ವಿಸ್ತಾರ ಸಂಪಾದಕೀಯ: ಮೌಢ್ಯಕ್ಕೆ ಮಗು ಬಲಿ, ಗೊಲ್ಲರಹಟ್ಟಿಯ ಮಹಿಳೆಯರ ಸಂಕಟ ಇಲ್ಲಿಗೇ ಕೊನೆಯಾಗಲಿ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮೌಢ್ಯಕ್ಕೆ ಮಗು ಬಲಿ, ಗೊಲ್ಲರಹಟ್ಟಿಯ ಮಹಿಳೆಯರ ಸಂಕಟ ಇಲ್ಲಿಗೇ ಕೊನೆಯಾಗಲಿ

ಇಂದು ನಾವು ಚಂದ್ರನಲ್ಲಿಗೇ ನೌಕೆ ಕಳಿಸುವಷ್ಟು, ಮಂಗಳನತ್ತ ದೃಷ್ಟಿ ನೆಡುವಷ್ಟು ಮುಂದುವರಿದಿದ್ದೇವೆ. ಆದರೆ ನಮ್ಮ‌ ನೆಲದಲ್ಲೇ ಇಂಥ ಮೌಢ್ಯಗಳನ್ನು ಗೆಲ್ಲಲಾಗುವುದಿಲ್ಲ ಎಂದರೆ ನಾವು ಏನೆಲ್ಲ ಸಾಧಿಸಿಯೂ ವ್ಯರ್ಥ.

VISTARANEWS.COM


on

kadugollara Tradition in tumkur
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುಮಕೂರಿನ‌‌ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಹಾಗೂ ಮಗುವನ್ನು ಊರಿನ ಹೊರಗಿಟ್ಟ ಪರಿಣಾಮ‌ ವಿಪರೀತ ಶೀತದಿಂದ ಬಳಲಿ ಮಗು ಸಾವಿಗೀಡಾದ ಘಟನೆ ನಡೆದಿತ್ತು. ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಗು ಸಾವನ್ನಪ್ಪಿದೆ. ಇಷ್ಟೇ ಆಗಿದ್ದರೆ ಇದೊಂದು ದುರಂತವಾಗಿ ಉಳಿಯುತ್ತಿತ್ತು ಅಷ್ಟೇ. ಆದರೆ ಮುಂದಿನ ಬೆಳವಣಿಗೆ ಆಶಾದಾಯಕವಾಗಿದೆ. ನಿನ್ನೆ ಬಾಣಂತಿ ಇರುವ  ಸಿದ್ದೇಶ್ ಕುಟುಂಬದವರನ್ನು ಭೇಟಿಯಾದ  ಆರೋಗ್ಯ ಇಲಾಖಾ ಅಧಿಕಾರಿಗಳು, ಬಾಣಂತಿಯನ್ನು ಹೊರಗಿಡದಂತೆ ಅವರ ಮನವೊಲಿಸಿದ್ದರು. ಗೊಲ್ಲ ಸಂಪ್ರದಾಯದಂತೆ ಇನ್ನೂ ಒಂದು ತಿಂಗಳು ಬಾಣಂತಿ ಊರ ಹೊರಗೆ ಇರಬೇಕಿತ್ತು. ಆದರೆ ಮನವೊಲಿಕೆ ಬಳಿಕ ಗುರುವಾರ ಬೆಳಗ್ಗೆ ಬಾಣಂತಿ ವಸಂತಾಗೆ ಊರಿನ ಒಳಗೆ ಇರುವ ಮನೆಯೊಳಗೆ ಕುಟುಂಬ ಪ್ರವೇಶ ಕಲ್ಪಿಸಿದೆ. ಸುಧಾರಣೆಯ ಉಪಕ್ರಮಗಳು ಹೇಗೆ ನಡೆಯಬೇಕು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಗೊಲ್ಲರ ಸಮುದಾಯದಲ್ಲಿ ಇದೊಂದು ಆಚರಣೆ ಬೆಳೆದುಬಂದಿದೆ. ತಮ್ಮ ದೇವರಿಗೆ ಸೂತಕ ಆಗಬಾರದು ಎಂದು ಹೆರಿಗೆ ಆದ ಬಳಿಕ ಬಾಣಂತಿ, ಮಗುವನ್ನು  ಕುಟುಂಬಸ್ಥರು ಊರಿನ ಹೊರಗಿರುವ ಜೋಪಡಿಯಲ್ಲಿ‌ ಬಿಡಲಾಗುತ್ತದೆ. ಬಾಣಂತಿ ಅಲ್ಲಿ ತನ್ನ ಹಾಗೂ ಮಗುವಿನ ಆರೈಕೆ ಮತ್ತು ಆರೋಗ್ಯಗಳನ್ನು ತಾನೇ ನೋಡಿಕೊಳ್ಳಬೇಕಾಗುತ್ತದೆ. ಆರೋಗ್ಯ ಬಿಗಡಾಯಿಸಿದರೂ ಯಾರೂ ಬರುವುದಿಲ್ಲ. ಅಡುಗೆಯನ್ನೂ ತಾನೇ ಮಾಡಿಕೊಳ್ಳಬೇಕಾಗುತ್ತದೆ.  ಹಿಂದೆಂದೋ ಆರಂಭವಾದ ಸೂತಕದ ಈ ಆಚರಣೆ ಇಂದೂ ಹಲವು ಕಡೆ ಗಟ್ಟಿಯಾಗಿ ಬೇರೂರಿದೆ. ಇದರಿಂದಾಗಿ ಗೊಲ್ಲರಲ್ಲಿ ಶಿಶು ಮರಣ, ಬಾಣಂತಿ ಮರಣದ ಪ್ರಮಾಣ ಹೆಚ್ಚೇ ಇದೆ. ಪ್ರಸ್ತುತ ಪ್ರಕರಣದಲ್ಲಿ ಮಳೆ, ಗಾಳಿಯಿದ್ದರೂ ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ತಾಯಿ, ಮಗುವನ್ನು ಬಿಡಲಾಗಿತ್ತು. ಹೀಗಾಗಿ ಮಗುವಿಗೆ ಶೀತ ಕಾಣಿಸಿಕೊಂಡಿತ್ತು. ಬಾಣಂತಿ ಹಾಗೂ ಮಗುವಿಗೆ ಕುಟುಂಬದ ಗರಿಷ್ಠ ಗಮನ, ಆರೈಕೆ ಬೇಕಾಗಿರುತ್ತದೆ. ಇಬ್ಬರಿಗೂ ಸೋಂಕುಗಳು ಉಂಟಾಗುವ ಸಾಧ್ಯತೆ ಹೆಚ್ಚು. ಇದು ಸಾಮಾನ್ಯ ಜ್ಞಾನಕ್ಕೇ ಹೊಳೆಯಬೇಕಾದ ವಿಷಯ. ಆದರೂ ಸಾಮಾನ್ಯ ಜ್ಞಾನವನ್ನೂ ಮೂಢನಂಬಿಕೆ ಮೀರಿಸಿದೆ.

ಆದ್ದರಿಂದ ಬಾಣಂತಿಯನ್ನು‌ ಮರಳಿ‌ ಮನೆ ಸೇರಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಕ್ರಮ ಶ್ಲಾಘನೀಯ. ಮೌಢ್ಯದಲ್ಲಿ ಮುಳುಗಿದವರ ಮನಸ್ಸನ್ನು ತಿದ್ದುವ, ಶಿಕ್ಷಣ ನೀಡುವ ಪ್ರಯತ್ನಗಳು ನಡೆದುಬಂದಿವೆ. ಇನ್ನಷ್ಟು ನಡೆಯಬೇಕಿವೆ. ಬಾಣಂತಿಯರ ಸಾವಿನ ಪ್ರಮಾಣ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಹೆಚ್ಚಿನ ಪ್ರಮಾಣದಲ್ಲಿದೆ. ಹಿಂದುಳಿದ ಪ್ರದೇಶವಾಗಿರುವ ಹೈದರಾಬಾದ್‌ ಕರ್ನಾಟಕದಲ್ಲಿ ಇದು ಇನ್ನೂ ಹೆಚ್ಚು. ರಕ್ತಹೀನತೆ, ರಕ್ತದ ಅತಿ ಒತ್ತಡ, ಪ್ರಸವ ನಂತರ ತೀವ್ರ ರಕ್ತಸ್ರಾವ, ಸೋಂಕುಗಳು ಇದಕ್ಕೆ ಕಾರಣ. ಹೆರಿಗೆ ಸಂದರ್ಭ ಮತ್ತು ನಂತರದ ಕೆಲ ದಿನಗಳ ಅವಧಿ ತಾಯಿ ಮಗುವಿನ ಅಳಿವು ಉಳಿವಿಗೆ ನಿರ್ಣಾಯಕ. ಪ್ರಸವ ನಂತರದ ಸೋಂಕುಗಳಿಗೆ ತಾಯಿ ಸುಲಭವಾಗಿ ತುತ್ತಾಗಲು ರಕ್ತಹೀನತೆ ಪ್ರಮುಖ ಕಾರಣವಾದರೆ, ಕಾಮಾಲೆ ಮತ್ತು ಅಪೌಷ್ಟಿಕತೆ ನವಜಾತ ಶಿಶುಗಳ ಜೀವ ತೆಗೆಯುತ್ತವೆ. ಪ್ರಸೂತಿ ಆರೈಕೆ, ಮಡಿಲು, ತಾಯಿಭಾಗ್ಯ, ಜನನಿ ಸುರಕ್ಷಾ, ತಾಯಂದಿರ ಆರೋಗ್ಯ ತರಬೇತಿ… ಹೀಗೆ ತಾಯಿ ಮಗುವಿನ ಆರೈಕೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಇದನ್ನು ಫಲಾನುಭವಿಗಳಿಗೆ ತಲುಪಿಸುವುದರೊಂದಿಗೆ ನಾವು ಮೌಢ್ಯದೊಂದಿಗೂ ಹೊಡೆದಾಡಬೇಕಿದೆ. ಇಂದು ನಾವು ಚಂದ್ರನಲ್ಲಿಗೇ ನೌಕೆ ಕಳಿಸುವಷ್ಟು, ಮಂಗಳನತ್ತ ದೃಷ್ಟಿ ನೆಡುವಷ್ಟು ಮುಂದುವರಿದಿದ್ದೇವೆ. ಆದರೆ ನಮ್ಮ‌ ನೆಲದಲ್ಲೇ ಇಂಥ ಮೌಢ್ಯಗಳನ್ನು ಗೆಲ್ಲಲಾಗುವುದಿಲ್ಲ ಎಂದರೆ ನಾವು ಏನೆಲ್ಲ ಸಾಧಿಸಿಯೂ ವ್ಯರ್ಥ. ಹೀಗಾಗಿ‌ ಬಾಣಂತಿ – ಮಗು ಊರಿಂದ ಹೊರಗಿಡುವ ಆಚರಣೆಯನ್ನು ಸಮುದಾಯದ ಮನವೊಲಿಕೆ, ಶಿಕ್ಷಣ ಮುಂತಾದವುಗಳ ಮೂಲಕ ಸಂಪೂರ್ಣ ನಾಶ ಮಾಡಲು ಎಲ್ಲರೂ ದುಡಿಯಬೇಕಿದೆ. ಆ ನಿಟ್ಟಿನಲ್ಲಿ ಇದೊಂದು ಶ್ಲಾಘ್ಯ ಪ್ರಯತ್ನ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮುಂಗಾರಿಗೆ ಮುನ್ನವೇ ರಾಜಕಾಲುವೆ ಒತ್ತುವರಿ ತೆರವಾಗಲಿ

ಮೂಲಸೌಕರ್ಯ ಸರಿಯಿಲ್ಲ ಎಂದು ಇತರ ನಗರಗಳು ಬೆಂಗಳೂರಿನ ಅವಕಾಶವನ್ನು ಕಸಿಯುತ್ತವೆ. ನಾಲ್ಕಾರು ಕಂಪನಿಗಳು ಬೆಂಗಳೂರಿನ ಮೂಲಸೌಕರ್ಯ ಕಳಪೆ ಎಂದು ಒಂದು ಮಾತು ಹೇಳಿದರೂ ಅದು ವಾಣಿಜ್ಯಾತ್ಮಕವಾಗಿ ಕಪ್ಪು ಚುಕ್ಕೆ. ಆದ್ದರಿಂದ, ಮುಂಗಾರಿಗೆ ಮುನ್ನವೇ ಈ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ರೂಪಿಸಿಕೊಂಡು ಸನ್ನದ್ಧರಾಗಬೇಕಿದೆ.

VISTARANEWS.COM


on

Rajakaluve
Koo

ರಾಜಕಾಲುವೆ ಒತ್ತುವರಿಯಾಗಿದ್ದರೆ ಎಷ್ಟೇ ಪ್ರಭಾವಿಗಳಾಗಿದ್ದರೂ ತೆರವುಗೊಳಿಸಲು ಸೂಚಿಸಲಾಗಿದೆ. ಯಾವ ಪ್ರಬಲ ರಾಜಕಾರಣಿಯೇ ಇರಲಿ, ಬೇರೆ ಯಾರೇ ಇರಲಿ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಬೆಂಗಳೂರಿನಲ್ಲಿ 400 ಕೆರೆಗಳಿದ್ದವು. ಅನೇಕ ಕೆರೆಗಳು ಹೂಳಿನಿಂದ ತುಂಬಿವೆ ಹಾಗೂ ಒತ್ತುವರಿಯಾಗಿವೆ. ಒತ್ತುವರಿ ತೆರವು ಮಾಡಿ ನೀರು ಹರಿಯಲು ಕಾಲುವೆ ನಿರ್ಮಾಣ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇಂದು ಮುಖ್ಯಮಂತ್ರಿಗಳು ನಗರದ ವಿವಿಧೆಡೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿ ಮತ್ತು ಮಳೆಯಿಂದ ಸಮಸ್ಯೆಗಳಿಗೆ ಒಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಬಳಿಕ ಇದನ್ನು ಹೇಳಿದ್ದಾರೆ.

ಜೂನ್ ತಿಂಗಳಿನಿಂದ ಮುಂಗಾರು ಪ್ರಾರಂಭವಾಗಲಿದೆ. ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿ ಪ್ರವಾಹ ಉಂಟಾಗಲಿದೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಸಿಟಿ ರೌಂಡ್ಸ್ ನಡೆಸಲಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ಯಲಹಂಕದಲ್ಲಿ 20 ಮನೆಗಳಿಗೆ ನೀರು ನುಗ್ಗಿದೆ. ಮುಯಮಂತ್ರಿಗಳು ತಿಳಿಸುವ ಪ್ರಕಾರ, ಬೆಂಗಳೂರು ನಗರದಲ್ಲಿ 860 ಕಿಮೀ ರಾಜಕಾಲುವೆ ಇದೆ. ಸಿದ್ದರಾಮಯ್ಯನವರ ಹಿಂದಿನ ಅವಧಿಯಲ್ಲಿ 491 ಕಿಮೀ ರಾಜಕಾಲುವೆಯನ್ನು ತೆರವು ಮಾಡಲಾಗಿತ್ತು. ಹಿಂದಿನ ಸರ್ಕಾರ 193 ಕಿಮೀ ತೆರವು ಮಾಡಿದೆ. ಸದ್ಯ ರಾಜಕಾಲುವೆ ತೆರವಿಗೆ 1800 ಕೋಟಿ ರೂ. ವೆಚ್ಚವಾಗುತ್ತಿದೆ. 174 ಕಿಮೀ ಉಳಿದಿದೆ. ವಿಶ್ವ ಬ್ಯಾಂಕ್ ಸುಮಾರು 2000 ಕೋಟಿ ರೂಪಾಯಿ ನೀಡಲಿದೆ. 12.15 ಕಿಮೀ ದೂರದ ಕಾಲುವೆ ಪ್ರಕರಣ ಸಿವಿಲ್ ನ್ಯಾಯಾಲಯದಲ್ಲಿವೆ.

ಜೂನ್‌ ಇನ್ನೇನು ಒಂದು ವಾರದಲ್ಲಿ ಬರಲಿದೆ. ಮುಂಗಾರು ಆರಂಭವಾಗಲಿದೆ. ಮಲೆನಾಡು ಹಾಗೂ ಬಯಲುಸೀಮೆಯ ಕೃಷಿಕ ಜನತೆಗೆ ಇರುವ ಮುಂಗಾರಿನ ಸಿದ್ಧತೆಯ ಜ್ಞಾನ ನಗರದ ಮಹಾಜನತೆಗೆ ಇಲ್ಲ. ಹೀಗಾಗಿ ಮುಂಗಾರಿನ ಆರಂಭದಲ್ಲಿ ಅಪ್ಪಳಿಸುವ ಮಳೆಗೆ, ಮಹಾನಗರ ಸಿದ್ಧವಾಗಿರುವುದಿಲ್ಲ. ಹೀಗಾಗಿಯೇ ರಾಜಕಾಲುವೆಗಳು ಕಸ ತುಂಬಿ ಕಟ್ಟಿಕೊಳ್ಳುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು ಹಳೆಯ ಹಾಗೂ ದುರ್ಬಲ ಮರಗಳು ಬೀಳುವುದು, ಶಿಥಿಲ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್‌ ಕಂಬಗಳು, ತೆರೆದ ಮ್ಯಾನ್‌ಹೋಲ್‌ಗಳು ಸಾವಿನರಮನೆಗಳಾಗುವುದನ್ನು ಕಾಣುತ್ತೇವೆ. ವಿಳಂಬವಾಗಿರುವ ರಾಜಕಾಲುವೆ ತೆರವು ಹಾಗೂ ಸ್ವಚ್ಛತೆ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು, ಹೂಳೆತ್ತಬೇಕು. ರಾಜಕಾಲುವೆಗೆ ಕಸ ಹಾಕುವುದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು. ಬೆಂಗಳೂರು ನಗರದಲ್ಲಿ ವಾರ್ಡ್ ರಸ್ತೆಗಳಲ್ಲಿ 5500 ಗುಂಡಿಗಳು ಬಿದ್ದಿವೆ ಎಂಬ ಲೆಕ್ಕ ಇವೆ. ನಾಲ್ಕು ಮಳೆಗೆ ರಸ್ತೆಗುಂಡಿಗಳು ಮರಣಕೂಪಗಳಾಗುತ್ತವೆ. ಇವುಗಳನ್ನು ಮುಚ್ಚಿಸಬೇಕು.

ರಾಜಕಾಲುವೆಗಳ ನಿರ್ವಹಣೆಗೆ ಶಾಶ್ವತವಾದ ಒಂದು ವ್ಯವಸ್ಥೆಯನ್ನೇ ರೂಪಿಸಬೇಕಿದೆ. ರಾಜಕಾಲುವೆ ಹಾಗೂ ಒಳಚರಂಡಿ ವ್ಯವಸ್ಥೆಗಳು ಪ್ರತ್ಯೇಕವಾಗಿರಬೇಕು. ಆದರೆ ನಗರದ ಎಷ್ಟೋ ಕಡೆ ಅವು ಒಟ್ಟಾಗಿವೆ. ಇದು ತಪ್ಪಬೇಕು. ಇನ್ನು ರಾಜಕಾಲುವೆಯ ಒತ್ತುವರಿ ಪ್ರಭಾವಿಗಳಿಂದಲೇ ಆಗಿರುವುದು ಹೆಚ್ಚು. ಕಾನೂನಾತ್ಮಕ ಅಡ್ಡಿಆತಂಕಗಳನ್ನು ಸೃಷ್ಟಿಸುವವರೂ ಇವರೇ. ಇವರನ್ನು ಎದುರಿಸಲು ಸರ್ಕಾರ ಇನ್ನಷ್ಟು ಸನ್ನದ್ಧವಾಗಬೇಕು. ಮನೆಗಳಲ್ಲಿ ಮಳೆ ನೀರು ಕೊಯ್ಲಿಗೆ ವ್ಯವಸ್ಥೆಯಾದರೂ ಇರಬೇಕು. ಇಲ್ಲವಾದರೆ ರಾಜಕಾಲುವೆಗಳಿಗಾದರೂ ಅದು ಸೇರಬೇಕು. ಎರಡೂ ಇಲ್ಲದೆ ಹೋದರೆ ಕೃತಕ ಪ್ರವಾಹ ಸೃಷ್ಟಿಯಾಗುತ್ತದೆ. ಈ ಕೃತಕ ಪ್ರವಾಹಗಳಿಂದ ಜನಜೀವನ ಅಸ್ತವ್ಯಸ್ಥಗೊಂಡು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಲಯದಲ್ಲಿಯೂ ರಾಜಧಾನಿಗೆ ಕೆಟ್ಟ ಹೆಸರು ಬರುತ್ತದೆ. ಮೂಲಸೌಕರ್ಯ ಸರಿಯಿಲ್ಲ ಎಂದು ಇತರ ನಗರಗಳು ನಮ್ಮ ಅವಕಾಶವನ್ನು ಕಸಿಯುತ್ತವೆ. ನಾಲ್ಕಾರು ಕಂಪನಿಗಳು ಬೆಂಗಳೂರಿನ ಇನ್‌ಫ್ರಾಸ್ಟ್ರಕ್ಚರ್‌ ಕಳಪೆ ಎಂದು ಒಂದು ಮಾತು ಹೇಳಿದರೂ ಅದು ವಾಣಿಜ್ಯಾತ್ಮಕವಾಗಿ ಕಪ್ಪು ಚುಕ್ಕೆ. ಆದ್ದರಿಂದ, ಮುಂಗಾರಿಗೆ ಮುನ್ನವೇ ಈ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ರೂಪಿಸಿಕೊಂಡು ಸನ್ನದ್ಧರಾಗಬೇಕಿದೆ.

ಇದನ್ನೂ ಓದಿ: PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಒಂದು ಕಡೆ ಸರಣಿ ಕೊಲೆ, ಇನ್ನೊಂದೆಡೆ ಪೊಲೀಸರ ಬೀದಿ ಸುಲಿಗೆ!

ಚಿಲ್ಲರೆ ಕಾಸಿಗೆ ಕೈಚಾಚುವ ಖದೀಮರು, ಬೀದಿ ಬದಿ ವ್ಯಾಪಾರಿಗಳಿಂದ ಸುಲಿಗೆ ಮಾಡುವವರು, ಅಂಗಡಿಯವರನ್ನು ಬೆದರಿಸಿ ಕಾಸು ಕೀಳುವವರು, ನ್ಯಾಯಕ್ಕಾಗಿ ಠಾಣೆಗೆ ಬಂದಾಗ ಹಣ ತೆಗೆದುಕೊಂಡು ರಾಜಿ ಕಬೂಲಿ ಮಾಡಿ ಕಳಿಸುವವರು, ಸ್ಥಳೀಯ ಪುಢಾರಿಗಳನ್ನು ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡು ಆಯಕಟ್ಟಿನ ಜಾಗಗಳಲ್ಲಿ ಸದಾ ಇರುವವರು, ಆಡಳಿತಗಾರರ ಮರ್ಜಿಗೆ ಸದಾ ಕಾಯುತ್ತ ಎಂಜಲು ಕಾಸಿಗೆ ಜೊಲ್ಲು ಸುರಿಸುವವರು- ಇಂಥವರಿಂದಾಗಿ ಪೊಲೀಸ್‌ ಇಲಾಖೆಗೆ ಅಪಖ್ಯಾತಿ ಬಂದಿದೆ.

VISTARANEWS.COM


on

Karnataka police
Koo

ರಾಜಧಾನಿಯ ರಾಜಗೋಪಾಲನಗರದ ಪೊಲೀಸ್‌ ಸಿಬ್ಬಂದಿಗಳಿಬ್ಬರನ್ನು ಹಫ್ತಾ ವಸೂಲಿ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಈ ಸಿಬ್ಬಂದಿಯನ್ನು ಸಾರ್ವಜನಿಕರು ಅಟ್ಟಿಸಿಕೊಂಡು ಹೋದ ದೃಶ್ಯವೊಂದು ವೈರಲ್‌ ಆಗಿತ್ತು. ಹೊಯ್ಸಳ ಸಿಬ್ಬಂದಿಯಾಗಿದ್ದ ಇವರು ವಾಹನ ನಿಲ್ಲಿಸಿ ಹೋಟೆಲ್‌ನಿಂದ ಊಟ ಹಾಗೂ ನೀರಿನ ಬಾಟಲ್ ಪಡೆದಿದ್ದರು. ಅದಲ್ಲದೇ ಅಂಗಡಿಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಆರೋಪದ ಮೇಲೆ ಸಾರ್ವಜನಿಕರು ವಿಡಿಯೋ ಮಾಡಿದ್ದು, ಇದನ್ನು ಕಂಡ ಪೊಲೀಸರು ಹೊಯ್ಸಳ ವಾಹನ ಹತ್ತಿ ವೇಗವಾಗಿ ಕಳ್ಳರಂತೆ ಆ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಹಿಂಬದಿಯಿಂದ ಜನರು ʼಪೊಲೀಸ್ ಕಳ್ಳ ಪೊಲೀಸ್ ಕಳ್ಳʼ ಎಂದು ಕೂಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದಲ್ಲದೆ, ಪೊಲೀಸ್‌ ಇಲಾಖೆಗೆ (Karnataka Police) ಮುಜುಗರಕ್ಕೆ ಕಾರಣವಾಗಿತ್ತು. ಸದ್ಯ ಇಬ್ಬರು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿರುವ ಉತ್ತರ ವಿಭಾಗ ಡಿಸಿಪಿ, ಭ್ರಷ್ಟ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇಲಾಖಾ ತನಿಖೆ ನಡೆಯುತ್ತಿದೆ.

ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ ಎಂಬುದು ಹೊಸ ವಿಚಾರವೇನಲ್ಲ. ಇದು ಪೊಲೀಸ್‌ ಪರೀಕ್ಷೆಯಿಂದ ಹಿಡಿದು, ದೊಡ್ಡ ಅಧಿಕಾರಿಗಳ ವರ್ಗಾವಣೆಯವರೆಗೆ ವ್ಯಾಪಿಸಿದೆ. ಕಾನ್‌ಸ್ಟೇಬಲ್‌ಗಳಿಂದ ಹಿಡಿದು ಐಪಿಎಸ್‌ ಮಟ್ಟದ ಅಧಿಕಾರಿಗಳವರೆಗೂ ಇದರ ಬೇರು ಕೊಂಬೆಗಳು ವ್ಯಾಪಿಸಿವೆ. ಪೊಲೀಸ್‌ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ವ್ಯಾಪಕ ಅವ್ಯವಹಾರ ನಡೆದುದರ ಬಗ್ಗೆ ನಾವು ಓದಿಯೇ ಇದ್ದೇವೆ. ಇನ್ನು ಹೀಗೆ ಪರೀಕ್ಷೆ ಬರೆಯುವಾಗಲೇ ಅವ್ಯವಹಾರ ನಡೆಸಿದವರು ಪೋಸ್ಟಿಂಗ್‌ ಆದ ಬಳಿಕ ಭ್ರಷ್ಟಾಚಾರ ನಡೆಸದೇ ಬಿಟ್ಟಾರೆಯೇ? ಅನುಕೂಲಕರ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವುದಕ್ಕಾಗಿ ಐಪಿಎಸ್‌ ಅಧಿಕಾರಿಗಳಿಂದ ಹಿಡಿದು ಕಾನ್‌ಸ್ಟೇಬಲ್‌ಗಳವರೆಗೆ ಶಾಸಕಾಂಗದ ಆಯಕಟ್ಟಿನ ಸ್ಥಾನಗಳಲ್ಲಿರುವವರಿಗೆ ದೊಡ್ಡ ಮೊತ್ತದ ಕಾಣಿಕೆ ಸಲ್ಲಿಸುತ್ತಾರೆ ಎಂಬುದು ಬರಿಯ ಅರೋಪ ಇರಲಾರದು. ಹೀಗೆ ಹಣ ಚೆಲ್ಲಿದವರು ಆ ಹಣಕಾಸನ್ನು ವಸೂಲಿ ಮಾಡದೇ ಬಿಟ್ಟಾರೆಯೇ? ಹೀಗೆ ವಸೂಲಿಗೆ ಇಳಿಯುವವರಿಗೆ ಸಿಗುವವರೇ ಜನಸಾಮಾನ್ಯರು. ಪೊಲೀಸರ ಭಯದಿಂದಲೇ ಸುಲಿಗೆಗೊಳಗಾಗುವವರು ತುಟಿ ಪಿಟಕ್ಕೆನ್ನದೆ ಸುಮ್ಮನಿರುವುದು ಸಾಮಾನ್ಯ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

ಹೀಗೆಂದು ಪೊಲೀಸ್‌ ಇಲಾಖೆಯಲ್ಲಿರುವ ಎಲ್ಲರೂ ಹೀಗೆ ಎಂದು ಅರ್ಥೈಸಬೇಕಿಲ್ಲ. ಶಿಸ್ತು, ಗಾಂಭಿರ್ಯ, ಪ್ರಾಮಾಣಿಕತೆ, ದಕ್ಷತೆಗೆ ಹೆಸರಾದವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಚಿಲ್ಲರೆ ಕಾಸಿಗೆ ಕೈಚಾಚುವ ಖದೀಮರು, ಬೀದಿ ಬದಿ ವ್ಯಾಪಾರಿಗಳಿಂದ ಸುಲಿಗೆ ಮಾಡುವವರು, ಅಂಗಡಿಯವರನ್ನು ಬೆದರಿಸಿ ಕಾಸು ಕೀಳುವವರು, ನ್ಯಾಯಕ್ಕಾಗಿ ಠಾಣೆಗೆ ಬಂದಾಗ ಹಣ ತೆಗೆದುಕೊಂಡು ರಾಜಿ ಕಬೂಲಿ ಮಾಡಿ ಕಳಿಸುವವರು, ಸ್ಥಳೀಯ ಪುಢಾರಿಗಳನ್ನು ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡು ಆಯಕಟ್ಟಿನ ಜಾಗಗಳಲ್ಲಿ ಸದಾ ಇರುವವರು, ಆಡಳಿತಗಾರರ ಮರ್ಜಿಗೆ ಸದಾ ಕಾಯುತ್ತ ಎಂಜಲು ಕಾಸಿಗೆ ಜೊಲ್ಲು ಸುರಿಸುವವರು- ಇಂಥವರಿಂದಾಗಿ ಪೊಲೀಸ್‌ ಇಲಾಖೆಗೆ ಅಪಖ್ಯಾತಿ ಬಂದಿದೆ. ಸದ್ಯ ಹೀಗೆ ಚಿಲ್ಲರೆ ಕಾಸಿಗಾಗಿ ಆಸೆಪಟ್ಟ ಇಬ್ಬರು ಸಿಕ್ಕಿಬಿದ್ದಿರಬಹುದು. ಆದರೆ ಇದರಿಂದ ಇಲಾಖೆಯ ಬೇರುಬೇರುಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಮೇಲೆ ಏನೂ ಪರಿಣಾಮವಾಗದು.

ಇದೆಲ್ಲ ಸರಿಹೋಗಲು ಪೊಲೀಸ್‌ ಇಲಾಖೆಯ ಆಮೂಲಾಗ್ರ ಸುಧಾರಣೆ ಅಗತ್ಯ. ಮೇಲಿನಿಂದ ಸುಧಾರಣೆಯಾಗದೇ ಕೆಳಗಿನ ಹಂತದಲ್ಲಿ ಏನೂ ಮಾಡಲಾಗದು. ಈ ಸುಧಾರಣೆಗೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳೂ, ಅದರ ಮೇಲೆ ಹಿಡಿತ ಸಾಧಿಸಿರುವ ರಾಜಕಾರಣಿಗಳೂ ಮನಸ್ಸು ಮಾಡಬೇಕು. ಒಂದೆಡೆ ಸರಣಿ ಕೊಲೆಗಳು ನಡೆಯುತ್ತಿವೆ, ಇನ್ನೊಂದೆಡೆ ಪೊಲೀಸರು ಬೀದಿ‌ ಸುಲಿಗೆಯಲ್ಲಿ ತೊಡಗಿದ್ದಾರೆ. ಇದು ರಾಜ್ಯ ಪೊಲೀಸ್ ಇಲಾಖೆಯ ಘನತೆಯನ್ನು ಕುಗ್ಗಿಸಿದೆ.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

ಎಲ್ಲಿಯವರೆಗೆ ದುರ್ಬಲರು ನ್ಯಾಯ ಪಡೆಯದೆ, ಸಬಲರು ನ್ಯಾಯಾಂಗದ ಎಲ್ಲ ಲಾಭವನ್ನೂ ಪಡೆಯುತ್ತಾರೋ ಅಲ್ಲಿಯವರೆಗೂ ನ್ಯಾಯಾಂಗಕ್ಕೂ ಪೊಲೀಸ್‌ ವ್ಯವಸ್ಥೆಗೂ ಅಂಟಿದ ಸಬಲ ಪಕ್ಷಪಾತಿ ಎಂಬ ಕಳಂಕ ತಪ್ಪುವುದಿಲ್ಲ. ಅಪರಾಧದ ಗಂಭೀರತೆ ಪರಿಗಣಿಸಿ ಶೀಘ್ರ ಶಿಕ್ಷೆ, ತ್ವರಿತ ನ್ಯಾಯದಾನ ಸಾಧ್ಯವಾಗಬೇಕು.

VISTARANEWS.COM


on

Porsche
Koo

ಪುಣೆಯಲ್ಲಿ ಒಬ್ಬಾತ ಅಪ್ರಾಪ್ತ ವಯಸ್ಕ ಸ್ಪೋರ್ಟ್ಸ್‌ ಕಾರು ಅತಿ ವೇಗದಲ್ಲಿ ಯದ್ವಾತದ್ವಾ ಓಡಿಸಿ ಇಬ್ಬರ ಸಾವಿನ ಕಾರಣನಾಗಿದ್ದಾನೆ. ವಿಶೇಷ ಎಂದರೆ, ಇವನಿಗೆ ಬಂಧನವಾದ 15 ಗಂಟೆಯೊಳಗೇ ಜಾಮೀನು ದೊರೆತಿದೆ. 17 ವರ್ಷದ ಈತ ಶನಿವಾರ ಪುಣೆಯಲ್ಲಿ ಚಲಾಯಿಸುತ್ತಿದ್ದ ಪೋರ್ಷೆ ಕಾರು ಕೋರೆಗಾಂವ್ ಪಾರ್ಕ್‌ ಸಮೀಪ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪುರುಷ ಮತ್ತು ಮಹಿಳೆ ಮೃತಪಟ್ಟಿದ್ದರು. ಇವರಿಬ್ಬರೂ ಐಟಿ ಎಂಜಿನಿಯರ್ ಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಆತನಿಗೆ ಜಾಮೀನು ನೀಡಿದ್ದಲ್ಲದೆ, ಕೆಲವು ಸರಳ ಶಿಕ್ಷೆಗಳನ್ನು ಆತನಿಗೆ ವಿಧಿಸಿದೆ. ಯೆರವಾಡಾದ ಸಂಚಾರ ಪೊಲೀಸರೊಂದಿಗೆ 15 ದಿನಗಳ ಕಾಲ ಕೆಲಸ ಮಾಡಬೇಕು, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು, ಕುಡಿತದ ಅಭ್ಯಾಸಕ್ಕೆ ಚಿಕಿತ್ಸೆ ಪಡೆಯಬೇಕು ಮತ್ತು ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಚಿಕಿತ್ಸೆಗೆ ಒಳಗಾಗಬೇಕು ಎಂಬುದು ಷರತ್ತು. ಈತ ಪುಣೆಯ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿಯ ಮಗ ಹಾಗೂ ಪ್ರಭಾವಿ. ಪಬ್‌ನಲ್ಲಿ ಪಾರ್ಟಿ ಮಾಡಿ ಪಾನಮತ್ತನಾಗಿ ಹಿಂದಿರುಗುತ್ತಿದ್ದ. ಸಮಾಧಾನದ ವಿಷಯ ಎಂದರೆ ಪುಣೆ ಪೊಲೀಸರು ಜಾಮೀನು ಆದೇಶದ ವಿರುದ್ಧ ಮೇಲಿನ ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಈ ಪ್ರಕರಣದ ಬಗ್ಗೆ ಜನಾಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಬಾಲಕನ ತಂದೆ ಮತ್ತು ಆತನಿಗೆ ಮದ್ಯ ಪೂರೈಸಿದ ಬಾರ್ ಮಾಲೀಕನನ್ನು ಬಂಧಿಸಿದ್ದಾರೆ. ಇವರು ಕೂಡ ಬೇಗನೆ ಜಾಮೀನಿನ ಮೇಲೆ ಬಿಡುಗಡೆಯಾದರೆ ಆಶ್ಚರ್ಯವಿಲ್ಲ.

ಇದು ನಮ್ಮ ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆಯ ಛಿದ್ರಗಳು ಎಲ್ಲಿವೆ ಎಂಬುದನ್ನು ಬೆಟ್ಟು ಮಾಡಿ ತೋರಿಸುವಂತಿದೆ. ಕರ್ನಾಟಕದಲ್ಲಿಯೂ ಹೀಗೇ ಆಗಿದೆ; ಲೈಂಗಿಕ ದೌರ್ಜನ್ಯ ಹಾಗೂ ಕಿಡ್‌ನ್ಯಾಪ್‌ ಪ್ರಕರಣದಲ್ಲಿ ಬಂಧಿತರಾದ ಮಾಜಿ ಸಚಿವರು ಆರು ದಿನಗಳಲ್ಲಿ ಜಾಮೀನು ಪಡೆಯುತ್ತಾರೆ. ವಿಶೇಷ ತನಿಖಾ ದಳದ ವಕೀಲರು ಎಷ್ಟು ಪ್ರಯತ್ನಿಸಿದರೂ ಜಾಮೀನು ತಪ್ಪಿಸಲು ಆಗುವುದಿಲ್ಲ. ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಆತನನ್ನು ಕರೆದು ತರುವಲ್ಲಿ ಇಲ್ಲಿನ ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆಗಳು ಸದ್ಯಕ್ಕೆ ಅಸಹಾಯಕವಾಗಿವೆ. ಇದು ಈ ಪ್ರಕರಣದ ಒಂದು ಮುಖ.

ಪ್ರಭಾವಿಗಳು ಏನು ಮಾಡಿದರೂ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಾರೆ ಎಂಬ ಪರಿಸ್ಥಿತಿ ಸೃಷ್ಟಿಯಾಗಿರುವಂತಿದೆ. ನಗರಗಳಲ್ಲಿ ಇತ್ತೀಚೆಗೆ ನಡೆಯುವ ಅಪರಾಧ ಸ್ವರೂಪಗಳನ್ನು ನೋಡುವುದಾದರೆ, ಕುಬೇರರು ಬಡವರ ಮೇಲೆ ಕೈ ಮಾಡುವುದು, ಹಲ್ಲೆ ನಡೆಸಿಯೂ ಪಾರಾಗುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಯಮಕನಮರಡಿಯಲ್ಲಿ ಇತ್ತೀಚೆಗೆ ನಡೆದ ಒಂದು ಅಪರಾಧ ನೋಡಿದರೆ, ಸಾಲ ಪಾವತಿ ಮಾಡಲಿಲ್ಲ ಎಂದು ರೈತನ ಪತ್ನಿ- ಮಗನನ್ನು ಒಬ್ಬಾಕೆ ಗೃಹಬಂಧನದಲ್ಲಿಟ್ಟಿದ್ದಾಳೆ. ಇದರಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಿಗ ಮಹಿಳೆಯ ಮೇಲೆ ಪೊಲೀಸ್‌ ಕ್ರಮ ಕೈಗೊಂಡಂತಿಲ್ಲ. ಶ್ರೀಮಂತರು ಸಾಕಿದ ನಾಯಿಗಳು ಬೀದಿಯಲ್ಲಿ ಬಡವರ ಮಕ್ಕಳನ್ನು ಕಚ್ಚಿ ತಿನ್ನುತ್ತಿವೆ. ನಿರ್ಲಕ್ಷ್ಯದಿಂದ ಮಕ್ಕಳ ಜೀವಕ್ಕೆ ಎರವಾದವರಿಗೂ ಶಿಕ್ಷೆಯಾದ ಹಾಗಿಲ್ಲ.

ಇನ್ನು ಟ್ರಾಫಿಕ್‌ ಅಪರಾಧಗಳ ಕತೆಯೂ ಇದೇ ಮಾದರಿಯಲ್ಲಿದೆ. ಹಿಟ್‌ ಆಂಡ್‌ ರನ್‌ಗಳು ಹೆಚ್ಚುತ್ತಿವೆ. ದೊಡ್ಡ ವಾಹನಗಳನ್ನು ಯದ್ವಾತದ್ವಾ ಓಡಿಸಿ, ದ್ವಿಚಕ್ರ ವಾಹನ ಸವಾರರ ಜೀವ ತೆಗೆಯುವವರ ಸಂಖ್ಯೆ ಹೆಚ್ಚಿದೆ. ರೋಡ್‌ ರೇಜ್‌ ಪ್ರಕರಣಗಳಲ್ಲಿ ಸಬಲರು ದುರ್ಬಲರ ಮೇಲೆ ವಿನಾಕಾರಣ ಹಲ್ಲೆ ಮಾಡುತ್ತಿದ್ದಾರೆ. ಇವರ್ಯಾರಿಗೂ ಶೀಘ್ರವಾಗಿ ಶಿಕ್ಷೆಯಾಗುತ್ತಿಲ್ಲ. ಸುಲಭವಾಗಿ ಜಾಮೀನೂ ದೊರೆಯುತ್ತಿದೆ. ದುರ್ಬಲ ಸೆಕ್ಷನ್‌ಗಳು, ದುರ್ಬಲ ಸಾಕ್ಷಿಗಳು, ವಿಲಂಬಿತ ನ್ಯಾಯಾಂಗ ಪ್ರಕ್ರಿಯೆ ಇವುಗಳಿಂದಾಗಿ ಸಂತ್ರಸ್ತರು ಮತ್ತಷ್ಟು ಸಂತ್ರಸ್ತರೇ ಆಗುತ್ತಿದ್ದಾರೆ. ನ್ಯಾಯದಾನ ವಿಳಂಬವಾದಷ್ಟೂ ಸಾಕ್ಷಿಗಳು, ಕಕ್ಷಿದಾರರು ಕೇಸ್‌ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಕೆಲವು ದಾಖಲೆ ಪತ್ರಗಳು ನಾಶವಾಗಬಹುದು, ಸಾಕ್ಷಿಗಳು ಇಲ್ಲವಾಗಬಹುದು. ಕಾಲದ ಹೊಡೆತಕ್ಕೆ ಸಿಲುಕಿ, ಪ್ರತಿ ತಿಂಗಳೂ ಕೋರ್ಟಿಗೆ ಅಲೆದು ಹೈರಾಣಾಗುವ ಪರಿಸ್ಥಿತಿಯಿಂದ ರೋಸಿಹೋಗಿ ರಾಜಿ ಮಾಡಿಕೊಂಡ ಎಷ್ಟೋ ಪ್ರಕರಣಗಳು ಇವೆ. ಇದು ನ್ಯಾಯ ಬೇಡವೆಂದಲ್ಲ, ಶಿಕ್ಷೆಗಿಂತಲೂ ನಿಷ್ಕರುಣಿಯಾಗಿರುವ ಕಟಕಟೆಯ ಸಹವಾಸ ಬೇಡವೆಂದು.

ಎಲ್ಲಿಯವರೆಗೆ ದುರ್ಬಲರು ನ್ಯಾಯ ಪಡೆಯದೆ, ಸಬಲರು ನ್ಯಾಯಾಂಗದ ಎಲ್ಲ ಲಾಭವನ್ನೂ ಪಡೆಯುತ್ತಾರೋ ಅಲ್ಲಿಯವರೆಗೂ ನ್ಯಾಯಾಂಗಕ್ಕೂ ಪೊಲೀಸ್‌ ವ್ಯವಸ್ಥೆಗೂ ಅಂಟಿದ ಸಬಲ ಪಕ್ಷಪಾತಿ ಎಂಬ ಕಳಂಕ ತಪ್ಪುವುದಿಲ್ಲ. ಅಪರಾಧದ ಗಂಭೀರತೆ ಪರಿಗಣಿಸಿ ಶೀಘ್ರ ಶಿಕ್ಷೆ, ತ್ವರಿತ ನ್ಯಾಯದಾನ ಸಾಧ್ಯವಾಗಬೇಕು.

ಇದನ್ನೂ ಓದಿ: Porsche Crash: 2 ಕಾರು, 4 ನಗರ, 1 ಸಿಮ್‌ ಕಾರ್ಡ್;‌ ಮಗ ಕಾರು ಗುದ್ದಿದ ಬಳಿಕ ಅಪ್ಪನ ಪ್ಲಾನ್‌ ಏನು? ಇಲ್ಲಿದೆ ಭೀಕರ ಮಾಹಿತಿ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ರಾಜ್ಯದಲ್ಲಿ ಕೊಲೆಗಳ‌ ಸರಮಾಲೆ; ಪೊಲೀಸ್ ಇಲಾಖೆ ಯಾಕಿಷ್ಟು‌ ದುರ್ಬಲವಾಗಿದೆ?

ಈ ಅಪರಾಧಗಳ ನಡುವೆ ಎದ್ದು ಕಾಣಿಸುತ್ತಿರುವುದು, ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹೆಚ್ಚಳ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ, ಅಂಜಲಿ ಅಂಬಿಗೇರ ಕೊಲೆ ಪ್ರಕರಣ, ಕೊಡಗಿನ ಮೀನಾ ಕೊಲೆ ಪ್ರಕರಣಗಳು ಇದಕ್ಕೆ ಇತ್ತೀಚಿನ ನಿದರ್ಶನಗಳಾಗಿವೆ. ಇನ್ನೂ ಹತ್ತು ಹಲವನ್ನು ಉದಾಹರಿಸಬಹುದು. ರಾಜ್ಯದಲ್ಲಿ ಪೊಲೀಸ್ ಇಲಾಖೆ ಹಿಂದೆಂದೂ ಇಲ್ಲದಷ್ಟು ದುರ್ಬಲವಾದಂತೆ ಕಾಣುತ್ತಿದೆ.

VISTARANEWS.COM


on

Karnataka Police
Koo

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National crime records bureau- NCRB) ಇತ್ತೀಚೆಗಿನ ಅಪರಾಧಗಳ ಅಂಕಿ ಅಂಶವನ್ನು ಪ್ರಕಟಿಸಿದ್ದು, ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳ (crimes) ಸಂಖ್ಯೆ ಮಿತಿ ಮೀರಿ ಹೆಚ್ಚಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಕಳೆದ ಜನವರಿಯಿಂದ ಏಪ್ರಿಲ್‌ವರೆಗೆ ಏರಿಕೆ ಪ್ರಮಾಣದಲ್ಲಿ ಕೊಲೆ (murder), ಅತ್ಯಾಚಾರ (physical abuse), ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು (Pocso) ನಡೆದಿವೆ. 2024ರ ಜನವರಿಯಿಂದ ಏಪ್ರಿಲ್ 30ರವರೆಗೆ ಅಂದರೆ 4 ತಿಂಗಳಲ್ಲಿ ಸುಮಾರು 430 ಕೊಲೆಗಳು (Murder), 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2327 ಮಹಿಳೆಯರ ಮೇಲೆ ದೌರ್ಜನ್ಯ, 1262 ಮಕ್ಕಳ ಮೇಲೆ ದೌರ್ಜನ್ಯ, 7421 ಸೈಬರ್ ಕ್ರೈಂ, 450 ರಾಬರಿಗಳು ಸಂಭವಿಸಿವೆ. ಲೈಂಗಿಕ ದೌರ್ಜನ್ಯ ಹಾಗೂ ಸೈಬರ್ ವಂಚನೆ (cyber crime) ಗಗನಕ್ಕೆ ಏರಿವೆ. ಹಲ್ಲೆ, ಮಾರಣಾಂತಿಕ ಹಲ್ಲೆ ಕೇಸ್‌ಗಳು ಅಧಿಕವಾಗುತ್ತಾ ಸಾಗುತ್ತಿವೆ. ಇದು ಆತಂಕಕ್ಕೆ ಕಾರಣವಾಗಿದೆ.

ಎಂದಿನಂತೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಈ ಅಸ್ತ್ರವನ್ನು ಹಿಡಿದುಕೊಂಡು ಸರ್ಕಾರದ ಮೇಲೆ ದಾಳಿಗೆ ಇಳಿದಿವೆ. “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡೊಂಬೊಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ. ರಾಜ್ಯ ಗೃಹ ಇಲಾಖೆ ಎನ್ನುವುದು ಕೆಲಸ ಮಾಡುತ್ತಿದೆಯಾ?” ಎಂದು ವಿಪಕ್ಷ ನಾಯಕರು ಟೀಕಿಸಿದ್ದಾರೆ. ಜನಸಾಮಾನ್ಯರ ಮನದಲ್ಲಿರುವ ಪ್ರಶ್ನೆಯನ್ನೇ ಅವರು ಕೇಳಿದ್ದಾರೆ ಎನ್ನಬೇಕು. ಈ ಪ್ರಶ್ನೆಯನ್ನು ಕೇಳಿ ಅರ್ಧದಲ್ಲೇ ಕೈಬಿಡಬಾರದು. ಇದನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವತ್ತ ಪ್ರಯತ್ನಿಸಬೇಕು. ಗೃಹ ಸಚಿವರು, ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಬೇಕು.

ಆದರೆ ಗೃಹ ಸಚಿವರು ಇದನ್ನು ಒಂದು ವಿಷಯವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. “ಒಂದೊಂದು ಘಟನೆಗೂ ಒಂದೊಂದು ಕಾರಣ ಅಂತ ಇರುತ್ತದೆ. ಅವರ (ಪ್ರತಿಪಕ್ಷದ) ಕಾಲದಲ್ಲಿ ಎಷ್ಟು ಮರ್ಡರ್ ಆಗಿತ್ತು ಅಂತೆ ಹೇಳಿದರೆ ಯಾವ ಸರ್ಕಾರದಲ್ಲಿ ಸುರಕ್ಷತೆ ಇತ್ತು ಅನ್ನೋದು ತಿಳಿಯುತ್ತೆ” ಎಂದಿದ್ದಾರೆ. “ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ. ಇವರನ್ನು ಹೇಳ್ಕೊಂಡು, ಕೇಳ್ಕೊಂಡು ಸರ್ಕಾರ ಕಾನೂನು ಸುವ್ಯವಸ್ಥೆ ಮಾಡೋಕೆ ಆಗೊಲ್ಲ. ಏನು ಕ್ರಮ ಬೇಕಾದ್ರೂ ತಗೊಳ್ತೇವೆ” ಎಂದಿದ್ದಾರೆ. ಇದು ಒಬ್ಬರು ಇನ್ನೊಬ್ಬರ ಮೇಲೆ ದೂರು ಹಾಕಿ ಮುಗಿಸಬೇಕಾದ ಸಂಗತಿಯಲ್ಲ. ಯಾರೂ ಇಂಥ ವಿಚಾರಗಳಲ್ಲಿ ಸುಮ್ಮಸುಮ್ಮನೆ ಆರೋಪ ಮಾಡುವುದಿಲ್ಲ. ಮೇಲಾಗಿ, ಇದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಒದಗಿಸಿದ ಅಂಕಿಸಂಖ್ಯೆಗಳನ್ನು ಆಧರಿಸಿದೆ. ಹೀಗಾಗಿ ಆಳುವವರು ಇದನ್ನು ಗಂಭೀರವಾಗಿಯೇ ಪರಿಗಣಿಸಬೇಕಿದೆ.

ಈ ಅಪರಾಧಗಳ ನಡುವೆ ಎದ್ದು ಕಾಣಿಸುತ್ತಿರುವುದು, ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹೆಚ್ಚಳ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ, ಅಂಜಲಿ ಅಂಬಿಗೇರ ಕೊಲೆ ಪ್ರಕರಣ, ಕೊಡಗಿನ ಮೀನಾ ಕೊಲೆ ಪ್ರಕರಣಗಳು ಇದಕ್ಕೆ ಇತ್ತೀಚಿನ ನಿದರ್ಶನಗಳಾಗಿವೆ. ಇನ್ನೂ ಹತ್ತು ಹಲವನ್ನು ಉದಾಹರಿಸಬಹುದು. ಹುಬ್ಬಳ್ಳಿಯಲ್ಲಿ ಕೊಲೆ ಮಾಡಿದವನು ಅಂಜಲಿ ಕೊಲೆ ಮಾಡಿದವನು, ತಾನು ನೇಹಾ ಕೊಲೆ ಮಾದರಿಯಲ್ಲಿ ಕೊಲ್ಲುತ್ತೇನೆ ಎಂದು ಮೊದಲೇ ಹೇಳಿಯೇ ಇದನ್ನು ಮಾಡುತ್ತಾನೆ. ಇದನ್ನು ಪೊಲೀಸರ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುವುದಿಲ್ಲ. ಅಂದರೆ ಇಲ್ಲಿ ಪೊಲೀಸರು ಎಷ್ಟು ಕಾರ್ಯಪ್ರವೃತ್ತರಾಗಿದ್ದಾರೆ ಎಂಬ ಅಂದಾಜು ಸಿಗುತ್ತದೆ. ಬಡವರು ಅನ್ಯಾಯಕ್ಕೊಳಗಾದರೆ ಕೇಳುವವರೇ ಇಲ್ಲವೇ? ಇಲ್ಲಿ ಪ್ರಜ್ವಲ್‌ ರೇವಣ್ಣನಂಥ ಪ್ರಭಾವಿ ಅಪರಾಧಿಗಳನ್ನು ರಾಜಕೀಯ ಕಾರಣಗಳಿಗಾಗಿ ಬೆನ್ನು ಹತ್ತಲಾಗುತ್ತದೆ; ಆದರೆ ಶ್ರೀಸಾಮಾನ್ಯರಿಗೆ ಇಲ್ಲಿ ಯಾವ ರಕ್ಷಣೆಯೂ ಇಲ್ಲವೇ? ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ನೂರಾರು ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಹರಿಬಿಡಲಾಗಿದೆ. ನೂರಾರು ಕುಟುಂಬಗಳನ್ನು ಛಿದ್ರಗೊಳಿಸುವಂತಹ ಇಂಥ ಅಪರಾಧಿಗಳ ಮೇಲೆ ಯಾವ ಕ್ರಮವೂ ಇಲ್ಲ! ಬದಲಾಗಿ ಅವರನ್ನು ರಕ್ಷಿಸಲಾಗುತ್ತಿದೆ.

ಇವೆಲ್ಲವೂ ಅಪಾಯಕಾರಿ ಬೆಳವಣಿಗೆ. “ಹೆಣ್ಣು ನಡುರಾತ್ರಿಯಲ್ಲಿ ಒಬ್ಬಳೇ ಓಡಾಡುವಂತಾದರೆ ದೇಶ ಸ್ವತಂತ್ರವಾದುದಕ್ಕೆ ಸಾರ್ಥಕ” ಎಂದು ಗಾಂಧೀಜಿ ಹೇಳಿದ್ದರಂತೆ. ನಡುರಾತ್ರಿಯಲ್ಲಿ ಬೇಡ, ನಡುಹಗಲಿನಲ್ಲಾದರೂ ಸುರಕ್ಷಿತವಾಗಿ ಓಡಾಡುವಂತಾದರೆ ಸಾಕು! ಕಾಲೇಜಿಗೆ ಹೋಗುವುದು, ಮನೆಯಲ್ಲಿರುವುದು ಮುಂತಾದ ಸರಳ ಕ್ರಿಯೆಗಳ ಸಂದರ್ಭದಲ್ಲಿ ಕೂಡ ಪಾತಕಿಗಳು ದಾಳಿ ನಡೆಸುತ್ತಾರೆ ಎಂದರೆ ಏನು ಹೇಳೋಣ? ಬೆಂಗಳೂರಿನ ಬೀದಿಗಳಲ್ಲಿ ರೌಡಿ ಶೀಟರ್‌ಗಳು ಯಾರ ಭಯವಿಲ್ಲದೆ ಗ್ಯಾಂಗ್‌ ಕಟ್ಟಿಕೊಂಡು ಹೊಡೆದಾಡುವುದು, ಸರ ಎಗರಿಸುವುದು, ಹಲ್ಲೆ, ಬೈಕ್‌ ವ್ಹೀಲಿಂಗ್‌ ನಡೆಸುತ್ತಿದ್ದಾರೆ. ಗೃಹ ಇಲಾಖೆ ದುರ್ಬಲವಾದಾಗ, ಪುಂಡರಿಗೆ ರಾಜಕಾರಣಿಗಳೇ ಕುಮ್ಮಕ್ಕು ನೀಡಿದಾಗ ಇಂಥ ಪ್ರವೃತ್ತಿ ಹೆಚ್ಚುತ್ತದೆ. ಇದಕ್ಕೆ ಈಗಲೇ ಕಡಿವಾಣ ಹಾಕದೆ ಹೋದರೆ ಮುಂದಿನ ದಿನಗಳ ದುರ್ಭರವಾಗಲಿವೆ.

ಇದನ್ನೂ ಓದಿ: Anjali Murder Case: ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

Continue Reading
Advertisement
Narendra Modi
ದೇಶ47 mins ago

PM Modi: 400 ಸೀಟು, 400 ಸೀಟು ಎಂದು ಪ್ರತಿಪಕ್ಷಗಳನ್ನು ಮಂಗ್ಯಾ ಮಾಡಿದ ಮೋದಿ; ಅವರ ಮಾತಲ್ಲೇ ಕೇಳಿ!

Rajakaluve
ಸಂಪಾದಕೀಯ1 hour ago

ವಿಸ್ತಾರ ಸಂಪಾದಕೀಯ: ಮುಂಗಾರಿಗೆ ಮುನ್ನವೇ ರಾಜಕಾಲುವೆ ಒತ್ತುವರಿ ತೆರವಾಗಲಿ

IPL 2024
ಪ್ರಮುಖ ಸುದ್ದಿ1 hour ago

IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

DCM D K Shivakumar instructed to test drinking water everywhere including Bengaluru
ಕರ್ನಾಟಕ1 hour ago

Bengaluru News: ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್

Naxals
ದೇಶ2 hours ago

Naxals: ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಎನ್‌ಕೌಂಟರ್

IPL 2024
ಪ್ರಮುಖ ಸುದ್ದಿ2 hours ago

IPL 2024 : ಐಪಿಎಲ್​ನಲ್ಲಿ ಕಳಪೆ ದಾಖಲೆಯೊಂದನ್ನು ಸೃಷ್ಟಿಸಿ ನಿರ್ಗಮಿಸಿದ ಆರ್​ಸಿಬಿ

arecanut price
ಕರ್ನಾಟಕ3 hours ago

Arecanut Price: ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್‌ ಕಿ ಬಾರ್ ₹60,000 ಪಾರ್ ಆಗಲಿದೆಯಾ?

Self Harming Husband commits suicide for taking his wife home
ಕರ್ನಾಟಕ3 hours ago

Self Harming: ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ಪತಿ ಆತ್ಮಹತ್ಯೆ!

WhatsApp AI
ತಂತ್ರಜ್ಞಾನ3 hours ago

WhatsApp AI: WhatsAppಗೂ ಬಂತು ಎಐ; ನಿಮ್ಮ ಪ್ರೊಫೈಲ್‌ ಫೋಟೊ ಇನ್ನು AI ಜನರೇಟೆಡ್!‌

T20 world cup 2024
ಕ್ರೀಡೆ3 hours ago

T20 World Cup 2024 : ಭಾರತ ತಂಡ ವಿಶ್ವ ಕಪ್​ ಗೆಲ್ಲುವುದಿಲ್ಲ; ಇಂಗ್ಲೆಂಡ್​ ಮಾಜಿ ಆಟಗಾರನ ಭವಿಷ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ20 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌