ವಿಸ್ತಾರ ಸಂಪಾದಕೀಯ: ಮಾಲ್ಡೀವ್ಸ್‌ಗೆ ಪಾಠ ಕಲಿಸಲು ನೂತನ ನೌಕಾನೆಲೆ ಅಗತ್ಯ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮಾಲ್ಡೀವ್ಸ್‌ಗೆ ಪಾಠ ಕಲಿಸಲು ನೂತನ ನೌಕಾನೆಲೆ ಅಗತ್ಯ

ಮೇ 10ರೊಳಗೆ ಭಾರತದ ಸೇನೆ ವಾಪಸಾಗಲಿದೆ. ಅಲ್ಲಿಂದ ನಂತರ ಮುಯಿಜು ಅವರ ನಡೆ ಇನ್ನಷ್ಟು ಚೀನಾದ ಕಡೆ ಎಂಬಂತಾಗಬಹುದು. ಇದು ಭಾರತಕ್ಕೆ ಈ ಪ್ರಾಂತ್ಯದಲ್ಲಿ ಇನ್ನಷ್ಟು ತಲೆನೋವು ಹಾಗೂ ಎಚ್ಚರಿಕೆಯ ಅವಶ್ಯಕತೆಯನ್ನು ತಂದಿಡುವುದಂತೂ ಖಚಿತ. ಹೀಗಾಗಿ ಭಾರತದ ನೂತನ ನೌಕಾನೆಲೆ ಸೂಕ್ತವಾಗಿದೆ.

VISTARANEWS.COM


on

Mohamed Muizzu And INS Jatayu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೀನಾ ಕೊಡುವ ಸಾಲ, ಮೂಲ ಸೌಕರ್ಯ ಯೋಜನೆಗಳು ಹಾಗೂ ಆರ್ಥಿಕ ನೆರವಿನ ಹಿಂದೆ ಬಿದ್ದಿರುವ ಮಾಲ್ಡೀವ್ಸ್‌, ಭವಿಷ್ಯದ ಅಪಾಯವನ್ನೂ ಲೆಕ್ಕಿಸದೆ ಭಾರತದ ಜತೆ ರಾಜತಾಂತ್ರಿಕ ಸಂಘರ್ಷಕ್ಕೆ (India Maldives Row) ಇಳಿದಿದೆ. ಭಾರತ ವಿರೋಧಿ ಧೋರಣೆ ಅನುಸರಿಸುತ್ತಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು, ಇನ್ನಷ್ಟು ಆಕ್ರಮಣಕಾರಿ ನಿಲುವು ತೋರಿಸುತ್ತಿದ್ದಾರೆ. ಭಾರತೀಯ ಸೇನೆಯು ಮೇ 10ರೊಳಗೆ ಮಾಲ್ಡೀವ್ಸ್‌ನಿಂದ ವಾಪಸಾಗುತ್ತಿದೆ ಎಂಬುದಾಗಿ ಭಾರತ ಘೋಷಿಸಿದರೂ, ಮೇ 10ರ ನಂತರ ಮಾಲ್ಡೀವ್ಸ್‌ನಲ್ಲಿ ಭಾರತದ ಒಬ್ಬ ಸೈನಿಕನೂ ಇರಬಾರದು. ಸಾಮಾನ್ಯ ಉಡುಪು ಧರಿಸಿಯೂ ಕೂಡ ಭಾರತದ ಸೈನಿಕರು ಮಾಲ್ಡೀವ್ಸ್‌ನಲ್ಲಿ ಇರಬಾರದು ಎಂದು ಮುಯಿಜು ಕಿರಿಕಿರಿ ಮಾಡಿದ್ದಾರೆ. ಈತನ ಮಾತಿಗೆ ನಮ್ಮ ಪ್ರಧಾನಿಯಾಗಲೀ ವಿದೇಶಾಂಗ ಸಚಿವರಾಗಲೀ ಪ್ರತ್ಯುತ್ತರ ನೀಡುವ ಗೋಜಿಗೂ ಹೋಗಿಲ್ಲ. ಬದಲಾಗಿ, ಭಾರತ ಮುಸುಕಿನ ಗುದ್ದೊಂದನ್ನು ನೀಡಿದೆ. ಮಾಲ್ಡೀವ್ಸ್‌ನಿಂದ ಕೇವಲ 130 ಕಿಲೋಮೀಟರ್‌ ದೂರದಲ್ಲಿರುವ, ಲಕ್ಷದ್ವೀಪದ ಮಿನಿಕಾಯ್‌ ದ್ವೀಪದಲ್ಲಿಯೇ ಭಾರತೀಯ ನೌಕಾಪಡೆಯು (Indian Navy) ‘ಐಎನ್‌ಎಸ್‌ ಜಟಾಯು’ ಎಂಬ (INS Jatayu) ನೌಕಾನೆಲೆಯನ್ನು ಆರಂಭಿಸುವ ಮೂಲಕ ತಿರುಗೇಟು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ಕೊಟ್ಟ ಕ್ಷಣದಿಂದ ಉಭಯ ದೇಶಗಳ ನಡುವಿನ ಈ ಬಿಕ್ಕಟ್ಟು ಉಲ್ಬಣಿಸಿದೆ ಎಂಬಂತೆ ತೋರುತ್ತಾದಾದರೂ, ಅದು ಹಾಗಿಲ್ಲ. ಅಧ್ಯಕ್ಷರಾಗಿ ಮುಯಿಜು ಆಯ್ಕೆಯ ಕ್ಷಣದಿಂದಲೇ ಮಾಲ್ಡೀವ್ಸ್‌ ಈ ಪತನದ, ಸಂಘರ್ಷದ ಹಾದಿ ಹಿಡಿದಿದೆ. ಮುಯಿಜು ಸ್ಪಷ್ಟವಾಗಿ ಭಾರತ ವಿರೋಧಿ ಹಾಗೂ ಚೀನಾ ಪರ ಧೋರಣೆಯುಳ್ಳಾತ. ಚೀನಾ ನೀಡುತ್ತಿರುವ ಹಣಕಾಸಿಗೆ ಬಾಯಿ ಬಾಯಿ ಬಿಡುತ್ತಿರುವ ಈತ ಭಾರತವನ್ನು ಎದುರು ಹಾಕಿಕೊಳ್ಳಲು ಮುಂದಾಗಿರುವುದು ಸಹಜವೇ ಆಗಿದೆ. ಈ ಹಿಂದಿನ ಮಾಲ್ಡೀವ್ಸ್‌ನ ಆಡಳಿತಗಾರರು ಭಾರತಕ್ಕೆ ಸ್ನೇಹಿತರಾಗಿದ್ದರು; ಹೀಗಾಗಿ ಭಾರತದ ಸೇನಾನೆಲೆಗೂ ಅಲ್ಲಿ ಅವಕಾಶ ನೀಡಿದ್ದರು. ಮಾಲ್ಡೀವ್ಸ್‌ ಭಾರತವನ್ನು ಅತ್ಯಾಪ್ತ ರಾಷ್ಟ್ರ ಎಂದು ಕೂಡ ಒಪ್ಪಿಕೊಂಡಿತ್ತು. ಹಿಂದೊಮ್ಮೆ ಇಲ್ಲಿ ಎದ್ದ ಬಂಡಾಯವನ್ನು ಶಮನಿಸಲು ಸಾಧ್ಯವಾಗದೆ ಹೋದಾಗ, ಭಾರತೀಯ ಸೈನ್ಯ ಅಲ್ಲಿಗೆ ಧಾವಿಸಿ ಅಲ್ಲಿನ ಪ್ರಜಾಪ್ರಭುತ್ವವನ್ನು ಉಳಿಸಿಕೊಟ್ಟಿತ್ತು. ಆದರೆ ಮಾಲ್ಡೀವ್ಸ್‌ ಅನ್ನು ಭಾರತದ ವಸಾಹತು ಮಾಡುವ ಉದ್ದೇಶ ಭಾರತಕ್ಕಿಲ್ಲ. ಭಾರತದ ವಿವಿಐಪಿಗಳು, ಬಾಲಿವುಡ್‌ ಸೆಲೆಬ್ರಿಟಿಗಳು ಸದಾ ಮಾಲ್ಡೀವ್ಸ್‌ನ ಬೀಚುಗಳಿಗೆ ಭೇಟಿ ನೀಡುತ್ತ, ಅಲ್ಲಿನ ಪ್ರವಾಸೋದ್ಯಮಕ್ಕೆ ಘನತೆ ತಂದುಕೊಟ್ಟಿದ್ದಾರೆ. ಅಲ್ಲಿನ ಆರ್ಥಿಕತೆಯ ವೃದ್ಧಿಗೆ ಭಾರತದ ಗಣನೀಯ ಕೊಡುಗೆ ಇದೆ. ಆದರೆ ಇದನ್ನೆಲ್ಲ ಮರೆತು, ಕೃತಘ್ನತೆಯ ತುತ್ತ ತುದಿ ತಲುಪಿರುವ ಮುಯಿಜುಗೆ ಪಾಠ ಕಲಿಸಲು ಭಾರತ ಮುಂದಾಗಿದೆ.

ಈಗಾಗಲೇ ಅಂಡಮಾನ್‌ನಲ್ಲಿ ಐಎನ್‌ಎಸ್‌ ಬಾಜ್‌ ಎಂಬ ನೌಕಾನೆಲೆ ಇದೆ. ಲಕ್ಷದ್ವೀಪದ ಕವರಟ್ಟಿಯಲ್ಲೇ ದ್ವೀಪ್ರಕಾಶಕ ಎಂಬ ನೌಕಾನೆಲೆ ಇದೆ. ಇದರ ಬೆನ್ನಲ್ಲೇ, ಲಕ್ಷದ್ವೀಪದಲ್ಲೇ ನೌಕಾಪಡೆಯು ಮತ್ತೊಂದು ನೆಲೆಯನ್ನು ನಿರ್ಮಿಸುವ ಮೂಲಕ ಭಾರತ ವ್ಯೂಹಾತ್ಮಕ ಹಾಗೂ ರಕ್ಷಣಾತ್ಮಕ ಹೆಜ್ಜೆ ಇರಿಸಿದೆ. ಇದು ಅತಿ ಅಗತ್ಯವಾದುದು ಏಕೆಂದರೆ, ಮುಯಿಜು ಆಹ್ವಾನದಂತೆ ಮಾಲ್ಡೀವ್ಸ್‌ನಲ್ಲಿ ಚೀನಾ ಇಷ್ಟರಲ್ಲಿಯೇ ತನ್ನ ಸೇನಾನೆಲೆಯನ್ನು ಸ್ಥಾಪಿಸಬಹುದು. ಈ ಸಾಗರ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸುವುದು ಸೇರಿ ಹಲವು ಕಾರಣಗಳಿಂದಾಗಿ ʼಐಎನ್‌ಎಸ್‌ ಜಟಾಯುʼ ಪ್ರಾಮುಖ್ಯತೆ ಪಡೆದಿದೆ. ಇಲ್ಲಿಂದ ಪಶ್ಚಿಮ ಅರಬ್ಬೀ ಸಮುದ್ರದಲ್ಲಿ ವೈರಿಗಳ ಮೇಲೆ ಹೆಚ್ಚಿನ ನಿಗಾ ಇರಿಸುವುದು, ಸಾಗರ ಪ್ರದೇಶದಲ್ಲಿ ಭಯೋತ್ಪಾದನೆ- ಅಪರಾಧ ತಡೆಗಟ್ಟುವುದು, ಸಮುದ್ರ ಪ್ರದೇಶದಲ್ಲಿ ಮಾದಕವಸ್ತು ಅಕ್ರಮ ಸಾಗಣೆ ನಿಯಂತ್ರಣ ಸಾಧ್ಯ. ಕ್ಷಿಪ್ರವಾಗಿ ಡ್ರೋನ್‌, ಕ್ಷಿಪಣಿ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಇದು ಸಹಕಾರಿ. ಸಾಗರ ಪ್ರದೇಶದಲ್ಲಿ ಯಾವುದೇ ದುರಂತ ನಡೆದರೆ ರಕ್ಷಣೆ, ದಾಳಿ ನಡೆದರೆ ವೇಗವಾಗಿ ತಿರುಗೇಟು ನೀಡಬಹುದು. ಸಮುದ್ರ ಪ್ರದೇಶದಲ್ಲಿ ಅಕ್ರಮ ಸಾಗಣೆ, ಹಡಗುಗಳ ಸಂಚಾರದ ಮೇಲೆ ಹದ್ದಿನ ಕಣ್ಣಿಡಬಹುದು. ಚೀನಾದ ಸಂಶೋಧನಾ ಹಡಗುಗಳ ಸಂಚಾರದ ಮೇಲೆ ನಿಗಾ ಇರಿಸಿ, ಕ್ರಮ ತೆಗೆದುಕೊಳ್ಳುವುದು ಸಾಧ್ಯ. ಚೀನಾದ ಕುಮ್ಮಕ್ಕಿನಿಂದ ಸಮುದ್ರ ಪ್ರದೇಶದಲ್ಲಿ ಮಾಲ್ಡೀವ್ಸ್‌ ಆಕ್ರಮಣಕಾರಿ ನೀತಿ ಅನುಸರಿಸಿದರೆ ತಿರುಗೇಟು ನೀಡಲೂಬಹುದು.

ಇದನ್ನೂ ಓದಿ: INS Jatayu: ಮಾಲ್ಡೀವ್ಸ್‌ ಬಳಿಯೇ ನೌಕಾ ನೆಲೆ ನಿರ್ಮಿಸಿದ ಭಾರತ; ಇದು ಹೇಗೆ ಗೇಮ್‌ ಚೇಂಜರ್?

ಮೊಹಮ್ಮದ್‌ ಮುಯಿಜು ಅವರ ಭಾರತ ವಿರೋಧಿ ನೀತಿಗೆ ಮಾಲ್ಡೀವ್ಸ್‌ನಲ್ಲೇ ವಿರೋಧ ವ್ಯಕ್ತವಾಗಿತ್ತು. ಭಾರತದ ಸುಮಾರು 80 ಸೈನಿಕರು ಮಾಲ್ಡೀವ್ಸ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಭಾರತದ ಯೋಧರು ರೆಡಾರ್‌ ಹಾಗೂ ನಿಗಾ ಯುದ್ಧವಿಮಾನ ನಿರ್ವಹಣೆ ಮಾಡುತ್ತಿದ್ದಾರೆ. ಮೇ 10ರೊಳಗೆ ಭಾರತದ ಸೇನೆ ವಾಪಸಾಗಲಿದೆ. ಅಲ್ಲಿಂದ ನಂತರ ಮುಯಿಜು ಅವರ ನಡೆ ಇನ್ನಷ್ಟು ಚೀನಾದ ಕಡೆ ಎಂಬಂತಾಗಬಹುದು. ಇದು ಭಾರತಕ್ಕೆ ಈ ಪ್ರಾಂತ್ಯದಲ್ಲಿ ಇನ್ನಷ್ಟು ತಲೆನೋವು ಹಾಗೂ ಎಚ್ಚರಿಕೆಯ ಅವಶ್ಯಕತೆಯನ್ನು ತಂದಿಡುವುದಂತೂ ಖಚಿತ. ಹೀಗಾಗಿ ಭಾರತದ ನೂತನ ನೌಕಾನೆಲೆ ಪ್ರಸ್ತುತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಕುಡುಕ ಬಾಲಕನಿಂದ ಅಪಘಾತ ಪ್ರಕರಣ; ಪುಣೆ ಪೊಲೀಸರ ದಿಟ್ಟ ಕ್ರಮ ಶ್ಲಾಘನೀಯ

ವಿಸ್ತಾರ ಸಂಪಾದಕೀಯ: ಪೊಲೀಸ್ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಚೋದಿಸಿದಾಗ, ಪ್ರಭಾವ ಬಳಸಿ ಅಥವಾ ಅಧಿಕಾರ ಬಳಸಿ ದಾರಿ ತಪ್ಪಿಸಲು ಪ್ರಯತ್ನಿಸದೆ ಇದ್ದರೆ, ಸರಿಯಾಗಿಯೇ ಕೆಲಸ ಮಾಡುತ್ತಾರೆ. ಅದಕ್ಜೆ ಪುಣೆ ಪ್ರಕರಣವೇ ಉದಾಹರಣೆ.

VISTARANEWS.COM


on

Porsche car accident ವಿಸ್ತಾರ ಸಂಪಾದಕೀಯ
Koo

ಪುಣೆಯಲ್ಲಿ ಕಂಠಮಟ್ಟ ಮದ್ಯಪಾನ (Drink and drive) ಮಾಡಿ, ಅಪ್ಪ ಕೊಡಿಸಿದ ಐಷಾರಾಮಿ ಪೋರ್ಷೆ ಕಾರನ್ನು (Pune Porsche car accident) ಯದ್ವಾತದ್ವಾ ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತ ವಯಸ್ಕನ (Juvenile) ಪ್ರಕರಣದಲ್ಲಿ ಹಲವು ಬೆಳವಣಿಗೆಗಳು ಆಗಿವೆ. 17 ವರ್ಷದ ವೇದಾಂತ್‌ ಅಗರ್‌ವಾಲ್‌ ಐಷಾರಾಮಿ ಪೋರ್ಷೆ ಕಾರನ್ನು ಗಂಟೆಗೆ 200 ಕಿ.ಮೀ. ವೇಗದಲ್ಲಿ ಓಡಿಸಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಧ್ಯಪ್ರದೇಶದ ಎಂಜಿನಿಯರ್‌ಗಳಾದ (Engineers) 24 ವರ್ಷದ ಅನೀಶ್ ಅವಧಿ ಮತ್ತು ಅಶ್ವಿನಿ ಕೊಶ್ತಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಘಟನೆಯ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಪಘಾತ ಆಗುತ್ತಿದ್ದಂತೆ ಸ್ಥಳೀಯರೆಲ್ಲ ಒಟ್ಟುಗೂಡಿ ಸೆರೆ ಹಿಡಿದು ಥಳಿಸಿ ಅವನನ್ನು ಪೊಲೀಸರಿಗೆ ಒಪ್ಪಿಸಿದ್ದರು. ದುರಂತ ಎಂದರೆ ವೇದಾಂತ್‌ ಅಗರ್‌ವಾಲ್‌ನ ಬಂಧನವಾದ ಕೇವಲ 15 ಗಂಟೆಗಳಲ್ಲೇ ಬಾಲಾಪರಾಧಿ ನ್ಯಾಯ ಮಂಡಳಿ ಆತನಿಗೆ ಜಾಮೀನು ಮಂಜೂರು ಮಾಡಿತ್ತು. ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಲು ಹೇಳಿತ್ತು. ಈ ಹಾಸ್ಯಾಸ್ಪದ ತೀರ್ಪಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಈ ಪ್ರಕರಣದಲ್ಲಿ ನ್ಯಾಯಾಂಗದ ಬಗ್ಗೆ ಬಂದ ಕಟು ಟೀಕೆಯ ನಂತರ ಪೊಲೀಸರು ಹಾಗೂ ನ್ಯಾಯಾಂಗವೂ ಎಚ್ಚೆತ್ತುಕೊಂಡಂತಿದೆ. ಪೊಲೀಸರು ಚುರುಕಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ನ್ಯಾಯಾಂಗವೂ ಈ ಜಾಮೀನನ್ನು ರದ್ದುಪಡಿಸಿದ್ದು, ಆರೋಪಿ ಬಾಲಕನನ್ನು ರಿಮ್ಯಾಂಡ್‌ ಹೋಂಗೆ ಕಳುಹಿಸಿದೆ. ಈತನನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆ ಮಾಡಲಾಗುತ್ತದೆ ಎಂದಿದ್ದಾರೆ ಪೊಲೀಸರು. ಈ ಪ್ರಕರಣದಲ್ಲಿ ಲೈಸೆನ್ಸ್‌ ರಹಿತ ಅಪ್ರಾಪ್ತನಿಗೆ ಕಾರನ್ನು ಓಡಿಸಲು ಕೊಟ್ಟ ಅಪ್ಪನೂ ಅಪರಾಧಿ, ಆತ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಅಜ್ಜನೂ ಅಪರಾಧಿಯಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಅಪಘಾತವಾದಾಗ ಕಾರನ್ನು ತಾನು ಓಡಿಸುತ್ತಿದ್ದೆ ಎಂದು ಹೇಳಿಕೊಳ್ಳುವಂತೆ ಕಾರು ಚಾಲಕನನ್ನು ಬಲವಂತ ಮಾಡಿದ್ದು ಕೂಡ ಬೆಳಕಿಗೆ ಬಂದಿದ್ದು, ಅದೂ ಕೂಡ ಒಂದು ಅಪರಾಧ. ಅಪಘಾತಕ್ಕೂ ಮುನ್ನ ಅಪ್ರಾಪ್ತ ವಯಸ್ಕ ಮದ್ಯ ಸೇವಿಸಿದ ಎರಡು ಬಾರ್‌ಗಳ ಮಾಲೀಕರು ಮತ್ತು ನೌಕರರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರಿಬ್ಬರು ಬಾಲಾಪರಾಧಿಯ ರಕ್ತದ ಮಾದರಿಯನ್ನು ಬದಲಾಯಿಸಿ ಆರೋಪಿಯನ್ನು ಬಚಾವ್‌ ಮಾಡಲು ಯತ್ನಿಸಿರುವುದು ಬೆಳಕಿಗೆ ಬಂದಿದ್ದು, ಇಬ್ಬರನ್ನೂ ಅರೆಸ್ಟ್‌ ಮಾಡಲಾಗಿದೆ. ದುಡ್ಡಿಗಾಗಿ ರಕ್ತದ ಮಾದರಿಯನ್ನು ಡಸ್ಟ್‌ ಬಿನ್‌ಗೆ ಎಸೆದ ಲ್ಯಾಬ್‌ ಗುಮಾಸ್ತನನ್ನೂ ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರು ಕೆಲ ಆರಂಭಿಕ ಜಡತೆಗಳ ನಂತರ, ಸಾಕಷ್ಟು ಚುರುಕಾಗಿ ಹಾಗೂ ಸಮಗ್ರವಾಗಿಯೇ ಕಾರ್ಯ ನಿರ್ವಹಿಸಿದ್ದಾರೆ ಎನ್ನಬೇಕು. ಹೀಗೆ ಒಂದು ಅಪರಾಧದ ಎಲ್ಲ ಮಗ್ಗುಲುಗಳಲ್ಲಿಯೂ ತನಿಖೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿ, ವಿವರವಾದ ಹಾಗೂ ಗಟ್ಟಿಯಾದ ಚಾರ್ಜ್‌ಶೀಟ್‌ ಸಲ್ಲಿಸಿದಾಗ ಮಾತ್ರ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲು ಸಾಧ್ಯ. ನ್ಯಾಯಾಂಗವೂ ಅಷ್ಟೆ, ಆರಂಭದಲ್ಲಿ ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಂಡಿರಲಿಲ್ಲ; ದೇಶಾದ್ಯಂತ ಅಸಮಾಧಾನ ವ್ಯಕ್ತವಾದಾಗ ಅದಕ್ಕೂ ಈ ಪ್ರಕರಣದ ಗಂಭೀರತೆ ಅರ್ಥವಾದಂತಿದೆ. ಶ್ರೀಮಂತರ ಮಕ್ಕಳು ಉದ್ದೇಶರಹಿತ ಹಾಗೂ ನಿರಂಕುಶವಾಗಿ ಬೆಳೆದಾಗ ಇಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ಸರಿಯಾದ ಶಿಕ್ಷಣ ಹಾಗೂ ಸಂಸ್ಕಾರ ಕೊಡಿಸದ ಪೋಷಕರೂ ಈ ಘೋರ ಅಪರಾಧದ ಹೊಣೆಯನ್ನು ಹೊರಬೇಕಾಗುತ್ತದೆ. ಇಂಥ ಅಪ್ರಾಪ್ತರನ್ನು ವಯಸ್ಕರೆಂದೇ ಪರಿಗಣಿಸಿ ಶಿಕ್ಷಿಸಬೇಕಾದ ಅಗತ್ಯವಿದೆ. ದಿಲ್ಲಿ ನಿರ್ಭಯಾ ರೇಪ್ ಮತ್ತು ಕಗ್ಗೊಲೆ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕ ಆರೋಪಿಯೇ ಅತಿ ಬರ್ಬರವಾಗಿ ನಡೆದುಕೊಂಡಿದ್ದ ಎಂಬುದನ್ನು ನೆನಪಿಸಿಕೊಳ್ಳಬೇಕು.

ಪೊಲೀಸ್ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಚೋದಿಸಿದಾಗ, ಪ್ರಭಾವ ಬಳಸಿ ಅಥವಾ ಅಧಿಕಾರ ಬಳಸಿ ದಾರಿ ತಪ್ಪಿಸಲು ಪ್ರಯತ್ನಿಸದೆ ಇದ್ದರೆ, ಸರಿಯಾಗಿಯೇ ಕೆಲಸ ಮಾಡುತ್ತಾರೆ. ಅದಕ್ಜೆ ಪುಣೆ ಪ್ರಕರಣವೇ ಉದಾಹರಣೆ. ಇನ್ನು ವಿಚಾರಣೆಯ ಹಂತದಲ್ಲಿ ಆರೋಪಿಯ ಅಪರಾಧವನ್ನು ರುಜುವಾತುಪಡಿಸುವ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಸಮರ್ಪಕವಾಗಿ ಮಂಡಿಸಿ, ಪಾತಕಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಗುಜರಾತ್ ಬೆಂಕಿ ದುರಂತ ನಮಗೆ ಎಚ್ಚರಿಕೆಯ ಪಾಠವಾಗಲಿ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಗುಜರಾತ್ ಬೆಂಕಿ ದುರಂತ ನಮಗೆ ಎಚ್ಚರಿಕೆಯ ಪಾಠವಾಗಲಿ

ಕಾರ್ಖಾನೆಗಳು, ಸಾರ್ವಜನಿಕ ತಾಣಗಳಲ್ಲಿ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ್ಳುವುದು ನಮ್ಮಲ್ಲಿ ಇನ್ನೂ ರೂಢಿಯಾಗಿಲ್ಲ. ನಮ್ಮಲ್ಲಿ ನಗರಗಳು ಜನದಟ್ಟಣೆಯ ಕೇಂದ್ರಗಳಾಗಿವೆ. ಆದರೆ ಸೂಕ್ತ ನಗರ ಯೋಜನೆಯ ಕೊರತೆಯಿದೆ. ಕಟ್ಟಡಗಳ ನಡುವೆ ಸಾಕಷ್ಟು ಸೆಟ್‌ಬ್ಯಾಕ್ ಬಿಡಬೇಕು ಎಂಬುದು ನಿಯಮ. ಈ ನಿಯಮದ ಪಾಲನೆ ಆಗದಿರುವುದರಿಂದ, ಒಂದು ಕಟ್ಟಡಕ್ಕೆ ಹಾನಿ ಅಥವಾ ಅಗ್ನಿ ಆಕಸ್ಮಿಕ‌ ಸಂಭವಿಸಿದರೆ ಇನ್ನೊಂದು ಕಟ್ಟಡಕ್ಕೂ ಹಾನಿಯಾಗುತ್ತದೆ. ಇಂತಹ ಹಲವು ಸಂಗತಿಗಳ ಬಗ್ಗೆ ನಾವು ಎಚ್ಚರಿಕೆ ವಹಿಸಲೇಬೇಕಿದೆ.

VISTARANEWS.COM


on

Fire Accident
Koo

ಗುಜರಾತ್‌ನ ರಾಜ್‌ಕೋಟ್‌ (Rajkot) ನಗರದಲ್ಲಿರುವ ಗೇಮಿಂಗ್‌ ಜೋನ್‌ (Gaming Zone) ಒಂದರಲ್ಲಿ ಶನಿವಾರ (ಮೇ 25) ಸಂಜೆ ಭೀಕರ ಅಗ್ನಿ ದುರಂತ (Fire Accident) ಸಂಭವಿಸಿದ್ದು, ಮಹಿಳೆಯರು, ಮಕ್ಕಳು ಸೇರಿ 24 ಮಂದಿ ಮೃತಪಟ್ಟಿದ್ದಾರೆ. ಏಕಾಏಕಿ ಹೊತ್ತಿಕೊಂಡ ಬೆಂಕಿಯು ಇಡೀ ಕಟ್ಟಡದ ತುಂಬ ಆವರಿಸಿಕೊಂಡಿದ್ದು, ಇನ್ನೂ ಹಲವರು ಅಗ್ನಿಯ ಕೆನ್ನಾಲಗೆಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿ ನಂದಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಗೇಮಿಂಗ್‌ ಜೋನ್‌ ಕಟ್ಟಡದಲ್ಲಿ ವೀಕೆಂಡ್ ಆದ ಕಾರಣ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ಇದೇ ವೇಳೆ ಏಕಾಏಕಿ ಅಗ್ನಿದುರಂತ ಸಂಭವಿಸಿದ ಕಾರಣ 24 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ. ಘಟನೆ ಸಂಭವಿಸುತ್ತಲೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದುವರೆಗೆ 15-20 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದೊಂದು ದಾರುಣ ವಿಷಾದನೀಯ ದುರಂತ.

ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 11 ಮಂದಿ ಮೃತಪಟ್ಟಿದ್ದರು. ಸುಮಾರು 15 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನ ಕೆಲಸ ಮಾಡುವಾಗಲೇ ಬಾಯ್ಲರ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದಾದ ಕ್ಷಣಮಾತ್ರದಲ್ಲೇ ಭೀಕರ ಸ್ಫೋಟ ಸಂಭವಿಸಿತ್ತು. ಈ ಪ್ರಕರಣಗಳಲ್ಲಿ ಆಕಸ್ಮಿಕಕ್ಕೆ ಕಾರಣ ಹುಡುಕುವುದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವುದು ಅಗತ್ಯ.

ಕಾರ್ಖಾನೆಗಳು, ಸಾರ್ವಜನಿಕ ತಾಣಗಳಲ್ಲಿ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ್ಳುವುದು ನಮ್ಮಲ್ಲಿ ಇನ್ನೂ ರೂಢಿಯಾಗಿಲ್ಲ. ನಮ್ಮಲ್ಲಿ ನಗರಗಳು ಜನದಟ್ಟಣೆಯ ಕೇಂದ್ರಗಳಾಗಿವೆ. ಆದರೆ ಸೂಕ್ತ ನಗರ ಯೋಜನೆಯ ಕೊರತೆಯಿದೆ. ಕಟ್ಟಡಗಳ ನಡುವೆ ಸಾಕಷ್ಟು ಸೆಟ್‌ಬ್ಯಾಕ್ ಬಿಡಬೇಕು ಎಂಬುದು ನಿಯಮ. ಈ ನಿಯಮದ ಪಾಲನೆ ಆಗದಿರುವುದರಿಂದ, ಒಂದು ಕಟ್ಟಡಕ್ಕೆ ಹಾನಿ ಅಥವಾ ಅಗ್ನಿ ಆಕಸ್ಮಿಕ‌ ಸಂಭವಿಸಿದರೆ ಇನ್ನೊಂದು ಕಟ್ಟಡಕ್ಕೂ ಹಾನಿಯಾಗುತ್ತದೆ. ಮಾಲ್‌ಗಳು, ನಿಲ್ದಾಣಗಳು, ಹೆಚ್ಚು ಜನ ಸೇರುವ ಸಾರ್ವಜನಿಕ ತಾಣಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವುದು ಕಡ್ಡಾಯ. ಆದರೆ ಎಷ್ಟು ಜನ ಇದನ್ನು ಪಾಲಿಸುತ್ತಾರೆ? ದೊಡ್ಡ ಕಂಪನಿಗಳ ಸಿಬ್ಬಂದಿಗೆ ಆಗಾಗ ಅಣಕು ಅಗ್ನಿ ಸುರಕ್ಷತಾ ಡ್ರಿಲ್‌ಗಳನ್ನು ಮಾಡಿಸುವುದು ಅಗತ್ಯ. ಆದರೆ ತುಂಬಾ ಕಡೆ ಮಾಡಿಸುವುದಿಲ್ಲ.

ಬೆಂಗಳೂರು ನಗರ ಕೂಡ ಅಡ್ಡಾದಿಡ್ಡಿಯಾಗಿ ಬೆಳೆದಿದೆ. ಇಂಥ ಆಕಸ್ಮಿಕಗಳು ನಮಗೆ ಎಚ್ಚರಿಕೆಯ ಪಾಠ ಆಗಬೇಕು. ದುರಂತಗಳು ನಮಗೆ ಸುರಕ್ಷತೆಯ ನಿಯಮಗಳನ್ನು ನೆನಪಿಸಬೇಕು. ಪ್ರತಿ ಕಟ್ಟಡದಲ್ಲೂ ಫೈರ್ ಎಕ್ಸಿಟ್‌ಗಳು, ಅಗ್ನಿಶಾಮಕ ಸಿಲಿಂಡರ್‌ಗಳು ಸೇರಿದಂತೆ ಸುರಕ್ಷತಾ ಸಾಧನಗಳಿರಬೇಕು. ಸೆಕ್ಯುರಿಟಿ ಸಿಬ್ಬಂದಿ ಹಾಗೂ ನಿವಾಸಿಗಳಿಗೆ ತರಬೇತಿ ನೀಡುತ್ತಿರಬೇಕು. ತುರ್ತು ಕಾರ್ಯಾಚರಣೆ ವ್ಯವಸ್ಥೆಯ ಅರಿವಿರಬೇಕು. ಗ್ಯಾಸ್ ಸಿಲಿಂಡರ್‌ಗಳು, ಎಲೆಕ್ಟ್ರಿಕ್ ವ್ಯವಸ್ಥೆಗಳ ಸುರಕ್ಷತೆಯನ್ನು ಕಾಲಕಾಲಕ್ಕೆ ಗಮನಿಸುತ್ತಿರಬೇಕು. ಹೀಗೆಲ್ಲ ಇದ್ದಾಗ ಮಾತ್ರ ಇಂಥ ದುರಂತಗಳಿಂದ ಪಾರಾಗಬಹುದು.

ಇದನ್ನೂ ಓದಿ: Chemical Factory: ಕೆಮಿಕಲ್‌ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; ನಾಲ್ವರ ಸಾವು, 25 ಮಂದಿಗೆ ಗಾಯ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮುಂಗಾರಿಗೆ ಮುನ್ನವೇ ರಾಜಕಾಲುವೆ ಒತ್ತುವರಿ ತೆರವಾಗಲಿ

ಮೂಲಸೌಕರ್ಯ ಸರಿಯಿಲ್ಲ ಎಂದು ಇತರ ನಗರಗಳು ಬೆಂಗಳೂರಿನ ಅವಕಾಶವನ್ನು ಕಸಿಯುತ್ತವೆ. ನಾಲ್ಕಾರು ಕಂಪನಿಗಳು ಬೆಂಗಳೂರಿನ ಮೂಲಸೌಕರ್ಯ ಕಳಪೆ ಎಂದು ಒಂದು ಮಾತು ಹೇಳಿದರೂ ಅದು ವಾಣಿಜ್ಯಾತ್ಮಕವಾಗಿ ಕಪ್ಪು ಚುಕ್ಕೆ. ಆದ್ದರಿಂದ, ಮುಂಗಾರಿಗೆ ಮುನ್ನವೇ ಈ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ರೂಪಿಸಿಕೊಂಡು ಸನ್ನದ್ಧರಾಗಬೇಕಿದೆ.

VISTARANEWS.COM


on

Rajakaluve
Koo

ರಾಜಕಾಲುವೆ ಒತ್ತುವರಿಯಾಗಿದ್ದರೆ ಎಷ್ಟೇ ಪ್ರಭಾವಿಗಳಾಗಿದ್ದರೂ ತೆರವುಗೊಳಿಸಲು ಸೂಚಿಸಲಾಗಿದೆ. ಯಾವ ಪ್ರಬಲ ರಾಜಕಾರಣಿಯೇ ಇರಲಿ, ಬೇರೆ ಯಾರೇ ಇರಲಿ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಬೆಂಗಳೂರಿನಲ್ಲಿ 400 ಕೆರೆಗಳಿದ್ದವು. ಅನೇಕ ಕೆರೆಗಳು ಹೂಳಿನಿಂದ ತುಂಬಿವೆ ಹಾಗೂ ಒತ್ತುವರಿಯಾಗಿವೆ. ಒತ್ತುವರಿ ತೆರವು ಮಾಡಿ ನೀರು ಹರಿಯಲು ಕಾಲುವೆ ನಿರ್ಮಾಣ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇಂದು ಮುಖ್ಯಮಂತ್ರಿಗಳು ನಗರದ ವಿವಿಧೆಡೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿ ಮತ್ತು ಮಳೆಯಿಂದ ಸಮಸ್ಯೆಗಳಿಗೆ ಒಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಬಳಿಕ ಇದನ್ನು ಹೇಳಿದ್ದಾರೆ.

ಜೂನ್ ತಿಂಗಳಿನಿಂದ ಮುಂಗಾರು ಪ್ರಾರಂಭವಾಗಲಿದೆ. ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿ ಪ್ರವಾಹ ಉಂಟಾಗಲಿದೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಸಿಟಿ ರೌಂಡ್ಸ್ ನಡೆಸಲಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ಯಲಹಂಕದಲ್ಲಿ 20 ಮನೆಗಳಿಗೆ ನೀರು ನುಗ್ಗಿದೆ. ಮುಯಮಂತ್ರಿಗಳು ತಿಳಿಸುವ ಪ್ರಕಾರ, ಬೆಂಗಳೂರು ನಗರದಲ್ಲಿ 860 ಕಿಮೀ ರಾಜಕಾಲುವೆ ಇದೆ. ಸಿದ್ದರಾಮಯ್ಯನವರ ಹಿಂದಿನ ಅವಧಿಯಲ್ಲಿ 491 ಕಿಮೀ ರಾಜಕಾಲುವೆಯನ್ನು ತೆರವು ಮಾಡಲಾಗಿತ್ತು. ಹಿಂದಿನ ಸರ್ಕಾರ 193 ಕಿಮೀ ತೆರವು ಮಾಡಿದೆ. ಸದ್ಯ ರಾಜಕಾಲುವೆ ತೆರವಿಗೆ 1800 ಕೋಟಿ ರೂ. ವೆಚ್ಚವಾಗುತ್ತಿದೆ. 174 ಕಿಮೀ ಉಳಿದಿದೆ. ವಿಶ್ವ ಬ್ಯಾಂಕ್ ಸುಮಾರು 2000 ಕೋಟಿ ರೂಪಾಯಿ ನೀಡಲಿದೆ. 12.15 ಕಿಮೀ ದೂರದ ಕಾಲುವೆ ಪ್ರಕರಣ ಸಿವಿಲ್ ನ್ಯಾಯಾಲಯದಲ್ಲಿವೆ.

ಜೂನ್‌ ಇನ್ನೇನು ಒಂದು ವಾರದಲ್ಲಿ ಬರಲಿದೆ. ಮುಂಗಾರು ಆರಂಭವಾಗಲಿದೆ. ಮಲೆನಾಡು ಹಾಗೂ ಬಯಲುಸೀಮೆಯ ಕೃಷಿಕ ಜನತೆಗೆ ಇರುವ ಮುಂಗಾರಿನ ಸಿದ್ಧತೆಯ ಜ್ಞಾನ ನಗರದ ಮಹಾಜನತೆಗೆ ಇಲ್ಲ. ಹೀಗಾಗಿ ಮುಂಗಾರಿನ ಆರಂಭದಲ್ಲಿ ಅಪ್ಪಳಿಸುವ ಮಳೆಗೆ, ಮಹಾನಗರ ಸಿದ್ಧವಾಗಿರುವುದಿಲ್ಲ. ಹೀಗಾಗಿಯೇ ರಾಜಕಾಲುವೆಗಳು ಕಸ ತುಂಬಿ ಕಟ್ಟಿಕೊಳ್ಳುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು ಹಳೆಯ ಹಾಗೂ ದುರ್ಬಲ ಮರಗಳು ಬೀಳುವುದು, ಶಿಥಿಲ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್‌ ಕಂಬಗಳು, ತೆರೆದ ಮ್ಯಾನ್‌ಹೋಲ್‌ಗಳು ಸಾವಿನರಮನೆಗಳಾಗುವುದನ್ನು ಕಾಣುತ್ತೇವೆ. ವಿಳಂಬವಾಗಿರುವ ರಾಜಕಾಲುವೆ ತೆರವು ಹಾಗೂ ಸ್ವಚ್ಛತೆ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು, ಹೂಳೆತ್ತಬೇಕು. ರಾಜಕಾಲುವೆಗೆ ಕಸ ಹಾಕುವುದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು. ಬೆಂಗಳೂರು ನಗರದಲ್ಲಿ ವಾರ್ಡ್ ರಸ್ತೆಗಳಲ್ಲಿ 5500 ಗುಂಡಿಗಳು ಬಿದ್ದಿವೆ ಎಂಬ ಲೆಕ್ಕ ಇವೆ. ನಾಲ್ಕು ಮಳೆಗೆ ರಸ್ತೆಗುಂಡಿಗಳು ಮರಣಕೂಪಗಳಾಗುತ್ತವೆ. ಇವುಗಳನ್ನು ಮುಚ್ಚಿಸಬೇಕು.

ರಾಜಕಾಲುವೆಗಳ ನಿರ್ವಹಣೆಗೆ ಶಾಶ್ವತವಾದ ಒಂದು ವ್ಯವಸ್ಥೆಯನ್ನೇ ರೂಪಿಸಬೇಕಿದೆ. ರಾಜಕಾಲುವೆ ಹಾಗೂ ಒಳಚರಂಡಿ ವ್ಯವಸ್ಥೆಗಳು ಪ್ರತ್ಯೇಕವಾಗಿರಬೇಕು. ಆದರೆ ನಗರದ ಎಷ್ಟೋ ಕಡೆ ಅವು ಒಟ್ಟಾಗಿವೆ. ಇದು ತಪ್ಪಬೇಕು. ಇನ್ನು ರಾಜಕಾಲುವೆಯ ಒತ್ತುವರಿ ಪ್ರಭಾವಿಗಳಿಂದಲೇ ಆಗಿರುವುದು ಹೆಚ್ಚು. ಕಾನೂನಾತ್ಮಕ ಅಡ್ಡಿಆತಂಕಗಳನ್ನು ಸೃಷ್ಟಿಸುವವರೂ ಇವರೇ. ಇವರನ್ನು ಎದುರಿಸಲು ಸರ್ಕಾರ ಇನ್ನಷ್ಟು ಸನ್ನದ್ಧವಾಗಬೇಕು. ಮನೆಗಳಲ್ಲಿ ಮಳೆ ನೀರು ಕೊಯ್ಲಿಗೆ ವ್ಯವಸ್ಥೆಯಾದರೂ ಇರಬೇಕು. ಇಲ್ಲವಾದರೆ ರಾಜಕಾಲುವೆಗಳಿಗಾದರೂ ಅದು ಸೇರಬೇಕು. ಎರಡೂ ಇಲ್ಲದೆ ಹೋದರೆ ಕೃತಕ ಪ್ರವಾಹ ಸೃಷ್ಟಿಯಾಗುತ್ತದೆ. ಈ ಕೃತಕ ಪ್ರವಾಹಗಳಿಂದ ಜನಜೀವನ ಅಸ್ತವ್ಯಸ್ಥಗೊಂಡು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಲಯದಲ್ಲಿಯೂ ರಾಜಧಾನಿಗೆ ಕೆಟ್ಟ ಹೆಸರು ಬರುತ್ತದೆ. ಮೂಲಸೌಕರ್ಯ ಸರಿಯಿಲ್ಲ ಎಂದು ಇತರ ನಗರಗಳು ನಮ್ಮ ಅವಕಾಶವನ್ನು ಕಸಿಯುತ್ತವೆ. ನಾಲ್ಕಾರು ಕಂಪನಿಗಳು ಬೆಂಗಳೂರಿನ ಇನ್‌ಫ್ರಾಸ್ಟ್ರಕ್ಚರ್‌ ಕಳಪೆ ಎಂದು ಒಂದು ಮಾತು ಹೇಳಿದರೂ ಅದು ವಾಣಿಜ್ಯಾತ್ಮಕವಾಗಿ ಕಪ್ಪು ಚುಕ್ಕೆ. ಆದ್ದರಿಂದ, ಮುಂಗಾರಿಗೆ ಮುನ್ನವೇ ಈ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ರೂಪಿಸಿಕೊಂಡು ಸನ್ನದ್ಧರಾಗಬೇಕಿದೆ.

ಇದನ್ನೂ ಓದಿ: PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಒಂದು ಕಡೆ ಸರಣಿ ಕೊಲೆ, ಇನ್ನೊಂದೆಡೆ ಪೊಲೀಸರ ಬೀದಿ ಸುಲಿಗೆ!

ಚಿಲ್ಲರೆ ಕಾಸಿಗೆ ಕೈಚಾಚುವ ಖದೀಮರು, ಬೀದಿ ಬದಿ ವ್ಯಾಪಾರಿಗಳಿಂದ ಸುಲಿಗೆ ಮಾಡುವವರು, ಅಂಗಡಿಯವರನ್ನು ಬೆದರಿಸಿ ಕಾಸು ಕೀಳುವವರು, ನ್ಯಾಯಕ್ಕಾಗಿ ಠಾಣೆಗೆ ಬಂದಾಗ ಹಣ ತೆಗೆದುಕೊಂಡು ರಾಜಿ ಕಬೂಲಿ ಮಾಡಿ ಕಳಿಸುವವರು, ಸ್ಥಳೀಯ ಪುಢಾರಿಗಳನ್ನು ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡು ಆಯಕಟ್ಟಿನ ಜಾಗಗಳಲ್ಲಿ ಸದಾ ಇರುವವರು, ಆಡಳಿತಗಾರರ ಮರ್ಜಿಗೆ ಸದಾ ಕಾಯುತ್ತ ಎಂಜಲು ಕಾಸಿಗೆ ಜೊಲ್ಲು ಸುರಿಸುವವರು- ಇಂಥವರಿಂದಾಗಿ ಪೊಲೀಸ್‌ ಇಲಾಖೆಗೆ ಅಪಖ್ಯಾತಿ ಬಂದಿದೆ.

VISTARANEWS.COM


on

Karnataka police
Koo

ರಾಜಧಾನಿಯ ರಾಜಗೋಪಾಲನಗರದ ಪೊಲೀಸ್‌ ಸಿಬ್ಬಂದಿಗಳಿಬ್ಬರನ್ನು ಹಫ್ತಾ ವಸೂಲಿ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಈ ಸಿಬ್ಬಂದಿಯನ್ನು ಸಾರ್ವಜನಿಕರು ಅಟ್ಟಿಸಿಕೊಂಡು ಹೋದ ದೃಶ್ಯವೊಂದು ವೈರಲ್‌ ಆಗಿತ್ತು. ಹೊಯ್ಸಳ ಸಿಬ್ಬಂದಿಯಾಗಿದ್ದ ಇವರು ವಾಹನ ನಿಲ್ಲಿಸಿ ಹೋಟೆಲ್‌ನಿಂದ ಊಟ ಹಾಗೂ ನೀರಿನ ಬಾಟಲ್ ಪಡೆದಿದ್ದರು. ಅದಲ್ಲದೇ ಅಂಗಡಿಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಆರೋಪದ ಮೇಲೆ ಸಾರ್ವಜನಿಕರು ವಿಡಿಯೋ ಮಾಡಿದ್ದು, ಇದನ್ನು ಕಂಡ ಪೊಲೀಸರು ಹೊಯ್ಸಳ ವಾಹನ ಹತ್ತಿ ವೇಗವಾಗಿ ಕಳ್ಳರಂತೆ ಆ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಹಿಂಬದಿಯಿಂದ ಜನರು ʼಪೊಲೀಸ್ ಕಳ್ಳ ಪೊಲೀಸ್ ಕಳ್ಳʼ ಎಂದು ಕೂಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದಲ್ಲದೆ, ಪೊಲೀಸ್‌ ಇಲಾಖೆಗೆ (Karnataka Police) ಮುಜುಗರಕ್ಕೆ ಕಾರಣವಾಗಿತ್ತು. ಸದ್ಯ ಇಬ್ಬರು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿರುವ ಉತ್ತರ ವಿಭಾಗ ಡಿಸಿಪಿ, ಭ್ರಷ್ಟ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇಲಾಖಾ ತನಿಖೆ ನಡೆಯುತ್ತಿದೆ.

ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ ಎಂಬುದು ಹೊಸ ವಿಚಾರವೇನಲ್ಲ. ಇದು ಪೊಲೀಸ್‌ ಪರೀಕ್ಷೆಯಿಂದ ಹಿಡಿದು, ದೊಡ್ಡ ಅಧಿಕಾರಿಗಳ ವರ್ಗಾವಣೆಯವರೆಗೆ ವ್ಯಾಪಿಸಿದೆ. ಕಾನ್‌ಸ್ಟೇಬಲ್‌ಗಳಿಂದ ಹಿಡಿದು ಐಪಿಎಸ್‌ ಮಟ್ಟದ ಅಧಿಕಾರಿಗಳವರೆಗೂ ಇದರ ಬೇರು ಕೊಂಬೆಗಳು ವ್ಯಾಪಿಸಿವೆ. ಪೊಲೀಸ್‌ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ವ್ಯಾಪಕ ಅವ್ಯವಹಾರ ನಡೆದುದರ ಬಗ್ಗೆ ನಾವು ಓದಿಯೇ ಇದ್ದೇವೆ. ಇನ್ನು ಹೀಗೆ ಪರೀಕ್ಷೆ ಬರೆಯುವಾಗಲೇ ಅವ್ಯವಹಾರ ನಡೆಸಿದವರು ಪೋಸ್ಟಿಂಗ್‌ ಆದ ಬಳಿಕ ಭ್ರಷ್ಟಾಚಾರ ನಡೆಸದೇ ಬಿಟ್ಟಾರೆಯೇ? ಅನುಕೂಲಕರ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವುದಕ್ಕಾಗಿ ಐಪಿಎಸ್‌ ಅಧಿಕಾರಿಗಳಿಂದ ಹಿಡಿದು ಕಾನ್‌ಸ್ಟೇಬಲ್‌ಗಳವರೆಗೆ ಶಾಸಕಾಂಗದ ಆಯಕಟ್ಟಿನ ಸ್ಥಾನಗಳಲ್ಲಿರುವವರಿಗೆ ದೊಡ್ಡ ಮೊತ್ತದ ಕಾಣಿಕೆ ಸಲ್ಲಿಸುತ್ತಾರೆ ಎಂಬುದು ಬರಿಯ ಅರೋಪ ಇರಲಾರದು. ಹೀಗೆ ಹಣ ಚೆಲ್ಲಿದವರು ಆ ಹಣಕಾಸನ್ನು ವಸೂಲಿ ಮಾಡದೇ ಬಿಟ್ಟಾರೆಯೇ? ಹೀಗೆ ವಸೂಲಿಗೆ ಇಳಿಯುವವರಿಗೆ ಸಿಗುವವರೇ ಜನಸಾಮಾನ್ಯರು. ಪೊಲೀಸರ ಭಯದಿಂದಲೇ ಸುಲಿಗೆಗೊಳಗಾಗುವವರು ತುಟಿ ಪಿಟಕ್ಕೆನ್ನದೆ ಸುಮ್ಮನಿರುವುದು ಸಾಮಾನ್ಯ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

ಹೀಗೆಂದು ಪೊಲೀಸ್‌ ಇಲಾಖೆಯಲ್ಲಿರುವ ಎಲ್ಲರೂ ಹೀಗೆ ಎಂದು ಅರ್ಥೈಸಬೇಕಿಲ್ಲ. ಶಿಸ್ತು, ಗಾಂಭಿರ್ಯ, ಪ್ರಾಮಾಣಿಕತೆ, ದಕ್ಷತೆಗೆ ಹೆಸರಾದವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಚಿಲ್ಲರೆ ಕಾಸಿಗೆ ಕೈಚಾಚುವ ಖದೀಮರು, ಬೀದಿ ಬದಿ ವ್ಯಾಪಾರಿಗಳಿಂದ ಸುಲಿಗೆ ಮಾಡುವವರು, ಅಂಗಡಿಯವರನ್ನು ಬೆದರಿಸಿ ಕಾಸು ಕೀಳುವವರು, ನ್ಯಾಯಕ್ಕಾಗಿ ಠಾಣೆಗೆ ಬಂದಾಗ ಹಣ ತೆಗೆದುಕೊಂಡು ರಾಜಿ ಕಬೂಲಿ ಮಾಡಿ ಕಳಿಸುವವರು, ಸ್ಥಳೀಯ ಪುಢಾರಿಗಳನ್ನು ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡು ಆಯಕಟ್ಟಿನ ಜಾಗಗಳಲ್ಲಿ ಸದಾ ಇರುವವರು, ಆಡಳಿತಗಾರರ ಮರ್ಜಿಗೆ ಸದಾ ಕಾಯುತ್ತ ಎಂಜಲು ಕಾಸಿಗೆ ಜೊಲ್ಲು ಸುರಿಸುವವರು- ಇಂಥವರಿಂದಾಗಿ ಪೊಲೀಸ್‌ ಇಲಾಖೆಗೆ ಅಪಖ್ಯಾತಿ ಬಂದಿದೆ. ಸದ್ಯ ಹೀಗೆ ಚಿಲ್ಲರೆ ಕಾಸಿಗಾಗಿ ಆಸೆಪಟ್ಟ ಇಬ್ಬರು ಸಿಕ್ಕಿಬಿದ್ದಿರಬಹುದು. ಆದರೆ ಇದರಿಂದ ಇಲಾಖೆಯ ಬೇರುಬೇರುಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಮೇಲೆ ಏನೂ ಪರಿಣಾಮವಾಗದು.

ಇದೆಲ್ಲ ಸರಿಹೋಗಲು ಪೊಲೀಸ್‌ ಇಲಾಖೆಯ ಆಮೂಲಾಗ್ರ ಸುಧಾರಣೆ ಅಗತ್ಯ. ಮೇಲಿನಿಂದ ಸುಧಾರಣೆಯಾಗದೇ ಕೆಳಗಿನ ಹಂತದಲ್ಲಿ ಏನೂ ಮಾಡಲಾಗದು. ಈ ಸುಧಾರಣೆಗೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳೂ, ಅದರ ಮೇಲೆ ಹಿಡಿತ ಸಾಧಿಸಿರುವ ರಾಜಕಾರಣಿಗಳೂ ಮನಸ್ಸು ಮಾಡಬೇಕು. ಒಂದೆಡೆ ಸರಣಿ ಕೊಲೆಗಳು ನಡೆಯುತ್ತಿವೆ, ಇನ್ನೊಂದೆಡೆ ಪೊಲೀಸರು ಬೀದಿ‌ ಸುಲಿಗೆಯಲ್ಲಿ ತೊಡಗಿದ್ದಾರೆ. ಇದು ರಾಜ್ಯ ಪೊಲೀಸ್ ಇಲಾಖೆಯ ಘನತೆಯನ್ನು ಕುಗ್ಗಿಸಿದೆ.

Continue Reading
Advertisement
Prajwal Revanna Case
ಪ್ರಮುಖ ಸುದ್ದಿ3 hours ago

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

chakravarthy sulibele
ಕರ್ನಾಟಕ4 hours ago

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Cyber Crime
ಪ್ರಮುಖ ಸುದ್ದಿ4 hours ago

Cyber Crime : ಹೆಣ್ಣು ಮಕ್ಕಳ ಫೋಟೋ ಅಶ್ಲೀಲಗೊಳಿಸಿ ಪೋಸ್ಟ್​ ಮಾಡುತ್ತಿದ್ದವನ ಬಂಧನ

Bomb Threat
ಪ್ರಮುಖ ಸುದ್ದಿ5 hours ago

Bomb Threat : ತೆಲಂಗಾಣ ಡಿಸಿಎಂ ಮನೆಗೆ ಬಾಂಬ್​ ಬೆದರಿಕೆ; ಆತಂಕ

Acid attack
ಕರ್ನಾಟಕ5 hours ago

Acid attack: ಮನೆ ಬಾಗಿಲು ತೆರೆಯದ ಹಿನ್ನೆಲೆ ವಿವಾಹಿತ ಪ್ರಿಯತಮೆಗೆ ಆ್ಯಸಿಡ್ ಎರಚಿದ ಪ್ರಿಯಕರ!

Cab service
ಪ್ರಮುಖ ಸುದ್ದಿ5 hours ago

Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

Gauri Khan
ಸಿನಿಮಾ6 hours ago

Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

Veer Savarkar flyover
ಕರ್ನಾಟಕ6 hours ago

Veer Savarkar flyover: ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿರೋದು ಅತ್ಯಂತ ಖಂಡನೀಯ: ವಿಜಯೇಂದ್ರ

Lok Sabha Election
ಪ್ರಮುಖ ಸುದ್ದಿ6 hours ago

Lok Sabha Election : ಷೇರು ಮಾರುಕಟ್ಟೆ ಸಂಸ್ಥೆಯ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲಿದೆ; ಲೆಕ್ಕಾಚಾರ ಹೀಗಿದೆ

Robbery Case Two accused arrested by yallapur police
ಕರ್ನಾಟಕ6 hours ago

Robbery Case: ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ದರೋಡೆ; ಇಬ್ಬರು ಆರೋಪಿಗಳ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ7 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು16 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 day ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ7 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌