ಕರ್ನಾಟಕ ಎಲೆಕ್ಷನ್
Karnataka Election 2023 : ಮುಖ್ಯಮಂತ್ರಿ ಆಯ್ಕೆಗೆ ಸಿಎಲ್ಪಿ ಸಭೆ ಶುರು; ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಲಿ ಎಂದ ಆದಿಚುಂಚನಗಿರಿ ಶ್ರೀ
Karnataka Election 2023 : ನೂತನ ಮುಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ನಡುವೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಪರವಾಗಿ ಮಠಾಧೀಶರೂ ಲಾಬಿ ನಡೆಸುತ್ತಿದ್ದಾರೆ.
ಬೆಂಗಳೂರು: ನೂತನ ಮುಖ್ಯಮಂತ್ರಿ ನೇಮಕಕ್ಕೆ ಕರ್ನಾಟಕ ಕಾಂಗ್ರೆಸ್ನ ಶಾಸಕಾಂಗ ಪಕ್ಷದ ಸಭೆಯು ನಗರದ ಖಾಸಗಿ ಹೊಟೇಲ್ನಲ್ಲಿ ಆರಂಭಗೊಂಡಿದೆ. ಇದೇ ಹೊತ್ತಿನಲ್ಲಿ ಕುರುಬರ ಸಂಘ, ಮಠಾದಧೀಶರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಒತ್ತಾಯಿಸಿದರೆ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಮಠಾಧೀಶರು, ಒಕ್ಕಲಿಗ ನಾಯಕರು ಸಭೆ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇಮಿಸಿರುವ ವೀಕ್ಷಕರ ಸಮ್ಮುಖದಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾದ 135 ಶಾಸಕರ ಸಭೆ ನಡೆಯುತ್ತಿದೆ. ಕಾಂಗ್ರೆಸ್ ಬೆಂಬಲದಿಂದ ಆಯ್ಕೆಯಾಗಿರುವ ಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯ, ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ ಕೂಡ ಸಭೆಯಲ್ಲಿ ಭಾಗವಹಿಸಿದ್ದಾರೆ. ವೀಕ್ಷಕರಾದ ಪಕ್ಷದ ಹಿರಿಯ ನಾಯಕ, ಮಹಾರಾಷ್ಟ್ರದ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿತೆಂದ್ರ ಸಿಂಗ್, ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಾಬ್ರಿಯಾ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಈ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬಹುದೆಂದು ನಿರೀಕ್ಷಿಸಲಾಗುತ್ತಿದೆ. ಆದರೆ ಪಕ್ಷದ ಉನ್ನತ ಮೂಲಗಳ ಪ್ರಕಾರ ಪಕ್ಷದ ವೀಕ್ಷಕರು ಎಲ್ಲ ಶಾಸಕರ ಅಭಿಪ್ರಾಯವನ್ನು ಪಡೆದು ಪಕ್ಷದ ಹೈಕಮಾಂಡ್ಗೆ ವರದಿ ನೀಡಲಿದ್ದಾರೆ. ಹೈಕಮಾಂಡ್ ಪಕ್ಷದ ಉನ್ನತ ನಾಯಕರೊಂದಿಗೆ ಚರ್ಚಿಸಿ ನೂತನ ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡಲಿದೆ.
ಈಗ ಆಯ್ಕೆಯಾಗಿರುವ 135 ಶಾಸಕರ ಪೈಕಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು 72 ಶಾಸಕರು ಒತ್ತಾಯಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಪರವಾಗಿ 48 ಮಂದಿ ನಿಂತಿದ್ದಾರೆ. ಇನ್ನು 15 ಶಾಸಕರು ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ ಎಂಬ ನಿಲುವು ಹೊಂದಿದ್ದಾರೆ. ಹೀಗಾಗಿ ಈಗ ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಕೆಲವರು ಸಭೆಯಲ್ಲಿ ವೋಟಿಂಗ್ ನಡೆಯಲಿ ಎಂದರೆ, ಇನ್ನು ಕೆಲವರು ವೋಟಿಂಗ್ ಬೇಡ ಎನ್ನುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರವಲ್ಲದೆ ಪಕ್ಷದ ನಾಯಕರಾದ ಡಾ. ಜಿ ಪರಮೇಶ್ವರ್, ಎಂ.ಬಿ. ಪಾಟೀಲ್ , ಶಾಮನೂರು ಶಿವಶಂಕರಪ್ಪ ಕೂಡ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಮಂಡಿಸಿದ್ದಾರೆ. ಈ ಬಾರಿ 37 ಮಂದಿ ಲಿಂಗಾಯಿತ ಶಾಸಕರು ಗೆದ್ದು ಬಂದಿದ್ದು, ಮುಖ್ಯಮಂತ್ರಿ ಹುದ್ದೆಗೆ ಅವರೂ ಲಾಬಿ ನಡೆಸುವ ನಾಯಕರಿಗೆ ಆನೆ ಬಲ ಬಂದಂತಾಗಿದೆ. ಹೀಗಾಗಿ ಮುಖ್ಯಮಂತ್ರಿ ಆಯ್ಕೆಯು ತೀವ್ರ ಕುತೂಹಲ ಮೂಡಿಸಿದೆ.
ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಲಿ!
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿ ಎಂದು ಒತ್ತಾಯಿಸಲು ರಾಜ್ಯ ಒಕ್ಕಲಿಗರ ಸಂಘ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಶ್ರೀ ಆದಿಚುಂಚನಗಿರಿ ಮಠದಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ʻʻ ಚುನಾವಣೆಯ ವೇಳೆಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದವರನ್ನೇ ಮುಖ್ಯಮಂತ್ರಿಯಾಗಿ ನೇಮಿಸುವ ಪರಿಪಾಠ ಕಾಂಗ್ರೆಸ್ನಲ್ಲಿದೆ ಹೀಗಾಗಿ ಈ ಬಾರಿ ಡಿ.ಕೆ. ಶಿವಕುಮಾರ್ ಅವರಿಗೇ ಮುಖ್ಯಮಂತ್ರಿ ಹುದ್ದೆ ನೀಡಬೇಕುʼʼ ಎಂದು ಒತ್ತಾಯಿಸಿದ್ದಾರೆ. ಡಿ ಕೆ ಶಿವಕುಮಾರ್ ಎಲ್ಲ ಸಮುದಾಯದವನ್ನು ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕ. ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಶ್ರಮ ಪಟ್ಟವರಿಗೆ ಫಲ ಸಿಗಲೇಬೇಕು. ಅವರು ಈ ಹುದ್ದೆಗೆ ಎಲ್ಲ ರೀತಿಯಲ್ಲಿಯೂ ಅರ್ಹರು ಎಂದು ಶ್ರೀಗಳು ಹೇಳಿದ್ದಾರೆ. ಈ ಸಭೆಯಲ್ಲಿ ಪಟ್ಟನಾಯಕನಹಳ್ಳಿಯ ಸ್ಫಟಿಕಪುರಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಉಪಸ್ಥಿತರಿದ್ದರು.
ದೆಹಲಿಯಲ್ಲಿ ಪ್ರಕಟ?
ವೀಕ್ಷಕರು ಇಂದೇ ಶಾಸಕರ ಅಭಿಪ್ರಾಯದ ಕುರಿತು ಹೈಕಮಾಂಡ್ಗೆ ವರದಿ ನೀಡಲಿದ್ದು, ದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ತಡ ರಾತ್ರಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.
ಸೋನಿಯಾಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಶೀಮ್ಲಾಕ್ಕೆ ತೆರೆಳಿದ್ದು, ಸಭೆಯ ನಡೆಸಲು ಸಾಧ್ಯವಾಗದೇ ಇದ್ದಲ್ಲಿ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ನಾಳೆ ಅಂತಿಮ ಹೆಸರನ್ನು ರಾಜ್ಯಕ್ಕೆ ರವಾನಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಆದರೆ ಪಕ್ಷದ ಉನ್ನತ ಮೂಲಗಳು ಭಾನುವಾರ ನಡೆಯುವ ಸಿಎಲ್ಪಿ ಸಭೆಯಲ್ಲಿಯೇ ನೂತನ ಮುಖ್ಯಮಂತ್ರಿಯನ್ನು ಆಯ್ಕೆಮಾಡಿ, ಘೋಷಿಸಲಾಗುತ್ತದೆ ಎಂದೂ ಹೇಳುತ್ತಿವೆ.
ಇದನ್ನೂ ಓದಿ: Karnataka Election 2023 : ಸಿಎಲ್ಪಿಗೆ ವೀಕ್ಷಕರಾಗಿ ಸುಶೀಲ್ ಕುಮಾರ್ ಶಿಂಧೆ, ಜಿತೆಂದ್ರ ಸಿಂಗ್, ದೀಪಕ್ ನೇಮಕ
ಕರ್ನಾಟಕ
Karnataka Cabinet Expansion: ಸರ್ಕಾರ ಟೇಕಾಫ್ ಆದ ಬೆನ್ನಲ್ಲೇ ಅಸಮಾಧಾನದ ಹೊಗೆ; ಖಾತೆ ಬದಲಿಸಿದ ಸಿದ್ದು
Karnataka Cabinet Expansion: ಸಿದ್ದರಾಮಯ್ಯ ಅವರು ಸಿಎಂ ಆಗಿ, ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಕಾಂಗ್ರೆಸ್ ಸರ್ಕಾರ ಟೇಕಾಫ್ ಆಯಿತು ಎನ್ನುವಷ್ಟರಲ್ಲಿಯೇ ಸಚಿವರಿಗೆ ನೀಡಲಾದ ಖಾತೆ ಬಗ್ಗೆ ಅಸಮಾಧಾನ ಶುರುವಾಗಿದೆ. ಹಾಗಾಗಿ, ಕೆಲ ಖಾತೆಗಳನ್ನು ಸಿದ್ದರಾಮಯ್ಯ ಅವರು ಬದಲಾಯಿಸಿದ್ದಾರೆ.
ಬೆಂಗಳೂರು: ‘ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ’ ಎಂಬ ಮಾತಿನಂತೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು, ಕಾಂಗ್ರೆಸ್ ಗೆಲುವು ಸಾಧಿಸಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಸಚಿವ ಸಂಪುಟ ಸಭೆ ವಿಸ್ತರಣೆಯಾದರೂ ಪಕ್ಷದಲ್ಲಿ ಆಂತರಿಕ ಗೊಂದಲ, ಅಸಮಾಧಾನ ಮಾತ್ರ ನಿಂತಿಲ್ಲ. ಖಾತೆ ಹಂಚಿಕೆ ಬಳಿಕವೂ ಸಚಿವರ ಮಧ್ಯೆಯೇ ಅಸಮಾಧಾನದ ಹೊಗೆ ಜಾಸ್ತಿಯಾದ ಕಾರಣ ರಾತ್ರೋರಾತ್ರಿ ಸಿದ್ದರಾಮಯ್ಯ ಅವರು ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.
ಹೌದು, ಎಂ.ಸಿ.ಸುಧಾಕರ್ ಅವರಿಗೆ ನೀಡಿದ್ದ ವೈದ್ಯಕೀಯ ಶಿಕ್ಷಣ ಶರಣ ಪ್ರಕಾಶ್ ಪಾಟೀಲ್ ಅವರಿಗೆ ನೀಡಲಾಗಿದೆ. ಇನ್ನು ಶರಣ ಪ್ರಕಾಶ್ ಪಾಟೀಲ್ ಅವರಿಗೆ ನೀಡಿದ್ದ ಉನ್ನತ ಶಿಕ್ಷಣ ಖಾತೆಯನ್ನು ಎಂ.ಸಿ.ಸುಧಾಕರ್ ಅವರಿಗೆ ನೀಡಿ ಸಮಾಧಾನ ಮಾಡಿದ್ದಾರೆ. ಹಾಗೆಯೇ, ಪ್ರಿಯಾಂಕ್ ಖರ್ಗೆ ಅವರಿಗೆ ಪಂಚಾಯತ್ ರಾಜ್ ಜತೆಗೆ ಐಟಿಬಿಟಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಕಾನೂನು ಸಂಸದೀಯ ಜತೆಗೆ ಪ್ರವಾಸೋದ್ಯಮ ಖಾತೆಯನ್ನು ಎಚ್.ಕೆ.ಪಾಟೀಲ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಬೋಸರಾಜು ಅವರಿಗೆ ಸಣ್ಣ ನೀರಾವರಿ ಖಾತೆ ಜತೆಗೆ ವೈಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಮತ್ತೊಂದೆಡೆ, ಡಾ.ಜಿ.ಪರಮೇಶ್ವರ್ ಅವರಿಗೆ ಗೃಹ ಖಾತೆಯನ್ನು ನಿರ್ವಹಣೆ ಮಾಡಲು ಇಷ್ಟವಿಲ್ಲ. ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆ ಸುತಾರಾಂ ಬೇಕಾಗಿಲ್ಲ. ಇವರಿಬ್ಬರು ಕೂಡ ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವುದು ಸಿದ್ದರಾಮಯ್ಯ ಅವರಿಗೆ ತಲೆನೋವು ತಂದಿದೆ. ಹಾಗಾಗಿಯೇ, ಸಚಿವರು ಹಾಗೂ ಅವರ ಖಾತೆ ಕುರಿತ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲು ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ಇಲ್ಲಿದೆ ಸಚಿವರು ಹಾಗೂ ಅವರ ಖಾತೆಗಳ ಅಂತಿಮ ಪಟ್ಟಿ
ಮೂಲ-ವಲಸಿಗ ಜಗಳ
ಸಚಿವ ಸಂಪುಟ ವಿಸ್ತರಣೆ ನಂತರ ಸಚಿವರಲ್ಲಿ ಅಸಮಾಧಾನದ ಜತೆಗೆ ಕಾಂಗ್ರೆಸ್ನಲ್ಲಿ ಮತ್ತೆ ಮೂಲ ಹಾಗೂ ವಲಸಿಗ ಜಗಳ ಆರಂಭವಾಗಿದೆ. ಅತ್ಯಂತ ಹಿರಿಯ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದರೂ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ಬಿ.ಕೆ. ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ʼಹೊರಗಿನಿಂದ ಬಂದʼ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ: Karnataka Cabinet expansion: ಸಂಪುಟದಲ್ಲಿನ್ನು ಸೀಟಿಲ್ಲ; ನಾಯಕರ, ಬೆಂಬಲಿಗರ ಆಕ್ರೋಶಕ್ಕೆ ಬೆಲೆ ಇಲ್ಲ
ಸಚಿವ ಸ್ಥಾನ ಮಿಸ್ ಆದ ಕುರಿತು ಮಾತನಾಡಿದ ಹರಿಪ್ರಸಾದ್, ಸಿಎಂ ಏನು ಬೇಕೋ ಹಾಗೆ ಮಾಡಿಕೊಂಡಿದ್ದಾರೆ. ಸಭಾ ನಾಯಕನಿಗೆ ಸಚಿವ ಸ್ಥಾನ ನೀಡುವ ಪದ್ಧತಿ, ಸಂಪ್ರದಾಯ ಇತ್ತು. ಸಿಎಂ ಅದನ್ನು ಈಗ ಬದಲಾಯಿಸಿದ್ದಾರೆ. ಅಷ್ಟಕ್ಕೂ ನನ್ನನ್ನು ಮಂತ್ರಿ ಮಾಡಿ ಎಂದು ಯಾರಲ್ಲೂ ಕೇಳಿಕೊಂಡಿರಲಿಲ್ಲ. ಎಲ್ಲಿಯವರೆಗೂ ಹೇಳುತ್ತಾರೋ ಅಲ್ಲಿಯವರೆಗೂ ನಾನು ಇರುತ್ತೇನೆ ಎಂದರು. ಮತ್ತೊಂದೆಡೆ, ಖಾತೆ ಸಿಗದ ಕಾರಣ ಟಿ.ಬಿ.ಜಯಚಂದ್ರ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ
New Parliament Building: ಸಂಸತ್ ಭವನ ಉದ್ಘಾಟನೆ ಬಹಿಷ್ಕಾರ ನಾಚಿಕೆಗೇಡಿನ ಸಂಗತಿ: ಎನ್. ರವಿಕುಮಾರ್
New Parliament Building: ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿರುವ ಮೂಲಕ ಕಾಂಗ್ರೆಸ್ ಸೇರಿ ಕೆಲ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.
ಬೆಂಗಳೂರು: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಮೇ 28ರಂದು ನವದೆಹಲಿಯಲ್ಲಿ ನೂತನ ಸಂಸತ್ ಭವನವನ್ನು ಕೇಂದ್ರ ಸರ್ಕಾರವು ಉದ್ಘಾಟನೆ (New Parliament Building) ಮಾಡುತ್ತಿದೆ. ಆದರೆ, ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲವೆಂದು ಆರೋಪ ಮಾಡುತ್ತಾ ಕಾಂಗ್ರೆಸ್ ಸೇರಿ ಕೆಲ ವಿರೋಧ ಪಕ್ಷಗಳು ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್ಸಿ ಎನ್.ರವಿಕುಮಾರ್ ತಿಳಿಸಿದ್ದಾರೆ.
ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ ಅವರ ಜನ್ಮದಿನದಂದು ನೂತನ ಸಂಸತ್ ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸ್ವಾತಂತ್ರ್ಯ ನಂತರ ಭಾರತದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಹಲವು ನಾಯಕರು ಸಂಸತ್ತಿನಲ್ಲಿ ಕುಳಿತು ದೇಶವನ್ನು ಮುನ್ನಡೆಸಬೇಕಿತ್ತು, ವಿಪರ್ಯಾಸವೆಂದರೆ ನೆಹರು ಕುಟುಂಬಸ್ಥರು ಇಡೀ ದೇಶವನ್ನೇ ತಮ್ಮ ಕುಟುಂಬದ ಸುಪರ್ದಿಗೆ ನೀಡುವ ಮೂಲಕ ಸಂಸತ್ತನ್ನು ತಮ್ಮ ಕುಟುಂಬಕ್ಕೆ ಸೀಮಿತ ಮಾಡಿಬಿಟ್ಟರು ಎಂದು ಕಿಡಿ ಕಾರಿದ್ದಾರೆ.
ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯ ಬಗ್ಗೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಕಾಂಗ್ರೆಸ್, ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುತ್ತಿದೆ. ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲವೆಂದು ಆರೋಪ ಮಾಡುತ್ತಾ ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ. ಈ ಹಿಂದೆ 1987ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂಸತ್ತಿನ ನೂತನ ಗ್ರಂಥಾಲಯ ಉದ್ಘಾಟನೆಯನ್ನು ಅವರೇ ಮಾಡಿದ್ದರು, ಅಂದಿನ ರಾಷ್ಟ್ರಪತಿಗಳಿಗೆ ಕೂಡ ಆಹ್ವಾನವಿರಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | New Parliament Building: ರಾಜಸ್ಥಾನದ ಶಿಲೆ, ಮಹಾರಾಷ್ಟ್ರದ ತೇಗದ ಮರ; ವೈವಿಧ್ಯತೆಯಲ್ಲಿ ಏಕತೆಯ ಸಂಕೇತ ಈ ಸಂಸತ್ ಭವನ
ಇನ್ನು 2010ರಲ್ಲಿ ಸೋನಿಯಾ ಗಾಂಧಿ ಅವರು ‘ಅಟಲ್ ಟನೆಲ್’ಗೆ ಭೂಮಿ ಪೂಜೆ ಮಾಡಿದ್ದರು. ಕೇಂದ್ರ ಸರ್ಕಾರದ ಯೋಜನೆಯೊಂದಕ್ಕೆ ಭೂಮಿ ಪೂಜೆ ಮಾಡಲು ಸೋನಿಯಾ ಗಾಂಧಿ ಯಾಕೆ ಬರಬೇಕಿತ್ತು? 2009ರಲ್ಲಿ ಮುಂಬೈ ನಗರದ ‘ಬಾಂದ್ರಾ ಮತ್ತು ವರ್ಲಿ’ ಸೀ ಲಿಂಕ್ ಉದ್ಘಾಟನೆಯನ್ನು ಸೋನಿಯಾ ಗಾಂಧಿ ಅವರು ಮಾಡಿದ್ದರು. ತನ್ನ ಅಧಿಕಾರಾವಧಿಯಲ್ಲಿ ಜಾರಿಗೆ ತಂದಿರುವ ಅಷ್ಟೂ ಯೋಜನೆಗಳಿಗೆ ತಮ್ಮ ಕುಟುಂಬ ಸದಸ್ಯರ ಹೆಸರನ್ನೇ ಬಳಸಿಕೊಂಡಿರುವ ನೆಹರು ಕುಟುಂಬದ ಕುಡಿಗಳು ಈಗ ಸೆಂಟ್ರಲ್ ವಿಸ್ಟಾ ಬಗ್ಗೆ ಈಗ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಅಲ್ಲದೇ ಪಕ್ಕದ ರಾಜ್ಯವಾದ ತೆಲಂಗಾಣದಲ್ಲಿ ಸಿಎಂ ಚಂದ್ರಶೇಖರ್ ರಾವ್ ಅವರು ಹೈದರಾಬಾದ್ನಲ್ಲಿ ನೂತನ ಸಚಿವಾಲಯ ಉದ್ಘಾಟನೆಗೆ ತೆಲಂಗಾಣದ ‘ರಾಜ್ಯಪಾಲ’ರನ್ನೂ ಆಹ್ವಾನಿಸಿರಲಿಲ್ಲ, ಆದರೆ ಈಗ ಸೆಂಟ್ರಲ್ ವಿಸ್ಟಾ ಉದ್ಘಾಟನೆಗೆ ರಾಷ್ಟ್ರಪತಿಗಳು ಬರದಿರುವುದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
1947 ರಲ್ಲಿ ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸಿದ ಸಂದರ್ಭದಲ್ಲಿ ಮೊದಲ ಪ್ರಧಾನಮಂತ್ರಿಯಾಗಿದ್ದ ನೆಹರು ಅವರಿಗೆ ನೀಡಿದ್ದ ತಮಿಳುನಾಡಿನ ‘ಸೆಂಗೋಲ್’ ಅನ್ನು ನೂತನ ಸಂಸತ್ತಿನಲ್ಲಿ ಸ್ಪೀಕರ್ ಕುರ್ಚಿ ಬಳಿ ಇಡುತ್ತಿರುವುದು ಮತ್ತೊಂದು ವಿಶೇಷ. ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾಗಿದ್ದರೂ ಅವರು ಕಟ್ಟಿಸಿದ್ದ ಸಂಸತ್ತಿನಿಂದ ನಾವು ಹೊರಬಂದಿರಲಿಲ್ಲ. ಬ್ರಿಟಿಷರ ಮನಸ್ಥಿತಿಯನ್ನೇ ತೋರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಭಾರತೀಯರೇ ನಿರ್ಮಾಣ ಮಾಡಿರುವ ನೂತನ ಸಂಸತ್ ಕಟ್ಟಡ ಇಷ್ಟವಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ | New Parliament Building: ಸೆಂಗೋಲ್ ಎಂಬ ರಾಜದಂಡ ಸ್ವಾತಂತ್ರ್ಯದ ಸಂಕೇತ; ಪ್ರತಿಷ್ಠಾಪನೆಗೆ ಕಾರಣ ತಿಳಿಸಿದ ಮೋದಿ
ನೂತನ ಸಂಸತ್ ಭವನದ ಉದ್ಘಟನಾ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಭಾಗವಹಿಸುತ್ತಿರುವುದು ಸಂತೋಷದ ಸಂಗತಿ. ಆದರೆ ಇಲ್ಲಸಲ್ಲದ ನೆಪವೊಡ್ಡಿ ಸೆಂಟ್ರಲ್ ವಿಸ್ಟಾ ಉದ್ಘಾಟನೆಯ ಕಾರ್ಯಕ್ರಮವನ್ನು ಕೆಲ ವಿರೋಧ ಪಕ್ಷಗಳು ಬಹಿಷ್ಕರಿಸುವುದಾಗಿ ಹೇಳಿರುವುದು ಸರಿಯಲ್ಲ. ಸಂಸತ್ ಭವನ ಕೇವಲ ಕಟ್ಟಡವಲ್ಲಿ ಅದು ದೇಶದ ಪ್ರಜಾಪ್ರಭುತ್ವ ಎಂಬುದನ್ನು ವಿರೋಧಪಕ್ಷಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕರ್ನಾಟಕ
Praveen Nettaru: ಆಕ್ರೋಶದ ಬೆನ್ನಲ್ಲೇ ಔದಾರ್ಯ ಮೆರೆದ ಸಿದ್ದರಾಮಯ್ಯ; ನೆಟ್ಟಾರು ಪತ್ನಿ ಮರುನೇಮಕಕ್ಕೆ ನಿರ್ಧಾರ
Praveen Nettaru: ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಯನ್ನು ಗ್ರೂಪ್ ಸಿ ಹುದ್ದೆಗೆ ರಾಜ್ಯ ಸರ್ಕಾರ ಮರು ನೇಮಕ ಮಾಡಿದೆ.
ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯನ್ನು (Praveen Nettaru) ಗ್ರೂಪ್ ಸಿ ಹುದ್ದೆಗೆ ಮರುನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಬೊಮ್ಮಾಯಿ ಸರ್ಕಾರದಲ್ಲಿ ನೇಮಕ ಮಾಡಿದ್ದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದಕ್ಕೆ ಬಿಜೆಪಿ ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ರಾಜ್ಯ ಸರ್ಕಾರ ಮರು ನೇಮಕ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಆದರೂ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ.
— Siddaramaiah (@siddaramaiah) May 27, 2023
ಇದನ್ನು… pic.twitter.com/Y3hz7EVTVi
ಇದನ್ನೂ ಓದಿ | Karnataka Cabinet: ಕಾಂಗ್ರೆಸ್ನಲ್ಲಿ ಮತ್ತೆ ಶುರುವಾಯಿತು ಮೂಲ-ವಲಸಿಗ ಜಗಳ: ಸಿಎಂ ವಿರುದ್ಧ ಹರಿಪ್ರಸಾದ್ ಪ್ರಹಾರ
ಬೊಮ್ಮಾಯಿ ಸರ್ಕಾರದಲ್ಲಿ ಗ್ರೂಪ್ ಸಿ ಹುದ್ದೆ
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಮಾನವೀಯ ದೃಷ್ಟಿಯಿಂದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಗೆ ಬೊಮ್ಮಾಯಿ ಸರ್ಕಾರವು ತಾತ್ಕಾಲಿಕ ನೆಲೆಯ ನೇಮಕಾತಿ ಮಾಡಿತ್ತು. ಮೊದಲಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಉದ್ಯೋಗ ನೀಡಲಾಗಿತ್ತು. ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ, 30,350 ರೂ. ವೇತನ ನಿಗದಿಪಡಿಸಲಾಗಿತ್ತು. ನಂತರ ನೂತನ ಕುಮಾರಿ ಅಪೇಕ್ಷೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ಕೆಲಸ ಮಾಡಲು ಅನುಮತಿ ನೀಡಲಾಗಿತ್ತು.
ಈ ಹುದ್ದೆಯ ಅವಧಿಯು ಈ ಹಿಂದಿನ ಮುಖ್ಯಮಂತ್ರಿಗಳ ಪದಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿತ್ತು. ಈಗ ಹೊಸ ಸರ್ಕಾರ ರಚನೆಯಾಗಿರುವುದರಿಂದ ಕೆಲಸದ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಪ್ರವೀಣ್ ನೆಟ್ಟಾರು (Praveen Nettaru) ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು.
2022ರ ಸೆ. 22ರಂದು ಗುತ್ತಿಗೆ ಆಧಾರದಲ್ಲಿ ಗ್ರೂಪ್ ಸಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಹೊಸ ಸರ್ಕಾರ ಬಂದ ಕೂಡಲೇ ನೆಟ್ಟಾರ್ ಪತ್ನಿಯನ್ನು ಕೆಲಸದಿಂದ ವಜಾ ಮಾಡಿದ್ದರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಈಗ, ನೂತನ ಕುಮಾರಿ ಮರು ನೇಮಕಕ್ಕೆ ನಿರ್ಧರಿಸಿದೆ.
ಕರ್ನಾಟಕ
ವಿಸ್ತಾರ TOP 10 NEWS: ಸಿದ್ದರಾಮಯ್ಯ ಸಂಪುಟ ಭರ್ತಿಯಿಂದ, ಉದ್ಘಾಟನೆಗೆ ಸಜ್ಜಾದ ಸಂಸತ್ ಭವನದವರೆಗಿನ ಪ್ರಮುಖ ಸುದ್ದಿಗಳಿವು
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
1. Karnataka Cabinet expansion : 24 ನೂತನ ಸಚಿವರ ಸೇರ್ಪಡೆ: ಭರ್ತಿ ಸಂಪುಟದೊಂದಿಗೆ ಅಗ್ನಿ ಪರೀಕ್ಷೆಗಿಳಿದ ಸಿದ್ದರಾಮಯ್ಯ!
ಸರಳ ಬಹುಮತದೊಂದಿಗೆ ಗದ್ದುಗೆ ಏರಿರುವ, ಕಾಂಗ್ರೆಸ್ ಸರ್ಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ, ಪೂರ್ಣ ಸಂಪುಟವನ್ನು ಭರ್ತಿ ಮಾಡುವ ಮೂಲಕ ಹೊಸ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ಇದೀಗ 24 ಸಚಿವರ ಪ್ರಮಾಣದೊಂದಿಗೆ 34 ಸ್ಥಾನ ಭರ್ತಿಯಾಗಿದೆ. 2003ರಲ್ಲಿ ನಡೆದ ಸಂವಿಧಾನ ತಿದ್ದುಪಡಿ ನಂತರದಲ್ಲಿ ಕರ್ನಾಟಕಕ್ಕೆ 34 ಸಚಿವರನ್ನಷ್ಟೆ ನೇಮಿಸುವ ಅಧಿಕಾರವಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜತೆಗೆ 8 ಸಚಿವರು ಈ ಮೊದಲು ಪ್ರಮಾಣವಚನ ಸ್ವೀಕರಿಸಿದ್ದರು. ಹೊಸ ಸಚಿವರ ಸೇರ್ಪಡೆ ಬೆನ್ನಲ್ಲೇ, ಸ್ಥಾನ ಸಿಗದವರ ಅಸಮಾಧಾನ ಹೊಗೆಯಾಡಲು ಆರಂಭಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Karnataka Cabinet: ಕಾಂಗ್ರೆಸ್ನಲ್ಲಿ ಮತ್ತೆ ಶುರುವಾಯಿತು ಮೂಲ-ವಲಸಿಗ ಜಗಳ: ಸಿಎಂ ವಿರುದ್ಧ ಹರಿಪ್ರಸಾದ್ ಪ್ರಹಾರ
2. Karnataka Cabinet: ಸಂಪುಟದಲ್ಲಿ ಸೋತರೂ ಖಾತೆಯಲ್ಲಿ ಗೆದ್ದ ಡಿ.ಕೆ. ಶಿವಕುಮಾರ್: ಇಲ್ಲಿದೆ ಎಲ್ಲ ಸಚಿವರ ಖಾತೆಗಳ ಪಟ್ಟಿ
ಸಂಪುಟ ರಚನೆ ವೇಳೆಯಲ್ಲಿ ತಮ್ಮ ಆಪ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳುವಲ್ಲಿ ಹಾಗೂ ಸ್ವತಃ ಸಿಎಂ ಸ್ಥಾನ ಪಡೆಯುವಲ್ಲಿ ಹಿನ್ನಡೆ ಅನುಭವಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಇದೀಗ ಖಾತೆ ಹಂಚಿಕೆ ವೇಳೆಗೆ ತಮ್ಮ ಕೈ ಮೇಲಾಗಿಸಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Karnataka Cabinet expansion: ಮೊದಲ, 2ನೇ ಬಾರಿಗೇ ಸಚಿವಗಿರಿ ಪಡೆದ ಬೆಳಗಾವಿ ಶಾಸಕಿಯರಿವರು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬೆಳಗಾವಿಯಿಂದ ಮಹಿಳಾ ಕೋಟಾದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಚಿವರಾಗಿದ್ದಾರೆ. ಇವರು ಎರಡನೇ ಬಾರಿಗೆ ಆಯ್ಕೆಯಾದರೂ ಮಂತ್ರಿಗಿರಿಯ ಅದೃಷ್ಟ ಒಲಿದಿದೆ. ಇದೇ ರೀತಿ ಈ ಹಿಂದೆ ಇನ್ನೂ ಇಬ್ಬರು ಶಾಸಕಿಯರಿಗೆ ಮೊದಲ ಇಲ್ಲವೇ ಎರಡನೇ ಬಾರಿಗೆ ಮಂತ್ರಿ ಪಟ್ಟ ಸಿಕ್ಕಿದೆ. ಅವರ ಬಗ್ಗೆ ವಿವರವನ್ನು ನೋಡೋಣ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Karnataka Cabinet expansion: ಸಂಪುಟದಲ್ಲಿನ್ನು ಸೀಟಿಲ್ಲ; ನಾಯಕರ, ಬೆಂಬಲಿಗರ ಆಕ್ರೋಶಕ್ಕೆ ಬೆಲೆ ಇಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆ (Karnataka Cabinet expansion) ಆಗಿದ್ದು, ಶನಿವಾರ (ಮೇ 27) 24 ಮಂದಿ ಸೇರ್ಪಡೆಯಾಗುವ ಮೂಲಕ ಎಲ್ಲ 34 ಸ್ಥಾನಗಳೂ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದ ಹಿರಿಯ ನಾಯಕರು ಸೇರಿದಂತೆ ಹಲವು ಕಾರಣಗಳಿಂದ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜಭವನದ ಮುಂದೆ ಹಲವು ರಾಜಕೀಯ ನಾಯಕರ ಬೆಂಬಲಿಗರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಎಂ ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಸದ್ಯಕ್ಕಂತೂ ಯಾರಿಗೂ ಸ್ಥಾನ ಸಿಗುವುದಿಲ್ಲ ಎಂಬುದು ಪಕ್ಕಾ ಆಗಿದ್ದು, ಇವರನ್ನು ಸಮಾಧಾನ ಪಡಿಸುವ ಪ್ರಯತ್ನಗಳೂ ಕಾಣುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಹಳೇ ಬೇರು, ಹೊಸ ಚಿಗುರು: ಮೊದಲಿನ ಸಂಸತ್, ನೂತನ ಸಂಸತ್ ಭವನದ ನಡುವಿನ ವ್ಯತ್ಯಾಸ ಹೀಗಿದೆ ನೋಡಿ
ನೂತನ ಹಾಗೂ ಭವ್ಯ ಸಂಸತ್ ಭವನದ ಉದ್ಘಾಟನೆಗೆ ಕ್ಷಣಗಣನೆ (May 28) ಆರಂಭವಾಗಿದೆ. ಪ್ರತಿಪಕ್ಷಗಳ ಬಹಿಷ್ಕಾರದ ಮಧ್ಯೆಯೂ ಅದ್ಧೂರಿಯಾಗಿ ನೂತನ ಸಂಸತ್ ಭವನದ ಉದ್ಘಾಟನೆಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇದರ ಮಧ್ಯೆಯೇ, ಹಳೆಯ ಹಾಗೂ ನೂತನ ಸಂಸತ್ ಭವನದ ನಡುವಿನ ವ್ಯತ್ಯಾಸ, ತಂತ್ರಜ್ಞಾನದ ಅಳವಡಿಕೆ, ವಿನ್ಯಾಸ ಸೇರಿ ಹಲವು ದಿಸೆಯಲ್ಲಿ ಹೋಲಿಕೆ ಮಾಡಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಮೊದಲಿನ ಹಾಗೂ ನೂತನ ಸಂಸತ್ ಭವನಗಳ ನಡುವಿನ ವ್ಯತ್ಯಾಸವನ್ನು ಚಿತ್ರಗಳಲ್ಲಿ ನೋಡಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Praveen Nettaru: ಹೊಸ ಸರ್ಕಾರ ಅಸ್ತಿತ್ವದ ಬೆನ್ನಲ್ಲೇ ಪ್ರವೀಣ್ ನೆಟ್ಟಾರ್ ಪತ್ನಿ ಕೆಲಸಕ್ಕೆ ಕೊಕ್
ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಪ್ರವೀಣ್ ನೆಟ್ಟಾರ್ (Praveen Nettaru) ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಯುವ ಮೋರ್ಚಾ (BJP Yuva Morcha) ಪದಾಧಿಕಾರಿ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಬಿಜೆಪಿ ಸರ್ಕಾರವು ಮಾನವೀಯತೆ ಆಧಾರದ ಮೇಲೆ ಉದ್ಯೋಗ ನೀಡಿ ಆದೇಶ ಹೊರಡಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. NITI Aayog Meeting: ನೀತಿ ಆಯೋಗದ ಸಭೆಗೆ ಸಿದ್ದು ಸೇರಿ 10 ಸಿಎಂಗಳು ಗೈರು; ರಾಜ್ಯಗಳಿಗೆ ನಷ್ಟವೇನು?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಎಂಟನೇ ಗವರ್ನಿಂಗ್ ಸಮಿತಿ ಸಭೆ (Governing Council Meeting) ನಡೆದಿದ್ದು, ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ವಿರುದ್ಧದ ಆಕ್ರೋಶ, ಮುನಿಸಿನಿಂದಾಗಿ 10 ರಾಜ್ಯಗಳ ಮುಖ್ಯಮಂತ್ರಿಗಳು ಸಭೆಗೆ ಗೈರಾಗಿದ್ದಾರೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಮಹತ್ವ ಪಡೆದಿರುವ ಸಭೆಗೆ ಸಿಎಂಗಳು ಗೈರಾಗಿರುವುದು ಆಯಾ ರಾಜ್ಯಗಳಿಗೇ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. IPL 2023 : ಫೈನಲ್ ಪಂದ್ಯದಲ್ಲಿ ಸೃಷ್ಟಿಯಾಗಲಿರುವ ಕೆಲವು ದಾಖಲೆಗಳ ವಿವರ ಹೀಗಿದೆ ನೋಡಿ
70 ಲೀಗ್ ಪಂದ್ಯಗಳು ಮತ್ತು ಮೂರು ಪ್ಲೇಆಫ್ ಮುಖಾಮುಖಿಗಳ ನಂತರ ಎಲ್ಲರ ಗಮನ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2023) ಮೆಗಾ ಫೈನಲ್ ಕಡೆಗೆ ನೆಟ್ಟಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾನುವಾರ (ಮೇ 28ರಂದು) ಫೈನಲ್ ಹಣಾಹಣಿ ನಡೆಯಲಿದೆ. ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಪಂದ್ಯದ ವೇಳೆ ಕೆಲವು ಆಟಗಾರರ ವೈಯಕ್ತಿಕ ದಾಖಲೆಗಳನ್ನು ಹಾಗೂ ಮೈಲುಗಲ್ಲುಗಳನ್ನು ಸೃಷ್ಟಿಸಲಿದ್ದಾರೆ. ಅವುಗಳು ಇಂತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Weather Report: ಈ ವಾರ ಕರಾವಳಿಯಲ್ಲಿ ಮಳೆ ಅಬ್ಬರ; ಉಳಿದೆಡೆ ಬಿಸಿಲಿಗೆ ಜನ ತತ್ತರ
ರಾಜ್ಯಾದ್ಯಂತ ಮಳೆ ತೀವ್ರತೆ ಕಡಿಮೆ ಆಗಿದ್ದು, ಇನ್ನೊಂದು ವಾರ ತಾಪಮಾನದಲ್ಲಿ (Heat wave) ಏರಿಳಿತ ಆಗಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆಯಾದರೂ ಹಲವು ಕಡೆ ಬಿಸಿಲು ಝಳಪಿಸಲಿದ್ದು, ನಾಗರಿಕರು ಮತ್ತಷ್ಟು ಹೈರಾಣಾಗಬಹುದು ಎಂದು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. 96 ಸಾವಿರ ರೂ.ಮೌಲ್ಯದ ಮೊಬೈಲ್ಗಾಗಿ 21 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿದ ಸರ್ಕಾರಿ ಅಧಿಕಾರಿ
ಈಗಿನ ಕಾಲದಲ್ಲಿ ಮನುಷ್ಯನಿಗೆ ಮೊಬೈಲ್ನಷ್ಟು ‘ಅಮೂಲ್ಯ’ ವಸ್ತು ಇನ್ನೊಂದು ಇರಲಿಕ್ಕೆ ಇಲ್ಲ ಬಿಡಿ !. ಏನಿರತ್ತದೆಯೋ ಬಿಡುತ್ತದೆಯೋ ಕೈಯಲ್ಲಿ ಮೊಬೈಲ್ ಅಂತೂ ಇರಲೇಬೇಕು. ಅದು ಕಳೆದು ಹೋದರೆ, ಕೆಟ್ಟು ಹೋದರೆ ಆಗುವ ಚಡಪಡಿಕೆ ಅಷ್ಟಿಷ್ಟಲ್ಲ. ಒಟ್ನಲ್ಲಿ ಮೊಬೈಲ್ ಅನ್ನೋದು ಜೀವನದ ಬೇಸಿಕ್ ಅವಶ್ಯಕತೆ ಎಂಬಂತಾಗಿದೆ. ಅಂಥ ಅಮೂಲ್ಯವಾದ ಮೊಬೈಲ್ನ್ನು ಕಳೆದುಕೊಂಡ ಛತ್ತೀಸ್ಗಢ ಸರ್ಕಾರಿ ಆಸ್ಪತ್ರೆ ಅಧಿಕಾರಿಯೊಬ್ಬ, ಜಲಾಶಯದಲ್ಲಿದ್ದ 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿ (Drains 21 Lakh Litres Water), ಈಗ ಅಮಾನತುಗೊಂಡಿದ್ದಾರೆ ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
-
ಕರ್ನಾಟಕ22 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ22 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ20 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ16 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್12 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ4 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ12 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
EXPLAINER3 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?