ಆಟೋಮೊಬೈಲ್
ಭಾರತ್ NCAP ಮೂಲಕ ಕಾರುಗಳಿಗೆ ಸುರಕ್ಷತಾ ರೇಟಿಂಗ್ : ನಿತಿನ್ ಗಡ್ಕರಿ
ಗ್ಲೋಬಲ್ NCAP ರೀತಿಯಲ್ಲೇ ಭಾರತ್ NCAP ಅನ್ನು ರಚಿಸಿ ಕಾರುಗಳು ಪ್ರಯಾಣಿಕರಿಗೆ ಒದಗಿಸುವ ಸುರಕ್ಷತಾ ರೇಟಿಂಗ್ ಆಧಾರದಲ್ಲಿ ರೇಟಿಂಗ್ ನೀಡಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರ್ ಹೇಳಿದ್ದಾರೆ.
ನವ ದೆಹಲಿ: ಭಾರತದ ರಸ್ತೆಯಲ್ಲಿರುವ ಎಲ್ಲ ಕಾರುಗಳು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಕೊಡುವುದಿಲ್ಲ. ಇಲ್ಲಿ ಮೈಲೇಜ್ಗೆ ಹೆಚ್ಚು ಆದ್ಯತೆ ನೀಡುವ ಕಾರಣ ಕಂಪನಿಗಳು ವಾಹನದ ಒಟ್ಟು ತೂಕ ಕಡಿಮೆ ಮಾಡುವ ಉದ್ದೇಶದಿಂದ ಕನಿಷ್ಠ ದರ್ಜೆಯ ವಸ್ತುಗಳನ್ನು ಬಳಸಿಕೊಂಡು ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತವೆ. ಹೀಗಾಗಿ ಅವಘಡಗಳ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಹಾನಿಯಾಗುತ್ತವೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾರತ್ NCAP ರಚಿಸಿ ಕಾರುಗಳಿಗೆ ಸುರಕ್ಷತಾ ರೇಟಿಂಗ್ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಶುಕ್ರವಾರ ಅವರು ಈ ಕುರಿತು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಅವರ ಪ್ರಕಾರ ಭಾರತದಲ್ಲಿ ಉತ್ಪಾದನೆಯಾಗುವ ಎಲ್ಲ ಕಾರುಗಳು ಮುಂದೆ ಸ್ಥಾಪನೆಯಾಗಲಿರುವ ಭಾರತ್ NCAPನಿಂದ ಪ್ರಮಾಣಿಕೃತಗೊಂಡಿರಬೇಕು. ವಾಹನಗಳು ಒಳಗಿರುವ ಪ್ರಯಾಣಿಕರಿಗೆ ಎಷ್ಟರ ಮಟ್ಟಿಗೆ ಸುರಕ್ಷತೆ ನೀಡುತ್ತವೆ ಎಂಬುದನ್ನು ಆಧರಿಸಿ ರೇಟಿಂಗ್ ನೀಡಲಾಗುತ್ತದೆ. ಇದರಿಂದ ಭಾರತದ ಕಾರು ಖರೀದಿದಾರರಿಗೆ ಹಾಗೂ ರಫ್ತು ವ್ಯವಹಾರಕ್ಕೆ ನೆರವಾಗಲಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಭಾರತದಲ್ಲಿ ಕಾರುಗಳು ಸುರಕ್ಷತೆಗೆ ಆದ್ಯತೆ ನೀಡುವುದು ಕಡಿಮೆ. ಬಹುತೇಕರು ಕಡಿಮೆ ಬೆಲೆಗೆ ದೊಡ್ಡ ಗಾತ್ರದ ಕಾರುಗಳು ಎಲ್ಲಿ ಸಿಗುತ್ತವೆ ಎಂಬುದನ್ನು ಹುಡುಕುತ್ತಾರೆ. ಭಾರತದಲ್ಲಿರುವ ಕಾರು ತಯಾರಕ ಕಂಪನಿಗಳು ಇದಕ್ಕೆ ಪೂರಕವಾಗಿ ಕಾರುಗಳು ನಿರ್ಮಿಸುತ್ತವೆ. ವಾಹನಗಳ ದಟ್ಟಣೆ ಹೆಚ್ಚಾಗುವ ಜತೆಗೆ ಅತಿ ವೇಗದ ಎಕ್ಸ್ಪ್ರೆಸ್ ಹೈವೇಗಳ ಕಾರಣಕ್ಕೆ ಅವಘಡಗಳೂ ಹೆಚ್ಚಾಗಿವೆ. ಇದರಿಂದ ಜೀವ ಉಂಟಾಗುತ್ತಿವೆ. ಹೀಗಾಗಿ ಭಾರತ್ NCAP ಬಂದರೆ ಕಾರು ತಯಾರಕ ಕಂಪನಿಗಳು ಪ್ರಯಾಣಿಕರ ಸುರಕ್ಷತೆ ಕುರಿತೂ ಎಚ್ಚರಿಕೆ ವಹಿಸುವ ಸಾಧ್ಯತೆಗಳಿವೆ.
ಗ್ಲೋಬಲ್ NCAP ಮಾನದಂಡ
ನಿತಿನ್ ಗಡ್ಕರಿಯವರ ಹೇಳಿಕೆ ಪ್ರಕಾರ ಗ್ಲೋಬಲ್ NCAPನ ಮಾನದಂಡಗಳನ್ನು ಭಾರತ್ NCAPನಲ್ಲೂ ಅಳವಡಿಸಲಾಗುತ್ತದೆ. ಜತೆಗೆ ಭಾರತದ ಪರಿಸ್ಥಿತಿಗೆ ಅನುಕೂಲಕರವಾಗಿರುವ ಕೆಲವು ನಿಯಮಗಳನ್ನೂ ಸೇರಿಸಲಾಗುತ್ತದೆ. ಕಾರು ಉತ್ಪಾದನಾ ಘಟಕಗಳಲ್ಲಿ ಭಾರತ್ NCAP ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿ ರಸ್ತೆಗಿಳಿಯುವ ಪ್ರತಿಯೊಂದು ಕಾರುಗಳು ಎಷ್ಟರ ಮಟ್ಟಿಗೆ ಸುರಕ್ಷತೆ ಹೊಂದಿವೆ ಎಂಬುದನ್ನು ದಾಖಲಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಏನಿದು ಗ್ಲೋಬಲ್ NCAP
ಒಂದು ಕಂಪನಿಯು ನಾನಾ ವಾಹನಗಳನ್ನು ರಸ್ತೆಗೆ ಇಳಿಸುತ್ತವೆ. ಉದಾಹರಣೆಗೆ ಮಾರುತಿ ಕಂಪನಿಯಲ್ಲಿ ಹಲವಾರು ಬಗೆಯ ಕಾರುಗಳಿವೆ. ಆದರೆ, ಎಲ್ಲ ಕಾರುಗಳ ರಚನೆ ಹಾಗೂ ಗುಣಮಟ್ಟ ಬೇರೆಬೇರೆಯಾಗಿರುತ್ತವೆ. ಹೀಗಾಗಿ ಸುರಕ್ಷತೆಯ ಪ್ರಮಾಣದಲ್ಲೂ ವ್ಯತ್ಯಾಸ ಇರುತ್ತದೆ. ಇಂಥದ್ದನ್ನೆಲ್ಲ ಪರೀಕ್ಷೆ ಮಾಡಲು Global New Car Assessment Programme ವ್ಯವಸ್ಥೆಯನ್ನು ಬ್ರಿಟನ್ ಮೂಲದ ಲಾಭೇತರ ಸಂಸ್ಥೆ ಝೀರೊ ಫೌಂಡೇಷನ್ ಸ್ಥಾಪಿಸಿದೆ. ಕಾರು ತಯಾರಕ ಕಂಪನಿಗಳು ತಮ್ಮ ಕಾರಿನ ಸಾಮರ್ಥ್ಯವನ್ನು ಪರೀಕ್ಷೆ ಮಾಡಲು ಇಚ್ಚಿಸಿದರೆ ಈ ಸಂಸ್ಥೆಯ ಮೂಲಕ ಪರೀಕ್ಷೆ ಮಾಡಿಸಿಕೊಳ್ಳಬಹುದು. ಈ ಸಂಸ್ಥೆಯು ಮುಂದಿನ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರಿಗೆ, ಹಿಂದಿನ ಸೀಟಿನಲ್ಲಿ ಕುಳಿತ ಪ್ರಯಾಣಿಕರಿಗೆ, ವಾಹನದೊಳಗಿರುವ ಮಕ್ಕಳಿಗೆ ಎಷ್ಟೆಷ್ಟು ಪ್ರಮಾಣದ ಸುರಕ್ಷತೆ ನೀಡುತ್ತದೆ ಎಂಬುದನ್ನು ಪರೀಕ್ಷಿಸುತ್ತದೆ. ಜತೆಗೆ ಹಿಂದಿನಿಂದ ಗುದ್ದಿದರೆ, ಬದಿಯಿಂದ ಗುದ್ದಿದರೆ, ಹಿಂದಿನಿಂದ ಗುದ್ದಿದರೆ, ವೇಗವಾಗಿ ಪಲ್ಟಿಯಾದರೆ ಹಾಗೂ ನಿಗದಿತ ಎತ್ತರದಿಂದ ಕೆಳಕ್ಕೆ ಬಿದ್ದರೆ ಎಷ್ಟರ ಮಟ್ಟಿಗೆ ಪ್ರಯಾಣಿಕರಿಗೆ ಹಾನಿಯಾಗುತ್ತದೆ ಎಂಬುದನ್ನು ಲೆಕ್ಕ ಹಾಕುತ್ತದೆ. ಅದಕ್ಕಾಗಿ ಪ್ರತಿಕೃತಿಗಳ ಹಾಗೂ ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ೧ರಿಂದ ೫ರವರೆಗೆ ಸ್ಟಾರ್ ನೀಡಲಾಗುತ್ತದೆ. ೫ ಸ್ಟಾರ್ ಪಡೆದ ಕಾರುಗಳು ಹೆಚ್ಚು ಸುರಕ್ಷಿತ ಎಂದು ಹೇಳಲಾಗುತ್ತದೆ.
ಭಾರತದ ಸುರಕ್ಷಿತ ಕಾರುಗಳು
ಟಾಟಾ ಮೋಟಾರ್ಸ್ ನಿರ್ಮಿಸುವ ಕಾರುಗಳು ಭಾರತದಲ್ಲಿ ಕಡಿಮೆ ಬೆಲೆಗೆ ದೊರೆಯುವ ಸುರಕ್ಷಿತ ಕಾರುಗಳು ಎಂಬ ಖ್ಯಾತಿ ಗಳಿಸಿವೆ. ಟಾಟಾ ನಿರ್ಮಿಸಿದ ಬಹುತೇಕ ಕಾರುಗಳು ಗ್ಲೋಬಲ್ Global New Car Assessment Programme ೫ ಸ್ಟಾರ್ಗಳನ್ನು ಪಡೆದುಕೊಂಡಿವೆ. ಆ ಕಂಪನಿಯ ಕಾರುಗಳು ಕನಿಷ್ಠ ಪಕ್ಷ ೪ ಸ್ಟಾರ್ಗಳನ್ನು ಹೊಂದಿರುತ್ತವೆ. ಮಹೀಂದ್ರಾ ಕಂಪನಿಯ ಕಾರುಗಳು ಇತ್ತೀಚೆಗೆ ಉತ್ತಮ ಸ್ಟಾರ್ಗಳನ್ನು ಹೊಂದುತ್ತಿವೆ. ಆರಂಭದಲ್ಲಿ ಭಾರತದಲ್ಲಿ ಕಾರು ತಯಾರು ಮಾಡುವ ಕಂಪನಿಗಳು ಗ್ಲೋಬಲ್ NCAP ಪರೀಕ್ಷೆ ಮಾಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಗ್ರಾಹಕರೇ ಈಗ ಜಾಗೃತರಾಗಿರುವ ಕಾರಣ ಆ ಕಂಪನಿಗಳೂ ಮಾನದಂಡ ಪೂರೈಸಲು ಯತ್ನಿಸುತ್ತದೆ. ನಿತಿನ್ ಗಡ್ಕರಿಯವರ ಯೋಜನೆ ಜಾರಿಗೆ ಬಂದರೆ ಎಲ್ಲರೂ ಈ ಮಾನದಂಡಗಳಿಗೆ ಒಳಪಡುವುದು ಅನಿವಾರ್ಯ.
ಇದನ್ನೂ ಓದಿ | TATA NEXON EV ಕಾರಿಗೆ ಬೆಂಕಿ ಬಿದ್ದಿದ್ಯಾಕೆ? ತನಿಖೆಗೆ ಆದೇಶಿಸಿದ ಟಾಟಾ ಮೋಟರ್ಸ್
ಆಟೋಮೊಬೈಲ್
Mansoon 2023 : ಮಳೆಗಾಲದ ಸೇಫ್ ಜರ್ನಿಗೆ ನಿಮ್ಮ ವಾಹನಗಳನ್ನು ಈ ರೀತಿ ಮೇಂಟೇನ್ ಮಾಡಿ
ಮಳೆಗಾಲದಲ್ಲಿ ಕಾರನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದು ವಿಷಯವಾಗಿದೆ. ಅಸಮರ್ಪಕ ನಿರ್ವಹಣೆಯಿಂದ ವಾಹನದ ಹಾಗೂ ನಿಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಕಾರು ಸರಿಯಾಗಿ ಕೆಲಸ ಮಾಡಲು ಪ್ರಮಾಣಿತ ಕಾರ್ಯವಿಧಾನಗಳನ್ನು ಅನುಸರಿಸಲೇಬೇಕು.
ಬೆಂಗಳೂರು: ಮಾನ್ಸೂನ್ ಶೀಘ್ರದಲ್ಲೇ ಭಾರತದಾದ್ಯಂತ ಆವರಿಸಲಿದೆ. ಬಳಿಕ ಎಲ್ಲಿ ನೋಡಿದರೂ ಮುಂಗಾರು ಮಳೆಯ ಹನಿಯ ಲೀಲೆ ಕಾಣಲಿದೆ. ನೀವೇನಾದರೂ ಕಾರು ಅಥವಾ ಇನ್ಯಾವುದಾದರೂ ವಾಹನದ ಮಾಲೀಕ ಅಥವಾ ಚಾಲಕರಾಗಿದ್ದರೆ ಮಳೆಗಾಲದಲ್ಲಿ ಕಾರಿನ ನಿರ್ವಹಣೆ ಹೇಗೆ ಎಂಬ ಚಿಂತೆ ಶುರುವಾಗಿರುತ್ತದೆ. ದೂರದ ಪ್ರಯಾಣವೇ ಆಗಲಿ ಸಿಟಿಯೊಳಗಿನ ಜರ್ನಿಯೇ ಆಗಿರಲಿ ಮಳೆಗಾಲದಲ್ಲಿ ವಾಹನ ಓಡಿಸುವಾಗ ಅಪಾಯ ಹೆಚ್ಚು. ಇಂಥ ಪರಿಸ್ಥಿತಿಗಳನ್ನು ತಪ್ಪಿಸಲು ಕೆಲವೊಂದು ಕನಿಷ್ಠ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಮೊದಲನೆಯದ್ದು ಮಳೆಗಾಲಕ್ಕೆ ಮೊದಲು ವಾಹನವನ್ನು ಪೂರ್ತಿಯಾಗಿ ಸರ್ವಿಸ್ ಮಾಡಿಸುವುದು. ಹಾಗಾದರೆ ಮಾನ್ಸೂನ್ ಪ್ರಾರಂಭವಾಗುವ ಮೊದಲು ನೀವು ಪರಿಶೀಲಿಸಬೇಕಾದ ಅಥವಾ ಸರಿಪಡಿಸಬೇಕಾದ ಕೆಲವು ಪ್ರಮುಖ ಸಂಗತಿಗಳು ಈ ಕೆಳಗಿನಂತಿವೆ.
ಟೈರ್ಗಳನ್ನು ಪರೀಕ್ಷಿಸಿ
ಟೈರ್ಗಳ ಬಗ್ಗೆ ಕಾರಿನ ಮಾಲೀಕರು ನಿರ್ಲಕ್ಷ್ಯ ತಾಳುತ್ತಾರೆ. ಆದರೂ ಅವು ಬಹಳ ಮುಖ್ಯ ಮತ್ತು ಕಾರು ಚಾಲನೆ ಮಾಡುವ ವಿಧಾನದ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ. ಮಳೆಗಾಲದಲ್ಲಿ ಸವಾರಿ ಮಾಡುವಾಗ ಸೂಕ್ತ ಪ್ರಮಾಣದಲ್ಲಿ ಥ್ರೆಡ್ ಹೊಂದಿರುವ ಟೈರ್ಗಳು ಇರಲೇಬೇಕು. ಒಣಗಿರುವ ರಸ್ತೆಗಳಿಗೆ ಹೋಲಿಸಿದರೆ ಒದ್ದೆಯಾದ ರಸ್ತೆಗಳಲ್ಲಿ ಜಾರುವಿಕೆ ಜಾಸ್ತಿ. ಸರಿಯಾದ ಥ್ರೆಡ್ ಇಲ್ಲದಿದ್ದರೆ ಬ್ರೇಕ್ ಹಿಡಿಯವ ವೇಳೆ ಜೋರಾಗಿ ತಿರುಗಿಸಿದಾಗ ಕಾರು ಜಾರಿಕೊಂಡು ಹೋಗಿ ಅಪಘಾತಕ್ಕೆ ಒಳಗಾಗಬಹುದು. ಉತ್ತಮ ಥ್ರೆಡ್ ಇದ್ದರೆ ರಸ್ತೆಯ ಮೇಲೆ ನಿಮ್ಮ ಕಾರಿನ ಹಿಡಿತ ಹೆಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಟೈರ್ಗಳಲ್ಲಿ ಥ್ರೆಡ್ವೇರ್ ಇಂಡಿಕೇಟರ್ ಇರುತ್ತದೆ. ಥ್ರೆಡ್ಗಳ ನಡುವೆ ಒಂದು ಸಣ್ಣ ರಬ್ಬರ್ ಬಾರ್ ಇಟ್ಟಿರುತ್ತಾರೆ . ಟೈರ್ ರಬ್ಬರ್ ಸವೆದು ಹೋದ ಬಳಿಕ ಇಂಡಿಕೇಟರ್ ಕೂಡ ತೆಳುವಾಗುತ್ತದೆ. ಇದು ಟೈರ್ಗಳನ್ನು ಬದಲಾಯಿಸುವ ಸಮಯ. ಹೀಗಾಗಿ ಮಳೆಗಾಲಕ್ಕೆ ಮೊದಲು ಸವೆದ ಟೈರ್ಗಳನ್ನು ಬದಲಾಯಿಸಲೇಬೇಕು.
ಬ್ಯಾಟರಿ ಚಾರ್ಜ್ ಸರಿಯಾಗಿದೆಯಾ ಚೆಕ್ ಮಾಡಿ
ಸರಿಯಾಗಿ ಕೆಲಸ ಮಾಡುವ ಬ್ಯಾಟರಿಯನ್ನು ಹೊಂದಿರುವುದು ವರ್ಷದುದ್ದಕ್ಕೂ ಅಗತ್ಯವೇ ಆಗಿರುತ್ತದೆ. ಆದರೂ ಇದು ಮಳೆಗಾಲದಲ್ಲಿ ಇನ್ನಷ್ಟು ಹೆಚ್ಚಿನ ಆದ್ಯತೆ ಪಡೆಯುತ್ತದೆ. ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಚಾಲಕನ ಗೋಚರತೆ ಕಡಿಮೆಯಾಗುತ್ತದೆ. ಹೀಗಾಗಿ ಇತರ ಸಮಯಕ್ಕಿಂಗ ಹೆಚ್ಚಾಗಿ ವೈಪರ್ ಹಾಗೂ ಹೆಡ್ಲೈಟ್ ಸೇರಿದಂತೆ ಇತರ ಲೈಟ್ಗಳನ್ನು ಬಳಬೇಕಾಗುತ್ತದೆ. ಇದು ಬ್ಯಾಟರಿಯ ಮೇಲಿನ ಒತ್ತಡ ಹೆಚ್ಚಿಸುತ್ತದೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಬ್ಯಾಟರಿ ಚಾರ್ಜಿಂಗ್ ಸಾಮರ್ಥ್ಯ ಹಾಗೂ ಬಾಳಿಕೆಯನ್ನು ಪರೀಕ್ಷೆ ಮಾಡಿಕೊಳ್ಳಲೇಬೇಕು. ಸರಿಯಾಗಿರದಿದ್ದರೆ ಕಡ್ಡಾಯವಾಗಿ ಬದಲಾಯಿಸಬೇಕು.
ವೈರಿಂಗ್ಗಳ ಪರೀಕ್ಷೆ ಮಾಡಿಸಿಕೊಳ್ಳಿ
ಮಳೆಗಾದಲ್ಲಿ ನಿಮ್ಮ ವಾಹದ ವೈರಿಂಗ್ಗಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಅಸಮರ್ಪಕ ವೈರಿಂಗ್ ಅಥವಾ ಇನ್ಸುಲೇಷನ್ ಟೇಪ್ ಜಾರಿ ಹೋಗಿರುವ ಸಾಧ್ಯತೆಗಳು ಇದ್ದರೆ ತಕ್ಷಣ ರಿಪೇರಿ ಮಾಡಿಸಬೇಕು. ವೈರ್ಗಳ ತೆರೆದ ಭಾಗವು ನೀರಿನ ಸಂಪರ್ಕಕ್ಕೆ ಬಂದಾಗ ಶಾರ್ಟ್ ಸರ್ಕೀಟ್, ಶಾಕ್ ಸೇರಿದಂತೆ ನಾನಾ ರೀತಿಯ ಅಪಾಯಗಳು ಉಂಟಾಗಬಹುದು. ಆದ್ದರಿಂದ ಎದ್ದು ಕಾಣುತ್ತಿರುವ ಕೇಬಲ್ಗಳನ್ನು ರಿಪೇರಿ ಮಾಡಿಸಬೇಕು. ಆಫ್ಟರ್ ಮಾರ್ಕೆಟ್ ಫಿಟ್ಮೆಂಟ್ಗಳಿದ್ದರೆ ವೈರ್ಗಳು ಹೊರಗೆ ಕಾಣಿಸದಂತೆ ಸರಿಪಡಿಸಿಕೊಳ್ಳಬೇಕು.
ಲೈಟ್ಗಳ ರಿಪೇರಿ ಕಡ್ಡಾಯ ಮಾಡಿಸಿ
ಹೆಡ್ ಲೈಟ್ ಗಳು, ಟೈಲ್ಲೈಟ್ಗಳು ಫಾಗ್ ಲೈಟ್ಗಳು ಮತ್ತು ಟರ್ನ್ ಇಂಡಿಕೇಟರ್ಗಳು ಸೇರಿದಂತೆ ನಿಮ್ಮ ವಾಹನದ ಎಲ್ಲ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಮಳೆಗಾಲಕ್ಕೆ ಮೊದಲು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದು ಹವಾಮನಕ್ಕೆ ಸಂಬಂಧಿಸದ ವಿಚಾರವಾಗಿದ್ದರೂ ಮಳೆಗಾಲದಲ್ಲಿ ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಭಾರಿ ಮಳೆ ಮತ್ತು ಮೋಡ ಕವಿದ ವಾತಾವರಣವು ಗೋಚರತೆಗೆ ತೊಂದರೆ ಮಾಡಿದರೆ, ಇತರ ವಾಹನಗಳ ಸವಾರರಿಗೆ ನಿಮ್ಮ ಇರುವಿಕ ಕಾಣಿಸಲು ದೀಪಗಳು ಸರಿಯಾಗಿ ಕೆಲಸ ಮಾಡಬೇಕಾಗುತ್ತದೆ.
ಇದನ್ನೂ ಓದಿ : Coastal Karnataka travel: ಮಳೆ ಬಂದಾಗ ಈ ಕರಾವಳಿ ತೀರದ ತಾಣಗಳಿಗೆ ನೀವು ಒಂದು ಟ್ರಿಪ್ ಹೋಗ್ಲೇಬೇಕು!
ಮಳೆಗಾಲಕ್ಕೆ ಮೊದಲು ಎಲ್ಲ ಲೈಟ್ಗಳನ್ನು ಒಟ್ಟಿಗೆ ಆನ್ ಮಾಡಿ. ಹೆಡ್ಲೈಟ್ ಸೇರಿದಂತೆ ಯಾವುದಾದರೂ ಲೈಟ್ಗಳು ಮಸುಕಾಗಿದೆ ಎಂದು ಅನಿಸಿದರೆ ಬಲ್ಟ್ ಅಥವಾ ಲೈಟ್ ಅನ್ನೇ ಬದಲಿಸಿ. ಲೈಟ್ಗಳನ್ನು ಏಕಕಾಲಕ್ಕೆ ಚಾಲನೆ ಮಾಡುವ ಮೂಲಕ ಬ್ಯಾಟರಿ ಲೈಫ್ ಅನ್ನೂ ಪರೀಕ್ಷಿಸಬಹುದು. ಕೆಲವೊಂದು ಬಾರಿ ಲೈಟ್ನೊಳಗೆ ನೀರು ತುಂಬಿಕೊಳ್ಳುತ್ತದೆ. ಅಳವಡಿಕೆ ವೇಳೆ ಬಿರುಕ ಉಂಟಾಗಿದ್ದರೆ ಅಥವಾ ಕ್ಯಾಪ್ ಸರಿಯಾಗಿ ಕೂತಿರದಿದ್ದರೆ ಇಂಥ ಸಮಸ್ಯೆ ಇರುತ್ತದೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಇವೆಲ್ಲವೂ ರಿಪೇರಿ ಆಗಲೇಬೇಕು.
ಬ್ರೇಕ್ ಪ್ಯಾಡ್ಗಳು ಬದಲಿಸಿ
ಒದ್ದೆಯಾದ ರಸ್ತೆಗಳು ಕಾರಿನ ಬ್ರೇಕಿಂಗ್ ಅಂತರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಬ್ರೇಕ್ಗಳು ಎಲ್ಲ ಋತುವಿನಲ್ಲಿಯೂ ಚೆನ್ನಾಗಿರಬೇಕು ಎಂಬುದು ನಿಯಮ. ಆದರೆ, ಮಳೆಗಾದಲ್ಲಿ ಇದರ ಅಗತ್ಯ ಇನ್ನಷ್ಟು ಹೆಚ್ಚು. ಬ್ರೇಕ್ ಪ್ಯಾಡ್ಗಳು ಅಥವಾ ಶೂಗಳು ಸವೆದು ಹೋಗಿದ್ದರೆ ನಿರೀಕ್ಷಿತ ಅಂತರದಲ್ಲಿ ವಾಹನವನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದೇ ರೀತಿ ಚಲನೆ ಏರುಪೇರಾಗಿ ಸ್ಕಿಡ್ ಆಗುವ ಸಾಧ್ಯತೆಗಳೂ ಇರುತ್ತವೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಬ್ರೇಕ್ ಚೆನ್ನಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಖಾಲಿ ರಸ್ತೆಯಲ್ಲಿ ಒಂದು ಬಾರಿ ವೇಗವಾಗಿ ಕಾರು ಚಲಾಯಿಸಿ ಜೋರಾಗಿ ಬ್ರೇಕ್ ಒತ್ತಿ ನೋಡಿ. ಬ್ರೇಕ್ ಪೆಡಲ್ ಒಳಕ್ಕೆ ಹೋಗುತ್ತಿದೆ ಎಂದಾದರೆ ಸಮಸ್ಯೆ ಇದೆ ಎಂದರ್ಥ. ನಿಮ್ಮ ವಾಹನದ ಬ್ರೇಕಿಂಗ್ ಸಿಸ್ಟಮ್ ಅನ್ನು ವೃತ್ತಿಪರರ ಬಳಿ ಮಳೆಗಾಲಕ್ಕೆ ಮೊದಲು ಪರಿಶೀಲಿಸಿ. ಬೇಗ ಹಾಳಾದ ಭಾಗಗಳನ್ನು ಬದಲಿಸಿ.
ವೈಪರ್ಗಳು, ವಾಷರ್ಗಳು ಸರಿಯಾಗಿರಲಿ
ಮಾನ್ಸೂನ್ ಬರುವ ಮೊದಲ ವಾಹನದ ವೈಪರ್ಗಳು ಮತ್ತು ವಾಷರ್ ವ್ಯವಸ್ಥೆಯನ್ನು ಪರೀಕ್ಷಿಸಬೇಕು. ಇವೆರಡನ್ನೂ ಮಳೆಗಾಲದಲ್ಲಿ ಆಗಾಗ ಬದಲಿಸಬೇಕಾಗುತ್ತದೆ. ಕನ್ನಡಿಗೆ ಸ್ವಲ್ಪ ನೀರು ಹಾಕಿ ವೈಪರ್ ಚಾಲನೆ ಮಾಡಿ ನೋಡಿ. ವಿಂಡ್ ಸ್ಕ್ರೀನ್ ಮೇಲೆ ಯಾವುದೇ ಕೆಸರು ಅಥವಾ ನೀರಿನ ಸಾಲುಗಳನ್ನು ಒರೆಸುತ್ತಿಲ್ಲ ಎಂದಾದರೆ ವೈಪರ್ ಬ್ಲೇಡ್ ಕೆಟ್ಟು ಹೋಗಿದೆ ಎಂದರ್ಥ. ತಕ್ಷಣವೇ ಬದಲಿಸಿ. ಬೇಸಿಗೆಯ ಬಿಸಿಗೆ ವೈಪರ್ ಬ್ಲೇಡ್ನ ರಬ್ಬರ್ನಲ್ಲಿ ಬಿರುಕು ಬಿಟ್ಟಿರುತ್ತದೆ. ಇಂಥ ಬ್ಲೇಡ್ಗಳು ಮಳೆಗಾಲದಲ್ಲಿ ಪರಿಣಾಮಕಾರಿಯಾಗಿರುವುದಿಲ್ಲ.
ವಾಷರ್ಗಳು ವಿಂಡ್ಶೀಲ್ಡ್ ಗೆ ನೀರನ್ನು ಸರಿಯಾಗಿ ಸಿಂಪಡಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಿ. ಈ ವಾಷರ್ಗಳ ತೂತಿನಲ್ಲಿ ಕೊಳೆ ನಿಂತು ಕಟ್ಟಿಕೊಂಡಿರುವ ಸಾಧ್ಯತೆಗಳಿರುತ್ತದೆ. ಹಾಗಿದ್ದರೆ ನೀರು ಸರಿಯಾಗಿ ಪಂಪ್ ಆಗುವುದಿಲ್ಲ. ಮಳೆಗಾಲಕ್ಕೆ ಮೊದಲು ಇದನ್ನೂ ಬದಲಿಸಬೇಕು ಹಾಗೂ ವಾಷರ್ನ ನೀರಿನ ಮಟ್ಟವೂ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಿ..
ವಾಹನದಲ್ಲಿ ಸೋರಿಕೆ ಇದೆಯಾ ಪರೀಕ್ಷಿಸಿ
ಸನ್ರೂಫ್ ಗಳು, ಕಿಟಕಿಗಳು ಅಥವಾ ವಿಂಡ್ಶೀಲ್ಡ್ನಂತಹ ಗಾಜಿನ ಭಾಗಗಳನ್ನು ವಾಹನಗಳಿಗೆ ಅಳವಡಿಸಲು ಸುತ್ತಲೂ ರಬ್ಬರ್ಗಳನ್ನು ಹಾಕಿರುತ್ತಾರೆ. ಬೇಸಿಗೆಯ ಬಿಸಿಗೆ ಇದು ಒಡೆದು ಹೋಗಿ ಮಳೆಗಾಲದಲ್ಲಿ ಸೋರಿಕೆಯಾಗಲು ಪ್ರಾರಂಭಿಸುವುದು ಅಸಾಮಾನ್ಯವೇನಲ್ಲ. ಹೀಗಾಗಿ ಮಳೆಗಾಲಕ್ಕೆ ಮೊದಲು ಸರ್ವಿಸ್ ಮಾಡುವಾಗ ಈ ಭಾಗಗಳ ಬಗ್ಗೆ ಗಮನ ಇಡಿ.
ವಾಹನದ ಸುತ್ತಲೂ ಇರುವ ಡ್ರೈನೇಜ್ ರಂಧ್ರಗಳು ಮುಚ್ಚಿಹೋಗಿರಬಹುದು. ಈ ಜಾಗದಲ್ಲಿ ನೀರು ಸಂಗ್ರಹವಾದರೆ ತುಕ್ಕು ಹಿಡಿಯಲು ಕಾರಣವಾಗಬಹುದು. ಸರ್ವಿಸ್ ಮಾಡಿಸುವ ಸಮಯದಲ್ಲಿ ಸೋರಿಕೆಯ ಮೂಲವನ್ನು ಆದಷ್ಟು ಬೇಗ ಗುರುತಿಸಿ ಅವುಗಳನ್ನು ಸರಿಪಡಿಸುವುದು ಒಳ್ಳೆಯದು.
ಕಿತ್ತು ಹೋಗಿದ್ದರೆ ಪೇಂಟಿಂಗ್ ಮಾಡಿ
ವಾಹನದ ಮೇಲೆ ನಿರಂತರವಾಗಿ ತೇವಾಂಶ ನಿಂತಿದ್ದರೆ ತುಕ್ಕು ಹಿಡಿಯಲು ಕಾರಣವಾಗುತ್ತದೆ. ಕಾರಿನ ಸುತ್ತಲಿನ ರಬ್ಬರ್ ಸೀಲ್ಗಲ್ಲಿ ಉಂಟಾಗುವ ಸೋರಿಕೆ ತುಕ್ಕು ಹಿಡಿಯುವ ಮೂಲ. ಪೇಂಟ್ ಕೋಟ್ ಹಾನಿಗೊಳಗಾದ ಸ್ಥಳಗಳಲ್ಲೂ ತುಕ್ಕು ಹಿಡಿಯಬಹುದು. ಇಂಥ ಜಾಗಗಳು ಇದ್ದರೆ ಮಳೆಗಾಲಕ್ಕೆ ಮೊದಲು ಬೇಗ ದುರಸ್ತಿ ಮಾಡುವುದು ಉತ್ತಮ. ನಿಮ್ಮ ಕಾರಿನ ಕೆಳಭಾಗವನ್ನು ಸ್ವಚ್ಛವಾಗಿ ಮತ್ತು ರಸ್ತೆಯ ಧೂಳು ಮತ್ತು ಧೂಳಿನಿಂದ ಮುಕ್ತವಾಗಿಡಬೇಕು. ಏಕೆಂದರೆ ಇವು ಚಾಸಿಸ್ ಸವೆತಕ್ಕೆ ಕಾರಣವಾಗಬಹುದು. ಕಾರು ತೊಳೆದ ನಂತ ಪಾಲಿಶ್ ಹಾಕಬೇಕು. ಇದು ನಿಮ್ಮ ಕಾರನ್ನು ಹೊಳೆಯುವ ಮತ್ತು ಹೊಸದಾಗಿ ಕಾಣುವಂತೆ ಮಾಡುತ್ತದೆ ಹಾಗೂ ತುಕ್ಕು ಹಿಡಿಯಂತೆ ನೋಡಿಕೊಳ್ಳುತ್ತದೆ.
ನಿಯಮಿತ ಕಡ್ಡಾಯ ಸರ್ವಿಸ್ ಮಾಡಿಸಿ
ನಿಮ್ಮ ಕಾರನ್ನು ಮಳೆಗಾಲಕ್ಕೆ ಮೊದಲು ಕಡ್ಡಾಯ ಸರ್ವಿಸ್ ಮಾಡಿಸಿ. ಮೇಲೆ ಪಟ್ಟಿ ಮಾಡಿರುವ ಸಮಸ್ಯೆಗಳನ್ನು ಸರ್ವಿಸ್ ಸ್ಟೇಷನ್ನಲ್ಲಿ ಪತ್ತೆ ಮಾಡಬಹುದು. ನಿಮ್ಮ ಕಣ್ಣಿಗೆ ಬೀಳದ ಅಥವಾ ಗುರುತಿಸಲ ಸಾಧ್ಯವಾಗದ ಸಮಸ್ಯೆಗಳು ಇಲ್ಲಿ ಗೋಚರವಾಗುತ್ತವೆ. ವೃತ್ತಿಪರವಾಗಿ ಕಾರನ್ನು ಮಳೆಗಾಲಕ್ಕೆ ಸಿದ್ಧಪಡಿಸಿಕೊಳ್ಳಬಹುದು. ಅಂತಿಮವಾಗಿ ಉತ್ತಮ ಗುಣಮಟ್ಟದ ಪಾಲಿಶ್ ಹಾಗೂ ಅಂಡರ್ಕೋಟ್ಗಳೂ ಸಿಗಬಹುದು.
ಈ ಎಲ್ಲ ಸ್ಪೇರ್ಗಳನ್ನು ಜತೆಗಿಟ್ಟುಕೊಳ್ಳಿ
ಮಾನ್ಸೂನ್ ಸಂದರ್ಭದಲ್ಲಿ ಜೋರು ಮಳೆ ಏಕಾಏಕಿ ಬಿಸಿಲು ಇಂಥ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಮಳೆಗಾಲದ ಪ್ರಯಾಣದ ವೇಳೆ ಕೆಲವೊಂದು ಸ್ಪೇರ್ ಪಾರ್ಟ್ಗಳನ್ನು ಜತೆಗಿಟ್ಟುಕೊಳ್ಳುವುದು ಉತ್ತಮ. ವೈಪರ್ ಬ್ಲೇಡ್ಗಳು ಮತ್ತು ಫ್ಯೂಸ್ನಂಥ ಭಾಗಗಳು ಇಟ್ಟುಕೊಳ್ಳಿ. ರಸ್ತೆ ಬದಿ ನಿಲ್ಲಿಸುವಾಗ ರಿಫ್ಲೆಕ್ಟರ್ಗಳನ್ನು ಇಡಲು ಅದನ್ನೂ ತೆಗೆದುಕೊಂಡು ಹೋಗಿ. ವಾಹನಕ್ಕೆ ಸಂಬಂಧಿಸಿದ್ದು ಅಲ್ಲವಾದರೂ ಬಟ್ಟೆಗಳು, ಹೆಚ್ಚುವರಿ ಶೂಗಳು, ಛತ್ರಿ / ರೇನ್ ಕೋಟ್ ಮತ್ತು ಟವೆಲ್ಗಳನ್ನು ಜತೆಗಿಟ್ಟುಕೊಳ್ಳಿ.
ಆಟೋಮೊಬೈಲ್
Maruti Suzuki : ಮಾರುತಿಯ 5 ಡೋರ್ ಜಿಮ್ನಿ ಬಿಡುಗಡೆ, ಮಹೀಂದ್ರಾ ಥಾರ್ಗೆ ಪೈಪೋಟಿ ಖಚಿತ
ಎಂಟ್ರಿ ಲೆವೆಲ್ ಜಿಮ್ನಿ (Jimny) ಝೀಟಾ ವೇರಿಯೆಂಟ್ನ ಬೆಲೆಯು ಭಾರತದ ಎಕ್ಸ್ ಶೋರೂಂ ರೂ.12.74 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್ ಎಂಡ್ ಕಾರಿನ ಬೆಲೆಯು 15.5 ಲಕ್ಷ ರೂಪಾಯಿ .
ನವ ದೆಹಲಿ: ಮಾರುತಿ ಸುಜು (Maruti Suzuki)ಕಿ ಕಂಪನಿಯು ತನ್ನ ಬಹುನಿರೀಕ್ಷಿತ ಜಿಮ್ನಿ ಎಸ್ಯುವಿಯನ್ನು (Jimny) ಭಾರತದಲ್ಲಿ ಬಿಡುಗಡೆಗೊಳಿಸಿದೆ. ಎಂಟ್ರಿ ಲೆವೆಲ್ ಝೀಟಾ ವೇರಿಯೆಂಟ್ನ ಬೆಲೆಯು ಭಾರತದ ಎಕ್ಸ್ ಶೋರೂಂ ರೂ.12.74 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್ ಎಂಡ್ ಕಾರಿನ ಬೆಲೆಯು 15.5 ಲಕ್ಷ ರೂಪಾಯಿ . ಆಟೋ ಎಕ್ಸ್ ಪೋ 2023ರಲ್ಲಿ ಬಿಡುಗಡೆಯಾದಾಗಿನಿಂದ ಜಿಮ್ನಿಯ ಬುಕಿಂಗ್ ನಡೆಯುತ್ತಿದೆ ಮತ್ತು ಕಂಪನಿಯು ಈಗಾಗಲೇ 30,000ಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ. ಡೀಲರ್ ಮೂಲಗಳ ಪ್ರಕಾರ ಜೂನ್ ಮಧ್ಯದಿಂದ ಹಂತಹಂತವಾಗಿ ವಿತರಣೆಗಳು ಪ್ರಾರಂಭವಾಗುತ್ತವೆ.
ನಮ್ಮ ಮಾರುಕಟ್ಟೆಗಾಗಿ ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಐದು ಡೋರ್ಗಳ ಜಿಮ್ನಿಯನ್ನು ಪಡೆದ ಮೊದಲ ದೇಶ ಭಾರತ. ಜಿಮ್ನಿಯನ್ನು ಮಾರುತಿಯ ಗುರುಗ್ರಾಮ್ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಅಲ್ಲಿಂದಲೇ ಇತರ ದೇಶಗಳಿಗೆ ರಫ್ತು ಮಾಡಲಾಗುವುದು. ಗ್ರಾಹಕರು ಮಾಸಿಕ 33,550 ರೂಪಾಯಿ ಚಂದಾದಾರಿಕೆ ಮೂಲಕ ಜಿಮ್ನಿಯನ್ನು ತಮ್ಮದಾಗಿಸಿಕೊಳ್ಳಬಹುದು ಎಂದ ಕಂಪನಿ ಹೇಳಿದೆ.
ಮಾರುತಿ ಸುಜುಕಿ ಜಿಮ್ನಿ ಪವರ್ ಟ್ರೇನ್
ಜಿಮ್ನಿ ಎಸ್ಯುವಿಯಲ್ಲಿ 1.5 ಲೀಟರಿನ 4 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಇದೆ. ಇಉ 105 ಬಿಎಚ್ಪಿ ಪವರ್, ಹಾಗೂ 134 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. 5 ಸ್ಪೀಡ್ನ ಮ್ಯಾನುಯಲ್ ಅಥವಾ 4 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯಿದೆ. ಮಾರುತಿ ತನ್ನೆಲ್ಲ ಕಾರುಗಳಿಗೆ ಕೆ15 ಸಿ ಎಂಜಿನ್ ಬಳಸುತ್ತಿರುವ ನಡುವೆಯೇ ಜಿಮ್ನಿಯಲ್ಲಿ ಹಳೆಯ ಕೆ 15ಬಿ ಎಂಜಿನ್ ಅನ್ನು ಬಳಸುತ್ತದೆ. ಜಿಮ್ನಿ ಮ್ಯಾನುವಲ್ ಗೇರ್ಬಾಕ್ಸ್ ಹೊಂದಿರುವ ಕಾರು 16.94 ಕಿ.ಮೀ ಮೈಲೇಜ್ ಕೊಟ್ಟರೆ, ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿರುವ ಕಾರು 16.39 ಕಿ.ಮೀ ಮೈಲೇಜ್ ನೀಡುತ್ತದೆ.
ಜಿಮ್ನಿಯ ಆಫ್ರೋಡ್ಗೆ ಸಂಬಂಧಿಸಿ ಹೇಳುವುದಾದರೆ ಆಲ್ಗ್ರಿಪ್ ಪ್ರೊ 4ಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ಗೇರ್ಬಾಕ್ಸ್ನಲ್ಲಿ ನೀಡಲಾಗಿದೆ. ಅದೇ ರೀತಿ 2WD-ಹೈ, 4WD-ಹೈ ಮತ್ತು 4WD-ಲೊ ಮೋಡ್ನೊಂದಿಗೆ ನೀಡಲಾಗಿದೆ. ಲ್ಯಾಡರ್ ಫ್ರೇಮ್ ಚಾಸಿಸ್ ಅನ್ನು ಇದು ಹೊಂದಿ್ದು. 3ಲಿಂಕ್ ಬಲಿಷ್ಠ ಆಕ್ಸಲ್ ಸಸ್ಪೆನ್ಷನ್ ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಕೊಡಲಾಗಿದೆ. ಜಿಮ್ನಿ 5 ಡೋರ್ ಕಾರು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಮಾರುತಿ ಸುಜುಕಿ ಜಿಮ್ನಿಯ ವೈಶಿಷ್ಟ್ಯಗಳು
ಸ್ವಯಂಚಾಲಿತ ಎಲ್ಇಡಿ ಹೆಡ್ ಲ್ಯಾಂಪ್ಗಳು, 9.0 ಇಂಚಿನ ಸ್ಮಾರ್ಟ್ ಪ್ಲೇ ಪ್ರೊ + ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರ, ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೇರಿದಂತೆ ಜಿಮ್ನಿಯ ಆಲ್ಫಾ ಟ್ರಿಮ್ ಗರಿಷ್ಠ ಫೀಚರ್ಗಳನ್ನು ಪಡೆದುಕೊಂಡಿವೆ. ಆರು ಏರ್ ಬ್ಯಾಗ್ಗಳು, ಇಎಸ್ಪಿ ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಒಳಗೊಂಡಿರುವ ಸುರಕ್ಷತಾ ಫೀಚರ್ಗಳನ್ನು ಎಲ್ಲ ವೇರಿಯೆಂಟ್ಗಳಲ್ಲಿ ನೀಡಲಾಗಿದೆ.
ಜಿಮ್ನಿ ಒಟ್ಟು ಏಳು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳಲ್ಲಿ ಎರಡು ಡ್ಯುಯಲ್ ಟೋನ್. ಐದು ಬಾಗಿಲುಗಳ ಹೊರತಾಗಿಯೂ, ಜಿಮ್ನಿ ಇನ್ನೂ ನಾಲ್ಕು ಆಸನಗಳ ಮಾದರಿಯಾಗಿದೆ.
ಇಂಟೀರಿಯರ್ ವಿಚಾರಕ್ಕೆ ಬಂದರೆ ಡ್ಯಾಶ್ಬೋರ್ಡ್ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ. ಪ್ರಯಾಣಿಕರ ಸೀಟಿನ ಬದಿಯಲ್ಲಿ ಡ್ಯಾಶ್ಬೋರ್ಡ್ ಮೌಂಟೆಡ್ ಗ್ರಾಬ್ ಹ್ಯಾಂಡಲ್ಗಳಿವೆ. ಮಾರುತಿ ಸ್ವಿಫ್ಟ್ನಲ್ಲಿರುವ ಕೆಲವೊಂದು ಫೀಚರ್ಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಥಾರ್ ನಲ್ಲಿರುವಂತೆ, ಪವರ್ ವಿಂಡೋಗಳನ್ನು ನಿರ್ವಹಿಸುವ ಬಟನ್ ಗಳು ಮುಂಭಾಗದ ಎರಡು ಆಸನಗಳ ನಡುವೆ ಇವೆ.
ಮಾರುತಿ ಸುಜುಕಿ ಜಿಮ್ನಿ ವಿನ್ಯಾಸ
ಮಾರುತಿ ಜಿಮ್ನಿ 5 ಓಡರ್ 3,985 ಎಂಎಂ ಉದ್ದ ಮತ್ತು 2,590 ಎಂಎಂ ವೀಲ್ಬೇಸ್ ಹೊಂದಿದೆ. ಇದು 3 ಡೋರ್ ಜಿಮ್ನಿಗಿಂತ ಮಾದರಿಗಿಂತ 340 ಎಂಎಂ ಉದ್ದವಾಗಿದೆ. 1,645 ಎಂಎಂ ಅಗಲ ಮತ್ತು 1,720 ಎಂಎಂ ಎತ್ತರ ಹೊಂದಿದೆ. ನೇರವಾದ ಪಿಲ್ಲರ್ಗಳು , ಕ್ಲೀನ್ ಸರ್ಫೇಸಿಂಗ್, ವೃತ್ತಾಕಾರದ ಹೆಡ್ ಲ್ಯಾಂಪ್ಗಳು, ಸ್ಲ್ಯಾಟೆಡ್ ಗ್ರಿಲ್, ಚಂಕಿ ಆಫ್-ರೋಡ್ ಟೈರ್ಗಳು, ಫ್ಲೇರ್ಡ್ ವ್ಹೀಲ್ ಕಮಾನುಗಳು ಮತ್ತು ಟೈಲ್ ಗೇಟ್- ಮೌಂಟೆಡ್ ಸ್ಪೇರ್ ಟೈರ್ ಜಿಮ್ನಿಯ ನೋಟವನ್ನು ಹೆಚ್ಚಿಸಿದೆ. ಜಿಮ್ನಿ 5 ಡೋರ್ ಕಾರು 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, 195/80 ಸೆಕ್ಷನ್ ಟೈರ್ಗಳನ್ನು ಬಳಸಲಾಗಿದೆ.
ಮಾರುತಿ ಸುಜುಕಿ ಜಿಮ್ನಿ ಪ್ರತಿಸ್ಪರ್ಧಿ
ಜಿಮ್ನಿ ಭಾರತದಲ್ಲಿ ಆಫ್-ರೋಡರ್ಗಳ ಆಕರ್ಷಣೆಗೆ ಪೂರಕವಾಗಿದೆ. ನೇರ ಪ್ರತಿಸ್ಪರ್ಧಿ ಅಲ್ಲದಿದ್ದರೂ ಬೆಲೆ ಮತ್ತು ವಿನ್ಯಾಸದ ಕಾರಣಕ್ಕೆ ಮಹೀಂದ್ರಾ ಥಾರ್ (10.54 ಲಕ್ಷ – ರೂ. 16.77 ಲಕ್ಷ ರೂಪಾಯಿ ಬೆಲೆ) ಮತ್ತು ಫೋರ್ಸ್ ಗೂರ್ಖಾ (15.10 ಲಕ್ಷ ರೂಪಾಯಿ ಬೆಲೆ) ಜಿಮ್ನಿಯ ಪ್ರತಿಸ್ಪರ್ಧಿ ಕಾರುಗಳು.
ಆಟೋಮೊಬೈಲ್
Hero MotoCorp 2023ರ ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಬಿಡುಗಡೆ, ರೇಟ್ ಕೊಂಚ ಏರಿಕೆ!
2023ರ ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಸೆಲ್ಫ್ ಸ್ಟಾರ್ಟ್ ಮತ್ತು ಐ3ಎಸ್ ವೇರಿಯೆಂಟ್ ಹಾಗೂ ಟ್ಯೂಬ್ ಲೆಸ್ ಟೈರ್ನೊಂದಿಗೆ ರಸ್ತೆಗಿಳಿದಿದೆ.
ನವ ದೆಹಲಿ: ಹೀರೋ ತನ್ನ ಎಂಟ್ರಿ ಲೆವೆಲ್ 100 ಸಿಸಿ ಕಮ್ಯೂಟರ್ ಬೈಕ್ ಎಚ್ಎಫ್ ಡೀಲಕ್ಸ್ನ 2023ನೇ ಮಾಡೆಲ್ ಅನ್ನು ಮಾರುಕಟ್ಟೆಗೆ ಬಿಡಗುಡೆ ಮಾಡಿದೆ. ಹಲವಾರು ಸುಧಾರಣೆಗಳೊಂದಿಗೆ ಈ ಬೈಕ್ ಅನ್ನು ಪರಿಚಯಿಸಿರುವ ಕಂಪನಿ ದರವನ್ನು ಸ್ವಲ್ಪ ಮಟ್ಟಿಗೆ ಏರಿಕೆ ಮಾಡಿದೆ. ಅತ್ಯಾಧುನಿಕ ಫೀಚರ್ಗಳನ್ನು ನೀಡುವ ಮೂಲಕ ಹೆಚ್ಚು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಖುಷಿ ಪಡಿಸಲು ಮುಂದಾಗಿದೆ. ಈ ಬೈಕ್ನ ಎಕ್ಸ್ ಶೋರೂಮ್ ಬೆಲೆ 60,760 ರೂಪಾಯಿಂದ ಆರಂಭಗೊಂಡು 67,208 ರೂಪಾಯಿ ತನಕ ಇದೆ.
2023ರ ಎಚ್ಎಫ್ ಡೀಲಕ್ಸ್ ಬೈಕಿನಲ್ಲಿ ಟ್ಯೂಬ್ಲೆಸ್ ಟೈರ್ಗಳನ್ನು ನೀಡಲಾಗಿದೆ. ಐ3ಎಸ್ (ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿ) ಬೈಕಿನಲ್ಲಿ ಅಳವಡಿಸಲಾಗಿದೆ. ಇದು ಆರಂಭಿಕ ಶ್ರೇಣಿಯಿಂದ ಲಭ್ಯವಿದೆ. ಯುಎಸ್ಬಿ ಚಾರ್ಜರ್ ಅನ್ನು ಆಯ್ಕೆಯಾಗಿ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬೈಕ್ಗೆ 5 ವರ್ಷಗಳ ವಾರಂಟಿ ಮತ್ತು ಐದು ಉಚಿತ ಸರ್ವಿಸ್ ಸಿಗಲಿದೆ.
ಇದನ್ನೂ ಓದಿ : MotoGp : ಭಾರತದಲ್ಲಿ ನಡೆಯಲಿರುವ ಬೈಕ್ ರೇಸ್ ನೋಡುವ ಆಸೆಯೇ? ಟಿಕೆಟ್ ರೇಟ್ ಕೇಳಿದ್ರೆ ಗಾಬರಿ ಗ್ಯಾರಂಟಿ!
ಹೀರೋ ಎಚ್ಎಫ್ ಡಿಲಕ್ಸ್ ಬೈಕಿನಲ್ಲಿ ಏರ್ ಕೂಲ್ಡ್, 97 ಸಿಸಿ, ಸಿಂಗಲ್ ಸಿಲಿಂಡರ್ ‘ಸ್ಲೋಪರ್’ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8 ಬಿಎಚ್ಪಿ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ದೀರ್ಘಕಾಲ ಸೇವೆ ಸಲ್ಲಿಸುವ ಈ ಎಂಜಿನ್ ಈಗ ಒಬಿಡಿ -2 ಕಾಂಪ್ಲೈಂಟ್ ಹಾಗೂ ಇ20 ಪೆಟ್ರೋಲ್ಗೆ ಸಿದ್ಧಗೊಂಡಿದೆ. 4 ಸ್ಪೀಡ್ನ ಗೇರ್ ಬಾಕ್ಸ್ ಇದೆ. ಈ ಎಂಜಿನ್ ಅನ್ನು ಬೇಸಿಕ್ ಡಬಲ್ ಕ್ರೇಡಲ್ ಫ್ರೇಮ್ ಒಳಗೆ ಇರಿಸಲಾಗಿದ್ದು, ಸರಳ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಎರಡು ಸ್ಟೆಪ್ ಅಡ್ಜಸ್ಟ್ ಮಾಡಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಮೂಲಕ ಜೋಡಿಸಲಾಘಿದೆ. 9.6 ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿರುವ ಎಚ್ ಎಫ್ ಡಿಲಕ್ಸ್ 112 ಕೆ.ಜಿ ತೂಕವಿದೆ.
ವೇರಿಯೆಂಟ್ಗಳು ಯಾವುವು?
ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಡ್ರಮ್ ಕಿಕ್ ಕಾಸ್ಟ್, ಡ್ರಮ್ ಸೆಲ್ಫ್ ಕಾಸ್ಟ್ ಮತ್ತು ಐ3ಎಸ್ ಡ್ರಮ್ ಸೆಲ್ಫ್ ಕಾಸ್ಟ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಬೆಲೆಗಳು 60,760 ರೂ.ಗಳಿಂದ ಪ್ರಾರಂಭವಾಗಿ 67,208 ರೂ.ಗಳವರೆಗೆ (ಎಕ್ಸ್ ಶೋ ರೂಂ, ದೆಹಲಿ) ಇದೆ. ಹೀರೋ ಎಚ್ಎಫ್ ಡಿಲಕ್ಸ್ ಹೋಂಡಾ ಶೈನ್ 100 (ರೂ.64,900, ಪರಿಚಯಾತ್ಮಕ, ಎಕ್ಸ್ ಶೋರೂಂ, ಮುಂಬೈ) ಮತ್ತು ಬಜಾಜ್ ಪ್ಲಾಟಿನಾ 100 (ರೂ.67,475) ಬೈಕುಗಳಿಗೆ ಪೈಪೋಟಿ ನೀಡಲಿದೆ.
ಆಟೋಮೊಬೈಲ್
EV Battery Plant: ಗುಜರಾತಕ್ಕೆ ಜಾಕ್ಪಾಟ್, ಟಾಟಾದಿಂದ ಬೃಹತ್ ಇವಿ ಬ್ಯಾಟರಿ ಫ್ಯಾಕ್ಟರಿ, 13000 ಜನರಿಗೆ ಉದ್ಯೋಗ ಖಾತರಿ
EV Battery Plant: ಟಾಟಾ ಗ್ರೂಪ್ನ ಅಂಗಸಂಸ್ಥೆಯಾದ ಅಗರತಾಸ್, ಗುಜರಾತ್ನಲ್ಲಿ 13000 ಕೋಟಿ ರೂ. ವೆಚ್ಚದಲ್ಲಿ ಇವಿ ಬ್ಯಾಟರಿ ಘಟಕವನ್ನು ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಗುಜರಾತ್ ಸರ್ಕಾರದ ಜತೆಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.
ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕಂಪನಿಯು (Tata Group) ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳ (electric vehicle) ಬಳಕೆಯನ್ನು ಹೆಚ್ಚಿಸಲು ಮತ್ತು ಮೂಲ ಸೌಕರ್ಯವನ್ನು ಕಲ್ಪಿಸುವುದಕ್ಕಾಗಿ ಟಾಟಾ ಕಂಪನಿಯು ಗುಜರಾತ್ನಲ್ಲಿ (Gujarat) 13000 ಕೋಟಿ ರೂ.ವೆಚ್ಚದ ಬೃಹತ್ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕಾ ಘಟಕವನ್ನು (EV Battery Plant) ಆರಂಭಿಸಲಿದೆ. ಈ ಸಂಬಂಧ ಟಾಟಾ ಕಂಪನಿಯು ಗುಜರಾತ್ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಟಾಟಾ ಗ್ರೂಪ್ನ ಅಂಗಸಂಸ್ಥೆಯಾದ ಟಾಟಾ ಅಗರತಾಸ್ ಎನರ್ಜಿ ಸ್ಟೋರೇಜ್ ಸೊಲ್ಯೂಷನ್ಸ್ ಪ್ರೈವೇಟ್ (Agaratas Energy Storage Solutions Pvt) ಶುಕ್ರವಾರ 20 ಗಿಗಾವ್ಯಾಟ್ ಗಂಟೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ವಿದ್ಯುತ್-ವಾಹನ ಬ್ಯಾಟರಿ ಘಟಕವನ್ನು ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಇದು 13,000 ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಕಂಪನಿಯ ಜಾಲತಾಣದಲ್ಲಿ ತಿಳಿಸಲಾಗಿದೆ.
2070ರ ಹೊತ್ತಿಗೆ ಭಾರತವನ್ನು ಶೂನ್ಯ ಕಾರ್ಬನ್ ರಾಷ್ಟ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನು ಹಾಕಿಕೊಂಡಿದೆ. ಈ ವಿಷಯದಲ್ಲಿ ಭಾರತವು ಈಗಲೂ ಚೀನಾ, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳ ಹಿಂದೆಯೇ ಇದೆ. ಟಾಟಾ ಘಟಕವು ಗುಜರಾತ್ ಅನ್ನು ಲಿಥಿಯಂ-ಬ್ಯಾಟರಿ ಉತ್ಪಾದನೆಯಲ್ಲಿ ಮುಂಚೂಣಿಗೆ ತರಲಿದೆ. ರಾಜ್ಯದಲ್ಲಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಗುಂಪು ಸಹಾಯವನ್ನು ಪಡೆಯುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು, ಟಾಟಾ ಸಮೂಹದ ಪ್ರತಿನಿಧಿಯೊಬ್ಬರು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಟಾಟಾ ಗ್ರೂಪ್ನ ಈ ನಿರ್ಧಾರವು ಅದರ ಜಾಗ್ವಾರ್ ಲ್ಯಾಂಡ್ ರೋವರ್ ಘಟಕವು ಬ್ರಿಟನ್ನಲ್ಲಿ ಪ್ರಮುಖ ಇವಿ ಬ್ಯಾಟರಿ ಸ್ಥಾವರವನ್ನು ಸ್ಥಾಪಿಸಲು ಪರಿಗಣಿಸುತ್ತಿರುವ ಸಮಯದಲ್ಲಿ ಬಂದಿದೆ. ಬ್ರಿಟನ್ ಸರ್ಕಾರವು ಬೆಂಬಲ ಪ್ಯಾಕೇಜ್ ಅನ್ನು ನೀಡಿದ ನಂತರ ಟಾಟಾ ಸ್ಪೇನ್ಗಿಂತ ಇಂಗ್ಲೆಂಡ್ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಮುಂದಾಗಿದೆ ಎಂದು ಬ್ಲೂಮ್ಬರ್ಗ್ ಮೇನಲ್ಲಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Subsidy on E-Vehicle : ಎಲೆಕ್ಟ್ರಿಕ್ ವಾಹನಗಳಿಗೆ ಸಿಗಲಿದೆ 2.5 ಲಕ್ಷ ರೂ. ತನಕ ಸಬ್ಸಿಡಿ, ಇಲ್ಲಿದೆ ಡಿಟೇಲ್ಸ್
ಭಾರತದಲ್ಲೂ ಸಾಂಪ್ರದಾಯಿಕ ಇಂಧನ ಆಧಾರಿತ ವಾಹನಗಳ ಬದಲಿಗೆ ಬ್ಯಾಟರಿ ಆಧರಿತ ವಾಹನಗಳ ಬಳಕೆಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತಿದೆ. ಉತ್ಪಾದನಾ ಕಂಪನಿಗಳಿಗೂ, ಬಳಕೆದಾರರಿಗೂ ಸಾಕಷ್ಟು ಲಾಭಗಳನ್ನು ಮಾಡಿಕೊಡಲಾಗುತ್ತಿದೆ. ಆದರೆ, ದೇಶದಲ್ಲಿ ಇನ್ನೂ ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಾಗಿರುವ ಮೂಲಸೌಕರ್ಯದ ಕೊರತೆಗಳು ಎದ್ದು ಕಾಣುತ್ತಿದೆ.
ಆಟೋಮೊಬೈಲ್ನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಪ್ರಮುಖ ಸುದ್ದಿ1 hour ago
Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!
-
ಅಂಕಣ24 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ಕ್ರಿಕೆಟ್21 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್20 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ17 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್18 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
ಕರ್ನಾಟಕ16 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ
-
South Cinema18 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ