ವಿಸ್ತಾರ ಅಂಕಣ: ಸರ್ಕಾರಿ ನೌಕರರ ಕುರಿತು ಸಮಾಜದಲ್ಲಿ ಇಷ್ಟೊಂದು ಆಕ್ರೋಶ ಮಡುಗಟ್ಟಿದೆ ಏಕೆ? ಇದಕ್ಕೆ ಪರಿಹಾರವೇನು? - Vistara News

ಅಂಕಣ

ವಿಸ್ತಾರ ಅಂಕಣ: ಸರ್ಕಾರಿ ನೌಕರರ ಕುರಿತು ಸಮಾಜದಲ್ಲಿ ಇಷ್ಟೊಂದು ಆಕ್ರೋಶ ಮಡುಗಟ್ಟಿದೆ ಏಕೆ? ಇದಕ್ಕೆ ಪರಿಹಾರವೇನು?

ಭ್ರಷ್ಟಾಚಾರ ಎನ್ನುವುದು ಸರ್ಕಾರಿ ಕಚೇರಿಯಲ್ಲಿ ತುಂಬಿ ತುಳುಕುತ್ತಿದೆ ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು. ಈ ಭ್ರಷ್ಟಾಚಾರಕ್ಕೆ ನೇರವಾಗಿ ರಾಜಕಾರಣಿಗಳೇ ಹೊಣೆ. ಹಾಗಾದರೆ ಸರ್ಕಾರಿ ನೌಕರರದ್ದು ಏನೂ ತಪ್ಪೇ ಇಲ್ಲವೇ? ಇದಕ್ಕೇನು ಪರಿಹಾರ?

VISTARANEWS.COM


on

govt workers
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara Column @ Hariprakash Konemane

ಎರಡು ದಿನದಿಂದ  ವಾಟ್ಸಾಪಿನಲ್ಲಿ ಒಂದು ಪೋಸ್ಟರ್ ಹರಿದಾಡುತ್ತಿದೆ. ನನಗೂ ಲಭಿಸಿತು. ಅದರ ಶೀರ್ಷಿಕೆ ಹೀಗಿತ್ತು. “ಸರ್ಕಾರಿ ನೌಕರರ ಡೈಲಿ ರೊಟೀನ್ ವರ್ಕ್” ಅದರ ಕೆಳಗೆ- “ಬೆಳಗ್ಗೆ 10.30ಕ್ಕೆ ಕಚೇರಿಗೆ, 11ಕ್ಕೆ ಟೀಗೆ ಕ್ಯಾಂಟೀನ್ಗೆ, 12ಕ್ಕೆ ಟೀ ಕುಡಿದು ವಾಪಸ್, 1ಕ್ಕೆ ಊಟದ ಬ್ರೇಕ್, 3ಕ್ಕೆ ಕೆಲಸಕ್ಕೆ ವಾಪಸ್, 4.30ಕ್ಕೆ ಮನೆಗೆ ಓಟ. ಈ ಸಂಭ್ರಮಕ್ಕೆ  ಅವರಿಗೆ ಸರಕಾರ 17% ಸಂಬಳ ಜಾಸ್ತಿ ಮಾಡಿದೆ. ದುಡ್ಡು ಜನರದ್ದು, ಶೋಕಿ ನೌಕರರದ್ದು. ಇದ್ರ ಮೇಲೆ ಲಂಚನೂ ಕೇಳ್ತಾರೆ”. ಇವಿಷ್ಟೂ ವಾಟ್ಸ್ಅಪ್ನಲ್ಲಿ ಬಂದ ಸಂದೇಶದಲ್ಲಿದ್ದ ಅಂಶಗಳು.

ಸರ್ಕಾರಿ ನೌಕರರು ತಮಗೆ 7ನೇ ವೇತನ ಆಯೋಗದ ಅನ್ವಯ ಸಂಬಳ ಹೆಚ್ಚಳ ಮಾಡಬೇಕು ಎಂದು ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿಂತಾಗಿನಿಂದ ಸಾಮಾಜಿಕ ವಲಯದಲ್ಲಿ ಇಂತಹ ಸಂದೇಶಗಳು ಹರಿದಾಡುತ್ತಿವೆ. ಯಾವುದೇ ಉತ್ಪಾದಕತೆಯೇ ಕಣ್ಣಿಗೆ ಗೋಚರಿಸದ,  ಈ ವರ್ಗಕ್ಕೆ ಸಂಬಳ ಏಕೆ ಜಾಸ್ತಿ ಮಾಡಬೇಕು ಎಂದು ಅನೇಕರು ಪ್ರಶ್ನಿಸಿದ್ದಾರೆ. ಇವರಿಗೆ ಲಂಚವೇ ಲಕ್ಷಾಂತರ ರೂ. ಸಿಗುವಾಗ ಪುಡಿಗಾಸು ಸಂಬಳ ಹೆಚ್ಚಳ ಮಾಡುವುದೇಕೆ ಏಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ಅರ್ಥದ ಸಂದೇಶಗಳು ಎಲ್ಲೆಲ್ಲೂ ಹರಿದಾಡುತ್ತಿವೆ ಮತ್ತು ಫಾರ್ವರ್ಡ್ ಆಗುತ್ತಿವೆ.  

 ಹಾಗಾದರೆ ಇಷ್ಟೊಂದು ಜನರು ಹೇಳುತ್ತಿರುವುದೆಲ್ಲ ನಿಜವೇ? ನಿಜವಾಗಲೂ ಸರ್ಕಾರಿ ನೌಕರರು ಅಷ್ಟೊಂದು ಆಲಸಿಗಳ? ಅವರಿಂದ ರಾಜ್ಯಕ್ಕೆ, ದೇಶಕ್ಕೆ ಎಳ್ಳಷ್ಟೂ ಉಪಯೋಗ ಆಗಿಲ್ಲವೇ ? ಅಲ್ಲಿ ಇರುವವರೆಲ್ಲರೂ ಲಂಚದ ಹಣದಲ್ಲೇ ಬದುಕುವರೇ ? ಹೀಗೆ ಅನೇಕ ಪ್ರಶ್ನೆಗಳು ಏಳುತ್ತವೆ.

ರಾಜ್ಯದಲ್ಲಿ ನೇರವಾಗಿ ಸರ್ಕಾರದ ಇಲಾಖೆಗಳು, ಹಾಗೂ ನಿಗಮಗಳನ್ನೂ ಸೇರಿ ಅಂದಾಜು 5 ಲಕ್ಷ ಸರ್ಕಾರಿ ನೌಕರರಿದ್ದಾರೆ.   ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಿ ನೌಕರರ ಬಗ್ಗೆ ಮಾತನಾಡುವವರೆಲ್ಲರೂ ಈ ಎಲ್ಲ 5 ಲಕ್ಷ ಜನರನ್ನೂ ಭೇಟಿ ಮಾಡಿ ಈ ಮಾತನ್ನು ಹೇಳುತ್ತಿರುವರೇ ? ಖಂಡಿತ ಇಲ್ಲ. ಸಾಮಾನ್ಯ ಜನರಲ್ಲಿ ಸರ್ಕಾರಿ ನೌಕರರ ಕುರಿತು ಇಂತಹ ಕೆಟ್ಟ ಅಭಿಪ್ರಾಯ ಮೂಡಲು ಕಾರಣರಾದವರು ಒಂದಿಷ್ಟು ನೌಕರರು ಮಾತ್ರ. ಅವರ ಪ್ರಮಾಣ  ಸುಮಾರು ಶೇಕಡ 4ರಿಂದ 5ರಷ್ಟಿರಬಹುದು.  ಇದು ಹೇಗೆ ಎಂದು ಯಾರಾದರೂ ಕೇಳಬಹುದು. ಸಾಮಾನ್ಯವಾಗಿ ಜನರಿಗೆ ಸರ್ಕಾರಿ ನೌಕರರ ನೇರಾನೇರ ಭೇಟಿಯಾಗುವುದು, ಅವರ ಕಾರ್ಯವೈಖರಿ ಅನುಭವಕ್ಕೆ  ಬರುವುದು  ಕಂದಾಯ ಇಲಾಖೆ, ಪಡಿತರ ಇಲಾಖೆ, ಆರೋಗ್ಯ ಇಲಾಖೆ, ಅಂಚೆ ಇಲಾಖೆ, ಪೊಲೀಸ್, ಸಚಿವಾಲಯ, ಎಸ್ಕಾಂಗಳು, ಸಾರಿಗೆ, ನಗರ ಪಾಲಿಕೆಗಳು, ಗ್ರಾಮ ಪಂಚಾಯಿತಿಗಳು… ಇತ್ಯಾದಿ ಬೆರಳೆಣಿಕೆ ಕಚೇರಿಗಳಲ್ಲಿ ಮಾತ್ರ. ಉಳಿದಂತೆ ಸರಕಾರದಲ್ಲಿ ನೂರಾರು ಇಲಾಖೆಗಳು ಇರುತ್ತವೆ. ಅಲ್ಲಿ ಜನರ ಒಡನಾಟವೇ ಇರುವುದಿಲ್ಲ.   ಅಲ್ಲಿಯೂ, ನೇಪಥ್ಯದಲ್ಲಿ ಇದ್ದುಕೊಂಡೆ  ದಿನಪೂರ್ತಿ ಅನಾಮಿಕರಂತೆ ಕೆಲಸ ಮಾಡಿ ಮನೆಗೆ ಹೋಗುವ ಶೇ.20 ನೌಕರರು ಜನರಿಗೆ ಗೊತ್ತೇ ಆಗುವುದಿಲ್ಲ. ಅಲ್ಲಿ ಜನರೊಂದಿಗೆ ಒಡನಾಡಲು ಫ್ರಂಟ್ ಡೆಸ್ಕ್‌ಗಳಲ್ಲಿ ಕುಳಿತಿರುವ ಕೇಸ್ ವರ್ಕರ್‌ಗಳು, ಸಹಿ ಹಾಕುವ ಅಧಿಕಾರವುಳ್ಳ ಅಧಿಕಾರಿಗಳು. ಇಂಥವರಲ್ಲಿ ಆಲಸಿಗಳೆನ್ನುವ, ಭ್ರಷ್ಟರನ್ನು ನೋಡುವ ಜನರು ಒಟ್ಟಾರೆ ಸರ್ಕಾರಿ ನೌಕರರೆಲ್ಲರೂ ಹೀಗೆಯೇ ಎಂದು ತೀರ್ಮಾನಿಸಿಬಿಡುತ್ತಾರೆ.

government office

ಪೊಲೀಸಿನವರು ಲಂಚ ಹೊಡೆಯುತ್ತಾರೆ, ಜನರಿಗೆ ಹಿಂಸೆ ಕೊಡುತ್ತಾರೆ ಎಂದು ಸಾರಾಸಗಟಾಗಿ ಹೇಳಿಬಿಡಬಹುದು. ಆದರೆ ನಾವೆಲ್ಲರೂ ಮನೆಯಲ್ಲಿ ಮಲಗಿದ್ದಾಗ ರಾತ್ರಿಯೆನ್ನದೆ ಗಸ್ತು ತಿರುಗುತ್ತ, ಕಳ್ಳಕಾಕರ ನಡುವೆಯೂ ಓಡಾಡುವ ಪೊಲೀಸಿನವರೇ ಹೆಚ್ಚಿನವರಿದ್ದಾರೆ ಎನ್ನುವುದು ಎಷ್ಟು ಜನರಿಗೆ ಗೊತ್ತು? ಯಾವುದೇ ಹಣಕಾಸಿನ ವಹಿವಾಟಿನ ಗಂಧ ಗಾಳಿಯೂ ಇಲ್ಲದೆ, ದಿನ ಬೆಳಗಾದರೆ ಮನೆಯಿಂದ ಊಟ ಕಟ್ಟಿಕೊಂಡು ದೂರದಲ್ಲಿರುವ ಶಾಲೆಗಳಿಗೆ ತೆರಳಿ ಸಂಜೆವರೆಗೆ ಪಾಠ ಪ್ರವಚನ ಮಾಡಿ ಮನೆಗೆ ಆಗಮಿಸುವ ಲಕ್ಷಾಂತರ ಶಿಕ್ಷಕರನ್ನು ಯಾರಾದರೂ ಸರ್ಕಾರಿ ನೌಕರರು ಎಂದು ಪರಿಗಣಿಸಿದ್ದಾರೆಯೇ? ಸರ್ಕಾರ ಪ್ರತಿ ವರ್ಷ ಬಜೆಟ್ ಗಾತ್ರವನ್ನು ಹೆಚ್ಚಳ ಮಾಡಿಕೊಂಡು ಹೆಚ್ಚಿನ ಗುರಿ ನೀಡುತ್ತಿರುತ್ತದೆ. ಈ ಗುರಿಯ ಬೆನ್ನತ್ತಿ, ತೆರಿಗೆ ಸೋರಿಕೆಯನ್ನು ತಡೆಗಟ್ಟಿ ಹೆಚ್ಚಿನ ತೆರಿಗೆ ಸಂಗ್ರಹಿಸುವ ತೆರಿಗೆ ಇಲಾಖೆ ಅಧಿಕಾರಿಗಳನ್ನು ಅನುತ್ಪಾದಕರು ಎಂದು ಹೇಳಬಹುದೆ? ಇದೇ ಅಧಿಕಾರಿಗಳು ಸಂಗ್ರಹಿಸುವ ತೆರಿಗೆಯಿಂದಲೇ ಅಲ್ಲವೇ ನಮ್ಮ ಮೂಲಸೌಕರ್ಯ ಯೋಜನೆಗಳು, ಸಹಾಯ ಧನಗಳು, ಸಾಮಾಜಿಕ ಪಿಂಚಣಿ, ಸರ್ಕಾರಿ ಶಾಲಾ ಮಕ್ಕಳಿಗೆ ಊಟದವರೆಗೆ ಎಲ್ಲವೂ ಬರುವುದು?

ಶಿಕ್ಷಣ ಇಲಾಖೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಆ ಇಲಾಖೆಗೆ ನೀಡುವ ಅನುದಾನದ ಬಹುದೊಡ್ಡ ಮೊತ್ತ ಶಿಕ್ಷಕರ ವೇತನಕ್ಕೆ ಹೋಗುತ್ತದೆ. ಶಿಕ್ಷಣ ಇಲಾಖೆಯಲ್ಲಿ ಯಾವ ಅಭಿವೃದ್ಧಿ ಮಾಡಲೂ ಹಣವೇ ಇಲ್ಲ, ಎಲ್ಲವೂ ಬರಿಯ ಶಿಕ್ಷಕರ ವೇತನಕ್ಕೇ ಹೋಗುತ್ತಿದೆ ಎಂದು ಅನೇಕರು ಮಾತನಾಡುವಾಗ ಹೇಳುವುದನ್ನು ಕೇಳಿದ್ದೇನೆ. ಹಾಗಾದರೆ ಶಿಕ್ಷಕರು ಪ್ರತಿನಿತ್ಯ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಅನುತ್ಪಾದಕತೆಯೇ? ಮುಂದಿನ ಪೀಳಿಗೆಗೆ ಕಲಿಸುವುದು, ಒಳ್ಳೆಯ ನಾಗರಿಕನನ್ನಾಗಿ ಮಾಡಲು ಪ್ರಯತ್ನಿಸುವುದು ಹೇಗೆ ವೇಸ್ಟ್ ಆಫ್ ರಿಸೋರ್ಸ್ ಆಗುತ್ತದೆ?

ಹೀಗೆ, ಕೆಲವೇ ಸರ್ಕಾರಿ ನೌಕರರ ಕಾರಣಕ್ಕೆ ಒಟ್ಟಾರೆ ನೌಕರ ವರ್ಗವನ್ನೇ ದೂರುವ ಕಾರ್ಯ ನಡೆದೇ ಇದೆ. 6ನೇ ವೇತನ ಆಯೋಗದಲ್ಲಿ ವೇತನ ಹೆಚ್ಚಳವಾಗಿ ಐದು ವರ್ಷವಾಯಿತು. ಹಾಗಾದರೆ ಐದು ವರ್ಷದ ನಂತರವಾದರೂ ವೇತನ ಹೆಚ್ಚಳ ಮಾಡಿ ಎಂದು ಕೇಳುವುದು ಹೇಗೆ ಮಹಾಪರಾಧವಾಗುತ್ತದೆ? ಸಾಮಾನ್ಯವಾಗಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರೂ ವರ್ಷಕ್ಕೆ 5-10% ವರೆಗೆ ವೇತನವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಾರೆ. ಪ್ರತಿ ವರ್ಷ ಹಣದುಬ್ಬರೂ ಬಹುತೇಕ ಇದೇ ಪ್ರಮಾಣದಲ್ಲಿ ಏರಿಕೆ ಆಗುವುದರಿಂದ ಈ ವೇತನ ಹೆಚ್ಚಳದಿಂದ ಆತನ ಜೀವನದಲ್ಲಿ ಏನೂ ಸುಧಾರಣೆ ಆಗುವುದಿಲ್ಲ. ಇದ್ದಲ್ಲಿಯೇ ಓಡಲು ಈ ವೇತನ ಹೆಚ್ಚಳ ಅನುಕೂಲವಾಗುತ್ತದೆ ಅಷ್ಟೆ. ಇದೀಗ ಸರ್ಕಾರಿ ನೌಕರರು ಕೇಳುತ್ತಿರುವ ವೇತನ ಹೆಚ್ಚಳ ಪ್ರಮಾಣವೂ ಬಹುತೇಕ ಅಷ್ಟೇ ಇರುತ್ತದೆ. ಹೌದು, ಕೆಲವರಿಗೆ ಈ ವೇತನ ಲೆಕ್ಕಕ್ಕೇ ಇರುವುದಿಲ್ಲ. ಅವರಿಗೆ ಲಂಚದಿಂದಲೇ ಸಾಕಷ್ಟು ಹಣ ಸಿಗುತ್ತದೆ. ವೇತನ ಸುಮ್ಮನೆ ಖಾತೆಯಲ್ಲಿ ಬಿದ್ದಿರುತ್ತದೆ. ಅಂಥವರನೇಕರನ್ನು ಜನರು ಲೋಕಾಯುಕ್ತ ದಾಳಿ ವೇಳೆ ಮಾಧ್ಯಮಗಳಲ್ಲಿ ನೋಡಿರುತ್ತಾರೆ. ಇಂಥ ನೌಕರರಿಂದಲೇ ಇತರೆ ನೌಕರರಿಗೂ ಕಳಂಕ ಬಂದುಬಿಟ್ಟಿದೆ.

govt

ಸರ್ಕಾರಿ ನೌಕರಿಗೆ ಸೇರುವುದು ಅನೇಕ ಬಾರಿ ಸುಲಭ. ಈಗಂತೂ ನೇಮಕಾತಿ ಪ್ರಕ್ರಿಯೆಯಲ್ಲಿ ಸಂದರ್ಶನದ ಭಾಗವನ್ನು ಕಡಿಮೆ ಮಾಡಿರುವುದರಿಂದ ನೇಮಕಾತಿ ಪ್ರಕ್ರಿಯೆ ಸಾಕ‍‍ಷ್ಟು  ಸುಧಾರಿಸಿದೆ. ಪಿಎಸ್ಐನಂತಹ ಹಗರಣಗಳು ಇನ್ನೂ ಕಣ್ಣಮುಂದೆಯೇ ಇರುವಾಗ, ಎಲ್ಲ ಸುಧಾರಿಸಿಬಿಟ್ಟಿದೆ ಎಂದು ಹೇಳುವ ಧೈರ್ಯ ಯಾರಿಗೂ ಇರುವುದಿಲ್ಲ. ಆದರೆ ಈ ಹಿಂದಿನದ್ದಕ್ಕಿಂತ ಒಂದಷ್ಟು ಸುಧಾರಣೆ ಕಂಡಿದೆ ಎಂದು ಹೇಳಬಹುದು. ಆದರೆ ಒಮ್ಮೆ ಸರ್ಕಾರಿ ನೌಕರಿಗೆ ಸೇರಿದ ನಂತರ ಆತನನ್ನು ಕೆಲಸದಿಂದ ವಜಾ ಮಾಡಬೇಕೆಂದರೆ ಅದು ನಿಜವಾಗಲೂ ಹರಸಾಹಸವೇ ಸರಿ.

ಇಂಥದ್ದೊಂದು ಸುರಕ್ಷತೆಯನ್ನು ಸಂವಿಧಾನ, ಕಾನೂನು ನೀಡಿದೆ. ಇದರ ಹಿಂದಿನ ಉದ್ದೇಶ ಸರಿಯಾಗಿಯೇ ಇದೆ. ಸರ್ಕಾರಿ ನೌಕರರು ಅನೇಕ ಬಾರಿ ರಾಜಕಾರಣಿಗಳ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಕಾಯ್ದೆ, ಕಾನೂನುಗಳಿಗೆ ಬೆಲೆ ಇಲ್ಲದಂತೆ ತಾವು ಹೇಳಿದ್ದನ್ನು ಮಾಡಬೇಕು ಎಂದು ಮೌಖಿಕ ಆದೇಶ ನೀಡುತ್ತಾರೆ. ಅಂತಹ ಸಂದರ್ಭದಲ್ಲಿ ಒತ್ತಾಯಕ್ಕೆ ಮಣಿಯದಿದ್ದರೆ ಸುಲಭವಾಗಿ ಕೆಲಸದಿಂದ ತೆಗೆದುಹಾಕಬಹುದು. ಯಾವುದೇ ಭಯವಿಲ್ಲದೆ, ಅಂಜಿಕೆಯಿಲ್ಲದೆ, ಕೆಲಸ ಕಳೆದುಕೊಳ್ಳುವ ಆತಂಕವಿಲ್ಲದೆ ಸರ್ಕಾರಿ ನೌಕರರು ಕೆಲಸ ಮಾಡುವಂತಾಗಲಿ ಎಂದು ಈ ರಕ್ಷಣೆ ನೀಡಲಾಗಿದೆ. ಆದರೆ ಇದೇ ರಕ್ಷಣೆಯನ್ನು ಅನೇಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೆಚ್ಚೆಂದರೆ ಅಮಾನತು ಮಾಡಬಹುದು, ನಂತರ ಸೇರಿಸಿಕೊಳ್ಳಲೇಬೇಕು. ಹೀಗಾಗಿ ಏನು ಬೇಕಾದರೂ ಮಾಡಬಹುದು, ಏನೂ ಮಾಡದೆಯೂ ಇರಬಹುದು ಎಂಬ ಮನಃಸ್ಥಿತಿಯ ದೊಡ್ಡ ಸಂಖ್ಯೆಯೂ ಸರ್ಕಾರಿ ನೌಕರರಲ್ಲಿದೆ.

ಭ್ರಷ್ಟಾಚಾರ ಎನ್ನುವುದು ಸರ್ಕಾರಿ ಕಚೇರಿಯಲ್ಲಿ ತುಂಬಿ ತುಳುಕುತ್ತಿದೆ ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು. ಈ ಭ್ರಷ್ಟಾಚಾರಕ್ಕೆ ನೇರವಾಗಿ ರಾಜಕಾರಣಿಗಳೇ ಹೊಣೆ. ರಾಜಕಾರಣಿಗಳು ಭ್ರಷ್ಟರಾಗದೇ ಇದ್ದರೆ ಈ ಅಧಿಕಾರಿಗಳ ಮೇಲೆ ನಿಯಂತ್ರಣ ಹೇರಬಹುದು. ಒಂದೋ ಅವರೇ ಭ್ರಷ್ಟರಾಗಿರುವುದರಿಂದ ಅಧಿಕಾರಿಗಳ ಭ್ರಷ್ಟಾಚಾರವನ್ನು ನೋಡಿಯೂ ನೋಡದಂತೆ ಸುಮ್ಮನಿರುತ್ತಾರೆ. ಅಥವಾ ಅವರೇ ಭ್ರಷ್ಟಾಚಾರದಲ್ಲಿ ನಿರತರಾಗಿ, ಭ್ರಷ್ಟಾಚಾರದ ಹಣವನ್ನು ಅಧಿಕಾರಿಗಳ ಮೂಲಕವೇ ಸಂಗ್ರಹಿಸುತ್ತ ಅವರಿಗೂ ಒಂದಷ್ಟು ಪಾಲು ಕೊಡುತ್ತಿರುತ್ತಾರೆ. ಇದೇ ಕಾರಣಕ್ಕೆ ಭ್ರಷ್ಟ ಅಧಿಕಾರಿಗಳು ಲಂಗು ಲಗಾಮಿಲ್ಲದೆ ಲಂಚ ಹೊಡೆಯುತ್ತಿರುತ್ತಾರೆ.

CM agrees to 17% salary increase; Formation of committee to decide cancellation of NPS

ಆ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿತ್ತು, ಈ ಸರ್ಕಾರ ಉತ್ತಮ ಸೇವೆ ಮಾಡಿತು, ಇನ್ನೊಂದು ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿತ್ತು ಎಂದು ಮಾತನಾಡುತ್ತೇವೆ. ಹಾಗಾದರೆ ಒಂದು ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗಲೂ, ಇನ್ನೊಂದು ಸರ್ಕಾರ ಭ್ರಷ್ಟಚಾರದಲ್ಲಿ ನಿರತವಾಗಿದ್ದಾಗಲೂ ಇದ್ದದ್ದು ಅದೇ ಅಧಿಕಾರಿ ವ್ಯವಸ್ಥೆ ಅಲ್ಲವೇ? ಬದಲಾಗಿದ್ದು ಏನು? ರಾಜಕಾರಣಿಗಳು ಮಾತ್ರ. ಹಾಗಾಗಿ ರಾಜಕಾರಣಿಗಳು ಭ್ರಷ್ಟವಾಗಿರುವುದೇ ನೌಕರ ವರ್ಗ ಭ್ರಷ್ಟವಾಗಲು ನೇರ ಕಾರಣ. ಭ್ರಷ್ಟ ರಾಜಕಾರಣಿಗಳನ್ನು ಆಯ್ಕೆ ಮಾಡಿದ್ದು ಯಾರು? ಕೇವಲ 5 ಲಕ್ಷ ಸಂಖ್ಯೆಯಿರುವ ನೌಕರರು ಮತ್ತು ಅವರ ಕುಟುಂಬದವರೇ? ಇಡೀ ರಾಜ್ಯದ ಕೋಟ್ಯಂತರ ಜನರಿಂದಲೇ ಆಯ್ಕೆಯಾದವರು ಈ ಭ್ರಷ್ಟ ರಾಜಕಾರಣಿಗಳು. ಹಾಗಾಗಿ ವ್ಯವಸ್ಥೆ ಸರಿಯಾಗಬೇಕೆಂದರೆ ಮೊದಲಿಗೆ ಸರಿಯಾದವರನ್ನು ಆಯ್ಕೆ ಮಾಡಿ ಕಳಿಸುವ ಹೊಣೆ ನಮ್ಮೆಲ್ಲ ಮತದಾರರ ಮೇಲಿದೆ. ಅದನ್ನು ಬಿಟ್ಟು ಇನ್ನೊಬ್ಬರತ್ತ ಬೊಟ್ಟು ಮಾಡುವದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎನ್ನುವುದನ್ನು ವಿನಮ್ರವಾಗಿಯೇ ಹೇಳಬೇಕಾಗುತ್ತದೆ.

ಹೀಗೆ ಆಯ್ಕೆಯಾಗಿ ಬಂದ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡರೆ, ಕೇವಲ 6 ತಿಂಗಳಲ್ಲಿ ಇಡೀ ಸರ್ಕಾರಿ ವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತದೆ ಎಂದು ಇತರೆ ಅನೇಕ ರಾಜ್ಯಗಳನ್ನು ನೋಡಿದ ಅನುಭವದಲ್ಲಿ ಹೇಳಬಹುದು. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರಿಂದ, ಡಿಬಿಟಿ ಮುಖಾಂತರ ಸರ್ಕಾರದ ಅನೇಕ ಸೌಲಭ್ಯಗಳ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗುತ್ತಿದೆ. ಇಲ್ಲಿ ಭ್ರಷ್ಟಾಚಾರ ಇಲ್ಲವಾಯಿತು ಅಲ್ಲವೇ? ಹಾಗೆಯೇ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕು ಅವಕಾಶವಿದೆ. ಆದರೆ ಶಾಸಕಾಂಗವು ಇದನ್ನು ಮಾಡಬೇಕು ಅಷ್ಟೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಮಸೂರಿಯಲ್ಲಿ ಕಲಿತ ಪಾಠವನ್ನು ಈ ಅಧಿಕಾರಿಗಳಿಗೆ ಮತ್ತೆ ನೆನಪಿಸುವವರು ಯಾರು?

ಹಾಗಾದರೆ ಸರ್ಕಾರಿ ನೌಕರರದ್ದು ಏನೂ ತಪ್ಪೇ ಇಲ್ಲವೇ ಎಂದು ನೀವು ಕೇಳಬಹುದು.  ಖಂಡಿತ ಇದೆ. ಉದಾಹರಣೆಗೆ, ಈಗ ಕಂಪ್ಯೂಟರನ್ನು ಚಿಕ್ಕ ಮಕ್ಕಳೂ ಬಳಸುತ್ತಾರೆ. ಅದೊಂದು ಶಿಕ್ಷಣ ಪಡೆದು ಮಾಡಬೇಕಾದ ಕೆಲಸ ಎನ್ನುವ ಹಂತವನ್ನು ದಾಟಿದೆ. ಬೆಳಗ್ಗೆ ಎದ್ದು ಹಲ್ಲುಜ್ಜುವ ಹಾಗೆ, ಸ್ನಾನ ಮಾಡುವ ಹಾಗೆ ಸಹಜವಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಕಂಪ್ಯೂಟರ್ ಬಳಕೆಯನ್ನು ಆರಂಭಿಸಿ ಕನಿಷ್ಠ ಎರಡು ದಶಕ ಆಗಿದೆ. ಕಳೆದ ವರ್ಷ ಸರ್ಕಾರದ ಸುತ್ತೋಲೆಯೊಂದು ಬಂದಿತ್ತು. ಕಂಪ್ಯೂಟರ್ ಬಳಕೆಯನ್ನು ಕಡ್ಡಾಯ ಮಾಡುವುದಕ್ಕೂ ಮುಂಚೆ ಸರ್ಕಾರಿ ಕೆಲಸಕ್ಕೆ ಸೇರಿದವರು ಕಡ್ಡಾಯವಾಗಿ ಒಂದು ತರಬೇತಿ ಪಡೆದು ಕಂಪ್ಯೂಟರ್ ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕು ಎಂದು ಸರ್ಕಾರ ನಿಯಮ ಮಾಡಿದೆ. ಈ ರೀತಿ  2.6 ಲಕ್ಷ ಅಧಿಕಾರಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಸುಮಾರು 83 ಸಾವಿರ ನೌಕರರು ಅನುತ್ತೀರ್ಣರಾಗಿದ್ದಾರೆ. ಮಜಾ ಏನು ಎಂದರೆ ಇಲ್ಲಿವರೆಗೂ 3.5 ಲಕ್ಷ ಸರ್ಕಾರಿ ನೌಕರರು ಪರೀಕ್ಷೆಯನ್ನೇ ತೆಗೆದುಕೊಂಡಿಲ್ಲ. ಇವರೆಲ್ಲರೂ ಕಡ್ಡಾಯ ಪರೀಕ್ಷೆ ತೆಗೆದುಕೊಂಡು ತೇರ್ಗಡೆ ಆಗದಿದ್ದರೆ ಮುಂಬಡ್ತಿ ಪಡೆಯಲು, ವಾರ್ಷಿಕ ವೇತನ ಬಡ್ತಿಗೆ ಅರ್ಹರಾಗಿರುವುದಿಲ್ಲ ಎಂದು ಇಂತಹ ಸುತ್ತೋಲೆಗಳನ್ನು ಸರ್ಕಾರ ಹೊರಡಿಸುತ್ತಲೇ ಇರುತ್ತದೆ. ಆದರೆ ಸರ್ಕಾರಿ ನೌಕರರು ಇದಕ್ಕೆ ಕ್ಯಾರೆ ಎನ್ನುವುದಿಲ್ಲ. ಹಾಗಾದರೆ ಇದನ್ನು ಸರ್ಕಾರಿ ನೌಕರರ ಆಲಸ್ಯ ಎನ್ನದೇ ಇನ್ನೇನು ಕರೆಯಬೇಕು? ಸರ್ಕಾರದ ಆದೇಶ ಹೊರಡಿಸುವುದೂ ಅದೇ ಅಧಿಕಾರಿಗಳು, ಆದರೆ ಪಾಲನೆ ಮಾಡದೇ ಇದ್ದರೆ ಜನರಿಗೆ ಯಾವ ಸಂದೇಶ ರವಾನೆ ಆಗುತ್ತದೆ? ನೌಕರರಿಗೆ ವೇತನ ಹೆಚ್ಚಳಕ್ಕೆ ಪ್ರತಿಭಟನೆ ಮಾಡುವ ಸರ್ಕಾರಿ ನೌಕರರ ಸಂಘಗಳು, ಅದರ ಪದಾಧಿಕಾರಿಗಳು ನೌಕರರ ಇಂತಹ ವರ್ತನೆಗಳನ್ನು ಸರಿಪಡಿಸುವತ್ತಲೂ ಗಮನ ಹರಿಸಬೇಕಲ್ಲವೇ? ಇಂತಹ ಕ್ರಮಗಳನ್ನು ಕೈಗೊಳ್ಳುವುದರಿಂದ ಸಹಜವಾಗಿಯೇ ನೌಕರರ ಕುರಿತು ಸಮಾಜದಲ್ಲಿ ಉತ್ತಮ ಭಾವನೆ ಮೂಡುತ್ತದೆ. ಸರ್ಕಾರಿ ನೌಕರರ ಕುರಿತು ಜನರು ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುವುದು ಎಷ್ಟು ಮುಖ್ಯವೋ, ಅದಕ್ಕಿಂತಲೂ ಹೆಚ್ಚು ಮುಖ್ಯ ಹಾಗೂ ಹೊಣೆಗಾರಿಕೆ ಸ್ವತಃ ಸರ್ಕಾರಿ ನೌಕರರ ಮೇಲಿದೆ ಎನ್ನದೇ ವಿಧಿಯಿಲ್ಲ.

ಇದನ್ನೂ ಓದಿ: ವಿಸ್ತಾರ ಅಂಕಣ: ಪ್ರಜಾಪ್ರಭುತ್ವವನ್ನು ಮರಳಿ ಹಳಿಗೆ ತರುವ ಹೊಣೆಯನ್ನು ಪ್ರಜೆಗಳೇ ಹೊರಬೇಕು

ಇದಕ್ಕಿಂತ ಪ್ರಮುಖವಾಗಿ ಸರಕಾರಿ ನೌಕರರು ಅರಿತುಕೊಳ್ಳಲೇಬೇಕಾದ ಎರಡು ಸಂಗತಿಗಳಿವೆ: ಮೊದಲನೆಯದು-ಸರಕಾರ ಈ ವೇತನ ಹೆಚ್ಚಳವನ್ನು ಜಾರಿ ಮಾಡುತ್ತಿರುವ ಸಮಯ ಸನ್ನಿವೇಶವನ್ನು ಸ್ವಲ್ಪ ಗಮನಿಸಿ. ಇಡೀ ವಿಶ್ವವೇ ಅರ್ಥಿಕ ಹಿಂಜರಿತಕ್ಕೆ ಸಿಕ್ಕಿ ನಲುಗಿದೆ. ದೊಡ್ಡ ದೊಡ್ಡ ಎಂಎನ್‌ಸಿಗಳೇ ಈ ಸವಾಲು ಎದುರಿಸಲು ಸ್ಯಾಲರಿ ಕಡಿತ ಮಾಡಿ, ನೌಕರರನ್ನು ಮನೆಗೆ ಕಳುಹಿಸುತ್ತಿವೆ. ಆದರೆ, ಸರಕಾರಿ ನೌಕರರಿಗೆ ಮಾತ್ರ ಸಂಬಳ ಹೆಚ್ಚಳವಾಗುತ್ತಿದೆ. ಅಂದರೆ, ನಿಮ್ಮನ್ನು ಸರಕಾರ ವಿಶೇಷವಾಗಿ ಪರಿಗಣಿಸಿದೆ ಎಂದೇ ಅರ್ಥ. ಅದಕ್ಕೆ ತಕ್ಕಂತೆ ನೀವು ಸೇವಾ ಸೌಲಭ್ಯ ನೀಡಬೇಕು. 

ಜತೆಗೆ, ಇಂಥಾ ಕ್ಲಿಷ್ಟ ಸಮಯದಲ್ಲಿ  ಸರಕಾರ ಸಂಬಳ ಹೆಚ್ಚಿಸಿರುವ ಕ್ರಮವನ್ನೂ ಯಾರೇನೂ ಸಿನಿಕತನದಲ್ಲಿ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ, ಸರಕಾರ ಎಂಬುದು ಖಾಸಗಿ ಕಂಪೆನಿಯಲ್ಲ. ಅದೊಂದು ಬೃಹತ್ತಾದ ವ್ಯವಸ್ಥೆ. ಎಂಥಾ ಕ್ಲಿಷ್ಟಕರ ಸನ್ನಿವೇಶದಲ್ಲೂ ಸರಕಾರಿ ವ್ಯವಸ್ಥೆ ತನ್ನ ನೌಕರರ ಪರ ನಿಲ್ಲಬೇಕು ಮತ್ತು ಅದು ಇತರೆ ಖಾಸಗಿ ಕಂಪೆನಿಗಳಿಗೆ ಆದರ್ಶವಾಗಿರಬೇಕು. ಅದಕ್ಕಾದರೂ ಅದು ಸಂಬಳ ಹೆಚ್ಚಿಸಿರುವುದು ಸೂಕ್ತವೇ. ಆದರೆ, ಖಾಸಗಿ ಕಂಪನಿಗಳಿಗೆ ಸರಕಾರ ಮಾತ್ರವಲ್ಲ, ಸರಕಾರಿ ನೌಕರರು ಆದರ್ಶವಾಗಿರಬೇಕು.  

ಎರಡನೆಯ ಸಂಗತಿ: ಈ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ನೌಕರರಾಗುವುದು ಎಂದರೆ, ಅದು ತಮಾಶೆಯ ಮಾತಲ್ಲ. ಅವರು ಸಹಜವಾಗಿ ಮಜ್ಜಿಗೆ ಕಡೆದ ಬಳಿಕ ಸಿಗುವ ಬೆಣ್ಣೆಯೇ ! ಅಂದರೆ, ಪ್ರತಿಭಾವಂತರೇ ಆಗಿರುತ್ತಾರೆ. ಹಾಗಾಗಿ, ಅಲ್ಲಿ ನೌಕರಿ ಸಿಗದವರು ಸಹಜವಾಗಿಯೇ, ಆ ನೌಕರಿ ಬಗ್ಗೆ ವಿಪರೀತ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನನಗೆ ಸಿಕ್ಕಿದ್ದಿದ್ದರೆ… ಎಂಬ ರೇ ಜಗತ್ತಿನಲ್ಲೂ ಇರುತ್ತಾರೆ. ಇದಲ್ಲದೇ, ಇಡೀ ಸಮಾಜ ಖಾಸಗಿ ವಲಯದ ಪುನಶ್ಚೇತನದಿಂದ ಆರ್ಥಿಕವಾಗಿ ಸದೃಢವಾಗಲಾರಂಭಿಸಿದೆ. ಇಂಥಾ ಜನ ಒಳ್ಳೆಯ ಸೇವೆ ಬಯಸುವುದು ತಪ್ಪಲ್ಲ. ಅದು ಅವರ ಹಕ್ಕು ಕೂಡ. ಇದನ್ನು ಸರಕಾರಿ ನೌಕರರು ಮರೆಯಬಾರದು.

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತದಲ್ಲೇಕೆ ಮಿಲಿಟರಿ ಆಡಳಿತ ಸಾಧ್ಯವಿಲ್ಲ ಎಂದರೆ…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ರಾಜಮಾರ್ಗ ಅಂಕಣ: ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತು ಪಡಿಸಿದ ಕಲ್ಪನಾ ಚಾವ್ಲಾ!

ರಾಜಮಾರ್ಗ ಅಂಕಣ: ಭಾರತೀಯ ಮೂಲದ ಓರ್ವ ಹೆಣ್ಣು ಮಗಳು ಸಂಶೋಧನೆ ಮಾಡಲು ಬಹಳ ದೊಡ್ಡ ಕನಸು ಕಟ್ಟಿಕೊಂಡು ನಾಸಾಕ್ಕೆ ಹೋದದ್ದು, ಭಾರತದ ಮೊತ್ತ ಮೊದಲ ವ್ಯೋಮಯಾನಿ ಆದದ್ದು, ಮುಂದೆ ಅದೇ ರೀತಿಯ ಎರಡನೇ ಯಾನಕ್ಕೆ ಪ್ರಯತ್ನವನ್ನು ಮಾಡಿ ಆಕಾಶದ ಹೊಳೆಯುವ ನಕ್ಷತ್ರಗಳ ನಡುವೆ ಒಂದು ಮಿನುಗು ನಕ್ಷತ್ರವಾದದ್ದು ನಮಗೆಲ್ಲರಿಗೂ ಒಂದು ಸ್ಫೂರ್ತಿದಾಯಕ ಹಾಗೂ ಒಂದು ದುಃಖದಾಯಕ ಘಟನೆ

VISTARANEWS.COM


on

kalpana chawla rajamarga column
Koo

ಕನಸುಗಳಿಗೆ ರೆಕ್ಕೆ ಕಟ್ಟಿದ ಆ ಹುಡುಗಿಯ ಸಾಧನೆ ನಿಜಕ್ಕೂ ಪ್ರೇರಣಾದಾಯಿ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 1962ರ ಮಾರ್ಚ್ 17ರಂದು ಹರಿಯಾಣಾದ ಕರ್ನಾಲನಲ್ಲಿ ಬನಾರಸಿ ಲಾಲ್ ಚಾವ್ಲಾ ಮತ್ತು ಸಂಜ್ಯೋತಿಯವರ ಹಿರಿಯ ಮಗಳಾಗಿ ಜನಿಸಿದ ಆಕೆಗೆ (Kalpana Chawla) ಬಾಲ್ಯದಿಂದಲೂ ಆಕಾಶದಲ್ಲಿ ಹಾರಾಡುವ ಕನಸು. ಎತ್ತರದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡುತ್ತಾ ತಾನೂ ರೆಕ್ಕೆಗಳನ್ನು ಕಟ್ಟಿ ಹಾರಬೇಕು ಎಂದು ತನ್ನ ಅಪ್ಪನ ಜೊತೆ ಹೇಳುತ್ತಾ ಬೆಳೆದವರು ಆಕೆ!

ಬಾಲ್ಯದಿಂದಲೂ ಕಲ್ಪನಾಗೆ ಅಪ್ಪನೇ ಐಕಾನ್, ಲೆಜೆಂಡ್ ಎಲ್ಲವೂ! ಮೂರನೇ ವಯಸ್ಸಿಗೇ ಅಪ್ಪನಿಗೆ ಆಕಾಶದಲ್ಲಿ ವಿಮಾನ ತೋರಿಸಿ ತಾನೂ ಹಾರಬೇಕು ಎಂದು ದುಂಬಾಲು ಬಿದ್ದವಳು ಕಲ್ಪನಾ! ಅಪ್ಪನೂ ಆಕೆಯ ಪ್ರತೀಯೊಂದು ಕನಸಿನ ಈಡೇರಿಕೆಗೆ ಊರುಗೋಲಾಗಿ ನಿಂತಿದ್ದರು.

ತನ್ನ ಕನಸಿನ ಭಾಗವಾಗಿ ನಾಸಾ ಸೇರಿದರು ಕಲ್ಪನಾ

ಹರ್ಯಾಣದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರ್ತಿ ಮಾಡಿದ ಕಲ್ಪನಾ ತನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾಕ್ಕೆ ತೆರಳಿದರು. ಅಲ್ಲಿ ಶ್ರೇಷ್ಟವಾದ ಕೊಲರೆಡೋ ವಿವಿಯಿಂದ ಬಾಹ್ಯಾಕಾಶ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಆಕೆ ಪಡೆದರು.

ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA) ಸೇರಬೇಕು ಎಂದು ಆಕೆಯದು ಭಾರೀ ದೊಡ್ಡ ಕನಸು. ಅದಕ್ಕಾಗಿ ಹತ್ತಾರು ಪರೀಕ್ಷೆ, ಸಂದರ್ಶನಗಳನ್ನು ಎದುರಿಸಿ 1988ರಲ್ಲಿ ಆಕೆ ತನ್ನ ಡೆಸ್ಟಿನಿಯಾದ ನಾಸಾಕ್ಕೆ ಆಯ್ಕೆ ಆಗುತ್ತಾರೆ. ಮುಂದೆ ಅತ್ಯಂತ ಕಠಿಣವಾದ ತರಬೇತು ಆಕೆ ಪಡೆಯುತ್ತಾರೆ.

ದೇಹ ಮತ್ತು ಮನಸ್ಸನ್ನು ಹುರಿಗೊಳಿಸಲು ಯೋಗ ಮತ್ತು ಪ್ರಾಣಾಯಾಮಗಳ ಮೊರೆ ಹೊಕ್ಕವರು ಅವರು. ಮುಂದೆ ಯಾವ ಸವಾಲು ಕೂಡ ಎದುರಿಸಲು ಮಾನಸಿಕವಾಗಿ ಆಕೆ ಸಿದ್ಧರಾಗಲು ಕನಿಷ್ಠ ಎಂಟು ವರ್ಷ ಬೇಕಾಯಿತು. ಪ್ರತೀ ನಿತ್ಯವೂ ಅಪ್ಪನ ಜೊತೆ ಮಾತಾಡುತ್ತ ತನ್ನ ಕನಸುಗಳನ್ನು ಜೀವಂತವಾಗಿ ಇರಿಸಿದವರು ಕಲ್ಪನಾ.

1997 ನವೆಂಬರ್ 19, ಆ ದಿನ ಬಂದೇ ಬಿಟ್ಟಿತು!

ಪ್ರತಿಯೊಬ್ಬ ಸಾಧಕರು ಒಂದು ದೊಡ್ಡ ಅವಕಾಶಕ್ಕಾಗಿ ಕಾಯುತ್ತಾ ಇರುತ್ತಾರೆ. ಹಾಗೆ ಕಲ್ಪನಾ ಬದುಕಿನಲ್ಲಿ ಆ ಒಂದು ದೊಡ್ಡ ಅವಕಾಶವು ಬಂದೇ ಬಿಟ್ಟಿತು.

ನಾಸಾದ STS 87 ಕೊಲಂಬಿಯಾ ವ್ಯೋಮ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರುವ ಅವಕಾಶವು ಆಕೆಗೆ ದೊರೆಯಿತು. ಓರ್ವ ಭಾರತೀಯ ಮೂಲದವರಾಗಿ ಅದೊಂದು ನಿಜವಾಗಿ ಐತಿಹಾಸಿಕ ಸಾಧನೆ! ಕಲ್ಪನಾ ಆ ಕೊಲಂಬಿಯಾ ನೌಕೆಯಲ್ಲಿ ಕುಳಿತು ಬಾಹ್ಯಾಕಾಶಕ್ಕೆ ಹಾರಿದರು. ಎರಡು ವಾರಗಳ ಕಾಲ ಬಾಹ್ಯಾಕಾಶದಲ್ಲಿಯೇ ಕಳೆದರು! ಹತ್ತಾರು ಸಂಶೋಧನೆ ಮಾಡಿದರು. ಅವರನ್ನು ಹೊತ್ತ ಕೊಲಂಬಿಯಾ ನೌಕೆಯು 65 ಲಕ್ಷ ಕಿಲೋಮೀಟರ್ ಹಾರಿತು! 252 ಬಾರಿ ತನಗೆ ನಿಗದಿ ಪಡಿಸಿದ ಕಕ್ಷೆಯನ್ನು ಸುತ್ತಿ ಮುಗಿಸಿ ಮತ್ತೆ ಭೂಮಿಗೆ ಮರಳಿ ಬಂದಾಗ ಕಲ್ಪನಾ ಚಾವ್ಲಾ ಭಾರತೀಯರ ಪಾಲಿಕೆ ದೇವಕನ್ಯೆಯೇ ಆಗಿ ಬಿಟ್ಟಿದ್ದರು!

ಜಗತ್ತಿನ ಕಣ್ಮಣಿ ಆದರು ಕಲ್ಪನಾ ಚಾವ್ಲಾ

ಜಗತ್ತಿನ ಎಲ್ಲ ಪತ್ರಿಕೆಗಳೂ ಆಕೆಯ ಬಗ್ಗೆ ಕಾಲಂ ಬರೆದವು. ಜಾಗತಿಕ ಮಟ್ಟದ ಟಿವಿ ಚಾನೆಲಗಳು ಆಕೆಯ ಸಂದರ್ಶನಕ್ಕೆ ತುದಿಗಾಲಲ್ಲಿ ನಿಂತವು. ಭಾರತದಿಂದ ನಾಸಾ ಸೇರಿದ ಓರ್ವ ಮಧ್ಯಮವರ್ಗದ ಹೆಣ್ಣು ಮಗಳು ಭಾರತದ ಮಹತ್ವಾಕಾಂಕ್ಷಿ ಮಹಿಳೆಯರಿಗೆ ಆಕಾಶದ ಎತ್ತರವೂ ಕಡಿಮೆಯೇ ಎಂದು ಸಾಬೀತು ಮಾಡಿ ತೋರಿಸಿದ್ದರು!

ಎರಡನೇ ಬಾರಿ ಬಾಹ್ಯಾಕಾಶ ಯಾನಕ್ಕೆ ಕಲ್ಪನಾ ಆಯ್ಕೆ ಆದರು!

ಮೊದಲ ಬಾಹ್ಯಾಕಾಶ ಯಾನವು (Space tour) ಯಶಸ್ವಿಯಾದ ನಂತರ ಆಕೆ ನಾಸಾದಲ್ಲಿ ಎಲ್ಲರ ಕಣ್ಮಣಿ ಆಗಿದ್ದರು. ಆಕೆಯು ತನ್ನ 21ನೆಯ ವರ್ಷದಲ್ಲಿ ತನ್ನ ಸಹಪಾಠಿ ಜೀನ್ ಹ್ಯಾರಿಸನ್ ಅವರನ್ನು ಪ್ರೀತಿ ಮಾಡಿ ಮದುವೆಯಾದರು. ಆತನು ಕಲ್ಪನಾ ಅವರ ಪ್ರತಿಯೊಂದು ಕನಸುಗಳಿಗೆ ಬೆಂಬಲವಾಗಿ ನಿಂತದ್ದು ಕೂಡ ಉಲ್ಲೇಖನೀಯ.

ಸುಮಾರು ಐದು ವರ್ಷಗಳ ದೊಡ್ಡ ಗ್ಯಾಪ್ ನಂತರ ನಾಸಾ ತನ್ನ ಮುಂದಿನ ವ್ಯೋಮ ಯಾತ್ರೆಯನ್ನು ಯೋಜನೆಯನ್ನು ರೂಪಿಸಿತು. ಅದು STS -107 ಕೊಲಂಬಿಯಾ ಹೆಸರಿನ ಮಿಷನ್! ಈ ಬಾರಿ ಒಟ್ಟು ಏಳು ಮಂದಿ ಆಕಾಶಯಾನಿಗಳು ಆಯ್ಕೆ ಆಗಿದ್ದು ಆ ತಂಡದಲ್ಲಿ ಕಲ್ಪನಾ ಚಾವ್ಲಾ ಸೀನಿಯರ್ ಆಗಿದ್ದರು. 2003ರ ಜನವರಿ ತಿಂಗಳಲ್ಲಿ ಈ ಯಾತ್ರೆಯು ಆರಂಭವಾಯಿತು. ಎಲ್ಲ ಭಾರತೀಯರು ಕಣ್ಣು ತೆರೆದು ಈ ಯಾತ್ರೆಯನ್ನು ಗಮನಿಸುತ್ತಿದ್ದರು.

ಆ ದುರಂತ ಸಂಭವಿಸಿಯೇ ಬಿಟ್ಟಿತು!

ಸಾಕಷ್ಟು ಸಂಶೋಧನೆಯನ್ನು ಮಾಡಿದ ಈ ತಂಡವು ಹಿಂದೆ ಬರುತ್ತಿರುವ ಸಂದರ್ಭದಲ್ಲಿ 2003 ಫೆಬ್ರುವರಿ 1ರಂದು ಭಾರೀ ದುರಂತವು ನಡೆದೇ ಹೋಯಿತು! ಬಾಹ್ಯಾಕಾಶದ ಕ್ಷೇತ್ರದಲ್ಲಿ ಅದೊಂದು ಅತ್ಯಂತ ದೊಡ್ಡ ದುರಂತವಾಗಿತ್ತು! ಏಳು ಜನ ಆಕಾಶಯಾತ್ರಿಗಳನ್ನು ಹೊತ್ತು ಹಾರುತ್ತಿದ್ದ STS 107 ಆಕಾಶನೌಕೆಯು ಭೂಮಿಯ ವಾಯುಮಂಡಲವನ್ನು ಪ್ರವೇಶಿಸುವ ಸಂದರ್ಭ ಆಕಾಶದಲ್ಲಿಯೇ ಸ್ಫೋಟವಾಗಿ ಎಲ್ಲ ಏಳು ಮಂದಿ ಬೂದಿಯಾಗಿ ಹೋದರು. ಅದರಲ್ಲಿ ಕಲ್ಪನಾ ಚಾವ್ಲಾ ಕೂಡ ಒಬ್ಬರು. ಆಗ ಆಕೆಗೆ ಕೇವಲ 41 ವರ್ಷ ವಯಸ್ಸು ಆಗಿತ್ತು!

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆಕೆಗಾಗಿ ಮಿಡಿಯಿತು ಇಡೀ ಜಗತ್ತು!

ಏಳು ಜನ ಸಂಶೋಧಕ ಆಕಾಶಯಾನಿಗಳನ್ನು ಆಪೋಶನ ತೆಗೆದುಕೊಂಡ ಆ ದುರಂತದ ಬಗ್ಗೆ ಇಡೀ ಜಗತ್ತು ಕಂಬನಿ ಮಿಡಿಯಿತು. ಕಲ್ಪನಾ ಬಗ್ಗೆ ಭಾರತದ ಮೂಲೆ ಮೂಲೆಗಳಲ್ಲಿ ಶ್ರದ್ಧಾಂಜಲಿ ಸಭೆಗಳು ನಡೆದವು. ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಆಕೆಯನ್ನು ಭಾರತದ ಪುತ್ರಿ ಎಂದು ಕರೆದು ಶೃದ್ಧಾಂಜಲಿ ನೀಡಿದರು. ಮುಂದೆ ಭಾರತವು ಹಾರಿಸಿದ ಒಂದು ಕೃತಕ ಉಪಗ್ರಹಕ್ಕೆ ಕಲ್ಪನಾ ಹೆಸರು ಇಡಲಾಯಿತು. ನಾಸಾ ಆಕೆಯನ್ನು ಭಾವಪೂರ್ಣವಾಗಿ ಸ್ಮರಿಸಿತು. ಕರ್ನಾಟಕ ಸರಕಾರವು ಆಕೆಯ ಹೆಸರಿನಲ್ಲಿ ಓರ್ವ ಯುವ ವಿಜ್ಞಾನಿಯನ್ನು ಪ್ರತೀ ವರ್ಷ ಗೌರವಿಸುವ ಒಂದು ಪ್ರಶಸ್ತಿಯನ್ನು ಸ್ಥಾಪನೆ ಮಾಡಿತು. ತಮಿಳುನಾಡಿನ ಒಂದು ಪ್ರಮುಖವಾದ ರಸ್ತೆಗೆ ಕಲ್ಪನಾ ಚಾವ್ಲಾ ಹೆಸರನ್ನು ಇಡಲಾಯಿತು.

ಭರತ ವಾಕ್ಯ

ಭಾರತೀಯ ಮೂಲದ ಓರ್ವ ಹೆಣ್ಣು ಮಗಳು ಸಂಶೋಧನೆ ಮಾಡಲು ಬಹಳ ದೊಡ್ಡ ಕನಸು ಕಟ್ಟಿಕೊಂಡು ನಾಸಾಕ್ಕೆ ಹೋದದ್ದು, ಭಾರತದ ಮೊತ್ತ ಮೊದಲ ವ್ಯೋಮಯಾನಿ ಆದದ್ದು, ಮುಂದೆ ಅದೇ ರೀತಿಯ ಎರಡನೇ ಯಾನಕ್ಕೆ ಪ್ರಯತ್ನವನ್ನು ಮಾಡಿ ಆಕಾಶದ ಹೊಳೆಯುವ ನಕ್ಷತ್ರಗಳ ನಡುವೆ ಒಂದು ಮಿನುಗು ನಕ್ಷತ್ರವಾದದ್ದು ನಮಗೆಲ್ಲರಿಗೂ ಒಂದು ಸ್ಫೂರ್ತಿದಾಯಕ ಹಾಗೂ ಒಂದು ದುಃಖದಾಯಕ ಘಟನೆ!

ಭಾರತದ ಮಹಾನ್ ಪುತ್ರಿಗೆ ನಮ್ಮ ಶ್ರದ್ಧಾಂಜಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಬೇಂದ್ರೆ ಎಂಬ ಶಬ್ದ ಗಾರುಡಿಗ

Continue Reading

ಪ್ರಮುಖ ಸುದ್ದಿ

ಜಗದ ಜನರ ಕೈಗಳಲ್ಲಿ ಮಿನುಗುವ ಮೊಬೈಲ್ ಫೋನುಗಳಲ್ಲೀಗ ಮೇಕ್ ಇನ್ ಇಂಡಿಯಾದ್ದೇ ಮೊಹರು!

Make in India: ಭಾರತದಲ್ಲಿ ಆ್ಯಪಲ್ ಫೋನುಗಳ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 15 ಬಿಲಿಯನ್ ಡಾಲರುಗಳ ಮೊತ್ತದ ಮೊಬೈಲ್ ಫೋನ್ ರಫ್ತು ವಹಿವಾಟು ನಡೆಸಿದೆ ಭಾರತ. ಇದರಲ್ಲಿ ಭಾರತಲ್ಲಿಯೇ ಉತ್ಪಾದಿಸುತ್ತಿರುವ ಆ್ಯಪಲ್ ಐಫೋನ್ ಬ್ರ್ಯಾಂಡಿನ ಕೊಡುಗೆಯೂ ದೊಡ್ಡದಿದೆ. ಈ ಪೈಕಿ 10 ಬಿಲಿಯನ್ ಡಾಲರುಗಳ ವಹಿವಾಟು ಆ್ಯಪಲ್‌ನಿಂದಲೇ ಬಂದಿದೆ ಎನ್ನುವುದು ವಿಶೇಷ. 2014ರಲ್ಲಿ ಕೇವಲ ಎರಡು ಮೊಬೈಲ್ ಫೋನ್ ಉತ್ಪಾದನಾ ಘಟಕಗಳು ಭಾರತದಲ್ಲಿದ್ದವು. ಈಗವು 200 ದಾಟಿವೆ.

VISTARANEWS.COM


on

Make In India
Koo

| ಚೈತನ್ಯ ಹೆಗಡೆ
ಭಾರತವು ಈ ಬಾರಿ ಪುಷ್ಕಳವಾದ ಆ್ಯಪಲ್ ಬೆಳೆ ತೆಗೆದಿದೆ. ಕಾಶ್ಮೀರದಲ್ಲೋ, ಹಿಮಾಚಲದಲ್ಲೋ ಬೆಳೆಯುವ ಸೇಬಿನ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಭಾರತದಲ್ಲಿ ತಯಾರಿಕೆ ಆಗುತ್ತಿರುವ ಆ್ಯಪಲ್ ಫೋನುಗಳ ಬಗೆಗಿನ ವಿದ್ಯಮಾನ ಇದು.

ಈ ವಿದ್ಯಮಾನವು ಎರಡು ಅಂಶಗಳನ್ನು ವಿಜೃಂಭಿಸುತ್ತಿದೆ. ಮೊದಲನೆಯದು, ಚೀನಾದ ಹೊರತಾಗಿಯೂ ಏಷ್ಯದಲ್ಲಿ ತನ್ನ ಪೂರೈಕೆ ಜಾಲ ಇರಬೇಕು ಎಂದು ಭಾರತದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿದ್ದ ಆ್ಯಪಲ್ ಕಂಪನಿಯ ನಿರ್ಧಾರ ಸರಿ ಇದೆ ಎಂಬುದನ್ನು ಈ ವಿದ್ಯಮಾನ ಸಾರುವ ಮೂಲಕ, ಚೀನಾದಿಂದ ತಮ್ಮ ಉತ್ಪಾದಕ ಘಟಕಗಳನ್ನು ಹಂತ-ಹಂತವಾಗಿ ಬೇರೆಡೆಗೆ ಸ್ಥಳಾಂತರಿಸಲು ಬಯಸುತ್ತಿರುವ ಪಾಶ್ಚಾತ್ಯ ಕಂಪನಿಗಳಿಗೆ, ಭಾರತವೇ ಅದಕ್ಕೆ ಪ್ರಶಸ್ತ ಸ್ಥಳ ಎಂಬುದನ್ನು ಹೇಳುತ್ತಿದೆ. ಎರಡನೆಯದಾಗಿ, 2014ರಿಂದೀಚೆಗೆ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ದಾಖಲಿಸುತ್ತಿರುವ ಅತಿದೊಡ್ಡ ಯಶೋಗಾಥೆಗೆ ಈ ವಿದ್ಯಮಾನವು ಮತ್ತಷ್ಟು ಮೆರಗು ತುಂಬಿದೆ.

2023-24ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 15 ಬಿಲಿಯನ್ ಡಾಲರುಗಳ ಮೊತ್ತದ ಮೊಬೈಲ್ ಫೋನ್ ರಫ್ತು ವಹಿವಾಟು ನಡೆಸಿದೆ ಭಾರತ. ಇದರಲ್ಲಿ ಭಾರತಲ್ಲಿಯೇ ಉತ್ಪಾದಿಸುತ್ತಿರುವ ಆ್ಯಪಲ್ ಐಫೋನ್ ಬ್ರ್ಯಾಂಡಿನ ಕೊಡುಗೆಯೂ ದೊಡ್ಡದಿದೆ. ಈ ಪೈಕಿ 10 ಬಿಲಿಯನ್ ಡಾಲರುಗಳ ವಹಿವಾಟು ಆ್ಯಪಲ್‌ನಿಂದಲೇ ಬಂದಿದೆ.

2014ರಲ್ಲಿ ಕೇವಲ ಎರಡು ಮೊಬೈಲ್ ಫೋನ್ ಉತ್ಪಾದನಾ ಘಟಕಗಳು ಭಾರತದಲ್ಲಿದ್ದವು. ಈಗವು 200 ದಾಟಿವೆ. ಜಗತ್ತಿನ ಎರಡನೇ ದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ. ಇಂಡಿಯಾ ಸೆಲ್ಯುಲಾರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ವರದಿಯ ಪ್ರಕಾರ ಭಾರತದ ಮೊಬೈಲ್ ಫೋನ್ ಉತ್ಪಾದನಾ ಸಾಮರ್ಥ್ಯ ಈ ಹತ್ತು ವರ್ಷಗಳಲ್ಲಿ 21 ಪಟ್ಟು ಹೆಚ್ಚಾಗಿದೆ. 2014-15ರಲ್ಲಿ 18,900 ಕೋಟಿ ರುಪಾಯಿಗಳ ಮೌಲ್ಯದ ಮೊಬೈಲ್ ಫೋನ್ ಗಳನ್ನು ಭಾರತ ಉತ್ಪಾದಿಸಿತ್ತು. 2023-24ರ ವಿತ್ತೀಯ ವರ್ಷದಲ್ಲಿ ಈ ಸಂಖ್ಯೆ ಎಲ್ಲಿಗೆ ಹೋಗಿ ಮುಟ್ಟಿದೆ ಗೊತ್ತೇ? ಬರೋಬ್ಬರಿ 4,10,000 ಕೋಟಿ ರೂ!

ಇವತ್ತಿಗೆ ಭಾರತದಲ್ಲಿ ಬಳಕೆಯಾಗುತ್ತಿರುವ ಮೊಬೈಲ್ ಫೋನುಗಳ ಪೈಕಿ ಶೇ. 97ರಷ್ಟು ಭಾರತದಲ್ಲೇ ತಯಾರಾದಂಥವುಗಳು. ಇವತ್ತು ಮೊಬೈಲ್ ಫೋನ್ ರಫ್ತು 15 ಬಿಲಿಯನ್ ಡಾಲರುಗಳ ಮೌಲ್ಯದ್ದಾಗಿ ಬೆಳೆಸಿರುವ ಭಾರತ 2014-15ರ ವೇಳೆಗೆ ರಫ್ತು ಮಾಡಿದ್ದ ಮೊಬೈಲ್ ಫೋನ್ ಮೌಲ್ಯ 1,556 ಕೋಟಿ ರೂ. ಮಾತ್ರ.

ನಿಮ್ಮ ಕೈಯಲ್ಲಿ ಹಿಡಿದಿರುವ ಮೊಬೈಲ್ ಫೋನ್ ವಿದೇಶಿ ಕಂಪನಿಯದ್ದೇ ಆಗಿರಬಹುದು. ಆ್ಯಪಲ್, ಸ್ಯಾಮ್ಸಂಗ್, ಒಪ್ಪೊ, ವಿವೊ, ಶಾಮಿ ಹೀಗೆ ಫೋನ್ ಯಾವುದೇ ಆಗಿದ್ದರೂ ಉತ್ಪಾದನೆ ಭಾರತದಲ್ಲೇ ಆಗಿರುತ್ತದೆ. ಈ ಹಂತದಲ್ಲಿ ಒಂದು ಪ್ರಶ್ನೆ ಹಲವರು ಕೇಳುವುದಿದೆ. ಇವೆಲ್ಲ ಏನೇ ಇದ್ದರೂ ಭಾರತದ್ದೇ ಒಂದು ಮೊಬೈಲ್ ಫೋನ್ ಉತ್ಪಾದನೆಯ ಬ್ರ್ಯಾಂಡ್‌ ಇಲ್ಲವಲ್ಲ ಎಂದು. ಅದು ಸೆಲ್ ಫೋನ್ ಉತ್ಪಾದನೆ ಇದ್ದಿರಬಹುದು, ಕಾರು ಇಲ್ಲವೇ ಮತ್ಯಾವುದೇ ತಂತ್ರಜ್ಞಾನ ಒಳಗೊಂಡ ಉತ್ಪಾದನೆಯೇ ಇದ್ದಿರಬಹುದು…ದೇಶವೊಂದು ಹಂತ-ಹಂತಗಳಲ್ಲಿ ಒಂದು ವಲಯವನ್ನು ತನ್ನದಾಗಿಸಿಕೊಳ್ಳುತ್ತದೆ. ಉದಾಹರಣೆಗೆ, ಮೊಬೈಲ್ ಉತ್ಪಾದನೆಯನ್ನೇ ತೆಗೆದುಕೊಂಡರೆ, ಆ ಕೌಶಲವನ್ನು ಅದಾಗಲೇ ಸಿದ್ಧಿಸಿಕೊಂಡಿರುವ ಕಂಪನಿಗಳು ಭಾರತದಲ್ಲೇ ಉತ್ಪಾದನೆ ಮಾಡುವಂತೆ ಮಾಡುವುದು ಮೊದಲ ಹೆಜ್ಜೆ. ಆ ಕಂಪನಿಗಳು ಇಲ್ಲಿ ಬಂದು ಉದ್ಯೋಗ ಸೃಷ್ಟಿಸುತ್ತವೆ. ಆ ಕೌಶಲಗಳನ್ನು ತಮ್ಮದಾಗಿಸಿಕೊಂಡ ಭಾರತೀಯ ಕೆಲಸಗಾರರ ಪ್ರತಿಭಾಪುಂಜವೊಂದು ಸಿದ್ಧಗೊಳ್ಳುತ್ತದೆ. ಮೊಬೈಲ್ ಫೋನ್ ಸಿದ್ಧಪಡಿಸಲು ಬೇಕಾಗುವ ಯಂತ್ರಗಳು ಭಾರತಕ್ಕೆ ಬರುತ್ತವೆ. ಅದಕ್ಕೆ ಬೇಕಾದ ಕಚ್ಚಾವಸ್ತುಗಳ ಪೂರೈಕೆ ಜಾಲವೊಂದು ಜಗತ್ತಿನ ನಾನಾ ಕಡೆಗಳಿಂದ ಭಾರತಕ್ಕೆ ಮುಖಮಾಡುತ್ತದೆ. ಹೀಗೆಲ್ಲ ಆದ ನಂತರದಲ್ಲಿ ಭಾರತೀಯ ಕಂಪನಿಗಳೇ ತಯಾರಿಕೆಗಳಲ್ಲಿ ಮುಂದೆ ಬರುವುದಕ್ಕೆ ಅನುಕೂಲಕರ ವಾತಾವರಣ ಹುಟ್ಟುತ್ತದೆ. ಚೀನಾದಂಥ ದೇಶಗಳು ಅಲ್ಲಿನ ಏಕೀಕೃತ ರಾಜಕೀಯ ವ್ಯವಸ್ಥೆ ರೂಪಿಸಿಕೊಂಡು ಈ ಪ್ರಕ್ರಿಯೆಯನ್ನು ವೇಗಗೊಳಿಸಿದ ಹಾಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತ್ವರಿತಗೊಳಿಸಲಾಗುವುದಿಲ್ಲ.

ಅದೇನೇ ಇರಲಿ. ಮೊಬೈಲ್ ಫೋನ್ ತಯಾರಿಕಾ ವಲಯವು ಭಾರತದಲ್ಲಿ ಬೃಹತ್ ಆಗಿ ಅಭಿವೃದ್ಧಿ ಹೊಂದಿದ ಪರಿಣಾಮವಾಗಿ ಅದು ಕನಿಷ್ಠ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿತು. ಆ್ಯಪಲ್ ಕಂಪನಿಯೊಂದೇ ಸುಮಾರು 1 ಲಕ್ಷ ಉದ್ಯೋಗಗಳನ್ನು ಭಾರತದಲ್ಲಿ ತನ್ನ ಉತ್ಪಾದನಾ ಚಟುವಟಿಕೆಯಿಂದ ಸೃಜಿಸಿತು.

ಇದನ್ನೂ ಓದಿ: Indian Navy Power: ಸೊಮಾಲಿಯಾದ ಕಡಲ್ಗಳ್ಳರನ್ನು ಬಗ್ಗುಬಡಿದು ಜಗತ್ತಿಗೆ ಸಂದೇಶ ನೀಡಿದೆ ಭಾರತದ ಕ್ಷಾತ್ರ!

2017ರಲ್ಲಿ ಕೇಂದ್ರ ಸರ್ಕಾರವು ಪೇಸ್ಡ್ ಮನುಫ್ಯಾಕ್ಟರಿಂಗ್ ಪ್ರೊಗ್ರಾಂ ಅಡಿಯಲ್ಲಿ ಮೊಬೈಲ್ ಫೋನಿಗೆ ಸಂಬಂಧಿಸಿದ ಹೆಡ್ಸೆಟ್, ಚಾರ್ಜರ್, ಸರ್ಕಿಟ್ ಬೋರ್ಡ್ ಇತ್ಯಾದಿಗಳಿಗೆ ದೇಸಿ ಉತ್ಪಾದನೆಗೆ ಪೂರಕವಾಗುವಂತೆ ಅವಕ್ಕೆ ಬೇಕಾದ ಕಚ್ಚಾವಸ್ತುಗಳ ಸುಂಕಗಳನ್ನು ಪರಿಷ್ಕರಿಸಿತು. ಭಾರತದಲ್ಲೇ ಮೊಬೈಲ್ ಫೋನ್ ತಯಾರಿಕೆ ಘಟಕಗಳನ್ನು ಇಟ್ಟುಕೊಳ್ಳುವುದು ಕಂಪನಿಗಳಿಗೆ ಆಕರ್ಷಕವಾಗುವಂತೆ ಮಾಡಲಾಯಿತು. ಮುಂದಿನ ಹಂತದಲ್ಲಿ, 2021-22ರಲ್ಲಿ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಪಿ ಎಲ್ ಐ ಸ್ಕೀಮ್, ಅಂದರೆ ಉತ್ಪಾದನೆ ಆಧರಿತ ಉತ್ತೇಜನ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿತು. ಹೆಸರೇ ಹೇಳುವಂತೆ ಉತ್ಪಾದನೆ ಹೆಚ್ಚಿಸಿಕೊಂಡಷ್ಟೂ ಕಂಪನಿಗಳಿಗೆ ಇಲ್ಲಿ ಹಣಕಾಸು ಲಾಭಗಳು ದೊರೆಯುತ್ತವೆ. ಸ್ಯಾಮ್ಸಂಗ್, ವಿಸ್ತ್ರಾನ್, ಫಾಕ್ಸಕಾನ್ ಇತ್ಯಾದಿ ಕಂಪನಿಗಳು ಈ ಪಿ ಎಲ್ ಐ ಯೋಜನೆಯಡಿ ಬಂದಿವೆ. ಐದು ವರ್ಷಗಳ ಅವಧಿಯಲ್ಲಿ, ಮೊಬೈಲ್ ಫೋನುಗಳ ಉತ್ಪಾದನೆ ವಿಭಾಗಲ್ಲಿ ಇದರಿಂದ ಎರಡು ಲಕ್ಷ ನೇರ ಉದ್ಯೋಗಗಳು ಹಾಗೂ 6 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜಿದೆ.

ಇದನ್ನೂ ಓದಿ: Pak Afghan Conflict: ಸಡಿಲವಾಯ್ತು ಆಫ್ಘಾನ್‌ನೊಂದಿಗಿನ ಪಾಕ್‌ ಸಖ್ಯ, ತಾಲಿಬಾನಿಗಳಿಗೂ ಈಗ ಭಾರತವೇ ಮುಖ್ಯ!

ಈ ವಿತ್ತೀಯ ವರ್ಷದಲ್ಲಿ ಆ್ಯಪಲ್ ಕಂಪನಿಯ ಚೀನಾ ಘಟಕದಿಂದ ಆಗುತ್ತಿರುವ ಸಾಗಣೆಯಲ್ಲಿ ಕುಸಿತ ಕಂಡಿದ್ದರೆ, ಭಾರತದಲ್ಲಿ ಮಾತ್ರ ಏರಿಕೆ ಕಂಡಿರುವುದು ಗಮನಾರ್ಹ. ಭಾರತದಲ್ಲಿ ಯಾವುದೇ ಕಂಪನಿಗೆ ಆಗುವ ಶ್ರೇಯೋವೃದ್ಧಿ ಅದು ಇಲ್ಲಿ ತನ್ನ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ, ಆರ್ಥಿಕ ಚಟುವಟಿಕೆಯಲ್ಲಿ ಮತ್ತಷ್ಟು ತೊಡಗಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ಆ್ಯಪಲ್ ಅದಾಗಲೇ ತನ್ನ ಫೋನಿನಲ್ಲಿ ಬಳಸುವ ಕೆಮರಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಭಾರತದಲ್ಲೇ ರೂಪಿಸುವುದಕ್ಕೆ ಟಾಟಾದ ಟೈಟಾನ್ ಸಮೂಹ ಹಾಗೂ ಮುರುಗಪ್ಪ ಸಮೂಹಗಳೊಂದಿಗೆ ಮಾತುಕತೆಯಲ್ಲಿರುವುದಾಗಿ ವರದಿಯಾಗಿದೆ. ಮೊಬೈಲ್ ಫೋನ್ ವಹಿವಾಟು ಎಂದಷ್ಟೇ ಅಲ್ಲದೇ, ಭಾರತದಲ್ಲಿ ನವೀಕೃತ ಇಂಧನ ಮೂಲಗಳ ವಿಸ್ತರಣೆಗೆ ಸಹಕರಿಸಿ ಇಂಗಾಲ ವಿಸರ್ಜನೆ ತಗ್ಗಿಸಿದ ಶ್ರೇಯಸ್ಸು ಪಡೆಯುವುದಕ್ಕಾಗಿ ಆ್ಯಪಲ್ ಕಂಪನಿಯು ಕ್ಲೀನ್ ಮ್ಯಾಕ್ಸ್ ಎಂಬ ನವೀಕೃತ ಇಂಧನಕ್ಕೆ ಸಂಬಂಧಿಸಿದ ಉದ್ದಿಮೆ ಜತೆ ಕೈಜೋಡಿಸಿದೆ. ಭಾರತದಾದ್ಯಂತ 6 ಕೈಗಾರಿಕಾ ಘಟಕಗಳ ಮೇಲೆ ಸೌರಫಲಕಗಳನ್ನು ಅಳವಡಿಸಿ, 14.4 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಈ ಪ್ರಯತ್ನ ಹುಟ್ಟು ಹಾಕಿದೆ.

ಮೊಬೈಲ್ ಫೋನುಗಳ ಉತ್ಪಾದನೆ ಮತ್ತು ವಹಿವಾಟುಗಳಲ್ಲಿ ಆಗುತ್ತಿರುವ ಈ ಅಭಿವೃದ್ಧಿ ಭಾರತದ ಒಟ್ಟಾರೆ ಎಲೆಕ್ಟ್ರಾನಿಕ್ ವಲಯಕ್ಕೆ ಹೊಸ ಸಾಮರ್ಥ್ಯ ಕೊಟ್ಟಿದೆ. ಮೊಬೈಲ್ ಫೋನುಗಳ ರಫ್ತಿನಲ್ಲಾಗಿರುವ ಹೆಚ್ಚಳವು ಒಟ್ಟಾರೆ ಭಾರತದ ಎಲೆಕ್ಟ್ರಾನಿಕ್ಸ್ ವಲಯದಲ್ಲೂ ಬಿಂಬಿಸಿದೆ. ಹಿಂದಿನ ವಿತ್ತೀಯ ವರ್ಷದಲ್ಲಿ 23.55 ಬಿಲಿಯನ್ ಡಾಲರುಗಳ ಮೌಲ್ಯದ ಎಲೆಕ್ಟ್ರಾನಿಕ್ಸ್ ರಫ್ತಾಗಿದ್ದರೆ ಈ ಬಾರಿ ಅದು 29.12 ಬಿಲಿಯನ್ ಡಾಲರುಗಳಿಗೆ ಹೆಚ್ಚಳವಾಗಿದೆ.

ಇದನ್ನೂ ಓದಿ: Narendra Modi: ಟ್ವಿಟರ್-ವಾಟ್ಸಾಪ್ ಹಳೇದಾಯ್ತು; ಈ ಬಾರಿ ಮೋದಿ ಚುನಾವಣೆ ಪ್ರಚಾರಕ್ಕೆ ʼಭಾಷಿಣಿʼಯ ಬಲ!

ಮೇಕ್ ಇನ್ ಇಂಡಿಯಾ ಕೆಲಸ ಮಾಡುತ್ತಿದೆಯಾ ಎಂದು ಕೇಳುವವರು ನೋಡಲೇಬೇಕಾದ ಯಶೋಗಾಥೆ ಭಾರತದ ಮೊಬೈಲ್ ಫೋನುಗಳ ಉತ್ಪಾದನೆಯದ್ದು.

Continue Reading

ಅಂಕಣ

ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ರಾಜಮಾರ್ಗ ಅಂಕಣ: ಇಂದು ಶ್ರೀರಾಮ ನವಮಿ. ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

VISTARANEWS.COM


on

sri rama rajamarga column
Koo

ಈ ಕತೆಯನ್ನು ಓದಿದ ನಂತರ ನೀವು ಯಾರನ್ನೂ ದ್ವೇಷ ಮಾಡುವುದಿಲ್ಲ!

Rajendra-Bhat-Raja-Marga-Main-logo

ಇಂದು ರಾಮನವಮಿ (Sri Ram Navami). ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರವೂ ಹೌದು! ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ!

ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ ಅನ್ನುವುದು ವಾಸ್ತವ. ಅದರಲ್ಲಿಯೂ ಮೊದಲನೆಯದ್ದು ಭಾರೀ ಕಷ್ಟ.

ವಾಲ್ಮೀಕಿಯು ಕೆತ್ತಿದ್ದು ಅದ್ಭುತವಾದ ವ್ಯಕ್ತಿತ್ವ ರಾಮ

ಶ್ರೀರಾಮನ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಗಂಟೆಗಳ ಕಾಲ ಮಾತಾಡಿದ್ದೇನೆ. ಅವನ ಜೀವನದ ಪ್ರತೀ ಒಂದು ಘಟನೆ ಕೂಡ ನನಗೆ ಬೆರಗನ್ನೇ ಮೂಡಿಸುತ್ತದೆ. ಆದಿ ಕವಿ ವಾಲ್ಮೀಕಿಯು ರಾಮಾಯಣದ ಮೂಲಕ ಕೆತ್ತಿದ ರಾಮನ ಪಾತ್ರವು ಅದು ವಿಶ್ವದ ಅದ್ಭುತ!

ನನಗೆ ಅಚ್ಚರಿ ಮೂಡಿಸಿದ ಒಂದೆರಡು ಘಟನೆಗಳು

ಶ್ರೀ ರಾಮನಿಗೆ ಪಟ್ಟಾಭಿಷೇಕಕ್ಕೆ ಸಂಕಲ್ಪವನ್ನು ದಶರಥನು ತೆಗೆದುಕೊಂಡಾಗಿತ್ತು. ಅದಕ್ಕಾಗಿ ತೀವ್ರ ಹಂಬಲ ಪಟ್ಟವರು ಅಯೋಧ್ಯೆಯ ಪ್ರತೀ ಒಬ್ಬ ನಾಗರಿಕರು. ರಾಮನು ಅರಸ ಆಗಬಾರದು ಅಂತ ಒಬ್ಬರೂ ಹೇಳಿರಲಿಲ್ಲ. ಪಟ್ಟಾಭಿಷೇಕಕ್ಕೆ ದಿನವನ್ನು ನಿಗದಿ ಮಾಡಿದ ದಶರಥ ಮಹಾರಾಜನು ಇಡೀ ಅಯೋಧ್ಯಾ ನಗರವನ್ನು ಸಿಂಗಾರ ಮಾಡಿ ಪಟ್ಟಕ್ಕೆ ಸಿದ್ಧತೆ ಮಾಡಿದ್ದನು.

ಆದರೆ ಮಂಥರೆ ಎಂಬ ಅತೃಪ್ತ ಆತ್ಮವು ಕೈಕೇಯಿ ರಾಣಿಯ ತಲೆಯನ್ನು ಕೆಡಿಸಿ ರಾಮನ ಪಟ್ಟಾಭಿಷೇಕಕ್ಕೆ ವಿಘ್ನವನ್ನು ಒಡ್ಡಿದ್ದು ನಮಗೆಲ್ಲ ಗೊತ್ತಿದೆ. ಹಿಂದೆ ಯಾವುದೋ ಒಂದು ಕಾಲದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಕೈಕೇಯಿಯು ಆ ಮಧ್ಯರಾತ್ರಿ ದಶರಥ ಮಹಾರಾಜನಿಗೆ ಕೇಳಿದಾಗ ರಾಜನು ಅದನ್ನು ನೆರವೇರಿಸಲು ಸಾಧ್ಯವೇ ಆಗದೇ ಕುಸಿದು ಬಿದ್ದ ಕಥೆಯು ಕೂಡ ನಮಗೆ ಗೊತ್ತಿದೆ.

ಪಿತೃ ವಾಕ್ಯಂ ಶಿರೋಧಾರ್ಯಂ!

ಆಗ ಶ್ರೀ ರಾಮನು ಕಟ್ಟು ಬಿದ್ದದ್ದು ಯಾವುದೋ ಒಂದು ಗಳಿಗೆಯಲ್ಲಿ ತನ್ನ ಅಪ್ಪ ತನ್ನ ಚಿಕ್ಕಮ್ಮನಿಗೆ ಕೊಟ್ಟಿದ್ದ ಒಂದು ಮಾತಿಗೆ! ಅದನ್ನು ತಂದೆಯು ನೇರವಾಗಿ ಹೇಳಲು ಸಾಧ್ಯ ಆಗದೆ ಕಣ್ಣೀರನ್ನು ಸುರಿಸುತ್ತ ನೆಲಕ್ಕೆ ಒರಗಿದಾಗಲೂ ರಾಮನಿಗೆ ಅದು ಖಂಡಿತವಾಗಿಯೂ ‘ಪಿತೃ ವಾಕ್ಯಮ್ ಶಿರೋಧಾರ್ಯಮ್’!

king dasharatha

ರಾಮನು ಅರಸ ಆಗಬಾರದು ಎಂದು ರಾಣಿ ಕೈಕೇಯಿಯ ಮನಸ್ಸಿನಲ್ಲಿ ಕೂಡ ಇರಲಿಲ್ಲ. ಆದರೆ ಆಕೆಯಲ್ಲಿ ಆ ಭ್ರಮೆ ಮತ್ತು ಪುತ್ರ ವಾತ್ಸಲ್ಯವನ್ನು ಹುಟ್ಟಿಸಿದವಳು ಆ ಗೂನಜ್ಜಿ ಮಂಥರೆ!

ಅವಳು ಹೇಗೂ ಅಯೋಧ್ಯೆಯ ಪ್ರಜೆ ಆಗಿರಲಿಲ್ಲ. ಅವಳು ಕೈಕೇಯಿಯ ತಾಯಿಯ ಮನೆಯಿಂದ ಕೈಕೇಯಿ ಜೊತೆಗೆ ಬಂದವಳು. ಒಂದು ರೀತಿಯಲ್ಲಿ ಶ್ರೀರಾಮನು ಪಟ್ಟವೇರಿ ಅರಸನಾಗಲು ಆ ಅಯೋಧ್ಯೆಯಲ್ಲಿ ನೂರು ಪ್ರತಿಶತದ ಬಹುಮತದ ಮುದ್ರೆ ಇತ್ತು! ಆದರೆ ರಾಮನು ತಂದೆ ಬಹಳ ಹಿಂದೆ ತನ್ನ ರಾಣಿಗೆ ಕೊಟ್ಟ ಒಂದು ಮಾತಿಗೆ ಕಟ್ಟು ಬಿದ್ದು ಅರಸೊತ್ತಿಗೆಯನ್ನು ಎಡಗಾಲಿನಿಂದ ಒದ್ದು ನಾರು ಮುಡಿ ತೊಟ್ಟು ಕಾಡಿಗೆ ಹೋದವನು. ತನ್ನದೇ ಹಕ್ಕಿನ ರಾಜ್ಯವನ್ನು ತ್ಯಾಗ ಮಾಡಲು ಆತ ಹಿಂದೆ ಮುಂದೆ ನೋಡಲಿಲ್ಲ!

‘ನೀನು ಕೊಟ್ಟ ಮಾತಿಗೆ ನಾನು ಹೇಗೆ ಹೊಣೆ ಆಗಬೇಕು?’ ಎಂದು ಅಪ್ಪನನ್ನು ಒಂದು ಮಾತು ಕೂಡ ಶ್ರೀ ರಾಮನು ಕೇಳಲಿಲ್ಲ! ಆ ರೀತಿಯ ಸಣ್ಣ ಯೋಚನೆ ಕೂಡ ಆತನ ಮನದಲ್ಲಿ ಬರಲಿಲ್ಲ ಅಂದರೆ ಅದು ಅದ್ಭುತವೇ ಹೌದು! ಸರ್ವಾಲಂಕಾರ ಆಗಿದ್ದ ಅಯೋಧ್ಯೆಯ ನಡುವೆ ಯಾವ ವಿಷಾದ ಕೂಡ ಇಲ್ಲದೆ ಎದ್ದು ಹೋಗುವುದು ಸುಲಭ ಅಲ್ಲ! ಅದು ರಾಮನಿಗೆ ಮಾತ್ರ ಸಾಧ್ಯವಾಗುವ ನಡೆ.

ರಾಮನಿಗೆ ನೂರು ಪ್ರತಿಶತ ಜನಮತದ ಬೆಂಬಲ ಇತ್ತು!

ಆಗ ಪೂರ್ಣ ಜನಮತ ತನ್ನ ಪರವಾಗಿ ಇದ್ದಾಗ ರಾಮನು ಪಿತೃ ವಾಕ್ಯವನ್ನು ಧಿಕ್ಕರಿಸಿ ಆಡಳಿತವನ್ನು ಮಾಡಬಹುದಿತ್ತು ಎಂದು ನನಗೆ ಹಲವರು ಕೇಳಿದ್ದಾರೆ. ಆದರೆ ಆಗ ರಾಮನು ಕೇವಲ ದಶರಥನ ಮಗ ಮಾತ್ರ ಆಗಿದ್ದ. ಅರಸ ಆಗಿರಲಿಲ್ಲ ಅನ್ನುವುದು ನನ್ನ ಉತ್ತರ!

ಮುಂದೆ ರಾಣಿ ಕೈಕೇಯಿ ಕಾಡಿಗೆ ಬಂದು ತಮ್ಮ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ಅಯೋಧ್ಯೆಗೆ ಬರಬೇಕು ಎಂದು ಎಷ್ಟು ವಿನಂತಿ ಮಾಡಿದರೂ ರಾಮಚಂದ್ರನ ಮನಸ್ಸು ಒಂದಿಷ್ಟೂ ವಿಚಲಿತ ಆಗಲಿಲ್ಲ. ಕಣ್ಣೀರು ಸುರಿಸುತ್ತಾ ಬಂದ ಭರತನನ್ನು ಧೈರ್ಯ ತುಂಬಿಸಿ ಅರಸನಾಗಲು ಮಾನಸಿಕವಾಗಿ ಸಿದ್ಧತೆ ಮಾಡಿ ಕಳುಹಿಸಿದ್ದು ಅದೇ ರಾಮ. ಈ ರೀತಿಯ ನಿರ್ಧಾರಗಳು ರಾಮನ ವ್ಯಕ್ತಿತ್ವದ ಕೈಗನ್ನಡಿ.

Sri Ramachandra

ಮುಂದೆ ಅದೇ ರಾಮನು ರಾವಣನ ವಧೆಯಾದ ನಂತರ ಅತ್ಯಂತ ವಿಧಿವತ್ತಾಗಿ ಲಂಕೆಯಲ್ಲಿ ಆತನ ಕ್ರಿಯಾಕರ್ಮ ಮುಗಿಸುತ್ತಾನೆ. ಆಗ ರಾಮ ಹೇಳಿದ ಎರಡು ಮಾತುಗಳನ್ನು ಕೇಳಿ.

ರಾಮನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ!

‘ನಾನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ. ಅವನ ಒಳಗಿದ್ದ ರಾವಣತ್ವವನ್ನು! ಯಾರನ್ನೇ ಆದರೂ ಮರಣದ ನಂತರ ದ್ವೇಷ ಮಾಡಬಾರದು. ರಾವಣನು ಹೇಳಿ ಕೇಳಿ ಮಹಾ ಬ್ರಾಹ್ಮಣ. ಆತನು ದೈವಭಕ್ತ. ಆದ್ದರಿಂದ ಅವನನ್ನು ಗೌರವಿಸುವುದು ನಮ್ಮ ಕರ್ತವ್ಯ!’

ಸೀತೆಯನ್ನು ಅಗ್ನಿಪರೀಕ್ಷೆ ಮಾಡಿದ್ದು ಸರಿಯಾ?

ಮುಂದೆ ಅದೇ ರಾಮಚಂದ್ರನು ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಆಗುವ ಮೊದಲು ತನ್ನ ಪತ್ನಿ ಸೀತೆಯನ್ನು ಅಯೋಧ್ಯೆಯ ಜನರ ಮುಂದೆ ಅಗ್ನಿ ಪರೀಕ್ಷೆಗೆ ಒಡ್ಡಿದ ವಿಷಯದ ಬಗ್ಗೆ ತುಂಬಾ ಟೀಕೆಗಳು ಇವೆ. ಅದೇ ರೀತಿ ಒಬ್ಬ ಸಾಮಾನ್ಯ ಅಗಸನ ಮಾತನ್ನು ಕೇಳಿ ತನ್ನ ಕೈ ಹಿಡಿದ ಮಡದಿ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿದ ನಿರ್ಧಾರದ ಬಗ್ಗೆ ಕೂಡ ಸಾಕಷ್ಟು ಟೀಕೆಗಳು ಬಂದಿವೆ.

ಆದರೆ ಅವೆರಡು ಕೂಡ ಶ್ರೀರಾಮನು ರಾಜಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು. ಅವು ಸೀತಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು ಅಲ್ಲ!

ರಾಜನ ನಡೆಗಳು ಸಂಶಯಾಸ್ಪದ ಆಗಿರಬಾರದು!

ರಾಜಾರಾಮನಾಗಿ ತನ್ನ ಪ್ರತಿಯೊಬ್ಬ ಪ್ರಜೆಯ ಮುಂದೆ ಸಂಶಯಾತೀತವಾಗಿ ಇರಬೇಕು ಮತ್ತು ಕಾಣಿಸಿಕೊಳ್ಳಬೇಕು ಎನ್ನುವುದು ರಾಜನ ಆದ್ಯ ಕರ್ತವ್ಯ. ತಾನು ನೆಟ್ಟಗಿರುವುದು ಮಾತ್ರವಲ್ಲ, ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಭಾವಿಸುವುದು ಒಬ್ಬ ರಾಜನ ಆದ್ಯತೆಯೇ ಆಗಿದೆ. ಒಬ್ಬ ಬಹು ಸಾಮಾನ್ಯ ಅಗಸನೂ ಅರಸನಿಗೆ ಒಬ್ಬ ಗೌರವಾನ್ವಿತ ಪ್ರಜೆಯೇ ಆಗಿದ್ದಾನೆ. ಆತನ ಮನದ ಸಂಶಯವನ್ನು ಕೂಡ ನಿವಾರಣೆ ಮಾಡುವುದು ಒಬ್ಬ ಅರಸನ ಕರ್ತವ್ಯ. ಹೀಗೆ ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

ರಾವಣ ಆಗುವುದು ಕಷ್ಟವೇ!

ರಾಮ ಆಗುವುದು ಎಷ್ಟು ಕಷ್ಟವೋ ರಾವಣ ಆಗುವುದು ಅಷ್ಟೇ ಕಷ್ಟ! ಕವಿ ವಾಲ್ಮೀಕಿಯು ಕಥಾ ನಾಯಕ ರಾಮನ ಪಾತ್ರಕ್ಕೆ ಎಷ್ಟು ಶಕ್ತಿ ತುಂಬಿದ್ದಾನೋ ಖಳನಾದ ರಾವಣನ ಪಾತ್ರಕ್ಕೆ ಕೂಡ ಅಷ್ಟೇ ಶಕ್ತಿಯನ್ನು ತುಂಬಿದ್ದಾನೆ. ಆತನ ಪಾತ್ರವೂ ಅಮೋಘವೆ ಆಗಿದೆ!

ಸೀತಾ ಸ್ವಯಂವರದಲ್ಲಿ ತನಗಾದ ಅಪಮಾನದಿಂದ ಕುದ್ದು ಹೋಗಿದ್ದ ರಾವಣನ ಅಂತರ್ಯದಲ್ಲಿ ಸೀತೆಯನ್ನು ಒಮ್ಮೆ ಗೆಲ್ಲಬೇಕು ಎಂದು ಮಾತ್ರ ಇತ್ತು. ಅನುಭವಿಸುವುದು ಆಗಿರಲಿಲ್ಲ. ಅನುಭವಿಸುವ ಆಸೆ ಇದ್ದಿದ್ದರೆ ಅವನದ್ದೇ ಲಂಕೆಯಲ್ಲಿ ಏಕಾಂಗಿ ಆಗಿದ್ದ ಸೀತೆಯು ತನ್ನ ಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ!

ಹೀಗೊಂದು ಕಥೆಯನ್ನು ನಾನು ಓದಿದ್ದು!

ಈ ಕಥೆಯು ಮೂಲ ರಾಮಾಯಣದಲ್ಲಿ ಇಲ್ಲ. ಆದರೆ ಅದ್ಭುತವಾಗಿದೆ. ಕಾಲ್ಪನಿಕ ಎಂದು ಬೇಕಾದರೂ ಕರೆಯಿರಿ. ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದಿದ್ದ ಶ್ರೀರಾಮನಿಗೆ ರಾವಣನ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಆಲ್ಲಿ ಕೇಳಿಬರುತ್ತವೆ. ಆತನು ಮಹಾ ಯೋಧ. ಆತನನ್ನು ಸೋಲಿಸುವುದು ಖಂಡಿತ ಸುಲಭದ ಕೆಲಸ ಅಲ್ಲ ಎಂದು ಗೊತ್ತಾಗುತ್ತದೆ. ಅದಕ್ಕೆ ‘ಶತ್ರು ಸಂಹಾರ’ದ ಯಾಗವನ್ನು ಮಾಡಬೇಕು ಎಂದು ಅಲ್ಲಿದ್ದ ಹಿರಿಯರು ಹೇಳುತ್ತಾರೆ.

ಲಂಕೆ ಹೇಳಿ ಕೇಳಿ ರಾಕ್ಷಸರ ನಾಡು! ಅಲ್ಲಿ ಆ ಯಾಗವನ್ನು ಮಾಡಬೇಕು ಅಂತಾದರೆ ಪುರೋಹಿತರು ಯಾರು ಸಿಗುತ್ತಾರೆ? ಆಗ ಹಿರಿಯರು ಇನ್ನೊಂದು ಉಪಾಯವನ್ನು ಹೇಳುತ್ತಾರೆ. ಲಂಕೆಯಲ್ಲಿ ಒಬ್ಬನೇ ಬ್ರಾಹ್ಮಣ ಇರುವುದು ಅದು ರಾವಣ! ಆತನಿಗೆ ಎಲ್ಲಾ ವೇದ ವಿದ್ಯೆಗಳು ಗೊತ್ತಿವೆ. ಆತ ಪುರೋಹಿತನಾಗಿ ಬರಲು ಒಪ್ಪಿದರೆ ಆದೀತು ಎಂಬ ಅಭಿಪ್ರಾಯ ಬಂತು.

ತನ್ನದೇ ವಧೆಯನ್ನು ಮಾಡುವ ‘ಶತ್ರುಸಂಹಾರ ಯಾಗ’ಕ್ಕೆ ಪುರೋಹಿತನಾಗಿ ರಾವಣನು ಬರಬಹುದೇ? ಈ ಪ್ರಶ್ನೆಯು ಎದ್ದಾಗ ನೋಡೋಣ, ಒಮ್ಮೆ ಪ್ರಯತ್ನ ಮಾಡೋಣ ಎಂಬ ಮಾತು ಬಂತು. ಆಗ ರಾವಣನಿಗೆ ಶ್ರೀರಾಮನ ಕಡೆಯಿಂದ ಗೌರವಪೂರ್ವಕ ಆಮಂತ್ರಣವು ಹೋಯಿತು. ರಾವಣ ಬರಲು ಸಾಧ್ಯ ಇಲ್ಲವೇ ಇಲ್ಲ ಎಂದು ಎಲ್ಲರೂ ನಂಬಿದ್ದರು.

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆದರೆ ಶ್ರೀರಾಮನ ಆಮಂತ್ರಣಕ್ಕೆ ತಲೆ ಬಾಗಿ ರಾವಣನು ಬಂದೇ ಬಿಟ್ಟ! ಪುರೋಹಿತನಾಗಿ ಕೂತು ‘ಶತ್ರು ಸಂಹಾರ’ ಯಾಗವನ್ನು ಪೂರ್ತಿ ಮಾಡಿದ. ಪೂರ್ಣಾಹುತಿ ಆದ ನಂತರ ಶ್ರೀರಾಮನು ಪುರೋಹಿತ ರಾವಣನ ಪಾದ ಮುಟ್ಟಿ ನಮಸ್ಕಾರ ಮಾಡಿದ!

ಆಗ ರಾವಣ ರಾಮನಿಗೆ ಕೈ ಮುಗಿದು ಹೇಳಿದ ಮಾತು ಕೇಳಿ.

“ಶ್ರೀರಾಮ, ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ನಂತರ ಪಾಪ ಪ್ರಜ್ಞೆಯಿಂದ ಸರಿಯಾಗಿ ನಿದ್ದೆಯು ಬರುತ್ತಿಲ್ಲ. ನಿದ್ದೆ, ವಿಶ್ರಾಂತಿ ಇಲ್ಲದೆ ದಣಿದು ಬಿಟ್ಟಿದ್ದೇನೆ. ನಿನ್ನ ಕಾಲ ಮೇಲೆ ಒಂದು ಗಳಿಗೆ ಮಲಗಬೇಕು ಅನ್ನಿಸ್ತಾ ಇದೆ! ನಿನ್ನ ಅನುಮತಿಯನ್ನು ಕೊಡುವೆಯಾ?’

ತನ್ನ ಗೆಲುವಿಗೆ ಬೇಕಾಗಿ ದೊಡ್ಡ ಯಾಗವನ್ನೇ ಮಾಡಿಕೊಟ್ಟ ರಾವಣನ ವಿನಂತಿಯನ್ನು ಶ್ರೀರಾಮನು ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಶ್ರೀರಾಮ ಅಸ್ತು ಅಂದ. ರಾವಣನು ಪುಟ್ಟ ಮಗುವಿನ ಹಾಗೆ ರಾಮನ ಕಾಲಿನ ಮೇಲೆ ಸುದೀರ್ಘ ಕಾಲ ಮೈಮರೆತು ಮಲಗಿದ. ಎಲ್ಲವನ್ನೂ ಮರೆತು ಬಿಟ್ಟನು! ತನ್ನ ಪಾಪದ ಭೀತಿಯನ್ನು ರಾಮನ ಪಾದಮೂಲದಲ್ಲಿ ಇಟ್ಟು ಎದೆಯ ಭಾರವನ್ನು ಇಳಿಸಿ ಹೊರಟು ಹೋದನು ರಾವಣ!

ಈಗ ಹೇಳಿ ರಾವಣ ಆಗುವುದು ಅಷ್ಟು ಸುಲಭವಾ?

ಇದನ್ನೂ ಓದಿ: Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ಧವಳ ಧಾರಿಣಿ ಅಂಕಣ: ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ.

VISTARANEWS.COM


on

valmiki dhavala dharini column
Koo

ರಾಮಾಯಣದ ಪೂರ್ವರಂಗ ಮತ್ತು ಅಂತರಂಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಕೃತ್ವಾಪಿ ತನ್ಮಹಾಪ್ರಾಜ್ಞಸ್ಸಭವಿಷ್ಯಂ ಸಹೋತ್ತರಮ್
ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ ৷৷ಬಾ.4.3৷৷

ಮಹಾ ಪ್ರಾಜ್ಞರು ಮತ್ತು ತ್ರಿಕಾಲವನ್ನು ಬಲ್ಲವರಾದ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ಪಟ್ಟಾಭಿಷೇಕದ ನಂತರ ಭವಿಷ್ಯವನ್ನು ಹೇಳುವ ಉತ್ತರಕಾಂಡ ಸಹಿತವಾದ ರಾಮಾಯಣವನ್ನು ರಚಿಸಿದ ನಂತರ ನನ್ನಿಂದ ಇದರ (ರಾಮಾಯಣದ) ಉಪದೇಶವನ್ನು ಪಡೆದು ಸರಿಯಾಗಿ ಪ್ರಯೋಗಿಸಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆಗೊಳಗಾದರು (ಭಾವಾರ್ಥ).

ಕವಿಗೆ ಕಾವ್ಯವನ್ನು ರಚಿಸುವಾಗ ಹೇಗೆ ಮತ್ತು ಯಾಕೆ ಎನ್ನುವ ಚಿಂತೆ ಉಂಟಾಗುವುದು ಸಹಜದ ಕ್ರಿಯೆ. ಮನಸ್ಸಿನಲ್ಲಿ ಯಾವುದೋ ಅಮೂರ್ತವಾದ ಭಾವವನ್ನು ಇರಿಸಿಕೊಂಡು ಅದನ್ನು ಮೂರ್ತರೂಪಕ್ಕೆ ತರುವಾಗ ಕವಿ ಪ್ರಸವವೇದನೆಯನ್ನು ಅನುಭವಿಸುತ್ತಾನೆ. ಇಲ್ಲಿ ಕಾವ್ಯ ರೂಪುಗೊಳ್ಳುವಿಕೆಯೆನ್ನುವುದನ್ನು ಕೀಟವೊಂದು ಪತಂಗವಾಗಿ ಪರಿವರ್ತಿತವಾಗುವುದಕ್ಕೆ ಹೋಲಿಸಬಹುದು. ಕಾವ್ಯದ ವಸ್ತು ಮನಸ್ಸಿನಲ್ಲಿ ರೂಪುಗೊಳ್ಳುತ್ತಲೇ ಅದು ಹೊರ ಬರುವುದಕ್ಕೆ ಧ್ಯಾನಸ್ಥ ಸ್ಥಿತಿ ಬೇಕಾಗುತ್ತದೆ. ಮನಸ್ಸಿನಲ್ಲಿ ಮಥನ ನಡೆಯುತ್ತಾ ನಂತರದಲ್ಲಿ ಅದು ತನ್ನ ಸುತ್ತಲೂ ಕಟ್ಟಿದ ಗೂಡನ್ನು ತಾನೇ ಒಡೆದುಕೊಂಡು ಮನೋಹರವಾದ ಪಾತರಗಿತ್ತಿಯಾಗಿ ಹಾರತೊಡಗುತ್ತದೆ. ಮೊದಲು ಕವಿ ರಸಭಾವದಲ್ಲಿ ಲೀನವಾಗುತ್ತಾನೆ. ತುರೀಯಾವಸ್ಥೆಗೆ ತಲುಪುವಾಗ ಭಾವದ ಆವರಣದೊಳಗೆ ಸಿಕ್ಕಿಬೀಳುತ್ತಾನೆ. ಹುತ್ತಗಟ್ಟುವ ಕ್ರಿಯೆ ಎಂದರೆ ಇದೆ. ರತ್ನಾಕರನೆನ್ನುವ ಬೇಡ ಹೆಂಡತಿ ಮಕ್ಕಳನ್ನು ಸುಖವಾಗಿರಿಸಲು ಹಿಂಸಾವೃತ್ತಿಯನ್ನೇ ಮೈಗೂಡಿಸಿಕೊಂಡು ಬದುಕಿದವ. ಲೌಕಿಕದ ಸುಖವನ್ನು ಹಂಚಿಕೊಳ್ಳಲು ಬಯಸುವ ಅವರ ಕುಟುಂಬದವರು ಅದರಿಂದ ಉಂಟಾಗಬಹುದಾದಂತಹ ಪಾಪಕ್ಕೆ ಹೊಣೆಗಾರರಾಗಲು ಸಿದ್ಧರಿಲ್ಲದಾಗ ಆಘಾತಗೊಂಡ.

ಬದುಕೆನ್ನುವುದು ಆದರ್ಶವನ್ನು ಹುಡುಕುವುದಕ್ಕಾಗಿಯಲ್ಲ; ಆದರ್ಶವೇ ಬದುಕಾಗಬೇಕೆಂದು ಆಗ ಅನಿಸಿತು. ಅಂಗುಲಿಮಾಲ ಬುದ್ಧನಿಂದ ಪ್ರಭಾವಿತನಾಗಿರುವುದು ಇಂತಹುದೇ ಸಂದರ್ಭದಲ್ಲಿ. “ನಾನೃಷಿಃ ಕುರುತೇ ಕಾವ್ಯಂ” ಕವಿ ಜ್ಞಾನಿಯಷ್ಟೇ ಅಲ್ಲ, ಋಷಿಯೂ ಆಗಿರಬೇಕು. ಈ ಬದಲಾವಣೆಯ ಪರ್ವದಲ್ಲಿ, ತನಗಾಗಿ ಅಲ್ಲ ಲೋಕಕ್ಕಾಗಿ ಬದುಕಿದವ ಜಗತ್ತಿನಲ್ಲಿ ಇರಬಹುದೇ ಎನ್ನುವ ಸಂಶಯದ ಹುತ್ತ ಕಾಡಿದಾಗ ಹುಡುಕಾಟ ಪ್ರಾರಂಭವಾಯಿತು. ಆಗ ದರ್ಶನವಾಗಿರುವುದು ವೇದೋಪನಿಷತ್ತುಗಳಲ್ಲಿ ಅವಿತಿರುವ ಅಮೂರ್ತ ಜ್ಞಾನಭಂಡಾರ. ದರ್ಶನ ಆದರ್ಶವಾಗಬೇಕಾದರೆ ಅದಕ್ಕೊಂದು ಮೂರ್ತರೂಪ ಬೇಕು. ಅದೆಲ್ಲಿ ಎಂದು ಮತ್ತೆ ಮತ್ತೆ ಹಂಬಲಿಸುತ್ತಾ ಎಚ್ಚರವಾಗಿಯೂ ಎಚ್ಚರಗೊಳ್ಳದ ಸ್ಥಿತಿಯಲ್ಲಿ ಇದ್ದ. ಅಕ್ಷರವೆನ್ನುವುದು ಅವಿನಾಶಿ. ಅದು ಒಂದೂ ಅಲ್ಲದ ಬಹುತ್ವವೂ ಅಲ್ಲದ ವ್ಯಾಪಕತ್ವ. ಅದಕ್ಕೆ ಮತ್ತೊಂದು ಅಕ್ಷರ ಸೇರಿದಾಗ ಅದಕ್ಕೊಂದು ಮೂರ್ತರೂಪ ಬರುತ್ತದೆ. ಅದುವೇ ರಾಮ ಎನ್ನುವುದನ್ನು ಸಪ್ತರ್ಷಿಗಳೇ ಹೇಳಿದಾಗ ಮನಸ್ಸಿನೊಳಗೆ ಪಡಿಮೂಡಿತು ಆ ಆಕೃತಿ.

ಕವಿಸೃಷ್ಟಿಯನ್ನು “ನಿಯತಿಕೃತ ನಿಯಮರಹಿತ”ವೆಂದು ಹೇಳುತ್ತಾರೆ. ಲೋಕಾತೀತವಾದ ವಿಷಯಗಳನ್ನು ಅನುಭವಿಸುವಿಕೆಗೆ ದರ್ಶನವೆಂದು ಕರೆಯುತ್ತಾರೆ. ಅದು ಅಲೌಕಿಕ ಆನಂದವನ್ನು ನೀಡುತ್ತದೆ. ರತ್ನಾಕರ, ಪ್ರಾಚೇತಸ, ಋಕ್ಷ ಹೀಗೆ ಹಲವು ಹೆಸರುಳ್ಳ, ಆದರೆ ಹಿಂಸಾರತಿಯಲ್ಲಿ ಮನವಿಟ್ಟವನಿಗೆ ಸ್ವಾರ್ಥವನ್ನು ಬಿಟ್ಟು ಕೇವಲ ಕರ್ತವ್ಯವನ್ನೇ ತನ್ನ ಆಹ್ನಿಕವೆಂದುಕೊಂಡ ವ್ಯಕ್ತಿ ಇರಲು ಸಾಧ್ಯವೇ ಎನ್ನುವ ಸಂಶಯ ಬರುತ್ತಿತ್ತು. ಅನುಭವ ಪಕ್ವವಾಗಬೇಕಾದರೆ ಅದಕ್ಕೆ ನಿದರ್ಶನ ಬೇಕು. ನಾಟ್ಯದ ಭಾಷೆಯಲ್ಲಿ ಇದನ್ನು ಅಮೂರ್ತದಿಂದ ಮೂರ್ತಕ್ಕೆ ಮತ್ತು ಮೂರ್ತದಿಂದ ಅಮೂರ್ತಕ್ಕೆ ಎನ್ನುವ ಅವಸ್ಥೆಗಳಿಗೆ ತಲುಪುವ ಕ್ರಿಯೆ ಎನ್ನುತ್ತಾರೆ. ಸರಳವಾದ ರಂಗದ ಮೇಲೆ ತಾನು ಅನುಭವಿಸಿದ ವಿಷಯಗಳನ್ನು ನಟ ಕಣ್ಣಿಗೆ ಕಟ್ಟುವಂತೆ ಅಭಿನಯಿಸುತ್ತಾನೆ. ರಥ, ದೇವೇಂದ್ರನ ಸಭೆ, ಅರಣ್ಯ ಇವೆಲ್ಲವುಗಳ ಅಭಿನಯ ನಟನ ಸಾಮರ್ಥ್ಯದ ಮೇಲೆ ಪ್ರೇಕ್ಷಕನಿಗೆ ದರ್ಶನವಾಗಿ ಆತ ಪ್ರತ್ಯಕ್ಷವಾಗಿ ಅದನ್ನು ಅನುಭವಿಸಿ ತನ್ನನ್ನು ಸಂಪೂರ್ಣವಾಗಿ ಮರೆಯುತ್ತಾನೆ. ರಸದಲ್ಲಿ ಲೀನವಾಗುತ್ತಾನೆ. ಅಲ್ಲಿಗೆ ಪ್ರೇಕ್ಷಕನಿಗೆ ಮೂರ್ತಸ್ವರೂಪದಲ್ಲಿ ಕಾಣಿಸಿಕೊಂಡು ಆತನನ್ನು ತನ್ನೊಟ್ಟಿಗೆ ಅಮೂರ್ತಲೋಕಕ್ಕೆ ಒಯ್ಯುತ್ತದೆ. (ಯಕ್ಷಗಾನ ಇದಕ್ಕೆ ಸ್ಪಷ್ಟ ಉದಾಹರಣೆ). ಈ ಅನುಭವದ ಸಾಕ್ಷಾತ್ಕಾರಕ್ಕಾಗಿ ಋಷಿ ವಾಲ್ಮೀಕಿ ಹಂಬಲಿಸುತ್ತಿದ್ದ.

ರಾಮಾಯಣದ ಸಂದರ್ಭದಲ್ಲಿ ವಾಲ್ಮೀಕಿ ಮಹರ್ಷಿಗೆ ಮೂರುಸಲ ಚಿಂತೆಯುಂಟಾಗಿತ್ತು. ಬದುಕಬೇಕಾದರೆ ಹಿಂಸೆಯೇ ಮಾರ್ಗವೆಂದು ಅದೇ ಹಾದಿ ಹಿಡಿದು ಇದೀಗ ಆದರ್ಶದ ಬೆನ್ನು ಹತ್ತಿದವನಿಗೆ, ಎಲ್ಲಾ ಕಡೆಯೂ ಇದ್ದು ಎಲ್ಲದರಿಂದಲೂ ಅಂತರವನ್ನು ಕಾಯ್ದುಕೊಂಡಂತಹ ವ್ಯಕ್ತಿ ಈ ಲೋಕದಲ್ಲಿ ಇರಲು ಸಾಧ್ಯವೇ ಎನ್ನುವ ಸಂಶಯ ಬಿಟ್ಟೂ ಬಿಡದೇ ಕಾಡುತ್ತಿತ್ತು. ಒಂದು ವೇಳೆ ಇಲ್ಲದೇ ಹೋದರೆ…??? ಎನ್ನುವ ಚಿಂತೆಗೂ ಇದೇ ಕಾರಣವಾಗಿತ್ತು. ಮುನಿಪುಂಗವ ಆ ಕುರಿತೇ ತಪಸ್ಸು ಮಾಡುತ್ತಿದ್ದ; ಈ ವಿಷಯದ ಕುರಿತು ಸ್ಪಷ್ಟ ನಿದರ್ಶನವನ್ನು ಬಯಸುತ್ತಿದ್ದ. ಸಪ್ತರ್ಷಿಗಳೇನೋ ಮಹಾಮಹಿಮನ ವಿಷಯಗಳ ಕುರಿತು ರಾಮ ಎನ್ನುವ ಹೆಸರನ್ನು ಹೇಳಿದ್ದಾರೆ. ಲೋಕದಲ್ಲಿ ಸಂಭಾವಿತನಾಗಿ ಬದುಕುವದೆನ್ನುವದು ಒಂದು ಆದರ್ಶ ಸ್ಥಿತಿ (Utopian State). ಆದರ್ಶವೆನ್ನುವುದು ವಾಸ್ತವವೂ ಆಗಬಹುದೇ ಎನ್ನುವ ಚಿಂತೆ ನಿರಂತರವಾಗಿ ಕಾಡುತ್ತಿರುವಾಗಲೇ, ಇದಕ್ಕೆ ಉತ್ತರಿಸಬಲ್ಲವರು ಅಧ್ಯಯನ ಅಧ್ಯಾಪನಗಳಲ್ಲಿ ನಿರತರಾದ ತಪಸ್ವಿಗಳಾಗಿರಬೇಕು; ಏಕಾಗ್ರತೆಯನ್ನು ವಾಲ್ಮೀಕಿಗಿಂತಲೂ ಚನ್ನಾಗಿ ಸಾಧಿಸಿದವರಾಗಿರಬೇಕು. ಮಾತು ಬಲ್ಲವರಲ್ಲಿ ಶ್ರೇಷ್ಠರಾಗಿರಬೇಕು. ಅಂಥವರು ಯಾರಿದ್ದಾರೆ ಎನ್ನುವ ಪ್ರಶ್ನೆ ನಿರಂತರವಾಗಿ ವಾಲ್ಮೀಕಿಯನ್ನು ಕಾಡುತ್ತಿತ್ತು.

ಹೀಗಿರುತ್ತಿರುವಾಗ ಅವರಲ್ಲಿಗೆ ನಾರದ ಬರುತ್ತಾನೆ. ಮಹರ್ಷಿಯ ಪ್ರಶ್ನೆಗೆ ಉತ್ತರಿಸಲು ಇವರಿಗಿಂತಲೂ ಬೇರೆ ಯಾರು ಸಮರ್ಥರಿಲ್ಲ ಎಂದುಕೊಳ್ಳುತ್ತಾನೆ. (ತಪಸ್ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್). ನೇರವಾಗಿ ಅವರಲ್ಲಿಯೇ ತನ್ನನ್ನು ಕಾಡುತ್ತಿರುವ ಚಿಂತೆಯನ್ನು ಹೇಳುತ್ತಾ “ಲೋಕದಲ್ಲಿ ಯಾವ ದೋಷವೂ ಇಲ್ಲದ ವ್ಯಕ್ತಿ ಎಂದರೆ ಆತನಲ್ಲಿ ಈ ಕೆಳಗಿನ ಹದಿನಾರು ಗುಣಗಳಿರಬೇಕು. (ಅವು ಕಲ್ಯಾಣವಂತ, ವೀರ್ಯವಂತ, ದರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವ್ರತನಿಷ್ಠ, ಕುಲಾಚಾರಗಳನ್ನು ತಪ್ಪದೇ ನಡೆಸುಕೊಂಡು ಬರುವಾತ, ಭೂತದಯೆ, ಚತುರ್ದಶವಿದ್ಯೆಗಳಲ್ಲಿಯೂ ಪಾರಂಗತ, ಸರ್ವಕಾರ್ಯ ದುರಂಧರ, ಮೋಹಕರೂಪಿನವ, ಧೈರ್ಯವಂತ, ಕೋಪವನ್ನು ಗೆದ್ದವ, ಎಣೆಯಿಲ್ಲದ ಕಾಂತಿಯುಳ್ಳವ, ಅನಸೂಯ, ದೇವತೆಗಳಿಗೂ ಅಂಜದ ಪರಾಕ್ರಮಿ) ಇಂಥಹ ಮಾನವನು “ಕೋನ್ವಸ್ಮಿನ್ ಸಾಂಪ್ರತಂ ಲೋಕೇ- ಈ ಕಾಲದಲ್ಲಿ” ಇದ್ದಾನೆಯೇ; ಇದ್ದರೆ ಆತನ ಕುರಿತು ವಿವರಿಸಿ ಎಂದು ಕೇಳಿಕೊಳ್ಳುತ್ತಾರೆ. ಆಗ ನಾರದರು ಇಕ್ಷಾಕುವಂಶದಲ್ಲಿ ಜನಿಸಿದ ರಾಮ ರಾಮ ಎಂದು ಜನಗಳು ಕರೆಯುವ ನರಪುಂಗವನಿದ್ದಾನೆ ಎಂದು ಆತನ ಕುರಿತು ವಿವರಿಸುತ್ತಾರೆ.

ರಾಮಾಯಣದ ಕಥೆಯನ್ನು ಕೇಳಿದ ವಾಲ್ಮೀಕಿಗೆ ಮನಸ್ಸು ಪ್ರಪುಲ್ಲವಾಗಿದೆ. ಹಗುರವಾಗಿದೆ. ಪ್ರಪಂಚದಲ್ಲಿ ಎಲ್ಲವೂ ಸುಂದರವಾಗಿ ಕಾಣಿಸುತ್ತಿದೆ. ಹೀಗೆ ತಮಸಾ ನದಿಯಲ್ಲಿ ಸ್ನಾನ ಮಾಡಿ ಬರುವಾಗ ಬೇಡನೊಬ್ಬ ಮಿಥುನ ಸ್ಥಿತಿಯಲ್ಲಿದ್ದ ಜೋಡಿ ಕ್ರೌಂಚಪಕ್ಷಿಗೆ ಬಾಣ ಬಿಟ್ಟು ಗಂಡು ಹಕ್ಕಿಯನ್ನು ಕೊಂದುಬಿಟ್ಟ. ಹೆಣ್ಣು ಹಕ್ಕಿ ಅದನ್ನು ನೋಡಿ ಗೋಳಾಡತೊಡಗಿತು. ಅದರ ಸ್ಥಿತಿಯನ್ನು ನೋಡಿದ ಮುನಿಯ ಮನಸ್ಸಿನಲ್ಲಿ ಕರುಣಾರಸವು ಉಕ್ಕೇರಿತು. ಬೇಡನೆಡೆಗೆ ನೋಡಿ ಹೇಳಿದ ಮಾತು-

sage and poet valmiki

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಶ್ಶಾಶ್ವತೀಸ್ಸಮಾಃ
ಯತ್ಕ್ರೌಞ್ಚಮಿಥುನಾದೇಕಮವಧೀ: ಕಾಮಮೋಹಿತಮ್ ৷৷ಬಾ. 15৷৷

“ಎಲೈ ನಿಷಾದನೇ! ಮಿಥುನದಲ್ಲಿ ನಿರತವಾಗಿದ್ದ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಹೊಡೆದು ಕೊಂದಿರುವುದರಿಂದ ನೀನು ಬಹಳ ಕಾಲದವರೆಗೆ ಸ್ಥಿರವಾಗಿ ಬದುಕಲಾರೆ”

ಒಂದು ಕಾಲದಲ್ಲಿ ಆ ಬೇಡನಂತೆ ತಾನೂ ಹಿಂಸಾವೃತ್ತಿಯನ್ನು ಅನುಸರಿಸುತ್ತಿದ್ದ ವಾಲ್ಮೀಕಿ ಈಗ ಅದನ್ನು ತ್ಯಜಿಸಿದ್ದಾರೆ. ಬೇಡನಿಗೆ ಶಾಪವನ್ನು ಕೊಡುವಾಗಲೂ ಸಾಯಿ ಎಂದು ಹೇಳುವದಕ್ಕಿಂತ “ಬಹಳ ಕಾಲ ಸ್ಥಿರವಾಗಿ ಬದುಕಲಾರೆ” ಎನ್ನುವ ಮಾತನ್ನು ಆಡುತ್ತಾನೆ. “ಸಾಯಿ ಎನ್ನುವುದಕ್ಕಿಂತ ಬದುಕಲಾರೆ” ಎನ್ನುವ ಮಾತುಗಳು ಬಹು ಅರ್ಥಪೂರ್ಣ! ರಾಮಾಯಣವನ್ನು ಕೇಳಿದ ಪ್ರಭಾವದಿಂದ ಹಿಂಸೆಯ ಲವಲೇಶವೂ ಮನಸ್ಸಿನಲ್ಲಿ ಇಲ್ಲ. ಮರುಕ್ಷಣದಲ್ಲಿಯೇ ಬೇಡನ ವೃತ್ತಿಯೇ ಬೇಟೆಯಾಡುವುದು, ತನ್ನ ಶಾಪ ಅಗತ್ಯವಿತ್ತೇ ಎನ್ನುವ ಇನ್ನೊಂದು ಚಿಂತೆ ಅವರನ್ನು ಕಾಡಿತು. ಹೆಣ್ಣು ಕ್ರೌಂಚದ ಶೋಕ ವಾಲ್ಮೀಕಿಯ ಮನವನ್ನು ಕಲಕಿತ್ತು. ಅದಕ್ಕೆ ಪ್ರತಿಯಾಗಿ “ಬಹಳ ಕಾಲ ಬದುಕಲಾರೆ” ಎನ್ನುವುದು ಉತ್ತರವಾಗಲಾರದು. ತನ್ನ ಶಾಪ ನಿಜವಾದರೆ ಬೇಡನ ಹೆಂಡತಿಗೆ ದುಃಖವಾಗದೇ ಇದ್ದೀತೆ ಎನ್ನುವ ಮನೋಭಾವವೂ ಇದ್ದಿರಬಹುದಾಗಿದೆ. ಹಿಂಸೆಗೆ ಇನ್ನೊಂದು ಹಿಂಸೆ ಉತ್ತರವಾಗಲಾರದು. ಹಾಗಾಗಿ ಚಿಂತೆಗೆ ಪರಿಹಾರವೆಂದರೆ ಶೋಕ ಶ್ಲೋಕವಾಗುವುದು. ಶೋಕವೆಂದರೆ ದುಃಖ; ಶೋಕಕ್ಕೆ ಕಾರಣ ವಿಯೋಗ. ರಾಮಾಯಣವೂ ವಿಯೋಗದ ಕಥೆಯೇ. ಇಲ್ಲಿ ತಂದೆಗೆ ಮಕ್ಕಳ ವಿಯೋಗ, ಅಣ್ಣನಿಗೆ ತಮ್ಮನ ವಿಯೋಗ, ಗಂಡನಿಗೆ ಹೆಂಡತಿಯ ವಿಯೋಗ. ಕ್ರೌಂಚವೆಂದರೆ ಕುಟಿಲ ಸ್ವರೂಪರಾದ ರಾಕ್ಷಸರು ಎನ್ನುವ ಅರ್ಥವೂ ಇದೆ. ಸೀತೆಯನ್ನು ರಾಮನಿಂದ ಅಗಲಿಸಿದ ಕಾರಣಕ್ಕೆ ಮಂಡೋದರಿಗೂ ಇಲ್ಲಿ ರಾವಣನ ವಿಯೋಗವನ್ನು ಅನುಭವಿಸಬೇಕಾಯಿತು ಎನ್ನುವದೂ ಆಗುತ್ತದೆ. ಕಾಮದಿಂದ ಸುಗ್ರೀವನ ಹೆಂಡತಿಯನ್ನು ಅಪಹರಿಸಿದ ವಾಲಿಯನ್ನು ರಾಮ ಕೊಂದು ಸುಗ್ರೀವನಿಗೆ ಆತನ ಪತ್ನಿ ಪುನಃ ಸಿಗುವಂತೆ ಮಾಡಿದ್ದಾನೆ.

ಕರುಣರಸದ ಸ್ಥಾಯಿಭಾವವೇ ಶೋಕ. ಈ ಸ್ಥಾಯಿಭಾವವನ್ನು ಶ್ಲೋಕವಾಗಿಸುವುದು ಎಂದರೆ ಸ್ತೋತ್ರರೂಪವಾದ ಪದ್ಯವನ್ನಾಗಿಸುವುದು. ಸ್ತೋತ್ರವೆಂದರೆ ಸದ್ಗುಣಗಳನ್ನು (ದೇವರನ್ನು) ಹೊಗಳುವುದು. ನಿಷಾದ ಎಂದರೆ ಪೀಡಿಸುವವ ಎನ್ನುವ ಅರ್ಥವೂ ಆಗುತ್ತದೆ. ಅಲ್ಪೀಭೂತವಾದ ಮಿಥುನದಿಂದ ಎಂದರೆ ರಾಜ್ಯಭ್ರಂಶವನವಾಸಾದಿ ಕ್ಲೇಷಗಳಿಂದ ಕೃಶರಾದ ಸೀತಾರಾಮರೆನ್ನುವವರಲ್ಲಿ ಒಬ್ಬಳಾದ ಸೀತೆಯನ್ನು ಅವಧೀಃ- ಅಗಲಿಸಿದ ಕಾರಣದಿಂದಾಗಿ ಬ್ರಹ್ಮವರದಿಂದ ಲಭಿಸಿದ ರಾಜ್ಯವನ್ನು ರಾವಣ ಇನ್ನು ಬಹಳಕಾಲದ ವರೆಗೆ ಅನುಭವಿಸಲಾರೆ. ತ್ರಿಲೋಕಕಂಟಕನಾದ ರಾವಣನನ್ನು ಶಪಿಸಿರುವುದರಿಂದ ಸಕಲ ಲೋಕಕ್ಕೂ ಸನ್ಮಂಗಳವುಂಟಾಯಿತು ಎನ್ನುವುದಾಗಿಯೂ ಅರ್ಥವನ್ನು ಮಾಡಬಹುದು. ಶೋಕರೂಪವಾಗಿ ಹೊರಬಂದ ಮಾತು ಅನುಷ್ಟುಪ್ ಛಂದಸ್ಸಿನಲ್ಲಿತ್ತು. ಅದೇ ಶ್ಲೋಕವಾಗಿ ಮಂಗಳಕರ ನಾಂದೀ ಪದ್ಯವಾಯಿತು ಎನ್ನುವ ಸಮಾಧಾನವೂ ಇದೀಗ ಮುನಿಯಲ್ಲಿ ಮೂಡಿತು. ತನ್ನ ಶಿಷ್ಯ ಭಾರದ್ವಾಜನಿಗೆ “ತನ್ನ ಮಾತು ಕೇವಲ ಪದಜಾಲವಾಗದಿರಲಿ. ಪ್ರಾಸಬದ್ಧವಾಗಿ ಬಂದಿರುವ ಇದು ತಂತಿಯ ವಾದ್ಯದೊಡನೆ ಹಾಡುವ ಲಯಬದ್ಧಶ್ಲೋಕವಾಗಿ ಪರಿಣಮಿಸಲಿ” ಎನ್ನುತ್ತಾನೆ. ಅದನ್ನು ಭಾರದ್ವಾಜ ಕಂಠಪಾಠ ಮಾಡುತ್ತಾನೆ.

king dasharatha

ಇತ್ತ ಆಶ್ರಮಕ್ಕೆ ಬಂದರೆ, ಕವಿಯನ್ನು ನೋಡಲು ಬ್ರಹ್ಮನೇ ಬಂದಿರುತ್ತಾನೆ. ರಾಮಾಯಣದ ಕಾವ್ಯವನ್ನು ರಚಿಸು ಎಂದು ವರ ನೀಡುತ್ತಾನೆ. ವರದ ಫಲದಿಂದ ರಾಮಾಯಣದಲ್ಲಿ ನಡೆದ ವೃತ್ತಾಂತಗಳು, ಎಲ್ಲಾ ಪಾತ್ರಗಳ ರಹಸ್ಯಗಳು ವಾಲ್ಮೀಕಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ತೋರುತ್ತದೆ. ಎಲ್ಲಿ ಹೃದಯದ ಕಣ್ಣು ತೆರೆಯುತ್ತದೆಯೋ ಅಲ್ಲಿ ಕಾವ್ಯದ ರಸಸೃಷ್ಟಿಯಾಗುತ್ತದೆ. ಲೋಕದಲ್ಲಿ ಸಾಮಾನ್ಯವಾಗಿ ಕಂಡ ಸಂಗತಿಗಳು ಕವಿಗೆ ವಿಶೇಷ ರೂಪವಾಗಿ ಗೋಚರವಾಗುವುದು. ತೀ. ನಂ. ಶ್ರೀಕಂಠಯ್ಯನವರು ಕಾವ್ಯ ಹುಟ್ಟುವ ಹೊತ್ತನ್ನು “ತನ್ನೊಳಗೆ ತುಂಬಿರುವ ರಸಕ್ಕೆ ಅನುಗುಣವಾದ ಶಬ್ದಾರ್ಥಗಳನ್ನು ಕುರಿತು ಚಿಂತನೆಯಲ್ಲಿ ಕವಿಯ ಚೇತಸ್ಸು ನಿಶ್ಚಲವಾಗಿರುವಾಗ, ವಸ್ತುವಿನ ನಿಜಸ್ವರೂಪವನ್ನು ಮುಟ್ಟಿದ ಪ್ರಜ್ಞೆ ಅವನಲ್ಲಿ ಥಟ್ಟನೆ ಹೊಮ್ಮುತ್ತದೆ. ಇದೇ ಕವಿಯ ಪ್ರತಿಭೆ, ಪರಮೇಶ್ವರನ ಮೂರನೆಯ ಕಣ್ಣೆಂದೇ ಕೀರ್ತಿಸುತ್ತಾರೆ. ಇದರ ಮೂಲಕ ತ್ರಿಕಾಲದಲ್ಲಿ ನಡೆಯುವ ಸಂಗತಿಗಳನ್ನು ಸಾಕ್ಷಾತ್ತಾಗಿ ಕಾಣಬಲ್ಲನು(ಭಾ. ಕಾ. ಮೀ-10)” ಎಂದು ವಿವರಿಸುತ್ತಾರೆ. ವಾಲ್ಮೀಕಿ ಕುಳಿತಲ್ಲಿಯೇ ರಾಮಾಯಣದ ಎಲ್ಲಾ ವಿವರಗಳನ್ನು ಕಾಣುವದು ಈ ವಿಶೇಷದೃಷ್ಟಿಯಿಂದಲೇ. ಅದನ್ನೇ ಬ್ರಹ್ಮ ಆತನಿಗೆ ಕೊಟ್ಟ ವರ ಎಂದು ಅಲಂಕಾರಿಕವಾಗಿ ಹೇಳಲಾಗಿದೆ. ಸಕಲ ಚರಾಚರಗಳ ಸೃಷ್ಟಿಗೆ ಕಾರಣ ಬ್ರಹ್ಮ; ಆತನೇ ತನಗಿರುವ ಅಪೂರ್ವ ಕಾವ್ಯಸೃಷ್ಟಿಯನ್ನು ವಾಲ್ಮೀಕಿಗೆ ಅನುಗ್ರಹಿಸಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ. ವಾಲ್ಮೀಕಿಗೆ ತನ್ನ ಕಾವ್ಯ ಅದ್ವಿತೀಯವಾದುದೆನ್ನುವ ವಿಶ್ವಾಸ ಬಂದಿದೆ. ಈ ಮೊದಲು ಹದಿನಾರು ಗುಣಗಳುಳ್ಳ ಮನುಷ್ಯ ಇದ್ದಿರಬಹುದೇ ಎನ್ನುವ ಚಿಂತೆ ಅವರನ್ನು ಕಾಡಿತ್ತು. ನಂತರ ಹೆಣ್ಣು ಕ್ರೌಂಚದ ವಿರಹದ ಅಳುವನ್ನು ನೋಡಿ “ಹೆಚ್ಚು ಕಾಲ ಬದುಕಲಾರೆ” ಎನ್ನುವ ಶಾಪವನ್ನು ಕೊಟ್ಟ ಕಾರಣ ಚಿಂತೆ ಕಾಡಿತ್ತು. “ಸೃಷ್ಟಿ ಎನ್ನುವ ಶಬ್ಧದಲ್ಲಿ ಸಾವು ಎನ್ನುವುದು ಇರುವುದಿಲ್ಲ. ಸಾವಿನಲ್ಲಿ ಸೃಷ್ಟಿ ಇರುವುದಿಲ್ಲ, ಇವೆರಡೂ ಯಾವತ್ತಿಗೂ ಒಟ್ಟಿಗೆ ಇರಲಾರದು” ಬ್ರಹ್ಮನಿಗೆ ಸೃಷ್ಟಿಸುವುದು ತಿಳಿದಿದೆಯೇ ಹೊರತೂ ನಾಶದ ಅರಿವಿಲ್ಲ. ವಾಲ್ಮೀಕಿಗೆ ಈ ಕಾರಣಕ್ಕಾಗಿ ಬದುಕಲಾರೆ ಎನ್ನುವ ಮಾತು ಕವಿಸೃಷ್ಟಿಗೆ ವಿರುದ್ಧವಾಗಿ ತೋರಿದೆ. ಹಾಗಾಗಿ ಎರಡನೇ ಸಾರಿ ಚಿಂತೆಗೊಳಗಾದ. ಅದಕ್ಕೆ ಬ್ರಹ್ಮನೇ ಬಂದು ಸಮಾಧಾನ ಹೇಳಿ ನಂತರದಲ್ಲಿ ಮಹಾಕಾವ್ಯವನ್ನು ರಚಿಸಿದ ಬಳಿಕ “ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ” ಇಂತಹ ಕಾವ್ಯವನ್ನು ಉಪದೇಶ ಪಡೆಯಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆ ಮೂರನೇ ಬಾರಿಗೆ ಉದ್ಭವಿಸಿತು. ಹೀಗೆ ಚಿಂತಿಸುತ್ತಾ ಕಣ್ಮುಚ್ಚಿ ಕುಳಿತಿರುವ ಹೊತ್ತಿನಲ್ಲಿ ಅವರ ಕಾಲನ್ನು ಯಾರೋ ಹಿಡಿದುಕೊಂಡಿದ್ದು ಗಮನಕ್ಕೆ ಬಂತು. ಯಾರೆಂದು ಕಣ್ಣುತೆರೆದು ನೋಡಿದರೆ ಬಾಲಕರಾದ ಲವ-ಕುಶರು.

ಇಲ್ಲಿ ಎರಡು ಸಂಗತಿಗಳನ್ನು ವಾಲ್ಮೀಕಿ ಹೇಳುವುದು ಬಲು ಮುಖ್ಯ. ಮೊದಲನೆಯದು ಅವರು ಮುನಿವೇಷಧಾರಿಗಳಾಗಿದ್ದರು, ಅವರು ಆಶ್ರಮವಾಸಿಗಳಾಗಿರಲಿಲ್ಲವೆಂದು ಮುನಿವೇಷಧಾರಿಗಳಾಗಿದ್ದರು ಎನ್ನುವುದರ ಮೂಲಕ ಸೂಚಿಸುತ್ತಾರೆ, ಎರಡನೆಯದು ಆ ಬಾಲಕರಿಗೆ ಹಾಡುವುದಕ್ಕೆ ಯೋಗ್ಯವಾದ ಶಾರಿರ ಸಂಪತ್ತು – “ಭ್ರಾತರೌ ಸ್ವರಸಮ್ಪನ್ನೌ ದದರ್ಶಾಶ್ರಮವಾಸಿನೌ” ಇತ್ತು ಎನ್ನುವುದು. ರಾಮಾಯಣವನ್ನು ವಾಲ್ಮೀಕಿ ರಚಿಸುವಾಗಲೇ ತನ್ನ ಕಾವ್ಯ ಹಾಡುವುದಕ್ಕೆ ಯೋಗ್ಯವಾಗಿ ಇರಬೇಕೆನ್ನುವುದನ್ನು ಬಯಸಿದ್ದರು. ರಾಮಾಯಣದಲ್ಲಿ ಅಧ್ಯಯನ ಮಾಧುರ್ಯವೂ ಇದೆ, ಗಾನ ಮಾಧುರ್ಯವೂ ಇದೆ. ನವರಸಭರಿತವಾಗಿದೆ ಎನ್ನುವುದು ಬಲು ಮುಖ್ಯ. ಕವಿಯ ಮನಸ್ಸನ್ನು ಅರಿತು ಹಾಡುವ ಯೋಗ್ಯರಾದ ಗಾಯಕರು ಸಿಕ್ಕಿದರೆಂದು ಮುನಿಗೆ ಸಂತೋಷವಾಯಿತು. ಶಿಷ್ಯರೂ ಅಷ್ಟೇ, ರಾಮಾಯಣವನ್ನು ಆಮೂಲಾಗ್ರವಾಗಿ ಕಲಿತು ಕವಿ ವಾಲ್ಮೀಕಿಯ ಮನಸ್ಸು ತೃಪ್ತಿಯಾಗುವಂತೆ ಮಹರ್ಷಿಗಳ ಸಭೆಯಲ್ಲಿ ಹಾಡಿ ತೋರಿಸಿದರು.

ಇಲ್ಲಿಗೆ ಮುನಿಯನ್ನು ಕಾಡಿದ ಮೂರನೆಯ ಚಿಂತೆ ಯೋಗ್ಯರಾದ ಗಾಯಕರು ಸಿಕ್ಕಿದರು ಎನ್ನುವ ಸಂತೋಷದಲ್ಲಿ ಪರಿವರ್ತಿತವಾಯಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading
Advertisement
Ballari Lok Sabha constituency Congress candidate e Tukaram Election campaign
ಬಳ್ಳಾರಿ22 mins ago

Lok Sabha Election 2024: ಬಡವರ ಬಾಳು ಬಂಗಾರ ಮಾಡಿದ್ದು ಕಾಂಗ್ರೆಸ್‌: ಈ. ತುಕಾರಾಂ

Lok Sabha Election 2024
Lok Sabha Election 202422 mins ago

Lok Sabha Election 2024: 1 ವೋಟಿಗಾಗಿ ದಟ್ಟ ಕಾಡಿನಲ್ಲಿ 18 ಕಿ.ಮೀ. ನಡೆದ ಚುನಾವಣಾ ಸಿಬ್ಬಂದಿ

Narendra Modi
ಪ್ರಮುಖ ಸುದ್ದಿ32 mins ago

Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

Lok sabha Election
ರಾಜಕೀಯ52 mins ago

lok Sabha Election : ಮೊದಲ ಹಂತದಲ್ಲಿ ಶೇ.60.3ರಷ್ಟು ಮತದಾನ

Actor Darshan
ಕರ್ನಾಟಕ57 mins ago

Actor Darshan: ನಟ ದರ್ಶನ್‌ ಇದ್ದ ಪ್ರಚಾರ ವಾಹನಕ್ಕೆ ವಿದ್ಯುತ್‌ ಸ್ಪರ್ಶ; ತಪ್ಪಿದ ಭಾರೀ ಅನಾಹುತ!

Boat Capsizes
ದೇಶ1 hour ago

Boat Capsizes: ದೋಣಿ ಮುಳುಗಿ ಇಬ್ಬರು ಜಲಸಮಾಧಿ; ಏಳು ಮಂದಿ ನಾಪತ್ತೆ

Chikkaballapur Lok Sabha Constituency NDA candidate Dr K Sudhakar election campaign
ಚಿಕ್ಕಬಳ್ಳಾಪುರ1 hour ago

Lok Sabha Election: ಯಲಹಂಕದಲ್ಲಿ ಡಾ.ಕೆ.ಸುಧಾಕರ್ ಗೆ 1 ಲಕ್ಷ ಮತಗಳ ಲೀಡ್ ಕೊಡಿಸುತ್ತೇನೆ: ಎಸ್ ಆರ್ ವಿಶ್ವನಾಥ್ ಪ್ರತಿಜ್ಞೆ

Chikkaballapur Lok Sabha Constituency Congress candidate Raksha Ramaiah election campaign in Yalahanka
ಬೆಂಗಳೂರು2 hours ago

Lok Sabha Election 2024: ಬಿಜೆಪಿ ಆಡಳಿತದಲ್ಲಿ ಶೇ. 5ರಷ್ಟೂ ಉದ್ಯೋಗ ಸೃಷ್ಟಿಯಾಗಿಲ್ಲ: ರಕ್ಷಾ ರಾಮಯ್ಯ

kaalnadige Jatha programme in Uttara kannada
ಉತ್ತರ ಕನ್ನಡ2 hours ago

Lok Sabha Election 2024: ಉ.ಕ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮತದಾನದ ಗುರಿ; ಡಿಸಿ

Bangalore Rural Lok Sabha Constituency Congress candidate D K Suresh Election campaign
ಬೆಂಗಳೂರು ಗ್ರಾಮಾಂತರ2 hours ago

Lok Sabha Election 2024: ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಡಿ.ಕೆ. ಸುರೇಶ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ8 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ18 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌