ಕರ್ನಾಟಕ
ಎಲೆಕ್ಷನ್ ಹವಾ | ಮಂಡ್ಯ | ರೆಬೆಲ್ ಸ್ಟಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗೆ ಫುಲ್ ಡಿಮ್ಯಾಂಡ್
ಕಾಂಗ್ರೆಸ್ ಟಿಕೆಟ್ಗೆ ಹೆಚ್ಚಿನ ಪೈಪೋಟಿ ಇದೆಯಾದರೂ ಜೆಡಿಎಸ್ ಈ ಹಿಂದೆ ಜಯಿಸಿರುವ ಕಾರಣ ಪ್ರಬಲ ಸ್ಪರ್ಧೆ ನಿರೀಕ್ಷಿಸಬಹುದು.
ಮತ್ತೀಕೆರೆ ಜಯರಾಮ್, ಮಂಡ್ಯ
ಮಂಡ್ಯ ತಾಲೂಕು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿದೆ. ನಗರಸಭೆ ವ್ಯಾಪ್ತಿಯೂ ಸೇರಿದಂತೆ ಬೂದನೂರು, ಕೆರಗೋಡು, ಬಸರಾಳು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು, ದುದ್ದ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಒಂದೂವರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಷ್ಟೇ ಮಂಡ್ಯ ಕ್ಷೇತ್ರದಲ್ಲಿದೆ. ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಿಂದಲೇ ಶ್ರೀರಂಗಪಟ್ಟಣ ಮತ್ತು ಮೇಲುಕೋಟೆ ಕ್ಷೇತ್ರಗಳು ಕೂಡಿಕೊಂಡಿವೆ. ಮಂಡ್ಯ ತಾಲೂಕಿನ ಅರ್ಧದಷ್ಟು ತಾಲೂಕು ಅವೆರಡೂ ಕ್ಷೇತ್ರಗಳಿಗೆ ಒಳಪಟ್ಟಿವೆ. ಸ್ವತಃ ಕುವೆಂಪು ಅವರಿಂದಲೇ ನಿತ್ಯ ಸಚಿವ ಎಂದು ಕರೆಸಿಕೊಂಡ ದಿವಂಗತ ಕೆ.ವಿ. ಶಂಕರಗೌಡ ಒಮ್ಮೆ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಚುನಾವಣಾ ಹಿನ್ನೋಟ
2004ರ ಚುನಾವಣೆ ವೇಳೆಗೆ ಎಸ್.ಡಿ.ಜಯರಾಮ್ ನಿಧನರಾಗಿದ್ದರಿಂದ ಜೆಡಿಎಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಎದುರಾಗಿತ್ತು. ಲೋಕಜನಶಕ್ತಿ ಅದಾದ ಬಳಿಕ ಜೆಡಿಯು ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವಕೀಲ, ರೈತ ಸಂಘದ ಹೋರಾಟದ ಹಿನ್ನೆಲೆಯಿಂದ ಬಂದಿದ್ದ ಎಂ. ಶ್ರೀನಿವಾಸ್ ಅವರು ಜೆಡಿಎಸ್ ಸೇರ್ಪಡೆಗೊಂಡರು. ಪಕ್ಷದ ಮೂಲ ನಾಯಕರು ಮತ್ತು ಕಾರ್ಯಕರ್ತರ ಸಾಕಷ್ಟು ವಿರೋಧದ ನಡುವೆಯೂ ಟಿಕೆಟ್ ಗಿಟ್ಟಿಸಿಕೊಂಡರು. ಆಗ ಮಾಜಿ ಸಚಿವ ಎಂ.ಎಸ್. ಆತ್ಮಾನಂದ ವಿರೋಧಿ ಅಲೆಯಲ್ಲಿ ಶ್ರೀನಿವಾಸ್ ಅವರಿಗೆ ಗೆಲುವಿನ ಅದೃಷ್ಟ ಖುಲಾಯಿಸಿತು.
2008ರಲ್ಲಿ ಎಂ. ಶ್ರೀನಿವಾಸ್ ಅವರಿಗೂ ವಿರೋಧಿ ಅಲೆ ಎದುರಾಯಿತು. ಆದರೆ, ಅಷ್ಟರಲ್ಲಿ ಕ್ಷೇತ್ರ ಮರುವಿಂಗಡಣೆ ಆಗಿತ್ತು. ಅಳಿದು ಹೋದ ಕೆರಗೋಡು ಕ್ಷೇತ್ರದ ಭಾಗಶಃ ಗ್ರಾಮೀಣ ಪ್ರದೇಶ ಮಂಡ್ಯಕ್ಕೆ ಸೇರ್ಪಡೆಗೊಂಡಿತು. ಮಂಡ್ಯದಿಂದ ಕಾಂಗ್ರೆಸ್ ಪ್ರಾಬಲ್ಯದ ತಗ್ಗಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ನೆರೆಯ ಶ್ರೀರಂಗಪಟ್ಟಣಕ್ಕೆ ಶಿಫ್ಟ್ ಆಯಿತು. ಕಾಂಗ್ರೆಸ್ ಪಕ್ಷದಲ್ಲೇ ಗುರುತಿಸಿಕೊಂಡಿದ್ದ ಹನಕೆರೆ ಪುಟ್ಟಪ್ಪ ಅವರ ಸೊಸೆ ವಿದ್ಯಾ ನಾಗೇಂದ್ರ (ಭೂಗತ ಪಾತಕಿಗಳಿಂದ ಹತ್ಯೆಯಾಗಿದ್ದ ಎಚ್.ಪಿ. ನಾಗೇಂದ್ರ ಪತ್ನಿ) ಬಿಜೆಪಿಯಿಂದ ಸ್ಪರ್ಧಿಸಿದರು. ಕೆರಗೋಡು ಕ್ಷೇತ್ರದ ಹಾಲಿ ಶಾಸಕರಾಗಿದ್ದ ಎಚ್.ಬಿ. ರಾಮು ತಮ್ಮ ಗಾಡ್ ಫಾದರ್ ರೆಬೆಲ್ ಸ್ಟಾರ್ ಅಂಬರೀಶ್ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದಲೇ ಮಂಡ್ಯದಲ್ಲಿ ಕಾಂಗ್ರೆಸ್ ಹುರಿಯಾಳುವಾದರು. ಕಾಂಗ್ರೆಸ್ ಮತಗಳ ವಿಭಜನೆಯಿಂದ ಎಂ. ಶ್ರೀನಿವಾಸ್ ಅವರಿಗೆ ಮತ್ತೊಮ್ಮೆ ಅದೃಷ್ಟ ಒಲಿದು, ಪುನರಾಯ್ಕೆಗೊಂಡರು.
2013ರ ಚುನಾವಣೆ ವೇಳೆಗೆ ಮಂಡ್ಯದಲ್ಲಿ ಎಂ. ಶ್ರೀನಿವಾಸ್ ವಿರೋಧಿ ಅಲೆ ಎದ್ದಿತ್ತು. 2008ರಲ್ಲಿ ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ತೆರಳಿ ಸೋಲನುಭವಿಸಿ, 2009ರಲ್ಲಿ ಲೋಕಸಭೆ ಚುನಾವಣೆಯಲ್ಲೂ ಸೋಲಿನ ಕಹಿ ಉಂಡಿದ್ದ ತಾರಾ ವರ್ಚಸ್ಸಿನ ರಾಜಕಾರಣಿ ಅಂಬರೀಶ್ 2013ರಲ್ಲಿ ಮಂಡ್ಯದಿಂದ ಕಾಂಗ್ರೆಸ್ ಟಿಕೆಟ್ ತಮ್ಮದಾಗಿಸಿಕೊಂಡು, ಸ್ಪರ್ಧೆಗೆ ಇಳಿದರು. ಸತತ ಎರಡು ಸೋಲಿನ ಅನುಕಂಪವಿದ್ದ ಅಂಬರೀಶ್ ಅವರು ಸತತ ಎರಡು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದ ಶ್ರೀನಿವಾಸ್ ಅವರನ್ನು ಭಾರೀ ಮತಗಳ ಅಂತರದಿಂದಲೇ ಪರಾಭವಗೊಳಿಸಿದರು. ಆಗ ರಾಜ್ಯದಲ್ಲಿ ಬಂದ ಸಿದ್ದರಾಮಯ್ಯ ಸರ್ಕಾರದಲ್ಲಿ ಮೂರೂವರೆ ವರ್ಷ ಅಂಬರೀಶ್ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದರು.
2018ರಲ್ಲಿ ಅಂಬರೀಶ್ ಸ್ಪರ್ಧೆ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪವಿಟ್ಟುಕೊಂಡೇ ಸ್ವಪಕ್ಷೀಯರನ್ನು ಗೊಂದಲಕ್ಕೆ ಸಿಲುಕಿಸಿದರು. ನಾಮಪತ್ರ ಸಲ್ಲಿಕೆಗೆ 48 ತಾಸು ಬಾಕಿ ಇದೆ ಎನ್ನುವಾಗಷ್ಟೇ ನಾನು ಸ್ಪರ್ಧಿಸುವುದಿಲ್ಲವೆಂದು ಅಂಬರೀಶ್ ಘೋಷಿಸಿದರು. ತರಾತುರಿಯಲ್ಲೇ ರವಿಕುಮಾರಗೌಡ ಗಣಿಗ ಕೈ ಟಿಕೆಟ್ ವಾರಸುದಾರರಾದರು. ಜೆಡಿಎಸ್ನಿಂದ ಟಿಕೆಟ್ಗಾಗಿ ಕಡೆ ಕ್ಷಣದವರೆಗೂ ಪೈಪೋಟಿ ನಡೆಸಿದ್ದ ಚಂದಗಾಲು ಶಿವಣ್ಣ (ಕೆರಗೋಡು ಮಾಜಿ ಶಾಸಕ ಎನ್. ತಮ್ಮಣ್ಣ ಸಹೋದರ) ಬಿಜೆಪಿ ಹುರಿಯಾಳಾದರು. ಆಗ ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧೆಗಿಳಿದ ಎಂ. ಶ್ರೀನಿವಾಸ್ ಮತ್ತೆ ಗೆಲುವಿನ ಲಯ ಕಂಡುಕೊಂಡರು. ಇಲ್ಲಿ ಎಚ್.ಡಿ. ಕುಮಾರಸ್ವಾಮಿ ಪರ ಎದ್ದ ಒಕ್ಕಲಿಗರ ಸುನಾಮಿ ಶ್ರೀನಿವಾಸ್ ಗೆಲುವಿನಲ್ಲಿ ಪಾತ್ರ ವಹಿಸಿತು. ಹೀಗೆ ಮೂರನೇ ಬಾರಿ ಅದೃಷ್ಟ ಬಲದಿಂದಲೇ ಶ್ರೀನಿವಾಸ್ ವಿಧಾನಸಭೆ ಮೆಟ್ಟಿಲೇರಿದ್ದಾರೆ.
2023ರ ಮುಖಾಮುಖಿ
ಜಿಲ್ಲಾ ಕೇಂದ್ರ ಮಂಡ್ಯ ಕ್ಷೇತ್ರವನ್ನು ಮೂರನೇ ಬಾರಿ ಪ್ರತಿನಿಧಿಸುತ್ತಿರುವ ಜೆಡಿಎಸ್ ಶಾಸಕ ಎಂ. ಶ್ರೀನಿವಾಸ್ ಅವರನ್ನು ಅನಾರೋಗ್ಯ ಕಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಾ ಕಣದಿಂದ ಶ್ರೀನಿವಾಸ್ ಹಿಂದೆ ಸರಿಯುವುದು ಬಹುತೇಕ ಖಚಿತವಾದಂತಿದೆ. ಆದರೆ, ತಮ್ಮ ಉತ್ತರಾಧಿಕಾರಿಯನ್ನಾಗಿ ಖಾಸಾ ಅಳಿಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಅವರನ್ನು ಪ್ರತಿಷ್ಠಾಪಿಸಬೇಕೆನ್ನುವ ಮಹತ್ವಾಕಾಂಕ್ಷೆ ಕಟ್ಟಿಕೊಂಡಿದ್ದಾರೆ. ಅದಕ್ಕೆ ಜೆಡಿಎಸ್ ವರಿಷ್ಠರು ಸೊಪ್ಪು ಹಾಕುವ ಸಾಧ್ಯತೆ ಕ್ಷೀಣ. ಜೆಡಿಎಸ್ ಪಕ್ಷದಿಂದ ಮಾಜಿ ಸಚಿವ ಕೆ.ವಿ. ಶಂಕರಗೌಡರ ಮೊಮ್ಮಗ ಕೆ.ಎಸ್. ವಿಜಯಾನಂದ(ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್. ಸಚ್ಚಿದಾನಂದ ಪುತ್ರ), ಉದ್ಯಮಿ ಕೀಲಾರ ರಾಧಾಕೃಷ್ಣ ಟಿಕೆಟ್ ನ ಪ್ರಬಲ ಆಕಾಂಕ್ಷಿಗಳು.
ಜನತಾ ಪರಿವಾರದಲ್ಲಿ ಪ್ರಬಲ ನಾಯಕರಾಗಿದ್ದ ದಿವಂಗತ ಎಸ್.ಡಿ. ಜಯರಾಮ್ ಪುತ್ರ, ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಜೆ. ಅಶೋಕ್ ಜಯರಾಮ್ ಬಿಜೆಪಿ ಸೇರ್ಪಡೆಗೊಂಡಿದ್ದು, ಅವರೇ ಸಂಭಾವ್ಯ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದಾರೆ. ಇನ್ನು, ಕಾಂಗ್ರೆಸ್ನಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ರವಿಕುಮಾರಗೌಡ ಗಣಿಗ ಇತ್ತ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಮುಖಾಂತರ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷ ಪಡೆದಿದ್ದರೆ, ಅತ್ತ ಡಿಕೆಶಿ ಜತೆಗೂ ನೇರ ಸಂಪರ್ಕವನ್ನಿಟ್ಟುಕೊಂಡಿದ್ದಾರೆ. ಹೀಗಾಗಿ ಟಿಕೆಟ್ ಖಚಿತಪಡಿಸಿಕೊಂಡು, ಕ್ಷೇತ್ರದಲ್ಲಿ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಈ ಮಧ್ಯೆ, ಕೆಲವು ಹೊಸ ಮುಖಗಳು ಮತ್ತು ಕ್ಷೇತ್ರದ ಹೊರಗಿನವರ ಚಿತ್ತ ಕೂಡ ಮಂಡ್ಯದತ್ತ ನೆಟ್ಟಿದೆ. ಅಮೆರಿಕದಲ್ಲಿ ಸಾಫ್ಟ್ವೇರ್ ಕಂಪನಿ ಉದ್ಯೋಗ ತೊರೆದು ಬಂದು, ಮಂಡ್ಯದಲ್ಲಿ ಆರ್ಗ್ಯಾನಿಕ್ ಮಂಡ್ಯ ಎನ್ನುವ ಕಂಪೆನಿ ನಡೆಸುತ್ತಿರುವ ಮಧುಚಂದನ್ ಅವರು ರೈತ ಸಂಘದಿಂದ ಸ್ಪರ್ಧೆಗಿಳಿಯುವ ಉತ್ಸಾಹದಲ್ಲಿದ್ದಾರೆ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
೧. ಕೀಲಾರ ರಾಧಾಕೃಷ್ಣ/ ಎಚ್.ಎನ್.ಯೋಗೇಶ್/ ಕೆ.ಎಸ್.ವಿಜಯಾನಂದ (ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿಗಳು)
2. ರವಿಕುಮಾರಗೌಡ (ಕಾಂಗ್ರೆಸ್)
3. ಎಸ್.ಜೆ.ಅಶೋಕ್ ಜಯರಾಮ್(ಬಿಜೆಪಿ)
4. ಮಧುಚಂದನ್ (ರೈತಸಂಘ)
ಜಾತಿವಾರು ಮತದಾರರ ವಿವರ
ಕರ್ನಾಟಕ
ಜೂ.16 ರಿಂದ 22ರವರೆಗೆ ಗೋವಾದಲ್ಲಿ ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವʼ
ಗೋವಾದ ಫೋಂಡಾ ನಗರದ ಶ್ರೀ ರಾಮನಾಥ ದೇವಸ್ಥಾನ ಆವರಣದಲ್ಲಿ ಜೂನ್ 16 ರಿಂದ 22ರವರೆಗೆ 11ನೇ ಅಖಿಲ ಭಾರತೀಯ ಹಿಂದು ರಾಷ್ಟ್ರ ಅಧಿವೇಶನ ನಡೆಯಲಿದೆ.
ಬೆಂಗಳೂರು: ಹಿಂದು ರಾಷ್ಟ್ರ ಸ್ಥಾಪನೆಯ ಉದ್ದೇಶದೊಂದಿಗೆ ಪ್ರತಿ ವರ್ಷದಂತೆ ಜೂನ್ 16 ರಿಂದ 22ರವರೆಗೆ ಗೋವಾದ ಫೋಂಡಾ ನಗರದ ಶ್ರೀ ರಾಮನಾಥ ದೇವಸ್ಥಾನ ಆವರಣದಲ್ಲಿ ʼ11ನೇ ಅಖಿಲ ಭಾರತೀಯ ಹಿಂದು ರಾಷ್ಟ್ರ ಅಧಿವೇಶನʼ (ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ) ಆಯೋಜಿಸಲಾಗಿದೆ ಎಂದು ಹಿಂದು ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಬಗ್ಗೆ ವಿಶೇಷ ತಜ್ಞರ ಚರ್ಚಾಕೂಟ, ಗೌರವಾನ್ವಿತರ ಸಂದರ್ಶನ ಇರಲಿದೆ. ‘ಲವ್ ಜಿಹಾದ್, ‘ಹಲಾಲ್ ಸರ್ಟಿಫಿಕೇಷನ್, ‘ಲ್ಯಾಂಡ್ ಜಿಹಾದ್, ‘ಕಾಶಿ-ಮಥುರಾ ಮುಕ್ತಿ, ‘ಮತಾಂತರ, ‘ಗೋಹತ್ಯೆ, ‘ಕೋಟೆ ದೇವಸ್ಥಾನಗಳ ಮೇಲಿನ ಇಸ್ಲಾಂ ಅತಿಕ್ರಮಣ, ‘ದೇವಸ್ಥಾನ ಸಂಸ್ಕೃತಿಯ ರಕ್ಷಣೆ, ‘ಕಾಶ್ಮೀರಿ ಹಿಂದುಗಳ ಪುನರ್ವಸತಿ, ‘ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದುಗಳ ಮೇಲಿನ ದೌರ್ಜನ್ಯ ಸೇರಿ ವಿವಿಧ ವಿಷಯಗಳ ಜತೆಗೆ ಹಿಂದು ರಾಷ್ಟ್ರದ ಅಡಿಪಾಯಕ್ಕಾಗಿ ಅವಶ್ಯಕ ವಿಷಯಗಳ ಮೇಲೆ ಚರ್ಚೆ, ವಿಚಾರ ವಿನಿಮಯ ಆಗಲಿದೆ ಎಂದು ಹೇಳಿದರು.
ಇದನ್ನೂ ಓದಿ | ರಾಜಮಾರ್ಗ ಅಂಕಣ: ಆತ್ಮಾಹುತಿ ದಾಳಿಗೆ ಎದೆಕೊಟ್ಟು ಆಕೆ ಬಂಡೆಯಂತೆ ನಿಂತಿದ್ದರು!
ಈ ಅಧಿವೇಶನಕ್ಕೆ ಅಮೆರಿಕ, ಬಾಂಗ್ಲಾದೇಶ, ನೇಪಾಳ, ಇಂಗ್ಲೆಂಡ್, ಸಿಂಗಪುರ ಈ ದೇಶಗಳ ಜತೆಗೆ ಭಾರತದಲ್ಲಿನ 28 ರಾಜ್ಯಗಳಲ್ಲಿನ 350ಕ್ಕೂ ಹೆಚ್ಚಿನ ಹಿಂದು ಸಂಘಟನೆಗಳ 1500ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳಿಗೆ ಆಮಂತ್ರಿಸಲಾಗಿದೆ. ಇದರಲ್ಲಿ ಕರ್ನಾಟಕದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಹಿಂದು ನಾಯಕರಾದ ಅರುಣ್ ಪುತ್ತಿಲ, ಡಾ. ಎಸ್. ಆರ್ ಲೀಲಾ, ಅಡ್ಡಂಡ ಕಾರ್ಯಪ್ಪ ಸೇರಿ ಸುಮಾರು 250ಕ್ಕೂ ಅಧಿಕ ಹಿಂದುತ್ವವಾದಿ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅದೇ ರೀತಿ ಅಮರಾವತಿಯ ರುಕ್ಮಿಣಿ ವಲ್ಲಭ ಪೀಠದ ಶ್ರೀ ಜಗದ್ಗುರು ರಾಮಾನಂದಚಾರ್ಯ, ಶ್ರೀ ಸ್ವಾಮಿ ರಾಮರಾಜೇಶ್ವರಾಚಾರ್ಯಜಿ, ವಿಶ್ವ ಹಿಂದು ಪರಿಷತ್ತಿನ ದೇವಗಿರಿ ಪ್ರಾಂತದ ಧರ್ಮಚಾರ್ಯ ಹ.ಭ.ಪ. ಜನಾರ್ಧನ ಮಹಾರಾಜ್ಮೇಟೆ, ಕಾಶಿಯ ಜ್ಞಾನವಾಪಿ ಮಸೀದಿಯ ವಿರುದ್ಧ ಹೋರಾಟ ನಡೆಸುತ್ತಿರುವ ವಕೀಲ ಹರಿಶಂಕರ್ ಜೈನ್, ನ್ಯಾಯವಾದಿ ವಿಷ್ಣು ಶಂಕರ ಜೈನ್, ತೆಲಂಗಾಣದ ಹಿಂದುತ್ವ ನಿಷ್ಠ ಶಾಸಕ ಟಿ. ರಾಜಾಸಿಂಗ್, ದೆಹಲಿಯ ಭಾಜಪದ ನಾಯಕ ಕಪಿಲ್ ಮಿಶ್ರಾ ಮತ್ತಿತರು ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಹಿಂದು ಧರ್ಮವು ವಿಶ್ವ ಬಂಧುತ್ವ ಮತ್ತು ‘ವಸುದೈವ ಕುಟುಂಬಕಂ ಸಂಕಲ್ಪವನ್ನು ಪ್ರಸ್ತುತಪಡಿಸುತ್ತದೆ. ಆದ್ದರಿಂದ ಭಾರತವನ್ನು ಮತ್ತೆ ತುಂಡಾಗುವುದನ್ನು ತಡೆಯಲು ಭಾರತವನ್ನು ಆದರ್ಶ ರಾಮರಾಜ್ಯ ಅರ್ಥಾತ್ ಹಿಂದು ರಾಷ್ಟ್ರ ಮಾಡದೆ ಪರ್ಯಾಯವಿಲ್ಲ ಎಂದು ಮೋಹನ್ ಗೌಡ ಹೇಳಿದರು.
ಈ ಅಧಿವೇಶನದ ನೇರಪ್ರಸಾರ ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ HinduJagruti.org ಮೂಲಕ, ಹಾಗೂ ಸಮಿತಿಯ @Hindujagruti ಈ ಯೂಟ್ಯೂಬ್ ಚಾನೆಲ್ ಮತ್ತು @HinduJagrutiOrg ಈ ಟ್ವಿಟರ್ ಹ್ಯಾಂಡಲ್ ಮೂಲಕ ಆಗಲಿದೆ. ಜಗತ್ತಿನಾದ್ಯಂತ ಇರುವ ಹಿಂದುತ್ವ ನಿಷ್ಠರು ಈ ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಲಾಭ ಪಡೆಯಬೇಕೆಂದು ಹಿಂದು ಜನಜಾಗೃತಿ ಸಮಿತಿಯು ಕರೆ ನೀಡಿದೆ.
ಇದನ್ನೂ ಓದಿ | ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
ಸುದ್ದಿಗೋಷ್ಠಿಯಲ್ಲಿ ಹಿಂದು ವಿದಿಜ್ಞ ಪರಿಷತ್ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಅಮೃತೇಶ್ ಎನ್.ಪಿ, ಹಿಂದು ಜೈ ಭೀಮ್ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್ (ಕೋಟೆ ಶೇಕಿ), ಅಯ್ಯಪ್ಪ ಸೇವಾ ಸಮಾಜಂ ಕರ್ನಾಟಕ ಅಧ್ಯಕ್ಷ ಎನ್. ಜಯರಾಮ, ನೆಲಮಂಗಲದ ಶ್ರೀ ರಾಮಾನುಜ ಪೀಠಂ ಉಪಾಧ್ಯಕ್ಷರು & ಉದ್ಯಮಿ ಜಯರಾಮ.ಎಸ್ ಉಪಸ್ಥಿತರಿದ್ದರು.
ಕರ್ನಾಟಕ
ಹುಬ್ಬಳ್ಳಿ ಏರ್ಪೋರ್ಟ್ ವಿಸ್ತರಣೆಗೆ 273 ಕೋಟಿ ರೂ.; ಕೇಂದ್ರಕ್ಕೆ ಪ್ರಲ್ಹಾದ್ ಜೋಶಿ ಧನ್ಯವಾದ
ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ಕೇಂದ್ರ ಸರ್ಕಾರ 273 ಕೋಟಿ ರೂ. ಬಿಡುಗಡೆ ಮಾಡಿದೆ. ಹೀಗಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆ ಪ್ರಸ್ತಾವನೆಗೆ ಶೀಘ್ರವಾಗಿ ಸ್ಪಂದಿಸಿ 273 ಕೋಟಿ ರೂ. ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನೂತನ ಯೋಜನೆಯಂತೆ ವಿಮಾನ ನಿಲ್ದಾಣದ ಟರ್ಮಿನಲ್ 20,000 ಚ.ಮೀ ವಿಸ್ತರಣೆಗೊಳ್ಳಲಿದ್ದು (ನೆಲಮಹಡಿ ಹಾಗೂ ಮೊದಲ ಮಹಡಿ ಸೇರಿ) ಹಾಗೂ ಏಕಕಾಲಕ್ಕೆ 1400ಕ್ಕೂ ಅಧಿಕ ಪ್ರಯಾಣಿಕರನ್ನು (ಆಗಮಿಸುವ ಮತ್ತು ನಿರ್ಗಮಿಸುವ) ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ. ವಿಸ್ತರಣೆ ಕಾಮಗಾರಿ 2014ರ ಜನವರಿಯಲ್ಲಿ ಆರಂಭವಾಗಲಿದ್ದು, ಎರಡು ವರ್ಷಗಳಲ್ಲಿ ಪ್ರಯಾಣಿಕರ ಉಪಯೋಗಕ್ಕೆ ಮುಕ್ತವಾಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | H.D. Kumaraswamy: ಇದು 40+5 ಪರ್ಸೆಂಟ್ ಕಮಿಷನ್ ಸರ್ಕಾರ: ಕಾಂಗ್ರೆಸ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್!
ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ಸಂಬಂಧಿಸಿದಂತೆ ನಮ್ಮ ಪ್ರಸ್ತಾವನೆಗೆ ಶೀಘ್ರವಾಗಿ ಸ್ಪಂದಿಸಿ ರೂ.273 ಕೋಟಿ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ @NarendraModi ಜೀ ಹಾಗೂ ಕೇಂದ್ರ ವಿಮಾನಯಾನ ಸಚಿವರಾದ ಶ್ರೀ @JM_Scindia ಅವರಿಗೆ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳು.
— Pralhad Joshi (@JoshiPralhad) June 10, 2023
ಕರ್ನಾಟಕ
Bellary News: ಪತ್ನಿ, ಮಕ್ಕಳು ಸೇರಿ ಐವರನ್ನು ಕೊಂದವನಿಗೆ ಮರಣ ದಂಡನೆ
Bellary News: 2017ರಲ್ಲಿ ನಡೆದಿದ್ದ ಐವರ ಕೊಲೆ ಪ್ರಕರಣದಲ್ಲಿ ಅಪರಾಧಿಗೆ ಬಳ್ಳಾರಿ ಸೆಷನ್ಸ್ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಹೈಕೋರ್ಟ್ನ ಧಾರವಾಡ ಪೀಠ ಎತ್ತಿ ಹಿಡಿದಿದೆ.
ಬಳ್ಳಾರಿ: ಪತ್ನಿ ಹಾಗೂ ಮಕ್ಕಳು ಸೇರಿ ಐವರನ್ನು ಕೊಲೆ ಮಾಡಿದ್ದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದ ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ನ ಧಾರವಾಡ ಪೀಠ ಎತ್ತಿ ಹಿಡಿದಿದೆ. ಪತ್ನಿಯ ಶೀಲ ಶಂಕಿಸಿ ಪತ್ನಿ,, ಪತ್ನಿಯ ತಂಗಿ, ಹೆತ್ತ ಮೂವರು ಮಕ್ಕಳು ಸೇರಿ ಒಟ್ಟು ಐವರನ್ನು ಕೊಲೆ ಮಾಡಿದ ಹಿನ್ನೆಲೆಯಲ್ಲಿ ಅಪರಾಧಿಗೆ ಮರಣ ದಂಡನೆ ಶಿಕ್ಷೆ (Bellary News) ನೀಡಲಾಗಿದೆ.
ಜಿಲ್ಲೆಯ ಕಂಪ್ಲಿಯ ಚಪ್ಪರದಳ್ಳಿ ವಡ್ಡರ ತಿಪ್ಪೇಸ್ವಾಮಿ ಮನೆ ಬಳಿ 2017ರ ಫೆಬ್ರವರಿ 25 ರಂದು ಬೈಲೂರು ತಿಪ್ಪಯ್ಯ, ಐವರನ್ನು ಕೊಚ್ಚಿ ಕೊಲೆ ಮಾಡಿದ್ದ. ಪತ್ನಿ ಫಕೀರಮ್ಮ (36), ಪತ್ನಿಯ ತಂಗಿ ಗಂಗಮ್ಮ (30), ಮಕ್ಕಳಾದ ಬಸಮ್ಮ (9), ರಾಜಪ್ಪ(8), ಪವಿತ್ರ(6) ಹತ್ಯೆಯಾಗಿದ್ದರು.
ಇದನ್ನೂ ಓದಿ | Murder Case: ರೂಮಿನಲ್ಲಿ ಬೆಚ್ಚಗೆ ಮಲಗಿದ್ದವಳ ಕತ್ತು ಕೊಯ್ದ ಪ್ರಿಯಕರ!
ತಿಪ್ಪಯ್ಯನಿಗೆ 2019ರ ಡಿಸೆಂಬರ್ 3ರಂದು ಬಳ್ಳಾರಿ ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಹೀಗಾಗಿ ಧಾರವಾಡ ಹೈಕೋರ್ಟ್ನಲ್ಲಿ ಈತ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆದು ಬಳ್ಳಾರಿ ಸೆಷೆನ್ಸ್ ನ್ಯಾಯಾಲಯದ ತೀರ್ಪನ್ನೇ ಹೈಕೋರ್ಟ್ನ ಧಾರವಾಡ ಪೀಠ ಹಿಡಿದು ಮರಣ ದಂಡನೆ ಶಿಕ್ಷೆ ಖಚಿತಪಡಿಸಿದೆ.
ಕರ್ನಾಟಕ
Koppala News: ಅಂಜನಾದ್ರಿ ಬೆಟ್ಟದಲ್ಲಿ ಕ್ಲೀನ್ ಡ್ರೈವ್; ಎಲ್ಲೆಂದರಲ್ಲಿ ಬಿಸಾಡಿದ ಸಾವಿರಾರು ವಾಟರ್ ಬಾಟಲ್ಗಳು: ಪರಿಸರ ನಾಶದ ಆತಂಕ
Koppala News: ಪ್ರಸಿದ್ಧ ಪ್ರಮುಖ ಧಾರ್ಮಿಕ ತಾಣವಾಗಿರುವ ಅಂಜನಾದ್ರಿ ಬೆಟ್ಟಕ್ಕೆ ದರ್ಶನಕ್ಕೆ ಬರುವ ಭಕ್ತರು, ಯಾತ್ರಾರ್ಥಿಗಳು ಬಳಸಿ ಬಿಸಾಡುತ್ತಿರುವ ವಾಟರ್ ಬಾಟಲ್ಗಳು, ತಿಂಡಿ-ತಿನಿಸುಗಳ ಪ್ಯಾಕೆಟ್, ತಂಬಾಕು ಪದಾರ್ಥಗಳು ಸೇರಿದಂತೆ ದಿನೇ ದಿನೇ ಸಾಕಷ್ಟು ತ್ಯಾಜ್ಯ ಸಂಗ್ರಹಗೊಳ್ಳುತ್ತಿದ್ದು, ಪರಿಸರ ನಾಶದ ಆತಂಕ ಸೃಷ್ಟಿಯಾಗಿದೆ. ಶನಿವಾರ ಗಂಗಾವತಿಯ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು ಕ್ಲೀನ್ ಡ್ರೈವ್ ಕಾರ್ಯ ಕೈಗೊಂಡು ಸಾವಿರಾರು ವಾಟರ್ ಬಾಟಲ್, ತ್ಯಾಜ್ಯವನ್ನು ಸಂಗ್ರಹಿಸಿದರು.
ಗಂಗಾವತಿ: ಪ್ರಸಿದ್ಧ ಪ್ರಮುಖ ಧಾರ್ಮಿಕ ತಾಣವಾಗಿರುವ ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ಶನಿವಾರ ಗಂಗಾವತಿಯ ಕಿಷ್ಕಿಂಧಾ (Kishkindha) ಯುವ ಚಾರಣ ಬಳಗದ ಸದಸ್ಯರು ಕ್ಲೀನ್ ಡ್ರೈವ್ (Clean drive) ಕಾರ್ಯ ಕೈಗೊಂಡರು.
ಅಂಜನಾದ್ರಿ ಬೆಟ್ಟಕ್ಕೆ ದರ್ಶನಕ್ಕೆ ಬರುವ ಭಕ್ತರು, ಯಾತ್ರಾರ್ಥಿಗಳು ಬಿಸಾಡುತ್ತಿರುವ ತ್ಯಾಜ್ಯದಿಂದಾಗಿ ಇದೀಗ ಇಡೀ ಬೆಟ್ಟದಲ್ಲಿ ತ್ಯಾಜ್ಯಗಳಿಂದ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ಬಾಟಲಿಗಳಿಂದ ಪರಿಸರ ನಾಶವಾಗುತ್ತಿರುವ ಆತಂಕ ಎದುರಾಗಿದ್ದು, ಇದನ್ನು ಮನಗಂಡ ಗಂಗಾವತಿಯ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು ಬೆಟ್ಟದ ಕಲ್ಲು ಸಂದಿಗಳಲ್ಲಿ, ಮೆಟ್ಟಿಲುಗಳ ಎರಡು ಕಡೆಗಳಲ್ಲಿ ಜನರು ಎಸೆದಿದ್ದ ನೀರಿನ ಬಾಟಲ್, ತ್ಯಾಜ್ಯಗಳ ಸಂಗ್ರಹಕ್ಕಾಗಿ `ಕ್ಲೀನ್ ಡ್ರೈವ್’ ಕಾರ್ಯ ಮಾಡಿದರು.
ಇದನ್ನೂ ಓದಿ: WTC Final 2023: ಭಾರತ-ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಹೈಲೆಟ್ಸ್
200 ರಿಂದ 300 ಚೀಲದಷ್ಟು ಪ್ಲಾಸ್ಟಿಕ್ ತ್ಯಾಜ್ಯವಿರುವ ಸಾಧ್ಯತೆ
ಸುಮಾರು 40ಕ್ಕೂ ಹೆಚ್ಚು ಯವಕರು ಶನಿವಾರ ತ್ಯಾಜ್ಯ ಸಂಗ್ರಹ ಕಾರ್ಯಕ್ಕೆ ಇಳಿದೆವು. ಸುಮಾರು 50ಕ್ಕೂ ಹೆಚ್ಚು ಚೀಲಗಳಲ್ಲಿ ತ್ಯಾಜ್ಯ ಸಂಗ್ರಹಿಸಿದ್ದು, ಇನ್ನೂ 200 ರಿಂದ 300 ಚೀಲದಷ್ಟು ಪ್ಲಾಸ್ಟಿಕ್ ತ್ಯಾಜ್ಯ ಇರುವ ಸಾಧ್ಯತೆ ಇದೆ ಎಂದು ಚಾರಣ ಬಳಗದ ಸದಸ್ಯ ಸಂತೋಷ್ ತಿಳಿಸಿದ್ದಾರೆ.
ಕುಡಿಯುವ ನೀರಿನ ಬಾಟಲ್ಗಳೇ ಅಧಿಕ
ಸಂಗ್ರಹಿಸಿದ ತ್ಯಾಜ್ಯದಲ್ಲಿ ಕುಡಿಯುವ ನೀರಿನ ಬಾಟಲ್ಗಳ ಪ್ರಮಾಣವೇ ಅಧಿಕವಾಗಿದೆ. ಜತೆಗೆ ತಂಬಾಕು ಪದಾರ್ಥಗಳ ತ್ಯಾಜ್ಯ, ತಿಂಡಿ-ತಿನಿಸುಗಳ ಪ್ಲಾಸ್ಟಿಕ್ ಪ್ಯಾಕೆಟ್ ಗಳನ್ನು ಬಳಸಿ ಎಲ್ಲೆಂದರಲ್ಲಿ ಎಸೆದು ಹೋಗಿದ್ದು, ಇದರಿಂದ ಬೆಟ್ಟದ ಸಹಜ ಸೌದರ್ಯ ನಾಶವಾಗುತ್ತದೆ ಎಂಬ ಕಾರಣಕ್ಕೆ ಗಂಗಾವತಿ, ಹೊಸಪೇಟೆ, ಕೊಪ್ಪಳ, ಕಂಪ್ಲಿ, ಕುಷ್ಟಗಿ, ಆನೆಗುಂದಿ, ಹನುಮನಹಳ್ಳಿಯಿಂದ ಬಂದಿದ್ದ ಸಮಾನ ಮನಸ್ಕ ಯುವಕರು ಸ್ವಚ್ಛತೆಗೆ ಮುಂದಾಗಿದ್ದೇವೆ ಎಂದು ಚಾರಣ ಬಳಗದ ಮತ್ತೊಬ್ಬ ಸದಸ್ಯ ತಿಳಿಸಿದರು.
ಇದನ್ನೂ ಓದಿ: ಎಟಿಎಸ್ ಭರ್ಜರಿ ಕಾರ್ಯಾಚರಣೆ; ಐಸಿಸ್ ತರಬೇತಿಗಾಗಿ ಅಫ್ಘಾನ್ಗೆ ಹೊರಟಿದ್ದ ಯುವತಿ, ಯುವಕರ ಬಂಧನ
ಮದ್ಯ ಬಾಟಲ್ಗಳು ಪತ್ತೆ
ಪ್ರಸಿದ್ಧ ಧಾರ್ಮಿಕ ತಾಣವಾದ ಅಂಜನಾದ್ರಿ ಬೆಟ್ಟದಲ್ಲಿ ಮದ್ಯ ಬಾಟಲಿಗಳು ಕೂಡ ಕಿಷ್ಕಿಂಧಾ ಯುವ ಚಾರಣ ಬಳಗ ಹಮ್ಮಿಕೊಂಡಿದ್ದ ಕ್ಲೀನ್ ಡ್ರೈವ್ ಸಂದರ್ಭದಲ್ಲಿ ಪತ್ತೆಯಾಗಿವೆ.
570 ಕ್ಕೂ ಹೆಚ್ಚು ಮೆಟ್ಟಿಲುಗಳಿರುವ ಅಂಜನಾದ್ರಿ ಬೆಟ್ಟ ಏರುವಾಗ ದಣಿವಾರಿಸಿಕೊಳ್ಳಲು ಎಂದು ಹಲವರು ಕುಡಿಯುವ ನೀರಿನ ಬಾಟಲಿ, ಆಹಾರದ ಪೊಟ್ಟಣಗಳನ್ನು ತರುತ್ತಾರೆ. ಆಹಾರ ಸೇವಿಸಿದ ಬಳಿಕ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದು ತ್ಯಾಜ್ಯ ಸಂಗ್ರಹಕ್ಕೆ ಕಾರಣವಾಗಿದೆ.
ಇದನ್ನೂ ಓದಿ: WTC Final 2023: 44 ವರ್ಷಗಳ ಹಳೆಯ ದಾಖಲೆ ಪುಡಿಗಟ್ಟಿದ ರವೀಂದ್ರ ಜಡೇಜಾ
ಜನರಲ್ಲಿ ಜಾಗೃತಿ ಮೂಡಿಸಲಿ
ಭಕ್ತರು ಎಸೆದಿರುವ ಕುಡಿಯುವ ನೀರಿನ ಬಾಟಲಿಗಳ ಪ್ರಮಾಣವೇ ಸುಮಾರು ಹತ್ತು ಸಾವಿರಕ್ಕೂ ಅಧಿಕವಿದೆ. ತಾಜ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ದೇವಸ್ಥಾನದ ಆಡಳಿತ ಮಂಡಳಿ ಮತ್ತು ತಾಲೂಕು ಆಡಳಿತ ಮಾಡಬೇಕು ಎಂದು ಚಾರಣ ಬಳಗದ ಸದಸ್ಯರು ಆಗ್ರಹಿಸಿದ್ದಾರೆ.
-
ಸುವಚನ21 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಅಂಕಣ19 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ಕ್ರಿಕೆಟ್16 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್15 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ12 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್13 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
South Cinema13 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ
-
ಕರ್ನಾಟಕ11 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ