ಕರ್ನಾಟಕ ಎಲೆಕ್ಷನ್
Karnataka Election 2023 : ರಾಜಕೀಯಕ್ಕೆ ಕುಮಾರಸ್ವಾಮಿ ಗುಡ್ಬೈ? ಏನಾಗುತ್ತಿದೆ ಜೆಡಿಎಸ್ನಲ್ಲಿ?
ಈ ಬಾರಿಯ ಚುನಾವಣಾ ( Karnataka Election 2023) ಫಲಿತಾಂಶ ಜೆಡಿಎಸ್ಗೆ ಅಘಾತವನ್ನುಂಟುಮಾಡಿದ್ದು, ಪಕ್ಷದ ನಾಯಕತ್ವದಲ್ಲಿ ಭಾರಿ ಬದಲಾವಣೆಗಳಾಗುವ ಸೂಚನೆಗಳು ಕಂಡು ಬಂದಿವೆ.
ವಿಸ್ತಾರ ನ್ಯೂಸ್, ಬೆಂಗಳೂರು
ಬೆಂಗಳೂರು: ಈ ಬಾರಿಯ ಚುನಾವಣಾ ಫಲಿತಾಂಶ (Karnataka Election 2023) ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ದೊಡ್ಡ ಅಘಾತ ನೀಡಿದ್ದು, ಪಕ್ಷದ ಮುಂದಿನ ಭವಿಷ್ಯದ ಕುರಿತು ಚಿಂತೆ ಶುರುವಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯದಿಂದಲೇ ನಿವೃತ್ತಿ ಹೊಂದುವ ಮಾತುಗಳನ್ನಾಡುತ್ತಿರುವುದು ಪಕ್ಷದ ನಾಯಕರಲ್ಲಿ ಆತಂಕ ಮೂಡಿಸಿದೆ.
ಪಕ್ಷದ ಕಳಪೆ ಸಾಧನೆಯಿಂದ ಹಾಗೂ ಕುಮಾರಸ್ವಾಮಿಯವರ ಮಾತುಗಳಿಂದ ಚಿಂತೆಗೀಡಾಗಿರುವ ಪಕ್ಷದ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಲು ಮಾಜಿ ಪ್ರಧಾನಿನ ದೇವೇಗೌಡರೇ ಈಗ ಫೀಲ್ಡಿಗಿಳಿದಿದ್ದು, ʻʻಈ ಸೋಲಿನಿಂದ ಎದೆಗುಂದದೆ ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷವನ್ನು ಸಂಘಟಿಸಿ, ವೃದ್ಧಿಸಿ, ಮುನ್ನಡೆಸೋಣʼʼ ಎಂದು ಜಾಹೀರಾತು ಮೂಲಕ ಕರೆ ನೀಡಿದ್ದಾರೆ.
ʻʻಈ ಬಾರಿ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ, ಅಧಿಕಾರ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ನಾನು ಮತ ಕೇಳಲು ಬರುವುದಿಲ್ಲ. ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆʼʼ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಚಾರದ ಸಂದರ್ಭದಲ್ಲಿ ಮತ್ತು ʻಪಂಚರತ್ನʼ ಯಾತ್ರೆಯ ಸಂದರ್ಭದಲ್ಲಿ ಹೇಳಿಕೋಂಡೇ ಬಂದಿದ್ದರು. ಪಕ್ಷ ಈ ಬಾರಿ ಅತ್ಯಂತ ಕಳಪೆ ಸಾಧನೆ ಮಾಡಿದೆ. ಕೇವಲ 19 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಮತ ಗಳಿಕೆಯ ಪ್ರಮಾಣ ಕೂಡ ಶೇ. 13.3ಕ್ಕೆ ಕುಸಿದಿದೆ.
ಬಹಳ ಮುಖ್ಯವಾಗಿ, ಕುಮಾರಸ್ವಾಮಿ ಮತ್ತು ಎಚ್. ಡಿ. ರೇವಣ್ಣ ಅವರ ಗೆಲುವಿನ ಅಂತರದಲ್ಲಿಯೂ ಭಾರಿ ಕುಸಿತವಾಗಿದೆ. ಅಲ್ಲದೆ ಪಕ್ಷದ ಭದ್ರಕೋಟೆಯಾಗಿದ್ದ ರಾಮನಗರದಲ್ಲಿಯೇ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಇದು ಎಚ್.ಡಿ. ಕುಮಾರಸ್ವಾಮಿಗೆ ಹೆಚ್ಚು ನೋವು ನೀಡಿದ್ದು, ʻಇನ್ನು ಈ ರಾಜಕೀಯ ಸಾಕುʼʼ ಎಂದು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ. ಅವರ ಅನಾರೋಗ್ಯ ಕೂಡ ಅವರ ಈ ತೀರ್ಮಾನಕ್ಕೆ ಮತ್ತೊಂದು ಬಲವಾದ ಕಾರಣವಾಗಿದೆ. ಹೀಗಾಗಿ ಮುಂದೇನು ಎಂಬ ಚಿಂತೆ ಪಕ್ಷದ ನಾಯಕರನ್ನು ಕಾಡುತ್ತಿದೆ.
ಇದನ್ನೂ ಓದಿ: Karnataka Election Results 2023 : ನಿಖಿಲ್ ಕುಮಾರಸ್ವಾಮಿಗೆ ಸೋಲು; ನಾಯಕರ ಗೆಲುವಿನ ಅಂತರದಲ್ಲೂ ಭಾರಿ ಕುಸಿತ
ಸೋಲಿನ ಬೇಸರದಿಂದ ಹೊರಬಂದ ನಂತರ ಮತ್ತೆ ಕುಮಾರಸ್ವಾಮಿ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಕಾರ್ಯಕರ್ತರು ಚರ್ಚಿಸುತ್ತಿದ್ದಾರೆ. ಆದರೆ ಪಕ್ಷದ ಉನ್ನತ ಮೂಲಗಳು ಮಾತ್ರ ಕುಮಾರಸ್ವಾಮಿಯವರು ಮರಳಿ ಈ ಹಿಂದಿನಂತೆಯೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದು ಕಷ್ಟ ಎನ್ನುತ್ತಿವೆ. ಕುಮಾರಸ್ವಾಮಿಯವರ ಈ ನಿರ್ಧಾರವನ್ನು ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಮಗ ನಿಖಿಲ್ ಕುಮಾರಸ್ವಾಮಿ ಕೂಡ ಬೆಂಬಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ನಾಯಕತ್ವದ ಕುರಿತು ಚರ್ಚೆ ಶುರು
ಇತ್ತ ಕುಮಾರಸ್ವಾಮಿ ಸಕ್ರೀಯ ರಾಜಕಾರಣದ ಬಗ್ಗೆ ನಿರಾಸಕ್ತಿ ತೋರುತ್ತಿದ್ದಂತೆಯೇ ಪಕ್ಷದ ನೇತೃತ್ವವನ್ನು ಯಾರು ವಹಿಸಬೇಕೆಂಬ ಕುರಿತು ಪಕ್ಷದಲ್ಲಿ ಚರ್ಚೆ ಶುರುವಾಗಿದೆ. ಕುಮಾರಸ್ವಾಮಿ ಕುಟುಂಬದಲ್ಲಿ ಈಗ ಅವರೊಬ್ಬರೇ ಶಾಸಕರು. ಇತ್ತ ರೇವಣ್ಣ ಕುಟುಂಬದಲ್ಲಿ ರೇವಣ್ಣ ಶಾಸಕರಾಗಿದ್ದಾರೆ. ಒಬ್ಬ ಪುತ್ರ ಸಂಸದ ಮತ್ತೊಬ್ಬರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಹೀಗಾಗಿ ರೇವಣ್ಣ ಕುಟುಂಬದ ಯಾರಾದರೂ ನೇತೃತ್ವ ವಹಿಸಲಿ ಎಂಬ ವಾದಗಳೂ ಕೇಳಿ ಬರುತ್ತಿವೆ. ಹಾಸನದ ಪಕ್ಷದ ಕೆಲ ನಾಯಕರು ಭವಾನಿ ರೇವಣ್ಣ ಅವರು ಪಕ್ಷದ ಅಧ್ಯಕ್ಷರಾಗಲಿ ಎಂದು ಹೇಳಿಕೆ ನೀಡಲಾರಂಭಿಸಿದ್ದಾರೆ.
ಪಕ್ಷದ ಮುಂದಿರುವ 5 ಸವಾಲೇನು?
1. ಪಕ್ಷದ ಭದ್ರಕೋಟೆ ಎನಿಸಿದ ಜಿಲ್ಲೆ, ಕ್ಷೇತ್ರಗಳಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಪಕ್ಷದ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿಯತ್ತ ಹಂಚಿ ಹೋಗಿವೆ. ಈ ಜಿಲ್ಲೆಗಳಲ್ಲಿ ಪಕ್ಷವನ್ನು ಮತ್ತೆ ಬಲಪಡಿಸಬೇಕಾಗಿದೆ.
2. ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷಕ್ಕೆ ಬರುವ ನಾಯಕರಿಂದ ಲಾಭವಾಗುವುದಿಲ್ಲ ಎಂಬುದನ್ನು ಈ ಚುನಾವಣೆ ತೋರಿಸಿದೆ. ಹೀಗಾಗಿ ಪಕ್ಷಕ್ಕಾಗಿ ದುಡಿದವರನ್ನು ಗೌರವಿಸುವ ಮತ್ತು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಾಗಿದೆ.
3. ಬೇರೆ ಬೇರೆ ಜಾತಿ ಮತ್ತು ಸಮುದಾಯಗಳ ನಾಯಕರನ್ನು ಆಕರ್ಷಿಸಿ, ಪಕ್ಷಕ್ಕೆ ಸೇರಿಸಿಕೊಂಡು ಪಕ್ಷದ ನೆಲೆಗಟ್ಟನ್ನು ವಿಸ್ತರಿಸಬೇಕಾಗಿದೆ. ಈ ಬಾರಿ ಉತ್ತರ ಕರ್ನಾಟಕದಲ್ಲಿ ಪಕ್ಷದಿಂದ ಗೆದ್ದವರು ಕೇವಲ ನಾಲ್ಕುಮಂದಿ (ದೇವರ ಹಿಪ್ಪರಗಿ, ಗುರುಮಠಕಲ್, ದೇವದುರ್ಗ, ಹಗರಿಬೊಮ್ಮನಹಳ್ಳಿ) ಮಾತ್ರ. ಈ ಭಾಗದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕಾಗಿದೆ.
4. ಒಂದು ಕಟುಂಬದ ರಾಜಕೀಯ ಪಕ್ಷ ಎಂಬ ಆರೋಪದಿಂದ ಮುಕ್ತವಾಗಲು ಅಧಿಕಾರವನ್ನು ಹಂಚುವ ಕೆಲಸ ಮೊದಲು ಮಾಡಬೇಕಾಗಿದೆ.
5. ಎಲ್ಲದಕ್ಕಿಂತ ಮುಖ್ಯವಾಗಿ ಪಕ್ಷಕ್ಕೆ ಸೈದ್ಧಾಂತಿಕ ಸ್ಪಷ್ಟತೆ ಅಗತ್ಯವಾಗಿದ್ದು, ಈ ಬಗ್ಗೆ ಚರ್ಚಿಸಿ, ಇದರ ತಳಹದಿಯಲ್ಲಿಯೇ ಪಕ್ಷವನ್ನು ಸಂಘಟಿಸಬೇಕಾಗಿದೆ.
ಕಡೂರಿನ ಯಗಟಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ʻʻಭವಾನಿ ರೇವಣ್ಣ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತು ಪಕ್ಷದಲ್ಲಿ ಚರ್ಚೆ ಆಗಿಲ್ಲ. ನಾವು ಕುಟುಂಬದ, ಪಕ್ಷದ ನಿರ್ಣಯಕ್ಕೆ ಬದ್ಧವಾಗಿರುತ್ತೇವೆ. ಹಾಸನದಲ್ಲಿ ಪಕ್ಷ ಸೂಚಿಸಿದ ಅಭ್ಯರ್ಥಿಯನ್ನ ಗೆಲ್ಲಿಸಿದ್ದೇವೆ. ನನ್ನ ತಾಯಿ ಭವಾನಿ ಅವರಿಗೆ ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇವೆʼʼ ಎಂದು ಹೇಳಿದ್ದಾರೆ.
ಇತ್ತ ರೇವಣ್ಣ ಕೂಡ ಆ್ಯಕ್ಟೀವ್ ಆಗಿದ್ದಾರೆ. ಹಾಸನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಹಾಸನವನ್ನು ರಾಜ್ಯದಲ್ಲಿಯೇ ನಂ.1 ಜಿಲ್ಲೆಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ. ಮತ್ತೆ ಮಾಜಿ ಪ್ರಧಾನಿ ದೇವೇಗೌಡರನ್ನು ಚುನಾವಣೆಯಲ್ಲಿ ನಿಲ್ಲಿಸಿ, ಸಂಸತ್ತಿಗೆ ಕಳುಹಿಸಿಕೊಡುವುದಾಗಿ ಘೋಷಿಸಿದ್ದಾರೆ. ಹೀಗೆ ರೇವಣ್ಣ ಮಾತನಾಡಲು ಕೂಡ, ಕುಟುಂಬದಲ್ಲಿ ಅಧಿಕಾರ ಹಸ್ತಾಂತರದ ಕುರಿತು ಚರ್ಚೆ ನಡೆಯುತ್ತಿರುವುದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Karnataka Election Results: ಕಾಂಗ್ರೆಸ್ ಬೆನ್ನಿಗೆ ನಿಂತು, ಜೆಡಿಎಸ್ಗೆ ಕೈಕೊಟ್ಟ ಮುಸ್ಲಿಂ ಮತದಾರರು!
ಆರೋಗ್ಯ
Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್, ಡಯಾಲಿಸಿಸ್ ಟೆಂಡರ್ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್ ಸರ್ಜರಿ
Karnataka Health Department: ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಅನೇಕ ಟೆಂಡರ್ಗಳನ್ನು ರದ್ದು ಮಾಡುವ ನಿರ್ಧಾರಕ್ಕೆ ಕಾಂಗ್ರೆಸ್ ಸರ್ಕಾರ ಬಂದಿದ್ದು, ಈಗ ಆರೋಗ್ಯ ಇಲಾಖೆಯಲ್ಲಿ ಭಾರಿ ಸರ್ಜರಿಗೆ ಮುಂದಾಗಿದೆ. ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಗುತ್ತಿಗೆಗಳ ಮೇಲೆ ಈಗಿನ ಕಾಂಗ್ರೆಸ್ ಸರ್ಕಾರ ಕಣ್ಣಿಟ್ಟಿದ್ದು, ಒಂದೊಂದೇ ಟೆಂಡರ್ಗಳನ್ನು ರದ್ದುಗೊಳಿಸುವತ್ತ ಹೆಜ್ಜೆಯನ್ನಿಡುತ್ತಿದೆ. ಅಲ್ಲದೆ, ಆಗಿನ ಸಚಿವ ಡಾ. ಕೆ. ಸುಧಾಕರ್ (Dr K Sudhakar) ತೆಗೆದುಕೊಂಡಿರುವ ಹಲವು ನಿರ್ಧಾರಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಈಗಾಗಲೇ ಹೇಳಿಕೊಂಡಿದೆ. ಈಗ ಇದರ ಭಾಗವಾಗಿ 108 ಆಂಬ್ಯುಲೆನ್ಸ್ ಹಾಗೂ ಡಯಾಲಿಸಿಸ್ ಕೇಂದ್ರಗಳ ಟೆಂಡರ್ಗಳನ್ನು ರದ್ದುಗೊಳಿಸಿ ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈಗಾಗಲೇ ಕೆಲವು ಟೆಂಡರ್ಗಳನ್ನು ರದ್ದುಪಡಿಸಿದ್ದೇವೆ. 108 ಆಂಬ್ಯುಲೆನ್ಸ್ ಸೇವೆ ನೀಡಲು ಜಿವಿಕೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. ಅಲ್ಲದೆ, ರಾಜ್ಯದ ಡಯಾಲಿಸಿಸ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇದೆ. ಹಾಗಾಗಿ ಡಯಾಲಿಸಿಸ್ ಟೆಂಡರ್ ಅನ್ನು ಸಹ ರದ್ದುಪಡಿಸಲಾಗಿದೆ. ಈಗ ಜರೂರಾಗಿರುವ ಕೆಲಸಗಳನ್ನು ಮಾಡುತ್ತಿದ್ದೇವೆ. ಇಲಾಖೆಯ ಕಾರ್ಯನಿರ್ವಹಣೆ ಬದಲಾವಣೆ ಕೆಲಸ ನಡೆಯುತ್ತಿದೆ. ಅಧಿಕಾರಿಗಳು, ವೈದ್ಯರ ಕಾರ್ಯನಿರ್ವಹಣೆಯನ್ನು ಸರಿಪಡಿಸಬೇಕಿದೆ. ಪಾಲಿಸಿ ವಿಚಾರಗಳನ್ನು ಬದಲಾಯಿಸಬೇಕಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Traffic Police: ಒನ್ವೇ, ಫುಟ್ಪಾತ್ನಲ್ಲಿ ಗಾಡಿ ಓಡಿಸ್ಬೇಡಿ, ಹೋದ್ರೆ ಕ್ರಿಮಿನಲ್ ಕೇಸ್ ಬೀಳೋದು ಗ್ಯಾರಂಟಿ!
ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಅದರ ಭಾಗವಾಗಿ ಈಗಾಗಲೇ ಕೆಲವು ಟೆಂಡರ್ಗಳನ್ನು ಕ್ಯಾನ್ಸಲ್ ಮಾಡಿದ್ದೇವೆ. ಬಾಕಿ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡುತ್ತಿದ್ದೇವೆ. ತಜ್ಞರ ಜತೆ ಚರ್ಚೆ ಮಾಡಿ ಸುಧಾರಣೆ ತರುತ್ತೇವೆ. ಗುಣಮಟ್ಟದ ಚಿಕಿತ್ಸೆ, ಗುಣಮಟ್ಟದ ವ್ಯವಸ್ಥೆಯನ್ನು ನಾವು ಕೊಡುವಂತೆ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ದಿನೇಶ್ ಗುಂಡೂರಾವ್ ಹೇಳಿಕೆ
ಅರ್ಹರಿಗೆ ಗೃಹಲಕ್ಷ್ಮಿ ಯೋಜನೆ ಸಿಗಲಿದೆ
ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೆ ಅಂಥವರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಈ ಬಗ್ಗೆ ಸ್ಪಷ್ಟವಾಗಿ ಮಾರ್ಗಸೂಚಿ ಇದೆ. ಅಂಥವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಬೇಡಿಕೆ ಇರುವಂತಹ ಅರ್ಹರಿಗೆ ಯೋಜನೆ ಸಿಗಲಿದೆ. ಜನಸಂಖ್ಯೆ ನೋಡಿದರೆ 1-2 ಪರ್ಸೆಂಟ್ ಮಾತ್ರ ಈ ರೀತಿ ಇರಬಹುದು. ಈ ರೀತಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದು ಸುಲಭ. ಆದರೆ ಅನುಷ್ಠಾನ ಮಾಡೋದು ಕಷ್ಟ. ಈಗ ಅನುಷ್ಠಾನ ಕೂಡ ಮಾಡಿ ಜನರಿಗೆ ನಾವು ತೋರಿಸಿದ್ದೇವೆ. ಅನುಷ್ಠಾನ ಮಾಡಲ್ಲ ಎಂದು ಕೆಲವರು ನಕರಾತ್ಮಕತೆಯಿಂದ ನೋಡುತ್ತಿದ್ದಾರೆ ಎಂದು ಹೇಳಿದರು.
ದಿನೇಶ್ ಗುಂಡೂರಾವ್ ಹೇಳಿಕೆಯ ವಿಡಿಯೊ ಇಲ್ಲಿದೆ
ಇದನ್ನೂ ಓದಿ: Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್ ಆಯ್ತು ವಿಡಿಯೊ
ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಜನರಲ್ಲಿ ಕೋಮುವಾದದ ವಿಚಾರವನ್ನು ಹಿಂದಿನ ಬಿಜೆಪಿ ಸರ್ಕಾರದವರು ತುಂಬಿದರು. ಅವರ ಪಕ್ಷದ ಬೆಳವಣಿಗೆಗೆ ಸಿದ್ಧಾಂತ ಬಿತ್ತಲು ನೋಡುತ್ತಿದ್ದಾರೆ. ಮಕ್ಕಳಲ್ಲಿ ತಪ್ಪು ವಿಚಾರಗಳನ್ನು ತಲೆಗೆ ಹಾಕಬಾರದು, ಅದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ನಾವು ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.
ಕರ್ನಾಟಕ
BJP Karnataka: ನಿಮ್ಮ ತಪ್ಪಿನಿಂದ ನಾವು ಬಲಿಯಾದೆವು: ಬಿಜೆಪಿ ಅವಲೋಕನ ಸಭೆಯಲ್ಲಿ ನಾಯಕರ ವಿರುದ್ಧ ಅಸಮಾಧಾನ ಸ್ಫೋಟ
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ಮೊದಲ ಬಾರಿಗೆ ನಡೆಸಿದ ಅವಲೋಕನ ಸಭೆಯಲ್ಲಿ, ಪರಾಜಿತ ಅಭ್ಯರ್ಥಿಗಳು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನೂತನ ಶಾಸಕರಿಗೆ ಬೆಳಗ್ಗೆ ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಸಂಜೆ ಅವಲೋಕನ ಸಭೆಯನ್ನು ಏರ್ಪಡಿಸಲಾಗಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆಗಳು ನಡೆದವು.
ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಸಿ.ಸಿ. ಪಾಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಜಿ ವಿ ರಾಜೇಶ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿತರಿದ್ದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಗೆದ್ದ ಶಾಸಕರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಒಂಭತ್ತು ವರ್ಷ ತುಂಬಿದ ಬಗ್ಗೆ, ಸಾಧನೆಗಳನ್ನು ಜನರಿಗೆ ತಲುಪಿಸುವ ಬಗ್ಗೆ ಚರ್ಚೆ ಆಯಿತು. ಪಕ್ಷ ಸಂಘಟನೆ, ಕಾಂಗ್ರೆಸ್ ವಿರುದ್ಧ ಹೋರಾಟ ಬಗ್ಗೆ ಚರ್ಚೆ ನಡೆದಿದೆ. ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಇನ್ನೂ ಏನೇನು ಮಾಡಬಹುದಿತ್ತು ಎಂಬ ಚರ್ಚೆ ನಡೆದಿದೆ. ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತದೆ ಎಂದರು. ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಅರುಣ್ ಸಿಂಗ್ ಅವರು ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, 16ನೇ ವಿಧಾನಸಭೆಗೆ ಆಯ್ಕೆಯಾದ ಚುನಾವಣೆಗೆ ಆಯ್ಕೆಯಾದ ಶಾಸಕರ ಜೊತೆ ಸಭೆ ಮಾಡಲಾಗಿದೆ. 22 ನೂತನವಾಗಿ ಮೊದಲ ಬಾರಿಗೆ ಆಯ್ಕೆಯಾಗಿರೋ ಸದಸ್ಯರ ಪರಿಚಯದೊಂದಿಗೆ ಎಲ್ಲ ಶಾಸಕರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಯ್ತು. ಉತ್ತಮ ಕಾರ್ಯಕ್ಕೆ ಸರ್ಕಾರಕ್ಕೆ ಬೆಂಬಲ ಕೊಡುವುದು, ಜನವಿರೋಧಿ ನಿರ್ಧಾರ ತೆಗೆದುಕೊಂಡ್ರೆ ಸದನದ ಒಳಗೆ, ಹೊರಗೆ ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ.
1985ರಲ್ಲಿ ಹೊರತುಪಡಿಸಿ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿಲ್ಲ ಅನ್ನೋದು ವಾಸ್ತವಿಕ ವಿಚಾರ. 1994ರಲ್ಲಿ 34ಸ್ಥಾನಕ್ಕೆ ಕುಸಿಯಿತು. ನಂತರ ಕೃಷ್ಣಾ ಅವರ ಸರ್ಕಾರ ಅಸ್ಥಿತ್ವಕ್ಕೆ ಬಂತು. ಪ್ರತೀ ಐದು ವರ್ಷಕ್ಕೊಮ್ಮೆ ಬದಲಿಸುವ ಟ್ರೆಂಡ್ ಕರ್ನಾಟಕದಲ್ಲಿ ಕಾಣಬಹುದು. ಇದರ ಹೊರತಾಗಿ 36% ಮತಗಳನ್ನ ಪಡೆದಿದ್ದೇವೆ. ಸ್ಥಾನ ಗಳಿಕೆಯಲ್ಲಿ ಹೊಡತ ಬಿದ್ದಿದೆ. ಗ್ಯಾರಂಟಿ ಕಾರ್ಡ್ ನಂಬಿ ಜನ ಕಾಂಗ್ರೆಸ್ಗೆ ಮತ ನೀಡಿದ್ದಾರೆ.
ಸೋಲಿಗೆ ಕಾರಣ ಕೂಡ ಹುಡುಕಲಾಗಿದೆ, ಬಿಜೆಪಿ ಎದೆಗುಂದುವ ಪಕ್ಷವಲ್ಲ. ಬಿಜೆಪಿ 84ರ ಚುನಾವಣೆಗೆ 2 ಸ್ಥಾನ ಗೆದ್ದಿತ್ತು, ಒಬ್ಬರು ರಾಜೀನಾಮೆ ನೀಡಿದ್ರು, ಆದರೂ ಎದೆಗುಂದಲಿಲ್ಲ. ಯಡಿಯೂರಪ್ಪ ಒಬ್ಬರೇ ಹೋರಾಟ ಮಯನ್ನಡೆಸಿದ್ರು. ಪರಿಣಾಮಕಾರಿ ವಿಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದರು.
ಪ್ರತಿಪಕ್ಷ ನಾಯಕರ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕರ ವ್ಯಕ್ತಿಗತ ಅಭಿಪ್ರಾಯ ಸಂಗ್ರಹ ಮಾಡಲಾಗ್ತಿದೆ. ಅರುಣ್ ಸಿಂಗ್ ಅವರು ಅಭಿಪ್ರಾಯ ಸಂಗ್ರಹ ಮಾಡ್ತಿದ್ದು, ಹೈಕಮಾಂಡ್ ಜೊತೆ ಚರ್ಚಿಸಿ ವಿಪಕ್ಷ ನಾಯಕರ ಆಯ್ಕೆ ನಡೆಯಲಿದೆ ಎಂದರು.
ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಸದ್ಯ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಬಂದಿಲ್ಲ. ಕೇಂದ್ರಕ್ಕೆ ಒಂಭತ್ತು ವರ್ಷ ತುಂಬಿದೆ. ಆ ವಿಚಾರ ಮಾತ್ರ ಚರ್ಚೆಯಾಗಿದೆ. ಕಾಂಗ್ರೆಸ್ ಐದು ಗ್ಯಾರಂಟಿ ಗೊಂದಲ ಬಗೆಹರಿಸಬೇಕು. ನನಗೂ ಫ್ರೀ, ನಿನಗೂ ಫ್ರೀ ಅಂದಿದ್ರು. ಸಿ.ಟಿ ರವಿ ಮನೆಯವರಿಗೂ ಫ್ರೀ ಅಂತ ಹೇಳಿದ್ರು. ಈಗ ಐ.ಟಿ ಕಟ್ಟೋರಿಗಿಲ್ಲ, ಸರ್ಕಾರಿ ನೌಕರರಿಗೆ ಇಲ್ಲ ಅತಿದ್ದಾರೆ. ಎಲ್ಲಾ ಗೊಂದಲ ಬಗೆಹರಿಸಬೇಕು ಎಂದು ಹೇಳಿದರು.
ಸುಧಾಕರ್, ಸೋಮಣ್ಣ, ಕಾಗೇರಿ ಗೈರು
ಪರಾಜಿತ ಅಭ್ಯರ್ಥಿಗಳ ಸಭೆ ಸಂಜೆ ನಡೆಯಿತಾದರೂ ಪ್ರಮುಖವಾಗಿ ಡಾ. ಸುಧಾಕರ್, ವಿ. ಸೋಮಣ್ಣ, ವಿಶ್ವೇಶ್ವರ ಹೆಗಡೆ ಕಾಗೇರಿ ಗೈರಾಗಿದ್ದರು. ಇತರೆ ಪರಾಜಿತ ಅಭ್ಯರ್ಥಿಗಳಾದ ಪರಾಜಿತ ಅಭ್ಯರ್ಥಿಗಳಾದ ಬಿ.ಸಿ ನಾಗೇಶ್, ಎಂಟಿಬಿ ನಾಗರಾಜ್, ಸಿ.ಪಿಯೋಗೇಶ್ವರ್, ಪ್ರೀತಮ್ ಗೌಡ, ವರ್ತೂರು ಪ್ರಕಾರ, ಮುರುಗೇಶ್ ನಿರಾಣಿ , ನಾರಾಯಣ್ ಗೌಡ, ಬಿ.ಸಿ ಪಾಟೀಲ್, ಜೀವರಾಜ್, ವಿಜಯಶಂಕರ್, ಮಹೇಶ್ ಕುಮಟಹಳ್ಳಿ, ಪಿ.ರಾಜೀವ್, ರಾಜ್ಕುಮಾರ್ ಪಾಟೀಲ್ ತೇಲ್ಕೂರು, ರೂಪಾಲಿ ನಾಯಕ್, ಉಮೇಶ್ ಶೆಟ್ಟಿ, ಪದ್ಮನಾಭ ರೆಡ್ಡಿ, ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪ, ನಾಗೇಂದ್ರ, ಹಾಲಪ್ಪ ಆಚಾರ್, ತಮ್ಮೇಶ್ ಗೌಡ, ಸಪ್ತಗಿರಿ ಗೌಡ, ಪೂರ್ಣಿಮಾ ಶ್ರೀನಿವಾಸ್ , ಅಪ್ಪಚ್ಚು ರಂಜನ್, ಭಾಸ್ಕರ್ ರಾವ್,ಗೋವಿಂದ ಕಾರಜೋಳ, ಸುನಿಲ್ ನಾಯಕ್, ಹರ್ಷವರ್ಧನ್ ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯಲ್ಲಿ ಪ್ರಾರಂಭದಲ್ಲಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದ್ದಾರೆ. ವಿಧಾನಸಭೆ ಸೋಲಿನ ಬಗ್ಗೆ ಯಾರೂ ತಲೆಕೆಡಿಸಿಕೊಳಬೇಡಿ. ಎರಡು ಸ್ಥಾನದಿಂದ ಇಲ್ಲಿಯವರೆಗೆ ಪಕ್ಷ ಕಟ್ಟಿದ್ದೇನೆ. ಸದನದಲ್ಲಿ ಒಮ್ಮೆ ಇಬ್ಬರೇ ಶಾಸಕರಿದ್ವಿ. ವಸಂತಬಂಗೇರ ಪಾರ್ಟಿಯನ್ನು ಬಿಟ್ಟು ಹೋದರು, ಆಗ ನಾನು ಒಬ್ಬನೇ ಸದನದಲ್ಲಿ ನಿಂತು ಹೋರಾಟ ಮಾಡಿದ್ದೇನೆ. ಸೋತ ವಿಚಾರ ಮರೆತು ಬಿಡ ಮುಂದಿನ ಚುನಾವಣೆಗಳಿಗೆ ಪಕ್ಷ ಸಂಘಟಿಸಿ. ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ ಮಾಡಿ. ಮೋದಿ ಯೋಜನೆಯನ್ನು ಮನೆ ಮನೆಗೆ ತಲುಪಿಸಿ. ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದ್ದಾರೆ.
ಆದರೆ ಸೋತ ಅಭ್ಯರ್ಥಿಗಳು ಯಾವ ನಾಯಕನ ಮಾತನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಎಂಟಿಬಿ ನಾಗರಾಜ್ ಮಾತನಾಡಿ, ಕಾಂಗ್ರೆಸ್ನಲ್ಲಿದ್ದಾಗ ಮೂರು ಸಾರಿ ಗೆದ್ದಿದ್ದೆ. ಆದರೆ ಬಿಜೆಪಿಗೆ ಬಂದು ಎರಡು ಸಾರಿಯೂ ಸೋತಿದ್ದೇನೆ. ನಾನು ಬಿಜೆಪಿಗೆ ಬಂದಿದ್ದು ಹಣದ, ಸಚಿವ ಸ್ಥಾನದ, ಅಧಿಕಾರದ ಆಮಿಷಕ್ಕಾಗಿ ಅಲ್ಲ ಎಂದ ಎಂಟಿಬಿ ನಾಗರಾಜ್, ಮಾಜಿ ಸಚಿವ ಡಾ.ಕೆ.ಸುಧಾಕರ್ ಮೇಲೂ ಸಿಟ್ಟಾದರು.
ಸುಧಾಕರ್ನಿಂದಾಗಿಯೇ ನಾನು ಸೋತಿದ್ದು, ಸುಧಾಕರ್ ತಾವೂ ಸೋತು, ನಮ್ಮನ್ನೂ ಸೋಲಿಸಿದರು. ನಾನು ಮತ್ತು ಚಿಂತಾಮಣಿ ಅಭ್ಯರ್ಥಿ ಸೋಲಲು ಸುಧಾಕರ್ ಸಹ ಕಾರಣ ಎಂದರು. ಕಾಂಗ್ರೆಸ್ ನವರು ಹತ್ತು ಕೆಜಿ ಅಕ್ಕಿ ಕೊಡ್ತಿದ್ರು, ನೀವು ಆರು ಕೆಜಿ ಅಕ್ಕಿ ಕೊಟ್ರಿ, ಬಡವರು ಇದರಿಂದ ಸಿಟ್ಟಾಗಿದ್ರು. ನನ್ನ ಕ್ಷೇತ್ರದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಗ್ಯಾರಂಟಿಯೂ ನನ್ನ ಸೋಲಿಗೆ ಕಾರಣ ಆಯಿತು ಎಂದರು.
ನಾಯಕರ ವಿರುದ್ಧ ಗರಂ
ಅನೇಕ ಶಾಸಕರು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಚಿವರು ಸರ್ಕಾರ ಇದ್ದಾಗ ಸರಿಯಾಗಿ ಸ್ಪಂದಿಸಲಿಲ್ಲ. ಪಕ್ಷದ ಮುಖಂಡರು ಅಭ್ಯರ್ಥಿಗಳ ಮಾತಿಗೆ ಬೆಲೆ ಕೊಡಲಿಲ್ಲ. ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ಪಕ್ಷ ಬಿಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಡೆತ ಆಯಿತು. ನಾಯಕರು ಮಾಡಿರುವ ತಪ್ಪಿನಿಂದ ನಾವು ಬಲಿಯಾದೆವು.
ಕಾಂಗ್ರೆಸ್ ನ ಗ್ಯಾರಂಟಿಗಳಿಂದಲೂ ಸೋಲಾಗಿದೆ. ನಮ್ಮ ಪ್ರಣಾಳಿಕೆ ಕಾಂಗ್ರೆಸ್ ನವರಂತೆ ಇರಲಿಲ್ಲ. ನಮ್ಮ ಪ್ರಣಾಳಿಕೆ ಬಿಡುಗಡೆ ಕೂಡ ತಡವಾಯಿತು. ಪ್ರಣಾಳಿಕೆಯಲ್ಲಿ ಜನ ಮುಟ್ಟುವಂತ ಸ್ಕೀಮ್ ಗಳನ್ನು ಮಾಡಬೇಕಿತ್ತು. ಅದನ್ನು ಜನರಿಗೆ ತಿಳಿಸಲು ಅಗತ್ಯ ಕ್ರಮ ವಹಿಸಬೇಕಿತ್ತು. ಆದರೆ ಕಾಂಗ್ರೆಸ್ನವರು ಅವರ ಗ್ಯಾರಂಟಿ ಗಳ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಿದರು. ನಮ್ಮ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದಾಗ ಗ್ಯಾರಂಟಿದ್ದ ಬಗ್ಗೆ ಜನರು ಕೇಳುತ್ತಿದ್ದರು. ಅವ್ರು 2000 ಕೊಡ್ತಾರೆ, ನೀವು ಕೊಡ್ತೀರಾ ಎಂದು ಪ್ರಶ್ನೆ ಮಾಡಿದ್ರು. ಕಾಂಗ್ರೆಸ್ ನ ಗ್ಯಾರಂಟಿ ಗಳನ್ನು ನಾವು ಸಮರ್ಥವಾಗಿ ಎದುರಿಸಿಲ್ಲ. ಅದಕ್ಕಾಗಿ ನಮಗೂ ಸೋಲು ಆಯಿತು.
ಸ್ಥಳೀಯ ಸಚಿವರು ಬಿಟ್ಟು, ಬೇರೆ ಜಿಲ್ಲೆಗಳಿಗೆ ಉಸ್ತುವಾರಿ ನೀಡಿದ್ದು ಚುನಾವಣೆ ಸೋಲಿಗೆ ಕಾರಣ ಆಯಿತು. ಸಚಿವರಾಗಿದ್ದಂತವರಿಗೆ ಮೂಲ ಜಿಲ್ಲೆಗಳ ಉಸ್ತುವಾರಿ ಕೊಡಬೇಕಿತ್ತು. ಅದು ಬಿಟ್ಟು ಬೇರೆ ಯಾವುದೋ ಜಿಲ್ಲೆಗೆ ಉಸ್ತುವಾರಿ ನೀಡಿದ್ರಿ. ಅಲ್ಲಿ ಬಂದು ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಾರೋಹಣ ಮಾಡಿ ಹೋದ್ರೆ ಸಾಕಾ..? ಸ್ಥಳೀಯ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳಿಗೆ ಆ ಸಚಿವರ ಹಿಡಿತ ಸಾಧ್ಯ ಆಗುತ್ತಾ? ಅಲ್ಲಿ ಸಚಿವರಿಂದಲೂ ಪಕ್ಷ ಸಂಘಟನೆಯೂ ಆಗಿಲ್ಲ, ಅಲ್ಲಿ ಎಲ್ಲೋ ರಾಜ್ಯಗಳಲ್ಲಿ ಈ ರೀತಿ ಮಾಡಿದ್ದಾರೆ ಅಂತ ಅದನ್ನು ನಮ್ಮ ರಾಜ್ಯದಲ್ಲಿ ಮಾಡಿದ್ರೆ ಯಶಸ್ವಿ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Vijayanagara News: ಗೆಲುವಿಗೆ ಎಲ್ಲರೂ ತಂದೆ, ಸೋಲು ಅನಾಥ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು
ಕರ್ನಾಟಕ
MLC Election: ಕಾಂಗ್ರೆಸ್ ಸರ್ಕಾರಕ್ಕೆ 3ನೇ ಸವಾಲು: 3 ಪರಿಷತ್ ಸ್ಥಾನಕ್ಕೆ 19 ಆಕಾಂಕ್ಷಿಗಳು, ನಾಲ್ಕೈದು ಬಣಗಳು!
ಸದ್ಯ 34 ಸಚಿವರ ಪೈಕಿ ಬೋಸರಾಜು ಅವರು ವಿಧಾನಸಭೆ ಸದಸ್ಯರೂ ಅಲ್ಲ, ವಿಧಾನ ಪರಿಷತ್ ಸದಸ್ಯರೂ ಅಲ್ಲ. ಹಾಗಾಗಿ ಅವರನ್ನು ಆರು ತಿಂಗಳೊಳಗೆ ಕೆಳಮನೆ ಅಥವಾ ಮೇಲ್ಮನೆ ಸದಸ್ಯರನ್ನಾಗಿಸಬೇಕು.
ಬೆಂಗಳೂರು: ಈಗಷ್ಟೆ ಸಂಪುಟ ಸರ್ಕಸ್ ಮುಗಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಮೂರನೇ ಸವಾಲು ಎದುರಾಗಿದೆ. ವಿಧಾನಸಭೆಯಿಂದ ಆಯ್ಕೆ ಮಾಡಬೇಕಾದ ಮೂರು ವಿಧಾನ ಪರಿಷತ್ ಸ್ಥಾನಗಳನ್ನು ಭರ್ತಿ ಮಾಡಬೇಕಿದ್ದು, ಉಪಚುನಾವಣೆಗೆ ಈಗಾಗಲೆ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಲೇ ಸಾಗಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯ ಅನೇಕ ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಿದ್ದರು. ಇದರಲ್ಲಿ, ವಿಧಾನ ಸಭೆಯಿಂದ ಆಯ್ಕೆ ಮಾಡಲಾಗಿದ್ದ ಲಕ್ಷ್ಮಣ ಸವದಿ, ಆರ್ ಶಂಕರ್, ಬಾಬುರಾವ್ ಚಿಂಚನಸೂರು ರಾಜೀನಾಮೆ ನೀಡಿದ್ದರು. ಲಕ್ಷ್ಮಣ ಸವದಿ ಹಾಗೂ ಬಾಬುರಾವ್ ಚಿಂಚನಸೂರು ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ ಶಂಕರ್ ಪಕ್ಷೇತರರಾಗಿದ್ದರು. ಲಕ್ಷ್ಮಣ ಸವದಿ ಹೊರತುಪಡಿಸಿ ಇಬ್ಬರೂ ಸೋಲುಂಡರು. ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಜೂನ್ 30ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ.
ಮೂರೂ ಚುನಾವಣೆಗಳು ಒಟ್ಟಾಗಿ ನಡೆಯುತ್ತಿದೆಯಾದರೂ ಅವುಗಳು ಬೇರೆಬೇರೆ ಅವಧಿಯಲ್ಲಿ ಮುಕ್ತಾಯವಾಗುವ ಸ್ಥಾನಗಳಾದ್ಧರಿಂದ ಪ್ರತ್ಯೇಕ ಚುನಾವಣೆ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಮೂರಕ್ಕೆ ಮೂರೂ ಸ್ಥಾನಗಳು ಕಾಂಗ್ರೆಸ್ಗೇ ಸಿಗಲಿವೆ. ಈ ಮೂರು ಸ್ಥಾನಗಳಿಗೆ ಈಗಾಗಲೆ ಪೈಪೋಟಿ ಆರಂಭವಾಗಿದೆ. ಆದರೆ ಮೂರರಲ್ಲಿ ಒಂದು ಸ್ಥಾನ ಈಗಾಗಲೆ ನಿಗದಿಯಾಗಿರುವುದು ಮತ್ತಷ್ಟು ಒತ್ತಡ ಹೆಚ್ಚಿಸಿದೆ.
ಸದ್ಯ 34 ಸಚಿವರ ಪೈಕಿ ಬೋಸರಾಜು ಅವರು ವಿಧಾನಸಭೆ ಸದಸ್ಯರೂ ಅಲ್ಲ, ವಿಧಾನ ಪರಿಷತ್ ಸದಸ್ಯರೂ ಅಲ್ಲ. ಹಾಗಾಗಿ ಅವರನ್ನು ಆರು ತಿಂಗಳೊಳಗೆ ಕೆಳಮನೆ ಅಥವಾ ಮೇಲ್ಮನೆ ಸದಸ್ಯರನ್ನಾಗಿಸಬೇಕು. ಯಾವುದೇ ಸದಸ್ಯರನ್ನು ರಾಜೀನಾಮೆ ಕೊಡಿಸಿ ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ಸವಾಲನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುವುದು ಬಹುತೇಕ ಅಸಾಧ್ಯ. ಹಾಗಾಗು ಪರಿಷತ್ ಸದಸ್ಯರನ್ನಾಗಿ ನೇಮಿಸಬೇಕಾಗಿದೆ.
ಇನ್ನು ಎರಡು ಸ್ಥಾನಗಳಿಗೆ ಅನೇಕರು ಪ್ರಯತ್ನ ನಡೆಸಿದ್ದಾರೆ. ಇದರಲ್ಲಿಯೂ ಸಿದ್ದರಾಮಯ್ಯ ಬಣ, ಡಿ.ಕೆ. ಶಿವಕುಮಾರ್ ಬಣ, ಇನ್ನಿತರರ ಬಣ ಹಾಗೂ ಹೈಕಮಾಂಡ್ ಕೋಟಾ ಹೆಸರುಗಳು ಕೇಳಿಬರುತ್ತಿವೆ.
ಆಕಾಂಕ್ಷಿಗಳು ಹಾಗೂ ಕೋಟ
ಜಗದೀಶ್ ಶೆಟ್ಟರ್ – ಹೈಕಮಾಂಡ್
ಬಾಬುರಾವ್ ಚಿಂಚನಸೂರ – ಮಲ್ಲಿಕಾರ್ಜುನ ಖರ್ಗೆ
ಬಿಎಲ್ ಶಂಕರ್ – ಡಿ.ಕೆ. ಶಿವಕುಮಾರ್
ವಿ.ಆರ್ ಸುದರ್ಶನ್ – ಸಿದ್ದರಾಮಯ್ಯ
ವಿಜಯ್ ಮುಳಗುಂದ್ – ಡಿ.ಕೆ. ಶಿವಕುಮಾರ್
ವಿಶ್ವನಾಥ್ ಕನಕಪುರ – ಡಿ.ಕೆ. ಶಿವಕುಮಾರ್
ಉಮಾಶ್ರೀ – ಸಿದ್ದರಾಮಯ್ಯ
ರಾಮಪ್ಪ – ಸಿದ್ದರಾಮಯ್ಯ
ಕವಿತಾರೆಡ್ಡಿ – ಸಿದ್ದರಾಮಯ್ಯ
ನಾಗಲಕ್ಷ್ಕೀ ಚೌಧರಿ – ಸಿದ್ದರಾಮಯ್ಯ/ಪರಮೇಶ್ವರ್
ಅನಿಲ್ ಕುಮಾರ್ – ಲಿಂಗಾಯತ – ಎಂಬಿ ಪಾಟೀಲ್, ಈಶ್ವರ ಖಂಡ್ರೆ
ಪುಷ್ಪಲತಾ ಅಮರನಾಥ – ಸಿದ್ದರಾಮಯ್ಯ
ನಟರಾಜ ಗೌಡ – ಡಿ.ಕೆ. ಶಿವಕುಮಾರ್
ಐವನ್ ಡಿಸೋಜ – ಸಿದ್ದರಾಮಯ್ಯ
ಮೈಸೂರು ಲಕ್ಷ್ಮಣ್ – ಸಿದ್ದರಾಮಯ್ಯ
ಗಾಯಿತ್ರಿ ಶಾಂತೇಗೌಡ – ಸಿದ್ದರಾಮಯ್ಯ
ಮಂಜುಳ ಮಾನಸ – ಸಿದ್ದರಾಮಯ್ಯ
ಸಾದುಕೋಕಿಲಾ – ಡಿ.ಕೆ. ಶಿವಕುಮಾರ್
ಇದನ್ನೂ ಓದಿ: Congress Guarantee: ಇದು ಸರ್ಕಾರ, ಸರ್ಕಾರ ನಡೆಸೋದು ನಾವು: ಗ್ಯಾರಂಟಿ ಕಂಡೀಷನ್ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತರ
ಕರ್ನಾಟಕ
Congress Guarantee: ವಿದ್ಯುತ್ ಬಳಕೆ ಸರಾಸರಿ ಮೀರಿದರೆ ಎಷ್ಟು ಕಟ್ಟಬೇಕು? ಇಲ್ಲಿದೆ ಸರ್ಕಾರದ ಹೊಸ ನಿಯಮ
200 ಯುನಿಟ್ ಒಳಗೆ ಇರುವವರಿಗೆ ಎಲ್ಲ ಸೌಲಭ್ಯ ಸಿಗುತ್ತದೆ. ಸರಾಸರಿ ಹಾಗೂ ಶೇ.10ರೊಳಗೆ ಬಂದರೆ ಹಣ ಪಾವತಿ ಮಾಡಬೇಕಿಲ್ಲ. ಆದರೆ ಸರಾಸರಿ ಮೀರಿದರೆ ಏನು ಎಂಬ ಗೊಂದಲ ಇತ್ತು.
ಬೆಂಗಳೂರು: ಮಾಸಿಕ 200 ಯುನಿಟ್ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಸ್ವಂತ ಮನೆಯವರಿಗಷ್ಟೆ ಎಂಬಂತೆ ಇದ್ದ ಸರ್ಕಾರಿ ಆದೇಶದ ಕುರಿತು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. ಬಾಡಿಗೆ ಮನೆಯವರಿಗೂ ಅನ್ವಯ ಆಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. (ಈ ಕುರಿತು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಆದರೆ 200 ಯುನಿಟ್ ಒಳಗೆ ಸರಾಸರಿ ಇರುವವರು ಸರಾಸರಿ ಮೀರಿದರೆ ಪೂರ್ಣ ವಿದ್ಯುತ್ ಬಿಲ್ ಪಾವತಿ ಮಾಡಬೇಕೆ ಬೇಡವೇ ಎಂಬ ಗೊಂದಲ ಇತ್ತು. ಈಗ ಈ ವಿಚಾರಕ್ಕೂ ಕೆ.ಜೆ. ಜಾರ್ಜ್ ತೆರೆ ಎಳೆದಿದ್ದಾರೆ.
200 ಯುನಿಟ್ ಒಳಗೆ ಇರುವವರಿಗೆ ಎಲ್ಲ ಸೌಲಭ್ಯ ಸಿಗುತ್ತದೆ. ಸರಾಸರಿ ಹಾಗೂ ಶೇ.10ರೊಳಗೆ ಬಂದರೆ ಹಣ ಪಾವತಿ ಮಾಡಬೇಕಿಲ್ಲ. ಆದರೆ 200 ಯುನಿಟ್ ಒಳಗೆ ಸರಾಸರಿಯನ್ನು ಮೀರಿ ಬಳಕೆ ಮಾಡಿದರೆ ಹೆಚ್ಚುವರಿ ವಿದ್ಯುತ್ಗೆ ಮಾತ್ರವೇ ಬಿಲ್ ಕಟ್ಟಬೇಕಾಗುತ್ತದೆ. ಆದರೆ ಇದು 200 ಯುನಿಟ್ ದಾಟಿದರೆ ಸಂಪೂರ್ಣ ವಿದ್ಯುತ್ ಬಳಕೆಗೆ ಪಾವತಿ ಮಾಡಬೇಕಾಗುತ್ತದೆ. ಯುನಿಟ್ ಬಿಲ್ ಜತೆಗೆ ಮಾಸಿಕ ಬಾಡಿಗೆ ದರವನ್ನೂ ಮಾಡಲಾಗುತ್ತದೆ. ಆದರೆ ನಿಗದಿತ ಸರಸರಿಗಿಂತ ಹೆಚ್ಚು ಬಳಸಿದ ವಿದ್ಯುತ್ಗೆ ಅದರ ಬಳಕೆ ಆಧಾರದಲ್ಲಿ ಬಾಡಿಗೆ ಅಥವಾ ತೆರಿಗೆ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಇದು ಹೇಗೆ ಅನ್ವಯ?
200 ಯುನಿಟ್ ಒಳಗೆ ಬಳಸಿದರೆ ಹೆಚ್ಚುವರಿ ವಿದ್ಯುತ್ ಮಾತ್ರ ಬಿಲ್ ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ ಒಂದು ಆರ್ಆರ್ ಸಂಖ್ಯೆಗೆ ವಾರ್ಷಿಕ 100 ಯುನಿಟ್ ಸರಾಸರಿ ಎಂದು ನಿಗದಿಯಾಗಿರುತ್ತದೆ. ಅದರ ಮೇಲೆ ಶೇ.10 ಅಂದರೆ 110 ಯುನಿಟ್ ವರೆಗೆ ಮಾಸಿಕ ಬಿಲ್ ಬಂದರೆ ಯಾವುದೇ ಪಾವತಿ ಮಾಡಬೇಕಿಲ್ಲ. ಆದರೆ ಈ ಮೊತ್ತ ಇದ್ದಕ್ಕಿದ್ದಂತೆ ಯಾವುದೋ ಒಂದು ತಿಂಗಳು 150 ಯುನಿಟ್ ಬಂದರೆ ಏನು ಮಾಡುವುದು? ಆ ತಿಂಗಳು ಹೆಚ್ಚುವರಿಯಾಗಿ ಬಳಕೆಯಾದ 40 ಯುನಿಟ್ (ಅಂದರೆ 150- 110= 40) ಯುನಿಟ್ಗೆ ಮಾತ್ರ ಬಿಲ್ ಪಾವತಿ ಮಾಡಬೇಕಾಗುತ್ತದೆ. ಈ ರೀತಿ 200 ಯುನಿಟ್ವರೆಗೂ ಬಳಸಬಹುದು. ಆಗ ಹೆಚ್ಚುವರಿ ಯುನಿಟ್ಗೆ ಮಾತ್ರ ಬಿಲ್ ಪಾವತಿಸಬೇಕು. ಆದರೆ ಈ ಬಳಕೆಯು 200 ಯುನಿಟ್ ದಾಟಿದರೆ ಸಂಪೂರ್ಣ ಬಳಕೆಗೆ ಬಿಲ್ ಪಾವತಿ ಮಾಡಬೇಕಾಗುತ್ತದೆ.
ಇದನ್ನೂ ಓದಿ: Free Electricity: ಹೊರಬಿತ್ತು ಗೃಹ ಜ್ಯೋತಿ ಮಾರ್ಗಸೂಚಿ; ಬಾಡಿಗೆದಾರನಿಗಿಲ್ಲ ಉಚಿತ ವಿದ್ಯುತ್?
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema23 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema23 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ24 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ21 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ
-
South Cinema22 hours ago
Corset Fashion: ಬಣ್ಣ ಬಣ್ಣದ ಕಾರ್ಸೆಟ್ ಕ್ರಾಪ್ ಟಾಪ್ ಜಾದೂ…