ಡಿಜಿಟಲ್ ಕ್ರಾಂತಿಗೆ ಹೊಸ ಮುನ್ನುಡಿ ಬರೆದ ಸಾರ್ವಜನಿಕ ಗ್ರಂಥಾಲಯ - Vistara News

ಕಲೆ/ಸಾಹಿತ್ಯ

ಡಿಜಿಟಲ್ ಕ್ರಾಂತಿಗೆ ಹೊಸ ಮುನ್ನುಡಿ ಬರೆದ ಸಾರ್ವಜನಿಕ ಗ್ರಂಥಾಲಯ

Public Library: ಮಕಾಟಿ ಮನಿಲಾದ ಫಿಲಿಪ್ಪಿನ್ಸ್ ಬರ್ಜ್ಯಾಯ್ ಬ್ಯಾಂಕ್ವೆಟ್ ಹಾಲ್, ನಡೆದ ೩೯ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಾರಂಭ ನಡೆಯಿತು.

VISTARANEWS.COM


on

Dr Satiskumar Hosmani
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಮ್ಮ ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ (Karnataka Digital Public Library) ಅತೀ ಕಡಿಮೆ ಅವಧಿಯಲ್ಲಿ ಸುಮಾರು 3.50 ಕೋಟಿ ಜನ ಓದುಗರು ನೋಂದಣಿಯಾಗಿ ದಾಖಲೆ ನಿರ್ಮಿಸಿ ಡಿಜಿಟಲ್ ಕ್ರಾಂತಿಗೆ (Digital revolution) ಹೊಸ ಮುನ್ನುಡಿ ಬರೆದಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ ಹೊಸಮನಿ (Dr Satishkumar hosmani) ಹೇಳಿದರು.

ಫಿಲಿಪ್ಪಿನ್ಸ್ ಬರ್ಜ್ಯಾಯ್ ಬ್ಯಾಂಕ್ವೆಟ್ ಹಾಲ್, ಮಕಾಟಿ ಮನಿಲಾದಲ್ಲಿ ನಡೆದ ೩೯ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಾರಂಭದಲ್ಲಿ ಮಾತನಾಡಿದ ಅವರು, ಡಿಜಿಟಲ್ ಯುಗದಲ್ಲಿ ನಮ್ಮ ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳು ಸಹ ಡಿಜಿಟಲ್‌ಮಯವಾಗಿವೆ. ಸುಮಾರು ಒಂದು ಕೋಟಿಗೂ ಹೆಚ್ಚಿನ ಡಿಜಿಟಲ್ ಪುಸ್ತಕಗಳು ಮತ್ತು ಇತರೆ ವಿಷಯ ವಸ್ತುಗಳು ಡಿಜಿಟಲ್ ಸಾರ್ವಜನಿಕ ಪೋರ್ಟಲ್‌ನಲ್ಲಿ ಲಭ್ಯವಿವೆ. ಪ್ರಪಂಚದ ಯಾವುದೇ ಮೂಲೆಯ ಓದುಗರು ನೋಂದಣಿಯಾಗಿ ಇದರ ಉಪಯೋಗ ಪಡೆಯಬಹುದು ಎಂದು ವಿವರಿಸಿ ಕವಿಗೋಷ್ಠಿಯಲ್ಲಿ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದ ಬಗ್ಗೆ ಅವರೇ ರಚಿಸಿದ ಕವನ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಡಾ.ನಾಗರಾಜು.ವಿ, ಶಂಕರೇಗೌಡ, ಡಾ.ಕೆ.ಬಿ.ನಾಗೂರ, ಕೆ.ಪಿ.ಮಂಜುನಾಥ ಸಾಗರ ಮತ್ತು ವಿಶೇಷ ಆಹ್ವಾನಿತರಾಗಿ ಶಿವಪುತ್ರ ಭಾವಿ, ಗೋನಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ಕವಿಗೋಷ್ಠಿಯ ನಂತರ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ಜರುಗಿದವು.

ಡಾ.ಸತೀಶ್ ಕುಮಾರ್‌ಗೆ ಇಂಡೋ ಫಿಲಿಫೈನ್ಸ್ ಅಚಿವರ್ಸ್ ಪ್ರಶಸ್ತಿ ಗೌರವ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಕ್ಷೇತ್ರದಲ್ಲಿ ಅವರ ಅಮೋಘ ಸಾಧನೆಯನ್ನು ಪರಿಗಣಿಸಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ್ ಹೊಸಮನಿ ಅವರಿಗೆ ಪ್ರತಿಷ್ಠಿತ ಇಂಡೋ ಫಿಲಿಫೈನ್ಸ್ ಅಚಿವರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸುದ್ದಿಯನ್ನೂ ಓದಿ: Dr. BR Ambedkar : ಅಂಬೇಡ್ಕರ್‌ ಜಯಂತಿ ಮತ್ತು ಪ್ರೊ.ಎಚ್.ಟಿ. ಪೋತೆ ಅವರ ‘ಎಲ್ಲರ ಅಂಬೇಡ್ಕರ್’ ಕೃತಿ ಲೋಕಾರ್ಪಣೆ ಇಂದು

ರಾಜ್ಯದಲ್ಲಿನ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯವನ್ನು ಕೇಂದ್ರ ಸರ್ಕಾರ ಗುರುತಿಸಿ, ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಸೇವೆಯನ್ನು ಇತರೆ ರಾಜ್ಯಗಳಲ್ಲಿ ಯಾವ ರೀತಿ ಪರಿಣಾಮಕಾರಿಯಾಗಿ ಬಳಸಬಹುದು ಎಂಬುವುದರ ಬಗ್ಗೆ ಮಾಹಿತಿ ಪಡೆದಿದ್ದು, ಎಲ್ಲ ರಾಜ್ಯಗಳು ಇದೇ ಮಾದರಿಯಾಗಿ ಬಳಸಲು ತಿಳಿಸಿದ್ದಾರೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮಿನ ತಿಳಿಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Music Academy Bangalore : ಮ್ಯೂಜಿಗಲ್​ನಿಂದ ಅಮೃತಹಳ್ಳಿಯಲ್ಲಿ ಮ್ಯೂಸಿಕ್ ಅಕಾಡೆಮಿ ಪ್ರಾರಂಭ

Music Academy Bangalore : ಮ್ಯೂಜಿಗಲ್ ಸಂಗೀತ ಶಿಕ್ಷಣದಲ್ಲಿ 360-ಡಿಗ್ರಿ ಫ್ರೇಮ್ ವರ್ಕ್ ಅನ್ನು ಪೂರೈಸುತ್ತಿದ್ದು ಸಂಗೀತ ಕಲಿಕೆ ಮತ್ತು ಬೋಧನೆಯ ವ್ಯವಸ್ಥೆಯನ್ನು ಆನ್ಲೈನ್, ಆಫ್ಲೈನ್ ಮತ್ತು ಸಂಗೀತ ಸಾಧನಗಳ ಮಳಿಗೆಯನ್ನು ಒಂದೇ ಪ್ಲಾಟ್ ಫಾರಂಗೆ ಅಳವಡಿಸುವ ಮೂಲಕ ಸುವರ್ಣ ಮಾನದಂಡ ರೂಪಿಸುತ್ತಿದೆ.

VISTARANEWS.COM


on

Music Academy Bangalore
Koo

ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಸಂಗೀತ ಶಿಕ್ಷಣದ ಪ್ಲಾಟ್ ಫಾರಂ ಮ್ಯೂಜಿಗಲ್, ಬೆಂಗಳೂರಿನ ಜಕ್ಕೂರು ಲೇಔಟಿನ ಅಮೃತಹಳ್ಳಿಯಲ್ಲಿ ತನ್ನ 11ನೇ ಅತ್ಯಾಧುನಿಕ ಮ್ಯೂಸಿಕ್ ಅಕಾಡೆಮಿ ಪ್ರಾರಂಭಿಸಿದೆ (Music Academy Bangalore). ಈ ಅಕಾಡೆಮಿಯು 2200 ಚದರ ಅಡಿ ವಿಸ್ತೀರ್ಣ ಹೊಂದಿದೆ ಮತ್ತು ಗಾಯನ ಮತ್ತು ಇನ್ಸ್ ಟ್ರುಮೆಂಟಲ್ ಸಂಗೀತ ಕಲಿಯಲು ಪೂರಕ ವಾತಾವರಣ ಹೊಂದಿದೆ. ಖ್ಯಾತ ಹಿನ್ನೆಲೆ ಗಾಯಕ ನಾಗರಂಜನಿ ರಘು ಮುಖ್ಯ ಅತಿಥಿಯಾಗಿದ್ದರು ಮತ್ತು ಮ್ಯೂಜಿಗಲ್ ಸಂಸ್ಥಾಪಕ ಡಾ.ಲಕ್ಷ್ಮೀನಾರಾಯಣ ಯೆಲೂರಿ ಗೌರವ ಅತಿಥಿಗಳಾಗಿದ್ದರು.

500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಹಲವು ಬ್ಯಾಚ್ ಗಳನ್ನು ಹೊಂದಿರುವ ಈ ಮ್ಯೂಸಿಕ್ ಅಕಾಡೆಮಿಯು ಪಿಯಾನೊ, ಕೀಬೋರ್ಡ್, ಗಿಟಾರ್, ಡ್ರಮ್ಸ್, ಕರ್ನಾಟಕ ಸಂಗೀತ, ಹಿಂದೂಸ್ಥಾನಿ, ಪಾಶ್ಚಿಮಾತ್ಯ, ವಯೊಲಿನ್ ಮತ್ತು ಉಕುಲೆಲೆಯಲ್ಲಿ ಪಾಠಗಳನ್ನು ನೀಡುತ್ತದೆ. ಉದ್ಘಾಟನಾ ತಿಂಗಳಲ್ಲಿ ಮ್ಯೂಜಿಗಲ್ ನೋಂದಾಯಿತರಾದ ಎಲ್ಲರಿಗೂ 1 ತಿಂಗಳು ಉಚಿತ ಸಂಗೀತ ಶಿಕ್ಷಣ ನೀಡುತ್ತದೆ.

ಮ್ಯೂಜಿಗಲ್ ಸಂಗೀತ ಶಿಕ್ಷಣದಲ್ಲಿ 360-ಡಿಗ್ರಿ ಫ್ರೇಮ್ ವರ್ಕ್ ಅನ್ನು ಪೂರೈಸುತ್ತಿದ್ದು ಸಂಗೀತ ಕಲಿಕೆ ಮತ್ತು ಬೋಧನೆಯ ವ್ಯವಸ್ಥೆಯನ್ನು ಆನ್ಲೈನ್, ಆಫ್ಲೈನ್ ಮತ್ತು ಸಂಗೀತ ಸಾಧನಗಳ ಮಳಿಗೆಯನ್ನು ಒಂದೇ ಪ್ಲಾಟ್ ಫಾರಂಗೆ ಅಳವಡಿಸುವ ಮೂಲಕ ಸುವರ್ಣ ಮಾನದಂಡ ರೂಪಿಸುತ್ತಿದೆ.

ಇದನ್ನೂ ಓದಿ: Olympic Day : 900 ಮಕ್ಕಳೊಂದಿಗೆ ಒಲಿಂಪಿಕ್ ದಿನ ಸಂಭ್ರಮಿಸಿದ ರಿಲಯನ್ಸ್​ಫೌಂಡೇಶನ್​

ಮ್ಯೂಜಿಗಲ್ ಅಕಾಡೆಮಿ ಪ್ರಾರಂಭ ಕುರಿತು ಅಕಾಡೆಮಿ ಸಂಸ್ಥಾಪಕ ಡಾ.ಲಕ್ಷ್ಮೀನಾರಾಯಣ ಯೆಲೂರಿ, “ಮ್ಯೂಜಿಗಲ್ ಅಕಾಡೆಮಿಯು ಸಂಗೀತ ಶಿಕ್ಷಣವನ್ನು ಅತ್ಯಾಧುನಿಕ ಕಲಿಕಾ ಕೇಂದ್ರದ ಮೂಲಕ ಪ್ರಜಾಸತ್ತೀಯಗೊಳಿಸುವ ಉದ್ದೇಶ ಹೊಂದಿದೆ. ಇದು ಸಂಗೀತದಲ್ಲಿ ಅತ್ಯುತ್ತಮ ಕಲಿಕೆ ಮತ್ತು ಬೋಧನೆಯ ಅನುಭವ ನೀಡುತ್ತದೆ. ಇದು ಪರಿಣಿತ ಶಿಕ್ಷಕರಿಂದ ಭಾರತೀಯ ಶಾಸ್ತ್ರೀಯ ಮತ್ತು ಪಾಶ್ಚಿಮಾತ್ಯ ಸಂಗೀತದಲ್ಲಿ ಕಲಿಕೆ ಮತ್ತು ಬೋಧನೆ ನೀಡುತ್ತದೆ. ಇದರೊಂದಿಗೆ ರಚನಾತ್ಮಕ ಪಠ್ಯಕ್ರಮ, ನಿಯಮಿತ ಮೌಲ್ಯಮಾಪನ, ಪ್ರಮಾಣೀಕರಣ, ಅನುಕೂಲಕರ ಶುಲ್ಕತ ಪಾವತಿ, ತರಬೇತಿ ಪಡೆದ ಶಿಕ್ಷಕರು ಮತ್ತು ಸುಲಭ ಲಭ್ಯತೆ ಇದನ್ನು ಕಲಿಯುವವರ ಕೇಂದ್ರವಾಗಿಸಿದೆ” ಎಂದರು.
ಭಾರತ, ಯು.ಎಸ್.ಎ., ಯು.ಕೆ., ಆಸ್ಟ್ರೇಲಿಯಾ ಮತ್ತು ಯು.ಎ.ಇ.ಗಳಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ 400+ ತರಬೇತಿ ಪಡೆದ ಸಂಗೀತ ಶಿಕ್ಷಕರನ್ನು ಹೊಂದಿದ್ದು 40,000ಕ್ಕೂ ಹೆಚ್ಚು ತರಗತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಮ್ಯೂಜಿಗಲ್ ವಿದ್ಯಾರ್ಥಿಗಳಿಗೆ ಅವರ ಸಂಗೀತದ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತದೆ.

ಭಾರತದಲ್ಲಿ ಸಾಂಪ್ರದಾಯಿಕ ಸಂಗೀತ ಶಿಕ್ಷಣವು ನರೆಹೊರೆಯ ಸಂಗೀತ ಶಿಕ್ಷಣ ಕೇಂದ್ರಗಳಿಗೆ ಸೀಮಿತವಾಗಿದೆ ಮತ್ತು ಕೆಲವೇ ಪ್ರದೇಶಗಳಿಗೆ ಮೀಸಲಾಗಿದೆ. ಮ್ಯೂಜಿಗಲ್ ಅದನ್ನು ಮೀರಿ ಎಲ್ಲರಿಗೂ ಸಂಗೀತ ಶಿಕ್ಷಣ ದೊರೆಯುವಂತೆ ಮಾಡುತ್ತಿದೆ. ಮ್ಯೂಜಿಗಲ್ ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳಿಂದ ಮತ್ತು ಪರಿಣಿತ ಶಿಕ್ಷಕರಿಂದ ಸಮಗ್ರವಾದ ಸಂಗೀತ ಶಿಕ್ಷಣ ನೀಡುತ್ತದೆ.

Continue Reading

ಕರ್ನಾಟಕ

Kamala Hampana: ಶಿಕ್ಷಕಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವರೆಗೆ; ಡಾ.ಕಮಲಾ ಹಂಪನಾ ಅವರ ಸಾಹಿತ್ಯ ಕೃಷಿ ಸಾಗಿ ಬಂದ ಹಾದಿ

Kamala Hampana: ಕನ್ನಡದ ಹಿರಿಯ ಲೇಖಕಿ, ಸಂಶೋಧಕಿ ಪ್ರೊ. ಕಮಲಾ ಹಂಪನಾ ಇನ್ನಿಲ್ಲ. 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ಡಾ. ಕಮಲಾ ಹಂಪನಾ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಕಮಲಾ ಹಂಪನಾ ಅವರ ಸಾಹಿತ್ಯ ಕೃಷಿಯ ಕಿರು ಪರಿಚಯ.

VISTARANEWS.COM


on

Kamala Hampana
Koo

ಬೆಂಗಳೂರು: ನಾಡಿನ ಖ್ಯಾತ ಸಾಹಿತಿ, ನಾಡೋಜ ಪ್ರೊ. ಕಮಲಾ ಹಂಪನಾ (Kamala Hampana) ಅವರು ಇಂದು (ಜೂನ್‌ 22) ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಕಮಲಾ ಹಂಪನಾ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ʼʼಹಿರಿಯ ಸಾಹಿತಿ ಡಾ.ಕಮಲಾ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದ ಡಾ.ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ. ಡಾ.ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಮೃತರ ಆತ್ಮಕ್ಕೆ ಶಾಂತಿ ಕೋರುವೆ” ಎಂದು ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭ

ಡಾ.ಕಮಲಾ ಹಂಪನಾ ಅವರು 1935ರಲ್ಲಿ ದೇವನಹಳ್ಳಿಯಲ್ಲಿ ಸಿ.ರಂಗಧಾನಮನಾಯಕ್‌ ಮತ್ತು ಲಕ್ಷ್ಮಮ್ಮ ದಂಪತಿಗೆ ಜನಿಸಿದರು. ಕನ್ನಡ ಸಾಹಿತ್ಯ ಲೋಕದಲ್ಲಿ, ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಅವರು 1959ರಲ್ಲಿ ಕನ್ನಡ ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಮೈಸೂರು, ಬೆಂಗಳೂರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ನಂತರ ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದರು. ನಿವೃತ್ತರಾದ ನಂತರವೂ ತಮ್ಮ ನೆಚ್ಚಿನ ಅಧ್ಯಾಪನ ಕೆಲಸ ಮುಂದುವರಿಸಿದರು. ಮೈಸೂರು ವಿವಿ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿವಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.

ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ಡಾ. ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿಯಾಗಿದ್ದರು. ಅವರ ಪತಿ ಪತಿ ಹಂ.ಪ.ನಾಗರಾಜಯ್ಯ ಅವರೂ ಸಾಹಿತಿ, ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ.

ಹಲವು ಕೃತಿ

ಕಮಲಾ ಹಂಪನಾ ಅವರ ಲೇಖನಿಯಿಂದ ಹಲವು ಕೃತಿ, ಸಂಶೋಧನಾ ಬರಹಗಳು ಮೂಡಿ ಬಂದಿವೆ. ಕಥಾ ಸಂಕಲನ, ಕಾದಂಬರಿಯಿಂದ ಹಿಡಿದು ಸಂಶೋಧನಾ ಕೃತಿಗಳ ವರೆಗೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ʼನಕ್ಕಿತು ಹಾಲಿನ ಬಟ್ಟಲುʼ, ʼರೆಕ್ಕೆ ಮುರಿದಿತ್ತುʼ, ʼಚಂದನಾʼ, ʼಬಣವೆʼ ಕಥಾ ಸಂಲನಗಳು. ʼಬುಗುಡಿʼ, ʼಬಿಂದಲಿʼ ವಚನ ಸಂಕಲನ. ʼತುರಂಗ ಭಾರತ – ಒಂದು ಅಧ್ಯಯನʼ, ʼಶಾಂತಿನಾಥʼ, ʼಆದರ್ಶ ಜೈನ ಮಹಿಳೆಯರುʼ, ʼಅನೇಕಾಂತವಾದʼ, ʼನಾಡು ನುಡಿ ನಾವುʼ, ʼಜೈನ ಸಾಹಿತ್ಯ ಪರಿಸರʼ, ʼಬದ್ದವಣʼ, ʼರೋಣದ ಬಸದಿʼ, ʼಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರುʼ ಇತ್ಯಾದಿ ಸಂಶೋಧನಾ ಲೇಖನಗಳು.

ʼಅಕ್ಕ ಮಹಾದೇವಿʼ, ʼಹೆಳವನಕಟ್ಟೆ ಗಿರಿಯಮ್ಮʼ, ʼವೀರವನಿತೆ ಓಬವ್ವʼ, ʼಜನ್ನʼ, ʼಚಿಕ್ಕವರಿಗಾಗಿ ಚಿತ್ರದುರ್ಗಾʼ, ʼಡಾ.ಬಿ.ಆರ್. ಅಂಬೇಡ್ಕರ್‌ʼ, ʼಮಳಬಾಗಿಲುʼ, ʼಮಕ್ಕಳೊಡನೆ ಮಾತುಕತೆʼ ಶಿಶು ಸಾಹಿತ್ಯ. ʼಬಕುಳʼ, ʼಬಾನಾಡಿʼ, ʼಬೆಳ್ಳಕ್ಕಿʼ ಆಕಾಶವಾಣಿ ನಾಟಕ ರೂಪಕಗಳು. ಇತರ ಭಾಷೆಗಳಿಂದ ʼಬೀಜಾಕ್ಷರ ಮಾಲೆʼ, ʼಜಾತಿ ನಿರ್ಮೂಲನೆʼ, ʼಭಾರತದಲ್ಲಿ ಜಾತಿಗಳುʼ, ʼಏಷಿಯಾದ ಹಣತೆಗಳುʼ, ʼಜಾತಿ ಮೀಮಾಂಸೆʼ ಸೇರಿದಂತೆ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಜತೆಗೆ ಆತ್ಮಕಥೆ, ವಿಮರ್ಶೆಗಳನ್ನೂ ಬರೆದಿದ್ದಾರೆ.

ಸಂದ ಪ್ರಶಸ್ತಿಗಳು

ಕಮಲಾ ಹಂಪನಾ ಅವರನ್ನು ಹುಡುಕಿಕೊಂಡು ಹಲವು ಪ್ರಶಸ್ತಿಗಳು ಬಂದಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ಸಾಹಿತ್ಯ ವಿಶಾರದೆ ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ವರ್ಷದ ಲೇಖಕಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಾನ ಚಿಂತಾಮಣಿ ಪ್ರಶಸ್ತಿ ಈ ಪೈಕಿ ಪ್ರಮುಖವಾದವು. ಅಲ್ಲದೆ 2003ರಲ್ಲಿ ಮೂಡುಬಿದಿರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ದೇಹ ದಾನ

ಕಮಲಾ ಹಂಪನಾ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ಕಣ್ಣು ಮತ್ತು ದೇಹ ದಾನ ಮಾಡಲಾಗುವುದು.ಸಂಜೆ 5ರ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ರಾಮಯ್ಯ ಮೆಡಿಕಲ್ ಕಾಲೇಜಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ ಮತ್ತಿತರರು ಈಗಾಗಲೇ ಅಂತಿಮ ದರ್ಶನ ಪಡೆದಿದ್ದಾರೆ.

ʼʼ2 – 3 ದಿನಗಳ ಹಿಂದೆಯಷ್ಟೇ ಅವರು ತಮ್ಮ ಅಂತಿಮ ಆಸೆಯನ್ನು ತಿಳಿಸಿದ್ದರು. ನಿಧನದ ನಂತರ ರಾಜಾಜಿನಗರ ಮನೆಯಲ್ಲೇ ಅಂರಿತಿಮ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದರು. ನೇತ್ರದಾನ ಮಾತ್ರವಲ್ಲದೇ ಇತರ ಅಂಗಗಳನ್ನೂ ದಾನ ಮಾಡಬೇಕು ಎಂದು ಬರೆಸಿಕೊಂಡಿದ್ದರುʼʼ ಎಂದು ಅವರ ಪುತ್ರಿ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Kamala Hampana: ಖ್ಯಾತ ಸಾಹಿತಿ ನಾಡೋಜ ಕಮಲಾ ಹಂಪನಾ ಇನ್ನಿಲ್ಲ

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಸೂರ್ಯವಂಶದ ಮುಂಗಾಣ್ಕೆಯನು ಅರಿತ ಸಾಧಕ- ಸುಮಂತ್ರ

ಸುಮಂತ್ರನ ಕುರಿತು ಅಭ್ಯಾಸ ಮಾಡುತಾ ಹೋದಂತೆ ಆತನ ಕಾರ್ಯದಕ್ಷತೆ ಮತ್ತು ಕುಶಲಿತನದ ಕುರಿತು ಅಚ್ಚರಿ ಮೂಡಿಸುವ ವಿಷಯಗಳಿವೆ. ದಶರಥನಿಂದ ತೊಡಗಿ ಸೀತಾವಿಯೋಗದ ವರೆಗೆ ಆತ ಮಹತ್ವದ ಪಾತ್ರ ವಹಿಸಿಯೂ ಮರೆಯಲ್ಲಿ ಇದ್ದಾನೆ.

VISTARANEWS.COM


on

ಧವಳ ಧಾರಿಣಿ dhavala dharini sumantra
Koo

ಅಬ್ಬರಿಸಿದರೂ ಅತಿಕ್ರಮಿಸದ ಸಂಯಮಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸುಮಂತ್ರ (Sumantra) ಅಯೋಧ್ಯೆಯ (Ayodhya) ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ ಮತ್ತು ದಶರಥನ (Dasharatha) ಆಪ್ತನೂ ಆಗಿದ್ದನೆನ್ನುವ ವಿಷಯವನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಈಗ ಮುಂದಿನ ಭಾಗ.

ನೇರ ನಿಷ್ಠುರ ರಾಜನೀತಿಜ್ಞ

ಸುಮಂತ್ರನ ರಾಜ ನಿಷ್ಠೆ ಮತ್ತು ನಿಷ್ಠುರ ಸ್ವಭಾವ ಎದ್ದು ಕಾಣುವುದು ಕೈಕೇಯಿಯ ಅರಮನೆಯಲ್ಲಿ. ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕದ ಸಂಭ್ರಮವೆಂದು ತಿಳಿದ ಪ್ರಜೆಗಳ ಸಂತೋಷ ಮೇರೆ ಮೀರಿತ್ತು. ಅದೇ ಕಾಲಕ್ಕೆ ಕೈಕೇಯಿಯ ಅರಮನೆಯಲ್ಲಿ ದೊರೆ ದಶರಥ ಧರ್ಮವೆನ್ನುವ ಹಗ್ಗದಿಂದ ಬಿಗಿಯಲ್ಪಟ್ಟಿದ್ದ. ರಾಮನನ್ನು ಒಮ್ಮೆ ನೋಡಬೇಕೆಂದು ಚಡಪಡಿಸುತ್ತಿದ್ದ. ವಶಿಷ್ಠರು ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ಸುವಸ್ತುಗಳನ್ನು ಸಿದ್ಧಮಾಡಿಕೊಂಡಿದ್ದರು. ಮುಹೂರ್ತ ಮೀರಿ ಹೋಗದಂತೆ ರಾಜನನ್ನು ಕೈಕೇಯಿಯ ಅರಮನೆಯಿಂದ ಗೌರವದ ಬಿನ್ನವತ್ತಳೆಯ ಮೂಲಕ ಕರೆತರುವ ಹೊಣೆ ಮಂತ್ರಿಯದಾಗಿತ್ತು. ಆತ ಕೈಕೇಯಿಯ ಅರಮನೆಗೆ ಹೋಗಿ ದಶರಥನನ್ನು ಸ್ತುತಿಮಾಡುತ್ತಾ “ಇಂದ್ರನ ಸಾರಥಿಯಾದ ಮಾತಲಿಯು ದೇವರಾಜನನ್ನು ಎಚ್ಚರಗೊಳಿಸುವಂತೆ ನಾನು ನಿನ್ನನ್ನು ಪಟ್ಟಾಭಿಷೇಕದ ಸುಮೂಹರ್ತಕ್ಕಾಗಿ ಆಗಮಿಸಲು ವಿನಂತಿಸುವುತ್ತಿದ್ದೇನೆ, ಈ ಕೂಡಲೇ ಸಿದ್ಧನಾಗು” ಎಂದು ಹೊರಗಡೆಯಿಂದಲೇ ಬಗೆಬಗೆಯಾಗಿ ಹೊಗಳುತ್ತಾನೆ. ಅವೆಲ್ಲವೂ ರಾಜನಿಗೆ ತನ್ನ ಮರ್ಮಸ್ಥಳವನ್ನು ಕತ್ತರಿಸುವ ಆಯುಧಗಳಾಗಿ ಇರಿಯುತ್ತಿದ್ದವು. ಆತನಲ್ಲಿ ಮಾತು ಹೊರಡುತ್ತಿರಲಿಲ್ಲ. ಆಗ ಕೈಕೇಯಿ “ನಿಮ್ಮ ಮಹಾರಾಜ ರಾಮನ ಪಟ್ಟಾಭಿಷೇಕಮಾಡಬೇಕೆನ್ನುವ ಉತ್ಸಾಹದಲ್ಲಿ ರಾತ್ರಿಯೆಲ್ಲಾ ಎಚ್ಚರಗೊಂಡಿದ್ದನು. ಯಶೋವಂತನಾದ ರಾಜನಿಗೆ ಇದೀಗ ಆಯಾಸದಿಂದ ನಿದ್ರೆ ಹತ್ತುತ್ತಿದೆ. ರಾಮನನ್ನು ಒಮ್ಮೆ ಇಲ್ಲಿಗೆ ಬರುವಂತೆ ಹೇಳು” ಎನ್ನುತ್ತಾಳೆ.

ಆಕೆಗೆ ದೊರೆ ತನ್ನ ಕೈಯಿಂದ ಜಾರಿಹೋದರೆ ಕೆಲಸ ಕೆಡುತ್ತದೆ, ಪ್ರಜೆಗಳೆಲ್ಲ ರಾಮನ ಪರವಾಗಿ ನಿಂತು ತನ್ನನ್ನೇ ತಿರಸ್ಕರಿಸಬಹುದು ಎನ್ನುವ ಭಯಕಾಡುತ್ತಿತ್ತು. ಸುಮಂತ್ರನಿಗೆ ಅಲ್ಲಿನ ನಡತೆಯನ್ನು ನೋಡಿ ಸಂಶಯವುಂಟಾಯಿತು. ರಾಜನ ಅಭಿಪ್ರಾಯ ತಿಳಿಯದೇ ತಾನು ಹೇಗೆ ಹೋಗಲಿ ಎನ್ನುತ್ತಾನೆ. ಆಗ ದಶರಥ ವಿವಶನಾಗಿ “ಸುಂದರನಾದ ರಾಮನನ್ನು ತಾನು ನೋಡಬೇಕೆಂದಿದ್ದೇನೆ. ಅವನನ್ನು ಕರೆದುಕೊಂಡು ಬಾ” ಎನ್ನುತ್ತಾನೆ. ಕೈಕೇಯಿ “ಯಶೋವಂತನಾದ ರಾಮನನ್ನು ಶೀಘ್ರವಾಗಿ ಕರೆತಾ” ಎನ್ನುವ ಮಾತುಗಳು ಆತನನ್ನು ಯೋಚಿಸುವಂತೆ ಮಾಡಿದವು. ರಾಮನನ್ನು ಕರೆತರಲು ಸಭೆಗೆ ಹೊರಟವನಿಗೆ ಸಮಾಧಾನವಾಗಲಿಲ್ಲ. ರಾಮನಲ್ಲಿಗೆ ಬರದೇ ನೇರವಾಗಿ ಸಭಗೆ ಬರುತ್ತಾನೆ. ವಿಷಯ ಎಲ್ಲಿಯೋ ಹದತಪ್ಪುತ್ತಿದೆಯೆಂದು ಆತನಿಗೆ ಎನಿಸುತ್ತಿತ್ತು. ಅಲ್ಲಿ ನೆರೆದ ರಾಜರು ರಾಜ ಮತ್ತು ರಾಮ ಇಬ್ಬರು ಇನ್ನೂ ಬರಲಿಲ್ಲವಲ್ಲವೆಂದು ತಮ್ಮತಮ್ಮಲ್ಲೇ ಮಾತಾಡಿಕೊಳ್ಳುತ್ತಿರುವಾಗ ಸುಮಂತ್ರ ಅವರೆಲ್ಲರೂ ರಾಜನನ್ನು ಕಾಯುತ್ತಿದ್ದಾರೆ ಎನ್ನುವುದನ್ನು ತಿಳಿಸುವ ನೆವದಿಂದ ಮತ್ತೊಮ್ಮೆ ಕೈಕೇಯಿಯ ಅರಮನೆಗೆ ಬಂದ. ರಾಜನನ್ನು ಇಂದ್ರ-ವರುಣ-ಕುಬೇರರಿಗೆ ಹೋಲಿಸಿ ಆತನ್ನು ಕಾಣುವ ಉದ್ಧೇಶದಿಂದ ಅರಮನೆಯ ದ್ವಾರದಲ್ಲಿ ಋಷಿಪ್ರಮುಖರು, ರಾಜರುಗಳೂ, ಪೌರಜಪದರೂ ಕಾಯುತ್ತಿದ್ದಾರೆ, ಬೇಗ ಸಿದ್ಧನಾಗುವಂತೆ ಸ್ತೋತ್ರಮಾಡತೊಡಗಿದ. ಒಳಗಡೆ ಇರುವ ರಾಜನ ಮುಖದರ್ಶನವಾಗಲಿಲ್ಲ. ಕೈಕೇಯಿಯ ಪ್ರೇರಣೆಗೆ ಒಳಗಾದ ರಾಜನಿಗೆ ರಾಮ ಬರಲಿ ಎಂದು ಅನಿಸಿತ್ತು. ಅದನ್ನು ತಪ್ಪಿದ ಸುಮಂತ್ರನಿಗೆ “ತನ್ನ ಆಜ್ಞಾನುಸಾರವಾಗಿ ರಾಮನನ್ನು ಶೀಘ್ರವಾಗಿ ಇಲ್ಲಿಗೆ ಕರೆದು ತಾ” ಎಂದು ಸಿಡುಕಿದ.

ಈಗ ಮಾತ್ರ ಸುಮಂತ್ರನಿಗೆ ಬೇರೆ ವಿಕಲ್ಪಗಳಿರಲಿಲ್ಲ. ಅನಿವಾರ್ಯವಾಗಿ ರಾಮನ ಅರಮನೆಗೆ ಹೋಗಿ “ರಾಜ ನಿನ್ನನ್ನು ಶೀಘ್ರವಾಗಿ ಒಮ್ಮೆ ಅಲ್ಲಿಗೆ ಬರಹೇಳಿದ್ದಾನೆ” ಎನ್ನುತ್ತಾನೆ. ಕೈಕೇಯಿಯಲ್ಲಿಗೆ ಹೋದ ರಾಮನಿಗೆ ನಡೆದ ವಿಷಯ ಮನದಟ್ಟಾಗುತ್ತದೆ. ರಾಜ ಮಾತನ್ನೇ ಆಡಲಿಲ್ಲ. ಯಾವ ಕೈಕೇಯಿ ರಾಮನನ್ನು ಮಾತೆಯೆನ್ನುವ ಭಾವದಿಂದ ಇದುತನಕ ನೋಡುತ್ತಿಳೋ ಅವಳ ಮಾತು ಅರಣ್ಯವಾಸದೆಡೆಗೆ ತನ್ನನ್ನು ಕಳುಹಿಸುತ್ತಿದೆ ಎನ್ನುವದನ್ನು ತಿಳಿದಾಗ ರಾಮ ಕೊಂಚವೂ ಯೋಚಿಸುವುದಿಲ್ಲ. ತನ್ನ ತಾಯಿಯನ್ನು, ಇತರ ಪರಿವಾರದವರನ್ನೂ ಸಮಾಧಾನಿಸಿ ಅರಣ್ಯಕ್ಕೆ ಹೋಗಲು ತಂದೆಯ ಅಪ್ಪಣೆಯನ್ನು ಪಡೆಯಲು ಬರುತ್ತಾನೆ. ಆದರೆ ಈ ವೇಳೆಗೆ ಸುಮಂತ್ರ ಕೈಕೇಯಿಯ ಅರಮನೆಯ ಹೊರಗೆ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ರಾಜನನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಸಿದ್ಢತೆಯನ್ನು ಮಾಡಿಕೊಂಡು ರಾಜನ ಅನುಮತಿ ಸಿಕ್ಕಿತೋ ಎಂದು ಕಾಯುತ್ತಿರುತ್ತಾನೆ. ಆತನ ಎಲ್ಲ ನಿರೀಕ್ಷೆಗೆ ವಿರುದ್ದವಾಗಿ ರಾಮ ತನ್ನ ತಂದೆಯ ಹತ್ತಿರ,

ನೈವಾಹಂ ರಾಜ್ಯಮಿಚ್ಛಾಮಿ ನ ಸುಖಂ ನ ಚ ಮೈಥಿಲೀಮ್.
ನೈವ ಸರ್ವಾನಿಮಾನ್ ಕಾಮಾ ನ್ನಸ್ವರ್ಗಂ ನೈವ ಜೀವಿತಮ್৷৷ಅಯೋ.34.47৷৷

ನನಗೆ ಸತ್ಯದ ಹೊರತಾಗಿ ರಾಜ್ಯ, ಸುಖ, ಜೀವನ ಹೆಚ್ಚೇನು ಸೀತೆಯೂ ಸಹ ಬೇಕಾಗಿಲ್ಲವೆನ್ನುವ ಮಾತನ್ನು ಹೇಳಿದನೋ, ಅದನ್ನು ಕೇಳಿದ ಸುಮಂತ್ರನ ಕೈ ಕಟ್ಟಿಹೋಯಿತು. ಆದರೆ ತನ್ನ ಪ್ರಾಣಕ್ಕಿಂತ ಪ್ರಿಯನಾದ ರಾಮ ನಾರುಮಡಿಯನ್ನು ಧರಿಸಿ ಅರಣ್ಯಕ್ಕೆ ಹೋಗುವುದನ್ನು ಕಲ್ಪಿಸಿಕೊಳ್ಳಲಾಗದ ದಶರಥ ಅಸಹಾಯಕತೆಯಿಂದ ಮೂರ್ಛೆಹೋದಾಗ ಸುಮಂತ್ರನೂ ಒಮ್ಮೆ ಮೂರ್ಛಿತನಾದ. ಸಾವರಿಸಿಕೊಂಡು ಎದ್ದವನಿಗೆ ತಡೆಯಲಾಗಲಿಲ್ಲ. ಪರೋಕ್ಷವಾಗಿ ಕೈಕೇಯಿಯ ದಾಸನಾಗಿ ಇತರ ರಾಣಿಯರನ್ನು ಕಡೆಗಣಿಸಿದ ದಶರರಥ ಮಾವಿನ ಮರವನ್ನು ಕಡಿದು ಬೇವಿನಮರವನ್ನು ಬೆಳೆಸಿದುದರ ಫಲವಿದು ಎಂದು ಕೈಕೇಯಿಯನ್ನು ದೂಷಿಸುತ್ತಾನೆ. ನಿನ್ನ ಮಗನೇ ರಾಜನಾಗಲಿ, ನಾವೆಲ್ಲರೂ ಶ್ರೀರಾಮನನ್ನು ಅನುಸರಿಸಿ ಆತ ಹೋಗುವಲ್ಲಿಗೇ ಹೋಗುತ್ತೇವೆ, ಮರ್ಯಾದೆಗೆಟ್ಟವಳು ನೀನು ಎನ್ನುವ ಮಾತುಗಳನ್ನು ದಿಟ್ಟತನದಿಂದ ರಾಜನ ಎದುರೇ ಆಡುತ್ತಾನೆ. ಹೀಗೆ ಹೇಳುವಾಗ ಕೈಕೇಯಿಯ ತಾಯಿಗೂ ಇಂತಹುದೇ ಕೆಟ್ಟಗುಣವಿತ್ತು ಎನ್ನುತ್ತಾ ಒಂದು ಕಥೆಯನ್ನು ಹೇಳುತ್ತಾನೆ.

ಅಶ್ವಪತಿ ರಾಜನಿಗೆ ಸಾಧುವೊಬ್ಬ ಪ್ರಾಣಿಗಳ ಭಾಷೆಯನ್ನು ಅರ್ಥಮಾಡಿಕೊಳ್ಳುವ ವರವನ್ನು ಕೊಟ್ಟಿದ್ದ. ಅದನ್ನು ಯಾವ ಕಾರಣಕ್ಕೂ ಇನ್ನೊಬ್ಬರಿಗೆ ಹೇಳಬಾರದೆನ್ನುವ ನಿಬಂಧನೆಯನ್ನು ಹಾಕಿದ್ದ. ಒಮ್ಮೆ ತನ್ನ ಪಲ್ಲಂಗದ ಕೆಳಗೆ ಹರಿದಾಡುತ್ತಿದ್ದ ಇರುವೆಗಳ ಮಾತನ್ನು ಕೇಳಿ ಆತನಿಗೆ ನಗು ಬಂತು. ಕೈಕೇಯಿಯ ತಾಯಿಗೆ ಆತ ತನ್ನ ಕುರಿತು ನಗುತ್ತಿದ್ದಾನೆನ್ನುವ ಸಂಶಯ! ರಾಜನಲ್ಲಿ ನಕ್ಕಿದ್ದು ಯಾಕೆ ಎಂದು ಕೇಳಿದಳು. ರಾಜ “ಇದು ಗುಟ್ಟು, ಹೇಳಲಾಗದು. ಹೇಳಿದರೆ ನನಗೆ ಒಡನೆಯೇ ಮರಣ ಸಂಭವಿಸುತ್ತದೆ” ಎಂದು ಹೇಳಿದ. ಆದರೆ ಸಂಶಯ ಸ್ವಭಾವದವಳಾಗಿದ್ದ ರಾಣಿ “ಶಂಸ ಮೇ ಜೀವ ವಾ ಮಾ ವಾ ನ ಮಾಮಪಹಸಿಷ್ಯಸಿ” ನೀನು ಬದುಕು ಇಲ್ಲವೇ ಸಾಯಿ, ಈ ಗುಟ್ಟು ತನಗೆ ಹೇಳಲೇಬೇಕು ಎಂದು ಹಟಹಿಡಿದ ಗಯ್ಯಾಳಿಯಾಗಿದ್ದಳು. ರಾಜ ಮತ್ತೊಮ್ಮೆ ತನಗೆ ಕಲಿಸಿದ ಸಾಧುವನ್ನು ಈ ವಿಷಯದಲ್ಲಿ ಕೇಳಿದಾಗ ಆತ ನಿನ್ನ ಪತ್ನಿ ಸತ್ತುಹೋದರೂ, ಹಾಳಾಗಿ ಹೋದರೂ ಈ ವಿಷಯವನ್ನು ಹೇಳಕೂಡದು ಎಂದು ಎಚ್ಚರಿಸಿದ. ಆಗ ಅಶ್ವಪತಿ ಕೈಕೇಯಿಯ ತಾಯಿಯನ್ನು ಪರಿತ್ಯಜಿಸಿ ನೆಮ್ಮದಿಯಿಂದ ಬದುಕಿದ. ಈ ಕಥೆ ಕೈಕೇಯಿಯನ್ನು ದೂಷಿಸಿದಂತೆ ಕಂಡುಬಂದರೂ ಅದರ ಗುರಿ ದಶರಥನಾಗಿದ್ದ. ಈಗಲಾದರೂ ಧೈರ್ಯತೆಗೆದುಕೊಂಡು ಕೈಕೇಯಿಯನ್ನು ತ್ಯಜಿಸಿ ರಾಜ್ಯವನ್ನು ಉಳಿಸು ಎನ್ನುವ ಸೂಚನೆ ಅದರಲ್ಲಿ ಇತ್ತು.

ಈ ವಿವರಗಳು ಕೈಕೇಯಿಯಲ್ಲಿ ಯಾವ ಪರಿಣಾಮವನ್ನೂ ಬೀರದೇ ಇರುವುದನ್ನು ನೋಡಿ ಕೊನೆಯ ಅಸ್ತ್ರವಾಗಿ ದೀನನಾಗಿ “ಸನ್ಮಾರ್ಗಪ್ರವರ್ತಕನಾದ ರಾಮನನ್ನು ದುಷ್ಟೆಯಾದ ಕೈಕೇಯಿಯು ಅರಣ್ಯಕ್ಕೆ ಕಳುಹಿಸಿದಳು ಎನ್ನುವ ದೊಡ್ಡ ಅಪವಾದಕ್ಕೆ ಗುರಿಯಾಗಬೇಡ” ಎಂದು ಬೇಧನೀತಿಯನ್ನು ಬೋಧಿಸುತ್ತಾನೆ. ಒಮ್ಮೆ ಸಾಮದಿಂದ ಇನ್ನೊಮ್ಮೆ ಬೇಧದಿಂದ ಮಗದೊಮ್ಮೆ ದಯೆತೋರು ಎಂದು ಕೊನೆಗೆ ದಂಡಪ್ರಯೋಗದವರೆಗೂ ಸುಮಂತ್ರ ಪರಿಸ್ಥಿತಿಯನ್ನು ಸಂಭಾಳಿಸಲು ಪ್ರಯತ್ನಿಸುತ್ತಾನೆ. ಆದರೆ ಯಾವಾಗ ರಾಮ ಅರಣ್ಯಕ್ಕೆ ಹೋಗಲು ಸಿದ್ಧನಾಗುತ್ತಾನೋ ಆಗ ಆತ ಹತಾಶೆಯಿಂದ ಮೌನವಾಗಬೇಕಾಗುತ್ತದೆ. ದಶರಥನ ಆಜ್ಞೆಯಂತೆ ರಥದ ಸೂತನಾಗಿ ರಾಮನನ್ನು ಅರಣ್ಯಕ್ಕೆ ಬಿಡಲು ಹೊರಡುತ್ತಾನೆ. ಸುಮಂತ್ರ ರಾಜ್ಯಕ್ಕಾಗಿ ಕರ್ತವ್ಯನಿಷ್ಟನೇ ಹೊರತೂ ವಯಕ್ತಿಕವಾಗಿ ರಾಜನಿಗೆ ಅಲ್ಲ. ರಾಮನನ್ನು ರಥದಲ್ಲಿ ಕುಳ್ಳಿರಿಸಿ ಹೊರಡುವಾಗ ದಶರಥ ತನ್ನ ಪತ್ನಿಯಾದ ಕೌಸಲ್ಯೆ ಮತ್ತು ಸುಮಿತ್ರೆಯರ ಸಂಗಡ ರಥದ ಹಿಂದೆ ಓಡೋಡಿ ಬರುತ್ತಿದ್ದರೆ ಸುಮಂತ್ರ ರಾಮನ ಆಜ್ಞೆಯಂತೆ ಶೀಘ್ರವಾಗಿ ರಥವನ್ನು ಓಡಿಸಿಕೊಂಡು ಹೋಗುತ್ತಾನೆ.

ರಾಮಭಾವದಲ್ಲಿ ತನ್ನತನ ಮರೆತ

ಸಚಿವ, ಆಪ್ತ, ಸೂತ ಹೀಗೆ ಹಲವು ವಿಧಗಳಲ್ಲಿ ಅಯೋಧ್ಯೆಯ ರಾಜಮನೆತನವನ್ನು ಸೇವಿಸಿದ ಸುಮಂತ್ರ ರಾಮನನ್ನು ಶೃಂಗಬೇರಪುರದಿಂದ ಅರಣ್ಯಕ್ಕೆ ಕಳಿಸುವಾಗ ಮಾತ್ರ ಚಿಕ್ಕಮಗುವಿನಂತೆ ಅಳುತ್ತಾನೆ. ರಾಮನ ಗುಣ ಸುಮಂತ್ರನನ್ನು ಆತನ ಬಾಲ್ಯದ ನಡವಳಿಕೆಯಿಂದಲೇ ಸೆಳೆದಿತ್ತು. ರಾಮರಾಜ್ಯವನ್ನು ನೋಡಬೇಕೆಂದು ಆತ ದಶರಥನಿಗೆ ಎಲ್ಲಾಬಗೆಯ ಸಹಕಾರವನ್ನು ನೀಡಿದ್ದ. ಅರಣ್ಯದಲ್ಲಿ ಸುಮಂತ್ರ ರಾಮನ ಸಂಗದಲ್ಲಿ ತನ್ನನ್ನೇ ಮರೆಯುತ್ತಾನೆ. ರಾಮನ ಬಾಯಲ್ಲಿ ತನ್ನ ಕುರಿತಾಗಿ “ಸುಮಂತ್ರ! ಭವ ಮೇ ಪ್ರತ್ಯನನ್ತರಃ- ಸುಮಂತ! ನೀನು ನನ್ನ ಸಮೀಪದಲ್ಲಿಯೇ ಇರು” ಎನ್ನುವ ಮಾತುಗಳನ್ನು ಕೇಳಲು ಬಯಸಿದ್ದ. ಆತನಿಗೆ ಅಯೋಧ್ಯೆಯ ಯಾವ ಅಧಿಕಾರವೂ ಬೇಡವಾಗಿತ್ತು. ನೀನೇನಾದರೂ ತನ್ನನ್ನು ತ್ಯಜಿಸಿದರೆ ಅಯೋಧ್ಯೆಯ ಪ್ರಜಾವರ್ಗ ತನ್ನನ್ನು ರಾಮನನ್ನು ಅರಣ್ಯಕ್ಕೆ ಕಳುಹಿಸಿಬಂದವನೆಂದು ದೂಷಿಸುತ್ತಾರೆ. ಅದರ ಬದಲು ತಾನು ಕುದೆರಗಳ ಸಮೇತ ಬೆಂಕಿಯಲ್ಲಿ ಬಿದ್ದು ಸಾಯುತ್ತೇನೆ ಎಂದು ಅಲವತ್ತುಕೊಳ್ಳುತ್ತಾನೆ. ರಾಮ ಸ್ತಿತಪ್ರಜ್ಞ; ಯಾವಾಗ ಆತ ಗಂಗಾನದಿಯನ್ನು ದಾಟಲು ಹೊರಟನೋ ಆಗ ಸುಮಂತ್ರನಿಗೆ ದುಃಖ ತಡೆದುಕೊಳ್ಳಲಾಗಲಿಲ್ಲ. ತನ್ನತನವನ್ನೇ ಮರೆಯುತ್ತಾನೆ. ರಾಮ ಆತನಿಗೆ ಅಯೋಧ್ಯೆಯಲ್ಲಿ ರಾಜನನ್ನು ಮತ್ತು ತಾಯಂದಿರನ್ನು ಜಾಗರೂಕನಾಗಿ ರಕ್ಷಿಕೊಂಡಿರು ಎನ್ನುವ ಆದೇಶವನ್ನು ನೀಡುತ್ತಾನೆ. ಎಲ್ಲಿಯಾದರೂ ಭರತ ಮತ್ತು ಕೈಕೇಯಿಯಿಂದ ಅವರಿಗೆ ತೊಂದರೆಯುಂಟಾದೀತೋ ಎನ್ನುವ ಸಂಶಯ ರಾಮನಿಗೆ ಇದ್ದೇ ಇತ್ತು. ರಾಜನಿಷ್ಟೆಯುಳ್ಳ ಸುಮಂತ್ರ ಅವರನ್ನು ರಕ್ಷಿಸಬಲ್ಲನೆನ್ನುವ ನಂಬಿಕೆಯಿತ್ತು. ಅದನ್ನು ವಿವರವಾಗಿ ತಿಳಿಸುತ್ತಾನೆ. ಜೊತೆಗೆ ಸುಮಂತ್ರ ಓರ್ವನೇ ಹಿಂದಿರುಗಿರುವುದನ್ನು ಗಮನಿಸಿದ ಕೈಕೇಯಿಗೆ ರಾಮ ಬೇರೆಲ್ಲಿಯೂ ಹೋಗದೇ ಅರಣ್ಯಕ್ಕೆ ಹೋಗಿದ್ದಾನೆ ಎನ್ನುವ ನಂಬಿಕೆ ಬರುತ್ತದೆ.

ಬರಿದಾದ ರಥವನ್ನು ತೆಗೆದುಕೊಂಡು ಅರಮನೆಗೆ ಬಂದು ದಶರಥನನ್ನು ನೋಡಿದಾಗ ಸುಮಂತ್ರನಿಗೆ ರಾಮನ ಅಗಲುವಿಕೆಯ ನೋವು ತಡೆದುಕೊಳ್ಳಲಾಗುವುದಿಲ್ಲ. ದಶರಥ ರಾಮ, ಸೀತೆ ಲಕ್ಷ್ಮಣರ ಸಂದೇಶ ಏನಿತ್ತು ಎಂದು ಕೇಳಿದಾಗ ಭರತನಿಗೆ ಕೈಕೇಯಿಯನ್ನು ನೋಡುವಂತೆ ಕೌಸಲ್ಯೆ ಮತ್ತು ಸುಮಿತ್ರೆಯರನ್ನೂ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿರುವುದನ್ನು ಮತ್ತು ಲಕ್ಷ್ಮಣನ ಕ್ರೋಧದ ಮಾತುಗಳನ್ನು ಯಥಾವತ್ತಾಗಿ ಹೇಳಿದರೂ ಸೀತೆ ಕೈಕೇಯಿಯ ವಿಷಯದಲ್ಲಿ ಹೇಳಿರುವ ದೂರನ್ನು ಮಾತ್ರ ಬಹಿರಂಗಪಡಿಸುವುದಿಲ್ಲ. ಮುಂದೆ ಕೈಕೇಯಿಯ ಅಧೀನದಲ್ಲಿ ಇರಬೇಕಾದ ಕಾರಣ, ಸೀತೆ ಹೇಳಿದ ಕೈಕೇಯಿಯ ಸಂಬಂಧಿತ ದೂರನ್ನು ಕೇಳಿದ ಅವಳು ತೊಂದರೆಕೊಟ್ಟಾಳು ಎನ್ನುವ ಪ್ರಜ್ಞೆ ಸುಮಂತ್ರನಿಗಿತ್ತು. ವಾಲ್ಮೀಕಿಯೂ ಕೈಕೇಯಿಯ ವಿಷಯದಲ್ಲಿ ಸೀತೆಯ ಅಭಿಪ್ರಾಯವನ್ನು ತಿಳಿಸದೇ ಗೂಢವಾಗಿಟ್ಟಿದ್ದಾನೆ. ನಂದೀಗ್ರಾಮದಲ್ಲಿ ಭರತ ಆಳುವಾಗ ಆತನಿಗೆ ಕೋಶ ಮತ್ತು ರಾಜ್ಯದ ಆಡಳಿತದ ವಿಷಯದಲ್ಲಿ ನೆರವನ್ನು ಸಮರ್ಥವಾಗಿಯೇ ಸುಮಂತ್ರ ನೀಡುತ್ತಾನೆ.

ಧವಳ ಧಾರಿಣಿ ಅಂಕಣ dasharatha sumantra

ಭೂತ ಭವಿಷ್ಯತ್ತನ್ನು ಬಲ್ಲ ಪ್ರಾಜ್ಞ

ಸುಮಂತ್ರ ರಾಮ ವನವಾಸದಿಂದ ಪುನಃ ಬಂದು ಅಯೋಧ್ಯೆಯ ಪಟ್ಟವನ್ನು ಏರಿದಮೇಲೂ ಅವನ ಅಮಾತ್ಯನಾಗಿಯೇ ಮುಂದುವರಿಯುತ್ತಾನೆ. ಹೇಗೆ ಕರ್ತವ್ಯ ನಿಷ್ಠನೋ, ಅದೇ ರೀತಿ ಮಹಾತ್ಮರ ಒಲವನ್ನೂ ಆತ ಗಳಿಸಿಕೊಂಡಿದ್ದ. ಅವರು ಹೇಳಿದ ವಿಷಯಗಳನ್ನು ಸಂದರ್ಭ ಬಂದಾಗ ಮಾತ್ರ ಹೇಳುತ್ತಿದ್ದ. ಈ ಹಿಂದೆ ಮಹಾತ್ಮರಾದ ಸನತ್ಕುಮಾರರು ದಶರಥನಿಗೆ ಋಷ್ಯಶೃಂಗರಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸಿದರೆ ಮಕ್ಕಳಾಗುವರು ಎನ್ನುವುದನ್ನು ತಿಳಿಸಿದಂತೆ ಆತನಿಗೆ ರಾಮನ ನಂತರದ ಅಯೋಧ್ಯೆ ಹೇಗಿರಬಹುದೆನ್ನುವ ವಿಷಯವೂ ತಿಳಿದಿತ್ತು. ಅದರ ವಿವರ ಹೀಗಿದೆ.

ರಾಮ ಜನಪಾವದಕ್ಕೆ ಅಂಜಿ ಸೀತೆಯನ್ನು ಅರಣ್ಯಕ್ಕೆ ಬಿಟ್ಟುಬರುವಂತೆ ಲಕ್ಷ್ಮಣನಿಗೆ ಆಜ್ಞೆಮಾಡುತ್ತಾನೆ. ಅಣ್ಣನ ಆಜ್ಞೆಯನ್ನು ಶಿರಸಾವಹಿಸಿ ಲಕ್ಷ್ಮಣ ಆಕೆಯನ್ನು ವಾಲ್ಮೀಕಿ ಋಷಿಗಳ ಆಶ್ರಮದ ಹತ್ತಿರ ಬಿಡಲು ಹೋಗುವಾಗ ಆ ರಥವನ್ನು ನಡೆಸುವ ಸೂತನಾದವ ಸುಮಂತ್ರನೇ. ಸೀತೆಯನ್ನು ಬಿಟ್ಟು ಬರುವಾಗ ಲಕ್ಷ್ಮಣನ ಸುಮಂತ್ರನ ಹತ್ತಿರ ಗೋಳಾಡುತ್ತಾನೆ. ಈ ಮೊದಲು ರಾಮ ಲಕ್ಷ್ಮಣ ಮತ್ತು ಸೀತೆಯರನ್ನು ಅರಣ್ಯಕ್ಕೆ ಬಿಟ್ಟುಬರುವಾಗ ದುಃಖಿಯಾಗಿದ್ದ ಸುಮಂತ್ರ ಇಲ್ಲಿ ಮಾತ್ರ ಶೋಕಪಡುವುದಿಲ್ಲ ಬದಲಾಗಿ ಲಕ್ಷ್ಮಣನಿಗೆ ಹೀಗೆ ಆಗಬೇಕಾದದ್ದು ಬಲು ಹಿಂದೆಯೇ ನಿರ್ಧಾರಿತವಾಗಿದೆ ಎನ್ನುತ್ತಾನೆ. ಒಂದು ಸಂದರ್ಭದಲ್ಲಿ ದಶರಥನನ್ನು ನೋಡಲು ದೂರ್ವಾಸರು ಬಂದಿದ್ದರು. ದಶರಥ ಕುತೂಹಲದಿಂದ ತನ್ನ ವಂಶ ಎಲ್ಲಿಯತನಕ ಮುಂದುವರೆಯುತ್ತದೆ ಎನ್ನುವ ಭವಿಷ್ಯವನ್ನು ದೂರ್ವಾಸರಲ್ಲಿ ಕೇಳಿದ್ದ. ಅದಕ್ಕೆ ದೂರ್ವಾಸರು ಮಕ್ಕಳಿಲ್ಲದ ದಶರಥನಿಗೆ ನಿನ್ನ ಉದರದಲ್ಲಿ ಮಹಾವಿಷ್ಣುವೇ ಜನಿಸುತ್ತಾನೆ ಎನ್ನುತ್ತಾರೆ. ಅಷ್ಟೇ ಅಲ್ಲ; ಭೃಗು ಮಹರ್ಷಿಯ ಹೆಂಡತಿಯಾದ ಖ್ಯಾತಿಯನ್ನು ಶ್ರೀಮನ್ನಾರಾಯಣ ಕೊಂದಿರುವ ಕಾರಣ ಭೂಮಿಯಲ್ಲಿ ಜನಿಸಿ ವಿರಹದುಃಖವನ್ನು ತನ್ನಂತೆಯೇ ಅನುಭವಿಸು ಎಂದು ಭೃಗು ಕೊಟ್ಟ ಶಾಪದ ವಿಷಯವನ್ನು ತಿಳಿಸುತ್ತಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಈ ಕಾರಣದಿಂದ ಆತ ಭೂಮಿಯಲ್ಲಿ ಅವತರಿಸಿದರೂ ತನ್ನ ಪತ್ನಿಯ ವಿರಹದ ನೋವನ್ನು ಅನುಭವಿಸಬೇಕಾಗುತ್ತದೆ. ಆತನ ಕಾಲದಲ್ಲಿ ಅಯೋಧ್ಯೆ ತುಂಬಾ ಪ್ರವರ್ಧಮಾನಕ್ಕೆ ಬರುತ್ತದೆ. ಹನ್ನೊಂದು ಸಾವಿರ ವರ್ಷಗಳಕಾಲ ಆತ ರಾಜ್ಯಭಾರವನ್ನು ಮಾಡಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ. ಆತನಿಗೆ ಇಬ್ಬರು ಗಂಡುಮಕ್ಕಳು ಜನಿಸುತ್ತಾರೆ ಎಂದು ದೂರ್ವಾಸರು ಸುಮ್ಮನಾದರು. ಆದರೆ ಸುಮಂತ್ರ ಅವರನ್ನು ಪ್ರತ್ಯೇಕವಾಗಿ ಭೇಟಿಮಾಡಿ ಪ್ರಾರ್ಥಿಸಿ ಇನ್ನೂ ಮುಂದಿನ ಗುಟ್ಟನ್ನು ಹೇಳಬೇಕೆಂದು ಕೇಳಿಕೊಂಡಾಗ “ರಾಮ ಇಬ್ಬರೂ ಗಂಡುಮಕ್ಕಳಿಗೂ ಅಯೋಧ್ಯೆಯಲ್ಲಿ ಪಟ್ಟಾಭಿಷೇಕಮಾಡುವುದಿಲ್ಲ, ಬೇರೆಯದೇ ಆದ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡುತ್ತಾನೆ ಎಂದಿದ್ದಾರೆ” ಎಂದು ನುಡಿದು ಇದೆಲ್ಲವೂ ದೈವಸಂಕಲ್ಪ, ಶೋಕಪಡಬೇಡ ಎಂದು ಸಮಾಧಾನ ಮಾಡುತ್ತಾನೆ. ದೇವಗೌಪ್ಯತೆಯನ್ನು ಮತ್ತು ಋಷಿ ಗೌಪ್ಯತೆಯನ್ನು ಕಾಪಾಡುವ ಮಹತ್ವದ ಹೊಣೆಗಾರಿಕೆಯನ್ನು ಬಲ್ಲ ಸುಮಂತ್ರನಂತವ ಅಯೋಧ್ಯೆಯ ಬಲಿಷ್ಟ ಸಾಮ್ರಾಜ್ಯದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ.

ಮಹಾಕಾವ್ಯದಲ್ಲಿ ನಾಯಕನ ಪಾತ್ರ ರೂಪುಗೊಳ್ಳಬೇಕಾದರೆ ಅದಕ್ಕೆ ಪೂರಕವಾದ ಪೋಷಕ ಪಾತ್ರಗಳಿರಬೇಕಾಗುತ್ತದೆ. ಅಮಾತ್ಯನ ಪಾತ್ರ ಅಂತಹದು. ಸಚಿವನಾಗಿರಬೇಕಾದವ ಉದಾರಚರಿತ, ಕುಲೀನತೆಯಲ್ಲಿ ಶ್ರೇಷ್ಠ, ಕಾರ್ಯದಕ್ಷತೆ, ಜಿತೇಂದ್ರಿಯತೆ, ಸತ್ಕುಲಪ್ರಸೂತರೊಡನೆ ಸಂಪರ್ಕ, ಶೌರ್ಯ, ಕೃತಜ್ಞತೆ ಮತ್ತು ಸತ್ಯನಿಷ್ಠೆ ಇವುಗಳಿಂದ ಕೂಡಿರಬೇಕಾಗಿರುತ್ತದೆ. ಸುಮಂತ್ರನಲ್ಲಿ ಇವೆಲ್ಲಗುಣಗಳಿದ್ದವು. ಅದರೆ ಆತನ ಜನ್ಮ ಮತ್ತು ತಂದೆತಾಯಿಗಳ ವಿವರ ಸಿಗುವುದಿಲ್ಲ. ಅವೆಲ್ಲವೂ ಮಹಾಕಾವ್ಯದ ನಾಯಕನ ನೆರಳಿನಲ್ಲಿ ಅಡಗಿ ಕುಳಿತಿವೆ. ರಾಮ ನಿರ್ಯಾಣಗೈಯುವ ಕಾಲಕ್ಕೆ ಈತನೂ ಸಹ ರಾಮನೊಂದಿಗೇ ಸರಯೂ ನದಿಯಲ್ಲಿ ಐಕ್ಯನಾಗಿ ಸಾಂತಾನಿಕವೆನ್ನುವ ಲೋಕವನ್ನು ಪಡೆಯುತ್ತಾನೆ.

ಎರಡು ತಲೆಮಾರಿನ ತನಕ ಅಯೋಧ್ಯೆಯನ್ನು ಎಲೆಯ ಮರೆಯಲ್ಲಿ ರಕ್ಷಿಸಿದವ ಸುಮಂತ್ರ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸಾಕೇತದ ಅಮಾತ್ಯ ಸುಮಂತ್ರ, ರಾಮಾಯಣದ ರಹಸ್ಯನಿಧಿ

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ

ನನ್ನ ದೇಶ ನನ್ನ ದನಿ ಅಂಕಣ:
ಅಂತರಜಾಲದಲ್ಲಿ ಮತ್ತು ಜಾಗತಿಕ ಮಾಧ್ಯಮಗಳಲ್ಲಿ, ಭಾರತ ಕುರಿತಂತೆ, ಭಯಾನಕವಾದ ಮತ್ತು ಅಪ್ಪಟ ಮಿಥ್ಯೆಯ ಮಾಹಿತಿ ದೊರೆಯುತ್ತದೆ. ಲೇಖಕ, ಚಿಂತಕ, ಸಂಶೋಧಕ, ಪ್ರೊಫೆಸರ್ ಕೌಶಿಕ್ ಗಂಗೋಪಾಧ್ಯಾಯ ಅವರು ತಮ್ಮ “ದ ಮೆಜಾರಿಟೇರಿಯನ್ ಮಿಥ್” ಗ್ರಂಥದಲ್ಲಿ ಕೊಟ್ಟಿರುವ ಅಂಕಿ ಅಂಶಗಳು, ಕೋಷ್ಟಕಗಳು (Tables) ಆಘಾತವನ್ನೇ ಉಂಟುಮಾಡುತ್ತವೆ.

VISTARANEWS.COM


on

ನನ್ನ ದೇಶ ನನ್ನ ದನಿ ಅಂಕಣ hindu oppression
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಬಳಿ ಯಾರಾದರೂ ಬಂದು, “ಸನಾತನ ಧರ್ಮ (Sanatan Dharma) ಮತ್ತು ಹಿಂದೂ ಸಮಾಜಗಳು (Hindu community) ಅಪಾಯದಲ್ಲಿವೆ. ವಿಶ್ವದಾದ್ಯಂತ ಇರುವ ಕಮ್ಯೂನಿಸ್ಟರು (Communists), ಇಸ್ಲಾಂ (Islam) ಮತ್ತು ಕ್ರೈಸ್ತ (Christian) ಮತೀಯ ಶಕ್ತಿಗಳು ಭಾರತವನ್ನು (India) ಸಂಪೂರ್ಣವಾಗಿ ನಾಶ ಮಾಡಲು ಪಣ ತೊಟ್ಟಿವೆ. ಕನಿಷ್ಠ ಒಂದು ಶತಮಾನದಿಂದ ಇಂತಹ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಸಮಾಜದ ಬೇರೆ ಬೇರೆ ಜಾತಿಗಳ ನಡುವೆ ಅಂತಃಕಲಹ, ವೈಮನಸ್ಯ, ದ್ವೇಷಗಳನ್ನು ಹುಟ್ಟುಹಾಕಲಾಗುತ್ತಿದೆ, ಲಿಂಗಾಯತರನ್ನು – ಸಿಖ್ಖರನ್ನು ಹಿಂದೂಗಳ ಮೇಲೆ ಎತ್ತಿಕಟ್ಟಲಾಗುತ್ತಿದೆ. ಅಮೆರಿಕಾ, ಇಂಗ್ಲೆಂಡ್, ಯೂರೋಪಿನ ಕೆಲವು ದೇಶಗಳು, ಇಸ್ಲಾಮೀ (Islamic) ದೇಶಗಳು ಈ ಗುರಿಯ ಬೆನ್ನುಹತ್ತಿ, ದೆಹಲಿ-ಕೇಂದ್ರಿತ ಲುಟ್ಯೆನ್ಸ್ ನೊಂದಿಗೆ ಷಾಮೀಲಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತದ ನೆರೆಹೊರೆಯ ಎಲ್ಲ ದೇಶಗಳನ್ನು, ಭಾರತದ ವಿರುದ್ಧವೇ ಎತ್ತಿಕಟ್ಟಲು ಚೀನಾ – ಪಾಕಿಸ್ತಾನಗಳು ಕೆಲಸ ಮಾಡುತ್ತಲೇ ಇವೆ. ಭಾರತದ ವಿರೋಧ ಪಕ್ಷಗಳಿಗೆ ಬೇರೆ ಬೇರೆ ದೇಶಗಳಿಂದ ವಿವಿಧ ಬಗೆಯಲ್ಲಿ ಹಣ ಬರುತ್ತಿದೆ ಮತ್ತು ಚುನಾವಣೆಗಳಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸಲಾಗುತ್ತಿದೆ. ಜಾರ್ಜ್ ಸೋರೋಸ್ ಮೊದಲಾದವರು ಬಹಳ ಬಹಳ ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಭಾರತವನ್ನು ಸರ್ವನಾಶ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಕಮ್ಯೂನಿಸ್ಟರ ನಿಯಂತ್ರಣದ “ನ್ಯೂಯಾರ್ಕ್ ಟೈಮ್ಸ್”, “ವಾಷಿಂಗ್ಟನ್ ಪೋಸ್ಟ್”, ಬಿಬಿಸಿ ಮುಂತಾದ ಮಾಧ್ಯಮ ಲೋಕದ ದುಃಶಕ್ತಿಗಳು ಮತ್ತು ಅಮೇರಿಕಾದ ಕೆಲವು ವಿಶ್ವವಿದ್ಯಾಲಯಗಳೂ ಈ ಮಾಫಿಯಾದ ಭಾಗವಾಗಿವೆ. ಅಂತರಜಾಲದ ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯವಸ್ಥಿತವಾಗಿ ಈ ದುಷ್ಕಾರ್ಯ ನಡೆಯುತ್ತಿದೆ……”

ಎಂದರೆ, ನಾವು ಶತಕೋಟಿ ಭಾರತೀಯರೂ ಗಹಗಹಿಸಿ ನಗುತ್ತೇವೆ. “ಅಯ್ಯಾ, ಇದೇ ರೀತಿಯ ಇನ್ನೊಂದಿಷ್ಟು ಜೋಕುಗಳನ್ನು ಹೇಳು” ಎಂದು ಸಹ ದುಂಬಾಲು ಬೀಳುತ್ತೇವೆ.

ಆದರೆ, ವಾಸ್ತವದಲ್ಲಿ, ನಮಗೆ ಅಂದರೆ ಭಾರತೀಯರಿಗೆ ಮೇಲ್ನೋಟಕ್ಕೆ ಹಾಸ್ಯ ಎನ್ನಿಸುವ ಈ ಎಲ್ಲ ಸಂಗತಿಗಳೂ, ಈ ಎಲ್ಲ ಸಾಲುಗಳೂ ನಿಜ; ಅಕ್ಷರಶಃ ಶತಪ್ರತಿಶತ ಸತ್ಯ.

ನೋಡಿ, ಪಾಕಿಸ್ತಾನವಿದೆ, ಬಾಂಗ್ಲಾದೇಶವಿದೆ. ಎಂಟು ದಶಕಗಳ ಹಿಂದೆ, ಅವು ನಮ್ಮ ದೇಶದ ಭಾಗಗಳೇ ಆಗಿದ್ದವು. ಇಸ್ಲಾಮೀ “ರಿಲಿಜನ್” (“ಧರ್ಮ” ಸೂಕ್ತವಾದ ಪದ ಅಲ್ಲ. ಧರ್ಮದ ವ್ಯಾಖ್ಯೆಯೇ ಬೇರೆ) ಹೆಸರಿನಲ್ಲಿ ಬೇರೆಯೇ ದೇಶ ಬೇಕು ಎಂಬಂತಹ ಹಕ್ಕೊತ್ತಾಯ ಬಂದ ಕ್ಷಣದಿಂದ ಮತ್ತು ಹೊಸ ದೇಶ 1947ರಲ್ಲಿ ಹುಟ್ಟಿಕೊಂಡ ದಿನದಿಂದ, ಅವ್ಯಾಹತವಾಗಿ ಹಿಂದೂಗಳ – ಸಿಖ್ಖರ ಹತ್ಯೆ, ಅತ್ಯಾಚಾರ, ಬಲವಂತದ ಮತಾಂತರ ಆಗುತ್ತಲೇ ಇದೆ. ಭಾರತದ ಹಣ, ಭಾರತದ ಸಹಕಾರ, ಭಾರತದ ಸೈನಿಕರ ರಕ್ತದಿಂದಲೇ ಹುಟ್ಟಿಕೊಂಡ ಬಾಂಗ್ಲಾದೇಶದಲ್ಲಿಯೂ ಹಿಂದೂಗಳ – ಬೌದ್ಧರ ಹತ್ಯಾಕಾಂಡ ಇಂದಿಗೂ ನಡೆಯುತ್ತಲೇ ಇದೆ. ಪಶ್ಚಿಮ ಪಾಕಿಸ್ತಾನದಲ್ಲಂತೂ, 1947ರಲ್ಲಿ 20% ಇದ್ದ ಹಿಂದೂಗಳ ಶೇಕಡಾವಾರು, ಈಗ 2ಕ್ಕಿಂತ ಕಡಿಮೆಯಾಗಿದೆ! ಕಳೆದ ಐವತ್ತು ವರ್ಷಗಳಲ್ಲಿ ಭಾರತವು ಅದೆಷ್ಟು ಸಹಾಯ ಹಸ್ತ ಚಾಚಿದರೂ, ಬಾಂಗ್ಲಾದೇಶದಲ್ಲಿಯೂ ಹಿಂದೂಗಳ – ಬೌದ್ಧರ ಪರಿಸ್ಥಿತಿ ಭಿನ್ನವಾಗಿಲ್ಲ.

ಈ ಎರಡೂ ದೇಶಗಳಲ್ಲಿ, ಅಂದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಆಗುತ್ತಿರುವ ಹಿಂದೂಗಳ – ಸಿಖ್ಖರ – ಬೌದ್ಧರ ಹತ್ಯಾಕಾಂಡಗಳ ಬಗೆಗೆ ವರದಿಗಳೂ, ಚಿತ್ರಗಳೂ, ವೀಡಿಯೋಗಳೂ ಬರುತ್ತಲೇ ಇವೆ.

ಅದೇ ನೋಡಿ, ಭಾರತದಲ್ಲಿರುವ ಮುಸ್ಲಿಮರ ಒಟ್ಟು ಜನಸಂಖ್ಯೆಯಲ್ಲಿ ಮತ್ತು ಶೇಕಡಾವಾರಿನಲ್ಲಿ (Percentage) ಏರಿಕೆ ಆಗುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ ಈಗ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 25 ಕೋಟಿ ಇರಬಹುದು. ಕಳೆದ ಏಳೆಂಟು ದಶಕಗಳಲ್ಲಿ ಸಂವಿಧಾನಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ತುಂಬ ತುಂಬ ಸೌಲಭ್ಯಗಳು, ಮೀಸಲಾತಿ, ಅನುಕೂಲಗಳು, ಸಾಲ – ಸಹಾಯಧನಗಳು ಸಹಾ ಅವರಿಗೆ ದೊರೆಯುತ್ತಿವೆ.

ಆದರೆ, ಜಗತ್ತಿನ ಮಾಧ್ಯಮಗಳಲ್ಲಿ (ಕೇವಲ ಭಾರತದ ಮಾಧ್ಯಮಗಳಲ್ಲಿ ಮಾತ್ರವಲ್ಲ) ಮತ್ತು ಅಂತರಜಾಲದ ಅನೇಕ ಮಾಹಿತಿ-ವಿವರಗಳಲ್ಲಿ ಬೇರೆಯೇ ಚಿತ್ರ ಕಂಡುಬರುತ್ತದೆ. ಜಗತ್ತಿನಾದ್ಯಂತ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಹತ್ಯಾಕಾಂಡ ನಡೆಸುತ್ತಿದ್ದಾರೆ, ಕಿರುಕುಳ ಕೊಡುತ್ತಿದ್ದಾರೆ, ಅತ್ಯಾಚಾರ ಎಸಗುತ್ತಿದ್ದಾರೆ ಎಂಬಂತಹ ಸತ್ಯಸಂಗತಿಗಳಿವೆ. ವಿಶೇಷವಾಗಿ ಬಹುತೇಕ ಇಸ್ಲಾಮೀ ದೇಶಗಳಲ್ಲಿ ಕಾಫಿರರಿಗೆ ಕನಿಷ್ಠ ಸ್ವಾತಂತ್ರ್ಯವೂ ಇಲ್ಲ, ಕಾಫಿರರಿಗೆ ಅಲ್ಲಿ ಮನೆಯೊಳಗೂ ತಮ್ಮ ಸ್ವಂತದ ಮತಧರ್ಮಗಳ ಆಚರಣೆಗಳಿಗೂ ಅವಕಾಶವಿಲ್ಲ. ಆದರೆ, ಹಿಂದೂ ಬಹುಸಂಖ್ಯಾತರಿರುವ ಭಾರತದಲ್ಲಿ so called ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರೈಸ್ತರು ತುಂಬ ಚೆನ್ನಾಗಿದ್ದಾರೆ ಮತ್ತು ಅವರಿಗೆ ಇಲ್ಲಿ ಅಪರಿಮಿತ ಸ್ವಾತಂತ್ರ್ಯವಿದೆ; ಹಕ್ಕುಗಳೂ, ಸೌಲಭ್ಯಗಳೂ ಧಂಡಿಯಾಗಿ ಇವೆ.

ವಸ್ತುಸ್ಥಿತಿ ಹೀಗಿದ್ದೂ ಅಂತರಜಾಲದಲ್ಲಿ ಮತ್ತು ಜಾಗತಿಕ ಮಾಧ್ಯಮಗಳಲ್ಲಿ, ಭಾರತ ಕುರಿತಂತೆ, ಭಯಾನಕವಾದ ಮತ್ತು ಅಪ್ಪಟ ಮಿಥ್ಯೆಯ ಮಾಹಿತಿ ದೊರೆಯುತ್ತದೆ. ಲೇಖಕ, ಚಿಂತಕ, ಸಂಶೋಧಕ, ಪ್ರೊಫೆಸರ್ ಕೌಶಿಕ್ ಗಂಗೋಪಾಧ್ಯಾಯ ಅವರು ತಮ್ಮ “ದ ಮೆಜಾರಿಟೇರಿಯನ್ ಮಿಥ್” ಗ್ರಂಥದಲ್ಲಿ ಕೊಟ್ಟಿರುವ ಅಂಕಿ ಅಂಶಗಳು, ಕೋಷ್ಟಕಗಳು (Tables) ಆಘಾತವನ್ನೇ ಉಂಟುಮಾಡುತ್ತವೆ.

“ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಒಂದು ಡಿಜಿಟಲ್ ರಿಸೋರ್ಸ್ ಅಂದರೆ ಅಂಕೀಯ ದತ್ತಾಂಶ ಮಾಹಿತಿಕೋಶ. ಈ ಜಾಲತಾಣದ ಅಭಿಲೇಖಾಗಾರದಲ್ಲಿ (Archives) ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲಾವಧಿಯ ಸುದ್ದಿಗಳ ದತ್ತಾಂಶವು ಸಂಗ್ರಹವಾಗಿದೆ. ಅಮೆರಿಕಾ, ಕೆನಡಾ, ಯೂರೋಪ್, ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕಾ ಖಂಡ, ಆಸ್ಟ್ರೇಲಿಯಾ ಇತ್ಯಾದಿಗಳ ಧ್ವನಿ ಕಡತಗಳು, ವೀಡಿಯೋಗಳು, ಜಾಲತಾಣಗಳು, ಬ್ಲಾಗ್ ಗಳು, ಪಾಡ್ ಕ್ಯಾಸ್ಟ್ ಗಳು, ಗ್ರಂಥಗಳು, ಸಮ್ಮೇಳನಗಳ ನಿರ್ಣಯಗಳು, ವಿಶ್ವಕೋಶಗಳು, ಆಧಾರ ಗ್ರಂಥಗಳು, ನಿಯತಕಾಲಿಕಗಳು, ವೃತ್ತಪತ್ರಿಕೆಗಳು, ಸುದ್ದಿ-ಜಾಲತಾಣಗಳು ಇತ್ಯಾದಿಗಳಲ್ಲಿ ಮೂರು ವರ್ಷಗಳ ಅವಧಿಯಲ್ಲಿ (2020, 2021 ಮತ್ತು 2022) ಪ್ರಕಟವಾದ ಮತ್ತು ದಾಖಲಾದ ಮಾಹಿತಿಯನ್ನು ವಿಶೇಷವಾಗಿ ಬಹುಸಂಖ್ಯಾತ-ವಾದ (Majoritarianism) ಕುರಿತ ದತ್ತಾಂಶಗಳನ್ನು ಆಳವಾಗಿ ಅಭ್ಯಾಸ ಮಾಡಿದಾಗ ಮತ್ತು ವಿಶ್ಲೇಷಿಸಿದಾಗ ದೊರೆಯುವ ಉಪಲಬ್ಧಿಗಳು ಅತ್ಯಂತ ಆಘಾತಕಾರಿಯಾಗಿವೆ. ಜಗತ್ತಿನ ಆರನೆಯ ಒಂದು ಭಾಗದಷ್ಟು ಜನಸಂಖ್ಯೆಯಿರುವ ಭಾರತದಲ್ಲಿ ಹೆಸರಿಗೆ ಬಹುಸಂಖ್ಯಾತರಾಗಿರುವ ಹಿಂದೂಗಳು so called ಅಲ್ಪಸಂಖ್ಯಾತರ ಮೇಲೆ ಮತ, ಭಾಷೆ ಮತ್ತು ಜನಾಂಗದ ಆಧಾರದ ಮೇಲೆ ದೌರ್ಜನ್ಯ ಮೆರೆದಿದ್ದಾರೆ ಎನ್ನುತ್ತವೆ ಈ ದತ್ತಾಂಶಗಳು. ಇನ್ನೂ ಭಯಂಕರವಾದ ಸಂಗತಿಯೆಂದರೆ, ಇಡೀ ಜಗತ್ತಿನ ಇಂತಹ ದತ್ತಾಂಶದಲ್ಲಿ 80% (ಹೌದು ಪ್ರತಿಶತ ಎಂಬತ್ತು) ಹಿಂದೂಗಳ ದೌರ್ಜನ್ಯದ ಮಾಹಿತಿಯೇ ಇಲ್ಲಿ ಪ್ರಧಾನವಾಗಿ ಲಭ್ಯವಾಗುತ್ತದೆ. ಅಂದರೆ, ಜಗತ್ತಿನಲ್ಲಿ ಭಾರತದ ಹಿಂದೂಗಳ ಬಗೆಗೆ, ಹಿಂದೂ-ವಿರೋಧೀ ಮಾಫಿಯಾ ಅದೆಂತಹ ದತ್ತಾಂಶವನ್ನು ದಾಖಲಿಸಿದೆ, ಎಂಬ ಈ ವಿವರಗಳು ನಿಜಕ್ಕೂ ಗಾಬರಿ ತರಿಸುತ್ತವೆ. ಹಿಂದುಗಳನ್ನು ರಾಕ್ಷಸರೆಂಬಂತೆ ಚಿತ್ರಿಸಲಾಗಿದೆ. ಆದರೆ, ಮುಸ್ಲಿಮರನ್ನು – ಕ್ರೈಸ್ತರನ್ನು ದುರುದ್ದೇಶಪೂರ್ವಕವಾಗಿ underplay ಮಾಡಿ, ದಮನಕಾರಿಗಳನ್ನೇ ದಮನಿತರೆಂಬಂತೆ ಬಿಂಬಿಸುವ ಕೆಲಸ ನಡೆಯುತ್ತಿದೆ. ಈ ಎಲ್ಲ ನಿಂದನೀಯ ದುಷ್ಕಾರ್ಯಗಳಲ್ಲಿ ಹಣ ಸಹ ದೊಡ್ಡ ಪಾತ್ರವನ್ನು ನಿರ್ವಹಿಸಿದೆ.

ಅದೇ ನೋಡಿ, ಕಾಫಿರರ ಮೇಲಿನ ಪಾಕಿಸ್ತಾನಿ ಮುಸ್ಲಿಮರ ದೌರ್ಜನ್ಯಗಳು, ಈ ದತ್ತಾಂಶದ ಪ್ರಕಾರ ಕೇವಲ 1.8% ಮಾತ್ರ! ಕನಿಷ್ಠ ಮಾಹಿತಿ, ಕನಿಷ್ಠ ಪ್ರಜ್ಞೆ ಇರುವ ಯಾರಿಗೇ ಆದರೂ, ಇದು ಸುಳ್ಳು ಎಂಬುದು ತಿಳಿಯುತ್ತದೆ. ಆದರೆ, ಇಂಥ ದಾಖಲೆಗಳ – ಸಾಕ್ಷ್ಯಾಧಾರಗಳ ಶಕ್ತಿಯೇ ಶಕ್ತಿ. ನ್ಯಾಯಾಲಯಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ವರದಿಗಳು, ವಿಶ್ವಕೋಶಗಳು ಇಂತಹ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶನ್ನೇ ಆಧರಿಸಿ ತಮ್ಮ ಷರಾ ಬರೆಯುತ್ತವೆ, ತೀರ್ಮಾನಗಳನ್ನು ಮಾಡುತ್ತವೆ. ಈ ಪರಿಪ್ರೇಕ್ಷ್ಯದಲ್ಲಿ ಭಾರತ-ವಿರೋಧೀ ದುಃಶಕ್ತಿಗಳು ಹೇಗೆಲ್ಲಾ ಕೆಲಸ ಮಾಡುತ್ತಿವೆ, ಹೇಗೆಲ್ಲಾ ವಂಚನೆಯಿಂದ ಸಾಕ್ಷ್ಯಾಧಾರಗಳನ್ನು ದಾಖಲಿಸುತ್ತವೆ ಎಂಬುದನ್ನು ಗಮನಿಸುವಾಗ ಆತಂಕವಾಗುತ್ತದೆ.

ಈ ದತ್ತಾಂಶದಲ್ಲಿ, ಕಾಶ್ಮೀರದಲ್ಲಿ ಮುಸ್ಲಿಮರ ದೌರ್ಜನ್ಯಕ್ಕೆ ಸಿಲುಕಿದ ಲಕ್ಷಾವಧಿ ಹಿಂದೂಗಳಿಗೆ ಸಂಬಂಧಿಸಿದಂತೆ; ಅವರ ಹತ್ಯೆ, ಅವರ ಮೇಲಾದ ಅವರ್ಣನೀಯ ಅತ್ಯಾಚಾರಗಳಿಗೆ ಸಂಬಂಧಿಸಿದಂತೆ 1,802 ವರದಿಗಳು ದಾಖಲಾಗಿದ್ದರೆ, ಗುಜರಾತಿನಲ್ಲಾದ 2002ರ ಗಲಭೆಗಳಿಗೆ ಸಂಬಂಧಿಸಿದಂತೆ 29,092 (ಹದಿನಾರು ಪಟ್ಟು) ವರದಿಗಳು ದಾಖಲಾಗಿವೆ. ಗುಜರಾತಿನಲ್ಲಿ ಆಗ ಹತ್ಯೆಯಾದವರ ಸಂಖ್ಯೆ ಅಧಿಕೃತವಾಗಿ 254 ಹಿಂದೂಗಳು ಮತ್ತು 790 ಮುಸ್ಲಿಮರು ಎನ್ನುವುದನ್ನು ಸಹ ಸಾಂದರ್ಭಿಕವಾಗಿ ನಾವಿಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಇನ್ನೂ ಒಂದು ಉದಾಹರಣೆ ನೋಡಿ. 1984ರಲ್ಲಿ ಸಿಖ್ ಅಂಗರಕ್ಷಕರಿಂದ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ಆಗ ಪ್ರತೀಕಾರ ರೂಪದಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ (ಅಧಿಕೃತವಾಗಿ) ಸತ್ತವರು 3,350 ಮಂದಿ. ಆದರೆ, ಈ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶದಲ್ಲಿ 10,977 (ಕಾಶ್ಮೀರದ ಅಂಕಿ ಅಂಶಗಳ ಐದು ಪಟ್ಟು) ವರದಿಗಳು ದಾಖಲಾಗಿವೆ.

ಕಳೆದ ಏಳೆಂಟು ದಶಕಗಳಲ್ಲಿ ಕಮ್ಯೂನಿಸ್ಟರು – ಜಿಹಾದಿಗಳು ಸೇರಿ ಭಾರತದ ಇತಿಹಾಸವನ್ನೇ ವಿಕೃತವನ್ನಾಗಿ – ವಿಷಪೂರಿತವನ್ನಾಗಿ ಮಾಡಿದ್ದಾರೆ, ಎಂಬುದನ್ನು ಇಲ್ಲಿ ಸ್ಮರಿಸಿದರೆ, ಜಾಗತಿಕ ದಾಖಲೆಗಳ ದತ್ತಾಂಶದ ವಿಷಯದಲ್ಲಿಯೂ ಏನೆಲ್ಲಾ ನಡೆಯುತ್ತಿದೆ ಎಂಬುದು ಗಾಬರಿ ಉಂಟುಮಾಡುತ್ತದೆ. ಶಾಲಾ-ಕಾಲೇಜುಗಳ ಪಠ್ಯಗಳಲ್ಲಿರುವ ಸುಳ್ಳು – ಇತಿಹಾಸದ ದುಷ್ಪರಿಣಾಮದಿಂದ ಭಾರತ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಜಾಗತಿಕ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶಗಳ ಈ ಆಯಾಮವು ಶತಕೋಟಿ ಭಾರತೀಯರಿಗೆ ಎಚ್ಚರಿಕೆಯ ಘಂಟೆಯಾಗಿದೆ.

ಜಗತ್ತೇ ವಿಚಿತ್ರ!

ಒಳಗಿನ ಶತ್ರುಗಳಂತೆಯೇ, ಹೊರಗಿನ ಕಟುಸತ್ಯಗಳು – ಭಾರತವಿರೋಧೀ ದುಃಶಕ್ತಿಗಳು ಸಹ ಅದೆಷ್ಟು ಘೋರ, ಅದೆಷ್ಟು ಭಯಾನಕ! ಅನೇಕ ದಶಕಗಳಿಂದ ಈ ಬಹುಸಂಖ್ಯಾತ-ವಾದ (Majoritarianism) ಎನ್ನುವುದೇ ಭಾರತೀಯ ಹಿಂದುಗಳನ್ನು ಹಣಿಯುವ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಕಮ್ಯೂನಿಸ್ಟ್ ನೇತೃತ್ವದ ಮಾಫಿಯಾದ ಹುನ್ನಾರವಾಗಿದೆ. ನಮ್ಮಲ್ಲೇ ತುಂಬ ತುಂಬ ಉದಾಹರಣೆಗಳಿವೆ. ಪಾಕಿಸ್ತಾನ್ ಮೂಲದ ಭಯೋತ್ಪಾದಕ ಅಜ್ಮಲ್ ಕಸಬ್ ಮೊದಲಾದವರ ತಂಡವು, ಹಿಂದೂಗಳ ವೇಷದಲ್ಲಿಯೇ ದಾಳಿ ನಡೆಸಿತ್ತು ಮತ್ತು ಮುಂಬಯಿ ಮೇಲಿನ ಈ 2008ರ ಕುಖ್ಯಾತ ದಾಳಿಯ ಹಿಂದೆ ಬಹಳ ದೊಡ್ಡ ಷಡ್ಯಂತ್ರವನ್ನು ರೂಪಿಸಲಾಗಿತ್ತು. ಕಸಬ್ ಅಕಸ್ಮಾತ್ತಾಗಿ ಸೆರೆ ಸಿಕ್ಕು ಬಹಳಷ್ಟು ರಹಸ್ಯಗಳು ಬಯಲಾದವು. ಕೆಲವರಂತೂ ಹಿಂದೂ ರಾಷ್ಟ್ರೀಯ ಸಂಘಟನೆಗಳನ್ನೇ ಗುರಿ ಮಾಡಿ ಪುಸ್ತಕಗಳನ್ನೂ ಬರೆಸಿ, ಹಿಂದೂ-ಭಾರತವನ್ನೇ ಕಟಕಟೆಯಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಿಕೊಂಡಿದ್ದರು.

ಭಾರತೀಯ ಸಮಾಜವು ಸಾವಿರ ಸಾವಿರ ವರ್ಷಗಳ ಯಾತನೆ, ಹಿಂಸೆ, ಹತ್ಯಾಕಾಂಡಗಳನ್ನು ಅನುಭವಿಸಿದ್ದು ಸಾಕು. ಇನ್ನಾದರೂ ಅರಿವಿನ ಬೆಳಕು ನಮ್ಮಲ್ಲಿ ಎಚ್ಚರ, ಜಾಗೃತಿಗಳನ್ನು ಉದ್ದೀಪಿಸಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರು ಬರುವ ಮೊದಲು ರಸ್ತೆಗಳೇ ಇರಲಿಲ್ಲವಾದರೆ, ಕೃಷ್ಣದೇವರಾಯನ ಭಾರಿ ಸೈನ್ಯ ಆಕಾಶದಲ್ಲಿ ಹಾರಾಡುತ್ತಿತ್ತೇ?

Continue Reading
Advertisement
ಕರ್ನಾಟಕ47 seconds ago

Renuka Swamy Murder: ರೇಣುಕಾಸ್ವಾಮಿ ಹತ್ಯೆ ಕೇಸ್‌ನ 4 ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್; ಕಾರಣವೇನು?

union Minister Pralhad Joshi took oath in the name of God in his mother tongue
ಕರ್ನಾಟಕ10 mins ago

Pralhad Joshi: ಮಾತೃಭಾಷೆ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಲ್ಹಾದ್‌ ಜೋಶಿ

Divisional Level Progress Review Meeting of Revenue Department by Minister Krishna Byregowda
ಕಲಬುರಗಿ16 mins ago

krishna byre gowda: ಪಹಣಿ-ಆಧಾರ್ ಲಿಂಕ್‌ ಮಾಡಲು ಜುಲೈಗೆ ಅಂತಿಮ ಗಡುವು; ಕೃಷ್ಣ ಬೈರೇಗೌಡ

Hardeep Singh Nijjar
ದೇಶ23 mins ago

Hardeep Singh Nijjar: ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದನಂತೆ ನಿಜ್ಜರ್‌; ಖಲಿಸ್ತಾನಿ ಉಗ್ರನ ಬಗ್ಗೆ ಮತ್ತಷ್ಟು ಭೀಕರ ಸಂಗತಿ ಬಯಲು

Sleep After Lunch
ಲೈಫ್‌ಸ್ಟೈಲ್27 mins ago

Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

R Ashok demands that the Congress apologize for imposing emergency
ಕರ್ನಾಟಕ33 mins ago

R Ashok: ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕ್ಷಮೆ ಕೋರಲಿ, ರಾಹುಲ್‌ ಗಾಂಧಿ ತಲೆಬಾಗಲಿ; ಆರ್‌. ಅಶೋಕ್‌

Viral Video
Latest40 mins ago

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

JP Nadda
ದೇಶ47 mins ago

JP Nadda: ರಾಜ್ಯಸಭೆ ಸದನ ನಾಯಕರಾಗಿ ಜೆ.ಪಿ. ನಡ್ಡಾ ಆಯ್ಕೆ; ಪಿಯೂಷ್‌ ಗೋಯಲ್‌ ಬದಲು ನೇಮಕ

LKG UKG in Anganwadis
ಪ್ರಮುಖ ಸುದ್ದಿ47 mins ago

LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Monsoon Trench Coat Fashion
ಫ್ಯಾಷನ್57 mins ago

Monsoon Trench Coat Fashion: ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌