go sampattu column by shylesh holla about how malnad gidda Cattle in endangeredಗೋ ಸಂಪತ್ತು: ಅಳಿವಿನಂಚಿನಲ್ಲಿರುವ ಅಮೂಲ್ಯ ಗೋತಳಿ ಮಲೆನಾಡು ಗಿಡ್ಡ - Vistara News

ಕೃಷಿ

ಗೋ ಸಂಪತ್ತು: ಅಳಿವಿನಂಚಿನಲ್ಲಿರುವ ಅಮೂಲ್ಯ ಗೋತಳಿ ಮಲೆನಾಡು ಗಿಡ್ಡ

ಗೋವಿನ ಮಹತ್ವ ಮತ್ತು ವಿಚಾರಗಳನ್ನು ತಿಳಿಸುವ ಲೇಖನ ಮಾಲೆ “ಗೋ ಸಂಪತ್ತು” ನಲ್ಲಿ ಈ ವಾರ ಮಲೆನಾಡು ಗಿಡ್ಡಎಂಬ ವಿಶಿಷ್ಟ ಗೋತಳಿಯು ಹೇಗೆ ಅಳಿವಿನಂಚಿಗೆ ಸಾಗುತ್ತಿದೆ ಎಂಬುದನ್ನು ವಿವರಿಸಲಾಗಿದೆ.

VISTARANEWS.COM


on

malenadu gidda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಶಿಷ್ಟವಾದ ಗೋತಳಿ ʻಮಲೆನಾಡು ಗಿಡ್ಡʼದ ಕುರಿತು ಕಳೆದ ವಾರ ಸಾಕಷ್ಟು ಮಾಹಿತಿ ತಿಳಿದುಕೊಂಡಿದ್ದೇವೆ. ಈ ಗೋ ತಳಿ ಅಳಿವಿನಂಚಿನಲ್ಲಿರುವ ಅಪರೂಪದ ಅಮೂಲ್ಯ ತಳಿ ಎಂದರೆ ತಪ್ಪಾಗಲಾರದು. ಇವುಗಳ ಗಿಡ್ಡ ದೇಹವು ಮಲೆನಾಡಿನ ಏರಿಳಿತ ಪ್ರದೇಶಗಳಲ್ಲಿ ಇವುಗಳಿಗೆ ಸಂಚರಿಸಲು ಹೇಳಿ ಮಾಡಿಸಿದಂತದ್ದು. ಇವುಗಳ ಬಲವಾದ ಗೊರಸು, ಚಂಗನೆ ನೆಗೆಯುವ ಸಾಮರ್ಥ್ಯವೇ ಇವುಗಳ ಶಕ್ತಿ. ಕಡಿಮೆ ಆಹಾರ ತಿಂದು ರೋಗವಿಲ್ಲದೆ ದೀರ್ಘಕಾಲ ಬದುಕುವಂತಹ ಯಾವುದೇ ತಳಿಗಳಿಗಿಲ್ಲದ ವಿಶೇಷತೆ ಇವುಗಳದ್ದು.

ಇಂತಹ ತಳಿಗಳು ಈ ಭಾಗದ ಪ್ರಕೃತಿಯ ಮಡಿಲಿನಲ್ಲಿ ಅಲ್ಲಲ್ಲಿ ಆನಂದದಿಂದ ಮೇಯುತ್ತಿದ್ದ ದೃಶ್ಯ ಒಂದೆರಡು ದಶಕದ ಹಿಂದಿನವರೆಗೂ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿತ್ತು. ಎತ್ತರದ ಗುಡ್ಡ ಬೆಟ್ಟಗಳ ಅಪರೂಪದ ಸಸ್ಯಗಳ ಚಿಗುರು ಮತ್ತು ಹಸಿಹುಲ್ಲನ್ನು ಮೇಯ್ದು ಅಮೃತ ಸಮಾನವಾದ ಹಾಲನ್ನು ನೀಡುತ್ತಿತ್ತು. ಹಾಗೆಯೇ ಈ ಭಾಗದಲ್ಲಿ ಬೆಳೆಯಲಾಗುತ್ತಿದ್ದ ಪಚ್ಚೆ ಪೈರುಗಳಿಗೆ ಗೊಬ್ಬರವನ್ನು ನೀಡುತ್ತಾ ಪರಿಸರದ ಸಮತೋಲನವನ್ನು ಕಾಪಾಡುತ್ತಿದ್ದ ಏಕೈಕ ಜೀವಿಯಾಗಿತ್ತು.

ಮನುಷ್ಯನ ದೇಹಕ್ಕೆ ಲ್ಯಾಕ್ಟೋಫೆರೀನ್ ಎಂಬುದೊಂದು ಮಹತ್ವದ ಪೋಷಣೆ ನೀಡುವ ಪೌಷ್ಠಿಕಾಂಶ. ಈ ಲ್ಯಾಕ್ಟೋಪೇರಿನ್ ಮಲೆನಾಡು ಗಿಡ್ಡ ತಳಿಯ ಹಾಲಿನಲ್ಲಿ ಅಧಿಕ ಪ್ರಮಾಣದಲ್ಲಿರುವುದು ಸಾಬೀತಾಗಿದೆ. ಹಾಗೆಯೇ ಸರ್ಕಾರದ ಅಧಿಕೃತ ಸಂಸ್ಥೆಯಾದ ನ್ಯಾಷನಲ್ ಡೈರಿ ರಿಸರ್ಚ್ ಇನ್ಸಿಟ್ಯೂಷನ್ ನಡೆಸಿರುವ ಸಂಶೋಧನೆಯಲ್ಲಿ ಅತ್ಯಧಿಕ ಆ್ಯಂಟಿ ಡಯಾಬೀಟಿಕ್ ಗುಣವಿರುವುದು ಈ ಮಲೆನಾಡು ಗಿಡ್ಡ ತಳಿಯಲ್ಲಿ ಎಂಬುದು ದೃಢಪಟ್ಟಿದೆ. ಸಹಜವಾಗಿ ಕಾಡು-ಮೇಡು, ಬೆಟ್ಟ-ಗುಡ್ಡಗಳಲ್ಲಿ ಮೇಯುವ ಕಾರಣ ಇವುಗಳು ನೀಡುವ ಹಾಲಿನಲ್ಲೂ ಔಷಧೀಯ ಗುಣಗಳು ಕಂಡು ಬಂದಿರುವುದನ್ನು ವೈಜ್ಞಾನಿಕ ಜಗತ್ತು ಕಂಡುಕೊಂಡಿದೆ. ಹೀಗಾಗಿ ಇದರ ಹಾಲನ್ನು ಕುಡಿಯುವ ಈ ಭಾಗದ ಜನರು ಅತಿ ಸ್ವಸ್ಥರು ಹಾಗೂ ದೀರ್ಘಾಯುಷಿಗಳಾಗಿರುತ್ತಾರೆ ಎಂಬುದಾಗಿಯೂ ಹೇಳಲಾಗುತ್ತದೆ.

ರೋಗ ನಿರೋಧಕ ಶಿಕ್ತ ಹೊಂದಿದ ತಳಿ!

ಅತಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ತಳಿ ಇದು. ಇವುಗಳಿಗೆ ರೋಗ ರುಜಿನಗಳು ಬರುವುದು ಅಪರೂಪ. ಬಂದರೂ ಬಹು ಬೇಗನೇ ಗುಣವಾಗಿ ಬಿಡುತ್ತದೆ. ಸಾಮಾನ್ಯವಾಗಿ ಕಾಡುವ ಕಾಲು ಬಾಯಿ ಜ್ವರ ಇವುಗಳಿಗೆ ಬಾಧಿಸುವುದೇ ಇಲ್ಲ. ಬಂದರೂ ಮೂರ್ನಾಲ್ಕು ದಿನಗಳಲ್ಲಿ ವಾಸಿಯಾಗುತ್ತದೆ. ಇವು ಅತಿ ಕಡಿಮೆ ಆಹಾರವನ್ನು ತಿಂದು ಸಾಕುವವರಿಗೆ ಹೊರೆಯಾಗದೆ ಅಲ್ಪ ಪ್ರಮಾಣದಲ್ಲಿ ಹಾಲನ್ನು ನೀಡುತ್ತಾ ಗೊಬ್ಬರ ಹಾಗೂ ಉಳುಮೆಯಲ್ಲಿ ತಮ್ಮ ಸಹಭಾಗಿತ್ವವನ್ನು ನೀಡುತ್ತಿವೆ.

ಹಾಲಿನ ಗುಣಮಟ್ಟಕ್ಕೆ ಬೆಲೆ ಕೊಡದೆ ಹೆಚ್ಚಿನ ಇಳುವರಿಗೆ ಒತ್ತು ಕೊಟ್ಟಿರುವ ಇಂದಿನ ಮಾನಸಿಕತೆಗೆ ಹೋಲಿಸಿದ್ದಲ್ಲಿ ಇವುಗಳ ಹಾಲಿನ ಇಳುವರಿ ಕಡಿಮೆ ಎಂದೇ ಹೇಳಬಹುದು. ಆದರೆ ಕೆಲವೊಂದು ದನಗಳು ಸುಮಾರು 4 ರಿಂದ 5 ಲೀಟರ್‌ವರೆಗೂ ಹಾಲನ್ನು ನೀಡಿರುವುದು ಕಂಡುಬಂದಿದೆ. ಇದರ ಹಾಲಿನಲ್ಲಿ ದೇಹಕ್ಕೆ ಅವಶ್ಯಕವಾದ ಕೊಬ್ಬಿನಾಂಶ ಸುಮಾರು ಶೇಕಡಾ 4 ರಿಂದ 5 ರಷ್ಟಿರುವುದು ದೃಢಪಟ್ಟಿದೆ. ಹೀಗಾಗಿ ಈ ಹಾಲಿಗಿಂತ ಮುಖ್ಯವಾಗಿ ಗೊಬ್ಬರದ ಬಳಕೆಗಾಗಿ ಮತ್ತು ಹೊಲ ಗದ್ದೆಯ ಬಳಕೆಯಲ್ಲಿ ಬಳಸಲಾಗುತ್ತದೆ.

ಹೀಗಾಗಿಯೇ ಇದೊಂದು ಕೆಲಸಗಾರರ ತಳಿ ಎಂದೇ ಹೇಳಬಹುದು. ಇವು ಪ್ರತಿ ಒಂದು ಇಲ್ಲವೇ ಒಂದೂವರೆ ವರ್ಷಕ್ಕೊಂದು ಕರುವನ್ನು ಹಾಕುತ್ತವೆ. ಹೀಗೆ ವರ್ಷ ಒಂದರಲ್ಲಿ ಒಂದು ಕರುವನ್ನು ಹಾಕುವುದರಿಂದಲೇ ಇವುಗಳಿಗೆ ವರ್ಷಗಂಧಿ ಎಂಬ ಹೆಸರು ಬಂದಿರುವುದು. ಇವುಗಳಲ್ಲಿ ಕೆಲವು ತಮ್ಮ ಜೀವಿತಾವಧಿಯಲ್ಲಿ ಸುಮಾರು 20 ಕರುಗಳನ್ನು ಕೊಟ್ಟ ಸಾಕಷ್ಟು ಉದಾಹರಣೆಗಳು ಸಹ ಕಂಡುಬರುತ್ತವೆ.

malenadu gidda

ಗೋ ಸಂಪತ್ತು

ಕಷ್ಟಸಹಿಷ್ಣು ಹಸುಗಳು

ಇವುಗಳು ಒಂದು ರೀತಿಯಲ್ಲಿ ಕಷ್ಟಸಹಿಷ್ಣುಗಳು. ದಿನಗಟ್ಟಲೆ ಸತತವಾಗಿ ಸುರಿಯುವ ಮಳೆಯಲ್ಲಿ, ಬಿಸಿಲಿನಲ್ಲಿ ಹಾಗೂ ಚಳಿಯಲ್ಲಿ ಎಂದಿನಂತೆ ಕಾಡಿಗೆ ಹೋಗಿ ಮೇದು ಬರುವಂತಹವು. ಭತ್ತ ಕೊಯ್ಲು ಆದ ನಂತರ ಉಳಿಯುವ ಹುಲ್ಲು ಹೊಟ್ಟುಗಳನ್ನು ತಿಂದು ಬದುಕುವ ವಿಶಿಷ್ಟ ಗುಣ ಇವುಗಳಿಗಿದೆ. ಇದನ್ನು ರೈತಸ್ನೇಹಿ ರಾಸು ಎಂದು ಸಹ ಹೇಳಲಾಗುತ್ತದೆ.

ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಸಿಗುವ ಭತ್ತದ ಹಸಿ ಹುಲ್ಲು, ಹೊಂಬಾಳೆ, ಅಡಿಕೆ ಹಾಳೆ ಎಲ್ಲವನ್ನು ಇವು ಆಹಾರದ ರೂಪದಲ್ಲಿ ಸೇವಿಸುತ್ತವೆ. ಇವು ಅತಿ ಕಡಿಮೆ ನೀರನ್ನು ಸೇವಿಸುತ್ತವೆ. ಇವುಗಳು ಪಶ್ಚಿಮ ಘಟ್ಟಕ್ಕೆ ಹೇಳಿ ಮಾಡಿಸಿದ ತಳಿಗಳು. ಇವುಗಳನ್ನು ಹೆಚ್ಚಾಗಿ ಎಲ್ಲೆಂದರಲ್ಲಿ ಕಟ್ಟಿ ಹಾಕುತ್ತಾ ಇಲ್ಲವೇ ಕೂಡಿ ಹಾಕುತ್ತ ಸಾಕಲಾಗುತ್ತದೆ. ಕೆಲವೊಮ್ಮೆ ಮರಗಳೇ ಇವುಗಳಿಗೆ ತಲೆಯ ಮೇಲಿನ ಶಾಶ್ವತ ಛಾವಣಿಯಾಗಿರುತ್ತದೆ. ಇವುಗಳು ಹೆಚ್ಚಾಗಿ ಕಪ್ಪು ಇಲ್ಲವೇ ಬಿಳಿಯ ಬಣ್ಣದವಾಗಿರುತ್ತವೆ. ಬೂದು ಬಣ್ಣದ ಗೋವುಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ವೇದಗಳಲ್ಲೂ ಇದರ ಉಲ್ಲೇಖವಿರುವುದು ಕಂಡುಬರುತ್ತದೆ.

ಮಾಯವಾಗುತ್ತಿವೆ ಗಿಡ್ಡಿಗಳು!

2007ರ ಜಾನುವಾರು ಗಣತಿಯಲ್ಲಿ12,81,493 ರಷ್ಟಿದ್ದ ಈ ತಳಿಗಳ ಸಂಖ್ಯೆ, 2012-13ರ ಜಾನುವಾರು ಗಣತಿಯಲ್ಲಿ 8,99,091ಕ್ಕೆ ಬಂದಿಳಿದಿತ್ತು. ಹಾಗೆಯೇ 2012 ಹಾಗೂ 2017ರ ಜಾನುವಾರು ಗಣತಿ ಅನ್ವಯ ಈ ತಳಿಗಳ ಸಂಖ್ಯೆ ಶೇಕಡಾ 25 ರಿಂದ 30 ರಷ್ಟು ಇಳಿಕೆಯಾಗಿತ್ತು. ಶಿವಮೊಗ್ಗ ಒಂದರಲ್ಲೇ 2012ರಲ್ಲಿ ಸುಮಾರು 6 ಲಕ್ಷದಷ್ಟಿದ್ದ ಇವುಗಳ ಸಂಖ್ಯೆ 4.45 ಲಕ್ಷಕ್ಕೆ ಇಳಿದಿದ್ದು ಸಮೀಕ್ಷೆಯಿಂದ ಸಾಬೀತಾಗಿದ್ದಷ್ಟೇ ಅಲ್ಲದೆ 2017ರ ನಂತರ ಸುಮಾರು 50 ಸಾವಿರಕ್ಕೂ ಹೆಚ್ಚು ತಳಿಗಳು ಪ್ರತಿ ವರ್ಷ ಕಡಿಮೆಯಾಗುತ್ತಿರುವುದನ್ನು ಹಲವು ಸಮೀಕ್ಷೆಗಳು ಬಹಿರಂಗಪಡಿಸಿದ್ದವು.

ಇದರೊಂದಿಗೆ ಉತ್ತರ ಕನ್ನಡದಲ್ಲಿ 3.36 ಲಕ್ಷದಿಂದ 2.18 ಲಕ್ಷಕ್ಕೆ ಇವುಗಳ ಸಂತತಿ ಇಳಿದಿದ್ದರೆ, ಚಿಕ್ಕಮಗಳೂರಿನಲ್ಲಿ 85,854 ಮತ್ತು ಉಡುಪಿಯಲ್ಲಿ 1,55,309 ರಷ್ಟಿದ್ದ ಇವುಗಳ ಸಂಖ್ಯೆ ಶೇಕಡಾ 25 ರಿಂದ 30ರಷ್ಟು ಕಡಿಮೆಯಾಗಿದ್ದುದು ಕಂಡುಬಂದಿತ್ತು. ಹಾಗೆಯೇ 2019ರ ಜಾನುವಾರು ಗಣತಿಯಲ್ಲಿ ಒಟ್ಟಾರೆ ದೇಶಿ ತಳಿಗಳ ಸಂಖ್ಯೆಯಲ್ಲಿ ಹಿಂದಿನ ಜಾನುವಾರು ಗಣತಿಗೆ ಹೋಲಿಸಿದ್ದಲ್ಲಿ ಶೇಕಡಾ 6 ರಷ್ಟು ಇಳಿಕೆಯಾಗಿರುವುದು ಸ್ಪಷ್ಟವಾಗಿದೆ.

ಕೃಷಿಗೆ ಸಂಬಂಧಿಸಿದ ಲೇಖನ, ವರದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್‌ ಮಾಡಿ.

ಇದರಿಂದ ಸಹಜವಾಗಿ ಮಲೆನಾಡು ಗಿಡ್ಡ ತಳಿಗಳ ಸಂಖ್ಯೆಯಲ್ಲೂ ಸಹ ಭಾರಿ ಪ್ರಮಾಣದ ಇಳಿಕೆಯಾಗಿರುವುದನ್ನು ನಾವು ಅಂದಾಜಿಸಬಹುದಾಗಿದೆ. ದುರಾದೃಷ್ಟವೆಂದರೆ ಇದೇ ೨೦ನೇ ಜಾನುವಾರು ಗಣತಿಯಲ್ಲಿ ವಿದೇಶಿ ಹಾಗೂ ಮಿಶ್ರ ತಳಿಗಳ ಸಂಖ್ಯೆಯಲ್ಲಿ ಶೇಕಡಾ 26.9 ರಷ್ಟು ಏರಿಕೆ ಕಂಡುಬಂದಿದೆ. ಸ್ಥಳೀಯರ ಹಾಲೆಂಬ ಬಿಳಿ ದ್ರಾವಣದ ವ್ಯಾಮೋಹದಿಂದ ವಿದೇಶಿ ಹಾಗೂ ಮಿಶ್ರ ತಳಿಗಳು ಇವುಗಳ ಕೊಟ್ಟಿಗೆಯನ್ನು ಕ್ರಮೇಣ ಆಕ್ರಮಿಸುತ್ತಾ ಬೆಲೆ ಕಟ್ಟಲಾಗದ ಈ ತಳಿಗಳನ್ನು ಕಸಾಯಿಖಾನೆಯ ದಾರಿ ತೋರಿಸುತ್ತಿವೆ.

ಇದೆಲ್ಲವನ್ನು ಗಮನಿಸಿದಾಗ ಕ್ಷೀರಕ್ರಾಂತಿ ಎಂಬುದು ಈ ದೇಶಕ್ಕೆ ಉಪಯೋಗಕ್ಕಿಂತ ನಷ್ಟವನ್ನು ಮಾಡಿರುವುದೇ ಹೆಚ್ಚು ಎಂಬುದು ಸ್ಪಷ್ಟವಾಗುತ್ತದೆ. ಇದರ ಪರಿಣಾಮ ನಾವುಗಳಿಂದು ಹಾಲೆಂಬ ಬಿಳಿ ದ್ರಾವಣದ ಹಿಂದೆ ಬಿದ್ದು ಬೆಲೆ ಕಟ್ಟಲಾಗದ ನೂರಾರು ಉತ್ಕೃಷ್ಟ ಗೋತಳಿಗಳನ್ನು ಕಳೆದುಕೊಂಡಿದ್ದೇವೆ, ಇಂದಿಗೂ ಕಳೆದುಕೊಳ್ಳುತ್ತಲೇ ಇದ್ದೇವೆ. ಈ ಸಾಲಿನಲ್ಲಿ ಮಲೆನಾಡು ಗಿಡ್ಡ ತಳಿಯೂ ಸಹ ಒಂದು.

ಪಶ್ಚಿಮಘಟ್ಟ ಪ್ರದೇಶದ ರೈತರ ಕೃಷಿ ಚಟುವಟಿಕೆಗಳಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದ ಈ ತಳಿ ಇಂದು ತನ್ನ ಅಸ್ತಿತ್ವವನ್ನು ಕ್ರಮೇಣ ಕಳೆದುಕೊಳ್ಳುತ್ತಿದೆ ಎಂಬುದಂತು ಸತ್ಯ. ಇವುಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿರು ವುದಕ್ಕೆ ಹತ್ತು ಹಲವು ಕಾರಣಗಳು ಪ್ರಮುಖವಾಗಿ ಕಂಡುಬರುತ್ತವೆ. ಅವುಗಳಲ್ಲಿ ಪ್ರಮುಖವಾಗಿ ಅರಣ್ಯ ಭೂಮಿಯಲ್ಲಿ ದನ ಮೇಯಿಸಲು ತೊಂದರೆಯಾಗುತ್ತಿರುವುದು, ಗೋಮಾಳಗಳು ಕಣ್ಮರೆಯಾಗುತ್ತಿರುವುದು, ಕೃಷಿಯಲ್ಲಿ ಯಂತ್ರಗಳ ಉಪಯೋಗ ಹೆಚ್ಚಾಗಿ ಇವುಗಳು ನಿಷ್ಪ್ರಯೋಜಕವಾಗುತ್ತಿರುವುದು ಮತ್ತು ಒಂದೇ ಪ್ರದೇಶದಲ್ಲಿರುವ ಹೋರಿಗಳಿಂದ ಒಳ ಸಂಕರಣ ಮಾಡುತ್ತಿರುವುದು ಪ್ರಮುಖ ಕಾರಣವೆನ್ನಲಾಗಿದೆ. ಇದರಿಂದ ಈ ತಳಿಯ ದೇಹ ಮತ್ತು ಉತ್ಪಾದನಾ ಸಾಮರ್ಥ್ಯ ಹಾಗೂ ಗಾತ್ರ ಇಂದು ಕುಗ್ಗಿದೆ.

ಇದನ್ನೂ ಓದಿ : ಗೋ ಸಂಪತ್ತು: ವಿದೇಶಗಳಲ್ಲಿ ಮಿಂಚುತ್ತಿವೆ ಭಾರತೀಯ ಗೋ ತಳಿಗಳು!

ಅಷ್ಟೇ ಅಲ್ಲದೇ ತಳಿ ಸಂವರ್ಧನೆಗೆ ಬಳಸುವ ಹೋರಿಗಳು ಕಳಪೆಯಾಗಿರುವುದರಿಂದ ಉತ್ತಮ ಪೀಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಕಡಿಮೆ ಹಾಲಿನ ಇಳುವರಿ ಹಾಗೂ ಸ್ಥಳೀಯರ ಮತ್ತು ಸರ್ಕಾರದ ನಿರ್ಲಕ್ಷ್ಯ ಒಂದೆಡೆಯಾದರೆ, ಬಹು ಮುಖ್ಯವಾಗಿ ಇವುಗಳನ್ನು ಕದ್ದು ಮಾಂಸಕ್ಕಾಗಿ ಮಾರಾಟ ಮಾಡುವ ಬಹು ದೊಡ್ಡ ದಂಧೆ ಅತ್ಯಂತ ಸಕ್ರಿಯವಾಗಿರುವುದೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ಈ ಭಾಗದ ಜನರು ಸ್ವದೇಶಿ ತಳಿಯಾದ ಈ ಗಿಡ್ಡ ತಳಿಗಿಂತ ಮಿಶ್ರ ತಳಿಗಳ ಪಾಲನೆಗೆ ಒತ್ತು ನೀಡುತ್ತಿರುವುದು ಮತ್ತೊಂದು ಮುಖ್ಯ ಕಾರಣವಾಗಿದೆ.

ಹೀಗೆ ಮಲೆನಾಡಿಗರೇ ಇಂದು ಮಲೆನಾಡು ಗಿಡ್ಡ ತಳಿಯನ್ನು ಸಾಕಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದರ ಪರಿಣಾಮ ಈ ತಳಿಯಿಂದು ಮಲೆನಾಡಿನಿಂದ ಮರೆಯಾಗಿ ಕಟುಕನ ಕತ್ತಿಗೆ ಕೊರಳೊಡ್ಡುತ್ತಿರುವುದು ಸಾಮಾನ್ಯದಲ್ಲಿ ಸಾಮಾನ್ಯ ಸಂಗತಿಯಂತಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೃಷಿ

Cocoa Price: ಅಡಿಕೆ ಮರದೆತ್ತರಕ್ಕೆ ಕೋಕೋ ಬೆಳೆಯ ಧಾರಣೆ! 800% ಏರಿಕೆ!

Cocoa Price: ಹತ್ತಾರು ವರ್ಷಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದ್ದ ಕೋಕೋ ಬೆಲೆ ದಾಖಲೆಯ ಮಟ್ಟಕ್ಕೆ ಏರುತ್ತಿದೆ. 2022ರ ವರೆಗೆ ಹಸಿ ಕೋಕೋ (ಕೊಕ್ಕೋ) ಧಾರಣೆ 40 ರೂ. ಆಸುಪಾಸಿನಲ್ಲಿತ್ತು. ಅಲ್ಲಿಂದ ಹಿಂದಕ್ಕೆ 10-12 ವರ್ಷಗಳಲ್ಲಿ ಈ ಕೋಕೋ ಬೆಲೆ 30-40 ರೂ.ಯಲ್ಲೇ ಸ್ಥಿರವಾಗಿ ನಿಂತಿತ್ತು. ಎಲ್ಲ ಉಪ ಬೆಳೆಗಳ ದರ ಏರು ಮುಖ ಕಂಡಿದ್ದರೂ, ಕೋಕೋ ಧಾರಣೆ ಮಾತ್ರ 40 ರೂ. ಆಚೆ ಈಚೆ ಸುತ್ತುತ್ತಿತ್ತು. ಇದೀಗ ಬೆಲೆ ಬರೋಬರಿ 320 ರೂ. ಅಂದರೆ 800% ಹೆಚ್ಚಳವಾಗಿದೆ. ಇನ್ನೂ ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

VISTARANEWS.COM


on

Cocoa Price
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಹತ್ತಾರು ವರ್ಷಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದ್ದ ಕೋಕೋ ಬೆಲೆ (Cocoa Prices) ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರುತ್ತಿದೆ. ಪರಣಾಮ, ಅಡಿಕೆ ಬೆಳೆಯ ಜತೆ ಉಪ ಬೆಳೆಯಾಗಿ ಬೆಳೆಯುತ್ತಿದ್ದ ಕೋಕೋದಿಂದ ಒಂದಿಷ್ಟು ರೈತರಿಗೆ ಅನಿರೀಕ್ಷಿತವಾಗಿ ದೊಡ್ಡ ಬೋನಸ್ ದೊರೆತಂತಾಗಿದೆ.

2022ರ ವರೆಗೆ ಹಸಿ ಕೋಕೋ (ಕೊಕ್ಕೋ) ಧಾರಣೆ 40 ರೂ. ಆಸುಪಾಸಿನಲ್ಲಿತ್ತು. ಅಲ್ಲಿಂದ ಹಿಂದಕ್ಕೆ 10-12 ವರ್ಷಗಳಲ್ಲಿ ಈ ಕೋಕೋ ಬೆಲೆ 30-40 ರೂ.ಯಲ್ಲೇ ಸ್ಥಿರವಾಗಿ ನಿಂತಿತ್ತು. ಎಲ್ಲ ಉಪ ಬೆಳೆಗಳ ದರ ಏರು ಮುಖ ಕಂಡಿದ್ದರೂ, ಕೋಕೋ ಧಾರಣೆ ಮಾತ್ರ 40 ರೂ. ಆಚೆ ಈಚೆ ಸುತ್ತುತ್ತಿತ್ತು.

ಕೊಕೋ ಧಾರಣೆ ತೀರಾ ಕುಸಿತ ಕಂಡಾಗ, ಕೊಕೋ ಕೃಷಿಯ ಬಗ್ಗೆ ಮಲೆನಾಡು ಕರಾವಳಿ ಭಾಗದ ಕೃಷಿಕರು ಕೋಕೋವನ್ನು ನಿರ್ಲಕ್ಷಿಸಿದ್ದರು. ಮೂರ್ನಾಲ್ಕು ವರ್ಷಗಳ ಹಿಂದೆ ʼಎಂದೂ ಧಾರಣೆ ಏರದ ಇದು ಲಾಭದಾಯಕವಲ್ಲದ ಬೆಳೆ’ ಎಂಬ ಹಣೆ ಪಟ್ಟಿಯೂ ಕೋಕೋ ಬೆಳೆಗೆ ಅಂಟಿಕೊಂಡಿತ್ತು. ಬೆಲೆ ಇಲ್ಲದ ಕೋಕೋ ಗಿಡಗಳು ಅಡಿಕೆ ತೋಟದಲ್ಲಿ ಇರುವುದೇ ಒಂದು ಸಮಸ್ಯೆ ಅನ್ನುವಂತಾಗಿತ್ತು!

ಜತೆಗೆ ಕೋಕೋ ಹಣ್ಣುಗಳನ್ನು ತಿನ್ನಲು ದಾಂಗುಡಿ ಇಡುತ್ತಿದ್ದ ಮಂಗ, ಅಳಿಲು, ಕೆಲವು ಪಕ್ಷಿಗಳು ಬರಿ ಕೋಕೋ ಹಣ್ಣುಗಳನ್ನು ಹಾಳು ಮಾಡುವುದಲ್ಲದೆ, ಅಡಿಕೆ ಬೆಳೆಯನ್ನೂ ನಾಶ ಮಾಡುತ್ತಿದ್ದವು. ಬೆಲೆಯೂ ಇಲ್ಲದ, ತೊಂದರೆಯೂ ಜಾಸ್ತಿ ಇದ್ದ ಕೋಕೋ ಮರಗಳನ್ನು ಮಲೆನಾಡು ಕರಾವಳಿಯ ನೂರಾರು ಅಡಿಕೆ ಬೆಳೆಗಾರರು ಕಡಿದು, ಅಡಿಕೆ ಮರಗಳಿಗೆ ಮಲ್ಚಿಂಗ್ ಮಾಡಿ ಕೈ ತೊಳೆದುಕೊಂಡಿದ್ದು ಇತಿಹಾಸ. ಈಗ ಅದೇ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಕೋಕೋ ಬೆಳೆಯ ಧಾರಣೆ ಅಡಿಕೆ ಮರದ ಎತ್ತರಕ್ಕೆ ಏರುತ್ತಿರುವುದು ಕಂಡು ಅನೇಕ ರೈತರು ಸಂಕಟ ಅನುಭವಿಸುವಂತಾಗಿರುವುದೂ ಸತ್ಯ.

ಕಳೆದ ದಶಕದಲ್ಲಿ ಹಸಿ ಕೋಕೋ 40 ರೂ. ಇದ್ದಿದ್ದು, ಇವತ್ತು ಬರೋಬರಿ 320 ರೂ.ಗೆ ತಲುಪಿದೆ. ಅಂದರೆ 800% ಹೆಚ್ಚಳ! ಇನ್ನೂ ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

ಧಾರಣೆ ಏರಿಕೆಗೆ ಕಾರಣ ಏನು?

ಕೋಕೋವನ್ನು ಐಸ್‌ಕ್ರೀಮ್, ಚಾಕೊಲೇಟ್, ಮಿಠಾಯಿ, ಬೇಕಿಂಗ್ ಮತ್ತು ಸೌಂದರ್ಯವರ್ಧಕ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಈ ಉದ್ಯಮಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ, ಬರ ಮತ್ತು ನೀರಿನ ಕೊರತೆಯಿಂದ ವಿಶ್ವದಾದ್ಯಂತ ಕೋಕೋ ಬೆಳೆ ಗಣನೀಯವಾಗಿ ಇಳಿಮುಖವಾಗಿರುವುದು ಇವತ್ತಿನ ಕೋಕೋ ಧಾರಣೆ ಏರಿಕೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಜಾಗತಿಕ ಪೂರೈಕೆಯ 70%ರಷ್ಟಿರುವ ಆಫ್ರಿಕಾದ ಕೋಕೋ ಉತ್ಪಾದನೆಯು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಜಾಗತಿಕ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗದೆ ಬೆಳೆ ನೆಲ ಕಚ್ಚಿರುವುದು ಭಾರತವೂ ಸೇರಿದಂತೆ ವಿಶ್ವ ಮಾರುಕಟ್ಟೆಯಲ್ಲಿ ಕೋಕೋ ಧಾರಣೆ ಏರಿಕೆ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದಲ್ಲೂ ಹವಾಮಾನ ವ್ಯತ್ಯಾಸದಿಂದ ಕೋಕೋ ಬೆಳೆ ಇಳಿಮುಖವಾಗಿದೆ.

ಕ್ವಿಂಟಾಲ್ ಡ್ರೈ ಕೋಕೋಗೆ ಈಗ ಲಕ್ಷ ಬೆಲೆ

ಹಸಿ ಕೋಕೋ ದರ 320 ರೂ. ಗಡಿ ದಾಟುತ್ತಿರುವಾಗಲೇ, ಒಣಗಿದ ಡ್ರೈ ಕೋಕೋ ಧಾರಣೆಯೂ ಅದೇ ಪ್ರಮಾಣದಲ್ಲಿ ಏರುತ್ತಿದ್ದು ಗರಿಷ್ಠ ಒಣ ಕೋಕೋ ದರ ಈಗ ಕೆ.ಜಿ.ಗೆ 960 ರೂ. ಅನ್ನು ತಲುಪಿದೆ. ದರ ಏರಿಕೆ ಹೀಗೆ ಮುಂದುವರಿದರೆ ಮೂರ್ನಾಲ್ಕು ದಿನಗಳಲ್ಲಿ ಅದು ನಾಲ್ಕಂಕೆಯನ್ನು ಮುಟ್ಟಿ, ಕ್ವಿಂಟಾಲ್ ಡ್ರೈ ಕೋಕೋ ಬೆಲೆ ದಾಖಲೆಯ 1,00,000 ರೂ. ತಲುಪುವ ಸಾಧ್ಯತೆ ಇದೆ.

ಕೋಕೋ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಈಗ ದುಸ್ತರ

ಕೋಕೋ ಧಾರಣೆ ಮಿಂಚಿ‌ ವೇಗದಲ್ಲಿ ಏರುತ್ತಿರುವಾಗ ಫಸಲಿಗೆ ಬರುತ್ತಿರುವ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಸಣ್ಣ ರೈತರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಮಂಗ, ಅಳಿಲು, ಕೆಂಜಳಿಲು, ಕಬ್ಬೆಕ್ಕು, ಪಕ್ಷಿಗಳಿಂದ ಬೆಳೆಯನ್ನು ರಕ್ಷಣೆ ಮಾಡಿಕೊಂಡು ಹಣ್ಣಾದಾಗ ಕಟಾವು ಮಾಡಬೇಕು. ಆದರೆ ಕಟಾವು ಮಾಡುವ ಮೊದಲೇ ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಇದಲ್ಲದೆ ಕೋಕೋ ಹಣ್ಣುಗಳನ್ನು ತೋಟದಿಂದಲೇ ಕದಿಯುತ್ತಿರುವ ವರದಿಗಳೂ ಹರಿದಾಡುತ್ತಿವೆ.

ಇದನ್ನೂ ಓದಿ: Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಒಟ್ಟಿನಲ್ಲಿ ಒಂದು ಕಾಲದಲ್ಲಿ ಐಸ್‌ಕ್ರೀಮ್, ಚಾಕಲೇಟ್‌ಗಳಲ್ಲಿ ಬಳಸುತ್ತಿದ್ದ ವೆನಿಲಾ ಬೆಳೆಯ ದರ ಏರಿಕೆಯಿಂದ ಆಗುತ್ತಿದ್ದ ಪರಿಣಾಮಗಳು ಈಗ ಕೋಕೋಗೆ ರಾಜ ಮರ್ಯಾದೆಯ ದರ ಬರುತ್ತಿದೆ. ಜಾಗತಿಕ ಮಟ್ಟದಲ್ಲಿ ಕೋಕೋ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಇರುವ ಕಾರಣ ಸಧ್ಯಕ್ಕಂತು ಅದರ ದರ ಇಳಿಯುವ ಸಾಧ್ಯತೆ ಕಡಿಮೆ ಎಂದು ಚರ್ಚೆ ನೆಡೆಯುತ್ತಿದೆ.

Continue Reading

ಕರ್ನಾಟಕ

Tomato Price: ಗ್ರಾಹಕನ ಜೇಬು ಸುಡಲು ಟೊಮ್ಯಾಟೊ ಸಜ್ಜು, ಬಾಕ್ಸ್‌ಗೆ 400 ರೂಪಾಯಿಗೆ ಬೆಲೆ ಏರಿಕೆ

Tomato Price: ಬಿಸಿಲಿನ ತಾಪಕ್ಕೆ ಹೆಚ್ಚಾಗಿ ಫಸಲು ಬಾರದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚುತ್ತಿದೆ. ಜೊತೆಗೆ ಟೊಮ್ಯಾಟೊ ಬೆಳೆಗೆ ಬಿನುಗು ರೋಗ ತಗುಲಿದ ಹಿನ್ನೆಲೆಯಲ್ಲಿ‌ ನಿರೀಕ್ಷಿತ ಫಸಲು ಕೂಡ ಬಂದಿಲ್ಲ.

VISTARANEWS.COM


on

tomato price rise
Koo

ಚಿಕ್ಕಬಳ್ಳಾಪುರ‌: ಟೊಮ್ಯಾಟೊ ಬೆಲೆ (tomato price) ಪುನಃ ನಾನೂರು ರೂಪಾಯಿ ದಾಟಿದೆ. ಹತ್ತು ಕೆಜಿ ಟೊಮ್ಯಾಟೊ ಬಾಕ್ಸ್ ಬೆಲೆ‌ (tomato price rise) ನಾನೂರು ರೂಪಾಯಿ ತಲುಪಿದ್ದು, ಗ್ರಾಹಕರ ಕೈ ಸುಡಲು ಸಿದ್ಧವಾಗಿದೆ.

ಬಿಸಿಲಿನ ತಾಪಕ್ಕೆ ಹೆಚ್ಚಾಗಿ ಫಸಲು ಬಾರದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚುತ್ತಿದೆ. ಜೊತೆಗೆ ಟೊಮ್ಯಾಟೊ ಬೆಳೆಗೆ ಬಿನುಗು ರೋಗ ತಗುಲಿದ ಹಿನ್ನೆಲೆಯಲ್ಲಿ‌ ನಿರೀಕ್ಷಿತ ಫಸಲು ಕೂಡ ಬಂದಿಲ್ಲ. ಆ ಬಾರಿ ಬಿಸಿಲಿನ ಪರಿಣಾಮ ನಿರೀಕ್ಷೆಗಿಂತ ಮೊದಲೇ ನೀರಿನ ಲಭ್ಯತೆ ಕಡಿಮೆಯಾಗಿದೆ. ಬೋರ್ವೆಲ್‌ಗಳಲ್ಲಿಯೂ ನೀರು ಬತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವು ರೈತರು ಟೊಮ್ಯಾಟೋ ಬೆಳೆಯಲು ಮುಂದಾಗಿಲ್ಲ.

ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಮುಂಜಾನೆ ಟೊಮ್ಯಾಟೊಗೆ ನಾನೂರು ರೂಪಾಯಿ ನಿಗದಿ ಮಾಡಲಾಗಿದೆ. ನಾಳೆ ನಾಡಿದ್ದರಲ್ಲಿ ಮತ್ತಷ್ಟು ಏರಬಹುದು ಎಂದು ನಿರೀಕ್ಷಿಸಲಾಗಿದೆ.

ಬೆಲೆ ಏರಿಕೆಗೆ ಕಾರಣ

ಉತ್ಪಾದನೆಯಲ್ಲಿ ಕುಸಿತ, ಹವಾಮಾನ ವೈಪರೀತ್ಯ, ಅತಿಯಾದ ಬಿಸಿಲು ಹಾಗೂ ಉಷ್ಣ ವಾತಾವರಣದಿಂದ ಬೆಳೆ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ. ಒಂದು ಅಧ್ಯಯನದ ಪ್ರಕಾರ ಗ್ರಾಹಕ ಕೊಂಡುಕೊಳ್ಳುವ ಬೆಲೆಯಲ್ಲಿ ರೈತನಿಗೆ ಕೇವಲ ಶೇಕಡಾ 32ರಷ್ಟು ಮಾತ್ರ ದಕ್ಕುತ್ತದೆ.

ಟೊಮೆಟೊ ಹೆಚ್ಚು ಬೆಳೆಯುವುದು ಎಲ್ಲಿ?

ಆಂಧ್ರಪ್ರದೇಶ, ಕರ್ನಾಟಕದ, ಒಡಿಶಾ, ಗುಜರಾತ್ ಮತ್ತು ಮಧ್ಯ ಪ್ರದೇಶದಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತದೆ. ಈ ರಾಜ್ಯಗಳು ದೇಶದ ಒಟ್ಟು ಉತ್ಪಾದನೆಯು ಶೇಕಡಾ ಐವತ್ತರಷ್ಟು ಕೊಡುಗೆ ನೀಡುತ್ತವೆ. ಛತ್ತೀಸ್ ಗಢ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ, ಪಶ್ಚಿಮ ಬಂಗಾಳ, ಬಿಹಾರ ತೆಲಂಗಾಣ ಶೇಕಡಾ 40 ರಷ್ಟು ಟೊಮೆಟೊ ಉತ್ಪಾದನೆ ಮಾಡುತ್ತವೆ. ಮುಂಗಾರು ಮತ್ತು ಹಿಂಗಾರು ಬೆಳೆಯಾಗಿ ಟೊಮ್ಯಾಟೊ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಆಗಸ್ಟ್ ನಡುವೆ ಹಿಂಗಾರು ಬೆಳೆಯಲಾಗುತ್ತದೆ. ಮುಂಗಾರು ಬೆಳೆ ಸೆಪ್ಟಂಬರ್ ತಿಂಗಳಿನಿಂದ ಕೊಯ್ಲಿಗೆ ಬರುತ್ತದೆ. ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆಗಾಲದಲ್ಲಿ ಟೊಮ್ಯಾಟೊ ಬೆಳೆಯುತ್ತಾರೆ. ಬೇಸಿಗೆಯ ಉತ್ಪಾದನೆಯ ಶೇಕಡಾ 90ರಷ್ಟು ಬೆಳೆಯನ್ನು ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ಬೆಳೆಯುತ್ತಾರೆ.

ಮಾಹಿತಿಗಳ ಪ್ರಕಾರ 2020ರಿಂದ ಟೊಮ್ಯಾಟೊ ಉತ್ಪಾದನೆ ಕಡಿಮೆಯಾಗುತ್ತಿದೆ. 2019-2 0ರಲ್ಲಿ 21.187 ಮಿಲಿಯನ್ ಟನ್ ಗಳಷ್ಟು ಟೊಮ್ಯಾಟೊ ಉತ್ಪಾದನೆ ಆಗಿದ್ದರೆ 2020-21ರಲ್ಲೂ 20.69ಮಿಲಿಯನ್ ಟನ್ ಗೆ ಇಳಿದಿದೆ. 2022-23ರಲ್ಲೂ 20.62 ಮಿಲಿಯನ್ ಟನ್ ಗೆ ಕುಸಿದಿದೆ.

ಇದನ್ನೂ ಓದಿ: Sugar Price: ಟೊಮ್ಯಾಟೊ ‘ಹುಳಿ’ಯಾದ ಬೆನ್ನಲ್ಲೇ ಸಕ್ಕರೆ ‘ಕಹಿ’; ಜನರ ಹಬ್ಬದ ಖುಷಿಗೆ ಬೆಲೆಯೇರಿಕೆ ಬಿಸಿ

Continue Reading

ಚಿತ್ರದುರ್ಗ

Arecanut Cultivation: ಒಣಗುತ್ತಿರುವುದು ಅಡಿಕೆ ಮರಗಳಲ್ಲ, ರೈತರ ಬದುಕು!

Arecanut Cultivation: ಬೇಸಿಗೆಯಲ್ಲಿ ಹಲವೆಡೆ ಕುಡಿಯುವ ನೀರಿಲ್ಲದೆ ಜನ ಸಂಕಷ್ಟ ಎದುರಿಸುವಂತಾಗಿದೆ. ಮತ್ತೊಂದೆಡೆ ಮಳೆಯಿಲ್ಲದೆ ಅಡಿಕೆ ಸೇರಿ ವಿವಿಧ ರೀತಿಯ ಬೆಳೆಗಳು ಒಣಗುತ್ತಿದ್ದು, ಚಿತ್ರದುರ್ಗದ ಚಳ್ಳಕೆರೆ ತಾಲೂಕಿನಲ್ಲಿ ನೀರಿನ ಅಭಾವದಿಂದ ಅಡಿಕೆ ಮರಗಳು ಒಣಗುತ್ತಿವೆ. ಇದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.

VISTARANEWS.COM


on

Arecanut cultivation
Koo

ಚಳ್ಳಕೆರೆ: ಬರಗಾಲಕ್ಕೆ ತುತ್ತಾದ ಚಳ್ಳಕೆರೆ ತಾಲೂಕಿನ ರೈತರಿಗೆ ಅನಿವಾರ್ಯವಾದದ್ದೇ ಅಡಿಕೆ ಬೆಳೆ (Arecanut Cultivation). ಸಾವಿರಾರು ಹೆಕ್ಟೇರ್​ನಲ್ಲಿ ಅಡಿಕೆ ಬೆಳೆದು ಬದುಕು ಸಾಗಿಸಲು ಕನಸು ಕಂಡಿದ್ದ ಬೆಳೆಗಾರರ ಬದುಕೀಗ ಬಿಸಿಲ ಬೇಗೆಗೆ ಸುಟ್ಟು ಕರಕಲಾಗಿದೆ. ಹಚ್ಚ- ಹಸಿರಿನಿಂದ ರಾರಾಜಿಸುತ್ತಿದ್ದ ಅಡಿಕೆ ಮರಗಳು ನೀರಿಲ್ಲದೇ ಒಣಗಿ ನಿಲ್ಲುತ್ತಿವೆ. ಬೋರ್​ವೆಲ್​ನಲ್ಲಿ ನೀರು ನಿಲ್ಲುತ್ತಿದ್ದಂತೆ ಮರಗಳು ಸುಡಲು ಆರಂಭಿಸಿವೆ. ಒಣಗುತ್ತಿರುವುದು ಮರಗಳಲ್ಲ. ನಮ್ಮ ಬದುಕು ಎಂದು ಬೆಳೆಗಾರರು ಕಂಗಾಲಾಗಿದ್ದಾರೆ.

ಅತ್ತ ಮಳೆ ಇಲ್ಲ. ಇತ್ತ ನೆಲದಲ್ಲಿ ನೀರಿಲ್ಲ. ಎಷ್ಟು ಬೋರ್ ಕೊರೆಯಿಸಿದರು. ನೀರು ಬರುತ್ತಿಲ್ಲ.
ಇನ್ನು ಒಂದು ತಿಂಗಳ ಕಾಲ ಭೂಮಿಗೆ ಮಳೆ ಬಾರದಿದ್ದರೆ ಅದೆಷ್ಟೋ ಅಡಿಕೆ ತೋಟಗಳು ಒಣಗಿ ಹೋಗುತ್ತವೆ ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.

ತಾಲೂಕಿನ ಕಾಪರಹಳ್ಳಿ ಗ್ರಾಮದ ಗುರುಸ್ವಾಮಿ ರೈತ ತಮ್ಮ ಜಮೀನಿನಲ್ಲಿ ಅಡಿಕೆ ಬೆಳೆಯನ್ನು ಬೆಳೆದಿದ್ದು, ಈಗ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಅಡಿಕೆ ಬೆಳೆ ಸಂಪೂರ್ಣ ಒಣಗುತ್ತಿದೆ.

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…

Areca Agriculture
Aravind Sigadal
-ಅರವಿಂದ ಸಿಗದಾಳ್, ಮೇಲುಕೊಪ್ಪ

ಅಡಿಕೆ ಹಳದಿ ರೋಗಕ್ಕೆ ಕಾರಣ ಮತ್ತು ಔಷಧಿ (Areca Agriculture) ಎರಡೂ ಇನ್ನು ಪ್ರಶ್ನೆಯಾಗಿಯೇ ಉಳಿದಿವೆ. ಅಡಿಕೆ ಎಲೆ ಚುಕ್ಕಿ ರೋಗ ನಿರ್ದಿಷ್ಟ ಫಂಗಸ್‌ಗಳಿಂದ ಸಾಂಕ್ರಾಮಿಕವಾಗಿ ಹರಡುತ್ತಿರುವುದು ಕಾರಣ ಎಂದು ಗೊತ್ತಾಗಿದ್ದರೂ, ರೋಗಕ್ಕೆ ಇನ್ನೂ ಔಷಧಿಯನ್ನು ಕಂಡು ಹಿಡಿದಿಲ್ಲ. ಅನೇಕ ಫಂಗಿಸೈಡ್‌ಗಳನ್ನು ಪ್ರಯೋಗಿಸಿ ರೋಗದ ನಿಯಂತ್ರಣ ಪ್ರಯತ್ನ-ಪ್ರಯೋಗ ನೆಡೆಯುತ್ತಿದೆ. ರೋಗ ಬಂದ ಮೇಲೆ ಔಷಧಿ ಕೊಡುವ ಪ್ರಯತ್ನಗಳು ಸಹಜ ಮತ್ತು ಅಗತ್ಯ ಕೂಡ. ಅದರ ಜೊತೆಗೆ ರೋಗಗಳಿಗೆ ಕಾರಣವಾಗುವ ಮೂಲ ಯಾವುದು ಎಂಬ ಅಧ್ಯಯನ ಮತ್ತು ಪ್ರಯೋಗಗಳು ನಡೆಯಬೇಕು. ಆದರೆ ಅಡಿಕೆ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗಗಳ ವಿಚಾರದಲ್ಲಿ ಈ ಕಾರಣ ಕಂಡುಹಿಡಿಯುವ ಅಧ್ಯಯನ ಮತ್ತು ಪ್ರಯೋಗಗಳು ತಳ ಮಟ್ಟದಿಂದ ತೀವ್ರಗತಿಯಲ್ಲಿ ನಡೆಯುತ್ತಿಲ್ಲ.

ಹವಾಮಾನ ವೈಪರೀತ್ಯ ಪರಿಣಾಮ, ಮಣ್ಣು-ನೀರು-ಗಾಳಿ-ಅಡಿಕೆ ಮರದ ಒಳ ಭಾಗದಲ್ಲಿ ಆಗುತ್ತಿರುವ pH ವ್ಯತ್ಯಾಸ, ಕ್ಷೀಣಿಸುತ್ತಿರುವ ಮಣ್ಣಿನ ಫಲವತ್ತತೆ, ಅದಕ್ಕೆ ಕಾರಣವಾಗುತ್ತಿರುವ ರಾಸಾಯನಿಕಗಳ ಬಳಕೆ, ಮಣ್ಣಿನ ಸಾವಯವ ಇಂಗಾಲದ ಕೊರತೆ, ಪ್ರತಿಯೊಂದು ರೋಗದ ಲಕ್ಷಣ ಕಂಡಾಗಲೂ ಬಳಸುತ್ತಿರುವ ಅತಿಯಾದ ವಿಷ ಪೂರಿತ ಔಷಧಿಗಳು, ಬಳಸುತ್ತಿರುವ ಕಳೆ ನಾಶಕಗಳು, ಹೆಚ್ಚು ಇಳುವರಿ ಬಯಕೆಯಿಂದ ಮಾಡುತ್ತಿರುವ ಬೇಸಾಯ ಪದ್ದತಿಗಳು, ಇವೆಲ್ಲವುಗಳಿಂದ ಆಗುತ್ತಿರುವ ಪರಿಣಾಮ ಇವತ್ತು ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಅಡಿಕೆಗೆ ರೋಗಗಳು ಹೆಚ್ಚುತ್ತಿವೆ. ಆರೋಗ್ಯವಂತ ಅಡಿಕೆ ತೋಟಗಳಲ್ಲಿ ಸಾಂಪ್ರದಾಯಕವಾಗಿ ಬೇಸಾಯ ಮಾಡುವಾಗ ಸರಾಸರಿ ಎಕರೆಗೆ 12 ಕ್ವಿಂಟಾಲ್ ಬರುತ್ತಿದ್ದ ಅಡಿಕೆ ಈಗ ಆರೋಗ್ಯವಿರುವಂತೆ ಕಾಣುವ ತೋಟದಲ್ಲೂ ಸರಾಸರಿ 7-8 ಕ್ವಿಂಟಾಲ್ ಮೇಲೆ ಬರುತ್ತಿಲ್ಲ. ಹಳದಿ ಎಲೆ ರೋಗ ಬಂದಲ್ಲಿ ಇಳುವರಿ 2-3 ಕ್ವಿಂಟಾಲಿಗೆ ಇಳಿದಿದೆ. ಹಳದಿ ರೋಗ, ಎಲೆ ಚುಕ್ಕಿ ರೋಗ ಎರಡೂ ಇರುವಲ್ಲಿ ಎಕರೆಗೆ ಕ್ವಿಂಟಾಲ್ ಇರಲಿ, 60-70 ಕೆಜಿ ಅಡಿಕೆಯೂ ಆಗುತ್ತಿಲ್ಲ!

Areca nuts image

ವಯಸ್ಸಾದಂತೆ ರೋಗ

ಹೇಗೆ ಮನುಷ್ಯರಲ್ಲಿ 35ನೇ ವಯಸ್ಸಿನಲ್ಲಿ ಬಿಪಿ, ಡಯಾಬಿಟಿಸ್, ಗ್ಯಾಸ್ಟಿಕ್‌ನಂತಹ ಶಾಶ್ವತ ರೋಗಗಳು ಬರುವಂತೆ ಅಡಿಕೆ ತೆಂಗು ಮರಗಳಿಗೂ, ಸಾಮರ್ಥ್ಯ ಕಮ್ಮಿಯಾಗುವ, ರೊಗಗಳಿಗೆ ಬಲಿಯಾಗುವ, ಇಳುವರಿ ಕಮ್ಮಿಯಾಗುವ ಸ್ಥಿತಿ ಉಂಟಾಗುತ್ತಿವೆ. ಕಡಿಮೆ ಇಳುವರಿಯ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗುತ್ತಿದೆ. ಬಿಪಿ, ಡಯಾಬಿಟಿಸ್, ಗ್ಯಾಸ್ಟಿಕ್‌ನಂತೆ ಇಳುವರಿ ಕಡಿಮೆಯಾಗುವುದು ಶಾಶ್ವತ ಸಮಸ್ಯೆ ಆಗುತ್ತಿದೆ.
ಅತಿ ರಾಸಾಯನಿಕ ಬಳಕೆ, ಕೀಟನಾಶಕಗಳು, ಕ್ರಿಮಿನಾಶಕಗಳು, ರೋಗಗಳಿಗೆ ಕೊಡುತ್ತಿರುವ ರಾಸಾಯನಿಕ ಔಷಧಿಗಳು, ಕಡಿಮೆ ಆಗುತ್ತಿರುವ ಕೊಟ್ಟಿಗೆ ಗೊಬ್ಬರಗಳು, ಅವಜ್ಞಾನಿಕ ಕೃತಕ ಸಾವಯವ ಗೊಬ್ಬರ ಬಳಕೆಗಳ ನಡುವೆ ಸ್ವಾಭಾವಿಕವಾಗಿ ಉತ್ಪಾದನೆಗೊಳ್ಳುವ ಸಾವಯವ ಇಂಗಾಲದ ಕೊರತೆ ಅಡಿಕೆ ರೋಗಗಳಿಗೆ ಒಂದು ಪ್ರಮುಖ ಕಾರಣವಾಗಿದೆ.

Organic carbon

ಏನಿದು ಸಾವಯವ ಇಂಗಾಲ?

ಸರಳವಾಗಿ ಹೇಳುವುದಾದರೆ, ಪರಿಸರದಲ್ಲೇ ಇರುವ ಸಾವಯವ ವಸ್ತುಗಳು ಮತ್ತು ತ್ಯಾಜ್ಯಗಳು ಕೊಳೆಯುವುದರಿಂದ ಸಾವಯವ ಇಂಗಾಲ ಉತ್ಪತ್ತಿಯಾಗುತ್ತದೆ. ಮಣ್ಣಿನ ಫಲವತ್ತತೆ ಮತ್ತು ಗಿಡಗಳ ಬೆಳವಣಿಗೆಗೆ ಸಾವಯವ ಇಂಗಾಲ ಒಂದು ಪ್ರಮುಖ ಅಂಶ. ಗಿಡಗಳ ಆರೋಗ್ಯಕ್ಕೆ, ಉತ್ತಮ ಇಳುವರಿಗೆ, ಮಣ್ಣಿನ ಆರೋಗ್ಯಕ್ಕೆ ಈ ಸಾವಯವ ಇಂಗಾಲ ಅತ್ಯಗತ್ಯ. ಪರಿಸರದಲ್ಲಿ ಸಹಜವಾಗಿ ನೆಡೆಯುವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಈ ಸಾವಯವ ಇಂಗಾಲ ಉತ್ಪಾದನೆಯೂ ಒಂದು. ಮಣ್ಣಿನಲ್ಲಿ ತನ್ನಿಂದ ತಾನೆ ಉತ್ಪತ್ತಿಯಾಗುವ ಅನೇಕ ಜೀವಾಣುಗಳಿಗೆ ಆಹಾರವೂ ಈ ಸಾವಯವ ಇಂಗಾಲ. ಸಾವಯವ ಇಂಗಾಲಯುಕ್ತ ಮಣ್ಣು ಎಲ್ಲ ಸೂಕ್ಷ್ಮ ಜೀವಿಗಳಿಗೂ, ಎರೆಹುಳು, ಏಡಿಯಂತಹ ಜೀವಿಗಳಿಗೂ ಆಧಾರ. ಸಾವಯವ ಇಂಗಾಲದಿಂದ ಮಣ್ಣಿನಲ್ಲಿ ಸದಾ ತೇವದಿಂದ ಕೂಡಿದ ತಂಪಾದ ನೆಲೆ ಉಂಟಾಗುತ್ತದೆ. ಇದು ಅಗತ್ಯವಿರುವ ಎಲ್ಲ ಸೂಕ್ಷ್ಮ ಜೀವಿಗಳಿಗೆ ನೆಲೆ ಕೂಡ.

ಜೀವಾಣುಗಳಿಗೆ ದಾಹ

ನಮ್ಮ ಮಣ್ಣಿನಲ್ಲಿ ಕೋಟ್ಯಂತರ ಜೀವಾಣುಗಳಿವೆ. ಆದರೆ, ಸಾವಯವ ಪದ್ಧತಿ ಬಿಟ್ಟು ರಾಸಾಯನಿಕ ಬಳಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಈ ಜೀವಾಣುಗಳು ಹಸಿವು, ದಾಹದಿಂದ ಬಳಲುತ್ತಿವೆ. ಆಹಾರ, ನೀರು ಮತ್ತು ನೆರಳಿಲ್ಲದೆ ಒಣಗುತ್ತಿವೆ, ನಾಶವಾಗುತ್ತಿವೆ. ಮಣ್ಣಿನ ಇಂಗಾಲದ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿವೆ.
ಮಣ್ಣು ಜೀವಿಗಳಿಗೆ ಸೂಕ್ತ ಆಹಾರ, ನೀರು ನೀಡಿ ಜೀವಿಗಳು ನೆಮ್ಮದಿಯಿಂದ ಬದುಕಿ, ಬೆಳೆಯಲು ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ, ಅದರಲ್ಲೂ ಮುಖ್ಯವಾಗಿ ಕೃಷಿಕರ ಮೂಲ ಗುರಿಯಾಗಬೇಕು. ನೆಲದ ಮೇಲಿರುವ ನಮಗೆಲ್ಲರಿಗೂ ನೆಲದೊಳಗಿನ ಈ ಜೀವಿಗಳೇ ಆಧಾರ. ಇವಿಲ್ಲದೆ ನಾವಿಲ್ಲ. ಪೌಶ್ಟಿಕ ಆಹಾರ ಮತ್ತು ತಂಪಾದ ನೆಲೆಯನ್ನಷ್ಟೇ ಮಣ್ಣಿನ ಜೀವಾಣುಗಳು ನಮ್ಮಿಂದ ನಿರೀಕ್ಷಿಸುವುದು. ಈ ಮಣ್ಣುಜೀವಿಗಳು ಬದುಕುಳಿಯಲು ಸಮೃದ್ಧ ಆಹಾರ ಕೊಡಬೇಕು. ಎರೆಹುಳು ಮತ್ತಿತರ ಮಣ್ಣು ಜೀವಿಗಳಿಗೆ ಸಾವಯವ ಗೊಬ್ಬರವೇ ಉತ್ತಮ ಆಹಾರ. ಮಣ್ಣಲ್ಲಿ ಕೊಳೆತು ಕಳಿಯುವ ಈ ಗೊಬ್ಬರ ಮಣ್ಣುಜೀವಿಗಳಿಗೆ ಮೃಷ್ಟಾನ್ನದಂತೆ. ಬಳಿಕ ಇದುವೇ ನಮ್ಮ ನಿಮ್ಮೆಲ್ಲರ ಬೆಳೆಗಳನ್ನು ಕಾಯುವ, ಕಾಪಾಡುವ ಸಮೃದ್ಧ ಇಂಗಾಲವಾಗಿ ಮಾರ್ಪಡುತ್ತದೆ. ಈ ಇಂಗಾಲದಿಂದ ಮಣ್ಣು ಜೀವಿಗಳು ಬದುಕುಳಿಯಲು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. 
ಸಾವಯವ ಗೊಬ್ಬರವನ್ನು ತಿಂದು ಬದುಕುವ ಜೀವಿಗಳು ಕ್ರಮೇಣ ಗೊಬ್ಬರವನ್ನು ಗಿಡದ ಬೆಳವಣಿಗೆಗೆ ಅತ್ಯಗತ್ಯವಾದ ಪೋಷಕಾಂಶಗಳಾಗಿ ಪರಿವರ್ತಿಸುತ್ತವೆ. ಈ ವೇಳೆ ಮಣ್ಣಿನ ಮೇಲ್ಪದರದಲ್ಲಿ ಹ್ಯೂಮಸ್ ರೂಪುಗೊಳ್ಳುತ್ತದೆ. ಈ ಹ್ಯೂಮಸ್ ಮಣ್ಣಿನಲ್ಲಿ ಇಂಗಾಲದ ಅಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಮ್ಮ ಮಣ್ಣುಗಳಲ್ಲಿ ಇಂಗಾಲಾಂಶ ಹೆಚ್ಚಾದಾಗ, ನಮ್ಮ ಹೊಲ ತೋಟಗಳು ಸಕಲ ಪೋಷಕಾಂಶಗಳನ್ನೂ ಒಳಗೊಂಡ ಶಕ್ತಿಕೇಂದ್ರಗಳಾಗುತ್ತವೆ.
ದರಗು, ಸೊಪ್ಪು, ಕತ್ತರಿಸಿ ಅಲ್ಲೇ ಬಿಟ್ಟ ಕಳೆ, ಹಳೇ ಅಡಿಕೆ ಮರ, ಕಸಿ ಮಾಡಿದ ಇತರೆ ಮರ-ರೆಂಬೆ-ಕೊಂಬೆಗಳು ಮಣ್ಣಿನಲ್ಲಿ ಕೊಳೆತು, ಮಣ್ಣುಸ್ನೇಹಿ ಜೀವಾಣುಗಳು ಅದನ್ನು ಸೇವಿಸಿ, ಜೀರ್ಣಿಸಿಕೊಂಡು ವಿಸರ್ಜಿಸಿದಾಗ ಮಣ್ಣಿನಲ್ಲಿ ಇಂಗಾಲ ಸೇರಿಸಿಕೊಳ್ಳುತ್ತದೆ.

Soil carbon

ಮಣ್ಣಿನ ಇಂಗಾಲದ ಪ್ರಯೋಜನಗಳೇನು?

ಮುಖ್ಯವಾಗಿ ಇಂಗಾಲದ ಅಂಶ ಹೆಚ್ಚಾಗಿರುವ ಮಣ್ಣುಗಳಲ್ಲಿ ಇಳುವರಿಯಲ್ಲಿ ಸುಧಾರಣೆ ಕಾಣಬಹುದು. ಇಂಗಾಲ ಹೆಚ್ಚಾದರೆ, ಹೆಚ್ಚು ಪ್ರಮಾಣದಲ್ಲಿ ನೀರನ್ನು, ಪೋಷಕಾಂಶಗಳನ್ನು ಹಿಡಿದಿಡುವ ಸಾಮರ್ಥ್ಯ ಮಣ್ಣಿಗೆ ಬರುತ್ತದೆ. ಜೊತೆಗೆ ಗಿಡಗಳಿಗೆ ಅಗತ್ಯವಿದ್ದಾಗ ಮಾತ್ರ ಅವು ಬಳಕೆಯಾಗುತ್ತದೆ. ಈ ಮೂಲಕ ಬಿಸಿಲು ಹೆಚ್ಚಿದ್ದಾಗಲೂ ಸಹ ಗಿಡಗಳಿಗೆ ಅಗತ್ಯ ತೇವಾಂಶ ಮತ್ತು ಪೋಷಕಾಂಶಗಳು ಸಿಗುತ್ತವೆ. ಮಣ್ಣಲ್ಲಿನ ಸಾವಯವ ಇಂಗಾಲದ ಅಂಶ ಮಣ್ಣಿನ ರಸಸಾರವನ್ನು ಸಮತೋಲನದಲ್ಲಿ ಇರಿಸುತ್ತದೆ. ಮಣ್ಣಿನ pH ಸಮತೋಲನ ಅಡಿಕೆ, ತೆಂಗು ಮತ್ತು ಎಲ್ಲ ರೀತಿಯ ಸಸ್ಯ, ಮರಗಳ ಸರ್ವತೋಮುಖ ಬೆಳವಣಿಗೆಗೆ, ಅಧಿಕ ಇಳುವರಿಗೆ ಪ್ರಮುಖ ಅಂಶವಾಗುತ್ತದೆ. ಇಂಗಾಲದ ಅಂಶವಿರುವ ಮಣ್ಣು ಇತರೆ ಮಣ್ಣುಗಳಿಗಿಂತ ಫಲವತ್ತಾಗಿರುತ್ತದೆ. ಸಾವಯವ ಇಂಗಾಲದ ಅಂಶ ಇರುವ ಮಣ್ಣಿನಲ್ಲಿ ಅತಿ ಮಳೆ ಆದಾಗ ಉಂಟಾಗಬಹುದಾದ ಮಣ್ಣು ಸವಕಳಿಯನ್ನು ತಪ್ಪಿಸುತ್ತದೆ. ಮಣ್ಣಲ್ಲಿನ ಸಾವಯವ ವಸ್ತುವೇ ಪ್ರಧಾನ ಅಂಶವಾಗಿದ್ದು, ಇದರಿಂದ ಮಣ್ಣಲ್ಲಿ ಹೆಚ್ಚಾಗುವ ಮಣ್ಣು ಜೀವಿಗಳು ಮಾಲಿನ್ಯಕಾರಕ ವಸ್ತುಗಳನ್ನು ಹೀರಿ ಮಣ್ಣಿನ ವಾತಾವರಣವನ್ನು ಶುದ್ಧಗೊಳಿಸುತ್ತವೆ.

(ಕೆಲವು ಹಿರಿಯ ಅಡಿಕೆ ಬೆಳೆಗಾರರ ಅಭಿಪ್ರಾಯ, ಅಂತರ್ಜಾಲದಲ್ಲಿ ಸಿಕ್ಕಿದ ವಿವಿಧ ಮಾಹಿತಿಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ಲೇಖಕ ಮಾಡುತ್ತಿರುವ ಸಣ್ಣ ಮಟ್ಟದ ಪ್ರಾಯೋಗಿಕ ಅನುಭವಗಳ ಪಲಿತಾಂಶಗಳನ್ನು ಆಧರಿಸಿ ಸಂಕ್ಷೇಪಿಸಿ ಈ ಮಾಹಿತಿ ಬರಹ ಸಿದ್ಧಪಡಿಸಲಾಗಿದೆ. ಸಣ್ಣ ಮಟ್ಟದ ಪ್ರಾಯೋಗಿಕ ಅನುಭವ ಎಂದರೆ, ಕಳೆದ ಆರೇಳು ವರ್ಷಗಳಿಂದ ದರಗು, ಹಳು ಸೌರಿದ ತ್ಯಾಜ್ಯ, ಕೊನಮಟ್ಟೆ, ಒಣಗಿದ ಅಡಿಕೆ ಸಿಪ್ಪೆ, ಬಿದ್ದು ಹೋದ ಅಡಿಕೆ ಮರಗಳು, ಕಡಿದ ಕಾಫಿ-ಬಾಳೆ ಗಿಡಗಳ ತ್ಯಾಜ್ಯ, ಬೇಲಿ ಸೌರಿದ ತ್ಯಾಜ್ಯ, ಅಡಿಕೆ ಒಲೆ ಬೂದಿ, ಅಡಿಗೆ ಮನೆಯಲ್ಲಿ ಸೃಷ್ಟಿಗೊಂಡ ಹಸಿರು ತ್ಯಾಜ್ಯ, ಮೆಣಸಿನ ಕಾಳು ಬಿಡಿಸಿದ ಕರೆ….ಎಲ್ಲವನ್ನೂ ಅಡಿಕೆ ತೋಟಕ್ಕೆ ವಾಪಾಸ್ ಬಡಿಸಲಾಗುತ್ತಿದೆ! ಇದುವರೆಗೆ ಕಳೆ ನಾಶಕ ಬಳಸಿಲ್ಲ. ತೋಟಕ್ಕೆ ಬರುವವರು ಖಾಲಿ ಗುಟ್ಕಾ ಪ್ಲಾಸ್ಟಿಕ್ ಪೌಚ್‌ನ್ನೂ ಹಾಕದಂತೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ಬಂಧಗೊಳಿಸಲಾಗಿದೆ.)

Areca nuts image

ಕಾಫಿ ಸಿಪ್ಪೆ ಬಳಕೆ

ಇತ್ತೀಚೆಗೆ ಕೊಪ್ಪದ ಜೋಗಿಸರ ಸೂರ್ಯನಾರಾಯಣರವರು ಕಾಫಿ ಸಿಪ್ಪೆಯನ್ನೂ ಸಾವಯವ ಕಾರ್ಬನ್ ಹೆಚ್ಚಿಸಲು ಬಳಸಬಹುದು ಅಂತ ಪ್ರಾಯೋಗಿಕ ಅಧ್ಯಯನ ಮಾಡಿ ಸಲಹೆ ಕೊಟ್ಟಿದ್ದಾರೆ. ಅಡಿಕೆ ತ್ಯಾಜ್ಯ ವಸ್ತುಗಳ ಮರು ಬಳಕೆಯಿಂದ 30% ನಷ್ಟು NPK, ಇತರೆ ಪೋಷಕಾಂಶಗಳನ್ನು ಮತ್ತು ಹೆಚ್ಚಿನ ಇಂಗಾಲವನ್ನು ಉಚಿತವಾಗಿ ಪಡೆಯಬಹುದು ಎಂದು ಕೃಷಿ ವಿಜ್ಞಾನಿಗಳು ನಿರೂಪಿಸಿದ್ದಾರೆ. ಉಳಿದಂತೆ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸಲು ಅನೇಕ ಕ್ರಮಗಳಿವೆ. ಸಾಂಪ್ರದಾಯಿಕ ಕೊಟ್ಟಿಗೆ ಗೊಬ್ಬರ, ಕಬ್ಬಿನ ಸಿಪ್ಪೆ, ತೆಂಗಿನ ನಾರುಗಳಿಂದ ತಯಾರಿಸುತ್ತಿರುವ ಪ್ರೆಸ್ ಮಡ್ ಗೊಬ್ಬರಗಳ ಬಳಕೆಯಿಂದಲೂ ಮಣ್ಣಿನ ಇಂಗಾಲದ ಅಂಶವನ್ನು ಹೆಚ್ಚಿಸಬಹುದು. (ಈಗ ಮಾರ್ಕೇಟ್‌ನಲ್ಲಿ ಮಸಾಲೆ ದೋಸೆಯಂತೆ ಅತಿ ಬೇಡಿಕೆ ಮತ್ತು ಪೂರೈಕೆಯಾಗುತ್ತಿರುವ , ಪ್ರೆಸ್ ಮಡ್ ಗೊಬ್ಬರಗಳನ್ನು ಹೆಚ್ಚಾಗಿ ಅವೈಜ್ಞಾನಿಕವಾಗಿ ತಯಾರಾಗುತ್ತಿದೆ!! ಬಳಸುವಾಗ ಇಲ್ಲೊಂದು ಜಾಗ್ರತೆ ಬೇಕು. ಇದರ ಬಗ್ಗೆ ಮುಂದಿನ ಸಂಚಿಕೆಯೊಂದರಲ್ಲಿ ನೋಡೋಣ)
ಅಂದ ಹಾಗೆ, ಅಡಿಕೆ ತೋಟದಲ್ಲಿ ಸಾವಯವ ಇಂಗಾಲದ ಪ್ರಮಾಣ 0.75% ಗಿಂತ ಹೆಚ್ಚಿರಬೇಕು. ಇಂಗಾಲದ ಪ್ರಮಾಣ 1% – 2% ಇದ್ದರೆ ಅಡಿಕೆ ಇಳುವರಿಗೆ ಮತ್ತು ರೋಗಗಳ ನಿಂತ್ರಣಕ್ಕೆ ಹೆಚ್ಚು ಸಹಕಾರಿ. ಕನಿಷ್ಟಪಕ್ಷ ಮೂರು ವರ್ಷಗಳಿಗೆ ಒಮ್ಮೆಯಾದರೂ ಮಣ್ಣು ಪರೀಕ್ಷೆ ಮಾಡಿ, ನಮ್ಮ ತೋಟದ ಇಂಗಾಲದ ಪ್ರಮಾಣವನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಅಂಕಿ ಅಂಶಗಳ ಮಾಹಿತಿ ಪ್ರಕಾರ ಕರ್ನಾಟಕದ ಮಣ್ಣಿನ ಸರಾಸರಿ ಸಾವಯವ ಇಂಗಾಲದ ಪ್ರಮಾಣ 0.25% to 0.50% ಇದೆ. ಇರಬೇಕಾಗಿದ್ದು ಕನಿಷ್ಠ 0.75%!!!.

ಇದನ್ನೂ ಓದಿ | Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಹಾಗಾದರೆ, ಮಣ್ಣಿನಲ್ಲಿ ಸಾವಯವ ಇಂಗಾಲ ಕಡಿಮೆ ಆಗುವುದು ಹೇಗೆ?

ಮುಖ್ಯವಾಗಿ, ತೋಟ-ಗದ್ದೆಗಳಲ್ಲಿ ಬೆಳೆದು ಹೊರಗೆ ತರುವ ಉತ್ಪನ್ನಗಳಿಂದಲೇ ಬಹುತೇಕ ಸಾವಯವ ಇಂಗಾಲ ನಮ್ಮ ಜಮೀನಿನಿಂದ ಹೊರ ಹೋಗುತ್ತವೆ. ಕೃಷಿ ಭೂಮಿಯಲ್ಲಿ ಸೃಷ್ಟಿಯಾಗುವ ವೇಸ್ಟ್‌ನ್ನು (ಕಬ್ಬಿನ ಜಲ್ಲೆ, ಕಳೆ, ಉತ್ಪನ್ನಗಳ ಸಿಪ್ಪೆ) ಕೃಷಿ ಭೂಮಿಯಿಂದ ಹೊರ ಸಾಗಿಸುವಿದರಿಂದ ಮಣ್ಣಿನ ಇಂಗಾಲ ಕಡಿಮೆಯಾಗುತ್ತದೆ. ಇನ್ನುಳಿದಂತೆ, ಉಷ್ಣತೆ ಏರಿಕೆಯಿಂದಲೂ ಮಣ್ಣಿನ ಕಾರ್ಬನ್ ಕಡಿಮೆ ಆಗುತ್ತದೆ. ಅತಿಯಾದ ಕೆಮಿಕಲ್ ಬಳಸುವಿಕೆಯಿಂದಲೂ ಇಂಗಾಲ ಕಡಿಮೆಯಾಗುತ್ತಿದೆ.
ನಗರ ಪ್ರದೇಶದ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗುತ್ತಿರುವುದು ಸಮಸ್ಯೆಯಾದರೆ, ಗ್ರಾಮೀಣ ಕೃಷಿ ಭೂಮಿಯಲ್ಲಿ ಇಂಗಾಲದ ಪ್ರಮಾಣ ಕಡಿಮೆ ಆಗುತ್ತಿರುವುದು ಸಮಸ್ಯೆ! ಎರಡೂ ಮನುಷ್ಯನ ಬದುಕಿಗೆ ಮಾರಕ. ಆದರೆ, ಅದೇ ಆಗ್ತಾ ಇದೆ!
ಕೃಷಿ ಭೂಮಿಯಲ್ಲಿ ಇಂಗಾಲದ ಪ್ರಮಾಣ ಹೆಚ್ಚಿಸಲು ಗಂಭೀರ ಚಿಂತನೆ ಮತ್ತು ಅನುಷ್ಠಾನಕ್ಕೆ ರೈತರು ಮುಂದಾಗಬೇಕು.
ಪ್ರಯತ್ನ ಮಾಡೋಣ….

Continue Reading

ಕೃಷಿ

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

ಅಡಿಕೆ ಬೆಳೆ ಹಲವು ರೋಗಗಳಿಗೆ ತುತ್ತಾಗುತ್ತಿದೆ. ಒಂದೇ ದಾರಿ ಅಂದರೆ ಕ್ಯಾಲ್ಸಿಯಂ ಕೃಷಿ ಸುಣ್ಣವನ್ನು pH ಮಟ್ಟಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಬಳಸುವುದು. ಇದಿಷ್ಟು ಅನೇಕ ನುರಿತ ಪ್ರಗತಿಪರ ಕೃಷಿಕರ ಅನುಭವದಿಂದ, ಒಂದಿಷ್ಟು ಜನ ವಿಜ್ಞಾನಿಗಳಿಂದ ಮತ್ತು ಅಂತರ್ಜಾಲದಲ್ಲಿ ದೊರೆತ ಮಾಹಿತಿಗಳ ಸಾರ. ಅಡಿಕೆ ಬೆಳೆಗಾರರಿಗೆ ಉಪಯುಕ್ತವಾಗುವ ಮಾಹಿತಿ ಇಲ್ಲಿದೆ.

VISTARANEWS.COM


on

soil
Koo

| ಅರವಿಂದ ಸಿಗದಾಳ್, ಮೇಲುಕೊಪ್ಪ
ಬಿಸಿಲಿನ ಕಾವಿಗೆ ಲಿಂಬೆ ರಸ, ಬೆಲ್ಲ ಬೆರೆಸಿದ ಪಾನಕ ಕುಡಿದರೆ ಕುಡಿಯುತ್ತಾ ಇರೋಣ ಅನಿಸುತ್ತೆ. ಲಿಂಬೆ-ಬೆಲ್ಲದ ಪಾನಕವನ್ನು ಎಷ್ಟು ಕುಡಿದರೂ ಏನೂ ಆಗುವುದಿಲ್ಲ. ಮತ್ತೆರಡು ಬಾರಿ ನೇಚರ್ ಕಾಲ್‌ಗೆ ಹೋಗಬೇಕಾಗಬಹುದು ಅಷ್ಟೆ! ಅಷ್ಟು ಪಾನಕ ಕುಡಿದರೂ ಏನೂ ಆಗದೇ ಇರುವುದಕ್ಕೆ ಒಂದು ಮುಖ್ಯ ಕಾರಣ ಪಾನಕದಲ್ಲಿ ಬಳಸಿದ ಬೆಲ್ಲದಲ್ಲಿರುವ ಸುಣ್ಣದ ಅಂಶ! ಯಾವಾಗಲೂ ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ರೆ, ಜೆಲುಸಿಲ್ MPS ಅನ್ನುವ (ಅಥವಾ ಅದೇ ತರಹದ ಡೈಜಿನ್ ಮಾತ್ರೆ) ಒಂದು ಲೈಟ್ ಪಿಂಕ್ ಬಣ್ಣದ, ದಪ್ಪ ಸಿರಪ್ ಕೊಡ್ತಾ ಇದ್ರು. ಶುಂಠಿ ಪೆಪ್ಪರ್‌ಮೆಂಟಿನ ಪರಿಮಳದ ಅದರಲ್ಲಿ ಅಲ್ಯುಮಿನಿಯಂ ಹೈಡ್ರಾಕ್ಸೈಡ್ ಮತ್ತು ಮೆಗ್ನೀಶಿಯಂ ಹೈಡ್ರಾಕ್ಸೈಡ್ ಮೆಯಿನ್ ಇಂಗ್ರೀಡಿಯಂಟ್ಸ್. ಈ ಅಲ್ಯುಮಿನಿಯಂ ಮತ್ತು ಮೆಗ್ನೀಶಿಯಂ ಹೈಡ್ರಾಕ್ಸೈಡ್‌ಗಳು ಹೊಟ್ಟೆಯ ಮತ್ತು ದೇಹದ ಆ್ಯಸಿಡಿಟಿ pH ಮಟ್ಟವನ್ನು ಅಗತ್ಯದ 7.35ಗೆ ಬರುವಂತೆ ಮಾಡುತ್ತದೆ.

ಗ್ಯಾಸ್ಟಿಕ್ ಸಮಸ್ಯೆ ನಿಧಾನವಾಗಿ ನಾರ್ಮಲ್‌ಗೆ ಬರುತ್ತದೆ. (ಈಗ ಹೆಚ್ಚಾಗಿ ಈ ಸಿರಪ್ ಕೊಡುವುದು ಕಡಿಮೆ, ಪೆಂಟಾಪ್ರಸೋಲ್, ರ‌ನ್ಯಾನಿಟಡಿನ್ ಮಾತ್ರೆಗಳನ್ನು ಕೊಡುತ್ತಾರೆ. ಹೋಟೆಲ್ ಅಥವಾ ಊಟದ ಮನೆಗೆ ಹೋಗುವವರೂ ATM ಸ್ಮಾರ್ಟ್ ಕಾರ್ಡ್ ಜತೆ ಪಾಕೇಟ್‌ನಲ್ಲಿ ಒಂದು ಪೆಂಟಾಪ್ರೆಸೋಲ್ ಮಾತ್ರೆ ಇಟ್ಕೊಂಡು ಹೋಗುವವರೂ ಇದ್ದಾರೆ!

ಮನುಷ್ಯನ ರಕ್ತದಲ್ಲಿ pH ಮಟ್ಟ 7.35 to 7.45 ಇರಬೇಕು. 7.35ಗಿಂತ ಕಡಿಮೆ ಇದ್ದರೆ ಅದು ಅಸಿಡಿಕ್. ಅಸಿಡಿಕ್‌ಗೆ ಕಾರಣ ಹೆಚ್ಚಾಗಿ ಸೇವಿಸುವ ಕಾಫಿ, ಸ್ವೀಟು, ಕೆಲವು ಜ್ಯೂಸ್‌ಗಳು, ಕರಿದ ತಿಂಡಿಗಳು, ಕೆಮಿಕಲ್ ಮಿಶ್ರಿತ ಆಹಾರ, ಸೋಡಾ ಬೆರೆಸಿದ ವಡೆ/ಮೆಣಸಿನ ಕಾಯಿ ಬಜ್ಜಿ, ಜೆಂಕ್ ಫುಡ್‌ಗಳು, ಪ್ರಿಸರ್ವೆಟಿವ್, ಟೇಸ್ಟಿಂಗ್, ಪೌಡರ್, ವಿನೇಗರ್, ಕಲ್ಮಶ ವಾತಾವರಣ, ಹೈಪರ್‌ಟೆನ್ಷನ್ ಇತ್ಯಾದಿ. ಇದೆಲ್ಲದರ ಪರಿಣಾಮ ಗ್ಯಾಸ್ಟ್ರಿಕ್ ಎಂಬ ರೋಗವಲ್ಲದ ರೋಗದ ನಿತ್ಯ ಬಾಧೆ! ಗ್ಯಾಸ್ಟ್ರಿಕ್ ಅಂದ್ರೆ ವ್ಯತ್ಯಾಸ ಆದ pH ಮಟ್ಟ. ಗ್ಯಾಸ್ಟ್ರಿಕ್ ಆದಾಗ ದೇಹದ ಚಟುವಟಿಕೆ ಕ್ಷೀಣಿಸುತ್ತದೆ. ಬೇರೆ ಕಾಯಿಲೆಗಳಿಗೆ ಆಹ್ವಾನ ಆಗುತ್ತದೆ.

ಮನುಷ್ಯರಂತೆ ಮಣ್ಣು, ನೀರು, ವಾತಾವರಣ ಮತ್ತು ಸಸ್ಯಗಳ pH ವ್ಯತ್ಯಾಸ ಆದಾಗ ಅವುಗಳೂ ಅನಾರೋಗ್ಯದಿಂದ ಬಳಲುತ್ತವೆ. ಪ್ರಕೃತಿಯಲ್ಲಿ ಚೇತನ-ಚಟುವಟಿಕೆಗಳು ಕಮ್ಮಿಯಾಗುತ್ತವೆ. ಅನೇಕ ಗಿಡ ಮರಗಳ ಬೆಳವಣಿಗೆ ಕುಂಠಿತವಾಗುತ್ತವೆ.

ಮಣ್ಣಿನ pH ತುಂಬಾ ಕಮ್ಮಿಯಾದರೆ ಏನಾಗುತ್ತದೆ?

ಯಾವಾಗ ಮಣ್ಣಿನ pH ತುಂಬ ಕಮ್ಮಿಯಾಗುತ್ತದೆ (ಅಂದರೆ ಆ್ಯಸಿಡಿಕ್ ಆಗುತ್ತದೆ) ಆಗ ಗಿಡ ಮರಗಳು ತಮ್ಮ ಬೇರುಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಕಷ್ಟವಾಗುತ್ತದೆ. ಯಾವಾಗ ಗಿಡ ಮರಗಳಿಗೆ ಪೋಷಕಾಂಶಗಳು ಕಡಿಮೆಯಾಗುತ್ತವೆ ಪರಿಣಾಮ ಗಿಡ ಮರಗಳ ಬೆಳವಣಿಗೆ ಕಮ್ಮಿಯಾಗುತ್ತವೆ, ಸೊರಗುತ್ತವೆ ಮತ್ತು ರೋಗ ಬರುವ ಪರಿಸ್ಥಿತಿ ನಿರ್ಮಾಣವಾಗಬಹುದು. ಅದರ ಪರಿಣಾಮ ಹೂ ಬಿಡುವುವುದು ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ಮೇಲ್ಮೈ ಮಣ್ಣು ಹೆಚ್ಚು ಅ್ಯಸಿಡಿಕ್ ಆಗುವುದರಿಂದ ಗಿಡಗಳು ಹೂ ಬಿಡುವುದು ಕಡಿಮೆ. (‘ಮಳೆ ಜಾಸ್ತಿಯಾಗಿ ಮಳೆಗಾಲದಲ್ಲಿ ದೇವರಿಗೂ ಹೂವಿಲ್ಲ’ ಅನ್ನುವ ಮಾತು ನೆನಪಿಸಿಕೊಳ್ಳಿ). pH ಮಟ್ಟ ಕಡಿಮೆಯಾದಾಗ (ಅ್ಯಸಿಡಿಕ್ ಆದಾಗ) ಫಲ ಬಿಡುವ, ಬಿಟ್ಟ ಫಲ ಪಕ್ವವಾಗುವ (ಬೆಳೆಯುವ) ಗತಿಯೂ ನಿಧಾನವಾಗುತ್ತದೆ. ಮಣ್ಣಿನ pH ಮಟ್ಟ ಕಡಿಮೆಯಾದ ಕಾರಣ ಹಿಂಬೆಳಸು ಅಥವಾ ಅಡಿಕೆ ಕೊನೆ ತೆಗೆಯುವ ದಿನಗಳು ಮುಂದಕ್ಕೆ ಹೋಗುತ್ತವೆ. ಗಮನಿಸಿ ನವರಾತ್ರಿಗೆ ಅಡಿಕೆ ಕೊನೆ ತೆಗೆಯುತ್ತಿದ್ದವರು ದೀಪಾವಳಿ ಮುಗಿದು ಪಕ್ಷ ಕಳೆದರೂ ‘ಕೊನೆ ಬಂದಿಲ್ಲ ಅಂತಿರುತ್ತಾರೆ. ಇದಕ್ಕೆ ಬೇರೆ ಕಾರಣಗಳೂ (ಉಷ್ಣತೆ, ಚಳಿ, ಹ್ಯುಮಿಡಿಟಿ ಇತ್ಯಾದಿ) ಇರಬಹುದು. ಅದರ ಜತೆಗೆ ಮಣ್ಣಿನ pH ಕಡಿಮೆಯಾದ ಕಾರಣವೂ ಇರಬಹುದು ಎನ್ನುವ ಅಭಿಪ್ರಾಯ ಇದೆ.

ಎಲೆ ಚುಕ್ಕಿ ರೋಗ

ನಿರಂತರ ಸರಿ ಸುಮಾರು ಏಳು ತಿಂಗಳಿಗೂ ಹೆಚ್ಚು ಸುರಿದ ಮಳೆ ನೀರಿನಿಂದ ಮಣ್ಣಿನ pH ಮಟ್ಟ ತೀವ್ರವಾಗಿ ಕಡಿಮೆಯಾಗಿ ಅಡಿಕೆ ಮರಗಳು ಶಕ್ತಿಗುಂದಿ ಎಲೆ ಚುಕ್ಕಿ ರೋಗ, ಅಡಿಕೆ ಅಂಡೊಡಕು, ಅಡಿಕೆ ಬೆಳವಣಿಗೆ ಕಮ್ಮಿಯಾಗಿರುವುದು, ಅಡಿಕೆ ಹಡ್ಳು ಹಳದಿಯಾಗುವುದು, ಎಳೆ ಅಡಿಕೆಗಳು ಉದುರುವುದು, ಉದುರುವಾಗಲೂ ಚಿಗುರು ಅಡಿಕೆ ಹಳದಿ ಬಣ್ಣಕ್ಕೆ ತಿರುಗಿ ಉದುರುವುದು, ಕೊಳೆ ರೋಗ ಎಲ್ಲ ಕಾಣಿಸಬಹುದು.

ಸರ್ವೇಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಕ್ಯಾಲ್ಸಿಯಂ ಸುಣ್ಣ, ಡೋಲೋಮೇಟ್ ಸುಣ್ಣ ಬಳಕೆಗೆ ವಿಜ್ಞಾನಿಗಳು ಶಿಫಾರಸು ಮಾಡುತ್ತಾರೆ. (ಮನುಷ್ಯರ ದೇಹದ pH ವ್ಯತ್ಯಾಸದ ಗ್ಯಾಸ್ಟ್ರಿಕ್‌ ಸರಿಪಡಿಸಲು ಕೊಡುವ ಔಷಧಿಯಂತೆ)
ಅನೇಕರು ಏಪ್ರಿಲ್-ಮೇ ತಿಂಗಳಲ್ಲಿ ತೋಟಕ್ಕೆ ಸುಣ್ಣ ಕೊಟ್ಟಿದ್ದರೂ, ಮಳೆಯ ತೀವ್ರತೆ ಮತ್ತು ಮಳೆ ದೀರ್ಘಕಾಲ ಬಿದ್ದ ಪರಿಣಾಮವಾಗಿ ಮಣ್ಣಿನ pH ಕಮ್ಮಿಯಾಗಿರಬಹುದು.

ಸಾಂಪ್ರದಾಯಿಕ ಬೇಸಾಯ ಪದ್ಧತಿ ಮಾಯ

ಸಾಂಪ್ರದಾಯಿಕ ಬೇಸಾಯ ಪದ್ಧತಿ ಕಡಿಮೆ ಮಾಡಿ, ರಾಸಾಯನಿಕ ಗೊಬ್ಬರ ಬಳಸುವಿಕೆಯಿಂದಲೂ ಮಣ್ಣಿನ pH ಕಡಿಮೆಯಾಗಿರಬಹುದು. (ನಮಗೂ ಯಾವುದೇ ಔಷಧಿ ಕೊಟ್ಟರೂ ಅವುಗಳ ಜೊತೆ ದಿನಕ್ಕೆ ಒಂದರಂತಾದರೂ ಗ್ಯಾಸ್ಟ್ರಿಕ್‌ ಅಥವಾ ಆ್ಯಸಿಡಿಕ್ ಆಗದಂತೆ ಮಾತ್ರೆ ಕೊಡುವುದು ಸರ್ವೇಸಾಮಾನ್ಯ). ಅದೇ ರೀತಿ ಮೇಲೆ NPK ಕೆಮಿಕಲ್ ರಸಗೊಬ್ಬರಗಳೂ ಮಣ್ಣಿನ pH ಮಟ್ಟ ಇಳಿಸಿ, ಅಸಿಡಿಕ್ ಮಾಡುತ್ತವೆ ಎಂದಾಯ್ತು.

ಅಂತರ್ಜಾಲದಲ್ಲಿ ಏನಿದೆ ಉತ್ತರ?

ಅಂತರ್ಜಾಲದಲ್ಲಿ ಮಣ್ಣಿನ pH ಸಮಸ್ಯೆಗಳನ್ನು ಕೇಳಿದರೆ ಅದು ಕೊಡುವ ಉತ್ತರ: “Early identification of soil pH problems is important as it can be both costly and difficult to correct long-term nutrient deficiencies” ಎಂದು.

ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ, ಮಣ್ಣಿನ ನಿರಂತರ pH ಸಮತೋಲನ(6 ರಿಂದ 7.5) ವನ್ನು ಕಾಪಾಡಿಕೊಳ್ಳುವಲ್ಲಿ ನಾವು ಹೆಚ್ಚಿನ ಶ್ರಮ ವಹಿಸುವುದು ಈಗ ಇನ್ನೂ ಹೆಚ್ಚು ಅಗತ್ಯ ಅನಿಸುತ್ತದೆ. ಮೊದಲೇ ಹೇಳಿದಂತೆ, ಆರೊಗ್ಯವಂತ ಮನುಷ್ಯರಿಗೆ ರಕ್ತದ pH 7.35 to 7.45 ಇರಬೇಕು. 7.35 ಗಿಂತ ಕಡಿಮೆ ಇದ್ದರೆ ಅದು ಅ್ಯಸಿಡಿಕ್. ಅದೇ ರೀತಿ ಮಣ್ಣಿನ pH ಸಮತೋಲನ 6 ರಿಂದ 7.5 ಕಾಪಾಡಿಕೊಳ್ಳುವುದು, ಆ ಮೂಲಕ ಮಣ್ಣು ಅ್ಯಸಿಡಿಕ್ ಆಗದಂತೆ ನೋಡಿಕೊಳ್ಳುವುದು ಅನಿವಾರ್ಯ.

ಮಣ್ಣಿನ pH ಸಮತೋಲನ (6 ರಿಂದ 7.5) ಮಾಡುವುದು ಹೇಗೆ?

ಇದಕ್ಕಿರುವುದು ಒಂದೇ ದಾರಿ ಅಂದರೆ ಕ್ಯಾಲ್ಸಿಯಂ ಕೃಷಿ ಸುಣ್ಣವನ್ನು pH ಮಟ್ಟಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಬಳಸುವುದು. ಇದಿಷ್ಟು ಅನೇಕ ನುರಿತ ಪ್ರಗತಿಪರ ಕೃಷಿಕರ ಅನುಭವದಿಂದ, ಒಂದಿಷ್ಟು ಜನ ವಿಜ್ಞಾನಿಗಳಿಂದ ಮತ್ತು ಅಂತರ್ಜಾಲದಲ್ಲಿ ದೊರೆತ ಮಾಹಿತಿಗಳ ಸಂಕ್ಷಿಪ್ತ ರೂಪ.

ಅತಿಯಾದ ಮಳೆಯಿಂದ, ತೇವಾಂಶದ ಆರ್ದ್ರತೆಯಿಂದ ಮಣ್ಣು ಮಾತ್ರ ಅಲ್ಲ, ತೋಟದ ವಾತಾವರಣ, ಗಿಡ ಮರಗಳ ಒಳ ಭಾಗದ pH ಮಟ್ಟವೂ ಅ್ಯಸಿಡಿಕ್ ಆಗಬಹುದು ಎನ್ನುವುದು ಕೆಲವರ ಅಭಿಪ್ರಾಯ. ನೈಟ್ರೋಜನ್ ರಸಗೊಬ್ಬರ ಬಳಕೆಯೂ ಮಣ್ಣಿನ pH ಮಟ್ಟವನ್ನು ಕಡಿಮೆ ಮಾಡುತ್ತದೆಯಂತೆ. ಈ ಬಗ್ಗೆಯೂ ಹೆಚ್ಚಿನ ಗಮನ ಅಗತ್ಯ. ಇದು ಹೌದಾದರೆ ಮುಂಗಾರು ಮುನ್ನ ರಸಗೊಬ್ಬರ ಬೇಸಾಯವೂ ಮರು ಚಿಂತನೆ ಮಾಡಬೇಕು. ಈ ಎಲ್ಲಾ ಕಾರಣಗಳಿಂದ ಮಾಹಿತಿಗಳಿಂದ ಒಂದಂತು ಸ್ಪಷ್ಟ, ಎಲೆ ಚುಕ್ಕಿ ರೋಗ (ಮತ್ತಿತರ ರೋಗಗಳಾದ, ಅಡಿಕೆ ಅಂಡೊಡಕು, ಅಡಿಕೆ ಉದುರುವಿಕೆ, ಹಳದಿ ಎಲೆ ಇತ್ಯಾದಿಗಳು ಕೂಡ) ಹೆಚ್ಚುತ್ತಿರುವುದಕ್ಕೆ ಮಣ್ಣಿನ pH ಮಟ್ಟ ಇಳಿದು ಮಣ್ಣು ಅ್ಯಸಿಡಿಕ್ ಆಗುತ್ತಿರುವುದೂ ಒಂದು ಕಾರಣ. pH ಮಾತ್ರ ಕಾರಣ ಅಲ್ಲದಿರಬಹುದು, ಆದರೆ ಅದೂ ಒಂದು ಪ್ರಬಲವಾದ ಕಾರಣ. ಜತೆಗೆ ಫಂಗಸ್ ಬೆಳವಣಿಗೆ, ಪೌಷ್ಟಿಕಾಂಶ ಕೊರತೆಗೂ pH ಕಾರಣವಂತೂ ನಿಜ. ಇದಿಷ್ಟು ಮಣ್ಣಿನ pH ವಿಚಾರದ ಬೇಸಿಕ್ ವಿಚಾರಗಳು.

ಮಣ್ಣಿನ pH ವಿಚಾರದಲ್ಲಿ ಸರಕಾರ, ಇಲಾಖೆಗಳು, ಕೃಷಿ ವಿಜ್ಞಾನಿಗಳು ಏನು ಮಾಡಬೇಕು?

pH ನಿಯಂತ್ರಣದ ಸುಣ್ಣ ಬಳಕೆಯ ಮತ್ತು ಇತರ ಅಗತ್ಯ ವಿಚಾರದಲ್ಲಿ ಸರಕಾರ, ಅದರ ಇಲಾಖೆಗಳು ಮತ್ತು ಕೃಷಿ ವಿಜ್ಞಾನಿಗಳು ಹೆಚ್ಚಿನ ಗಮನ ಕೊಡಬೇಕಾಗಿದೆ:

  • ಸಾಮಾನ್ಯವಾಗಿ ಸಣ್ಣ ರೈತರು, ಅತಿ ಸಣ್ಣ ರೈತರು ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನ pH ತಿಳಿಯುವ ಕ್ರಮಕ್ಕೆ ಮುಂದಾಗುವುದಿಲ್ಲ.
    ಇಲಾಖೆಗಳು ರೈತರರಿಗೆ ಈ ಬಗ್ಗೆ ಮಾರ್ಗದರ್ಶನ ಮಾಡಬೇಕಿದೆ. (ಹಿಂದೆ ಆಕಾಶವಾಣಿಯ ಮೂಲಕ, ಹಳ್ಳಿಗಳಲ್ಲಿ ಕೃಷಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ, ಗೋಡೆ ಬರಹಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿತ್ತು. ಈಗ ಅವೆಲ್ಲ ನಿಂತು ಹೋಗಿವೆ.)
  • ತೋಟಗಾರಿಕೆ ಅಥವಾ ಕೃಷಿ ಇಲಾಖೆಗಳು ಮಣ್ಣಿನ ಯಾವ pH ಮಟ್ಟಕ್ಕೆ ಎಷ್ಟು ಸುಣ್ಣ ಬಳಸಬೇಕು ಎಂದು ನೇರವಾಗಿ ರೈತರಿಗೆ ತಿಳಿಸುವ ಪ್ರಯತ್ನ ಮಾಡುವುದಿಲ್ಲ. ಕೆಲವು ಕಡೆ, ಜನರಲ್ ಆಗಿ ಎಕರೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ 5 ಕ್ವಿಂಟಾಲ್ ಸುಣ್ಣ ಬಳಸಿ ಎಂದು ಶಿಫಾರಸ್ ಮಾಡುತ್ತಾರೆ. ಇದು ವೈಜ್ಞಾನಿಕ ಕ್ರಮ ಅಲ್ಲ.
  • ಸಬ್ಸಿಡಿ ದರದಲ್ಲಿ (ಒಂದು ಕೆ.ಜಿ. ಸುಣ್ಣಕ್ಕೆ 70 ಪೈಸೆ ದರದಲ್ಲಿ) ಕೃಷಿ ಇಲಾಖೆಯಿಂದ ಅಗ್ರಿ ಲೈಮ್ ಕೊಡಲಾಗುತ್ತಿತ್ತು. ಈಗ ಮೂರು ವರ್ಷಗಳಿಂದ ಹಾಗೆ ರಿಯಾಯ್ತಿಯಲ್ಲಿ ಸುಣ್ಣ ಕೊಡುವ ಕ್ರಮ ನಿಂತು ಹೋಗಿದೆ.
  • ಸುಣ್ಣ ಬಳಸುವ ಸಮಯವಾಗಿ ಸಾಮಾನ್ಯ ಏಪ್ರಿಲ್-ಮೇ‌ನಲ್ಲಿ ಬಳಸಲು ಶಿಫಾರಸ್ಸು ಮಾಡಲಾಗುತ್ತದೆ. ವಿಪರೀತ ಮಳೆ, ದೀರ್ಘಕಾಲದ ಮಳೆಯ ಕಾರಣ ಅಗತ್ಯ ಬಿದ್ದರೆ ಹೆಚ್ಚುವರಿಯಾಗಿ ಸುಣ್ಣ ಬಳಸಬಹುದಾ? ಹೌದಾದರೆ ಎಷ್ಟು ಪ್ರಮಾಣ? ಎಷ್ಟು ಸಮಯದ ಅಂತರದಲ್ಲಿ ಬಳಸಬೇಕು? ಈ ಬಗ್ಗೆ ಮಾಹಿತಿಗಳು ಇರುವುದಿಲ್ಲ.
  • ಅಗ್ರಿ ಲೈಮ್ ಮತ್ತು ಹರಳು ರೂಪದ ಡೋಲೋಮೇಟ್ (ಕ್ಯಾಲ್ಸಿಯಂ+ ಮೆಗ್ನೀಸಿಯಂ ಇರುವಂತಹದು) ಯಾವುದನ್ನು ಯಾವಾಗ ಬಳಸಬೇಕು ಎಂದು ಕ್ಲಿಯರ್ ಮಾಹಿತಿ ರೈತರಿಗೆ ತಿಳಿಸುವ ಪ್ರಯತ್ನ ಇಲ್ಲ. ಮಣ್ಣಿನ ಪರೀಕ್ಷೆಯ ವರದಿ ಮತ್ತು ಕಾಲಮಾನ, ಹವಾಮಾನಕ್ಕೆ ಅನುಗುಣವಾಗಿ ಇವುಗಳಲ್ಲಿ ಒಂದನ್ನು ಬಳಸಬೇಕಾಗುತ್ತದೆ.
  • ಸುಣ್ಣ ಬಳಸುವಾಗ ಅಡಿಕೆ ಮರದ ಬುಡ, ಪಟದ ಮಧ್ಯ, ಕಪ್ಪು ಎಲ್ಲಾ ಕಡೆ ಬಳಸಬೇಕಾ? ಈ ಬಗ್ಗೆ ಕೇಸ್ ಟು ಕೇಸ್ ಬೇಸಿಸ್ ಮಾಹಿತಿ ಕೊಡಬೇಕಾದ ಅಗತ್ಯ ಇಲಾಖೆಗಳದ್ದಾಗಬೇಕು.
  • ಸುಣ್ಣ ಎಷ್ಟು ಸಮಯದವರೆಗೆ ಮಣ್ಣಿನ pH ನಿಯಂತ್ರಣ ಮಾಡುತ್ತದೆ? ಅಗತ್ಯಕ್ಕಿಂತ ಹೆಚ್ಚು ಸುಣ್ಣದಿಂದ ಯಾವ ಯಾವ ಬೆಳೆಗೆ ಹೇಗೆ ತೊಂದರೆ ಆಗಬಹುದು? ಸುಣ್ಣ ಬಳಸುವಾಗಣ್ಣಿನಲ್ಲಿ ತೇವಾಂಶ ಹೇಗಿರಬೇಕು? ಬೇಸಿಗೆಯಲ್ಲಿ ಸುಣ್ಣ ಬಳಸಿದ ಮೇಲೆ ಯಾವಾಗ ನೀರು ಕೊಡಬೇಕು?….. ಹೀಗೆ ಉದ್ಭವಿಸುವ ಪ್ರಶ್ನೆಗಳಿಗೆ ವಿಜ್ಞಾನಿಗಳು, ಇಲಾಖೆಗಳು ಸುಲಭವಾಗಿ ಆಯಾಯ ಪ್ರದೇಶಗಳಲ್ಲಿ ರೈತರಿಗೆ ಮಾಹಿತಿ ಸಿಗುವಂತೆ ಮಾಡಬೇಕು.
  • ಸುಣ್ಣದ ಜೊತೆ ರಸಗೊಬ್ಬರ/ಸಾವಯವ ಗೊಬ್ಬರ ಒಟ್ಟಾಗಿ ಬಳಸಬಹುದಾ? ಮನುಷ್ಯನಿಗೆ ‘ರಾಸಾಯನಿಕ’ ಔಷಧಿ ಜೊತೆ ಅ್ಯಸಿಡಿಕ್ ಕಮ್ಮಿಯಾಗುವ ಮಾತ್ರೆ ಕೊಡುವಂತೆ, ಮಣ್ಣಿಗೂ ರಾಸಾಯನಿಕಗಳ ಜೊತೆ ಸುಣ್ಣ ಕೊಡಬೇಕಾಗಬಹುದಾ?
  • ಮಣ್ಣಿಗೆ ಸುಣ್ಣ ಬಳಸಿದಾಗ ಸೊಳ್ಳೆ, ನುಸಿ ತರಹದ ಕೀಟಗಳು ಕಮ್ಮಿಯಾಗುತ್ತವೆ. ಅದೇ ರೀತಿ ಕೆಲವು ಫಂಗಸ್‌ಗಳು ನಾಶವಾಗುತ್ತವೆ (ಮನೆಯ ಅಂಗಳದಲ್ಲಿ ಪಾಚಿ ಕಟ್ಟಿದಾಗ ಸುಣ್ಣ ಬಳಸಿ ಸರಿಪಡಿಸಲಾಗುತ್ತದೆ. ಪಾಚಿಯೂ ಒಂದು ರೀತಿ ಫಂಗಸ್ಸೇ ಅಲ್ವಾ?) ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಹಿತಿ ಸಿಗುವಂತಾಗಬೇಕು. ಸುಣ್ಣದಿಂದ ಉಪಯೋಗಕರ ಶಿಲೀಂಧ್ರಗಳು ನಾಶವಾಗುತ್ತವಾ? ಎರೆಹುಳುಗಳಿಗೆ ಸುಣ್ಣ ಅಪಾಯಕಾರಿಯಾ? ಉಪಯೋಗಕಾರಿಯಾ? ಎಂಬಂತಹ ಪ್ರಶ್ನೆಗಳಿಗೆ ಉತ್ತರದ ಮಾಹಿತಿಗಳು ಇಲಾಖೆಯ ಸಂಶೋಧನಾ ಪುಸ್ತಕಗಳಲ್ಲಿ ಇರಬಹುದು. ಆದರೆ, ಅವುಗಳು ರೈತರಿಗೆ ತಲುಪುತ್ತಿಲ್ಲ, ಅದಾಗಬೇಕು.
  • ಅಡಿಕೆ ಕೊಳೆ ರೋಗಕ್ಕೆ ಕಾಪರ್ ಸಲ್ಫೇಟ್ ಬಳಸುವಾಗ 1% ಸುಣ್ಣ ಬಳಸಬೇಕು ಅಥವಾ ಬೋರ್ಡೋ ದ್ರಾವಣದ pH ಮಟ್ಟ +7 ಆಗಲು ಅಗತ್ಯ ಸುಣ್ಣ ಬಳಸಬೇಕು ಎಂದು ಶಿಫಾರಸ್‌ನಲ್ಲಿ ಹೇಳಲಾಗುತ್ತದೆ. ಆದರೆ ಬೇರೆ ಯಾವ ಔಷಧಿಗಳ ಸ್ಪ್ರೇಗೆ ಸುಣ್ಣದ ಬಳಕೆ ಶಿಫಾರಸ್ ಮಾಡುವುದಿಲ್ಲ. ಅದರರ್ಥ ಬೇರೆ ಎಲ್ಲ ಔಷಧಿಗಳ pH ಮಟ್ಟ ಸಮಸ್ಥಿತಿಯಲ್ಲಿದೆ ಎಂದಾಗುವುದೆ? ಅಥವಾ pH ಸಮಸ್ಥಿತಿಗೆ ತರಲಾಗಿದೆ ಎಂದು ಅರ್ಥವೆ?
  • pH ತಕ್ಷಣ ನಿಯಂತ್ರಣಕ್ಕೆ ಬರೀ ಸುಣ್ಣವನ್ನು ದ್ರವ ರೂಪದಲ್ಲಿ ಮಣ್ಣಿಗೆ ಸ್ಪ್ರೇ ಮಾಡಬಹುದಾ?
  • ಬೋರ್ಡೋ ದ್ರಾವಣದಲ್ಲಿ ಶಿಫಾರಸ್ ಮಾಡಿದ್ದಕ್ಕಿಂತ ಹೆಚ್ಚು ಸುಣ್ಣ ಬಳಸುವ ಪದ್ದತಿ ಮಲೆನಾಡಿನ ಅನೇಕ ರೈತರಲ್ಲಿದೆ. ಹೆಚ್ಚು ಸುಣ್ಣ ಬಳಸಿದ ಪರಿಣಾಮವೇ, ಸುಣ್ಣದ ಪಾರ್ಟಿಕಲ್‌‌ಗಳೇ ನಿರ್ಧಿಷ್ಟ ಸಮಯದ ನಂತರ ಅಡಿಕೆ ಮತ್ತು ಎಲೆಗಳ ಮೇಲೆ ಶೇಕರಣೆಯಾಗಿ, ಪಾಚಿ ಕಟ್ಟಿ, ಫಂಗಸ್ ಬೆಳೆಯುವುದಕ್ಕೆ ಆ ಮೂಲಕ ಕೊಳೆ ರೋಗ ಹೆಚ್ಚುವುದಕ್ಕೆ ಕಾರಣವಾಗಬಹುದು ಎಂದು ಕೆಲವರ ಅಭಿಪ್ರಾಯ ಇದೆ. ಈ ಬಗ್ಗೆ ಸಂಶೋಧನಾ ಮಾಹಿತಿಗಳು ಇಲಾಖೆಗಳಲ್ಲಿ ವಿಜ್ಞಾನಗಳಲ್ಲಿ ಇರಬಹುದಾ?
  • ಮನುಷ್ಯರಿಗೆ ಆಪರೇಷನ್ ಆಗಬೇಕಾದರೆ BP, ಶುಗರ್ ಮತ್ತು ರಕ್ತದ pH ನಾರ್ಮಲ್ ಇರಬೇಕು. ಅದೇರೀತಿ ಅಡಿಕೆ ಗಿಡ ನೆಡುವಾಗ, ಬೇಸಾಯ ಮಾಡುವಾಗ, ಬೇಸಾಯದ ಉಳುಮೆ ಮಾಡುವಾಗ, ಬಹುಶಃ ಮರದಿಂದ ಫಸಲು ಕಿತ್ತು ತೆಗೆಯುವಾಗ(?), ರೋಗ ನಿಯಂತ್ರಣದ ಸಂಧರ್ಭಗಳಲ್ಲಿ, ಮರ ಮತ್ತು ಮಣ್ಣಿನ pH ಸಮತೋಲನ ಕಾಪಾಡುವುದು ಒಂದು ಅಗತ್ಯ ಪ್ರಕ್ರಿಯೆ ಅಲ್ವಾ? ಈ ಬಗ್ಗೆ ಕೃಷಿ ವಿಜ್ಞಾನಿಗಳು ಮಾಹಿತಿ ಕೊಡುವಂತಾಗಬೇಕು.
  • ಮಣ್ಣಿನ pH ಬಗ್ಗೆ ಒಂದಿಷ್ಟು ಮಾಹಿತಿಗಳಿವೆ ಆದರೆ, ಅಡಿಕೆ ಮರದಲ್ಲಿ ರೋಗ ಲಕ್ಷಣಗಳು ಕಂಡು ಬಂದಾಗ, ಅಡಿಕೆ ಮರದ pH ಕಡೆಗೆ ಒಂದಿಷ್ಟು ಗಮನ ಕೊಟ್ಟು, ಅಧ್ಯಯನ ಮಾಡಲಾಗಿದೆಯಾ? ಇಲಾಖೆಗಳಲ್ಲಿ ವರದಿ ಇರಬಹುದಾ?

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಎಲೆಚುಕ್ಕಿ ರೋಗ; ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಹೇಳಿಕೆಗಳೇ ಬೋಗಸ್‌! ಇಲ್ಲಿದೆ ಪುರಾವೆ

ಡಿವಿಜಿಯವರ ಒಂದು ಕಗ್ಗದ ಮುಕ್ತಕ ಹೀಗಿದೆ

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ?। ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ॥ ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು। ಗುಣಕೆ ಕಾರಣವೊಂದೆ? – ಮಂಕುತಿಮ್ಮ ॥
ಅಂದರೆ, ಭೂಮಿಯಲ್ಲಿ ಚಿಗುರುವ ಹುಲ್ಲಿಗೆ ಆ ಹಸಿರುಬಣ್ಣ ಎಲ್ಲಿದ ಬಂತು? ಬೇರಿನದೋ ? ಭೂಮಿಯದೋ? ಬೆಳಕ ನೀಡುವ ಸೂರ್ಯನದೋ? ಚಂದ್ರನದೋ? ಪೂರಕವಾದ ನೀರಿನದೋ? ಅದನ್ನು ಬೆಳೆಸಿದ ನಿನ್ನದೋ? ಅಥವಾ ತಂಪ ಕಾಣುವ ನಿನ್ನ ಕಣ್ಣಿನ ಪುಣ್ಯದ್ದೋ? ಆ ಹುಲ್ಲಿನ ಹಸಿರಿನ ಗುಣಕ್ಕೆ ಕಾರಣ ಒಂದೇ ಅಲ್ಲ. ಅನೇಕ ಕಾರಣಗಳಿವೆ ಎಂದು ಮುಕ್ತಕದ ಅರ್ಥ. ಆ ಅನೇಕದಲ್ಲಿ pH ಕೂಡ ಒಂದು ಪ್ರಮುಖವಾದುದು. ಗೊಬ್ಬರ, ಪೋಶಕಾಂಶಗಳಿಗಿಂತ ಹೆಚ್ಚಿನ ಮಹತ್ವವನ್ನು ಮಣ್ಣಿನ pH (ರಸಸಾರ) ಬಗ್ಗೆ ಕೊಡಬೇಕು.
ಗ್ಯಾಸ್ಟ್ರಿಕ್ ಆ್ಯಸಿಡಿಟಿ ಇದ್ದಾಗ ಯಾವ ಒಳ್ಳೆಯ ಊಟವೂ ಸೇರುವುದಿಲ್ಲ. ತಿಂದರೆ ಜೀರ್ಣವೂ ಆಗುವುದಿಲ್ಲ. ಇದು ಕೃಷಿಗೂ ಅನ್ವಯ. ಮಣ್ಣಿನ ಆ್ಯಸಿಡಿಟಿ ಸರಿ ಮಾಡಿಕೊಂಡು, ಬೇಸಾಯದ ಊಟ ಬಡಿಸಬೇಕು.

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…

Continue Reading
Advertisement
Prajwal Revanna Case
ಕರ್ನಾಟಕ4 mins ago

Prajwal Revanna Case: ನನ್ನ ಸಾಯಿಸ್ತಾರೆ; ಪ್ರಜ್ವಲ್‌ ವಿದೇಶದಲ್ಲಿದ್ದರೂ ಸಂತ್ರಸ್ತೆಗೆ ಭಯ, ಪೊಲೀಸರಿಗೂ ಮಾಹಿತಿ ನೀಡಲು ಹಿಂಜರಿಕೆ!

Bangalore To Belagavi Train
ಕರ್ನಾಟಕ8 mins ago

Bangalore To Belagavi Train: ಮೇ 6ರಂದು ಬೆಂಗಳೂರು-ಬೆಳಗಾವಿ ವಿಶೇಷ ರೈಲು ಸಂಚಾರ

IPL 2024
Latest13 mins ago

IPL 2024 : ಪುತ್ರ ಅಕಾಯ್​ ಹುಟ್ಟಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

Jai Shri Ram Slogan
ಕರ್ನಾಟಕ1 hour ago

Jai Shri Ram Slogan: ಜೈ ಶ್ರೀರಾಮ್ ಘೋಷಣೆ ಕೂಗಿದ್ರೆ ಬೂಟುಗಾಲಲ್ಲಿ ಒದೆಯಿರಿ ಎಂದಿದ್ದ ಕೈ ಮುಖಂಡ ಅಮಾನತು

Paytm
ಪ್ರಮುಖ ಸುದ್ದಿ1 hour ago

Paytm : ಪೇಟಿಎಂ ಸಿಒಒ ಭವೇಶ್ ಗುಪ್ತಾ ಏಕಾಏಕಿ ರಾಜೀನಾಮೆ

Ballari DC Prashanth kumar Mishra pressmeet about MLC election
ಬಳ್ಳಾರಿ1 hour ago

MLC Election: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ; ಮೇ 9ಕ್ಕೆ ಅಧಿಸೂಚನೆ ಪ್ರಕಟ

HD Revanna
ಕರ್ನಾಟಕ1 hour ago

HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!

IPL 2024
Latest2 hours ago

IPL 2024 : ಭಾರೀ ಭದ್ರತಾ ಲೋಪ; ಎಸ್​ಆರ್​​ಎಚ್​ ವಿದೇಶಿ ಆಟಗಾರನ ಮೇಲೆ ಮುಗಿಬಿದ್ದ ಸಾರ್ವಜನಿಕರು!

Ballari DC Prashanth kumar Mishra pressmeet about lok sabha election
ಬಳ್ಳಾರಿ2 hours ago

Lok Sabha Election 2024: ಪಾರದರ್ಶಕ ಚುನಾವಣೆಗೆ ಬಳ್ಳಾರಿ ಜಿಲ್ಲಾಡಳಿತ ಸಜ್ಜು

Shivamogga BJP
ಶಿವಮೊಗ್ಗ2 hours ago

Lok Sabha Election 2024: ಶಿವಮೊಗ್ಗದಲ್ಲಿ ಪ್ರಚಾರದ ವೇಳೆ ಕಿರಿಕ್; ಬಿಜೆಪಿ ವಾಹನ ಹಿಮ್ಮೆಟ್ಟಿಸಿದ ಈಶ್ವರಪ್ಪ ಅಭಿಮಾನಿಗಳು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ17 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌