ಕರ್ನಾಟಕ
ಎಲೆಕ್ಷನ್ ಹವಾ | ಮಂಡ್ಯ | ರೆಬೆಲ್ ಸ್ಟಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗೆ ಫುಲ್ ಡಿಮ್ಯಾಂಡ್
ಕಾಂಗ್ರೆಸ್ ಟಿಕೆಟ್ಗೆ ಹೆಚ್ಚಿನ ಪೈಪೋಟಿ ಇದೆಯಾದರೂ ಜೆಡಿಎಸ್ ಈ ಹಿಂದೆ ಜಯಿಸಿರುವ ಕಾರಣ ಪ್ರಬಲ ಸ್ಪರ್ಧೆ ನಿರೀಕ್ಷಿಸಬಹುದು.
ಮತ್ತೀಕೆರೆ ಜಯರಾಮ್, ಮಂಡ್ಯ
ಮಂಡ್ಯ ತಾಲೂಕು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿದೆ. ನಗರಸಭೆ ವ್ಯಾಪ್ತಿಯೂ ಸೇರಿದಂತೆ ಬೂದನೂರು, ಕೆರಗೋಡು, ಬಸರಾಳು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು, ದುದ್ದ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಒಂದೂವರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಷ್ಟೇ ಮಂಡ್ಯ ಕ್ಷೇತ್ರದಲ್ಲಿದೆ. ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಿಂದಲೇ ಶ್ರೀರಂಗಪಟ್ಟಣ ಮತ್ತು ಮೇಲುಕೋಟೆ ಕ್ಷೇತ್ರಗಳು ಕೂಡಿಕೊಂಡಿವೆ. ಮಂಡ್ಯ ತಾಲೂಕಿನ ಅರ್ಧದಷ್ಟು ತಾಲೂಕು ಅವೆರಡೂ ಕ್ಷೇತ್ರಗಳಿಗೆ ಒಳಪಟ್ಟಿವೆ. ಸ್ವತಃ ಕುವೆಂಪು ಅವರಿಂದಲೇ ನಿತ್ಯ ಸಚಿವ ಎಂದು ಕರೆಸಿಕೊಂಡ ದಿವಂಗತ ಕೆ.ವಿ. ಶಂಕರಗೌಡ ಒಮ್ಮೆ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಚುನಾವಣಾ ಹಿನ್ನೋಟ
2004ರ ಚುನಾವಣೆ ವೇಳೆಗೆ ಎಸ್.ಡಿ.ಜಯರಾಮ್ ನಿಧನರಾಗಿದ್ದರಿಂದ ಜೆಡಿಎಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಎದುರಾಗಿತ್ತು. ಲೋಕಜನಶಕ್ತಿ ಅದಾದ ಬಳಿಕ ಜೆಡಿಯು ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವಕೀಲ, ರೈತ ಸಂಘದ ಹೋರಾಟದ ಹಿನ್ನೆಲೆಯಿಂದ ಬಂದಿದ್ದ ಎಂ. ಶ್ರೀನಿವಾಸ್ ಅವರು ಜೆಡಿಎಸ್ ಸೇರ್ಪಡೆಗೊಂಡರು. ಪಕ್ಷದ ಮೂಲ ನಾಯಕರು ಮತ್ತು ಕಾರ್ಯಕರ್ತರ ಸಾಕಷ್ಟು ವಿರೋಧದ ನಡುವೆಯೂ ಟಿಕೆಟ್ ಗಿಟ್ಟಿಸಿಕೊಂಡರು. ಆಗ ಮಾಜಿ ಸಚಿವ ಎಂ.ಎಸ್. ಆತ್ಮಾನಂದ ವಿರೋಧಿ ಅಲೆಯಲ್ಲಿ ಶ್ರೀನಿವಾಸ್ ಅವರಿಗೆ ಗೆಲುವಿನ ಅದೃಷ್ಟ ಖುಲಾಯಿಸಿತು.
2008ರಲ್ಲಿ ಎಂ. ಶ್ರೀನಿವಾಸ್ ಅವರಿಗೂ ವಿರೋಧಿ ಅಲೆ ಎದುರಾಯಿತು. ಆದರೆ, ಅಷ್ಟರಲ್ಲಿ ಕ್ಷೇತ್ರ ಮರುವಿಂಗಡಣೆ ಆಗಿತ್ತು. ಅಳಿದು ಹೋದ ಕೆರಗೋಡು ಕ್ಷೇತ್ರದ ಭಾಗಶಃ ಗ್ರಾಮೀಣ ಪ್ರದೇಶ ಮಂಡ್ಯಕ್ಕೆ ಸೇರ್ಪಡೆಗೊಂಡಿತು. ಮಂಡ್ಯದಿಂದ ಕಾಂಗ್ರೆಸ್ ಪ್ರಾಬಲ್ಯದ ತಗ್ಗಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ನೆರೆಯ ಶ್ರೀರಂಗಪಟ್ಟಣಕ್ಕೆ ಶಿಫ್ಟ್ ಆಯಿತು. ಕಾಂಗ್ರೆಸ್ ಪಕ್ಷದಲ್ಲೇ ಗುರುತಿಸಿಕೊಂಡಿದ್ದ ಹನಕೆರೆ ಪುಟ್ಟಪ್ಪ ಅವರ ಸೊಸೆ ವಿದ್ಯಾ ನಾಗೇಂದ್ರ (ಭೂಗತ ಪಾತಕಿಗಳಿಂದ ಹತ್ಯೆಯಾಗಿದ್ದ ಎಚ್.ಪಿ. ನಾಗೇಂದ್ರ ಪತ್ನಿ) ಬಿಜೆಪಿಯಿಂದ ಸ್ಪರ್ಧಿಸಿದರು. ಕೆರಗೋಡು ಕ್ಷೇತ್ರದ ಹಾಲಿ ಶಾಸಕರಾಗಿದ್ದ ಎಚ್.ಬಿ. ರಾಮು ತಮ್ಮ ಗಾಡ್ ಫಾದರ್ ರೆಬೆಲ್ ಸ್ಟಾರ್ ಅಂಬರೀಶ್ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದಲೇ ಮಂಡ್ಯದಲ್ಲಿ ಕಾಂಗ್ರೆಸ್ ಹುರಿಯಾಳುವಾದರು. ಕಾಂಗ್ರೆಸ್ ಮತಗಳ ವಿಭಜನೆಯಿಂದ ಎಂ. ಶ್ರೀನಿವಾಸ್ ಅವರಿಗೆ ಮತ್ತೊಮ್ಮೆ ಅದೃಷ್ಟ ಒಲಿದು, ಪುನರಾಯ್ಕೆಗೊಂಡರು.
2013ರ ಚುನಾವಣೆ ವೇಳೆಗೆ ಮಂಡ್ಯದಲ್ಲಿ ಎಂ. ಶ್ರೀನಿವಾಸ್ ವಿರೋಧಿ ಅಲೆ ಎದ್ದಿತ್ತು. 2008ರಲ್ಲಿ ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ತೆರಳಿ ಸೋಲನುಭವಿಸಿ, 2009ರಲ್ಲಿ ಲೋಕಸಭೆ ಚುನಾವಣೆಯಲ್ಲೂ ಸೋಲಿನ ಕಹಿ ಉಂಡಿದ್ದ ತಾರಾ ವರ್ಚಸ್ಸಿನ ರಾಜಕಾರಣಿ ಅಂಬರೀಶ್ 2013ರಲ್ಲಿ ಮಂಡ್ಯದಿಂದ ಕಾಂಗ್ರೆಸ್ ಟಿಕೆಟ್ ತಮ್ಮದಾಗಿಸಿಕೊಂಡು, ಸ್ಪರ್ಧೆಗೆ ಇಳಿದರು. ಸತತ ಎರಡು ಸೋಲಿನ ಅನುಕಂಪವಿದ್ದ ಅಂಬರೀಶ್ ಅವರು ಸತತ ಎರಡು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದ ಶ್ರೀನಿವಾಸ್ ಅವರನ್ನು ಭಾರೀ ಮತಗಳ ಅಂತರದಿಂದಲೇ ಪರಾಭವಗೊಳಿಸಿದರು. ಆಗ ರಾಜ್ಯದಲ್ಲಿ ಬಂದ ಸಿದ್ದರಾಮಯ್ಯ ಸರ್ಕಾರದಲ್ಲಿ ಮೂರೂವರೆ ವರ್ಷ ಅಂಬರೀಶ್ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದರು.
2018ರಲ್ಲಿ ಅಂಬರೀಶ್ ಸ್ಪರ್ಧೆ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪವಿಟ್ಟುಕೊಂಡೇ ಸ್ವಪಕ್ಷೀಯರನ್ನು ಗೊಂದಲಕ್ಕೆ ಸಿಲುಕಿಸಿದರು. ನಾಮಪತ್ರ ಸಲ್ಲಿಕೆಗೆ 48 ತಾಸು ಬಾಕಿ ಇದೆ ಎನ್ನುವಾಗಷ್ಟೇ ನಾನು ಸ್ಪರ್ಧಿಸುವುದಿಲ್ಲವೆಂದು ಅಂಬರೀಶ್ ಘೋಷಿಸಿದರು. ತರಾತುರಿಯಲ್ಲೇ ರವಿಕುಮಾರಗೌಡ ಗಣಿಗ ಕೈ ಟಿಕೆಟ್ ವಾರಸುದಾರರಾದರು. ಜೆಡಿಎಸ್ನಿಂದ ಟಿಕೆಟ್ಗಾಗಿ ಕಡೆ ಕ್ಷಣದವರೆಗೂ ಪೈಪೋಟಿ ನಡೆಸಿದ್ದ ಚಂದಗಾಲು ಶಿವಣ್ಣ (ಕೆರಗೋಡು ಮಾಜಿ ಶಾಸಕ ಎನ್. ತಮ್ಮಣ್ಣ ಸಹೋದರ) ಬಿಜೆಪಿ ಹುರಿಯಾಳಾದರು. ಆಗ ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧೆಗಿಳಿದ ಎಂ. ಶ್ರೀನಿವಾಸ್ ಮತ್ತೆ ಗೆಲುವಿನ ಲಯ ಕಂಡುಕೊಂಡರು. ಇಲ್ಲಿ ಎಚ್.ಡಿ. ಕುಮಾರಸ್ವಾಮಿ ಪರ ಎದ್ದ ಒಕ್ಕಲಿಗರ ಸುನಾಮಿ ಶ್ರೀನಿವಾಸ್ ಗೆಲುವಿನಲ್ಲಿ ಪಾತ್ರ ವಹಿಸಿತು. ಹೀಗೆ ಮೂರನೇ ಬಾರಿ ಅದೃಷ್ಟ ಬಲದಿಂದಲೇ ಶ್ರೀನಿವಾಸ್ ವಿಧಾನಸಭೆ ಮೆಟ್ಟಿಲೇರಿದ್ದಾರೆ.
2023ರ ಮುಖಾಮುಖಿ
ಜಿಲ್ಲಾ ಕೇಂದ್ರ ಮಂಡ್ಯ ಕ್ಷೇತ್ರವನ್ನು ಮೂರನೇ ಬಾರಿ ಪ್ರತಿನಿಧಿಸುತ್ತಿರುವ ಜೆಡಿಎಸ್ ಶಾಸಕ ಎಂ. ಶ್ರೀನಿವಾಸ್ ಅವರನ್ನು ಅನಾರೋಗ್ಯ ಕಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಾ ಕಣದಿಂದ ಶ್ರೀನಿವಾಸ್ ಹಿಂದೆ ಸರಿಯುವುದು ಬಹುತೇಕ ಖಚಿತವಾದಂತಿದೆ. ಆದರೆ, ತಮ್ಮ ಉತ್ತರಾಧಿಕಾರಿಯನ್ನಾಗಿ ಖಾಸಾ ಅಳಿಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಅವರನ್ನು ಪ್ರತಿಷ್ಠಾಪಿಸಬೇಕೆನ್ನುವ ಮಹತ್ವಾಕಾಂಕ್ಷೆ ಕಟ್ಟಿಕೊಂಡಿದ್ದಾರೆ. ಅದಕ್ಕೆ ಜೆಡಿಎಸ್ ವರಿಷ್ಠರು ಸೊಪ್ಪು ಹಾಕುವ ಸಾಧ್ಯತೆ ಕ್ಷೀಣ. ಜೆಡಿಎಸ್ ಪಕ್ಷದಿಂದ ಮಾಜಿ ಸಚಿವ ಕೆ.ವಿ. ಶಂಕರಗೌಡರ ಮೊಮ್ಮಗ ಕೆ.ಎಸ್. ವಿಜಯಾನಂದ(ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್. ಸಚ್ಚಿದಾನಂದ ಪುತ್ರ), ಉದ್ಯಮಿ ಕೀಲಾರ ರಾಧಾಕೃಷ್ಣ ಟಿಕೆಟ್ ನ ಪ್ರಬಲ ಆಕಾಂಕ್ಷಿಗಳು.
ಜನತಾ ಪರಿವಾರದಲ್ಲಿ ಪ್ರಬಲ ನಾಯಕರಾಗಿದ್ದ ದಿವಂಗತ ಎಸ್.ಡಿ. ಜಯರಾಮ್ ಪುತ್ರ, ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಜೆ. ಅಶೋಕ್ ಜಯರಾಮ್ ಬಿಜೆಪಿ ಸೇರ್ಪಡೆಗೊಂಡಿದ್ದು, ಅವರೇ ಸಂಭಾವ್ಯ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದಾರೆ. ಇನ್ನು, ಕಾಂಗ್ರೆಸ್ನಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ರವಿಕುಮಾರಗೌಡ ಗಣಿಗ ಇತ್ತ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಮುಖಾಂತರ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷ ಪಡೆದಿದ್ದರೆ, ಅತ್ತ ಡಿಕೆಶಿ ಜತೆಗೂ ನೇರ ಸಂಪರ್ಕವನ್ನಿಟ್ಟುಕೊಂಡಿದ್ದಾರೆ. ಹೀಗಾಗಿ ಟಿಕೆಟ್ ಖಚಿತಪಡಿಸಿಕೊಂಡು, ಕ್ಷೇತ್ರದಲ್ಲಿ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಈ ಮಧ್ಯೆ, ಕೆಲವು ಹೊಸ ಮುಖಗಳು ಮತ್ತು ಕ್ಷೇತ್ರದ ಹೊರಗಿನವರ ಚಿತ್ತ ಕೂಡ ಮಂಡ್ಯದತ್ತ ನೆಟ್ಟಿದೆ. ಅಮೆರಿಕದಲ್ಲಿ ಸಾಫ್ಟ್ವೇರ್ ಕಂಪನಿ ಉದ್ಯೋಗ ತೊರೆದು ಬಂದು, ಮಂಡ್ಯದಲ್ಲಿ ಆರ್ಗ್ಯಾನಿಕ್ ಮಂಡ್ಯ ಎನ್ನುವ ಕಂಪೆನಿ ನಡೆಸುತ್ತಿರುವ ಮಧುಚಂದನ್ ಅವರು ರೈತ ಸಂಘದಿಂದ ಸ್ಪರ್ಧೆಗಿಳಿಯುವ ಉತ್ಸಾಹದಲ್ಲಿದ್ದಾರೆ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
೧. ಕೀಲಾರ ರಾಧಾಕೃಷ್ಣ/ ಎಚ್.ಎನ್.ಯೋಗೇಶ್/ ಕೆ.ಎಸ್.ವಿಜಯಾನಂದ (ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿಗಳು)
2. ರವಿಕುಮಾರಗೌಡ (ಕಾಂಗ್ರೆಸ್)
3. ಎಸ್.ಜೆ.ಅಶೋಕ್ ಜಯರಾಮ್(ಬಿಜೆಪಿ)
4. ಮಧುಚಂದನ್ (ರೈತಸಂಘ)
ಜಾತಿವಾರು ಮತದಾರರ ವಿವರ
ಕರ್ನಾಟಕ
Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು
ಬೆಳಗಾವಿಯ ಸವದತ್ತಿ ಪಟ್ಟಣದಲ್ಲಿ ಮಂಗಳವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಲಾರಿಯೊಂದು ಬೈಕ್, ಕಾರು ಮತ್ತು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ.
ಬೆಳಗಾವಿ: ಜಿಲ್ಲೆಯ ಸವದತ್ತಿ ಪಟ್ಟಣದ ಎಪಿಎಂಸಿ ಆವರಣದ ಎದುರು ಲಾರಿ, ಬೈಕ್, ಕಾರು, ಆಟೋ ಮಧ್ಯೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ ಈ ಅವಘಡ ಸಂಭವಿಸಿದೆ.
ಬೈಕ್ ಸವಾರ, ಸವದತ್ತಿ ತಾಲೂಕಿನ ಕುರವಿನಕೊಪ್ಪ ಗ್ರಾಮದ ಸೋಮಲಿಂಗ ಹೂಗಾರ (33) ಮತ್ತು ಸವದತ್ತಿ ತಾಲೂಕಿನ ಮದಿಗೇರಿ ಗ್ರಾಮದ ಕಾರ್ತಿಕ್ ಕುರಬಗಟ್ಟಿ (9) ಮೃತಪಟ್ಟ ದುರ್ದೈವಿಗಳು. ಬೈಕ್ ಮೇಲಿದ್ದ ಇನ್ನಿಬ್ಬರಾದ ಮಂಜುಳಾ ಕುರಬಗಟ್ಟಿ (36), ಮಲ್ಲವ್ವ ಕುರಬಗಟ್ಟಿ (11) ಅವರಿಗೆ ಗಂಭೀರ ಗಾಯಗಳಾಗಿವೆ.
ಧಾರವಾಡದಿಂದ ಸವದತ್ತಿ ಕಡೆಗೆ ಬರುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಬ್ರೇಕ್ ಫೇಲ್ ಆದ ಲಾರಿ ಮೊದಲು ಸವದತ್ತಿ ಪಟ್ಟಣದ ಕಡೆಗೆ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಪಕ್ಕ ನಿಂತಿದ್ದ ಕಾರು ಮತ್ತು ಆಟೋ ರಿಕ್ಷಾಗೂ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ ಬೈಕ್ ಸವಾರನ ಮೃತದೇಹ ಲಾರಿ ಚಕ್ರದ ಕೆಳಗೆ ಸಿಲುಕಿತ್ತು. ಸ್ಥಳೀಯರು ಗಾಯಾಳುಗಳ ರಕ್ಷಣೆ ಮಾಡಿದರು. ಸ್ಥಳಕ್ಕೆ ಸವದತ್ತಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ
Basavaraj Bommai: ವಿಜಯಪುರದಲ್ಲಿ 4.64 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ; ಬೊಮ್ಮಾಯಿ
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳತ್ತ ರಾಜ್ಯ ಸರ್ಕಾರ ಮುಂದಾಗುತ್ತಿದೆ. ಮಂಗಳವಾರ ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ವಿಜಯಪುರ: ಜಿಲ್ಲೆಯಲ್ಲಿ 4.64 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿಯಿದ್ದು, ಈಗಾಗಲೇ 2.87 ಸಾವಿರ ಮನೆಗಳಿಗೆ ನೀರು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಜಿಲ್ಲಾಡಳಿತ ವಿಜಯಪುರ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮುದ್ದೇಬಿಹಾಳದ ನಾಲತಾವಾಡ ಪಟ್ಟಣದಲ್ಲಿ ಆಯೋಜಿಸಿದ್ದ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯವನ್ನು ಹಾಗೂ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ನೆರವೇರಿಸಿ ಮಾತನಾಡಿದರು.
ಜಲ ಜೀವನ್ ಮಿಷನ್ ಅಡಿಯಲ್ಲಿ ದೇಶದಲ್ಲಿ 12 ಕೋಟಿ ಮನೆಗಳಿಗೆ ನೀರು ಒದಗಿಸಲಾಗಿದೆ. ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ. ಮುಂದಿನ ವರ್ಷ 25 ಲಕ್ಷ ಮನೆಗಳಿಗೆ ನೀರು ಒದಗಿಸಲಾಗುತ್ತಿದೆ. ಜಲಧಾರೆಯಲ್ಲಿ ನಗರ ಪ್ರದೇಶಗಳಲ್ಲಿ3000 ಕೋಟಿ ರೂ.ಗಳನ್ನು ಒದಗಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಪ್ರದೇಶಗಳಲ್ಲಿ ನೀರು ಒದಗಿಸುವ ಚಿಂತನೆ ಇದೆ ಎಂದರು.
4 ಸಾವಿರ ಕೋಟಿ ರೂ. ಗಳಿಂತ ಹೆಚ್ಚು ಮೌಲ್ಯದ ಅಭಿವೃದ್ಧಿ
1,600 ಕೋಟಿ ರೂ.ಗಳ ಮೌಲ್ಯದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿದೆ. ಈ ಮೊದಲು 2500 ಕೋಟಿ ರೂ.ಗಳ ವೆಚ್ಚದ ಅಭಿವೃದ್ಧಿಯನ್ನು ಶಾಸಕ ನಡಹಳ್ಳಿ ಮಾಡಿದ್ದಾರೆ. ಒಂದು ಅವಧಿಯಲ್ಲಿ ನಾಲ್ಕು ಸಾವಿರ ಕೋಟಿ ರೂ.ಗಳಿಂತ ಹೆಚ್ಚು ಮೌಲ್ಯದ ಅಭಿವೃದ್ಧಿ ಮಾಡಲಾಗಿರುವುದು ಒಂದು ದಾಖಲೆಯಾಗಿದೆ. ಉತ್ತರ ಕರ್ನಾಟಕದ, ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
ನಂಜುಂಡಪ್ಪ ವರದಿಯಿಂದ ಹಿಡಿದು ಬಹಳಷ್ಟು ವರದಿಗಳಿವೆ. ನಂಜುಂಡಪ್ಪ ವರದಿಯ ಅನುಷ್ಠಾನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಿದ್ದು. ಈ ಭಾಗದಲ್ಲಿ ವಿಶೇಷವಾಗಿ ನೀರಾವರಿಗೆ ಮೂಲಭೂತ ಸೌಕರ್ಯ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು ನೀಡಿರುವ ಪರಿಣಾಮ ಇಷ್ಟು ದೊಡ್ಡ ಪ್ರಮಾಣದಲ್ಲಿ ಈ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ ಎಂದರು.
ಕೆಲಸಗಳೇ ನಮ್ಮ ಗ್ಯಾರಂಟಿ, ಆಶ್ವಾಸನೆಗಳಲ್ಲ
ಕಿಸಾನ್ ಸಮ್ಮಾನ್ ಯೋಜನೆಯಡಿ 16 ಸಾವಿರ ಕೋಟಿ ವೆಚ್ಚದಲ್ಲಿ 54 ಲಕ್ಷ ರೈತರಿಗೆ ಅನುಕೂಲ ಕಲ್ಪಿಸಲಾಗಿದ್ದು ನಮ್ಮದು ರೈತಪರ ಸರ್ಕಾರ. ಮುಧೋಳದಲ್ಲಿ 975 ಕೋಟಿ ರೂ.ಗಳ ಅನುದಾನವನ್ನು 47 ಲಕ್ಷ ರೈತರಿಗೆ ಬಿಡುಗಡೆ ಮಾಡಲಾಗುತ್ತಿದೆ. ನಾವು ಮಾತಿಗಿಂತ ಮಾಡಿ ತೋರಿಸುತ್ತೇವೆ. ನಮ್ಮ ಕೆಲಸಗಳೇ ನಮ್ಮ ಗ್ಯಾರಂಟಿ. ಆಶ್ವಾಸನೆಗಳು ನಮ್ಮ ಗ್ಯಾರಂಟಿ ಅಲ್ಲ ಸಿಎಂ ಬೊಮ್ಮಾಯಿ ವಿರೋಧ ಪಕ್ಷಗಳಿಗೆ ತಿವಿದರು.
ರೈತ ವಿದ್ಯಾನಿಧಿ ಯೋಜನೆ, ರೈತಶಕ್ತಿ ಯೋಜನೆಯಡಿ 386 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷ ಭೂ ಶಕ್ತಿ ಯೋಜನೆಯಡಿ ಬೀಜಗೊಬ್ಬರಕ್ಕೆ 10 ಸಾವಿರ ರೂ.ಗಳನ್ನು ನೀಡಲಾಗುವುದು. ರೈತರಿಗೆ ಜೀವ ವಿಮೆಗಾಗಿ 180 ಕೋಟಿ ಮೀಸಲಿಡಲಾಗಿದೆ. 53 ಲಕ್ಷ ಜನರಿಗೆ ಇದರ ಪ್ರಯೋಜನವಾಗಲಿದೆ. ಶೂನ್ಯ ಬಡ್ಡಿದರದಲ್ಲಿ 5 ಲಕ್ಷದವರೆಗೆ ಸಾಲದ ವ್ಯವಸ್ಥೆ, 3500 ಕೋಟಿ ರೂ.ಗಳ ಆವರ್ತ ನಿಧಿಯಡಿ ಮೀಸಲಿಡಲಾಗಿದೆ. ಸಿರಿಧಾನ್ಯ ಬೆಳೆದವರಿಗೆ 1 ಹೆಕ್ಟೇರ್ಗೆ 10 ಸಾವಿರ ರೂ.ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಸ್ವಯಂ ಉದ್ಯೋಗ ಮಹತ್ವ
ಸ್ತ್ರೀ ಶಕ್ತಿ ಸಂಘಗಳಿಗೆ ಸ್ವಯಂ ಉದ್ಯೋಗಕ್ಕಾಗಿ 20 ಸಾವಿರ ಹಣ ಬಿಡುಗಡೆ ಮಾಡಲಾಗುತ್ತಿದೆ. ಸ್ವಾಮಿ ವಿವೇಕಾನಂದ ಯೋಜನೆಯನ್ನು 23 ರಂದು 13 ಸಾವಿರ ಯುವಶಕ್ತಿ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಈ ಮೂಲಕ ಕಾಯಕ ಕ್ರಾಂತಿ ಮಾಡಬೇಕು ಎಂದರು. ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ. ಎಲ್ಲ ವರ್ಗಕ್ಕೆ ನ್ಯಾಯ ನೀಡುವ ಕೆಲಸ ಮಾಡಿದ್ದೇವೆ. ಮುದ್ದೇಬಿಹಾಳ ಮಾದರಿಯಾಗುವಂತೆ ಕೆಲಸ ಮಾಡಲಾಗಿದೆ ಎಂದು ಸಿಎಂ ಹೇಳುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು.
ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕಟಿ ಬದ್ದ
ನಮ್ಮ ಸರ್ಕಾರ ಕೆರೆ ತುಂಬಿಸುವ ಯೋಜನೆಗಳನ್ನು ಸಂಪೂರ್ಣಗೊಳಿಸಲಾಗುತ್ತಿದೆ. ರೇವಣಸಿದ್ದೇಶ್ವರ ಏತ ನೀರಾವರಿಗೆ ಅಡಿಗಲ್ಲು ಹಾಕಲಾಗಿದೆ. ನಮ್ಮ ಪಾಲಿನ ನೀರನ್ನು ಸದ್ಬಳಕೆ ಮಾಡಲು ನಮ್ಮ ಸರ್ಕಾರ ಆದ್ಯತೆ ನೀಡಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈ ಬಾರಿ ಕಿತ್ತೂರು ಅಭಿವೃದ್ಧಿ ಮಂಡಳಿ ರಚನೆ ಮಾಡಲಾಗಿದೆ. ಅದಕ್ಕೆ ಅನುದಾನ ನೀಡಿ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕಟಿಬದ್ಧರಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ: Murder Case: ಅವಳದ್ದು ಮೋಹ, ಇವನಿಗೆ ಮಧುಮೇಹ; ಕೊಲೆಯಲ್ಲಿ ಅಂತ್ಯವಾಯ್ತು ಕಾಳಜಿ ಕಲಹ
ವಿಜಯಪುರ ಜಿಲ್ಲೆಗೆ ಐದು ನದಿಗಳು ಹರಿದರೂ ಬರ ತಪ್ಪಲಿಲ್ಲ. ವಿಜಯಪುರ ಜಿಲ್ಲೆಯ ಎಲ್ಲ ಕ್ಷೇತ್ರಗಳ ನೀರಾವರಿಯಾಗುವವರೆಗೂ ಸುಮಾರು 5 ಲಕ್ಷ ಹೆಕ್ಟೇರ್ಗೆ ನೀರಾವರಿಯಾಗುವವರೆಗೂ ನಾವು ವಿಶ್ರಮಿಸುವುದಿಲ್ಲ. ಮುದ್ದೇಬಿಹಾಳ ಕ್ಷೇತ್ರ ಎಲ್ಲಾ ರೀತಿಯಲ್ಲೂ ಅಭಿವೃದ್ಧಿಯಾದಂತೆ ಕರ್ನಾಟಕದ ಎಲ್ಲ ಕ್ಷೇತ್ರಗಳೂ ಅಭಿವೃದ್ಧಿಪಡಿಸಲು ಶ್ರಮವಹಿಸುತ್ತಿವೆ. ಕಳೆದ 3 ವರ್ಷಗಳಲ್ಲಿ 2 ಲಕ್ಷ ಕೋಟಿ ರೂ.ಗಳ ಅಭಿವೃದ್ಧಿ ಮಾಡಲಾಗಿದೆ. ಇದೊಂದು ದಾಖಲೆ ಎಂದರು.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Karnataka Election: ಸಿಎಂ ಬೊಮ್ಮಾಯಿಗೇ ಟಿಕೆಟ್ ಸಿಗುವುದು ಡೌಟು ಎಂದ ಕಾಂಗ್ರೆಸ್
ನಿರುದ್ಯೋಗಿ ಯುವಕರಿಗೆ ಮಾಸಿಕೆ ಭತ್ಯೆ ನೀಡುವ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಮೊದಲಿಗೆ ರಾಹುಲ್ ಗಾಂಧಿಯವರಿಂದಲೇ ಆರಂಭಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದರು.
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವಕರಿಗೆ ಮಾಸಿಕ ನುರುದ್ಯೋಗ ಭತ್ಯೆ ನೀಡುವ ಗ್ಯಾರಂಟಿ ಯೋಜನೆಯನ್ನು ಟೀಕಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇ ಚುನಾವಣೆ ಟಿಕೆಟ್ ಸಿಗುವುದು ಅನುಮಾನ ಎಂದು ಕಾಂಗ್ರೆಸ್ ಹೇಳಿದೆ.
ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ಮೂರು ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ ಮಾಸಿಕ ಒಂದೂವರೆ ಸಾವಿರ ರೂ. ನೀಡುವುದಾಗಿ ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ಘೋಷಣೆ ಮಾಡಿದ್ದರು. ಈ ಕುರಿತು ಬಾಗಲಕೋಟೆಯಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, ಈ ಯೋಜನೆಯನ್ನು ಮೊದಲಿಗೆ ರಾಹುಲ್ ಗಾಂಧಿಯವರಿಂದಲೇ ಆರಂಭಿಸಬೇಕು. ನಿರುದ್ಯೋಗಿಗಳಿಗೆ ಭತ್ಯೆ ಬಗ್ಗೆ ರಾಜಸ್ಥಾನ, ಛತ್ತೀಸ್ಗಢದಲ್ಲಿಯೂ ಹೇಳಿದ್ದರು. ಆದರೆ ಅನುಷ್ಠಾನವಾಗಿಲ್ಲ. ಅವರು ಹತಾಶರಾಗಿದ್ದಾರೆ. ಅವರಿಗೆ ಆಂತರಿಕ ಸಮೀಕ್ಷೆಯಲ್ಲಿ ಗೆಲ್ಲುವುದಿಲ್ಲ ಎಂದು ತಿಳಿದಿದೆ. ಶೇ 3-4 ರಷ್ಟು ಮತ ಗೆಲ್ಲಲು ಈ ರೀತಿಯ ಆಗಲಾರದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕ ರಾಜಸ್ಥಾನ ಅಥವಾ ಛತ್ತೀಸ್ಗಢ ಅಲ್ಲ. ಕರ್ನಾಟಕದ ಜನ ಬಹಳ ಪ್ರಬುದ್ಧರಿದ್ದಾರೆ. ಯಾರು ಯಾಕೆ ಮಾತನಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಸ್ವತಃ ತಮಗೇ ಬಿಜೆಪಿಯ ಟಿಕೆಟ್ ಸಿಗುವ ಭರವಸೆ ಇಲ್ಲದ, ಟಿಕೆಟ್ ಸಿಕ್ಕರೂ ಗೆಲ್ಲುವ ಭರವಸೆ ಇಲ್ಲದ, ಗೆದ್ದರೂ ತಾವೇ ಸಿಎಂ ಹುರಿಯಾಳು ಎಂಬ ಭರವಸೆ ಇಲ್ಲದ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನೀಡಿದ ಯುವನಿಧೀ ಯೋಜನೆಯ ಭರವಸೆಯನ್ನು ಟೀಕಿಸುವುದು ಹಾಸ್ಯಾಸ್ಪದ. ಬೊಮ್ಮಾಯಿಯವರೇ, ನೀವು ಕೈಲಾಗದವರಿರಬಹುದು, ಕಾಂಗ್ರೆಸ್ಗೆ ಎಲ್ಲವೂ ಸಾಧ್ಯ” ಎಂದಿದೆ.
ಕರ್ನಾಟಕ
Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್ಗೆ ಈಗ ಖಾದ್ರಿ ಸಂಕಟ!
ಸಿಎಂ ಬೊಮ್ಮಾಯಿ ಅವರನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ರೂಪಿಸಿರುವ ಪ್ಲ್ಯಾನ್ ತಿರುಗುಬಾಣವಾಗುವ ಅಪಾಯವಿದೆ. ಅಜ್ಜಂಪೀರ್ ಖಾದ್ರಿ ಅವರೇ ಇಲ್ಲೀಗ ನಿರ್ಣಾಯಕ
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಮತ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗಳಿಂದ ಗೆಲ್ಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರಿಗೆ ಚಮಕ್ ನೀಡಲು ಮುಂದಾಗಿರುವ ಪ್ಲ್ಯಾನ್ ಈಗ ಕಾಂಗ್ರೆಸ್ಗೇ ತಿರುಗುಬಾಣವಾಗುವ ಪರಿಸ್ಥಿತಿ ಎದುರಾಗಿದೆ.
ಶಿಗ್ಗಾಂವಿಯಲ್ಲಿ ಖಡಾಖಡಿ ಹೋರಾಟವನ್ನು ನೀಡುವ ಮೂಲಕ ಬೊಮ್ಮಾಯಿ ಅವರನ್ನು ಅವರ ಕ್ಷೇತ್ರದಿಂದ ಹೊರಬರದಂತೆ ಕಟ್ಟಿಹಾಕುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ. ಬೊಮ್ಮಾಯಿಗೆ ಕಠಿಣ ಸ್ಪರ್ಧೆ ನೀಡಲು ಮಾಜಿ ಸಚಿವ ವಿನಯ ಕುಲಕರ್ಣಿ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿರುವ ನಾಯಕರು ಅವರನ್ನು ಹೇಗೋ ಮನವೊಲಿಸಿ ಒಪ್ಪಿಸಿದ್ದಾರೆ. ಆದರೆ, ಈಗ ಶಿಗ್ಗಾಂವಿಯಲ್ಲಿ ಇದುವರೆಗೂ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು ತಿರುಗಿಬಿದ್ದಿದ್ದಾರೆ. ತನಗೆ ಟಿಕೆಟ್ ನೀಡದೆ ಹೋದರೆ ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಖಾದ್ರಿ ಹೇಳಿರುವುದು ಕಾಂಗ್ರೆಸ್ಗೆ ಬಿಸಿ ತುಪ್ಪವಾದಂತಾಗಿದೆ.
ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೇಸ್ ಟಿಕೆಟ್ ಬಯಸಿ 14 ಜನರು ಅರ್ಜಿ ಸಲ್ಲಿಕೆ ಮಾಡಿದ್ದರು. ಅಲ್ಪಸಂಖ್ಯಾತ ಕೋಟಾದಡಿ ಸತತ ಮೂರು ಸಲ ಟಿಕೆಟ್ ಪಡೆದು ಬೊಮ್ಮಾಯಿ ವಿರುದ್ಧ ಸೋತಿದ್ದ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಈ ಸಲವೂ ಟಿಕೆಟ್ಗಾಗಿ ಕಸರತ್ತು ನಡೆಸಿದ್ದಾರೆ.
ಆದರೆ, ಈ ಬಾರಿ ಅಲ್ಪಸಂಖ್ಯಾತ ಅಸ್ತ್ರದ ಬದಲು ಪಂಚಮಸಾಲಿ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್ ಮುಂದಾಗಿದೆ. ಅಲ್ಪಸಂಖ್ಯಾತರು ಹೇಗಿದ್ದರೂ ಕಾಂಗ್ರೆಸ್ಗೆ ಮತ ಹಾಕುತ್ತಾರೆ. ಅವರ ಜತೆ ಪಂಚಮಸಾಲಿಗಳ ಮತವೂ ಸೇರಿದರೆ ಬೊಮ್ಮಾಯಿ ಅವರನ್ನು ಸೋಲಿಸಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕ ವಿನಯ ಕುಲಕರ್ಣಿ ಅವರನ್ನು ಶಿಗ್ಗಾಂವಿ ಕ್ಷೇತ್ರದಿಂದ ಕಣಕ್ಕಿಳಿಸಲು ಮನವಿ ಒಲಿಸಿದೆ. ಕೆಲವು ದಿನಗಲ ಹಿಂದೆ ದೆಹಲಿಯಲ್ಲಿ ನಡೆದ ಸಭೆಯಲ್ಲಿಯ ವಿನಯ ಕುಲಕರ್ನಿ ಜೊತೆ ಕೈ ನಾಯಕರು ಮಾತುಕತೆ ನಡೆಸಿದ್ದರು.
ವಿನಯ ಕುಲಕರ್ಣಿ ಅವರ ಹೆಸರು ಮುನ್ನಲೆಗೆ ಬರುತ್ತಿದ್ದಂತೆ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಕೈ ನಾಯಕರಿಗೆ ಶಾಕ್ ನೀಡಿದ್ದಾರೆ. ಶಿಗ್ಗಾಂವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಈ ನಡುವೆ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ತಡರಾತ್ರಿಯವರೆಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸಭೆ ನಡೆಸಿ ಮನ ಒಲಿಸಲು ಕಸರತ್ತು ನಡೆಸಿದರಾದರೂ ಅದರಲ್ಲಿ ಸಫಲರಾಗಿಲ್ಲ. ಖಾದ್ರಿ ಅವರು ಸಿದ್ದರಾಮಯ್ಯ ಬೆಂಬಲಿಗರಾಗಿರುವುದರಿಂದ ಜಮೀರ್ ಅಹ್ಮದ್ ಅವರಿಗೆ ಮನವೊಲಿಕೆ ಜವಾಬ್ದಾರಿಯನ್ನು ನೀಡಲಾಗಿದೆ.
ಖಾದ್ರಿ ಅವರು ಕಳೆದ ಮೂರು ಚುನಾವಣೆಗಳಲ್ಲಿ ಬೊಮ್ಮಾಯಿ ವಿರುದ್ಧ ಸೋಲು ಕಾಣುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ ಗೆದ್ದಿದ್ದು 1994ರಲ್ಲಿ. ಮಂಜುನಾಥ ಕೊನ್ನೂರು ಅವರು ಆಗ ಶಾಸಕರಾಗಿದ್ದರು.
ಖಾದ್ರಿ ಅವರು 1998ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಗೆದ್ದಿದ್ದರು. 2004ರಲ್ಲಿ ಸಿಂಧೂರ ರಾಜಶೇಖರ್ ಇಲ್ಲಿಗೆ ಪಕ್ಷೇತರರಾಗಿ ಗೆಲುವು ಪಡೆದಿದ್ದರು. ಬಳಿಕ ಗೆದ್ದಿದ್ದೆಲ್ಲ ಬೊಮ್ಮಾಯಿ ಅವರೇ.
ಇಲ್ಲಿನ ಒಟ್ಟಾರೆ ಲೆಕ್ಕಾಚಾರ ಗಮನಿಸಿದರೆ ಕಾಂಗ್ರೆಸ್ ಕೇವಲ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡರೆ ಗೆಲ್ಲುವುದು ಕಷ್ಟ. ಹಾಗಾಗಿ ಅದು ಬೇರೆ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ. ಆದರೆ, ಮುಸ್ಲಿಂ ಮತಗಳನ್ನು ಬಿಟ್ಟರೂ ಗೆಲುವು ಸುಲಭವಲ್ಲ. ಹೀಗಾಗಿ ಖಾದ್ರಿ ಅವರು ಪಕ್ಷೇತರರಾಗಿ ನಿಂತರೆ ಮುಸ್ಲಿಂ ಮತಗಳು ಒಡೆಯುವುದು ನಿಶ್ಚಿತ. ಹೀಗಾಗಿ ಅತ್ಯಂತ ಜಾಗರೂಕತೆಯಿಂದ ಪರಿಸ್ಥಿತಿ ನಿಭಾಯಿಸಬೇಕಾದ ಅಗತ್ಯ ಕಾಂಗ್ರೆಸ್ಗಿದೆ. ಖಾದ್ರಿ ಅವರು ಕಾಂಗ್ರೆಸ್ ಮನವೊಲಿಕೆಗೆ ಒಲಿಯುತ್ತಾರಾ ಎಂದು ಕಾದು ನೋಡಬೇಕು.
ಇದನ್ನೂ ಓದಿ : Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ24 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್5 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ9 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ8 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ9 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ