂ ಕೆಲವು ಅನುಕೂಲಗಳು ಇವೆ!
1. ಈ ವರ್ಷ ಕೊರೊನಾ ತೊಂದರೆ ಇಲ್ಲದೆ ಇಡೀ ವರ್ಷ ಸರಿಯಾದ ಪಾಠಗಳು ನಡೆದಿವೆ. ಎಲ್ಲ ಕಡೆಯೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹೆಚ್ಚು ಬೆವರು ಹರಿಸಿದ್ದಾರೆ. ಇದು ಖಂಡಿತವಾಗಿ ಪಾಸಿಟಿವ್ ಅಂಶವಾಗಿದೆ.
2. ಈ ವರ್ಷದ ವಿದ್ಯಾರ್ಥಿಗಳು ಕೂಡ ಎಂಟು ಮತ್ತು ಒಂಬತ್ತನೇ ತರಗತಿಗಳಲ್ಲಿ ಕೊರೊನಾ ಕಾರಣಕ್ಕೆ ಸಂತ್ರಸ್ತರಾದ ಕಾರಣ (ಅದು ಸರಕಾರ ಮತ್ತು ಎಸೆಸೆಲ್ಸಿ ಬೋರ್ಡ್ ಇಬ್ಬರಿಗೂ ಗೊತ್ತಿರುವ ಕಾರಣ) ಹೆಚ್ಚು ಸುಲಭವಾದ ಪ್ರಶ್ನೆಪತ್ರಿಕೆಗಳು ಈ ವರ್ಷ ಬರುವ ಎಲ್ಲ ಸಾಧ್ಯತೆಗಳು ಇವೆ. ಎಲ್ಲ ಪ್ರಶ್ನೆಪತ್ರಿಕೆಗಳಲ್ಲಿ ಕಠಿಣತೆಯ ಮಟ್ಟ ಕಡಿಮೆ ಆಗಲಿದೆ ಎನ್ನುವುದು ನಿಮಗೆ ಪೂರಕ.
3. ಗಣಿತ ಮತ್ತು ವಿಜ್ಞಾನದ ವಿಷಯಗಳಲ್ಲಿ ಹಿಂದಿನ ವರ್ಷಗಳಲ್ಲಿ 20% ಕಠಿಣ ಮಟ್ಟದ ಅನ್ವಯ ಪ್ರಶ್ನೆಗಳು ಬರುತ್ತಿದ್ದು ಈ ವರ್ಷ ಅದು ಖಂಡಿತ 15% ಆಗಲಿದೆ. ಅಂದರೆ 80 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 12 ಅಂಕಗಳ ಪ್ರಶ್ನೆಗಳು ಮಾತ್ರ ಕಠಿಣ ಆಗಿರಬಹುದು. ಉಳಿದ 68 ಅಂಕಗಳ ಪ್ರಶ್ನೆಗಳು ಸುಲಭ ಮತ್ತು ನೇರ ಆಗಿರುತ್ತವೆ.
4. ವಿಜ್ಞಾನ ವಿಷಯದಲ್ಲಿ 12-14 ಅಂಕಗಳನ್ನು ಚಿತ್ರಗಳ ಮೂಲಕ ಪಡೆಯಲು ಅವಕಾಶ ಇದ್ದು ಇದು ಜಸ್ಟ್ ಪಾಸ್ ಆಗುವ ವಿದ್ಯಾರ್ಥಿಗಳಿಗೆ ವರದಾನ ಆಗಲಿದೆ. ಅದರ ಜೊತೆಗೆ ಬೆಳಕು ಪಾಠದಲ್ಲಿ ಕಿರಣ ಚಿತ್ರಗಳು (Ray Diagrams), ವಿದ್ಯುಚ್ಛಕ್ತಿ ಪಾಠದಲ್ಲಿ ಸರ್ಕ್ಯುಟ್ಗಳು, ಓಮನ ನಿಯಮ, ಜೌಲನ ನಿಯಮ ಮೊದಲಾದವುಗಳು ಸುಲಭದಲ್ಲಿ ನಿಮಗೆ ಅಂಕ ತಂದುಕೊಡುತ್ತವೆ.
5. ಗಣಿತದಲ್ಲಿ 8-9 ಅಂಕಗಳು ರಚನೆಗೆ ನಿಗದಿ ಆಗಿದ್ದು ಯಾವ ಸೂತ್ರ, ಗುಣಾಕಾರ, ಭಾಗಾಕಾರ ಇಲ್ಲದೆ ಪಡೆಯಬಹುದಾದ ಅಂಕಗಳು ಇವು. ಇದರ ಜೊತೆಗೆ ಗ್ರಾಫ್ ನಾಲ್ಕು ಅಂಕಗಳು, ಓಜೀವ್ ಮೂರು ಅಂಕಗಳು, ಪ್ರಮೇಯದ ಏಳು ಅಂಕಗಳು ಬೋನಸ್ ನಿಮಗೆ!
6. ಯಾವುದೇ ವಿಷಯದಲ್ಲಿ 45 ಅಂಕಗಳನ್ನು ಗುರುತು ಮಾಡುವುದು ಸುಲಭ ಈ ವರ್ಷ. ಯಾವುದೇ ಪರಿಣತ ಅಧ್ಯಾಪಕರು 45 ಅಂಕಗಳನ್ನು ಪಟ್ಟಿ ಮಾಡಲು ನಿಮಗೆ ಸಹಾಯ ಮಾಡಬಹುದು. ಅಷ್ಟನ್ನು ಇನ್ನು ಕೂಡ ಕಲಿಯಲು ಸಮಯ ಇದೆ!
7. ಪ್ರತೀ ವಿಷಯದ ಮಾದರಿ ಪ್ರಶ್ನೆಗಳನ್ನು ನಿಮ್ಮ ಅಧ್ಯಾಪಕರಿಂದ ಪಡೆಯಿರಿ. ಪ್ರತೀ ವಿಷಯದಲ್ಲಿ ಒಂದೆರಡು ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಇನ್ನೂ ಸಮಯ ಇದೆ. ಅವುಗಳನ್ನು ಉತ್ತರಿಸಿ ಆದನಂತರ ನಿಮ್ಮ ಅಧ್ಯಾಪಕರಿಂದ ಮೌಲ್ಯಮಾಪನ ಮಾಡಿಸಿಕೊಳ್ಳಲು ಮರೆಯಬೇಡಿ.
8. ಎಸೆಸೆಲ್ಸಿ ಪರೀಕ್ಷೆಯ ವೇಳಾಪಟ್ಟಿಯು ಈ ವರ್ಷ ನಿಮಗೆ ತುಂಬಾ ಅನುಕೂಲ ಇದೆ. ಎಲ್ಲ ವಿಷಯಗಳ ಪರೀಕ್ಷೆಗಳ ಮಧ್ಯದಲ್ಲಿ ಭರ್ಜರಿಯಾಗಿ ರಜೆ ದೊರೆತಿದೆ. ಇದು ನಿಮ್ಮ ಅಧ್ಯಯನಕ್ಕೆ ಅನುಕೂಲ. ಆದ್ದರಿಂದ ಆತಂಕ ಮಾಡದೆ ಓದಿ.
9. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಅಲೆಯು ತೀವ್ರವಾಗಿ ಇದ್ದ ಕಾರಣ ಪರೀಕ್ಷಾ ಕೇಂದ್ರದಲ್ಲಿ ವಿಪರೀತವಾದ ಒತ್ತಡ ಇತ್ತು. ಈ ವರ್ಷ ಅಷ್ಟು ಉಸಿರುಗಟ್ಟುವ ವಾತಾವರಣವು ಇರಲಾರದು. ಈ ಬಾರಿಯ ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳು ಹೆಚ್ಚು ವಿದ್ಯಾರ್ಥಿಸ್ನೇಹಿ ಆಗಿರುತ್ತವೆ.
10. ಪರೀಕ್ಷೆಯ ಅಂತಿಮ ಹಂತವಾದ ಮೌಲ್ಯಮಾಪನ ಕೂಡ ಈ ಬಾರಿ ವಿದ್ಯಾರ್ಥಿಸ್ನೇಹಿ ಆಗಿರುವ ಎಲ್ಲ ಸಾಧ್ಯತೆಗಳು ನಮಗೆ ಕಾಣುತ್ತಿವೆ. ಈ ಅಂಶ ಕೂಡ ವಿದ್ಯಾರ್ಥಿಗಳಿಗೆ ಅನುಕೂಲ.
ನೀವು ತಕ್ಷಣವೇ ಮಾಡಬೇಕಾದದ್ದು…..
ಇದು ಪಾಸ್ ಆಗಲು ಕಷ್ಟ ಪಡುವ ವಿದ್ಯಾರ್ಥಿಗಳಿಗೆ ಮಾತ್ರ!
1. ನಿಮ್ಮ ಅಧ್ಯಾಪಕರ ಮಾರ್ಗದರ್ಶನ ಪಡೆದು ಪ್ರತೀ ವಿಷಯದಲ್ಲಿ 45 ಅಂಕದ ಪಾಸಿಂಗ್ ಪ್ಯಾಕೇಜ್ ಪ್ರಶ್ನೆಗಳನ್ನು ಪಟ್ಟಿ ಮಾಡಿ. ಅವುಗಳ ಮೇಲೆ ಹೆಚ್ಚು ಫೋಕಸ್ ಮಾಡಿ ಓದಿ.
2. ಇನ್ನು ಪಾಠ 1, ಪಾಠ 2……..ಹೀಗೆ ಓದುವುದನ್ನು ಬಿಟ್ಟು ಪ್ರಶ್ನೆಪತ್ರಿಕೆಗಳನ್ನು ಸ್ವತಂತ್ರವಾಗಿ ಬಿಡಿಸುವುದು ಸೂಕ್ತ. ಬಿಡಿಸಿದ ನಂತರ ಅವುಗಳನ್ನು ನಿಮ್ಮ ಶಿಕ್ಷಕರಿಂದ ಮೌಲ್ಯಮಾಪನವನ್ನು ಮಾಡಿಸಿಕೊಂಡರೆ ಇನ್ನೂ ಒಳ್ಳೆಯದು.
3. ವಿವಿಧ ವಿಷಯಗಳ ಪರಿಣತ ಅಧ್ಯಾಪಕರು ನಡೆಸಿಕೊಡುವ ರೇಡಿಯೋ ಮತ್ತು ಟಿವಿ ಕಾರ್ಯಕ್ರಮಗಳು ತುಂಬಾ ಚೆನ್ನಾಗಿವೆ. ಅವುಗಳನ್ನು ಆಲಿಸಿ.
4. ಭಾಷಾ ವಿಷಯಗಳಲ್ಲಿ ವ್ಯಾಕರಣ (ಗ್ರಾಮರ್) ವಿಭಾಗವು ನಿಮಗೆ ಹೆಚ್ಚು ಗೊಂದಲವನ್ನು ಉಂಟುಮಾಡುವ ವಿಭಾಗ. ಅದಕ್ಕೆ ಪೂರಕವಾದ ಎರಡು ಅಥವ ಮೂರು ಗಂಟೆಗಳ ಒಂದು ತರಗತಿಯು ನಿಮಗೆ ಈಗ ಖಂಡಿತ ಅಗತ್ಯ ಇದೆ. ನಿಮ್ಮ ಅಧ್ಯಾಪಕರನ್ನು ಈ ಬಗ್ಗೆ ವಿನಂತಿ ಮಾಡಿ.
5. ಹಾಗೆಯೇ ಭಾಷಾ ವಿಷಯಗಳಲ್ಲಿ ಪದ್ಯ ಬಾಯಿಪಾಠ, ಸಾರಾಂಶ ಬರೆಯುವುದು, ಪತ್ರ ಲೇಖನ, ಪ್ರಬಂಧ ರಚನೆ, ಸಂದರ್ಭ ಸಹಿತ ಅರ್ಥ ವಿವರಣೆ, ಕವಿ ಕಾವ್ಯ ಪರಿಚಯ, ಗಾದೆ ವಿಸ್ತಾರ ಇವುಗಳು ಹೆಚ್ಚು ಸುಲಭ ಆದವು. ಈ ಅಂಕಗಳನ್ನು ಮಿಸ್ ಮಾಡಿಕೊಳ್ಳಬೇಡಿ. ಅವುಗಳನ್ನು ಈಗಲೂ ನೀವು ಕಲಿಯಬಹುದು.
6. ಪರೀಕ್ಷಾ ಕೇಂದ್ರದಲ್ಲಿ ಮೂರುಕಾಲು ಘಂಟೆ ಕುಳಿತುಕೊಳ್ಳುವುದು ಬಹಳ ದೊಡ್ಡ ತಪಸ್ಸು. ಅದಕ್ಕೆ ಬೆಟ್ಟದಷ್ಟು ತಾಳ್ಮೆ ಬೇಕು. ಅದನ್ನು ಹೆಚ್ಚು ಮಾಡಲು ಮಾನಸಿಕವಾಗಿ ಸಿದ್ಧತೆ ಮಾಡಿ.
7. ನೀವೀಗ ದಿನಕ್ಕೆ ಕನಿಷ್ಠ ಒಂದೆರಡು ಗಂಟೆಗಳ ಕಾಲ ಬರೆಯುವುದನ್ನು ಅಭ್ಯಾಸ ಮಾಡಬೇಕು. ಇದರಿಂದ ಅಕ್ಷರ ಚಂದ ಆಗುತ್ತದೆ ಮತ್ತು ನಿಮ್ಮ ಸೈಕೊಮೋಟಾರ್ ಕೌಶಲವು ವೃದ್ಧಿ ಆಗುತ್ತದೆ ಮತ್ತು ನೆನಪಿನ ಶಕ್ತಿಯು ಜಾಸ್ತಿಯಾಗುತ್ತದೆ.
8. ಮೌನವು ಅತೀ ಹೆಚ್ಚು ಪ್ರಭಾವಶಾಲೀ ಮಾಧ್ಯಮ. ಪರೀಕ್ಷೆ ಸಮೀಪ ಬರುತ್ತಿದ್ದ ಹಾಗೆ ಹೆಚ್ಚು ಹೊತ್ತು ಮೌನ ಆಗಿರಿ. ಮೌನ ಪ್ರಾರ್ಥನೆಗಳು ಹೆಚ್ಚು ಶಕ್ತಿಶಾಲಿ.
9. ಬೆಳಗ್ಗೆ ಎದ್ದು ಸ್ವಲ್ಪ ಹೊತ್ತು Instrumental Music (ಸಿತಾರ್, ವೀಣೆ ಇತ್ಯಾದಿ) ಕೇಳುವುದು ನಿಮ್ಮ ಏಕಾಗ್ರತೆ ಹೆಚ್ಚು ಮಾಡಲು ಉತ್ತಮ ಅಭ್ಯಾಸ. ಏಕೆಂದರೆ ಸಂಗೀತಕ್ಕೆ ನಿಮ್ಮ ಮೆಮೊರಿ ಮತ್ತು ಏಕಾಗ್ರತೆ ಎರಡನ್ನೂ ಹೆಚ್ಚು ಮಾಡುವ ಶಕ್ತಿ ಇದೆ. ಮನಸ್ಸು ರಿಲ್ಯಾಕ್ಸ್ ಮಾಡಲು ಕೂಡ ಮ್ಯೂಸಿಕ್ ಹೆಚ್ಚು ಅನುಕೂಲಕರ.
10. ನಿಮ್ಮ ಮೇಲೆ ಬೇರೆ ಯಾರಾದರೂ ಭರವಸೆಯನ್ನು ಇಡುವುದಕ್ಕಿಂತ ನಿಮ್ಮ ಮೇಲೆ ನೀವೇ ಹೆಚ್ಚು ಭರವಸೆ ಇಡುವುದು ಮುಖ್ಯ. ಅದು ಪಾಸಿಟಿವ್ ಥಿಂಕಿಂಗ್ ಮಾಡುವುದರಿಂದ ಸಾಧ್ಯ ಆಗುತ್ತದೆ. ‘ನನಗೆ ಖಂಡಿತ ಸಾಧ್ಯ ಇದೆ’ ಅನ್ನುವುದೇ ನಿಮ್ಮ ಯಶಸ್ಸಿನ ಬೀಜ ಮಂತ್ರ.
(ನಾಳೆ ಮುಂದುವರಿಯುವುದು)
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ದಕ್ಷಿಣ ಭಾರತದ ಕೋಗಿಲೆ ಕೆ.ಎಸ್.ಚಿತ್ರಾ; ಅವರ ಕಂಠವೆಂದರೆ ಜಿನುಗುವ ಭಾವದೊರತೆ
ಅಂಕಣ
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
ಸುಗಮ ಉದ್ಯಮ ಸೂಚ್ಯಂಕ ಇರುವಂತೆ ಸುಗಮ ರಾಜಕಾರಣ ಸೂಚ್ಯಂಕವೂ ಇರಬೇಕು. ಉತ್ಸಾಹಿಗಳು ರಾಜಕಾರಣಕ್ಕೆ ಪ್ರವೇಶಿಸಲು ಇರುವ ಆರಂಭಿಕ ಅಡೆತಡೆಗಳನ್ನು ನಿವಾರಿಸಬೇಕು. ಚುನಾವಣೆಯಲ್ಲಿ ಹಣ ಚೆಲ್ಲಿ ಗೆಲ್ಲುವುದು ಹಣವಂತರಿಗೂ ಕಷ್ಟ ಎಂಬಂಥ ವಾತಾವರಣ ಇಂದು ಮೂಡಿರುವಾಗ, ಈ ಕುರಿತು ಒಂದು ಚಿಂತನೆ ಇಲ್ಲಿದೆ.
ಬೂತ್ ಕ್ಯಾಪ್ಚರಿಂಗ್ ಎಂಬ ಪದವನ್ನು ಬಹುಶಃ ಈಗಿನ ಅನೇಕ ಮತದಾರರು ಕೇಳಿರುವುದೇ ಇಲ್ಲ. ಸುಮಾರು ಮೂರು ದಶಕದ ಹಿಂದೆ ಭಾರತದ ಪ್ರತಿ ಚುನಾವಣೆಗಳ ಸಂದರ್ಭದಲ್ಲೂ ಈ ಪದ ಮಾಧ್ಯಮಗಳಲ್ಲಿ ಹೆಡ್ಲೈನ್ ಆಗಿ ಕಾಣಿಸಿಕೊಳ್ಳುತ್ತಲೇ ಇತ್ತು. ರಾಜಕೀಯ ಪಕ್ಷಗಳೂ, ಅದರ ಚೇಲಾಗಳು, ಗೂಂಡಾಗಳು ಬೂತ್ಗಳ ಬಳಿ ನಿಂತು ಮತದಾರರನ್ನು ಬೆದರಿಸುತ್ತಿದ್ದರು. ತಮ್ಮ ವಿರುದ್ಧ ಮತ ಹಾಕಬಹುದು ಎನ್ನುವ ಅನುಮಾನ ಇರುವವರನ್ನು ಒಳಗೆ ಬಿಡದೆ, ತಮ್ಮವರನ್ನೇ ಒಳಗೆ ಕಳುಹಿಸಿ ಕಳ್ಳ ಮತದಾನ ಮಾಡಿಸುತ್ತಿದ್ದರು. ತಮ್ಮ ಹೆಸರಿನಲ್ಲಿ ಮತದಾನ ಆಗಿಹೋಗಿದೆ ಎನ್ನುವ ವಿಚಾರವೇ ಅನೇಕರಿಗೆ ತಿಳಿಯುತ್ತಿರಲಿಲ್ಲ. ಇನ್ನೊಂದು ವಿಧಾನವೆಂದರೆ, ತಮ್ಮ ಪಕ್ಷದ ವಿರುದ್ಧ ಮತ ಚಲಾಯಿಸಬಲ್ಲ ಮತದಾರರಿಗೆ ಹಣ ನೀಡಿ ಅಥವಾ ಬೆದರಿಸಿ, ಅವರನ್ನು ತಟಸ್ಥರನ್ನಾಗಿಸುವ ಪ್ರಯತ್ನವೂ ಎಗ್ಗಿಲ್ಲದೇ ನಡೆಯುತ್ತಿತ್ತು.
ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಮತಗಟ್ಟೆಯಿಂದ ಮತಪೆಟ್ಟಿಗೆ ಹೊತ್ತು ತೆರಳುವ ವಾಹನಗಳನ್ನು ತಡೆದು ಇಡೀ ಮತಪೆಟ್ಟಿಗೆಯನ್ನೇ ಅಪಹರಿಸುವುದು. ತಮ್ಮ ಬಳಿ ಅಂತಹದ್ದೇ ಮತಪೆಟ್ಟಿಗೆಯನ್ನು ಸಿದ್ಧಪಡಿಸಿಟ್ಟುಕೊಂಡು, ತಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಚಲಾಯಿಸಿರುವಂತೆ ನಕಲಿ ಮತದಾನ ಮಾಡಿಟ್ಟುಕೊಳ್ಳುವುದು. ಅಸಲಿ ಮತಪೆಟ್ಟಿಗೆ ಜಾಗದಲ್ಲಿ ನಕಲಿ ಮತಪೆಟ್ಟಿಗೆಯನ್ನೇ ಇರಿಸುವುದು-ನೆನಪಿಸಿಕೊಂಡರೆ, ನಾವೆಂಥಾ ಕಾಲವನ್ನು ಹಾದು ಬಂದಿವಲ್ಲಾ ಎನಿಸಿಬಿಡುತ್ತದೆ !
ಇದೇ ಕಾರಣಕ್ಕೆ ಚುನಾವಣೆಯಲ್ಲಿ ʼಹಣಬಲ ಹಾಗೂ ತೋಳ್ಬಲʼ ಎಂಬ ಮಾತು ಚಾಲ್ತಿಗೆ ಬಂದಿದೆ. ಹಣಬಲ ಎಂದರೆ ಮತದಾರರಿಗೆ ಹಣದ ಆಮಿಷ ಒಡ್ಡುವುದು. ತೋಳ್ಬಲ ಎಂದರೆ ರೌಡಿಗಳು, ಗೂಂಡಾಗಳು, ಅಂಡರ್ವರ್ಲ್ಡ್ ಕ್ರಿಮಿನಲ್ಗಳನ್ನು ಬಳಸಿಕೊಂಡು ಹೆದರಿಸುವುದು. ಆದರೆ, ಈ ಮೂರು ದಶಕದಲ್ಲಿ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ಮೊದಲ ಅಂಥ ಮೂರು ಬದಲಾವಣೆಗಳನ್ನು ಗಮನಿಸೋಣ. ಮೊದಲನೆಯದ್ದು- ಮತಗಟ್ಟೆಯಲ್ಲಿ ನಿಜವಾದ ಮತದಾರರನ್ನು ತಡೆಯುವ, ಬೆದರಿಸುವ ಕಾರ್ಯಕ್ಕೆ ಬ್ರೇಕ್ ಹಾಕುವ ಸಲುವಾಗಿ ಸಾಮಾನ್ಯ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ವಿಂಗಡಿಸುವ ಪದ್ಧತಿ ಶುರುವಾಯಿತು. ಸಾಮಾನ್ಯ ಮತಗಟ್ಟೆ ಎಂದರೆ ಅಕ್ರಮಗಳು ಅತ್ಯಂತ ಕಡಿಮೆ ನಡೆಯುವ ಹಾಗೂ ಅತಿ ಸೂಕ್ಷ್ಮ ಎಂದರೆ ಅಕ್ರಮಗಳು ಹೆಚ್ಚು ನಡೆಯುವ ಬೂತ್ಗಳು ಎಂದರ್ಥ. ಸಾಮಾನ್ಯ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಯಷ್ಟೆ ಅಲ್ಲದೆ, ಸಿಆರ್ಪಿಎಫ್, ಕೆಲವೆಡೆ ಸೇನಾ ಯೋಧರನ್ನೂ ನಿಯೋಜನೆ ಮಾಡಲಾಯಿತು. ಮತಗಟ್ಟೆಯಿಂದ ನೂರು ಮೀಟರ್ ದೂರದಲ್ಲಿ ಯಾವುದೇ ಪ್ರಚಾರ, ಒತ್ತಡ ಹೇರದಂತೆ ಲಕ್ಷ್ಮಣ ರೇಖೆ ಎಳೆಯಲಾಗುವುದು. ಎರಡನೆಯ ಬದಲಾವಣೆ- ಮತದಾರರು ಗುರುತಿನ ಚೀಟಿಯನ್ನು ವಶಕ್ಕೆ ಪಡೆದು ಮತದಾನವನ್ನು ತಡೆಯುವುದನ್ನು ತಡೆಯಲು ಗುರುತಿನ ಚೀಟಿಗಳ ಮಾನದಂಡವನ್ನು ಮಾರ್ಪಾಟು ಮಾಡಲಾಯಿತು. ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿಯಷ್ಟೆ ಅಲ್ಲದೆ, ಚಾಲನಾ ಪರವಾನಗಿ, ಪಾಸ್ಪೋರ್ಟ್, ಆಧಾರ್ ಕಾರ್ಡ್ ಸೇರಿ ಹತ್ತಾರು ದಾಖಲೆಗಳಿದ್ದರೂ ಮತದಾನ ಮಾಡಬಹುದು ಎಂದು ನಿಯಮ ರೂಪಿಸಲಾಯಿತು.
ಇನ್ನು ಮೂರನೆಯ ಸಮಸ್ಯೆ ಮತಪೆಟ್ಟಿಗೆ ಅಪಹರಣ. ಈ ಅಕ್ರಮಕ್ಕೆ ತಂತ್ರಜ್ಞಾನ ತಡೆ ವಿಧಿಸಿತು. ಬೆಂಗಳೂರು ಕೇಂದ್ರಿತ ಪ್ರತಿಷ್ಠಿತ ಸಂಸ್ಥೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್( ಬಿಇಎಲ್) ರೂಪಿಸಿದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲು ಆರಂಭಿಸಲಾಯಿತು. ಮತಪತ್ರಗಳನ್ನು ಮುದ್ರಿಸಿ ಡಬ್ಬಗಳಲ್ಲಿ ತುಂಬಿ ಅಸಲಿ ಮತಪೆಟ್ಟಿಗೆಯನ್ನು ಬದಲಾಯಿಸುತ್ತಿದ್ದ ಗೂಂಡಾಗಳಿಗೆ ಈ ತಂತ್ರಜ್ಞಾನ ತಲೆಗೆ ಹೋಗಲಿಲ್ಲ. ಹಾಗಾಗಿ ಈ ವಿಧಾನ ಶೇಕಡಾ ನೂರರಷ್ಟು ನಿಂತುಹೋಗಿದೆ. ಹೀಗೆ ಅನೇಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಆದರೂ ಇನ್ನೂ ರಂಗೋಲಿ ಕೆಳಗೆ ತೂರುವ ನಿರಂತರ ಪ್ರಯತ್ನ ನಡೆದೇ ಇದೆ.
ಭಾರತವನ್ನು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎನ್ನಲಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಭಾರತವು ಕೇವಲ ಅತಿ ದೊಡ್ಡ ಪ್ರಜಾಪ್ರಭುತ್ವವಲ್ಲ, ಪ್ರಜಾಪ್ರಭುತ್ವದ ಜನ್ಮಭೂಮಿ ಎಂದು ಹೇಳುತ್ತಿದ್ದಾರೆ. ಈ ವಿಚಾರಕ್ಕೆ, ನಮ್ಮದೇ ಕರ್ನಾಟಕದ ಅಣ್ಣ ಬಸವಣ್ಣ ಜಾರಿ ಮಾಡಿದ್ದ ಅನುಭವ ಮಂಟಪವೇ ಆಧಾರ ಎನ್ನುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಚಾರ.
ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ದೇಶದಲ್ಲಿ ಜೀವಂತವಾಗಿದೆ ಎಂದರೆ ಅದರ ಪ್ರಮುಖ ಲಕ್ಷಣ ಚುನಾವಣೆ ನಡೆಯುವುದು. ಚುನಾವಣೆ ಎಷ್ಟು ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ನಡೆಯುತ್ತದೆ, ಚುನಾವಣೆ ನಡೆದ ನಂತರ ಎಷ್ಟು ಸರಾಗವಾಗಿ ಅಧಿಕಾರ ಹಸ್ತಾಂತರ ಆಗುತ್ತದೆ ಎನ್ನುವುದರ ಆಧಾರದಲ್ಲಿ ಪ್ರಜಾಪ್ರಭುತ್ವವನ್ನು ಅಳೆಯಲಾಗುತ್ತದೆ. ಅಧಿಕಾರ ಬಂದ ನಂತರ ಸರ್ಕಾರ ಹೇಗೆ ನಡೆಯುತ್ತದೆ ಎನ್ನುವುದು ಮುಂದಿನ ಭಾಗ. ಆದರೆ ಚುನಾವಣೆ ಪ್ರಕ್ರಿಯೆಯೇ ಮೊದಲ ಮಾನದಂಡ.
ಈ ವಿಚಾರದಲ್ಲಿ ವಿಶ್ವಾದ್ಯಂತ ಭಾರತ ಸಾಕಷ್ಟು ವಿಶ್ವಾಸಾರ್ಹತೆ ಹೊಂದಿದೆ. ಇಂದಿರಾಗಾಂಧಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದು ಅಸಿಂಧು ಎಂದು ತೀರ್ಪು ಬಂದ ಕೂಡಲೆ ತುರ್ತು ಪರಿಸ್ಥಿತಿಯನ್ನು ಹೇರಿದ ಒಂದು ಕಪ್ಪು ಚುಕ್ಕಿ ನಮ್ಮ ಪ್ರಜಾಪ್ರಭುತ್ವಕ್ಕೆ ಇದೆ. ಆದರೆ ಅದನ್ನು ಹೊರತುಪಡಿಸಿ ನಮ್ಮ ದೇಶದ ಕೇಂದ್ರ ಹಾಗೂ ರಾಜ್ಯಗಳಲ್ಲಿ ಚುನಾವಣೆ ನಂತರ ಬಹುತೇಕ ಸರಾಗವಾಗಿ, ಕನಿಷ್ಠ ಪಕ್ಷ ಕಾನೂನಿಗೆ ಅನುಗುಣವಾಗಿ ಅಧಿಕಾರ ಹಸ್ತಾಂತರ ನಡೆದಿದೆ. ಅಷ್ಟರ ಮಟ್ಟಿಗೆ ಪ್ರಜಾಪ್ರಭುತ್ವದ ಮೊದಲ ಹೆಜ್ಜೆಯಲ್ಲಿ ಭಾರತ ಸಫಲವಾಗಿದೆ.
ಮೇಲ್ನೋಟಕ್ಕೆ ಹೀಗೆನ್ನಿಸಿದರೂ ಒಳಗೆ ನೂರಾರು ಹುಳುಕು ಇರುವುದು ಕಣ್ಣಿಗೆ ರಾಚುತ್ತಿದೆ. ಮುಖ್ಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದರೆ ಕೋಟ್ಯಂತರ ರೂ. ಖರ್ಚು ಮಾಡಬೇಕು ಎನ್ನುವುದು ಹಗಲಿನಷ್ಟೆ ಸತ್ಯ. 2014ರವರೆಗೆ ಒಂದು ಲೋಕಸಭೆ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ 70 ಲಕ್ಷ ರೂ. ವೆಚ್ಚ ಮಾಡಬಹುದಿತ್ತು. ಅದನ್ನು 2022ರಲ್ಲಿ 95 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ವಿಧಾನಸಭೆ ಚುನಾವಣೆಗೆ ಈ ಹಿಂದೆ ಇದ್ದ 28 ಲಕ್ಷ ರೂ.ನಿಂದ 40 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.
ಇದೀಗ ಕರ್ನಾಟಕದಲ್ಲಿ ಚುನಾವಣೆ ಎದುರಾಗುತ್ತಿದೆ. 40 ಲಕ್ಷ ರೂ.ನಲ್ಲಿ ಒಂದು ವಿಧಾನಸಭೆ ಚುನಾವಣೆಯ ಶೇ. 20 ವೆಚ್ಚವೂ ತಗಲುವುದಿಲ್ಲ ಎನ್ನುವುದು ರಾಜಕಾರಣದ ಕನಿಷ್ಠ ಜ್ಞಾನ ಇರುವವರಿಗಾದರೂ ಗೊತ್ತು. ಇದು ಸುಮ್ಮನೆ ಬಾಯಿ ಮಾತಿಗೆ ಹೇಳುವ ಮಾತಲ್ಲ. 2010ರಲ್ಲಿ ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಇಲಾಖೆಯು ಚುನಾವಣೆ ಸುಧಾರಣೆ ಕುರಿತು ಸಿದ್ಧಪಡಿಸಿದ್ದ ವರದಿಯಲ್ಲೇ ಇದನ್ನು ತಿಳಿಸಿತ್ತು. “ಕಾನೂನಾತ್ಮಕವಾಗಿ ಮಾಡಬಹುದಾದ ವೆಚ್ಚಕ್ಕಿಂತಲೂ ವಾಸ್ತವ ವೆಚ್ಚವು ಬಹಳಷ್ಟು ಪಟ್ಟು ಹೆಚ್ಚಾಗಿದೆ ಎಂದು ನಂಬಲಾಗಿದೆ” ಎಂದು ವರದಿಯ ಆರಂಭದಲ್ಲೇ ತಿಳಿಸಲಾಗಿತ್ತು. ಅಂದರೆ ಇದೇನು ಯಾರಿಗೂ ಗೊತ್ತಿಲ್ಲದ ಸಂಗತಿ ಏನಲ್ಲ.
ಇತ್ತೀಚೆಗೆ ಸದನದಲ್ಲಿ ಕರ್ನಾಟಕದ ಹಾಸನ ಜಿಲ್ಲೆಯ ಅರಸೀಕೆರೆಯ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರು ಮಾತನಾಡುತ್ತಿದ್ದನ್ನು ಗಮನಿಸಿದ್ದೆ. ಚುನಾವಣೆ ನಡೆಸುವುದು ಬಹಳ ಕಷ್ಟವಾಗಿದೆ ಎಂದು ಅವರು ಹೇಳುತ್ತಿದ್ದರು. ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಮಾಡದೆ ಹೋದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವುದಿಲ್ಲ. ಎಲ್ಲ ಅಭ್ಯರ್ಥಿಗಳೂ ಪ್ರಚಾರಕ್ಕೆ ಮನೆಗಳಿಗೆ ತೆರಳುವುದು, ತಂತಮ್ಮ ಬೃಹತ್ ಸಮಾವೇಶಗಳನ್ನು ನಡೆಸುವುದೇ ಭ್ರಷ್ಟಾಚಾರಕ್ಕೆ ಮೂಲವಾಗುತ್ತಿದೆ. ಯಾರೂ ಮತದಾರರ ಬಳಿ ತೆರಳುವಂತೆಯೇ ಇರಬಾರದು. ಪ್ರತಿ ತಾಲೂಕು ಮಟ್ಟದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೂ, ಎಲ್ಲ ಅಭ್ಯರ್ಥಿಗಳಿಗೂ ಒಂದೆಡೆ ಮಾತನಾಡಲು ಅವಕಾಶ ನೀಡಬೇಕು. ತಾನು ಅಧಿಕಾರಕ್ಕೆ ಬಂದರೆ ಏನೇನು ಕೆಲಸ ಮಾಡುತ್ತೇನೆ ಎಂದು ಎಲ್ಲರೂ ತಿಳಿಸಬೇಕು. ಅದರ ಆಧಾರದಲ್ಲಿ ಮತಗಳನ್ನು ಕೇಳಬೇಕು. ಒಂದು ರೂ. ಸಹ ಯಾರೂ ಖರ್ಚು ಮಾಡುವಂತಿರಬಾರದು. ಹೀಗೆ ಆಯ್ಕೆಯಾಗಿ ಬಂದವರು ಮತದಾರರಿಗೆ ಉತ್ತರದಾಯಿಯಾಗಿರುತ್ತಾರೆ. ನಿನ್ನಿಂದ ಒಂದು ರೂ. ಸಹ ಪಡೆಯದೆ ಮತ ನೀಡಿ ಗೆಲ್ಲಿಸಿದ್ದೇವೆ, ಈ ಕೆಲಸ ಏಕೆ ಮಾಡಲಿಲ್ಲ? ಎಂದು ಕೊರಳು ಪಟ್ಟಿ ಹಿಡಿದು ಕೇಳುತ್ತಾರೆ. ಇಂತಹ ಸುಧಾರಣೆ ಆಗಬೇಕು ಎಂದು ಶಿವಲಿಂಗೇಗೌಡರು ಹೇಳಿದ್ದರು.
ಅವರು ಹೇಳಿದ್ದಕ್ಕೆ ಒಂದಷ್ಟು ಸೇರಿಸಬಹುದು. ಈಗ ಸಾಮಾಜಿಕ ಜಾಲತಾಣಗಳು ಎಲ್ಲ ಮನೆಯನ್ನೂ ತಲುಪಿವೆ. ಮನೆಗಿಂತಲೂ ಒಂದು ಹೆಜ್ಜೆಮುಂದೆ ಹೋಗಿ ಪ್ರತಿ ಕೈಯನ್ನೂ ತಲುಪಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸುದ್ದಿಗಳನ್ನು, ಜಗತ್ತಿನ ಆಗುಹೋಗುಗಳನ್ನು ಜನರು ತಿಳಿದುಕೊಳ್ಳುತ್ತಿದ್ದಾರೆ. ಈ ಮಾಧ್ಯಮವನ್ನೂ ಚುನಾವಣಾ ಆಯೋಗ ಬಳಸಿಕೊಂಡರೆ, ಯಾವ ಅಭ್ಯರ್ಥಿಯೂ ಯಾರ ಮನೆಗೂ ತೆರಳದೆ, ಒಂದು ರೂ. ಖರ್ಚು ಮಾಡದೆ ಚುನಾವಣೆಯಲ್ಲಿ ಜಯಗಳಿಸಬಹುದು. ಇದು ಒಂದು ಸಾಧ್ಯತೆ.
ಹಣದ ಆಮಿಷ ಒಡ್ಡುವಿಕೆಯಿಂದಾಗಿ ಭಾರತದ ಪ್ರಜಾಪ್ರಭುತ್ವದಲ್ಲಿ ಮತ್ತೊಂದು ಬದಲಾವಣೆ ಆಗುತ್ತಿದೆ. ಅದೆಂದರೆ ಪಕ್ಷೇತರ ಅಭ್ಯರ್ಥಿಗಳು ಬಹುತೇಕ ಇಲ್ಲದಂತೆಯೇ ಆಗಿರುವುದು. ಕೆಲವು ಚುನಾವಣೆಗಳ ಅಂಕಿ ಅಂಶಗಳನ್ನು ನೋಡೋಣ. 1957ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 179 ಕ್ಷೇತ್ರದಲ್ಲಿ 35 ಪಕ್ಷೇತರರು ಜಯಿಸಿದ್ದರು. ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ.28 ಮತ ಪಡೆದಿದ್ದರು. 1967ರಲ್ಲಿ ಒಟ್ಟು 216 ಕ್ಷೇತ್ರದಲ್ಲಿ 41 ಪಕ್ಷೇತರರು ಜಯಿಸಿದರು. 1983ರಲ್ಲಿ 224 ಕ್ಷೇತ್ರದಲ್ಲಿ ಪಕ್ಷೇತರ ಶಾಸಕರ ಸಂಖ್ಯೆ 22ಕ್ಕೆ ಇಳಿಯಿತು. ಒಟ್ಟು ಪಡೆದ ಮತ ಶೇ.15.47 ಆಯಿತು. 2008ರಲ್ಲಿ ಕೇವಲ 6 ಪಕ್ಷೇತರರು ಜಯಿಸಿದರು. ಒಟ್ಟು ಮತದಲ್ಲಿ ಪಕ್ಷೇತರರು ಪಡೆದ ಮತಗಳ ಪ್ರಮಾಣ ಕೇವಲ ಶೇ. 6.92. ಇನ್ನು 2018ರಲ್ಲಿ ಕೇವಲ ಒಬ್ಬರು ಪಕ್ಷೇತರರು ಜಯಿಸಿದರು. ಪಕ್ಷೇತರರು ಪಡೆದ ಮತಗಳ ಪ್ರಮಾಣ ಶೇ. 3.93. ಹಾಗೆಂದು ಸ್ಪರ್ಧಿಸುವ ಪಕ್ಷೇತರರ ಪ್ರಮಾಣ ಕಡಿಮೆಯಾಗಿಲ್ಲ. ಆದರೆ ಅವರು ಗೆಲ್ಲುವ ಸಾಧ್ಯತೆ ಕುಂದುತ್ತಿದೆ.
ಇನ್ನು ಲೋಕಸಭೆ ಚುನಾವಣೆಯಲ್ಲಂತೂ ಪಕ್ಷೇತರರು ಜಯಿಸುವುದು ಬಹುತೇಕ ಅಸಾಧ್ಯ ಎನ್ನುವಂತಾಗಿದೆ. ಕರ್ನಾಟಕದಲ್ಲಿ ಕಳೆದ 50 ವರ್ಷದಲ್ಲಿ ಯಾರೂ ಲೋಕಸಭೆಗೆ ಪಕ್ಷೇತರರಾಗಿ ಆಯ್ಕೆ ಆಗಿರಲಿಲ್ಲ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಜಯಿಸಿದ್ದೇ ಅರ್ಧ ಶತಮಾನದ ದಾಖಲೆ. ಮತದಾರರನ್ನು ಎಲ್ಲ ಅಭ್ಯರ್ಥಿಗಳೂ ತಲುಪಲು ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಎಲ್ಲ ಅಭ್ಯರ್ಥಿಗಳಿಗೂ, ಎಲ್ಲ ಪಕ್ಷಗಳಿಗೂ ಸೆಣೆಸುವ ಸಮಾನ ಅವಕಾಶ ಇಲ್ಲ ಎನ್ನುವುದು ಸಾಬೀತಾಗಿರುವ ಅಂಶ. ಶಿವಲಿಂಗೇಗೌಡರು ಹೇಳಿದ ಮಾರ್ಗವಿರಬಹುದು, ಅಥವಾ ಚುನಾವಣಾ ತಜ್ಞರು ಕುಳಿತು ಚರ್ಚಿಸಿ ನಿರ್ಧರಿಸುವ ಬೇರಾವುದೇ ಮಾರ್ಗವಿರಬಹುದು, ಇದನ್ನು ಸರಿಪಡಿಸಲು ಪ್ರಯತ್ನ ಮಾಡಲೇಬೇಕು.
ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತದ ಬಹುತ್ವ ಕಾಪಾಡಲು ಹಿಂದು ರಾಷ್ಟ್ರವಲ್ಲದೆ ಮತ್ಯಾವ ಹಾದಿ?!
ಈಗ ಉದ್ಯಮಗಳಲ್ಲಿ Entry Barrier ತೆಗೆಯುವ ಕೆಲಸ ಆಗುತ್ತಿದೆ. ಯಾವುದೇ ವ್ಯಕ್ತಿ ತನ್ನಲ್ಲಿ ಹಣವಿಲ್ಲ, ರಾಜಕಾರಣಿಗಳ ಪರಿಚಯವಿಲ್ಲ ಎಂಬ ಕಾರಣಕ್ಕೆ ತನ್ನ ಉದ್ಯಮವನ್ನು ಆರಂಭಿಸುವುದಕ್ಕೆ ತೊಡಕಾಗಬಾರದು. ಆತನಿಗೆ ಆಸ್ತಿ ಇಲ್ಲದಿದ್ದರೂ ಬ್ಯಾಂಕ್ಗಳು ಸಾಲ ನೀಡಬೇಕು, ಯಾವುದೇ ಅಧಿಕಾರಿಗಳು, ರಾಜಕಾರಣಿಗಳು ಹಸ್ತಕ್ಷೇಪವಿಲ್ಲದೆ ಉದ್ಯಮ ಪರವಾನಗಿಗಳು ದೊರಕಬೇಕು ಎಂಬ ನಿಟ್ಟಿನಲ್ಲಿ ಒಂದಷ್ಟು ಸುಧಾರಣೆಗಳು ಕಾಣುತ್ತಿವೆ. ಅದನ್ನು Ease of Doing Business (EoDB) ಎಂದು ಕರೆಯಲಾಗುತ್ತದೆ. ಈ ಸೂಚ್ಯಂಕದಲ್ಲಿ ಯಾವ ದೇಶವು ಉತ್ತಮ ಸ್ಥಾನ ಹೊಂದಿದೆಯೋ, ಆ ದೇಶದಲ್ಲಿ ಉದ್ಯಮಿಗಳು ಸರಾಗವಾಗಿ ವ್ಯಾಪಾರ ವಹಿವಾಟು ನಡೆಸಬಹುದು ಎಂದರ್ಥ.
ಹಾಗಾದರೆ ಇದೇ ವಿಚಾರವನ್ನು ರಾಜಕಾರಣಕ್ಕೆ ಏಕೆ ಅನ್ವಯಿಸಬಾರದು? ಯಾರಾದರೊಬ್ಬ ರಾಜಕಾರಣಕ್ಕೆ ಪ್ರವೇಶಿಸಲು ಇರುವ ಅನೇಕ Entry Barrier ಅಂದರೆ ಆರಂಭಿಕ ಅಡೆತಡೆಗಳನ್ನು ಏಕೆ ನಿವಾರಿಸಬಾರದು? ಅದರಲ್ಲೂ ಢಾಳಾಗಿ ಕಾಣುತ್ತಿರುವ ಹಣಬಲ, ಪಕ್ಷಬಲ, ಸಮಾನ ಅವಕಾಶಗಳ ವಿಚಾರದಲ್ಲಿ ಏಕೆ ಹೊಸ ಮಾರ್ಗವನ್ನು ಕಂಡುಕೊಳ್ಳಬಾರದು? Ease of Doing Business (EoDB) ರೀತಿಯಲ್ಲಿ Ease of Doing Politics (EoDP) ಸೂಚ್ಯಂಕ ಏಕೆ ಸ್ಥಾಪನೆಯಾಗಬಾರದು? ಉದ್ಯಮ ನಡೆಸಲು ಇರುವ ಅತಿ ದೊಡ್ಡ ತೊಂದರೆ ಭ್ರಷ್ಟಾಚಾರ. EoDP ಸಂಪೂರ್ಣ ಜಾರಿ ಸಾಧ್ಯವಾದರೆ EoDB ತನ್ನಿಂತಾನೇ ಉತ್ತಮವಾಗುತ್ತದೆಯಲ್ಲವೇ? ಈ ಬಗ್ಗೆ ಒಂದಿಷ್ಟು ಆಲೋಚನೆಗಳು ನಡೆಯಲಿ. ಪಕ್ಷಾಂತರವೆಂಬ ಮತ್ತೊಂದು ಪೆಡಂಭೂತದ ಕುರಿತು ಮುಂದಿನ ಲೇಖನದಲ್ಲಿ ಚರ್ಚೆ ಮಾಡೋಣ.
ಅವಕಾಶಗಳು ಮುಖ್ಯವಾಗುತ್ತವೆ. ಭಾರತದಂತಹ ಬಹು ವೈವಿಧ್ಯತೆ ಹೊಂದಿರುವ ದೇಶದಲ್ಲಿ ಎಲ್ಲ ಸಮುದಾಯಗಳು, ಪ್ರದೇಶಗಳಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸುವ ಸಮತಟ್ಟು ನೆಲ ಇರಬೇಕು. ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಸಾಧನಗಳಿರುತ್ತವೆ. ಅದರಲ್ಲಿ ಪ್ರಮುಖವಾಗಿ ಕಾರ್ಯಕರ್ತರು. ಅದಕ್ಕಿಂತಲೂ ಪ್ರಮುಖವಾದ ಅಂಶ ಎಂದರೆ ಹಣ. ಹಣ ವ್ಯಯಿಸುವ ಸಾಮರ್ಥ್ಯ ಇಲ್ಲದವನು ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ ಎನ್ನುವುದು ಕರ್ನಾಟಕ ಶೇ. 95 ಕ್ಷೇತ್ರಗಳಲ್ಲಿ ಶತಃಸಿದ್ಧ. ಅಂದಮೇಲೆ ಹಣ ಇಲ್ಲದವನು ಉತ್ತಮ ಆಡಳಿತಗಾರ, ನೀತಿ ನಿರೂಪಕ, ಶಾಸಕ ಆಗಬಾರದು ಎಂದು ನಿರ್ಧರಿಸಲಾಗಿದೆಯೇ?
ಇದನ್ನೂ ಓದಿ: ವಿಸ್ತಾರ ಅಂಕಣ: ನರೇಂದ್ರ ಮೋದಿಯವರತ್ತ ಬೆರಳು ತೋರಿಸಿ ಎಷ್ಟು ವಿಚಾರ ಮುಚ್ಚಿಡಲು ಸಾಧ್ಯ?
-
ಸುವಚನ45 mins ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಅಂಕಣ22 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ22 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ22 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ23 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ20 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ20 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಕರ್ನಾಟಕ16 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ