Recession Economic recession in Singapore after Germany what is the reasonRecession : ಜರ್ಮನಿ ಬಳಿಕ ಸಿಂಗಾಪುರದಲ್ಲಿ ಆರ್ಥಿಕ ಹಿಂಜರಿತ, ಕಾರಣವೇನು?
Connect with us

ಪ್ರಮುಖ ಸುದ್ದಿ

Recession : ಜರ್ಮನಿ ಬಳಿಕ ಸಿಂಗಾಪುರದಲ್ಲಿ ಆರ್ಥಿಕ ಹಿಂಜರಿತ, ಕಾರಣವೇನು?

Recession ಜರ್ಮನಿ ಬಳಿಕ ಸಿಂಗಾಪುರದಲ್ಲಿ ಆರ್ಥಿಕ ಹಿಂಜರಿತ ಸನ್ನಿಹಿತವಾಗಿದೆ. ವಿಶ್ವದಲ್ಲೇ ಅತ್ಯಂತ ಮುಕ್ತ ಎನ್ನಿಸಿರುವ ಸಿಂಗಾಪುರದಲ್ಲಿ ಏನಾಗಿದೆ? ಇಲ್ಲಿದೆ ವಿವರ.

VISTARANEWS.COM


on

Economic recession in Singapore after Germany
Koo

ಸಿಂಗಾಪುರ: ಜರ್ಮನಿಯ ಬಳಿಕ ಇದೀಗ ಸಿಂಗಾಪುರದಲ್ಲಿ ಆರ್ಥಿಕ ಹಿಂಜರಿತ ಸಂಭವಿಸುವ ಆತಂಕ ದಟ್ಟವಾಗಿದೆ. (Recession) ಇದನ್ನು ತಾಂತ್ರಿಕ ಲೆಕ್ಕಾಚಾರದಲ್ಲಿ ರಿಸೆಶನ್‌ ಎಂದು ಕರೆಯಲಾಗಿದೆ. (Technical recession) ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ ಸಿಂಗಾಪುರದ ಜಿಡಿಪಿ ಬೆಳವಣಿಗೆ ಕುಸಿದಿತ್ತು. ಎರಡನೇ ತ್ರೈಮಾಸಿಕದಲ್ಲೂ, ಅಂದರೆ ಏಪ್ರಿಲ್-ಜೂನ್‌ನಲ್ಲೂ ಇಳಿಕೆ ದಾಖಲಿಸುವ ಸಾಧ್ಯತೆ ಇದೆ. ಇದರ ಪರಿಣಾಮ ತಾಂತ್ರಿಕವಾಗಿ ರಿಸೆಶನ್‌ಗೆ ಸಿಲುಕುವ ಅಪಾಯ ಉಂಟಾಗಿದೆ.

ರಫ್ತನ್ನು ಅವಲಂಬಿಸಿರುವ ಸಿಂಗಾಪುರ ಎಕಾನಮಿ:

ಸಿಂಗಾಪುರದ ಆರ್ಥಿಕತೆಯು ರಫ್ತನ್ನು ಅವಲಂಬಿಸಿದೆ. 2023ರಲ್ಲಿ ಜಾಗತಿಕ ಆರ್ಥಿಕತೆ ಮಂದಗತಿಯ ಪರಿಣಾಮ ಸಿಂಗಾಪುರದ ಆರ್ಥಿಕತೆಗೂ ಹೊಡೆತ ಬೀಳುತ್ತಿದೆ. ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಕುಸಿದರೆ ತಾಂತ್ರಿಕವಾಗಿ ಆರ್ಥಿಕ ಹಿಂಜರಿತ ಎಂದು ಕರೆಯಲಾಗುತ್ತದೆ. ಮೊದಲ ತ್ರೈಮಾಸಿಕದಲ್ಲಿ ಸಿಂಗಾಪುರದ ಎಕಾನಮಿ 0.4% ಇಳಿದಿತ್ತು.

ಸಿಂಗಾಪುರದ ಸಣ್ಣ ಮತ್ತು ಮುಕ್ತ ಎಕಾನಮಿ ದೊಡ್ಡ ಪ್ರಮಾಣದಲ್ಲಿ ವ್ಯಾಪಾರವನ್ನು ಅವಲಂಬಿಸಿದೆ. ಆದರೆ ಜಾಗತಿಕ ಬೇಡಿಕೆ ಕುಸಿತದ ಪರಿಣಾಮ ಹಿನ್ನಡೆ ಕಾಣುವಂತಾಗಿದೆ. ಜಾಗತಿಕ ಸೆಮಿಕಂಡಕ್ಟರ್‌ ಉದ್ದಿಮೆಯಲ್ಲೂ ಮಂದಗತಿ ಕಂಡು ಬಂದಿರುವುದು ಸಿಂಗಾಪುರಕ್ಕೆ ಸವಾಲಾಗಿ ಪರಿಣಮಿಸಿದೆ. ಜರ್ಮನಿಯ ಆರ್ಥಿಕತೆ 2023ರಲ್ಲಿ ಹಿಂಜರಿತಕ್ಕೀಡಾಗಿದೆ. ಯುರೋಪಿನ ಪ್ರಬಲ ದೇಶವಾಗಿರುವ ಜರ್ಮನಿಯಲ್ಲಿ ಹಣದುಬ್ಬರ ಏರುಗತಿಯಲ್ಲಿದ್ದು, ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ.

ಇದನ್ನೂ ಓದಿ: Recession In Germany: ವಿಶ್ವದ 4ನೇ ಬೃಹತ್‌ ವಿತ್ತ ರಾಷ್ಟ್ರ ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ; ಭಾರತಕ್ಕೂ ಹೊಡೆತ?

ಸಿಂಗಾಪುರದ ಆರ್ಥಿಕತೆ ಇಡೀ ಜಗತ್ತಿನಲ್ಲೇ ಅತ್ಯಂತ ಮುಕ್ತವಾದ ಎಕಾನಮಿ ಎನ್ನಿಸಿತ್ತು. ಅತ್ಯಂತ ಕಡಿಮೆ ಭ್ರಷ್ಟಾಚಾರ ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ತಲಾ ಆದಾಯದಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿತ್ತು. ಸಿಂಗಾಪುರದ ಸರಕಾರಿ ಸ್ವಾಮ್ಯದ ದಿಗ್ಗಜ ಕಂಪನಿಗಳು ಅಲ್ಲಿನ ಎಕಾನಮಿಯ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

ಸಿಂಗಾಪುರ ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ಸ್‌, ಟೆಲಿಕಮ್ಯುನಿಕೇಶನ್‌, ಔಷಧಗಳು, ರಾಸಾಯನಿಕಗಳ ರಫ್ತು ಮೂಲಕ ಆದಾಯ ಗಳಿಸುತ್ತದೆ. ಅಮೆರಿಕ, ಚೀನಾ, ಜಪಾನ್‌, ಆಸ್ಟ್ರೇಲಿಯಾಕ್ಕೆ ಹೆಚ್ಚಿನ ರಫ್ತು ಮಾಡುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

New Parliament Building: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಪಕ್ಷ!

New Parliament Building: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸೆಂಗೋಲ್‌ನ್ನು ಲೋಕಸಭೆಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ 20 ಪ್ರತಿಪಕ್ಷಗಳು ಬಹಿಷ್ಕಾರ ಹಾಕಿವೆ.

VISTARANEWS.COM


on

Edited by

new Parliament building and coffin box
Koo

ನವದೆಹಲಿ: ಹೊಸ ಸಂಸತ್‌ ಭವನ ಸಂಬಂಧ ವಿವಾದಗಳು ಇನ್ನೂ ನಿಂತಿಲ್ಲ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇತ್ತ ಹೊಸ ಸಂಸತ್ ಭವನ (New Parliament Building) ಉದ್ಘಾಟನೆ ಮಾಡುತ್ತಿದ್ದಂತೆ ಅತ್ತ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ರಾಷ್ಟ್ರೀಯ ಜನತಾ ದಳ(RJD), ಸಂಸತ್ ಭವನವನ್ನು ಶವಪೆಟ್ಟಿಗೆಗೆ (Coffin) ಹೋಲಿಕೆ ಮಾಡಿ, ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದೆ. ಆರ್‌ಜೆಡಿ ಟ್ವೀಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಇಂದು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡಲಾಯಿತು ಎಂಬುದನ್ನು ಸಾಂಕೇತಿವಾಗಿ ಹೇಳಲು ಶವಪೆಟ್ಟಿಗೆಗೆ ಹೋಲಿಸಲಾಗಿದೆ ಎಂದು ಆರ್‌ಜೆಡಿ ಹೇಳಿದೆ.

ಟ್ವೀಟ್ ಬಗ್ಗೆ ವಿವರಿಸಿದ ಪಕ್ಷದ ನಾಯಕ ಶಕ್ತಿ ಸಿಂಗ್ ಯಾದವ್ ಅವರು, ನಾವು ಮಾಡಿರುವ ಟ್ವೀಟ್‌ನಲ್ಲಿರುವ ಶವಪೆಟ್ಟಿಗೆಯು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುತ್ತಿರುವುದನ್ನು ಸಂಕೇತಿಸುತ್ತಿದೆ. ದೇಶವು ಇದನ್ನು ಒಪ್ಪಿಕೊಳ್ಳುವುದಿಲ್ಲ. ಸಂಸತ್ತು ಪ್ರಜಾಪ್ರಭುತ್ವದ ದೇವಾಲಯವಾಗಿದೆ ಮತ್ತು ಇದು ಚರ್ಚೆಯ ಸ್ಥಳವಾಗಿದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಜನತಾ ದಳ ಮಾಡಿರುವ ಟ್ವೀಟ್

ಆರ್‌ಜೆಡಿ ವರ್ತನೆಯ ವಿರುದ್ಧ ಕೆಂಡಕಾರಿರುವ ಬಿಜೆಪಿಯ ನಾಯಕ ಸುಶೀಲ್ ಮೋದಿ ಅವರು, ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆ ಹೋಲಿಕೆ ಮಾಡಿರುವವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಆರ್‌ಜೆಡಿ ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಕೆ ಮಾಡಿರುವುದು ದುರದೃಷ್ಟಕರ. ಅವರು ಇಂದು ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಕೆ ಮಾಡುತ್ತಿದ್ದಾರೆ. ಹಳೆ ಸಂಸತ್ ಭವನವನ್ನು ಅವರು ಶೂನ್ಯದೊಂದಿಗೆ ಹೋಲಿಕೆ ಮಾಡುತ್ತಾರೆಯೇ? ನಾವು ಈ ಮೊದಲು ಸೊನ್ನೆಯಲ್ಲಿ ಕುಳಿತುಕೊಳುತ್ತಿದ್ದೇವು ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಸಂಯುಕ್ತ ಜನತಾ ದಳ ಕೂಡ ಈ ರೇಸ್‌ನಲ್ಲಿ ನುಗ್ಗಿದ್ದು, ಹೊಸ ಸಂಸತ್ ಭವನದ ಉದ್ಘಾಟನೆಯೊಂದಿಗೆ ಅಪಮಾನ ಇತಿಹಾಸವನ್ನು ಬರೆಯಲಾಗಿದೆ ಎಂದು ಹೇಳಿದೆ.

New Parliament Building: ಕಾರ್ಮಿಕರನ್ನು ಸನ್ಮಾನಿಸಿದ ಪ್ರಧಾನಿ ನೇರಂದ್ರ ಮೋದಿ

ನೂತನ ಸಂಸತ್ ಭವನ ಉದ್ಘಾಟನೆ (New Parliament Building Inauguration) ನಿಮಿತ್ತ ಮುಂಜಾನೆ 7.30ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಧಾನಿ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಎಲ್ಲ ಪೂಜೆಗಳಲ್ಲೂ ಪಾಲ್ಗೊಂಡರು. ಗಣಪತಿ ಹೋಮ ಮುಕ್ತಾಯವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ಸೆಂಗೋಲ್​​ನ್ನು ಹಿಡಿದು, ನೂತನ ಸಂಸತ್ ಭವನ ಪ್ರವೇಶಿಸಿ, ಅಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ಪ್ರತಿಷ್ಠಾಪಿಸಿದರು. ಈ ವೇಳೆ ತಮಿಳುನಾಡಿನ ಅಧೀನಂ ಮಠದ ಪುರೋಹಿತರು, ಸಂತರು, ಮಠಾಧೀಶರು ಇದ್ದರು. ಮಂತ್ರಘೋಷ ಮೊಳಗುತ್ತಿತ್ತು.

ಇದನ್ನೂ ಓದಿ: New Parliament Building: ನೂತನ ಸಂಸತ್​ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ

ಇಷ್ಟಾದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಮಿಕರನ್ನು ಸನ್ಮಾನಿಸಿದರು. ನೂತನ ಸಂಸತ್ ಭವನ ನಿರ್ಮಾಣ ಮಾಡಿದ ಈ ಕೆಲಸಗಾರರಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಅದಕ್ಕೂ ಮೊದಲು ನರೇಂದ್ರ ಮೋದಿಯವರು ಸಂಸತ್ ಭವನದ ಫಲಕ ಅನಾವರಣಗೊಳಿಸಿದರು. ನಂತರ ಅಲ್ಲಿ ಸರ್ವಧರ್ಮಗಳ ಪ್ರಾರ್ಥನೆ ನಡೆಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವ ಅಮಿತ್​ ಶಾ, ಇನ್ನಿತರ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಅನುರಾಗ್ ಠಾಕೂರ್​, ರಾಜನಾಥ್ ಸಿಂಗ್​ ಮತ್ತಿತರ ಹಲವು ಗಣ್ಯರು ಇದ್ದರು. ಇವರಲ್ಲಿ ಸ್ಪೀಕರ್ ಓಂ ಬಿರ್ಲಾ ಪ್ರತಿ ಕಾರ್ಯದಲ್ಲೂ ಪ್ರಧಾನಿ ಮೋದಿಗೆ ಜತೆಯಾದರು.

ಬಿಜೆಪಿ ನಾಯಕ ಸುಶೀಲ್ ಮೋದಿ ಆಕ್ರೋಶ

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಅಂಕಣ

ರಾಜ ಮಾರ್ಗ ಅಂಕಣ: ಆಧುನಿಕ ಅಂಗನವಾಡಿಗಳ ನಿರ್ಮಾಪಕ ಆದಿತ್ಯರಂಜನ್ IAS

Raja Marga column: ಭರತ ವಾಕ್ಯ- ಒಬ್ಬ ಸೇವಾಕಾಂಕ್ಷಿ IAS ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲ ಪರಿವರ್ತನೆಗಳನ್ನು ಮಾಡಲು ಸಾಧ್ಯ ಎನ್ನುವುದಕ್ಕೆ ಆದಿತ್ಯ ರಂಜನ್ ಒಂದು ಮೇರು ಉದಾಹರಣೆ ಆಗಿದ್ದಾರೆ.

VISTARANEWS.COM


on

Edited by

aditya ranjan ias
Koo
RAJAMARGA

ಕೇವಲ ಸಂಕಲ್ಪ ಶಕ್ತಿ ಮತ್ತು ಸಮಾಜ ಸೇವೆಯ ಕಾಳಜಿಯಿಂದ IAS ಪರೀಕ್ಷೆ ಬರೆದು ಜಿಲ್ಲಾಧಿಕಾರಿ ಆದ ಒಬ್ಬ ಉತ್ಸಾಹಿ ಯುವಕ ಇಂದು ಜಾರ್ಖಂಡ್ ರಾಜ್ಯದ ಒಂದು ಜಿಲ್ಲೆಯ ಚಿತ್ರಣವನ್ನೇ ಬದಲಾವಣೆ ಮಾಡಿರುವುದು ಬಹಳ ದೊಡ್ಡ ಸುದ್ದಿ! ಅದೂ ಕೂಡ ಶೈಕ್ಷಣಿಕ ಕ್ರಾಂತಿಯ ಮೂಲಕ ಅನ್ನುವಾಗ ಇನ್ನೂ ಹೆಚ್ಚು ರೋಮಾಂಚನ ಆಗುತ್ತದೆ. ಅದಕ್ಕೆ ಕಾರಣರಾದವರು ಆದಿತ್ಯ ರಂಜನ್.

ಸರಕಾರಿ ಶಾಲೆಗಳಲ್ಲಿ ಓದಿ ಐಎಎಸ್ ಬರೆದರು

ಅವರು ಮೂಲತಃ ಕೈಗಾರಿಕಾ ನಗರವಾದ ಬೋಕಾರೋದ ಒಂದು ಮಧ್ಯಮವರ್ಗದ ಕುಟುಂಬದಿಂದ ಬಂದವರು. ಸರಕಾರಿ ಶಾಲೆಗಳಲ್ಲಿ ಓದಿದರು. ಮುಂದೆ ಬಿ. ಟೆಕ್ ಪದವಿಯನ್ನು ಪಡೆದು ಶ್ರೀಮಂತವಾದ ಬಹುರಾಷ್ಟ್ರೀಯ ಕಂಪೆನಿಯಾದ ORACLE ಇದರ ಬೆಂಗಳೂರು ಕಚೇರಿಯಲ್ಲಿ ಉದ್ಯೋಗವನ್ನು ಮಾಡಿದರು. ಲಕ್ಷ ಲಕ್ಷ ಸಂಬಳ ಬರುವ ಉದ್ಯೋಗ, ಅದನ್ನು ಹಿಂಬಾಲಿಸಿಕೊಂಡು ಬರುವ ಆಧುನಿಕ ಲೈಫ್ ಸ್ಟೈಲ್ ಎಲ್ಲಾ ಇದ್ದರೂ ಒಂದೂವರೆ ವರ್ಷದಲ್ಲಿ ಅವರು ರಾಜೀನಾಮೆ ಕೊಟ್ಟು ಹೊರಬಂದರು. ಕಾರಣ ಬಾಲ್ಯದಿಂದ ಅವರಿಗಿದ್ದ ಸಮಾಜಸೇವೆಯ ತೀವ್ರವಾದ ತುಡಿತ.

ಮುಂದೆ UPSC ಪರೀಕ್ಷೆಯನ್ನು ಬರೆದು(2015) ಅವರು ಐಎಎಸ್ ಶ್ರೇಣಿಯಲ್ಲಿ ತೇರ್ಗಡೆಯಾದರು. ರಾಷ್ಟ್ರಮಟ್ಟದ 99ನೆಯ ರಾಂಕ್ ಅವರಿಗೆ ದೊರಕಿತು. ಪ್ರೊಬೇಷನರಿ ಅವಧಿ ಮುಗಿದ ನಂತರ ಅವರು ಸೇವೆಗೆ ಸೇರಿದ್ದು ಜಾರ್ಖಂಡ್ ರಾಜ್ಯದ ಸಿಂಗಭುಂ ಜಿಲ್ಲೆಯಲ್ಲಿ.

ಸರಕಾರಿ ಶಾಲೆಗಳಲ್ಲಿ ಅಡ್ಮಿಷನ್ ಹೆಚ್ಚಿಸಲು ಅವರು ಮಾಡಿದ ಯೋಜನೆ

ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದ ಜಿಲ್ಲೆ ಅದು. ಸಾಕ್ಷರತೆಯ ಪ್ರಮಾಣವು ಕೇವಲ 67% ಇತ್ತು. ಅಷ್ಟೊಂದು ಬಡತನ ಇದ್ದರೂ ಜನ ಸಾವಿರ ಸಾವಿರ ಡೊನೇಶನ್ ಸುರಿದು ಖಾಸಗಿ ಶಾಲೆಗಳ ಹಿಂದೆ ಓಡುತ್ತಿದ್ದರು. ಸರಕಾರಿ ಶಾಲೆಯಲ್ಲಿ ಮಕ್ಕಳ ತೀವ್ರವಾದ ಕೊರತೆ ಇತ್ತು. ಸಮಸ್ಯೆಯನ್ನು ಆಳವಾಗಿ ಜಿಲ್ಲಾಧಿಕಾರಿಯವರು ಅಧ್ಯಯನ ಮಾಡಿದರು.

ಆಗ ಅವರ ಗಮನಕ್ಕೆ ಬಂದ ವಾಸ್ತವ ಏನೆಂದರೆ ಸರಕಾರಿ ಅಂಗನವಾಡಿಗಳ ಸ್ಥಿತಿಯು ತುಂಬಾ ಕೆಟ್ಟು ಹೋಗಿತ್ತು. ಖಾಸಗಿ ಶಾಲೆಗಳು LKG/UKG ಎಂದು ವೈಭವೀಕರಣ ಮಾಡಿ ಪೋಷಕರನ್ನು ಆಕರ್ಷಣೆ ಮಾಡುತ್ತಿದ್ದರು. ಸರಕಾರಿ ಅಂಗನವಾಡಿಗೆ ಬಂದ ಮಕ್ಕಳು ಬೆಳಿಗ್ಗೆ ಇಲಾಖೆ ನೀಡಿದ ಕಿಚಡಿ ತಿಂದು ಮನೆಗೆ ಓಡಿ ಹೋಗುತ್ತಿದ್ದರು! ಅಂಗನವಾಡಿ ಸಹಾಯಕಿಯರು ಪಾಠವನ್ನೇ ಮಾಡುತ್ತಿರಲಿಲ್ಲ!

ಅಂಗನವಾಡಿಗಳ ಉನ್ನತೀಕರಣಕ್ಕೆ ಗಟ್ಟಿ ಸಂಕಲ್ಪ!

ಆಗ ಜಿಲ್ಲಾಧಿಕಾರಿ ಆದಿತ್ಯ ರಂಜನ್ ಅವರು ಒಬ್ಬ ಅಂಗನವಾಡಿಯ ಶಿಕ್ಷಕಿಯನ್ನು ಭೇಟಿ ಮಾಡಿದರು.ಆಕೆ ವಿಧವೆ. ಆದರೂ ತಿಂಗಳಿಗೆ 4,500 ರೂಪಾಯಿ ತನ್ನ ಕಿಸೆಯಿಂದ ಖರ್ಚು ಮಾಡಿ ಒಂದು ಮಾದರಿ ಅಂಗನವಾಡಿಯನ್ನು ನಡೆಸುತ್ತಿದ್ದರು. ಅದನ್ನು ನೋಡಿದ ಜಿಲ್ಲಾಧಿಕಾರಿಯವರ ಕಣ್ಣು ತೆರೆಯಿತು. ಅದನ್ನು ಅವರು ಒಂದು ಸವಾಲಾಗಿ ಸ್ವೀಕರಿಸಿದರು.

ಅವರ ಜಿಲ್ಲೆಯಲ್ಲಿ 2330ರಷ್ಟು ಅಂಗನವಾಡಿಗಳು ಇದ್ದವು. ಅದರಲ್ಲಿ 1000 ಅಂಗನವಾಡಿ ಆಯ್ದುಕೊಂಡು ನೀಲನಕ್ಷೆಯನ್ನು ಸಿದ್ಧಪಡಿಸಿದರು. BALA ( Buiding As Learning Aid) ಎಂಬ ಹೆಸರಿನ ಯೋಜನೆಯು ಜಾರಿಯಾಯಿತು. ಅವರು ಮಾಡಿದ ಸಣ್ಣ ಸಣ್ಣ ಕೆಲಸಗಳು ಆ ಜಿಲ್ಲೆಯ ಎಲ್ಲಾ ಅಂಗನವಾಡಿಗಳನ್ನು ಶ್ರೀಮಂತಗೊಳಿಸಿದವು.


ಐಎಎಸ್ ಆದಿತ್ಯ ರಂಜನ್ ಚಿತ್ರಣವನ್ನು ಬದಲಾಯಿಸಿದರು!

1) ಅಂಗನವಾಡಿಗಳ ಗೋಡೆಯನ್ನು ಬಣ್ಣ ಬಣ್ಣದ ಚಿತ್ರಗಳಿಂದ ಸಿಂಗಾರ ಮಾಡಿದರು. ಆಕರ್ಷಕವಾಗಿ ಅಕ್ಷರ ಮತ್ತು ಸಂಖ್ಯೆಗಳಿಂದ ತುಂಬಿಸಿದರು. ಪ್ರಾಣಿ ಪಕ್ಷಿಗಳ ಚಿತ್ರಗಳೂ ಮೂಡಿದವು.

2) ಅಂಗನವಾಡಿಗಳ ಕಲಿಕೆಗೆ ಸಿಲೆಬಸ್ ರಚಿಸಿದರು. ಆಕರ್ಷಕ ಪಠ್ಯಪುಸ್ತಕವು ಬಂದಿತು. ದೃಶ್ಯ ಮಾಧ್ಯಮಗಳ ಬಳಕೆ ಆಯಿತು. ಮಕ್ಕಳಿಗೆ ಇಷ್ಟ ಆಗುವ ಆಟಗಳ ಮೂಲಕ ಪಾಠ ಕಲಿಸುವ ವಿಧಾನವು ಜಾರಿಗೆ ಬಂದಿತು.

3) ಅಂಗನವಾಡಿಗಳ ಶಿಕ್ಷಕರಿಗೆ ಸನಿವಾಸ ತರಬೇತಿಯ ಸರಣಿಗಳು ನಡೆದವು. ಸ್ವತಃ DC ಬಂದು ಪಾಠ ಮಾಡಿದರು. ಮಕ್ಕಳನ್ನು ಪ್ರೀತಿಸುವ, ಶಿಕ್ಷೆ ಇಲ್ಲದೇ ಪ್ರೀತಿಯಿಂದ ಮಕ್ಕಳಿಗೆ ಕಲಿಸುವ ವಾತಾವರಣವನ್ನು ಕಲ್ಪಿಸಲಾಯಿತು. ಇಂಗ್ಲಿಷ್ ಪ್ರಾಸ ಪದ್ಯಗಳು ( Rhymes) ಬಳಕೆಗೆ ಬಂದವು.

4) E-Sameeksha ಎಂಬ ಆಪ್ ಮೂಲಕ ಪ್ರತೀ ಅಂಗನವಾಡಿಯ ಪ್ರತಿದಿನದ ಪ್ರಗತಿಯನ್ನು ದಾಖಲಿಸುವ ಮತ್ತು ಡಿಸಿ ಮಾನಿಟರ್ ಮಾಡುವ ವ್ಯವಸ್ಥೆಯು ಜಾರಿಯಾಯಿತು.

5) ವಿವಿಧ ಸೇವಾಸಂಸ್ಥೆಗಳ ಸಹಯೋಗದೊಂದಿಗೆ ಅಂಗನವಾಡಿಯ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ಮತ್ತು ಆಟದ ಸಾಮಗ್ರಿ ದೊರೆಯಿತು. ಸಂಗೀತ – ನಾಟಕ ಇತ್ಯಾದಿ ಚಟುವಟಿಕೆಗಳು ಗರಿಗೆದರಿದವು.

ಇದನ್ನೂ ಓದಿ ರಾಜ ಮಾರ್ಗ ಅಂಕಣ: ಆತಂಕವಿಲ್ಲ, ಲಜ್ಜೆ ಇಲ್ಲ, ಭಾವನೆಗಳೇ ಇಲ್ಲ! ಗರ್ಭವನ್ನು ಕಿತ್ತು ಕಿತ್ತು ಎಸೆಯುತ್ತಿದ್ದಾರೆ ನವ ಯುವ ಜನತೆ!

ಜಿಲ್ಲೆಯ ಅಂಗನವಾಡಿಗಳು ಸಿಂಗಾರವಾದವು

ಇವೆಲ್ಲದರ ಪರಿಣಾಮವಾಗಿ ಕೇವಲ ಎರಡೇ ವರ್ಷಗಳಲ್ಲಿ ಸರಕಾರಿ ಅಂಗನವಾಡಿಗಳು ಪ್ಲೇ ಸ್ಕೂಲಿಗಿಂತ ಅದ್ಭುತ ಆದವು. ಖಾಲಿಯಾಗಿದ್ದ ಸರಕಾರಿ ಪ್ರಾಥಮಿಕ ಶಾಲೆಗಳು ತುಂಬಿದವು. ಅಂಗನವಾಡಿಗಳನ್ನು ಅವರು ಉನ್ನತೀಕರಣ ಮಾಡಿದ್ದರಿಂದ ಇಡೀ ಜಿಲ್ಲೆಯ ಶೈಕ್ಷಣಿಕ ಚಿತ್ರಣವೇ ಬದಲಾಯಿತು. ಇದಕ್ಕೆ ಕಾರಣರಾದ ವ್ಯಕ್ತಿ ನಮ್ಮ ಜಿಲ್ಲಾಧಿಕಾರಿ ಆದಿತ್ಯ ರಂಜನ್.

ಇನ್ನೆರಡು ಅಪೂರ್ವವಾದ ಯೋಜನೆಗಳು

ಇಂತಹ ನೂರಾರು ಪರಿಕ್ರಮಗಳನ್ನು ಅವರು ಮಾಡಿದ್ದಾರೆ. ಅವರ ಇನ್ನೆರಡು ಯೋಜನೆಗಳು ರಾಷ್ಟ್ರದ ಗಮನವನ್ನು ಸೆಳೆದಿವೆ. ಅವುಗಳ ಬಗ್ಗೆ ನಾನು ಹೇಳಲೇಬೇಕು.

೧) Wonder on Wheels (Wow) ಎಂಬ ಯೋಜನೆಯ ಅಡಿಯಲ್ಲಿ ಒಂದು ಸಂಚಾರಿ ವಾಹನವು ನಗರದಾದ್ಯಂತ ಸಂಚರಿಸಿ ದೃಶ್ಯ ಮಾಧ್ಯಮಗಳ ಮೂಲಕ ಸಣ್ಣ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ತುಂಬಾ ಪರಿಣಾಮವಾಗಿ ಮೂಡಿಸುತ್ತಿದೆ. ಆ ಹೆಸರೇ ( WOW) ಅದ್ಭುತವಾಗಿದೆ.

೨) ಅವರ ಜಿಲ್ಲೆಯು ಕೂಡ ಕೊರೋನಾ ಪೀಡಿತವಾದಾಗ ಜಿಲ್ಲಾಧಿಕಾರಿ ಸ್ವತಃ ಕೆಲಸ ಮಾಡಿ CO- BOT ಎಂಬ ಹೆಸರಿನ ರೋಬೋಟನ್ನು ತಯಾರಿ ಮಾಡಿದರು. ಅದು ರಿಮೋಟ ಮೂಲಕ ಕೆಲಸ ಮಾಡುತ್ತ ಆಸ್ಪತ್ರೆ ಇಡೀ ಓಡಾಡಿ ರೋಗಿಗಳಿಗೆ ಔಷಧಿ, ಆಹಾರ, ಸೇನಿಟೈಸರಗಳನ್ನು ಸರಿಯಾದ ಸಮಯಕ್ಕೆ ನೀಡುತ್ತಿತ್ತು. ಮಾತ್ರವಲ್ಲದೆ ಅವರನ್ನು ನಗಿಸಿ ಖುಷಿ ಪಡಿಸುವ ಕೆಲಸವನ್ನೂ ಮಾಡುತ್ತಿತ್ತು. ಇದು ಭಾರತದಲ್ಲೇ ಪ್ರಥಮವಾದ ಪ್ರಯೋಗವಾಗಿದೆ!

Continue Reading

ದೇಶ

ಹೊಸ ಸಂಸತ್ ಭವನದಲ್ಲಿ ಸೆಂಗೋಲ್​ ಪ್ರತಿಷ್ಠಾಪನೆ; ಕೈಮುಗಿದುಕೊಂಡು ರಾಜದಂಡ ಹಿಡಿದು ಬಂದ ಪ್ರಧಾನಿ ಮೋದಿ

Sengol Installed: ರಾಜದಂಡವನ್ನು ಸ್ಪೀಕರ್​ ಕುರ್ಚಿ ಪಕ್ಕವೇ ಇಟ್ಟ ಪ್ರಧಾನಿ ಮೋದಿ, ಬಳಿಕ ಅಲ್ಲೊಂದು ದೀಪ ಹೊತ್ತಿಸಿದರು. ನಂತರ ಸೆಂಗೋಲ್​ಗೆ ಹೂವು ಹಾಕಿ, ಮತ್ತೆ ನಮಿಸಿದರು.

VISTARANEWS.COM


on

Edited by

PM Modi places sacred Sengol
Koo

ನವ ದೆಹಲಿ: ನೂತನ ಸಂಸತ್ ಭವನದ (New Parliament Building) ಸ್ಪೀಕರ್ ಕುರ್ಚಿ ಬಳಿ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಸೆಂಗೋಲ್​ ಪ್ರತಿಷ್ಠಾಪನೆ ಮಾಡಿದರು. ಹವನ ನಡೆದ ಸ್ಥಳದಲ್ಲಿ ರಾಜದಂಡಕ್ಕೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ ಅವರು, ಅಲ್ಲಿಂದ ಸಂಸತ್​ ಭವನದ ಒಳಗಿನ ಸ್ಪೀಕರ್ ಕುರ್ಚಿಯವರೆಗೂ ರಾಜದಂಡವನ್ನು ಹಿಡಿದುಬಂದರು. ಅವರು ಕೈಮುಗಿದುಕೊಂಡೇ ಬಂದಿದ್ದಾರೆ. ಅವರ ಮುಗಿದ ಕೈಗಳ ಮಧ್ಯೆ ರಾಜದಂಡ ಇತ್ತು.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಮಿಳುನಾಡಿನ ಅಧೀನಂ ಮಠಗಳ ಸಂತರು, ಪುರೋಹಿತರು, ಲೋಕಸಭಾ ಸ್ಪೀಕರ್ ಓಂಬಿರ್ಲಾ ಹೆಜ್ಜೆ ಹಾಕಿದರು. ರಾಜದಂಡವನ್ನು ಸ್ಪೀಕರ್​ ಕುರ್ಚಿ ಪಕ್ಕವೇ ಇಟ್ಟ ಪ್ರಧಾನಿ ಮೋದಿ, ಬಳಿಕ ಅಲ್ಲೊಂದು ದೀಪ ಹೊತ್ತಿಸಿದರು. ನಂತರ ಸೆಂಗೋಲ್​ಗೆ ಹೂವು ಹಾಕಿ, ಮತ್ತೆ ನಮಿಸಿದರು. ಸ್ಪೀಕರ್ ಕುರ್ಚಿಯ ಬಳಿಯಿಂದ ಮೆಟ್ಟಿಲಿಳಿದು ಬಂದವರು, ಎಲ್ಲ ಸಾಧು-ಸಂತರು, ಮಠಾಧೀಶರುಗಳಿಗೆ ನಮಿಸುತ್ತ ನಡೆದರು. ಈ ಎಲ್ಲ ಸಮಯದಲ್ಲಿ ತಮಿಳಿನ ಮಂತ್ರ-ಭಜನೆ ಮೊಳಗುತ್ತಿತ್ತು.

Continue Reading

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು

ವಿಸ್ತಾರ ನ್ಯೂಸ್‌ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಥೆಗಳ ಬಗ್ಗೆ ತೀರ್ಪುಗಾರರು ವಿವರವಾದ ಟಿಪ್ಪಣೆ ಬರೆದಿದ್ದಾರೆ. ತೀರ್ಪುಗಾರರಲ್ಲಿ ಒಬ್ಬರಾದ ಬಿ.ಜನಾರ್ದನ ಭಟ್‌ ಬರೆದ ವಿವರವಾದ ಟಿಪ್ಪಣಿ ಇಲ್ಲಿದೆ.

VISTARANEWS.COM


on

Edited by

vistara short story contest winners
Koo

b janardhana bhat

:: ಡಾ. ಬಿ. ಜನಾರ್ದನ ಭಟ್

ಈ ಇಪ್ಪತ್ತೈದು ಕತೆಗಳನ್ನು ಕನ್ನಡದ ಈ ಕಾಲಘಟ್ಟದ ಕತೆಗಳ ಪ್ರಾತಿನಿಧಿಕ ಕತೆಗಳು ಎಂದು ಭಾವಿಸಿದರೆ ಈ ಕತೆಗಳನ್ನು ಒಟ್ಟಾರೆಯಾಗಿ ಸಮೀಕ್ಷಿಸುವ ಮೂಲಕ ಸಣ್ಣಕತೆಗಳ ಒಲವು ನಿಲುವುಗಳನ್ನು ಅರಿಯಬಹುದು ಅನಿಸುತ್ತದೆ.

ಅದಕ್ಕಿಂತ ಮೊದಲು ಸಣ್ಣಕತೆಗಳ ಪ್ರಕಾರಕ್ಕೆ ಸಂಬಂಧಿಸಿದ ಕೆಲವು ಮಾತುಗಳು: ಸಣ್ಣಕತೆಗಳಲ್ಲಿ ಒಂದು ಕಥಾಂಶ ಅಥವಾ ಟೇಲ್ ಪ್ರಾಪರ್ ಮತ್ತು ಅದರ ಮೂಲಕ ವ್ಯಕ್ತವಾಗುವ ಆಶಯ – ಕತೆಗಾರ ರೂಪಿಸುವ ಒಂದು ಪರಿಣಾಮ – ಓದುಗರಿಗೆ ಮುಖ್ಯವಾಗಿ ಗಮನಕ್ಕೆ ಬರುವ ಅಂಶಗಳು. ಸತ್ಯದ ಅನ್ವೇಷಣೆ ಬಹುಮಟ್ಟಿಗೆ ಕತೆಗಾರಿಕೆಯ ಉದ್ದೇಶ.

ಆದರೆ ಸಣ್ಣಕತೆಯು ರ್ಯಾಶಿಯಾಸಿನೇಷನ್ (ratiocination) ಅಥವಾ ತರ್ಕಪ್ರಕ್ರಿಯೆಯ ಕಥಾನಕವೂ ಹೌದು – ಎನ್ನುವುದನ್ನು ಮೊದಲನೆಯ ಆಧುನಿಕ ಕತೆಗಾರ ಎಡ್ಗರ್ ಅಲನ್ ಪೋ-ನೇ ಹೇಳಿದ್ದಾನೆ. ಈ ಕಾಲದ ಕತೆಗಳಿಗೆ ಈ ಮಾದರಿ ಹೆಚ್ಚು ಪ್ರಿಯವಾಗಿದೆ. ಬಹುತೇಕ ಕತೆಗಳು ರ್ಯಾಶಿಯಾಸಿನೇಷನ್ ಮಾದರಿಯವು. ಇದನ್ನು ಬಳಸುವುದರಲ್ಲಿ ಹೆಚ್ಚುಗಾರಿಕೆಯಾಗಲಿ, ದೋಷವಾಗಲಿ ಇಲ್ಲ. ಆದರೆ ಕಥೆಯ ಸಂವಿಧಾನವನ್ನು ಕಲ್ಪಿಸುವಾಗ ಡೆನ್ಯೂಮೋ ಅಥವಾ ಇಳಿಮುಖ ಕ್ರಿಯೆ ಮತ್ತು ಅಂತ್ಯವನ್ನು – ಅಂತ್ಯವು ಬೀರಬೇಕಾದ ಪರಿಣಾಮವನ್ನು – ಕಲ್ಪಿಸುವಲ್ಲಿ ಬಹುತೇಕ ಕತೆಗಾರರು ವಿಫಲರಾಗುತ್ತಿರುವುದನ್ನು ಈ ಕೆಲವು ಕತೆಗಳಲ್ಲಿ ನಾನು ಗಮನಿಸಿದ್ದೇನೆ.

ಸಣ್ಣಕತೆ ನೈತಿಕ ಅರಿವಿನಲ್ಲಿನ ಬದಲಾವಣೆಯನ್ನು ತೋರಿಸುತ್ತದೆ; ಕಾದಂಬರಿಯಲ್ಲಿ ಬದುಕಿನ ನೈತಿಕ ಬದಲಾವಣೆಯನ್ನು ಚಿತ್ರಿಸುತ್ತದೆ (ಸಣ್ಣ ಕತೆಯು ಇದನ್ನು ಸೂಚಿಸಬಹುದಷ್ಟೆ). ಶೋರರ್ ಪ್ರಕಾರ – ಸಣ್ಣಕತೆಯಲ್ಲಿ ‘ನೈತಿಕ ಸಾಕ್ಷಾತ್ಕಾರದ ನೆಲೆ’ (ಆರ್ಟ್ ಆಫ್ ಮೋರಲ್ ರಿವಿಲೇಶನ್) ಇರುತ್ತದೆ; ಕಾದಂಬರಿಯಲ್ಲಿ ‘ನೈತಿಕ ವಿಕಾಸದ ನೆಲೆ’ (ಆರ್ಟ್ ಆಫ್ ಮೋರಲ್ ಇವೊಲ್ಯೂಷನ್) ಇರುತ್ತದೆ. ಸಣ್ಣಕತೆಯು ವಿಕಾಸದ ಪ್ರಕ್ರಿಯೆಯನ್ನು ಪರೀಕ್ಷಿಸಲು ಅದರಲ್ಲಿ ಮನುಷ್ಯ ಸಂಬಂಧಗಳು, ಅಥವಾ ಸಮಾನಾಂತರ ಕತೆಗಳು / ವೈದೃಶ್ಯಗಳು ಬೇಕಾಗುತ್ತವೆ. ಹೀಗೆ ಪರೀಕ್ಷಿಸುವ ವೇದಿಕೆಯಾಗಿದ್ದರೂ ಕೂಡ ಸಣ್ಣ ಕತೆಯಲ್ಲಿ ಒಂದು ಅನಿಸಿಕೆಯಾಗಿ ಅಥವಾ ತೀರ್ಮಾನವಾಗಿ ಮಾತ್ರ ಈ ನೈತಿಕ ಅರಿವಿನ ಸಾಕ್ಷಾತ್ಕಾರ ಬರುತ್ತದೆ. ಈ ಪರಿಶೀಲನೆಯ ಮೂಲಕ ಒಂದು ಮೌಲ್ಯವಾಗಿ ಸ್ವೀಕರಿಸಲ್ಪಟ್ಟ ನೈತಿಕ ಸಾಕ್ಷಾತ್ಕಾರದ ನೆಲೆಯು ಅದರ ಬೆಳವಣಿಗೆ ಅಥವಾ ನಿಜವಾದ ಸಾಕ್ಷಾತ್ಕಾರವನ್ನು ಓದುಗರ ಊಹೆಗೆ ಬಿಡಬೇಕಾಗುತ್ತದೆ.

ಫ್ರಾಂಕ್ ಒಕಾನರ್ ಹೇಳುವ ಪ್ರಕಾರ ಸಣ್ಣಕತೆಗಳ ನಾಯಕರು ಮುಳುಗಿಹೋದ ಜನರ (ಸಬ್‍ಮರ್ಜ್‍ಡ್ ಪಾಪ್ಯುಲೇಶನ್ ಗ್ರೂಪ್) ಪ್ರತಿನಿಧಿಗಳಾಗಿರುತ್ತಾರೆ. ಹಾಗಾಗಿ ಪತನದ ಅನುಭವ ಕೊಡುವ ಕತೆಗಳೇ ಹೆಚ್ಚು. ಈ 25 ಕತೆಗಳ ಮಟ್ಟಿಗೂ ಅದನ್ನು ಹೇಳಬಹುದು. ಇಲ್ಲಿ ಬಹುಮಾನ ಪಡೆದ ಕತೆಗಳ ಬಗ್ಗೆ ಒಟ್ಟಿನಲ್ಲಿ ಕೆಲವು ಮಾತುಗಳನ್ನು ಹೇಳುವುದಾದರೆ ಇವು ಸಮಕಾಲೀನತೆ ಉಳ್ಳ, ಸಾಮಾಜಿಕ ಪ್ರಸ್ತುತತೆಯುಳ್ಳ ಕತೆಗಳಾಗಿರುವುದರ ಜತೆಗೆ ‘ಮುಳುಗಿಹೋದ’ ಸ್ಥಿತಿಯಿಂದ ಎದ್ದು ಬರುವ ಛಲವನ್ನು ಅಥವಾ ಮುಳುಗುತ್ತಿರುವವರಿಗೆ ಕೈನೀಡಿ ಎಬ್ಬಿಸುವ ಛಾತಿಯನ್ನು ತೋರಿಸುತ್ತವೆ. ಹಾಗಾಗಿ ಅವು ಬಹುಮಾನಕ್ಕೆ ಅರ್ಹವಾಗಿವೆ. ಈ ಮಾನದಂಡದಲ್ಲಿ ಅಥವಾ ಯಾವುದೇ ಮಾನದಂಡದಲ್ಲಿ ನೋಡಿದರೂ ಬಹುಮಾನಕ್ಕೆ ಅರ್ಹವಾಗಿರುವ ಇನ್ನಷ್ಟು ಕತೆಗಳು ಈ 25 ಕತೆಗಳಲ್ಲಿವೆ. ಕೇವಲ ಎಂಟು ಕತೆಗಳನ್ನು ಆರಿಸಿಕೊಳ್ಳಬೇಕಾದಾಗ, ಅಂತಹ ಕೆಲವು ಕತೆಗಳನ್ನು ಹೊರಗಿಡುವ ತೀರ್ಮಾನ ಕೈಗೊಳ್ಳುವುದು ಕೂಡ ಸ್ವಲ್ಪ ಕಷ್ಟವೇ ಆಗಿತ್ತು.

ನನಗೆ ಸಂಪಾದಕರು ಕಳುಹಿಸಿಕೊಟ್ಟಿರುವ ಅಂತಿಮ ಸುತ್ತಿಗೆ ಆಯ್ಕೆಯಾದ 25 ಕತೆಗಳಲ್ಲಿ ಮೊದಲ ಎಂಟು ಸ್ಥಾನಗಳಿಗೆ ಆಯ್ಕೆಯಾಗಿರುವ ಕತೆಗಳ ಕುರಿತು ಟಿಪ್ಪಣಿಗಳು ಹೀಗಿವೆ:

ಪ್ರಥಮ ಬಹುಮಾನ ಪಡೆದ ಕತೆ: ಸೋಮನ ಕುಣಿತ

ಸೋಮನ ಕುಣಿತ ಎನ್ನುವುದು ಒಂದು ಗ್ರಾಮೀಣ ಆಚರಣೆ ಎನ್ನುವುದು ಕತೆಯಿಂದ ತಿಳಿದುಬರುವ ಮಾಹಿತಿ; ಈ ಆಚರಣೆಯ ಕುರಿತು ತಿಳಿಯದವರಿಗೂ ಕತೆಯನ್ನು ಓದಿ ಮೆಚ್ಚಲು ಬೇಕಾಗುವಷ್ಟು ಮಾಹಿತಿ ಕತೆಯೊಳಗೆಯೆ ಸಿಗುವುದರಿಂದ ಈ ಆಚರಣೆಯ ಬಗ್ಗೆ ತಿಳಿಯದ ಓದುಗರಿಗೆ ಸಮಸ್ಯೆಯಾಗುವುದಿಲ್ಲ. ಕೊಂಡಮ್ಮ ದೇವಿ ಎಂಬ ಗ್ರಾಮದೇವತೆಯ ಇಬ್ಬರು ಅಂಗರಕ್ಷಕರಲ್ಲಿ ರೌದ್ರ ಸೋಮ ಮತ್ತು ಸೌಮ್ಯ ಸೋಮ ಎಂಬ ಇಬ್ಬರು ಪಾತ್ರಧಾರಿಗಳಿರಬೇಕು. ರೌದ್ರ ಸೋಮನ ವೇಷಧಾರಿ ಕೆಂಪು ಬಣ್ಣ ಬಳಿದುಕೊಂಡು 15 ಕಿಲೋ ಭಾರವಾದ ರೌದ್ರ ಸೋಮನನ್ನು ಹೊತ್ತು ಕುಣಿಯಬೇಕು. ರಂಗಯ್ಯ ರೌದ್ರ ಸೋಮನನ್ನು ಹೊತ್ತು ಕುಣಿಯುತ್ತಿದ್ದ ಶಕ್ತಿವಂತ. ಅವನ ತಮ್ಮ ನರಸುಮ್ಮ ಹಳದಿ ಬಣ್ಣದ ಸೌಮ್ಯ ಸೋಮನನ್ನು ಹೊತ್ತು ಸುಮ್ಮನೆ ನಿಂತರೆ ಸಾಕಿತ್ತು. ರಂಗಯ್ಯ ಊರು ಬಿಟ್ಟು ಹೋದ ಮೇಲೆ ರೌದ್ರ ಸೋಮನನ್ನು ಹೊರುವವರು ಯಾರೂ ಸಿಕ್ಕಿರಲಿಲ್ಲ. ತನಗೆ ಬದುಕುವ ದಾರಿ ಮಾಡಿಕೊಡುತ್ತಿದ್ದ ತಮಟೆಯ ಚರ್ಮ ಹರಿದು ಬೇರೊಂದು ಚರ್ಮಕ್ಕಾಗಿ ದೊಡ್ಡಮದುರೆಯ ಜಾತ್ರೆಯ ಕೋಣಬಲಿಯ ದಿನಕ್ಕೆ ಕಾಯುತ್ತಿದ್ದ ನರಸುಮ್ಮನಿಗೆ ನಿಷೇಧ ಇತ್ಯಾದಿ ಗೊಂದಲದಿಂದ ಚರ್ಮ ಸಿಗುವುದಿಲ್ಲ. ಎರಡು ದಿನ ಕಳೆದು ಜಾತ್ರೆಯಾಗುತ್ತಿದ್ದ ಪಕ್ಕದ ಸ್ವಾಂದೇನಹಳ್ಳಿಗೆ ಹೋದರೆ ಅಲ್ಲಿ ಪೊಲೀಸರು ಎಚ್ಚರಿಕೆಯಿಂದ ಕಾದುಕೊಂಡಿದ್ದು ಬಲಿಯಾಗದಂತೆ ತಡೆಯುತ್ತಾರೆ. ಹೊಟ್ಟೆಗಿಲ್ಲದೆ ಚರ್ಮಕ್ಕಾಗಿ ಕಾದುಕೊಂಡಿದ್ದ ನರಸುಮ್ಮನ ಸಾತ್ವಿಕ ರೋಷವು ಅವನನ್ನು ರೌದ್ರ ಸೋಮನನ್ನು ಹೊತ್ತುಕೊಂಡು ಕುಣಿಯುವಂತೆ ಪ್ರಚೋದಿಸುತ್ತದೆ. ಅವನ ರೌದ್ರ ಕುಣಿತದೊಂದಿಗೆ ಕತೆ ಕೊನೆಯಾಗುತ್ತದೆ.

ದಲಿತರ ಬಡತನ ಮತ್ತು ಜೀವನದ ಹೋರಾಟಗಳ ಒಂದು ಅದ್ಭುತ ಚಿತ್ರಣ ನೀಡುವ ಈ ಕತೆಯ ಭಾಷೆ, ಬಳಸುವ ರೂಪಕಗಳು ಎಲ್ಲವೂ ಸಶಕ್ತವಾಗಿವೆ. ಇದು ತನ್ನ ಒಡಲಲ್ಲಿಟ್ಟುಕೊಂಡಿರುವ ಸಮೃದ್ಧ ಜೀವನಾನುಭವ ಮತ್ತು ಅಷ್ಟೇ ಹೃದಯಸ್ಪರ್ಶಿಯಾಗಿ ಓದುಗನ ಅನುಭವವಾಗಿ ಮಾರ್ಪಡಿಸುವ ಶಕ್ತಿಯಿರುವ ಕತೆಯಾದುದರಿಂದ ಮೊದಲನೆಯ ಬಹುಮಾನಕ್ಕೆ ಅರ್ಹವಾದ ಕತೆಯಾಗಿದೆ.

ಇಂತಹ ಕತೆಗಳ ಸಮಾಜಶಾಸ್ತ್ರೀಯ ವಿವರಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಲು ಹೋದಾಗ ಅವು, ವರ್ತಮಾನ ಕಾಲದ ಅನುಭವಗಳಿಂದ ಪ್ರಶ್ನಾರ್ಹವಾಗುತ್ತವೆ. ಅನಂತಮೂರ್ತಿಯವರ ‘ಸಂಸ್ಕಾರ’ದ ಶವಸಂಸ್ಕಾರದ ಪ್ರಶ್ನೆ, ಚಿನುಅ ಅಚೆಬೆಯವರ ಕತೆಗಳ ಆಚರಣೆಗಳು ಈ ರೀತಿಯವು. ಇಂತಹ ಕತೆಗಳು ಪ್ರಶ್ನೆಗಳನ್ನು ಮೀರಿ, ಕೆಲವೊಮ್ಮೆ ದೇಶ ಕಾಲಗಳನ್ನೂ ಮೀರಿ ಚಿರಂತನ ರೂಪಕಗಳಾಗುವ ಶಕ್ತಿಯನ್ನು ಪಡೆದಾಗ ಅವು ಯಶಸ್ವಿ ಸಾಹಿತ್ಯಕೃತಿಗಳಾಗುತ್ತವೆ. ‘ಸೋಮನ ಕುಣಿತ’ ಕತೆಗೆ ಆ ಬಗೆಯ ಶಕ್ತಿಯಿರುವುದರಿಂದ ಇದಕ್ಕೆ ಮೊದಲನೆಯ ಬಹುಮಾನ ಕೊಡಬಹುದೆನ್ನುವುದು ನನ್ನ ಅಭಿಪ್ರಾಯವಾಗಿದೆ.

ಎರಡನೆಯ ಬಹುಮಾನ: ಅಂತಃಕರಣದ ಟಿಪ್ಪಣಿಗಳು

ಈ ಕತೆಯು ಕುಟುಂಬದ ಕೇಂದ್ರದಲ್ಲಿರುವ ವಿದ್ಯಾವಂತ ಮತ್ತು ಪ್ರಜ್ಞಾವಂತ ಗೃಹಿಣಿಯೊಬ್ಬಳ (ಭಾಗೀರಥಿ) ಸ್ವಗತದ ಮೂಲಕ ನಿರೂಪಿಸಲ್ಪಟ್ಟಿದೆ. ಆಕೆಗೆ ಬಹುಶಃ ಡಿಪ್ರೆಶನ್ ತರಹದ ಸಮಸ್ಯೆಯಿದ್ದು ಆಕೆಯ ವೈದ್ಯೆ ಸುಮನ ಆಕೆಗೆ ತನ್ನ ಬಗೆಗೆ ಬರೆದಿಡುವಂತೆ ಹೇಳಿದ್ದರಿಂದ ಟಿಪ್ಪಣಿಯ ರೂಪದಲ್ಲಿ ಇದನ್ನು ಬರೆಯುತ್ತಿದ್ದಾಳೆ. ಅವಳ ಕನಸಿನಲ್ಲಿ ಅಥವಾ ಭ್ರಮಾಲೋಕದೊಳಗೆ ಒಬ್ಬ ಹುಡುಗ ದಂಡವನ್ನಾಡಿಸುತ್ತಾ ಪ್ರತ್ಯಕ್ಷವಾಗುತ್ತಾನೆ. ಇದು ಅಂತಃಪ್ರಜ್ಞೆಗೆ ರೂಪಕವಾಗಿರಬಹುದು. ಕಾರ್ಲ್ ಯೂಂಗ್ ಈ ರೀತಿ ಚಿತ್ರಗಳನ್ನು ಬರೆಸುವುದು, ಅಕ್ಷರಗಳಲ್ಲಿ ದಾಖಲಿಸುವುದು, ಹೇಳಿಕೊಳ್ಳುವುದು ಇತ್ಯಾದಿಗಳ ಮೂಲಕ ಮನಸ್ಸಿನ ಅಂತರಾಳದಲ್ಲಿ ಅಥವಾ ಅನ್‍ಕಾನ್ಷಸ್ ಹಂತದಲ್ಲಿರುವ ಅದುಮಿಟ್ಟ ಮನಸ್ಸಿನ ಕಲ್ಮಶಗಳನ್ನು ಹೊರತಂದು ಮನೋಚಿಕಿತ್ಸೆ ನೀಡುತ್ತಿದ್ದ. ನಿರೂಪಕಿಯ ಕನಸಿನ ಹುಡುಗ ಇಂತಹ ಒಂದು ಸಂಕೇತವಾಗಿರಬಹುದು.

ಆಕೆಯ ಗಂಡ ಪ್ರಕಾಶ ರಾಜಕಾರಣಿ – ಬೈಸೆಕ್ಸುವಲ್. ಆತನಿಗೆ ಮತ್ತೊಬ್ಬ ಪುರುಷನ ಜತೆಗೂ ಸಂಪರ್ಕವಿದೆ. ಅದರ ವಿಡಿಯೋ ಒಮ್ಮೆ ವೈರಲ್ ಆಗಿ ರಾಜಕೀಯ ಬಿರುಗಾಳಿ ಎದ್ದಾಗ ಈ ಕಥಾನಾಯಕಿ ಅದು ಸಹಜ ಎಂದು ಹೇಳಿ ಬಿರುಗಾಳಿಯನ್ನು ತಣ್ಣಗಾಗಿಸಿ ಗಂಡನನ್ನು ಕಾಪಾಡಿದ್ದಳು.

ಅವಳ ಇಬ್ಬರು ಮಕ್ಕಳೂ ಅತ್ತ ಗಂಡೂ ಅಲ್ಲದ ಹೆಣ್ಣೂ ಅಲ್ಲದ ಇಂಟರ್ ಸೆಕ್ಸ್ ಮಕ್ಕಳಾಗಿ ಹುಟ್ಟಿರುತ್ತಾರೆ. ಮೊದಲು ಹುಟ್ಟಿದ ಮಗುವನ್ನು ಹೆಣ್ಣಾಗಿ ಲಿಂಗಪರಿವರ್ತನೆ ಮಾಡಿಸಿ ಭೂಮಿ ಎಂದು ಹೆಸರಿಟ್ಟಿದ್ದರು. ಎರಡನೆಯದನ್ನು ಗಂಡಾಗಿ ಮಾಡಿ ಮುಗಿಲು ಎಂದು ಹೆಸರಿಟ್ಟಿದ್ದರು. ಬೆಳೆದ ಮಕ್ಕಳು ತಾವು ಏನಾಗಿದ್ದೇವೋ ಅದಕ್ಕಿಂತ ಭಿನ್ನವಾದ ಮನಸ್ಥಿತಿಯನ್ನು ಹೊಂದಿ ಅಪ್ಪ ಅಮ್ಮನ ಮೇಲೆ ಅಸಮಾಧಾನಗೊಂಡಿರುತ್ತಾರೆ. ಕೊನೆಗೆ ಮುಗಿಲು ಮನೆಬಿಟ್ಟು ಹೋಗಿರುತ್ತಾನೆ/ಳೆ.

ಅಪ್ರಜ್ಞೆಗೆ ಸಂಕೇತವಾಗಿರಬಹುದಾದ ಹುಡುಗ ಕೊನೆಯ ಭಾಗದಲ್ಲಿ ಅವಳನ್ನು ನುಂಗಲು ಬರುವಂತಹ ಅನುಭವ ನಿರೂಪಕಿಗೆ ಆಗುತ್ತದೆ. ಆಮೇಲೆ ಸ್ವಲ್ಪ ದಿನ ಚಿಕಿತ್ಸೆ ಪಡೆದು ಬರುತ್ತಾಳೆ. ಈ ಕತೆಯ ವೈಶಿಷ್ಟ್ಯ ಎಂದರೆ ಕತೆಯ ಹುಡುಗನನ್ನು ಬಿಟ್ಟರೆ ಉಳಿದ ವಿವರಗಳು ವಾಸ್ತವವೂ ಆಗಿವೆ, ಸಾಂಕೇತಿಕವೂ ಆಗಿವೆ. ಭಾಗೀರಥಿ ಅಥವಾ ಗಂಗೆ ಎನ್ನುವ ಹೆಸರು, ಭೀಷ್ಮಪ್ರತಿಜ್ಞೆಯ ಚಿತ್ರ ಇತ್ಯಾದಿ ಹಲವು ಸಂಕೇತಗಳು ಕತೆಯಲ್ಲಿವೆ.

ಕತೆಯಲ್ಲಿ ಟಿಪ್ಪಣಿಗಳನ್ನುಬರೆಯುವವಳು ಮತ್ತು ಕೇಂದ್ರಪ್ರಜ್ಞೆಯಾಗಿರುವವಳು ಒಬ್ಬಳು ‘ತಾಯಿ’. ಇದೊಂದು ತನ್ನದೇ ಸಮಸ್ಯೆಗಳನ್ನುಳ್ಳ ಆಧುನಿಕ ಮಹತ್ವಾಕಾಂಕ್ಷೀ ಸಂಸಾರ. ಇದರಲ್ಲಿ ಸಂಸಾರದ ಪೂರ್ವಪ್ರಜ್ಞೆಗೆ ಸಂಕೇತವಾಗಿ ಚಿಕ್ಕಿ ಇದ್ದಾರೆ; ಪತ್ನಿಗೆ ಪೂರ್ತಿ ನಿಷ್ಠನಾಗಿಲ್ಲದ ಮಹತ್ವಾಕಾಂಕ್ಷೀ ಗಂಡನಿದ್ದಾನೆ. ಮಕ್ಕಳು ಅವರದೇ ಸಮಸ್ಯೆಗಳ ಜತೆಗೆ ಹೆತ್ತವರನ್ನು ಧಿಕ್ಕರಿಸುತ್ತ ತಮ್ಮ ಅಸ್ತಿತ್ವದ ಅರ್ಥವನ್ನು ಅನ್ವೇಷಿಸುವ ಕಷ್ಟಗಳನ್ನು ಎದುರಿಸುತ್ತಿವೆ. ಇಲ್ಲಿ ಯುವಜನಾಂಗ ಬೇಜವಾಬ್ದಾರಿಯದು ಎನ್ನುವ ನಿಲುವಿಲ್ಲ. ಹೆತ್ತವರ ಆಯ್ಕೆಯಿಂದಾಗಿ ಅವರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕಷ್ಟವಾಗುತ್ತಾ ಇದೆ. ರ್ಯಾಶಿಯೋಸಿನೇಶನ್ ಮಾದರಿಯ ಕತೆಯಾಗಿ, ಕನ್ನಡ ಕಥನಪರಂಪರೆಗೆ ಹೊಸದೇ ಆದ ಸಮಸ್ಯೆಯೊಂದರ ಮೂಲಕ ಬದುಕಿನ ಅರ್ಥಶೋಧನೆ ನಡೆಸುವ ಕಾರಣ ಈ ಕತೆ ಬಹುಮಾನಕ್ಕೆ ಅರ್ಹವಾಗುತ್ತದೆ.

ಮೂರನೆಯ ಬಹುಮಾನ: ಅದು ಅವರ ಪ್ರಾಬ್ಲಮ್

ಈ ಕತೆ ಬೆಂಗಳೂರು ನಗರ ಕೇಂದ್ರಿತ ಆಧುನಿಕ ಚಟುವಟಿಕೆಗಳಲ್ಲಿ ಒಂದಾದ (ಬಹುಶ ಅನಿವಾಸಿ ಭಾರತೀಯರಿಂದ ನಡೆಸಲ್ಪಡುತ್ತಿರುವ) ಸಮಾಜಸೇವಾ ಚಟುವಟಿಕೆಯ ಸಂಘಟನೆಯೊಂದರ ಕೆಲವು ವ್ಯಕ್ತಿಗಳ ಕತೆ. ವಿಷಯ ವೈಯಕ್ತಿತವಾದರೂ ಸಂಘಟನೆಯ ಚಟುವಟಿಕೆ ಮತ್ತು ಸಾಮಾಜಿಕ ಪ್ರಸ್ತುತತೆಯಿರುವ ಕಾರಣ ಗಮನ ಸೆಳೆಯುತ್ತದೆ. ವಾರಾಂತ್ಯದಲ್ಲಿ ಯುವಜನಾಂಗದ ಸಾಮಾಜಿಕ ಕಾಳಜಿ ಇರುವ ಯುವಕ ಯುವತಿಯರು ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೋಗಿ ಅವರಿಗೆ ಆಪ್ತ ಸಲಹೆ, ಮುಂದಿನ ಜೀವನದ ಮಾರ್ಗದರ್ಶನ, ಆರೋಗ್ಯ ಸಲಹೆ, ಸಾಮಾಜಿಕ ಜಾಗೃತಿಗಾಗಿ ಬೀದಿ ನಾಟಕ ಇತ್ಯಾದಿಗಳನ್ನು ಹಮ್ಮಿಕೊಳ್ಳುತ್ತಾರೆ. ಮಕ್ಕಳಿಗೆ ಚಾಕಲೇಟ್, ಗಿಫ್ಟ್ ಇತ್ಯಾದಿಗಳ ಆಮಿಷದಿಂದಾಗಿ ಅವರು ರಜಾದಿನವೂ ಬರುತ್ತಾರೆ. ಈ ಕತೆಯ ನಾಯಕಿಗೆ ಇದೇ ಸಂಘಟನೆಯ ಆಕರ್ಷಕ ಯುವಕ ಮ್ಯಾಡಿಯ ಬಗ್ಗೆ ಆಕರ್ಷಣೆ ಇದೆ. ಅವನನ್ನು ಒಲಿಸಿಕೊಳ್ಳಲು, ಅವನ ಬೈಕಿನಲ್ಲಿ ಹೋಗಲು ಆಸೆಪಡುತ್ತಾಳೆ.

ಇಂತಹ ಒಂದು ವಾರಾಂತ್ಯದ ಕಾರ್ಯಕ್ರಮದಲ್ಲಿ ಅವಳಿಗೆ ಮ್ಯಾಡಿಯು ಬಡ ಬಾಲಕನೊಬ್ಬನನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡದ್ದು ಗಮನಕ್ಕೆ ಬರುತ್ತದೆ. ಅವನ ಬಗ್ಗೆ ದೂರು ನೀಡಲು ಹುಡುಗನ ಹೆತ್ತವರು, ಅಧ್ಯಾಪಕರು, ಸಂಘಟನೆಯವರು ಯಾರೂ ಮುಂದೆ ಬರುವುದಿಲ್ಲ. ‘ಅದು ಅವರ ಪ್ರಾಬ್ಲೆಮ್’ ಎನ್ನುವ ಮನೋಭಾವ ಎಲ್ಲರದೂ. ಮ್ಯಾಡಿ ಬೇರೆ ಹುಡುಗರನ್ನು ಬಳಸಿಕೊಂಡಿರುವುದೂ ಕತೆಯಲ್ಲಿ ದಾಖಲಾಗುತ್ತದೆ. ಕಥಾನಾಯಕಿ ಮ್ಯಾಡಿಯ ಬಿಳಿ ಟೀಶರ್ಟ್ ಬೆನ್ನಿಗೆ ‘ಐ ಆಮ್ ಅ ಪೀಡೋಫೈಲ್’ (ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ವಿಕೃತಕಾಮಿ) ಎಂದು ಪೋಸ್ಟರ್ ಪೆನ್ನಿನಿಂದ ಬರೆದು ತನ್ನ ಪ್ರತಿಭಟನೆಯನ್ನು ದಾಖಲಿಸುತ್ತಾಳೆ. ಮುಂದೆಯೂ ಆಕೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬಹುದಾದ ನಿರ್ಧಾರದಲ್ಲಿರುವಂತೆ ಅನಿಸುತ್ತದೆ. ವಿಕೃತ ಮನಸ್ಥಿತಿಯ ಚಿತ್ರಣ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರತಿಪಾದನೆ ಇದರ ಆಶಯ. ಸಮಾಜದಲ್ಲಿ ಮುಖ್ಯ ನೆಲೆಯ ಚರ್ಚೆಗೆ ಬಾರದೆ ಉಳಿಯುವ ಬಹುದೊಡ್ಡ ಸಮಸ್ಯೆಯೊಂದನ್ನು ಈ ಕತೆ ಪರಿಶೀಲನೆಗೆ ಎತ್ತಿಕೊಂಡಿರುವುದು ಶ್ಲಾಘನೀಯವಾಗಿದೆ.

ಮೆಚ್ಚುಗೆ ಪಡೆದ 5 ಕತೆಗಳು:

1. ಹುಣಸೇ ಹೂವು

ಗ್ರಾಮೀಣ ಬದುಕಿನ ಬಡತನದ ಬದುಕು ಮತ್ತು ಜಮೀನುದಾರೀ ಶೋಷಣೆ ಬಹಳ ಸಶಕ್ತವಾಗಿ ಕತೆಯ ರೂಪವನ್ನು ತಾಳಿದೆ. ಬಡತನದ ದಾರುಣ ಚಿತ್ರಣ ಮತ್ತು ಭೀಭತ್ಸ ನಿರೂಪಣೆಯಿಂದಾಗಿ ಹೊಟ್ಟೆ ತೊಳಸುವಂತಾಗುವ ಸನ್ನಿವೇಶಗಳಿವೆ. ಬಡವರನ್ನು ಗೌಡರ ಮನೆಯವರು ಲೈಂಗಿಕವಾಗಿ ಶೋಷಿಸುವುದು ಮತ್ತು ದುಡಿಯುವವರ ಆರ್ಥಿಕ ಸಂಕಷ್ಟಗಳು ಹಿನ್ನೆಲೆಯಲ್ಲಿ ಬಂದು ಬಡ ಕುಟುಂಬದ ಗಂಡಸಿನ ದೈನೇಸಿ ಬದುಕು, ಅಸಹಾಯಕತೆ ಮತ್ತು ಮಗಳ ಮೇಲಿನ ಸಿಟ್ಟಿನ ಮೂಲಕವೇ ಕತೆಯಲ್ಲಿ ಬದುಕಿನ ಕ್ರೌರ್ಯವನ್ನು ಚಿತ್ರಿಸಿರುವುದು ವಿಶೇಷವಾಗಿದೆ. ಲೈಂಗಿಕ ಶೋಷಣೆ ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಒಂದು ಕುಟುಂಬದ ಸರ್ವನಾಶ ಆಗುವುದು ಹೃದಯಸ್ಪರ್ಶಿಯಾಗಿದೆ. ಗ್ರಾಮ್ಯಭಾಷೆಯ ಬಳಕೆ ಇಲ್ಲಿ ಸಹಜವಾಗಿ ಬಂದಿದೆ.

2. ಪಿಂಕ್ ಟ್ರಂಪೆಟ್

ಈ ಕತೆಯಲ್ಲಿ ಮಧ್ಯವಯಸ್ಸಿನ ಹಳ್ಳಿಯ ವಿಧವೆ ಹೆಂಗಸು ಶರಾವತಿ ನಗರಕ್ಕೆ ಬಂದಾಗ ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳುತ್ತಾ ಮಾನಸಿಕವಾಗಿ ಅರಳುವುದನ್ನು ಪಿಂಕ್ ಟ್ರಂಪೆಟ್ ಎಂಬ ಹೂವಿನ ಸಂಕೇತದ ಮೂಲಕ ಹೇಳಿರುವ ಸೂಕ್ಷ್ಮ ಚೆನ್ನಾಗಿದೆ. ಊರಲ್ಲಿ ಅಡಿಕೆ ಕೃಷಿಕ ಕುಟುಂಬದಲ್ಲಿದ್ದು ಸಹಕರಿಸಬೇಕಾದ ಆಕೆಗೆ ಈ ಕೆಲಸಗಳು ಇರದ ಫೆಬ್ರವರಿ, ಮಾರ್ಚ್, ಎಪ್ರಿಲ್ – ಹೀಗೆ ಬೇಸಗೆಯ ತಿಂಗಳುಗಳಲ್ಲಿ ಮಾತ್ರ ಮಗನ ಜತೆಗೆ ಬಂದಿರಲು ಸಾಧ್ಯ. ಆಗ ವಾಕಿಂಗ್ ಹೋಗುತ್ತ ಮಧ್ಯವಯಸ್ಕ ಕಲಾವಿದ, ಆಧುನಿಕ ಜೀವನಶೈಲಿಯ ರತ್ನಾಕರನ ಜತೆಗೆ ವಾಕಿಂಗ್ ಹೋಗುತ್ತ ಅವನತ್ತ ಆಕರ್ಷಿತಳಾಗುತ್ತಾಳೆ. ವೈಧವ್ಯದ ಬದುಕು ಅನಿವಾರ್ಯವೆಂಬಂತಿದ್ದ ಆಕೆಯ ಮನಸ್ಸು ಆತನನ್ನು ಮದುವೆಯಾದರೆ ಆದೀತು ಎನ್ನುವಂತೆ ಅರಳುತ್ತದೆ. ಅದೇ ವೇಳೆಗೆ ಆತನ ಪತ್ನಿ ಗಾಯತ್ರಿಯೂ ಮುನಿಸಿಕೊಂಡು ಆತನನ್ನು ಬಿಟ್ಟುಹೋಗಿರುತ್ತಾಳೆ. ‌

ಮುಂದಿನ ವರ್ಷ ಬೆಂಗಳೂರಿಗೆ ಹೋದಾಗ ಶರಾವತಿಗೆ ತಾನು ರತ್ನಾಕರನ ಜತೆಗೆ ಹೊಸಬದುಕನ್ನು ಪ್ರಾರಂಭಿಸಬೇಕೆನ್ನುವ ನಿರ್ಧಾರ ಗಟ್ಟಿಯಾಗಿರುತ್ತದೆ. ಅವಳ ಮಾವನ ಮನೆಯವರಿಗೆ ಕೆಲಸಕ್ಕೆ ಒಂದಾಳು ಕಡಿಮೆಯಾಗುವುದೆಂದು ಆತಂಕದಿಂದ ಅವಳು ಬೆಂಗಳೂರಿನಲ್ಲಿ ಹೆಚ್ಚು ದಿನ ಇರಬಾರದು ಎಂದು ಒತ್ತಾಯಿಸುತ್ತಾರೆ. ಗಾಯತ್ರಿ ರತ್ನಾಕರನ ಬದುಕಿಗೆ ಹಿಂದಿರುಗಿರುವುದಿಲ್ಲ. ಇದರಿಂದ ಶರಾವತಿಗೆ ತಾನೇ ಮುಂದುವರಿದು ತಾವಿಬ್ಬರು ಜತೆಗೂಡಿದರೆ ಹೇಗೆ ಎಂದು ಪತ್ರಬರೆಯಲು ಧೈರ್ಯವಾಗುತ್ತದೆ. ಆದರೆ ರಮಾನಂದ ಅದಕ್ಕೆ ಸ್ಪಂದಿಸುವುದಿಲ್ಲ. ಅವನು ಮಾನಸಿಕವಾಗಿ ತನ್ನ ಪತ್ನಿಯನ್ನು ಹಚ್ಚಿಕೊಂಡಿರಬಹುದು; ಅಥವಾ ಪತ್ರವನ್ನು ನೋಡದೆಯೆ ಇರಬಹುದು, ಅಥವಾ ಅವನು ಗಾಯತ್ರಿಯನ್ನು ಜೀವನಸಂಗಾತಿಯನ್ನಾಗಿ ಕಲ್ಪಿಸಿಕೊಳ್ಳದೆ ಇರಬಹುದು.

ರ್ಯಾಶಿಯೋಸಿನೇಶನ್ ಮಾರ್ಗದ ಒಂದು ಕತೆಯಾದ ಇದರಲ್ಲಿ ನಾಯಕಿ ಶರಾವತಿ ತಾನೇ ಪ್ರೌಢ ಮರುಮದುವೆಗೆ ಪ್ರಸ್ತಾಪ ಮಾಡುವಷ್ಟು ದಿಟ್ಟತನ ತೋರಿಸುವಷ್ಟಕ್ಕೆ ಮನೋವ್ಯಾಪಾರದ ಬೆಳವಣಿಗೆ ನಿಂತುಬಿಡುತ್ತದೆ. ಅದು ಆ ಗಂಡಸಿನ ಗಮನಕ್ಕೆ ಬಂದಿದೆಯೋ ಬಂದಿಲ್ಲವೋ ಎನ್ನುವುದು ಅಸ್ಪಷ್ಟವಾದ ಕಾರಣ ಅವಳ ಮುಂದಿನ ನಡೆ ಮತ್ತೆ ತನ್ನ ಹಳೆಯ ಬದುಕಿಗೆ ವಾಪಸಾಗುವುದೇ ಆಗಬಹುದು ಎನ್ನುವ ದಟ್ಟವಾದ ಸೂಚನೆ ಕತೆಯಲ್ಲಿದೆ. ಹಾಗಾಗಿ ಹೊಸ ಅರಿವು ‘ನೈತಿಕ ವಿಕಾಸದ ನೆಲೆ’ಯನ್ನು ತಲುಪುವುದನ್ನು ಕೂಡ ಓದುಗರು ಊಹಿಸಲು ಅವಕಾಶ ಇರುವುದಿಲ್ಲ. ಹಿಂದೆ ಇಪ್ಪತ್ತನೆಯ ಶತಮಾನದ ನವೋದಯ ಸಾಹಿತ್ಯದಲ್ಲಿ ವಿಧವಾ ವಿವಾಹವನ್ನು ಪ್ರತಿಪಾದಿಸುವ ಕತೆ ಕಾದಂಬರಿಗಳಲ್ಲಿ ಸಮಾಜದ ಒಟ್ಟಭಿಪ್ರಾಯವನ್ನು ಒಲಿಸಿಕೊಳ್ಳಬೇಕಾದ ಅಗತ್ಯ ಎಷ್ಟಿತ್ತೆಂದರೆ ಆಕೆ ಅಕ್ಷತ ಕನ್ಯೆ ಎನ್ನುವುದನ್ನು ಸೂಚಿಸುವ ಕೃತಿಗಳನ್ನು ಕಾಣಬಹುದಾಗಿತ್ತು. ಇಲ್ಲಿ, ನಾಯಕಿಯ ತರ್ಕ ಪ್ರಕ್ರಿಯೆ ಗಟ್ಟಿಯಾದುದೇ ಆಗಿದ್ದರೆ ಆಕೆ ನೇರವಾಗಿ, “ನಾನು ನಿಮಗೊಂದು ಸಂದೇಶ ಇರಿಸಿದ್ದೆ. ನೀವದನ್ನು ಗಮನಿಸಿದಿರಾ?” ಎಂದು ಕೇಳಿ ಸಂಶಯ ಪರಿಹರಿಸಿಕೊಳ್ಳಬಹುದಿತ್ತು. ಅವಳು ಮತ್ತೆ ತನ್ನ ಹಳೆಯ ಬದುಕಿಗೆ ಮರಳುತ್ತಾಳೆ ಎನ್ನುವ ಸೂಚನೆಯೇ ಕತೆಯಲ್ಲಿದೆ.

3. ಪರವೇಶ್ಮಸ್ಥನ ಫಿಕ್ಖ್ ಪ್ರಸಂಗ

ಇಲ್ಲಿ ಒಬ್ಬ ಮುಸಲ್ಮಾನ ಸಂಸಾರಸ್ಥ ಒಂದು ಕುಗ್ರಾಮದ ಮಸೀದಿಯಲ್ಲಿ ಇಮಾಮ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾನೆ. ಅವನ ಏಕೈಕ ಪುತ್ರ ತಾಂತ್ರಿಕ ಶಿಕ್ಷಣ ಪಡೆದು ಮುಂಬಯಿಯಲ್ಲಿ ಸಂಸಾರ ಹೂಡಿದ್ದಾನೆ. ಅಪ್ಪ ಅಮ್ಮ ತನ್ನ ಜತೆಗೆ ಬಂದಿರುವಂತೆ ಕರೆಯುತ್ತಿದ್ದಾನೆ. ಅಪ್ಪ ಇಮಾಮ್, ಊರಿನ ಮುಖಂಡನೊಬ್ಬನ ಜತೆಗೆ ಮಸೀದಿಯ ಡೆಪೆÇೀಸಿಟ್‍ಗೆ ಬರುವ ಬಡ್ಡಿ ಹಣದ ವಿಚಾರದಲ್ಲಿ ತಾಕಲಾಟಕ್ಕೆ ಬಿದ್ದಿದ್ದಾನೆ. ಮುಖಂಡ ಆ ಹಣವನ್ನು ತಿಂದುಹಾಕಬಾರದೆಂಬ ನ್ಯಾಯಪ್ರಜ್ಞೆಯೇ ಅದು. ಆದರೆ ಇಮಾಮ್ ಕೆಲವೊಮ್ಮೆ ಇಕ್ಕಟ್ಟಿಗೆ ಸಿಲುಕುವಾಗ ಮುಖಂಡನ ಇನ್‍ಫ್ಲೂಯೆನ್ಸ್ ಇವನನ್ನು ಉಳಿಸಲು ಬೇಕಾಗುತ್ತದೆ. ಅಲ್ಲದೆ ಈತ ಪರವೇಶ್ಮಸ್ಥ (ಬೇರೆಯವರ ಮನೆಯಲ್ಲಿ ವಾಸಿಸುವವನು). ಕೊನೆಗೂ ಊರಿನ ಉಸಾಬರಿಯನ್ನು ಬಿಟ್ಟು ಮುಂಬಯಿಗೆ ತೆರಳುತ್ತ್ತಾನೆ. ಮಗ ಅವನಿಂದ ಕೆಲವು ವಿಚಾರಗಳ ಬಗ್ಗೆ ಮಾಹಿತಿ ಕೇಳಿ ಪಡೆಯುತ್ತಾನೆ. ಮುಖ್ಯವಾದುದು, ಇಮಾಮನ ಪತ್ನಿ ನಫೀಸಾ ಹಿಂದೂ ಆಗಿದ್ದವಳು ಎನ್ನುವುದು.

ಇಲ್ಲಿನ ಮುಖ್ಯ ಧರ್ಮ ಜಿಜ್ಞಾಸೆ ಶೀರ್ಷಿಕೆಯಲ್ಲಿರುವ ಹಾಗೆ ಫಿಕ್ಖ್ ಎಂಬ ಬಡ್ಡಿ ಹಣದ ನಿಯಮದ ಕುರಿತಾಗಿದೆ; ಜತೆಗೆ ಈ ಜಿಜ್ಞಾಸೆಗೆ ತಾನು ಅಧಿಕಾರಸ್ಥ ಎಂದು ಮುಂದೆ ಕಾಲಿಟ್ಟು ಹಿಂದೆ ಸರಿದ ಕಥಾನಾಯಕನ ‘ಪರವೇಶ್ಮಸ್ಥ’ ಸ್ಥಿತಿಯ ಜತೆಗೆ ಅವನ ಧಾರ್ಮಿಕ ನಿಲುವಿನ ಮುಖಾಮುಖಿಯನ್ನು ಅದು ಸೂಚಿಸುತ್ತದೆ. ಕತೆಯ ಕೊನೆ ಇನ್ನಷ್ಟು ಪರಿಣಾಮಕಾರಿಯಾಗಿರಬಹುದಿತ್ತು.

4. ಕಿತ್ತಳೆ ಚಿಟ್ಟೆ

ಮನಸ್ಸಿನ ಮತ್ತು ಸಂಬಂಧಗಳ ಸೂಕ್ಷ್ಮಗಳನ್ನು ಚಿತ್ರಿಸಿರುವ ಸಣ್ಣಕತೆ. ಕಥಾನಾಯಕಿ ತಾನೊಂದು ಕಿತ್ತಳೆಯಾಗಿರುವಂತೆ, ಅದನ್ನು ಯಾರೋ ಸಿಪ್ಪೆ ಸುಲಿದು ತಿಂದಂತೆ, ಮತ್ತೆ ತಾನೊಂದು ಕಿತ್ತಳೆ ಚಿಟ್ಟೆಯಾದಂತೆ ಕನಸುಕಾಣುತ್ತಾಳೆ. ಅವಳ ಮನಸ್ಸು ಅತಿಯಾಗಿ ಸೂಕ್ಷ್ಮವಾಗಿದೆ. ಅವಳ ಪ್ರಿಯತಮ ಒಮ್ಮೆ ಅವಸರಿಸಿ ಅವಳ ಮೇಲೆ ದಾಳಿಮಾಡಿದನೆಂದು ದೂರಸರಿಯುತ್ತಾಳೆ. ಮತ್ತೆ ಅವರು ಜತೆಯಾದರೂ ಮೊದಲಿನ ವಿಶ್ವಾಸ ಉಳಿಯುವುದಿಲ್ಲ ಇತ್ಯಾದಿ ಮನಸ್ಸಿನ ಸೂಕ್ಷ್ಮಗಳು, ಪ್ರೇಮ-ಕಾಮವನ್ನು ಹೆಸರಿಸದೆ ಅವುಗಳ ವ್ಯತ್ಯಾಸವನ್ನು ಕ್ರಿಯೆಯಲ್ಲಿ ಅನುಭವಿಸುವ ಮಾದರಿಯ ಕತೆ.

‘ಪಿಂಕ್ ಟ್ರಂಪೆಟ್’ ಎಂಮ ಕತೆಯ ಶೀರ್ಷಿಕೆಯನ್ನು ಇದರ ಶೀರ್ಷಿಕೆಯ ಜತೆಗೆ ಹೋಲಿಸಿದಾಗ ಒಂದು ವಿಶಿಷ್ಟ ವಿದ್ಯಮಾನವು ನಮ್ಮ ಗಮನಕ್ಕೆ ಬರುತ್ತದೆ. ಹೆಣ್ಣನ್ನು ಹೂವಿಗೆ, ಚಿಟ್ಟೆಗೆ, ಹಣ್ಣಿಗೆ ಹೋಲಿಸುವ ಒಂದು ಸಂಪ್ರದಾಯ ಆಧುನಿಕ ಸಾಹಿತ್ಯದಲ್ಲಿಯೂ ಬೇರೆಬೇರೆ ರೀತಿಗಳಲ್ಲಿ ಪರಂಪರೆಯ ಮುಂದುವರಿಕೆಯಾಗಿ ಕಾಣಿಸುತ್ತಿದೆ. ಈ ಎರಡೂ ಕತೆಗಳಲ್ಲಿ ಈ ರೂಪಕಗಳು ಸೃಜನಶೀಲವಾಗಿ ಬಂದಿವೆ; ಸಿದ್ಧಕಲ್ಪನೆಯಾಗಿ ಬಂದಿಲ್ಲ.

ಹಾಗೆ ನೋಡಿದರೆ ‘ಹುಣಸೇ ಹೂವು’ ಕೂಡ ಗ್ರಾಮೀಣ ಶೋಷಿತ ಮಹಿಳೆಗೆ ರೂಪಕವಾಗಿಯೇ ಬಂದಿದೆ. ಇದು ಕೂಡ ಸೃಜನಶೀಲವಾಗಿಯೇ ಇದೆ. ಅಲ್ಲಿ ಅದು ಹೋಲಿಕೆಯಾಗಿ ಬಂದಿಲ್ಲ; ಹೆಚ್ಚು ಸಾಂಕೇತಿಕವಾಗಿದೆ.

5. ನೆಲೆ

ಪ್ರತಿಭಾ ಎನ್ನುವ ಪ್ರತಿಭಾವಂತ ಸುಂದರಿ ಯುವತಿಯನ್ನು ಬಡತನದ ಕಾರಣದಿಂದಾಗಿ ಮುಂಬಯಿಯ ಕಿವುಡ, ಮೂಗನಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಆಕೆ ಸ್ವಂತ ಪರಿಶ್ರಮದಿಂದ ಉದ್ಯೋಗ ಸಂಪಾದಿಸಿಕೊಂಡು ಸ್ವಂತ ಕಾಲಿನ ಮೇಲೆ ನಿಲ್ಲುವಂತಾಗುತ್ತಾಳೆ. ಚಿತ್ರಲೇಖಾ ಎಂಬ ಹೆಣ್ಣೂಮಗುವಾದ ಮೇಲೆ ಗಂಡನನ್ನೂ ಮಗಳನ್ನೂ ಬಿಟ್ಟು ದೆಹಲಿಗೆ ಹೋಗಿ ಮಧು ಎಂದು ಹೆಸರು ಬದಲಾಯಿಸಿಕೊಳ್ಳುತ್ತಾಳೆ. ಅಲ್ಲಿಯೇ ಒಬ್ಬ ಸಹೋದ್ಯೋಗಿಯನ್ನು ಮದುವೆಯಾಗಿ ಸ್ಟಾರ್ಟ್ ಅಪ್ ಕಂಪೆನಿ ಮಾಡುತ್ತಾಳೆ. ಗಂಡ ತೀರಿಹೋಗುತ್ತಾನೆ. ಅವಳಿಗೆ ಅವನಲ್ಲಿ 19 ವರ್ಷದ ಮಗ ಇರುತ್ತಾನೆ. ಈಗ ಅವಳಿಗೆ ಅವಳ ಹಿರಿಯ ಮಗಳನ್ನು ಸಂಪರ್ಕಿಸಲು ಆಸೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಸಾಧಿಸುತ್ತಾಳೆ. ಅವಳ ಮಗಳು ಮೊದಲು ತನ್ನನ್ನು ತೊರೆದು ಹೋದವಳು ಎಂದು ಅವಳನ್ನು ತಿರಸ್ಕರಿಸಿದರೂ ನಂತರ ಅವಳ ‘ನೆಲೆ’ಯಿಂದ ಅವಳ ಬದುಕನ್ನು ಅರ್ಥಮಾಡಿಕೊಂಡು ಅವಳನ್ನು ಭೇಟಿಯಾಗಲು ಮಾನಸಿಕವಾಗಿ ಸಿದ್ಧಳಾಗುತ್ತಾಳೆ.

ವ್ಯಕ್ತಿಗಳ ಆಯ್ಕೆಯನ್ನು ಭಿನ್ನಭಿನ್ನವಾದ ನೆಲೆಗಳ ಮೂಲಕ ನೋಡಲು ಪ್ರೇರಣೆ ಕೊಡುವ, ಯಾರನ್ನೂ ಟೀಕಿಸದೆ; ಆಯ್ಕೆಗಳನ್ನು ಮಾಡುವ ಮೂಲಕ ವ್ಯಕ್ತಿ ತನ್ನ ಬದುಕಿಗೆ ತಾನು ಜವಾಬ್ದಾರನಾಗುವುದನ್ನು ಅರಿತುಕೊಂಡು ಅವನನ್ನು ಸ್ವೀಕರಿಸುವ ಧನಾತ್ಮಕ ಚಿಂತನೆಯನ್ನು ಆಶಯವಾಗಿ ಪರಿವರ್ತಿಸಿರುವ ಉತ್ತಮ ಕತೆ ಇದು.

ಬಹುಮಾನ ವಿಜೇತರಿಗೂ, ಉತ್ತಮ ಕತೆಗಳನ್ನು ಬರೆದಿರುವ ಇತರರಿಗೂ ಅಭಿನಂದನೆಗಳು. ಈ ಕಥಾಸ್ಪರ್ಧೆಯನ್ನು ಏರ್ಪಡಿಸಿ, ಕನ್ನಡದ ಸಣ್ಣಕಥಾ ಕ್ಷೇತ್ರದಲ್ಲಿ ಹೊಸ ಸ್ಪಂದನೆಗಳಿಗೆ ಕಾರಣವಾಗಿರುವ ವಿಸ್ತಾರ ನ್ಯೂಸ್ ಬಳಗಕ್ಕೆ ಧನ್ಯವಾದಗಳು ಹಾಗೂ ಅಭಿನಂದನೆಗಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್‌ ಡಿ.ಆರ್‌ ಪ್ರಥಮ, ದಾದಾಪೀರ್‌ ಜೈಮನ್‌ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ

Continue Reading
Advertisement
Rain alert
ಉಡುಪಿ2 mins ago

Weather Report: ಭಾನುವಾರ ಈ ಜಿಲ್ಲೆಗಳಲ್ಲಿ ವರುಣನ ಅಬ್ಬರ; ಗಾಳಿ ವೇಗವೂ ಹೆಚ್ಚಲಿದೆ ಎಂದ ಹವಾಮಾನ ಇಲಾಖೆ

french open novak djokovic
ಕ್ರೀಡೆ23 mins ago

French Open 2023: ಇಂದಿನಿಂದ ಫ್ರೆಂಚ್‌ ಓಪನ್‌; ನಡಾಲ್‌ ದಾಖಲೆ ಮುರಿಯುವ ವಿಶ್ವಾಸದಲ್ಲಿ ಜೋಕೊ

Shah Rukh Khan And Akshay kumar Voice Over to New parliament building Video
ದೇಶ28 mins ago

ಪ್ರಧಾನಿ ಮೋದಿ ಮನವಿಗೆ ಸ್ಪಂದನೆ; ಸಂಸತ್​ ಭವನದ ವಿಡಿಯೊಕ್ಕೆ ಧ್ವನಿ ಕೊಟ್ಟ ಶಾರುಖ್​ ಖಾನ್​, ಅಕ್ಷಯ್​ ಕುಮಾರ್​

naresh and pavitra lokesh Live in Relationship
South Cinema39 mins ago

Telugu star Naresh: ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ನರೇಶ್‌, ಪವಿತ್ರಾ ಲೋಕೇಶ್‌ ಹೇಳಿದ್ದೇನು?

IIFA 2023 Winners Hrithik Roshan and anil Kapoor
South Cinema41 mins ago

IIFA 2023 Winners Full List: ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ; ವಿಜೇತರ ಪಟ್ಟಿ ಇಲ್ಲಿದೆ!

new Parliament building and coffin box
ದೇಶ45 mins ago

New Parliament Building: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಪಕ್ಷ!

ipl records gill
ಕ್ರಿಕೆಟ್59 mins ago

IPL 2023: ಕೊಹ್ಲಿ ದಾಖಲೆ ಮುರಿಯುವರೇ ಶುಭಮನ್​ ಗಿಲ್​?

aditya ranjan ias
ಅಂಕಣ1 hour ago

ರಾಜ ಮಾರ್ಗ ಅಂಕಣ: ಆಧುನಿಕ ಅಂಗನವಾಡಿಗಳ ನಿರ್ಮಾಪಕ ಆದಿತ್ಯರಂಜನ್ IAS

New Parliament building inauguration Live Video Here
ದೇಶ1 hour ago

New Parliament Building: ನೂತನ ಸಂಸತ್​ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ

Tokyo Olympics Champion Risako Kawai
ಕ್ರೀಡೆ2 hours ago

Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್‌ ಕವಾಯ್

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Land Surveyor Recruitment
ಉದ್ಯೋಗ4 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

New Parliament building inauguration Live Video Here
ದೇಶ1 hour ago

New Parliament Building: ನೂತನ ಸಂಸತ್​ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ

horoscope today
ಪ್ರಮುಖ ಸುದ್ದಿ7 hours ago

Horoscope Today : ವಾರದ ರಜೆಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

Laxmi Hebbalkar oath taking as a minister
ಕರ್ನಾಟಕ18 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ2 days ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ2 days ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ2 days ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ3 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ3 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ4 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

ಟ್ರೆಂಡಿಂಗ್‌

error: Content is protected !!