ಧಾರ್ಮಿಕ
Swami Vivekananda | ಜಗತ್ತಿನ ಕಣ್ಣು ತೆರೆಸಿದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ
ಸ್ವಾಮಿ ವಿವೇಕಾನಂದರು (Swami Vivekananda) ಚಿಕಾಗೋದಲ್ಲಿ ಭಾಷಣ ಮಾಡಿದ ದಿನವಿಂದು. ಈ ಭಾಷಣ ಜಗತ್ತಿನ ಅತ್ಯಂತ ಪ್ರಭಾವಿ ಭಾಷಣಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದೆ. ಈ ಕುರಿತ ಸ್ವಾಮಿ ವೀರೇಶಾನಂದ ಸರಸ್ವತಿ ಅವರ ವಿಶೇಷ ಲೇಖನ ಇಲ್ಲಿದೆ.
ಸ್ವಾಮಿ ವೀರೇಶಾನಂದ ಸರಸ್ವತಿ
ಅಧ್ಯಕ್ಷರು, ರಾಮಕೃಷ್ಣ- ವಿವೇಕಾನಂದ ಆಶ್ರಮ, ತುಮಕೂರು
ಸ್ವಾಮಿ ವಿವೇಕಾನಂದ ಎಂಬ ಹೆಸರು ಇಂದು ಪ್ರಪಂಚದಲ್ಲಿ ಕೇವಲ ಒಬ್ಬ ಸನ್ಯಾಸಿಯ ಹೆಸರಾಗಿ ಉಳಿದಿಲ್ಲ. ಅಥವಾ ಧರ್ಮ ಪ್ರತಿನಿಧಿಯಾಗಿ ಮಾತ್ರ ಗುರುತಿಸಲ್ಪಡುತ್ತಿಲ್ಲ. “ವಿವೇಕಾನಂದ ವೇʼʼ ಎಂಬುದು ಇಂದು ತತ್ವವಾಗಿದೆ. ಜಗತ್ತಿನ ಇತಿಹಾಸ ಗಮನಿಸಿದಾಗ ಬುದ್ಧ, ಶಂಕರಾಚಾರ್ಯ ಮತ್ತು ಸ್ವಾಮಿ ವಿವೇಕಾನಂದರು ಜಗತ್ತು ಕಂಡ ಮಹಾ ಸಂತರು.
ಭಾರತೀಯರಾದ ನಾವೆಲ್ಲರೂ ಮಾಡುವ ತಪ್ಪು ಏನೆಂದರೆ ಕಾರ್ಲ್ ಮಾರ್ಕ್ಸ್ ಐರೋಪ್ಯ ರಾಷ್ಟ್ರಗಳನ್ನು ಗಮನದಲ್ಲಿಟ್ಟುಕೊಂಡು ಹೇಳಿದಂತಹ ʼರಿಲಿಜನ್ ಈಸ್ ದ ಒಪಿಯಂ ಆಫ್ ದಿ ಪೀಪಲ್ʼ ಎಂದು ಹೇಳಿರುವುದನ್ನು ಏಷ್ಯಾದ ಖಂಡದ ಭಾರತ ಸೇರಿದಂತೆ ಎಲ್ಲ ಧರ್ಮಿಕ ರಾಷ್ಟ್ರಗಳಿಗೂ ಜನರಲೈಜ್ ಮಾಡುವುದು. ಈ ದೊಡ್ಡ ಅಪರಾಧ ನಮ್ಮ ಇತಿಹಾಸಕಾರರಿಂದ, ಬುದ್ಧಿ ಜೀವಿಗಳಿಂದ, ಪ್ರಗತಿಪರರಿಂದ ಆಗಿದೆ. ಆದರೆ ನಾವಿಲ್ಲಿ ನೆನಪಿಟ್ಟುಕೊಳ್ಳಬೇಕಾಗಿರುವುದೇನೆಂದರೆ ಕಾರ್ಲ್ ಮಾರ್ಕ್ಸ್ರ, ಲೆನಿನ್ನರ ಚಿಂತನೆಗಳನ್ನು ರಷ್ಯಾ ಎಷ್ಟು ದಿನ ಕಾಪಿಟ್ಟುಕೊಂಡಿತು ಎಂಬುದನ್ನು ನೋಡಬೇಕು. ಕಾರ್ಲ್ ಮಾರ್ಕ್ಸ್ ಮತ್ತು ಲೆನಿನ್ರ ವಿಗ್ರಹಗಳು ಅಲ್ಲಿ ನುಚ್ಚು ನೂರಾಯಿತು ಐರೋಪ್ಯ ಒಕ್ಕೂಟ 20 ಕ್ಕೂ ಹೆಚ್ಚು ಚೂರುಗಳಾಗಿ ಹೋಳಾಯಿತು ಎಂಬುದು ಈಗ ಇತಿಹಾಸ.
ಆದರೆ ಸ್ವಾಮಿ ವಿವೇಕಾನಂದರು ಹೇಳುತ್ತಾರೆ “ರಿಲಿಜನ್ ಈಸ್ ಟಾನಿಕಲ್, ರಿಲಿಜನ್ ಈಸ್ ವೈಟಮಿನ್, ರಿಲಿಜನ್ ಈಸ್ ಸೋರ್ಸ್ ಆಫ್ ಎನರ್ಜಿʼʼ ಈ ಹಿನ್ನೆಲೆಯಲ್ಲಿ ನಾವು ಚಿಕಾಗೋನಲ್ಲಿ ನಡೆದಂತಹ ಉಪನ್ಯಾಸಗಳಿಗೆ ವಿಶೇಷ ಮಹತ್ವ ನೀಡಬೇಕಾಗುತ್ತದೆ.
ವಿಶ್ವ ಧರ್ಮ ಸಮ್ಮೇಳನ ಎಂಬುದು ಅಮೆರಿಕದ ಚಿಕಾಗೋದಲ್ಲಿ ನಡೆದ ಐತಿಹಾಸಿಕ ಧಾರ್ಮಿಕ ಸಮ್ಮೇಳನ. 179 ದಿನಗಳ ಕಾಲ ಈ ಜಾಗತಿಕ ಸಮ್ಮೇಳನ ನಡೆಯಿತು. 27 ಮಿಲಿಯನ್ ಜನರು ಇದರಲ್ಲಿ ಭಾಗವಹಿಸಿದ್ದರು. 59 ಧರ್ಮದ ಪ್ರತಿನಿಧಿಗಳು ಈ ಸರ್ವಧರ್ಮ ಸಮ್ಮೇಳನದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಂದು ಸಾವಿರಕ್ಕೂ ಹೆಚ್ಚು ಪ್ರಬಂಧಗಳು ಈ ಸರ್ವಧರ್ಮ ಸಮ್ಮೇಳನದಲ್ಲಿ ಮಂಡಿಸಲ್ಪಟ್ಟವು. ಈ ಚಿಕಾಗೋ ಸಮ್ಮೇಳನ ಕೊಲಂಬಿಯನ್ ಜಾಗತಿಕ ಮೇಳದ ಅವಿಭಾಜ್ಯ ಅಂಗವಾಗಿತ್ತು.
ಚಾರ್ಲ್ಸ್ ಬಾರ್ನಿ ಎಂಬ ಸುಪ್ರಸಿದ್ಧ ವಕೀಲ, ಲೇಖಕ ವಿಶೇಷವಾಗಿ ಗಮನ ಕೊಟ್ಟು ಈ ಸಮ್ಮೇಳನದ ಉದ್ದೇಶಗಳನ್ನು ರೂಪಿಸಿದ್ದ. ಮಾನವಕೋಟಿಗೆ ಸಂಬಂಧಿಸಿದ ಅತಿಮುಖ್ಯ ವಿಷಯಗಳೆಲ್ಲವೂ ಇಲ್ಲಿ ಚರ್ಚೆಯಾಗಬೇಕು. ಜಗತ್ತಿನ ಎಲ್ಲೆಡೆಯಿಂದ ಅತಿಥಿಗಳು ಬಂದು ಇಲ್ಲಿ ತಮ್ಮ ಅಭಿಪ್ರಾಯ ಮಂಡಿಸಬೇಕು ಎಂಬುದು ಚಾರ್ಲ್ಸ್ ಬಾರ್ನಿ ಉದ್ದೇಶವಾಗಿತ್ತು.
ಇಂತಹ ಮಹಾ ಸಮ್ಮೇಳನದಲ್ಲಿ ಸ್ತ್ರೀಯರ ಮುನ್ನಡೆ, ವೈದ್ಯಕೀಯ, ಶಸ್ತ್ರಚಿಕಿತ್ಸೆ, ವಿಜ್ಞಾನ, ಸಂಗೀತ, ಸರ್ಕಾರ, ಕಾನೂನು ಸುಧಾರಣೆ ಸೇರಿದಂತೆ 20ಕ್ಕೂ ಹೆಚ್ಚು ವೈವಿಧ್ಯಮಯ ವಿಷಯಗಳ ಬಗ್ಗೆ ಈ ಸಮ್ಮೇಳನ 1893ರ ಮೇ ತಿಂಗಳಿನಿಂದ ಅಕ್ಟೋಬರ್ ವರೆಗೆ ನೆರವೇರಿತ್ತು. ವಿಶ್ವಧರ್ಮ ಸಮ್ಮೇಳನವನ್ನು ಘೋಷಿಸಿದ್ದಾಗ ಪ್ರಮುಖವಾಗಿ ಮೂರು ಉದ್ದೇಶಗಳಿಗೆ ಇದನ್ನು ಏರ್ಪಾಟು ಮಾಡಲಾಗಿದೆ ಅಂತ ಪ್ರಚಾರ ಮಾಡಲಾಗಿತ್ತು. ಅದೇನು ಎಂದರೆ ಮೊದಲನೆಯದಾಗಿ, ವಿಶ್ವ ಭ್ರಾತೃತ್ವದ ನಿರ್ಮಾಣ, ಎರಡನೇಯದಾಗಿ, ಜಗತ್ತಿನ ಎಲ್ಲ ಧರ್ಮಗಳ ನಡುವೆ ಅರಿವು ಮತ್ತು ಹೊಂದಾಣಿಕೆ ರೂಪಿಸುವುದು, ಮೂರನೇಯದಾಗಿ ವಿಶ್ವ ಶಾಂತಿಗಾಗಿ ಶ್ರಮಿಸುವುದು.
ಮೇಲ್ನೋಟಕ್ಕೆ ಈ ಘನ ಉದ್ದೇಶಗಳಿವೆ ಎಂದು ಪ್ರಚಾರ ಮಾಡಲಾಗಿತ್ತಾದರೂ ಹಿಡನ್ ಅಜೆಂಡಾ ಬೇರೆಯೇ ಆಗಿತ್ತು. ಅದೇನೆಂದರೆ ಜಗತ್ತಿನ ಎಲ್ಲ ಧರ್ಮಗಳಿಗಿಂತ ಕ್ರೈಸ್ತ ಧರ್ಮ ಅತ್ಯಂತ ಶ್ರೇಷ್ಠವಾದುದು ಎಂದು ಸಾಬೀತು ಪಡಿಸುವುದು ಮೊದಲ ವಿಚಾರವಾಗಿದ್ದರೆ, ಜಗತ್ತಿನಾದ್ಯಂತ ಇರುವ ಕ್ರೈಸ್ತೇತರ ನಾಗರಿಕರನ್ನು ಅನಾಗಕರಿಕರು ಎಂದು ಸಾಬೀತುಪಡಿಸುವುದಾಗಿತ್ತು.
ಚಿಕಾಗೋದಲ್ಲಿ ಮಿಚಿಗನ್ ಅವೆನ್ಯೂನಲ್ಲಿ ನೂತನವಾಗಿ ನಿರ್ಮಾಣವಾಗಿದ್ದ, ಆರ್ಟ್ ಇನ್ಸ್ಟಿಟ್ಯೂಟ್ ಇದರ ಹಾಲ್ ಆಫ್ ಕೊಲಂಬಸ್ನಲ್ಲಿ ಈ ಸರ್ವಧರ್ಮ ಸಮ್ಮೇಳನದ ವೇದಿಕೆ ಆಯೋಜನೆಗೊಂಡಿತ್ತು. ಸ್ವಾಮಿ ವಿವೇಕಾನಂದರು 1893 ಸೆಪ್ಟೆಂಬರ್ 11ರ ಸೋಮವಾರದಂದು ತಮ್ಮ ಭಾಷಣ ಮಾಡಿದಾಗ ಅಮೆರಿಕದ ರೋಮನ್ ಕ್ಯಾಥೋಲಿಕ್ನ ಅತ್ಯಂತ ದೊಡ್ಡ ಧರ್ಮಗುರು ಕಾರ್ಡಿನಲ್ ಗಿಬನ್ಸ್ ವೇದಿಕೆಯಲ್ಲಿ ಮಧ್ಯದಲ್ಲಿ ಕುಳಿತಿದ್ದರು. ಕಾರ್ಯಕ್ರಮದ ಭಾಷಣದ ಮೊದಲನೇ ಸರತಿಯಲ್ಲಿ ಹಿಂದೂ ಧರ್ಮದ ಪ್ರತಿನಿಧಿಯಾಗಿ ಸ್ವಾಮಿ ವಿವೇಕಾನಂದರನ್ನು ಆಹ್ವಾನಿಸಲಾಗಿತ್ತು. ಆದರೆ ಅದುವರೆಗೆ ಮಾತನಾಡಿದ ಬಹಳಷ್ಟು ವಾಗ್ಮಿಗಳು ತಮ್ಮ ಧರ್ಮವೇ ಶ್ರೇಷ್ಠ ಎಂದು ಮಾತನಾಡಿದ್ದರಿಂದ ಸ್ವಾಮಿ ವಿವೇಕಾನಂದರು ನೊಂದಿದ್ದರು, ಅವರಿಗೆ ತುಂಬಾ ನಿರಾಶೆಯಾಗಿತ್ತು. ಅದುವರೆಗೆ ಮಾತನಾಡಿದವರೆಲ್ಲರದ್ದೂ ಏಕ ದೃಷ್ಟಿಯ ಮಾತುಗಳಾಗಿತ್ತು. ಹೀಗಾಗಿ ಎರಡನೇ ಸರತಿಯ ಆಹ್ವಾನ ನೀಡಿದಾಗಲೂ ಸ್ವಾಮಿ ವಿವೇಕಾನಂದರು ಭಾಷಣ ಮಾಡಲು ಉತ್ಸಾಹ ತೋರಲಿಲ್ಲ.
ಕೊನೆಗೆ ಮೂರನೇ ಸರತಿ ಬಂದಾಗ ಅವರು ಮಾತನಾಡಲೇಬೇಕಿತ್ತು. ಇಲ್ಲದಿದ್ದರೆ ಮುಂದೆ ಅವರಿಗೆ ಅವಕಾಶವಿರಲಿಲ್ಲ. ಆದರೂ ಅವರಿಗೆ ಮಾತನಾಡುವ ಉತ್ಸಾಹವೇನೂ ಇರಲಿಲ್ಲ. ಆಗ ಅವರ ಪಕ್ಕದಲ್ಲಿ ಕುಳಿತಿದ್ದಂತಹ ಫ್ರೆಂಚ್ ಪಾದ್ರಿ ಬಾನೆಟ್ ಮಾರ್ರಿ ಎಂಬುವರು ಅವರನ್ನು ಮಾತನಾಡುವಂತೆ ಪ್ರೋತ್ಸಾಹಿಸಿದರು. ಆಗ ಸ್ವಾಮಿ ವಿವೇಕಾನಂದರು ಥಟ್ಟನೆ ಎದ್ದು, ಆ ಭವ್ಯವಾದ ಏಳು ಸಹಸ್ರ ಅಕ್ಷರಸ್ಥ ಅಮೆರಿಕನ್ನರು ಸೇರಿದ್ದ ಆ ಸಭೆಯಲ್ಲಿ ತಮ್ಮ ಉಪನ್ಯಾಸ ಆರಂಭಿಸಿಯೇ ಬಿಟ್ಟರು. “ಅಮೆರಿಕದ ನನ್ನ ಸಹೋದರ, ಸಹೋದರಿಯರೇʼʼ ಇದು ಸ್ವಾಮಿ ವಿವೇಕಾನಂದರು ತಮ್ಮ ಉಪನ್ಯಾಸವನ್ನು ಆರಂಭಿಸಿದ ರೀತಿ. ಯಾವಾಗ ವಿವೇಕಾನಂದರ ಆತ್ಮದ ಆಳದಿಂದ ಈ ಮಾತುಗಳು ಹೊರಟವೋ ಸಭೆಯಲ್ಲಿ ಒಂದು ರೀತಿಯಲ್ಲಿ ನವಸ್ಫೂರ್ತಿ ಸಂಚಾರವಾಯಿತು. ಈ ಮಾತುಗಳನ್ನು ಕೇಳಿ ಆವೇಶಭರಿತರಾಗಿ ಸಹಸ್ರಾರು ಜನ ಕರತಾಡನ ಮಾಡಲಾಂಭಿಸಿದರು, ಜಯಘೋಷ ಮೊಳಗಿತು, ಜನಸ್ತೋಮ ಇದ್ದಕ್ಕಿದ್ದಂತೆ ಹುಚ್ಚರಂತೆ ಎರಡು ನಿಮಿಷ ಕರತಾಡನ ಮಾಡುತ್ತಲೇ ಇತ್ತು. ಸಭಾಧ್ಯಕ್ಷರು ನಿಯಂತ್ರಣಕ್ಕಾಗಿ ಪ್ರೀತಿ ಪೂರ್ವಕವಾಗಿ ಮಾಡಿಕೊಂಡ ಮನವಿಗೂ ಸಭಿಕರು ಮನ್ನಣೆ ನೀಡಿರಲಿಲ್ಲ.
ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋಟ್ಯಂತರ ಹಿಂದುಗಳ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ, ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ’ ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕಾರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್’ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದು ಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು. ಹೀಗ ಅಂದು ಉಪನ್ಯಾಸ ನೀಡಿದ ಸ್ವಾಮಿ ವಿವೇಕಾನಂದರ ಮಾತುಗಳು ಜಗತ್ತಿನ ಕಣ್ಣು ತೆರೆಸಿದವು.
ಸ್ವಾತಂತ್ರ್ಯ ನಂತರ ಭಾರತ ಸ್ವಾಮಿ ವಿವೇಕಾನಂದರನ್ನು ಜವಾಬ್ದಾರಿಯುತವಾಗಿ ಸ್ವೀಕರಿಸಲಿಲ್ಲ. ಒಂದು ಸಾವಿರ ವರ್ಷಗಳ ದಾಸ್ಯದ ಸಂಕೋಲೆಯಿಂದ ಮುಕ್ತರಾಗಲು ಎಲ್ಲರನ್ನೂ ಪ್ರೇರೇಪಿಸಿದವರು ಸ್ವಾಮಿ ವಿವೇಕಾನಂದರು. ಇಂದು ಅವರ ಜೀವನ ಚಿಂತನೆಯನ್ನು ಅಧ್ಯಯನ ಮಾಡಿ, ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಇದನ್ನೂ ಓದಿ| Sree Narayana Guru Jayanthi | ಕಗ್ಗತ್ತಲ ಹಾದಿಯಲಿ ಕೈದೀವಿಗೆ ಹಿಡಿದು ನಡೆದವರು ಶ್ರೀ ನಾರಾಯಣ ಗುರು
ಕರ್ನಾಟಕ
Thaileshwara Ganigara Mutt: ಗಾಣಿಗ ಮಹಾಸಂಸ್ಥಾನವನ್ನು ಉಳಿಸಿ ಬೆಳೆಸಬೇಕಿದೆ: ಜಯೇಂದ್ರ ಪುರಿ ಸ್ವಾಮೀಜಿ
Thaileshwara Ganigara Mutt: ಸಾಮಾಜಿಕ ಕಾರ್ಯಗಳಿಗಾಗಿ ಸಂಪಾದನೆಯ ಶೇ. 10ರಷ್ಟನ್ನು ಮಠಕ್ಕೆ ಮೀಸಲಿಡುವ ಜತೆಗೆ ಜನ ಬೆಂಬಲವನ್ನೂ ನೀಡಬೇಕು ಎಂದು ಕೈಲಾಸಾಶ್ರಮದ ಜಯೇಂದ್ರ ಪುರಿ ಸ್ವಾಮೀಜಿ ಕರೆ ನೀಡಿದ್ದಾರೆ.
ಬೆಂಗಳೂರು: ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠವನ್ನು (Thaileshwara Ganigara Mutt) ಗಾಣಿಗ ಸಮುದಾಯದ ಎಲ್ಲರೂ ಸೇರಿ ಉಳಿಸಿ ಬೆಳೆಸಬೇಕಿದೆ ಎಂದು ಕೈಲಾಸಾಶ್ರಮದ ಜಯೇಂದ್ರ ಪುರಿ ಸ್ವಾಮೀಜಿ ಕರೆ ನೀಡಿದರು.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ನಗರೂರಿನ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಪೂರ್ಣಾನಂದಪುರಿ ಸ್ವಾಮೀಜಿ ಅವರ ಪೀಠಾರೋಹಣದ ಮೊದಲ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು.
ಗಾಣಿಗ ಜನಾಂಗಕ್ಕೆ ಈವರೆಗೂ ಗುರುಪೀಠ ಇರಲಿಲ್ಲ. ಪೂರ್ಣಾನಂದಪುರಿ ಸ್ವಾಮೀಜಿ ಅವರ ಶ್ರಮದ ಫಲವಾಗಿ ಪೀಠ ಸ್ಥಾಪನೆಯಾಗಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಜನಾಂಗದವರ ಮೇಲಿದೆ. ಪೂರ್ಣಾನಂದಪುರಿ ಸ್ವಾಮೀಜಿ ಅವರು ಪೂರ್ವಾಶ್ರಮದ ಎಲ್ಲವನ್ನೂ ತ್ಯಾಗ ಮಾಡಿ, ತಮಗೆ ಬರುವ ಪಿಂಚಣಿ ಹಣವನ್ನೂ ಮಠ ನಡೆಸಲು ಮೀಸಲಿಟ್ಟಿದ್ದಾರೆ. ವೃದ್ಧಾಪ್ಯದಲ್ಲಿ ಬೇರೆಯವರ ಆಸರೆ ಬೇಕಿರುತ್ತದೆ. ಆದರೆ, ಇವರು ಇಳಿ ವಯಸ್ಸಿನಲ್ಲಿಯೂ ಗಾಣಿಗ ಜನಾಂಗಕ್ಕೆ ಆಸರೆಯಾಗಿದ್ದಾರೆ. ಸಾಮಾಜಿಕ ಕಾರ್ಯಗಳಿಗಾಗಿ ಸಂಪಾದನೆಯ ಶೇ 10ರಷ್ಟನ್ನು ಮಠಕ್ಕೆ ಮೀಸಲಿಡುವ ಜತೆಗೆ ಜನ ಬೆಂಬಲವನ್ನೂ ನೀಡಬೇಕು ಎಂದು ಗಾಣಿಗರಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ | Prerane : ಭಾರತದ ಆತ್ಮ; ಅಧ್ಯಾತ್ಮ
ಪೂರ್ಣಾನಂದಪುರಿ ಸ್ವಾಮೀಜಿ ಮಾತನಾಡಿ, ಗಾಣಿಗರಿಗೆ ಗುರುಪೀಠ ಸ್ಥಾಪನೆಯ ನನ್ನ ಗುರಿ ಈಡೇರಿದೆ. ಬಡವರಿಗೆ, ಅನಾಥರಿಗೆ ಉಚಿತ ವಸತಿ ಹಾಗೂ ಶಿಕ್ಷಣ ನೀಡಲು ಶಾಲೆ ತೆರೆಯಲಾಗುತ್ತಿದ್ದು, ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಕಟ್ಟಡ ಪೂರ್ಣಗೊಳ್ಳಲು ದಾನಿಗಳು ಸಹಕರಿಸಬೇಕು. ಇದು ನನಗಾಗಿ ಅಲ್ಲ, ಸಮಾಜಕ್ಕಾಗಿ ಎಂದರು.
ತೊಗಟವೀರ ಕ್ಷತ್ರಿಯ ನೇಕಾರ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಮಾತನಾಡಿ, ವ್ಯಕ್ತಿ ಏನನ್ನಾದರೂ ಮಾಡುತ್ತಿದ್ದಾನೆ ಎಂದರೆ ಅಸೂಯೆ ಪಡದೆ ಪ್ರೋತ್ಸಾಹಿಸಬೇಕು. ಗುರುಗಳಿಂದ ಸಂಸ್ಕಾರ ಪಡೆದಾಗ ಬೆಳಕು ಮೂಡುತ್ತದೆ ಎಂದರು.
ಇದನ್ನೂ ಓದಿ | Navavidha Bhakti : ಎಲ್ಲ ಕರ್ಮಗಳೂ ಸೇವೆಯೇ ಆಗಬಹುದು!
ಕಾಂಗ್ರೆಸ್ ಮುಖಂಡ ವಿ.ಆರ್. ಸುದರ್ಶನ್ ಮಾತನಾಡಿ, ನಿವೃತ್ತಿಯಾದವರು ಮಠದ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಕೋಲಾರದ ಜ್ಯೋತಿ ಎಜುಕೇಷನಲ್ ಟ್ರಸ್ಟ್ ಮೂಲಕ ಪ್ರತಿವರ್ಷ ಮಠಕ್ಕೆ 1 ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದು ಘೋಷಿಸಿದರು.
ದೇಶ
Tirupati Temple : ತಿರುಪತಿಯಲ್ಲಿ ದರ್ಶನಕ್ಕೆ 40 ಗಂಟೆ ತಗಲುತ್ತಿರುವುದರಿಂದ ಹೊಸ ನಿಯಮ ಜಾರಿ, ಇಲ್ಲಿದೆ ಡಿಟೇಲ್ಸ್
Tirupati Temple ತಿರುಪತಿಯಲ್ಲಿ ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ 40 ಗಂಟೆ ತಗಲುತ್ತಿರುವ ಹಿನ್ನೆಲೆಯಲ್ಲಿ ಹೊಸ ನಿಯಮಗಳನ್ನು ಟಿಟಿಡಿ ಜಾರಿಗೆ ತಂದಿದೆ. ಅದರ ವಿವರ ಇಲ್ಲಿದೆ.
ತಿರುಪತಿ: ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ( Tirupati Temple) ದೇವರ ದರ್ಶನಕ್ಕೆ ತಗಲುವ ಸಮಯ 40 ಗಂಟೆಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಕಾಯುವಿಕೆಯ ಸಮಯವನ್ನು ತಗ್ಗಿಸಿ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಲು ತಿರುಮಲ ತಿರುಪತಿ ದೇವಸ್ಥಾನಮ್ (Tirumala Tirupati Devasthanam-TTD) ಹೊಸ ನಿಯಮಗಳನ್ನು ಘೋಷಿಸಿದೆ. ಅದರ ವಿವರ ನೋಡೋಣ.
ಬೇಸಗೆಯ ಅವಧಿಯಾಗಿರುವ ಕಾರಣ ಹಾಗೂ ಕೋವಿಡ್ ನಿರ್ಬಂಧಗಳು ಸಡಿಲವಾಗಿ ಮೂರು ವರ್ಷ ಸಮೀಪಿಸಿರುವ ಹಿನ್ನೆಲೆಯಲ್ಲಿ ತಿರುಪತಿಗೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ 2023 ಜೂನ್ 30 ರ ತನಕ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಟಿಟಿಡಿ ಚೇರ್ಮನ್ ವೈ.ವಿ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ಟಿಟಿಡಿ ಪ್ರಕಾರ ತಿರುಪತಿಯಲ್ಲಿ ಟೋಕನ್ ರಹಿತ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ 30-40 ಗಂಟೆ ಬೇಕಾಗುತ್ತದೆ. ಹೀಗಾಗಿ ವಿಐಪಿ ಬ್ರೇಕ್ ದರ್ಶನ್ ಮತ್ತು ಆರ್ಜಿತ ಸೇವೆಗಳಲ್ಲಿ ಕೆಲ ಬದಲಾವಣೆ ತರಲಾಗಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಸುಪ್ರಭಾತ ಸೇವೆಯಲ್ಲಿ ವಿವೇಚನಾ ಕೋಟಾ (discretionary quota) ಅನ್ನು ಹಿಂತೆಗೆದುಕೊಳ್ಳಲಾಗಿದೆ. ಇದರಿಂದ ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ತಗಲುವ ಸಮಯದಲ್ಲಿ 20 ನಿಮಿಷ ಉಳಿತಾಯವಾಗಲಿದೆ.
ಅದೇ ರೀತಿ ತಿರುಪ್ಪವಾಡ ಸೇವೆಯನ್ನು ಗುರುವಾರ ನಡೆಸಲು ಟಿಟಿಡಿ ನಿರ್ಧರಿಸಿದೆ. ಇದರಿಂದ 30 ನಿಮಿಷ ಸಮಯ ಉಳಿತಾಯವಾಗಲಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಐಪಿ ರೆಕಮಂಡೇಶನ್ ಲೆಟರ್ಗಳನ್ನೂ ಟಿಟಿಡಿ ಸ್ವೀಕರಿಸದಿರಲು ನಿರ್ಧರಿಸಿದೆ. ಆದರೆ ಸೆಲ್ಫ್-ವಿಐಪಿಗಳಿಗೆ ಮಾತ್ರ ಬ್ರೇಕ್ ದರ್ಶನ್ಗೆ ಅನುಮತಿ ನೀಡಲಾಗಿದೆ. ಎಲ್ಲ ಭಕ್ತರು, ವಿಐಪಿಗಳು ಸಹಕರಿಸಬೇಕು ಎಂದು ಟಿಟಿಡಿ ಕೋರಿದೆ.
ಟಿಟಿಡಿ ಪ್ರಕಾರ ವೆಂಕಟೇಶ್ವರನ ಸನ್ನಿಧಿಯಲ್ಲಿ ನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಪ್ರಧಾನ ಪೂಜೆಗಳು ನಡೆಯುತ್ತವೆ. ರಾತ್ರಿಯ ಪೂಜೆಯಲ್ಲಿ ಅರ್ಚಕರು, ಪರಿಚಾರಕರು, ಆಚಾರ್ಯರು ಮಾತ್ರ ಭಾಗವಹಿಸುತ್ತಾರೆ. ಉಳಿದ ಪೂಜೆಗಳನ್ನು ಎಲ್ಲ ಭಕ್ತಾದಿಗಳೂ ವೀಕ್ಷಿಸಬಹುದು.
ಇದನ್ನೂ ಓದಿ: Tirupati Temple: ಮಾರ್ಚ್ 1ರಿಂದ ತಿರುಪತಿ ದೇಗುಲದಲ್ಲಿ ಫೇಸ್ ರಿಕಗ್ನೇಷನ್ ವ್ಯವಸ್ಥೆ
ಧಾರ್ಮಿಕ
Navavidha Bhakti : ಎಲ್ಲ ಕರ್ಮಗಳೂ ಸೇವೆಯೇ ಆಗಬಹುದು!
ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ಹನ್ನೊಂದನೇ ಲೇಖನ ಇಲ್ಲಿದೆ. ಇಂದು ದಾಸ್ಯಭಕ್ತಿಯ ಕುರಿತು ವಿವರಿಸಲಾಗಿದೆ.
ಡಾ. ಸಿ. ಆರ್. ರಾಮಸ್ವಾಮಿ
ದಾಸ್ಯ ಭಕ್ತಿ – 2 ( ದಾಸ್ಯ ಭಕ್ತಿಯ ಮೊದಲ ಭಾಗವನ್ನು ಓದಲು ಇಲ್ಲಿ ಕ್ಲಿಕ್ (Click Here) ಮಾಡಿ)
ದಾಸ್ಯ ಭಾವವು ಪೂಜೆಗೆ ಮಾತ್ರ ಸೀಮಿತವಾದದ್ದಲ್ಲ. ಇನ್ನೂ ವಿಸ್ತಾರವಾಗಿದೆ. ಇಂತಹ ಸೇವಾಕಾರ್ಯಕ್ಕೆ ಉತ್ತಮ ಉದಾಹರಣೆ ಹನುಮಂತ. ಪ್ರತಿಯೊಂದು ಹಂತದಲ್ಲೂ ರಾಮನ ಸ್ಮರಣೆಯೇ, ರಾಮನ ಸಂತೋಷವೇ ಅವನ ಉದ್ದೇಶವಾಗಿತ್ತು. ಮಹಾಬಲಶಾಲಿ, ವೀರ್ಯವಂತ; ಜೊತೆಗೆ ಬುದ್ಧಿವಂತ, ವಾಗ್ಮಿ. ರಾವಣನ ಮುಂದೆ ದೂತನಾಗಿಯೂ, ಸುಗ್ರೀವನಲ್ಲಿ ಮಂತ್ರಿಯಾಗಿಯೂ, ಯುದ್ಧದಲ್ಲಿ ವೀರನಾಗಿಯೂ ವರ್ತಿಸುತ್ತಾನೆ. ಜ್ಞಾನದಲ್ಲಿಯೂ ಶ್ರೇಷ್ಠ. ಆತ್ಮಜ್ಞಾನ ಸಂಪನ್ನ. ಪರಮಭಕ್ತ-ಭಾಗವತ. ಅಣಿಮಾದಿ ಅಷ್ಟಸಿದ್ಧಿಗಳೂ ಅವನ ವಶದಲ್ಲಿದ್ದುವು. ಇಷ್ಟೆಲ್ಲಾ ಶಕ್ತಿಗಳನ್ನೂ ರಾಮಕಾರ್ಯಕ್ಕಾಗಿಯೇ ಬಳಸುತ್ತ ರಾಮಸೇವೆಯನ್ನು ಮಾಡುತ್ತಿದ್ದ ಅಪ್ರತಿಮ ದಾಸನು.
ಅಷ್ಟೆಲ್ಲಾ ಶಕ್ತಿಯಿಲ್ಲದವರೂ ಇರುವಷ್ಟರಲ್ಲಿಯೇ ಭಗವಂತನ ಸೇವೆ ಮಾಡಬಹುದು. ಶ್ರೀಮದ್ರಾಮಾಯಣದಲ್ಲಿ ಸಮುದ್ರ-ಸೇತುವೆಯ ನಿರ್ಮಾಣ ಸಮಯದಲ್ಲಿ ಅಳಿಲೂ, ಸೇವೆ ಮಾಡಿದ ಕಥೆ ಪ್ರಸಿದ್ಧವಾಗಿದೆ. ಅಳಿಲು, ನೀರಿನಲ್ಲಿ ಮುಳುಗಿ, ಮರಳಲ್ಲಿ ಹೊರಳಾಡಿ, ತನ್ನ ಮೈಗೆ ಅಂಟಿದ ಮರಳನ್ನು ಸೇತುವೆ ಕಟ್ಟಿದ ಜಾಗದಲ್ಲಿ ಉದುರಿಸಿತು ಅಷ್ಟೆ. ಹೀಗೆ ಉದುರಿಸಿದ ಮರಳಿನಿಂದ ಸೇತುವೆ ಕಟ್ಟಲಾದೀತೇ! ವಿಚಾರಕ್ಕಿಂತ ಇದರ ಹಿಂದಿರುವ ಭಕ್ತಿಭಾವ-ಸೇವಾಭಾವ ಎಂತಹುದ್ದು! “ಅಳಿಲಸೇವೆ”ಯು ನಿಜವಾದ ಘಟನೆಯೋ ಅಥವಾ ಕವಿಕಲ್ಪನೆಯೋ ನಾವರಿಯೆವು. ಆದರೆ ಇದರಿಂದ ನಮ್ಮಲ್ಲಿ ಸಂತೋಷ-ಉತ್ಸಾಹ-ಭಕ್ತಿಭಾವಗಳು ಮೂಡಿಬರುವುದರಲ್ಲಿ ಸಂಶಯವಿಲ್ಲ. ಅಂತಹ ಉತ್ಸಾಹ-ಭರಿತವಾದ ಪೂರ್ಣಶಕ್ತಿಪ್ರಯೋಗದ “ಅಳಿಲುಸೇವೆ”ಯೂ ಶ್ರೀರಾಮನಿಗೆ ಪ್ರಿಯವಾದದ್ದು.
ಕ್ರಿಯೆಗಳೆಲ್ಲವೂ ಸೇವೆಯಾಗುವುದು ಹೇಗೆ?
ಸೇವೆಯ ವಿಸ್ತೃತರೂಪದ ಬಗೆಗೆ ಶ್ರೀರಂಗಮಹಾಗುರುಗಳು ದಯಪಾಲಿಸಿದ ನೋಟವನ್ನು ಗಮನಿಸುವುದಾದರೆ; ವೃಕ್ಷದಿಂದ ಫಲವನ್ನು ಪಡೆದು ಸಂತೋಷಿಸುವುದೇ ವೃಕ್ಷವನ್ನು ಬೆಳಸುವುದರ ಉದ್ದೇಶ. ಗಿಡಕ್ಕೆ ನೀರು-ಗೊಬ್ಬರಗಳನ್ನು ಹಾಕುವುದು, ಅಗತ್ಯವಿದ್ದಲ್ಲಿ ಔಷಧಿ ಹೊಡೆಯುವುದು, ಸೊಂಪಾಗಿ ಬೆಳೆಯಲು ಕಾಲಕಾಲಕ್ಕೆ ಕತ್ತರಿಸುವುದು ಇತ್ಯಾದಿಗಳೆಲ್ಲವೂ ಫಲದ ಕಡೆಗೆ ಗಮನವಿಟ್ಟು ಮಾಡುವ ಕ್ರಿಯೆಗಳೇ.
ಎಲೆಯಲ್ಲಿನ ಸಣ್ಣ-ಸಣ್ಣ ನರಗಳಿಂದ ಹಿಡಿದು ಗಿಡದಲ್ಲಿರುವ ಪ್ರತಿಯೊಂದು ಭಾಗದೊಡನೆಯೂ ಸಂಬಂಧವನ್ನು ಹೊಂದಿರುವ ಬೇರು, ಇಡೀ ವೃಕ್ಷವನ್ನು ರಕ್ಷಿಸುವ-ಪೋಷಿಸುವ ಭಾಗವಾಗಿದೆ. ಆದ್ದರಿಂದಲೇ ನೀರು-ಗೊಬ್ಬರಗಳನ್ನು ಮೇಲೆ ಇರುವ ಕಾಯಿ-ಹೂವಿಗೆ ಹಾಕದೆ, ಕೆಳಗಿರುವ ಬೇರಿಗೇ ಹಾಕುತ್ತೇವೆ. ಆದ್ದರಿಂದ ಬೇರಿಗೆ ಮಾಡುವ ‘ಸೇವಾಕಾರ್ಯ’ ಇಡೀ ವೃಕ್ಷಕ್ಕೇ ಮಾಡುವ ಸೇವೆಯಾಗುತ್ತದೆ. ಬೇರು ತನ್ನಲ್ಲಿಗೆ ಬಂದ ನೀರು-ಗೊಬ್ಬರಗಳನ್ನು ತಾನು ಇಟ್ಟುಕೊಳ್ಳದೆ ಇಡೀ ವೃಕ್ಷಕ್ಕೆ ಒದಗಿಸಿ ಫಲವನ್ನು ನೀಡುತ್ತದೆ. ಮೂಲ ಉದ್ದೇಶಕ್ಕೆ ಪೋಷಕವಾದ ಕೆಲಸಗಳೆಲ್ಲವೂ ಸೇವೆಯೇ. ಅಂತೆಯೇ ಅದಕ್ಕೆ ವಿರೋಧವಾದವುಗಳಾವುವೂ ಸೇವೆಯಾಗುವುದಿಲ್ಲ.
ನಮ್ಮ ದೇಹವೂ ಒಂದು ವೃಕ್ಷವೇ. ಇದರಲ್ಲಿ ಇಂದ್ರಿಯ-ಮನಸ್ಸು-ಬುದ್ಧಿಗಳ ಮೂಲಕ ಮಾಡುವ ಕ್ರಿಯೆಗಳೆಲ್ಲವೂ ಮಹಾಫಲವನ್ನು ಹೊಂದಲನುಗುಣವಾಗಿದ್ದರೆ ಇವೆಲ್ಲವೂ ಸೇವೆಯೇ ಆಗುತ್ತವೆ. ಜೀವ-ದೇವರ ಸಂಯೋಗವೇ (ಭಗವಂತನಲ್ಲಿ ಒಂದಾಗಿ ಸೇರಿಕೊಳ್ಳುವುದೇ) ಈ ವೃಕ್ಷದಿಂದ ದೊರೆಯುವ ಮಹಾಫಲ. ಅದಕ್ಕೆ ಪೋಷಕವಾದ ಕ್ರಿಯೆಗಳೆಲ್ಲವೂ ಸೇವಾಕಾರ್ಯಗಳೇ. ಭಗವಂತನ ಪ್ರೀತ್ಯರ್ಥವಾದದ್ದೆಲ್ಲವೂ ಸೇವೆಯೇ. ಆದರೆ ಭಗವಂತನ ಪ್ರೀತಿ-ಅಪ್ರೀತಿಗಳ ತಿಳಿವಳಿಕೆಯನ್ನು ಭಗವಂತನನ್ನು ಚೆನ್ನಾಗಿ ಅರಿತ ಜ್ಞಾನಿಗಳಿಂದ, ಋಷಿಗಳಿಂದ ತಿಳಿಯಬೇಕು.
ಭಗವತ್ಪ್ರೀತಿಕರವಾಗಿ ಮಾಡಿದಾಗ ಧನಸಹಾಯ, ಔಷಧಿಸಹಾಯ ಮುಂತಾದ ಎಲ್ಲಾ ಸಮಾಜಸೇವಾರೂಪವಾದ (social service) ಕ್ರಿಯೆಗಳನ್ನೂ ಸೇವಾಕಾರ್ಯವಾಗಿ ಪರಿವರ್ತಿಸಬಹುದು. ಕೇವಲ ಆರಾಧನೆಯನ್ನಷ್ಟೇ ಸೇವಾಕಾರ್ಯ ಎಂದೆಣಿಸಬಾರದು.
ಆಂಜನೇಯ, ಪ್ರತಿ ಹೆಜ್ಜೆಯಲ್ಲಿಯೂ ರಾಮನನ್ನೇ ಭಾವಿಸುತ್ತ ಸೇವೆ ಸಲ್ಲಿಸಿದನೆಂಬುದನ್ನು ಗಮನಿಸಬಹುದು. ಇಂದ್ರಜಿತ್ತನು ಪ್ರಯೋಗಿಸಿದ ಬ್ರಹ್ಮಾಸ್ತ್ರದಿಂದ ರಾಮಲಕ್ಷ್ಮಣರು ಮೂರ್ಛೆ ಹೋದಾಗ ಹಿಮಾಲಯದಿಂದ ಸಂಜೀವಿನಿಪರ್ವತದಲ್ಲಿರುವ ಮೂಲಿಕೆ ತರಲು ಹೋಗಿ ಆ ಬೆಟ್ಟವನ್ನೇ ಹೊತ್ತುತಂದ ಕಥೆ ಪ್ರಸಿದ್ಧ. ಅಷ್ಟು ಬಲಶಾಲಿಯೂ, ವಾಯುಪುತ್ರನೂ ಆದವನು ವಾಯುವೇಗದಲ್ಲಿ ಬಂದುಸೇರಿದನು. ಅದರಿಂದಲೇ ರಾಮಲಕ್ಷ್ಮಣರ ಜೀವ ಉಳಿಯಿತು. ಇನ್ನು ಸೀತೆಯನ್ನು ರಕ್ಷಿಸಿದ ವಿಷಯ ಪ್ರಸಿದ್ಧವಾದದ್ದು. ಒಂದು ನಿಮಿಷ ತಡವಾಗಿದ್ದರೂ ಅಶೋಕವನದಲ್ಲಿದ್ದ ಸೀತೆಯು ರಾವಣನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತದಲ್ಲಿದ್ದಳು. ಅದೇ ಸಮಯದಲ್ಲಿ ಆಂಜನೇಯನು ರಾಮನ ವರ್ಣನೆಯನ್ನು ಮಾಡಿ ಅವಳಿಗೆ ಸಂತೋಷವನ್ನುಂಟುಮಾಡಿ ಸೀತೆಯನ್ನೂ ಬದುಕಿಸಿದನು ಎನ್ನಬಹುದು.
ಹದಿನಾಲ್ಕುವರ್ಷ ಮುಗಿಯುತ್ತಲೇ ಪ್ರಾಯೋಪವೇಶಕ್ಕೆ ಅನುವು ಮಾಡಿಕೊಳ್ಳುತ್ತಿದ್ದ ಭರತನಿಗೆ ರಾಮನ ಆಗಮನದ ಸುದ್ದಿಯನ್ನು ತಿಳಿಸಿ ಆಂಜನೇಯ ಭರತನಿಗೂ ಸೇವೆ ಮಾಡುತ್ತಾನೆ ಎಂಬುದಾಗಿ ವಾಲ್ಮೀಕಿ ಮಹರ್ಷಿಯು ಸಂತೋಷವಾಗಿ ನುಡಿಯುತ್ತಾರೆ. ಇಷ್ಟೆಲ್ಲ ಸೇವೆಯ ಮಧ್ಯದಲ್ಲಿ ವಿರಾಮ ದೊರೆತಾಗ ಕಲ್ಲುಬಂಡೆಯ ಮೇಲೆ ಕುಳಿತು ರಾಮನಾಮವನ್ನು ಜಪಿಸುತ್ತಾ ರಾಮಧ್ಯಾನದಲ್ಲಿ ನಿರತನಾಗಿರುವವನು ಹನುಮಂತ.
ಮಹಾಪರಾಕ್ರಮಿಯೂ ಜಿತೇಂದ್ರಿಯನೂ ಆದ ಲಕ್ಷ್ಮಣನು ಸ್ವಂತ ಸುಖವೆಲ್ಲವನ್ನೂ ತ್ಯಜಿಸಿ ಶ್ರೀರಾಮನ ಸೇವೆಗಾಗಿ ಅರಣ್ಯಕ್ಕೆ ತೆರಳಿದ ವೃತ್ತಾಂತ ಸುಪ್ರಸಿದ್ಧ. ಹಗಲಿರುಳೆನ್ನದೇ ಅರಣ್ಯದಲ್ಲಿ ಅನವರತವೂ ಹದಿನಾಲ್ಕು ವರ್ಷ ನಿದ್ರೆಯನ್ನೇ ವರ್ಜಿಸಿ ಸೀತಾರಾಮರ ಸೇವೆಯಲ್ಲಿಯೇ ನಿರತನಾಗಿದ್ದ ಸೇವಕ, ಅಪೂರ್ವತ್ಯಾಗಿ ಲಕ್ಷ್ಮಣ, ದಾಸ್ಯಕ್ಕೆ ಮಾದರಿಯೆನಿಸಿಕೊಳ್ಳುತ್ತಾನೆ.
ಭಗವಂತನಲ್ಲಿ ದಾಸ್ಯಭಾವವಿರುವಂತೆಯೇ ಪರಮಭಾಗವತರಿಗೆ-ಭಗವಂತನ ಭೃತ್ಯರಿಗೆ ಸೇವೆಮಾಡಿದರೂ ಭಗವಂತನಿಗೇ ತಲಪುತ್ತದೆ. ಅದರ ಪರಂಪರೆ ಹೇಗೆಂದರೆ ‘ತ್ವದ್ಭೃತ್ಯ ಭೃತ್ಯ ಪರಿಚಾರಕ ಭೃತ್ಯ-ಭೃತ್ಯ ಭೃತ್ಯಸ್ಯ-ಭೃತ್ಯ ಇತಿ ಮಾಂ ಸ್ಮರ ಲೋಕನಾಥ’ ಎಂದು ಕುಲಶೇಖರ ಆಳ್ವಾರರು ಕೊಂಡಾಡುತ್ತಾರೆ. “ಭಗವಂತ, ನನ್ನನ್ನು ಹೇಗೆ ತಿಳಿಯಬೇಕೆಂದರೆ ನಿನ್ನ ಭೃತ್ಯ(ಸೇವಕ), ನಿನ್ನ ಭೃತ್ಯರಿಗೆ ಭೃತ್ಯರಿಗೆ…. ಹೀಗೆ ಐದು ಆರು ಪರಂಪರೆ ದಾಟಿನಿಂತು ನಿನ್ನ ಸೇವೆ ಮಾಡುವ ದಾಸ ಎಂದು ತಿಳಿಯಬೇಕು” ಎನ್ನುತ್ತಾರೆ. “ದಾಸ-ದಾಸ-ದಾಸರ ದಾಸ್ಯವ ಕೊಡೋ….” ಗೀತವೂ ಇದನ್ನೇ ಪುನರುಕ್ತಿಗೊಳಿಸುತ್ತದೆಯಲ್ಲವೇ?
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಒಂದು ಎಂಜಿನ್ ಹಿಂದೆ ಹದಿನೈದು ಬೋಗಿಗಳಿದ್ದರೂ ಕೊನೆಯ ಬೋಗಿಗೂ ಎಂಜಿನ್ನಿಗೂ ಕೊಂಡಿಯ ಮೂಲಕ ಸಂಬಂಧ ಇದ್ದೇ ಇರುತ್ತದೆ (ಕೊಂಡಿ ಕಳಚಿಕೊಳ್ಳದಿದ್ದರೆ!) ಅಂತೆಯೇ ಆ ಭೃತ್ಯರೆಲ್ಲರೂ ದಾಸ್ಯಭಾವದ ಕೊಂಡಿಯನ್ನು ಭದ್ರವಾಗಿ ಹಿಡಿದಿರುವುದರಿಂದ ಕೊನೆಯ ಭೃತ್ಯರಿಗೂ ಭಗವಂತನ ದಾಸ್ಯಸಂಬಂಧ ಇರುತ್ತದೆ. ಆದ್ದರಿಂದ ಭಗವದ್ಭಕ್ತರಲ್ಲಿ ದಾಸ್ಯಭಾವವಿರುವುದೂ ಆಷ್ಟೇ ಶ್ರೇಷ್ಠವಾದದ್ದು. ದಾಸ್ಯವನ್ನೇ ವೃತ್ತಿಯನ್ನಾಗಿಟ್ಟು ಭಗವಂತನ ಮಹಿಮೆಯನ್ನು ಮನೆಮನೆಗೂ ತಲುಪಿಸಿ ಸ್ಫೂರ್ತಿಯನ್ನು ತುಂಬುತ್ತಿದ್ದ ಪುರಂದರದಾಸರು-ಕನಕದಾಸರು ಮುಂತಾದ ದಾಸಶ್ರೇಷ್ಠರನ್ನು ಸ್ಮರಿಸೋಣ.
– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ, ಬೆಂಗಳೂರು
ಇದನ್ನೂ ಓದಿ: Navavidha Bhakti : ನಮಸ್ಕಾರ ಕೂಡ ಭಕ್ತಿಯ ಒಂದು ಪ್ರಕಾರ!
ಧಾರ್ಮಿಕ
Shrut Panchami 2023 : ಇಂದು ಶ್ರುತ ಪಂಚಮಿ; ಏನಿದು ಪರ್ವ? ಆಚರಣೆಯ ವಿಶೇಷತೆ ಏನು?
ಜೈನ ಧರ್ಮ ಆಚರಿಸುವ ಪ್ರಮುಖ ಪರ್ವಗಳಲ್ಲಿ ‘ಶ್ರುತ ಪಂಚಮಿ’ (Shrut Panchami 2023) ಕೂಡ ಒಂದು. ಈ ಪರ್ವದ ಮಹತ್ವವೇನು? ಯಾವಾಗಿನಿಂದ ಆಚರಣೆ ಬಂತು? ಹೆಚ್ಚಿನ ಮಾಹಿತಿ ಇಲ್ಲಿದೆ.
ಜೈನ ಧರ್ಮ ಆಚರಿಸುವ ಪ್ರಮುಖ ಪರ್ವಗಳಲ್ಲಿ ‘ಶ್ರುತ ಪಂಚಮಿ’ (Shrut Panchami 2023) ಕೂಡ ಒಂದು. ಶ್ರುತ (ಶಾಸ್ತ್ರ) ಎಂದರೆ ತೀರ್ಥಂಕರರು ನೀಡಿದ ವಚನಗಳ ಅನುಸಾರ ರಚನೆಗೊಂಡ ಗ್ರಂಥಗಳು. ಇವು ಲಿಪಿಬದ್ಧವಾಗಿ ಪೂರ್ಣಗೊಂಡ ದಿನವೇ ಜ್ಯೇಷ್ಠ ಶುಕ್ಲ ಪಂಚಮಿ.
ಜೈನ ಧರ್ಮದ ಪ್ರಕಾರ ನಮ್ಮೆಲ್ಲರ ಜೀವನವು ಸದ್ಗತಿಯನ್ನು ಹೊಂದಬೇಕೆಂದರೆ ‘ಸಮ್ಯಕ್’ ಜ್ಞಾನವನ್ನು ‘ಜೀನೇಂದ್ರವಾಣಿ’ (ಜಿನವಾಣಿ) ಯಿಂದ ಪಡೆಯುವುದರ ಮೂಲಕ ಮಾತ್ರ ಸಾಧ್ಯ. ಸಾಕ್ಷಾತ್ ಜಿನೇಂದ್ರ (ತೀರ್ಥಂಕರ)ಭಗವಂತರಿಂದ ಹೊರಟ ಓಂಕಾರ ಸ್ವರೂಪಿ ದಿವ್ಯಧ್ವನಿಯೇ ‘ಜಿನವಾಣಿ’ಯಾಗಿದೆ. ತತ್ವದ ಸ್ವರೂಪವನ್ನು ಹೇಳುವಂತಹ ಈ ‘ಜಿನವಾಣಿ’ಯು ದ್ವಾದಶಂಗ ಸ್ವರೂಪವಾಗಿರುತ್ತದೆ.
ಜಿನವಾಣಿಗೆ ‘ಆಗಮ’ ಮತ್ತು ‘ಶಾಸ್ತ್ರ’ ಎಂಬ ಪರ್ಯಾಯವಾಚಿ ಶಬ್ದಗಳು ಇವೆ. ಆಚಾರ್ಯ ಪರಂಪರೆಯಿಂದ ಬಂದಂತಹ ಮೂಲ ಸಿದ್ಧಾಂತಗಳಿಗೆ ಆಗಮವೆಂದು ಕರೆಯುತ್ತಾರೆ. ಆಗಮ ಶಬ್ದದಲ್ಲಿ ಕೂಡಿರುವ ಮೂರು ಅಕ್ಷರಗಳ ಅರ್ಥವೇನೆಂದರೆ;
ಆ – ಆಪ್ತರ (ನಿಜವಾದ ದೇವರು) ಮೂಲಕ ಹೇಳಿರುವ
ಗ – ಗಣಧರರಿಂದ ಸಂಗ್ರಹಿಸಿರುವ
ಮ – ಮುನಿಗಳಿಂದ ಬರೆದು ವಿಚಾರಿಸಲ್ಪಟ್ಟು ಚಾರಿತ್ರ (ಆಚರಣೆಗೆ) ದಲ್ಲಿ ತಂದಿರುವುದು
ಶ್ರುತ ಎಂದರೇನು?
ತೀರ್ಥಂಕರರ ಮೂಲಕ ಉಪದೇಶಿಸಿದ, ಗಣಧರರಿಂದ ತಿಳಿಸಲ್ಪಟ್ಟ ಮತ್ತು ಆಚಾರ್ಯರ ಮೂಲಕ ಬರೆಯಲ್ಪಟ್ಟ ಸದ್ ಗ್ರಂಥಗಳನ್ನು ‘ಶಾಸ್ತ್ರ’ ಎಂದು ಕರೆಯುತ್ತಾರೆ. ‘ಶ್ರುತ’ ವೆಂದರೆ ತೀರ್ಥಂಕರರ ಮೂಲಕ ಹೇಳುವ ವಚನಗಳ ಅನುಸಾರ ಗಣಧರ ಮುಂತಾದವರ ಮೂಲಕ ಗ್ರಂಥಗಳ ರಚನೆಯಾಗಿದೆಯೋ ಅದನ್ನು ಶ್ರುತ (ಶಾಸ್ತ್ರ) ವೆನ್ನುತ್ತಾರೆ.
ಶ್ರುತ ದಲ್ಲಿ ಎರಡು ವಿಧಗಳಿವೆ;
1. ದ್ರವ್ಯ ಶ್ರುತ: ಅಕ್ಷರಾತ್ಮಕವಾಗಿರುವ ದ್ವಾದಶಾಂಗವು ‘ದ್ರವ್ಯ ಶ್ರುತ’ ವಾಗಿರುತ್ತದೆ.
2. ಭಾವಶ್ರುತ: ಜಿನೇಂದ್ರವಾಣಿಯನ್ನು ಕೇಳುವ ಮೂಲಕ ಯಾವ ಸ್ವಾನುಭವ ಅಥವಾ ಸ್ವಸಂವೇದನೆ ಜ್ಞಾನವುಂಟಾಗುತ್ತದೆಯೋ ಅದನ್ನು ‘ಭಾವಶ್ರುತ’ವೆನ್ನುತ್ತಾರೆ.
ಶ್ರುತವು ಮತ್ತೆ 2 ಪ್ರಕಾರವಾಗಿದೆ
1. ಅಂಗಪ್ರವಿಷ್ಟ: ಜಿನೇಂದ್ರವಾಣಿಯನ್ನು ಗಣಧರರು ರಚಿಸಿ, ಸೂತ್ರ, ಗ್ರಂಥದ ರೂಪದಲ್ಲಿರುವುದನ್ನು ದ್ವಾದಶಾಂಗ (14 ಪೂರ್ವ ಸಹಿತ) ಶ್ರುತವನ್ನು ಅಂಗಪ್ರವಿಷ್ಟವೆನ್ನುತ್ತಾರೆ.
2. ಅಂಗಬಾಹ್ಯ: ಮಂದಬುದ್ದಿಯಿರುವ ಶಿಷ್ಯರಿಗೆ ಅನುಕೂಲವಾಗಲೆಂದು ವಿಶಿಷ್ಟ ಜ್ಞಾನಿ ಆಚಾರ್ಯರ ಮೂಲಕ ರಚನೆಯಾದ ಶಾಸ್ತ್ರಗಳೇ ಅಂಗಬಾಹ್ಯಗಳು.
ಇದರಲ್ಲಿ ಸಾಮಾಯಿಕಾದಿ 14 ಭೇದಗಳು ಬರುತ್ತವೆ. ಹೀಗೆ ಜಿನೇಂದ್ರವಾಣಿಯು ಜ್ಞಾನದ ಹಸಿವಿರುವವರಿಗೆ ಅಮೃತ ಸಮಾನದಂತೆ ಜ್ಞಾನವನ್ನು ನೀಡುವಂತಹದ್ದಾಗಿದೆ. ಭಗವಾನ್ ಶ್ರೀಮಹಾವೀರರವರ ಉಪದೇಶಿಸಿದ ಆಗಮ ಸೂತ್ರಗಳು ಎಲ್ಲವೂ ಒಂದೆ. ಮೌಕಿಕವಾಗಿಯೇ ತೀಕ್ಷ್ಣಬುದ್ಧಿಯುಳ್ಳ ಸಾಧಕರ ಮೂಲಕ ಜ್ಞಾನಪರಂಪರೆ ಹರಿದು ಬಂದಿತು.
ಭಗವಾನ್ ಶ್ರೀ ಮಹಾವೀರರ ನಂತರ ಸುಮಾರು ಆರುನೂರು ವರ್ಷಗಳವರೆಗೆ ಅಖಂಡವಾಗಿ ಶ್ರುತ ಜ್ಞಾನವು ಸಂರಕ್ಷಿತವಾಗಿ ಬಂದಿತು. ಆಚಾರ್ಯ ಧರಸೇನರ (ಕ್ರಿ. ಶ. 1ರ ಆಸುಪಾಸು) ಕಾಲಕ್ಕೆ ಅದು ಪರಿವರ್ತನೆಯ ಹಾದಿಗೆ ಬಂತು ಎನ್ನುತ್ತದೆ ಇತಿಹಾಸ.
ಲಿಪಿ ಬದ್ಧವಾದ ಆಗಮ ಆಚಾರ್ಯ ಧರಸೇನರ ಸಮಯಕ್ಕೆ ಮನುಷ್ಯರ ಬುದ್ಧಿ ಮತ್ತೆಯಲ್ಲಿ ಕುಂಠಿತವಾಯಿತು. ತೀಕ್ಷ್ಣ ಬುದ್ಧಿಯ ಶಿಷ್ಯರ ಕೊರತೆ ಬಂದಾಗ, ಆಗಮವನ್ನು ಲಿಪಿಬದ್ಧಗೊಳಿಸಲು ಚಿಂತಿಸಿದರು. ಅಂತೆಯೇ ನಾನಾ ಪರೀಕ್ಷೆಗಳನ್ನು ಮಾಡಿ ಭೂತಬಲಿ ಮತ್ತು ಪುಷ್ಪದಂತ ಮುನಿಗಳಿಗೆ ಆಗಮ ಸೂತ್ರಗಳನ್ನು ಹೇಳುವ ಮೂಲಕ ಅದನ್ನು ಲಿಪಿಬದ್ಧ ಮಾಡಿಸಿದರು.
ದ್ವಾದಶಾಂಗವು ಲಿಪಿಬದ್ಧವಾಗಿ ‘ಶಾಸ್ತ್ರ ’ ರೂಪಧರಿಸಿತ್ತು. ನಂತರದ ವರ್ಷಗಳಲ್ಲಿ ಆ ಷಟ್ ಖಂಡಾಗಮ ಸೂತ್ರಗಳಿಗೆ ಟೀಕಾ ಗ್ರಂಥಗಳ ರಚನೆಯಾದವು. ಹೀಗೆ ಆಗಮ ಸೂತ್ರಗಳು ಲಿಪಿಬದ್ಧವಾಗಿ ಪೂರ್ಣಗೊಂಡ ದಿನವೇ ಜ್ಯೇಷ್ಠ ಶುಕ್ಲ ಪಂಚಮಿ. ಅದನ್ನೇ ‘ಶ್ರುತಪಂಚಮಿ’ ಪರ್ವ ವೆಂದು ಕರೆಯುತ್ತಾರೆ. ಈ ಪರಮಾಗಮ ಗ್ರಂಥವು ಪ್ರಾಕೃತ ಭಾಷೆಯಲ್ಲಿದೆ.
ಇದು ಉಪಕಾರ ದಿವಸ
ಪೂರ್ವಾಚಾರ್ಯರ ಪರೋಪಕಾರ ಇಂದು ನಾವೇನಾದರೂ ಜಿನಧರ್ಮದಲ್ಲಿ ಆಸಕ್ತಿಯಿಟ್ಟು ಶಾಸ್ತ್ರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆಯೆಂದರೆ ಅದು ಪೂರ್ವಾಚಾರ್ಯರ ಪರೋಪಕಾರವಾಗಿದೆ. ಈ ಸಂಸಾರದಲ್ಲಿ ಪ್ರಸ್ತುತ ಭರತ ಭೂಮಿಯಿಂದ ಮುಕ್ತಿ ಲಭ್ಯವಿಲ್ಲವೆಂದು ಶಾಸ್ತ್ರದಲ್ಲಿ ಹೇಳಿದ್ದರೂ ಮುಂದಿನ ಸದ್ಗತಿಗೆ ಬೇಕಾಗುವ ಉಪಾಯವನ್ನು ಈ ಆಗಮ ಗ್ರಂಥಗಳು ತಿಳಿಸುತ್ತವೆ. ಆಚಾರ್ಯರ ಉಪಕಾರ ಮರೆಯಲು ಅಸಾಧ್ಯ, ಈ ದಿನವನ್ನು ‘ಉಪಕಾರ ದಿವಸ’ ವೆಂದು ಕರೆದರೂ ತಪ್ಪಾಗಲಾರದು.
ನಮ್ಮ ಅಜ್ಞಾನವನ್ನು ತೊರೆಯಲು, ಈ ಆಗಮ ಜ್ಞಾನದಿಂದ ಸಾಧ್ಯವಿದೆ. ಒಳ್ಳೆಯ ಸಂಸ್ಕಾರವಂತರಾಗಿ ಜೀವನವನ್ನು ಸದಾಚಾರ, ಸದ್ವಿಚಾರಗಳೊಂದಿಗೆ ಬದುಕುವ ಅಭ್ಯಾಸ ನಮ್ಮದಾಗಲಿ ಎಂಬ ಆಶಯ ಈ ʼಶ್ರುತ ಪಂಚಮಿʼ ಯದ್ದು.
ಇದನ್ನೂ ಓದಿ: Prerane : ಸ್ಮೃತಿ, ವಿಸ್ಮೃತಿ, ಸಂಸ್ಕೃತಿ; ಇವುಗಳ ನಡುವಿನ ಸಂಬಂಧವೇನು?
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ6 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ9 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ20 hours ago
RP Ashok: ಇನ್ಸ್ಪೆಕ್ಟರ್ ಆರ್.ಪಿ.ಅಶೋಕ್ಗೆ ಆರ್ಯಭಟ ಪ್ರಶಸ್ತಿ ಪ್ರದಾನ
-
ಕರ್ನಾಟಕ21 hours ago
ರಾಜ್ಯ ಸಚಿವ ಸಂಪುಟ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 24 ಶಾಸಕರಿಗೆ ಸಚಿವ ಸ್ಥಾನ, ಮತ್ತೆ ಸಿದ್ದು ಮೇಲುಗೈ
-
ಕ್ರಿಕೆಟ್21 hours ago
IPL 2023: ಗಿಲ್ ಶತಕದ ಕಮಾಲ್; ಮುಂಬೈಗೆ ಬೃಹತ್ ಮೊತ್ತದ ಗುರಿ
-
ಉತ್ತರ ಕನ್ನಡ20 hours ago
Honnavar News: ಕಾರಿಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ, 30 ಮಂದಿಗೆ ಗಾಯ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ