ಕಲೆ/ಸಾಹಿತ್ಯ
Sunday Read: ಹೊಸ ಪುಸ್ತಕ: ಅಮೃತಬಳ್ಳಿ ಮತ್ತು ಇತರ ಕಥೆಗಳು
ಕಂ.ಕ. ಮೂರ್ತಿ ಅವರ ʼಅಮೃತಬಳ್ಳಿ ಮತ್ತು ಇತರ ಕಥೆಗಳುʼ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಗೆ ಕಥೆಗಾರ ಕೇಶವ ಮಳಗಿ ಅವರು ಬರೆದ ಮುನ್ನುಡಿ ಇಲ್ಲಿದೆ.
| ಕೇಶವ ಮಳಗಿ
ದಶಕಗಳಿಂದ ಪತ್ರಕರ್ತರಾಗಿ, ಲೇಖಕರಾಗಿ, ಕಥೆಗಾರರಾಗಿ ಕಂ.ಕ. ಮೂರ್ತಿ ಕನ್ನಡದ ಓದುಗರಿಗೆ ಪರಿಚಿತರು. ವೃತ್ತಿಯಲ್ಲಿ ಅವರು ಪತ್ರಕರ್ತರಾದರೂ ಕನಸು- ವಾಸ್ತವ-ಕಲ್ಪನೆ ಮತ್ತು ಕನವರಿಕೆಗಳು ತುಂಬಿದ ಕಥೆಗಳನ್ನು ಬರೆಯುವುದು ಅವರಿಗೆ ಮೆಚ್ಚು. ಮೂರ್ತಿಯವರ ಅಂತರಂಗದ ತುಡಿತದ ಪ್ರತಿಬಿಂಬವಾಗಿ ಹದಿನೈದು ಕಥೆಗಳ ಈಗಿನ ಸಂಕಲನ ಓದುಗರ ಮುಂದಿದೆ.
ಮೂರ್ತಿಯವರು ಪತ್ರಕರ್ತರಾಗಿ, ಸಂವೇದನಾಶೀಲ ವ್ಯಕ್ತಿಯಾಗಿ ಕಂಡುಂಡ ಬದುಕು ಈ ಕಥಾಸಂಕಲನದ ಉದ್ದಕ್ಕೂ ಹರಡಿಕೊಂಡಿದೆ. ಇಲ್ಲಿನ ಬಹುಪಾಲು ಕಥೆಗಳ ಭಿತ್ತಿ ಮಲೆನಾಡಿನ ಸಾಮಾನ್ಯ ಜನರ ಬದುಕಿನ ಆಶೋತ್ತರ, ಕಷ್ಟಕಾರ್ಪಣ್ಯ, ಘನತೆ ತುಂಬಿದ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಮನುಷ್ಯರು ತೋರುವ ಛಲವಂತಿಕೆಗಳೇ ಆಗಿವೆ. ಅನುಭವವನ್ನು ಮರುಕಥಿಸುವಾಗ ಕಥೆಗಾರರು ತೋರುವ ಪಕ್ವ ನೋಟ ಕಥೆಗಳನ್ನು ಮೇಲುಸ್ತರಕ್ಕೇರಿಸಿವೆ. ಸಾಮಾನ್ಯರ ಜೀವನವನ್ನು ಸಂವೇದನಾಶೀಲತೆ ಮತ್ತು ಸಂಯಮಗಳಿಂದ ನಿರುಕಿಸುತ್ತ ಮೂರ್ತಿಯವರು ಕಟ್ಟುವ ಕಥೆಗಳಲ್ಲಿ ಕಥನಕೌಶಲ, ವಸ್ತುವಿಷಯ, ಶೈಲಿಗಳ ನಿರ್ವಹಣೆಯಲ್ಲಿ ತೋರುವ ನಿಪುಣತೆ ಓದನ್ನು ಹೃದ್ಯವಾಗಿಸುತ್ತವೆ.
ಇದನ್ನೂ ಓದಿ: ಹೊಸ ಪುಸ್ತಕ: Sunday read: ಹಿಂದೂ ಮಹಾಸಾಗರದ ಮೇಲೊಂದು ಮಹಾಜಾಲಕ್ಕೆ ನಾಂದಿ
ಇಲ್ಲಿ ಬಳಸಿರುವ ಮಾದರಿ ಜನಪ್ರಿಯ ಸಾಹಿತ್ಯಕ್ಕೆ ಹತ್ತಿರವಾಗಿರುವುದರಿಂದ ಓದುಗ ಹೆಚ್ಚು ಪರಿಶ್ರಮ ಪಡದೆ ತನ್ನದಾಗಿಸಿಕೊಳ್ಳಬಲ್ಲ. ಇಲ್ಲಿನ ಕೆಲವು ಕಥೆಗಳಲ್ಲಿ ದೊಡ್ಡವರ ಪಡಿಪಾಟಲಿನ ಬದುಕನ್ನು ಸಾಕ್ಷಿಪ್ರಜ್ಞೆಯಾಗಿ ಗ್ರಹಿಸುವ ಚಿಕ್ಕಮಕ್ಕಳ ಪಾತ್ರಗಳಿವೆ. ಅಂತೆಯೇ, ನಿಸ್ವಾರ್ಥದ, ಅಸಹಾಯಕ ಬದುಕನ್ನು ನಡೆಸುವ ಹೆಂಗಸರು ಒಂದು ಗಳಿಗೆಯಲ್ಲಿ ತೋರುವ ದಿಟ್ಟತನ ಮತ್ತು ತ್ಯಾಗಮಯ ಪಾತ್ರಗಳಿವೆ. ಇವೆಲ್ಲ ಇಂದಿಗೂ ಗ್ರಾಮಭಾರತದ ಬದುಕಿನ ಅವಿಭಾಜ್ಯ ಅಂಗವೇ ಆಗಿರುವುದರಿಂದ ಓದುಗ ಅವುಗಳೊಂದಿಗೆ ತಾದ್ಯಾತ್ಮತೆಯನ್ನು ಸಾಧಿಸಬಲ್ಲ.
ಶ್ರೀಗಂಧ ಕಥೆಯ ಶೀನ, ಕಾರುಣ್ಯ ಕಥೆಯ ಅಜ್ಜಿ, ಅನ್ನದೇವರು ಕಥೆಯ ಮಕ್ಕಳು, ಸಂತ ಕಥೆಯ ಅಯ್ಯನವರು, ಮುಸ್ಸಂಜೆ ಕಥೆಯ ರಾವ್, ಹೀಗೆ ಕಥೆ ಮತ್ತು ಪಾತ್ರಗಳು ಬೇರೆ ಬೇರೆ. ಆದರೆ, ಕಥೆಗಾರನ ಮಾಗಿದ ದೃಷ್ಟಿಕೋನವು ಈ ಪಾತ್ರಗಳು ಬದುಕಿನ ಕಹಿಯನ್ನು ನುಂಗಿ, ಆ ಗಳಿಗೆಯನ್ನು ಹೇಗೆ ತಿಳಿಯಾಗಿಸಿದರು ಮತ್ತು ಸಾರ್ಥಕಗೊಳಿಸಿದರು ಎಂಬುದರತ್ತ ಇರುವುದರಿಂದ ಹೊಸ ನೋಟ ಪ್ರಾಪ್ತವಾಗುತ್ತದೆ. ಇಲ್ಲಿನ ಕಥೆಗಳು ಓದುಗರನ್ನು ಆರ್ದಗೊಳಿಸಬಲ್ಲವು. ಒಂದು ಕಥೆಯಿಂದ ಸಮಾಜದ ವಿವಿಧ ಸ್ತರದ ಬದುಕಿನ ಚಿತ್ರಣ ಬಯಸಿದರೆ ಅದನ್ನು ಧಾರಾಳವಾಗಿ ನೀಡಬಲ್ಲವು. ಬದುಕಿನಲ್ಲಿ ಕಷ್ಟನಷ್ಟ, ಕಹಿಯೊಗರುಗಳಷ್ಟೇ ಅಲ್ಲ, ಅವುಗಳ ಹಿಂದೆ ಮನುಷ್ಯ ತನ್ನ ಹೋರಾಟದಿಂದಾಗಿಯೇ ಪಡೆದುಕೊಳ್ಳಬಹುದಾದ ಚಲನಶೀಲತೆಯಿದೆ ಎಂಬುದನ್ನು ಎತ್ತಿ ತೋರಿಸಬಲ್ಲವು.
ಇದನ್ನೂ ಓದಿ: ಹೊಸ ಪುಸ್ತಕ | ಮಾಯ ಮತ್ತು ಜೋಗದ ಬೆಳಕಿನಲ್ಲಿ | ಕಾಂತಾರದ ದಂತಕತೆ ಮತ್ತು ಮಾಯವಾಗುವ ದೈವಗಳು
ಕೃತಿ: ಅಮೃತಬಳ್ಳಿ ಮತ್ತು ಇತರ ಕಥೆಗಳು (ಕಥಾಸಂಕಲನ)
ಲೇಖಕ: ಕಂ.ಕ. ಮೂರ್ತಿ
ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಶನ್
ಬೆಲೆ: 190 ರೂ.
ಕರ್ನಾಟಕ
Literature Award: ಕತೆಗಾರ ದಯಾನಂದ ರಚನೆಯ ‘ಬುದ್ಧನ ಕಿವಿ’ಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ
Literature Award: ಕತೆಗಾರ ದಯಾನಂದ ಅವರಿಗೆ ವಿಜಯಪುರದ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಏಪ್ರಿಲ್ 8ರಂದು ‘ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಬೆಳಗಾವಿ: ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 2022ನೇ ಸಾಲಿನ ‘ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ’ಕ್ಕೆ (Literature Award) ಕತೆಗಾರ ದಯಾನಂದ ಅವರ ‘ಬುದ್ಧನ ಕಿವಿ’ ಕಥಾ ಸಂಕಲನ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.
ವಿಜಯಪುರದ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಏಪ್ರಿಲ್ 8ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಾ. ಗುರುಪಾದ ಮರಿಗುದ್ದಿ, ಡಾ. ವಿ.ಎನ್.ಮಾಳಿ ಹಾಗೂ ಪ್ರೊ. ಸಿ.ಎಸ್.ಭೀಮರಾಯ ನಿರ್ಣಾಯಕರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Literary Award: ಲೇಖಕಿ ವೈದೇಹಿಗೆ ನೃಪತುಂಗ ಪ್ರಶಸ್ತಿ, ಬೇಲೂರು ರಘುನಂದನ್ ಸೇರಿ ಐವರಿಗೆ ಮಯೂರ ವರ್ಮ ಪ್ರಶಸ್ತಿ ಪ್ರದಾನ
ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ
ಹುಬ್ಬಳ್ಳಿ: ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 2021 ಮತ್ತು 2022ನೇ ಸಾಲಿನ ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿಗಾಗಿ (Book Award) ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು 3 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿರುತ್ತದೆ. ಇದರೊಂದಿಗೆ 2021ರ ಮತ್ತು 2022ನೇ ಸಾಲಿನ ಎರಡೂ ವರ್ಷಗಳಿಗೆ ಪ್ರತ್ಯೇಕ ಐದು ಪುಸ್ತಕಗಳಿಗೆ ಪ್ರೋತ್ಸಾಹಕ ಪ್ರಶಸ್ತಿ (ನಗದು ರಹಿತ)ಗಳನ್ನು ಪ್ರದಾನ ಮಾಡಲಾಗುತ್ತದೆ. ಪ್ರೋತ್ಸಾಹಕ ಪ್ರಶಸ್ತಿಗಳು ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನು ಮತ್ತು ಗೌರವ ಸಮರ್ಪಣೆಯನ್ನು ಒಳಗೊಂಡಿರುತ್ತವೆ.
ಏಪ್ರಿಲ್, ಮೇ ನಂತರ ಬೆಳಗಾವಿಯಲ್ಲಿ ನಡೆಯುವ ಭಾವ ಸಂಗಮ ಸಮಾಗಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದವರು ಕಾರ್ಯಕ್ರಮದಲ್ಲಿ ಸ್ವತಃ ಪಾಲ್ಗೊಳ್ಳುವುದು ಕಡ್ಡಾಯ. ಆದರೆ, ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಹಾಜರಾಗದಿದ್ದಲ್ಲಿ ಪುರಸ್ಕೃತರ ಮನೆಗೆ ತೆರಳಿ ಪ್ರದಾನ ಮಾಡುವ, ಅಂಚೆಯಲ್ಲಿ ಕಳುಹಿಸುವ ಔಪಚಾರಿಕತೆಗೆ ಅವಕಾಶ ಇಲ್ಲ. ಅವರ ಪ್ರಶಸ್ತಿ ರದ್ದಾಗುತ್ತದೆ ಎಂದು ಫೌಂಡೇಶನ್ ತಿಳಿಸಿದೆ.
2021 ಮತ್ತು 2022ನೇ ಸಾಲಿನಲ್ಲಿ ಪ್ರಕಾಶನಗೊಂಡ ಪುಸ್ತಕಗಳನ್ನು ಪ್ರತ್ಯೇಕವಾಗಿಯೇ ಪರಿಗಣಿಸಲಾಗುತ್ತದೆ. ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ಪ್ರವಾಸ ಸಾಹಿತ್ಯ, ನಾಟಕ, ಚುಟುಕು ಸಂಕಲನ, ಗಜಲ್ ಸಂಕಲನ, ಹಾಯ್ಕು ಸಂಕಲನ, ಟಂಕಾ ಸಂಕಲನ, ವಿಮರ್ಶಾ ಕೃತಿ, ವ್ಯಂಗ್ಯ ಚಿತ್ರ ಸಂಕಲನ, ವ್ಯಕ್ತಿಚಿತ್ರ, ಲಲಿತ ಪ್ರಬಂಧ, ಸಂಪಾದಿತ ಕೃತಿ, ಲೇಖನ ಸಂಕಲನ , ಅನುವಾದ, ಮಕ್ಕಳ ಸಾಹಿತ್ಯ ಮತ್ತು ಎಲ್ಲ ಪ್ರಕಾರದ ಕೃತಿಗಳನ್ನು (ತಲಾ 1 ಪ್ರತಿ ಮಾತ್ರ) 2023 ಏಪ್ರಿಲ್ 30ರೊಳಗೆ ತಲುಪಿಸಬೇಕು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ
ಪುಸ್ತಕವನ್ನು ” ರಾಜೇಂದ್ರ ಪಾಟೀಲ, ನಂ.101, ಮೊದಲ ಮಹಡಿ, ಶ್ರೀ ಗುರೂಜಿ ಎನ್ಕ್ಲೇವ್ ಅಪಾರ್ಟ್ಮೆಂಟ್, ಗ್ರೀನ್ ಪಾರ್ಕ್, ಸರಸ್ವತಿಪುರಂ, ಕುಸುಗಲ್ಲ ರಸ್ತೆ, ಕೇಶ್ವಾಪುರ, ಹುಬ್ಬಳ್ಳಿ-580023 ( ಮೊ: 9148391546) ಈ ವಿಳಾಸಕ್ಕೆ ಕಡ್ಡಾಯವಾಗಿ ರಿಜಿಸ್ಟರ್ಡ್ ಅಂಚೆ ಅಥವಾ ಕೊರಿಯರ್ ಮೂಲಕವೇ ಕಳುಹಿಸಲು ಉಮಾಶಂಕರ ಪ್ರತಿಷ್ಠಾನದ ಸಂಚಾಲಕರು ಕೋರಿದ್ದಾರೆ.
ಕಲೆ/ಸಾಹಿತ್ಯ
Ram Navami 2023: ಮಾ.31ರಂದು ಜಯನಗರದಲ್ಲಿ ಕರ್ನಾಟಕ ಸಂಗೀತ ಗಾಯನ ಕಛೇರಿ
Ram Navami 2023: ಶ್ರೀರಾಮ ನವಮಿ ಪ್ರಯುಕ್ತ ಜಯನಗರದ ಶ್ರೀ ಪಟ್ಟಾಭಿರಾಮ ಸೇವಾ ಮಂಡಳಿಯಲ್ಲಿ ಕರ್ನಾಟಕ ಸಂಗೀತ ಗಾಯನ ಕಛೇರಿಯನ್ನು ಆಯೋಜಿಸಲಾಗಿದೆ.
ಬೆಂಗಳೂರು: ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಜಯನಗರ 4ನೇ ʼಟಿʼ ಬ್ಲಾಕ್ನ 13ನೇ ಮುಖ್ಯರಸ್ತೆ 35ನೇ ಅಡ್ಡರಸ್ತೆಯ ಶ್ರೀ ಪಟ್ಟಾಭಿರಾಮ ಸೇವಾ ಮಂಡಳಿಯಲ್ಲಿ ಮಾರ್ಚ್ 31ರಂದು ಸಂಜೆ 6.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿಯನ್ನು ಹಮ್ಮಿಕೊಳ್ಳಲಾಗಿದೆ.
ಗಾಯಕ ವಿದ್ವಾನ್ ಶಿರೀಶ್ ಕೃಷ್ಣ, ಪಿಟೀಲು ವಾದಕ ವಿ.ಡಿ. ಕೃಷ್ಣ ಕಶ್ಯಪ್, ಮೃದಂಗ ವಾದಕ ವಿದ್ವಾನ್ ಕಾರ್ತಿಕ್ ಹಾಗೂ ಖಂಜೀರ ವಾದಕ ವಿದ್ವಾನ್ ಭಾರ್ಘವ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ | Ram Navami 2023 : ರಘುಕುಲತಿಲಕ ಶ್ರೀರಾಮನ ಪೂಜಿಸುವ ಮಹಾಪರ್ವ ರಾಮನವಮಿ
ಕ ಸಾ ಪ
Literary Award: ಲೇಖಕಿ ವೈದೇಹಿಗೆ ನೃಪತುಂಗ ಪ್ರಶಸ್ತಿ, ಬೇಲೂರು ರಘುನಂದನ್ ಸೇರಿ ಐವರಿಗೆ ಮಯೂರ ವರ್ಮ ಪ್ರಶಸ್ತಿ ಪ್ರದಾನ
Literary Award: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ʼನೃಪತುಂಗ ಸಾಹಿತ್ಯ ಪ್ರಶಸ್ತಿ’ ಹಾಗೂ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ʼನೃಪತುಂಗ ಸಾಹಿತ್ಯ ಪ್ರಶಸ್ತಿ’ಯನ್ನು ಲೇಖಕಿ ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ) ಅವರಿಗೆ ಹಾಗೂ 2022ನೇ ಸಾಲಿನ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯನ್ನು (Literary Award) ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಡಾ. ಸತ್ಯಮಂಗಲ ಮಹಾದೇವ, ಗಡಿಭಾಗ ಕಾಸರಗೋಡಿನ ವಿದ್ಯಾರಶ್ಮಿ ಪೆಲತ್ತಡ್ಕ ಹಾಗೂ ಹಾಸನದ ಬೇಲೂರು ರಘುನಂದನ್ ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು.
ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಮಾತನಾಡಿ, ನನ್ನ ಜತೆ ಜತೆಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಬಂದಿರುವ ಹಿರಿಯ ಸಾಹಿತಿ ವೈದೇಹಿಗೆ ಅಭಿನಂದನೆಗಳು. ನಾವು ಇಂಗ್ಲಿಷ್ ವ್ಯಾಮೋಹದಲ್ಲಿ ಕನ್ನಡವನ್ನು ಮರೆತು ಹೋಗಿದ್ದೇವೆ. ಮಾತೃಭಾಷೆಯಲ್ಲಿ ಸೃಷ್ಟಿಯಾದ ಸಾಹಿತ್ಯ ಸೃಜನಶೀಲವಾಗಿರುವುದು ಸಾಧ್ಯ. ಅನ್ಯ ಭಾಷೆಯಲ್ಲಿ ಏನೇ ವಿಷಯವನ್ನು ಮಂಡಿಸಿದರೂ ಅದು ಕೇವಲ ಕಂಠಪಾಠ ಮಾತ್ರ ಆಗುತ್ತದೆ. ನಮ್ಮ ಸೃಜನಶೀಲತೆ ಉಳಿಯಲು ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಗಬೆಕು. ಅದಕ್ಕೆ ನಮ್ಮ ಮಕ್ಕಳಿಗೆ ಕನ್ನಡ ಭಾಷೆಯೇ ಪ್ರಮಾಣವಾಗಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ | Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂ.ಮ.ಸಾ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಅವರು ಮಾತನಾಡಿ, ಇವತ್ತಿನ ದಿನಮಾನದಲ್ಲಿ ಪುಸ್ತಕಗಳ ಓದುವ ಪದ್ಧತಿಗಳು ಕಾಣೆಯಾಗುತ್ತಿದೆ. ಸಾರಿಗೆ ಸಂಸ್ಥೆಯಲ್ಲಿ ಇರುವ ಕನ್ನಡ ಕ್ರಿಯಾ ಸಮಿತಿ ಎಲ್ಲರ ಮೆಚ್ಚುಗೆಯ ಸಮಿತಿಯಾಗಿದೆ. ಕನ್ನಡವನ್ನು ಕಲಿಕೆಯಲ್ಲಿ, ಆಟದಲ್ಲಿ, ದಿನ ನಿತ್ಯದ ವ್ಯವಹಾರದಲ್ಲಿ ಮಕ್ಕಳು ನಿರಂತರವಾಗಿ ಬಳಸುವಂತಾಗಬೇಕು. ಮಕ್ಕಳಿಗೆ ಕನ್ನಡ ಕಷ್ಟವಾಗುತ್ತಿರುವುದು ಕಂಡು ಬರುತ್ತಿದೆ, ಸರಳ ಕನ್ನಡ ಬಳಸುವ ಕಲಿಸುವ ಪುಸ್ತಕಗಳು ಸಿದ್ಧವಾಗಬೇಕಿದೆ. ಬಾಲ್ಯದಲ್ಲಿಯೇ ಸಮರ್ಥವಾಗಿ ಭಾಷೆ ಕಲಿಸಿದರೆ ಅದರ ನಂಟು ಕೊನೆಯವರೆಗೂ ಇರುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿ ಎಚ್. ಎಸ್. ವೆಂಕಟೇಶ ಮೂರ್ತಿ ಮಾತನಾಡಿ, ಮಹಿಳಾ ಸಾಹಿತ್ಯದ ಶ್ರೇಷ್ಠ ಪ್ರತಿನಿಧಿ ವೈದೇಹಿ ಅವರು ಎಂದು ಗುರುತಿಸಿ ಅವರ ಕೊಡುಗೆ ಸಾರಸ್ವತ ಲೋಕಕ್ಕೆ ಅಪಾರ ಎಂದು ಬಣ್ಣಿಸಿದರು. ಹೊಸಬರ ಚಿಂತನೆಯಲ್ಲಿ ಹೊಸತನ ಇರುತ್ತದೆ. ಅದೇ ರೀತಿ ಯುವ ಬರಹಗಾರರು ಸಾಹಿತ್ಯ ಲೋಕದ ಹೊಸತನ ರಚಿಸುವ ನಕ್ಷತ್ರಗಳಾಗಿ ಬೆಳಗಲಿ ಎನ್ನುವ ಆಶಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅತ್ಯಂತ ಮಹತ್ವದ ಪ್ರಶಸ್ತಿ ಎಂದು ಗುರುತಿಸಿಕೊಂಡಿರುವ ʻನೃಪತುಂಗʼ ಪ್ರಶಸ್ತಿಯು ಜ್ಞಾನಪೀಠಕ್ಕೆ ಸರಿಸಮಾನವಾದ ಪ್ರಶಸ್ತಿಯಾಗಿದ್ದು, ʻಕನ್ನಡದ ಜ್ಞಾನಪೀಠʼ ಎಂದು ಗುರುತಿಸಿಕೊಂಡ ಈ ಪ್ರಶಸ್ತಿಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದತ್ತಿ ಇಡುವ ಮೂಲಕ ನೀಡುತ್ತಿದೆ. 7 ಲಕ್ಷದ 1 ರೂಪಾಯಿ ಮೌಲ್ಯದ ಇಂತಹ ಮಹತ್ವದ ಪ್ರಶಸ್ತಿಗೆ ವೈದೇಹಿಯವರ ಪಾತ್ರರಾಗಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ನೃಪತುಂಗ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬರಹಗಾರ್ತಿ ವೈದೇಹಿ, ನಮ್ಮ ಕಾಲದಲ್ಲಿ ಮಾತ್ರ ಭಾಷೆಗೆ ಮಹತ್ವವಿತ್ತು. ಅದರಲ್ಲಿ ಮಿಂದು ಎದ್ದವರಿಗೆ ಆಡಿಪಾಡಿ ಬೆಳೆದವರಿಗಷ್ಟೇ ಕನ್ನಡದ ಚೆಲುವು ಅರಿಯಲು ಸಾಧ್ಯ. ಕನ್ನಡ ನಮ್ಮಲ್ಲಿ ನಿಗಿ ನಿಗಿಯಾಗಿ ಸೇರಿಕೊಂಡಿದ್ದು, ಅದು ಮಾತಿಗೆ, ಬರವಣಿಗೆಗೆ, ಜಗಳಕ್ಕೆ ಜೀವನಕ್ಕೆ ಹೀಗೆ ಎಲ್ಲದಕ್ಕೂ ನಮ್ಮ ಮಧ್ಯದಲ್ಲಿ ಅದು ಹಾಸು ಹೊಕ್ಕಾಗಿ ಹೋಗಿದೆ. ನಾನು ನಾನಾಗಿಯೇ ಬರಹಗಾರ್ತಿ ಆಗಲಿಲ್ಲ, ಕನ್ನಡವನ್ನೇ ನಂಬಿದ ನನಗೆ ಯಕ್ಷಗಾನದ ಕನ್ನಡದ ಜ್ಞಾನ ಶಬ್ದ ಭಂಡಾರ, ಕುಂದಾಪುರದ ಕುಂದ ಕನ್ನಡ ನನ್ನೊಳಗಿದ್ದ ಬರಹಗಾರ್ತಿಯನ್ನು ಜಾಗೃತಗೊಳಿಸಿತು. ಈ ಕನ್ನಡ ನೆಲವೇ ನನಗೆ ಬರಹಗಾರ್ತಿಯನ್ನಾಗಿ ಮಾಡಿತು. ಆದರೆ ಈಗ ಭಾಷೆ ಎನ್ನುವುದು ಸೌಹಾರ್ದದ ಸೇತುವೆಯಾಗುವ ಬದಲು ದಹನದ ಉರುವಲಾಗುತ್ತಿದೆ. ಅದನ್ನು ತಡೆಯವುದು ಹೊಣೆ ನಮ್ಮೆಲರದ್ದು ಎಂಬ ಜವಾಬ್ದಾರಿಯುತ ಮಾತನ್ನು ಹಂಚಿಕೊಂಡರು.
ಮಯೂರ ವರ್ಮ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ, ನಾಟಕಕಾರ ಬೇಲೂರು ರಘುನಂದನ್ ಮಾತನಾಡಿ, ಧಾರಣಾ ಶಕ್ತಿ ಇರುವ ಬೀಜ ಬಿತ್ತಿದಾಗ ಮಾತ್ರ ಅದು ಸಸಿಯಾಗುವಂತೆ ಹಿರಿಯ ಸಾಹಿತಿಗಳು ಬಿತ್ತಿದ ಸಾಹಿತ್ಯ ಬೀಜವೇ ಇಂದು ಯುವ ಸಾಹಿತಿಗಳು ಹುಟ್ಟುವುದಕ್ಕೆ ಕಾರಣವಾಗಿದೆ. ಕನ್ನಡದ ಪ್ರಜ್ಞೆ ಮೂಡಿಸುವ ಮೂಲಕ ಕನ್ನಡ ಉಳಿಸಿ ಬೆಳೆಸುವ ಕೆಲಸ ಎಲ್ಲರೂ ಸೇರಿ ಮಾಡಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ | ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ
ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ, ಹಿರಿಯ ಕವಯತ್ರಿ ಸವಿತಾ ನಾಗಭೂಷಣ, ಕ.ರಾ.ರ.ಸಾ.ಸಂ. ಕೇಂದ್ರ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ, ಕಸಾಪ ಗೌರವ ಕಾರ್ಯದರ್ಶಿ ನೆ.ಭ ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್. ಪಟೇಲ್ ಪಾಂಡು, ಪರಿಷತ್ ಪ್ರಕಟಣಾ ಸಮಿತಿ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ, ಪರಿಷತ್ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಮತ್ತಿತರರು ಇದ್ದರು.
ಕರ್ನಾಟಕ
Samskruta Yuvajanotsava: ಸಂಸ್ಕೃತ ತಳಪಾಯದಿಂದಲೇ ಭಾರತೀಯ ಸಾಹಿತ್ಯ ಸೌಧ ಸುಭದ್ರ: ಎಂ.ಎಸ್. ನರಸಿಂಹಮೂರ್ತಿ
Samskruta Yuvajanotsava: ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರೂ ಸಂಸ್ಕೃತವನ್ನು ತಿಳಿದುಕೊಳ್ಳುವುದು ಅವಶ್ಯ ಎಂದು ಹಾಸ್ಯ ಬರಹಗಾರ ಎಂ. ಎಸ್. ನರಸಿಂಹಮೂರ್ತಿ ತಿಳಿಸಿದ್ದಾರೆ.
ಬೆಂಗಳೂರು: ಸಂಸ್ಕೃತವು (Samskruta Yuvajanotsava) ಎಲ್ಲ ಭಾಷೆಗಳ ಸಾಹಿತ್ಯಕ್ಕೆ ಅಡಿಪಾಯವಾಗಿದ್ದು, ಅದರಿಂದಲೇ ಭಾರತೀಯ ಸಾಹಿತ್ಯವು ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯವಾಗಿದೆ ಎಂದು ಹೆಸರಾಂತ ಹಾಸ್ಯ ಬರಹಗಾರ ಎಂ. ಎಸ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಮಲ್ಲೇಶ್ವರದ ಎಂಇಎಸ್ ಮಹವಿದ್ಯಾಲಯದ ಕಲಾವೇದಿ ವೇದಿಕೆಯಲ್ಲಿ ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಸಂಸ್ಕೃತ ಯುವಜನೋತ್ಸವ’ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ಜನ್ಯ ಪದಗಳನ್ನು ಅನೇಕ ಪ್ರಸಂಗಗಳಲ್ಲಿ ತಪ್ಪಾಗಿ ಬಳಸಲಾಗುತ್ತದೆ. ಇದರಿಂದ ಅಪಾರ್ಥವು ಬರುವ ಸಾಧ್ಯತೆಯೇ ಹೆಚ್ಚು. ಸಂಸ್ಕೃತ ಅಧ್ಯಯನದಿಂದ ಮಾತ್ರವೇ ಭಾಷಾ ಶುದ್ಧತೆಯ ಅರಿವಾಗುತ್ತದೆ. ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರೂ ಸಂಸ್ಕೃತವನ್ನು ತಿಳಿದುಕೊಳ್ಳುವುದು ಅವಶ್ಯ ಎಂದು ತಿಳಿಸಿದರು.
ಇದನ್ನೂ ಓದಿ | Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?
ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ಸುಬ್ರಹ್ಮಣ್ಯ ಕುಳೇದು ಅವರು ಮಾತನಾಡಿ, ಇಂದು ಆಂಗ್ಲ ಶಿಕ್ಷಣವು ಬದುಕುವ ಕಲೆಯನ್ನು ಕಲಿಸಿಕೊಡುತ್ತಿಲ್ಲ. ಹಾಗಾಗಿ ಈ ನೆಲದಲ್ಲಿ ಹುಟ್ಟಿ, ವಿದ್ಯಾಭ್ಯಾಸವನ್ನು ಕಲಿತು ನೌಕರಿಗಾಗಿ ವಿದೇಶಕ್ಕೆ ತೆರಳುವ ಯುವಕರು ಮಕ್ಕಳ ಲಾಲನೆಯ ಕೆಲಸ ಬಂದಾಗ ತಮ್ಮ ಪೋಷಕರನ್ನು ತಾವಿರುವಲ್ಲಿಗೆ ಕರೆಸಿಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮೈತ್ರೀ ಪ್ರತಿಷ್ಠಾನದ ಸಂಸ್ಥಾಪಕ, ಅಂಕಣಕಾರ ಡಾ. ಗಣಪತಿ ಹೆಗಡೆ ಅವರ ‘ಮನಸು ಅರಳಲಿ’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಸಂಸ್ಕೃತ ಕಾರ್ಯಾಗಾರದಲ್ಲಿ ಇಡೀ ದಿನ ಸಂಸ್ಕೃತದಲ್ಲಿ ವಿಜ್ಞಾನ ವಿಷಯದ ಕುರಿತು ಡಾ. ಮುರಳೀಧರ ಶರ್ಮಾ, ಆಯುರ್ವೇದದ ಕುರಿತು ಡಾ. ನಿರಂಜನ ಯಳ್ಳೂರು ಸವಿವರವಾಗಿ ತಿಳಿಸಿಕೊಟ್ಟರು. ಕಲಾವಿದೆ ಭವಾನಿ ಹೆಗಡೆ ಹಾಗೂ ತಂಡದವರು ಪ್ರಸ್ತುತಪಡಿಸಿದ ಸಂಸ್ಕೃತ ಗೀತೆಗಳ ‘ಸಾಮರಸ್ಯಮ್’ ಆರ್ಕೆಸ್ಟ್ರಾ ಪಾಲ್ಗೊಂಡವರ ಮನಸನ್ನು ತಣಿಸಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಐಐಎಸ್ಸಿ ನಿವೃತ್ತ ವಿಜ್ಞಾನಿ ಡಾ. ಕೆ. ಜೆ. ರಾವ್ ಮಾತನಾಡಿ, ವಿಷ್ಣು ಸಹಸ್ರನಾಮ, ಭಗವದ್ಗೀತೆಯು ಹೇಳಿಕೊಡುವ ವಿಜ್ಞಾನವನ್ನು ವೈಜ್ಞಾನಿಕವೆನಿಸಿದ ಈ ಯುಗದ ಯಾವ ಜ್ಞಾನಶಾಖೆಯೂ ತಿಳಿಸಿಕೊಡುವುದಿಲ್ಲ. ಇಂದಿನ ವಿಜ್ಞಾನವು ಕಂಡುಕೊಳ್ಳದ ಎಷ್ಟೋ ಸಂಗತಿಗಳನ್ನು ಭಗವಂತನು ಮನುಷ್ಯನ ದೇಹದಲ್ಲಿಯೇ ಇರಿಸಿದ್ದಾನೆ ಎಂದು ವಿವರಿಸಿದರು.
ಚಲನಚಿತ್ರ ನಟ. ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರು ಮಾತನಾಡಿ, ಕನ್ನಡ ಚಿತ್ರರಂಗದ ಮೇಲೆ ಇತ್ತೀಚಿನ ದಿನಗಳಲ್ಲಿ ಸಂಸ್ಕೃತ ಭಾಷಾ ಪ್ರಭಾವವು ಉಂಟಾಗುತ್ತಿದೆ. ಇತ್ತೀಚೆಗೆ ಅನೇಕರು ತಮ್ಮ ಚಿತ್ರಗಳ ಶೀರ್ಷಿಕೆಗಾಗಿ ಸಂಸ್ಕೃತ ಭಾಷೆಯ ಪದಗಳ ಮೊರೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆಯೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಕೃತ ಕ್ಷೇತ್ರದಲ್ಲಿ 70ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ವಿದ್ವಾಂಸರಾದ ಪ್ರೊ. ಶೇಷಾದ್ರಿ ಅಯ್ಯಂಗಾರ್ ಅವರನ್ನು ಹಾಗೂ ಸಂಸ್ಕೃತ ಕಾರ್ಯಕ್ಷೇತ್ರದಲ್ಲಿ ಪದೋನ್ನತಿ ಹೊಂದಿದ ವಿದ್ವಾನ್ ನಾರಾಯಣ ಅನಂತ ಭಟ್ಟ, ವಿ.ಡಿ. ಭಟ್, ಡಾ. ಕೃಷ್ಣಮೂರ್ತಿ ಮಯ್ಯ ಅವರನ್ನು ಮೈತ್ರೀ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಇದನ್ನೂ ಓದಿ | ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ
ಕಾರ್ಯಾಗಾರದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. 200ಕ್ಕೂ ಹೆಚ್ಚು ಸಂಸ್ಕೃತಾಸಕ್ತರು ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮೈತ್ರೀ ಪ್ರತಿಷ್ಠಾನದ ಸಂಸ್ಥಾಪಕ ಡಾ. ಗಣಪತಿ ಹೆಗಡೆ, ವಿಕ್ರಮ ಪ್ರಕಾಶನದ ಹರಿಪ್ರಸಾದ್, ಖ್ಯಾತ ಬರಹಗಾರ ಡಾ. ಗಣಪತಿ ಆರ್ ಭಟ್, ಚಿಂತಕ ಜೋತಿಶ್ವರ ಮತ್ತಿತ್ತರರು ಉಪಸ್ಥಿತರಿದ್ದರು.
-
ದೇಶ20 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ21 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್10 hours ago
Aadhaar Update: ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ21 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ22 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ12 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ13 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ15 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್