Adi Shankaracharya facts, achievements and all you need to know in kannadaShankaracharya Jayanti 2023 : ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ - Vistara News

ಧಾರ್ಮಿಕ

Shankaracharya Jayanti 2023 : ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ

ವೇದಾಂತ ಆಧಾರಿತ ಸಮಾಜವಾದವನ್ನು ಕೊಟ್ಟದಾರ್ಶನಿಕರು ಶ್ರೀ ಶಂಕರಾಚಾರ್ಯರು. ಇಂದು ಅವರ ಜಯಂತಿ (Shankaracharya Jayanti 2023. ತನ್ನಿಮಿತ್ತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Adi Shankaracharya facts, achievements and all you need to know in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾರಾಯಣ ಯಾಜಿ
ಯೋಗರತೋ ವಾ ಭೋಗರತೋ ವಾ ಸಂಗರತೋ ವಾ ಸಂಗವಿಹೀನಃ|
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ ನಂದತಿ ನಂದತಿ ನಂದತ್ಯೇವ ||ಭ. ಗೋ 19||

narayana yaji

ಯೋಗಿಯಾಗಿರಲಿ, ಭೋಗಿಯಾಗಿರಲಿ, ಸತ್ಸಂಗದಲ್ಲಿ ಇರಲಿ ಅಥವಾ ಸಂಗರಹಿತರಾಗಿರಲಿ. ಯಾರ ಚಿತ್ತವು ಬ್ರಹ್ಮದಲ್ಲಿ ನೆಲೆಯಾಗಿರುತ್ತದೆಯೋ ಅವನ ಮನಸ್ಸು ಆನಂದಿಸುತ್ತದೆ, ಅಮಿತವಾದ ಆನಂದಲ್ಲೇ ಇರುತ್ತದೆ. ಇದು ನಿಶ್ಚಿತ.

ಶಂಕರಾಚಾರ್ಯರನ್ನು ಅನುಭಾವಿ ಸಂತ ಎಂದು ಗುರುತಿಸುವಾಗ ಅವರೊಳಗಿನ ತತ್ತ್ವಾಜ್ಞಾನಿ ಕಾಣಿಸುತ್ತಾನೆ. ತತ್ತ್ವಜ್ಞಾನಿ ಎಂದುಕೊಳ್ಳುವಾಗ ಪಂಚಾಯತನ ಪೂಜೆಯನ್ನು ಕಲ್ಪಿಸಿಕೊಟ್ಟು ಮೂರ್ತಿಪೂಜೆಯ ಮೂಲಕ ಭಕ್ತಿಪಂಥಕ್ಕೆ ವೇದಿಕೆಯನ್ನು ಹಾಕಿಕೊಟ್ಟವರಾಗಿದ್ದಾರೆ. ಅವರು ಅಪ್ಪಟ ಕರ್ಮಠರಾಗಿದ್ದರು ಎನ್ನುವಾಗ “ಮನೀಷಾ ಪಂಚಕ” ಅವರನ್ನು ಓರ್ವ ಸಮಾಜಸುಧಾರಕರಾಗಿ ಪರಿಚಯಿಸುತ್ತದೆ. ಭಜಗೋವಿಂದಂ, ನಿರ್ವಾಣ ಸೂಕ್ತ, ಸೌಂದರ್ಯ ಲಹರಿ ಮುಂತಾದ ಸಾಹಿತ್ಯವನ್ನು ಓದುವಾಗ ಅವರೊಳಗಿನ ಅಪ್ರತಿಮ ಕವಿತ್ವಕ್ಕೆ ಬೆರಗಾಗುತ್ತೇವೆ.

ಅದರೆ ಈ ಎಲ್ಲ ಮುಖಗಳ ಹಿಂದಿರುವ ಶಂಕರರು ಮಾತ್ರ ಕಮಲಪತ್ರದ ಎಲೆಯ ಮೇಲೆ ನಿಂತಿರುವ ನೀರ ಹನಿಯಂತೆ ವೇದಾಂತಿಯಾಗಿ ತಮ್ಮ ಗಂಭೀರ ಮುದ್ರೆಯಲ್ಲಿ ಕುಳಿತು “ಇವೆಲ್ಲವೂ ಸಗುಣ ಬ್ರಹ್ಮನ ನಾನಾ ರೂಪಗಳು; ಇದರ ಹಿಂದಿರುವುದು “ನೇತಿ ನೇತಿ.. ಎನ್ನುವ ಮೂಲದಿಂದ ಹೊರಟ ಬೆಳಕಿನ ಕಿರಣಗಳಾಗಿವೆ ಎನ್ನುತ್ತಿರುವಂತೆ ಗೋಚರಿಸುತ್ತಾರೆ. ಶಂಕರರನ್ನು ಅರಿಯಬೇಕಾದರೆ ಹೀಗೆ ಸಾಗಬೇಕು. ಕಾಣುವ ಎಲ್ಲವನ್ನು ಅರಿಯುತ್ತಲೇ ಕಾಣದಿರುವ ವಸ್ತುವನ್ನು ಹುಡುಕಬೇಕು. ಶಂಕರರ ಅಧ್ಯಾತ್ಮವೆಂದರೆ ಅದು ಕವಿಯ ಹೃದಯದಿಂದ ಹೊರಬಂದ ಕವಿತೆಗಳು. “ರವಿ ಕಾಣದ್ದನ್ನು ಕವಿ ಕಂಡಿರುವುದು”. ಹಾಗಾಗಿ ಶಂಕರರು ಇತ್ತ ನಿರೀಶ್ವರವಾದಿಗಳಿಗೂ ಅತ್ತ ಅದ್ವೈತಿಗಳಲ್ಲದ ಇನ್ನಿತರ ಕರ್ಮಠರಿಗೂ ಪರಮ ವಿರೋಧಿಗಳಾಗಿದ್ದಾರೆ. ಈ ವಿರೋಧವೆನ್ನುವದನ್ನು ವಿವರವಾಗಿ ಬರೆದರೆ ಒಂದು ದೊಡ್ಡ ಗ್ರಂಥವೇ ಆಗಬಹುದಾಗಿದೆ. ಇದಕ್ಕೆ ಕಾರಣ ಶಂಕರರು ಅಲ್ಲ; ನಮ್ಮ ವೇದ ಮತ್ತು ವೇದಾಂತಗಳನ್ನು ಅರ್ಥಮಾಡಿಕೊಳ್ಳದೇ ಕೇವಲ ಕಪ್ಪು ಬಿಳುಪಿನ ನೋಟದಲ್ಲಿ ಅವುಗಳನ್ನು ವಿಮರ್ಶಿಸಿರುವುದಾಗಿದೆ.

ಸತ್ಯವೆನ್ನುವುದು ಕೇವಲ ಇದೆ ಅಥವಾ ಇಲ್ಲವೆನ್ನುವ ಎರಡರ ಕೊನೆಯಲ್ಲಿಯಲ್ಲ. ವೇದದಲ್ಲಿ ಬರುವ ಸತ್ ಮತ್ತು ಅಸತ್ ಪದಗಳನ್ನು ಇಲ್ಲಿ ಉದಾಹರಣೆಯಾಗಿ ನೋಡಬಹುದಾಗಿದೆ. ಸತ್ ಎಂದರೆ ಇರುವುದು ಎಂದಾದರೆ ಅಸತ್ ಎನ್ನುವಲ್ಲಿ ಬರುವ “ಅ” ಅಕ್ಷರ ನೇತ್ಯಾತ್ಮಕವಾದ ಅರ್ಥದಲ್ಲಿ ಇಲ್ಲ. ಅದು “ಸತ್” ಅಲ್ಲದಿರುವುದು ಎಂದರ್ಥ. ಗೋಚರವಾಗಿಲ್ಲದೇ ಇರುವುದು ಎನ್ನುವ ಅರ್ಥದಲ್ಲಿ “ಅಸತ್” ಪ್ರಯೋಗ ಹೆಚ್ಚು ಸೂಕ್ತವಾಗುತ್ತದೆ. ಬರಡು ಭೂಮಿಯ ಆಳದಲ್ಲಿ ಜೀವ ಜಲವಿರುತ್ತದೆ. ಅದು ಸುಲಭದಲ್ಲಿ ಸಿಗುವುದಿಲ್ಲ; ಅದನ್ನು ಪಡೆಯಲು ಭೂಮಿಯನ್ನು ಅಗೆಯ ಬೇಕಾಗುತ್ತದೆ. ಅಡ್ಡವಾಗಿರುವ ಕಲ್ಲು ಬಂಡೆಗಳನ್ನು ಒಡೆದು ಭೂಮಿಯ ಆಳಕ್ಕೆ ಇಳಿಯುತ್ತೇವೆ. ಕಸ ಕಡ್ಡಿಗಳನ್ನು ತೆಗೆದು ನಿರಾಸೆಗೊಳ್ಳದೇ ಪ್ರಯತ್ನವನ್ನು ಮುಂದುವರೆಸಿದಾಗ ಒಂದು ದಿನ ತಳದಲ್ಲಿ ನೀರು ಒಸರುವುದು ಕಂಡು ಬರುತ್ತದೆ. ಇದೇ “ನೇತಿ ನೇತಿ “ ಎನ್ನುವುದರ ಹಿಂದಿನ ತತ್ತ್ವದ ತಿರುಳು.

ಭೂಮಿಯ ಮೇಲಿನ ಬರಡು ನೆಲ ನೀರಲ್ಲ; ಒಳಗೆ ನೀರಿಗಾಗಿ ಅಡ್ದ ಬಂದಿರುವುದೆಲ್ಲವೂ ಅಡೆತಡೆಗಳು, ಅವುಗಳ ನಿರಾಕರಣೆಯನ್ನು ಮಾಡಿ, ಅಗೆಯುತ್ತಾ ಹೋಗುವವನಿಗೆ ಒಂದಲ್ಲ ಒಂದು ದಿನ ವರತೆಯ ಬುಗ್ಗೆ ಸಿಗುತ್ತದೆ. ಶಾಂಕರ ತತ್ತ್ವವೆಂದರೆ ಅದು ಹೀಗೆ ಸಾಕಾರದಿಂದ ನಿರಾಕಾರಕ್ಕೆ ಹೋಗುವುದು.

ಶಂಕರರನ್ನು ಟೀಕಿಸುವವರು ನಿರ್ಗುಣ ಬ್ರಹ್ಮನ ಕುರಿತು ಅವರ ನಿಲುವನ್ನು ಪ್ರಶ್ನಿಸುತ್ತಾರೆ. ಬ್ರಹ್ಮವೆನ್ನುವುದು ಇದೆ ಅಂದಾದರೆ ಅದು ಇಲ್ಲದಿರುವುದು ಯಾವಾಗ ಎನ್ನುವುದು ಮುಖ್ಯವಾದ ಆಕ್ಷೇಪ. ಯಾವುದಾದರೂ ಒಂದು ಶಬ್ಧಕ್ಕೆ ಅರ್ಥವನ್ನು ಹೇಳುವಾಗ ಅದರ ಆಭಾವವನ್ನು ಹೇಳಿದರೆ ಸುಲಭವಾಗಿ ಅರ್ಥವಾಗುತ್ತದೆ. ಉದಾಹರಣೆಗೆ ಸತ್ಯದ ಅರ್ಥವಾಗ ಬೇಕಾದರೆ ಸುಳ್ಳುಲ್ಲದೇ ಇರುವುದು. ಕತ್ತಲಿನಲ್ಲಿ ಬೆಳಕಿನ ಆಭಾವವಿದೆ. ಹುಟ್ಟಿನಲ್ಲಿ ಜನಿಸದೇ ಇರುವ ಕಾಲದ ಆಭಾವವಿದೆ. ಇದನ್ನು ಬ್ರಹ್ಮ ಶಬ್ಧಕ್ಕೆ ಅನ್ವಯಿಸಿದರೆ ಬ್ರಹ್ಮ ಇದೆ ಅಂತಾದರೆ ಅದರ ಆಭಾವ ಬ್ರಹ್ಮ ಇಲ್ಲದೇ ಇರುವ ಕಾಲ. ಹಾಗಾದರೆ ಸರ್ವ ನಿಯಾಮಕನೂ ಸರ್ವವ್ಯಾಪಕನೂ ಆದ ಬ್ರಹ್ಮ ಇಲ್ಲದೇ ಇರುವ ಕಾಲ ಇತ್ತು ಅಂತ ಆಗಲಿಲ್ಲವೋ; ಬ್ರಹ್ಮನಿಲ್ಲದ ಕಾಲದಲ್ಲಿ ಯಾರಿದ್ದರು. ಹೀಗಾದರೆ ಬ್ರಹ್ಮ ಸತ್ಯವಾಗುವುದು ಹೇಗೆ? ಇಂತಹ ನಿರಾಕಾರನಾದ ಬ್ರಹ್ಮನನ್ನು ಒಪ್ಪುವುದಾದರೂ ಹೇಗೆ; ಹೀಗೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಶಬ್ಧಕ್ಕೆ ಅರ್ಥವನ್ನು ಹುಡುಕುವುದು ಕೇವಲ ಅದರ ಅಭಾವದಿಂದ ಮಾತ್ರವಲ್ಲ, ವಿಶೇಷಣಗಳ ಮೂಲಕವೂ ಅದರ ಅರ್ಥವನ್ನು ವಿವರಿಸಬಹುದು.

Adi Shankaracharya facts, achievements and all you need to know in kannada

ಉದಾಹರಣೆಗೆ ಸಾಗರ ಹೇಗಿದೆ ಎಂದರೆ ಸಾಗರದಂತೆ ಎನ್ನುವುದು ವಿಶೇಷಣ. ಆದರೆ ಇದು ಎದುರಿದ್ದವನಿಗೆ ಅರ್ಥವಾಗಬೇಕಾದರೆ ಆತ ಸಾಗರದಂತಹ ಯಾವುದೋ ಒಂದು ದೊಡ್ಡ ನದಿಯನ್ನಾಗಲೀ, ಸರೋವರವನ್ನಾಗಲೀ ನೋಡಿರಲೇಬೇಕು. ಅನುಭವದ ಆಚೆಗೆ ಶಬ್ಧಗಳ ಅಥವಾ ವಸ್ತುವಿನ ಪರಿಚಯ ಮಾಡಿಸಲಾಗುವುದಿಲ್ಲ. ಇಲ್ಲಿ ಮತ್ತೊಂದು ವಿಧದಿಂದ ವಸ್ತುವನ್ನು ಪರಿಚಯಮಾಡಿಕೊಡಲಾಗುವುದು. ಅದನ್ನು ವಿಶೇಷಣವೆನ್ನುತ್ತಾರೆ. ಉದಾಹರಣೆಗೆ ಆತ್ಮ/ಬ್ರಹ್ಮವನ್ನೋ ವರ್ಣಿಸುವಾಗ ಆತ್ಮ ಸತ್ಯಕಾಮನು, ಸತ್ಯಸಂಕಲ್ಪನು, ಸರ್ವಗಂಧನು, ಸರ್ವರಸನು ಎಂದೂ, ಅದರ ಗುಣಗಳನ್ನೂ; ಸರ್ವಜ್ಞನು, ಸರ್ವವಿದನು ಎಂದೂ, ಅದರ ಸ್ವರೂಪವನ್ನೂ, ಜ್ಯೋತಿಗಳಿಗೆಲ್ಲ ಜ್ಯೋತಿಯು, ಸರ್ವತೋಕ್ಷಿಶಿರೋಮುಖನು ಎಂದೂ ರೂಪಾದಿಗಳನ್ನೂ ಹೇಳಿದೆ. ಇದನ್ನು ವಿಶೇಷಣವೆನ್ನುತ್ತಾರೆ. ಇದಕ್ಕಿಂತಲೂ ಮಿಗಿಲಾಗಿ ಬ್ರಹ್ಮವನ್ನು ಅರ್ಥಮಾಡಿಕೊಳ್ಳುವ ವಿಧಾನವೇ ಶಂಕರರು ತೋರಿಸಿಕೊಟ್ಟ ಅಧ್ಯಾರೋಪವೆನ್ನುವುದು.

ವಿಸ್ತಾರವಾದ ಬ್ರಹ್ಮಾಂಡವನ್ನು ನಾವು ಅಟ್ಲಾಸ್ ಬಿಡಿಸಿಕೊಂಡು ಹುಡುಕುವಂತೆ. ಅಟ್ಲಾಸ್ ಆಗಲಿ, ನಕಾಶೆಯಾಗಲಿ, ನಿಜವಾದ ವಸ್ತುವಲ್ಲ. ಆದರೆ ಬಾಹ್ಯಾಕಾಶವನ್ನು ಅಳೆಯಲು ಕಲ್ಪಿಸಿಕೊಳ್ಳುವ ಸಾಧನವಷ್ಟೆ. ಕಲಿಯುವಾಗ ಅದೇ ನಿಜವಾದ ಖಗೋಲ ಎಂದೇ ತಿಳಿದುಕೊಳ್ಳುತ್ತೇವೆ. ತಿಳಿದಮೇಲೆ ಅದಲ್ಲವೆನ್ನುವುದು ಸಹಜವಾಗಿ ಅರ್ಥವಾಗುತ್ತದೆ. ಬ್ರಹ್ಮನನ್ನು ಅರ್ಥಮಾಡಿಕೊಳ್ಳಬೇಕಾದಾಗಲೂ ಹಾಗೆ, ಯಾವುದಾದರೂ ವಿಶೇಷಣವನ್ನು ಬ್ರಹ್ಮನಲ್ಲಿ ಸೇರಿಸುತ್ತಾ ಹೋಗುವುದು. ರಾತ್ರಿಕಾಲದಲ್ಲಿ ಸಪ್ತರ್ಷಿಮಂಡಲವನ್ನು ತೋರಿಸಬೇಕಾದರೆ ನೇರವಾಗಿ ತೋರಿಸಿದರೆ ಸುಲಭದಲ್ಲಿ ಅರ್ಥವಾಗುವುದಿಲ್ಲ. “ಅಗೋ ಮೊದಲು ನನ್ನ ತೋರು ಬೆರಳಿನ ತುದಿಯನ್ನು ನೋಡು ಎಂದು ತೋರಿಸುವದು, ಅದಕ್ಕಿಂತ ಮುಂದೆ ಒಂದು ದೊಡ್ಡ ತಾಳೆಮರವಿದೆಯಲ್ಲ, ಅದರೆ ತುದಿಯನ್ನು ಒಮ್ಮೆ ನೋಡು, ಸಿಕ್ಕಿತಾ, ಹಾಂ! ಅಲ್ಲಿಂದ ಮೇಲೆ ಆಕಾಶದೆಡೆ ಗಮನಿಸು; ನಕ್ಷತ್ರಗಳ ಗುಂಪು ಕಾಣಿಸುತ್ತಿದೆಯೋ, ಅಲ್ಲಿರುವದೇ ಸಪ್ತರ್ಷಿಮಂಡಲ” ಎಂದಾಗ ನಕ್ಷತ್ರಗಳ ಪರಿಚಯವಾಗುತ್ತದೆ. ಇಲ್ಲಿ ಬೆರಳನ್ನು ತೋರಿಸಿ ಅದಲ್ಲ, ಮರವನ್ನು ತೋರಿಸಿ ಅದಲ್ಲ, ಮುಗಿಲನ್ನು ತೋರಿಸಿ ಅದಲ್ಲವೆನ್ನುವುದು ಎಡ ಬಲಗಳಕಡೆ ತಿರುಗಿಸಿ ಅದಲ್ಲವೆಂದು ಕೊನೆಗೆ ಗುರಿಯನ್ನು ಕಂಡುಹಿಡಿಯುವದನ್ನೇ ಅಧ್ಯಾರೋಪವೆನ್ನುತ್ತಾರೆ.

ರಾಜನೋರ್ವನಲ್ಲಿಗೆ ಜಗಜಟ್ಟಿಯೋರ್ವ ಬಂದು ತನ್ನ ಪರಾಕ್ರಮವನ್ನು ವಿವರಿಸುತ್ತಾ ಎಂತಹ ಪರ್ವತವನ್ನಾದರೂ ಹೊರಬಲ್ಲೆ ಎಂದನಂತೆ; ಅವನನ್ನು ಅವಮಾನಿಸಬೇಕೆನ್ನುವ ಕಾರಣದಿಂದ ರಾಜ ಆತನನ್ನು ಪರ್ವತದ ಬಳಿಕರೆದುಕೊಂಡು ಬಂದು ಈ ಪರ್ವತವನ್ನು ಹೊರು ಎಂದನಂತೆ. ಜಟ್ಟಿಯೂ ಸಾಮಾನ್ಯದ ಆಸಾಮಿಯಲ್ಲ; ನೀವು ಪರ್ವತವನ್ನು ನನ್ನ ತಲೆಯಮೇಲೆ ಎತ್ತಿಡಿಸಿ ಮಹಾಪ್ರಭು. ಹೊರುವೆನು” ಎಂದನಂತೆ. ಬ್ರಹ್ಮನನ್ನು ವಿವರಿಸುವುದು ಈ ಯುಕ್ತಿಯಿಂದ ಅಲ್ಲವೆನ್ನುವುದನ್ನು ಗಮನಿಸಬೇಕು. ಇದನ್ನೇ ನೇತಿ, ನೇತಿಯೆನ್ನುವುದು. ಇದನ್ನು “ವೀಪ್ಸೆ” ಎಂತಲೂ ಕರೆಯುತ್ತಾರೆ. ವೀಪ್ಸೆಯೆಂದರೆ ಎಲ್ಲ ವಿಷಯಗಳನ್ನೂ ವ್ಯಾಪಿಸುವುದು. ಬ್ರಹ್ಮನಲ್ಲಿ ಸಗುಣವನ್ನು ಆರೋಪಿಸಿ ಅದನ್ನು ಅಲ್ಲಗೆಳೆಯುತ್ತಾ ಬ್ರಹ್ಮತ್ವದ ದರ್ಶನವನ್ನು ಮಾಡಿಸುವುದು.

ಇಲ್ಲಿ ಎಲ್ಲವನ್ನೂ ತೋರಿಸಿ ಅದಲ್ಲ ಎನ್ನುತ್ತಾ ಕೊನೆಗೆ “ವಿಜ್ಞಾನವೂ ಆನಂದವೂ ಆದದ್ದು ಬ್ರಹ್ಮ” ಎನ್ನುವಲ್ಲಿಗೆ ತಲುಪಿಸುವುದು ಈ ಅಧ್ಯಾರೋಪ ಮತ್ತು ನೇತಿ ನೇತಿ ಎನ್ನುವುದರ ಲಕ್ಷಣ. ನೇತಿ ನೇತಿ ಎಂದರೆ ಮೂರ್ತ ಮತ್ತು ಅಮೂರ್ತ ಇವೆಲ್ಲವನ್ನೂ ಬ್ರಹ್ಮವಲ್ಲವೆಂದು ತಿಳಿಸುವುದು. ಬ್ರಹ್ಮವೆನ್ನುವುದು ಅನುಭವಜನ್ಯ, ಅನುಭೂತಿ. “ಯಥೋ ವಾಚೋ ನಿವರ್ತಂತಿ; ಅಪ್ರಾಪ್ಯ ಮನಸಾ ಸಹಃ” ವಾಕ್ಕಿನಿಂದ ವಿವರಿಸಲಾಗದ. ಮನಸ್ಸಿನಿಂದಲೂ ತಲುಪಲಾರದ ಮಹತ್ತು ಅದು. ಬಾಳೆಲೆಯಲ್ಲಿ ಬಡಿಸಿಟ್ಟ ಹೋಳಿಗೆಯ ವರ್ಣನೆಯನ್ನು ಎಷ್ಟು ಮಾಡಿದರೂ, ಅದರ ಸವಿಯನ್ನು ಅನುಭವಿಸಬೇಕಾದರೆ ತಿನ್ನಬಯಸಿದವರು ಸ್ವತಃ ಅದನ್ನು ತಿನ್ನಬೇಕು. ಅದಲ್ಲದಿದ್ದರೆ ಬ್ರಹ್ಮವನ್ನು ಅರಿಯಲಾರದು ಎನ್ನುವ ಅದ್ವೈತವನ್ನು ಲೋಕಕ್ಕೆ ಕೊಟ್ಟವರು ಶಂಕರಾಚಾರ್ಯರು.

ಬ್ರಹ್ಮವೆನ್ನುವುದು ಯಾವಾಗಲೂ ಇದ್ದಿರುವುದರಿಂದ ಅದನ್ನು ಸತ್ ಎಂದರೆ ಸದಾ ಇರುವುದು, ಚಿತ್ ಎಂದರೆ ಜ್ಞಾನ, ನಿತ್ಯಜ್ಞಾನವೇ ಬ್ರಹ್ಮ ಮತ್ತು ಬ್ರಹ್ಮವೇ ಆನಂದ. ಸಚ್ಚಿದಾನಂದವೇ ಬ್ರಹ್ಮನ ಸ್ವರೂಪಲಕ್ಷಣ. ಇದು ಶುದ್ಧಬ್ರಹ್ಮವೆನ್ನುತ್ತಾರೆ. ಈ ಬ್ರಹ್ಮವೇ ವ್ಯಾಹಾರಿಕವಾಗಿ ತನ್ನದೇ ಸೃಷ್ಟಿಯಾದ ಸತ್ವ, ರಜ ತಮಸ್ಸಿನೊಂದಿಗೆ ಸೇರಿದಾಗ ಜಗತ್ತಿನ ಸೃಷ್ಟಿಯಾಗುತ್ತದೆ. ಅದನ್ನು ಮಾಯೆ ಎನ್ನುತ್ತಾರೆ. ಈ ಮಾಯೆಯಿಂದ ಕೂಡಿದ ಬ್ರಹ್ಮನನ್ನು ಮಾಯಾಶಬಲಿತ, ಸಗುಣ ಬ್ರಹ್ಮ, ಈಶ್ವರನೆಂದು ಕರೆಯುತ್ತಾರೆ. ಈಶ್ವರ, ಸೃಷ್ಟಿಕರ್ತ. ಆದರೆ ಬ್ರಹ್ಮ ನಿಗೆ ಮಾಯೆಯ ಸೋಂಕು ಇಲ್ಲ. ಆ ಮಾಯೆ]ಬ್ರಹ್ಮನನ್ನು ಆಶ್ರಯಿಸಿ ಪ್ರಪಂಚವನ್ನು ತೋರಿಸುತ್ತದೆ. ಅದು ಪಾರಮಾರ್ಥಿಕ ಸತ್ಯವಲ್ಲ. ವ್ಯವಹಾರಿಕ ಸತ್ಯ. ಬ್ರಹ್ಮವೆನ್ನುವುದು ಅನಿರ್ವಚನೀಯ. ಅದು ಅನಾದಿ.

ಶಂಕರಾಚಾರ್ಯರು ಬರುವತನಕ ಅದೈತ ಇರಲಿಲ್ಲ ಎಂದು ಅರ್ಥವಲ್ಲ. ವೇದವೆನ್ನುವ ಪರಮ ಸತ್ಯವನ್ನು ದಾರ್ಶನಿಕರು ಮತ್ತು ಋಷಿಗಳು ಅರ್ಥೈಯಿಸಿ ಜನರಿಗೆ ನೀಡುತ್ತಿದ್ದರು. ಇಲ್ಲಿನ ತತ್ತ್ವಶಾಸ್ತ್ರ ಮತ್ತು ಅದರ ಆಚರಣೆಗಳೆಲ್ಲವೂ ನಿಂತಿರುವುದು ವೇದಗಳು ತೋರಿದ ಮಾರ್ಗದರ್ಶನದ ಮೇಲೆ. ಇಂದು ವೇದವನ್ನು ಸಾಯಣ , ಯಾಸ್ಕರು, ರಾವಣ, ಆನಂದತೀರ್ಥ, ಹೀಗೆ ಹಲವಾರು ಚಿಂತಕರು ಆ ಕುರಿತು ವಿಚಾರ ಮಾಡಿ ಲೋಕಕ್ಕೆ ಅನುಕೂಲವಾಗುವ ರೀತಿಯಲ್ಲಿ ಅನುಷ್ಠಾನಗೊಳಿಸಿದ್ದಾರೆ. ವ್ಯಾಸರು ಮತ್ತು ಅವರ ಶಿಷ್ಯರಾದ ಪೈಲ, ಜೈಮಿನಿ, ವೈಶಂಪಾಯನ ಮತ್ತು ಸುಮಂತು ಅವರ ನಂತರ ಈ ಸುಧಾರಣೆಗಳು ನಡೆಯಲೇ ಇಲ್ಲ. ನಂತರ ಬಂದ ಬೌದ್ಧ ಮತ್ತು ಜೈನ ಧರ್ಮಗಳು ವೇದ ಪ್ರಮಾಣವನ್ನು ನಿರಾಕರಿಸಿದವು.

ಈ ಸಂದರ್ಭದಲ್ಲಿ ಜನರು ತಮಗೆ ತೋಚಿದ ರೀತಿಯಲ್ಲಿ ವೇದಗಳ ಆಚರಣೆಯನ್ನು ರೂಢಿಗೆ ತಂದ ಪರಿಣಾಮವಾಗಿ ಏಕ ಸೂತ್ರಗಳಿರಲಿಲ್ಲ. ಕಾಪಾಲಿಕರು, ತಾಂತ್ರಿಕರು, ಗಾಣಪತ್ಯರು ಹೀಗೇ ಅನೇಕ ರೀತಿಯಲ್ಲಿ ಆರಾಧನಾ ಪದ್ಧತಿಗಳಿದ್ದವು. ಬೌದ್ಧನ ಉಪದೇಶವೂ ಧರ್ಮದ ರೂಪವನ್ನು ಪಡೆದುಕೊಂಡಿರುವುದು ಶಾಕ್ಯಮುನಿಯ ನಿರ್ವಾಣವಾಗಿ ಸುಮಾರು ಇನ್ನೂರು ವರ್ಷಗಳ ನಂತರ. ಅವರಲ್ಲಿಯೂ ಏಕತೆ ಇರಲಿಲ್ಲ. ಸುಮಾರು ಇಪ್ಪತ್ತೆರಡು ಪಂಥಗಳಿದ್ದವು. ವೇದದ ಮೂಲ ಆಶಯಗಳಾದ ಆತ್ಮ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುವುದಕ್ಕಿಂತ ಬಾಹ್ಯಾಡಂಬ ರಗಳೇ ಹೆಚ್ಚಾಗಿದ್ದವು. ಇದನ್ನು ಬಗೆ ಹರಿಸಿದವರು ಶಂಕರರಾಚಾರ್ಯರು ಎನ್ನುವುದು ಮುಖ್ಯವಾಗುತ್ತದೆ. ಹಾಗಾಗಿ ಶಾಂಕರರ ತತ್ತ್ವದಲ್ಲಿ ಸಾಕಾರವಾದ ರಸ ಮತ್ತು ನಿರಾಕಾರವಾದ ಬ್ರಹ್ಮ ಎಲ್ಲವೂ ಇದೆ.

ಸನಾತನ ಧರ್ಮವನ್ನು ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಯ ತಳಹದಿಯ ಮೇಲೆ ಪುನಃ ಸ್ಥಾಪಿಸಿದರು. ಇದನ್ನು “ಪ್ರಸ್ಥಾನತ್ರಯ” ಎನ್ನುತ್ತಾರೆ. ಅವರು ಅದುತನಕ ಇದ್ದ ರಾಜಾಶ್ರಯ ತಪ್ಪಿದ ಧರ್ಮರಕ್ಷಣೆಯ ಹೊಣೆಯನ್ನು ನಾಲ್ಕು ಆಮ್ನಾಯಗಳ ಮೂಲಕ ಮಠಗಳಿಗೆ ನೀಡಿದರು. ಬೌದ್ಧರ ಬಿಕ್ಕುಗಳು ನೆಲೆಸುವ ಸಂಘಕ್ಕೂ ಆಮ್ನಾಯ ಪೀಠಕ್ಕೂ ಅನೇಕ ಹೋಲಿಕೆಗಳಿವೆ. ಹಾಗಂತ ಅವುಗಳ ನೇರಾನೇರ ಅನುಕರಣೆ ಮತ್ತು ಆಚಾರಗಳಿಲ್ಲಿಲ್ಲ. ಶಂಕರ ಪೀಠಗಳ ಮುಖ್ಯವಾದ ಕಾರ್ಯ ಅದ್ವೈತದ ಪ್ರಚಾರ ಮತ್ತು ಅದನ್ನು ಗಟ್ಟಿಗೊಳಿಸುವತ್ತ ನಡೆಸಬೇಕಾದ ವಾಗರ್ಥ ಗೋಷ್ಠಿಗಳು. ಜಿಜ್ಞಾಸುತನ, ಮಂಥನ ಮತ್ತು ಚಿಂತನೆಗಳನ್ನು ನಡೆಸುವುದಾಗಿದೆ. ಧರ್ಮಕ್ಕೆ ಒಂದು ಸಾಂಘಿಕ ರೂಪವನ್ನು ಈ ಮೂಲಕ ಕೊಟ್ಟಿರುವುದು ಶಂಕರರ ಹಿರಿಮೆ.

ಶಂಕರ ಜೀವನದ ಬಾಲ್ಯವನ್ನು ಗಮನಿಸುವಾಗ ಅನೇಕ ಕಥೆಗಳು ಬರುತ್ತವೆ. ಬಾಲಕ ಶಂಕರನಿಗೆಪೂರ್ಣಾ ನದಿಯಲ್ಲಿ ಮೊಸಳೆ ಹಿಡಿದಾಗ ಅಮ್ಮ ಆರ್ಯಾಂಬೆಯನ್ನು ಕೂಗಿ ಕರೆಯುತ್ತಾನೆ. ತನ್ನ ಬಾಲಕನಿಗೆ ಸಂನ್ಯಾಸಕ್ಕೆ ಅನುಮತಿಯನ್ನು ಕೊಟ್ಟರೆ ಮೊಸಳೆ ತನ್ನನ್ನು ಬಿಡುವುದಾಗಿ ಹೇಳುತ್ತಾನೆ. ಏನಾದರೂ ಆಗಲಿ, ಮಗ ಬದುಕಲಿ ಎಂದು ತಾಯಿ ಸಂನ್ಯಾಸಕ್ಕೆ ಅನುಮತಿಸುತ್ತಾಳೆ. ಇಲ್ಲಿ ಚಿದ್ವಿಲಾಸೀಯದ ಕವಿ ಬರೆದ ಕಥೆ ತುಂಬಾ ಕುತೂಹಲಕಾರಿಯಾಗಿದೆ. ಯಾವಾಗ ಶಂಕರರಿಗೆ ಸಂನ್ಯಾಸಕ್ಕೆ ಒಪ್ಪಿಗೆ ದೊರೆಯಿತೋ ಆಗ ಆ ಮೊಸಳೆ ಒಂದು ಗಂಧರ್ವ ರೂಪವನ್ನು ತಾಳಿ “ನಾನು ಪುಷ್ಪರಥನೆನ್ನುವ ಗಂಧರ್ವನು. ಬ್ರಹ್ಮನ ಆಜ್ಞೆಯನ್ನು ಉಲ್ಲಂಘಿಸಿದ ಕಾರಣದಿಂದ ಆತ ಮೊಸಳೆಯಾಗೆಂದು ಶಾಪವನ್ನು ನೀಡಿದ. ಉಶ್ಶಾಪಕ್ಕಾಗಿ ಪರಿಪರಿಯಿಂದ ಬೇಡಿಕೊಂಡಮೇಲೆ ಶಿವನು ಶಂಕರಾಚಾರ್ಯನಾಗಿ ಅವತರಿಸುತ್ತಾನ. ಆವನ ಪಾದ ಸೋಂಕಿದಾಗ ನಿನಗೆ ಶಾಪದ ವಿಮೋಚನೆಯಾಗುತ್ತದೆ” ಎನ್ನುತ್ತಾನೆ.

ಈ ದೃಶ್ವವನ್ನು ನೋಡಿದ ಆರ್ಯಾಂಬೆಗೆ ತನ್ನ ಮಗ ಶಿವನ ಅಂಶವೆಂದು ತಿಳಿದು ಆಶ್ಚರ್ಯವೂ ಮತ್ತು ಸಂತೋಷವೂ ಆಯಿತು. ಈ ಮೂಲಕ ಶಂಕರರು ಸಂನ್ಯಾಸಕ್ಕಾಗಿ ಅಮ್ಮನಿಗೆ ಸುಳ್ಳು ಹೇಳಿದ್ದಾರೆ ಎನ್ನುವ ಅಪವಾದವನ್ನೂ ತಪ್ಪಿಸಿದಂತಾಯಿತು. ಆ ತಕ್ಷಣವೇ ಅವರು ಮಾನಸ ಸಂನ್ಯಾಸವನ್ನು ಸ್ವೀಕರಿಸುತ್ತಾರೆ. ಕ್ರಮ ಸಂನ್ಯಾಸವನ್ನು ಸ್ವೀಕರಿಸಲು ಅಲ್ಲಿಂದ ಅವರು ಹುಡುಕಿಕೊಂಡು ಹೊರಡುವುದು ಗೋವಿಂದ ಭಗವತ್ಪಾದರಿದ್ದ ಗುಹೆಯ ಕಡೆಗೆ. ಗೋವಿಂದ ಭಗವತ್ಪಾದರೂ ಸಹ ಶಂಕರರಿಗಾಗಿ ಕಾದುಕುಳಿತುಕೊಂಡಿದ್ದಂತೆ ತೋರುತ್ತದೆ. ತನ್ನ ಪರಿಚಯವನ್ನು ಅವರು ಹೇಳಿದಕೂಡಲೇ ಭಗವತ್ಪಾದರು “ಸ ಪ್ರಾಹ, ಶಙ್ಕರ ಸ ಶಂಙ್ಕರ ಏವ ಸಾಕ್ಷಾಜ್ಜಾತಸ್ತ್ವ ಮಿತ್ಯಹಮವೈಮಿ” ನೀನು ಸಾಕ್ಷಾಚ್ಛಂಕರನೇ ಎಂದು ಸಮಾಧಿದೃಷ್ಟಿಯಿಂದ ನಾನು ತಿಳಿದುಕೊಂಡಿದ್ದೇನೆ (ಮಾ. ಶಂ ವಿ. 5-100) ಎಂದರು. ಅಷ್ಟೇ ಅಲ್ಲ ತನ್ನ ಪಾದವನ್ನು ಗುಹಾದ್ವಾರದಿಂದ ಹೊರಕ್ಕೆ ನೀಡಿದರು.

ಆಗಲೇ ಅದೈತದ ನಾಲ್ಕು ಮಹಾ ವಾಕ್ಯಗಳಾದ ʻಪ್ರಜ್ಞಾನಂ ಬ್ರಹ್ಮ, ತತ್ತ್ವಮಸಿʼ, ʻಅಯಮಾತ್ಮಾ ಬ್ರಹ್ಮʼ ಮತ್ತು ʻಅಹಂ ಬ್ರಹ್ಮಾಸ್ಮಿʼಯನ್ನು ಬೋಧಿಸಿದರು. ಕ್ರಮ ಸಂನ್ಯಾಸವನ್ನು ಗೋವಿಂದ ಭಗವತ್ಪಾದರೇ ಕೊಟ್ಟರು. ಗುರುಪರಂಪರೆಯ ಮಹತ್ವವನ್ನೂ ಸಹ ತಿಳಿಸಿ ವ್ಯಾಸರ ಯೋಗ ಭಾಷ್ಯಗಳಾದ ಬ್ರಹ್ಮಸೂತ್ರಕ್ಕೆ ಅನೇಕರು ತಮಗೆ ತಿಳಿದಂತೆ ಅರ್ಥವಿವರಣೆಯನ್ನು ಕೊಡುತ್ತಿದ್ದಾರೆ. ಎಲ್ಲರೂ ಒಪ್ಪುವಂತೆ ಬ್ರಹ್ಮ ಸೂತ್ರಕ್ಕೆ ಭಾಷ್ಯವನ್ನು ಬರೆಯಿರಿ ಎಂದು ಅಪ್ಪಣೆ ಕೊಟ್ಟು ಆ ಕಾರ್ಯಕ್ಕಾಗಿ ಕಾಶಿಗೆ ಹೋಗುವಂತೆ ಸೂಚಿಸಿದರು.

ಶಂಕರಾಚಾರ್ಯರು ಅಲ್ಲಿಂದ ಮುಂದೆ ತಿರುಗಿ ನೋಡುವುದೇ ಇಲ್ಲ. ಮಹತ್ವದ ಕೊಡುಗೆಯಾದ ಅದೈತದ ಚರಮ ಸೀಮೆಯನ್ನು ತಲುಪಿದ್ದಷ್ಟೇ ಅಲ್ಲದೇ ಅದನ್ನು ಸ್ಪಷ್ಟವಾಗಿ “ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ (ಬ್ರಹ್ಮವು ಸತ್ಯ,ಜಗತ್ತು ಮಿಥ್ಯಾ ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ)” ಎನ್ನುವದನ್ನು ತೋರಿಸಿಕೊಟ್ಟರು. ಶಂಕರರು ಇದೇ ಕಾರಣಕ್ಕಾಗಿ ಟೀಕೆಗೂ ಒಳಗಾಗಿರುವುದು. ಪ್ರಪಂಚದ ಬೇರೆ ಯಾವ ಗುರುವೂ ಇಷ್ಟು ಸ್ಪಷ್ಟವಾಗಿ ಜಗತ್ತನ್ನು ಮಿಥ್ಯವೆಂದು ಘೋಷಿಸಲಿಲ್ಲ. ತತ್ತ್ವಶಾಸ್ತ್ರಗಳೇ ಹಾಗೆ. ಪ್ರಸಿದ್ಧ ತತ್ತ್ವಶಾಸ್ತ್ರಿ ಅರಿಸ್ಟಾಟಲ್ “All philosophy begins in wonder” ಎಂದಿದ್ದಾನೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಮಾನವ ಪಾಪದ ಕೂಸು ಎನ್ನುವ ಕಲ್ಪನೆಯು ಗಾಢವಾಗಿದ್ದ ಪಾಶ್ಚಾತ್ಯ ಸಿದ್ಧಂತಿಗಳಿಗೆ ಅದೈತದ ತುರೀಯವಾದ ಜೀವವೇ ಬ್ರಹ್ಮವೆನ್ನುವುದು ಅರ್ಥವಾಗದ ಸಂಗತಿ. ವಿವೇಕಾನಂದರು ತಮ್ಮ ಕೃತಿಶ್ರೇಣಿಯಲ್ಲಿ “ಅದ್ವೈತ ಸಿದ್ಧಾಂತಕ್ಕೆ ಒಂದು ಹಿರಿಮೆಯಿದೆ; ಇದು ಎಲ್ಲಾ ಧಾರ್ಮಿಕ ತತ್ತ್ವಗಳಲ್ಲೆಲ್ಲ ಬಹಳ ವೈಚಾರಿಕವಾದುದು” ಎಂದಿದ್ದಾರೆ. ಪ್ರಪಂಚದ ಎಲ್ಲಾ ಜೀವಿಗಳಲ್ಲಿರುವ ಆತ್ಮವೂ ಬ್ರಹ್ಮವೇ ಆಗಿರುವುದರಿಂದ ಮತ್ತೊಬ್ಬರನ್ನು ಹಿಂಸಿಸಬೇಡಿ; ಹಾಗೆ ಹಿಂಸಿಸಿದರೆ ನಿಮ್ಮನ್ನು ನೀವು ಹಿಂಸಿಸಿಕೊಂಡಂತೆ… ನಾನು ಇತರರಿಗಿಂತ ಬೇರೆ ಎಂದು ಭಾವಿಸುವುದೇ ದ್ವೇಷ, ಅಸೂಯೆ, ದುಃಖ, ಹೋರಾಟಕ್ಕೆ ಕಾರಣ (ಕೃ. ಶ್ರೇ.- 6,323) ಎನ್ನುವ ಮೂಲಕ ವೇದಾಂತ ಆಧಾರಿತ ಸಮಾಜವಾದದಲ್ಲಿ ಅದ್ವೈತ ನಿಂತಿದೆ ಎನ್ನುತ್ತಾರೆ.

ಹಾಗಾಗಿಯೇ ಶಂಕರಾಚಾರ್ಯರು ಲೋಕಶಂಕರರಾಗಿದ್ದಾರೆ.

– ಲೇಖಕರು ಧಾರ್ಮಿಕ ಚಿಂತಕರು

ಇದನ್ನೂ ಓದಿ : ಧವಳ ಧಾರಿಣಿ ಅಂಕಣ: ಧರ್ಮಪ್ರಜ್ಞೆ ಸದಾ ಜಾಗೃತವಾಗಿರುವ ಶೃಂಗಾರದ ಪ್ರತಿಮೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Tirupati Temple: ತಿರುಪತಿಯ ಆಗಸ್ಟ್ ತಿಂಗಳ ಟಿಕೆಟ್ ವೇಳಾಪಟ್ಟಿ ಬಿಡುಗಡೆ: ಹೀಗೆ ಬುಕ್‌ ಮಾಡಿ

Tirupati Temple: ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

VISTARANEWS.COM


on

Tirupathi Temple
Koo

ತಿರುಪತಿ: ದೇಶದ ಪ್ರಸಿದ್ಧ ಯಾತ್ರಾ ಸ್ಥಳ ತಿರುಮಲ ತಿರುಪತಿ ದೇವಸ್ಥಾನ(Tirupati Temple)ಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ (TTD) ಬಿಡುಗಡೆ ಮಾಡಿದೆ. ಹೀಗಾಗಿ ಆಗಸ್ಟ್‌ನಲ್ಲಿ ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರು ಈ ಪಟ್ಟಿಯನ್ನು ಗಮನಿಸಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

ಶ್ರೀವಾರಿ ದೇವಸ್ಥಾನದಲ್ಲಿ ವಾರ್ಷಿಕ ಪವಿತ್ರೋತ್ಸವ ಆಗಸ್ಟ್ 15ರಿಂದ 17ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಸುವ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕರ ಸೇವೆ, ವಾರ್ಷಿಕ ಪವಿತ್ರೋತ್ಸವ ಸೇವಾ ಟಿಕೆಟ್‌ಗಳನ್ನು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮಾತ್ರವಲ್ಲ ತಿರುಮಲ ಶ್ರೀವಾರಿ ವರ್ಚುವಲ್ ಸೇವೆಗಳಿಗೆ ಸಂಬಂಧಿಸಿದ ಆಗಸ್ಟ್ ತಿಂಗಳ ಕೋಟಾ ಮತ್ತು ಅವುಗಳ ಸ್ಲಾಟ್‌ಗಳನ್ನು ಮೇ 21ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯ. ಜತೆಗೆ ಆಗಸ್ಟ್‌ನ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಚೇತನರು, ವೃದ್ಧರಿಗಾಗಿ ವಿಶೇಷ ಕೋಟಾ

ವೃದ್ಧರು, ವಿಶೇಷ ಚೇತನರು ಮತ್ತು ದೀರ್ಘಕಾಲದ ಕಾಯಿಲೆ ಇರುವವರಿಗೆ ನೀಡಲಾಗುವ ಆಗಸ್ಟ್‌ನ ಉಚಿತ ವಿಶೇಷ ದರ್ಶನ ಟಿಕೆಟ್‌ಗಳು ಮೇ 23ರಂದು ಮಧ್ಯಾಹ್ನ 3 ಗಂಟೆಯಿಂದ ಆನ್‌ಲೈನ್‌ನಲ್ಲಿ ಲಭಿಸಲಿದೆ. ಮೇ 24ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆಗಸ್ಟ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪ್ರಕಟಿಸಲಿದೆ. ಜತೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಆಗಸ್ಟ್ ರೂಮ್ ಕೋಟಾವನ್ನು ಮೇ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಟಿಕೆಟ್‌ ಬುಕ್‌ ಮಾಡುವ ವಿಧಾನ

  • ತಿರುಮಲ ತಿರುಪತಿ ದೇವಸ್ಥಾನಗಳ ದರ್ಶನ ಟಿಕೆಟ್ ಬುಕ್ ಮಾಡಲು, ಟಿಟಿಡಿಯ ಅಧಿಕೃತ ಆನ್‌ಲೈನ್ ಬುಕಿಂಗ್ ವೆಬ್‌ಸೈಟ್‌ https://ttdevasthanams.ap.gov.inಗೆ ಭೇಟಿ ನೀಡಿ.
  • ದರ್ಶನ ಪ್ರಕಾರವನ್ನು ಆಯ್ಕೆ ಮಾಡಿಕೊಂಡು ಮೊಬೈಲ್‌ ನಂಬರ್‌ ನೀಡಿ ಲಾಗಿನ್‌ ಆಗಿ.
  • ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ.
  • ಆಲ್‌ನೈಲ್‌ ಮೂಲಕ ಟಿಕೆಟ್‌ ಮೊತ್ತವನ್ನು ಪಾವತಿಸಿ.
  • ನಿಮ್ಮ ಟಿಕೆಟ್‌ ಬುಕ್‌ ಆಗಿರುವ ಬಗ್ಗೆ ಮಾಹಿತಿ ಎಸ್‌ಎಂಎಸ್‌ ಮೂಲಕ ನಿಮಗೆ ರವಾನೆಯಾಗುತ್ತದೆ.

ಇದನ್ನೂ ಓದಿ: Ayodhya: ಅಯೋಧ್ಯೆಯಲ್ಲಿ ಜನದಟ್ಟಣೆ ನಿಭಾಯಿಸುವ ಸಲಹೆ ನೀಡಿದ ತಿರುಪತಿಯ ಎಂಜಿನಿಯರ್‌ಗಳ ತಂಡ

Continue Reading

ಧಾರ್ಮಿಕ

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

ಶ್ರೀ ಶಂಕರರು (Shankara Jayanti 2024) ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡಿದ್ದರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತಿದ್ದರು. ಸಂನ್ಯಾಸಕ್ಕೆ ತಾಯಿಯ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಆಗ ತಾಯಿ ಒಪ್ಪಲೇಬೇಕಾಯಿತು.

VISTARANEWS.COM


on

Shankara Jayanti 2024
Koo

ಶಂಕರಾಚಾರ್ಯರು (Shankara Jayanti 2024) ಜೀವಿಸಿದ್ದು ಕೇವಲ 32 ವರ್ಷ. ಆದರೆ ಅವರು ಸಾಧಿಸಿದ್ದು ಅಪಾರ. ಹಿಂದೂ ಧರ್ಮದ ಏಳಿಗೆಗೆ ಅವರ ಕೊಡುಗೆ ಅಮೂಲ್ಯ. ಶಂಕರರ ಬದುಕಿನ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ.

Adi Shankaracharya Jayanti
  1. ಶ್ರೀ ಶಂಕರರು ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡುಬಿಟ್ಟರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತರು. ಸಾಮಾನ್ಯರಿಗೆ ಒಂದು ವೇದವನ್ನು ಅರ್ಥ ಮಾಡಿಕೊಳ್ಳಲೇ ಹತ್ತಾರು ವರ್ಷಗಳು ಬೇಕು.
  2. ಶಂಕರಾಚಾರ್ಯರು ಜನಿಸಿದ್ದು ಕೇರಳ ಕಾಲಟಿ ಎಂಬ ಪುಟ್ಟ ಗ್ರಾಮದಲ್ಲಿ. ತಂದೆಯನ್ನು ಕಳೆದುಕೊಂಡರು. ತಾಯಿ ಅವರನ್ನು ಬೆಳೆಸಿದರು. ಅವರು ಸಂನ್ಯಾಸ ಸ್ವೀಕರಿಸಲು ಒಂದು ಪುಟ್ಟ ಪವಾಡವನ್ನೇ ಮಾಡಬೇಕಾಯಿತು. ಸಂನ್ಯಾಸಕ್ಕೆ ತಾಯಿ ಆರ್ಯಾಂಬೆಯವರ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಮಗ ಬದುಕುತ್ತಾನಲ್ಲ ಎಂಬ ಭರವಸೆಯೊಂದಿಗೆ ತಾಯಿ ಒಪ್ಪಿದರು.
  3. ಹದಿನಾರು ವರ್ಷ ಪ್ರಾಯ ಆಗುವುದರೊಳಗಾಗಿ ಅವರು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ರಚಿಸಿದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.
  4. ಭಾರತದಾದ್ಯಂತ ‘ದಿಗ್ವಿಜಯ ಯಾತ್ರೆʼ ಕೈಗೊಂಡರು. ವೇದವಿರೋಧಿಗಳನ್ನು ವಾಗ್ವಾದಕ್ಕೆ ಕರೆದರು. ಏಕಾಂಗಿಯಾಗಿ ಚರ್ಚೆ, ವಿಚಾರಮಂಡನೆ, ವಾದಗಳ‌ ಮೂಲಕ ಬ್ರಹ್ಮವಾದಕ್ಕೆ ಎಳೆತಂದರು. ದೇಶದುದ್ದಗಲಕ್ಕೂ ಸಂಚರಿಸಿ, ಅಲ್ಲಿಯ ವಿದ್ವಾಂಸರನ್ನು, ಜನರನ್ನು, ರಾಜರನ್ನು ವೈದಿಕತೆಗೆ ತಂದರು.
  5. ಆರು ಮತಗಳನ್ನು ಖಂಡಿಸಿ ತಮ್ಮ ಮತವನ್ನು ಸ್ಥಾಪಿಸಿದ ಪರಿಣಾಮ ಅವರನ್ನು ‘ಷಣ್ಮತ ಖಂಡನಾಚಾರ್ಯ’ ಮತ್ತು ಷಣ್ಮತ ಪ್ರತಿಷ್ಠಾಪನಾಚಾರ್ಯ’ ಎಂದು ಕರೆಯಲಾಯಿತು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು.
  6. ಧರ್ಮವನ್ನು ಉಳಿಸಿ ಬೆಳೆಸುವ ಉದ್ದೇಶಕ್ಕಾಗಿ ಮಠಗಳ ಪರಿಕಲ್ಪನೆಯನ್ನು ತಂದರು. ಮಠ ಮತ್ತು ಯತಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬ ಆಶಯ ಅವರದಾಗಿತ್ತು. ದೇಶದ ಉದ್ದಗಲಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದದ್ದು ಶೃಂಗೇರಿಯ ಮಠ. ಇತರವು ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರೀನಾಥ, ಕಂಚಿಯ ಕಾಮಕೋಟಿಗಳಲ್ಲಿವೆ.
  7. ಸೂರ್ಯ- ಗಣಪತಿ- ಅಂಬಿಕಾ- ಶಿವ- ವಿಷ್ಣುಗಳನ್ನು ಪೂಜಿಸುವ ಪಂಚಾಯತನ ಪೂಜೆಯನ್ನು ತಂದರು. ಈ ದೇವತೆಗಳನ್ನು ಭಾರತದ ಐದು ಕಡೆಗಳಲ್ಲಿ ಸಿಗುವ ಸ್ಫಟಿಕ, ಶೋಣಾಭದ್ರ, ಸ್ವರ್ಣಮುಖಿ, ಬಾಣಲಿಂಗ, ಸಾಲಿಗ್ರಾಮ ಎಂಬ ಕಲ್ಲಿನ ಮೂಲಕ ಪೂಜಿಸಲಾಗುತ್ತದೆ.
  8. ಮೂವತ್ತೆರಡು ವರ್ಷಗಳಲ್ಲಿ ಹಲವು ಮನುಷ್ಯರು ಸೇರಿ ಹಲವು ಜನ್ಮಗಳಲ್ಲಿ ಮಾಡುವಷ್ಟು ಕೆಲಸವನ್ನು ಮಾಡಿ ಮುಗಿಸಿದರು. ಭಾಷ್ಯಗಳನ್ನು ಹೊರತುಪಡಿಸಿ ನೂರಾರು ಸ್ತೋತ್ರ – ಸಾಹಿತ್ಯಗಳನ್ನು ರಚಿಸಿದರು.
  9. ಮೂರು ಸೂತ್ರಗಳಲ್ಲಿ ಶ್ರೀ ಶಂಕರರ ಉಪದೇಶವನ್ನು ಸೂತ್ರೀಕರಿಸಬಹುದು- “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಮತ್ತು ಜೀವಶ್ಶಿವೋಹಂʼ (ಜೀವನೇ ಶಿವ) ಎಂಬುದು ಅದ್ವೈತ ತತ್ವದ ಮೂಲ ಮಂತ್ರಗಳು. ಇದಲ್ಲದೇ ಪರಮಾತ್ಮ ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.
Continue Reading

ಪ್ರಮುಖ ಸುದ್ದಿ

PM Narendra Modi: ವಿಡಿಯೋ ಸಂದೇಶ ಮೂಲಕ ಬಸವೇಶ್ವರ ಜಯಂತಿಗೆ ಶುಭ ಕೋರಿದ ಪಿಎಂ

PM Narendra Modi: ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ ಎಂದು ಮೋದಿ ಹೇಳಿದ್ದಾರೆ.

VISTARANEWS.COM


on

pm narendra modi basava jayanti 2024
Koo

ಹೊಸದಿಲ್ಲಿ: ಭಕ್ತಿ ಭಂಡಾರಿ, ಸಮಾಜ ಸುಧಾರಕ, ವಚನ ಚಳವಳಿಯ ಆದ್ಯ ಪೂಜ್ಯ ಶ್ರೀ ಬಸವೇಶ್ವರ ಜಯಂತಿ (Basava Jayanti 2024) ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪಠ್ಯ ಸಂದೇಶ ಹಾಗೂ ವಿಡಿಯೋ ಸಂದೇಶಗಳೆರಡನ್ನೂ ಅವರು ನೀಡಿದ್ದಾರೆ.

“ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

“ಭಗವಾನ್‌ ಬಸವೇಶ್ವರರ ಸಂದೇಶ ಹಾಗೂ ಅವರ ವಚನಗಳು ನನಗೆ ಹೊಸಹೊಸದಾಗಿ ಕಲಿಸುತ್ತಲೇ ಇರುತ್ತವೆ. ನಾವು ಅವರಿಂದ ಅವರ ದೈವೀಯ ಗುಣವನ್ನೂ ಕಲಿಯಬಹುದು; ಜೊತೆಗೆ ಅವರು ಉತ್ತಮ ಆಡಳಿತಗಾರ, ಸುಧಾರಕನೂ ಹೌದು. ಸಮಾಜ ಸುಧಾರಣೆಯ ಅವರ ಬದುಕು ನಮಗೆ ಪ್ರೇರಣೆಯಾಗುವಂಥದು. ಬಸವಣ್ಣನವರ ವಚನಗಳು ಹಾಗೂ ಸಂದೇಶಗಳು ಆಧ್ಯಾತ್ಮಿಕವೂ ಹೌದು, ಬದುಕಿನ ಪ್ರಾಯೋಗಿಕ ಮಾರ್ಗದರ್ಶಕ ಸೂತ್ರಗಳೂ ಹೌದು” ಎಂದು ಅವರು ಕೊಂಡಾಡಿದ್ದಾರೆ.

“ಅವರ ಉಪದೇಶಗಳು ನಮಗೆ ಉತ್ತಮ ಮಾನವರಾಗುವುದನ್ನು ಕಲಿಸುತ್ತವೆ. ಇನ್ನಷ್ಟು ದಯಾಳು, ಅಧಿಕ ಉದಾರಿ, ಹೆಚ್ಚಿನ ಮಾನವೀಯ ಸಂವೇದನೆಗಳನ್ನು ನಮ್ಮಲ್ಲಿ ತುಂಬುತ್ತದೆ. ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ. ಈ ಶುಭಸಂದರ್ಭದಲ್ಲಿ ನಿಮಗೆಲ್ಲರಿಗೂ ಶುಭಕಾಮನೆಗಳು” ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ: Basava Jayanti 2024: ಬದುಕಿನ ಪಾಠ ಕಲಿಸುವ ಬಸವಣ್ಣನ 10 ವಚನಗಳಿವು

Continue Reading

ಪ್ರಮುಖ ಸುದ್ದಿ

Akshaya Tritiya 2024: ಇಂದು ಏನೇನು ಖರೀದಿಸಬಹುದು? ಚಿನ್ನ- ಬೆಳ್ಳಿ ಏಕೆ ಖರೀದಿಸಬೇಕು?

Akshaya Tritiya 2024: ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

VISTARANEWS.COM


on

Akshaya Tritiya 2024
Koo

ಅಕ್ಷಯ ತೃತೀಯ (Akshaya Tritiya 2024) ಅಂದರೆ ಚಿನ್ನ- ಬೆಳ್ಳಿ (gold, silver) ಖರೀದಿಸಬೇಕು ಎಂಬುದು ಸಾಮಾನ್ಯ ನಂಬಿಕೆ. ಆದರೆ ಇದು ಮಾತ್ರವಲ್ಲ. ಸಂಪತ್ತು ಎಂದು ಕರೆಸಿಕೊಳ್ಳುವ ಯಾವುದನ್ನೇ ಆದರೂ ಇಂದು ನೀವು ಖರೀದಿಸಬಹುದು ಅಥವಾ ಹೊಂದಬಹುದು. ಅದರಿಂದ ಆ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ. ಈ ಹಿಂದಿನ ಕಾಲದಲ್ಲಿ ಕೃಷಿಪ್ರಧಾನ ಸಮಾಜದಲ್ಲಿ ಅಕ್ಕಿ ರಾಗಿ ಗೋಧಿಯಂಥ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುತ್ತಿದ್ದರು.

ಹಿಂದೂಗಳಿಗೆ ಸಂಪತ್ತಿನ ಪುಣ್ಯ ಫಲ ನೀಡುವ ಹಬ್ಬ. ಅಕ್ಷಯ ತೃತೀಯದಂದು (Akshaya Tritiya 2024) ಶುಭ, ಅಶುಭ ಮುಹೂರ್ತಗಳನ್ನು ನೋಡದೇ ಯಾವುದೇ ಕಾರ್ಯವನ್ನು ಪ್ರಾರಂಭಿಸಬಹುದು ಎಂಬ ಮಾತಿದೆ. ಉತ್ತರ ಭಾರತದಲ್ಲಿ ಅಖಾ ತೀಜ್ ಎಂದೂ ಕರೆಯಲ್ಪಡುವ ಈ ಮಂಗಳಕರ ದಿನ ಅಪಾರ ಪ್ರಾಮುಖ್ಯತೆ ಹೊಂದಿದೆ. ಈ ದಿನದಂದು ಪ್ರಾರಂಭಿಸಿದ ಯಾವುದೇ ಕಾರ್ಯ ಯಾವಾಗಲೂ ಯಶಸ್ವಿಯಾಗುತ್ತದೆ ಎಂಬ ನಂಬಿಕೆ. ಖರೀದಿಸಿದ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ.

ಈ ದಿನವು ಅದೃಷ್ಟ, ಯಶಸ್ಸು ಮತ್ತು ಅದೃಷ್ಟದ ಲಾಭದ ಸಂಕೇತವಾಗಿದೆ. ಅಕ್ಷಯ ತೃತೀಯದಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದು ವಾಡಿಕೆ. ಅಕ್ಷಯ ತೃತೀಯವನ್ನು ಭಾರತ ಮತ್ತು ನೇಪಾಳದ ಅನೇಕ ಪ್ರದೇಶಗಳಲ್ಲಿ ಹಿಂದೂಗಳು ಮತ್ತು ಜೈನರು ಹೊಸ ಉದ್ಯಮಗಳು, ಮದುವೆಗಳು, ದಾನ, ಮತ್ತು ಚಿನ್ನ ಅಥವಾ ಇತರ ಆಸ್ತಿಯಂತಹ ಹೂಡಿಕೆಗಳಿಗೆ ಮಂಗಳಕರವೆಂದು ಪರಿಗಣಿಸುತ್ತಾರೆ. ಅಂದು ಚಿನ್ನ, ಬೆಳ್ಳಿ, ವಾಹನ ಖರೀದಿಸಿ ತಂದರೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ಹಲವರು ನಂಬುತ್ತಾರೆ.

ಸಂಸ್ಕೃತದಲ್ಲಿ ಅಕ್ಷಯ ಪದವು “ಅಭ್ಯುದಯ, ಭರವಸೆ, ಸಂತೋಷ, ಯಶಸ್ಸು” ಎಂಬ ಅರ್ಥದಲ್ಲಿ “ಎಂದಿಗೂ ಕಡಿಮೆಯಾಗುವುದಿಲ್ಲ” ಎಂಬ ಅರ್ಥವನ್ನು ಸೂಚಿಸುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ಇಬ್ಬರೂ ತಮ್ಮ ಗ್ರಹಗಳ ಅತ್ಯುತ್ತಮ ನೆಲೆಯಲ್ಲಿರುತ್ತಾರೆ ಎಂದು ನಂಬಲಾಗಿದೆ.

ಅಕ್ಷಯ ತೃತೀಯ ಆಚರಣೆಯ ಇತಿಹಾಸದ ಪ್ರಕಾರ ಅಕ್ಷಯ ತೃತೀಯ ದಿನದಂದು ನಾಲ್ಕು ಯುಗಗಳಲ್ಲಿ ಎರಡನೇ ಯುಗವಾದ ತ್ರೇತಾಯುಗವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ಅಕ್ಷಯ ತೃತೀಯ ದಿನದಂದು ಜನಿಸಿದರು ಎಂದು ಹೇಳಲಾಗುತ್ತದೆ. ಹೀಗಾಗಿ ಭಕ್ತರು ಅಕ್ಷಯ ತೃತೀಯವನ್ನು ಪರಶುರಾಮನ ಜನ್ಮ ದಿನವಾಗಿ ಆಚರಿಸುತ್ತಾರೆ. ಅಕ್ಷಯ ತೃತೀಯದ ಆಚರಣೆಗಳು ಅಕ್ಷಯ ತೃತೀಯದಂದು ಭಕ್ತರು ಪವಿತ್ರ ಸ್ನಾನ ಮಾಡುವ ಮೂಲಕ ಮತ್ತು ಹಳದಿ ವೇಷಭೂಷಣದಲ್ಲಿ ತಮ್ಮನ್ನು ತಾವು ಅಲಂಕರಿಸಿಕೊಳ್ಳುವುದರೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಈ ದಿನ ವಿಶೇಷವಾಗಿ ವಿಷ್ಣು ಸಹಸ್ರನಾಮ ಮತ್ತು ವಿಷ್ಣು ಚಾಲೀಸಾದ ಪಠಣಗಳೊಂದಿಗೆ ಭಗವಾನ್ ವಿಷ್ಣುವಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

ಚಿನ್ನ, ಬೆಳ್ಳಿ ಏಕೆ ಖರೀದಿಸಬೇಕು?

ದಂತಕಥೆಯ ಪ್ರಕಾರ, ಅಕ್ಷಯ ತೃತೀಯದಲ್ಲಿ, ಸಂಪತ್ತಿನ ದೇವತೆಯಾದ ಕುಬೇರನು ಭಗವಾನ್ ಶಿವ ಮತ್ತು ಬ್ರಹ್ಮನಿಂದ ಆಶೀರ್ವಾದವನ್ನು ಪಡೆದನು, ಅಲಕಾಪುರಿ ಎಂದು ಕರೆಯಲ್ಪಡುವ ಲೋಕವನ್ನು ಸ್ವಾಧೀನಪಡಿಸಿಕೊಂಡ. ಪರಿಣಾಮವಾಗಿ, ಈ ದಿನ ಕುಬೇರನ ಹೆಸರಿನಲ್ಲಿ ಚಿನ್ನದ ಆಭರಣಗಳು ಮತ್ತು ಆಸ್ತಿಗಳನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೊಸ ವ್ಯಾಪಾರ, ಉದ್ಯಮಗಳು, ನಿರ್ಮಾಣ ಕಾರ್ಯಗಳನ್ನು ಈ ವಿಶೇಷ ದಿನದಂದು ಪ್ರಾರಂಭಿಸಲಾಗುತ್ತದೆ. ಉದ್ಯಮಿಗಳು ಮುಂದಿನ ಆರ್ಥಿಕ ವರ್ಷಕ್ಕೆ ಹೊಸ ಆಡಿಟ್ ಪುಸ್ತಕವನ್ನು ಪ್ರಾರಂಭಿಸುವ ಮೊದಲು ಅಕ್ಷಯ ತೃತೀಯ ದಿನದಂದು ಗಣೇಶ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಇದನ್ನು ಹಲ್ಖಾತಾ ಎಂದು ಕರೆಯುತ್ತಾರೆ.

ಇದಲ್ಲದೇ ಅಕ್ಕಿ ಕೊಳ್ಳುವವರು, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವವರು, ಯಾವುದೇ ರೀತಿಯ ಹೊಸ ವಸ್ತುಗಳು ಅಥವಾ ಪಾತ್ರೆಗಳನ್ನು ಖರೀದಿಸುವವರು- ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

ಇದನ್ನೂ ಓದಿ: Akshaya Tritiya 2024: ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಅಕ್ಷಯ ತೃತೀಯ

Continue Reading
Advertisement
Rajkummar Rao
ಸಿನಿಮಾ3 mins ago

Rajkummar Rao: ಮುಂಬಯಿಗೆ ಬಂದು ಶಾರುಕ್‌ ಮನೆ ಮುಂದೆ ದಿನವಿಡೀ ಕಾದಿದ್ದರಂತೆ ನಟ ರಾಜ್‌ಕುಮಾರ್ ರಾವ್‌!

North East Graduate Constituency Election Congress party leaders and workers Meeting in Yadgiri
ರಾಜಕೀಯ16 mins ago

MLC Election: ಪರಿಷತ್ ಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಕಾರ್ಯಕರ್ತರಿಗೆ ದರ್ಶನಾಪುರ ಮನವಿ

T20 World Cup 2024
ಕ್ರೀಡೆ19 mins ago

T20 World Cup 2024: ಭಾರತ ಕೇವಲ ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದೆ; ಕಾರಣ ಏನು?

MLC Election
ಕರ್ನಾಟಕ32 mins ago

MLC Election: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಫೈನಲ್‌; ಬಂಡಾಯವಾಗಿ ಬಿಜೆಪಿ ಅಭ್ಯರ್ಥಿ ನಾಮಪತ್ರ

CAA
EXPLAINER34 mins ago

CAA: ಸಿಎಎ ಅನ್ವಯ 14 ಜನಕ್ಕೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

Fortis Hospital doctors team performed a successful complex kidney transplant surgery for two patients with robotic assistance
ಕರ್ನಾಟಕ36 mins ago

Fortis Hospital: ರೋಬೋಟಿಕ್‌ ನೆರವಿನಿಂದ ಇಬ್ಬರಿಗೆ ‘ಸಂಕೀರ್ಣ ಕಿಡ್ನಿ ಕಸಿ’ ಆಪರೇಷನ್ ಸಕ್ಸೆಸ್!

V. Sunil Kumar latest statemetn
ಬೆಂಗಳೂರು43 mins ago

V. Sunil Kumar: ರಾಜ್ಯದಲ್ಲಿ ಅಸಮರ್ಥ ಸಂಪುಟ, ಅಭಿವೃದ್ಧಿ ಶೂನ್ಯ ಸರ್ಕಾರ: ವಿ. ಸುನೀಲ್ ಕುಮಾರ್

private hospitals heads and health department officers Meeting at vijayanagara DC office
ವಿಜಯನಗರ53 mins ago

Vijayanagara News: ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ಲೋಪ ಎಸಗಿದರೆ ಕಾನೂನು ಕ್ರಮ: ಡಿಸಿ ಎಚ್ಚರಿಕೆ

Ram Pothineni Double iSmart teaser with Sanjay Dutt
ಟಾಲಿವುಡ್55 mins ago

Ram Pothineni: ಡೈನಾಮಿಕ್ ಸ್ಟಾರ್ ರಾಮ್‌ – ಸಂಜಯ್ ದತ್ ಭರ್ಜರಿ ಜುಗಲ್ಬಂದಿ: `ಡಬಲ್ ಇಸ್ಮಾರ್ಟ್‘ ಟೀಸರ್‌ ಔಟ್‌!

Prajwal Revanna Case Deve Gowda lashes out at Bhavani
ರಾಜಕೀಯ57 mins ago

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ10 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ13 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ23 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌