ದೇಶ
Union Budget 2023 ವಿಸ್ತಾರ ಸಮಗ್ರ : ಆರ್ಥಿಕ ಶಿಸ್ತಿಗಾಗಿ ರಕ್ಷಣಾತ್ಮಕ ಆಟ, ಆದಾಯ ತೆರಿಗೆಯ ಜೂಟಾಟ
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2023-24ನೇ ಸಾಲಿನ ಬಜೆಟ್ (Union Budget 2023) ಮಧ್ಯಮ ವರ್ಗಕ್ಕೆ ಒಂದಿಷ್ಟು ಆಶಾವಾದವನ್ನು ಮೂಡಿಸಿದೆ. ಯಾವುದೇ ಜನಪ್ರಿಯ ಘೋಷಣೆಗಳು ಇಲ್ಲದಿದ್ದರೂ ಆರ್ಥಿಕ ಶಿಸ್ತಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂಬ ಅಭಿಪ್ರಾಯವಿದೆ.
ನವ ದೆಹಲಿ: ಎಲ್ಲರೂ ನಿರೀಕ್ಷೆ ಮಾಡಿದಂತೆ ದೊಡ್ಡ ಮಟ್ಟದ ಜನಪ್ರಿಯ ಘೋಷಣೆಗಳಿಲ್ಲ. ಆದರೆ, ಜನಪರವಾದ ಹಲವು ಕಾರ್ಯಕ್ರಮಗಳಿವೆ. ಆರ್ಥಿಕ ಶಿಸ್ತನ್ನು ಉಳಿಸಿಕೊಂಡೇ ಅಭಿವೃದ್ಧಿಯ ದಾರಿಯಲ್ಲಿ ಸಾಗುವ ಪ್ರಯತ್ನವಿದೆ. ಮಧ್ಯಮ ವರ್ಗ ಯಾವತ್ತೂ ಕಾತರದ ಕಾಯುವ ಆದಾಯ ತೆರಿಗೆ ಪರಿಷ್ಕರಣೆಯ ಕನಸು ನಿಜವಾಗಿದೆಯಾದರೂ ಹಲವು ಗೊಂದಲಗಳ ಗೂಡಾಗಿದೆ. ಹೀಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ ೨೦೨೩-೨೪ನೇ ಸಾಲಿನ ಕೇಂದ್ರ ಬಜೆಟ್ (Union Budget 2023)ಹಣ ಸಂಗ್ರಹ ಮತ್ತು ಖರ್ಚಿನ ಬ್ಯಾಲೆನ್ಸ್ ಮಾಡುವಲ್ಲಿ ಶಕ್ತವಾಗಿದೆ. ಆದರೆ, ಒಂದು ಬಜೆಟ್ ಸೃಷ್ಟಿಸಬಹುದಾದ ಕ್ರೇಜ್, ಚರ್ಚೆ ಹುಟ್ಟುಹಾಕುವಲ್ಲಿ ಹಿಂದೆಬಿದ್ದಿದೆ.
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ೧೦ನೇ ಬಜೆಟ್ ಇದಾಗಿದ್ದು, ಇದರಲ್ಲಿ ಮಂಡನೆಯಾದ ಅಂಕಿ ಅಂಶಗಳು ಭಾರತದ ಆರ್ಥಿಕತೆ ಸರಿಯಾದ ಪಥದಲ್ಲಿದೆ ಮತ್ತು ಭವ್ಯ ಭವಿಷ್ಯ ಹೊಂದಿರುವುದನ್ನು ದೃಢೀಕರಿಸಿದೆ. ಇದರಲ್ಲಿ ಆದಾಯ ತೆರಿಗೆ ಸ್ಲ್ಯಾಬ್ಗಳ ಪರಿಷ್ಕರಣೆಯ ಮೂಲಕ ವೇತನ ವರ್ಗಕ್ಕೆ ಖುಷಿಯನ್ನು ನೀಡಿರುವ ನಿರ್ಮಲಾ ಸೀತಾರಾಮನ್, ರೈಲ್ವೇ, ಶಿಕ್ಷಣ, ರಕ್ಷಣೆ ಹಾಗೂ ಬಂಡವಾಳ ವೆಚ್ಚಕ್ಕೆ ಧಾರಾಳತನ ತೋರಿಸಿದ್ದಾರೆ.
ಸಪ್ತರ್ಷಿ ಆದ್ಯತೆಗಳು
ಎಲ್ಲವನ್ನೂ ಒಳಗೊಳ್ಳುವ ಅಂತರ್ಗತ ಅಭಿವೃದ್ಧಿ, ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಯೋಜನೆಗಳು, ಮೂಲಸೌಕರ್ಯ ಮತ್ತು ಹೂಡಿಕೆ, ಸಾಮರ್ಥ್ಯದ ಸದ್ಬಳಕೆ, ಹಸಿರು ಅಭಿವೃದ್ಧಿ, ಯುವಜನ ಸಬಲೀಕರಣ ಮತ್ತು ಹಣಕಾಸು ವಲಯವನ್ನು ಆದ್ಯತಾ ಕ್ಷೇತ್ರವಾಗಿಟ್ಟುಕೊಂಡು ರೂಪಿಸಿರುವ ಬಜೆಟ್ ಇದೆಂದು ನಿರ್ಮಲಾ ಸೀತಾರಾಮನ್ ಆರಂಭದಲ್ಲೇ ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಯುವಜನರಿಗೆ ಅವಕಾಶ ಒದಗಿಸುವ, ಉದ್ಯೋಗ ಸೃಷ್ಟಿ, ಸಣ್ಣ ಆರ್ಥಿಕತೆಯನ್ನು ಹೆಚ್ಚು ಬಲಪಡಿಸುವ, ಮಹಿಳೆಯರನ್ನು ಸಶಕ್ತಗೊಳಿಸುವ ಯೋಜನೆಗಳನ್ನು ಪ್ರಕಟಿಸಲಾಗಿದೆ.
ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆಯೇ ಪ್ರಧಾನ
ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಜನಸಾಮಾನ್ಯರ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು ಆದಾಯ ತೆರಿಗೆ ಸ್ಲ್ಯಾಬ್ಗಳ ಪರಿಷ್ಕರಣೆ. ಹಳೆ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡದ ಸರ್ಕಾರ, ಹೊಸ ತೆರಿಗೆ ಪದ್ಧತಿಯಲ್ಲಿ ಸ್ಲ್ಯಾಬ್ಗಳ ಬದಲಾವಣೆಯನ್ನು ಮಾಡಿದೆ.
ಏಳು ಲಕ್ಷ ರೂ.ವರೆಗೆ ಯಾವುದೇ ತೆರಿಗೆ ಇಲ್ಲ
ಈ ಬಜೆಟ್ನಲ್ಲಿ ಮಧ್ಯಮ ವರ್ಗಕ್ಕೆ ಹಿತವಾಗುವ ಅತಿ ಮುಖ್ಯ ಘೋಷಣೆ ಎಂದರೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಐದು ಲಕ್ಷದಿಂದ ಏಳು ಲಕ್ಷ ರೂ.ಗಳಿಗೆ ಏರಿಸಿರುವುದು. ಇದುವರೆಗೆ ೨.೫ ಲಕ್ಷ ರೂ.ವರೆಗೆ ಶೂನ್ಯ ತೆರಿಗೆ ಮತ್ತು ಐದು ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. ೫ ತೆರಿಗೆ ಇತ್ತು. ಅಂದರೆ, ಐದು ಲಕ್ಷ ರೂ.ವರೆಗೆ ೧೨,೫೦೦ ರೂ. ತೆರಿಗೆ ಬೀಳುತ್ತಿತ್ತು. ಆದರೆ, ಕೇಂದ್ರ ಸರಕಾರ ಈ ೧೨,೫೦೦ ರೂ.ಯನ್ನು ರಿಬೇಟ್ ಎಂದು ಘೋಷಿಸಿತ್ತು. ಹೀಗಾಗಿ, ಐದು ಲಕ್ಷ ರೂ.ವರೆಗೆ ಆದಾಯ ಇರುವವರು ಯಾವುದೇ ತೆರಿಗೆ ಕಟ್ಟಬೇಕಾಗಿರಲಿಲ್ಲ. ಇದೀಗ ಈ ರಿಬೇಟ್ ಪ್ರಮಾಣವನ್ನು ಏಳು ಲಕ್ಷ ರೂ.ವರೆಗೆ ವಿಸ್ತರಿಸಲಾಗಿದೆ. ಅಂದರೆ ಏಳು ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.
ಈ ಬಾರಿ ತೆರಿಗೆ ವಿನಾಯಿತಿ ಮೂಲ ಮಿತಿಯನ್ನು ೨.೫ ಲಕ್ಷದಿಂದ ೩ ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಹೀಗಾಗಿ ಮೂರು ಲಕ್ಷ ರೂ.ವರೆಗೆ ಆದಾಯು ಇರುವವರು ಇನ್ಕಂ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಬೇಕಾಗಿಲ್ಲ. ಅದಕ್ಕಿಂತ ಹೆಚ್ಚು ಆದಾಯ ಹೊಂದಿರುವ ಎಲ್ಲರೂ ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ.
ಏಳು ತೆರಿಗೆ ಶ್ರೇಣಿ ಬದಲು ಈಗ ಆರು ಶ್ರೇಣಿ
ಈ ಬಾರಿ ತೆರಿಗೆ ಶ್ರೇಣಿ (Tax slab)ಗಳನ್ನು ಕೂಡಾ ಬದಲಿಸಲಾಗಿದೆ. ಇದುವರೆಗೆ ಆರು ತೆರಿಗೆ ಶ್ರೇಣಿಗಳಿದ್ದರೆ ಅದನ್ನು ಈಗ ಐದಕ್ಕೆ ಇಳಿಸಲಾಗಿದೆ.
ಇದುವರೆಗಿನ ಶ್ರೇಣಿ ವ್ಯವಸ್ಥೆ ಪ್ರಕಾರ,
೧. ೦-೨.೫ ಲಕ್ಷ ರೂ.ವರೆಗೆ – ಶೂನ್ಯ ತೆರಿಗೆ
೨. ೨.೫ ಲಕ್ಷದಿಂದ ೫ ಲಕ್ಷದ ವರೆಗೆ- ೫%
೩. ೫.೦ ಲಕ್ಷದಿಂದ ೭.೫ ಲಕ್ಷ ರೂ.- ೧೦ %
೪. ೭.೫ ಲಕ್ಷದಿಂದ ೧೦ ಲಕ್ಷ ರೂ. – ೧೫%
೫. ೧೦ ಲಕ್ಷದಿಂದ ೧೨.೫ ಲಕ್ಷ ರೂ- ೨೦ %
೬. ೧೨.೫ ಲಕ್ಷದಿಂದ ೧೫ ಲಕ್ಷ ರೂ.- ೨೫%
೭. ೧೫ ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ- ೩೦%
ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದ ಹೊಸ ಪದ್ಧತಿಯ ಪ್ರಕಾರ ಇನ್ನು ಆರು ಶ್ರೇಣಿಗಳು ಮಾತ್ರ ಇರುತ್ತವೆ.
ಇವು ಹೊಸ ಆರು ಶ್ರೇಣಿಗಳು
೧. ಮೂರು ಲಕ್ಷದವರೆಗಿನ ಮೊತ್ತಕ್ಕೆ- ೦%
೨. ೩-೬ ಲಕ್ಷ- ೫%
೩. ೬-೯ ಲಕ್ಷ-೧೦%
೪. ೯-೧೨ ಲಕ್ಷ- ೧೫%
೫. ೧೨-೧೫ ಲಕ್ಷ- ೨೦%
೬. ೧೫ ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ- ೩೦%
ಈ ತೆರಿಗೆ ಬದಲಾವಣೆಯಿಂದ ವರ್ಗಕ್ಕೆ ಭಾರಿ ಲಾಭ ಆಗಲಿದೆ. ಆದರೆ ಸದ್ಯ ಅತಿ ಹೆಚ್ಚು ಜನರು ಹಳೆ ಪದ್ಧತಿಯಲ್ಲಿ ಇರುವುದರಿಂದ ಯಾರಿಗೆ ಎಷ್ಟು ಲಾಭವಾಗುತ್ತದೆ ಎಂದು ಕಾದು ನೋಡಬೇಕಾಗಿದೆ. ವೇತನ ಪಡೆಯುವ ವರ್ಗದಲ್ಲಿ ಹಳೆ ಪದ್ಧತಿಯನ್ನು ಉಳಿಸಿಕೊಳ್ಳಬೇಕೇ, ಹೊಸ ಪದ್ಧತಿ ಒಳ್ಳೆಯದೇ ಎಂಬ ಗೊಂದಲವನ್ನು ಇದು ಸೃಷ್ಟಿಸಿದೆ. ಹಳೆ ಪದ್ಧತಿಯಲ್ಲಿ ತೆರಿಗೆಯನ್ನು ಉಳಿಸಿಕೊಳ್ಳಲು ಉಳಿತಾಯದ ಮಾರ್ಗವನ್ನು ಜನರು ಬಳಸುತ್ತಿದ್ದರು. ಆದರೆ, ಹೊಸ ಪದ್ಧತಿಯಲ್ಲಿ ಉಳಿತಾಯದ ಯಾವ ಮಾರ್ಗವೂ ಬಳಕೆಯಾಗುವುದಿಲ್ಲ. ಪಾವತಿಸಿದ ತೆರಿಗೆಯನ್ನು ಐಟಿಆರ್ ಸಲ್ಲಿಕೆಯ ಮೂಲಕ ಮರಳಿ ಪಡೆಯುವ ಯಾವ ಅವಕಾಶವಿಲ್ಲ. ಹೀಗಾಗಿ ಯಾರು ಯಾವ ಪದ್ಧತಿಯನ್ನು ಆಯ್ಕೆ ಮಾಡಬಹುದು ಎನ್ನುವ ಜಿಜ್ಞಾಸೆ ಹುಟ್ಟಿಕೊಂಡಿದೆ.
ಯಾವುದು ಅಗ್ಗ? ಯಾವುದು ದುಬಾರಿ
ತೆರಿಗೆ ಬದಲಾವಣೆ ಮತ್ತು ಇತರ ಕಾರಣಗಳಿಂದಾಗಿ ಕೆಲವು ವಸ್ತುಗಳು ಅಗ್ಗವಾಗಿದ್ದರೆ ಕೆಲವು ದುಬಾರಿಯಾಗಿವೆ. ಮೊಬೈಲ್ ಫೋನ್ಗಳು, ಟಿವಿ, ವಜ್ರ, ಲಿಥಿಯಂ ಬ್ಯಾಟರಿಗಳಲ್ಲಿ ಬಳಸುವ ಉಪಕರಣಗಳು, ವಿದ್ಯುತ್ ಚಾಲಿತ ವಾಹನಗಳಿಗಳಿಗೆ ಬಳಸುವ ಕಚ್ಚಾವಸ್ತುಗಳು ಅಗ್ಗವಾಗಲಿವೆ.
ಸಿಗರೇಟು, ಬೆಳ್ಳಿ, ರಬ್ಬರ್, ಇಮಿಟೇಷನ್ ಜುವೆಲ್ಲರಿ, ಆಮದು ಮಾಡಲಾದ ಸೈಕಲ್ ಮತ್ತು ಗೊಂಬೆಗಳು, ಆಮದು ಮಾಡಲಾದ ಎಲೆಕ್ಟ್ರಿಕ್ ಕಿಚನ್ ಚಿಮ್ನಿ, ಆಮದು ಮಾಡಲಾದ ಐಷಾರಾಮಿ ಕಾರು ಮತ್ತು ಎಲೆಕ್ಟ್ರಿನ್ ವಾಹನಗಳು ದುಬಾರಿಯಾಗಿವೆ.
ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ
-ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಗರಿಷ್ಠ ಠೇವಣಿ ಮಿತಿಯನ್ನು ೧೫ ಕೋಟಿ ರೂ.ಗಳಿಂದ ೩೦ ಲಕ್ಷಕ್ಕೆ ಏರಿಸಲಾಗಿದೆ.
– ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ ಎಂಬ ಹೊಸ ಉಳಿತಾಯ ಯೋಜನೆಯನ್ನು ಘೋಷಿಸಲಾಗಿದೆ.
ಇದರಲ್ಲಿ ೨ ಲಕ್ಷ ರೂ.ವರೆಗಿನ ಮೊತ್ತವನ್ನು ಎರಡು ವರ್ಷಗಳ ಅವಧಿಗೆ ಠೇವಣಿ ಇಡಬಹುದು. ಇದಕ್ಕೆ ಶೇ. ೭.೫ ಬಡ್ಡಿ ನೀಡಲಾಗುತ್ತದೆ. ಇದರಲ್ಲಿ ಭಾಗಶಃ ವಿತ್ಡ್ರಾವಲ್ನ ಅವಕಾಶವೂ ಇದೆ.
ರೈಲ್ವೇ, ರಕ್ಷಣೆ, ಶಿಕ್ಷಣಕ್ಕೆ ಒತ್ತು
ರೈಲ್ವೇಗೆ ೨.೪ ಲಕ್ಷ ಕೋಟಿ ರೂ. ಯೋಜನೆಯನ್ನು ನೀಡಲಾಗಿದ್ದು, ಇದರು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ರಕ್ಷಣಾ ಬಜೆಟ್ ಮೊತ್ತವನ್ನು ಕಳೆದ ಬಾರಿಯ ೫.೨೫ ಲಕ್ಷದಿಂದ ೫.೯೪ ಲಕ್ಷ ಕೋಟಿಗೇರಿಸಲಾಗಿದೆ. ೧೫೭ ನರ್ಸಿಂಗ್ ಕಾಲೇಜುಗಳ ಸ್ಥಾಪನೆ, ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆಯ ಘೋಷಣೆ ಮಾಡಲಾಗಿದೆ.
ಉದ್ಯೋಗ ಕ್ಷೇತ್ರಕ್ಕೆ ಆದ್ಯತೆ
ಯುವಜನರನ್ನು ಉದ್ಯೋಗಕ್ಕೆ ಸಿದ್ಧಗೊಳಿಸಲು ಹಲವಾರು ರಾಜ್ಯಗಳಲ್ಲಿ ೩೦ ಸ್ಕಿಲ್ ಇಂಡಿಯಾದ ಅಂತಾರಾಷ್ಟ್ರೀಯ ಕೇಂದ್ರಗಳ ಸ್ಥಾಪನೆ, ರಾಷ್ಡ್ರೀಯ ಅಪ್ರೆಂಟಿಸ್ಷಿಪ್ ಉತ್ತೇಜನಾ ಯೋಜನೆಯಡಿ ೪೭ ಲಕ್ಷ ಯುವಜನರಿಗೆ ಮೂರು ವರ್ಷಗಳ ಕಾಲ ಸ್ಟೈಪೆಂಡ್ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ | Union Budget 2023 : ಮಧ್ಯಮ ವರ್ಗಕ್ಕೆ ಹಳೆಯ ಮತ್ತು ಹೊಸ ತೆರಿಗೆ ಪದ್ಧತಿ, ಯಾರಿಗೆ ಯಾವುದು ಸೂಕ್ತ?
ಕೃಷಿಗೆ ಸ್ಟಾರ್ಟಪ್ ಬೆಂಬಲ
ಕೃಷಿ ಕ್ಷೇತ್ರದಲ್ಲಿ ಯುವಜನರಿಗೆ ಉತ್ತೇಜನ ನೀಡುವುದಕ್ಕಾಗಿ ಕೃಷಿ ಸ್ಟಾರ್ಟಪ್ ಸ್ಥಾಪನೆಗೆ ಅಕ್ಸಿಲರೇಟರ್ ಫಂಡ್ ನಿಗದಿ ಮಾಡಲಾಗಿದೆ. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಬೆಂಬಲ ಘೋಷಿಸಲಾಗಿದೆ. ಸಾಂಪ್ರದಾಯಿಕ ಕುಶಲ ಕೈಗಾರಿಕೆಗಳನ್ನು ಬೆಂಬಲಿಸಲು ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆ ಪ್ರಕಟಿಸಲಾಗಿದೆ.
ದೇಶ
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
Kamal Haasan: ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬಳಿಕ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನಟ ಕಮಲ್ ಹಾಸನ್ ಅವರು ಉದಯನಿಧಿ ಸ್ಟಾಲಿನ್ ಪರ ನಿಂತಿದ್ದಾರೆ.
ಚೆನ್ನೈ: “ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದ ಹಾಗೆ. ಅದನ್ನು ನಿರ್ಮೂಲನೆ ಮಾಡಬೇಕು” ಎಂಬ ಹೇಳಿಕೆ ನೀಡಿ ಭಾರಿ ಟೀಕೆಗೆ ಗುರಿಯಾಗಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರಿಗೆ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೂಡ ನೋಟಿಸ್ ನೀಡಿದೆ. ಇದರ ಬೆನ್ನಲ್ಲೇ, ನಟ, ಮಕ್ಕಳ್ ನೀಧಿ ಮೈಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಉದಯನಿಧಿ ಸ್ಟಾಲಿನ್ ಪರ ನಿಂತಿದ್ದಾರೆ. “ಸನಾತನ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ‘ಚಿಕ್ಕ ಮಗು’ ಉದಯನಿಧಿ ಸ್ಟಾಲಿನ್ ಮೇಲೆ ದಾಳಿ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
“ಸನಾತನ ಧರ್ಮದ ಕುರಿತಂತೆ ಇನ್ನೂ ಚಿಕ್ಕವನಾಗಿರುವ (Young Kid) ಉದಯನಿಧಿ ಸ್ಟಾಲಿನ್ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ. ಎಲ್ಲರೂ ಅವನ ಮೇಲೆ ಮುಗಿಬಿದ್ದಿದ್ದಾರೆ” ಎಂದು ಕಮಲ್ ಹಾಸನ್ ಹೇಳಿದ್ದಾರೆ. ಆದರೆ, ಅವರು ಯಾವುದೇ ಪಕ್ಷ ಅಥವಾ ಸಂಘಟನೆಯ ಹೆಸರು ಹೇಳಿಲ್ಲ. ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ ಬಳಿಕ ಉದಯನಿಧಿ ಸ್ಟಾಲಿನ್ ವಿರುದ್ಧ ಕೇಳಿಬರುತ್ತಿರುವ ಆಕ್ರೋಶದ ಕುರಿತು ಕಮಲ್ ಹಾಸನ್ ಅವರು ಸಮಾರಂಭವೊಂದರಲ್ಲಿ ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"Young child is being targeted…," Kamal Haasan on 'Sanatana Dharma' row
— ANI Digital (@ani_digital) September 23, 2023
Read @ANI Story | https://t.co/4uFyHSXVep#SanatanaDharma #KamalHaasan #UdhayanidhiStalin pic.twitter.com/ylMZdZ0X8Z
ಸನಾತನ ಕುರಿತೂ ಕಮಲ್ ಹಾಸನ್ ಪ್ರತಿಕ್ರಿಯೆ
ಸನಾತನ ಧರ್ಮದ ಕುರಿತು ಕೂಡ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. “ನಾವೆಲ್ಲ ಪೆರಿಯಾರ್ ಅವರಿಂದ ಸನಾತನ ಎಂಬ ಪದವನ್ನು ಕೇಳಿದ್ದೇವೆ. ಪೆರಿಯಾರ್ ಅವರು ವಾರಾಣಸಿಯ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ತಿಲಕ ಇಟ್ಟುಕೊಂಡು ಪೂಜೆ ಮಾಡುತ್ತಿದ್ದರು. ಅಂತಹವರು ಎಲ್ಲವನ್ನೂ ಬಿಟ್ಟು ಸಮಾಜ ಸುಧಾರಣೆಗೆ ಇಳಿದರು. ಹಾಗಂತ, ಪೆರಿಯಾರ್ ಅವರನ್ನು ಡಿಎಂಕೆ ಸೇರಿ ಯಾವುದೇ ಪಕ್ಷವು ಸ್ವಂತ ಮಾಡಿಕೊಳ್ಳುವ ಹಾಗಿಲ್ಲ. ಅವರನ್ನು ಇಡೀ ತಮಿಳುನಾಡು ಸ್ವಂತ ಮಾಡಿಕೊಂಡಿದೆ” ಎಂದರು.
ಇದನ್ನೂ ಓದಿ: Udhayanidhi Stalin: ಸನಾತನ ಧರ್ಮ; ಉದಯನಿಧಿ ಸ್ಟಾಲಿನ್ಗೆ ಸುಪ್ರೀಂ ನೋಟಿಸ್, ಎದುರಾಯ್ತು ಸಂಕಷ್ಟ
ಏನು ಹೇಳಿದ್ದರು ಉದಯನಿಧಿ ಸ್ಟಾಲಿನ್?
ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.
ದೇಶ
India Canada Row: ನಿಜ್ಜರ್ ಹತ್ಯೆ ಕುರಿತು ಭಾರತಕ್ಕೆ ನಂಬಲರ್ಹ ಮಾಹಿತಿ ನೀಡಿದ್ದೇವೆ; ಕೆನಡಾ ಹೊಸ ರಾಗ
India Canada Row: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಮಾಡಿದ ಆರೋಪಕ್ಕೆ ಸಾಕ್ಷ್ಯ ನೀಡದ ಜಸ್ಟಿನ್ ಟ್ರುಡೋ ಈಗ ಹೊಸ ರಾಗ ತೆಗೆದಿದ್ದಾರೆ. ಭಾರತಕ್ಕೆ ಮೊದಲೇ ಈ ಕುರಿತು ಮಾಹಿತಿ ನೀಡಿದ್ದೇವೆ ಎಂದಿದ್ದಾರೆ. ಆದರೆ, ಯಾವ ಸಾಕ್ಷ್ಯ ನೀಡಲಾಗಿದೆ ಎಂಬುದನ್ನು ಅವರು ಹೇಳಿಲ್ಲ. ಹಾಗಾಗಿ, ಇದು ಬಿಕ್ಕಟ್ಟು ಬಿಗಡಾಯಿಸಲು ಕಾರಣವಾಗಿದೆ.
ಒಟ್ಟಾವ: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರದಲ್ಲಿ ಸಾಕ್ಷ್ಯಾಧಾರಗಳನ್ನೂ ಕೊಡದೆ ಸುಖಾಸುಮ್ಮನೆ ಭಾರತದ ವಿರುದ್ಧ ಆರೋಪ (India Canada Row) ಮಾಡುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಈಗ ಹೊಸ ರಾಗ ತೆಗೆದಿದ್ದಾರೆ. “ನಿಜ್ಜರ್ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಹಲವು ವಾರಗಳ ಹಿಂದೆಯೇ ‘ನಂಬಲರ್ಹ ಆರೋಪಗಳ’ ಕುರಿತು (Credible Allegations) ಮಾಹಿತಿ ನೀಡಿದ್ದೇವೆ” ಎಂದು ಹೇಳಿರುವುದು ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಮತ್ತಷ್ಟು ಬಿಗಿಗೊಳಿಸಿದೆ.
“ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ನಾನು ಸೋಮವಾರ ಮಾತನಾಡಿದ್ದೇನೆ. ಆದರೆ, ಆತನ ಹತ್ಯೆಯ ಕುರಿತು ಭಾರತಕ್ಕೆ ತುಂಬ ವಾರಗಳ ಹಿಂದೆಯೇ ನಂಬಲರ್ಹ ಆರೋಪಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ತುಂಬ ಗಂಭೀರವಾದ ವಿಚಾರದ ಕುರಿತು ಭಾರತ ಹಾಗೂ ಕೆನಡಾ ಒಗ್ಗೂಡಿ ಕಾರ್ಯನಿರ್ವಹಿಸುವ ಕುರಿತು ಕೂಡ ಮನವರಿಕೆ ಮಾಡಲಾಗಿದೆ. ಗಂಭೀರ ಹತ್ಯೆಯ ವಿಚಾರದಲ್ಲಿ ಭಾರತವು ನಮ್ಮ ಜತೆ ಕೈಗೂಡಿಸುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದೇವೆ” ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸುವ ವೇಳೆ ಜಸ್ಟಿನ್ ಟ್ರುಡೋ ಹೇಳಿದ್ದಾರೆ.
ಜಸ್ಟಿನ್ ಟ್ರುಡೋ ಆರೋಪ
#WATCH | On the India-Canada row, Canadian PM Justin Trudeau says, "In regards to India, Canada has shared the credible allegations with India. We did that many weeks ago. We are there to work constructively with India and we hope that they engage with us so that we can get to… pic.twitter.com/lpgAwKfSdN
— ANI (@ANI) September 22, 2023
ಇದರೊಂದಿಗೆ ಭಾರತಕ್ಕೆ ನಾವು ಈಗಾಗಲೇ ಸಾಕ್ಷ್ಯ ನೀಡಿದ್ದೇವೆ, ಆದರೆ ಭಾರತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬಂತೆ ಜಸ್ಟಿನ್ ಟ್ರುಡೋ ಬಿಂಬಿಸಿದ್ದಾರೆ. ಆದರೆ, ಅವರು ಬೇರೊಂದು ಸುದ್ದಿಗೋಷ್ಠಿ ನಡೆಸುವ ವೇಳೆ ಭಾರತದ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ಇದೆಯೇ ಎಂಬ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಾರೆ. “ಭಾರತದ ವಿರುದ್ಧ ಆರೋಪ ಮಾಡಲು ಬಲವಾದ ಹಾಗೂ ವಿಶ್ವಾಸಾರ್ಹ ಕಾರಣಗಳಿವೆ” ಎಂದು ಜಸ್ಟಿನ್ ಟ್ರುಡೋ ಹೇಳಿದ್ದಾರೆ. ಆದರೆ, ಅವರು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ ಹಾಗೂ ಇವೆ ಎಂದು ಕೂಡ ಉತ್ತರಿಸಿಲ್ಲ.
ಇದನ್ನೂ ಓದಿ: India Canada Row: ನಿಜ್ಜರ್ ಧಾರ್ಮಿಕ ನಾಯಕನಲ್ಲ, 200 ಜನರ ಕೊಲೆಗಾರ; ಕೆನಡಾಗೆ ಭಾರತ ಪ್ರತ್ಯುತ್ತರ
ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. “ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಅವರು ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ಹೇಳುತ್ತಲೇ ಇಂತಹ ಆರೋಪ ಮಾಡಿದ್ದಾರೆ. ಮತ್ತೊಂದೆಡೆ, ಜಸ್ಟಿನ್ ಟ್ರುಡೋ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ, ತನಿಖೆಗೆ ಭಾರತ ಸಹಕಾರ ನೀಡಬೇಕು ಎಂದಿದೆ. ಆದರೆ, ಸರಿಯಾದ ಸಾಕ್ಷ್ಯಾಧಾರ ಬೇಕು ಎಂದು ಭಾರತ ಸ್ಪಷ್ಟಪಡಿಸಿದೆ.
ದೇಶ
India Canada Row: ನಿಜ್ಜರ್ ಧಾರ್ಮಿಕ ನಾಯಕನಲ್ಲ, 200 ಜನರ ಕೊಲೆಗಾರ; ಕೆನಡಾಗೆ ಭಾರತ ಪ್ರತ್ಯುತ್ತರ
India Canada Row: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ ನಿಜ್ಜರ್ನನ್ನು ಕಳೆದ ಜೂನ್ 18ರಂದು ಕೆನಡಾದಲ್ಲಿ ಹತ್ಯೆ ಮಾಡಲಾಗಿದೆ. ಈತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದೆ.
ನವದೆಹಲಿ: ಭಾರತ ಹಾಗೂ ಕೆನಡಾ ಬಿಕ್ಕಟ್ಟು ದಿನೇದಿನೆ ಉಲ್ಬಣವಾಗುತ್ತಿರುವ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ಚರ್ಚೆ ಜೋರಾಗಿವೆ. ಒಂದೆಡೆ, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂಬ ಆರೋಪಕ್ಕೆ (India Canada Row) ಜಸ್ಟಿನ್ ಟ್ರುಡೋ (Justin Trudeau) ಸಾಕ್ಷ್ಯ ನೀಡತ್ತಿಲ್ಲ. ಮತ್ತೊಂದೆಡೆ, ಭಾರತದ ವಿರುದ್ಧ ಮಾಡುತ್ತಿರುವ ಆರೋಪ ನಿಲ್ಲಿಸುತ್ತಿಲ್ಲ. ಇದರ ಬೆನ್ನಲ್ಲೇ, ಭಾರತವು ಕೆನಡಾಗೆ ತಿರುಗೇಟು ನೀಡಿದೆ. “ಹರ್ದೀಪ್ ಸಿಂಗ್ ನಿಜ್ಜರ್ ಒಬ್ಬ ಕೊಲೆಗಾರನೇ ಹೊರತು, ಧಾರ್ಮಿಕ ನಾಯಕನಲ್ಲ” ಎಂದು ತಿಳಿಸಿದೆ.
ಹರ್ದೀಪ್ ಸಿಂಗ್ ನಿಜ್ಜರ್ ಒಬ್ಬ ಮಹಾನ್ ವ್ಯಕ್ತಿ ಎಂಬಂತೆ ಕೆನಡಾ ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಗುಪ್ತಚರ ಇಲಾಖೆಯು ಕೆನಡಾಗೆ ತಿರುಗೇಟು ನೀಡಿದೆ. “ಹರ್ದೀಪ್ ಸಿಂಗ್ ನಿಜ್ಜರ್ ಖಲಿಸ್ತಾನ ಕಮಾಂಡೋ ಫೋರ್ಸ್ (KCF) ಸದಸ್ಯನಾಗಿದ್ದಾಗ ಜನರ ಹತ್ಯೆಯಲ್ಲಿ ತೊಡಗಿದ್ದ. ಆತ 1980ರ ದಶಕದ ಕೊನೆ ಹಾಗೂ 1990ರ ದಶಕದ ಆರಂಭದಲ್ಲಿ ಪಂಜಾಬ್ನಲ್ಲಿ 200 ಜನರ ಕೊಲೆಯಲ್ಲಿ ಭಾಗಿಯಾಗಿದ್ದ. ಆತ ಮತ್ತೊಬ್ಬ ಗ್ಯಾಂಗ್ಸ್ಟರ್ ಗುರ್ನೆಕ್ ಸಿಂಗ್ ಸಹಚರನಾಗಿದ್ದ” ಎಂದು ಗುಪ್ತಚರ ಇಲಾಖೆಯು ಹರ್ದೀಪ್ ಸಿಂಗ್ ನಿಜ್ಜರ್ನ ಬಣ್ಣ ಬಯಲು ಮಾಡಿದೆ.
ಇದನ್ನೂ ಓದಿ: India Canada Row: ಉಗ್ರರ ಸುರಕ್ಷಿತ ತಾಣವಾಗುತ್ತಿರುವ ಕೆನಡಾ! ಭಾರತದ ತೀಕ್ಷ್ಣ ಪ್ರತಿಕ್ರಿಯೆ, ಪಾಕ್ಗೆ ಹೋಲಿಸಿತೇ ಸರ್ಕಾರ?
ಜೂನ್ 18ರಂದು ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ, ಭಾರತದ ಏಜೆಂಟರೇ ಹತ್ಯೆ ಮಾಡಿದ್ದಾರೆ ಎಂದು ಜಸ್ಟಿನ್ ಟ್ರುಡೋ ಆರೋಪಿಸಿದ್ದಾರೆ. ಆದರೆ, ಅವರು ಸುದ್ದಿಗೋಷ್ಠಿ ನಡೆಸುವ ವೇಳೆ ಭಾರತದ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ಇದೆಯೇ ಎಂಬ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಾರೆ. “ಭಾರತದ ವಿರುದ್ಧ ಆರೋಪ ಮಾಡಲು ಬಲವಾದ ಹಾಗೂ ವಿಶ್ವಾಸಾರ್ಹ ಕಾರಣಗಳಿವೆ” ಎಂದು ಜಸ್ಟಿನ್ ಟ್ರುಡೋ ಹೇಳಿದ್ದಾರೆ. ಆದರೆ, ಅವರು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ ಹಾಗೂ ಇವೆ ಎಂದು ಕೂಡ ಉತ್ತರಿಸಿಲ್ಲ.
ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. “ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಅವರು ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ಹೇಳುತ್ತಲೇ ಇಂತಹ ಆರೋಪ ಮಾಡಿದ್ದಾರೆ.
ಕ್ರೀಡೆ
ವಿಸ್ತಾರ ಸಂಪಾದಕೀಯ: ಏಷ್ಯನ್ ಗೇಮ್ಸ್ನಲ್ಲಿ ಅರುಣಾಚಲ ತಗಾದೆ, ಚೀನಾದ ಅಧಿಕ ಪ್ರಸಂಗ
ಅರುಣಾಚಲ ವಿಚಾರದಲ್ಲಿ ಚೀನಾ ತಗಾದೆ ತೆಗೆಯುತ್ತಿರುವುದು ಇದೇ ಮೊದಲಲ್ಲ. ಆದರೆ ಕ್ರೀಡೆಯಲ್ಲೂ ಭೇದ ಮಾಡುವ, ಕಿರುಕುಳ ನೀಡುವ ಚೀನಾದ ವರಸೆ ಅಸಹನೀಯ.
ಭಾರತಕ್ಕೆ ಕಿರುಕುಳ ಕೊಡುವ ವಿಚಾರದಲ್ಲಿ ಪಾಕಿಸ್ತಾನವನ್ನೂ ಚೀನಾ ಮೀರಿಸಿದೆ. ಚೀನಾದ ಆತಿಥ್ಯದಲ್ಲಿ ನಡೆಯುವ ಏಷ್ಯನ್ ಗೇಮ್ಸ್ನಲ್ಲಿ ಅರುಣಾಚಲ ಪ್ರದೇಶದ ಮೂವರು ಸ್ಪರ್ಧಿಗಳಿಗೆ ಚೀನಾದ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ. ಇದಕ್ಕೆ ಚೀನಾ ಮೊದಲಿನಿಂದಲೂ ತಗಾದೆ ತೆಗೆಯುತ್ತ ಬಂದಿರುವ ಗಡಿ ರಾಜಕೀಯ ಕಾರಣವಾಗಿದೆ. ಅರುಣಾಚಲ ಪ್ರದೇಶ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ವಿವಾದವಿದೆ. ಹೀಗಾಗಿ ವುಶು ಸ್ಪರ್ಧಿಗಳಿಗೆ ಅಲ್ಲಿನ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದರು. ಅವರಿಗೆ ಮಾನ್ಯತಾ ಪತ್ರಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗದ ಕಾರಣ ದೆಹಲಿಯಲ್ಲೇ ಉಳಿದಿದ್ದಾರೆ. ಚೀನಾದ ಈ ನೀತಿಯನ್ನು ಭಾರತ ಖಂಡಿಸಿದೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಚೀನಾಗೆ ಪ್ರವಾಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆತಿಥೇಯರ ಆಹ್ವಾನವನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ.
ಅರುಣಾಚಲ ವಿಚಾರದಲ್ಲಿ ಚೀನಾ ತಗಾದೆ ತೆಗೆಯುತ್ತಿರುವುದು ಇದೇ ಮೊದಲಲ್ಲ. ಆದರೆ ಕ್ರೀಡೆಯಲ್ಲೂ ಭೇದ ಮಾಡುವ, ಕಿರುಕುಳ ನೀಡುವ ಚೀನಾದ ವರಸೆ ಹೊಸತು. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ. ಮತ್ತಿದು ಏಷ್ಯನ್ ಕ್ರೀಡಾಕೂಟದ ಆಶಯ, ನಿಯಮಗಳನ್ನೂ ಉಲ್ಲಂಘಿಸುತ್ತದೆ. ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ನಡುವೆ ತಾರತಮ್ಯ ಮಾಡುವುದು ಸ್ಪಷ್ಟವಾಗಿ ಕ್ರೀಡಾನಿಯಮಗಳ ಉಲ್ಲಂಘನೆ. ಯುದ್ಧಕೈದಿಗಳನ್ನೂ ಗೌರವದಿಂದ ನಡೆಸಿಕೊಳ್ಳಬೇಕು ಎಂಬುದು ಅಂತಾರಾಷ್ಟ್ರೀಯ ಸನ್ನದು. ಹೀಗಿರುವಾಗ, ಅತಿಥಿ ದೇಶಗಳ ಕ್ರೀಡಾಳುಗಳನ್ನು ಗೌರವಿಸುವುದು, ಆಟಕ್ಕೆ ಆಸ್ಪದ ಮಾಡಿಕೊಡುವುದು ಆತಿಥೇಯ ದೇಶದ ಕರ್ತವ್ಯ. ಚೀನಾ ಈ ಕರ್ತವ್ಯಕ್ಕೆ ದ್ರೋಹ ಬಗೆದಿದೆ. ಕ್ರೀಡೆಗೆ ಅನ್ಯಾಯ ಎಸಗಿದೆ.
ಇದಕ್ಕೂ ಮುನ್ನ ಚೆಂಗ್ಡುವಿನಲ್ಲಿ ನಡೆಯಲಿದ್ದ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸಲು 12 ಸದಸ್ಯರ ತಂಡ ಪ್ರಯಾಣಿಸುತ್ತಿದ್ದಾಗ ದೆಹಲಿಯ ಚೀನಾದ ರಾಯಭಾರ ಕಚೇರಿ ಮೂವರು ಕ್ರೀಡಾಪಟುಗಳಿಗೆ ಸ್ಟೇಪಲ್ಡ್ ವೀಸಾಗಳನ್ನು (ಅಧಿಕೃತ ಮುದ್ರೆಯೊತ್ತದ ಅನುಮತಿ ಪತ್ರ) ನೀಡಿತ್ತು. ಇದನ್ನು ಭಾರತ ಬಲವಾದ ಪ್ರತಿಭಟಿಸಿ ಪ್ರವಾಸ ರದ್ದುಗೊಳಿಸಿತ್ತು. ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಈ ಹಿಂದೆಯೂ ಸ್ಟಾಂಪ್ ವೀಸಾ ನೀಡಲು ಚೀನಾ ನಿರಾಕರಿಸಿದೆ. 2011ರಲ್ಲಿ ಅರುಣಾಚಲ ಪ್ರದೇಶದ ಐವರು ಕರಾಟೆ ಪಟುಗಳಿಗೆ ಕ್ವಾನ್ಝೌನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಟೇಪಲ್ಡ್ ವೀಸಾ ನೀಡಲಾಗಿತ್ತು. ಈ ತಿಂಗಳ ಆರಂಭದಲ್ಲಿ, ಚೀನಾ ತನ್ನ ದೇಶದ ಹೊಸ ನಕ್ಷೆಯನ್ನು ಪ್ರಕಟಿಸಿ ಅರುಣಾಚಲ ಪ್ರದೇಶ ತನ್ನ ಭಾಗವೆಂದು ಹೇಳಿತ್ತು. ಇದು ಭಾರತವನ್ನು ಕೆರಳಿಸಿತ್ತು. ಚೀನಾದ ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ವೆಬ್ಸೈಟ್ ಮತ್ತು ಅಲ್ಲಿನ ಗ್ಲೋಬಲ್ ಟೈಮ್ಸ್ ಹೊಸ ನಕ್ಷೆಯನ್ನು ಹಂಚಿಕೊಂಡಿದ್ದವು. ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರ ಪ್ರದೇಶಗಳನ್ನು ತನ್ನದೆಂದು ಹೇಳಿತ್ತು. ಇದನ್ನು ಅಮೆರಿಕ, ತೈವಾನ್ ಮತ್ತು ವಿಯೆಟ್ನಾಂ ಸೇರಿದಂತೆ ಹಲವಾರು ದೇಶಗಳು ವ್ಯಾಪಕವಾಗಿ ಟೀಕಿಸಿದ್ದರೂ ಚೀನಾ ಮಣಿದಿಲ್ಲ.
ಭಾರತದೊಳಗಿರುವ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಪ್ರತ್ಯೇಕ ಹೆಸರಿಟ್ಟು, ಆ ಎಲ್ಲ ಪ್ರದೇಶಗಳು ದಕ್ಷಿಣ ಟಿಬೆಟ್ಗೆ ಸೇರಿದ್ದು ಎಂದು ಚೀನಾ ಹಿಂದೆಯೇ ಘೋಷಿಸಿದೆ. ಇಡೀ ಅರುಣಾಚಲ ಪ್ರದೇಶವೇ ದಕ್ಷಿಣ ಟಿಬೆಟ್ ಎಂಬುದು ಚೀನಾದ ಹಳೇ ಪ್ರತಿಪಾದನೆ. ಆದರೆ ಈ ಈಶಾನ್ಯ ರಾಜ್ಯ ಸಂಪೂರ್ಣವಾಗಿ ನಮಗೇ ಸೇರಿದ್ದು, ಹೆಸರು ಬದಲಿಸಿದ ಮಾತ್ರಕ್ಕೆ ವಾಸ್ತವ ಬದಲಿಸಲಾಗದು ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ. ಕಳೆದ ವರ್ಷ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ಗಡಿಯಲ್ಲಿ ಚೀನಾದ ಸೇನೆ ಉಪಟಳ ಉಂಟುಮಾಡಿತ್ತು. ಭಾರತ ಹಾಗೂ ಚೀನಾ ಯೋಧರ ಮಧ್ಯೆ ಭಾರಿ ಪ್ರಮಾಣದಲ್ಲಿ ಹೊಡೆದಾಟ ನಡೆದಿದ್ದು, ಉಭಯ ಕಡೆಗಳ ಸೈನಿಕರಿಗೂ ಗಾಯಗಳಾಗಿದ್ದವು. ಟಿಬೆಟಿಗರ ಪರಮೋಚ್ಚ ಧರ್ಮಗುರುವಾದ ದಲಾಯಿ ಲಾಮ ಅವರಿಗೆ ನಾವು ಆಶ್ರಯ ಕೊಟ್ಟದ್ದು ಹಾಗೂ ಟಿಬೆಟಿಗರ ನಿರಾಶ್ರಿತ ಸರ್ಕಾರವನ್ನು ಅವರು ಭಾರತದ ಧರ್ಮಶಾಲೆಯಿಂದ ನಡೆಸುತ್ತಿರುವುದು ಅದರ ಪಾಲಿಗೆ ಇಂದಿಗೂ ಸಹಿಸಲಾಗದ ಸಂಗತಿ. ಹಾಗೆಯೇ ಇತ್ತೀಚೆಗೆ ಅವರು ಮಂಗೋಲಿಯಾದ ಬಾಲಕನೊಬ್ಬನನ್ನು ಬೌದ್ಧರ ಮೂರನೇ ಮರಮೋಚ್ಚ ಧಾರ್ಮಿಕ ನಾಯಕನಾಗಿ ನೇಮಿಸಿದ್ದು ಕೂಡ ಚೀನಾಗೆ ಕಿರಿಕಿರಿ ಉಂಟುಮಾಡಿದೆ. ಇದೆಲ್ಲದರ ಫಲವೇ ಚೀನಾದ ಮುಂದುವರಿದ ರಗಳೆ. ಜಿಹೀಗೆ ಮತ್ತೆ ಮತ್ತೆ ಹೊಸ ಹೊಸ ಕ್ಯಾತೆ ತೆಗೆದು ಭಾರತವನ್ನು ಪ್ರಚೋದಿಸುತ್ತಲೇ ಇರುವ ಚೀನಾದಿಂದಾಗಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಹಳಸಿದ್ದು, ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ.
ಅರುಣಾಚಲದಲ್ಲಿ ಕೆಲವು ಕಡೆ ಗಡಿ ಸರಿಯಾಗಿ ನಿರ್ಧಾರವಾಗಿಲ್ಲ ಎಂಬುದು ನಿಜ. ಇಲ್ಲಿ ಚೀನಾ ಸೈನ್ಯ ಸುಲಭವಾಗಿ ಒಳತೂರಿ ಬರುವುದಕ್ಕೆ ಸಾಕಷ್ಟು ಆಸ್ಪದವಿದೆ ಎಂಬುದೂ ನಿಜ. 1962ರ ಯುದ್ಧದ ವೇಳೆಗೆ ಚೀನಾದ ಸೈನಿಕರು ಸುಮಾರು 20 ಕಿಲೋಮೀಟರ್ನಷ್ಟು ಒಳಬಂದು, ಯುದ್ಧವಿರಾಮದ ಬಳಿಕ ಹಿಂದೆ ಸರಿದಿದ್ದರು. ಆಗ ಅಂತಾರಾಷ್ಟ್ರೀಯ ಸಮುದಾಯ ಭಾರತದ ಜತೆಗೆ ನಿಂತಿತ್ತು. ಭಾರತವನ್ನು ಆಗಾಗ ಕೆಣಕುವುದು ಚೀನಾದ ಯುದ್ಧತಂತ್ರಗಳಲ್ಲಿ ಒಂದು. ನೆರೆರಾಷ್ಟ್ರಕ್ಕೆ ಕಾಟ ಕೊಡುವಲ್ಲಿ ಚೀನಾದ ಯುದ್ಧನೀತಿ ಬಹುಮುಖಿಯಾಗಿದೆ. ಭಾರತದ ಸುತ್ತಮುತ್ತಲಿನ ಪುಟ್ಟ ದೇಶಗಳಿಗೆ ಸಾಲ ನೀಡಿ, ತನ್ನ ಸಾಲದಿಂದ ಅವುಗಳು ಮುಳುಗುವಂತೆ ಮಾಡಿ, ಅಲ್ಲಿ ತನ್ನ ವ್ಯಾಪಾರ ಹಾಗೂ ಮಿಲಿಟರಿ ವಸಾಹತುಗಳನ್ನು ಸ್ಥಾಪಿಸಿ, ಅಲ್ಲಿಂದ ಭಾರತದ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಿಕೊಳ್ಳುತ್ತದೆ. ಸೈಬರ್ ಕಾರಸ್ಥಾನಗಳ ಮೂಲಕ ನಮ್ಮ ದೇಶದ ಸರಕಾರಿ- ವ್ಯೂಹಾತ್ಮಕ ವೆಬ್ಸೈಟ್ಗಳಿಗೆ ಲಗ್ಗೆ ಹಾಕಲು ಯತ್ನಿಸುತ್ತದೆ. ವೈರಿ ದೇಶ ಪಾಕಿಸ್ತಾನಕ್ಕೆ ಮಿಲಿಟರಿ ಬೆಂಬಲ ಹಾಗೂ ಅಲ್ಲಿಂದ ಕಾರ್ಯಾಚರಿಸುವ ಉಗ್ರರ ಶಿಬಿರಗಳಿಗೆ ಧನಸಹಾಯ ಮಾಡುತ್ತದೆ. ವಿಶ್ವಸಂಸ್ಥೆಯಲ್ಲಿ ಭಾರತ ತಕ್ಕ ದಾಖಲೆಗಳನ್ನು ನೀಡಿ, ತನ್ನ ವಿರುದ್ಧ ಕೆಲಸ ಮಾಡುವ ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಡ ತಂದಾಗಲೂ ಚೀನಾ ಅದಕ್ಕೆ ಅಡ್ಡಗಾಲು ಹಾಕುತ್ತದೆ. ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಭಾರತಕ್ಕೆ ಕಿರುಕುಳ ಕೊಡಲು ಅದು ಸದಾ ಸಿದ್ಧವಾಗಿಯೇ ಇರುತ್ತದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಜ್ಯಕ್ಕೆ ಅನ್ಯಾಯ; ಕಾವೇರಿ ನೀರು ಬೆಂಕಿಯಾಗದಿರಲಿ
ಆದರೆ ಪ್ರತಿ ಬಾರಿಯೂ ಭಾರತ ಚೀನಾಗೆ ತಕ್ಕ ಉತ್ತರ ನೀಡುತ್ತಲೇ ಬಂದಿದೆ. ಚೀನಾದ ಕಪಟ ಕಾರ್ಯತಂತ್ರಗಳನ್ನೂ ಯುದ್ಧನೀತಿಗಳನ್ನೂ ಅರ್ಥ ಮಾಡಿಕೊಂಡಿರುವ ನೂತನ ಭಾರತದ ಎದಿರೇಟುಗಳು ಚೀನಾವನ್ನು ಅಚ್ಚರಿಯಲ್ಲಿ ಕೆಡವಿರುವ ಸಾಧ್ಯತೆ ಇದೆ. ಗಲ್ವಾನ್ನಲ್ಲಿ ಚೀನಾ ಸೈನಿಕರ ಪಾಶವೀ ದಾಳಿಗೆ ಅದೇ ಮಾದರಿಯ ಉತ್ತರ ನೀಡುವಲ್ಲಿಂದ ಹಿಡಿದು, ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಒತ್ತಡ ಹಾಕಿಸುವವರೆಗೂ ಭಾರತದ ರಾಜನೀತಿ, ವ್ಯೂಹಾತ್ಮಕ ಸಿದ್ಧತೆ, ಮಿಲಿಟರಿ ಸನ್ನದ್ಧತೆಗಳು ಹಬ್ಬಿವೆ. ಇತ್ತೀಚೆಗೆ ಜಿ20 ಶೃಂಗಸಭೆಯ ವೇದಿಕೆಯಲ್ಲೂ ಭಾರತ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿರುವುದು, ಇಲ್ಲೂ ಚೀನಾಕ್ಕೆ ತಕ್ಕ ಇದಿರೇಟು ನೀಡಿರುವುದು ಚೀನಾಗೆ ಇರಸುಮುರಸು ಉಂಟುಮಾಡಿರಬಹುದು. ಆದರೆ ಅದು ಯಾವಾಗ ಪಾಠ ಕಲಿಯುವುದೋ ಗೊತ್ತಿಲ್ಲ. ಚೀನಾದ ಬಗ್ಗೆ ಸದಾ ಎಚ್ಚರ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ರಾಜನೀತಿಯ ಮಾದರಿಯನ್ನು ಮುಂದುವರಿಯುವುದು ಅಗತ್ಯವಾಗಲಿದೆ. ಸದ್ಯ ಏಷ್ಯನ್ ಗೇಮ್ಸ್ ವಿಚಾರದಲ್ಲಿ ಆಯೋಜಕರ ಕಾರ್ಯಕಾರಿ ಗುಂಪಿನ ಜತೆಗೆ ಚರ್ಚಿಸಿ ಮುನ್ನಡೆಯಬೇಕಾದೀತು.
-
ಪ್ರಮುಖ ಸುದ್ದಿ23 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ15 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ20 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ4 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಗ್ಯಾಜೆಟ್ಸ್17 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ದೇಶ16 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕ್ರೈಂ16 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ಉಡುಪಿ13 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ