ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ - Vistara News

ಪ್ರಮುಖ ಸುದ್ದಿ

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

ದಶಮುಖ ಅಂಕಣ: ಸ್ಮಶಾನದ ವರ್ಣನೆಗಳನ್ನು ನೋಡಿದಾಗ, ಅದರ ಕಲ್ಪನೆ ಭೀಕರವೋ, ಅದು ತನ್ನೊಳಗೆ ಹುದುಗಿಸಿಕೊಳ್ಳುವ ಸಾವು ಭೀಕರವೋ ಎಂಬುದೇ ತಿಳಿಯದೆ ಗೊಂದಲಕ್ಕೆ ಬಿದ್ದರೆ ಅಚ್ಚರಿಯಿಲ್ಲ.

VISTARANEWS.COM


on

graveyard
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಒಂದಿಷ್ಟು ಮಕ್ಕಳು ಕಥೆ ಕೇಳುತ್ತಿದ್ದರು. ಕಥೆಯೊಂದರ ನಡುವೆ ಸ್ಮಶಾನದ ಪ್ರಸ್ತಾಪ ಬಂತು. ಮಕ್ಕಳೆಲ್ಲರೂ ಮುಂದೇನಾಗುವುದೆಂದು ಗೊತ್ತಿರುವವರಂತೆ, ʻಯಬ್ಬಾ…!ʼ ಎಂದು ಕಣ್ಣು-ಬಾಯಿ ಬಿಡುತ್ತಾ ಹುಬ್ಬೇರಿಸಿದರು. ಅಲ್ಲೊಂದು ಭೂತ ಬರುತ್ತದೆಂದು ಅವರಾಗಲೇ ನಿರ್ಧರಿಸಿಬಿಟ್ಟಿದ್ದರು. ಹಾಗಾಗಿ ಉಸಿರು ಹಿಡಿದು, ಪಕ್ಕದಲ್ಲಿ ಕೂತವರ ಕೈಯೂ ಹಿಡಿದು, ಭೂತಚೇಷ್ಟೆಗೆ ತಯಾರಾಗಿಯೇ ಕಥೆಯಲ್ಲಿರುವ ಸ್ಮಶಾನ ಹೊಕ್ಕಿದ್ದರು. ಕಥೆಯಲ್ಲಿ ಭೂತ ಬಂತಾ, ಬಂದೇನು ಮಾಡಿತು ಇತ್ಯಾದಿಗಳು ನಮಗಿಲ್ಲಿ ಬೇಡದಿದ್ದರೂ, ಅವರ ವರ್ತನೆಗಳು ಒಂದಿಷ್ಟು ಚಿಂತನೆಗೆ ಹಚ್ಚಿದ್ದು ಹೌದು. ಸ್ಮಶಾನವೆಂದರೆ ನಾವಷ್ಟು ಇರಿಸುಮುರುಸು ಮಾಡಿಕೊಳ್ಳುತ್ತೇವಲ್ಲ, ಯಾಕೆ? ಆ ಮಕ್ಕಳ ಹಾಗೆ, ಸ್ಮಶಾನದೊಂದಿಗೆ ನಮ್ಮ ಭಾವಕೋಶದಲ್ಲಿ ಅಡಗಿ ಹೆದರಿಸುವ ಭೂತಕ್ಕೋ ಅಥವಾ ವ್ಯಕ್ತಿಗಳೇ ಸತ್ತು ಭೂತಕಾಲ ಸೇರುತ್ತಾರೆಂಬ ಸತ್ಯಕ್ಕೋ? ಯಾವುದು ನಮಗೆ ಹೆಚ್ಚು ಅಹಿತವಾಗುವ ವಿಷಯ ಮತ್ತು ಯಾಕೆ?

ಬದುಕು ಎಷ್ಟು ನಶ್ವರ ಎಂಬುದನ್ನು ಇಲ್ಲಿ ಹೇಳುತ್ತಿಲ್ಲ; ಸಾವಿನ ಬಗ್ಗೆ ಚರ್ಚಿಸುವುದಕ್ಕೆ ಇಲ್ಲಿ ಖಂಡಿತಕ್ಕೂ ಕುಳಿತಿಲ್ಲ; ಈ ಬಗ್ಗೆ ಮಾತಾಡಲಿ ಬಿಡಲಿ, ಅದೊಂದು ನಿತ್ಯ ಸತ್ಯ ಎಂಬುದು ಎಲ್ಲರಿಗೂ ತಿಳಿದಿದ್ದೇ. ಸ್ಮಶಾನದ ಬಗ್ಗೆ, ಅಲ್ಲಿದೆಯೆಂದು ಭಾವಿಸಲಾದ ಸಾವಿನಾಚೆಯ ಬದುಕುಗಳ ಬಗ್ಗೆ ಹೇಳಿ ಬೆದರಿಸುವ ಉದ್ದೇಶವಂತೂ ಮೊದಲೇ ಇಲ್ಲ. ಹಾಗಾದರೆ ಸ್ಮಶಾನದ ಬಗೆಗಿನ ಪ್ರಸ್ತಾಪ ಬಂದಿದ್ದೇಕೆ? ನಮಗೆಷ್ಟೇ ಅಹಿತವಾದ ವಿಷಯಗಳೂ ಬದುಕಿನಲ್ಲಿ ನಮಗರಿವಿಲ್ಲದಂತೆಯೇ ಹಾಸುಹೊಕ್ಕಾಗಿ ಬರುತ್ತವಲ್ಲ ಎಂಬ ಸೋಜಿಗವೊಂದು ನಿಶ್ಚಿತವಾಗಿ ಇದರ ಹಿಂದಿದೆ. ನಮಗಿಷ್ಟವಾಗದ ವಿಷಯವನ್ನೇ ಮಣಮಣಿಸುತ್ತಿದ್ದರೆ ಆ ಕುರಿತ ನಮ್ಮ ಸಹಿಷ್ಣುತೆ ಹೆಚ್ಚಾದೀತೇ ಎಂಬ ಜಿಜ್ಞಾಸೆಯೂ ಈ ಲಹರಿಗೆ ಕಾರಣವಾಗಿರಬಹುದು.

ಹದಿನೆಂಟನೇ ಶತಮಾನದ ಕೆಲವು ಇಂಗ್ಲಿಷ್‌ ಕವಿಗಳು ನೆನಪಾಗುತ್ತಿದ್ದಾರೆ. ಸ್ಮಶಾನ ಕವಿಗಳು ಅಥವಾ ಗ್ರೇವ್‌ಯಾರ್ಡ್‌ ಪೊಯೆಟ್ಸ್‌ ಎಂದೆಲ್ಲಾ ಕರೆಯಲಾಗುತ್ತಿತ್ತು ಇವರನ್ನು. ಬದುಕಿನ ನಶ್ವರತೆಯನ್ನು ಬಿಂಬಿಸುತ್ತಾ ಅಧ್ಯಾತ್ಮದೆಡೆಗಿನ ತುಡಿತವನ್ನು ಹೇಳುವಂಥ ಕವಿತೆಗಳು ಈ ಸಾಹಿತ್ಯ ಪ್ರಕಾರದಲ್ಲಿದ್ದವು. ಮುಖ್ಯವಾಗಿ ನೋವು, ದುಃಖ, ವಿಯೋಗದಂಥ ಭಾವತೀವ್ರತೆಯ ವಿಷಯಗಳ ಬಗ್ಗೆ ಹೇಳುವುದಕ್ಕೆ ಸ್ಮಶಾನ, ಗೋರಿ, ಶವಪೆಟ್ಟಿಗೆ ಇತ್ಯಾದಿಗಳನ್ನು ರೂಪಕಗಳಂತೆ ಈ ಕವಿಗಳು ಬಳಸಿಕೊಂಡಿದ್ದರು. ರಾಬರ್ಟ್‌ ಬ್ಲೇರ್‌, ಥಾಮಸ್‌ ಗ್ರೇ, ಎಡ್ವರ್ಡ್‌ ಯಂಗ್ ಮುಂತಾದ ಹೆಸರಾಂತ ಕವಿಗಳು ಸ್ಮಶಾನ ಮತ್ತು ಸಾವನ್ನು ತಮ್ಮ ಅಭಿವ್ಯಕ್ತಿ ರೂಪಕವಾಗಿ ಬಳಸಿದ್ದಾರೆ.

ಇಂಗ್ಲಿಷ್‌ ಕವಿಗಳು ಮಾತ್ರವೇ ಅಲ್ಲ, ನಮ್ಮದೇ ನೆಲದ ಕವಿಗಳು ಸಹ ಸ್ಮಶಾನದ ಉಲ್ಲೇಖಗಳನ್ನು ಬಳಸಿದ್ದಾರೆ. ಈ ನಿಟ್ಟಿನಲ್ಲಿ ಫಕ್ಕನೆ ನೆನಪಾಗುವುದು ರಾಘವಾಂಕ ಕವಿಯ ʻಹರಿಶ್ಚಂದ್ರ ಕಾವ್ಯʼ. ಮಡಿದ ಮಗನಿಗಾಗಿ ವಿಲಪಿಸುತ್ತಾ, ಆತನನ್ನು ಸ್ಮಶಾನಕ್ಕೆ ಹೊತ್ತು ತರುತ್ತಾಳೆ ಆತನ ತಾಯಿ, ಹರಿಶ್ಚಂದ್ರನ ಮಡದಿ ಚಂದ್ರಮತಿ. ರಾತ್ರಿಯ ಆ ಹೊತ್ತು ಸ್ಮಶಾನ ಹೇಗಿತ್ತು ಎಂಬುದನ್ನು ರಾಘವಾಂಕ ಹೀಗೆ ವರ್ಣಿಸುತ್ತಾನೆ-

“ಹಸಿಯ ತೊಗಲುಡಿಗೆ ಹಿಂಡಿಲುಗರುಳ ಚಲ್ಲಣದ/ ಕುಸುರಿಗಂಡದ ತೊಂಡಲಸ್ಥಿಗಳ ತೊಡಿಗೆ ದ/ ಟ್ಟಿಸುವ ರಕ್ತದ ಭಾರಿಗಣ್ಣಾಲಿಗಳ ಸೊಡರು ಕಾಳಿಜದ ಚರುಗುಗಡುಬು|| ಸಸಿದು ಕೊಬ್ಬಿದ ಮಿದುಳ ರಾಸಿಗೂಳೆಸೆಯೆ ಮಾ/ ಮಸಕದಿಂ ಚಾಮುಂಡಿ ಕಮಲಾಕ್ಷಿಯರ ನಡುವೆ/ ಹೊಸತನಿಕ್ಕುವ ಭೂತವೇತಾಳರಾಡಿದರು ಮಾನಿನಿಯ ಮನ ಬೆದರಲು||”

(ಸ್ಥೂಲಾರ್ಥದಲ್ಲಿ ಹೇಳುವುದಾದರೆ- ಹಸಿ ಚರ್ಮದ ಉಡಿಗೆ, ಕರುಳುಗೊಂಚಲಿನ ಕುಸುರಿಯ ಆಭರಣ, ಅಸ್ಥಿ ಕಿರೀಟದ ತೊಡಿಗೆ, ರಕ್ತಗೆಂಪು ಬಣ್ಣದ ಸೊಡರಿನಂಥ ಕಣ್ಣು, ಪಿತ್ತಜನಕಾಂಗದ ಬಲಿ ಪಡೆದ, ಕೊಬ್ಬಿದ ಮಿದುಳಿನ ರಾಶಿಗಳನ್ನೇ ಊಟವಾಗಿಸಿಕೊಂಡಿರುವ ಕಡುಕೋಪದ ಚಾಮುಂಡಿ ಕಮಲಾಕ್ಷಿಯರ ನಡುವೆ ಹೊಸದಾಗಿ ಸೇರಿದ್ದ ಭೂತಬೇತಾಳಗಳು ಮಾನಿನಿಯನ್ನು ಬೆದರಿಸುವಂತೆ ವರ್ತಿಸುತ್ತಿದ್ದವು)

ಇಲ್ಲೀಗ ಹೆದರಿಸುವಂಥ ವರ್ಣನೆಗಳು ಮಾತ್ರವೇ ಅಲ್ಲ, ಭಯಾನಕ, ಭೀಕರ, ಭೀಭತ್ಸ ಎನಿಸುವಂಥ ಬಣ್ಣನೆಗಳು ಕಾಣುತ್ತವೆ. ಖಂಡಿತಕ್ಕೂ ಇಂಥವನ್ನು ಕವಿ ಖುದ್ದಾಗಿ ಕಂಡಿರಲಾರ. ಆದರೆ ಈ ವರ್ಣನೆಗಳನ್ನು ನೋಡಿದಾಗ, ಸ್ಮಶಾನವೆಂಬ ಕಲ್ಪನೆ ಭೀಕರವೋ, ಅದು ತನ್ನೊಳಗೆ ಹುದುಗಿಸಿಕೊಳ್ಳುವ ಸಾವು ಭೀಕರವೋ ಎಂಬುದೇ ತಿಳಿಯದೆ ಗೊಂದಲಕ್ಕೆ ಬಿದ್ದರೆ ಅಚ್ಚರಿಯಿಲ್ಲ.

ಕುವೆಂಪು ಅವರ ʻಶ್ಮಶಾನ ಕುರುಕ್ಷೇತ್ರʼ ನಾಟಕವನ್ನೂ ಇಲ್ಲಿ ಉಲ್ಲೇಖಿಸಬಹುದು. ಮೊದಲ ಮಹಾಯುದ್ಧದ ನಂತರ ಬರೆದಂಥ ಈ ನಾಟಕವು, ಯುದ್ಧಗಳು ಹೇಗೆ ವಿಶಾಲವಾದ ಸ್ಮಶಾನಗಳನ್ನು ಹುಟ್ಟು ಹಾಕುತ್ತವೆ ಎಂಬುದನ್ನು ವಿಸ್ತರಿಸುತ್ತದೆ. ವಿನಾಶದ ಪರಿಕಲ್ಪನೆಗೆ ಪರ್ಯಾಯವಾಗಿ ಸ್ಮಶಾನವೆಂಬ ಪ್ರತಿಮೆ ಇಲ್ಲಿ ರೂಪುಗೊಂಡಿದೆ. ಆದರೆ ಇದಕ್ಕೆ ರೂಪಕವಾಗಿ ನಾಟಕದಲ್ಲಿ ಮೂಡಿಬಂದಿರುವುದು ಮಹಾಭಾರತದ ಕುರುಕ್ಷೇತ್ರ. ಯುದ್ಧಭೂಮಿಗಳ ಭೀಕರತೆಯನ್ನು ವಿವರಿಸುವುದಕ್ಕೆ ಭೂತಬೇತಾಳಗಳ ಕಲ್ಪನೆಯನ್ನು ಪಂಪನಾದಿಯಾಗಿ ಹಲವಾರು ಕವಿಗಳು ಬಳಸಿದ್ದಾರೆ.

ಥೋ! ಇದೆಂಥಾ ಸುಡುಗಾಡು ವರ್ಣನೆಗಳು, ಮಾಡೋಕೆ ಬೇರೆ ಕೆಲಸ ಇಲ್ವೇ ಎಂದು ಬೈಯ್ದುಕೊಂಡರೆ… ವಿಷಯ ಸುಡುಗಾಡಿನದ್ದೇ ಅಲ್ಲವೆ! ಈ ಕಠೋರ ವರ್ಣನೆಗಳನ್ನು ಬಿಟ್ಟು ಜನಮಾನಸದಲ್ಲಿ ಸ್ಮಶಾನದ ಬಗೆಗಿನ ಕಲ್ಪನೆಗಳನ್ನು ಗಮನಿಸೋಣ. ಜನಪದರಲ್ಲಿ ಬೈಗುಳಕ್ಕೆ ಅತಿ ಪ್ರಿಯವಾದ ವಿಷಯವೆಂದರೆ ಸ್ಮಶಾನ ಮತ್ತು ಹೆಣ! ಯಾವುದಕ್ಕೂ ಸಲ್ಲದವನನ್ನು ʻಮನೆಗೆ ಮನುಷ್ಯನಲ್ಲ, ಮಸಣಕ್ಕೆ ಹೆಣವಲ್ಲʼ ಎಂದು ಮೂದಲಿಸುವುದಿದೆ. ಪ್ರಾಂತ್ಯಾವಾರು ಮಟ್ಟದಲ್ಲಿ ಬೈಗುಳಗಳನ್ನು ವಿಂಗಡಿಸಿದರೆ, ಹಳೆ ಮೈಸೂರಿನ ಜನ ಈ ವಿಷಯದಲ್ಲಿ ಗಟ್ಟಿಗರು. (ಉತ್ತರ ಕರ್ನಾಟಕದ ಬೈಗುಳದ ರೀತಿಗಳೇ ಬೇರೆ. ಅದಿಲ್ಲಿ ಬೇಡ ಬಿಡಿ) ʻಅವ್ನ ಹೆಣ ಎತ್ತʼ ಎನ್ನುವುದರಿಂದ ಶುರು ಮಾಡಿದರೆ, ʻಮುಖಾ ಮುಚ್ಚ, ಹೆಜ್ಜೆ ಅಳಸ, ಹೊಗೆ ಹಾಕ, ಹೊತ್ಗಂಡ್ಹೋಗ, ಬಾಯಿಗ್‌ ಮಣ್ಹಾಕ, ಕರಿನಾಗ ಕಚ್ಚ, ಮನೆ ಮಶಾಣಾಗ, ಎಕ್ಕುಟ್ಹೋಗ (ಎಕ್ಕ-ಹುಟ್ಟಿ-ಹೋಗ, ಅಂದರೆ ನಾಶವಾಗು), ಸೀಮೆ ಸುಡುಗಾಡಾಗ…ʼ ಎಂದು ಸಹಸ್ರನಾಮಾವಳಿಯಂತೆ ಸಾವಿನ ಶಾಪಾವಳಿಯನ್ನೇ ಕರೆಯಬಲ್ಲರು. ಅದರಲ್ಲೂ ಕೆಲವು ಹಳೆಯ ತಲೆಮಾರಿನವರು ರಾಗವಾಗಿ ಬೈಗುಳ ಪ್ರಾರಂಭಿಸಿದರೆಂದರೆ ತಾಸುಗಟ್ಟಲೆ ತಡೆ ರಹಿತವಾಗಿ ಬೈಯಬಲ್ಲರು. ಈ ಬೈಗುಳಗಳು ಹಾರೈಸುವುದು ಸಾವು, ನಾಶವನ್ನೇ ಹೊರತು ಮತ್ತೇನಲ್ಲ.

ಯಾವುದೇ ಜನಪದ ಕಲ್ಪನೆಗಳಲ್ಲಿ, ಮಕ್ಕಳ ಕಥೆಗಳಲ್ಲಿ ಸ್ಮಶಾನಕ್ಕೂ, ಹುಣಸೇಮರಕ್ಕೂ, ಭೂತಕ್ಕೂ, ಒಂಥರಾ ನಂಟು. ಊರಾಚೆಗೊಂದು ಸ್ಮಶಾನ, ಅಲ್ಲೊಂದು ಭೂತದಂಥ ಒಂಟಿ ಹುಣಸೆಮರ, ಅದರಲ್ಲೊಂದು ನೇತಾಡುವ ದೆವ್ವ… ಇಂಥ ಕಲ್ಪನೆಯ ಕಥೆಗಳನ್ನು ಬಾಲ್ಯದಲ್ಲಿ ಲೆಕ್ಕವಿಲ್ಲದಷ್ಟು ಕೇಳಿದ್ದಿದೆ. ʻಒಂದಾನೊಂದು ಊರಿನ ಹೊರಗೆ ಭಾರೀ ಹುಣಸೆಮರ/ ಅದರಲ್ಲಿತ್ತು ಒಂದಾನೊಂದು ದೆವ್ವ ಹುಚ್ಚಿ ಥರʼ ಎಂಬ ಎಚ್‌.ಎಸ್‌. ವೆಂಕಟೇಶಮೂರ್ತಿಗಳ ಕವನ ಮಕ್ಕಳಿಗೆ ಕಚುಗುಳಿ ಇಡುವಂತಿದೆ.

ಈ ಹೊತ್ತಿನಲ್ಲಿ ಸುಡುಗಾಡು ಸಿದ್ಧರು ನೆನಪಾಗುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಜಾದೂಗಾರರಂತೆ ಕಂಡು ಬರುತ್ತಿದ್ದ ಅಲೆಮಾರಿ ಜನಾಂಗವಿದು. ಈಗ ಇವರ ಮುಂದಿನ ತಲೆಮಾರುಗಳು ವಿದ್ಯಾಭ್ಯಾಸದೆಡೆಗೆ ಹೊರಳಿರುವುದರಿಂದ ಇವರ ಜೀವನಕ್ರಮ ಬದಲಾಗುತ್ತಿದೆ. ಹಣೆಗೆ ಬೂದಿ ಬಳಿದುಕೊಂಡು, ಕೊರಳಿಗೆ ರುದ್ರಾಕ್ಷಿ ಧರಿಸಿ, ಶುಭಾಶುಭಗಳ ಭವಿಷ್ಯ ಹೇಳುತ್ತಾ, ಇಂದ್ರಜಾಲಿಕರಂತೆ ಏನೇನೋ ಜಾದೂ ಮಾಡುವ ಇವರು, ಸುಡುಗಾಡುಗಳಲ್ಲಿದ್ದು ಸಿದ್ಧಿಗಳನ್ನು ಕರಗತ ಮಾಡಿಕೊಳ್ಳುತ್ತಾರೆಂಬ ಪ್ರತೀತಿಯಿದೆ. ಸುಡುಗಾಡುಗಳೆಂದರೆ ಬರೀ ಇಂಥ ಭಾವಗಳೇ ಬರಬೇಕಿಲ್ಲ ಎಂಬಂತೆ, ಶಿರಸಿಯ ʻನೆಮ್ಮದಿ ಕುಟೀರʼ ಕೆಲಸ ಮಾಡಬಹುದು; ʻಸ್ಮಶಾನವೇ ನಮ್ಮ ನಿತ್ಯ ಭೇಟಿಯ ತಾಣʼ ಎನ್ನುವ ಗೆಳೆಯರ ಬಳಗವೂ ಇರಬಹುದು.

ಇದನ್ನೂ ಓದಿ: ದಶಮುಖ ಅಂಕಣ: …. ನೋಡಲಿಕ್ಕೆ ಹೋಗೋಣು ಬಾರೆ!

ಭಾಷೆಯ ಜಾಯಮಾನದಲ್ಲೂ ಇದರ ಬಗ್ಗೆ ಸಾಕಷ್ಟು ವಿಚಾರಗಳು ಚಾಲ್ತಿಯಲ್ಲಿವೆ. ಭಯಾನಕ ನಿಶ್ಶಬ್ದವನ್ನು ʻಸ್ಮಶಾನ ಮೌನʼ, ಸತ್ತಾಗ ಹುಟ್ಟುವ ವೈರಾಗ್ಯವನ್ನು ʻಸ್ಮಶಾನ ವೈರಾಗ್ಯʼ, ಭೀಕರವಾದ ಅವಸ್ಥೆಯನ್ನು ʻಸ್ಮಶಾನ ಸದೃಶ್ಯʼ, ಯಾರಿಗೂ ಬೇಡದ್ದನ್ನು ʻಮಸಣದ ಹೂವುʼ, ಕಡೆಯ ಯಾತ್ರೆಯನ್ನು ʻಸ್ಮಶಾನ ಯಾತ್ರೆʼ… ನೋಡಿ, ನಮಗೆ ಅಹಿತವಾಗುವ ವಿಷಯವನ್ನೇ ಎಷ್ಟೆಲ್ಲ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ ನಾವು.

ಇಷ್ಟು ಹೇಳಿದ ಮೇಲೆ ಸ್ಮಶಾನವಾಸಿಯ ಬಗ್ಗೆ ಹೇಳದಿದ್ದರೆ ವಿಷಯವೇ ಅಪೂರ್ಣ. ಮೊದಲೆಲ್ಲ ಊರಿನ ದಕ್ಷಿಣ ದಿಕ್ಕಿನಲ್ಲಿ ಸ್ಮಶಾನಗಳು ಇರುತ್ತಿದ್ದುದರಿಂದ ಈ ದಿಕ್ಕೇ ಅಶುಭ ಎನ್ನುವ ಕಲ್ಪನೆ ಜನಮಾನಸದಲ್ಲಿದೆ. ಹಾಗೆಂದು ʻಆತʼ ದಕ್ಷಿಣ ದಿಕ್ಕಿನ ಒಡೆಯ. ಹೆಸರು ರುದ್ರ, ಇರುವುದು ರುದ್ರಭೂಮಿಯಲ್ಲಿ. ರುಂಡಮಾಲಿ, ಕಪಾಲಿ, ಭೂತಗಣಗಳ ನಾಥ, ಬೂದಿಬಡುಕ… ಇಂಥ ಹಲವು ಹೆಸರುಗಳು ಆತನಿಗೆ. ಜಗತ್ತಿನಲ್ಲಿ ಸೃಷ್ಟಿ ಮತ್ತು ಸ್ಥಿತಿಯನ್ನು ಕಾಪಾಡುವ ಹೊಣೆ ಬ್ರಹ್ಮ ಮತ್ತು ವಿಷ್ಣುವಿಗಿದ್ದರೆ ಈತನಿಗೆ ಲಯದ ಕೆಲಸ. ಹೌದು, ಲಯಕರ್ತನಾದ ಶಿವನ ಬಗೆಗಿನ ಮಾತಿದು. ಇನ್ನೇನು ಬರಲಿರುವ ಶಿವರಾತ್ರಿಯ ಹಿನ್ನೆಲೆಯಲ್ಲಿ ʻಲಯʼ ಎನ್ನುವುದಕ್ಕಿರುವ ಘನತೆಯನ್ನು ಗಮನಿಸಬೇಕಿದೆ ನಾವು. ಜಗತ್ತಿನ ಮುಂದುವರಿಕೆಗೆ ಇದು ಅಗತ್ಯ. ಹಾಗೆಂದೇ ʻಇಲ್ಲʼ ಎನ್ನುವುದಕ್ಕೆ ನಮ್ಮ ಭಾವಕೋಶದಲ್ಲಿ ಯಾವುದೇ ಅರ್ಥವಿದ್ದರೂ, ಅದಕ್ಕೊಂದು ದೈವತ್ವವನ್ನು ಕಲ್ಪಿಸಿದ್ದೇವೆ; ಅದಕ್ಕೊಂದು ಅಧ್ಯಾತ್ಮವನ್ನೂ ಸೃಷ್ಟಿಸಿದ್ದೇವೆ. ʻಮದುವೆಗೋ ಮಸಣಕೋ ಹೋಗೆಂದ ಕಡೆ ಹೋಗು/ ಪದ ಕುಸಿಯೆ ನೆಲವಿಹುದು ಮಂಕುತಿಮ್ಮʼ ಎಂಬುದರ ಅರ್ಥವನ್ನು ಈ ಹಿನ್ನೆಲೆಯಲ್ಲೂ ಗ್ರಹಿಸಬಹುದೇ.

ಇದನ್ನೂ ಓದಿ: ದಶಮುಖ ಅಂಕಣ: ಬಾಗಿಲನು ತೆರೆದು…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Karnataka Rain News: ಎಡಕುಮೇರಿಯಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ, ಬೆಂಗಳೂರು- ಮಂಗಳೂರು ರೈಲ್ವೆ ಸಂಚಾರ ಬಂದ್‌

Karnataka Rain News: ಕಿಲೋಮೀಟರ್ ನಂಬರ್ 63ರಲ್ಲಿ ರೈಲ್ವೆ ಹಳಿಯ ಮೇಲೆ‌ ನಿನ್ನೆ ರಾತ್ರಿ ಮಣ್ಣು ಕುಸಿತವಾಗಿತ್ತು. ಇದರಿಂದಾಗಿ ಬೆಂಗಳೂರು- ಹಾಸನ- ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಇಲಾಖೆ ಬಂದ್ ಮಾಡಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲು ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ.

VISTARANEWS.COM


on

shiradi ghat train karnataka rian news
Koo

ಹಾಸನ: ಹಾಸನ ಜಿಲ್ಲೆಯ (Hassan news) ಮಲೆನಾಡು ‌ಭಾಗದಲ್ಲಿ ಮಳೆಯ ಆರ್ಭಟ (Karnataka Rain News) ಮುಂದುವರಿದಿದ್ದು, ಶಿರಾಡಿ ಘಾಟಿಯ (Shiradi Ghat) ರೈಲ್ವೆ ಹಳಿಯ (Railway Track) ಮೇಲೆ ಮಣ್ಣು ಕುಸಿತ (landslide) ಆಗಿದೆ. ಸಕಲೇಶಪುರ (Sakaleshpur) ತಾಲ್ಲೂಕಿನ ಕಡಗರವಳ್ಳಿ-ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದ್ದು, ಈ ಮಾರ್ಗದ ಎಲ್ಲಾ ರೈಲುಗಳ‌ ಸಂಚಾರ ಬಂದ್ (Trains cancelled) ಮಾಡಲಾಗಿದೆ. ಜೊತೆಗೆ ಶಾಂತಿಗ್ರಾಮ ಬಳಿ ಚಲಿಸುತ್ತಿರುವ ರೈಲಿನ ಮೇಲೆಯೇ ಮಣ್ಣು ಕುಸಿತ ಸಂಭವಿಸಿದ್ದು, ಅದೃಷ್ಟವಶಾತ್‌ ಭಾರಿ ಅಪಾಯ ತಪ್ಪಿದೆ.

ಕಿಲೋಮೀಟರ್ ನಂಬರ್ 63ರಲ್ಲಿ ರೈಲ್ವೆ ಹಳಿಯ ಮೇಲೆ‌ ನಿನ್ನೆ ರಾತ್ರಿ ಮಣ್ಣು ಕುಸಿತವಾಗಿತ್ತು. ಇದರಿಂದಾಗಿ ಬೆಂಗಳೂರು- ಹಾಸನ- ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಇಲಾಖೆ ಬಂದ್ ಮಾಡಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲು ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ.

ನಿನ್ನೆ ಸಂಜೆಯಿಂದ ಹಳಿ ದುರಸ್ತಿ ಹಾಗು ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ ಸಂಜೆಯಿಂದಲೇ ಬೆಂಗಳೂರು ಮಂಗಳೂರು ನಡುವಿನ ಎಲ್ಲಾ ಪ್ರಯಾಣಿಕ ಹಾಗು ಗೂಡ್ಸ್ ರೈಲು ಸಂಚಾರ ರದ್ದುಪಡಿಸಲಾಗಿದ್ದು, ರೈಲ್ವೆ ಇಲಾಖೆ ನಿನ್ನೆ ರೈಲಿನಲ್ಲಿ ಸಿಲುಕಿದ್ದವರಿಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಿದೆ. ಅಪಾರ ಪ್ರಮಾಣದ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

ಶಿರಾಡಿಘಾಟ್ ಬಳಿಕ ಶಾಂತಿಗ್ರಾಮ ಬಳಿಯೂ ರೈಲ್ವೆ ಟ್ರ್ಯಾಕ್ ಮೇಲೆ ಗುಡ್ಡ ಕುಸಿದಿದೆ. ಗೂಡ್ಸ್ ರೈಲು ಚಲಿಸುವಾಗಲೇ ಗುಡ್ಡ ಕುಸಿತವಾಗಿದ್ದು, ರೈಲಿನ ಬೋಗಿ ಹಳಿ ತಪ್ಪಿದೆ. ಇಂದು ಮುಂಜಾನೆ 5.45ರ ಸುಮಾರಿಗೆ ಹಳಿ ಮೇಲೆ ಮಣ್ಣು ಕುಸಿದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಮಣ್ಣು ತೆರವುಗೊಳಿಸಿದ ಸಿಬ್ಬಂದಿ ರೈಲು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ಹಾಸನ- ಬೆಂಗಳೂರು, ಬೆಂಗಳೂರು- ಹಾಸನ ರೈಲುಗಳ ಸಂಚಾರದ ಸಮಯ ಬದಲಾವಣೆ ಮಾಡಲಾಗಿದೆ. ಮಣ್ಣು ತೆರವು ಬಳಿಕ ಹಾಸನ ಬೆಂಗಳೂರು ಮಾರ್ಗದ ರೈಲುಗಳ ಸಂಚಾರ ಪುನಾರಂಭವಾಗಲಿದೆ.

ಸಕಲೇಶಪುರ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಭಾರಿ ಮಳೆಗೆ ರಸ್ತೆ ಜಲಾವೃತಗೊಂಡು ಜನ, ವಾಹನಗಳು ಪರದಾಡಿದ್ದಾರೆ. ಸಕಲೇಶಪುರ ತಾಲೂಕಿನ‌ ಹಾನುಬಾಳು ಹೋಬಳಿಯ ಹಾನುಬಾಳು- ವೆಂಕಟಹಳ್ಳಿ- ರಾಗಿಗುಂಡಿ- ಅಗ್ನಿ ರಸ್ತೆ ಸಂಪರ್ಕ ಕಡಿತವಾಗಿದೆ. ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಇಲ್ಲದೆ ಗ್ರಾಮಸ್ಥರು ಪರದಾಡಿದರು. ಇಲ್ಲಿಗೆ ಸೇತುವೆ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಹಿಂದಿನಿಂದಲೂ ಆಗ್ರಹಿಸುತ್ತಿದ್ದಾರೆ.

ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ (ಘಟ್ಟ ಪ್ರದೇಶಗಳು) ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗವು 40-50 ಕಿಮೀ ತಲುಪುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿಯ ವೇಗವು 40-50ಕಿ.ಮೀ ತಲುಪುವ ಸಾಧ್ಯತೆಯಿದೆ. ಹಗುರದಿಂದ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗಾಳಿಯ ವೇಗದೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Uttara Kannada Landslide: ಶಿರೂರು ಗುಡ್ಡಕುಸಿತ; ಅರ್ಜುನ್‌ ಶೋಧಕ್ಕೆ ಸಿಎಂ ಸಿದ್ದರಾಮಯ್ಯಗೆ ಪಿಣರಾಯಿ ಮೊರೆ

Continue Reading

ಪ್ರಮುಖ ಸುದ್ದಿ

Kaveri Aarti: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ; ದಸರಾ ಹೊತ್ತಿಗೆ ರೆಡಿ

Kaveri Aarti: ನಾಡಿನ ಪುಣ್ಯನದಿ ಕಾವೇರಮ್ಮನಿಗೆ ಕಾವೇರಿ ಆರತಿ ಮಾಡುವ ಯೋಜನೆ ಬಗ್ಗೆ ಸರ್ಕಾರದಿಂದ ಚಿಂತನೆ ನಡೆದಿದ್ದು, ಕಾವೇರಿ ಆರತಿಗಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದ ಸಮಿತಿ ರಚಿಸಿದೆ.

VISTARANEWS.COM


on

kaveri aarti
Koo

ಬೆಂಗಳೂರು: ಹಿಮಾಲಯದ (Himalayas) ತಪ್ಪಲು ಪುಣ್ಯಕ್ಷೇತ್ರಗಳಾದ ಹರಿದ್ವಾರ, ಹೃಷಿಕೇಶ, ಕಾಶಿಯಲ್ಲಿ ನಡೆಯುವ ಮನಮೋಹಕ ಗಂಗಾರತಿ (Ganga Aarti) ಮಾದರಿಯಲ್ಲಿ ಕರ್ನಾಟಕದಲ್ಲಿಯೂ ʼಕಾವೇರಿ ಆರತಿʼ (Kaveri Aarti) ಏರ್ಪಡಿಸಲು ರಾಜ್ಯ ಸರಕಾರ (Karnataka Govt) ಸಜ್ಜಾಗಿದ್ದು, ಮುಂದಿನ ದಸರಾ (Dussehra) ಅವಧಿಯ ಹೊತ್ತಿಗೆ ಅದನ್ನು ಕಾರ್ಯಗತಗೊಳಿಸಲು ಚಿಂತಿಸಿದೆ.

ನಾಡಿನ ಪುಣ್ಯನದಿ ಕಾವೇರಮ್ಮನಿಗೆ ಕಾವೇರಿ ಆರತಿ ಮಾಡುವ ಯೋಜನೆ ಬಗ್ಗೆ ಸರ್ಕಾರದಿಂದ ಚಿಂತನೆ ನಡೆದಿದ್ದು, ಕಾವೇರಿ ಆರತಿಗಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದ ಸಮಿತಿ ರಚಿಸಿದೆ.

ಆಗಸ್ಟ್ ಮೊದಲ ವಾರ ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳಲಿರುವ ಸಮಿತಿ, ವಾರಾಣಸಿ, ಹೃಷಿಕೇಶ ಮತ್ತು ಗಯಾಕ್ಕೆ ತೆರಳಿ ಅಲ್ಲಿ ಮಾಡಲಾಗುವ ಆರತಿ ಸಂಪ್ರದಾಯಗಳನ್ನು ವೀಕ್ಷಿಸಿ‌ ವರದಿ‌ ನೀಡಲಿದೆ. ಸಮಿತಿಯಲ್ಲಿ ಶಾಸಕರಾದ ರವಿ ಗಾಣಿಗ, ದಿನೇಶ್ ಗೂಳಿಗೌಡ ಸೇರಿದಂತೆ 10ಕ್ಕೂ ಹೆಚ್ಚಿನ ಶಾಸಕರು ಇದ್ದಾರೆ.

ಮುಂದಿನ ದಸರಾ ಹಬ್ಬದ ಸಂದರ್ಭದಲ್ಲಿ ಕಾವೇರಿ ಆರತಿ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮಿತಿಯ ಅಧ್ಯಯನ ಪ್ರವಾಸದ ಅಂತಿಮ ಹಂತದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಸಮಿತಿಯೊಂದಿಗೆ ಸೇರುವ ಸಾಧ್ಯತೆ ಇದೆ.

ಕಾವೇರಿ ಆರತಿ ಆಯೋಜನೆಗೆ ಕೆಆರ್‌ಎಸ್ ಜಲಾಶಯ ಸೂಕ್ತ ಎನ್ನಲಾಗಿತ್ತು. ಆದರೆ ಅಲ್ಲಿ ಸ್ಥಳಾವಕಾಶದ ಕೊರತೆ ಎದುರಾಗುವ ಸಾಧ್ಯತೆ ಇರುವುದರಿಂದ ತಲಕಾಡು ಅಥವಾ ಸಂಗಮದಲ್ಲಿ ಕಾವೇರಿ ಆರತಿ ಆಯೋಜಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಇನ್ನೊಂದು ಕಡೆಯಿಂದ, ಕಾವೇರಿಯ ಉಗಮ ಸ್ಥಾನವಾದ ಭಾಗಮಂಡಲದಲ್ಲಿಯೇ ಆರತಿ ನಡೆಸಬೇಕು ಎಂಬ ಸಲಹೆಯೂ ಬಂದಿದೆ.

ಚಲುವರಾಯಸ್ವಾಮಿ ನೇತೃತ್ವದ ಸಮಿತಿ ವರದಿ ನೀಡಿದ ನಂತರ ಜಾಗ ಅಂತಿಮವಾಗಲಿದೆ. ಕಾವೇರಿ ಆರತಿ ಆಯೋಜನೆಗೂ ಮುನ್ನ ಕಾವೇರಿ ತಾಯಿಗೆ ದೇವಸ್ಥಾನ ನಿರ್ಮಾಣ ಮಾಡುವ ಚಿಂತನೆಯಿದೆ. ಕಾವೇರಿ ಆರತಿಯ ವರದಿ ಪಡೆಯುವುದು, ಕಾರ್ಯಕ್ರಮ ಆಯೋಜನೆ ಹೊಣೆ ಜಲಸಂಪನ್ಮೂಲ ಇಲಾಖೆಯದ್ದಾಗಿರಲಿದೆ. ಧಾರ್ಮಿಕ ದತ್ತಿ, ಲೋಕೋಪಯೋಗಿ ಇಲಾಖೆಗಳು ಸಹಕಾರ ನೀಡಲಿವೆ.

ಕಾವೇರಿ ಆರತಿಯನ್ನು ಪ್ರವಾಸಿಗರ ಕಣ್ಮನ ಸೆಳೆಯುವ ಬೃಹತ್ ಕಾರ್ಯಕ್ರಮವನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿದೆ. ಕನಿಷ್ಠ 5ರಿಂದ 6 ಸಾವಿರ ಜನರು ಸೇರುವಂತೆ ಮಾಡುವುದು ಉದ್ದೇಶ. ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಆಯೋಜಿಸಲು ಚಿಂತಿಸಲಾಗಿದೆ. ಆರಂಭದಲ್ಲಿ ವಾರಕ್ಕೆ ಒಂದು ಬಾರಿ, ನಂತರ ಎರಡು ಬಾರಿ, ಮೂರು ಬಾರಿ ಹೀಗೆ ಹೆಚ್ಚಿಸುತ್ತ ಹೋಗುವ ಬಗ್ಗೆ ಚಿಂತಿಸಲಾಗಿದೆ.

ಕೊಡಗಿನಲ್ಲಿ ನಡೆಯುತ್ತಿದೆ

ಕೊಡಗಿನಲ್ಲಿ 2011ರಿಂದಲೇ ಕಾವೇರಿ ಆರತಿ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ನಮಾಮಿ ಕಾವೇರಿ ಎಂಬ ಸಂಘಟನೆ ಪ್ರತಿ ತಿಂಗಳು ಹುಣ್ಣಿಮೆಯಂದು ಕಾವೇರಿಗೆ ಆರತಿ ಕಾರ್ಯಕ್ರಮ ಮಾಡುತ್ತ ಬಂದಿದ್ದು, ಇತ್ತೀಚೆಗೆ 161 ನೇ ಕಾವೇರಿ ಆರತಿ ಕಾರ್ಯಕ್ರಮ ಕೊಡಗಿನ 14 ಕಡೆಗಳಲ್ಲಿ ಏಕಕಾಲದಲ್ಲಿ ನಡೆದಿದೆ. ಕಲುಷಿತಗೊಳ್ಳುತ್ತಿರುವ ಕಾವೇರಿ ನದಿ ಮೇಲೆ ಧಾರ್ಮಿಕ ಭಾವನೆ ಬರಲಿ, ಅದರ ಪಾವಿತ್ರ್ಯತೆಯನ್ನು ಪ್ರತಿಯೊಬ್ಬರೂ ಕಾಪಾಡುವಂತಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಈವರೆಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಸ್ವಾಮೀಜಿಗಳು, ತಮಿಳುನಾಡಿನ ಸ್ವಾಮೀಜಿಗಳೂ ಪಾಲ್ಗೊಂಡಿದ್ದಾರೆ. ಹಿಂದೊಮ್ಮೆ ಸರಕಾರದಿಂದಲೂ ‘ಕಾವೇರಿ ಉತ್ಸವ” ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾವೇರಿ ನೀರಾವರಿ ನಿಗಮದ ಮೂಲಕ ಅದ್ದೂರಿ ಆರತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ.

ಇದನ್ನೂ ಓದಿ: Cauvery Dispute: ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನೀರು ಬಿಡಲು ಸೂಚನೆ; ಸರ್ವಪಕ್ಷ‌ ಸಭೆ ಕರೆದ ಸಿಎಂ ಸಿದ್ದರಾಮಯ್ಯ

Continue Reading

ಕ್ರೀಡೆ

Paris Olympics 2024: ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಕ್ರೀಡಾ ಸ್ಫರ್ಧೆಗಳು; ಶೂಟಿಂಗ್​ನಲ್ಲಿ ಪದಕ ನಿರೀಕ್ಷೆ

Paris Olympics 2024: ಇಂದು ನಡೆಯುವ 10 ಮೀ. ಏರ್​ ರೈಫಲ್​ ಮಿಶ್ರ ತಂಡ ವಿಭಾಗದಲ್ಲಿ ಸಂದೀಪ್​ ಸಿಂಗ್​-ಇಲವೆನಿಲ್​ ವಲರಿವನ್​ ಮತ್ತು ಅರ್ಜುನ್​ ಬಬುಟ-ರಮಿತಾ ಜಿಂದಾಲ್ ಕಣಕ್ಕಿಳಿಯಲಿದ್ದಾರೆ.

VISTARANEWS.COM


on

Paris Olympics 2024
Koo

ಪ್ಯಾರಿಸ್​: ಒಲಿಂಪಿಕ್ಸ್​ನಲ್ಲಿ(Paris Olympics 2024) ಪದಕ ಸ್ಪರ್ಧೆಗಳು ಇಂದಿನಿಂದ(ಶನಿವಾರ) ಆರಂಭವಾಗಲಿದೆ. ಭಾರತ ಇಂದು ಹಲವು ವಿಭಾಗದ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿವೆ. ಈ ಪೈಕಿ ಶೂಟಿಂಗ್​ನಲ್ಲಿ ಭಾರತ ಒಂದು ಪದಕ್ಕೆ ಸ್ಪರ್ಧಿಸಲಿದ್ದು, ಪದಕ ಗೆಲ್ಲುವ ನಿರೀಕ್ಷೆಯೊಂದನ್ನು ಇಡಲಾಗಿದೆ. 10 ಮೀ. ಏರ್​ ರೈಫಲ್​ ಮಿಶ್ರ ತಂಡ ವಿಭಾಗದಲ್ಲಿ ಸಂದೀಪ್​ ಸಿಂಗ್​-ಇಲವೆನಿಲ್​ ವಲರಿವನ್​ ಮತ್ತು ಅರ್ಜುನ್​ ಬಬುಟ-ರಮಿತಾ ಜಿಂದಾಲ್ ಕಣಕ್ಕಿಳಿಯಲಿದ್ದಾರೆ. ಗೆದ್ದರೆ, ಶೂಟಿಂಗ್​ ವಿಭಾಗದಲ್ಲಿ 12 ವರ್ಷಗಳ ಪದಕ ಬರ ನೀಗಲಿದೆ. ಶೂಟಿಂಗ್​ ಸ್ಪರ್ಧೆ ಪ್ಯಾರಿಸ್​ನಿಂದ 272 ಕಿಲೋಮೀಟರ್​ ದೂರದಲ್ಲಿರುವ ಚಟೌರೊಕ್ಸ್​ನಲ್ಲಿ ನಡೆಯಲಿದೆ. ಭಾರತದ ಇಂದಿನ ಕ್ರೀಡಾ ಸ್ಪರ್ಧೆಗಳ ವೇಳಾಪ್ಟಟಿ ಹೀಗಿದೆ.

ಬ್ಯಾಡ್ಮಿಂಟನ್

ಪುರುಷರ ಸಿಂಗಲ್ಸ್ ಗುಂಪು ಹಂತ: ಎಚ್ ಎಸ್ ಪ್ರಣಯ್, ಲಕ್ಷ್ಯ ಸೇನ್.

ಪುರುಷರ ಡಬಲ್ಸ್ ಗುಂಪು ಹಂತ: ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ.

ಮಹಿಳೆಯರ ಡಬಲ್ಸ್ ಗುಂಪು ಹಂತ: ತನೀಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ. (ಮಧ್ಯಾಹ್ನ 12 ಗಂಟೆಯಿಂದ)

ಇದನ್ನೂ ಓದಿ Paris Olympics Boxing Draw: ಒಲಿಂಪಿಕ್ಸ್​ ಬಾಕ್ಸಿಂಗ್​ ಡ್ರಾ ಪ್ರಕಟ; ಮೊದಲ ಸುತ್ತಿನಲ್ಲೇ ಭಾರತೀಯ ಬಾಕ್ಸರ್​ಗಳಿಗೆ ಕಠಿಣ ಸ್ಪರ್ಧಿಗಳ ಸವಾಲು

ರೋಯಿಂಗ್


ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್: ಬಾಲರಾಜ್ ಪನ್ವಾರ್. ಆರಂಭ ಮಧ್ಯಾಹ್ನ 12:30 ರಿಂದ

ಶೂಟಿಂಗ್

10 ಮೀ ಏರ್ ರೈಫಲ್ ಮಿಶ್ರ ತಂಡ ಅರ್ಹತೆ: ಸಂದೀಪ್ ಸಿಂಗ್, ಅರ್ಜುನ್ ಬಾಬುತಾ, ಎಲವೆನಿಲ್ ವಲರಿವನ್, ರಮಿತಾ ಜಿಂದಾಲ್. ಮಧ್ಯಾಹ್ನ 12:30

10ಮೀ ಏರ್ ಪಿಸ್ತೂಲ್ ಪುರುಷರ ಅರ್ಹತೆ: ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ. (ಮಧ್ಯಾಹ್ನ 2 ಗಂಟೆ)

10ಮೀ ಏರ್ ರೈಫಲ್ ಮಿಶ್ರ ತಂಡ ಪದಕ ಸುತ್ತುಗಳು: (ಅರ್ಹತೆ ಪಡೆದರೆ) ಮಧ್ಯಾಹ್ನ 2 ಗಂಟೆ

10 ಮೀ ಏರ್ ಪಿಸ್ತೂಲ್ ಮಹಿಳೆಯರ ಅರ್ಹತೆ ಸುತ್ತು: ರಿದಮ್ ಸಾಂಗ್ವಾನ್, ಮನು ಭಾಕರ್. (ಸಂಜೆ 4 ಗಂಟೆಯಿಂದ)

ಟೆನಿಸ್; ಮೊದಲ ಸುತ್ತಿನ ಪಂದ್ಯಗಳು


ಪುರುಷರ ಸಿಂಗಲ್ಸ್: ಸುಮಿತ್ ನಗಾಲ್.

ಪುರುಷರ ಡಬಲ್ಸ್: ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ. (ಮಧ್ಯಾಹ್ನ 3:30 ರಿಂದ)

ಟೇಬಲ್ ಟೆನ್ನಿಸ್


ಪುರುಷರ ಸಿಂಗಲ್ಸ್: ಶರತ್ ಕಮಲ್, ಹರ್ಮೀತ್ ದೇಸಾಯಿ

ಮಹಿಳೆಯರ ಸಿಂಗಲ್ಸ್: ಮಾಣಿಕಾ ಬಾತ್ರಾ, ಶ್ರೀಜಾ ಅಕುಲಾ. (ಸಂಜೆ 6:30 ರಿಂದ)

ಬಾಕ್ಸಿಂಗ್

ಮಹಿಳೆಯರ 54 ಕೆಜಿ ವಿಭಾಗ: ಪ್ರೀತಿ ಪವಾರ್, 32ರ ಸುತ್ತು. (ಸಂಜೆ 7 ರಿಂದ)

ಹಾಕಿ


ಪುರುಷರ ಗುಂಪು ‘ಬಿ’: 
ಭಾರತ ಮತ್ತು ನ್ಯೂಜಿಲ್ಯಾಂಡ್​. (ರಾತ್ರಿ 9 ಗಂಟೆಗೆ)

Continue Reading

ಪ್ರಮುಖ ಸುದ್ದಿ

Students Night: ವಿದ್ಯಾರ್ಥಿಗಳು ಕುಡಿದು ಕುಪ್ಪಳಿಸಲು ʼಸ್ಟೂಡೆಂಟ್ಸ್‌ ನೈಟ್‌ʼ ಆಯೋಜಿಸಿದ ಬಾರ್‌ ಮಾಲಿಕ! ಕಾರ್ಯಕ್ರಮ ರದ್ದು

Students Night: ʼಸ್ಟೂಡೆಂಟ್ಸ್ ವೆಡ್‌ನೆಸ್‌ಡೇ ನೈಟ್ʼ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಮುಕ್ತ ಆಹ್ವಾನವನ್ನು ನಗರದ ದೇರೆಬೈಲ್ ಕೊಂಚಾಡಿಯಲ್ಲಿರುವ ಲಿಕ್ಕರ್‌ ಲಾಂಜ್‌ ಎಂಬ ಬಾರ್‌ ನೀಡಿತ್ತು. ಈ ಬಾರ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಕಾರ್ಯಕ್ರಮವನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಅಬಕಾರಿ ಇಲಾಖೆ ಲಿಕ್ಕರ್ ಲಾಂಜ್ ವಿರುದ್ಧ ಎಫ್ಐಆರ್ ದಾಖಲಿಸಿದೆ.

VISTARANEWS.COM


on

students night
Koo

ಮಂಗಳೂರು: ವಿದ್ಯಾರ್ಥಿಗಳು ಕುಡಿದು ಕುಣಿದ ಕುಪ್ಪಳಿಸಲು ಬಾರ್‌ ನೈಟ್‌ (Students Night) ಕಾರ್ಯಕ್ರಮ ಆಯೋಜಿಸಿದ್ದ ಬಾರ್‌ ಮಾಲೀಕರ ಕಾರ್ಯಕ್ರಮವನ್ನು ಪೊಲೀಸರು (Mangalore police) ಬಂದ್‌ ಮಾಡಿಸಿದ್ದಾರೆ. ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ʼಸ್ಟೂಡೆಂಟ್ಸ್ ವೆಡ್‌ನೆಸ್‌ಡೇ ನೈಟ್ʼ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಮುಕ್ತ ಆಹ್ವಾನವನ್ನು ನಗರದ ದೇರೆಬೈಲ್ ಕೊಂಚಾಡಿಯಲ್ಲಿರುವ ಲಿಕ್ಕರ್‌ ಲಾಂಜ್‌ ಎಂಬ ಬಾರ್‌ ನೀಡಿತ್ತು. ಈ ಬಾರ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಕಾರ್ಯಕ್ರಮವನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಅಬಕಾರಿ ಇಲಾಖೆ ಲಿಕ್ಕರ್ ಲಾಂಜ್ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಸಂಜೆ 7 ಗಂಟೆಯಿಂದ ಮಧ್ಯರಾತ್ರಿ ವರೆಗೆ ಮದ್ಯ ಸಹಿತ ಪಾರ್ಟಿ ಕಾರ್ಯಕ್ರಮವನ್ನು ಆಯೋಜಿಸಲು ಸಮಯ ನಿಗದಿಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಹಾರ, ಮದ್ಯ, ಮ್ಯೂಸಿಕ್, ಮನೋರಂಜನಾ ಕಾರ್ಯಕ್ರಮಗಳಿರುವುದಾಗಿ ಪ್ರಚಾರ ಮಾಡಲಾಗಿತ್ತು. ಇಷ್ಟು ಮಾತ್ರವಲ್ಲದೆ ವಿದ್ಯಾರ್ಥಿಗಳು ಸ್ಕೂಲ್ ಐಡಿ (ಗುರುತು ಕಾರ್ಡ್) ತೋರಿಸಿದರೆ ಬಿಲ್‌ನಲ್ಲಿ ಶೇ.15ರಷ್ಟು ಕಡಿತದ ಆಫರ್ ನೀಡಲಾಗಿತ್ತು. ಈ ಇವೆಂಟ್‌ಗೆ ವಿದ್ಯಾರ್ಥಿನಿಯರು ಬಂದರೆ ಅವರಿಗೆ ಫ್ರೀ ಶೂಟರ್ಸ್ ಸ್ಪೆಷಲ್ ಆಫರ್ ನೀಡುವ ಭರವಸೆಯನ್ನು ನೀಡಲಾಗಿತ್ತು.

ಕೊಂಚಾಡಿಯ ಬಾರ್‌ನಲ್ಲಿ ಆಯೋಜಿಸಿದ ಈ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾವೂರು ಪೊಲೀಸರು ಕಾರ್ಯಕ್ರಮವನ್ನೇ ರದ್ದುಮಾಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಬಾರ್‌ನ ಮಾಲೀಕರಿಗೆ ಕಾವೂರು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ಮಾತ್ರವಲ್ಲದೆ ಜಿಲ್ಲಾ ನ್ಯಾಯಾಲಯದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್(ಎಪಿಪಿ)ಗೆ ಪತ್ರ ಬರೆದು ಈ ಘಟನೆಗೆ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬಹುದೆಂದು ಪೊಲೀಸ್‌ ಮೂಲಗಳು ಸಲಹೆ ಕೇಳಿದ್ದಾರೆಂದು ತಿಳಿದು ಬಂದಿದೆ. ವಿದ್ಯಾರ್ಥಿಗಳನ್ನು ಬಾರ್‌ಗೆ ಆಹ್ವಾನಿಸಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಾಕಿದ್ದಕ್ಕಾಗಿ ಅಬಕಾರಿ ಇಲಾಖೆ ಈಗಾಗಲೇ 7 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೆ ಬಾರ್ ವಿರುದ್ಧ ಎಫ್ಐಆರ್ ದಾಖಲಿಸಿದೆ.

ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಜಿಲ್ಲಾ ನ್ಯಾಯಾಲಯದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಪತ್ರ ಬರೆದಿದ್ದು, ಈ ಘಟನೆಗೆ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬಹುದೆಂದು ಮಾಹಿತಿ ಕೇಳಿದ್ದೇವೆ. ಅವರ ಉತ್ತರ ಬಂದ ಕೂಡಲೇ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?

Continue Reading
Advertisement
Ajith Kumar Neel not collaborating for a film
ಕಾಲಿವುಡ್15 seconds ago

Ajith Kumar: ಪ್ರಶಾಂತ್ ನೀಲ್- ಅಜಿತ್ ಭೇಟಿಯಾಗಿದ್ದು ನಿಜ; ಸಿನಿಮಾ ಬಗ್ಗೆ ಮ್ಯಾನೇಜರ್ ಹೇಳಿದ್ದೇನು?

shiradi ghat train karnataka rian news
ಪ್ರಮುಖ ಸುದ್ದಿ21 mins ago

Karnataka Rain News: ಎಡಕುಮೇರಿಯಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ, ಬೆಂಗಳೂರು- ಮಂಗಳೂರು ರೈಲ್ವೆ ಸಂಚಾರ ಬಂದ್‌

UGCET 2024 seat allotment process begins Only a few days left for the option to enter
ಬೆಂಗಳೂರು26 mins ago

UGCET 2024 : ಯುಜಿಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ; ಆಪ್ಶನ್ ಎಂಟ್ರಿ ಮಾಡಲು ಕೆಲವೇ ದಿನಗಳು ಬಾಕಿ!

Actor Darshan Lata Jaiprakash says that since Darshan is a devotee of God,
ಸಿನಿಮಾ40 mins ago

Actor Darshan: ದರ್ಶನ್ ದೈವ ಭಕ್ತ, ಜೈಲಿಗೆ ಸೇರಿದ್ದಾಗಿನಿಂದ ವಿಜಯಲಕ್ಷ್ಮಿ ಅತ್ತಿಗೆ ಹೋರಾಟ ಜಾಸ್ತಿ ಆಗಿದೆ ಎಂದ ಲತಾ ಜೈಪ್ರಕಾಶ್!

Paris Olympics
ಕ್ರೀಡೆ45 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆ; ಜೂಡೊಪಟು ತಾತ್ಕಾಲಿಕ ಅಮಾನತು

illicit relationship raichur siravara
ಕ್ರೈಂ54 mins ago

Illicit Relationship: ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

Gold Rate Today
ಚಿನ್ನದ ದರ55 mins ago

Gold Rate Today: ಬಜೆಟ್‌ ಬಳಿಕ ಇದೇ ಮೊದಲ ಬಾರಿ ಏರಿಕೆ ಕಂಡ ಚಿನ್ನದ ದರ; ಇಂದು ಇಷ್ಟು ದುಬಾರಿ

Actor Darshan Astrologer Chanda Pandey Said Facing Problems Because Of His vig
ಕ್ರೈಂ1 hour ago

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Encounter in Kupwara
ದೇಶ2 hours ago

Encounter in Kupwara: ಕುಪ್ವಾರಾದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೈನಿಕರಿಗೆ ಗಾಯ; ಓರ್ವ ಉಗ್ರ ಹತ

Champions Trophy 2025
ಕ್ರೀಡೆ2 hours ago

Champions Trophy 2025: ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ; ಟೀಮ್ ಇಂಡಿಯಾಗೆ ಪಾಕ್​ ಆಟಗಾರನ ಮನವಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ17 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ18 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ19 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ20 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌