ಕರ್ನಾಟಕ
Halashri Swameeji : 4 ಮೊಬೈಲ್, 4 ಸಿಮ್, 50 ಲಕ್ಷ ರೂ.; ಇದು ಹಾಲಶ್ರೀ ಸ್ವಾಮೀಜಿಯ ಹಿರೇಹಡಗಲಿ ಟು ಕಟಕ್ ಟ್ರಾವೆಲ್ ಸ್ಟೋರಿ!
HalaShri Swameeji : ಹಾಲಶ್ರೀ ಸ್ವಾಮೀಜಿ ಟೀ ಶರ್ಟ್ ಹಾಕಿಕೊಂಡು ಕಟಕ್ನಲ್ಲಿ ಒಂಟಿಯಾಗಿ ಸಿಕ್ಕಿಬಿದ್ದಿದ್ದಾರೆ. ನೂರಾರು ಜನರ ಜಯಕಾರ ನಡುವೆ ಮಿಂಚುತ್ತಿದ್ದ ಅವರ ಹಿರೇಹಡಗಲಿಯ ಮಠದಿಂದ ಕಟಕ್ ತಲುಪಿದ್ದು ಹೇಗೆ? ಇಲ್ಲಿದೆ ಆ ರೋಚಕ ಪಯಣ ಮತ್ತು ಅದನ್ನು ಟ್ರ್ಯಾಕ್ ಮಾಡಿದ ಕುತೂಹಲಕಾರಿ ಕಥೆ.
ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಐದು ಕೋಟಿ ರೂ. ವಂಚನೆ (Five crore rupees Fraud) ಮಾಡಿದ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (Halashri Swameeji) ಒಡಿಶಾದ ಕಟಕ್ನಲ್ಲಿ ಅರೆಸ್ಟ್ (Halashri swameeji arrested in Cuttak) ಆಗಿದ್ದಾರೆ. ಇದೀಗ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆ ತರಲಾಗಿದೆ. ಈ ನಡುವೆ ಅವರು ಹಾಲ ಮಠದಿಂದ ತಪ್ಪಿಸಿಕೊಂಡು ಕಟಕ್ ವರೆಗೆ ಸಾಗಿದ ಕಥೆಯೇ ರೋಚಕವಾಗಿದೆ. (Hire hadagali to Cuttak an nerve biting story) ಅವರನ್ನು ಬೆನ್ನು ಹತ್ತಿದ ಪೊಲೀಸ್ ಸ್ಟೋರಿಯಂತೂ (Police story) ಇನ್ನಷ್ಟು ಇಂಟ್ರೆಸ್ಟಿಂಗ್!
ಗೋವಿಂದ ಬಾಬು ಪೂಜಾರಿ ಮತ್ತು ಚೈತ್ರಾ ಕುಂದಾಪುರ ಗ್ಯಾಂಗ್ ನಡುವೆ ಸಂಘರ್ಷ ಸೃಷ್ಟಿಯಾಗಿ ಬಹುಕಾಲವೇ ಆಗಿ ಹೋಗಿದೆ. ಆದರೆ, ಅಂತಿಮವಾಗಿ ಕೇಸು ದಾಖಲಾಗಿದ್ದು ಸೆಪ್ಟೆಂಬರ್ 8ರಂದು. ಆವತ್ತಿನಿಂದ ಪ್ರತಿಯೊಬ್ಬರಿಗೂ ಯಾವಾಗ ಬೇಕಾದರೂ ಅರೆಸ್ಟ್ ಆಗಬಹುದು ಎಂಬ ಸನ್ನಿವೇಶ. ಸೆಪ್ಟೆಂಬರ್ 11ರ ವೇಳೆಗೆ ಚೈತ್ರಾ ಕುಂದಾಪುರ ಯಾರದೋ ಮನೆಯಲ್ಲಿ ಅಡಗಿ ಕುಳಿತಿದ್ದಳು. ಮರುದಿನ ಉಡುಪಿ ಕೃಷ್ಣ ಮಠದ ಬಳಿ ಆಕೆಯನ್ನು ಅರೆಸ್ಟ್ ಮಾಡಿದ್ದರು ಸಿಸಿಬಿ ಪೊಲೀಸರು. ಅದರ ನಡುವೆ ಹಾಲಶ್ರೀ ಸ್ವಾಮೀಜಿಗೆ ತನ್ನ ಬಂಧನದ ವಾಸನೆ ಬಡಿದಿದೆ. ಸೆಪ್ಟೆಂಬರ್ 11ರ ರಾತ್ರಿ 11 ಗಂಟೆಯ ಹೊತ್ತಿಗೆ ಯಾರಿಗೂ ಹೇಳದೆ ಮಠವನ್ನು ಬಿಟ್ಟು ಹೊರಟಿದ್ದರು ಸ್ವಾಮೀಜಿ. ಹೇಳಿದ್ದು ತನ್ನ ಕಾರು ಚಾಲಕನಾದ ನಿಂಗರಾಜುಗೆ ಮಾತ್ರ.
ಹಿರೇಹಡಗಲಿ ಟು ಮೈಸೂರು!
ಸೆಪ್ಟೆಂಬರ್ 11ರ ರಾತ್ರಿ ಹನ್ನೊಂದರ ಹೊತ್ತಿಗೆ ಮಠವನ್ನು ಬಿಟ್ಟು ತನ್ನ ಕಾರಿನ ಚಾಲಕ ನಿಂಗರಾಜು ಜತೆಗೆ ಹೊರಟಿದ್ದರು. ಅಲ್ಲಿಂದ ಅವರು ಬಂದು ತಲುಪಿದ್ದು ಮೈಸೂರಿಗೆ. ಸೆ.12ರಂದು ಮೈಸೂರಿನ ಎಚ್ಎಎಲ್ ವೀರಸ್ವಾಮಿ ಮಠದಲ್ಲಿ ಅವರು ಒಂದು ದಿನ ಕಳೆದಿದ್ದರು. ಆದರೆ, ಇದು ಯಾರಿಗೂ ಗೊತ್ತಿರಲಿಲ್ಲ. ಅತ್ತ ಹಿರೇಹಡಗಲಿ ಮಠಕ್ಕೆ ಹೋಗಿದ್ದ ಪೊಲೀಸರಿಗೆ ಅಲ್ಲಿ ಸ್ವಾಮೀಜಿ ಕಾಣಲಿಲ್ಲ. ಅವರು ಹುಡುಕಾಟ ಶುರು ಮಾಡಿದ್ದರು.
ಸೆಪ್ಟೆಂಬರ್ 12ರ ದಿನವನ್ನು ಕಳೆಯುತ್ತಿದ್ದಂತೆಯೇ ರಾತ್ರಿ ಹೊತ್ತಿಗೆ ಅವರಿಗೆ ಚೈತ್ರಾ ಮತ್ತು ಇತರರ ಬಂಧನದ ಸುದ್ದಿ ಬರುತ್ತದೆ. ಸೆ.13ರ ಬೆಳಗ್ಗೆಯೇ ಎದ್ದವರು ಅವರು ಮೈಸೂರಿನ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಪೂರ್ವ ಮೊಬೈಲ್ ಸ್ಟೋರ್ಗೆ ಹೋಗುತ್ತಾರೆ. ಅಲ್ಲಿ ಸ್ವಾಮೀಜಿ ಖರೀದಿ ಮಾಡಿದ್ದು ನಾಲ್ಕು ಹೊಸ ಮೊಬೈಲ್ ಹಾಗೂ ನಾಲ್ಕು ಸಿಮ್!
ಅಲ್ಲಿ ಖರೀದಿಸಿದ ಎರಡು ಮೊಬೈಲ್ ಮತ್ತು ಎರಡು ಸಿಮ್ಗಳನ್ನು ಸ್ವಾಮೀಜಿ ಬಳಸಲು ಶುರು ಮಾಡುತ್ತಾರೆ. ಇದು ಯಾರಿಗೂ ಗೊತ್ತಿಲ್ಲದ ನಂಬರ್ ಆಗಿರುವುದರಿಂದ ಅವರಿಗೆ ಬೇಕಾದವರಿಗೆ ಮಾತ್ರ ಮಾತನಾಡಲು ಬಳಸುತ್ತಾರೆ. ಅಪ್ಪಿ ತಪ್ಪಿಯೂ ಚೈತ್ರಾ ಕುಂದಾಪುರ ಟೀಮನ್ನು ಸಂಪರ್ಕ ಮಾಡುವುದಿಲ್ಲ.
50 ಲಕ್ಷ ರೂ. ತರಿಸಿಕೊಂಡರು ಸ್ವಾಮೀಜಿ!
ಆವತ್ತು ಮೈಸೂರಿನ ಆಶ್ರಮಕ್ಕೆ ಮರಳಿದ ಸ್ವಾಮೀಜಿ ಮಧ್ಯಾಹ್ನದ ಹೊತ್ತು ತನ್ನ ಕಾರು ಚಾಲಕ ನಿಂಗರಾಜುವನ್ನು ಕರೆದು ಪ್ರಣವ್ ಎಂಬಾತನ ಬಳಿಗೆ ಕಳುಹಿಸುತ್ತಾರೆ. ಪ್ರಣವ್ ಮೈಸೂರಿನಲ್ಲಿರುವ ಸ್ವಾಮೀಜಿ ಆಪ್ತ. ಆತನಲ್ಲಿ ಸ್ವಾಮೀಜಿ ಸುಮಾರು 50 ಲಕ್ಷ ರೂ. ಹಣವನ್ನು ಕೊಟ್ಟಿದ್ದರು. ಅದನ್ನು ಪ್ರಣವ್ ಚಾಲಕ ನಿಂಗರಾಜು ಕೈಗೆ ಕೊಡುತ್ತಾನೆ. ನಿಂಗರಾಜು ಅದನ್ನು ಸ್ವಾಮೀಜಿಗೆ ತಂದುಕೊಡುತ್ತಾನೆ.
ಜಾಮೀನಿಗೆ ಪ್ರಯತ್ನಿಸುವ ಹಾಲಶ್ರೀ ಸ್ವಾಮೀಜಿ
ಇತ್ತ ಇಡೀ ರಾಜ್ಯದಲ್ಲಿ ಚೈತ್ರಾ ಕುಂದಾಪುರ ಪ್ರಕರಣ ಬೆಂಕಿ ಬಿರುಗಾಳಿಯ ಹಾಗೆ ಹರಡಿತ್ತು. ಹಾಲಶ್ರೀ ಸ್ವಾಮೀಜಿಯ ಎದೆಯಲ್ಲಿ ಸಾವಿನ ಒನಕೆಗಳ ಡವಡವ. ಈ ಹಂತದಲ್ಲೂ ಆಶಾವಾದ ಕಳೆದುಕೊಳ್ಳದ ಅವರು ತಮ್ಮ ಆತ್ಮೀಯ ವಕೀಲರನ್ನು ಸಂಪರ್ಕಿಸಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಸೆಪ್ಟೆಂಬರ್ 15ರಂದು ನಡೆದ ಮೊದಲ ವಿಚಾರಣೆಯಲ್ಲಿ ಜಾಮೀನು ಸಿಗುವುದಿಲ್ಲ. ಇನ್ನು ಇಲ್ಲೇ ಉಳಿದರೆ ಯಾವುದೇ ಕ್ಷಣದಲ್ಲಾದರೂ ಪೊಲೀಸರು ಬಾಗಿಲುಬಡಿಯುವುದು ಗ್ಯಾರಂಟಿ ಎಂಬ ತೀರ್ಮಾನಕ್ಕೆ ಬರುತ್ತಾರೆ ಹಾಲಶ್ರೀ. ಆಗ ಶುರುವಾಗುವುದೇ ಪರಾರಿ ಪ್ಲ್ಯಾನ್.
ಕಾರನ್ನು ಪ್ರಣವ್ ಮನೆಯಲ್ಲಿ ನಿಲ್ಲಿಸಿ ಪರಾರಿ ಪ್ಲ್ಯಾನ್!
ತಾನು ಹಿರೇಹಡಗಲಿಯಿಂದ ಮೈಸೂರಿಗೆ ಬಂದಿರುವ ಕಾರು ತನ್ನನ್ನು ಸಿಕ್ಕಿಸಿ ಹಾಕೀತು ಎಂಬ ಸಂಶಯ ಮೂಡುತ್ತಿದ್ದಂತೆಯೇ ಕಾರಿನ ನಂಬರ್ ಪ್ಲೇಟ್ ತೆಗೆದು ಪ್ರಣವ್ನ ಮನೆಯಲ್ಲಿ ಇಡಿಸುತ್ತಾರೆ. ಇನ್ನು ಇಲ್ಲಿಸುವುದು ಸೇಫ್ ಅಲ್ಲ ಅನಿಸುತ್ತಿದ್ದಂತೆಯೇ ಸ್ವಾಮೀಜಿ ಪರಾರಿಯಾಗುತ್ತಾರೆ.
ನೀವು ನಂಬಲೇಬೇಕು. ಆವತ್ತು ಮೈಸೂರಿನಿಂದ ಸ್ವಾಮೀಜಿ ಹೊರಟಿದ್ದು ಯಾವುದೋ ಬಸ್ ಹತ್ತಿ. ಇತ್ತೀಚಿನ ವರ್ಷಗಳಲ್ಲಿ ಪ್ರಖರ ಸ್ವಾಮೀಜಿಯಾಗಿ ಬೆಳಗುತ್ತಿದ್ದ ಹಾಲಶ್ರೀ ಬಹುಶ: ಸೆಪ್ಟೆಂಬರ್ 16ರಂದು ಮೈಸೂರಿನ ಸರ್ಕಾರಿ ಬಸ್ ನಿಲ್ದಾಣದಿಂದ ಬಸ್ ಹತ್ತಿ ಪರಾರಿಯಾಗುತ್ತಾರೆ. ಅದೂ ಒಬ್ಬಂಟಿಯಾಗಿ!.
ಮೈಸೂರಿನಿಂದ ಹೈದರಾಬಾದ್ಗೆ ಹೋಗುವ ಬಸ್ಸಿನಲ್ಲಿ ಕುಳಿತ ಸ್ವಾಮೀಜಿ ಅತ್ತ ಹೋಗುತ್ತಿದ್ದಂತೆಯೇ ಸ್ವಾಮೀಜಿಯ ಕಾರು ಚಾಲಕ ನಿಂಗರಾಜುವಿನ ಹೆಗಲ ಮೇಲೆ ಸಿಸಿಬಿ ಪೊಲೀಸರ ಕೈಬೀಳುತ್ತದೆ. ಬಹುಶಃ ಕೆಲವು ಗಂಟೆಗಳ ಮೊದಲು ಅವನ ಅರೆಸ್ಟ್ ಆಗುತ್ತಿದ್ದರೆ ಸ್ವಾಮೀಜಿ ಮೈಸೂರಿನಲ್ಲಿ ಸಿಕ್ಕಿಬೀಳುತ್ತಿದ್ದರು.
ಇಷ್ಟೆಲ್ಲ ಕಥೆ ಹೇಳಿದ್ದು ನಿಂಗರಾಜು!
ನಿಜವೆಂದರೆ ಇದುವರೆಗೆ ಹೇಳಿದ ಇದಿಷ್ಟೂ ಕಥೆಗಳನ್ನು ಪೊಲೀಸರಿಗೆ ಹೇಳಿದ್ದು ನಿಂಗರಾಜು. ಅದುವರೆಗೂ ಯಾರ ಕೈಗೂ ಸಿಗದೆ ಇದ್ದ ನಿಂಗರಾಜು ಸ್ವಾಮೀಜಿ ಹೈದರಾಬಾದ್ ಬಸ್ ಹತ್ತುತ್ತಿದ್ದಂತೆಯೇ ಸಿಕ್ಕಿಬಿದ್ದ. ಅವನನ್ನು ಕರೆದುಕೊಂಡು ಹೋಗಿ ಕೂರಿಸಿ ವಿಚಾರಿಸಿದಾಗ ಹಿರೇಹಡಗಲಿ, ಮೈಸೂರಿನ ಆಶ್ರಮ, ಅಪೂರ್ವ ಮೊಬೈಲ್, ಅದರ ನಂಬರ್, ಮೈಸೂರು ಬಸ್ ನಿಲ್ದಾಣ, ಹೈದರಾಬಾದ್ ಬಸ್ ಎಲ್ಲ ಕಥೆ ಹೇಳಿದ. ಆಗ ಅವನು ಕೊಟ್ಟ ಒಂದೇ ಒಂದು ಕ್ಲೂ ಇವತ್ತು ಕಟಕ್ನಲ್ಲಿ ಸ್ವಾಮೀಜಿಯ ಬಂಧನಕ್ಕೆ ಕಾರಣವಾಗಿದೆ. ಆ ಕ್ಲೂ ಏನು?
ಹೈದರಾಬಾದ್ನಿಂದ ಶ್ರೀಶೈಲಕ್ಕೆ ಹೋದ ಸ್ವಾಮೀಜಿ
ಇತ್ತ ಮೈಸೂರಿನಿಂದ ಹೈದರಾಬಾದ್ ಬಸ್ ಹತ್ತಿದ ಸ್ವಾಮೀಜಿಗೆ ನಿಂಗರಾಜು ಅರೆಸ್ಟ್ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಒಂದೊಮ್ಮೆ ತಾನು ಹೈದರಾಬಾದ್ಗೆ ಹೋಗಿದ್ದೇನೆ ಎಂದು ಗೊತ್ತಾದರೆ ಬೆನ್ನಟ್ಟುತ್ತಾರೆ ಎಂದು ತಿಳಿದ ಸ್ವಾಮೀಜಿ ಅಲ್ಲಿಂದಲೇ ಶ್ರೀಶೈಲದ ಕಡೆಗೆ ಸಾಗುತ್ತದೆ. ಆದರೆ, ಈ ವಿಷಯವೂ ಪೊಲೀಸರಿಗೆ ಗೊತ್ತಾಗುತ್ತಿದೆ ಎಂಬ ಸಣ್ಣ ಸುಳಿವೊಂದು ಸ್ವಾಮೀಜಿಯನ್ನು ಕಾಡುತ್ತದೆ. ಹೀಗಾಗಿ ಅವರು ಪೂರಿಗೆ ಹೋಗುತ್ತಾರೆ, ಅಲ್ಲಿಂದ ಗಂಜಾಂ, ಮುಂದೆ ಕಟಕ್ನಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಪೂರಿ ಜಗನ್ನಾಥ ದೇವಸ್ಥಾನ, ಕೋನಾರ್ಕ್ನ ಸೂರ್ಯ ದೇವಾಲಯಕ್ಕ ಹೋಗಿ ಒಂದು ಒಂದು ಸಲ ಪಾರು ಮಾಡು ಎಂದು ಬೇಡುವ ಸ್ವಾಮೀಜಿಗೆ ಈತ ತನ್ನ ಹಿಂದೆ ಯಾವ ದೇವರೂ ಇಲ್ಲ, ಇರುವುದು ಸಿಸಿಬಿ ಎಂಬ ಸತ್ಯ ಗೊತ್ತಾಗುತ್ತದೆ. ಆದರೂ ಅವರು ಒಂದು ತೀರ್ಮಾನಕ್ಕೆ ಬರುತ್ತಾರೆ. ಬದುಕಿದರೆ ಬೇಡಿ ತಿಂದೇನು? ಹೇಗಾದರೂ ಮಾಡಿ ಕಾಶಿಯನ್ನು ಸೇರಿಕೊಳ್ಳುತ್ತಾನೆ. ಅಲ್ಲಿ ಹೇಗಾದರೂ ತಪ್ಪಿಸಿಕೊಂಡು ಬದುಕಬಹುದು ಎನ್ನುವುದು ಅವರ ಪ್ಲ್ಯಾನ್ ಆಗಿತ್ತು. ಹೀಗಾಗಿ ಕಟಕ್ನ ರೈಲ್ವೇ ನಿಲ್ದಾಣಕ್ಕೆ ಹೋಗಿ ಕಾಶಿಗೆ ಟಿಕೆಟ್ ಮಾಡುತ್ತಾರೆ. ಆ ಟಿಕೆಟ್ ಮತ್ತು ಅದರ ಪಿಎನ್ಆರ್ ನಂಬರೇ ಅವರನ್ನು ಮತ್ತೆ ಬೆಂಗಳೂರಿಗೆ ತಂದು ನಿಲ್ಲಿಸಿದೆ, ಅರ್ಥಾತ್ ಅವರ ಬಂಧನಕ್ಕೆ ಕಾರಣವಾಗಿದೆ.
ಸ್ವಾಮೀಜಿಯ ಮೊಬೈಲ್ ಟ್ರ್ಯಾಕ್ ಆಗುತ್ತಿತ್ತು!
ಇತ್ತ ನಿಂಗರಾಜುವನ್ನು ಬಂಧಿಸಿದ ಪೊಲೀಸರು ಸ್ವಾಮೀಜಿ ಮೈಸೂರಿನಲ್ಲಿದ್ದಾಗ ಏನೇನು ಮಾಡಿದ್ದರು ಎಂಬುದರ ಎಲ್ಲ ಡಿಟೇಲ್ಸ್ ಪಡೆಯುತ್ತಾರೆ. ಅಪೂರ್ವ ಮೊಬೈಲ್ಸ್ನಲ್ಲಿ ಖರೀದಿಸಿದ ಮೊಬೈಲ್ ಮತ್ತು ಅದಕ್ಕೆ ಹಾಕಿದ ಸಿಮ್ ಅವರಿಗೆ ಹಲವು ಕ್ಲೂಗಳನ್ನು ಕೊಡುತ್ತದೆ. ಅಪೂರ್ವ ಮೊಬೈಲ್ನಿಂದ ಮೊಬೈಲ್ನ ಐಎಂಇ ನಂಬರ್ ಮತ್ತು ಸಿಮ್ ನಂಬರ್ಗಳನ್ನು ಸಂಗ್ರಹಿಸಿ ಟ್ರ್ಯಾಕ್ಗೆ ಹಾಕುತ್ತಾರೆ. ಆದರೆ, ಮೊಬೈಲ್ಗಳು ಗಂಟೆಗೊಂದು ಬದಲಾಗುತ್ತಾ ದಿಕ್ಕು ತಪ್ಪಿಸುತ್ತಾ ಇರುತ್ತವೆ. ಆದರೆ ಕಟಕ್ನಿಂದ ಕಾಶಿಗೆ ತೆರಳಲು ಮಾಡಿದ ಟಿಕೆಟ್ ಮಾತ್ರ ಪಕ್ಕಾ ಆಗಿ ಸಿಸಿಬಿ ಪೊಲೀಸರ ಕೈಗೆ ಸಿಗುತ್ತದೆ.
ಅದರಲ್ಲಿ ಕಟಕ್ ನಿಲ್ದಾಣದಿಂದ ಸ್ವಾಮೀಜಿ ಎಷ್ಟು ಹೊತ್ತಿಗೆ ಹೊರಡುತ್ತಾರೆ, ಯಾವ ಬೋಗಿ, ಯಾವ ಸೀಟು ಎನ್ನುವ ಸರ್ವ ಮಾಹಿತಿಗಳು ಸಿಗುತ್ತವೆ. ಅದು ಭಾನುವಾರ (ಸೆ. 18) ರಾತ್ರಿ 9 ಗಂಟೆಯ ಹೊತ್ತಿಗೆ ಕಟಕ್ ನಿಲ್ದಾಣದ ಮೂಲಕ ಸಾಗುವ ಟ್ರೇನು. ಈ ಟೈಮಲ್ಲಿ ರೈಲಿನಲ್ಲಿ ಚೆಕ್ ಮಾಡಿ ಸ್ವಾಮೀಜಿಯನ್ನು ಬಂಧಿಸುವುದಕ್ಕಾಗಿ ಕಟಕ್ ಪೊಲೀಸರಿಗೆ ಎಲ್ಲ ರೀತಿಯ ಮಾಹಿತಿಯನ್ನು ನೀಡಲಾಗಿರುತ್ತದೆ. ಹಾಗೆಯೇ ಅವರು ಅದೇ ಹೊತ್ತಿಗೆ, ಅದೇ ರೈಲು, ಅದೇ ಬೋಗಿ, ಅದೇ ಸೀಟಿನ ಪಕ್ಕ ಹೋಗಿ ನಿಂತರೆ ಅಲ್ಲಿ ಯಾರೂ ಇರುವುದಿಲ್ಲ.
ಇದನ್ನೂ ಓದಿ: Halashri Swameeji: ಹಾಲ ಮಠದ ಚರಿತ್ರೆಯಲ್ಲಿ ಕಪ್ಪು ಚುಕ್ಕೆ; ಕರ್ನಾಟಕದ ಯೋಗಿಯಾಗುವ ಕನಸು ಹೊತ್ತಿದ್ದ ಹಾಲಶ್ರೀ!
ಕೊನೆಯ ಕ್ಷಣದಲ್ಲೂ ಚಮಕ್ ಕೊಟ್ಟ ಸ್ವಾಮೀಜಿ!
ಕಟಕ್ ಪೊಲೀಸರು ತಾವು ಯಾಮಾರಿದೆವು ಎಂಬ ತಿಳಿದುಕೊಳ್ಳುತ್ತಾರೆ. ಆದರೂ ಪ್ರಯತ್ನ ಬಿಡುವುದಿಲ್ಲ. ಟ್ರೇನು ಆ ನಿಲ್ದಾಣ ಬಿಟ್ಟು ಮುಂದಿನ ನಿಲ್ದಾಣದತ್ತ ಹೊರಡುತ್ತದೆ. ಮುಂದಿನ ನಿಲ್ದಾಣದಲ್ಲಿ ಆ ಬೋಗಿಯ ಆ ಸೀಟಿಗೆ ಒಬ್ಬ ವ್ಯಕ್ತಿ ಬಂದು ಕುಳಿತುಕೊಳ್ಳುತ್ತಾರೆ. ಕಟಕ್ನ ಆ ಪೊಲೀಸರು ಈಗಲೂ ಯಾಮಾರಿದೆವು ಅಂದುಕೊಳ್ಳುತ್ತಾರೆ. ಯಾಕೆಂದರೆ, ಅಲ್ಲಿ ಬಂದು ಕುಳಿತ ಆ ವ್ಯಕ್ತಿ ಸ್ವಾಮೀಜಿ ಆಗಿರಲಿಲ್ಲ. ಒಬ್ಬ ಟೀಶರ್ಟ್, ಬರ್ಮುಡಾ ಹಾಕಿಕೊಂಡ ಯಾವನೋ ಆಗಿರುತ್ತಾನೆ. ಆಗ ಮತ್ತೆ ಬೆಂಗಳೂರು ಪೊಲೀಸರನ್ನು ಸಂಪರ್ಕಿಸುತ್ತಾರೆ. ಆಗ ಸಿಸಿಬಿ ಪೊಲೀಸರು ವ್ಯಕ್ತಿ ಯಾರೇ ಆಗಿರಲಿ ಇಳಿಸಿ ವಿಚಾರಣೆ ನಡೆಸಿ ಎನ್ನುತ್ತಾರೆ. ಹಾಗೆ ಅಲ್ಲಿ ಇಳಿಸುವಾಗ ರಾತ್ರಿ 9.25. ಇಳಿಸಿದ ವ್ಯಕ್ತಿಯನ್ನು ಸಣ್ಣಗೆ ವಿಚಾರಣೆ ನಡೆಸಿದಾಗಲೇ ಇದು ಹಾಲಶ್ರೀ ಸ್ವಾಮೀಜಿ ಎನ್ನುವುದು ಗೊತ್ತಾಗುತ್ತದೆ. ಭಯದಿಂದ ನಡುಗುತ್ತಿದ್ದ ಸ್ವಾಮೀಜಿ ಅಲ್ಲೇ ಕುಸಿದುಕುಳಿತುಕೊಳ್ಳುತ್ತಾರೆ. ಹಣದ ಆಸೆಯಿಂದಾಗಿ ಮಾಡಿಕೊಂಡ ಎಡವಟ್ಟು ಕಟ್ಟಿಕೊಂಡ ಭ್ರಮಾಗೋಪುರಗಳೆಲ್ಲವನ್ನೂ ಧರಾಶಾಯಿಯಾಗಿಸಿದ್ದು ಆ ಕ್ಷಣ ಅವರ ಅರಿವಿಗೆ ಬಂದೇ ಬಂದಿರುತ್ತದೆ. ಮುಂದೆ ಉಳಿದದ್ದು ಬೆಂಗಳೂರಿಗೆ ಪಯಣ, ವಿಚಾರಣೆ ಮತ್ತು ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ. ಇದರ ನಡುವೆ ಮತ್ತೆ ಹಿರೇಹಡಗಲಿಯ ಆ ಮಹಾ ಮಠಕ್ಕೆ ಇದೇ ಸ್ವಾಮೀಜಿ ಹೋಗಲಿದ್ದಾರೆ. ಆದರೆ, ಸ್ವಾಮೀಜಿ ಆಗಿ ಅಲ್ಲ, ಒಬ್ಬ ಆರೋಪಿಯಾಗಿ. ಇದು ಸ್ವಾಮೀಜಿಯ ರೋಚಕ ಟ್ರಾವೆಲ್ ಹಿಸ್ಟರಿ. ಹೇಗಿದ್ದ ಸ್ವಾಮೀಜಿ ಹೇಗಾಗಿ ಹೋದರು ಅಲ್ವಾ?
ಕರ್ನಾಟಕ
Cauvery Water Dispute: ಜನರ ಸಂಕಷ್ಟದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ: ಬಿ.ವೈ.ವಿಜಯೇಂದ್ರ
Cauvery Water Dispute: ರಾಜ್ಯದ ಸ್ಥಿತಿ ಬಗ್ಗೆ ಕಾವೇರಿ ಜಲ ನಿಯಂತ್ರಣ ಸಮಿತಿಯ ಮುಂದೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಬೆಂಗಳೂರು: ಬದ್ಧತೆ, ಇಚ್ಛಾಶಕ್ತಿ ಇಲ್ಲದ ಸರ್ಕಾರವೊಂದು ಜನರ ಸಂಕಷ್ಟದೊಂದಿಗೆ ಹೇಗೆ ಚೆಲ್ಲಾಟವಾಡಬಹುದು ಎಂಬುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯುತ್ತಮ ಉದಾಹರಣೆಯಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲದೆ, ಕುಡಿಯುವ ನೀರಿಗೂ ಸಂಚಕಾರ ಬಂದೊದಗಿರುವ ಕಠೋರ ಪರಿಸ್ಥಿತಿಯನ್ನು. ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) (Cauvery Water Dispute) ಮುಂದೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿ.ವೈ.ವಿಜಯೇಂದ್ರ ಅವರು, ‘ಗಾಯದ ಮೇಲೆ ಬರೆ’ ಎಳೆದಂತೆ ಸಿಡಬ್ಲ್ಯುಆರ್ಸಿಯಿಂದ ಮತ್ತೆ 3000 ಕ್ಯೂಸೆಕ್ ನೀರು ಬಿಡುವ ಆದೇಶ ಪಡೆದು, ಸರ್ಕಾರವು ಕರ್ನಾಟಕದ ಪಾಲಿಗೆ ಕರಾಳ ಶಾಸನ ಬರೆಸಿಕೊಂಡಿದೆ ಎಂದು ಟೀಕಿಸಿದ್ದಾರೆ.
ಕರುನಾಡು ಉದ್ವಿಗ್ನ ಗೊಂಡಿದೆ, ಜನರ ಆಕ್ರೋಶ ಮುಗಿಲು ಮುಟ್ಟಿದೆ, ರೈತ ಬಂಧುಗಳು ಕಂಗಾಲಾಗಿದ್ದಾರೆ. ಇಷ್ಟಾದರೂ ಕಾವೇರಿ ಉಳಿಸಲು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಥವಾಗಿ ಹೋರಾಡಲು ಕನಿಷ್ಠ ಕಾಳಜಿಯೂ ತೋರದೇ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಉಡಾಫೆಯ ಮಾತನಾಡಿಕೊಂಡು ಕನ್ನಡಿಗರ ಕತ್ತು ಹಿಸುಕುತ್ತಿದ್ದಾರೆ. ಕಾವೇರಿ ಪರ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬದ್ಧತೆ, ಇಚ್ಛಾಶಕ್ತಿ ಇಲ್ಲದ ಸರ್ಕಾರವೊಂದು ಜನರ ಸಂಕಷ್ಟದೊಂದಿಗೆ ಹೇಗೆ ಚೆಲ್ಲಾಟವಾಡಬಹುದು ಎಂಬುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯುತ್ತಮ ಉದಾಹರಣೆಯಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲದೆ, ಕುಡಿಯುವ ನೀರಿಗೂ ಸಂಚಕಾರ ಬಂದೊದಗಿರುವ ಕಠೋರ ಪರಿಸ್ಥಿತಿಯನ್ನು ಕಾವೇರಿ ಜಲ ನಿಯಂತ್ರಣ ಸಮಿತಿಯ ಮುಂದೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ…
— Vijayendra Yediyurappa (@BYVijayendra) September 26, 2023
ಇದನ್ನೂ ಓದಿ | Cauvery water dispute : ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕಕ್ಕೆ ಮರಣ ಶಾಸನವೆಂದ ಬಿಎಸ್ವೈ
CWRCಯಿಂದ ಮತ್ತೆ ಹೊಡೆತ, ಇನ್ನೂ 18 ದಿನ 3000 ಕ್ಯೂಸೆಕ್ ನೀರು ಬಿಡಲು ಆದೇಶ
ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee) ಮಂಗಳವಾರ ನಡೆಸಿದ ಮಹತ್ವದ ಸಭೆಯಲ್ಲಿ ಕರ್ನಾಟಕಕ್ಕೆ ಇನ್ನೊಂದು ಹೊಡೆತ ಬಿದ್ದಿದೆ.ಈವರೆಗೆ ಪ್ರತಿದಿನವೂ ಐದು ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದ ಸಮಿತಿ ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ.
ಕಳೆದ ಸೆಪ್ಟೆಂಬರ್ 13ರಂದು ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳವರೆಗೆ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿತ್ತು. ಸೆ. 18ರಂದು ನಡೆದ ಪ್ರಾಧಿಕಾರದ ಸಭೆ ಅದನ್ನು ಅನುಮೋದಿಸಿತ್ತು. ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್ನಲ್ಲಿ ನಡೆದ ವಿಚಾರಣೆಯ ವೇಳೆ ಈ ಆದೇಶವನ್ನು ಎತ್ತಿಹಿಡಿಯಲಾಗಿತ್ತು.
ಇದೀಗ ಮಂಗಳವಾರ (ಸೆ. 26) ನಡೆದ ಸಭೆಯಲ್ಲಿ ಕರ್ನಾಟಕದ ಮಂಡಿಸಿದ ವಾದವನ್ನು ಪರಿಗಣಿಸಿದ ಸಮಿತಿ ನೀರೇ ಬಿಡುವುದಿಲ್ಲ ಎಂಬ ಮನವಿಯನ್ನು ಒಪ್ಪಲಿಲ್ಲ. ಐದು ಸಾವಿರ ಕ್ಯೂಸೆಕ್ ಬದಲಿಗೆ ಮೂರು ಸಾವಿರ ಕ್ಯೂಸೆಕ್ಗೆ ಇಳಿಸಿ ಎಂದು ಸೂಚನೆ ನೀಡಿದೆ.
ಸೆ. 13ರಂದು ಹದಿನೈದು ದಿನಗಳವರೆಗೆ ಐದು ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ನೀಡಿದ ಆದೇಶ ಊರ್ಜಿತದಲ್ಲಿರುವುದರಿಂದ ಸೆ. 28ರಿಂದ ಹೊಸ ಆದೇಶ ಜಾರಿಗೆ ಬರಲಿದೆ. ಆಗ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಈ ಆದೇಶವು ಅಕ್ಟೋಬರ್ 15ರವರೆಗೆ ಜಾರಿಯಲ್ಲಿ ಇರಲಿದ್ದು, ಅಲ್ಲಿವರೆಗೆ ಪ್ರತಿ ದಿನವೂ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಾಗುತ್ತದೆ.
CWRC ಯ ಮುಂದೆ ವಾಸ್ತವ ಸ್ಥಿತಿ ಸಲ್ಲಿಕೆ ಮಾಡಿದ ಕರ್ನಾಟಕ
ಇದಕ್ಕಿಂತ ಮೊದಲು ಕರ್ನಾಟಕವು ತನ್ನ ನೀರಿನ ಪರಿಸ್ಥಿತಿಯ ವಿವರಣೆಯನ್ನು ನೀಡಿತು.
25.09.2023 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಟ್ಟೂ ಒಳಹರಿವಿನ ಕೊರತೆ 53.04% ಆಗಿದೆ. ಕರ್ನಾಟಕ ಸರ್ಕಾರವು ದಿನಾಂಕ 13.09.2023 ರ ಆದೇಶದಲ್ಲಿ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಈ ಪೈಕಿ 32 ತೀವ್ರ ಬರ ಪೀಡಿತ ತಾಲೂಕುಗಳು ಮತ್ತು 15 ಮಧ್ಯಮ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಈ ಹಿನ್ನೆಲೆಯಲ್ಲಿ ಈ ಅಂಶಗಳನ್ನು ಈ ಅಂಶವು ಸಮಿತಿ ಗಂಭೀರವಾಗಿ ಪರಿಗಣಿಸಬೇಕೆಂದು ಕರ್ನಾಟಕ ಮನವಿ ಮಾಡಿತು.
ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ. ರಾಜ್ಯದ ಜಲಾಶಯಗಳಿಂದ ಯಾವುದೇ ಹರಿವನ್ನು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುನಲ್ಲಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಇದನ್ನೂ ಓದಿ | Cauvery water dispute : ತಮಿಳುನಾಡು ಬೇಡಿಕೆ ತಿರಸ್ಕಾರ ಮಾಡಿದ್ದು ಸಂತಸ ತಂದಿದೆ: ಡಿ.ಕೆ. ಶಿವಕುಮಾರ್
ಇದಕ್ಕೆ ಪ್ರತಿಯಾಗಿ ತಮಿಳುನಾಡು ನಿಯಮ ಪ್ರಕಾರ 12500 ಕ್ಯೂಸೆಕ್ ನೀರು ಪ್ರತಿದಿನವೂ ಬಿಡುಗಡೆ ಮಾಡಬೇಕು ಎಂಬ ವಾದವನ್ನೇ ಮುಂದೆ ಮಾಡಿತು.
ಅಂತಿಮವಾಗಿ ನಿಯಂತ್ರಣ ಸಮಿತಿಯು ನೀರಿನ ಪ್ರಮಾಣವನ್ನು ಇಳಿಸಿ ಆದೇಶ ಹೊರಡಿಸಿತು.
ಇದೀಗ ಕರ್ನಾಟಕವು ಈ ಅದೇಶವನ್ನು ಮತ್ತೆ ಕಾವೇರಿ ನದಿ ನೀರು ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಅವಕಾಶವಿದೆ.
ಕಲೆ/ಸಾಹಿತ್ಯ
Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ
Yakshagana Show: ಮದರ್ ಫೌಂಡೇಶನ್ ಅರ್ಪಿಸುವ ಯಕ್ಷನೂಪುರ ʼರಾಜಾ ತ್ರೀʼ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ನೀಡಿದೆ.
ಬೆಂಗಳೂರು: ರಾಜ್ ಭಟ್ ಜಕ್ಕೂರು ಅವರ ಸಂಯೋಜನೆಯಲ್ಲಿ ಜಲವಳ್ಳಿ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅಕ್ಟೋಬರ್ 7ರಂದು ರಾತ್ರಿ 9.30ಕ್ಕೆ ನಗರ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ, ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನ ಹಾಗೂ ಅಜ್ಞಾನ ಕವಿ ವಿರಚಿತ ʼರಾಜಾ ಉರಗಕೇತನʼ ಯಕ್ಷಗಾನ ಪ್ರಸಂಗ (Yakshagana Show) ಪ್ರದರ್ಶನವಾಗಲಿದೆ.
ಮದರ್ ಫೌಂಡೇಶನ್ ಅರ್ಪಿಸುವ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ನೀಡಿದೆ.
ಕೊಳಗಿ, ಜನ್ಸಾಲೆ, ಮೂಡುಬೆಳ್ಳೆ, ಬ್ರಹ್ಮೂರು ಅವರ ಗಾನ ರಸಧಾರೆ, ಅನಿರುದ್ಧ್, ಶಶಾಂಕ್, ಶ್ರೀನಿವಾಸ್ ಪ್ರಭು, ಸುಜನ್ ಹಾಗೂ ಅರುಣ ಅವರ ಚಂಡೆ ಮದ್ದಳೆಯ ಜೇಂಕಾರದಲ್ಲಿ ʼರಾಜಾ ತ್ರೀʼ ಪ್ರದರ್ಶನ ಮೂಡಿಬರಲಿದೆ.
ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ ಪ್ರಸಂಗದಲ್ಲಿ ತಾಮ್ರಧ್ವಜನಾಗಿ ವಿದ್ಯಾಧರ್ ಜಲವಳ್ಳಿ, ಮಯೂರಧ್ವಜನಾಗಿ ಮಂಕಿ ಈಶ್ವರ್ ನಾಯ್ಕ, ಕೃಷ್ಣನಾಗಿ ನಿಲ್ಕೋಡು ಶಂಕರ ಹೆಗಡೆ, ಅರ್ಜುನನಾಗಿ ಹೆನ್ನಾಬೈಲ್ ವಿಶ್ವನಾಥ್, ಹಾಸ್ಯ ಪಾತ್ರಗಳಲ್ಲಿ ರಮೇಶ್ ಭಂಡಾರಿ, ಸಿತಾರಾಮ ಕುಮಾರ್ ಅಭಿನಯಿಸಲಿದ್ದಾರೆ.
ಇದನ್ನೂ ಓದಿ | ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!
ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನʼ ಪ್ರದರ್ಶನದಲ್ಲಿ ಕಂಸನಾಗಿ ತೀರ್ಥಹಳ್ಳಿ ಗೋಪಾಲಾಚಾರ್, ಉಗ್ರಸೇನಾ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ್, ರುಚಿಮತಿಯಾಗಿ ಸಂತೋಷ್ ಹಿಲಿಯಾಣ, ದೂತನಾಗಿ ಸೀತಾರಾಮ್ ಕುಮಾರ್, ಬ್ರಾಹ್ಮಣನಾಗಿ ಶ್ರೀಧರ್ ಕಾಸರಕೋಡು, ಮಾಗಧ ಆಗಿ ನಾಗರಾಜ ಭಂಡಾರಿ, ಆಸ್ತೀಯಾಗಿ ಉದಯ ಕಡಬಾಳ್, ಪಾಸ್ತಿಯಾಗಿ ಹರೀಶ್ ಜಪ್ತಿ, ದೃಮಿಳ ಆಗಿ ಕಾರ್ತಿಕ್ ಕಣ್ಣಿ ಬಣ್ಣ ಹಚ್ಚಲಿದ್ದಾರೆ.
ಅಜ್ಞಾತ ಕವಿ ವಿರಚಿತ ʼʼರಾಜಾ ಉರಗಕೇತನʼ ಯಕ್ಷಗಾನದಲ್ಲಿ ರಾಜೇಶ್ ಭಂಡಾರಿ, ಪ್ರಕಾಶ್ ಕಿರಾಡಿ, ವಿಶ್ವನಾಥ್ ಹೆನ್ನಾಬೈಲ್ ಅವರು (ಕೌರವ, ಭೀಮ, ಕೃಷ್ಣ ಪಾತ್ರದಲ್ಲಿ), ವಿನಾಯಕ ಗುಂಡುಬಾಳ, ಕಾರ್ತಿಕ್ ಹೆಗಡೆ, ಶ್ರೀಕಾಂತ್ ರಟ್ಟಾಡಿ, ನಾಗರಾಜ್ ದೇವಲ್ಕುಂದ ಪ್ರಮುಖ ಪಾತ್ರಗಳಲ್ಲಿ ರಂಜಿಸಲಿದ್ದಾರೆ.
ಪ್ರವೇಶ ದರ ಇರಲಿದ್ದು, ಮುಂಗಡ ಟಿಕೆಟ್ ಬುಕಿಂಗ್ಗಾಗಿ ರಾಜ್ ಭಟ್ ಮೊ.9019776411 ಸಂಪರ್ಕಿಸಿ.
ವಿಜಯನಗರ
Vijayanagara News: ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಚಾಲನೆ
Vijayanagara News: ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದ ಪಶುಪಾಲನೆ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮ ಜರುಗಿತು.
ಕೂಡ್ಲಿಗಿ: ತಾಲೂಕಿನ ನರಸಿಂಹಗಿರಿ ಗ್ರಾಮದ ಪಶುಪಾಲನೆ ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ , ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಸಹಯೋಗದಲ್ಲಿ ಮಂಗಳವಾರ ಕಾಲುಬಾಯಿ ರೋಗ ಲಸಿಕಾ ಅಭಿಯಾನ (Foot and Mouth Disease Vaccination campaign) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೂಡ್ಲಿಗಿ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಶುಪಾಲನೆ ಭಾಗವಾದ ಆಕಳು ಎತ್ತು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಜಾನುವಾರುಗಳ ಆರೋಗ್ಯದ ಸಮಸ್ಯೆ ಕಂಡುಬಂದ ವೇಳೆ ತಾಲೂಕಿನ ರೈತರು ಕರೆ ಮಾಡಿದಾಗ ವೈದ್ಯಕೀಯ ತಂಡ ತಕ್ಷಣ ಭೇಟಿ ನೀಡಿ, ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ: SBI SO Recruitment 2023: ಎಸ್ಬಿಐಯಲ್ಲಿದೆ 439 ಹುದ್ದೆ; ಪದವಿ ಹೊಂದಿದವರು ಅರ್ಜಿ ಸಲ್ಲಿಸಿ
ಇದೇ ವೇಳೆ ಕೂಡ್ಲಿಗಿ ತಾಲೂಕಿನ ವೈದ್ಯರ ಸಿಬ್ಬಂದಿ, ಔಷಧಿ ಗುಣಮಟ್ಟ, ವೈದ್ಯಕೀಯ ಸೇವೆ, ಲಸಿಕೆ ವಿಧಾನ, ಆಸ್ಪತ್ರೆ ಕಟ್ಟಡಗಳ ಸ್ಥಿತಿ ಹಾಗೂ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಕಾರ್ಯ ನಿರ್ವಹಣೆ ಇತ್ಯಾದಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಿರಿಗುಂಬಳಗುಂಟೆ ಪಶುವೈದ್ಯಾಧಿಕಾರಿ ಡಾ. ಮಂಜುಶ್ರೀ, ಚಿರತಗುಂಡು ಪಶುವೈದ್ಯಾಧಿಕಾರಿ ಡಾ. ಇಸ್ಮಾಯಿಲ್ ಜಬೀಉಲ್ಲ, ಡಾ. ಲೋಹಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಿವಮೊಗ್ಗ
Death News: ಹಿರಿಯ ಸಾಹಿತಿ ಪ್ರಾಜ್ಞ ಬಸವಣ್ಯಪ್ಪ ನಿಧನ
Death News: ಸೊರಬ ತಾಲೂಕು ಕಡಸೂರು ಗ್ರಾಮದ ಹಿರಿಯ ಸಾಹಿತಿ, ಪ್ರಾಜ್ಞ ಬಸವಣ್ಯಪ್ಪ(80) ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಸೊರಬ: ತಾಲೂಕು ಕಡಸೂರು ಗ್ರಾಮದ ಹಿರಿಯ ಸಾಹಿತಿ, ಪ್ರಾಜ್ಞ ಬಸವಣ್ಯಪ್ಪ (80) ಮಂಗಳವಾರ ಬೆಳಿಗ್ಗೆ ನಿಧನರಾದರು. (Death News)
ಕೇವಲ ನಾಲ್ಕನೇ ತರಗತಿ ಓದಿ, ಸಂಸ್ಕೃತ, ಇಂಗ್ಲೀಷ್, ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಅವರು ತಮ್ಮ ಇಳಿ ವಯಸ್ಸಿನಲ್ಲಿ ಮೂರು ಕೃತಿಗಳನ್ನು ರಚಿಸಿದ್ದರು.
ಕಾವ್ಯಗಳನ್ನು ರಾಗದ ಮೂಲಕ ರಚಿಸಿ ಮನ್ನಣೆ ಪಡೆದ ಅವರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ದಕ್ಷಿಣ ಭಾರತ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇವರ ವಯೋಸಹಜ ನಿಧನಕ್ಕೆ ಅಭಾಸಾಪ ಸೇರಿದಂತೆ ತಾಲ್ಲೂಕು ಕನ್ನಡ ಸಾಂಸ್ಕೃತಿಕ ಜಗಲಿ, ಕಸಾಪ, ಕಜಾಪ, ಕಸಾಸಾಂವೇ ಸಾಹಿತ್ಯ ಘಟಕಗಳು ಕಂಬನಿ ಮಿಡಿದಿವೆ.
-
Live News20 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ11 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ3 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema13 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ14 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್10 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ10 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್14 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ