ದೇಶ
Rahul Gandhi: ಅನರ್ಹತೆ ರದ್ದು ಬಳಿಕ ಮೊದಲ ಬಾರಿ ಸಂಸತ್ತಲ್ಲಿ ರಾಹುಲ್ ಗಾಂಧಿ ಭಾಷಣ; ಕೇಂದ್ರಕ್ಕೆ ಚಾಟಿ
Rahul Gandhi: ಮೋದಿ ಉಪನಾಮ ಪ್ರಕರಣದಲ್ಲಿ ಲೋಕಸಭೆ ಸದಸ್ಯತ್ವ ಅನರ್ಹಗೊಂಡು ಬಳಿಕ ಅನರ್ಹತೆ ರದ್ದಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡರು. ಅವಿಶ್ವಾಸ ಗೊತ್ತುವಳಿ ನಿರ್ಣಯದ ಕುರಿತು ಮಾತನಾಡಿದ ಅವರು ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.
ನವದೆಹಲಿ: ಮೋದಿ ಉಪನಾಮ ಪ್ರಕರಣದಲ್ಲಿ ಸಂಸತ್ನಿಂದ ಅನರ್ಹಗೊಂಡು ನಾಲ್ಕು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ನಿರ್ಣಯದ ಕುರಿತು ಮಾತನಾಡಿದರು. ಇದೇ ವೇಳೆ ಅವರು ಹಲವು ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದರು.
ಸಂಸತ್ನಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಧನ್ಯವಾದ ತಿಳಿಸಿದರು. “ನನ್ನ ಅನರ್ಹತೆ ರದ್ದುಗೊಳಿಸಿ, ಸದಸ್ಯತ್ವ ಮರಳಿ ನೀಡಿರುವುದಕ್ಕೆ ನಿಮಗೆ ಧನ್ಯವಾದಗಳು. ಹಾಗೆಯೇ, ಕಳೆದ ಬಾರಿ ನಾನು ಗೌತಮ್ ಅದಾನಿ ಕುರಿತು ಜಾಸ್ತಿ ಮಾತನಾಡಿ ನಿಮಗೆ ಹಾಗೂ ಕೇಂದ್ರ ಸರ್ಕಾರಕ್ಕೆ ತುಂಬ ಕಷ್ಟ ನೀಡಿದೆ. ಅದಕ್ಕಾಗಿ ನಿಮಗೆ ಕ್ಷಮೆಯಾಚಿಸುತ್ತೇನೆ. ಹಾಗೆಯೇ, ನಿಮಗೆ ಇವತ್ತು ಅದಾನಿ ಬಗ್ಗೆ ಮಾತನಾಡಿ ಜಾಸ್ತಿ ತೊಂದರೆ ಕೊಡುವುದಿಲ್ಲ” ಎಂದು ಹೇಳಿದರು.
ನನ್ನ ಅಹಂಕಾರ ಮಾಯ
ಆಕ್ರಮಣಕಾರಿಯಾಗಿ ಮಾತನಾಡದೆ ಶಾಂತಚಿತ್ತದಿಂದಲೇ ರಾಹುಲ್ ಗಾಂಧಿ ಹಲವು ವಿಷಯ ಪ್ರಸ್ತಾಪಿಸಿದರು. ಭಾರತ್ ಜೋಡೋ ಯಾತ್ರೆ ಕುರಿತು ಮಾತನಾಡಿದ ಅವರು, “ನಾನು ಭಾರತ್ ಜೋಡೋ ಯಾತ್ರೆ ಕೈಗೊಂಡಾಗ ಮೊದಲಿಗೆ ಸುಸ್ತಾಗುತ್ತಿತ್ತು. ಕಾಲುಗಳಿಗೆ ನೋವಾಗುತ್ತಿತ್ತು. ಇದರಿಂದ ನನ್ನ ಅಹಂಕಾರವೂ ಇಳಿಯಿತು. ಆದರೆ, ಒಬ್ಬ ಬಾಲಕಿ ಬಂದು ನನಗೆ ಚೀಟಿಯೊಂದನ್ನು ನೀಡಿದ್ದಳು. ನಾನು ನಿಮ್ಮ ಜತೆ ನಡೆಯುತ್ತೇನೆ ರಾಹುಲ್ ಗಾಂಧಿ ಎಂದು ಬರೆದಿದ್ದಳು. ಇದು ನನಗೆ ಸ್ಫೂರ್ತಿ ನೀಡಿತು. ಭಾರತ್ ಜೋಡೋ ಯಾತ್ರೆ ಕೈಗೊಳ್ಳಲು ಸಹಕಾರಿಯಾಯಿತು. ಮುಂದೆಯೂ ಭಾರತ್ ಜೋಡೋ ಯಾತ್ರೆ ಮುಂದುವರಿಯಲಿದೆ” ಎಂದು ತಿಳಿಸಿದರು.
ಮಣಿಪುರ ಹಿಂಸಾಚಾರ ಪ್ರಸ್ತಾಪ
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಸಂಸತ್ನಲ್ಲಿ ಉಲ್ಲೇಖಿಸಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಾಟಿ ಬೀಸಿದರು. “ಮಣಿಪುರದಲ್ಲಿ ಹಿಂಸಾಚಾರದಲ್ಲಿ ಮಿತಿಮೀರಿದೆ. ಕೆಲವು ದಿನಗಳ ಹಿಂದಷ್ಟೇ ನಾನು ಮಣಿಪುರಕ್ಕೆ ಹೋಗಿ ಬಂದೆ. ಆದರೆ, ನರೇಂದ್ರ ಮೋದಿ ಅವರು ಇದುವರೆಗೆ ಮಣಿಪುರಕ್ಕೆ ಹೋಗಿಲ್ಲ. ಏಕೆಂದರೆ, ನರೇಂದ್ರ ಮೋದಿ ಅವರ ಪ್ರಕಾರ, ಮಣಿಪುರ ಭಾರತದಲ್ಲಿ ಇಲ್ಲ” ಎಂದು ಕುಟುಕಿದರು.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿಗೆ ದಿಲ್ಲಿಯ 12, ತುಘಲಕ್ ಲೇನ್ ಸರ್ಕಾರಿ ಬಂಗಲೆ ಮರು ಹಂಚಿಕೆ! ವಾಪಸ್ ಬರ್ತಾರಾ ರಾಗಾ?
ಸೇನೆಯಿಂದ ಒಂದೇ ದಿನದಲ್ಲಿ ಶಾಂತಿ ಸ್ಥಾಪನೆ
ಭಾರತೀಯ ಸೇನೆಯನ್ನು ಮಣಿಪುರಕ್ಕೆ ಕಳುಹಿಸಿದರೆ ಒಂದೇ ದಿನದಲ್ಲಿ ಶಾಂತಿ ಸ್ಥಾಪನೆ ಮಾಡಬಹುದು. ಆದರೆ, ಕೇಂದ್ರ ಸರ್ಕಾರವು ಶಾಂತಿ ಸ್ಥಾಪನೆಯ ಒಂದು ಸಣ್ಣ ಪ್ರಯತ್ನ ಮಾಡಿಲ್ಲ. ದೇಶದ ಜನರ ಧ್ವನಿಯನ್ನು ಮಣಿಪುರದ ಜನರ ಮೂಲಕ ಕೇಂದ್ರ ಸರ್ಕಾರ ಹುದುಗಿಸಿದೆ. ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ. ದೇಶಾದ್ಯಂತ ಭಾರತ ಮಾತೆಯ ಹತ್ಯೆ ಮಾಡಲಾಗುತ್ತಿದೆ” ಎಂದರು. ಇದಕ್ಕೆ ಬಿಜೆಪಿಯು ಆಕ್ರೋಶ ವ್ಯಕ್ತಪಡಿಸಿದ ಕಾರಣ ಸದನದಲ್ಲಿ ಗಲಾಟೆ ನಡೆಯಿತು. ಇದಾದ ಬಳಿಕ ರಾಹುಲ್ ಗಾಂಧಿ ಭಾಷಣ ಮುಗಿಸಿದರು.
ದೇಶ
Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!
Money Guide: ನಿಮ್ಮ ನಿವೃತ್ತಿಯ ದಿನಗಳು ಅತ್ಯುತ್ತಮ ಆಗಿರಬೇಕು ಎಂದಾದರೆ, ವೃತ್ತಿಯ ಆರಂಭದಿಂದಲೇ ಉಳಿತಾಯವನ್ನು ಆರಂಭಿಸಿ.
ಹಣವನ್ನು ಉಳಿತಾಯ (Money Saving) ಮಾಡುವುದೂ ಒಂದು ಕಲೆ. ದುಡಿಮೆಯ ದಿನಗಳಲ್ಲಿ ಒಂದಿಷ್ಟು ಹಣವನ್ನು ಉಳಿತಾಯದ ಮಾಡಿದರೆ, ನಿವೃತ್ತಿಯ ದಿನಗಳನ್ನು (Retirement Life) ನೆಮ್ಮದಿಯಾಗಿ ಕಳೆಯಬಹುದು. ಇಲ್ಲದಿದ್ದರೆ, ದುಡಿಯುವ ಕಸುವು ಇಲ್ಲದ ಸಮಯದಲ್ಲಿ ಹಣಕ್ಕಾಗಿ ಪರದಾಡಬೇಕಾಗುತ್ತದೆ. ಹಾಗಾಗಿ, ನಿಮ್ಮ ವೃತ್ತಿಯ ಆರಂಭದ ದಿನಗಳಿಂದಲೇ ನಿವೃತ್ತಿಯ ಬಗ್ಗೆ ಪ್ಲ್ಯಾನ್ ಮಾಡಿ(Plan for Retirement life), ಹಣವನ್ನು ಉಳಿತಾಯ ಮಾಡಬೇಕು. ನಿವೃತ್ತಿಯ ಅಂಚಿಗೆ ಬರುವಷ್ಟರಲ್ಲಿ ದೊಡ್ಡ ಮೊತ್ತದ ಉಳಿತಾಯ ನಿಮಗಾಗಿ ಕಾಯುತ್ತಿರುತ್ತದೆ. ಹಾಗಾಗಿ, ಈಗನಿಂದಲೇ ನೀವು ಉಳಿತಾಯ ಮತ್ತು ನಿವೃತ್ತಿಯ ದಿನಗಳಿಗಾಗಿ ಹೂಡಿಕೆಯ ಪ್ಲ್ಯಾನ್ ಮಾಡುವುದು ಶುರು ಮಾಡಿ(Money Guide).
ನಿವೃತ್ತಿಗಾಗಿ ಹಣ ಉಳಿಸುವ ಮಾರ್ಗಗಳು….
1.ಉಳಿತಾಯ ಬೇಗ ಆರಂಭಿಸಿ
ಉತ್ತಮ ನಿವೃತ್ತಿ ಜೀವನಕ್ಕಾಗಿ ವೃತ್ತಿ ಆರಂಭದ ದಿನಗಳಿಂದಲೇ ಉಳಿತಾಯವನ್ನು ಆರಂಭಿಸಬೇಕು. ಚಿಕ್ಕ ಮೊತ್ತದ ಸೇವಿಂಗ್ ಕೂಡ ನಿವೃತ್ತಿ ಹೊತ್ತಿಗೆ ಬಹುದೊಡ್ಡ ಮೊತ್ತವಾಗಿ ಬದಲಾಗಿರುತ್ತದೆ.
2.ಟಾರ್ಗೆಟ್ ಸೆಟ್ ಮಾಡಿಕೊಳ್ಳಿ
ನಿಮ್ಮ ನಿರೀಕ್ಷಿತ ವೆಚ್ಚಗಳು ಮತ್ತು ಜೀವನಶೈಲಿಯ ಆಧಾರದ ಮೇಲೆ ನಿವೃತ್ತಿಗಾಗಿ ನಿಮಗೆ ಎಷ್ಟು ಹಣ ಬೇಕು ಎಂದು ನಿರ್ಧರಿಸಿ. ಹಣದುಬ್ಬರ ಮತ್ತು ಆರೋಗ್ಯ ವೆಚ್ಚಗಳಂತಹ ಅಂಶಗಳನ್ನು ಪರಿಗಣಿಸಿ ಸೇವಿಂಗ್ ಆರಂಭಿಸಿ. ಸ್ಪಷ್ಟವಾದ ನಿವೃತ್ತಿ ಗುರಿಯನ್ನು ಹಾಕಿಕೊಳ್ಳುವುದರಿಂದ ಹಣ ಉಳಿಕೆಯಲ್ಲಿ ಸ್ಪಷ್ಟತೆ ದೊರೆಯುತ್ತದೆ.
3.ರಿಟೈರ್ಮೆಂಟ್ ಬಜೆಟ್ ತಯಾರಿಸಿ
ನಿಮ್ಮ ಸದ್ಯದ ಆದಾಯ ಮತ್ತು ವೆಚ್ಚದ ಅನುಸಾರ ನಿಮ್ಮ ನಿವೃತ್ತಿಯ ಬಜೆಟ್ ತಯಾರಿಸಿ. ಅನವಶ್ಯವಾಗಿ ಎಲ್ಲೆಲ್ಲಿ ಹಣ ಪೋಲಾಗುತ್ತಿದೆ ಎಂದು ಗುರುತಿಸಿಕೊಳ್ಳಿ ಮತ್ತು ಅಂಥ ಹಣವನ್ನು ಉಳಿಕೆಯ ಪಟ್ಟಿಗೆ ಸೇರಿಸಿ. ಈ ಮೂಲಕ ರಿಟೈರ್ ಫಂಡ್ ಕ್ರೋಡೀಕರಿಸಬಹುದು.
4.ರಿಟೈರ್ಮೆಂಟ್ ಅಕೌಂಟ್!
ಭಾರತದಲ್ಲಿ ನಾನಾ ಅಕೌಂಟ್ಗಳು ಚಾಲ್ತಿಯಲ್ಲಿವೆ. ಅವುಗಳ ಮೂಲಕ ರಿಟೈರ್ಮೆಂಟ್ ಪ್ಲ್ಯಾನ್ ಮಾಡಬಹುದು. ಇಪಿಎಫ್, ಪಿಪಿಎಫ್, ಎನ್ಪಿಎಸ್, ಎಫ್ಡಿ ಇತ್ಯಾದಿ ಖಾತೆಗಳ ಮೂಲಕ ಸೇವಿಂಗ್ ಹೆಚ್ಚಿಸುತ್ತಾ ಹೋದಂತೆ ನಿವೃತ್ತಿ ಸಮಯದಯಲ್ಲಿ ತುಂಬಾ ಸಹಕಾರಿಯಾಗುತ್ತದೆ.
5.ಹೂಡಿಕೆ ಮಾಡಿ
ಷೇರುಗಳು, ನಿರ್ದಿಷ್ಟ ಆದಾಯ ತರುವ ಹೂಡಿಕೆಗಳು, ರಿಯಲ್ ಎಸ್ಟೇಟ್ ಸೇರಿದಂತೆ ಇನ್ನಿತರ ಹೂಡಿಕೆಗಳನ್ನು ಆಯ್ದುಕೊಳ್ಳಬಹುದು. ನೀವು ಯಾವುದೇ ರೀತಿಯ ಹೂಡಿಕೆಯ ಸಾಧನವನ್ನು ಆಯ್ಕೆ ಮಾಡಿಕೊಳ್ಳಿ. ಆದರೆ, ಅದಕ್ಕಿಂತ ಮುಂಚೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಮುಂದುವರಿಯರಿ.
6.ಅನವಶ್ಯ ವೆಚ್ಚ ಬೇಡ
ನಿಮ್ಮ ನಿವೃತ್ತಿಯ ದಿನಗಳು ಅತ್ಯುತ್ತಮವಾಗಿರಬೇಕು ಎಂದಾದರೆ, ಈಗಿನಿಂದಲೂ ಅನವಶ್ಯ ವೆಚ್ಚಗಳನ್ನು ದೂರ ಮಾಡಿ. ನಿಮ್ಮ ರಿಟೈರ್ಮೆಂಟ್ ಖಾತೆಗಳಿಗೆ ಆಟೋಮೆಟಿಕ್ ಆಗಿ ದುಡ್ಡು ಪೇ ಆಗುವ ಹಾಗೆ ಮಾಡಿ. ನಿಮ್ಮ ಸಂಬಳದಲ್ಲಿ ಇನ್ಕ್ರಿಮೆಂಟ್ ಆದಾಗಲೆಲ್ಲ. ಈ ರೀತಿಯ ಪರಿಹಾರವನ್ನು ಕಂಡುಕೊಳ್ಳಬಹುದು.
7.ಪರ್ಯಾಯ ಉಳಿತಾಯ
ಮ್ಯೂಚವಲ್ ಫಂಡ್ಸ್, ಷೇರುಗಳು, ಬಾಂಡ್ಗಳಂಥ ಪರ್ಯಾಯ ಉಳಿತಾಯದ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ಕೇವಲ ಹಣವನ್ನು ಫಿಕ್ಸೆಡ್ ಡಿಪಾಸೆಟ್ ಮಾಡುವುದು ಮಾತ್ರವೇ ಉಳಿತಾಯದ ಮಾರ್ಗವಲ್ಲ. ಉಳಿತಾಯದ ಜತೆಗೆ ಹಣ ಹೆಚ್ಚಾಗುವ ಮಾರ್ಗಗಳಿವೆ. ಅವುಗಳನ್ನು ಶೋಧಿಸಬಹುದು. ಆದರೆ, ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.
8.ತೆರಿಗೆ ಮಾಹಿತಿ ಇರಲಿ
ತೆರಿಗೆ ಕಾನೂನುಗಳು, ಹೂಡಿಕೆ ಆಯ್ಕೆಗಳು ಮತ್ತು ನಿವೃತ್ತಿ ಯೋಜನೆ ತಂತ್ರಗಳಲ್ಲಿನ ಬದಲಾವಣೆಗಳ ಬಗ್ಗೆ ನಿಮಗೆ ಅಪ್ಡೇಟೆಡ್ ಮಾಹಿತಿ ಇರುವುದು ಉತ್ತಮ. ತಿಳುವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ಮಾಡಲು ಈ ರೀತಿಯ ಅಪ್ಡೇಟೆಡ್ ಮಾಹಿತಿ ಇದ್ದರೆ ಬೆಸ್ಟ್ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.
9.ರಿಟೈರ್ಮೆಂಟ್ ಫಂಡ್ ಮುಟ್ಟಬೇಡಿ
ಯಾವುದೇ ಕಾರಣಕ್ಕೂ ನಿಮ್ಮ ನಿವೃತ್ತಿ ಉಳಿತಾಯವನ್ನು ಇತರ ವೆಚ್ಚಗಳಿಗಾಗಿ ಬಳಸಲು ಹೋಗಲೇಡಿ. ಉಳಿತಾಯದ ಹಣವನ್ನು ಬಳಸಲಾರಂಭಿಸಿದರೆ, ನಿವೃತ್ತಿಯ ಸಮಯದಲ್ಲಿ ಮತ್ತೆ ನೀವು ಹಣವಿಲ್ಲದೇ ಪರದಾಡಬೇಕಾಗುತ್ತದೆ. ಹಾಗಾಗಿ, ಎಂಥದ್ದೇ ಸಂದರ್ಭದಲ್ಲಿ ನಿವೃತ್ತಿಗಾಗಿ ತೆಗೆದಿಟ್ಟ ಅಥವಾ ಸೇವಿಂಗ್ ಮಾಡಿದ ಹಣವನ್ನು ಸದ್ಯದ ವೆಚ್ಚಕ್ಕೆ ಬಳಸಲು ಮುಂದಾಗಬೇಡಿ.
ಈ ಸುದ್ದಿಯನ್ನೂ ಓದಿ: Money Guide: ಪಿಪಿಎಫ್, ಎನ್ಎಸ್ಸಿ, ಎಸ್ಸಿಎಸ್ಎಸ್ ಖಾತೆ ಸ್ಥಗಿತವಾಗದಂತೆ ನೋಡಿಕೊಳ್ಳಿ
10.ತುರ್ತು ನಿಧಿ ಇರಲಿ
ಅನಿರೀಕ್ಷಿತ ವೆಚ್ಚಗಳಿಗಾಗಿ ತುರ್ತು ನಿಧಿಯನ್ನು ನಿರ್ವಹಣೆ ಮಾಡುವುದು ಉತ್ತಮ. ಯಾಕೆಂದರೆ, ತುರ್ತು ನಿಧಿ ನಿಮ್ಮ ಬಳಿ ಇದ್ದರೆ ನೀವು ನಿಮ್ಮ ಸೇವಿಂಗ್ಸ್ ಅನ್ನು ವೆಚ್ಚಗಳಿಗೆ ಬಳಸಲು ಮುಂದಾಗುವುದಿಲ್ಲ. ಇಲ್ಲದಿದ್ದರೆ, ಉಳಿತಾಯದ ಹಣವನ್ನೇ ನೀವು ತುರ್ತು ಅಗತ್ಯಗಳಿಗೆ ಬಳಸುತ್ತೀರಿ. ಆಗ ನಿಮ್ಮ ನಿವೃತ್ತಿಯ ಎಲ್ಲ ಪ್ಲ್ಯಾನ್ ಹಾಳಾಗುತ್ತದೆ.
ಗ್ಯಾಜೆಟ್ಸ್
Reliance Jio: ಅಬ್ಬಬ್ಬಾ ಲಾಟರಿ..! ಐಫೋನ್ 15 ಖರೀದಿಸಿದರೆ 6 ತಿಂಗಳು ರಿಲಯನ್ಸ್ ಜಿಯೋ ಫ್ರೀ ಪ್ಲಾನ್
Reliance Jio: ಹೊಸದಾಗಿ ಲಾಂಚ್ ಆಗಿರುವ ಆ್ಯಪಲ್ ಐಫೋನ್ 15 ಖರೀದಿಯ ಮೇಲೆ ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಣೆ ಮಾಡಿದೆ.
ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ರಿಟೇಲ್ ಸ್ಟೋರ್ಗಳು (Reliance Retail), ರಿಲಯನ್ಸ್ ಡಿಜಿಟಲ್ ಆನ್ಲೈನ್ (Reliance Digital Online) ಅಥವಾ ಜಿಯೋಮಾರ್ಟ್ನಲ್ಲಿ (Jio Mart) ಜಿಯೋ ಐಫೋನ್ 15 (iPhone 15) ಖರೀದಿ ಮಾಡಿದರೆ 2,394 ರೂ. ಮೌಲ್ಯದ ಆರು ತಿಂಗಳ ಪ್ಲಾನ್ (Reliance Jio) ಅನ್ನು ಉಚಿತವಾಗಿ ಬಳಕೆದಾರರಿಗೆ ನೀಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ 399 ರೂ. ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ನೀಡಲಿದೆ. ಇದರ ಒಟ್ಟು ಮೌಲ್ಯ 2,394 ರೂ.ಗಳಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.
ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ ರೂ. 399 ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ಕಾಲಿಂಗ್ ಸಹ ಸಿಗಲಿದೆ. ಅಲ್ಲದೇ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಸಹ ಉಚಿತವಾಗಿ ಕಳುಹಿಸಬಹುದಾಗಿದೆ.
ಆದರೆ ರಿಲಯನ್ಸ್ ರಿಟೇಲ್ ಸ್ಟೋರ್ಗಳು, ರಿಲಯನ್ಸ್ ಡಿಜಿಟಲ್ ಆನ್ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ: Apple iPhone : ಭಾರತದಲ್ಲಿ ಐಫೋನ್ 3ಜಿಯಿಂದ ಮೊದಲ ರಿಟೇಲ್ ಸ್ಟೋರ್ ತನಕ ಆ್ಯಪಲ್ನ 15 ವರ್ಷಗಳ ಯಾತ್ರೆ ಹೇಗಿತ್ತು?
ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಲಾಭವು ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.
ಈ ಪ್ಲಾನ್ ಸೆಪ್ಟೆಂಬರ್ 22ರಿಂದ ಆರಂಭವಾಗಲಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ಲಭ್ಯವಾಗಲಿದೆ. ಈ ಯೋಜನಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ
Chandrayaan 3: ಕಳೆದ ಹದಿನೈದು ದಿನಗಳಿಂದ ಸ್ಲೀಮ್ ಮೋಡ್ನಲ್ಲಿರುವ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಸಕ್ರಿಯಗೊಳಿಸಿರುವ ಪ್ರಯತ್ನವನ್ನು ಇಸ್ರೋ ಮುಂದುವರಿಸಿದೆ.
ನವದೆಹಲಿ: ಚಂದ್ರನ ಅಂಗಳದಲ್ಲಿ (Moon) ಸ್ಲೀಪ್ ಮೋಡ್ನಲ್ಲಿರುವ (Sleep Mode) ಚಂದ್ರಯಾನ-3 (Chandrayaan 3) ಪ್ರಜ್ಞಾನ್ ರೋವರ್ (Pragyan Rover) ಮತ್ತು ವಿಕ್ರಮ್ ಲ್ಯಾಂಡರ್ (Vikram Lander) ಎಚ್ಚರಗೊಳಿಸುವ ಪ್ರಯತ್ನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಶುಕ್ರವಾರ ಸಂಜೆ ಮಾಡಲು ಮುಂದಾಗಿತ್ತು. ಆದರೆ, ಆಗ ಪ್ರಯತ್ನವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದೆ ಎಂದು ತಿಳಿದು ಬಂದಿದೆ. ಅಂದರೆ, ಶನಿವಾರ ಸಂಜೆ ಚಂದ್ರಯಾನ-3 ಉಪಕರಣಗಳನ್ನು ಸಕ್ರಿಯಗೊಳಿಸುವ ಪ್ರಯತ್ನವನ್ನು ಇಸ್ರೋ ಮಾಡಲಿದೆ ಎಂದು ಸ್ಪೇಸ್ ಅಪ್ಲಿಕೇಷನ್ ಸೆಂಟರ್ ನಿರ್ದೇಶಕ ನಿಲೇಶ್ ದೇಸಾಯಿ ಅವರು ಹೇಳಿದ್ದರು. ಇಷ್ಟಾಗಿಯೂ, ಪ್ರಜ್ಞಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಅನ್ನು ಸಂಪರ್ಕಿಸುವ ಪ್ರಯತ್ನವನ್ನು ಶುಕ್ರವಾರ ಮಾಡಲಾಯಿತಾದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಇಸ್ರೋ ಟ್ವೀಟ್ ಮಾಡಿದೆ.
Chandrayaan-3 Mission:
— ISRO (@isro) September 22, 2023
Efforts have been made to establish communication with the Vikram lander and Pragyan rover to ascertain their wake-up condition.
As of now, no signals have been received from them.
Efforts to establish contact will continue.
ಸೆಪ್ಟೆಂಬರ್ 22 ರ ಸಂಜೆ ರೋವರ್ ಮತ್ತು ಲ್ಯಾಂಡರ್ ಅನ್ನು ಮರುಸಕ್ರಿಯಗೊಳಿಸಲು ಯೋಜಿಸಿದ್ದೆವು. ಆದರೆ ಕೆಲವು ಕಾರಣಗಳಿಂದಾಗಿ ನಾವು ಅದನ್ನು ನಾಳೆ ಸೆಪ್ಟೆಂಬರ್ 23 ರಂದು ಮಾಡುತ್ತೇವೆ. ಲ್ಯಾಂಡರ್ ಮತ್ತು ರೋವರ್ ಅನ್ನು ಸ್ಲೀಪ್ ಮೋಡ್ನಿಂದ ಹೊರತೆಗೆದು ಅದನ್ನು ಪುನಃ ಸಕ್ರಿಯಗೊಳಿಸುವ ಯೋಜನೆಯನ್ನು ನಾವು ಹೊಂದಿದ್ದೇವೆ ಎಂದು ಸುದ್ದಿ ಸಂಸ್ಥೆ ನಿಲೇಶ್ ದೇಸಾಯಿ ಅವರು ತಿಳಿಸಿದ್ದಾರೆ.
ಭೂಮಿಯ 15 ದಿನಗಳು ಚಂದ್ರನ ಒಂದು ದಿನಕ್ಕೆ ಸಮ. ಹಾಗಾಗಿ, 15 ದಿನಗಳ ಹಿಂದೆ ಇಸ್ರೋ, ಚಂದ್ರನ ಅಂಗಳದಲ್ಲಿರುವ ಪ್ರಜ್ಞಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಅನ್ನು ಸ್ಲೀಮ್ ಮೋಡಿಗೆ ವರ್ಗಾಯಿಸಿತ್ತು. ಇದೀಗ ಚಂದ್ರನಲ್ಲಿ ಸೂರ್ಯೋದಯವಾಗಿದ್ದು, ಚಂದ್ರಯನಾ-3 ವೈಜ್ಞಾನಿಕ ಉಪಕರಣಗಳನ್ನು ಸಕ್ರಿಯಗೊಳಿಸುವ ಪ್ರಯತ್ನವನ್ನು ಇಸ್ರೋ ಮಾಡುತ್ತಿದೆ. ಯಶಸ್ವಿಯಾಗಿ ತಮ್ಮ ವೈಜ್ಞಾನಿಕ ಸಂಸೋಧನೆಗಳನ್ನು ಕೈಗೊಂಡ ವಿಕ್ರಮ್ ಲ್ಯಾಂಡರ್ ಅನ್ನು ಸೆಪ್ಟೆಂಬರ್ 4 ಮತ್ತು ಪ್ರಜ್ಞಾನ್ ರೋವರ್ ಅನ್ನು ಸೆಪ್ಟೆಂಬರ್ 2ರಂದು ಸ್ಲೀಮ್ ಮೋಡ್ಗೆ ತಳ್ಳಲಾಗಿತ್ತು.
ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನ 3 ಕೌಂಟ್ಡೌನ್ಗೆ ಧ್ವನಿಯಾಗಿದ್ದ ವಲರ್ಮತಿ ಇನ್ನಿಲ್ಲ; ದೇಶವೇ ಕೇಳಿದ್ದ ಧ್ವನಿ ಅದು
ಶುಕ್ರವಾರ ನಡೆಸಿದ ಪ್ರಯತ್ನ ವಿಫಲ
ಈ ಮಧ್ಯೆ, ಇಸ್ರೋ ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿದ್ದು, ಸ್ಲೀಮ್ ಮೋಡ್ನಲ್ಲಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಅನ್ನು ಸಕ್ರಿಯಗೊಳಿಸುವುದಕ್ಕಾಗಿ ಸಂಪರ್ಕಿಸುತ್ತಿದ್ದೇವೆ. ಸದ್ಯದ ಮಟ್ಟಿಗೆ ರೋವರ್ ಮತ್ತು ಲ್ಯಾಂಡರ್ನಿಂದ ಕಮ್ಯುನಿಕೇಷನ್ ಸಾಧ್ಯವಾಗುತ್ತಿಲ್ಲ. ಅಲ್ಲಿಂದ ಯಾವುದೇ ಸಿಗ್ನಲ್ಗಳು ದೊರೆಯುತ್ತಿಲ್ಲ. ಆದರೆ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಸಕ್ರಿಯೊಳಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಬರೆದುಕೊಂಡಿದೆ.
ಕರ್ನಾಟಕ
BJP-JDS Alliance : ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಶಕೆ ಆರಂಭ!
BJP-JDS Alliance: ಕೊನೆಗೂ ಎಲ್ಲ ಊಹೆ ನಿಜವಾಗಿದೆ. ಜೆಡಿಎಸ್ ಬಿಜೆಪಿ ನೇತೃತ್ವದ ಎನ್ಡಿಎ ಕೂಟವನ್ನು ಪ್ರವೇಶ ಮಾಡಿದೆ. ಇದರೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನೇರ ಹಣಾಹಣಿ ನಡೆಯಲಿದೆ.
ನವ ದೆಹಲಿ: ಕರ್ನಾಟಕ ರಾಜಕಾರಣದಲ್ಲಿ ಮೂರನೇ ನಿರ್ಣಾಯಕ ಶಕ್ತಿಯಾಗಿರುವ ಜಾತ್ಯತೀತ ಜನತಾದಳ (Janata dal Secular) ಇದೀಗ ರಾಷ್ಟ್ರೀಯ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷದೊಂದಿಗೆ ರಾಜಕೀಯ ಮೈತ್ರಿಯನ್ನು (BJP-JDS Alliance) ಅಧಿಕೃತವಾಡಿ ಮಾಡಿಕೊಳ್ಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಶಕೆ ಆರಂಭವಾಗುವ ಲಕ್ಷಣ ಕಾಣಿಸಿದೆ.
ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ (Amit shah) ಅವರ ದಿಲ್ಲಿಯ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರ ಸಮ್ಮುಖದಲ್ಲಿ ಜೆಡಿಎಸ್ನ ಹಿರಿಯ ನಾಯಕ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಈ ಮೈತ್ರಿಗೆ ಅಧಿಕೃತವಾಗಿ ಒಪ್ಪಿಗೆ ನೀಡಿದ್ದಾರೆ. ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇದನ್ನು ಘೋಷಣೆ ಮಾಡಿದ್ದು ಇನ್ನು ಜೆಡಿಎಸ್ ಪಕ್ಷವು ಎನ್ಡಿಎ ಕೂಟದ ಮಿತ್ರ ಪಕ್ಷವಾಗಿರಲಿದೆ (JDS will be part of NDA) ಎಂದು ಪ್ರಕಟಿಸಿದ್ದಾರೆ.
ಇದರೊಂದಿಗೆ ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಕೇಳಿಬರುತ್ತಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಯ ಊಹಾಪೋಹ ಮತ್ತು ಚರ್ಚೆಗಳಿಗೆ ತೆರೆ ಬಿದ್ದಂತಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Election 2024) ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜತೆಯಾಗಿ ಸೆಣಸಲು ವೇದಿಕೆ ಸಜ್ಜಾದಂತಾಗಿದೆ.
ಮೈತ್ರಿ ಮಾತುಕತೆಗಾಗಿ ಎಚ್.ಡಿ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಗುರುವಾರವೇ ದಿಲ್ಲಿಗೆ ತೆರಳಿದ್ದರು. ಗುರುವಾರ ಸಂಜೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ನಿವಾಸದಲ್ಲಿ ಜೆಡಿಎಸ್ನ ಆಂತರಿಕ ಸಭೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ಮೈತ್ರಿಯ ಷರತ್ತಿನ ಬಗ್ಗೆ ಚರ್ಚೆಗಳು ನಡೆದಿದ್ದವು. ಬಳಿಕ ರಾತ್ರಿ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬಿಜೆಪಿಯ ರಾಯಭಾರಿಯಾಗಿ ದೇವೇಗೌಡರ ಮನೆಗೆ ಬಂದು ಚರ್ಚೆ ನಡೆಸಿದ್ದರು. ಇದಾದ ಬಳಿಕ ಶುಕ್ರವಾರ ಮಧ್ಯಾಹ್ನ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಬಿಜೆಪಿ ನಾಯಕ ಅಮಿತ್ ಶಾ ಅವರ ನಿವಾಸಕ್ಕೆ ತೆರಳಿ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಮೈತ್ರಿಯ ಅಂತಿಮ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಮೈತ್ರಿಯನ್ನು ಘೋಷಣೆ ಮಾಡಲಾಗಿದೆ.
ಜಾತ್ಯತೀತ ಜನತಾದಳವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಲು ಬಯಸಿರುವುದು ನಮಗೆ ಖುಷಿ ತಂದಿದೆ. ನಾವು ಅವರನ್ನು ಅತ್ಯಂತ ಪ್ರೀತಿಯಿಂದ ಎನ್ಡಿಎ ಮಿತ್ರಕೂಟಕ್ಕೆ ಸ್ವಾಗತಿಸುತ್ತೇವೆ ಎಂದು ಜೆ.ಪಿ. ನಡ್ಡಾ ಅವರು ಟ್ವೀಟ್ ಮಾಡುವುದರೊಂದಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕೃತಗೊಂಡಂತಾಗಿದೆ.
ಮೈತ್ರಿಯನ್ನು ಘೋಷಣೆ ಮಾಡಿದ ಕುಮಾರಸ್ವಾಮಿ
ಈ ನಡುವೆ, ಎಚ್.ಡಿ ಕುಮಾರಸ್ವಾಮಿ ಅವರು ಕೂಡಾ ಬಿಜೆಪಿ ಜತೆಗಿನ ಮೈತ್ರಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಆದರೆ, ಮೈತ್ರಿಯ ಒಟ್ಟಾರೆ ಚೌಕಟ್ಟು, ಸೀಟು ಹಂಚಿಕೆ, ಇತರ ರಾಜಕೀಯ ಸ್ಥಾನಮಾನಗಳ ಬಗ್ಗೆ ಇನ್ನಷ್ಟೇ ಅಂತಿಮ ರೂಪ ಸಿಗಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಹಲವು ತಿಂಗಳ ಕುತೂಹಲಕ್ಕೆ ತೆರೆ, ಕಾಂಗ್ರೆಸ್ಗೆ ಠಕ್ಕರ್ ಕೊಡಲು ಮೈತ್ರಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಭರ್ಜರಿ ಬಹುಮತ ಪಡೆದಿರುವುದು ಬಿಜೆಪಿ ಮತ್ತು ಜಾತ್ಯತೀತ ಜನತಾ ದಳದಲ್ಲಿ ತಲ್ಲಣ ಉಂಟು ಮಾಡಿತ್ತು. ಆಗಿನಿಂದಲೇ ಬಿಜೆಪಿ ಹಾಗೂ ಜೆಡಿಎಸ್ಗಳು ಒಂದಾಗಿ ಕಾಂಗ್ರೆಸ್ನ್ನು ಎದುರಿಸುವ ಚರ್ಚೆಗಳು ಆರಂಭಗೊಂಡಿದ್ದವು.
ಒಂದು ಹಂತದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎನ್ನುವಷ್ಟು ಪ್ರಖರವಾಗಿ ಮಿಂಚಿದ್ದರು. ಇನ್ನೂ ಸದನ ನಾಯಕನ ಆಯ್ಕೆಯೇ ಆಗಿಲ್ಲದೆ ಇರುವುದರಿಂದ ಬಿಜೆಪಿಯೂ ಅವರನ್ನೇ ಮುಂದಾಳುವಾಗಿ ಮುಂಚೂಣಿಯಲ್ಲಿ ನಿಲ್ಲಿಸಿತ್ತು. ಜಂಟಿ ಪತ್ರಿಕಾಗೋಷ್ಠಿಯ ಮೂಲಕವೂ ಗಮನ ಸೆಳೆದಿತ್ತು.
ಬಿ.ಎಸ್. ಯಡಿಯೂರಪ್ಪ ಘೋಷಣೆಯ ಮೂಲಕ ಮರುಚಾಲನೆ
ವಿಧಾನಸಭಾ ಅಧಿವೇಶನದಲ್ಲಿ ಹುಟ್ಟಿಕೊಂಡ ಮೈತ್ರಿಯ ಚರ್ಚೆ ಅದರ ಮುಕ್ತಾಯದ ಬಳಿಕ ತಣ್ಣಗಾಗಿತ್ತು. ಕೆಲವು ವಾರದ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರು ಸದ್ಯವೇ ಬಿಜೆಪಿ-ಜೆಡಿಎಸ್ ಮೈತ್ರಿ ಘೋಷಣೆಯಾಗಲಿದೆ ಎಂದು ಪ್ರಕಟಿಸಿದರು. ಬಿಎಸ್ವೈ ಅವರ ಈ ಪ್ರಕಟಣೆಯನ್ನು ಬಿಜೆಪಿ ಮತ್ತು ಜೆಡಿಎಸ್ನ ಬಹುತೇಕ ಎಲ್ಲ ನಾಯಕರು ಸ್ವಾಗತಿಸಿದರು. ಈಗಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಜೆಡಿಎಸ್ನಲ್ಲಿ ಕೆಲವು ನಾಯಕರು ಅದಕ್ಕೆ ಅಪಸ್ವರ ಹಾಡಿದ್ದರು. ಇದೀಗ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಅಧಿಕೃತ ಎನ್ನುವುದು ಘೋಷಣೆಯಾಗಿದೆ.
ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಮೈತ್ರಿ
ಜೆಡಿಎಸ್ನ ಕೆಲವು ನಾಯಕರು ಕಾಂಗ್ರೆಸ್ನ ಅಬ್ಬರದ ವಿರುದ್ಧ ಎದ್ದು ನಿಲ್ಲಲು ಬಿಜೆಪಿ ಜತೆ ಮೈತ್ರಿ ಅಗತ್ಯ ಎಂಬುದನ್ನು ಪ್ರತಿಪಾದಿಸಿದ್ದರು. ಆದರೆ ಬಿಜೆಪಿ ಪಾಲಿಗೂ ಈ ಮೈತ್ರಿ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಅತ್ಯಂತ ಅಗತ್ಯದ್ದಾಗಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 25+1ನ್ನು ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿಯೂ ಅದನ್ನೇ ಮರುಸೃಷ್ಟಿಸಿರುವ ಅನಿವಾರ್ಯತೆ ಇದೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪರ ನಿಂತಿರುವ ಹಿನ್ನೆಲೆಯಲ್ಲಿ ಕಳೆದ ಬಾರಿ ಫಲಿತಾಂಶದ ಮರು ಸೃಷ್ಟಿ ಕಷ್ಟವಾದೀತು ಎಂಬ ನೆಲೆಯಲ್ಲಿ ಅದು ಕೂಡಾ ಜೆಡಿಎಸ್ನ ಮೈತ್ರಿಯನ್ನು ಬಯಸಿದೆ. ಜೆಡಿಎಸ್ನ ಬೆಂಬಲವಿದ್ದರೆ ಬೆಂಗಳೂರು ಸೇರಿದಂತೆ ಹಳೆಮೈಸೂರು ಪ್ರಾಂತ್ಯದಲ್ಲಿ ಗೆಲ್ಲಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರೆ ದೇಶದಲ್ಲಿ ಹಿಂದೆ ಗೆದ್ದ ಬಹುತೇಕ ಎಲ್ಲ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲವಾದರೆ ಇಂಡಿಯಾ ಮೈತ್ರಿಕೂಟದ ಮುಂದೆ ಮಂಡಿಯೂರಬೇಕಾದೀತು ಎಂಬ ಆತಂಕವಿದೆ. ಹೀಗಾಗಿ ಕರ್ನಾಟಕದ ಬಲವನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿ ಮೈತ್ರಿಗೆ ಮುಂದಾಗಿದೆ.
ಇದು ಎರಡನೇ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ
ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಹಿಂದೆ 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ನ ಧರಂ ಸಿಂಗ್ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದು ಬಿಜೆಪಿಯೊಂದಿಗೆ ಮೈತ್ರಿ ಸರಕಾರವನ್ನು ನಡೆಸಿತ್ತು. 20-20 ಸರ್ಕಾರದ ಮೊದಲ ಅವಧಿಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ, ಅಧಿಕಾರ ಹಸ್ತಾಂತರ ಮಾಡದೆ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಹಾಗೆ ಮೈತ್ರಿ ಮುರಿದುಬಿದ್ದಿತ್ತು. ಇದೀಗ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಮೈತ್ರಿ ಇದಾಗಿದ್ದು, ಚುನಾವಣಾ ಪೂರ್ವ ಮೈತ್ರಿಯ ಮೂಲಕ ಜೆಡಿಎಸ್ ಅಧಿಕೃತವಾಗಿ ಎನ್ಡಿಎ ಕೂಟವನ್ನು ಸೇರಿಕೊಳ್ಳಲಿದೆ.
ಮೈತ್ರಿಯ ಬಳಿಕ ಸವಾಲುಗಳು
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಮೈತ್ರಿಯಲ್ಲಿ ಎರಡು ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಅತ್ಯಂತ ಮಹತ್ವದ ಹಂತದ್ದಾಗಿರುತ್ತದೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಜೆಡಿಎಸ್ ಐದು ಲೋಕಸಭಾ ಕ್ಷೇತ್ರ (ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ), ಎರಡು ಎಂಎಲ್ಸಿ ಸ್ಥಾನ, ಒಂದು ಕೇಂದ್ರ ಮಂತ್ರಿ ಸ್ಥಾನವನ್ನು ಕೇಳಿದೆ ಎನ್ನಲಾಗುತ್ತಿದೆ. ಆದರೆ, ಬಿಜೆಪಿ ಇಷ್ಟು ಸ್ಥಾನಗಳನ್ನು ಕೊಡುತ್ತದೆಯೇ ಎನ್ನುವುದು ಕಾದು ನೋಡಬೇಕಾಗಿದೆ. ಇದರ ವಿಚಾರ ಮುಂದಿನ ಚುನಾವಣೆಯ ಹಂತದಲ್ಲಿ ಅಂತಿಮವಾಗಲಿದೆ.
ಅಂತಿಮವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಧ್ಯಸ್ಥಿಕೆಯಲ್ಲೇ ಜೆಡಿಎಸ್ ಈ ಬಾರಿ ಅಧಿಕೃತವಾಗಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಂತಾಗಿದೆ. ಜಾತ್ಯತೀತ ಎಂಬ ಹೆಸರಿನೊಂದಿಗೇ ಇರುವ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜಕೀಯದಲ್ಲಿ ಯಾರೂ ಯಾರಿಗೂ ಅಸ್ಪೃಶ್ಯವಲ್ಲ ಎನ್ನುವುದು ಮತ್ತೆ ಋಜುವಾತಾಗಿದೆ.
-
ಪ್ರಮುಖ ಸುದ್ದಿ12 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ24 hours ago
Rupert Murdoch: ಫಾಕ್ಸ್ ಮತ್ತು ನ್ಯೂಸ್ ಕಾರ್ಪ್ ಅಧ್ಯಕ್ಷ ಹುದ್ದೆ ತೊರೆದ ‘ಮಾಧ್ಯಮ ದೊರೆ’ ರೂಪರ್ಟ್ ಮುರ್ಡೋಕ್
-
ಪ್ರಮುಖ ಸುದ್ದಿ3 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ9 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ22 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ22 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಆರೋಗ್ಯ15 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!