ದೇಶ
NITI Aayog Meeting: ಕೇಂದ್ರಕ್ಕೆ ಬಾಯ್ಕಾಟ್ ಬಿಸಿ; ದೀದಿ ಬಳಿಕ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಕೇಜ್ರಿವಾಲ್
NITI Aayog Meeting: ದೆಹಲಿಯಲ್ಲಿ ಎ ದರ್ಜೆ ನೌಕರರ ವರ್ಗಾವಣೆ, ನಿಗಾ ಸೇರಿ ಆಡಳಿತ ಸೇವೆಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಕಾರಣ ಅರವಿಂದ್ ಕೇಜ್ರಿವಾಲ್ ಅವರು ನೀತಿ ಆಯೋಗದ ಸಭೆಗೆ ಗೈರಾಗಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ: ಕೇಂದ್ರ ಸರ್ಕಾರಕ್ಕೆ ದಿನೇದಿನೆ ಪ್ರತಿಪಕ್ಷಗಳ ಬಹಿಷ್ಕಾರದ ಬಿಸಿ ಹೆಚ್ಚಾಗುತ್ತಿದೆ. ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದ ಕಾರಣ ಸುಮಾರು 20 ಪ್ರತಿಪಕ್ಷಗಳು ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಇದರ ಬೆನ್ನಲ್ಲೇ, ಬಹಿಷ್ಕಾರದ ಬಿಸಿಯು ನೀತಿ (NITI Aayog Meeting) ಆಯೋಗದ ಸಭೆಗೂ ತಟ್ಟಿದೆ. ಈಗಾಗಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀತಿ ಆಯೋಗದ ಸಭೆಗೆ ಹಾಜರಾಗದಿರಲು ತೀರ್ಮಾನಿಸಿದ್ದು, ಈಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೂಡ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ದೆಹಲಿ ಆಡಳಿತ ಸೇವೆಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಸಭೆಗೆ ಗೈರಾಗಲು ತೀರ್ಮಾನಿಸಿರುವ ಜತೆಗೆ ನರೇಂದ್ರ ಮೋದಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ. “ಪ್ರಧಾನಿ ಅವರೇ ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ಧರಾಗದಿದ್ದರೆ, ನ್ಯಾಯಕ್ಕಾಗಿ ಯಾರ ಬಳಿ ತೆರಳಬೇಕು ಎಂದು ಜನ ಕೇಳುತ್ತಿದ್ದಾರೆ. ಸಹಕಾರ ಒಕ್ಕೂಟ ಎಂಬುದೇ ಹಾಸ್ಯಾಸ್ಪದವಾಗಿರುವಾಗ ನೀತಿ ಆಯೋಗದ ಸಭೆಗೆ ಹಾಜರಾಗುವುದರಿಂದ ಏನು ಪ್ರಯೋಜನ” ಎಂದು ಪ್ರಶ್ನಿಸಿದ್ದಾರೆ.
ಮೋದಿಗೆ ಕೇಜ್ರಿವಾಲ್ ಪತ್ರ
Delhi CM Arvind Kejriwal to boycott NITI Ayog meeting, writes a letter to PM Narendra Modi saying "People are asking, if the PM doesn't abide by the SC then where will people go for justice? What's the point of attending NITI Ayog meeting when cooperative federalism is a joke" pic.twitter.com/CPIQJaF9oH
— ANI (@ANI) May 26, 2023
ಪಶ್ಚಿಮ ಬಂಗಾಳದ ಬೇಡಿಕೆಗಳನ್ನು ಈಡೇರಿಸದ ಕಾರಣದಿಂದಾಗಿ ಮಮತಾ ಬ್ಯಾನರ್ಜಿ ಅವರು ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ವಿಚಾರಗಳ ದೃಷ್ಟಿಯಿಂದಾಗಿ ನೀತಿ ಆಯೋಗದ ಸಭೆಯು ಪ್ರಾಮುಖ್ಯತೆ ಪಡೆದಿದೆ. ಆದರೆ, ಮುಖ್ಯಮಂತ್ರಿಗಳು ಈಗ ನೀತಿ ಆಯೋಗದ ಸಭೆಯನ್ನೇ ಬಹಿಷ್ಕರಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಸ್ವಂತ ನೀತಿ ಆಯೋಗ ರಚನೆ ಶೀಘ್ರ, ತ್ವರಿತ ಅಭಿವೃದ್ಧಿಯ ನಿರೀಕ್ಷೆ
ಲೋಕಸಭೆ ಚುನಾವಣೆ ದೃಷ್ಟಿಯಿಂದಾಗಿ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತೇವೆ. ಇದಕ್ಕಾಗಿಯೇ ಕೆಲ ದಿನಗಳ ಹಿಂದೆ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ ಅವರು ಸಭೆ ನಡೆಸಿದ್ದರು. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿಚಾರದಲ್ಲೂ ಪ್ರತಿಪಕ್ಷಗಳು ಒಗ್ಗಟ್ಟಾಗುತ್ತಿವೆ. ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರು ದೆಹಲಿ ಸರ್ಕಾರದ ಪರ ನಿಂತಿದ್ದಾರೆ. ಸಂಸತ್ ಭವನದ ವಿಚಾರದಲ್ಲಂತೂ ಬಹುತೇಕ ಪ್ರತಿಪಕ್ಷಗಳು ಒಗ್ಗೂಡಿವೆ. ಈಗ ನೀತಿ ಆಯೋಗದ ಸಭೆ ವಿಚಾರದಲ್ಲೂ ಒಗ್ಗಟ್ಟು ಪ್ರದರ್ಶಿಸಲಾಗುತ್ತಿದೆ.
ದೇಶ
ಶಾಲೆಯಲ್ಲಿ 30ಕ್ಕೂ ಹೆಚ್ಚು ಮಕ್ಕಳ ಕೂದಲು ಕತ್ತರಿಸಿದ ಶಿಕ್ಷಕ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಮಕ್ಕಳ ಕೂದಲು ಕತ್ತರಿಸಿದ್ದು ನಿಕ್ಕಿ ಎಂಬ ಶಿಕ್ಷಕರಾಗಿದ್ದು, ಅವರು ಶಾಲಾ ಆಡಳಿತದ ನಿಯಮವನ್ನಷ್ಟೇ ಪಾಲಿಸಿದ್ದಾರೆ. ಆದರೆ ಕೂದಲು ಕಟ್ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ. ಶಾಲೆಗೆ ಹೋಗಲು ಇಷ್ಟವಿಲ್ಲ ಎನ್ನುತ್ತಿದ್ದಾರೆ.
ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ವಿದ್ಯಾಭ್ಯಾಸದ ಜತೆ ಶಿಸ್ತು ಕೂಡ ಕಲಿಸುತ್ತಾರೆ. ಇದು ಅಗತ್ಯವೂ ಹೌದು. ಆದರೆ ಅಸ್ಸಾಂನ ಮಜುಲಿ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಮಕ್ಕಳಿಗೆ ಶಿಸ್ತಿನ ಪಾಠ ಮಾಡಲು ಹೋಗಿ ವಿವಾದ ಸೃಷ್ಟಿಸಿದ್ದಾರೆ. ಬೆಳಗ್ಗೆ ಶಾಲೆಯಲ್ಲಿ ನಡೆಯುವ ಪ್ರಾರ್ಥನೆ ನಂತರದ ಸೆಷನ್ನಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೂದಲು ಕತ್ತರಿಸಿದ್ದಾರೆ (Teacher Chops Hair Of Students). ಈ ಕೇಸ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೂಕ್ತವಾಗಿ ತನಿಖೆ ನಡೆಸುವಂತೆ ಹೆಚ್ಚುವರಿ ಆಯುಕ್ತರಾದ ಕಾವೇರಿ ಬಿ.ಶರ್ಮಾ ಸೂಚನೆ ನೀಡಿದ್ದಾರೆ.
ಈ ವಿಷಯ ವಿವಾದ ಸೃಷ್ಟಿ ಮಾಡುತ್ತಿದ್ದಂತೆ ಶಾಲಾ ಆಡಳಿತ ಹೇಳಿಕೆ ಬಿಡುಗಡೆ ಮಾಡಿದೆ. ‘ಮಕ್ಕಳ ಕೂದಲು ಉದ್ದುದ್ದ ಬೆಳೆದಿತ್ತು. ಶಾಲೆಯ ಮಾರ್ಗಸೂಚಿ ಪ್ರಕಾರ ಇಲ್ಲಿನ ಗಂಡು ಮಕ್ಕಳು ಉದ್ದನೆಯ ಕೂದಲು ಬಿಡುವುದಕ್ಕೆ ಅವಕಾಶ ಇಲ್ಲ. ಹೇರ್ಕಟ್ ಮಾಡಿಸಿಕೊಳ್ಳುವಂತೆ ಮಕ್ಕಳಿಗೆ ಹೇಳಿಯಾಯಿತು. ಪಾಲಕರಿಗೂ ವಿಷಯ ತಿಳಿಸಲಾಗಿತ್ತು. ಆದರೆ ಒಂದಷ್ಟು ಮಕ್ಕಳು ಮಾತು ಕೇಳಲೇ ಇಲ್ಲ. ಹೀಗಾಗಿ ನಾವೇ ಕೂದಲು ಕಟ್ ಮಾಡಿದ್ದೇವೆ. ಇದು ಮಕ್ಕಳಿಗೆ ಶಿಸ್ತು ಕಲಿಸುವ ಒಂದು ವಿಧಾನವಷ್ಟೇ’ ಎಂದು ತಿಳಿಸಿದೆ. ಅಷ್ಟೇ ಅಲ್ಲ, ಶಿಕ್ಷಕರು ವಿದ್ಯಾರ್ಥಿಗಳ ಕೂದಲ ಉದ್ದವನ್ನು ಮಾತ್ರ ಕಡಿಮೆ ಮಾಡಿದ್ದಾರೆ. ಟ್ರಿಮ್ ಮಾಡಿಲ್ಲ, ಯಾವುದೇ ಸ್ಟೈಲ್ಲ್ಲಿ ಹೇರ್ಕಟ್ ಮಾಡಿಲ್ಲ ಎಂದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: Shivamogga News: ಸಾಗರದಲ್ಲಿ ವಿಷಾಹಾರ ಸೇವನೆಯಿಂದ 30ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ
ಮಕ್ಕಳ ಕೂದಲು ಕತ್ತರಿಸಿದ್ದು ನಿಕ್ಕಿ ಎಂಬ ಶಿಕ್ಷಕರಾಗಿದ್ದು, ಅವರು ಶಾಲಾ ಆಡಳಿತದ ನಿಯಮವನ್ನಷ್ಟೇ ಪಾಲಿಸಿದ್ದಾರೆ. ಆದರೆ ಕೂದಲು ಕಟ್ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ. ಶಾಲೆಗೆ ಹೋಗಲು ಇಷ್ಟವಿಲ್ಲ ಎಂದು ಮನೆಯಲ್ಲಿ ಹಠ ಹಿಡಿದು ಕುಳಿತಿದ್ದಾರೆ. ಪಾಲಕರೂ ಕಿಡಿಕಾರಿದ್ದಾರೆ. ‘ಶಾಲೆಯಲ್ಲಿ ಮಕ್ಕಳಿಗೆ ಶಿಸ್ತು ಕಲಿಸುವುದು ಬೇಡ ಎಂದು ನಾವು ಹೇಳುವುದಿಲ್ಲ. ಆದರೆ ಅದಕ್ಕೂ ಒಂದು ಮಿತಿಯಿದೆ. ಮಕ್ಕಳು ಅವರ ಸಮವಸ್ತ್ರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಚೆನ್ನಾಗಿ ಇರಬೇಕು. ಆದರೆ ಇಡೀ ಶಾಲೆಯಲ್ಲಿರುವ ಎಲ್ಲ ಮಕ್ಕಳು, ವಿದ್ಯಾರ್ಥಿಗಳ ಎದುರು ಕೆಲವೇ ಕೆಲವು ವಿದ್ಯಾರ್ಥಿಗಳ ತಲೆಕೂದಲು ಕತ್ತರಿಸಿದ್ದು, ಅವರಿಗೆ ಅವಮಾನ ಆಗಿದೆ’ ಎಂದು ಹೇಳಿದ್ದಾರೆ.
ದೇಶ
NITI Aayog Meeting: ನೀತಿ ಆಯೋಗದ ಸಭೆಗೆ ಸಿದ್ದು ಸೇರಿ 10 ಸಿಎಂಗಳು ಗೈರು; ರಾಜ್ಯಗಳಿಗೆ ನಷ್ಟವೇನು?
NITI Aayog Meeting: ಕೇಂದ್ರ ಸರ್ಕಾರದ ಮೇಲಿನ ಮುನಿಸು, ಆಕ್ರೋಶದಿಂದಾಗಿ ನೀತಿ ಆಯೋಗದ ಸಭೆಗೆ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ಆದರೆ, ಸಭೆಗೆ ಗೈರಾಗುವುದರಿಂದ ರಾಜ್ಯಗಳಿಗೇ ನಷ್ಟ ಎನ್ನಲಾಗುತ್ತಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಎಂಟನೇ ಗವರ್ನಿಂಗ್ ಸಮಿತಿ ಸಭೆ (Governing Council Meeting) ನಡೆದಿದ್ದು, ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ವಿರುದ್ಧದ ಆಕ್ರೋಶ, ಮುನಿಸಿನಿಂದಾಗಿ 10 ರಾಜ್ಯಗಳ ಮುಖ್ಯಮಂತ್ರಿಗಳು ಸಭೆಗೆ ಗೈರಾಗಿದ್ದಾರೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಮಹತ್ವ ಪಡೆದಿರುವ ಸಭೆಗೆ ಸಿಎಂಗಳು ಗೈರಾಗಿರುವುದು ಆಯಾ ರಾಜ್ಯಗಳಿಗೇ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.
ನೀತಿ ಆಯೋಗದ ಸಭೆಯಲ್ಲಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ 100 ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್ಗಳು, ಕೇಂದ್ರ ಸಚಿವರು ಸಭೆಯಲ್ಲಿ ಭಾಗವಹಿಸಿ ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಲಾಗಿದೆ. ಎಂಎಸ್ಎಂಇ, ಮೂಲ ಸೌಕರ್ಯ, ಹೂಡಿಕೆ, ಮಹಿಳಾ ಸಬಲೀಕರಣ, ಆರೋಗ್ಯ, ಕೌಶಲಾಭಿವೃದ್ಧಿ ಸೇರಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಕೆಲವು ರಾಜ್ಯಗಳು ಕೂಡ ತಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿರಿಸಿವೆ. ಏಳಿಗೆ ದಿಸೆಯಲ್ಲಿಯೇ ಪ್ರಮುಖ ತೀರ್ಮಾನಗಳನ್ನೂ ತೆಗೆದುಕೊಳ್ಳಲಾಗಿದೆ. ಈಗ ಗೈರಾದ ರಾಜ್ಯಗಳಿಗೆ ಈ ವಿಷಯಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ತೀರ್ಮಾನಗಳ ಜಾರಿಗೆ ಕಷ್ಟವಾಗಲಿದೆ ಎನ್ನಲಾಗುತ್ತಿದೆ.
🎥Visuals of the @NITIAayog Governing Council meeting underway pic.twitter.com/KihqOZ36ZP
— PIB India (@PIB_India) May 27, 2023
ಗೈರಾದ ಸಿಎಂಗಳು ಯಾರು? ಏಕೆ?
ದೆಹಲಿಯಲ್ಲಿ ಆಡಳಿತ ಸೇವೆಗಳ ಮೇಲಿನ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಭೆಗೆ ಹಾಜರಾಗಿಲ್ಲ. ಇನ್ನು, ಕೇಂದ್ರದಿಂದ ಅನುದಾನ ಸಿಗುತ್ತಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಕೂಡ ಗೈರಾಗಿದ್ದಾರೆ. ಕರ್ನಾಟಕದಲ್ಲಿ ಸಚಿವರ ಪ್ರಮಾಣವಚನ, ಖಾತೆ ಹಂಚಿಕೆ ಹಿನ್ನೆಲೆಯಲ್ಲಿ ನೂತನ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.
ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಬೇರೆ ಕಾರ್ಯಕ್ರಮದಿಂದಾಗಿ ಒಡಿಶಾ ಸಿಎಂ ನವೀನ್ ಪಾಟ್ನಾಯಕ್, ಕೇಂದ್ರದ ಮೇಲಿನ ಅಸಮಾಧಾನದಿಂದಾಗಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಬಿಹಾರದ ನಿತೀಶ್ ಕುಮಾರ್, ತೆಲಂಗಾಣದ ಕೆ.ಚಂದ್ರಶೇಖರ ರಾವ್ ಹಾಗೂ ಯಾವುದೇ ಕಾರಣ ನೀಡದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.
ಇದನ್ನೂ ಓದಿ: NITI Aayog Meeting: ಕೇಂದ್ರಕ್ಕೆ ಬಾಯ್ಕಾಟ್ ಬಿಸಿ; ದೀದಿ ಬಳಿಕ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಕೇಜ್ರಿವಾಲ್
ದೇಶ
NIA Raid: ಮಧ್ಯಪ್ರದೇಶದಲ್ಲಿ ಐಸಿಸ್ ಉಗ್ರರ ಜಾಲ ಬಯಲು; ಮಸೀದಿಗಳಲ್ಲೇ ಸಂಚು ರೂಪಿಸುತ್ತಿದ್ದ ಮೂವರ ಬಂಧನ
NIA Raid: ಮಧ್ಯಪ್ರದೇಶದ ಜಬಲ್ಪುರದ ಹಲವೆಡೆ ದಾಳಿ ನಡೆಸಿದ ಎನ್ಐಎ, ಮೂವರು ಮೂಲಭೂತವಾದಿಗಳನ್ನು ಬಂಧಿಸಿದೆ. ಇವರು ದೇಶದಲ್ಲಿ ಉಗ್ರರ ದಾಳಿಗೆ ನೆರವಾಗುವ ಜತೆಗೆ ಶಸ್ತ್ರಾಸ್ತ್ರ ಸಂಗ್ರಹಣೆ, ಯುವಕರ ನೇಮಕ ಸೇರಿ ಹಲವು ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಎನ್ಐಎ ತಿಳಿಸಿದೆ.
ಭೋಪಾಲ್: ಮಧ್ಯಪ್ರದೇಶದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (NIC) ಜಂಟಿ ಕಾರ್ಯಾಚರಣೆ ನಡೆಸಿ ಐಸಿಸ್ ಉಗ್ರರ ಜಾಲವೊಂದನ್ನು (NIA Raid) ಭೇದಿಸಿದೆ. ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಮಧ್ಯಪ್ರದೇಶ ಉಗ್ರ ನಿಗ್ರಹ ದಳದ (ATS) ಜತೆಗೂಡಿ ಎನ್ಐಎ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಜಬಲ್ಪುರದಲ್ಲಿ ಮೂವರನ್ನು ಬಂಧಿಸಿದೆ. ಮೂವರೂ ಭಾರತದಲ್ಲಿ ಐಸಿಸ್ ದಾಳಿಗೆ ಪಿತೂರಿ ನಡೆಸುತ್ತಿದ್ದರು ಎಂದು ಎನ್ಐಎ ತಿಳಿಸಿದೆ.
ಮೇ 26 ಹಾಗೂ 27ರಂದು ಎನ್ಐಎ ಜಬಲ್ಪುರದ 13 ಕಡೆ ದಾಳಿ ನಡೆಸಿದ್ದು, ಇದೇ ವೇಳೆ ಸೈಯದ್ ಮಮೂರ್ ಅಲಿ, ಮೊಹಮ್ಮದ್ ಆದಿಲ್ ಖಾನ್ ಹಾಗೂ ಮೊಹಮ್ಮದ್ ಶಾಹಿದ್ ಎಂಬುವರನ್ನು ಬಂಧಿಸಲಾಗಿದೆ. ಇವರ ಬಳಿ ಶಸ್ತ್ರಾಸ್ತ್ರ, ದಾಖಲೆ ಹಾಗೂ ಡಿಜಿಟಲ್ ಡಿವೈಸ್ಗಳು ಸಿಕ್ಕಿವೆ. ಶೀಘ್ರದಲ್ಲೇ ಇವರನ್ನು ಎನ್ಐಎ ವಿಶೇಷ ಕೋರ್ಟ್ಗೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಐಸಿಸ್ ಪರ ಚಟುವಟಿಕೆಗಳಲ್ಲಿ ತೊಡಗಿದ್ದ ಮೊಹಮ್ಮದ್ ಆದಿಲ್ ಖಾನ್ ಮೇಲೆ ಎನ್ಐಎ ಕಳೆದ ವರ್ಷದಿಂದಲೂ ನಿಗಾ ವಹಿಸಿತ್ತು. ಹಾಗೆಯೇ, ಆತನ ವಿರುದ್ಧ ಮೇ 24ರಂದು ಪ್ರಕರಣ ದಾಖಲಿಸಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಐಸಿಸ್ ವಿಚಾರಧಾರೆಗಳನ್ನು ಹರಡುವುದು, ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯುವುದು ಸೇರಿ ಹಲವು ಚಟುವಟಿಕೆಗಳಲ್ಲಿ ನಿರತನಾಗಿದ್ದ. ಇವನಿಗೆ ಸಹಚರರು ಕೂಡ ಇದ್ದರು ಎಂದು ತಿಳಿದುಬಂದಿದೆ. ಅದರಂತೆ, ಎನ್ಐಎ ದಾಳಿ ನಡೆಸಿ ಬಂಧಿಸಿದೆ.
ಭಾರತದಲ್ಲಿ ಐಸಿಸ್ ಉಗ್ರರ ದಾಳಿಗೆ ಸಂಚು ರೂಪಿಸಲು ಬಂಧಿತರು ನೆರವು ನೀಡುತ್ತಿದ್ದರು. ಇದಕ್ಕಾಗಿ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದರು. ಹಾಗೆಯೇ, ಮಸೀದಿಗಳು ಹಾಗೂ ಮನೆಗಳಲ್ಲಿ ಸಾಲು ಸಾಲು ಸಭೆ ನಡೆಸುತ್ತಿದ್ದರು. ಅದರಲ್ಲೂ, ಬಂಧಿತ ಮೂವರು ಮೂಲಭೂತವಾದವನ್ನು ಪಸರಿಸಲು ಪಿತೂರಿ ನಡೆಸುತ್ತಿದ್ದರು. ಯುವಕರನ್ನು ಉಗ್ರ ಚಟುವಟಿಕೆಗಳತ್ತ ಸೆಳೆಯುವ ಜತೆಗೆ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲೂ ಇವರು ತೊಡಗಿದ್ದರು ಎಂದು ಎನ್ಐಎ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಕಾರಾಗೃಹದ ಮೇಲೆ ದಾಳಿ ಮಾಡಿದ್ದ ಪೊಲೀಸ್ ವೇಷಧಾರಿ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಎನ್ಐಎ
ಮೂವರಲ್ಲಿ ಸೈಯದ್ ಮಮೂರ್ ಅಲಿಯು ಸ್ಥಳೀಯವಾಗಿ ಫಿಸ್ಬಿಲ್ಲಾಹ್ ಎಂಬ ತಂಡವನ್ನು ಕಟ್ಟಿದ್ದ. ಹಾಗೆಯೇ, ವಾಟ್ಸ್ಆ್ಯಪ್ ಗ್ರೂಪ್ ಮೂಲಕವೂ ಮೂಲಭೂತವಾದ ಹರಡುತ್ತಿದ್ದ. ಆದಿಲ್ನು ಸಮಾನ ಮನಸ್ಕ ಯುವಕರನ್ನು ಒಗ್ಗೂಡಿಸುತ್ತಿದ್ದ. ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಿಸುವವರ ಜತೆಗೂ ಇವರು ಸಂಪರ್ಕ ಹೊಂದಿದ್ದರು ಎಂದು ಎನ್ಐಎ ಮಾಹಿತಿ ನೀಡಿದೆ.
ಕ್ರೈಂ
ಬೇಸಿಗೆ ರಜಾ ಇದ್ದರೂ ಶಾಲೆಗೆ ಹೋಗಿ ನಿಗೂಢವಾಗಿ ಮೃತಪಟ್ಟ 10ನೇ ತರಗತಿ ವಿದ್ಯಾರ್ಥಿನಿ
ಬಾಲಕಿಯ ತಲೆ ಮತ್ತು ಪಾದಗಳ ಮೇಲೆ ಗಾಯಗಳು ಗುರುತು ಇದೆ. ಮುಖ ಊದಿಕೊಂಡಿತ್ತು. ಕಣ್ಣ ಬಳಿಯೂ ಗಾಯವಾಗಿತ್ತು. ಹುಡುಗಿ ಮೇಲೆ ಹಲ್ಲೆಯಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಎಂದು ಮೃತ ಬಾಲಕಿಯ ಪಾಲಕರು, ಸಂಬಂಧಿಕರು ಪ್ರತಿಪಾದಿಸಿದ್ದಾರೆ.
ಬೇಸಿಗೆ ರಜಾ ಇದ್ದರೂ ಶಾಲೆಗೆ ಹೋಗಿದ್ದ 10ನೇ ತರಗತಿ ವಿದ್ಯಾರ್ಥಿನಿ, ಟೆರೇಸ್ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ. ಆಕೆ ಶಾಲೆಯ ಟೆರೇಸ್ ಮೇಲಿಂದ ಕೆಳಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ಈಕೆಯ ಸಾವು ನಿಗೂಢವೆನ್ನಿಸಿದೆ. ಘಟನೆ ನಡೆದಿದ್ದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಸನ್ಬೀಮ್ ಎಂಬ ಶಾಲೆಯಲ್ಲಿ. ಮೇ 26ರ ಮುಂಜಾನೆ 8.45ರ ಹೊತ್ತಿಗೆ.
ಬಾಲಕಿಯ ಸಾವು ಈಗ ವಿವಾದಕ್ಕೂ ಕಾರಣವಾಗಿದೆ. ಶಾಲೆಗೆ ಬೇಸಿಗೆ ರಜಾ ಇದ್ದರೂ ನನ್ನ ಮಗಳನ್ನು ಶಾಲೆಗೆ ಕರೆಸಲಾಗಿತ್ತು ಎಂದು ಪಾಲಕರು ಆರೋಪಿಸಿದ್ದಾರೆ. ಶುಕ್ರವಾರ ಮುಂಜಾನೆಯೇ ಮಗಳು ಶಾಲೆಗೆ ಹೋಗಿದ್ದಳು. ಆದರೆ ಬೆಳಗ್ಗೆ 10 ಗಂಟೆ ಹೊತ್ತಿಗೆ ನಮಗೆ ಶಾಲೆಯಿಂದ ಕರೆಬಂತು. ನಿಮ್ಮ ಮಗಳು ಉಯ್ಯಾಲೆಯಿಂದ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಅವರು ನಮಗೆ ಹೇಳಿದರು. ಹಾಗೇ, ಆಸ್ಪತ್ರೆಗೆ ದಾಖಲಿಸಿದ್ದಾಗಿಯೂ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ. ಇಷ್ಟೆಲ್ಲ ಆದ ಮೇಲೆ ಶಾಲೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಬಾಲಕಿಯ ಪಾಲಕರು ತಿಳಿಸಿದ್ದಾರೆ.
ಇದನ್ನೂ ಓದಿ: Cooker Blast: ರಾಮನಗರದಲ್ಲಿ ಎಲೆಕ್ಷನ್ ಪ್ರಚಾರದ ವೇಳೆ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ
ಬಾಲಕಿ ಟೆರೇಸ್ನಿಂದ ಬಿದ್ದಿದ್ದು ಸಿಸಿಟಿವಿಯಲ್ಲಿ ಕಾಣಿಸುತ್ತದೆ. ಇದರಲ್ಲೇನೋ ಸಂಚು ಇದೆ. ಈ ಸಾವು ನಿಗೂಢವಾಗಿದೆ. ಬಾಲಕಿಯ ತಲೆ ಮತ್ತು ಪಾದಗಳ ಮೇಲೆ ಗಾಯಗಳು ಗುರುತು ಇದೆ. ಮುಖ ಊದಿಕೊಂಡಿತ್ತು. ಕಣ್ಣ ಬಳಿಯೂ ಗಾಯವಾಗಿತ್ತು. ಹುಡುಗಿ ಮೇಲೆ ಹಲ್ಲೆಯಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಎಂದು ಮೃತ ಬಾಲಕಿಯ ಪಾಲಕರು, ಸಂಬಂಧಿಕರು ಪ್ರತಿಪಾದಿಸಿದ್ದಾರೆ. ಹುಡುಗಿಯ ತಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಶಾಲೆಯಲ್ಲಿ ಉಯ್ಯಾಲೆ ಇರುವುದು ನೆಲದಿಂದ ಒಂದು-ಒಂದೂವರೆ ಅಡಿ ಎತ್ತರದಲ್ಲಿ. ಆಕೆ ಅಲ್ಲಿಂದ ಬಿದ್ದರೆ ಸಾಯಲು ಸಾಧ್ಯವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ನನ್ನ ಮಗಳ ಸಾವಿನಲ್ಲಿ ಶಾಲೆಯ ಶಿಕ್ಷಕ ಅಭಿಷೇಕ್ ಕನೋಜಿಯಾ ಮತ್ತು ಆಡಳಿತ ವಿಭಾಗದ ಅಧಿಕಾರಿ ಬ್ರಿಜೇಶ್ ಯಾದವ್ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಶಾಲೆಯ ಪ್ರಾಂಶುಪಾಲರು ಈ ಬಗ್ಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ6 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ9 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ20 hours ago
RP Ashok: ಇನ್ಸ್ಪೆಕ್ಟರ್ ಆರ್.ಪಿ.ಅಶೋಕ್ಗೆ ಆರ್ಯಭಟ ಪ್ರಶಸ್ತಿ ಪ್ರದಾನ
-
ಕರ್ನಾಟಕ21 hours ago
ರಾಜ್ಯ ಸಚಿವ ಸಂಪುಟ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 24 ಶಾಸಕರಿಗೆ ಸಚಿವ ಸ್ಥಾನ, ಮತ್ತೆ ಸಿದ್ದು ಮೇಲುಗೈ
-
ಕ್ರಿಕೆಟ್21 hours ago
IPL 2023: ಗಿಲ್ ಶತಕದ ಕಮಾಲ್; ಮುಂಬೈಗೆ ಬೃಹತ್ ಮೊತ್ತದ ಗುರಿ
-
ಉತ್ತರ ಕನ್ನಡ20 hours ago
Honnavar News: ಕಾರಿಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ, 30 ಮಂದಿಗೆ ಗಾಯ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ