Organic Express: ಆರೋಗ್ಯವೇ ಭಾಗ್ಯ ಎನ್ನುವ ಸಾವಯವ ಉತ್ಪನ್ನಗಳ ಮಾದರಿ ತಾಣ - Vistara News

ಕೃಷಿ

Organic Express: ಆರೋಗ್ಯವೇ ಭಾಗ್ಯ ಎನ್ನುವ ಸಾವಯವ ಉತ್ಪನ್ನಗಳ ಮಾದರಿ ತಾಣ

ಮಲೆನಾಡಿನ ಹಸಿರು ಪರಿಸರದ ಫಾರಂನಲ್ಲಿ ತಯಾರಾಗುವ ಸಾವಯವ ಉತ್ಪನ್ನಗಳು ಇಂದಿನ ಆಧುನಿಕ ಯುಗದಲ್ಲಿ ವಿಷಮುಕ್ತ ಆಹಾರದ ಹುಡುಕಾಟದಲ್ಲಿ ಇರುವ ಗ್ರಾಹಕನಿಗೆ organic express ಸಂಸ್ಥೆಯ ಕೊಡುಗೆ.

VISTARANEWS.COM


on

organic gir
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ಆರೋಗ್ಯಪ್ರೇಮಿ ಜನತೆ ಸಾವಯವ ಉತ್ಪನ್ನಗಳನ್ನು ಹುಡುಕಿ ಹುಡುಕಿ ಹೋಗುತ್ತಾರೆ. ಎಲ್ಲ ನಗರಗಳಲ್ಲೂ ಸಾವಯವ- ಸಹಜ ಕೃಷಿಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಆದರೆ ಪರಿಶುದ್ಧ ಸಾವಯವ ಉತ್ಪನ್ನಗಳು ದುರ್ಲಭವೇ. ಯಾಕೆಂದರೆ ಇವುಗಳನ್ನು ಕಟ್ಟೆಚ್ಚರದಲ್ಲಿ ಸಿದ್ಧಪಡಿಸಬೇಕು. ಹಸುವಿನ ತುಪ್ಪ ಸಾವಯವ ಎನಿಸಿಕೊಳ್ಳಬೇಕಿದ್ದರೆ, ಆ ಹಸು ಪ್ರಕೃತಿಯ ನಡುವೆ ಇದ್ದು, ಸಹಜ ಆಹಾರವನ್ನು ಸೇವಿಸಿ, ತಿಳಿಯಾದ ನೀರು ಕುಡಿದಿರಬೇಕು. ಆಗ ಆ ಹಸುವಿನ ತುಪ್ಪವನ್ನು ಪರಿಶುದ್ಧ ಸಾವಯವ ಉತ್ಪನ್ನ ಎನ್ನಬಹುದು.

organic
ಗಿರ್‌ ತಳಿಯ ಹಸುಗಳ ಜೊತೆಗೆ organic express ಸಂಸ್ಥೆಯ ಸ್ಥಾಪಕ ಎಚ್‌.ಎಸ್‌.ಶೆಟ್ಟಿ.

ಸಾವಯವ ಉತ್ಪನ್ನಗಳ ಬಗ್ಗೆ ಇಷ್ಟು ಎಚ್ಚರಿಕೆ ವಹಿಸುವ, ಗ್ರಾಹಕರ ಆರೋಗ್ಯದ ಬಗ್ಗೆ ತಮ್ಮ ಆರೋಗ್ಯದಷ್ಟೇ ಕಾಳಜಿ ವಹಿಸುವ ಸಂಸ್ಥೆ- ಆರ್ಗ್ಯಾನಿಕ್‌ ಎಕ್ಸ್‌ಪ್ರೆಸ್‌ (Organic Express). ಇದನ್ನು ಸ್ಥಾಪಿಸಿದವರು ಎಚ್‌.ಎಸ್.ಶೆಟ್ಟಿ. ಮೈಸೂರ್‌ ಮರ್ಕಂಟೈಲ್‌ ಕೊ ಲಿಮಿಟೆಡ್‌ (Mysore Mercantile Co Limited [MMCL) ಎಂಬ ಹೆಸರಿನ ಮಾತೃಸಂಸ್ಥೆಯನ್ನು ಹೊಂದಿರುವ ಆರ್ಗ್ಯಾನಿಕ್‌ ಎಕ್ಸ್‌ಪ್ರೆಸ್‌ನ ಉತ್ಪನ್ನಗಳು ಶುದ್ಧ ಸುಂದರ ಮಲೆನಾಡಿನ ಮಡಿಲಿನಲ್ಲಿ ತಯಾರಾಗುತ್ತವೆ. ಸ್ಥಳೀಯ ಬೇಡಿಕೆಗಿಂತಲೂ ಹೆಚ್ಚಾಗಿ ರಫ್ತಾಗುತ್ತವೆ. ಕರ್ನಾಟಕ ಚೇಂಬರ್ಸ್‌ ಆಫ್‌ ಕಾಮರ್ಸ್‌ ಮತ್ತು ಇಂಡಸ್ಟ್ರಿ ಸಂಸ್ಥೆಯು ಬಹುತೇಕ ಪ್ರತಿವರ್ಷ ಎಂಬಂತೆ ಈ ಸಂಸ್ಥೆಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುತ್ತ ಬಂದಿದೆ.

ʻʻನೂರು ಶೇಕಡಾ ಪರಿಶುದ್ಧ ಸಾವಯವ ಉತ್ಪನ್ನಗಳನ್ನು ನೀಡುವ ಮೂಲಕ ಜನತೆಯ ಬದುಕನ್ನು ಇನ್ನಷ್ಟು ಆರೋಗ್ಯಮಯ, ಸಮಗ್ರವಾಗಿಸುವ ಗುರಿ ನಮ್ಮದು. ನಮ್ಮ ಪ್ರತಿಯೊಬ್ಬ ಗ್ರಾಹಕನೂ ಅತ್ಯುನ್ನತ ಗುಣಮಟ್ಟದ ಉತ್ಪನ್ನವನ್ನು ಪಡೆಯುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕುʼʼ ಎಂದು ಈ ಸಂಸ್ಥೆಯ ಮುಖ್ಯಸ್ಥ ಶೆಟ್ಟಿಯವರು ಹೇಳುತ್ತಾರೆ. ಇದು 2000ನೇ ಇಸವಿಯಲ್ಲಿ ಸ್ಥಾಪನೆಯಾಗಿದೆ. ವರ್ಷದಿಂದ ವರ್ಷಕ್ಕೆ ತನ್ನ ಉತ್ಪನ್ನಗಳನ್ನು ಹೆಚ್ಚಿಸುತ್ತ ಬಂದಿದೆ. 2013-14ರಲ್ಲಿ ಭಾರತ ಸರ್ಕಾರ, ಎಂಎಂಸಿಎಲ್‌ ಸಂಸ್ಥೆಯನ್ನು ಕರ್ನಾಟಕದ ಅತ್ಯುನ್ನತ ರಫ್ತು ಸಂಸ್ಥೆ ಎಂದು ಪುರಸ್ಕರಿಸಿದೆ.

organic
organic express ಉತ್ಪನ್ನಗಳು

“ಪರಿಸರ ಮತ್ತು ನಿಮ್ಮ ಆರೋಗ್ಯಕ್ಕೆ ನಮ್ಮ ಬದ್ಧತೆ. ನಾವು ಹಾನಿಕಾರಕ ರಾಸಾಯನಿಕಗಳ ಅಗತ್ಯವನ್ನು ಕೊನೆಗಾಣಿಸಿದ್ದು, ಮಣ್ಣನ್ನು ಸಮೃದ್ಧಗೊಳಿಸುವ ಹಾಗೂ ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಆರೋಗ್ಯಕ್ಕಾಗಿ ಗುಣಮಟ್ಟ ಮತ್ತು ರುಚಿಯನ್ನು ತ್ಯಾಗ ಮಾಡಬೇಕಾಗಿಲ್ಲ. ಆರ್ಗ್ಯಾನಿಕ್ ಎಕ್ಸ್‌ಪ್ರೆಸ್‌ನಲ್ಲಿ ನಾವು ಆರೋಗ್ಯಕರ ಜೀವನಶೈಲಿಗೆ ಸಹಾಯ ಮಾಡುವ ಸಾವಯವ, ರಾಸಾಯನಿಕಮುಕ್ತ ಮತ್ತು GMO ಮುಕ್ತ ಉತ್ಪನ್ನಗಳನ್ನು ಒದಗಿಸುತ್ತೇವೆ. ರುಚಿಯೊಂದಿಗೆ ರಾಜಿ ಮಾಡಿಕೊಳ್ಳದೆ ಆರೋಗ್ಯಕರವಾದ ಆಹಾರ ಉತ್ಪನ್ನಗಳನ್ನು ನೀಡುವುದು ನಮ್ಮ ಗುರಿ. ಹೆಸರೇ ಸೂಚಿಸುವಂತೆ ಆರ್ಗ್ಯಾನಿಕ್ ಎಕ್ಸ್‌ಪ್ರೆಸ್ ವಿವಿಧ ರೀತಿಯ ಉತ್ತಮ-ಗುಣಮಟ್ಟದ ಮತ್ತು ಸ್ಥಳೀಯವಾಗಿ ಬೆಳೆದ ಉತ್ಪನ್ನಗಳಿಂದ ಸಾವಯವವಾಗಿ ತಯಾರಿಸಿದ ಆಹಾರಗಳ ಪೂರೈಕೆದಾರ. ಆರ್ಗ್ಯಾನಿಕ್ ಎಕ್ಸ್‌ಪ್ರೆಸ್ ತನ್ನ ಸರಕುಗಳನ್ನು 100% ಸುರಕ್ಷಿತ, ಟೇಸ್ಟಿ, ಸಾವಯವ ಮತ್ತು ಕೈಗೆಟುಕುವ ದರದಲ್ಲಿ ಖಾತರಿಪಡಿಸುತ್ತದೆʼʼ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆ ಕೆಲವು ಮಾದರಿ ಉತ್ಪನ್ನಗಳನ್ನು ಹೊಂದಿದೆ. ಪ್ರಕೃತ ಮಲೆನಾಡಿನ ಸಕಲೇಶಪುರದಲ್ಲಿ ವಿಸ್ತಾರವಾದ ಜಾಗದಲ್ಲಿ ಫಾರ್ಮ್‌ ಅನ್ನು ಹೊಂದಿರುವ ಈ ಸಂಸ್ಥೆಯು ನೂರಾರು ಗಿರ್‌ ತಳಿಯ ದೇಶಿ ದನಕರುಗಳನ್ನು ಸಾಕುತ್ತಿದ್ದು, ಇಲ್ಲಿ ಶುದ್ಧ ಹಸುವಿನ ತುಪ್ಪ ತಯಾರಾಗುತ್ತದೆ. ಸಕಲೇಶಪುರದ ಕಾಫಿ ತೋಟಗಳಲ್ಲಿ ಸಾವಯವ ಮಾದರಿಯಲ್ಲಿ ಪಡೆದ ಕಾಫಿ ಹಣ್ಣುಗಳಿಂದ ಗೃಹಕೈಗಾರಿಕೆ ಮಾದರಿಯಲ್ಲಿ ತಯಾರಿಸಿದ ರುಚಿಕರ ಕಾಫಿ ಪುಡಿಯನ್ನು ಪ್ರೀಮಿಯಂ ಪ್ಯಾಕ್‌ ಮಾಡಲಾಗುತ್ತದೆ. ಮಲೆನಾಡು ಹಾಗೂ ಬಯಲುಸೀಮೆಯ ಪ್ರಾಕೃತಿಕ ಉತ್ತಮ ಗುಣಮಟ್ಟದ ತೆಂಗಿನಕಾಯಿಗಳಿಂದ ತಯಾರಿಸಲಾದ ತೆಂಗಿನೆಣ್ಣೆಯು ಸಂಸ್ಥೆಯ ಉತ್ಕೃಷ್ಟ ಉತ್ಪನ್ನವಾಗಿದೆ. ಇದನ್ನು ಮರದ ಉಪಕರಣಗಳನ್ನು ಉಪಯೋಗಿಸಿ ಒತ್ತಿ ಎಣ್ಣೆಯನ್ನು ತೆಗೆದು ಸಿದ್ಧಪಡಿಸಲಾಗುತ್ತದೆ. ಆಲೆಮನೆ ಬೆಲ್ಲ ಎಂದು ಕರೆಯಲಾಗುವ ಜೋನಿ ಬೆಲ್ಲ ಇಲ್ಲಿ ಸಾಂಪ್ರದಾಯಿಕ ಆಲೆಮನೆಯ ಉತ್ಪನ್ನವಾಗಿ ಲಭ್ಯವಿದೆ. ಹಾಗೇ ರುಚಿಕರ ನೀರಾ ಬೆಲ್ಲ ಅಥವಾ ತಾಳೆಮರದ ಬೆಲ್ಲವೂ ತಯಾರಾಗುತ್ತದೆ. ಮಲೆನಾಡಿನ ಕಾಡುಗಳು ಹಾಗೂ ಕಾಫಿ ತೋಟಗಳಲ್ಲಿ ಅಲೆದಾಡಿ ಬರುವ ಜೇನುಹುಳಗಳಿಂದ ತಯಾರಾಗುವ ಪರಿಶುದ್ಧ ಜೇನುತುಪ್ಪ ಈ ಸಂಸ್ಥೆಯ ಟ್ರೇಡ್‌ಮಾರ್ಕ್.‌ ಈ ಉತ್ಪನ್ನಗಳನ್ನು ರಫ್ತು ಗುಣಮಟ್ಟದ ಪ್ಯಾಕಿಂಗ್‌ ಮಾಡಲಾಗುತ್ತದೆ.

organic
organic express ಉತ್ಪನ್ನಗಳು

ಉತ್ತಮ ಸಾವಯವ ಉತ್ಪನ್ನಗಳು ಎಲ್ಲರಿಗೂ ಲಭ್ಯವಾಗಬೇಕು ಎಂದು ಸಂಸ್ಥೆಯು ಬಯಸುತ್ತದೆ. ಇಂದು ಸಾವಯವದ ಹೆಸರಿನಲ್ಲಿ ನೀಡಲಾಗುವ ಉತ್ಪನ್ನಗಳು ದುಬಾರಿಯಾಗಿವೆ ಎಂದು ದೂರಿದೆ. ಎಲ್ಲ ಆಹಾರ ಪದಾರ್ಥಗಳೂ ಕಲುಷಿತವಾಗಿರುವ ಇಂದಿನ ಯುಗದಲ್ಲಿ ಸಾವಯವ ಉತ್ಪನ್ನಗಳ ತಯಾರಿಕೆ ದುಬಾರಿಯಾಗಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಸಾವಯವ ಉತ್ಪನ್ನಗಳು ಎಲ್ಲರಿಗೂ ಅಗತ್ಯ. ಇದನ್ನು ಮನಗಂಡಿರುವ ಸಂಸ್ಥೆಯು ತನ್ನ ಉತ್ಪನ್ನಗಳು ಸ್ಥಳೀಯವಾಗಿಯೂ ಲಭ್ಯವಿರುವಂತೆ ನೋಡಿಕೊಂಡಿದೆ.

ಸಾವಯವ ಉತ್ಪನ್ನಗಳು ದೇಹದ ಮೇಲೆ ಮಾಡುವ ಸತ್ಪರಿಣಾಮ ಬಹಳ ಎಂಬುದು ಅಧ್ಯಯನಗಳಿಂದ ರುಜುವಾತಾಗಿದೆ. ಯಾವುದೇ ರಸಗೊಬ್ಬರ ಬಳಸದ, ಕ್ರಿಮಿನಾಶಕ ಸಿಂಪಡಿಸದ, ಕಳೆನಾಶಕ ಹೊಡೆಯದ ಬೆಳೆಗಳಿಂದ ತಯಾರಿಸಲಾದ ಉತ್ಪನ್ನಗಳು ನಿಜಕ್ಕೂ ದೇಹದಲ್ಲಿ ಮ್ಯಾಜಿಕ್ಕನ್ನೇ ಉಂಟುಮಾಡುತ್ತವೆ. ಸಾವಯವ ಉತ್ಪನ್ನಗಳನ್ನು ಸೇವಿಸುವವರಿಂದ ಕ್ಯಾನ್ಸರ್‌ ಮುಂತಾದ ಮಾರಕ ರೋಗಗಳು ದೂರವಾಗುತ್ತವೆ. ಹೃದಯದ ಸಮಸ್ಯೆ, ಮಧುಮೇಹ ಮುಂತಾದವುಗಳ ಸಾಧ್ಯತೆ ಕುಸಿಯುತ್ತದೆ. ನರದೌರ್ಬಲ್ಯಗಳು ಬಾಧಿಸುವುದಿಲ್ಲ ಎಂಬುದು ಗೊತ್ತಾಗಿದೆ. ಹಾಗೆಯೇ ಸಾವಯವ ಕೃಷಿಯು ನಿಸರ್ಗಕ್ಕೆ ನೀಡುವ ಕೊಡುಗೆಯೂ ಅಪಾರ. ಅದು ಮಣ್ಣು, ನೀರು, ಗಾಳಿಗೆ ವಿಷಕಾರಿ ಸಂಯುಕ್ತಗಳನ್ನು ಸೇರಿಸುವುದಿಲ್ಲ.

ಮರದಿಂದ ಒತ್ತಿ ಸಿದ್ಧಪಡಿಸಲಾದ ತೆಂಗಿನೆಣ್ಣೆಯು ಭಾರಿ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿರುವುದು ಕಂಡುಬಂದಿದ್ದು, ದೇಹವನ್ನು ಸೋಂಕುಗಳಿಂದ ಕಾಪಾಡುತ್ತದೆ. ಈ ತೆಂಗಿನೆಣ್ಣೆ ಹೆಚ್ಚಿನ ಉಷ್ಣತೆಯಲ್ಲಿ ಕುದಿಸಿದರೂ ಇತರ ಎಣ್ಣೆಗಳಂತೆ ವಿಷಕಾರಿ ಸಂಯುಕ್ತಗಳನ್ನು ಹೊರಸೂಸುವುದಿಲ್ಲ. ಇದು ಚರ್ಮದ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದೆ. ಇಲ್ಲಿ ತಯಾರಾಗುವ ಜೇನುತುಪ್ಪವು ತಿಳಿಯಾದ ಬಣ್ಣ ಹಾಗೂ ಸೊಗಸಾದ ರುಚಿಯನ್ನು ಹೊಂದಿದ್ದು, ಯಾವುದೇ ಸೇರಿಸಿದ ಅಂಶಗಳಿಲ್ಲದೆ ಆರೋಗ್ಯಕಾರಿ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ.

ಆರ್ಗ್ಯಾನಿಕ್‌ ಎಕ್ಸ್‌ಪ್ರೆಸ್‌ ಉತ್ಪನ್ನಗಳ ಹೆಚ್ಚಿನ ವಿವರ ಹಾಗೂ ಆನ್‌ಲೈನ್‌ ಮೂಲಕ ತರಿಸಿಕೊಳ್ಳುವ ವಿವರಗಳು https://organicexpress.co.in/ನಲ್ಲಿ ಲಭ್ಯವಿವೆ.

ಇದನ್ನೂ ಓದಿ: Yoga Day 2022 | ಯೋಗ ದಿನ ನಡೆದ ಕರ್ನಾಟಕದ 5 ಪಾರಂಪರಿಕ ತಾಣಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Tomato Price: ಗ್ರಾಹಕನ ಜೇಬು ಸುಡಲು ಟೊಮ್ಯಾಟೊ ಸಜ್ಜು, ಬಾಕ್ಸ್‌ಗೆ 400 ರೂಪಾಯಿಗೆ ಬೆಲೆ ಏರಿಕೆ

Tomato Price: ಬಿಸಿಲಿನ ತಾಪಕ್ಕೆ ಹೆಚ್ಚಾಗಿ ಫಸಲು ಬಾರದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚುತ್ತಿದೆ. ಜೊತೆಗೆ ಟೊಮ್ಯಾಟೊ ಬೆಳೆಗೆ ಬಿನುಗು ರೋಗ ತಗುಲಿದ ಹಿನ್ನೆಲೆಯಲ್ಲಿ‌ ನಿರೀಕ್ಷಿತ ಫಸಲು ಕೂಡ ಬಂದಿಲ್ಲ.

VISTARANEWS.COM


on

tomato price rise
Koo

ಚಿಕ್ಕಬಳ್ಳಾಪುರ‌: ಟೊಮ್ಯಾಟೊ ಬೆಲೆ (tomato price) ಪುನಃ ನಾನೂರು ರೂಪಾಯಿ ದಾಟಿದೆ. ಹತ್ತು ಕೆಜಿ ಟೊಮ್ಯಾಟೊ ಬಾಕ್ಸ್ ಬೆಲೆ‌ (tomato price rise) ನಾನೂರು ರೂಪಾಯಿ ತಲುಪಿದ್ದು, ಗ್ರಾಹಕರ ಕೈ ಸುಡಲು ಸಿದ್ಧವಾಗಿದೆ.

ಬಿಸಿಲಿನ ತಾಪಕ್ಕೆ ಹೆಚ್ಚಾಗಿ ಫಸಲು ಬಾರದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚುತ್ತಿದೆ. ಜೊತೆಗೆ ಟೊಮ್ಯಾಟೊ ಬೆಳೆಗೆ ಬಿನುಗು ರೋಗ ತಗುಲಿದ ಹಿನ್ನೆಲೆಯಲ್ಲಿ‌ ನಿರೀಕ್ಷಿತ ಫಸಲು ಕೂಡ ಬಂದಿಲ್ಲ. ಆ ಬಾರಿ ಬಿಸಿಲಿನ ಪರಿಣಾಮ ನಿರೀಕ್ಷೆಗಿಂತ ಮೊದಲೇ ನೀರಿನ ಲಭ್ಯತೆ ಕಡಿಮೆಯಾಗಿದೆ. ಬೋರ್ವೆಲ್‌ಗಳಲ್ಲಿಯೂ ನೀರು ಬತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವು ರೈತರು ಟೊಮ್ಯಾಟೋ ಬೆಳೆಯಲು ಮುಂದಾಗಿಲ್ಲ.

ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಮುಂಜಾನೆ ಟೊಮ್ಯಾಟೊಗೆ ನಾನೂರು ರೂಪಾಯಿ ನಿಗದಿ ಮಾಡಲಾಗಿದೆ. ನಾಳೆ ನಾಡಿದ್ದರಲ್ಲಿ ಮತ್ತಷ್ಟು ಏರಬಹುದು ಎಂದು ನಿರೀಕ್ಷಿಸಲಾಗಿದೆ.

ಬೆಲೆ ಏರಿಕೆಗೆ ಕಾರಣ

ಉತ್ಪಾದನೆಯಲ್ಲಿ ಕುಸಿತ, ಹವಾಮಾನ ವೈಪರೀತ್ಯ, ಅತಿಯಾದ ಬಿಸಿಲು ಹಾಗೂ ಉಷ್ಣ ವಾತಾವರಣದಿಂದ ಬೆಳೆ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ. ಒಂದು ಅಧ್ಯಯನದ ಪ್ರಕಾರ ಗ್ರಾಹಕ ಕೊಂಡುಕೊಳ್ಳುವ ಬೆಲೆಯಲ್ಲಿ ರೈತನಿಗೆ ಕೇವಲ ಶೇಕಡಾ 32ರಷ್ಟು ಮಾತ್ರ ದಕ್ಕುತ್ತದೆ.

ಟೊಮೆಟೊ ಹೆಚ್ಚು ಬೆಳೆಯುವುದು ಎಲ್ಲಿ?

ಆಂಧ್ರಪ್ರದೇಶ, ಕರ್ನಾಟಕದ, ಒಡಿಶಾ, ಗುಜರಾತ್ ಮತ್ತು ಮಧ್ಯ ಪ್ರದೇಶದಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತದೆ. ಈ ರಾಜ್ಯಗಳು ದೇಶದ ಒಟ್ಟು ಉತ್ಪಾದನೆಯು ಶೇಕಡಾ ಐವತ್ತರಷ್ಟು ಕೊಡುಗೆ ನೀಡುತ್ತವೆ. ಛತ್ತೀಸ್ ಗಢ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ, ಪಶ್ಚಿಮ ಬಂಗಾಳ, ಬಿಹಾರ ತೆಲಂಗಾಣ ಶೇಕಡಾ 40 ರಷ್ಟು ಟೊಮೆಟೊ ಉತ್ಪಾದನೆ ಮಾಡುತ್ತವೆ. ಮುಂಗಾರು ಮತ್ತು ಹಿಂಗಾರು ಬೆಳೆಯಾಗಿ ಟೊಮ್ಯಾಟೊ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಆಗಸ್ಟ್ ನಡುವೆ ಹಿಂಗಾರು ಬೆಳೆಯಲಾಗುತ್ತದೆ. ಮುಂಗಾರು ಬೆಳೆ ಸೆಪ್ಟಂಬರ್ ತಿಂಗಳಿನಿಂದ ಕೊಯ್ಲಿಗೆ ಬರುತ್ತದೆ. ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆಗಾಲದಲ್ಲಿ ಟೊಮ್ಯಾಟೊ ಬೆಳೆಯುತ್ತಾರೆ. ಬೇಸಿಗೆಯ ಉತ್ಪಾದನೆಯ ಶೇಕಡಾ 90ರಷ್ಟು ಬೆಳೆಯನ್ನು ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ಬೆಳೆಯುತ್ತಾರೆ.

ಮಾಹಿತಿಗಳ ಪ್ರಕಾರ 2020ರಿಂದ ಟೊಮ್ಯಾಟೊ ಉತ್ಪಾದನೆ ಕಡಿಮೆಯಾಗುತ್ತಿದೆ. 2019-2 0ರಲ್ಲಿ 21.187 ಮಿಲಿಯನ್ ಟನ್ ಗಳಷ್ಟು ಟೊಮ್ಯಾಟೊ ಉತ್ಪಾದನೆ ಆಗಿದ್ದರೆ 2020-21ರಲ್ಲೂ 20.69ಮಿಲಿಯನ್ ಟನ್ ಗೆ ಇಳಿದಿದೆ. 2022-23ರಲ್ಲೂ 20.62 ಮಿಲಿಯನ್ ಟನ್ ಗೆ ಕುಸಿದಿದೆ.

ಇದನ್ನೂ ಓದಿ: Sugar Price: ಟೊಮ್ಯಾಟೊ ‘ಹುಳಿ’ಯಾದ ಬೆನ್ನಲ್ಲೇ ಸಕ್ಕರೆ ‘ಕಹಿ’; ಜನರ ಹಬ್ಬದ ಖುಷಿಗೆ ಬೆಲೆಯೇರಿಕೆ ಬಿಸಿ

Continue Reading

ಚಿತ್ರದುರ್ಗ

Arecanut Cultivation: ಒಣಗುತ್ತಿರುವುದು ಅಡಿಕೆ ಮರಗಳಲ್ಲ, ರೈತರ ಬದುಕು!

Arecanut Cultivation: ಬೇಸಿಗೆಯಲ್ಲಿ ಹಲವೆಡೆ ಕುಡಿಯುವ ನೀರಿಲ್ಲದೆ ಜನ ಸಂಕಷ್ಟ ಎದುರಿಸುವಂತಾಗಿದೆ. ಮತ್ತೊಂದೆಡೆ ಮಳೆಯಿಲ್ಲದೆ ಅಡಿಕೆ ಸೇರಿ ವಿವಿಧ ರೀತಿಯ ಬೆಳೆಗಳು ಒಣಗುತ್ತಿದ್ದು, ಚಿತ್ರದುರ್ಗದ ಚಳ್ಳಕೆರೆ ತಾಲೂಕಿನಲ್ಲಿ ನೀರಿನ ಅಭಾವದಿಂದ ಅಡಿಕೆ ಮರಗಳು ಒಣಗುತ್ತಿವೆ. ಇದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.

VISTARANEWS.COM


on

Arecanut cultivation
Koo

ಚಳ್ಳಕೆರೆ: ಬರಗಾಲಕ್ಕೆ ತುತ್ತಾದ ಚಳ್ಳಕೆರೆ ತಾಲೂಕಿನ ರೈತರಿಗೆ ಅನಿವಾರ್ಯವಾದದ್ದೇ ಅಡಿಕೆ ಬೆಳೆ (Arecanut Cultivation). ಸಾವಿರಾರು ಹೆಕ್ಟೇರ್​ನಲ್ಲಿ ಅಡಿಕೆ ಬೆಳೆದು ಬದುಕು ಸಾಗಿಸಲು ಕನಸು ಕಂಡಿದ್ದ ಬೆಳೆಗಾರರ ಬದುಕೀಗ ಬಿಸಿಲ ಬೇಗೆಗೆ ಸುಟ್ಟು ಕರಕಲಾಗಿದೆ. ಹಚ್ಚ- ಹಸಿರಿನಿಂದ ರಾರಾಜಿಸುತ್ತಿದ್ದ ಅಡಿಕೆ ಮರಗಳು ನೀರಿಲ್ಲದೇ ಒಣಗಿ ನಿಲ್ಲುತ್ತಿವೆ. ಬೋರ್​ವೆಲ್​ನಲ್ಲಿ ನೀರು ನಿಲ್ಲುತ್ತಿದ್ದಂತೆ ಮರಗಳು ಸುಡಲು ಆರಂಭಿಸಿವೆ. ಒಣಗುತ್ತಿರುವುದು ಮರಗಳಲ್ಲ. ನಮ್ಮ ಬದುಕು ಎಂದು ಬೆಳೆಗಾರರು ಕಂಗಾಲಾಗಿದ್ದಾರೆ.

ಅತ್ತ ಮಳೆ ಇಲ್ಲ. ಇತ್ತ ನೆಲದಲ್ಲಿ ನೀರಿಲ್ಲ. ಎಷ್ಟು ಬೋರ್ ಕೊರೆಯಿಸಿದರು. ನೀರು ಬರುತ್ತಿಲ್ಲ.
ಇನ್ನು ಒಂದು ತಿಂಗಳ ಕಾಲ ಭೂಮಿಗೆ ಮಳೆ ಬಾರದಿದ್ದರೆ ಅದೆಷ್ಟೋ ಅಡಿಕೆ ತೋಟಗಳು ಒಣಗಿ ಹೋಗುತ್ತವೆ ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.

ತಾಲೂಕಿನ ಕಾಪರಹಳ್ಳಿ ಗ್ರಾಮದ ಗುರುಸ್ವಾಮಿ ರೈತ ತಮ್ಮ ಜಮೀನಿನಲ್ಲಿ ಅಡಿಕೆ ಬೆಳೆಯನ್ನು ಬೆಳೆದಿದ್ದು, ಈಗ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಅಡಿಕೆ ಬೆಳೆ ಸಂಪೂರ್ಣ ಒಣಗುತ್ತಿದೆ.

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…

Areca Agriculture
Aravind Sigadal
-ಅರವಿಂದ ಸಿಗದಾಳ್, ಮೇಲುಕೊಪ್ಪ

ಅಡಿಕೆ ಹಳದಿ ರೋಗಕ್ಕೆ ಕಾರಣ ಮತ್ತು ಔಷಧಿ (Areca Agriculture) ಎರಡೂ ಇನ್ನು ಪ್ರಶ್ನೆಯಾಗಿಯೇ ಉಳಿದಿವೆ. ಅಡಿಕೆ ಎಲೆ ಚುಕ್ಕಿ ರೋಗ ನಿರ್ದಿಷ್ಟ ಫಂಗಸ್‌ಗಳಿಂದ ಸಾಂಕ್ರಾಮಿಕವಾಗಿ ಹರಡುತ್ತಿರುವುದು ಕಾರಣ ಎಂದು ಗೊತ್ತಾಗಿದ್ದರೂ, ರೋಗಕ್ಕೆ ಇನ್ನೂ ಔಷಧಿಯನ್ನು ಕಂಡು ಹಿಡಿದಿಲ್ಲ. ಅನೇಕ ಫಂಗಿಸೈಡ್‌ಗಳನ್ನು ಪ್ರಯೋಗಿಸಿ ರೋಗದ ನಿಯಂತ್ರಣ ಪ್ರಯತ್ನ-ಪ್ರಯೋಗ ನೆಡೆಯುತ್ತಿದೆ. ರೋಗ ಬಂದ ಮೇಲೆ ಔಷಧಿ ಕೊಡುವ ಪ್ರಯತ್ನಗಳು ಸಹಜ ಮತ್ತು ಅಗತ್ಯ ಕೂಡ. ಅದರ ಜೊತೆಗೆ ರೋಗಗಳಿಗೆ ಕಾರಣವಾಗುವ ಮೂಲ ಯಾವುದು ಎಂಬ ಅಧ್ಯಯನ ಮತ್ತು ಪ್ರಯೋಗಗಳು ನಡೆಯಬೇಕು. ಆದರೆ ಅಡಿಕೆ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗಗಳ ವಿಚಾರದಲ್ಲಿ ಈ ಕಾರಣ ಕಂಡುಹಿಡಿಯುವ ಅಧ್ಯಯನ ಮತ್ತು ಪ್ರಯೋಗಗಳು ತಳ ಮಟ್ಟದಿಂದ ತೀವ್ರಗತಿಯಲ್ಲಿ ನಡೆಯುತ್ತಿಲ್ಲ.

ಹವಾಮಾನ ವೈಪರೀತ್ಯ ಪರಿಣಾಮ, ಮಣ್ಣು-ನೀರು-ಗಾಳಿ-ಅಡಿಕೆ ಮರದ ಒಳ ಭಾಗದಲ್ಲಿ ಆಗುತ್ತಿರುವ pH ವ್ಯತ್ಯಾಸ, ಕ್ಷೀಣಿಸುತ್ತಿರುವ ಮಣ್ಣಿನ ಫಲವತ್ತತೆ, ಅದಕ್ಕೆ ಕಾರಣವಾಗುತ್ತಿರುವ ರಾಸಾಯನಿಕಗಳ ಬಳಕೆ, ಮಣ್ಣಿನ ಸಾವಯವ ಇಂಗಾಲದ ಕೊರತೆ, ಪ್ರತಿಯೊಂದು ರೋಗದ ಲಕ್ಷಣ ಕಂಡಾಗಲೂ ಬಳಸುತ್ತಿರುವ ಅತಿಯಾದ ವಿಷ ಪೂರಿತ ಔಷಧಿಗಳು, ಬಳಸುತ್ತಿರುವ ಕಳೆ ನಾಶಕಗಳು, ಹೆಚ್ಚು ಇಳುವರಿ ಬಯಕೆಯಿಂದ ಮಾಡುತ್ತಿರುವ ಬೇಸಾಯ ಪದ್ದತಿಗಳು, ಇವೆಲ್ಲವುಗಳಿಂದ ಆಗುತ್ತಿರುವ ಪರಿಣಾಮ ಇವತ್ತು ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಅಡಿಕೆಗೆ ರೋಗಗಳು ಹೆಚ್ಚುತ್ತಿವೆ. ಆರೋಗ್ಯವಂತ ಅಡಿಕೆ ತೋಟಗಳಲ್ಲಿ ಸಾಂಪ್ರದಾಯಕವಾಗಿ ಬೇಸಾಯ ಮಾಡುವಾಗ ಸರಾಸರಿ ಎಕರೆಗೆ 12 ಕ್ವಿಂಟಾಲ್ ಬರುತ್ತಿದ್ದ ಅಡಿಕೆ ಈಗ ಆರೋಗ್ಯವಿರುವಂತೆ ಕಾಣುವ ತೋಟದಲ್ಲೂ ಸರಾಸರಿ 7-8 ಕ್ವಿಂಟಾಲ್ ಮೇಲೆ ಬರುತ್ತಿಲ್ಲ. ಹಳದಿ ಎಲೆ ರೋಗ ಬಂದಲ್ಲಿ ಇಳುವರಿ 2-3 ಕ್ವಿಂಟಾಲಿಗೆ ಇಳಿದಿದೆ. ಹಳದಿ ರೋಗ, ಎಲೆ ಚುಕ್ಕಿ ರೋಗ ಎರಡೂ ಇರುವಲ್ಲಿ ಎಕರೆಗೆ ಕ್ವಿಂಟಾಲ್ ಇರಲಿ, 60-70 ಕೆಜಿ ಅಡಿಕೆಯೂ ಆಗುತ್ತಿಲ್ಲ!

Areca nuts image

ವಯಸ್ಸಾದಂತೆ ರೋಗ

ಹೇಗೆ ಮನುಷ್ಯರಲ್ಲಿ 35ನೇ ವಯಸ್ಸಿನಲ್ಲಿ ಬಿಪಿ, ಡಯಾಬಿಟಿಸ್, ಗ್ಯಾಸ್ಟಿಕ್‌ನಂತಹ ಶಾಶ್ವತ ರೋಗಗಳು ಬರುವಂತೆ ಅಡಿಕೆ ತೆಂಗು ಮರಗಳಿಗೂ, ಸಾಮರ್ಥ್ಯ ಕಮ್ಮಿಯಾಗುವ, ರೊಗಗಳಿಗೆ ಬಲಿಯಾಗುವ, ಇಳುವರಿ ಕಮ್ಮಿಯಾಗುವ ಸ್ಥಿತಿ ಉಂಟಾಗುತ್ತಿವೆ. ಕಡಿಮೆ ಇಳುವರಿಯ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗುತ್ತಿದೆ. ಬಿಪಿ, ಡಯಾಬಿಟಿಸ್, ಗ್ಯಾಸ್ಟಿಕ್‌ನಂತೆ ಇಳುವರಿ ಕಡಿಮೆಯಾಗುವುದು ಶಾಶ್ವತ ಸಮಸ್ಯೆ ಆಗುತ್ತಿದೆ.
ಅತಿ ರಾಸಾಯನಿಕ ಬಳಕೆ, ಕೀಟನಾಶಕಗಳು, ಕ್ರಿಮಿನಾಶಕಗಳು, ರೋಗಗಳಿಗೆ ಕೊಡುತ್ತಿರುವ ರಾಸಾಯನಿಕ ಔಷಧಿಗಳು, ಕಡಿಮೆ ಆಗುತ್ತಿರುವ ಕೊಟ್ಟಿಗೆ ಗೊಬ್ಬರಗಳು, ಅವಜ್ಞಾನಿಕ ಕೃತಕ ಸಾವಯವ ಗೊಬ್ಬರ ಬಳಕೆಗಳ ನಡುವೆ ಸ್ವಾಭಾವಿಕವಾಗಿ ಉತ್ಪಾದನೆಗೊಳ್ಳುವ ಸಾವಯವ ಇಂಗಾಲದ ಕೊರತೆ ಅಡಿಕೆ ರೋಗಗಳಿಗೆ ಒಂದು ಪ್ರಮುಖ ಕಾರಣವಾಗಿದೆ.

Organic carbon

ಏನಿದು ಸಾವಯವ ಇಂಗಾಲ?

ಸರಳವಾಗಿ ಹೇಳುವುದಾದರೆ, ಪರಿಸರದಲ್ಲೇ ಇರುವ ಸಾವಯವ ವಸ್ತುಗಳು ಮತ್ತು ತ್ಯಾಜ್ಯಗಳು ಕೊಳೆಯುವುದರಿಂದ ಸಾವಯವ ಇಂಗಾಲ ಉತ್ಪತ್ತಿಯಾಗುತ್ತದೆ. ಮಣ್ಣಿನ ಫಲವತ್ತತೆ ಮತ್ತು ಗಿಡಗಳ ಬೆಳವಣಿಗೆಗೆ ಸಾವಯವ ಇಂಗಾಲ ಒಂದು ಪ್ರಮುಖ ಅಂಶ. ಗಿಡಗಳ ಆರೋಗ್ಯಕ್ಕೆ, ಉತ್ತಮ ಇಳುವರಿಗೆ, ಮಣ್ಣಿನ ಆರೋಗ್ಯಕ್ಕೆ ಈ ಸಾವಯವ ಇಂಗಾಲ ಅತ್ಯಗತ್ಯ. ಪರಿಸರದಲ್ಲಿ ಸಹಜವಾಗಿ ನೆಡೆಯುವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಈ ಸಾವಯವ ಇಂಗಾಲ ಉತ್ಪಾದನೆಯೂ ಒಂದು. ಮಣ್ಣಿನಲ್ಲಿ ತನ್ನಿಂದ ತಾನೆ ಉತ್ಪತ್ತಿಯಾಗುವ ಅನೇಕ ಜೀವಾಣುಗಳಿಗೆ ಆಹಾರವೂ ಈ ಸಾವಯವ ಇಂಗಾಲ. ಸಾವಯವ ಇಂಗಾಲಯುಕ್ತ ಮಣ್ಣು ಎಲ್ಲ ಸೂಕ್ಷ್ಮ ಜೀವಿಗಳಿಗೂ, ಎರೆಹುಳು, ಏಡಿಯಂತಹ ಜೀವಿಗಳಿಗೂ ಆಧಾರ. ಸಾವಯವ ಇಂಗಾಲದಿಂದ ಮಣ್ಣಿನಲ್ಲಿ ಸದಾ ತೇವದಿಂದ ಕೂಡಿದ ತಂಪಾದ ನೆಲೆ ಉಂಟಾಗುತ್ತದೆ. ಇದು ಅಗತ್ಯವಿರುವ ಎಲ್ಲ ಸೂಕ್ಷ್ಮ ಜೀವಿಗಳಿಗೆ ನೆಲೆ ಕೂಡ.

ಜೀವಾಣುಗಳಿಗೆ ದಾಹ

ನಮ್ಮ ಮಣ್ಣಿನಲ್ಲಿ ಕೋಟ್ಯಂತರ ಜೀವಾಣುಗಳಿವೆ. ಆದರೆ, ಸಾವಯವ ಪದ್ಧತಿ ಬಿಟ್ಟು ರಾಸಾಯನಿಕ ಬಳಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಈ ಜೀವಾಣುಗಳು ಹಸಿವು, ದಾಹದಿಂದ ಬಳಲುತ್ತಿವೆ. ಆಹಾರ, ನೀರು ಮತ್ತು ನೆರಳಿಲ್ಲದೆ ಒಣಗುತ್ತಿವೆ, ನಾಶವಾಗುತ್ತಿವೆ. ಮಣ್ಣಿನ ಇಂಗಾಲದ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿವೆ.
ಮಣ್ಣು ಜೀವಿಗಳಿಗೆ ಸೂಕ್ತ ಆಹಾರ, ನೀರು ನೀಡಿ ಜೀವಿಗಳು ನೆಮ್ಮದಿಯಿಂದ ಬದುಕಿ, ಬೆಳೆಯಲು ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ, ಅದರಲ್ಲೂ ಮುಖ್ಯವಾಗಿ ಕೃಷಿಕರ ಮೂಲ ಗುರಿಯಾಗಬೇಕು. ನೆಲದ ಮೇಲಿರುವ ನಮಗೆಲ್ಲರಿಗೂ ನೆಲದೊಳಗಿನ ಈ ಜೀವಿಗಳೇ ಆಧಾರ. ಇವಿಲ್ಲದೆ ನಾವಿಲ್ಲ. ಪೌಶ್ಟಿಕ ಆಹಾರ ಮತ್ತು ತಂಪಾದ ನೆಲೆಯನ್ನಷ್ಟೇ ಮಣ್ಣಿನ ಜೀವಾಣುಗಳು ನಮ್ಮಿಂದ ನಿರೀಕ್ಷಿಸುವುದು. ಈ ಮಣ್ಣುಜೀವಿಗಳು ಬದುಕುಳಿಯಲು ಸಮೃದ್ಧ ಆಹಾರ ಕೊಡಬೇಕು. ಎರೆಹುಳು ಮತ್ತಿತರ ಮಣ್ಣು ಜೀವಿಗಳಿಗೆ ಸಾವಯವ ಗೊಬ್ಬರವೇ ಉತ್ತಮ ಆಹಾರ. ಮಣ್ಣಲ್ಲಿ ಕೊಳೆತು ಕಳಿಯುವ ಈ ಗೊಬ್ಬರ ಮಣ್ಣುಜೀವಿಗಳಿಗೆ ಮೃಷ್ಟಾನ್ನದಂತೆ. ಬಳಿಕ ಇದುವೇ ನಮ್ಮ ನಿಮ್ಮೆಲ್ಲರ ಬೆಳೆಗಳನ್ನು ಕಾಯುವ, ಕಾಪಾಡುವ ಸಮೃದ್ಧ ಇಂಗಾಲವಾಗಿ ಮಾರ್ಪಡುತ್ತದೆ. ಈ ಇಂಗಾಲದಿಂದ ಮಣ್ಣು ಜೀವಿಗಳು ಬದುಕುಳಿಯಲು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. 
ಸಾವಯವ ಗೊಬ್ಬರವನ್ನು ತಿಂದು ಬದುಕುವ ಜೀವಿಗಳು ಕ್ರಮೇಣ ಗೊಬ್ಬರವನ್ನು ಗಿಡದ ಬೆಳವಣಿಗೆಗೆ ಅತ್ಯಗತ್ಯವಾದ ಪೋಷಕಾಂಶಗಳಾಗಿ ಪರಿವರ್ತಿಸುತ್ತವೆ. ಈ ವೇಳೆ ಮಣ್ಣಿನ ಮೇಲ್ಪದರದಲ್ಲಿ ಹ್ಯೂಮಸ್ ರೂಪುಗೊಳ್ಳುತ್ತದೆ. ಈ ಹ್ಯೂಮಸ್ ಮಣ್ಣಿನಲ್ಲಿ ಇಂಗಾಲದ ಅಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಮ್ಮ ಮಣ್ಣುಗಳಲ್ಲಿ ಇಂಗಾಲಾಂಶ ಹೆಚ್ಚಾದಾಗ, ನಮ್ಮ ಹೊಲ ತೋಟಗಳು ಸಕಲ ಪೋಷಕಾಂಶಗಳನ್ನೂ ಒಳಗೊಂಡ ಶಕ್ತಿಕೇಂದ್ರಗಳಾಗುತ್ತವೆ.
ದರಗು, ಸೊಪ್ಪು, ಕತ್ತರಿಸಿ ಅಲ್ಲೇ ಬಿಟ್ಟ ಕಳೆ, ಹಳೇ ಅಡಿಕೆ ಮರ, ಕಸಿ ಮಾಡಿದ ಇತರೆ ಮರ-ರೆಂಬೆ-ಕೊಂಬೆಗಳು ಮಣ್ಣಿನಲ್ಲಿ ಕೊಳೆತು, ಮಣ್ಣುಸ್ನೇಹಿ ಜೀವಾಣುಗಳು ಅದನ್ನು ಸೇವಿಸಿ, ಜೀರ್ಣಿಸಿಕೊಂಡು ವಿಸರ್ಜಿಸಿದಾಗ ಮಣ್ಣಿನಲ್ಲಿ ಇಂಗಾಲ ಸೇರಿಸಿಕೊಳ್ಳುತ್ತದೆ.

Soil carbon

ಮಣ್ಣಿನ ಇಂಗಾಲದ ಪ್ರಯೋಜನಗಳೇನು?

ಮುಖ್ಯವಾಗಿ ಇಂಗಾಲದ ಅಂಶ ಹೆಚ್ಚಾಗಿರುವ ಮಣ್ಣುಗಳಲ್ಲಿ ಇಳುವರಿಯಲ್ಲಿ ಸುಧಾರಣೆ ಕಾಣಬಹುದು. ಇಂಗಾಲ ಹೆಚ್ಚಾದರೆ, ಹೆಚ್ಚು ಪ್ರಮಾಣದಲ್ಲಿ ನೀರನ್ನು, ಪೋಷಕಾಂಶಗಳನ್ನು ಹಿಡಿದಿಡುವ ಸಾಮರ್ಥ್ಯ ಮಣ್ಣಿಗೆ ಬರುತ್ತದೆ. ಜೊತೆಗೆ ಗಿಡಗಳಿಗೆ ಅಗತ್ಯವಿದ್ದಾಗ ಮಾತ್ರ ಅವು ಬಳಕೆಯಾಗುತ್ತದೆ. ಈ ಮೂಲಕ ಬಿಸಿಲು ಹೆಚ್ಚಿದ್ದಾಗಲೂ ಸಹ ಗಿಡಗಳಿಗೆ ಅಗತ್ಯ ತೇವಾಂಶ ಮತ್ತು ಪೋಷಕಾಂಶಗಳು ಸಿಗುತ್ತವೆ. ಮಣ್ಣಲ್ಲಿನ ಸಾವಯವ ಇಂಗಾಲದ ಅಂಶ ಮಣ್ಣಿನ ರಸಸಾರವನ್ನು ಸಮತೋಲನದಲ್ಲಿ ಇರಿಸುತ್ತದೆ. ಮಣ್ಣಿನ pH ಸಮತೋಲನ ಅಡಿಕೆ, ತೆಂಗು ಮತ್ತು ಎಲ್ಲ ರೀತಿಯ ಸಸ್ಯ, ಮರಗಳ ಸರ್ವತೋಮುಖ ಬೆಳವಣಿಗೆಗೆ, ಅಧಿಕ ಇಳುವರಿಗೆ ಪ್ರಮುಖ ಅಂಶವಾಗುತ್ತದೆ. ಇಂಗಾಲದ ಅಂಶವಿರುವ ಮಣ್ಣು ಇತರೆ ಮಣ್ಣುಗಳಿಗಿಂತ ಫಲವತ್ತಾಗಿರುತ್ತದೆ. ಸಾವಯವ ಇಂಗಾಲದ ಅಂಶ ಇರುವ ಮಣ್ಣಿನಲ್ಲಿ ಅತಿ ಮಳೆ ಆದಾಗ ಉಂಟಾಗಬಹುದಾದ ಮಣ್ಣು ಸವಕಳಿಯನ್ನು ತಪ್ಪಿಸುತ್ತದೆ. ಮಣ್ಣಲ್ಲಿನ ಸಾವಯವ ವಸ್ತುವೇ ಪ್ರಧಾನ ಅಂಶವಾಗಿದ್ದು, ಇದರಿಂದ ಮಣ್ಣಲ್ಲಿ ಹೆಚ್ಚಾಗುವ ಮಣ್ಣು ಜೀವಿಗಳು ಮಾಲಿನ್ಯಕಾರಕ ವಸ್ತುಗಳನ್ನು ಹೀರಿ ಮಣ್ಣಿನ ವಾತಾವರಣವನ್ನು ಶುದ್ಧಗೊಳಿಸುತ್ತವೆ.

(ಕೆಲವು ಹಿರಿಯ ಅಡಿಕೆ ಬೆಳೆಗಾರರ ಅಭಿಪ್ರಾಯ, ಅಂತರ್ಜಾಲದಲ್ಲಿ ಸಿಕ್ಕಿದ ವಿವಿಧ ಮಾಹಿತಿಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ಲೇಖಕ ಮಾಡುತ್ತಿರುವ ಸಣ್ಣ ಮಟ್ಟದ ಪ್ರಾಯೋಗಿಕ ಅನುಭವಗಳ ಪಲಿತಾಂಶಗಳನ್ನು ಆಧರಿಸಿ ಸಂಕ್ಷೇಪಿಸಿ ಈ ಮಾಹಿತಿ ಬರಹ ಸಿದ್ಧಪಡಿಸಲಾಗಿದೆ. ಸಣ್ಣ ಮಟ್ಟದ ಪ್ರಾಯೋಗಿಕ ಅನುಭವ ಎಂದರೆ, ಕಳೆದ ಆರೇಳು ವರ್ಷಗಳಿಂದ ದರಗು, ಹಳು ಸೌರಿದ ತ್ಯಾಜ್ಯ, ಕೊನಮಟ್ಟೆ, ಒಣಗಿದ ಅಡಿಕೆ ಸಿಪ್ಪೆ, ಬಿದ್ದು ಹೋದ ಅಡಿಕೆ ಮರಗಳು, ಕಡಿದ ಕಾಫಿ-ಬಾಳೆ ಗಿಡಗಳ ತ್ಯಾಜ್ಯ, ಬೇಲಿ ಸೌರಿದ ತ್ಯಾಜ್ಯ, ಅಡಿಕೆ ಒಲೆ ಬೂದಿ, ಅಡಿಗೆ ಮನೆಯಲ್ಲಿ ಸೃಷ್ಟಿಗೊಂಡ ಹಸಿರು ತ್ಯಾಜ್ಯ, ಮೆಣಸಿನ ಕಾಳು ಬಿಡಿಸಿದ ಕರೆ….ಎಲ್ಲವನ್ನೂ ಅಡಿಕೆ ತೋಟಕ್ಕೆ ವಾಪಾಸ್ ಬಡಿಸಲಾಗುತ್ತಿದೆ! ಇದುವರೆಗೆ ಕಳೆ ನಾಶಕ ಬಳಸಿಲ್ಲ. ತೋಟಕ್ಕೆ ಬರುವವರು ಖಾಲಿ ಗುಟ್ಕಾ ಪ್ಲಾಸ್ಟಿಕ್ ಪೌಚ್‌ನ್ನೂ ಹಾಕದಂತೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ಬಂಧಗೊಳಿಸಲಾಗಿದೆ.)

Areca nuts image

ಕಾಫಿ ಸಿಪ್ಪೆ ಬಳಕೆ

ಇತ್ತೀಚೆಗೆ ಕೊಪ್ಪದ ಜೋಗಿಸರ ಸೂರ್ಯನಾರಾಯಣರವರು ಕಾಫಿ ಸಿಪ್ಪೆಯನ್ನೂ ಸಾವಯವ ಕಾರ್ಬನ್ ಹೆಚ್ಚಿಸಲು ಬಳಸಬಹುದು ಅಂತ ಪ್ರಾಯೋಗಿಕ ಅಧ್ಯಯನ ಮಾಡಿ ಸಲಹೆ ಕೊಟ್ಟಿದ್ದಾರೆ. ಅಡಿಕೆ ತ್ಯಾಜ್ಯ ವಸ್ತುಗಳ ಮರು ಬಳಕೆಯಿಂದ 30% ನಷ್ಟು NPK, ಇತರೆ ಪೋಷಕಾಂಶಗಳನ್ನು ಮತ್ತು ಹೆಚ್ಚಿನ ಇಂಗಾಲವನ್ನು ಉಚಿತವಾಗಿ ಪಡೆಯಬಹುದು ಎಂದು ಕೃಷಿ ವಿಜ್ಞಾನಿಗಳು ನಿರೂಪಿಸಿದ್ದಾರೆ. ಉಳಿದಂತೆ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸಲು ಅನೇಕ ಕ್ರಮಗಳಿವೆ. ಸಾಂಪ್ರದಾಯಿಕ ಕೊಟ್ಟಿಗೆ ಗೊಬ್ಬರ, ಕಬ್ಬಿನ ಸಿಪ್ಪೆ, ತೆಂಗಿನ ನಾರುಗಳಿಂದ ತಯಾರಿಸುತ್ತಿರುವ ಪ್ರೆಸ್ ಮಡ್ ಗೊಬ್ಬರಗಳ ಬಳಕೆಯಿಂದಲೂ ಮಣ್ಣಿನ ಇಂಗಾಲದ ಅಂಶವನ್ನು ಹೆಚ್ಚಿಸಬಹುದು. (ಈಗ ಮಾರ್ಕೇಟ್‌ನಲ್ಲಿ ಮಸಾಲೆ ದೋಸೆಯಂತೆ ಅತಿ ಬೇಡಿಕೆ ಮತ್ತು ಪೂರೈಕೆಯಾಗುತ್ತಿರುವ , ಪ್ರೆಸ್ ಮಡ್ ಗೊಬ್ಬರಗಳನ್ನು ಹೆಚ್ಚಾಗಿ ಅವೈಜ್ಞಾನಿಕವಾಗಿ ತಯಾರಾಗುತ್ತಿದೆ!! ಬಳಸುವಾಗ ಇಲ್ಲೊಂದು ಜಾಗ್ರತೆ ಬೇಕು. ಇದರ ಬಗ್ಗೆ ಮುಂದಿನ ಸಂಚಿಕೆಯೊಂದರಲ್ಲಿ ನೋಡೋಣ)
ಅಂದ ಹಾಗೆ, ಅಡಿಕೆ ತೋಟದಲ್ಲಿ ಸಾವಯವ ಇಂಗಾಲದ ಪ್ರಮಾಣ 0.75% ಗಿಂತ ಹೆಚ್ಚಿರಬೇಕು. ಇಂಗಾಲದ ಪ್ರಮಾಣ 1% – 2% ಇದ್ದರೆ ಅಡಿಕೆ ಇಳುವರಿಗೆ ಮತ್ತು ರೋಗಗಳ ನಿಂತ್ರಣಕ್ಕೆ ಹೆಚ್ಚು ಸಹಕಾರಿ. ಕನಿಷ್ಟಪಕ್ಷ ಮೂರು ವರ್ಷಗಳಿಗೆ ಒಮ್ಮೆಯಾದರೂ ಮಣ್ಣು ಪರೀಕ್ಷೆ ಮಾಡಿ, ನಮ್ಮ ತೋಟದ ಇಂಗಾಲದ ಪ್ರಮಾಣವನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಅಂಕಿ ಅಂಶಗಳ ಮಾಹಿತಿ ಪ್ರಕಾರ ಕರ್ನಾಟಕದ ಮಣ್ಣಿನ ಸರಾಸರಿ ಸಾವಯವ ಇಂಗಾಲದ ಪ್ರಮಾಣ 0.25% to 0.50% ಇದೆ. ಇರಬೇಕಾಗಿದ್ದು ಕನಿಷ್ಠ 0.75%!!!.

ಇದನ್ನೂ ಓದಿ | Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಹಾಗಾದರೆ, ಮಣ್ಣಿನಲ್ಲಿ ಸಾವಯವ ಇಂಗಾಲ ಕಡಿಮೆ ಆಗುವುದು ಹೇಗೆ?

ಮುಖ್ಯವಾಗಿ, ತೋಟ-ಗದ್ದೆಗಳಲ್ಲಿ ಬೆಳೆದು ಹೊರಗೆ ತರುವ ಉತ್ಪನ್ನಗಳಿಂದಲೇ ಬಹುತೇಕ ಸಾವಯವ ಇಂಗಾಲ ನಮ್ಮ ಜಮೀನಿನಿಂದ ಹೊರ ಹೋಗುತ್ತವೆ. ಕೃಷಿ ಭೂಮಿಯಲ್ಲಿ ಸೃಷ್ಟಿಯಾಗುವ ವೇಸ್ಟ್‌ನ್ನು (ಕಬ್ಬಿನ ಜಲ್ಲೆ, ಕಳೆ, ಉತ್ಪನ್ನಗಳ ಸಿಪ್ಪೆ) ಕೃಷಿ ಭೂಮಿಯಿಂದ ಹೊರ ಸಾಗಿಸುವಿದರಿಂದ ಮಣ್ಣಿನ ಇಂಗಾಲ ಕಡಿಮೆಯಾಗುತ್ತದೆ. ಇನ್ನುಳಿದಂತೆ, ಉಷ್ಣತೆ ಏರಿಕೆಯಿಂದಲೂ ಮಣ್ಣಿನ ಕಾರ್ಬನ್ ಕಡಿಮೆ ಆಗುತ್ತದೆ. ಅತಿಯಾದ ಕೆಮಿಕಲ್ ಬಳಸುವಿಕೆಯಿಂದಲೂ ಇಂಗಾಲ ಕಡಿಮೆಯಾಗುತ್ತಿದೆ.
ನಗರ ಪ್ರದೇಶದ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗುತ್ತಿರುವುದು ಸಮಸ್ಯೆಯಾದರೆ, ಗ್ರಾಮೀಣ ಕೃಷಿ ಭೂಮಿಯಲ್ಲಿ ಇಂಗಾಲದ ಪ್ರಮಾಣ ಕಡಿಮೆ ಆಗುತ್ತಿರುವುದು ಸಮಸ್ಯೆ! ಎರಡೂ ಮನುಷ್ಯನ ಬದುಕಿಗೆ ಮಾರಕ. ಆದರೆ, ಅದೇ ಆಗ್ತಾ ಇದೆ!
ಕೃಷಿ ಭೂಮಿಯಲ್ಲಿ ಇಂಗಾಲದ ಪ್ರಮಾಣ ಹೆಚ್ಚಿಸಲು ಗಂಭೀರ ಚಿಂತನೆ ಮತ್ತು ಅನುಷ್ಠಾನಕ್ಕೆ ರೈತರು ಮುಂದಾಗಬೇಕು.
ಪ್ರಯತ್ನ ಮಾಡೋಣ….

Continue Reading

ಕೃಷಿ

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

ಅಡಿಕೆ ಬೆಳೆ ಹಲವು ರೋಗಗಳಿಗೆ ತುತ್ತಾಗುತ್ತಿದೆ. ಒಂದೇ ದಾರಿ ಅಂದರೆ ಕ್ಯಾಲ್ಸಿಯಂ ಕೃಷಿ ಸುಣ್ಣವನ್ನು pH ಮಟ್ಟಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಬಳಸುವುದು. ಇದಿಷ್ಟು ಅನೇಕ ನುರಿತ ಪ್ರಗತಿಪರ ಕೃಷಿಕರ ಅನುಭವದಿಂದ, ಒಂದಿಷ್ಟು ಜನ ವಿಜ್ಞಾನಿಗಳಿಂದ ಮತ್ತು ಅಂತರ್ಜಾಲದಲ್ಲಿ ದೊರೆತ ಮಾಹಿತಿಗಳ ಸಾರ. ಅಡಿಕೆ ಬೆಳೆಗಾರರಿಗೆ ಉಪಯುಕ್ತವಾಗುವ ಮಾಹಿತಿ ಇಲ್ಲಿದೆ.

VISTARANEWS.COM


on

soil
Koo

| ಅರವಿಂದ ಸಿಗದಾಳ್, ಮೇಲುಕೊಪ್ಪ
ಬಿಸಿಲಿನ ಕಾವಿಗೆ ಲಿಂಬೆ ರಸ, ಬೆಲ್ಲ ಬೆರೆಸಿದ ಪಾನಕ ಕುಡಿದರೆ ಕುಡಿಯುತ್ತಾ ಇರೋಣ ಅನಿಸುತ್ತೆ. ಲಿಂಬೆ-ಬೆಲ್ಲದ ಪಾನಕವನ್ನು ಎಷ್ಟು ಕುಡಿದರೂ ಏನೂ ಆಗುವುದಿಲ್ಲ. ಮತ್ತೆರಡು ಬಾರಿ ನೇಚರ್ ಕಾಲ್‌ಗೆ ಹೋಗಬೇಕಾಗಬಹುದು ಅಷ್ಟೆ! ಅಷ್ಟು ಪಾನಕ ಕುಡಿದರೂ ಏನೂ ಆಗದೇ ಇರುವುದಕ್ಕೆ ಒಂದು ಮುಖ್ಯ ಕಾರಣ ಪಾನಕದಲ್ಲಿ ಬಳಸಿದ ಬೆಲ್ಲದಲ್ಲಿರುವ ಸುಣ್ಣದ ಅಂಶ! ಯಾವಾಗಲೂ ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ರೆ, ಜೆಲುಸಿಲ್ MPS ಅನ್ನುವ (ಅಥವಾ ಅದೇ ತರಹದ ಡೈಜಿನ್ ಮಾತ್ರೆ) ಒಂದು ಲೈಟ್ ಪಿಂಕ್ ಬಣ್ಣದ, ದಪ್ಪ ಸಿರಪ್ ಕೊಡ್ತಾ ಇದ್ರು. ಶುಂಠಿ ಪೆಪ್ಪರ್‌ಮೆಂಟಿನ ಪರಿಮಳದ ಅದರಲ್ಲಿ ಅಲ್ಯುಮಿನಿಯಂ ಹೈಡ್ರಾಕ್ಸೈಡ್ ಮತ್ತು ಮೆಗ್ನೀಶಿಯಂ ಹೈಡ್ರಾಕ್ಸೈಡ್ ಮೆಯಿನ್ ಇಂಗ್ರೀಡಿಯಂಟ್ಸ್. ಈ ಅಲ್ಯುಮಿನಿಯಂ ಮತ್ತು ಮೆಗ್ನೀಶಿಯಂ ಹೈಡ್ರಾಕ್ಸೈಡ್‌ಗಳು ಹೊಟ್ಟೆಯ ಮತ್ತು ದೇಹದ ಆ್ಯಸಿಡಿಟಿ pH ಮಟ್ಟವನ್ನು ಅಗತ್ಯದ 7.35ಗೆ ಬರುವಂತೆ ಮಾಡುತ್ತದೆ.

ಗ್ಯಾಸ್ಟಿಕ್ ಸಮಸ್ಯೆ ನಿಧಾನವಾಗಿ ನಾರ್ಮಲ್‌ಗೆ ಬರುತ್ತದೆ. (ಈಗ ಹೆಚ್ಚಾಗಿ ಈ ಸಿರಪ್ ಕೊಡುವುದು ಕಡಿಮೆ, ಪೆಂಟಾಪ್ರಸೋಲ್, ರ‌ನ್ಯಾನಿಟಡಿನ್ ಮಾತ್ರೆಗಳನ್ನು ಕೊಡುತ್ತಾರೆ. ಹೋಟೆಲ್ ಅಥವಾ ಊಟದ ಮನೆಗೆ ಹೋಗುವವರೂ ATM ಸ್ಮಾರ್ಟ್ ಕಾರ್ಡ್ ಜತೆ ಪಾಕೇಟ್‌ನಲ್ಲಿ ಒಂದು ಪೆಂಟಾಪ್ರೆಸೋಲ್ ಮಾತ್ರೆ ಇಟ್ಕೊಂಡು ಹೋಗುವವರೂ ಇದ್ದಾರೆ!

ಮನುಷ್ಯನ ರಕ್ತದಲ್ಲಿ pH ಮಟ್ಟ 7.35 to 7.45 ಇರಬೇಕು. 7.35ಗಿಂತ ಕಡಿಮೆ ಇದ್ದರೆ ಅದು ಅಸಿಡಿಕ್. ಅಸಿಡಿಕ್‌ಗೆ ಕಾರಣ ಹೆಚ್ಚಾಗಿ ಸೇವಿಸುವ ಕಾಫಿ, ಸ್ವೀಟು, ಕೆಲವು ಜ್ಯೂಸ್‌ಗಳು, ಕರಿದ ತಿಂಡಿಗಳು, ಕೆಮಿಕಲ್ ಮಿಶ್ರಿತ ಆಹಾರ, ಸೋಡಾ ಬೆರೆಸಿದ ವಡೆ/ಮೆಣಸಿನ ಕಾಯಿ ಬಜ್ಜಿ, ಜೆಂಕ್ ಫುಡ್‌ಗಳು, ಪ್ರಿಸರ್ವೆಟಿವ್, ಟೇಸ್ಟಿಂಗ್, ಪೌಡರ್, ವಿನೇಗರ್, ಕಲ್ಮಶ ವಾತಾವರಣ, ಹೈಪರ್‌ಟೆನ್ಷನ್ ಇತ್ಯಾದಿ. ಇದೆಲ್ಲದರ ಪರಿಣಾಮ ಗ್ಯಾಸ್ಟ್ರಿಕ್ ಎಂಬ ರೋಗವಲ್ಲದ ರೋಗದ ನಿತ್ಯ ಬಾಧೆ! ಗ್ಯಾಸ್ಟ್ರಿಕ್ ಅಂದ್ರೆ ವ್ಯತ್ಯಾಸ ಆದ pH ಮಟ್ಟ. ಗ್ಯಾಸ್ಟ್ರಿಕ್ ಆದಾಗ ದೇಹದ ಚಟುವಟಿಕೆ ಕ್ಷೀಣಿಸುತ್ತದೆ. ಬೇರೆ ಕಾಯಿಲೆಗಳಿಗೆ ಆಹ್ವಾನ ಆಗುತ್ತದೆ.

ಮನುಷ್ಯರಂತೆ ಮಣ್ಣು, ನೀರು, ವಾತಾವರಣ ಮತ್ತು ಸಸ್ಯಗಳ pH ವ್ಯತ್ಯಾಸ ಆದಾಗ ಅವುಗಳೂ ಅನಾರೋಗ್ಯದಿಂದ ಬಳಲುತ್ತವೆ. ಪ್ರಕೃತಿಯಲ್ಲಿ ಚೇತನ-ಚಟುವಟಿಕೆಗಳು ಕಮ್ಮಿಯಾಗುತ್ತವೆ. ಅನೇಕ ಗಿಡ ಮರಗಳ ಬೆಳವಣಿಗೆ ಕುಂಠಿತವಾಗುತ್ತವೆ.

ಮಣ್ಣಿನ pH ತುಂಬಾ ಕಮ್ಮಿಯಾದರೆ ಏನಾಗುತ್ತದೆ?

ಯಾವಾಗ ಮಣ್ಣಿನ pH ತುಂಬ ಕಮ್ಮಿಯಾಗುತ್ತದೆ (ಅಂದರೆ ಆ್ಯಸಿಡಿಕ್ ಆಗುತ್ತದೆ) ಆಗ ಗಿಡ ಮರಗಳು ತಮ್ಮ ಬೇರುಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಕಷ್ಟವಾಗುತ್ತದೆ. ಯಾವಾಗ ಗಿಡ ಮರಗಳಿಗೆ ಪೋಷಕಾಂಶಗಳು ಕಡಿಮೆಯಾಗುತ್ತವೆ ಪರಿಣಾಮ ಗಿಡ ಮರಗಳ ಬೆಳವಣಿಗೆ ಕಮ್ಮಿಯಾಗುತ್ತವೆ, ಸೊರಗುತ್ತವೆ ಮತ್ತು ರೋಗ ಬರುವ ಪರಿಸ್ಥಿತಿ ನಿರ್ಮಾಣವಾಗಬಹುದು. ಅದರ ಪರಿಣಾಮ ಹೂ ಬಿಡುವುವುದು ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ಮೇಲ್ಮೈ ಮಣ್ಣು ಹೆಚ್ಚು ಅ್ಯಸಿಡಿಕ್ ಆಗುವುದರಿಂದ ಗಿಡಗಳು ಹೂ ಬಿಡುವುದು ಕಡಿಮೆ. (‘ಮಳೆ ಜಾಸ್ತಿಯಾಗಿ ಮಳೆಗಾಲದಲ್ಲಿ ದೇವರಿಗೂ ಹೂವಿಲ್ಲ’ ಅನ್ನುವ ಮಾತು ನೆನಪಿಸಿಕೊಳ್ಳಿ). pH ಮಟ್ಟ ಕಡಿಮೆಯಾದಾಗ (ಅ್ಯಸಿಡಿಕ್ ಆದಾಗ) ಫಲ ಬಿಡುವ, ಬಿಟ್ಟ ಫಲ ಪಕ್ವವಾಗುವ (ಬೆಳೆಯುವ) ಗತಿಯೂ ನಿಧಾನವಾಗುತ್ತದೆ. ಮಣ್ಣಿನ pH ಮಟ್ಟ ಕಡಿಮೆಯಾದ ಕಾರಣ ಹಿಂಬೆಳಸು ಅಥವಾ ಅಡಿಕೆ ಕೊನೆ ತೆಗೆಯುವ ದಿನಗಳು ಮುಂದಕ್ಕೆ ಹೋಗುತ್ತವೆ. ಗಮನಿಸಿ ನವರಾತ್ರಿಗೆ ಅಡಿಕೆ ಕೊನೆ ತೆಗೆಯುತ್ತಿದ್ದವರು ದೀಪಾವಳಿ ಮುಗಿದು ಪಕ್ಷ ಕಳೆದರೂ ‘ಕೊನೆ ಬಂದಿಲ್ಲ ಅಂತಿರುತ್ತಾರೆ. ಇದಕ್ಕೆ ಬೇರೆ ಕಾರಣಗಳೂ (ಉಷ್ಣತೆ, ಚಳಿ, ಹ್ಯುಮಿಡಿಟಿ ಇತ್ಯಾದಿ) ಇರಬಹುದು. ಅದರ ಜತೆಗೆ ಮಣ್ಣಿನ pH ಕಡಿಮೆಯಾದ ಕಾರಣವೂ ಇರಬಹುದು ಎನ್ನುವ ಅಭಿಪ್ರಾಯ ಇದೆ.

ಎಲೆ ಚುಕ್ಕಿ ರೋಗ

ನಿರಂತರ ಸರಿ ಸುಮಾರು ಏಳು ತಿಂಗಳಿಗೂ ಹೆಚ್ಚು ಸುರಿದ ಮಳೆ ನೀರಿನಿಂದ ಮಣ್ಣಿನ pH ಮಟ್ಟ ತೀವ್ರವಾಗಿ ಕಡಿಮೆಯಾಗಿ ಅಡಿಕೆ ಮರಗಳು ಶಕ್ತಿಗುಂದಿ ಎಲೆ ಚುಕ್ಕಿ ರೋಗ, ಅಡಿಕೆ ಅಂಡೊಡಕು, ಅಡಿಕೆ ಬೆಳವಣಿಗೆ ಕಮ್ಮಿಯಾಗಿರುವುದು, ಅಡಿಕೆ ಹಡ್ಳು ಹಳದಿಯಾಗುವುದು, ಎಳೆ ಅಡಿಕೆಗಳು ಉದುರುವುದು, ಉದುರುವಾಗಲೂ ಚಿಗುರು ಅಡಿಕೆ ಹಳದಿ ಬಣ್ಣಕ್ಕೆ ತಿರುಗಿ ಉದುರುವುದು, ಕೊಳೆ ರೋಗ ಎಲ್ಲ ಕಾಣಿಸಬಹುದು.

ಸರ್ವೇಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಕ್ಯಾಲ್ಸಿಯಂ ಸುಣ್ಣ, ಡೋಲೋಮೇಟ್ ಸುಣ್ಣ ಬಳಕೆಗೆ ವಿಜ್ಞಾನಿಗಳು ಶಿಫಾರಸು ಮಾಡುತ್ತಾರೆ. (ಮನುಷ್ಯರ ದೇಹದ pH ವ್ಯತ್ಯಾಸದ ಗ್ಯಾಸ್ಟ್ರಿಕ್‌ ಸರಿಪಡಿಸಲು ಕೊಡುವ ಔಷಧಿಯಂತೆ)
ಅನೇಕರು ಏಪ್ರಿಲ್-ಮೇ ತಿಂಗಳಲ್ಲಿ ತೋಟಕ್ಕೆ ಸುಣ್ಣ ಕೊಟ್ಟಿದ್ದರೂ, ಮಳೆಯ ತೀವ್ರತೆ ಮತ್ತು ಮಳೆ ದೀರ್ಘಕಾಲ ಬಿದ್ದ ಪರಿಣಾಮವಾಗಿ ಮಣ್ಣಿನ pH ಕಮ್ಮಿಯಾಗಿರಬಹುದು.

ಸಾಂಪ್ರದಾಯಿಕ ಬೇಸಾಯ ಪದ್ಧತಿ ಮಾಯ

ಸಾಂಪ್ರದಾಯಿಕ ಬೇಸಾಯ ಪದ್ಧತಿ ಕಡಿಮೆ ಮಾಡಿ, ರಾಸಾಯನಿಕ ಗೊಬ್ಬರ ಬಳಸುವಿಕೆಯಿಂದಲೂ ಮಣ್ಣಿನ pH ಕಡಿಮೆಯಾಗಿರಬಹುದು. (ನಮಗೂ ಯಾವುದೇ ಔಷಧಿ ಕೊಟ್ಟರೂ ಅವುಗಳ ಜೊತೆ ದಿನಕ್ಕೆ ಒಂದರಂತಾದರೂ ಗ್ಯಾಸ್ಟ್ರಿಕ್‌ ಅಥವಾ ಆ್ಯಸಿಡಿಕ್ ಆಗದಂತೆ ಮಾತ್ರೆ ಕೊಡುವುದು ಸರ್ವೇಸಾಮಾನ್ಯ). ಅದೇ ರೀತಿ ಮೇಲೆ NPK ಕೆಮಿಕಲ್ ರಸಗೊಬ್ಬರಗಳೂ ಮಣ್ಣಿನ pH ಮಟ್ಟ ಇಳಿಸಿ, ಅಸಿಡಿಕ್ ಮಾಡುತ್ತವೆ ಎಂದಾಯ್ತು.

ಅಂತರ್ಜಾಲದಲ್ಲಿ ಏನಿದೆ ಉತ್ತರ?

ಅಂತರ್ಜಾಲದಲ್ಲಿ ಮಣ್ಣಿನ pH ಸಮಸ್ಯೆಗಳನ್ನು ಕೇಳಿದರೆ ಅದು ಕೊಡುವ ಉತ್ತರ: “Early identification of soil pH problems is important as it can be both costly and difficult to correct long-term nutrient deficiencies” ಎಂದು.

ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ, ಮಣ್ಣಿನ ನಿರಂತರ pH ಸಮತೋಲನ(6 ರಿಂದ 7.5) ವನ್ನು ಕಾಪಾಡಿಕೊಳ್ಳುವಲ್ಲಿ ನಾವು ಹೆಚ್ಚಿನ ಶ್ರಮ ವಹಿಸುವುದು ಈಗ ಇನ್ನೂ ಹೆಚ್ಚು ಅಗತ್ಯ ಅನಿಸುತ್ತದೆ. ಮೊದಲೇ ಹೇಳಿದಂತೆ, ಆರೊಗ್ಯವಂತ ಮನುಷ್ಯರಿಗೆ ರಕ್ತದ pH 7.35 to 7.45 ಇರಬೇಕು. 7.35 ಗಿಂತ ಕಡಿಮೆ ಇದ್ದರೆ ಅದು ಅ್ಯಸಿಡಿಕ್. ಅದೇ ರೀತಿ ಮಣ್ಣಿನ pH ಸಮತೋಲನ 6 ರಿಂದ 7.5 ಕಾಪಾಡಿಕೊಳ್ಳುವುದು, ಆ ಮೂಲಕ ಮಣ್ಣು ಅ್ಯಸಿಡಿಕ್ ಆಗದಂತೆ ನೋಡಿಕೊಳ್ಳುವುದು ಅನಿವಾರ್ಯ.

ಮಣ್ಣಿನ pH ಸಮತೋಲನ (6 ರಿಂದ 7.5) ಮಾಡುವುದು ಹೇಗೆ?

ಇದಕ್ಕಿರುವುದು ಒಂದೇ ದಾರಿ ಅಂದರೆ ಕ್ಯಾಲ್ಸಿಯಂ ಕೃಷಿ ಸುಣ್ಣವನ್ನು pH ಮಟ್ಟಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಬಳಸುವುದು. ಇದಿಷ್ಟು ಅನೇಕ ನುರಿತ ಪ್ರಗತಿಪರ ಕೃಷಿಕರ ಅನುಭವದಿಂದ, ಒಂದಿಷ್ಟು ಜನ ವಿಜ್ಞಾನಿಗಳಿಂದ ಮತ್ತು ಅಂತರ್ಜಾಲದಲ್ಲಿ ದೊರೆತ ಮಾಹಿತಿಗಳ ಸಂಕ್ಷಿಪ್ತ ರೂಪ.

ಅತಿಯಾದ ಮಳೆಯಿಂದ, ತೇವಾಂಶದ ಆರ್ದ್ರತೆಯಿಂದ ಮಣ್ಣು ಮಾತ್ರ ಅಲ್ಲ, ತೋಟದ ವಾತಾವರಣ, ಗಿಡ ಮರಗಳ ಒಳ ಭಾಗದ pH ಮಟ್ಟವೂ ಅ್ಯಸಿಡಿಕ್ ಆಗಬಹುದು ಎನ್ನುವುದು ಕೆಲವರ ಅಭಿಪ್ರಾಯ. ನೈಟ್ರೋಜನ್ ರಸಗೊಬ್ಬರ ಬಳಕೆಯೂ ಮಣ್ಣಿನ pH ಮಟ್ಟವನ್ನು ಕಡಿಮೆ ಮಾಡುತ್ತದೆಯಂತೆ. ಈ ಬಗ್ಗೆಯೂ ಹೆಚ್ಚಿನ ಗಮನ ಅಗತ್ಯ. ಇದು ಹೌದಾದರೆ ಮುಂಗಾರು ಮುನ್ನ ರಸಗೊಬ್ಬರ ಬೇಸಾಯವೂ ಮರು ಚಿಂತನೆ ಮಾಡಬೇಕು. ಈ ಎಲ್ಲಾ ಕಾರಣಗಳಿಂದ ಮಾಹಿತಿಗಳಿಂದ ಒಂದಂತು ಸ್ಪಷ್ಟ, ಎಲೆ ಚುಕ್ಕಿ ರೋಗ (ಮತ್ತಿತರ ರೋಗಗಳಾದ, ಅಡಿಕೆ ಅಂಡೊಡಕು, ಅಡಿಕೆ ಉದುರುವಿಕೆ, ಹಳದಿ ಎಲೆ ಇತ್ಯಾದಿಗಳು ಕೂಡ) ಹೆಚ್ಚುತ್ತಿರುವುದಕ್ಕೆ ಮಣ್ಣಿನ pH ಮಟ್ಟ ಇಳಿದು ಮಣ್ಣು ಅ್ಯಸಿಡಿಕ್ ಆಗುತ್ತಿರುವುದೂ ಒಂದು ಕಾರಣ. pH ಮಾತ್ರ ಕಾರಣ ಅಲ್ಲದಿರಬಹುದು, ಆದರೆ ಅದೂ ಒಂದು ಪ್ರಬಲವಾದ ಕಾರಣ. ಜತೆಗೆ ಫಂಗಸ್ ಬೆಳವಣಿಗೆ, ಪೌಷ್ಟಿಕಾಂಶ ಕೊರತೆಗೂ pH ಕಾರಣವಂತೂ ನಿಜ. ಇದಿಷ್ಟು ಮಣ್ಣಿನ pH ವಿಚಾರದ ಬೇಸಿಕ್ ವಿಚಾರಗಳು.

ಮಣ್ಣಿನ pH ವಿಚಾರದಲ್ಲಿ ಸರಕಾರ, ಇಲಾಖೆಗಳು, ಕೃಷಿ ವಿಜ್ಞಾನಿಗಳು ಏನು ಮಾಡಬೇಕು?

pH ನಿಯಂತ್ರಣದ ಸುಣ್ಣ ಬಳಕೆಯ ಮತ್ತು ಇತರ ಅಗತ್ಯ ವಿಚಾರದಲ್ಲಿ ಸರಕಾರ, ಅದರ ಇಲಾಖೆಗಳು ಮತ್ತು ಕೃಷಿ ವಿಜ್ಞಾನಿಗಳು ಹೆಚ್ಚಿನ ಗಮನ ಕೊಡಬೇಕಾಗಿದೆ:

  • ಸಾಮಾನ್ಯವಾಗಿ ಸಣ್ಣ ರೈತರು, ಅತಿ ಸಣ್ಣ ರೈತರು ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನ pH ತಿಳಿಯುವ ಕ್ರಮಕ್ಕೆ ಮುಂದಾಗುವುದಿಲ್ಲ.
    ಇಲಾಖೆಗಳು ರೈತರರಿಗೆ ಈ ಬಗ್ಗೆ ಮಾರ್ಗದರ್ಶನ ಮಾಡಬೇಕಿದೆ. (ಹಿಂದೆ ಆಕಾಶವಾಣಿಯ ಮೂಲಕ, ಹಳ್ಳಿಗಳಲ್ಲಿ ಕೃಷಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ, ಗೋಡೆ ಬರಹಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿತ್ತು. ಈಗ ಅವೆಲ್ಲ ನಿಂತು ಹೋಗಿವೆ.)
  • ತೋಟಗಾರಿಕೆ ಅಥವಾ ಕೃಷಿ ಇಲಾಖೆಗಳು ಮಣ್ಣಿನ ಯಾವ pH ಮಟ್ಟಕ್ಕೆ ಎಷ್ಟು ಸುಣ್ಣ ಬಳಸಬೇಕು ಎಂದು ನೇರವಾಗಿ ರೈತರಿಗೆ ತಿಳಿಸುವ ಪ್ರಯತ್ನ ಮಾಡುವುದಿಲ್ಲ. ಕೆಲವು ಕಡೆ, ಜನರಲ್ ಆಗಿ ಎಕರೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ 5 ಕ್ವಿಂಟಾಲ್ ಸುಣ್ಣ ಬಳಸಿ ಎಂದು ಶಿಫಾರಸ್ ಮಾಡುತ್ತಾರೆ. ಇದು ವೈಜ್ಞಾನಿಕ ಕ್ರಮ ಅಲ್ಲ.
  • ಸಬ್ಸಿಡಿ ದರದಲ್ಲಿ (ಒಂದು ಕೆ.ಜಿ. ಸುಣ್ಣಕ್ಕೆ 70 ಪೈಸೆ ದರದಲ್ಲಿ) ಕೃಷಿ ಇಲಾಖೆಯಿಂದ ಅಗ್ರಿ ಲೈಮ್ ಕೊಡಲಾಗುತ್ತಿತ್ತು. ಈಗ ಮೂರು ವರ್ಷಗಳಿಂದ ಹಾಗೆ ರಿಯಾಯ್ತಿಯಲ್ಲಿ ಸುಣ್ಣ ಕೊಡುವ ಕ್ರಮ ನಿಂತು ಹೋಗಿದೆ.
  • ಸುಣ್ಣ ಬಳಸುವ ಸಮಯವಾಗಿ ಸಾಮಾನ್ಯ ಏಪ್ರಿಲ್-ಮೇ‌ನಲ್ಲಿ ಬಳಸಲು ಶಿಫಾರಸ್ಸು ಮಾಡಲಾಗುತ್ತದೆ. ವಿಪರೀತ ಮಳೆ, ದೀರ್ಘಕಾಲದ ಮಳೆಯ ಕಾರಣ ಅಗತ್ಯ ಬಿದ್ದರೆ ಹೆಚ್ಚುವರಿಯಾಗಿ ಸುಣ್ಣ ಬಳಸಬಹುದಾ? ಹೌದಾದರೆ ಎಷ್ಟು ಪ್ರಮಾಣ? ಎಷ್ಟು ಸಮಯದ ಅಂತರದಲ್ಲಿ ಬಳಸಬೇಕು? ಈ ಬಗ್ಗೆ ಮಾಹಿತಿಗಳು ಇರುವುದಿಲ್ಲ.
  • ಅಗ್ರಿ ಲೈಮ್ ಮತ್ತು ಹರಳು ರೂಪದ ಡೋಲೋಮೇಟ್ (ಕ್ಯಾಲ್ಸಿಯಂ+ ಮೆಗ್ನೀಸಿಯಂ ಇರುವಂತಹದು) ಯಾವುದನ್ನು ಯಾವಾಗ ಬಳಸಬೇಕು ಎಂದು ಕ್ಲಿಯರ್ ಮಾಹಿತಿ ರೈತರಿಗೆ ತಿಳಿಸುವ ಪ್ರಯತ್ನ ಇಲ್ಲ. ಮಣ್ಣಿನ ಪರೀಕ್ಷೆಯ ವರದಿ ಮತ್ತು ಕಾಲಮಾನ, ಹವಾಮಾನಕ್ಕೆ ಅನುಗುಣವಾಗಿ ಇವುಗಳಲ್ಲಿ ಒಂದನ್ನು ಬಳಸಬೇಕಾಗುತ್ತದೆ.
  • ಸುಣ್ಣ ಬಳಸುವಾಗ ಅಡಿಕೆ ಮರದ ಬುಡ, ಪಟದ ಮಧ್ಯ, ಕಪ್ಪು ಎಲ್ಲಾ ಕಡೆ ಬಳಸಬೇಕಾ? ಈ ಬಗ್ಗೆ ಕೇಸ್ ಟು ಕೇಸ್ ಬೇಸಿಸ್ ಮಾಹಿತಿ ಕೊಡಬೇಕಾದ ಅಗತ್ಯ ಇಲಾಖೆಗಳದ್ದಾಗಬೇಕು.
  • ಸುಣ್ಣ ಎಷ್ಟು ಸಮಯದವರೆಗೆ ಮಣ್ಣಿನ pH ನಿಯಂತ್ರಣ ಮಾಡುತ್ತದೆ? ಅಗತ್ಯಕ್ಕಿಂತ ಹೆಚ್ಚು ಸುಣ್ಣದಿಂದ ಯಾವ ಯಾವ ಬೆಳೆಗೆ ಹೇಗೆ ತೊಂದರೆ ಆಗಬಹುದು? ಸುಣ್ಣ ಬಳಸುವಾಗಣ್ಣಿನಲ್ಲಿ ತೇವಾಂಶ ಹೇಗಿರಬೇಕು? ಬೇಸಿಗೆಯಲ್ಲಿ ಸುಣ್ಣ ಬಳಸಿದ ಮೇಲೆ ಯಾವಾಗ ನೀರು ಕೊಡಬೇಕು?….. ಹೀಗೆ ಉದ್ಭವಿಸುವ ಪ್ರಶ್ನೆಗಳಿಗೆ ವಿಜ್ಞಾನಿಗಳು, ಇಲಾಖೆಗಳು ಸುಲಭವಾಗಿ ಆಯಾಯ ಪ್ರದೇಶಗಳಲ್ಲಿ ರೈತರಿಗೆ ಮಾಹಿತಿ ಸಿಗುವಂತೆ ಮಾಡಬೇಕು.
  • ಸುಣ್ಣದ ಜೊತೆ ರಸಗೊಬ್ಬರ/ಸಾವಯವ ಗೊಬ್ಬರ ಒಟ್ಟಾಗಿ ಬಳಸಬಹುದಾ? ಮನುಷ್ಯನಿಗೆ ‘ರಾಸಾಯನಿಕ’ ಔಷಧಿ ಜೊತೆ ಅ್ಯಸಿಡಿಕ್ ಕಮ್ಮಿಯಾಗುವ ಮಾತ್ರೆ ಕೊಡುವಂತೆ, ಮಣ್ಣಿಗೂ ರಾಸಾಯನಿಕಗಳ ಜೊತೆ ಸುಣ್ಣ ಕೊಡಬೇಕಾಗಬಹುದಾ?
  • ಮಣ್ಣಿಗೆ ಸುಣ್ಣ ಬಳಸಿದಾಗ ಸೊಳ್ಳೆ, ನುಸಿ ತರಹದ ಕೀಟಗಳು ಕಮ್ಮಿಯಾಗುತ್ತವೆ. ಅದೇ ರೀತಿ ಕೆಲವು ಫಂಗಸ್‌ಗಳು ನಾಶವಾಗುತ್ತವೆ (ಮನೆಯ ಅಂಗಳದಲ್ಲಿ ಪಾಚಿ ಕಟ್ಟಿದಾಗ ಸುಣ್ಣ ಬಳಸಿ ಸರಿಪಡಿಸಲಾಗುತ್ತದೆ. ಪಾಚಿಯೂ ಒಂದು ರೀತಿ ಫಂಗಸ್ಸೇ ಅಲ್ವಾ?) ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಹಿತಿ ಸಿಗುವಂತಾಗಬೇಕು. ಸುಣ್ಣದಿಂದ ಉಪಯೋಗಕರ ಶಿಲೀಂಧ್ರಗಳು ನಾಶವಾಗುತ್ತವಾ? ಎರೆಹುಳುಗಳಿಗೆ ಸುಣ್ಣ ಅಪಾಯಕಾರಿಯಾ? ಉಪಯೋಗಕಾರಿಯಾ? ಎಂಬಂತಹ ಪ್ರಶ್ನೆಗಳಿಗೆ ಉತ್ತರದ ಮಾಹಿತಿಗಳು ಇಲಾಖೆಯ ಸಂಶೋಧನಾ ಪುಸ್ತಕಗಳಲ್ಲಿ ಇರಬಹುದು. ಆದರೆ, ಅವುಗಳು ರೈತರಿಗೆ ತಲುಪುತ್ತಿಲ್ಲ, ಅದಾಗಬೇಕು.
  • ಅಡಿಕೆ ಕೊಳೆ ರೋಗಕ್ಕೆ ಕಾಪರ್ ಸಲ್ಫೇಟ್ ಬಳಸುವಾಗ 1% ಸುಣ್ಣ ಬಳಸಬೇಕು ಅಥವಾ ಬೋರ್ಡೋ ದ್ರಾವಣದ pH ಮಟ್ಟ +7 ಆಗಲು ಅಗತ್ಯ ಸುಣ್ಣ ಬಳಸಬೇಕು ಎಂದು ಶಿಫಾರಸ್‌ನಲ್ಲಿ ಹೇಳಲಾಗುತ್ತದೆ. ಆದರೆ ಬೇರೆ ಯಾವ ಔಷಧಿಗಳ ಸ್ಪ್ರೇಗೆ ಸುಣ್ಣದ ಬಳಕೆ ಶಿಫಾರಸ್ ಮಾಡುವುದಿಲ್ಲ. ಅದರರ್ಥ ಬೇರೆ ಎಲ್ಲ ಔಷಧಿಗಳ pH ಮಟ್ಟ ಸಮಸ್ಥಿತಿಯಲ್ಲಿದೆ ಎಂದಾಗುವುದೆ? ಅಥವಾ pH ಸಮಸ್ಥಿತಿಗೆ ತರಲಾಗಿದೆ ಎಂದು ಅರ್ಥವೆ?
  • pH ತಕ್ಷಣ ನಿಯಂತ್ರಣಕ್ಕೆ ಬರೀ ಸುಣ್ಣವನ್ನು ದ್ರವ ರೂಪದಲ್ಲಿ ಮಣ್ಣಿಗೆ ಸ್ಪ್ರೇ ಮಾಡಬಹುದಾ?
  • ಬೋರ್ಡೋ ದ್ರಾವಣದಲ್ಲಿ ಶಿಫಾರಸ್ ಮಾಡಿದ್ದಕ್ಕಿಂತ ಹೆಚ್ಚು ಸುಣ್ಣ ಬಳಸುವ ಪದ್ದತಿ ಮಲೆನಾಡಿನ ಅನೇಕ ರೈತರಲ್ಲಿದೆ. ಹೆಚ್ಚು ಸುಣ್ಣ ಬಳಸಿದ ಪರಿಣಾಮವೇ, ಸುಣ್ಣದ ಪಾರ್ಟಿಕಲ್‌‌ಗಳೇ ನಿರ್ಧಿಷ್ಟ ಸಮಯದ ನಂತರ ಅಡಿಕೆ ಮತ್ತು ಎಲೆಗಳ ಮೇಲೆ ಶೇಕರಣೆಯಾಗಿ, ಪಾಚಿ ಕಟ್ಟಿ, ಫಂಗಸ್ ಬೆಳೆಯುವುದಕ್ಕೆ ಆ ಮೂಲಕ ಕೊಳೆ ರೋಗ ಹೆಚ್ಚುವುದಕ್ಕೆ ಕಾರಣವಾಗಬಹುದು ಎಂದು ಕೆಲವರ ಅಭಿಪ್ರಾಯ ಇದೆ. ಈ ಬಗ್ಗೆ ಸಂಶೋಧನಾ ಮಾಹಿತಿಗಳು ಇಲಾಖೆಗಳಲ್ಲಿ ವಿಜ್ಞಾನಗಳಲ್ಲಿ ಇರಬಹುದಾ?
  • ಮನುಷ್ಯರಿಗೆ ಆಪರೇಷನ್ ಆಗಬೇಕಾದರೆ BP, ಶುಗರ್ ಮತ್ತು ರಕ್ತದ pH ನಾರ್ಮಲ್ ಇರಬೇಕು. ಅದೇರೀತಿ ಅಡಿಕೆ ಗಿಡ ನೆಡುವಾಗ, ಬೇಸಾಯ ಮಾಡುವಾಗ, ಬೇಸಾಯದ ಉಳುಮೆ ಮಾಡುವಾಗ, ಬಹುಶಃ ಮರದಿಂದ ಫಸಲು ಕಿತ್ತು ತೆಗೆಯುವಾಗ(?), ರೋಗ ನಿಯಂತ್ರಣದ ಸಂಧರ್ಭಗಳಲ್ಲಿ, ಮರ ಮತ್ತು ಮಣ್ಣಿನ pH ಸಮತೋಲನ ಕಾಪಾಡುವುದು ಒಂದು ಅಗತ್ಯ ಪ್ರಕ್ರಿಯೆ ಅಲ್ವಾ? ಈ ಬಗ್ಗೆ ಕೃಷಿ ವಿಜ್ಞಾನಿಗಳು ಮಾಹಿತಿ ಕೊಡುವಂತಾಗಬೇಕು.
  • ಮಣ್ಣಿನ pH ಬಗ್ಗೆ ಒಂದಿಷ್ಟು ಮಾಹಿತಿಗಳಿವೆ ಆದರೆ, ಅಡಿಕೆ ಮರದಲ್ಲಿ ರೋಗ ಲಕ್ಷಣಗಳು ಕಂಡು ಬಂದಾಗ, ಅಡಿಕೆ ಮರದ pH ಕಡೆಗೆ ಒಂದಿಷ್ಟು ಗಮನ ಕೊಟ್ಟು, ಅಧ್ಯಯನ ಮಾಡಲಾಗಿದೆಯಾ? ಇಲಾಖೆಗಳಲ್ಲಿ ವರದಿ ಇರಬಹುದಾ?

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಎಲೆಚುಕ್ಕಿ ರೋಗ; ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಹೇಳಿಕೆಗಳೇ ಬೋಗಸ್‌! ಇಲ್ಲಿದೆ ಪುರಾವೆ

ಡಿವಿಜಿಯವರ ಒಂದು ಕಗ್ಗದ ಮುಕ್ತಕ ಹೀಗಿದೆ

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ?। ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ॥ ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು। ಗುಣಕೆ ಕಾರಣವೊಂದೆ? – ಮಂಕುತಿಮ್ಮ ॥
ಅಂದರೆ, ಭೂಮಿಯಲ್ಲಿ ಚಿಗುರುವ ಹುಲ್ಲಿಗೆ ಆ ಹಸಿರುಬಣ್ಣ ಎಲ್ಲಿದ ಬಂತು? ಬೇರಿನದೋ ? ಭೂಮಿಯದೋ? ಬೆಳಕ ನೀಡುವ ಸೂರ್ಯನದೋ? ಚಂದ್ರನದೋ? ಪೂರಕವಾದ ನೀರಿನದೋ? ಅದನ್ನು ಬೆಳೆಸಿದ ನಿನ್ನದೋ? ಅಥವಾ ತಂಪ ಕಾಣುವ ನಿನ್ನ ಕಣ್ಣಿನ ಪುಣ್ಯದ್ದೋ? ಆ ಹುಲ್ಲಿನ ಹಸಿರಿನ ಗುಣಕ್ಕೆ ಕಾರಣ ಒಂದೇ ಅಲ್ಲ. ಅನೇಕ ಕಾರಣಗಳಿವೆ ಎಂದು ಮುಕ್ತಕದ ಅರ್ಥ. ಆ ಅನೇಕದಲ್ಲಿ pH ಕೂಡ ಒಂದು ಪ್ರಮುಖವಾದುದು. ಗೊಬ್ಬರ, ಪೋಶಕಾಂಶಗಳಿಗಿಂತ ಹೆಚ್ಚಿನ ಮಹತ್ವವನ್ನು ಮಣ್ಣಿನ pH (ರಸಸಾರ) ಬಗ್ಗೆ ಕೊಡಬೇಕು.
ಗ್ಯಾಸ್ಟ್ರಿಕ್ ಆ್ಯಸಿಡಿಟಿ ಇದ್ದಾಗ ಯಾವ ಒಳ್ಳೆಯ ಊಟವೂ ಸೇರುವುದಿಲ್ಲ. ತಿಂದರೆ ಜೀರ್ಣವೂ ಆಗುವುದಿಲ್ಲ. ಇದು ಕೃಷಿಗೂ ಅನ್ವಯ. ಮಣ್ಣಿನ ಆ್ಯಸಿಡಿಟಿ ಸರಿ ಮಾಡಿಕೊಂಡು, ಬೇಸಾಯದ ಊಟ ಬಡಿಸಬೇಕು.

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…

Continue Reading

ಕರ್ನಾಟಕ

ವಿಸ್ತಾರ ಗ್ರಾಮ ದನಿ: ಅಡಿಕೆ ತೋಟಗಳಲ್ಲಿ ಈಗ ಪ್ರೆಸ್‌ಮಡ್ ಗೊಬ್ಬರಗಳದ್ದೇ ದಾಂಗುಡಿ!

ಸರಳವಾಗಿ ಹೇಳುವುದಾದರೆ, ಸಕ್ಕರೆ ಕಾರ್ಖಾನೆಯಿಂದ ಹೊರ ಬೀಳುವ ಅರೆದ ಕಬ್ಬಿನ ಘನತ್ಯಾಜ್ಯ ವಸ್ತುವೇ ಪ್ರೆಸ್‌ಮಡ್. ಸಕ್ಕರೆ ಕಾರ್ಖಾನೆಯಿಂದ ಹೊರಬೀಳುವ ಪ್ರೆಸ್‌ಮಡ್‌ನ್ನು ಸಂಸ್ಕರಿಸಿ, ಕಾಂಪೋಸ್ಟ್ ಮಾಡಿ, ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. ಇನ್ನು ಕೆಲವು ಕಡೆ ಸೂಕ್ಷ್ಮ ಜೀವಾಣುಗಳನ್ನು ಬಳಸಿ ಬೇಗನೆ ಪ್ರೆಸ್‌ಮಡ್ ಗೊಬ್ಬರ ತಯಾರಿಸಲಾಗುತ್ತದೆಯಂತೆ.

VISTARANEWS.COM


on

vistara grama dani ವಿಸ್ತಾರ ಗ್ರಾಮ ದನಿ
ಮ್ಯಾಮ್‌ಕೋಸ್‌ ಸಂಸ್ಥೆಯ ಗೊಬ್ಬರದ ಚೀಲ
Koo
Aravind Sigadal

| ಅರವಿಂದ ಸಿಗದಾಳ್, ಮೇಲುಕೊಪ್ಪ
ಒಂದು ಕಾಲದಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ಅಡಿಕೆ ತೋಟಗಳ ಬೇಸಾಯಕ್ಕೆ ಕೊಟ್ಟಿಗೆ ಗೊಬ್ಬರವೇ ಪ್ರಮುಖವಾಗಿತ್ತು. ಸಣ್ಣ ಮಧ್ಯಮ ರೈತರ ಮನೆಗಳಲ್ಲಿ ಹಾಲು, ಗೊಬ್ಬರಕ್ಕೆ ಅಂತ ಕನಿಷ್ಠ ಒಂದೆರಡು ದನಗಳನ್ನಾದರೂ ಸಾಕುತ್ತಿದ್ದರು. ಕಾಲ ಬದಲಾದಂತೆ, ಹಿಂಡಿ, ಮೇವುಗಳ ಬೆಲೆ ದುಬಾರಿಯಾಗಿ ಒಂದೆರಡು ದನ ಸಾಕುವುದು ನಷ್ಟದಾಯಕ ಅಂತಾಯ್ತು. ಗೋಮಾಳದ ಜಾಗಗಳೆಲ್ಲ ಕೃಷಿ ಭೂಮಿಯಾಗಿ ವಿಸ್ತರಿಸಿತು ಅಥವಾ ಮನೆದಳ ಜಾಗವಾಯಿತು. ಕುಟುಂಬ ಚಿಕ್ಕದಾಗಿದ್ದು, ಹೊಸ ತಲೆಮಾರು ಕೊಟ್ಟಿಗೆ ಕೆಲಸಗಳಿಂದ ದೂರವಾದರು. ಉಳುಮೆ ಮಾಡುವುದಕ್ಕೆ ಯಂತ್ರಗಳು ಬಂದವು. ಕೊಟ್ಟಿಗೆಗೆ ಬೇಕಿದ್ದ ಸೊಪ್ಪು, ದರಗು ತರುವುದಕ್ಕೆ ಆಳುಗಳು ಸಿಗದ ಪರಿಸ್ಥಿತಿ ಬಂತು. ಹೀಗೆ ಹಲವಾರು ಕಾರಣಗಳಿಂದ ಹಳ್ಳಿಯ ಪ್ರತೀ ಮನೆಗಳಲ್ಲಿದ್ದ ದನ, ಎತ್ತು, ಎಮ್ಮೆಗಳು ಕ್ರಮೇಣ ಮಾಯವಾದವು. ಪರಿಣಾಮ ತೋಟಕ್ಕೆ ಕೊಟ್ಟಿಗೆ ಗೊಬ್ಬರ ಇಲ್ಲ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿ ಹೋಯ್ತು.
ಆಗ ಬಂದಿದ್ದು ಕುರಿ ಗೊಬ್ಬರ, ಕೋಳಿ ಗೊಬ್ಬರ ಮತ್ತು ದೊಡ್ಡ ಮಟ್ಟದಲ್ಲಿ 30kg, 40kg, 50kg ಚೀಲಗಳಲ್ಲಿ ಪ್ಯಾಕ್ ಆಗಿ ಬಂದ ‘ಪ್ರಸ್‌ಮಡ್ ಗೊಬ್ಬರ’.

ಏನಿದು ‘ಪ್ರೆಸ್‌ಮಡ್ ಗೊಬ್ಬರ?

ಸರಳವಾಗಿ ಹೇಳುವುದಾದರೆ, ಸಕ್ಕರೆ ಕಾರ್ಖಾನೆಯಿಂದ ಹೊರ ಬೀಳುವ ಅರೆದ ಕಬ್ಬಿನ ಘನತ್ಯಾಜ್ಯ ವಸ್ತುವೇ ಪ್ರೆಸ್‌ಮಡ್. ಸಕ್ಕರೆ ಕಾರ್ಖಾನೆಯಿಂದ ಹೊರಬೀಳುವ ಪ್ರೆಸ್‌ಮಡ್‌ನ್ನು ಸಂಸ್ಕರಿಸಿ, ಕಾಂಪೋಸ್ಟ್ ಮಾಡಿ, ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. ಸಕ್ಕರೆ ಕಾರ್ಖಾನೆಯ ಹೊರಹೊಮ್ಮುವ ಇನ್ನೊಂದು ಘನತ್ಯಾಜ್ಯ ವಸ್ತು ಮೊಲ್ಯಾಸೆಸ್‌. ಈ ಮೊಲ್ಯಾಸೆಸ್‌ನ್ನು ಬಳಸಿಕೊಂಡು ಸಾರಾಯಿ ತಯಾರಿಸಲಾಗುತ್ತದೆ. ಹಾಗೆ ಸರಾಯಿ ತಯಾರಿಸುವಾಗ ಹೊರಬೀಳುವ ಸ್ಪೆಂಟ್‌ವಾಶ್ ಎಂಬ ನಿರುಪಯುಕ್ತ ನೀರನ್ನು, ಅದೇ ಕಬ್ಬಿನ ತ್ಯಾಜ್ಯದಿಂದ ಉತ್ಪನ್ನವಾದ ಪ್ರೆಸ್‌ಮಡ್ ಸಾವಯವ ಗೊಬ್ಬರ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಕಬ್ಬಿನಿಂದ ಬಂದ ತ್ಯಾಜ್ಯ ಪ್ರೆಸ್‌ಮಡ್ ಅನ್ನು ಮೊದಲು ಬಯಲಿನಲ್ಲಿ ರಾಶಿ ಹಾಕಿ, ಒಣಗಿಸಲಾಗುತ್ತದೆ. ಅನೇಕ ಬಾರಿ ಯಂತ್ರಗಳನ್ನು ಬಳಸಿ, ಚನ್ನಾಗಿ ಮಿಶ್ರಣಗೊಳಿಸಲಾಗುತ್ತದೆ. ಸಹಜವಾಗಿ ಪ್ರೆಸ್‌ಮಡ್ ಕಾಂಪೋಸ್ಟ್ ಆಗಿ ಬದಲಾಗಲು 3-4 ತಿಂಗಳುಗಳೇಬೇಕು. ಆದರೆ, 3-4 ತಿಂಗಳುಗಳ ಕಾಲದ, ಪ್ರತಿ ದಿನದ ಕಬ್ಬಿನ ತ್ಯಾಜ್ಯ ಪ್ರೆಸ್‌ಮಡ್‌ನ್ನು ಶೇಖರಿಸುವಷ್ಟು ಸ್ಥಳ ಇಲ್ಲದ ಸಕ್ಕರೆ ಕಾರ್ಖಾನೆಗಳಲ್ಲಿ ಅಥವಾ ಮದ್ಯ ತಯಾರಿಕಾ ಡಿಸ್ಟಿಲರಿಗಳಲ್ಲಿ, ಕೆಲವು ಕೆಮಿಕಲ್‌ಗಳನ್ನೂ, ಇನ್ನು ಕೆಲವು ಕಡೆ ಸೂಕ್ಷ್ಮ ಜೀವಾಣುಗಳನ್ನು ಬಳಸಿ ಬೇಗನೆ ಪ್ರೆಸ್‌ಮಡ್ ಗೊಬ್ಬರ ತಯಾರಿಸಲಾಗುತ್ತದೆಯಂತೆ.

ಬ್ಯಾಕ್ಟೀರಿಯಾ ಮತ್ತು ಆ್ಯಕ್ಟಿನೋ ಮೈಸಿಟಸ್‌ಗಳಂತಹ ಜೀವಾಣು ಕೋಶಗಳನ್ನು ಪ್ರೆಸ್‌ಮಡ್‌ಗೆ ಸೇರಿಸಲಾಗುತ್ತದೆ. ಡಿಸ್ಟಿಲರೀಸ್‌ನಿಂದ ಹೊರಬರುವ ಸ್ಪೆಂಟ್‌ವಾಶ್ ನಿರುಪಯುಕ್ತ ನೀರನ್ನು ಲಾರಿಯ ಸಹಾಯದಿಂದ ಪ್ರೆಸ್‌ಮಡ್‌ಗೆ ಸಿಂಪಡಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಸುಮಾರು 3-4 ತಿಂಗಳುಗಳು ನಿರಂತರವಾಗಿ ನಡೆಯುತ್ತದೆ. (ಬೈ ಪಾಸ್ ಸಿಸ್ಟಮ್‌ನಲ್ಲಿ ಕೆಮಿಕಲ್ ಬಳಸಿ, 40-45 ದಿನಗಳಲ್ಲೂ ಪ್ರೆಸ್‌ಮಡ್ ಗೊಬ್ಬರ ತಯಾರಿಸುವ ಸಿಸ್ಟಮ್ ಕೂಡ ಇದೆಯಂತೆ! ನಂತರ ಯಂತ್ರಗಳ ಮೂಲಕ ಈ ಪ್ರೆಸ್‌ಮಡ್ ಗೊಬ್ಬರವನ್ನು ಪುಡಿಮಾಡಿ, ಟ್ರಕೋಡರ್ಮಾ, ಸ್ಯುಡೋಮಾನಸ್‌ನಂತಹ ಕೆಲವು ಅಗತ್ಯ ಸೂಕ್ಷ್ಮ ಜೀವಾಣುಗಳನ್ನು ಬೆರೆಸಿ, ಪ್ಯಾಕ್ ಮಾಡಲಾಗುತ್ತದೆ.

ಸಾವಯವ ಗೊಬ್ಬರ ಮಾರಾಟ ಮಾಡುವ ಕಂಪೆನಿಗಳು ಇದನ್ನು ಖರೀದಿಸಿ ತಮ್ಮ ಕಂಪೆನಿ ಹೆಸರಿನಲ್ಲಿ ರೈತರಿಗೆ ಮಾರಾಟ ಮಾಡುತ್ತವೆ. ಅಡಿಕೆ ಮಾರುಕಟ್ಟೆಯಲ್ಲಿ ದೊಡ್ಡ ಹೆಸರಿರುವ ಮ್ಯಾಮ್‌ಕೋಸ್, TSS ನಂತಹ ಸಹಕಾರಿ ಸಂಸ್ಥೆಗಳಲ್ಲದೆ ಹತ್ತಾರು ಖಾಸಗಿ ಸಂಸ್ಥೆಗಳು ಸ್ಪರ್ಧಾತ್ಮಕವಾಗಿ ಈ ಪ್ರೆಸ್‌ಮಡ್ ಗೊಬ್ಬರದ ವ್ಯವಹಾರದಲ್ಲಿ ತೊಡಗಿಸಿಕೊಂಡಿವೆ.

ಒಂದು ಕಾಲದಲ್ಲಿ, ಸಕ್ಕರೆ ಕಾರ್ಖಾನೆಗಳಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಹೇಗೆ ಅನ್ನುವ ಸಮಸ್ಯೆ ಇತ್ತು.
ಅಡಿಕೆ ತೋಟಗಳಿಗೆ ಕೊಟ್ಟಿಗೆ ಗೊಬ್ಬರ ಅಭಾವ ಸೃಷ್ಟಿಯಾದಾಗ, ಕಬ್ಬಿನ ತ್ಯಾಜ್ಯ ಪ್ರೆಸ್‌ಮಡ್ ಗೊಬ್ಬರವಾಗಿ ಅಡಿಕೆ ತೋಟಗಳಿಗೆ ಬಂದಿಳಿಯುವಂತಾಯ್ತು. ಈಗ ಮಲೆನಾಡು, ಕರಾವಳಿಯ ಅಡಿಕೆ ತೋಟಗಳಲ್ಲಿ ಪ್ರೆಸ್‌ಮಡ್‌ನದೇ ಬೇಸಾಯದ ಮೂಲವಸ್ತು. ಯಾವಾಗ ಪ್ರೆಸ್‌ಮಡ್ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿ, ವ್ಯಾಪಾರ, ಹಣ, ಲಾಭ ದೊಡ್ಡ ಮಟ್ಟದಲ್ಲಿ ಹರಿಯುವುದಕ್ಕೆ ಪ್ರಾರಂಭವಾಯಿತು, ಆಗ ಅನೇಕ ಕಡೆ, ತ್ವರಿತವಾಗಿ ಅವೈಜ್ಞಾನಿಕವಾಗಿ ಪ್ರೆಸ್‌ಮಡ್ ಗೊಬ್ಬರ ತಯಾರಿಕೆಯೂ ಪ್ರಾರಂಭವಾಯಿತು.

ಇದರ ಸಮಸ್ಯೆ ಏನು?

ಪ್ರೆಸ್‌ಮಡ್ ಗೊಬ್ಬರ ತಯಾರಾಗಬೇಕಾದರೆ, ಪ್ರೆಸ್‌ಮಡ್ ಕಾಂಪೋಸ್ಟ್ ಆಗಿ ಬದಲಾಗಬೇಕಾದರೆ ಬೇಕಾಗುವ ಸಾಮಾನ್ಯ ಸಹಜ ಲೀಡ್ ಟೈಮ್‌ನ್ನು ಕೆಲವು ಮಧ್ಯವರ್ತಿ ಏಜೆಂಟರು, ಸಂಸ್ಥೆಗಳು ಪರಿಗಣಿಸುತ್ತಿಲ್ಲ ಎಂಬುದು ಪ್ರೆಸ್‌ಮಡ್ ಗೊಬ್ಬರದ ಚೀಲ ತೋಟಕ್ಕೆ ಬಂದು ಬಿದ್ದಾಗ ರೈತರ ಅರಿವಿಗೆ ಬರುತ್ತಿದೆ. ಬರಿಗೈಯಲ್ಲಿ ಮುಟ್ಟಲಾರದಷ್ಟು ಬಿಸಿಯಲ್ಲಿ ಆ ಚೀಲಗಳಿರುತ್ತವೆ. ಕಂಪ್ಲೀಟ್ ಕಾಂಪೋಸ್ಟ್ ಆಗುವ ಮುನ್ನವೇ, ಅದನ್ನು ಚೀಲಕ್ಕೆ ತುಂಬಿ ರೈತರಿಗೆ ಮಾರಲಾಗಿರುತ್ತದೆ!

ಪ್ರೆಸ್‌ಮಡ್ ಗೊಬ್ಬರದ ವಿಚಾರದಲ್ಲಿ ರೈತರು ಕೇಳುವ ಪ್ರಶ್ನೆಗಳಿಗೆ ಅದರ ವರ್ತಕರಲ್ಲಿ, ವ್ಯಾಪಾರಿ ಸಂಸ್ಥೆಗಳಲ್ಲಿ, ವ್ಯಾಪಾರ ಮಾಡುವ ಸಹಕಾರಿ ಸಂಘಗಳಲ್ಲಿ ಸ್ಪಷ್ಟವಾದ ನಿಖರವಾದ ಅಧಿಕೃತ ಉತ್ತರಗಳು ದೊರೆಯುತ್ತಿಲ್ಲ. (ಅತಿ ಹೆಚ್ಚು ಪ್ರೆಸ್ ಮಡ್ ಗೊಬ್ಬರ ಮಾರಾಟ ಮಾಡುವ ಸಹಕಾರಿ ಸಂಸ್ಥೆ ಮ್ಯಾಮ್‌ಕೋಸ್‌ಗೆ, ಈ ಬರಹದ ಲೇಖಕ ಸ್ಪಷ್ಟವಾದ, ನಿಖರವಾದ, ಅಧಿಕೃತ ಮಾಹಿತಿ ಕೇಳಿ ಡಿಸೆಂಬರ್ 2023 ರಲ್ಲಿ ಕೋರಿಕೆ ಸಲ್ಲಿಸಿದ್ದು, ಉತ್ತರ ನಿರೀಕ್ಷಿಸಲಾಗುತ್ತಿದೆ.)

ಪ್ರೆಸ್‌ಮಡ್ ಗೊಬ್ಬರದ ವಿಚಾರದಲ್ಲಿ ರೈತರಲ್ಲಿ ಪ್ರಸ್ತುತ ಇರುವ ಅನುಮಾನಗಳು ಹತ್ತಾರು:

  1. ಸಕ್ಕರೆ ಕಾರ್ಖಾನೆಗಳು ಮೂರ್ನಾಲ್ಕು ತಿಂಗಳುಗಳು ಕಬ್ಬಿನ ವೇಸ್ಟನ್ನು ಸಹಜ ಕಾಂಪೋಸ್ಟ್ ಆಗುವ ಹಾಗೆ ಸಂಗ್ರಹಿಸಿ ಇಡುತ್ತಾರಾ?
  2. ಪ್ರೆಸ್‌ಮಡ್ ಗೊಬ್ಬರ ತಯಾರಿಕೆಯಲ್ಲಿ, ತಕ್ಷಣ ಕಾಂಪೋಸ್ಟ್ ಆಗುವ ಹಾಗೆ ಕೆಮಿಕಲ್ ಬಳಸುವುದು ನಿಜವಾ?
  3. ಕಾಂಪೋಸ್ಟ್ ತಯಾರಿಸುವಾಗ ಜೀವಾಣುಗಳನ್ನು (ಟ್ರೈಕೋಡರ್ಮಾ, ಸ್ಯುಡೋಮಾನಸ್… ಇತ್ಯಾದಿ) ಯಾವಾಗ ಸೇರಿಸುತ್ತಾರೆ?
  4. ಕೆಲವೊಮ್ಮೆ ಪ್ರೆಸ್‌ಮಡ್ ಗೊಬ್ಬರದ ಚೀಲಗಳನ್ನು ಬರೀ ಕೈಯಿಂದ ಮುಟ್ಟಲಾರದಷ್ಟು ಬಿಸಿ ಇರುತ್ತವೆ. ಇದರರ್ಥ, ಬಹುಶಃ ಆರೇಳು ತಿಂಗಳುಗಳು ಕಾದು, ಕಬ್ಬಿನ ವೇಸ್ಟ್ ಸಹಜ ಕಾಂಪೋಸ್ಟ್ ಆದ ಮೇಲೆ, ಗೊಬ್ಬರ ತಯಾರಿಸಿದಂತೆ ಕಾಣುವುದಿಲ್ಲ. ತಯಾರಿಕೆಯಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಲಿಖಿತ ಮಾಹಿತಿಗಳು ಪ್ರಾಡಕ್ಟ್‌ನ ಬ್ಯಾಚ್‌ವೈಸ್ ಡೀಟೈಲ್ಸ್ (ಬ್ಯಾಚ್ ಮಾನುಫ್ಯಾಕ್ಚರಿಂಗ್ ರಿಕಾರ್ಡ್ ಜೊತೆಗೆ ಸರ್ಟಿಫಿಕೇಟ್ ಆಫ್ ಅನಾಲಿಸಿಸ್) ಎಲ್ಲಿ ಸಿಗುತ್ತದೆ?
  5. ಪ್ರೆಸ್‌ಮಡ್ ಗೊಬ್ಬರ ತಯಾರಿಕೆಯಲ್ಲಿ ವೇಗಗತಿಯಲ್ಲಿ ಕಾಂಪೋಸ್ಟ್ ಆಗುವುದಕ್ಕೆ ಅನೇಕ ಕೆಮಿಕಲ್‌ಗಳನ್ನು ಬಳಸಲಾಗುತ್ತಿದೆ ಮತ್ತು ಅದರ ಪರಿಣಾಮದಿಂದ ಮಲೆನಾಡು-ಕರಾವಳಿಗಳಲ್ಲಿ ಅಡಿಕೆ ರೋಗಗಳು ವಿಸ್ತರಿಸುತ್ತಿರುವುದಕ್ಕೆ ಕಾರಣ ಆಗಿರಬಹುದು ಎಂದು ಕೆಲವು ರೈತರ ಅನುಮಾನ
  6. ಡಿಸ್ಟಿಲರಿ ಸ್ಪೆಂಟ್ ವಾಶ್‌ನ್ನು* (DSW) ಕಬ್ಬಿನ ಕಾಂಪೋಸ್ಟ್ ತಯಾರಿಕೆಯಲ್ಲಿ (ಅಥವಾ ಕಬ್ಬನ್ನು ಅರೆಯುವಿಕೆಯಲ್ಲಿ) ಯಾವ ಪ್ರಮಾಣದಲ್ಲಿ ಬಳಸಲಾಗುತ್ತದೆ? DSWನ್ನು ಸರಿಯಾದ ಪ್ರಮಾಣದ ಬಳಸುವಿಕೆಯಿಂದ ಮಣ್ಣಿನ ಫಲವತ್ತತೆಗೆ ಮತ್ತು ಸಸ್ಯಗಳ ಬೆಳವಣಿಗೆಗೆ ಅನುಕೂಲ ಮತ್ತು ಅಸಮರ್ಪಕ DSW ಬಳಕೆಯಿಂದ ಮಣ್ಣು, ನೀರು, ಸಸ್ಯ, ಜೀವ ಸಂಕುಲಕ್ಕೆ ತೀವ್ರ ಅಪಾಯ ಎಂದು ಜಾಲತಾಣದ ಅಧಿಕೃತ ದಾಖಲೆಗಳಲ್ಲಿ ನಮೂದಾಗಿದೆ. ಸಸ್ಯಗಳ DNA ಗಳನ್ನೂ ಬದಲಿಸಿ, ಶಾಶ್ವತವಾಗಿ ಅದರ ವಂಶವನ್ನೇ ಕುಂಠಿತಗೊಳಿಸುವಷ್ಟು ಅಪಾಯಕಾರಿ ಎಂದು ವರದಿಯಲ್ಲಿ ತಜ್ಞರ ಅಭಿಪ್ರಾಯ ಇದೆ. ಪ್ರಸ್ ಮಡ್ ಗೊಬ್ಬರಗಳ ಬಳಕೆಯ ಬಗ್ಗೆ ಎಲ್ಲ ರೈತರು ಮರು ಚಿಂತನೆ ಮಾಡಬೇಕಾದಷ್ಟು ಭಯಂಕರ ವಿಚಾರಗಳು ಜಾಲತಾಣಗಳಲ್ಲಿ ಈ ಕಬ್ಬಿನ ತ್ಯಾಜ್ಯವನ್ನು ಗೊಬ್ಬರವಾಗಿಸುವಾಗ ಬಳಸುವ DSW ಗಳಲ್ಲಿದೆ ಎಂದು ವ್ಯಾಖ್ಯಾನಿಸಲಾಗಿದೆ. ಪ್ರೆಸ್‌ಮಡ್ ಗೊಬ್ಬರಗಳ ತಯಾರಿಕೆಯಲ್ಲಿ ಯಾವ ಪ್ರಮಾಣದ DSW ಬಳಸಲಾಗಿದೆ ಎಂಬ ಸ್ಪಷ್ಟವಾದ ಮತ್ತು ಅಧಿಕೃತ ಮಾಹಿತಿಗಳನ್ನು ಗೊಬ್ಬರ ತಯಾರಿಕಾ ಸಂಸ್ಥೆಗಳು, ಮಾರಾಟ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಗೊಬ್ಬರ ಬಳಸುವ ರೈತರಿಗೆ ನೀಡುತ್ತಿಲ್ಲ ಏಕೆ?
  7. ಕೆಲವು ರೈತರ ಅನುಮಾನ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ, ಗೊಬ್ಬರಗಳಲ್ಲಿ ಪ್ರೆಸ್‌ಮಡ್ ಮಾತ್ರ ಬಳಸಲಾಗುತ್ತದೆಯಾ? ಜೊತೆಗೆ ಸಿಟಿ ವೇಸ್ಟ್ (ಹಸಿ ಕಸ), ಬೇರೆ ಸಸ್ಯ ಜನ್ಯ (ತೆಂಗು ಇತ್ಯಾದಿ) ವೇಸ್ಟ್‌ಗಳನ್ನು ಬಳಸಲಾಗುತ್ತದೆಯಾ? ಎಂದು ಕೇಳುತ್ತಿದ್ದಾರೆ.
  8. ಮೇಲಿನ ವಿಚಾರಗಳಿಗಲ್ಲದೆ, ಸಾವಯವ ಪ್ರೆಸ್ ಮಡ್ ಗೊಬ್ಬರದ ಬಗ್ಗೆ ರೈತರಿಗೆ ಕೊಡಬಹುದಾದ ಇತರ ಮಾಹಿತಿಗಳನ್ನೂ ಸೇರಿಸಿ ಸತ್ಯವಾದ, ಸ್ಪಷ್ಟವಾದ, ನಿಖರವಾದ ಮಾಹಿತಿಗಳನ್ನು, ಬಳಕೆಯ ವಿಧಾನಗಳನ್ನು ಅಧಿಕೃತ ದಾಖಲೆಗಳೊಂದಿಗೆ ಬ್ರೋಷರ್ ರೂಪದಲ್ಲಿ ಕೊಡಬಹುದಲ್ಲ? ಎಂಬುದು. ಆದರೆ, ಪ್ರೆಸ್‌ಮಡ್ ಗೊಬ್ಬರದ ವಿಚಾರದಲ್ಲಿ ಯಾವ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತಿಲ್ಲ.

ಆದರೆ, ಮಲೆನಾಡು, ಕರಾವಳಿ, ಬಯಲು ಸೀಮೆಗಳ ತೋಟಗಳಿಗೆ ಪ್ರೆಸ್‌ಮಡ್ ಗೊಬ್ಬರ ಮಸಾಲೆ ದೋಸೆಯಂತೆ ಬಿಕರಿಯಾಗುತ್ತಿದೆ. ಹಸುಗಳ ಕೊಟ್ಟಿಗೆ ಗೊಬ್ಬರ ಕ್ಷೀಣಿಸುತ್ತಿರುವುದರಿಂದ, ಬೇರೆ ದಾರಿ ಇಲ್ಲದೆ ಅಡಿಕೆ ಬೆಳೆಗಾರರು ಪ್ರೆಸ್‌ಮಡ್ ಗೊಬ್ಬರವನ್ನು, ಉತ್ತರ ಸಿಗದ ಪ್ರೆಶ್ನೆಗಳನ್ನೂ ಅಡಿಕೆ ಮರದ ಬುಡಕ್ಕೆ ಹಾಕಿ ಮಣ್ಣು ಮುಚ್ಚಿ ಬೇಸಾಯ ಮಾಡುತ್ತಿದ್ದಾರೆ! ಮಾರ್ಗದರ್ಶನ ನೀಡಬೇಕಾದ ಸರಕಾರದ ತೋಟಗಾರಿಕಾ ಇಲಾಖೆಯೂ ‘ಮೌನ ಬಂಗಾರ’ ಎಂಬಂತಿದೆ!

Continue Reading
Advertisement
Lok Sabha Election
ಪ್ರಮುಖ ಸುದ್ದಿ2 hours ago

Lok Sabha Election : ಕುರುಬರಿಗೆ ಟಿಕೆಟ್ ಕೊಡದ ಮೋದಿ ಕಂಬಳಿ ತೊಟ್ಟು ಡ್ರಾಮಾ ಆಡ್ತಾರೆ: ಸಿದ್ದರಾಮಯ್ಯ

Tsering Namgyal
ದೇಶ2 hours ago

Tsering Namgyal: ಲಡಾಕ್‌ನಲ್ಲಿ ತ್ಸೆರಿಂಗ್‌ ನಾಮ್‌ಗ್ಯಾಲ್‌ಗೆ ಟಿಕೆಟ್‌ ಕೊಟ್ಟ ಕಾಂಗ್ರೆಸ್; ಭಾರಿ ಹೈಡ್ರಾಮಾ

IPL 2024
ಪ್ರಮುಖ ಸುದ್ದಿ2 hours ago

IPL 2024 : ರಾಜಸ್ಥಾನ್ ವಿರುದ್ಧ ಎಸ್​​ಆರ್​ಎಚ್​​ ತಂಡಕ್ಕೆ ರೋಚಕ 1 ರನ್ ಗೆಲುವು

Ragini Khanna
ಸಿನಿಮಾ2 hours ago

Ragini Khanna: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಕ್ಷಮೆ ಕೇಳಿದ ನಟ ಗೋವಿಂದ ಸೋದರ ಸೊಸೆ!

Rain News
ಪ್ರಮುಖ ಸುದ್ದಿ2 hours ago

Rain News : ಬೆಂಗಳೂರಿನಲ್ಲಿ ಸಂಜೆ ಸುರಿದ ಸಣ್ಣ ಮಳೆಗೆ ಕೆಲವೆಡೆ ಅನಾಹುತ

Election campaign for Congress candidate Samyukta Patil in Prajadhwani convention at Bagalkot
ರಾಜಕೀಯ2 hours ago

Lok Sabha Election 2024: ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಪರ ಭರ್ಜರಿ ಪ್ರಚಾರ

Lok Sabha Election
ದೇಶ3 hours ago

Lok Sabha Election : ಮೋದಿ ಗ್ಯಾರಂಟಿ ಪಡೆಯಲು ಜೋಶಿ ಗೆಲ್ಲಿಸಿ; ಏಕನಾಥ ಶಿಂಧೆ

Amit Shah
ದೇಶ3 hours ago

Amit Shah: ಮತದಾನ ಕುಸಿತದಿಂದ ಬಿಜೆಪಿಗೆ ನಷ್ಟ? ಅಮಿತ್ ಶಾ ಹೇಳೋದೇನು?

K. Annamalai
ಪ್ರಮುಖ ಸುದ್ದಿ3 hours ago

K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

Mumbai
ದೇಶ3 hours ago

ಆಸ್ಪತ್ರೆಯಲ್ಲಿ ಟಾರ್ಚ್‌ ಬಳಸಿ ಹೆರಿಗೆ; ತಾಯಿ, ಮಗು ಸಾವು; 3 ಈಡಿಯಟ್ಸ್‌ ಸಿನಿಮಾ ದೃಶ್ಯ ಇಲ್ಲಿ ದುರಂತ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ7 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ21 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20245 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌