ವಿಸ್ತಾರ ಭಾಗ 2 | ಹರಿವ ನದಿಗೆ ಸಾವಿರ ಕಾಲು | ಹೊಣೆಯರಿತ ಪತ್ರಕರ್ತನ ಸತ್ಯದ ವಿಶ್ಲೇಷಣೆ | ಹರಿಪ್ರಕಾಶ್‌ ಕೋಣೆಮನೆ ಅಂಕಣ ಸಂಕಲನ - Vistara News

ಅಂಕಣ

ವಿಸ್ತಾರ ಭಾಗ 2 | ಹರಿವ ನದಿಗೆ ಸಾವಿರ ಕಾಲು | ಹೊಣೆಯರಿತ ಪತ್ರಕರ್ತನ ಸತ್ಯದ ವಿಶ್ಲೇಷಣೆ | ಹರಿಪ್ರಕಾಶ್‌ ಕೋಣೆಮನೆ ಅಂಕಣ ಸಂಕಲನ

ವಿಸ್ತಾರ ಅಂಕಣ ಬರಹಗಳು, ಸತ್ಯಗಳ ಮತ್ತು ಅದರ ಸಮಾಜಮುಖಿ ಗುಣಗಳ ಪರಿಶೀಲನೆಯಾಗಿ ಮೂಡಿಬಂದಿವೆ ಎಂದು ಇತ್ತೀಚೆಗೆ ಬಿಡುಗಡೆಯಾದ ʼವಿಸ್ತಾರ, ಭಾಗ 2′ ಕೃತಿಯ ಬಗ್ಗೆ ನಾರಾಯಣ ಯಾಜಿ ಗುರುತಿಸಿದ್ದಾರೆ. ಕೃತಿಗೆ ಮುನ್ನುಡಿಯಾಗಿ ಅವರು ಬರೆದ ಮಾತುಗಳು ಇಲ್ಲಿವೆ.

VISTARANEWS.COM


on

vistara book 2
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

| ನಾರಾಯಣ ಯಾಜಿ

ಪತ್ರಿಕಾ ಮನೆಯಲ್ಲಿ ಕುಳಿತವರಿಗೆ ಸುದ್ದಿಗಳ ವಿಷಯದಲ್ಲಿ ಬರಗಾಲವಿಲ್ಲ. ಈ ಸುದ್ದಿಗಳ ಸಂತೆಯಲ್ಲಿ ಅದರಲ್ಲಿರುವ ವಿಷಯಗಳನ್ನು ಹಸಿಹಸಿಯಾಗಿ ಓದುಗರಿಗೆ ತಲುಪಿಸುವ ಇಂದಿನ ಅವಸರದ ಜಾಯಮಾನದಲ್ಲಿ ತಾವು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆನ್ನುವದನ್ನು ಇಂದು ಮಾಧ್ಯಮಗಳು ಮರೆತುಬಿಟ್ಟಿವೆ. ಟೀವಿ ಪತ್ರಿಕೋದ್ಯಮ ಬಂದಮೇಲೆ ಈ ಸಂಗತಿ ಇನ್ನೂ ಹೆಚ್ಚೇ ಆಗಿಹೋಗಿವೆ. ಪರಿಣಾಮವಾಗಿ ತಾವು ಸಮಾಜಕ್ಕೆ ನೀಡುವ ಮುಖ್ಯವಾದ ಸಂದೇಶವನ್ನೇ ಅವುಗಳು ಮರೆಮಾಚಿವೆ ಎನ್ನುವದು ಅಷ್ಟೇ ಸತ್ಯವಾಗಿವೆ. ಪತ್ರಿಕೆಗಳು ಸಮಾಜಕ್ಕೆ ಹಿಡಿಯುವ ಕನ್ನಡಿ ಎಂದು ಅನೇಕ ಮಾಧ್ಯಮಗಳು ಈ ರೀತಿಯ ಧಾವಂತದ ಸುದ್ದಿಗಳ ಪ್ರಕಟನೆಗೆ ಸಮರ್ಥನೆಗಳನ್ನು ಕೊಡುತ್ತಿರುವದನ್ನೂ ಸಹ ನೋಡಬಹುದಾಗಿದೆ. ಆದರೆ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಬಲದ್ದು ಎಡ, ಎಡದ್ದು ಬಲ ಎನ್ನುವದನ್ನು ಮರೆಯಬಾರದು.

ಈ ಸಂದರ್ಭದಲ್ಲಿ ಅಮೇರಿಕಾದ ಪ್ರಸಿದ್ಧ ಪತ್ರಕರ್ತರಾದ Bill Kovach ಮತ್ತು Tom Rosenstiel ಪತ್ರಿಕಾರಂಗದ ಉದ್ದೇಶದ ಕುರಿತು “The Elements of Journalism, “is not defined by technology, nor by journalists or the techniques they employ. Rather the principles and purpose of journalism are defined by something more basic: the function news plays in the lives of people” ಎಂದು ಬರೆದಿರುವದು ಭಾರತದ ಪ್ರಸ್ತುತ ಮಾಧ್ಯಮರಂಗ ಗಮನಿಸುವದು ತುಂಬಾ ಮುಖ್ಯ ಅನಿಸುತ್ತದೆ. ತಾವು ಪ್ರಕಟಿಸುವ ಸುದ್ದಿಗಳು ಜನರ ಬದುಕಿನ ಮೇಲೆ ಆಡುವ ಆಟದ ಪರಿಣಾಮದ ಕುರಿತು ಆಲೋಚಿಸಿ ಕೊಡುವಾಗ ತಮ್ಮ ಮೇಲೆ  ಸ್ವನಿಯಂತ್ರಣವನ್ನು ವಹಿಸಿಕೊಳ್ಳುವದು ಅಷ್ಟೇ ಮುಖ್ಯ. ಈ ಸಂದರ್ಭಗಳಲ್ಲಿ ನನಗೆ ಇಷ್ಟವಾದ ಕೆಲ ರಾಜಕೀಯ ವಿಶ್ಲೇಷಕರುಗಳು ಖುಶ್‌ವಂತ್‌ ಸಿಂಗ್, ಅರುಣ ಶೌರಿ, ಜಾರ್ಜ್ ಓರ್ವೆಲ್, ರುಡ್ಯಾರ್ಡ್ ಕಿಪ್ಲಿಂಗ್, ರಾಜ್ ಮೋಹನ್ ಗಾಂಧಿ, ಶಶಿ ತರೂರ್ ಮುಂತಾದವರು. ಇವರೆಲ್ಲರೂ ಮುಖ್ಯವಾಗುವದು ಏಕೆಂದರೆ ಇವರೆಲ್ಲರ ನಿಜಜೀವನದ ಬದುಕಿನಲ್ಲಿ ತಮ್ಮ ತಮ್ಮ ಬಾಲಿಶತನ, ಜಾಣನಡೆ, ರಸಿಕತೆ, ಸೆಡವು-ಸಿನಿಕತನ, ಕೆಲವೊಮ್ಮೆ ಮೂರ್ಖತನಕ್ಕೂ ಪ್ರಸಿದ್ಧರಾದವರು. ಆದರೆ ಸುದ್ದಿಮನೆಯ ವಿಶ್ಲೇಷಣೆಯ ಹೊಣೆ ಬಂದಾಗ ಲೇಖನಿ ಇವರ ಮೂಸೆಯಲ್ಲಿ ರೂಪುಗೊಳ್ಳುವದಿದೆಯಲ್ಲಾ ಅದೊಂದು ಪರಿಭಾಷೆಯಾಗಿಬಿಡುತ್ತದೆ.

Shashi Tharoor ಅವರ Why I’m a Hindu ಓದಿದವರಿಗೆ ಅವರ ತಿಕ್ಕಲುತನ ಮರೆಯಾಗಿ ಅವರೊಳಗಿರುವ ಸಂಸ್ಕೃತಿ, ಸನಾತನ ಧರ್ಮದ ಕುರಿತು ಅವರಿಗಿರುವ ತಿಳಿವಳಿಕೆಗಳ ಕುರಿತು ಅಚ್ಚರಿ ಮೂಡಿಸುತ್ತದೆ. ಖುಶವಂತ ಸಿಂಗರ ಪೋಲಿ ಜೋಕುಗಳನ್ನು ಸವಿಯುತ್ತಿರುವ ಹೊತ್ತಿನಲ್ಲಿಯೇ ಅವರ Train to Pakistan ಕೃತಿಯಲ್ಲಿ ಬರುವ Freedom is for the educated people who fought for it. We were slaves of the English, now we will be slaves of the educated Indians or Pakistanis. ಎಂಬ ವಾಕ್ಯ ನಮ್ಮನ್ನು ವಿಷಾದದ ಗುಂಡಿಯಲ್ಲಿ ನೂಕಿಬಿಡುತ್ತದೆ. ನಮ್ಮೆದೆಗೆ ಆ ಬಿಸಿಯುಸಿರು ತಾಕುತ್ತದೆ. ಈ ರೀತಿಯ ಪ್ರಬುದ್ಧತೆಯನ್ನು ಸುದ್ದಿಮನೆಯಲ್ಲಿರುವವರು ಗಮನಿಸದೇ ಇದ್ದರೆ ಅದು ಗೊಂದಲವನ್ನು ಸೃಷ್ಟಿಸಿ ಕೇವಲ ಟಿಆರ್‌ಪಿ ಹೆಚ್ಚಿಸುವ ಮಾರುಕಟ್ಟೆಯ ತಂತ್ರವಾಗುತ್ತದೆ. ಕನ್ನಡದಲ್ಲಿಯೂ ಹೆಚ್‌ಎಸ್‌ವಿ, ಖಾದ್ರಿ ಶಾಮಣ್ಣ, ಶಾಮರಾಯರು, ವೈಎನ್‌ಕೆ, ಲಂಕೇಶ್, ಬಿ.ವಿ ವೈಕುಂಠರಾಜು, ಡಾ.ಹಾಮಾನಾರಂತಹ ಕೆಲವರು ಇದೇ ರೀತಿಯಲ್ಲಿ ತಮ್ಮ (Committed Observer) ಜವಾಬುದಾರಿಯನ್ನು ನಿರ್ವಹಿಸಿದ ರೀತಿ ಇನ್ನೊಬ್ಬರಿಗೆ ಮಾದರಿಯಾಗಿದೆ.

ಹರಿಪ್ರಕಾಶ ಕೋಣೆಮನೆಯವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸಂಪಾದಕರಾಗಿ ಇರುವಾಗ ಬರೆದ ಅಂಕಣದ ಪುಸ್ತಕ ರೂಪ “ವಿಸ್ತಾರ– 2” ಓದಿದಾಗ ಈ ಮೇಲಿನ ಸಂಗತಿಗಳೆಲ್ಲವೂ ನೆನಪಿಗೆ ಬಂತು. ಹರಿಪ್ರಕಾಶ ಕೋಣೆಮನೆಯವರು ತಮ್ಮ ಅಂಕಣದಲ್ಲಿ ಕಾದುಕೊಂಡಿದ್ದ ಸಂಯಮ ಮತ್ತು ಭಾಷೆಯನ್ನು ದುಡಿಸಿಕೊಳ್ಳುವ ಕ್ರಮಗಳು ಮಾದರಿಯ ಪತ್ರಿಕೋದ್ಯಮಕ್ಕೆ ಒಂದು ಪಠ್ಯವಾಗಿತ್ತು ಎನ್ನಬಹುದಾಗಿದೆ. ಒಟ್ಟೂ ಇಪ್ಪತ್ನಾಲ್ಕು ಲೇಖನಗಳನ್ನು ಸಂಗ್ರಹಿಸಿ ಹೊರತಂದ ಈ ಕೃತಿಯಲ್ಲಿ ರಾಜಕೀಯ ಚಿಂತನೆ, ಸಾಂಸ್ಕೃತಿಕ ಬದುಕಿನತ್ತ ಇಣುಕುನೋಟ, ಕನ್ನಡದ ಮತ್ತು ಕನ್ನಡ ಭಾಷೆಯ ಕುರಿತಾದ ಕಾಳಜಿ, ರಾಜಕೀಯದ ಅವಾಂತರಗಳಿಗೆ ಕಂಬಳಿಯಿಂದ ಸುತ್ತಿ ಕೊಡುವ ಕಲ್ಲಿನ ಪೆಟ್ಟುಗಳು ಎಲ್ಲವೂ ಕೋಣೆಮನೆಯವರ ಶೈಲಿಯನ್ನು ರೂಢಿಸಿವೆ.

ಅವರು ದಿಗ್ವಿಜಯ ನ್ಯೂಸ್‌ನಲ್ಲಿ ಸಂಪಾದಕರಾಗಿರುವಾಗ ರಾತ್ರಿ ಬಹುಮುಖ್ಯ ಹೊತ್ತಿನಲ್ಲಿ ನಡೆಸಿಕೊಡುತ್ತಿದ್ದ ಸುದ್ದಿ ವಿಶ್ಲೇಷಣೆಯಲ್ಲಿ ಗಂಭೀರವಾಗಿ ಪ್ರಸ್ತುತಗೊಳಿಸುತ್ತಿರುವ ರಾಜಕೀಯದ ವಿಶ್ಲೇಷಣೆಗಳು ನನ್ನನ್ನು ತಪ್ಪದೇ ಅವರ ಸಮಯಕ್ಕಾಗಿ ಕಾಯುವಂತೇ ಮಾಡುತ್ತಿದ್ದವು. ನಿರುದ್ವಿಗ್ನವಾಗಿ ಹೇಳಬೇಕಾದುದನ್ನು ಹೇಳಿಯೇ ಬಿಡುವ, ಸಮಾಜ ಮತ್ತು ರಾಜಕೀಯ ಪಕ್ಷಗಳನ್ನು ಎಚ್ಚರಿಸುವ ಅವರ ಕಾಳಜಿ ನಿಜ ಅರ್ಥದಲ್ಲಿ ಜನಪರವಾಗಿರುತ್ತಿದ್ದವು. “ವೈರಿಯನ್ನು ಟೀಕಿಸುತ್ತಾ ಅದರಂತೆಯೇ ಆಗುವ ಬಿಜೆಪಿಯ ಗುಣ” ಲೇಖನದಿಂದಲೇ ಅದು ವ್ಯಕ್ತವಾಗಿ ಬಿಡುತ್ತದೆ. ಸಿದ್ಧಾಂತವೇ ಮುಖ್ಯವೆನ್ನುವ ಪಕ್ಷವೊಂದು ಸಿದ್ಧಾಂತದ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳಲು ಮಾಡುವ ತಂತ್ರಗಾರಿಕೆಯನ್ನು ನೇರಾನೇರ ಬಿಚ್ಚಿಟ್ಟಿದ್ದಾರೆ. ಹೀಗೆ ವಿಶ್ಲೇಷಣೆ ಮಾಡುವ ಹೊತ್ತಿನಲ್ಲಿ ಕರ್ನಾಟಕದ ಪ್ರಬುದ್ಧ ಮತದಾರ ಮತ್ತು ಬಂಗಾಲದ ರಾಜಕೀಯ ಕಸರತ್ತುಗಳ ತೌಲನಿಕ ಅಧ್ಯಯನವನ್ನು ನಡೆಸಿದ್ದಾರೆ. ಬಂಗಾಲದಲ್ಲಿ ಅಹಿಂಸೆಯನ್ನು ಇಷ್ಟಪಡದ ದೀದಿ ಎನ್ನುವಲ್ಲಿ ಉಪಯೋಗಿಸಿರುವ ಪದ ಸಿಡುಕು ಮುಖದ, ಸದಾ ಜಗಳ ಕಾರುವ, ಪ್ರಧಾನಿ ಹುದ್ದೆಗೂ ಗೌರವ ಕೊಡದ ಮಮತಾ ಬ್ಯಾನರ್ಜಿಯನ್ನು ಎದುರಿಸಿಲು ಅವರದೇ ಪಕ್ಷದ ನಾಯಕರನ್ನು ಸಾರಾ ಸಗಟಾಗಿ ಆಮದು ಮಾಡಿಕೊಂಡು 2016ರಲ್ಲಿ ಕೇವಲ ಮೂರು ಸ್ಥಾನಗಳನ್ನು ಗಳಿಸಿದ ಪಕ್ಷ 77 ಸ್ಥಾನಗಳನ್ನು ಗಳಿಸಿಕೊಂಡಿರುವದು ಒಂದು ಕಡೆ. ಬಹುಮತವನ್ನು ಗಳಿಸಿಯೂ ನಂದಿಗ್ರಾಮದಲ್ಲಿ ಸೋತ ಮಮತಾ ದೀದಿಯ ಪಕ್ಷಕ್ಕೆ ಸಡ್ಡು ಹೊಡೆದಿರುವದು ಇನ್ನೊಂದು ಕಡೆ. ಹೀಗೆ ನೋಡುವಾಗ ಅಂಕಿಅಂಶಗಳ ಪ್ರಕಾರ ಬಿಜೆಪಿಯ ಗೆಲುವು ಮಹತ್ವದ್ದಾಗಿ ಕಾಣಿಸಬಹುದು.  ಆದರೆ ಬಿಜೆಪಿ 3ರಿಂದ 77ಕ್ಕೆ ಜಿಗಿದಿರುವದು ಆಪರೇಷನ್ ಕಮಲದ ಮೂಲಕವಾಗಿ ಎನ್ನುವದನ್ನು ನಿರೂಪಿಸುತ್ತಾರೆ. ಅಂತಿಮವಾಗಿ ಅಂಕಿಅಂಶಗಳನ್ನು ಬಿಟ್ಟು ಗೆದ್ದಿರುವದು ಮಮತಾ ಬ್ಯಾನರ್ಜಿಯೇ ಎನ್ನುವದನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ ಭಾಗ 1 | ಹೊಸ ತಿಳಿವಿನ ಬಾಗಿಲು | ಕಾಲಕ್ಕೆ ಹಿಡಿದ ಕನ್ನಡಿ | ಹರಿಪ್ರಕಾಶ್‌ ಕೋಣೆಮನೆ ಅಂಕಣಗಳ ಸಂಕಲನ

ಸುಳ್ಳಿನಲ್ಲಿ ಸುಳ್ಳು, ಮಹಾ ಸುಳ್ಳು ಮತ್ತು ಅಂಕಿಅಂಶಗಳೆಂಬ ಮೂರು ವಿಧಗಳನ್ನು ಸ್ಟ್ಯಾಟೆಸ್ಟಿಕ್ಸಿಗೆ ತಮಾಷೆಯಾಗಿ ಹೇಳುವದುಂಟು. ಹೀಗೆ ಒಂದರ ವಿಷಯಗಳನ್ನು ಹೇಳುತ್ತಲೇ ವಿಜಯವೆನ್ನುವದು ಅಂಕಿಅಂಶಗಳಲ್ಲಿಲ್ಲ, ಅದಕ್ಕೂ ಮೀರಿದ ಭಾವನೆಗಳಲ್ಲಿ ಇದೆ ಎನ್ನುವದನ್ನು ಎಚ್ಚರಿಸುತ್ತಾ ಆ ಪಕ್ಷಕ್ಕಾಗಿ ದುಡಿದ ಸಾವಿರಾರು ಕಾರ್ಯಕರ್ತರ ಮೌನ ರೋದನವನ್ನು ನಮ್ಮೆದುರು ತಂದಿರಿಸುತ್ತಾರೆ. ಕರ್ನಾಟಕದಲ್ಲಿಯೂ ಇದೇ ಅವಸ್ಥೆಯನ್ನು ಕಾರ್ಯಕರ್ತರು ಅನುಭವಿಸುತ್ತಿರುವದು ನಮ್ಮೆದುರು ಬರುತ್ತದೆ. ಅದೇ ಕಾಲಕ್ಕೆ ಕರ್ನಾಟಕದ ಪ್ರಬುದ್ಧ ಮತದಾರ ಇಲ್ಲಿನ ಸಂಕೀರ್ಣ ಜಾತಿ ವ್ಯವಸ್ಥೆಯ ನಡುವೆಯೂ ಲೋಕ ಸಭೆ ಮತ್ತು ವಿಧಾನ ಸಭಾ ಚುನಾವಣೆಗಳಲ್ಲಿ ಪ್ರತ್ಯೇಕ ವಿಚಾರ ಮತ್ತು ಪ್ರತ್ಯೇಕ ಪಕ್ಷವನ್ನು ಆಯ್ಕೆ ಮಾಡುವಲ್ಲಿ ವಿವೇಚನೆಯನ್ನು ತೋರಿದ್ದಾನೆ ಎನ್ನುತ್ತಾರೆ. ಪಶ್ಚಿಮ ಮಂಗಾಲದಲ್ಲಿ ದೀದಿ ಗೆದ್ದಿರುವದು ನೆಲದ ಮಗಳು ಎನ್ನುವ ಘೋಷಣೆಯಿಂದ. ಟಿಎಂಸಿಯಿಂದಲೇ ಬಹುತೇಕ ನಾಯಕರನ್ನು ಆಮದು ಮಾಡಿಕೊಂಡರೂ ಬಿಜೆಪಿಯ ಮುಖವಿರುವದು ಮೋದಿ-ಶಾ ಜೋಡಿಯ ಮೇಲೆ. ಹಾಗಾಗಿ ಒಳಗಿನವರು ವರ್ಸಸ್ ಹೊರಗಿನವರು ಎನ್ನುವದು ಅಲ್ಲಿನ ಮತದಾರರಿಗೆ ಮುಖ್ಯವಾಯಿತು. ಈ ಒಂದು ವಾಕ್ಯವನ್ನು ಓದುವಾಗ ಕರ್ನಾಟಕದಲ್ಲಿಯೂ ಲೋಕಲ್ ವರ್ಸಸ್ ಹೊರಗಿನವರು ಎನ್ನುವದರಿಂದಲೇ ಯಡಿಯೂರಪ್ಪನವರಿಗೆ ಮಣೆಹಾಕಿದ ವಿಷಯವನ್ನು ನೆನಪಿಸುತ್ತಾರೆ.

Vistara Books
ವಿಸ್ತಾರ ಪುಸ್ತಕ ಬಿಡುಗಡೆ ಸಂದರ್ಭ

ಅದೇ ರೀತಿ “ಕೊನೆಯ ಓವರಿನಲ್ಲಿ ಮ್ಯಾಚ್ ಗೆಲ್ಲಿಸ್ತಾರಾ ಬೊಮ್ಮಾಯಿ”  ಎನ್ನುವಲ್ಲಿಯೂ ಬಿಜೆಪಿ ನಾಯಕತ್ವಕ್ಕೆ ಎಚ್ಚರಿಕೆಯನ್ನು ನೀಡುವಂತೆ ಅನಿಸಿದರೂ ಇಲ್ಲಿರುವದು ಕರ್ನಾಟಕದ ಜನತೆಗೆ ಬೇಕಾಗಿರುವ ಒಳ್ಳೆಯ ಆಡಳಿತದ ಆಶಯವಾಗಿದೆ.  ಲೇಖನದ ಮೊದಲನೆಯ ವಾಕ್ಯದಲ್ಲಿಯೇ “ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂತೆ ಎಲ್ಲರನ್ನೂ ಒಳಗೊಳ್ಳುವ ಆಡಳಿತ ನಡೆಸಬೇಕಾಗಿದೆ” ಎನ್ನುವ ಮೂಲಕ ಅದನ್ನು ಸ್ಪಷ್ಟಪಡಿಸುತ್ತಿದ್ದಾರೆ. ಕರ್ನಾಟಕದಲ್ಲಿ ಆಗಿಹೋಗಿರುವ ಮುಖ್ಯಮಂತ್ರಿಗಳ ಪಟ್ಟಿಯನ್ನು ನೆನಪಿಸುತ್ತಾ ಅವರು ಆಯ್ಕೆಯಾದ ಬಗೆ, ಸ್ವಭಾವ, ಜನಪ್ರಿಯತೆ, ಜನಪರತೆ, ಪ್ರತಿನಿಧಿಸಿದ ಪಕ್ಷ, ಕೌಟುಂಬಿಕ ಹಿನ್ನೆಲೆ, ಅದೃಷ್ಟ, ಮಾಡಿರುವ ಕೆಲಸಗಳು, ಹೈಕಮಾಂಡ್ ಕೃಪೆ, ಸ್ಥಳೀಯ ನಾಯಕರ ಇಷ್ಟಾನುಸಾರ ಮುಖ್ಯಮಂತ್ರಿಗಳಾಗಿರುವವರನ್ನು ನೆನಪಿಸುತ್ತಾ ಇದನ್ನು ರಣರೋಚಕ ಎನ್ನುತ್ತಾರೆ. ಕೇವಲ ಬೊಮ್ಮಾಯಿಯವರಿಗೆ  ಭೋಪರಾಕ್ ಹೇಳಿ ತಮ್ಮ ಲೇಖನವನ್ನು ಮುಗಿಸುವದು ಕೋಣೆಮನೆಯವರ ಉದ್ದೇಶವಲ್ಲ. ಸಂಖ್ಯೆ ಎಷ್ಟೆನ್ನುವದಕ್ಕಿಂತಲೂ ಅವರಿಗೆ ಇಲ್ಲಿ ಜನಪರ ಆಡಳಿತ ನಡೆಸಿ ಆ ಮೂಲಕ ಕೆಲವೇ ಜನ ಮಾತ್ರ ಜನರ ಮನಸ್ಸಿನಲ್ಲಿ ಸ್ಥಾಯಿಯಾಗಿ ಉಳಿದಿರುವದನ್ನು ನೆನಪಿಸಬೇಕಾಗಿದೆ. ಹಿಂದುಳಿದವರ ಪಾಲಿಗೆ ಧ್ವನಿಯಾದ ದೇವರಾಜ ಅರಸು, ಮೌಲ್ಯಾಧಾರಿತ ರಾಜಕೀಯವನ್ನು ನಡೆಸಿ ಜಾತ್ಯತೀತವಾಗಿ ಹಲವು ನಾಯಕರನ್ನು ಬೆಳೆಸಿದ ರಾಮಕೃಷ್ಣ ಹೆಗಡೆಯವರು, ಐಟಿಬಿಟಿಯನ್ನು ಬೆಂಗಳೂರಿಗೆ ತಂದ ಎಸ್. ಎಮ್. ಕೃಷ್ಣ ಅವರನ್ನು ನೆನಪಿಸಿಕೊಳ್ಳುತ್ತಾ ಎಸ್. ಎಮ್. ಕೃಷ್ಣರ ಅಭಿವೃದ್ಧಿ ಕೇವಲ ಬೆಂಗಳೂರಿಗೆ ಆಗಿರುವದು ಅವರ ಸೋಲಿಗೂ ಕಾರಣವಾಯಿತೆನ್ನುವ ವಿಶ್ಲೇಷಣೆ ವಾಸ್ತವವೂ ಹೌದು. ಬಂಗಾರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯನವರನ್ನೆಲ್ಲ ನೆನಪಿಸಿಕೊಳ್ಳುವ  ಮತ್ತು ಅವರ ಏಳುಬೀಳುಗಳನ್ನು ಕೆಲವೇ ಶಬ್ದಗಳಲ್ಲಿ ಹಿಡಿದಿಟ್ಟುಕೊಟ್ಟಿದ್ದಾರೆ. ಪಕ್ಷದ ಸಿದ್ಧಾಂತಕ್ಕಿಂತಲೂ ವೈಯಕ್ತಿಕವಾದ ಇಚ್ಛಾಶಕ್ತಿಯಿಂದ ಮಕ್ಕಳಿಗೆ ಸೈಕಲ್, ಕೈಗಾರಿಕೆಗಳಿಗೆ  ಮೂಲಸೌಕರ್ಯ ಒದಗಿಸಿಕೊಟ್ಟಿರುವದು, ಪ್ರತ್ಯೇಕ ಕೃಷಿ ಬಜೆಟ್, ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ ಮತ್ತು ಎರಡನೇಯ ಹಂತದ ನಾಯಕತ್ವವನ್ನು ಬೆಳೆಸಿದ ಯಡಿಯೂರಪ್ಪನವರನ್ನು ಬಹುಮುಖ್ಯವಾಗಿ ನೆನಪಿಸಿಕೊಳ್ಳುತ್ತಾರೆ. ಲೇಖನದ ಆಶಯವೆನ್ನುವದು ಇಲ್ಲಿ ಬೊಮ್ಮಾಯಿಯವರಿಗೆ ಈ ರಾಜ್ಯವನ್ನು ಆಳಿದ  ಪೂರ್ವದ ಮುಖ್ಯಮಂತ್ರಿಗಳ SWOT Analysis–ಸಾಮರ್ಥ್ಯ, ದೌರ್ಬಲ್ಯ, ಅವಕಾಶ ಮತ್ತು ಬೆದರಿಕೆಗಳನ್ನು ಅವರವರಿಗೆ ಒದಗಿದ ಪರಿಯನ್ನು ನೆನಪಿಸುವುದಾಗಿದೆ. ನಾಯಕನಾದವ ದಿಟ್ಟನಾಗಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕು, ಇಲ್ಲವಾದರೆ ಆತ ಕಾಲಗರ್ಭದಲ್ಲಿ ಸೇರಿಹೋಗುತ್ತಾನೆ ಎನ್ನುವದರ ಮೂಲಕ ಪಕ್ಷದ ಅಡಿಗಟ್ಟಿನಲ್ಲಿ ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ; ಮತದಾರ ಪ್ರಭು ತಾನೇ ತಾನಾಗಿ ಒಲಿಯುತ್ತಾನೆ ಎನ್ನುವದನ್ನು ಸೂಚಿಸಿದ್ದಾರೆ. ಹಿಂದೆ ಮುಖ್ಯಮಂತ್ರಿಗಳಾಗಿದ್ದ  ಗುಂಡುರಾಯರು ಇಲೆಕ್ಷನ್ನಿನಲ್ಲಿ ಸೋತಾಗ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ಗುಂಡುರಾಯರ ಏಳು ಬೀಳುಗಳ ಕುರಿತು ಮನಮುಟ್ಟುವ ರೀತಿಯಲ್ಲಿ ಬರೆದಿರುವದು ಈ ಸಂದರ್ಭದಲ್ಲಿ ನೆನಪಿಗೆ ಬಂತು. ಗುಂಡುರಾಯರ ಕಟು ಟೀಕಾಕಾರರಾಗಿದ್ದ ಲಂಕೇಶ ಈ ಲೇಖನದಲ್ಲಿ ಬಳಸಿರುವ ಭಾಷೆ ಮತ್ತು ವಿಷಯ ಇಂದಿಗೂ ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸುವವರಿಗೆ ಒಂದು ಮಹತ್ವದ ಪಾಠವಾಗಿರುತ್ತದೆ. ನಾಯಕನಾದವನಿಗೆ ತಾನು ಹೇಗಿರಬೇಕಿತ್ತು, ಹೇಗಿದ್ದೆ ಎನ್ನುವದರ ನಿರ್ದಾಕ್ಷಿಣ್ಯ ಮತ್ತು ನಿರ್ಭಾವುಕತ್ವದಿಂದ ಕೂಡಿದ ಲೇಖನವಾದರೆ ಈ ಲೇಖನ ಬೊಮ್ಮಾಯಿಯವರಿಗೆ ಅಂತಹ ಸಂದರ್ಭದಲ್ಲಿ ಅಳುವದಕ್ಕಿಂತ ಈಗಲೇ ಜಾಗ್ರತರಾಗಿ ನಾಯಕರಾಗಿ ಎನ್ನುವ ಬಹುಮುಖ್ಯ ಸಂದೇಶವಿದೆ. ಇಂತಹ ಲೇಖನವನ್ನು ನಾಯಕರುಗಳು ಯಾವತ್ತಿಗೂ ನೆನಪಿನಲ್ಲಿಟ್ಟಿಕೊಳ್ಳಬೇಕು.

ಇದನ್ನೂ ಓದಿ | ವಿಸ್ತಾರ ಭಾಗ- 2 | ಹರಿವ ನದಿಗೆ ಸಾವಿರ ಕಾಲು | ಕಾಣದ್ದನ್ನೂ ಹೊಳೆಯಿಸುವ ಬರಹಗಳು | ಹರಿಪ್ರಕಾಶ್‌ ಕೋಣೆಮನೆ ಅಂಕಣಗಳ ಸಂಗ್ರಹ

ಕೋಣೆಮನೆಯವರ ಲೇಖನಗಳಲ್ಲಿ ಬಿಜೆಪಿಗೆ ಒತ್ತು ಹೆಚ್ಚಿದೆ ಎನ್ನುವದನ್ನು ಗಮನಿಸಬಹುದಾದರೂ ರಾಜಕೀಯ ಅಂಕಣವೆನ್ನುವದು ಯಾವತ್ತಿಗೂ ವರ್ತಮಾನ ಕಾಲವನ್ನು ಉದ್ದೇಶಿಸಿ ಇರುತ್ತದೆ ಎನ್ನುವದನ್ನು ಮರೆಯಲಾಗದು. ಈ ದೇಶದಲ್ಲಿ ಬಿಜೆಪಿಯ ಪರ್ವ ರಾಮ ಮಂದಿರದ ರಥಯಾತ್ರೆಯ ಹೊತ್ತಿಗೇ ಆಗಿಹೋಗಿದೆ. ಕೇವಲ ಎರಡು ಸ್ಥಾನಗಳಿಂದ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಪಕ್ಷವನ್ನು ಅದರ ಕಟು ಟೀಕಾಕಾರರೂ ಪ್ರಧಾನವಾಗಿಯೇ ಗಮನಿಸಬೇಕಾಗುತ್ತದೆ. ಬಿಜೆಪಿ ಕೋಣೆಮನೆಯವರಿಗೆ ಆಪ್ತವಾಗಿರುವದು  ಹೌದಾದರೂ ಅವರ ಪತ್ರಿಕಾಧರ್ಮಕ್ಕೆ ಈ ಮೋಹ ಅಡ್ಡ ಬಂದಿಲ್ಲ. ಹೇಳಬೇಕಾದ ಅಂಶಗಳನ್ನು ಯಾವ ಮುಲಾಜಿಲ್ಲದೇ ಹೇಳಿದ್ದಾರೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ತಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಿಸಲು ಅವಸರದ ಕುರಿತು ಅವರಿಗೆ ಅಸಮಾಧಾನವಿರುವದನ್ನು ಗಮನಿಸಬಹುದಾಗಿದೆ.

ಇಲ್ಲೆಲ್ಲ ಅವರು ಬಿಜೆಪಿಯ ಕಿವಿ ಹಿಂಡುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಕಿವಿಯ ಚರ್ಮ ಸ್ವಲ್ಪ ದಪ್ಪವಾಗಿಬಿಟ್ಟಿದೆ ಎನ್ನುವ ಅನಿಸಿಕೆಯೂ ಅವರ ಬರಹದಲ್ಲಿ ಧಾರಾಳವಾಗಿ ಕಾಣಬಹುದಾಗಿದೆ. ಸಾಂಸ್ಕೃತಿಕ ಅರಿವಿನಿಂದಲೇ ಪಕ್ಷಗಳ ಸಮಸ್ಯೆಗೆ ಪರಿಹಾರ ಎನ್ನುವ ಲೇಖನದಲ್ಲಿ ಇದನ್ನು ಕಾಣಬಹುದಾಗಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಹೇಳಿದ ನೀತಿಪಾಠ. ಶತಮಾನೋತ್ತರ ಇತಿಹಾಸವಿರುವ ಕಾಂಗ್ರೆಸ್ಸಿಗೆ ತನ್ನ ಇತಿಹಾಸ ಮತ್ತು ತಾನು ಈ ದೇಶಕ್ಕೊಂದು  ಅಸ್ಮಿತೆಯನ್ನು ಸಮಗ್ರವಾಗಿ ಕಟ್ಟಿಕೊಟ್ಟ ಮಹತ್ವದ ಅರಿವಿಲ್ಲ ಎನ್ನುವದನ್ನು ಸೋದಾಹರಣವಾಗಿ ವಿವರಿಸಿದ್ದಾರೆ. ಉರಿವ ಮನೆಯಲ್ಲಿ ಗಳ ಹಿರಿಯುವವರು ಎನ್ನುವ ನೀತಿಯಿಂದ ಕಾಂಗ್ರೆಸ್ಸು ಹೊರಬರಬೇಕಾಗಿದೆ. ಅದೇ ರೀತಿ ವೈಚಾರಿಕ ಹಿನ್ನೆಲೆಯ ಗೈರು ಹಾಜರಿ ಇಂದಿನ ಬಿಜೆಪಿಗಿದೆ ಎನ್ನುತ್ತಾರೆ. ಇಲ್ಲಿ ವೈಚಾರಿಕ ಹಿನ್ನೆಲೆಯ ಕೊರತೆ ಎನ್ನುವದಕ್ಕಿಂತ ಗೈರುಹಾಜರಿ ಎನ್ನುವದನ್ನು ಉದ್ದೇಶಪೂರ್ವಕವಾಗಿ ಬಳಸಿದ್ದಾರೆ. ತನ್ನ ಇತಿಹಾಸ ಗೊತ್ತಿರದ ಯಾವುದೇ ಸಂಸ್ಥೆಯಾಗಲೀ, ವ್ಯಕ್ತಿಯಾಗಲೀ ಹೊಸ ಇತಿಹಾಸವನ್ನು ರಚಿಸಲಾರ. ನೋಟಾ ಎನ್ನುವ ಆಲೋಚನೆಯೇ  ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಬ್ರಿಟಿಷ್‌ ಮಾದರಿಯ ನಮ್ಮ ಪ್ರಜಾಪ್ರಭುತ್ವದ ಮೂಲ ಲಕ್ಷಣವೇ Choosing between the best available alternative. ಇಲ್ಲಿ ಅತ್ಯುತ್ತಮ ಆಯ್ಕೆಗಿಂತ ಇರುವವರಲ್ಲಿ ಉತ್ತಮರು ಆಳಬೇಕಾಗಿದೆ. ನಕ್ಸಲ್ ಪ್ರಭಾವದಲ್ಲಿನ ಪ್ರದೇಶದಲ್ಲಿಯೇ ಹೆಚ್ಚಿನ ನೋಟಾ ಬಿದ್ದಿರುವದನ್ನು ಗಮನಿಸಿ ಅವರು ವ್ಯಕ್ತಪಡಿಸಿದ ಅಭಿಪ್ರಾಯ ತುಂಬಾ ಗಮನಾರ್ಹವೂ ಹೌದು. ಸದ್ಯದ ವರ್ತಮಾನದಲ್ಲಿ ಸಾಗುವ ರಾಷ್ಟ್ರೀಯ ಪಕ್ಷಗಳ ಧಾಟಿಯನ್ನು ಗಮನಿಸಿದರೆ ಬಿಜೆಪಿ ಭವಿಷ್ಯದಲ್ಲಿ ಟೊಳ್ಳಾಗುವ ಲಕ್ಷಣಗಳನ್ನು ಸರಿಯಾಗಿಯೇ ಅವರು ಗುರುತಿಸಿದ್ದಾರೆ.

ರಾಮ ಮನೋಹರ ಲೋಹಿಯಾ ದೇವರನ್ನು ನಂಬುತ್ತಿರಲಿಲ್ಲ. ಆದರೆ ಅವರು ಜನಸಾಮಾನ್ಯರು ದೇವಸ್ಥಾನಗಳಿಗೆ ಹೋಗಿ ಪಡೆಯುವ ಶಾಂತಿಯನ್ನು ತಾನು ಬೇರ್ಯಾವ ರೀತಿಯಿಂದಲೂ ಕೊಡಲಾರೆ ಎಂದಿದ್ದರು. ದೇವರು ಎನ್ನುವ ಪದಗಳಿಗೆ ಸಂಸ್ಕೃತಿ ಎನ್ನುವದನ್ನು ಬದಲಾಯಿಸಿ ಎರಡೂ ರಾಜಕೀಯ ಪಕ್ಷಗಳಿಗೆ ನೀಡಿದ ಕರೆಯನ್ನು ಆ ಪಕ್ಷಗಳು ಇನ್ನೂ ಗಮನಿಸಿಲ್ಲ; ಬಹುಶಃ ಗಮನಿಸಲಾರರದಷ್ಟು ಮೌಢ್ಯ ಅವರಲ್ಲಿ ತುಂಬಿಕೊಂಡಿದೆ. ಉಡುಪಿಯಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಹಿಜಾಬ್ ಎನ್ನುವದು ಇಂದು ಈ ಪಾಟಿ ಬೆಳೆದು ಸುಪ್ರೀಮ್ ಕೋರ್ಟಿನಲ್ಲಿಯೂ ಇನ್ನೂ ಪ್ರಶ್ನೆಯಾಗಿರುವದು ಅಪಕ್ವ ವ್ಯಕ್ತಿಗಳ ಹೊಣೆಗೇಡಿತನದಿಂದ ಎನ್ನುವದನ್ನು ಬರೆದ ಲೇಖನವನ್ನು ಅಡಳಿತದಲ್ಲಿರುವ ಬಿಜೆಪಿ ನಾಯಕರು ಗಮನಿಸಬೇಕಾಗಿತ್ತು. ಅದೇ‌ ರೀತಿ ಜಾಗತಿಕ ಕ್ಷಿತಿಜದಲ್ಲಿ ಮೂಡಿರುವ ವಿಸ್ತರಣಾ ವಾದದ ಕುರಿತು “ಮತ್ತೆ ವಿಸ್ತರಣಾವಾದದ ಸುಳಿಯಲ್ಲಿ ವಿಶ್ವ ಸಮುದಾಯ” ಹಾಗೂ “ಭಾರತ ತನ್ನ ಕ್ಷಾತ್ರ ಗುಣವನ್ನು ತೋರಿಸಲು ಇದು ಸಕಾಲ”  ಎನ್ನುವ ಲೇಖನದಲ್ಲಿದೆ. ಇವರು ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ ಅನೇಕ ಸಂಗತಿಗಳನ್ನು ಓದುವಾಗ ಅರುಣ್ ಶೌರಿ ಅವರ “Secular Agenda” ಎನ್ನುವ ಪುಸ್ತಕದ ನೆನಪಾಗುತ್ತದೆ. ನಿಷ್ಠುರವಾದ ಸತ್ಯ ಯಾರಿಗೂ ಇಷ್ಟವಲ್ಲ. ಆ ಪುಸ್ತಕದ ಮೊದಲನೆಯ ಭಾಗದಲ್ಲಿ ಅವರು One Nation ‌ ಎನ್ನುವಲ್ಲಿ ಭಾರತೀಯ ಇತಿಹಾಸವನ್ನು ಜಾಗತಿಕ ಇತಿಹಾಸದೊಂದಿಗೆ ಸಂಯೋಜಿಸಿರುವ ರೀತಿ ಮತ್ತು  matters of religion ಎನ್ನುವದನ್ನು ಸಂವಿಧಾನದ ಪರಿಚ್ಛೇದ 25, 26, 29 ಮತ್ತು 30ರಲ್ಲಿ ಅಸ್ಪಷ್ಟವಾಗಿ ವ್ಯಾಖ್ಯಾನಿಸಿರುವದನ್ನು ಭಾರತಾದ್ಯಂತ ಹೇಗೆ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿವೆ ಎನ್ನುವದನ್ನು ವಿವರಿಸುತ್ತಾರೆ. ಇಂತಹ ಸೂಕ್ಷ್ಮತೆ ಪತ್ರಿಕಾ ಸಂಪಾದಕನಿಗಿರಬೇಕಾಗಿರುವದು ಅತ್ಯಂತ ಆವಶ್ಯ. ವಿಸ್ತಾರ– 2ರ ಪ್ರತಿಯೊಂದೂ ಲೇಖನವೂ  ಈ ಹಿನ್ನೆಲೆಯಲ್ಲಿ ಮಹತ್ವವನ್ನು ಪಡೆಯುವದು ಈ ಕಾರಣಗಳಿಂದಾಗಿದೆ.

ಇದನ್ನೂ ಓದಿ | ವಿಸ್ತಾರ ಭಾಗ- 1 | ಹೊಸ ತಿಳಿವಿನ ಬಾಗಿಲು | ನೈತಿಕ ಶುದ್ಧತೆಯ ಬರಹಗಳು; ಹರಿಪ್ರಕಾಶ್‌ ಕೋಣೆಮನೆ ಅಂಕಣಗಳ ಸಂಗ್ರಹ

ಮತ್ತೊಂದು ಲೇಖನವಾದ “ಸಂಸ್ಕೃತ ಎಂದರೆ ಕೆಲವರಿಗೆ ಯಾಕಿಷ್ಟು ಉರಿ?”  ಎನ್ನುವಲ್ಲಿ ಭಾಷಾಶಾಸ್ತ್ರಜ್ಞರೂ ಮತ್ತೊಮ್ಮೆ ತಾವು ತಮ್ಮ ಸುತ್ತ ಬೆಳೆಸಿಕೊಂಡ ಪದರುಗಳಿಂದ ಹೊರಬರುವಂತೆ ಸಂಸ್ಕೃತದ ಕುರಿತು ಗಮನ ಸೆಳೆದಿದ್ದಾರೆ. ಅಂಬೇಡ್ಕರ, ಪಂ. ನೆಹರೂರಿಂದ ಹಿಡಿದು ಪಾ.ವೆಂ ಆಚಾರ್ಯರವರೆಗಿನ ಅವಲೋಕನವನ್ನು ಮಾಡುವಾಗ ಪಾವೆಂರಿಗಿರುವ ಸಂಸ್ಕೃತದ ಭಾಷೆಯ ಅನುಮಾನದ ಕುರಿತು ಸರ್ ವಿಲಿಯಮ್ ಜೋನ್ಸ್ ಎನ್ನುವ ಬ್ರಿಟಿಷ್‌ ಭಾಷಾಶಾಸ್ತಜ್ಞ ನೀಡಿರುವ ಪರಿಹಾರದ ಕುರಿತು ಹೇಳಿರುತ್ತಾರೆ. ಇವರ ಲೇಖನದ ಹರಿವು ಇವರ ಅಧ್ಯಯನದ ವಿಸ್ತಾರವೂ ಹೌದು. ಸಂಸ್ಕೃತಿ ಮತ್ತು ಸಾಮಾಜಿಕ ಕಾಳಜಿಯ ಕುರಿತು ಬರೆಯುವಾಗ ಇವರು ತಮಗೆ ಅನಿಸಿದ ಸಂಗತಿಗಳನ್ನು ಇಲ್ಲಿನ ನೆಲದ ಸಂಸ್ಕೃತಿಗಳ ಉದಾತ್ತತೆಯ ಜೊತೆ ಸಮೀಕರಿಸಿ ಹೇಳಿದ್ದಾರೆ. ಹಾಗಾಗಿ ಇವರಿಗೆ ಭಾಷೆಯಾಗಿ ಕನ್ನಡ, ಸಂಸ್ಕೃತ ಹಾಗೂ ಹಿಂದಿ ಇವೆಲ್ಲವೂ ಈ ನೆಲದ ಭಾಗಗಳಾಗಿವೆ. ಸಂವಿಧಾನ ಕರ್ತೃಗಳೂ ಅದನ್ನೇ ಹೇಳಿದ್ದಾರೆ. ಆದರೆ ಈ ಎಲ್ಲ ಭಾರತೀಯ ಭಾಷೆಗಳನ್ನು ಉದ್ಯೋಗ ಎನ್ನುವ ನೆಪದಿಂದ ನುಂಗಿ ಬೆಳೆಯುತ್ತಿರುವ ಇಂಗ್ಲೀಷಿನ ಮೋಹದ ಕುರಿತು ತುಂಬಾ ಮಹತ್ವದ ಸಂಗತಿಗಳನ್ನು ಗಮನ ಸೆಳೆದಿದ್ದಾರೆ. ಗಾಂಧಿ ಮತ್ತು ಭಾರತೀಯತೆ ಒಂದನ್ನೊಂದು ಬಿಡಲಾರದ ನಂಟು. ಗಾಂಧಿ ಚಿಂತನೆ ಇವರ ಮೇಲೆ ಬೀರಿದ ಪ್ರಭಾವ ಸಮಗ್ರ ಲೇಖನದಲ್ಲಿ ಅಲ್ಲಲ್ಲಿ ಕಾಣಬಹುದಾಗಿದೆ. ಮಾದ್ಯಮದಲ್ಲಿ ಕೆಲಸ ಮಾಡುವ ವ್ಯಕ್ತಿ ಸಮುದಾಯದಿಂದ ಪ್ರತ್ಯೇಕವಾದ ಭಾಗವಲ್ಲ. ಆತ ನಾಗರಿಕರ ಅಗತ್ಯಗಳೊಂದಿಗೆ ಪರಸ್ಪರ ಅವಲಂಬಿತನಾಗಿರುತ್ತಾನೆ. ಆದರೆ ಆತನಿಗೆ ವಿಶಿಷ್ಟವಾದ ಹೊಣೆಗಾರಿಕೆಯಿರುತ್ತದೆ. ಗಿಲ್ ಥೆಲೆನ್ ಎನ್ನುವ ಪ್ರಕಾಶಕ ಅದನ್ನು Committed Observer ಎಂದು ಕರೆಯುತ್ತಾನೆ. ಈ ಅರ್ಪಣಾ ಮನೋಭಾವದ ವೀಕ್ಷಕಗುಣ ಪತ್ರಕರ್ತರಿಗೆ ಸತ್ಯವನ್ನು ಪರಿಶೀಲಿಸಲು ಸಹಕಾರಿಯಾಗಿಸುತ್ತದೆ.  ಸತ್ಯಗಳನ್ನು ಪರಿಶೀಲಿಸುವ ಮತ್ತು ಅದರ ಸಮಾಜಮುಖಿ ಗುಣಗಳ ಅವಲೋಕನ ಪತ್ರಕರ್ತನಾದವನ ಬಹುಮುಖ್ಯ ಕಾರ್ಯವಾಗಿವೆ. ಸತ್ಯ ಮತ್ತು ನಿರ್ಧಾರ ಇವೆರಡರ ನಡುವಿನ ಸೇತುವೆಯಾಗಿ ಪತ್ರಕರ್ತನ ವರದಿ ಅಥವಾ ಅಂಕಣಗಳು ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಕೋಣೆಮನೆಯವರ ಅಂಕಣಗಳ “ವಿಸ್ತಾರ -2” ಓದಿದಾಗ ಹೊಣೆಯರಿತ ಸಂಪಾದಕನಾಗಿ ಅವರು ತಮ್ಮ ಹದವನ್ನು ಮೀರದೆ ಸತ್ಯವನ್ನು ಹೇಳಿದ್ದಾರೆ. ಆ ಕುರಿತು ನ್ಯಾಯ ತೀರ್ಮಾನವನ್ನು ಎಲ್ಲಿಯೂ ಹೇಳಿಲ್ಲ.

(ಲೇಖಕರು ಕತೆಗಾರ, ವಿಮರ್ಶಕ, ಯಕ್ಷಗಾನ ಅರ್ಥಧಾರಿ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಪಶ್ಚಿಮ ಬಂಗಾಳದ ಚುನಾಣಾ ಜಂಗಿ ಕುಸ್ತಿಯಲ್ಲಿ ಗೆಲವು ಯಾರಿಗೆ?

VISTARANEWS.COM


on

ಬೆಂಗಳೂರು: ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು ಚುರುಕಿನಿಂದ ಸಾಗಿದೆ. ತಮಿಳುನಾಡಿನ ಎಲ್ಲಾ 234 ಹಾಗೂ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ 152 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಈ ಹಿಂದಿನ ವಿಧಾನಭೆ ಚುನಾವಣೆಯಲ್ಲಿ ಮೊದಲ ಹಂತದ 122 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ಚುನಾವಣೆಯಲ್ಲಿ ಟಿಎಂಸಿ ಶೇ.47ರಷ್ಟು ಮತಗಳನ್ನು ಪಡೆದಿತ್ತು.

ಆದರೆ ಶೇ.40ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ 59 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಅಂದರೆ ಕಳೆದ ಚುನಾವಣೆಯಲ್ಲಿ ಈಗ ಮೊದಲ ಹಂತದ ಮತದಾನ ನಡೆಯುತ್ತಿರುವ 152 ಕ್ಷೇತ್ರಗಳಲ್ಲಿ, ಟಿಎಂಸಿ ಮತ್ತು ಬಿಜೆಪಿ ನಡುವೆ ಶೇ.7ರಷ್ಟು ಮತಗಳ ಅಂತರವಿತ್ತು. ಕಾಂಗ್ರೆಸ್ ಶೇ 4.33 ಹಾಗೂ ಸಿಪಿಎಂ ಶೇ.3.26ರಷ್ಟು ಮತಗಳಿಕೆಗಷ್ಟೇ ಸೀಮಿತವಾಗಿದ್ದವು. ಆದರೆ ಚಲಾವಣೆಯಾದ ಮತಗಳ ಒಟ್ಟು ಪ್ರಮಾಣ ಶೇ.82.64 ರಷ್ಟಿತ್ತು.

ಪಶ್ಚಿಮ ಬಂಗಾಳದಲ್ಲಿ ಈ ಬಾರಿ, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಈ ಬಾರಿ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಸಿಆರ್ ಪಿಎಫ್ ಮತ್ತಿತರ ಪ್ಯಾರ ಮಿಲಿಟರಿ ಪಡೆ ಯೋಧರನ್ನು ನಿಯೋಜಿಸಿದೆ.

ಪೊಲೀಸ್ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳು ಸ್ವಯಿಚ್ಚೆ ಮೇರೆಗೆ ಬೇರೆಡೆ ವರ್ಗವಾಗಿದ್ದಾರೆ. ಗಮನಾರ್ಹ ವಿಷಯವೇನೆಂದರೆ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 122 ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ತಲಾ 9 ಸಾವಿರ ಮಂದಿಯಂತೆ ಒಟ್ಟು 14 ಲಕ್ಷ ಮತದಾರರ ಹೆಸರಗಳನ್ನು ಸಾವನ್ನಪ್ಪಿರುವುದೂ, ನಕಲಿ ಮತದಾರರು ಸೇರಿದಂತೆ ವಿವಿಧ ಕಾರಣಗಳ ಮೇರೆಗೆ ಕೈ ಬಿಡಲಾಗಿದೆ.

ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ನಿರ್ಭೀತ ವಾತಾವರಣದಲ್ಲಿ ಶುದ್ಧ ಮತದಾರರಷ್ಟೇ ಮತಚಲಾಯಿಸುತ್ತಾರೆ ಎನ್ನುವುದಾದರೆ, ಒಟ್ಟಾರೆ ಮತ ಚಲಾವಣೆಯ ಪ್ರಮಾಣದಲ್ಲಿ ಭಾರಿ ಏರಿಕೆಯಾಗಬೇಕು, ಅದಾಗದಿದ್ದರೆ ಚುನಾವಣಾ ಆಯೋಗದ ವೈಫಲ್ಯವೇಂದೇ ಪರಿಗಣಿಸಬಹುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಮೊದಲ ಹಂತದ ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಟಕ್ಕರ್ ಕೊಡಲು ಸಾಧ್ಯ ಎಂದು ಹೇಳಲಾಗುತ್ತಿದೆ. ಏಕೆಂದರೆ ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಟಿಎಂಸಿಯ ಪ್ರಾಬಲ್ಯವಿದೆ ಎಂದೆನ್ನಲಾಗುತ್ತಿದೆ.

ಇನ್ನು ಬಿಜೆಪಿ ಮತ್ತು ಟಿಎಂಸಿ ಪಕ್ಷಗಳ ನಡುವಿನ ಬಲಾಬಲ ಮತ್ತು ದೌರ್ಬಲ್ಯಗಳನ್ನು ಅವಲೋಕಿಸುವುದಾರೆ, ಬಿಜೆಪಿ ಕೇಂದ್ರದಲ್ಲಿ ಆಡಳಿತರೂಢ ಪಕ್ಷವಾಗಿರುವುದರಿಂದ ಸಹಜವಾಗಿ ಸಿಬಿಐ, ಇ.ಡಿ ನಂತಹ ತನಿಖಾ ಸಂಸ್ಥೆಗಳು ಹಾಗೂ ಸಿಆರ್ ಪಿ ಎಫ್ ಮತ್ತಿತರ ಪ್ಯಾರಾಮಿಲಿಟರಿ ಪಡೆಗಳು ಮಿಗಿಲಾಗಿ ಚುನಾವಣಾ ಆಯೋಗ ನೀಡಿರುವ ಸಾಥ್ ಮತ್ತಿತರ ಅಂಶಗಳು ಬಿಜೆಪಿ ಪಾಲಿಗೆ ವರವಾಗಬಹುದು ಎಂದೆನ್ನಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ಟಿಎಂಸಿಗೆ ಆಡಳಿತ ವಿರೋಧಿ ಅಲೆಯ ಆತಂಕವಿದೆ. ಮುಖ್ಯವಾಗಿ ಮಹಿಳೆಯರಿಗೆ ಮಮತಾ ಸರ್ಕಾರ ನೀಡುತ್ತಿರುವ ಮಾಸಿಕ ಒಂದೂವರೆ ಸಾವಿರ ರೂಪಾಯಿ ಮೊತ್ತವನ್ನು ಮಾಸಿಕ ಮೂರು ಸಾವಿರ ರೂಪಾಯಿಗೇರಿಸುವ ಭರವಸೆಯನ್ನು ಕಮಲ ಪಾಳೆಯ ನೀಡಿರುವುದು ಮಹಿಳಾ ಮತದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.

ಹಾಗೆ ನೋಡಿದರೆ ಪಶ್ಚಿಮಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿ ಕೇಡರ್ ಗಳ ತೀವ್ರ ಕೊರತೆಯನ್ನು ಬಿಜೆಪಿ ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಮುಸ್ಲಿಂ ಮತದಾರರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಕಡಿತ ಟಿಎಂಸಿ ಪಕ್ಷದ ನಿದ್ದೆಗೆಡಿಸಿದೆ ಎನ್ನಲಾಗಿದೆ.

ಒಟ್ಟಾರೆ, ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವೆ ಸಮಪ್ರಮಾಣದ ಜಂಗಿ ಕುಸ್ತಿ ನಡೆದಿದೆ. ಯಾರೇ ಗೆದ್ದರೂ ಮತಗಳಿಕೆಯ ಪ್ರಮಾಣ ಅತ್ಯಲ್ಪ ಎಂದೆನ್ನಲಾಗುತ್ತಿದೆ.

Continue Reading

ಪ್ರಮುಖ ಸುದ್ದಿ

ವಿಭಿನ್ನ ಕಾರ್ಯಯೋಜನೆಯೊಂದಿಗೆ ಸಮಾಜದ ಪ್ರತಿನಿಧಿ ರೂಪದಲ್ಲಿ ಸಿದ್ಧಗೊಳ್ಳುತ್ತಿದೆ ಪಿಎನ್‌ಎಸ್‌ ವಿಸ್ತಾರ ನ್ಯೂಸ್-ಹೆಚ್.ಜಿ ಪವಿತ್ರ ಗೌಡ

VISTARANEWS.COM


on


ಜೈ ಶ್ರೀ ಗುರುದೇವ್‌,
ನಾಡಿನ ಎಲ್ಲಾ ಕನ್ನಡದ ಸೃಜನಶೀಲ ಮನಸುಗಳಿಗೆ ನಮಸ್ಕಾರ.
ಭಾಷೆ ನಮ್ಮ ಬದುಕು, ಭಾಷೆಯೊಂದಿಗೆ ಅನುಸಂಧಾನ ಮಾಡಿಕೊಂಡು ಕೆಲಸ ಮಾಡುವ ಮಾಧ್ಯಮವೇ ಪತ್ರಿಕೋದ್ಯಮ. ಪತ್ರಿಕಾ ಮಾಧ್ಯಮದಲ್ಲಿ ಸೇವೆ ಸಲ್ಲಿಸಬೇಕು ಎನ್ನುವುದು ನನ್ನ ಹಲವು ಕಾಲದ ಅಭಿಲಾಷೆಯಾಗಿತ್ತು. ಪರಮಾತ್ಮನ ದಯೆಯಿಂದ ಹಾಗೂ ಗುರುಗಳ ಕೃಪೆಯಿಂದ ಆ ಸದವಕಾಶ ಈಗ ಒದಗಿ ಬಂದಿದೆ. ಕನ್ನಡಿಗರ ಧ್ವನಿಯಾಗಿ ಮುಖ್ಯವಾಹಿನಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಲು ನಾವು ʻಪಿಎನ್‌ಎಸ್‌ ವಿಸ್ತಾರʼ ಸುದ್ದಿವಾಹಿನಿಯನ್ನು ಪುನರಾರಂಭಿಸುತ್ತಿದ್ದೇವೆ. ʻಪಿಎನ್‌ಎಸ್‌ ವಿಸ್ತಾರʼ ನ್ಯೂಸ್‌ ಕನ್ನಡ ಟಿವಿ ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೆ ತನ್ನದೇ ಆದ ಒಂದು ಬ್ರಾಂಡ್‌ ಸೃಷ್ಟಿಸಿಕೊಂಡಿದ್ದ ಸುದ್ದಿ ವಾಹಿನಿ, ಕಾರಣಾಂತರಗಳಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಒಂದು ವಿಶೇಷ ಹಾಗೂ ವಿಭಿನ್ನ ಕಾರ್ಯಯೋಜನೆಯೊಂದಿಗೆ ನಾವು ಮರಳಿ ಬರುತ್ತಿದ್ದೇವೆ. ಕನ್ನಡ ನಾಡಿನ ಬಂಧುಗಳ ಕಷ್ಟ-ನಷ್ಟಗಳ ಕುರಿತು ವಸ್ತುನಿಷ್ಟ ವರದಿ ಮಾಡಲು, ಕನ್ನಡ ನಾಡಿನ ಸಂಸ್ಕೃತಿ ಸಾರಗಳನ್ನು ಜಗತ್ತಿನಾದ್ಯಂತ ಪಸರಿಸಲು, ಕನ್ನಡದ ನುಡಿಸಿರಿಯ ವೈವಿಧ್ಯತೆಯನ್ನು ವರ್ಣಿಸಲು ಸರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸುದ್ದಿ ಜಗತ್ತಿನ ನಿಖರ ವರ್ತಮಾನಗಳನ್ನು ನಿರ್ಭೀತಿಯಿಂದ ನಿಮ್ಮ ಮುಂದಿಡಲು ನಾವು ಸಿದ್ಧರಾಗಿದ್ದೇವೆ. ಜನಸಾಮಾನ್ಯರ ಪ್ರತಿನಿಧಿಯಾಗಿ ಆಳುವ ಪ್ರಭುತ್ವವನ್ನು ಧೈರ್ಯದಿಂದ ಪ್ರಶ್ನಿಸಲು ನಾವು ಸಿದ್ಧರಾಗಿದ್ದೇವೆ. ಕರ್ನಾಟಕದ ನಾಡು-ನುಡಿ, ನೆಲ, ಜಲ, ಸಂಸ್ಕೃತಿಗಳ ಹಿತರಕ್ಷಣೆಗಾಗಿ ಸಂಕಲ್ಪಿಸಿಕೊಂಡಿದ್ದೇವೆ. ನಾವು ಕೇವಲ ಸುದ್ದಿಗಳನ್ನು ಪ್ರಾಮಾಣಿಕವಾಗಿ ವರದಿ ಮಾಡುತ್ತೇವೆ. ಮಾಹಿತಿಯೊಂದಿಗೆ ಮನೋರಂಜನೆ ಎಂಬ ವಿಶೇಷ ಆಯಾಮವನ್ನು ನಮ್ಮ ಮಾಧ್ಯಮದಲ್ಲಿ ಪ್ರಸ್ತುತ ಪಡಿಸಲಿದ್ದೇವೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿರುವ ಹಿರಿಯ, ಅನುಭವಿ, ಪ್ರಾವೀಣ್ಯತೆ ಹೊಂದಿರುವ ತಂಡ ನಮ್ಮೊಂದಿಗೆ ಕೆಲಸ ಮಾಡುತ್ತಿದೆ. ಪ್ರಸ್ತುತ ವಿದ್ಯಮಾನ, ರಾಜಕೀಯ, ಸಿನಿಮಾ-ಕಲೆ, ಕ್ರೀಡೆ, ಸಂಸ್ಕೃತಿ-ಸಂಪ್ರದಾಯ, ಆಚಾರ-ವಿಚಾರ, ಜೀವನಶೈಲಿ, ಇತಿಹಾಸ-ಪುರಾಣ, ಪದ್ಧತಿ-ಪರಂಪರೆ, ಭಾಷೆಯ ಸೊಗಡು ಮತ್ತು ಆಹಾರ ಕ್ರಮಗಳು, ನದಿ- ಪರಿಸರ ಅರಣ್ಯ- ಜೀವವೈವಿಧ್ಯ ಸೇರಿದಂತೆ ಹತ್ತಾರು ವಿಷಯಗಳ ಬಗ್ಗೆ ನಾವು ನಮ್ಮ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ನಿಮ್ಮ ಮುಂದೆ ತರಲಿದ್ದೇವೆ. ನಮ್ಮ ನಾಡಿನ ಕ್ರಿಯಾಶೀಲ, ಸೃಜನಶೀಲ ಮನಸುಗಳಿಗೆ ಅತ್ಯಂತ ಆಹ್ಲಾದಕಾರಿ ಸುದ್ದಿ ಸಂಗತಿಗಳನ್ನು ಉಣಬಡಿಸಬೇಕು ಅನ್ನುವುದಷ್ಟೆ ನಮ್ಮ ಕಳಕಳಿ. ಈ ನಿಟ್ಟಿನಲ್ಲಿ ನಮ್ಮ ʻಪಿಎನ್‌ಎಸ್‌ ವಿಸ್ತಾರʼ ನ್ಯೂಸ್‌ ತಂಡ ಕಳೆದ ಕೆಲವು ತಿಂಗಳಿನಿಂದ ಕಠಿಣ ಪರಿಶ್ರಮ ನಡೆಸುತ್ತಿದೆ. ಎಲ್ಲಾ ವಯೋಮಾನದವರ, ಎಲ್ಲಾ ವರ್ಗದವರ ಮತ್ತು ಎಲ್ಲಾ ರೀತಿಯ ಮನಸ್ಥಿತಿಯ ಜನಸಮುದಾಯವನ್ನು ತಲುಪಬೇಕು ಅನ್ನುವುದು ನಮ್ಮ ಹಿರಿಯಾಸೆ. ಕನ್ನಡಿಗರ ಆದ್ಯತೆಯ ವಿಷಯಗಳನ್ನು ಆಯ್ದು ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡಲು ಕಾರ್ಯಯೋಜನೆ ರೂಪಿಸಿಕೊಂಡಿದ್ದೇವೆ. ಈಗ ಬೇಕಿರುವುದು ನಿಮ್ಮ ಶುಭ ಹಾರೈಕೆ ಮಾತ್ರ. ನೀವು ನಮ್ಮೊಂದಿಗಿರಿ ಸಾಕು, ನಾವು ನಿಮಗಾಗಿ ದಿನದ ೨೪ ಗಂಟೆ, ವಾರದ ೭ ದಿನ, ವರ್ಷದ ೩೬೫ ದಿನಗಳು ಸೇವೆ ಸಲ್ಲಿಸಲು ಶತಸಿದ್ಧ.

ಕರುನಾಡಿನ ಸಮಸ್ತ ಕನ್ನಡಿಗರಿಗೆ ನನ್ನ ಧನ್ಯವಾದಗಳು

ಸದಾ ನಿಮ್ಮ ಸೇವೆಯಲ್ಲಿ.
-ಹೆಚ್.ಜಿ ಪವಿತ್ರ ಗೌಡ, ‌ಸಿಇಒ, ಪಿಎನ್‌ಎಸ್‌ ವಿಸ್ತಾರ ನ್ಯೂಸ್

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧ ಹೇಗಿತ್ತು?

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧದ ಅಪರೂಪದ ಸನ್ನಿವೇಶ ಇಲ್ಲಿದೆ. ವಾನರೇಂದ್ರನ ಮಂತ್ರಿ ಕೋಸಲೇಂದ್ರನ ದಾಸನಾದ ಪ್ರಸಂಗವಿದು.

VISTARANEWS.COM


on

dhavala dharini column Hanuman's setubandha to meet Sugriva in ramayana by narayana yaji

ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧದ ಅಪರೂಪದ ಸನ್ನಿವೇಶ

dhavala dharini by Narayana yaji

ಧವಳ ಧಾರಿಣಿ ಅಂಕಣ: ಭವತಾ ಸಖ್ಯಕಾಮೌ ತೌ ಭ್ರಾತರೌ ರಾಮಲಕ್ಷ್ಮಣೌ.
ಪ್ರತಿಗೃಹ್ಯಾರ್ಚಯಸ್ವೈತೌ ಪೂಜನೀಯತಮಾವುಭೌ৷৷ ಕಿ.5.7৷৷

ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು

ರಾಮಾಯಣದ ಕಿಷ್ಕಿಂಧಾಕಾಂಡದಿಂದ ತೊಡಗಿ ಯುದ್ಧ ಕಾಂಡದಕೊನೆಯ ತನಕ ಸುಗ್ರೀವ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. ಅನೇಕ ಸಲ ಆತನ ವ್ಯಕ್ತಿತ್ವ ಮರ್ಕಟ ಸ್ವಭಾವಕ್ಕೆ ಅನುಗುಣವಾಗಿದೆ. ವಾಲಿಯನ್ನು ಸಂಹರಿಸಿದ ನಂತರದಲ್ಲಿ ಸೀತಾನ್ವೇಷಣೆಗೆ ಪ್ರಾರಂಭಿಸಿದನೋ, ಅಲ್ಲಿಂದ ಆತ ತುಂಬಾ ಪ್ರೌಢತ್ವದಿಂದಲೇ ವ್ಯವಹರಿಸುತ್ತಾನೆ. ಸುಗ್ರೀವನ ಜೊತೆ ರಾಮನ ಸಖ್ಯದಲ್ಲಿ ಆತನ ವ್ಯವಹಾರ ಮೇಲ್ನೋಟಕ್ಕೆ ಚಂಚಲತೆಯಿಂದ ಕೂಡಿತ್ತು ಎಂದು ತೋರಿದರೂ ವಾಸ್ತವವಾಗಿ ಆತ ಸೂಕ್ಷ್ಮವಾಗಿ ಎದುರಾದವರನ್ನು ಅಭ್ಯಸಿಸುತ್ತಿದ್ದ. ವಾಲಿ ಆತನನ್ನು ರಾಜ್ಯದಿಂದ ಹೊರಗಟ್ಟಿ ಆತನನ್ನು ಕೊಲ್ಲಬೇಕೆಂದು ಇಡೀ ಪ್ರಪಂಚವನ್ನೆಲ್ಲಾ ಓಡಾಡಿಸಿದ ವಿಷಯವನ್ನು ಸವಿಸ್ತಾರವಾಗಿ ಹಿಂದಿನ ಸಂಚಿಕೆಯಲ್ಲಿ ಗಮನಿಸಿದ್ದೇವೆ. ಮತಂಗ ಋಷಿಯ ಶಾಪದ ಕಾರಣಕ್ಕೆ ವಾಲಿಗೆ ಮತಂಗಾಶ್ರಮವಿರುವ ಋಷ್ಯಮೂಕ ಪರ್ವತವನ್ನು ತನ್ನ ಅಡಗುದಾಣವನ್ನಾಗಿಸಿಕೊಂಡ. ಋಷ್ಯಮೂಕ ಪರ್ವತಕ್ಕೆ ಆ ಹೆಸರು ಬಂದಿರುವುದಕ್ಕೆ ಕಾರಣ ಅದು ತಪಸ್ವಿಗಳ ಜ್ಞಾನಾರ್ಜನಗೆ ಹೇಳಿ ಮಾಡಿಸಿದ ಸ್ಥಳವಾಗಿತ್ತು ಎನ್ನುವ ಕಾರಣಕ್ಕಾಗಿ. ಋಷೀಣಾಂ ತತ್ರ ಪ್ರಾಪ್ವಾನಾಂ ಅಮೂಕಃ- ಅಲ್ಲಿಗೆ ಹೋದ ಋಷಿಗಳ ಅಜ್ಞಾನವು ಹೋಗಿಬಿಡುತ್ತಿತ್ತು ಹಾಗಾಗಿ ಆ ಪರ್ವತಕ್ಕೆ ಋಷ್ಯಮೂಕವೆನ್ನುವ ಹೆಸರು ಬಂತು. ಮೌನಿಗಳಾದ ಋಷಿಗಳ ಪರ್ವತ ಎನ್ನುವ ಇನ್ನೊಂದು ಅರ್ತವೂ ಋಷ್ಯಮೂಕಕ್ಕೆ ಇದೆ. ಅಲ್ಲಿ ಮತಂಗ ಮುನಿಗಳು ಮೌನವಾಗಿಯೇ ತಪಸ್ಸಿಗೆ ಕುಳಿತಿರುತ್ತಿದ್ದರು.

ದುಂದುಭಿಯಂತಹ ರಾಕ್ಷಸನನ್ನು ಕೊಂದು ವಾಲಿ ಲೋಕಕ್ಕೆ ಉಪಕಾರವನ್ನು ಮಾಡಿದರೂ ಆತನಿಗೆ ಶಾಪ ಏತಕ್ಕೆ ಬಂತು ಎಂದು ಅನುಕಂಪ ಬರುವುದು ಸಹಜ. ವಾಲಿ ಮತ್ತು ದುಂದುಭಿಯ ಜಗಳದ ಹಿನ್ನೆಲೆಯನ್ನು ಗಮನಿಸಬೇಕು. ದುಂದುಭಿ ಕೋಣನ ಆಕಾರವನ್ನು ಹೊಂದಿದ್ದ ರಾಕ್ಷಸ. ಆತನಿಗೆ ಸಾವಿರ ಆನೆಯ ಬಲವಿತ್ತು. ತನ್ನ ಪರಾಕ್ರಮವನ್ನು ತೋರುವ ಹುಚ್ಚು. ಆ ಕಾರಣಕ್ಕಾಗಿ ಆತ “ಮಹ್ಯಂ ಯುದ್ಧ ಪ್ರಯಚ್ಛ- ನನಗೆ ಯುದ್ಧದ ಆತಿಥ್ಯವನ್ನು ನೀಡಿ” ಎಂದು ಎಲ್ಲಾ ಬಲಶಾಲಿಗಳ ಹತ್ತಿರ ಹೋಗಿ ಕೇಳಿದ್ದ. ಮೊದಲು ಆತ ಹೋಗಿದ್ದು ಸಮುದ್ರ ರಾಜನಲ್ಲಿಗೆ.

ಮುದ್ರದೊಡಯನಿಗೆ ಆತನೊಡನೆ ಯುದ್ಧ ಮಾಡುವ ಸಾಮರ್ಥ್ಯವಿಲ್ಲವೆಂದು ಅರ್ಥವಲ್ಲ; ಇದು ವೃಥಾ ಜಗಳ, ಅದರಿಂದ ತನ್ನೊಡಲಲ್ಲಿದ್ದ ಜಲಚರಗಳಿಗೆ ತೊಂದರೆಯಾಗುತ್ತದೆ ಎಂದು ಆತ ಪರ್ವತಗಳ ರಾಜನಾದ ಹಿಮವಂತನನ್ನು ತೋರಿಸಿದ. ಆತ ದುಂದುಭಿಯ ಆಹ್ವಾನವನ್ನು ನಿರಾಕರಿಸುವ ಕಾರಣ ತನ್ನಲ್ಲಿ ಸತ್ವಗುಣಶೀಲರಾದ ತಪಸ್ವಿಗಳು ತಪಸ್ಸನ್ನು ಮಾಡುತ್ತಿದ್ದಾರೆ. ಅವರ ತಪಸ್ಸಿಗೆ ಭಂಗಬಾರದೆನ್ನುವಕಾರಣಕ್ಕಾಗಿ ಜಗಳಕ್ಕೆ ಬರಲು ಒಪ್ಪುವುದಿಲ್ಲ. ಜಗಳವೆನ್ನುವುದು ಇನ್ನೊಬ್ಬರ ಶಾಂತತೆಗೆ ಭಂಗತರುವಂತಹುದಾಗಬಾರದು ಎನ್ನುವ ವಿವೇಕ ಇರಬೇಕು. ಸಮುದ್ರರಾಜನಾಗಲಿ, ಹಿಮವಂತನಾಗಲೀ ದುಂದುಭಿಯ ಯುದ್ಧಾಹ್ವಾನವನ್ನು ತಿರಸ್ಕರಿಸಿದರು ಎಂದ ಕಾರಣಕ್ಕೆ ಅವರು ಸಣ್ಣವರೇನೂ ಆಗಲಿಲ್ಲ. ವಾಲಿ ಜಗಳಕ್ಕೆ ಒಪ್ಪಿದ್ದೂ ಅಲ್ಲದೇ ಯುದ್ಧಮಾಡಿ ಆ ರಾಕ್ಷಸನನ್ನು ಕೊಂದಮೇಲೆ ಆತನ ದೇಹವನ್ನು ಒಂದು ಯೋಜನದಷ್ಟು ದೂರ ಎಸೆದನು. ಆಗ ಸಿಡಿದ ರಕ್ತದ ಹನಿಗಳೂ ಮತಂಗ ಆಶ್ರಮದಲ್ಲಿ ಬಿದ್ದು ಆಶ್ರಮ ಮಲಿನವಾಯಿತು. ಸತ್ತಮೇಲೆ ವೈರವಿರಕೂಡದು ಎನ್ನುತ್ತದೆ ಧರ್ಮಶಾಸ್ತ್ರ. ವಾಲಿ ಸತ್ತಮೇಲೆಯಾಗಲೀ, ರಾವಣ ಸತ್ತಮೇಲೆಯಾಗಲಿ ಅವರ ಕಳೇಬರಕ್ಕೆ ರಾಮ ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ಮಾಡಿಸುತ್ತಾನೆ. ವಿಭೀಷಣ ರಾವಣನ ಸಂಸ್ಕಾರಕ್ಕೆ ಒಪ್ಪದಿದ್ದರೆ ತಾನೇ ರಾವಣನ ಅಂತ್ಯಸಂಸ್ಕಾರವನ್ನು ಮಾಡುತ್ತೇನೆ ಎನ್ನುತ್ತಾನೆ. ಮತಂಗರು ಶಾಪವನ್ನು ಕೊಡುವಾಗ ಹೇಳುವ ಮಾತು

ಯೇನಾಹಂ ಸಹಸಾ ಸ್ಪೃಷ್ಟಶ್ಶೋಣಿತೇನ ದುರಾತ್ಮನಾ.

ಕೋಯಂ ದುರಾತ್ಮಾ ದುರ್ಭುದ್ಘಿರಕೃತಾತ್ಮಾ ಚ ಬಾಲಿಶಃ II ಕಿ.11.50৷৷

ನನ್ನನ್ನು ಅಪವಿತ್ರವಾದ ರಕ್ತದ ಮೂಲಕ ಮುಟ್ಟಿದ ದುರಾತ್ಮನು ಯಾವನು. ಮೂಢನಾದ, ದುರಾತ್ಮನಾದ, ದುರ್ಬುದ್ಧಿಯುಳ್ಳ, ಜಿತೇಂದ್ರಿಯನಲ್ಲದ (ಅಕೃತಾತ್ಮಾ) ಆ ಮೂರ್ಖನು ಯಾರಾಗಿಬಹುದು”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

ಇಲ್ಲಿ ಜಿತೇಂದ್ರಿಯ ಎನ್ನುವ ಶಬ್ಧವನ್ನು ಬಳಸಿದ್ದಾರೆ. ಮೈತೀಟೆಯನ್ನು ತೀರಿಸಿಕೊಳ್ಳುವುದಕ್ಕೆ ಯುದ್ಧವಲ್ಲ. ಲೋಕ ಹಿತಕ್ಕಾಗಿ ಯುದ್ಧ ಅಪರಾಧವಲ್ಲ. ಇಲ್ಲಿ ವಾಲಿ ಕೇವಲ ರಕ್ತದಿಂದ ಆಶ್ರಮವನ್ನು ಮಲಿನಮಾಡಿದ್ದಲ್ಲ. ಪರ್ವತಮಯವಾದ ದುಂದುಭಿಯ ದೇಹವನ್ನು ಬಿಸುಟು ಆಶ್ರಮದ ವೃಕ್ಷಗಳೆಲ್ಲವನ್ನೂ ಧ್ವಂಸಮಾಡಿದ್ದಾನೆ. ಅವರಿಗೆ ಈ ಕೃತ್ಯವನ್ನು ನಡೆಸಿದವ ವಾಲಿ ಎನ್ನುವುದು ತಿಳಿಯಿತು. “ಯಾವಾತ ಈ ಕೃತ್ಯವನ್ನು ಎಸಗಿದವೋ ಆತನೇನಾದರೂ ಇನ್ನುಮುಂದೆ ಈ ಆಶ್ರಮದ ಪ್ರದೇಶಕ್ಕೆ ಬಂದರೆ ಇಲ್ಲಿಯೇ ಮರಣ ಹೊಂದುವನು. ಪುತ್ರನಂತೆ ಅಕ್ಕರೆಯಿಂದ ಬೆಳೆಸಿದ ಅವರ ಆಶ್ರಮದ ಗಡ್ಡೆಗೆಣಸುಗಳ ವಿನಾಶಾರ್ಥವಾಗಿ ಆತನ ಮಂತ್ರಿಗಳೇನಾದರೂ ಆತನ ಆಶ್ರಮದ ಪರಿಸರದಲ್ಲಿದ್ದರೆ ಅವರು ಒಂದು ದಿನಗಳೊಳಗಾಗಿ ಆ ಪ್ರದೇಶದಿಂದ ಹೊರಟುಬಿಡಬೇಕು. ಹೋಗದೇ ಉಳಿದರೆ ಅಂತವರು ಹಲವಾರು ಸಾವಿರ ವರುಷಗಳ ಕಾಲ ಕಲ್ಲಾಗಿಬಿಡುವರು” ಎನ್ನುವ ಶಾಪ ಕೊಟ್ಟರು. ವಿಷಯ ಅರಿತ ವಾಲಿ ಓಡೋಡಿ ಬಂದು ಮತಂಗ ಮುನಿಗಳಿಗೆ ತನ್ನನ್ನು ಕ್ಷಮಿಸಿ ಎಂದರೂ ಅವರು ಕ್ಷಮಿಸದೇ ಆಶ್ರಮವನ್ನೇ ಬಿಟ್ಟು ಹೊರಟುಹೋದರು. ಆ ನಂತರದಲ್ಲಿ ವಾಲಿಯಾಗಲೀ ಆತನ ಕಡೆಯವರಾಗಲೀ, ಶಾಪದ ಭಯದಿಂದ ಮತಂಗಾಶ್ರಮದ ಪರಿಸರಕ್ಕೆ ಬರುತ್ತಿರಲಿಲ್ಲ. ವಾಲಿ ಸುಗ್ರೀವ ಎಲ್ಲಿಯೇ ಅಡಗಿದ್ದರೂ ಆತನನ್ನು ಹುಡುಕಿ ಕೊಲ್ಲಲು ಬರುತ್ತಿದ್ದ ಎಂದು ಅನಿಸುತ್ತದೆ. ತನ್ನ ಜೀವ ಉಳಿಸಿಕೊಳ್ಳಲು ಸುಗ್ರೀವ ಪ್ರಪಂಚದ ಎಲ್ಲಾ ಕಡೆ ನಿರಂತರವಾಗಿ ಎಲ್ಲಿಯೂ ನಿಲ್ಲದೇ ಹಾರುತ್ತಿದ್ದ. ಶಾಪದ ಘಟನೆ ಹನುಮಂತನಿಗೆ ಅದುಹೇಗೋ ತಿಳಿಯಿತು. ಆತ ಈ ವಿಷಯವನ್ನು ಸುಗ್ರೀವನಿಗೆ ಹೇಳಿದ. ಮತಂಗಮುನಿಗಳ ಶಾಪದ ಕಾರಣದಿಂದ ಋಷ್ಯಮೂಕ ಪರ್ವತ ಸುಗ್ರೀವನಿಗೆ ಸುರಕ್ಷಿತ ತಾಣವಾಗಿ ಉಳಿಯಿತು. ಸುಗ್ರೀವ ತನ್ನ ಹತ್ತಿರವೇ ಬಂದು ಉಳಿದದ್ದು ನೋಡಿದ ವಾಲಿಗೆ ಮೈ ಪರಚಿಕೊಳ್ಳುವಂತಾಗಿದ್ದಂತೂ ಸತ್ಯ.

ಲಕ್ಷ್ಮಣನಿಂದ ಸಮಾಧಾನಿಸಲ್ಪಟ್ಟ ರಾಮ ಋಷ್ಯಮೂಕ ಪರಿಸರದಲ್ಲಿ ತಿರುಗಾಡುತ್ತಿರುವುದನ್ನು ದೂರದಲ್ಲಿಯೇ ನೋಡಿದ ಸುಗ್ರೀವನಿಗೆ ನಡುಕ ಉಂಟಾಯಿತು. ಅವರ ತೇಜಸ್ಸು ಆತನನ್ನು ಭಯಪಡಿಸಿತು. ವಾಲಿಯೇನಾದರೂ ತನ್ನನ್ನು ಕೊಲ್ಲಲು ಬೇರೆಯವರನ್ನು ಕಳುಹಿಸಿರಬಹುದೆನ್ನುವ ಸಂಶಯದಿಂದ ಆತನ ಚಲನವಲನಗಳೇ ನಿಂತು ಹೋಯಿತು. ಆತ ಹೆದರಿಕೆಯಿಂದ ಏನು ಮಾಡುವುದು ಎಂದು ತಿಳಿಯದೇ ಒಂದು ಪರ್ವತದಿಂದ ಇನ್ನೊಂದು ಪರ್ವತಕ್ಕೆ ಹಾರತೊಡಗಿದ. ಆಗ ಹನುಮಂತ ಸುಗ್ರೀವನಿಗೆ ಸಮಾಧಾನವನ್ನು ಹೇಳಿ “ನೀನು ರಾಜನಾದವನು, ಹೀಗೆ ಹೆದರಕೂಡದು. ಚನ್ನಾಗಿ ಆಲೋಚಿಸಿ ಅವರ ಹಾವ ಭಾವವನ್ನು ತಿಳಿದು ಶತ್ರುವೋ ಅಲ್ಲವೋ ಎನ್ನುವುದನ್ನು ತಿಳಿಯಬೇಕೆನ್ನುತ್ತಾನೆ. ಸುಗ್ರೀವ ಹನುಮಂತನಿಗೆ ಬಂದವರು ಯಾರು ಎಂದು ತಿಳಿದುಕೊಂಡು ಬರಲು ಕಳಿಸುತ್ತಾನೆ.

ನಮ್ಮ ರಾಜ್ಯದ ಆನೆಗೊಂದಿಯಲ್ಲಿ ಹನುಮಂತ ಮೊದಲು ರಾಮ ಲಕ್ಷ್ಮಣರನ್ನು ಭೆಟ್ಟಿಮಾಡಿರುವುದು. ಇಲ್ಲಿಯತನಕ ಸುಗ್ರೀವನ ಸಚಿವನಾಗಿದ್ದ ಹನುಮಂತ ಇಲ್ಲಿಂದ ಮುಂದೆ “ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ” ಎಂದು ಪ್ರಸಿದ್ದನಾಗುವುದಕ್ಕೆ ಪೀಠಿಕೆ ಇದು. ಕಪಿಯ ರೂಪದಲ್ಲಿದ್ದರೆ ಯಾರಿಗೂ ನಂಬಿಕೆ ಹುಟ್ಟಲು ಸಾಧ್ಯವಿಲ್ಲವೆಂದು ಹನುಮಂತ ಬಿಕ್ಷುವಿನ ರೂಪದಲ್ಲಿ ರಾಮನ ಪರಿಚಯವನ್ನು ಕೇಳುತ್ತಾನೆ. ಕಿಷ್ಕಿಂಧಾ ಕಾಂಡದ 3 ನೆಯ ಸರ್ಗದಲ್ಲಿ ಹನುಮಂತ ರಾಮನ್ನು ಮಾತಾಡಿಸುವಾಗ ಉಪಯೋಗಿಸುವ ಭಾಷೆ, ದೇಹದ ಭಂಗಿ, ವಿನೀತ ಭಾವ, ತನ್ನ ಒಡೆಯನ ಕುರಿತು ಗೌರವ ಇವೆಲ್ಲವೂ ಸಮ್ಮಿಳಿತವಾಗಿದ್ದವು. ದೀರ್ಘವಾಗಿ ಮಾತಾಡಿದ್ದರಲ್ಲಿ ಒಂದೇ ಒಂದು ಅಪಶಬ್ಧವೂ ಇಲ್ಲವಾಗಿತ್ತು. ದೇಹದ ಯಾವ ಅವಯವಗಳಲ್ಲಿಯೂ ಯಾವುದೇ ದೋಷವಿರಲಿಲ್ಲ. ವಿಷಯನಿರೂಪಣೆಯಲ್ಲಿ ವಿಸ್ತಾರವಿರಲಿಲ್ಲ. ಸಮಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದ್ದನು. ಸಂಶಯಕ್ಕೆಡೆಮಾಡುವಂತಹ ಯಾವ ಮಾತನ್ನೂ ಆತ ಆಡಲಿಲ್ಲ. ಮದ್ಯಸ್ವರದಲ್ಲಿ ವ್ಯಾಕರಣದಿಂದ ಸಂಸ್ಕೃತವಾದ ಶಬ್ದಗಳನ್ನು ಬಳಸಿ ಯಾವ ಯಾವ ವಾಕ್ಯಗಳನ್ನು ಎಲ್ಲೆಲ್ಲಿ ಆಡಬೇಕೋ ಅದನ್ನು ಮಾತ್ರವೇ ಆಡಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಕೇಳುವವರ ಮನಸ್ಸಿಗೆ ಹರ್ಷವನ್ನುಂಟುಮಾಡುವ ಶುಭಕರವಾದ ಮಾತುಗಳನ್ನೇ ಆಡಿದ್ದ. ಇಲ್ಲಿ ಒಂದು ಸಂಶಯ ಬರುತ್ತದೆ. ಅಷ್ಟೊಂದು ಸುಂದರವಾಗಿ ಮಾತನಾಡಿದ್ದ ಹನುಮಂತ ತನ್ನ ವೇಷವನ್ನು ಮರೆಮಾಚಿ ಬಿಕ್ಶುವಿನ ವೇಷವನ್ನು ಧರಿಸಿರುವುದು ವಂಚನೆಯಲ್ಲವೇ. ಅದಕ್ಕೆ ವಾಲ್ಮೀಕಿ ಪ್ರಾರಂಬದಲ್ಲಿಯೇ ಹೇಳಿದ್ದಾನೆ. ನೇರವಾಗಿ ಆತ ಕಪಿಯ ರೂಪದಲ್ಲಿಯೇ ಹೋದರೆ ಆತ ಆಡುವ ಮಾತಿನ ಶೈಲಿಗೂ ಆತನ ಬಹಿರಂಗ ರೂಪಕ್ಕೂ ಅಂತರ ಕಂಡು ಇದು ಯಾವುದೋ ಮಾಯೆ ಎನ್ನುವ ಭಾವಕ್ಕೆ ರಾಮ ಲಕ್ಷ್ಮಣರು ಬರುವ ಸಾಧ್ಯತೆಯಿದೆ. ಬಿಕ್ಷುವಿನ ವೇಷವಾದರೆ ಆಡುವ ಮಾತಿಗೆ ಸಾಮ್ಯತೆ ಬರುತ್ತದೆ. ಅದೂ ಅಲ್ಲದೇ ರಾಮ ಲಕ್ಷ್ಮಣರೂ ಸಹ ತಾಪಸಿಗಳಂತೆ ಇದ್ದರು. ಆದರೆ ಅವರ ಕೈಯಲ್ಲಿ ಬಿಲ್ಲು ಬಾಣಗಳಿದ್ದವು. ಬತ್ತಳಿಕೆ ಬಿಗಿದ್ದರು. ಹೀಗಿರುವಾಗ ಅವರನ್ನು ಮೊದಲು ನೋಡಲು ಸರ್ವಮಾನ್ಯವಾದ ಬಿಕ್ಷುವಿನ ರೂಪ ಧರಿಸಿದರೆ ಅವರು ತನ್ನ ಕಡೆಗೆ ಗಮನವನ್ನು ಹರಿಸುತ್ತಾರೆ ಎನ್ನುವುದಾಗಿದೆ. ರಾಮ ಲಕ್ಷ್ಮಣರನ್ನು ಹತ್ತಿರದಿಂದ ಕಂಡಾಗ ಅವರಲ್ಲಿ ದಿವ್ಯ ಪ್ರಭೆ ದೇದೀಪ್ಯಮಾನವಾಗಿ ಬೆಳಗುತ್ತಿತ್ತು. ಆ ಪ್ರಭೆಯ ಎದುರು ಹನುಮಂತನಿಗೆ ತಾನು ವೇಷವನ್ನು ಮರೆಮಾಚಿರುವ ವಿಷಯವನ್ನು ಮುಚ್ಚಿಟ್ಟುಕೊಳ್ಳಲಾವದಾಗಲಿಲ್ಲ. ಆತ ತಾನು ಬಿಕ್ಷುವಿನ ವೇಷವನ್ನು ಧರಿಸಿ ಬಂದವ. ಕಾಮರೂಪಿಯಾದ ತಾನು ಇಚ್ಛೆಬಂದ ಕಡೆ ಹೋಗಬಲ್ಲೆ, ಇಚ್ಛೆಬಂದ ರೂಪವನ್ನು ಧರಿಸಬಲ್ಲೆ ಎಂದು ಪ್ರಾರಂಭದಲ್ಲಿಯೇ ಹೇಳಿಬಿಡುತ್ತಾನೆ. ಸುಗ್ರೀವನ ಸಚಿವ ತಾನು, ಆತನಿಗೆ ಪ್ರಿಯವನ್ನುಂಟುಮಾಡಬೇಕೆಂಬ ಆಶಯದಿಂದ ಈ ವೇಷದಲ್ಲಿ ಬಂದಿರುವೆ ಎನ್ನುತ್ತಾನೆ. ಆತನ ಮಾತಿನಲ್ಲಿ ಎಲ್ಲಿಯೂ ಕಪಟತೆ ತಿಲಮಾತ್ರವೂ ಇರಲಿಲ್ಲ. ಧ್ವನಿ ಹೃದಯ ಕಂಠ ಮತ್ತು ಮುಖಗಳ ಮೂಲಕವಾಗಿ ಹೊರಬರುತ್ತಿತ್ತು. ತನ್ನೊಡೆಯನ ಕ್ಷೇಮಕ್ಕಾಗಿ ವೇಷಧರಿಸುವುದು ಅಗತ್ಯವಿತ್ತು. ಆದರೆ ಅವರನ್ನು ನೋಡಿದಾಗ ಅದರ ಅವಶ್ಯಕತೆ ಉಳಿದಿಲ್ಲ ಎನ್ನುವುದು ಆತನ ಮಾತಿನ ಸಾರಾಂಶವಾಗಿತ್ತು. ರಾಮನಿಗೆ ಆತನ ಸರಳ ಮತ್ತು ಸುಂದರವಾದ ಭಾಷೆಯನ್ನು ಕೇಳಿ ಆನಂದವಾಯಿತು. ಅದಕ್ಕಿಂತಲೂ ಆತ ಸುಗ್ರೀವನ ಸಚಿವನೆನ್ನುವುದನ್ನು ಕೇಳಿ ಇಮ್ಮಡಿ ಆನಂದವಾಯಿತು. ಯಾರನ್ನು ತಾವು ಹುಡುಕಲು ಬಂದ್ದೇವೆಯೋ ಆತನ ಸಚಿವನೇ ತನ್ನನ್ನು ಎದುರುಗೊಳ್ಳಲು ಬಂದಿದ್ದಾನೆ. ಇದರಿಂದ ಅಯೋಧ್ಯೆಯ ಚಕ್ರವರ್ತಿ ಮನೆತನದವರು ಅಪರಿಚಿತರಂತೆ ಬೇರೊಬ್ಬರ ಭೇಟಿಗೆ ಹೋಗಿರುವುದಲ್ಲ, ರಾಜಪರಂಪರೆಯ ನಡಾವಳಿಯಂತೆ (Protocol) ಸಚಿವನೋರ್ವ ಎದುರುಗೊಳ್ಳಲು ಬಂದಿದ್ದಾನೆ. ರಾಜರುಗಳನ್ನು ಎದುರುಗೊಳ್ಳಲು ಯಾರು ಯಾರು ಹೋಗಬೇಕೆನ್ನುವ ನಡಾವಳಿಕೆಗಳು ಪ್ರಾಚೀನ ಕಾಲದಲ್ಲಿಯೂ ಇತ್ತು. ರಾಮನಿಗೆ ಆತನ ವ್ಯಕ್ತಿತ್ವ ಮೊದಲ ಭೇಟಿಯಲ್ಲಿಯೇ ಇಷ್ಟವಾಯಿತು. ಲಕ್ಷ್ಮಣನಿಗೆ ಆತ ಹೇಳುವ ಮಾತು

ನಾನೃಗ್ವೇದವಿನೀತಸ್ಯ ನಾಯಜುರ್ವೇದಧಾರಿಣಃ.
ನಾಸಾಮವೇದವಿದುಷಶ್ಶಕ್ಯಮೇವಂ ವಿಭಾಷಿತುಮ್ ৷৷ಕಿ.3.27৷৷

ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ಅಧ್ಯಯನಮಾಡಿ ಶಿಕ್ಷಣ ಪಡೆಯದವನಿಗೆ ಹೀಗೆ ಮಾತಾಡಲು ಸಾಧ್ಯವಿಲ್ಲ. ಎನ್ನುತ್ತಾನೆ. ಇಲ್ಲಿ ಪ್ರತಿಯೊಂದು ವೇದದ ವಿಶೇಷವನ್ನುಹೇಳುವಾಗ “ವಿನೀತ”, “ಧಾರಿ” ಮತ್ತು “ವಿತ್” ಶಬ್ಧಗಳನ್ನು ವಿಶೇಷಣಗಳನ್ನಾಗಿ ಬಳಸಿದ್ದಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

ಸಂಭಾಷಣೆಯಲ್ಲಿ ಸಂವಹನ ಕ್ರಿಯೆ ತುಂಬಾ ಮುಖ್ಯ. ಇದೊಂದು ಮಾತಿನಲ್ಲಿ ಹನುಮಂತನ ವಾಕ್ ಪಟುತ್ವವನ್ನು ರಾಮ ಶ್ಲಾಘಿಸುತ್ತಾನೆ. ಋಗ್ವೇದದ ಪ್ರತಿವರ್ಣವೂ ಸ್ವರಪೂರ್ಣವಾಗಿರುತ್ತದೆ. ಅದನ್ನು ಉಚ್ಛರಿಸಬೇಕಾದರೆ ಸಾವಧಾನವಾಗಿ, ವಿನಿಯೋಗಿಸಬೇಕಾದ ಛಂದಸ್ಸು, ವ್ಯಾಕರಣ ಶುದ್ಧತೆ ಮತ್ತು ಗಂಭೀರ ಸ್ವರಬೇಕಾಗುತ್ತದೆ. ಅದನ್ನು ಸರಿಯಾಗಿ ಅಧ್ಯಯನ ಮಾಡಿದವನಿಂದಲೇ ಹೀಗೆ ಮಾತಾಡಲು ಸಾಧ್ಯ. ಹಾಗಾಗಿ ವಿನೀತ ಎನ್ನುವ ಶಬ್ದವನ್ನು ಬಳಸಿದ್ದಾನೆ. ವಿನೀತ ಎಂದರೆ ಆಚಾರ್ಯಮುಖೇನ ಶಾಸ್ತ್ರಬದ್ಧವಾಗಿ ಕಲಿತವ ಎಂದು ಅರ್ಥ. ಯಜುರ್ವೇದದಲ್ಲಿ ಪ್ರತಿಯೊಂದು ಅನುವಾಕನ್ನೂ ಇತರ ಅನುವಾಕಗಳೊಡನೆ ಸಂಕರ ಆಗದ ರೀತಿಯಲ್ಲಿ ಉಚ್ಛರಿಸಬೇಕು. ಅದಕೆ ಅಸಾಧಾರಣ ಧಾರಣಶಕ್ತಿಯ ಅವಶ್ಯಕತೆ ಇದೆ. ಸಾಮವೇದವು ಊಹರಹಸ್ಯಗಳಿಂದ ಗಾನರೂಪವಾಗಿದೆ. ಹನುಮಂತ ಆಡುವ ಮಾತಿನಲ್ಲಿ ಪದ್ಯದ ಗೇಯತೆಯೂ ಇತ್ತು. ಕಿವಿಗೆ ಇಂಪಾಗಿ ಆದರೆ ಅರ್ಥಗರ್ಭಿತವಾಗಿ ಇತ್ತು ಎನ್ನುವುದನ್ನು ಮೂರು ಶಬ್ದಗಳಾದ ವಿನೀತ, ಧಾರಿ ಮತ್ತು ವಿತ್ ಶಬ್ದಗಳ ಮೂಲಕ ರಾಮ ತಿಳಿಸುತ್ತಾನೆ. ರಾಮನೂ ಮೂರೂ ವೇದಗಳಲ್ಲಿ ಪಾರಂಗತನಾಗಿರುವುದರಿಂದಲೇ ಹನುಮಂತನ ಮಾತನ್ನು ಗ್ರಹಿಸಲು ಸಾಧ್ಯವಾಯಿತು ಎಂದೂ ಇಲ್ಲಿ ಅರ್ಥೈಸಬಹುದಾಗಿದೆ. ಮಂತ್ರಿ ಎದುರಾದಾಗ ರಾಜನಾದವ ಮಾತನ್ನಾಡುವುದಲ್ಲ. ಆತನ ಪರವಾಗಿ ಮಂತ್ರಿಯೋ ಅಥವಾ ಸಮರ್ಥ ದೂತನೋ ಮಾತನ್ನಾಡಬೇಕು. ಹಾಗಾಗಿ ಇಲ್ಲಿ ಹನುಮಂತನೊಡನೆ ಮುಂದಿನ ವಿಷಯವನ್ನು ಲಕ್ಷ್ಮಣ ಮಾತಾಡಲಿ ಎಂದು ರಾಮ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಹಾಗಾಗಿ ಮುಂದೆ ಲಕ್ಷ್ಮಣ ಹನುಮಂತನಲ್ಲಿ ತಮ್ಮ ಅರಣ್ಯವಾಸದ ವಿಷಯವನ್ನು, ಸೀತಾಪಹರಣದ ವಿಷಯವನ್ನೂ ಸಹ ಸಮಗ್ರವಾಗಿ ತಿಳಿಸಿ ತಮ್ಮ ಭೇಟಿಯ ಉದ್ಧೇಶ ಸೀತೆ ಎಲ್ಲಿರುತ್ತಾಳೆಂದು ಕಂಡುಹಿಡಿಯಲು ಕಬಂಧನ ಸೂಚನೆಯ ಮೇರೆಗೆ ಸುಗ್ರೀವನೊಡನೆ ಆಶ್ರಯಕೋರಲು ಬಂದಿದ್ದೇವೆ ಎನುತ್ತಾ ಮೊದಲು ಹೇಳಿದ ಸುಗ್ರೀವಂ ಶರಣಂ ಗತಃ ಎನ್ನುವ ಆರು ಬಗೆಯ ಉಲ್ಲೇಖವನ್ನು ಮಾಡುತ್ತಾನೆ.

ಹನುಮಂತನು ಸೂರ್ಯನ ಹತ್ತಿರ ಸೂತ್ರ, ವೃತ್ತಿ, ವಾರ್ತಿಕ, ಮಹಾಭಾಷ್ಯ, ಶಾಸ್ತ್ರ, ಛಂದಃಶಾಸ್ತ್ರಗಳನ್ನೂ, ನವವ್ಯಾಕರಣಗಳನ್ನೂ ಕಲಿತವ. ಅಗಸ್ತ್ಯರು ಹನುಮಂತನ ಕುರಿತು ಆತ ಶಾಸ್ತ್ರವಿಷಯದಲ್ಲಿ ಬ್ರಹಸ್ಪತಿಯೊಡನೆ ಹೋಲಿಸಬಹುದು ಎನ್ನುತ್ತಾರೆ. ಆತನಿಗೆ ಲಕ್ಷ್ಮಣ ಸುಗ್ರೀವನೊಡನೆ ಶರಣಾಗತಿಗಾಗಿ ಬಂದಿದ್ದಾರೆ ಎಂದು ಹೇಳಿರುವುದು ಮನಸ್ಸಿಗೆ ಸರಿಕಾಣಲಿಲ್ಲ. ಅತನಿಗೆ ಸೂರ್ಯವಂಶದ ವಿಷಗಳೆಲ್ಲವೂ ತಿಳಿದಿದೆ. ಅವರ ಶ್ರೇಷ್ಠತೆಯ ಮತ್ತು ಮಹಾತ್ಮತೆಯ ಕುರಿತು ಗೌರವವಿದೆ. ಆದರೆ ಈ ವಾಕ್ ದೋಷವನ್ನು ಟೀಕಿಸಲೂ ಹೋಗುವುದಿಲ್ಲ. ರಾಮಲಕ್ಷ್ಮಣರನ್ನು ತನ್ನ ಭುಜದಮೇಲೆ ಹೊತ್ತು ಅವರನ್ನು ಋಷ್ಯಮೂಕ ಪರ್ವತಕ್ಕೆ ಕರೆತರುತ್ತಾನೆ. ಸುಗ್ರೀವ ಆಗ ಆಗಂತುಕರ ವಿಷಯದಲ್ಲಿ ಭಯಪಟ್ಟು ಅಲ್ಲೇ ಪಕದಲ್ಲಿದ್ದ ಮಲಯ ಪರ್ವತದಲ್ಲಿ ಇದ್ದ. ಆತನಲ್ಲಿ ರಾಮ ಲಕ್ಷ್ಮಣರ ಮತ್ತು ದಶರಥನ ಸಹಿತವಾಗಿ ಸೂರ್ಯವಂಶದ ದೊರೆಗಳ ಮಹಿಮೆಯನ್ನು ಹೇಳುತ್ತಾನೆ. ಅಂತಹ ಮಹಿಮಾನ್ವಿತರು ಸೀತಾನ್ವೇಷಣೆಯ ಸಲುವಾಗಿ ನಿನ್ನ ಸಹಾಯವನ್ನು ಬಯಸಿ ಬಂದಿದ್ದಾರೆ ಎನ್ನುತ್ತಾನೆ. ಇಲ್ಲಿ ಹನುಮಂತನ ಜಾಣ್ಮೆಯನ್ನು ಗಮನಿಸಬೇಕು. “ಸುಗ್ರೀವನಲ್ಲಿ ಶರಣಾಗತಿಯನ್ನು ಹೊಂದಲು ಬಂದಿದ್ದಾರೆ ಎನ್ನುವ ಮಾತಿನ ದೋಷವನ್ನು ಹನುಮಂತ ಪ್ರಾರಂಭದಲ್ಲಿ ಹೇಳಿದ ಶ್ಲೋಕದಂತೆ “ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು” ಎಂದು ಬದಲಾಯಿಸಿ ಹೇಳುತ್ತಾನೆ.

“ನವವ್ಯಾಕರಣವೇತ್ತಾ -ಒಂಬತ್ತು ವ್ಯಾಕರಣ ಸಿದ್ಧಾಂತವನ್ನು ತಿಳಿದವ ಹನುಮಂತ ಎಂದು ಅಗಸ್ತ್ಯರು ಈತನನ್ನು ಹೊಗಳಿದ್ದು ಆತನ ಜಾಣ್ಮೆ ಮತ್ತು ಶಾಸ್ತ್ರಕೌಶಲ್ಯದ ಪರಿಣಿತಿಗಾಗಿ. ರಾಮನ ಅನುಗ್ರಹದಿಂದ ಹನುಮಂತ ಬ್ರಹ್ಮನೇ ಆಗುವನು- “ಬ್ರಹ್ಮಾ ಭವಿಷ್ಯತ್ಯಪಿ ತೇ ಪ್ರಸಾದಾತ್” ಎನ್ನುವ ಮಾತನ್ನೂ ಆಡುತ್ತಾರೆ. ಸುಂದರನೆನ್ನುವುದು ಆತನ ಇನ್ನೊಂದು ಹೆಸರು. ಅದು ಬಾಹ್ಯರೂಪದಿಂದ ಅಲ್ಲ, ಆತನ ವಿದ್ಯೆ ಮತ್ತು ವಿನಯಗಳ ಶೋಭೆಯಿಂದಾಗಿ. ಸುಗ್ರೀವನ ಸಚಿವ ರಾಮನೆಡೆಗೆ ಆಕರ್ಷಿತನಾಗುವುದು ಆತನ ಮೊದಲ ನೋಟದಲ್ಲಿಯೇ. ರಾಮನನ್ನು ನೋಡಿದ ತಕ್ಷಣ ಆತನ ಶಾಪ ವಿಮೋಚನೆಯಾಯಿತು ಎನ್ನುವ ಕಥೆ ಮೂಲ ರಾಮಾಯಣದಲ್ಲಿಲ್ಲ.

ಸುಗ್ರೀವನ ಚಂಚಲತೆಯ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

Continue Reading

ದೇಶ

ರಾಜಮಾರ್ಗ ಅಂಕಣ: ಅನಾಥಾಶ್ರಮದ ಹುಡುಗಿಯು ಅಮೇರಿಕನ್ ಕಂಪೆನಿಯ ಸಿಇಒ ಆದ ಕಥೆ

ರಾಜಮಾರ್ಗ ಅಂಕಣ: ವಿಶೇಷ ಎಂದರೆ ಜ್ಯೋತಿ ರೆಡ್ಡಿ ಅವರು ಇಂದಿಗೂ ತನ್ನ ಬಾಲ್ಯದ ಕಷ್ಟಗಳನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಆದರೂ ಭಾರತಕ್ಕೆ ಬಂದೇ ಬರುತ್ತಾರೆ. ಅನಾಥಾಶ್ರಮಗಳಿಗೆ ಭೇಟಿ ನೀಡಿ ನೆರವು ನೀಡುತ್ತಾರೆ. ಹಲವು ಸರಕಾರಿ ಶಾಲೆಗಳ ನೂರಾರು ಬಡ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುತ್ತಾರೆ.

VISTARANEWS.COM


on

ರಾಜಮಾರ್ಗ ಅಂಕಣ Jyothi Reddy

ವಾರಂಗಲ್ ನಗರದ ಕಲ್ಲು ಒಡೆಯುವ ಹುಡುಗಿ ಜ್ಯೋತಿ ರೆಡ್ಡಿ ಬಿಲಿಯನ್ ಡಾಲರ್ ಕಂಪೆನಿ ಕಟ್ಟಿದ್ದು ಹೇಗೆ?

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ‘ಯಾವಾಗ ನಿನ್ನ ಆಕಾಂಕ್ಷೆಗಳು ಪ್ರಬಲವಾಗಿ ಇರುತ್ತವೆಯೋ, ಆಗ ನಿನ್ನೊಳಗೆ ಅತಿಮಾನುಷ ಶಕ್ತಿಗಳು ಪ್ರವಹಿಸುತ್ತವೆ.ʼ
(ನೆಪೋಲಿಯನ್ ಹಿಲ್)

ಈ ಮಾತಿಗೆ ನಿದರ್ಶನ ಆಗುವ ಸಾಧನೆ ಮಾಡಿ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿರುವ ಒಬ್ಬ ಅನಾಥ ಹುಡುಗಿಯ ಕಥೆಯು ಇಂದು ನಿಮ್ಮ ಮುಂದೆ.

ಆಕೆಯ ಹೆಸರು ಜ್ಯೋತಿ ರೆಡ್ಡಿ (Jyothi Reddy). ಆಕೆ ತೆಲಂಗಾಣ ರಾಜ್ಯದ ವಾರಂಗಲನ ಅತ್ಯಂತ ಬಡ ಕುಟುಂಬದ ಹುಡುಗಿ ಆಗಿದ್ದಳು. ಆಕೆಯ ಹೆತ್ತವರಿಗೆ ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಬಡತನ ಮತ್ತು ಹಸಿವು ಹೆಚ್ಚಾದ ಕಾರಣ ಅವಳ ಹೆತ್ತವರು ಇಬ್ಬರು ಹೆಣ್ಣು ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಮತ್ತೆ ಅವರನ್ನು ನೋಡಲಿಕ್ಕೂ ಬರಲಿಲ್ಲ! ಅದರಲ್ಲಿ ಒಬ್ಬರು ಜ್ಯೋತಿ! ಆಕೆ ತನ್ನ ಬಾಲ್ಯದ ಐದು ವರ್ಷಗಳನ್ನು ಅನಾಥಾಶ್ರಮದಲ್ಲಿ ಕಳೆಯಬೇಕಾಯಿತು.

ಅಸಹಾಯಕ ಬದುಕು, ನೂರಾರು ಸವಾಲು!

ಹಿರಿಯ ಮಗಳಾದ ಜ್ಯೋತಿ ಅನಾಥ ಮಕ್ಕಳ ಸರಕಾರಿ ಶಾಲೆಗೆ ಹೋಗಿ 12ನೆಯ ತರಗತಿ ಪಾಸಾದಳು. ಅದರ ಬೆನ್ನಿಗೆ ಅವರ ಕಸಿನ್ ಜೊತೆಗೆ ಮದುವೆ ಕೂಡ ನಡೆದು ಹೋಯಿತು. ಆಗ ಅವರಿಗೆ 16 ವರ್ಷ! ಹದಿನೆಂಟು ತುಂಬುವ ಹೊತ್ತಿಗೆ ಮಡಿಲಲ್ಲಿ ಎರಡು ಹೆಣ್ಣು ಮಕ್ಕಳು ಮಲಗಿದ್ದವು! ಗಂಡನಿಗೆ ಎಲ್ಲಿಯೂ ಪರ್ಮನೆಂಟ್ ಕೆಲಸ ಇರಲಿಲ್ಲ. ಆಗ ಮಕ್ಕಳ ಜವಾಬ್ದಾರಿ ಕೂಡ ಜ್ಯೋತಿ ಅವರೇ ಹೊತ್ತರು.

ಕಠಿಣ ದುಡಿಮೆಯ ಜೊತೆಗೆ ಒಂದಷ್ಟು ಕನಸು!

ಬತ್ತದ ಗದ್ದೆಯಲ್ಲಿ ನೇಜಿಯನ್ನು ನೆಡುವ ಕೆಲಸ, ಕಲ್ಲನ್ನು ಒಡೆಯುವ ಕೆಲಸವನ್ನು ಕೂಡ ಅವರು ಮಾಡಿದರು. ತನ್ನ ಬದುಕು ಸ್ವಾವಲಂಬಿ ಆಗಬೇಕು ಎನ್ನುವ ತುಡಿತ ಅವರನ್ನು ಅಂತಹ ಕೆಲಸಕ್ಕೆ ದೂಡಿತು.

ಆಗ ಅವರ ನೆರವಿಗೆ ಬಂದದ್ದು ‘ನೆಹರೂ ಯುವ ಕೇಂದ್ರ’ ಎನ್ನುವ ಸರಕಾರದ ಅಧೀನ ಸಂಸ್ಥೆ. ಅದರಲ್ಲಿ ಜ್ಯೋತಿ ರೆಡ್ಡಿ ಅವರು ಸ್ವಯಂಸೇವಕಿಯಾಗಿ ಮಕ್ಕಳಿಗೆ ಪಾಠ ಮಾಡುವ ಕೆಲಸ ಮಾಡಿದರು. ಅದರ ಜೊತೆಗೆ ಅಂಬೇಡ್ಕರ್ ಬಯಲು ವಿವಿಯ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿ ಎರಡನ್ನೂ ಅವರು ಮುಗಿಸಿದರು. ಹಾಗೆಯೇ ಅವರ ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಕೂಡ ಪೂರ್ತಿ ಆಯಿತು.

ಟೀಚರ್ ಆಗಿ ಉದ್ಯೋಗ ಆರಂಭ ಮಾಡಿದರು

ಆಗ ಅವರಿಗೆ ಸರಕಾರಿ ಶಾಲೆಯ ಟೀಚರ್ ಉದ್ಯೋಗವು ದೊರೆಯಿತು. ತಿಂಗಳಿಗೆ 6,000 ರೂಪಾಯಿ ಸಂಬಳ ಕೈ ಸೇರುತ್ತಿತ್ತು. ಪುಟ್ಟ ಬಾಡಿಗೆ ಮನೆ. ಅವರ ಕುಟುಂಬಕ್ಕೆ ಆ ಸಂಬಳವು ಯಾವುದಕ್ಕೂ ಸಾಲುತ್ತಿರಲಿಲ್ಲ. ಶಾಲೆಗೆ ಎರಡು ಘಂಟೆ ನಡೆದು ಹೋಗುವ ಕಷ್ಟ ಬೇರೆ. ಆಗ ದಾರಿಯಲ್ಲಿ ಸೀರೆಗಳನ್ನು ಮಾರುತ್ತ ಒಂದಿಷ್ಟು ಹಣ ಗಳಿಸಿದರು. ಮನೆಯಲ್ಲಿ ಒಂದು ಹೊಲಿಗೆ ಯಂತ್ರ ಇಟ್ಟುಕೊಂಡು ಸ್ವಲ್ಪ ಸಂಪಾದನೆ ಮಾಡಿದರು.

ಅಮೆರಿಕಾದಲ್ಲಿ ಉದ್ಯೋಗದ ಆಫರ್ ಬಂತು!

2000ರ ಹೊತ್ತಿಗೆ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಬಂದೇ ಬಿಟ್ಟಿತು. ಅವರ ಸೋದರ ಮಾವ ಒಬ್ಬರು ಅಮೆರಿಕಾದಿಂದ ಊರಿಗೆ ಬಂದವರು ಜ್ಯೋತಿ ಅವರನ್ನು ಭೇಟಿ ಮಾಡಿದರು. ಅಮೆರಿಕಾದಲ್ಲಿ ಉದ್ಯೋಗದ ಭರವಸೆ ನೀಡಿದರು. ಆಗ ಅವರ ಮನಸ್ಸಿನಲ್ಲಿ ಗೊಂದಲವು ಆರಂಭ ಆಯಿತು.

ಒಂದು ಕಡೆ ತನ್ನ ಸಂಸಾರದ ಜವಾಬ್ದಾರಿ. ಇನ್ನೊಂದು ಕಡೆ ಸರಕಾರಿ ನೌಕರಿ. ಮತ್ತೊಂದು ಕಡೆ ಅವರದ್ದೇ ಆದ ಬಹಳ ದೊಡ್ಡ ಕನಸು! ಇವುಗಳಲ್ಲಿ ಯಾವುದನ್ನು ಆರಿಸುವುದು? ಕೊನೆಗೆ ಅವರು ಗಟ್ಟಿ ನಿರ್ಧಾರ ಮಾಡಿ ಮೂರನೆಯದನ್ನು ಆರಿಸಿದರು. ಅದರಲ್ಲಿ ತೀವ್ರವಾದ ರಿಸ್ಕ್ ಇತ್ತು. ಆದರೆ ರಿಸ್ಕ್ ಇಲ್ಲದೆ ಕನಸು ಪೂರ್ತಿ ಆಗುವುದು ಹೇಗೆ?

ವಾರಂಗಲ್ ಟು ಅಮೆರಿಕಾ ಹಾರಿದರು!

ಪ್ರೀತಿಸುವ ತನ್ನ ಎರಡು ಹೆಣ್ಣು ಮಕ್ಕಳನ್ನು ಒಂದು ಮಿಷನರಿ ಹಾಸ್ಟೆಲಿನಲ್ಲಿ ಬಿಟ್ಟರು. ವೀಸಾ ಮಾಡಿಸಲು ತುಂಬಾ ಕಷ್ಟಪಟ್ಟರು. ಕೊನೆಗೆ ಧೈರ್ಯ ಜೋಡಿಸಿಕೊಂಡು ವಾರಂಗಲ್ ಟು ಅಮೆರಿಕ ವಿಮಾನದಲ್ಲಿ ಹಾರಿದರು! ಈಗ ಅವರಿಗೆ ನಿಜವಾದ ಸಮಸ್ಯೆಗಳು ಆರಂಭವಾದವು. ಕೆಲಸ ಕೊಡಿಸುವ ಭರವಸೆ ಕೊಟ್ಟಿದ್ದ ಸೋದರ ಮಾವ ಅಲ್ಲಿ ಕೈ ಎತ್ತಿದರು. ಮಹಾನಗರದಲ್ಲಿ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಬಿಟ್ಟ ಅನುಭವ ಅವರಿಗೆ ಆಯಿತು. ತಂದಿದ್ದ ಸ್ವಲ್ಪ ದುಡ್ಡು ಪೂರ್ತಿ ಖಾಲಿ ಆಗಿತ್ತು.

ಮಾಯಾ ನಗರಿಯಲ್ಲಿ ಒಂಟಿ ಹೆಣ್ಣಿನ ಹೋರಾಟ!

ಅವರು ಯಾವತ್ತೂ ಅಮೆರಿಕಾ ನೋಡಿದವರೇ ಅಲ್ಲ! ಅಲ್ಲಿ ಅವರಿಗೆ ಸಂಬಂಧಿಕರು ಅಥವಾ ಪರಿಚಯದವರು ಅಂತ ಯಾರೂ ಇರಲಿಲ್ಲ. ಆದರೆ ಗುಂಡಿಗೆಯಲ್ಲಿ ಧೈರ್ಯ ಇತ್ತು. ತಮ್ಮ ಪದವಿ, ಸ್ಟೇಟಸ್ ಎಲ್ಲವನ್ನೂ ಗಾಳಿಗೆ ತೂರಿ ಗ್ಯಾಸ್ ಸ್ಟೇಶನ್, ಬೇಬಿ ಸಿಟ್ಟಿಂಗ್, ವಿಡಿಯೋ ಗೇಮ್ಸ್ ಶಾಪ್… ಹೀಗೆ ಹಲವು ಕಡೆ ದುಡಿದರು. ಆ ಸಂದರ್ಭ ಸೂಕ್ಷ್ಮವಾಗಿ ಅಮೆರಿಕಾದ ಜನ ಜೀವನವನ್ನು, ಉದ್ಯೋಗದ ಅವಕಾಶಗಳನ್ನು ಅಭ್ಯಾಸ ಮಾಡಿದರು. ಅವರು ಒಂದೂವರೆ ವರ್ಷದಲ್ಲಿ 40,000 ಅಮೇರಿಕನ್ ಡಾಲರ್ ಸಂಪಾದನೆ ಮಾಡಿದ್ದರು!

ಆರಂಭ ಆಗಿಯೇ ಬಿಟ್ಟಿತು ಕನಸಿನ ಕಂಪೆನಿ!

ಅದನ್ನು ಬಂಡವಾಳ ಮಾಡಿಕೊಂಡು ಅಮೆರಿಕಾದ ಫೀನಿಕ್ಸ್ ಎಂಬಲ್ಲಿ ಒಂದು ಸಣ್ಣದಾದ ಕಚೇರಿಯನ್ನು ತೆರೆದು ‘KEY SOFTWARE SOLUTIONS’ ಎಂಬ ಕನ್ಸಲ್ಟೆನ್ಸಿ ಕಂಪೆನಿ ತೆರೆದರು( 2001). ಅವರು ಕಲಿತಿದ್ದ ಕಂಪ್ಯೂಟರ್ ತರಬೇತಿಯು ಅವರಿಗೆ ಈಗ ಸಹಾಯಕ್ಕೆ ಬಂದಿತು.

ಅಮೆರಿಕಾದಲ್ಲಿ ಹೊರಗಿಂದ ಬರುವವರಿಗೆ ಉದ್ಯೋಗದ ಅವಕಾಶಗಳ ಬಗ್ಗೆ ಮಾಹಿತಿ ಮತ್ತು ವೀಸಾ ಪಡೆಯುವ ಬಗ್ಗೆ ಮಾರ್ಗದರ್ಶನ ನೀಡುವ ಸಂಸ್ಥೆಯಾಗಿ ತಮ್ಮ ಸಂಸ್ಥೆಯನ್ನು ಬೆಳೆಸಿದರು. ಒಬ್ಬರೇ ಸ್ವಾವಲಂಬಿಯಾದ ಹೆಣ್ಣು ಮಗಳು ಅಮೆರಿಕಾದಲ್ಲಿ ಮಾಡಿದ ಭಾರೀ ಹೋರಾಟವು ಕೊನೆಗೂ ಫಲ ನೀಡಿತು. ಒಂದರ ಹಿಂದೆ ಒಂದು ಅವರ ಕಂಪೆನಿಯ ಫ್ರಾಂಚೈಸಿಗಳು ಆರಂಭ ಆದವು. ಅವರ ಕಠಿಣ ಪರಿಶ್ರಮ, ಬದ್ಧತೆ ಮತ್ತು ಬಲವಾದ ನಂಬಿಕೆ ಇವುಗಳು ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು.

ಇಂದವರ ಕಂಪೆನಿ ಬಿಲಿಯನ್ ಡಾಲರ್ ಆದಾಯ ಹೊಂದಿದೆ!

ಈಗ ಅವರ ಬಿಲಿಯನ್ ಡಾಲರ್ ಕಂಪೆನಿಯು ನೂರಾರು ಮಂದಿಗೆ ಉದ್ಯೋಗ ನೀಡಿದೆ. ತನ್ನ ಇಬ್ಬರು ಮಕ್ಕಳನ್ನು ಕೂಡ ಅವರು ಅಮೆರಿಕಕ್ಕೆ ಕರೆಸಿ ಸಾಫ್ಟವೇರ್ ಇಂಜಿನಿಯರಿಂಗ್ ಓದಿಸಿ ಮದುವೆ ಮಾಡಿದ್ದಾರೆ. ಅವರಿಗೆ NRI OF THE YEAR ಪ್ರಶಸ್ತಿ ದೊರೆತಿದೆ!

ಕೆರೆಯ ನೀರನು ಕೆರೆಗೆ ಚೆಲ್ಲಿ…

ವಿಶೇಷ ಎಂದರೆ ಜ್ಯೋತಿ ರೆಡ್ಡಿ ಅವರು ಇಂದಿಗೂ ತನ್ನ ಬಾಲ್ಯದ ಕಷ್ಟಗಳನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಆದರೂ ಭಾರತಕ್ಕೆ ಬಂದೇ ಬರುತ್ತಾರೆ. ಅನಾಥಾಶ್ರಮಗಳಿಗೆ ಭೇಟಿ ನೀಡಿ ನೆರವು ನೀಡುತ್ತಾರೆ. ಹಲವು ಸರಕಾರಿ ಶಾಲೆಗಳ ನೂರಾರು ಬಡ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುತ್ತಾರೆ. ಎಸೆಸೆಲ್ಸಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಬಡಮಕ್ಕಳಿಗೆ ತಲಾ ಐದು ಸಾವಿರ ರೂಪಾಯಿ ಬಹುಮಾನ ಕೊಟ್ಟು ಬೆನ್ನು ತಟ್ಟುತ್ತಾರೆ.

“ಬಾಲ್ಯದ ಬಡತನ ನನ್ನ ಮನಸ್ಸು ಮತ್ತು ಹೃದಯವನ್ನು ನೋಯಿಸಿತ್ತು. ಆದರೆ ಭಾರತದ ಪ್ರತಿ ಅನಾಥ ಮಗು ನನ್ನಂತೆ ಬೆಳೆಯಬೇಕು ಎಂದು ಆಸೆ ಪಡುತ್ತೇನೆ” ಎಂದು ಆಕೆಯು ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ ಕಥೆ

Continue Reading
Advertisement
Latest1 hour ago

ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ ಎಂದಿದ್ದೇಕೆ ಮಮತಾ ಬ್ಯಾನರ್ಜಿ?

Latest5 hours ago

ಬಿಜೆಪಿ ಬಂಗಾಳ ಗೆದ್ದಾಯ್ತು, ಸಿಎಂ ರೇಸ್‌ನಲ್ಲಿ ಯಾರು?

Latest5 hours ago

ತಮಿಳುನಾಡು: ಬಹುಮತ ಪಡೆಯಲು ದಳಪತಿ ಮುಂದಿರುವ ತಂತ್ರಗಳೇನು?

Latest1 day ago

ಪಶ್ಚಿಮ ಬಂಗಾಳದಲ್ಲಿ ಕೇಸರಿ, ತಮಿಳುನಾಡಲ್ಲಿ ದಳಪತಿ, ಕೇರಳಂನಲ್ಲಿ ಕಾಂಗ್ರೆಸ್‌ ದರ್ಬಾರ್‌

Latest1 day ago

ಕೇರಳಂ: ಯುಡಿಎಫ್‌ ಗೆಲುವಿನ ಹಿಂದಿನ ಏಳು ರಣತಂತ್ರ!

Latest1 day ago

ದಾವಣಗೆರೆ ದಕ್ಷಿಣ ʼಕೈʼ ವಶ, ಸಮರ್ಥ್‌ಗೆ ವಿಜಯಮಾಲೆ

Latest1 day ago

ಬಾಗಲಕೋಟೆಯಲ್ಲಿ ಕಾಂಗ್ರೆಸ್‌‌‌ನ ಉಮೇಶ್‌ ಮೇಟಿ ಭರ್ಜರಿ ಗೆಲುವು

Latest1 day ago

ದ್ರಾವಿಡ ನಾಡಲ್ಲಿ ʼದಳಪತಿʼ ಯುಗಾರಂಭ

Rakshit Shetty Richard Anthony Produce By Hombale
ಅವಿಭಾಗೀಕೃತ1 day ago

ಪಂಚರಾಜ್ಯ ವಿಧಾನಸಭಾ ಚುನಾವಣೆ , ಕರ್ನಾಟಕ ಉಪಚುನಾವಣೆ ಫಲಿತಾಂಶದ ಕ್ಷಣಕ್ಷಣದ ಅಪ್‌ಡೇಟ್‌

Latest2 days ago

‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಕ್ಕೆ ಕತ್ತರಿ ಹಾಕಿ ಕಿಯಾರಾ ಅಡ್ವಾಣಿ ಮನವಿ?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌