ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

ವಿಸ್ತಾರ ಯುಗಾದಿ ಕಥಾಸ್ಪರ್ಧೆ- 2023ರಲ್ಲಿ ಮೊದಲ ಬಹುಮಾನ ಗಳಿಸಿ, ರೂ.55,000 ತನ್ನದಾಗಿಸಿಕೊಂಡ ಕಥೆ ʼಸೋಮನ ಕುಣಿತʼ ಇಲ್ಲಿದೆ.

VISTARANEWS.COM


on

somana kunitha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸ್ಪರ್ಧೆಗೆ ಬಂದ 1,118 ಕತೆಗಳಲ್ಲಿ ಮೊದಲ ಬಹುಮಾನ ತನ್ನದಾಗಿಸಿಕೊಂಡ ಕಥೆ ಇಲ್ಲಿದೆ

chandrashekar DR
ಚಂದ್ರಶೇಖರ ಡಿ.ಆರ್

:: ಚಂದ್ರಶೇಖರ ಡಿ.ಆರ್.‌

“ಓಓಓಓಓಹ್
ಆರು ಕೋಳಿ ನಿನಗೆ
ಸೂರಬೆಲ್ಲ ನಿನಗೆ
ದಾವಣಿ ಕುರಿಕೋಳಿ ನಿನಗಿಲ್ಲಿ…
ದಾವಣಿ ಕುರಿಕೋಳಿ ನಿನಗಿಲ್ಲಿ…
ಗ್ರಾಮ ಕಾದಿರುವ ಗರತೀಗೆ…”

ಅಸಾದಿ ಉನ್ಮತ್ತನಾಗಿ ಹಾಡುತ್ತಿದ್ದ. ಪ್ರತಿ ಪದಗಳಾದ ಮೇಲೂ ತಮಟೆಯಂತಿರುವ ರಣ ಹಲಗೆ ನೆಲಕ್ಕೆ ಅಭಿಮುಖವಾಗಿ ಹಿಡಿದು ಬಡಿಯುತ್ತಾ ಮುಂದುವರೆಯುತ್ತಿದ್ದ. ಪ್ರತೀ ಬಾರಿ ಹಾಡಿನ ಸಾಲು ಹೇಳಿ ನಿಂತಾಗಲೂ ವಾದ್ಯಗಳು ಜೋರಾಗುತ್ತಿದ್ದವು. ಅಸಾದಿಯ ಪದಗಳಿಗೆ ಶ್ಲೀಲ-ಅಶ್ಲೀಲಗಳ ಗಡಿಯಿಲ್ಲ. ಇದು ಕೊಂಡಮ್ಮ ದೇವಿ ಸಮ್ಮುಖದಲ್ಲಿ ನಡೆಯುತ್ತಿರುವ ಘಟನಾವಳಿಗಳು. ಕಳಸ ಹೊತ್ತು ನಿಂತ ಹೆಣ್ಣುಮಗಳು ಹಿಂದೆಮುಂದೆ ತೂಗುತ್ತಿದ್ದಾಳೆ. ಕೆಳ ಅರ್ಧಬಾಗ ಚಿವುಟಿ ಹೊಂಬಾಳೆಯ ತುದಿಗೆ ಜೋಡಿಸಿದ್ದ ಕನಕಾಂಬರ ಮತ್ತು ಮಲ್ಲಿಗೆ ಹೂಗಳು ತೂಗುವಿಕೆಗೆ ಅನುಗುಣವಾಗಿ ಹೊಂಬಾಳೆ ಗರಿಗಳೊಂದಿಗೆ ಒಯ್ದಾಡುತ್ತಿವೆ. ಅದೇ ಸಮಯಕ್ಕೆ ಸೋಮನನ್ನು ಹೊತ್ತಿದ್ದ ರಂಗಯ್ಯನ ಆಗಮನವಾಗಿತು. ಒಂದೊಂದೆ ಹೆಜ್ಜೆ ತಮಟೆ, ಅರೆ, ದೋಣಿನ ಲಯಕ್ಕೆ ಅನುಗುಣವಾಗಿ ಭೂಮಿಗೆ ದೊಪ್ಪನೆ ಇಡುತ್ತಿದ್ದಾನೆ. ಕುಣಿತದಲ್ಲಿ ತನ್ಮಯತೆಯಿದೆ ಅವ್ಯಕ್ತ ಆಲಾಪವಿದೆ. ಸುಮಾರು ಇಪ್ಪತ್ತರ ಆಸುಪಾಸಿನ ವಯಸ್ಸು ಕಟ್ಟುಮಸ್ತಾದ ದೇಹ. ಎಲ್ಲರೂ ಎಲ್ಲವೂ ನಿಶ್ಯಬ್ಧ. ವಾದ್ಯಗೋಷ್ಟಿಗಳದಷ್ಟೇ ಅಬ್ಬರ. ಒಂದೋ ರಂಗನ ಪಾದ ಮರಗಟ್ಟಿ ನಿಲ್ಲಬೇಕು, ಇಲ್ಲ ದೇವಿಯೇ ಎದ್ದು ಬಂದು ಸಾಕು ಎನಬೇಕು.

ಕಥೆಯ ಬಗ್ಗೆ ತೀರ್ಪುಗಾರರು ಬರೆದ ಟಿಪ್ಪಣಿ ಇಲ್ಲಿದೆ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು

ಬೂತಾಳೆ ಮರದಿಂದ ತಯಾರಿಸಿದ ಸೋಮನ ಮುಖವಾಡ. ಅಗಲವಾದ ಹಣೆ, ವಿಶಾಲವಾದ ಕಣ್ಣು, ಕಿವಿ, ದೊಡ್ಡ ಮೂಗು. ಬಿದಿರಿನಿಂದ ರಂಗಯ್ಯನ ಹಿಂದೆ ಕಮಾನಿನಂತೆ ರಚಿಸಿ ವಿವಿಧ ಬಣ್ಣ ಬಣ್ಣದ ಸೀರೆಗಳನ್ನು ಇಳಿಬಿಟ್ಟು ಪ್ರಭಾವಳಿಯನ್ನು ರಚಿಸಲಾಗಿದೆ. ಕಾಲಿಗೆ ಗೆಜ್ಜೆ, ಕೈಗಳಿಗೆ ಕಡಗಗಳು, ಹಾಗೆ ಮೂರೇ ಬೆರಳಿದ್ದ ಎಡಕೈಯಲ್ಲಿ ಬೆಳ್ಳಿ ಕಟ್ಟಿನ ನೀಳವಾದ ಬೆತ್ತ. ಕೊಂಡಮ್ಮಳಿಗೆ ಇಬ್ಬರು ಸೋಮರು ಅಂಗರಕ್ಷಕರು. ರೌದ್ರನಾದ ಕೆಂಪುಸೋಮನಿಗೆ ನಾಮಬಳಿದಿದ್ದಾರೆ. ಹಳದಿ ಬಣ್ಣದ ಸೋಮ ವಿಭೂತಿ ಬಳಿದುಕೊಂಡ ಸೌಮ್ಯಮೂರ್ತಿ. ರಂಗನ ತಮ್ಮ ಸುಮ್ಮನೆ ಹೊತ್ತು ನಿಂತಿದ್ದಾನೆ. ಸುತ್ತ ಹತ್ತು ಹಳ್ಳಿಗಳನ್ನು ಹುಡುಕಿದರೂ ಹದಿನೈದು ಕೆ.ಜಿ.ಗೂ ಮಿಕ್ಕಿ ತೂಕದ ರೌದ್ರ ಸೋಮನನ್ನು ರಂಗಯ್ಯನಂತೆ ಹೊತ್ತು ಕುಣಿಯುವವರು ಯಾರೂ ಇಲ್ಲ. ಇಲ್ಲಿ ಯಾವುದಕ್ಕೂ ಪ್ರಶ್ನೆಯೂ ಇಲ್ಲ ಉತ್ತರವೂ ಇಲ್ಲ.

ಮಾರನೇದಿನ ಕೊಂಡಮ್ಮ ದೇವಿಯ ದೇವಾಲಯದ ಮುಂದೆ ವಿಶೇಷ ಕೊಂಡ ವ್ಯವಸ್ಥೆ. ಎಲ್ಲರೂ ಭಕ್ತಿ ಭಾವದಿಂದ ಮೈಮರೆತರು. ಇಲ್ಲದ್ದನ್ನು ತಾಯಿಯ ಹತ್ತಿರ ಬೇಡಿಕೊಂಡರು. ತಮ್ಮೊಳಗಿನ ಬೇಗೆಯನ್ನೂ ಕಾವನ್ನೂ ದೇವಿಯ ಮುಂದೆ ತುಳಿದು ಹೋಗಬೇಕು. ಸೋಮನ ಹೊತ್ತೇ ಮೊದಲನೆಯವನಾಗಿ ಕೊಂಡ ತುಳಿದು, ಅದರ ಕಾವು ತಣಿಯುವ ಮೊದಲೇ ಸಿರಾದ ಬೇವಿನಹಳ್ಳಿಯ ಕಲಾತಂಡದೊಟ್ಟಿಗೆ ರಂಗಯ್ಯ ಮರೆಯಾದ. ಹೋಗುವಾಗ ಹಟ್ಟಿಗಳೆಡೆ ಒಮ್ಮೆ ತಿರುಗಿದವ ಮತ್ತೆ ತಿರುಗಲಿಲ್ಲ. ಅಲ್ಲಿಂದ ಅವನ ಸುಳಿವೆ ಇಲ್ಲ. ಬೆಂಗಳೂರಿಗೆ ಯಾವುದೋ ಕೆಲಸದ ನಿಮಿತ್ತಾ ಹೋದ ಊರವರೊಬ್ಬರು ಯಾವುದೋ ಕಲೋತ್ಸವದಲ್ಲಿ ಕಂಡರಂತೆ. ಆಮೇಲೆ ಅವನ ಬಗ್ಗೆ ಒಂದು ಮಾತೂ ಇಲ್ಲ.

**

ಸಾಕವ್ವ ಕರ್ ಮೀನ್ ಸಾರ್ ಮಾಡಿ ಊಟಕ್ಕಿಟ್ಟು ಆಚೆ ಬಂದು ನೋಡೊದ್ರೊಳಗೆ ಒಟ್ಟು ಮಾಡಿದ್ದ ಕಸಾನೆಲ್ಲಾ ಪಿಳ್ಳೆಗುಳ್ನ ಬೆನ್ನಿಗಾಕಂಡು ಓಡಾಡ್ತಿದ್ದ ರತ್ನಿ ಯಾಟೆ ಕೆದಕಿ ಹಾಕಿತ್ತು. ಪಿಳ್ಳೆಗುಳ್ನ ನೆನ್ನೆ ಹಂಗೆ ಹದ್ದು ಕದ್ದೋಯ್ವಾಗ ಮತ್ತೆ ತಡಿಬಾರ್ದು ಅನ್ಕಂಡು ಶಪಿಸುತ್ತಾ, ಮತ್ತೆ ಗುಡಿಸಿಹಾಕಲು ಸೊಂಪ್ಲಿನ ಕಡೆ ತೆಂಗಿನ್ ಗರಿ ಪರ್ಕೆ ತೆಗೆದುಕೊಳ್ಳುವುದಕ್ಕೆ ಹೋದಳು. ಒಳಗೆ ಕೂತು ಬೆಂದ ಕಡ್ಲೆಕಾಳಿಗೆ ಕರಿಮೀನು ತೋಯಿಸಿ ಮೆಲ್ಲುತ್ತಿದ್ದ ನರಸಿಂಹಯ್ಯ ಜನ್ರ ಬಾಯಲ್ಲಿ ಬರಬರುತ್ತ ನರಸುಮ್ಮಣ್ಣನಿಗೆ ಹೆಂಡತಿ ಹೊರಗೆ ನಿಂತು ಹೇಳುತ್ತಿದ್ದ ಯಾವ ಮಾತುಗಳು ಕಿವಿಯ ಮೇಲೆ ಬೀಳುತ್ತಿರಲಿಲ್ಲ. ಕೆಲವು ದಿನಗಳಿಂದ ಅವನು ಅನ್ಯಮನಸ್ಕನಾಗಿ ಇರುವುದಕ್ಕೆ ಬಲವಾದ ಕಾರಣಗಳು ಇದ್ದವು.

ಜೀವನೋಪಾಯಕ್ಕೆ ಅಂತ ಇದ್ದ ತಮಟೆಯ ಚರ್ಮ ಸವೆದು ಹರಿದು ತಿಂಗಳಾಗುತ್ತಾ ಬಂದಿದೆ. ದುಸ್ತರ ಬದುಕು. ಪಕ್ಕದೂರು ದೊಡ್ಡಮಧುರೆ ಮತ್ತು ಸ್ವಾಂದೇನಾಹಳ್ಳಿಯಲ್ಲಿ ಮುಂದಿನ ತಿಂಗಳು ಜಾತ್ರೆಗೆ ಕಡಿಯುವ ಕೋಣದ ಚರ್ಮಕ್ಕೆ ಇನ್ನಿಲ್ಲದಂತೆ ಕಾಯುವ ಹಾಗೆ ಆಗಿದೆ. ಮಗಳು ಪುಟ್ಟಕ್ಕನನ್ನು ಕೊಟ್ಟಿರುವುದು ಅದೇ ದೊಡ್ಡ ಮಧುರೆಗೆ.ತುಂಬಾ ಅನುಕೂಲಸ್ಥರೇನಲ್ಲದಿದ್ದರೂ ಅಳಿಯ ಪಕ್ಕದ ಸ್ವಾಂದೇನಾಹಳ್ಳಿಯಲ್ಲಿ ಬಂಡೆ ಕೆಲಸಕ್ಕೆ ಹೋಗುತ್ತಾನೆ. ಮಗಳ ಬದುಕು ಹೇಗೋ ಕಟ್ಟಿಕೊಂಡಿದೆ. ಜಾತ್ರೆಗೆ ಮಗಳ ಮನೆಗೆ ಹೋಗುವ ಶಾಸ್ತ್ರವು ಜೊತೆಗೆ ನಡೆಯುತ್ತದೆ. ಅದಾಗಿ ತಮಟೆಗೆ ಚರ್ಮ ಸಿಕ್ಕರೆ ಸುತ್ತ ಊರುಗಳಲ್ಲಿ ನಡೆಯುವ ಜಾತ್ರೆ, ಸಾವಿನ ಮನೆಗಳು ಮತ್ತು ಊರ ಸುದ್ದಿ ಸಾರುವುದು ಇದನ್ನೆಲ್ಲಾ ಮಾಡಿಕೊಂಡು ಹೇಗೋ ಜೀವನ ಒಂದು ಹದಕ್ಕೆ ಬರುತ್ತದೆ. ಮೊದಲಾದರೆ ಮರಿ-ಕೋಣ ಬಲಿಕೊಡುವವರು ತಮಟೆಯವರಿಗಾಗೆ ಮಿಸಲಿಟ್ಟು ಕೊಡುತ್ತಿದ್ದರು. ಕಾಲ ಬದಲಾಗಿ ಆ ಸಂಪ್ರದಾಯವೂ ಮುರುಟಿಹೋಗಿದೆ. ಬರಗಾಲವಾದದ್ದರಿಂದ ಕೂಲಿ ಕೆಲಸವು ಅಷ್ಟಾಗಿ ಸಿಗುತ್ತಿಲ್ಲ. ಇದೆಲ್ಲಾ ಯೋಚನೆಗಳಲ್ಲಿ ನರಸುಮ್ಮಣ್ಣ ಮುಳುಗಿಹೋಗಿದ್ದಾನೆ. ನೆನಪಿನ ದೋಣಿ ಹಿಮ್ಮುಕವಾಗಿ ಚಲಿಸುತ್ತಿತ್ತು.


ಸುಮಾರು ಅರವತ್ತರ ದಶಕ. ದೇವರಾಯನದುರ್ಗದ ತಪ್ಪಲಲ್ಲಿ ಇದ್ದ ಕೊಂಡಜ್ಜಿ ಗ್ರಾಮದ ಹೊಲೆ-ಮಾದಿಗರ ಕೇರಿ ಗೊತ್ತಿದ್ದು ಗೊತ್ತಿಲ್ಲದೇ ಭಾರತದ ಭೂಪಟದಲ್ಲಿ ಉಚಿತವಾಗಿ ಬರುವ ಶ್ರೀಲಂಕಾದ ಹಾಗೆ ಊರ ಹೊರಗೆ ಐದಾರು ಹಟ್ಟಿಗಳಿಗೆ ವ್ಯಾಪಿಸಿ ಊರಿನ ಭಾಗವಾ ಅನ್ನುವ ಅನುಮಾನದೊಟ್ಟಿಗೆ ಇತ್ತು. ಈ ಕಡೆ ಹಟ್ಟಿಯ ಮೊದಲನೆ ಮನೆಯಲ್ಲಿ ಸೀನಿದರೆ ಕೊನೆಯ ಸಾಲಿನ ಕೊನೆಯ ಮನೆಯ ಕೆಂಪಣ್ಣನೂ ಯಾರ ಸೀನೆಂದು ಊಹಿಸುವಷ್ಟು ಚಿಕ್ಕ ಪ್ರಪಂಚ. ಮೇಗಳ ಹಟ್ಟಿಯ ಮೂಲೆ ಮನೆಯವರ ಹೊಲ-ತೋಟದಲ್ಲಿ ಕೂಲಿ ಕೆಲಸ, ಬಡಗಿ, ಚಮ್ಮಾರಿಕೆ ಇವು ಮುಖ್ಯ ಕಸುಬುಗಳು. ಆಗಾಗ್ಗೆ ಹಟ್ಟಿಯಲ್ಲಿ ತಮಟೆಯ ಸದ್ದು ಊರನ್ನೇ ಎಚ್ಚರಿಸುತ್ತಿತ್ತು. ಅದು ಕುಂಭಿಯ ಮನೆ.

ಕಥಾಸ್ಪರ್ಧೆಯ ಬಹುಮಾನ ವಿರತಣೆ : ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ‌ ಚಂದ್ರಶೇಖರ್

ತಮಟೆ ಕುಂಭಯ್ಯನಿಗೆ ಇಬ್ಬರು ಮಕ್ಕಳು. ರಂಗಯ್ಯ ಮತ್ತು ನರಸಿಂಹಯ್ಯ. ದೇವರಾಯನದುರ್ಗದ ಕುಂಭಿ ನರಸಿಂಹನಿಗೆ ಹರಕೆ ಹೊತ್ತು ಹುಟ್ಟಿದ ಕಾರಣಕ್ಕೆ ಮಗನಿಗೂ ದೇವರ ಹೆಸರೇ ಇಟ್ಟಿದ್ದರು. ಚಿಕ್ಕವಯಸ್ಸಿಂದ ತಮಟೆ, ಹರೆ, ದೋಣು, ನಗಾರಿಯ ಬಗ್ಗೆ ಆಸಕ್ತಿ ಹುಟ್ಟಿ ಅವರಿವರ ಹಿಂದೆ ತಿರುಗಿ ತಮಟೆ ಬಾರಿಸುವುದು ಚರ್ಮ ಹದಗೊಳಿಸಿ ವಾದ್ಯ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಎರಡನೇ ಮಗ ಹುಟ್ಟಿ ಐದಾರು ವರ್ಷಕ್ಕೆ ಹೆಂಡತಿ ಜ್ವರವೆಂದು ಮಲಗಿ ಮತ್ತೆ ಉಸಿರಾಡಿರಲಿಲ್ಲ. ಅವನ ಕೋಪದ ಜ್ವಾಲೆ ಪರಿಚಯವಿದ್ದುದರಿಂದ ಯಾರು ಅವನಿಗೆ ಹೆಣ್ಣು ಕೊಡಲು ಮುಂದೆ ಬಂದಿರಲಿಲ್ಲ. ಇಬ್ಬರು ಮಕ್ಕಳಾದ ಮೇಲೆ ದೇವರ ಮೇಲಿದ್ದ ಭಕ್ತಿಗೋ ಊರಿನ ಕೊಂಡಮ್ಮತಾಯಿಯ ಅನುಗ್ರಹವೋ ಇಬ್ಬರು ಮಕ್ಕಳಿಗೂ ತಮಟೆ ಕಟ್ಟುವುದು ಮತ್ತು ಕೊಂಡಮ್ಮಳಿಗೆ ಅಂಗರಕ್ಷಕರಂತಿದ್ದ ಸೋಮರ ಕುಣಿತ ಕಲಿಸಿ ಬದುಕು ಹಸನು ಮಾಡಬೇಕೆಂದು ತವಕಿಸುತ್ತಿದ್ದ.

ಮೊದಲ ಮಗ ರಂಗಯ್ಯನಿಗೆ ಅದೆಷ್ಟು ಬಾರಿ ತೀಡಿ ತಿದ್ದಿದರೂ ತಮಟೆ ಚರ್ಮ ಹೊಸೆಯುವ ಕಲೆ ಒದಗಿಬರಲಿಲ್ಲ. ಸೋಮನ ಕುಣಿತದಲ್ಲಿ ನೈಪುಣ್ಯತೆ ಇದ್ದರೂ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿದುದರಿಂದ ಅದರಿಂದ ಬರುತ್ತಿದ್ದ ಆದಾಯವು ಅಷ್ಟಕಷ್ಟೆ. ಪ್ರತೀಕಾರವೆಂಬಂತೆ ಬಂದು ಹೋದವರ ಮುಂದೆ ಮಗನ ದಡ್ಡತನಕ್ಕೆ ಬಯ್ಯೋದು ಅವಮಾನಿಸೋದು ತುಚ್ಛವಾಗಿ ಮಾತನಾಡಿ ಹೀಯಾಳಿಸುವುದು ಯಥೇಚ್ಛವಾಗಿ ನಡೆಯುತ್ತಿತ್ತು. ಅವತ್ತೊಂದು ದಿನ ರಂಗಯ್ಯನ ಸಂಯಮದ ಕಟ್ಟೆಯೂ ಓಡೆದಿತ್ತು. ಅವತ್ತು ಮಗ ಗೊತ್ತಾಗದಂತೆ ಬಿಸಿಲಿಗೆ ಒಣಗಲು ಇಟ್ಟಿದ ಅಪರೂಪಕ್ಕೆ ಸಿಕ್ಕಿದ ಎರಡು ಮೂರು ಕರ ಈದ ದನದ ಚರ್ಮ ತುಳಿದ ಕಾರಣಕ್ಕೆ ವ್ಯಾಘ್ರನಾದ ಕುಂಭಯ್ಯ ಮಗನ ಮೇಲೆ ಹಾರಿಹಾಯ್ದಿದ್ದ. ದುಡಿಯುವ ಮಾರ್ಗ ಹಿಡಿತಿಲ್ಲ ಎನ್ನೋ ಕೋಪಕ್ಕೆ ಕಾಲಲ್ಲಿ ಒದ್ದು ಜುಟ್ಟು ಹಿಡಿದು ಕೊಂಡಮ್ಮನ ದೇವಸ್ಥಾನದ ಕೊಂಡ ಹಾಯುವ ಜಾಗದಲ್ಲಿ ಎಳೆದುಹಾಕಿ ಬಂದಿದ್ದ. ವ್ಯಾಕುಲನಾದ ರಂಗಯ್ಯ, ಮನೆಗೆ ರೊಯ್ಯನೆ ಬಂದು ಕಡಗೋಲು ತೆಗೆದುಕೊಂಡು ಎಡಗೈ ಹೆಬ್ಬೆರಳು ತೋರ್ಬೆರಳೆರಡನ್ನೂ ಕಡಿದುಕೊಂಡಿದ್ದ. ಸುದ್ದಿ ಕೇಳಿ ಹಟ್ಟಿಗೆ ಹಟ್ಟಿಯೇ ಬೆಚ್ಚಿ ಬಿದ್ದಿತ್ತು.ಇನ್ಯಾವತ್ತು ತಮಟೆ ವಿಚಾರ ಮಗನ ಮುಂದೆ ಮಾತನಾಡಲು ತಂದೆಗೆ ಧೈರ್ಯ ಬರಲಿಲ್ಲ.ಮಗ ತಮಟೆಯನ್ನು ಮುಟ್ಟಲು ಆಗಲಿಲ್ಲ.

ಅದಾದ ಮೇಲೆ ರಂಗಯ್ಯ ಮೊದಲಿನಂತೆ ಇರಲಿಲ್ಲ. ತಂದೆಯನ್ನು ಮಾತಾಡಿಸದೇ ತನ್ನ ಪಾಡಿಗೆ ತಾನಿರುತ್ತಿದ್ದ. ಕರಗತ ಮಾಡಿಕೊಂಡಿದ್ದ ಸೋಮನ ಕುಣಿತ ಕೊಂಡಮ್ಮನ ಜಾತ್ರೆಯ ದಿನ ತಂದೆಯನ್ನೇ ಚಕಿತಗೊಳಿಸಿತ್ತು. ದೈತ್ಯ ಕೋರೆಹಲ್ಲು ಚಿತ್ರ ಎದೆ ಎಲುಬನ್ನು ಇರಿಯುವಂತಿತ್ತು. ಸೋಮನ ಮೂಗಿನಿಂದ ಹೊರಬರುತ್ತಿದ್ದ ಬಿಸಿಯುಸಿರು ಸುಡುವಂತಿತ್ತು. ದೇವಿಯ ಒಂದು ಅಂಶಕ್ಕೇ ಕೇಡೆಸಗಿ ಪಾಪದ ಕೆಲಸ ಮಾಡಿದೆ ಎಂದು ಪಶ್ಚಾತಾಪದಲ್ಲಿ ಹಾಸಿಗೆ ಹಿಡಿದ ಕುಂಭಿ ತಿಂಗಳ ಜಾತ್ರೆಯಷ್ಟೊತ್ತಿಗೆ ಮಣ್ಣು ಸೇರಿದ. ಮಣ್ಣಿನ ದಿನ ರಂಗಯ್ಯನನ್ನ ಊರಿನವರು ಎಷ್ಟು ಹುಡುಕಿದರೂ ಎಲ್ಲಿಯೂ ಕಾಣಲಿಲ್ಲ. ಊರೂರು ಅಲೆಯುತ್ತಾ ಸೋಮ ಕುಣಿಯುತ್ತಾ ರಂಗಯ್ಯ ತನ್ನದೇ ದಾರಿಯಲ್ಲಿ ಆನೆಯಾಗತೊಡಗಿದ. ಕುಣಿಯುವ ಮುಂಚೆ ಸೋಮನ ಮುಂದೆ ಒಂದೆರಡು ನಿಮಿಷ ಕುಳಿತಿರುತ್ತಿದ್ದ ರಂಗಯ್ಯನ ಕಣ್ಣುಗಳು ನಿಗಿನಿಗಿ ಉರಿಯೋ ಕೆಂಡದಂತಾಗಿರುತ್ತಿದ್ದವು. ಬದುಕಲು ದಾರಿ ಅರಸುತ್ತಾ ಅಲೆಯುತ್ತಿದ್ದವನಿಗೆ ಸೋಮನ ಕುಣಿತ ಕೈಹಿಡಿದಿತ್ತು.

ಎರಡನೇ ಮಗನಿಗೆ ತಮಟೆ ಕಟ್ಟುವುದು ಒಲಿದು ಬಂದಿತ್ತು. ಧ್ಯಾನಸ್ಥನಾಗಿ ಕುಳಿತು, ತಂದ ಚರ್ಮವನ್ನು ನೆಲಕ್ಕೆ ಹರವಿ ಮೂರು ದಿನ ಸುಡು ಬಿಸಿಲಲ್ಲಿ ಎಳ್ಳಷ್ಟೂ ಹರಿಯದಂತೆ ಮೊಳೆ ಹೊಡೆದು, ಕುಂತು ಜತನದಿಂದ ಒಣಗಿಸುವುದು. ಒಣಗಿದ ಚರ್ಮ ನಿರಿಗೆ ಮಾಡಿ ಸುತ್ತಿ ನಂತರ ಅದನ್ನು ಕೆಲಕಾಲ ನೀರಲ್ಲಿ ನೆನೆಸಿಟ್ಟು, ನೆಂದ ಚರ್ಮವನ್ನು ಹರವಿ ಅದರ ಒಳಹೊರಗೆ ಕೊಳೆಯನ್ನು ವೈನ ಮಾಡಿ ತೆಗಿಯುತ್ತಿದ್ದ. ನೆಂದು ಹದವಾದ ಚರ್ಮದ ಕೂದಲನ್ನು ರಂಪಿನಿಂದ ತೆಗೆಯಬೇಕು. ಹಿಂದೆ ಮುಂದೆ ಚರ್ಮ ಕಸರನ್ನು ತೆಗೆದಾಗ ಅದು ಚರ್ಮದ ರೂಪ ಬಿಟ್ಟು ಬಿಳಿಹಾಳೆಯಂತಾಗುತ್ತಿತ್ತು. ಇಲ್ಲಿಗೆ ಸಂತಸದ ನಿಟ್ಟುಸಿರು. ಕೊನೆಗೆ ಹಸುವಿನ ಚರ್ಮದ ಲಾಡಿಯಂತ ಎಳೆಯಿಂದ ದುಂಡನೆಯ ಆಕಾರದ ಕಬ್ಬಿಣಕ್ಕೆ ಎಳೆದು ಕಟ್ಟಬೇಕು. ಇದೆಲ್ಲವೂ ಏಕಾಂತದಲ್ಲಿ ತುಂಬು ಭಕುತಿಯಿಂದ ಕೂತು ನರಸುಮ್ಮ ಮಾಡುತ್ತಿದ್ದ. ಅಣ್ಣ ತಮ್ಮಂದಿರಲ್ಲಿ ಅದೆಂತಾ ವೈರುಧ್ಯ, ಎರಡೂ ಭಕ್ತಿಯ ವಿಭಿನ್ನ ಮಾರ್ಗಗಳು. ಒಂದು ಬಿಟ್ಟರೆ ಒಂದಿಲ್ಲ.

ಅಣ್ಣ ರಂಗ ಕುಣಿಯುತ್ತಿದ್ದ ಸೋಮ, ಅಧಿಕ ದೈಹಿಕ ಕ್ಷಮತೆ ಬೇಡುವ ಕುಣಿತ. ಅಷ್ಟಾಗಿ ಅದರಲ್ಲಿ ನೈಪುಣ್ಯತೆಯನ್ನು ಸುತ್ತಲಿನ ಊರಿನ ಯಾವ ಗಂಡಾಳು ಹೊಂದಿರಲಿಲ್ಲ. ಹಳದಿ ಸೋಮನ ಜವಾಬ್ದಾರಿಯನ್ನು ನರಸುಮ್ಮ ಹೊತ್ತು ಕೆಲಕಾಲ ಸುಮ್ಮನೆ ನಿಂತಿರುತ್ತಿದ್ದ.ಅದಕ್ಕೆ ದೊರೆಯುತ್ತಿದ್ದ ಕಾಸು ಅಷ್ಟಕ್ಕಷ್ಟೆ. ಅದನ್ನ ಯಾರಾದರೂ ಮಾಡುತ್ತಿದ್ದರು. ಬಹುಮುಖ್ಯವಾಗಿ ತಮಟೆ ಕಟ್ಟುವುದ ನೆಚ್ಚಿಕೊಂಡಿದ್ದರಿಂದ ಕೋಣ, ದನ ಹಾಗು ಎರಡು ಮೂರು ಮರಿ ಹಾಕಿದ ಆಡಿನ ಚರ್ಮ ಸಿಕ್ಕಾಗ ಸಿದ್ಧಪಡಿಸಿಕೊಂಡಿರುತ್ತಿದ್ದ.


ಇದೆಲ್ಲಾ ಆಗಿ ಮೂರು ದಶಕಗಳು ಸಂದಿವೆ. ನರಸುಮ್ಮನಿಗೂ ಐವತ್ತು ಹತ್ತಿರ ವರ್ಷವಾಗಿದೆ. ಚರ್ಮವೂ ಸುಕ್ಕುಗಟ್ಟಿ ಇಳಿವಯಸ್ಸನ್ನು ಸಾರಿ ಹೇಳುತ್ತಿದೆ. ಜೀವನ ಮೊದಲಿನಂತೆ ಇಲ್ಲ. ಅದ್ಯಾವುದೋ ಸಂಘಟನೆಗಳ ಪರಿಣಾಮ ಜಾನುವಾರುಗಳ ಚರ್ಮ ಕೂಡ ಈಗ ಮೊದಲಿನಂತೆ ಸಿಗುತ್ತಿಲ್ಲ. ಸತ್ತದನದ ಬಳಿಯೂ ಹೋಗಬಾರದೆಂದು ಅದ್ಯಾರೋ ಬಂದು ತಾಕೀತು ಮಾಡಿದ್ದಾರೆ. ಚರ್ಮ ವಾದ್ಯಕ್ಕೆ ಪರ್ಯಾಯವಾಗಿ ಪ್ಲಾಸ್ಟಿಕ್ಕಿನಿಂದ ತಯಾರಿಸಿದ ವಾದ್ಯಗಳು ಕ್ಯಾತ್ಸಂದ್ರ ಸಂತೆಯಲ್ಲಿ ಸಿಗಲು ಶುರುವಾಗಿವೆ . ಅಪ್ಪ ಸತ್ತ ಮೂರನೇ ವರ್ಷದ ಜಾತ್ರೆಯ ದಿನ ಸೋಮನ ಕುಣಿಯುತ್ತಾ ರಂಗಯ್ಯ ಕೆಂಡ ತುಳಿದು ಪರವೂರಿನವರೊಂದಿಗೆ ಮರೆಯಾದವನು ಇಷ್ಟು ವರ್ಷವಾದರೂ ತಿರುಗಿ ಮನೆ ಕಡೆ ನೋಡಿಲ್ಲ. ಪ್ರತೀ ವರ್ಷ ಮಾರ್ನಾಮಿ ಹಬ್ಬಕ್ಕೆ ಅಪ್ಪನಿಗೆ ಎಡೆ ಇಡುವಾಗ ಅಣ್ಣನೂ ನೆನಪಾಗುತ್ತಿದ್ದ.

ಅವತ್ತು ಹಟ್ಟಿಯ ಬಾಗಿಲಲ್ಲಿ ಎರಡು ಮರದ ಕುರ್ಚಿಗಳು ನೆಲವೂರಿದ್ದವು. ಅದರಲ್ಲಿ ಎಡಭಾಗಕ್ಕೆ ಬಾಬು ಜಗಜೀವನ್ ರಾಮ್ ಬಲಭಾಗದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಗಳು. “ನೋಡಿ ನಿಮಗೆಲ್ಲಾ ಶಿಕ್ಷಣ ಇಲ್ಲ. ನಿಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟದ ಮನೋಭಾವ ಬೆಳೆಸಿಕೊಳ್ಳೋದು ತುಂಬಾ ಮುಖ್ಯ. ಸರ್ಕಾರ ಜಾನುವಾರು ವಧೆ ನಿಷೇಧ ವಿಧೇಯಕವನ್ನು ವಿರೋಧದ ಮಧ್ಯೆಯೂ ಜಾರಿಗೆ ತರುವ ಪ್ರಯತ್ನ ಮಾಡ್ತಿದೆ. ಪಕ್ಕದೂರಿನಲ್ಲಿ ಸತ್ತ ದನ ಮುಟ್ಟಿದ್ದಕ್ಕೆ ನಮ್ಮವರನ್ನ ಜೈಲಿಗೆ ಹಾಕಿದ್ದಾರೆ” ದಲಿತ ಸಂಘಟನೆಯ ಮುಖ್ಯಸ್ಥರೊಬ್ಬರು ನೀಲಿ ಬಣ್ಣದ ಶಾಲು ಹೆಗಲಿಗೇರಿಸಿಕೊಂಡು ಮಾತನಾಡುತ್ತಿದ್ದರು “ ಪ್ರಭುತ್ವದ ಕೆಲಸ ಎಂದೂ ಜನರ ತಟ್ಟೆಯಲ್ಲಿ ಏನಿರಬೇಕು ಎಂದು ಹೇಳುವುದಲ್ಲ. ಊಟ ಬಟ್ಟೆ ವಸತಿ ಇವು ಮೂಲಭೂತ ಅಗತ್ಯಗಳು.ಸಾಂವಿಧಾನಿಕವಾಗಿ ಯಾವುದೇ ತೊಡಕುಗಳಿಲ್ಲದೇ ಯಾವೊಂದೂ ಭೇದಭಾವವಿಲ್ಲದೆ ದೊರೆಯುವಂತಾಗಬೇಕು. ಇದು ಸಂವಿಧಾನದ ಆಶಯ”

“ಭೌಗೋಳಿಕವಾಗಿ ಅಷ್ಟೆ ಅಲ್ಲ ಆಹಾರದ ವಿಧಾನದಲ್ಲೂ ವೈವಿಧ್ಯತೆ ಇರುವ ದೇಶ ನಮ್ಮದು. ಮಠದ ಸ್ವಾಮಿಗಳು ಇಂದು ಶಾಲೆಯ ಮಕ್ಕಳಿಗೆ ಕೊಡುವ ಊಟದಲ್ಲಿ ನೇರವಾಗಿ ಅದು ಕೊಡಬೇಡಿ ಇದು ಕೊಡಿ ಅಂತ ಹೇಳುತ್ತಾರೆ. ಲೌಕಿಕ ಜಗತ್ತಿನ ಜೊತೆ ಅವರಿಗೆಂತಾ ನಂಟು. ಅದರಿಂದ ಅವರು ಸಾಧಿಸಬಲ್ಲಂತ ಸಾಮಾಜಿಕ ಬದಲಾವಣೆಯಾದರೂ ಏನು? ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಡವರ ಮಕ್ಕಳ ಬಗೆಗೆ ಇವರಿಗೇನಾದರೂ ಕಾಳಜಿ ಇದೆಯಾ, ಅದಕ್ಕೇನಾದರೂ ಇವರ ಬಳಿ ಉತ್ತರ ಇದೆಯಾ?. ನಮ್ಮಗಳ ಸಹನೆ ನಮ್ಮ ದುರ್ಬಲತೆ ಅಲ್ಲ.ನಮಗೂ ಧ್ವನಿ ಇದೆ ಹೋರಟದ ಕಿಚ್ಚು ನಮ್ಮ ಎದೆಯಲ್ಲಿ ಇದೆ. ಆ ಕಿಚ್ಚಿನಿಂದ ಅಸಮಾನತೆ ಸುಡೋ ಶಕ್ತಿ ಇದೆ ಅಂತ ನಿರೂಪಿಸೋ ಸಮಯ ಬಂದಿದೆ.” ರೋಷದಿಂದ ಅವರು ಮಾತಾಡುತ್ತಿದ್ದರು. ಮುಂದಿನ ತಿಂಗಳು ಡಿ.ಸಿ. ಆಫೀಸಿನ ಎದುರಿನ ಅಮಾನಿಕೆರೆ ಅಂಗಳದಲ್ಲಿ ಇದರ ವಿರುದ್ಧ ನಡೆಯುವ ತಮಟೆ ಚಳುವಳಿಗೆ ತಪ್ಪಿಸದೇ ಬಂದು ನಿಮ್ಮ ಪ್ರತಿರೋಧ ದಾಖಲಿಸಿ ಎಂದು ಕೆಲವು ಕರಪತ್ರ ಕೊಟ್ಟು ಹೊರಟು ಹೋದರು. ಜೀವನ ಮರುಕ್ಷಣವೇ ತನ್ನ ಹಳಿಗೆ ಮರಳಿತು.

“ತಮಟೆ ಇದ್ರೆ ಬಾ ಜೊತೆ ಹೋಗನ” ಸೀನಪ್ಪ ಮೂರ್ನಾಲ್ಕು ಜನರೊಟ್ಟಿಗೆ ಚೇಳೂರಿನ ಕರಿಯಮ್ಮ ದೇವರಿಗೆ ವಾದ್ಯಕ್ಕೆ ಹೋಗುವಾಗ ಅಂದಿದ್ದ. ಮೂರ್ನಾಲ್ಕು ದಿನದ ಜಾತ್ರೆಯಾದ್ದರಿಂದ ಒಳ್ಳೆ ದುಡಿಮೆಯಂತೂ ಆಗುತ್ತಿತ್ತು.

“ನೀನೇ ನೋಡಿದ್ಯಲ್ಲಾ ಎಂಗೆ ಆಗೈತೆ ಅಂತ. ಮಧುರೆ ಜಾತ್ರೆ ಆಗ್ಲಿ. ಆ ನಮ್ಮವ್ವ ಕಣ್ ಬಿಟ್ರೆ ವರ್ಸ್ವೆಲ್ಲಾ ಉಣ್ಬೋದು”

ಸ್ವಲ್ಪ ಹಿಂಜರಿಕೆಯಿಂದಲೆ ಸೀನಪ್ಪ “ಹಂಗೆ ಆಗ್ಲಿ. ಬರೋ ಹಂಗಿದ್ರೆ ಮೊಟಣ್ಣನ್ ತಮಟೆ ವಡಿವಂತೆ. ಅವ್ನಿಗೆ ಒಂದೀಟ್ ಕಾಸ್ ಕೊಟ್ರೆ ನಡಿತೈತೆ. ಅವ್ನು ಬತ್ತಾ ಇಲ್ಲ” ಎನ್ನುತ್ತಾ ತಮಟೆಯ ಹಿಂಬದಿ ಹುರಿ ಬಿಗಿಗೊಳಿಸಿದ.

ರೊಚ್ಚಿಗೆದ್ದ ನರಸುಮ್ಮಣ್ಣ “ಅಯ್ಯೋ ಅವ್ನ ಮಕಕ್ ನನ್ ಎಕ್ಡ ಸಿಗಾಕ. ತಮಟೆ ಚರ್ಮ ಇದ್ರು ಇಲ್ಲ ಅಂತಾನೆ. ಅವ್ನಂತಾವ್ ಏನ್ ಕೇಳದು ಬಿಡ ಸೀನಪ್ಪ” ಮೊಟಣ್ಣನ ಬುದ್ಧಿ ಗೊತ್ತಿದ್ದರಿಂದ ಸೀನಪ್ಪ ಮತ್ತೂ ಬಲವಂತ ಮಾಡುವುದಕ್ಕೆ ಹೋಗಲಿಲ್ಲ

ಏನೋ ಜ್ಞಾಪಿಸಿಕೊಂಡವನಂತೆ ಮರಳಿ “ಮೊನ್ನೆ ಸ್ವಾಂದೇನಾಹಳ್ಳಿ ಯಜಮಾನ್ರು ಸಿಕ್ಕಿದ್ರು. ಆ ಊರಿನ ಮಾರಮ್ಮನ್ ಜಾತ್ರೆಗೆ ಕುಂಭಿ ಮನೆಯಿಂದ ಸೋಮನ ಕುಣಿಸೋಕೆ ಇದ್ರೆ ಹೇಳು ಅಂತ ಅಂದ್ರು. ಕೇಳಿ ಹೇಳ್ತಿನಿ ಅಂದೆ ”

ಸೋಮ ಎನ್ನುತ್ತಲೆ ಮ್ಲಾನವದನನಾದ ನರಸುಮ್ಮ “ ನಿಂಗೆ ಗೊತ್ತಲ್ಲ ಸೀನಪ್ಪ. ಹತ್ ಹದಿನೈದು ಕೆಜಿ ಸೋಮನ್ನ ಕುಣಿಸೋ ತ್ರಾಣ ನನಗಿಲ್ಲ. ವಯಸ್ಸಿನ ಹುಡುಗುರೇ ಹಿಂದೆ ಮುಂದೆ ನೋಡ್ತಾರೆ ಈಗ. ನಂಕೈಲಿ ಆಗಕಿಲ್ಲ ಬಿಡು”.

ತಡವಾಯಿತು ಎನ್ನುತ್ತಾ. ತನ್ನ ಬೆಟಾಲಿಯನ್ನು ಬೆನ್ನಿಗಂಟಿಕೊಂಡು ಸೀನಪ್ಪ ಹೊರಟುಹೋದ. ತಮಟೆ ಅರೆಗಳನ್ನು ನೋಡಿ ತಾನೇನೊ ಗುಂಪಿಗೆ ಸೇರದ ಪದವಾಗಿಬಿಟ್ಟೆನಾ ಎಂದು ಎನಿಸತೊಡಗಿತು.

ಕೊನೆಯ ಬಾರಿ ಮೊಟಣ್ಣನ ತಮಟೆ ಬಡಿದದ್ದಕ್ಕೆ ಬಂದ ಐವತ್ತು ರೂಪಯಿಯಲ್ಲಿ ನಲವತ್ತು ಅವನೆ ಇಸಿದು ಕೊಂಡಿದ್ದ. ಮೂವತ್ತಕ್ಕೆ ಮಾತಾಡಿದ್ದನಾದರೂ “ಹತ್ತು ಇರಲಿ. ಮುಂದಿನ ಸಲಿ ಹೋಗುವಾಗ ಅದಕ್ಕೆ ಸಮಾ ಮಾಡ್ಕಳನ” ಎಂದು ಹೇಳಿ ತೆಪ್ಪಗಾಗಿಸಿದ್ದ. ಉಚ್ಚೇಲಿ ಮೀನ್ ಹಿಡಿಯೋ ಅಂತವನ ಬಳಿ ಸಹಾಯ ಕೇಳಿದ್ದೆ ತಪ್ಪು ಅನಿಸಿತು. ದೊಡ್ಡ ಮಧುರೆ ಜಾತ್ರೆ ಮುಗಿದು ಇದೆಲ್ಲದರಿಂದ ಬೇಗ ಮುಕ್ತಿ ಸಿಕ್ಕರೆ ಸಾಕಿತ್ತು.

ಹೆಂಡತಿ ಸಾಕವ್ವನೊಟ್ಟಿಗೆ ಐದು ಮೈಲಿ ದೂರದ ದೊಡ್ಡ ಮಧುರೆಗೆ ನಡೆದುಹೋಗುತ್ತಿದ್ದರು.ಮಧ್ಯಾಹ್ನದ ಉರಿಬಿಸಿಲು ಕರಗಿ ತಂಪೊತ್ತು ಆವರಿಸಿದಾಗ ಹೊರಟು ಕತ್ತಲು ಕವಿಯುವ ಮೊದಲೆ ಮಗಳ ಮನೆ ಸೇರಿದರು. ತಂದೆ ತಾಯಿಯ ಕಂಡು ಮಗಳು ಪುಟ್ಟಕ್ಕನ ಸಂತಸ ಇಮ್ಮಡಿಯಾಯಿತು.”ಇದ್ಯಾಕಪ್ಪ ಕಣ್ ಎಲ್ಲಾ ಒಳಿಕ್ ಹೋದಂಗೆ ಆಗೈತೆ. ಉಷಾರಿಲ್ವಾ??” ಅಂತೆಲ್ಲಾ ವಿಚಾರಿಸತೊಡಗಿದಳು. ವಯಸ್ಸಾಗುತ್ತಿರುವ ಕೊಡುಗೆಗಳು ಎಂದು ಹೇಳಿ ಮಗಳಿಗರ ಸುಮ್ಮನಾಗಿಸಿದ.ಮಗಳಿಗೆ ಎಂತದೋ ಆತಂಕ. ಮಕ್ಕಳಿಗೆ ತಮ್ಮ ಪೋಷಕರಿಗೆ ವಯಸ್ಸಾಗುತ್ತಿದೆ ಎಂದು ಅರಿವಾಗದತೊಡಗಿದಾಗ ಒಂದು ಬಗೆಯ ದಿಗಿಲಾಗುತ್ತದೆ. ಕಣ್ಣಿನ ತುಂಬ ನೀರು ತುಂಬಿಕೊಂಡು”ಇಲ್ಲೆ ಬಂದು ಇರಪ್ಪ. ನಮ್ಜೊತೆನೆ” ಎಂದಳು. ಅಳಿಯನ ದುಡಿಮೆಯ ಅರಿವಿದ್ದುದರಿಂದ ಇದನ್ನು ನಯವಾಗೆ ತಿರಸ್ಕರಿಸಿದ.ಮಗಳು ಸುಮ್ಮನಾದಳು. ಅಳಿಯನು ಜಾತ್ರೆ ಗಡಿಬಿಡಿಯಲ್ಲಿ ತೊಡಗಿಕೊಂಡಿದ್ದ. ಮನೆಯಲ್ಲಿ ಮರುದಿನದಿಂದ ಹಬ್ಬದ ಸಂಭ್ರಮ.

ಪ್ರತೀ ಸಲದಂತೆ ಬೆಳಗ್ಗೆ ಆರಕ್ಕೆಲ್ಲಾ ಕೋಣದ ಬಲಿ ನಡೆಯುತ್ತಿತ್ತು. ಸರಸುಮ್ಮನಿಗೆ ರಾತ್ರಿಯೆಲ್ಲಾ ನಿದ್ದೆ ಸರಿಯಾಗಿ ಬರಲಿಲ್ಲ. ಕಣ್ಣು ಮುಚ್ಚಿದರೆ ತಮಟೆಯ ಸದ್ದು ಕಿವಿ ತುಂಬುತ್ತಿತ್ತು. ಇನ್ನು ಕತ್ತಲು ಇರುವಾಗಲೆ ಒಂದು ಚೂರಿ ಗೋಣಿಚೀಲ ಕೈಲಿಡಿದು ಬರಬರನೆ ಹೆಜ್ಜೆ ಹಾಕತೊಡಗಿದ. ಬಿಳಿ ಪಂಚೆ. ದೊಗಲೆ ಅಂಗಿ. ಮಣಿಕಟ್ಟಿನವರೆಗೂ ಬಂದ ಅಂಗಿಯ ತೋಳು. ಅರ್ಧ ತುಂಡಾಗಿದ್ದ ಅಂಗಿಯ ತೋಳಿನ ಗುಂಡಿಗಳು. ದೇವಸ್ಥಾನದ ಬಳಿ ಬಂದರೆ ಅಲ್ಲಿ ಎಲ್ಲವು ಖಾಲಿ. ಬೆಳಗ್ಗೆ ಇನ್ನು ಕತ್ತಲೆ ಇರುವಾಗಲೆ ಬಂದಿದ್ದರಿಂದ ಕೊಂಚ ಸಮಯ ಆಗಬಹುದೆಂದು ಕಾಯಬೇಕೆಂದುಕೊಂಡ. ಆದರೆ ವಧಾಸ್ಥಂಭದಲ್ಲಿ ಕೋಣ ಕಾಣದೆ ಇರುವುದ ಕಂಡು ದಿಗಿಲಾಯಿತು. ಕರಿಕವರಿನಲ್ಲಿ ಗುಡ್ಡೆಬಾಡು ತುಂಬಿ ನಡೆಯುತ್ತಿದ್ದವರೊಬ್ಬರು ಕಣ್ಣಿಗೆ ಬಿದ್ದರು. ಕೋಣವಧೆಯ ಬಗ್ಗೆ ಅವರ ಬಳಿ ವಿಚಾರಿಸಿದ. ಜಿಲ್ಲಾಡಳಿತಕ್ಕೆ ಹೆದರಿ ಹತ್ತಿರದ ಮಾವಿನ ತೋಪಿನಲ್ಲಿ ಕೋಣವಧೆ ನಡೆಯುತ್ತಿದ್ದುದನ್ನ ಅವರು ಹೇಳಿ ನಿಲ್ಲದೇ ಹೊರಟುಹೋದರು. ಆತಂಕಗೊಂಡು ಬೇಗ ಬೇಗನೆ ಹೆಜ್ಜೆ ಹಾಕುತ್ತಿದ್ದ ನರಸುಮ್ಮನ ಉಸಿರಾಟ ಜೋರಾಗುತ್ತಾ ಹೋಯಿತು. ಅಲ್ಲಿ ಹೋಗುವಷ್ಟರಲ್ಲಿ ಎಲ್ಲಾ ಕಾರ್ಯವು ಆಗಲೇ ಮುಗಿದಿತ್ತು. ಉಳಿದಿದ್ದ ಮೂರ್ನಾಲ್ಕು ಗುಡ್ಡೆ ಮಾಂಸಕ್ಕಾಗಿ ದುಡ್ಡು ಕೊಟ್ಟಿದ್ದ ಜನರಿಗೆ ಯುವಕರು ಕಾಯುತ್ತಿದ್ದರು. ಕೋಣ ಕಡಿಯುವ ಅಜಾನುಬಾಹು ತಲವಾರನನ್ನು ವಿಚಾರಿಸಿದಾಗ, ಮೇಲಿಂದ ಕೆಳಗೆ ಇವನನ್ನು ಕೆಕ್ಕರಿಸಿ ” ಇಂತ ವತ್ನಲ್ಲಿ ಕೋಣ ಕಡ್ದಿದ್ದೆ ಹೆಚ್ಚು ಅಂತದ್ರಲ್ಲಿ ಚಕ್ಕಳ ಯಾವನ್ ನೋಡ್ಕೊಂಡ್ ಕುತ್ಕೊತಾನೆ. ಅಲ್ಲೆ ಬೇಲಿ ಮೇಲೆ ಎಸ್ದಿರ್ಬೇಕು ನೋಡು..” ಎನ್ನುತ್ತಾ ಬಾಯಲ್ಲಿದ್ದ ಬಿಡಿಯ ತುಂಡು ಹೊರತೆಗೆದು ಅದರ ಅಂಡಿನ ಮೇಲೆ ನಯವಾಗಿ ನಾಟಿದ. ಬೆಳ್ಳಗಾಗಿದ್ದ ಬೂದಿ ಮೂರ್ನಾಲ್ಕು ಹೋಳಾಗಿ ನೆಲದ ಮೇಲೆ ಬಿದ್ದಿತು. ನರಸುಮ್ಮನಿಗೆ ಎದೆಯೇ ಒಡೆದು ಹೋದಂತಾಯಿತು. ಅಳಿಯನಿಗೆ ಹೇಳಿದ್ದನಾದರೂ ಗಲಾಟೆಯ ಮಧ್ಯೆ ಮತ್ತೆ ಜ್ಞಾಪಿಸುವುದನ್ನು ಮರೆತಿದ್ದ. ಅವನು ಕೈತೋರಿಸಿದ ಬೇಲಿಯ ಕಡೆ ಓಡತೊಡಗಿದ. ಅಲ್ಲಿ ಹೋದಾಗ ಅಲ್ಲಿದ್ದ ದೃಶ್ಯ ಕಂಡು ಯಾರೋ ಕರುಳು ಹೊರಗೆಳೆದಂತಾಯಿತು. ಮಾಂಸದ ವಾಸನೆ ಅರಸಿ ಬಂದಿದ್ದ ಬೀದಿನಾಯಿಗಳು ಹಸಿ ಕೋಣದ ಚರ್ಮವನ್ನು ದರದರನೆ ಎಳೆದು ತಿನ್ನುತ್ತಿದ್ದವು. ಎಳೆದೆಳೆದು ಸುಸ್ತಾಗಿದ್ದ ನಾಯಿಗಳು ನಾಲಿಗೆ ಹೊರಚಾಚಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದವು. ಅದಾಗಲೆ ತುಂಡು ತುಂಡಾದ ಅಂಗೈ ಅಗಲ ಚರ್ಮ ಅಲ್ಲಲ್ಲಿ ಬಿದ್ದಿದ್ದವು. ಸಾವರಿಸಿಕೊಳ್ಳುತ್ತಾ ಭಾರವಾದ ಹೆಜ್ಜೆ ಇಡುತ್ತಾ ಮಗಳ ಮನೆಯ ದಾರಿ ಹಿಡಿದ. ಹೋಗುವಾಗ ಇದ್ದ ನಾಲ್ಕು ಗುಡ್ಡೆ ಮಾಂಸವೂ ಖಾಲಿಯಾಗಿತ್ತು.

ದೇವಸ್ಥಾನ ಹಾದು ಹೋಗುವಾಗ ನಾಡಿದ್ದು ನಡೆಯುವ ಸ್ವಾಂದೇನಾಹಳ್ಳಿಯ ಜಾತ್ರೆ ನೆನಪಿಗೆ ಬಂದು ಹೊಸ ಚೈತನ್ಯ ಮೂಡಿದಂತಾಯಿತು. ಬೇಗ ಹೋಗಿ ಕಾದರೆ ಸಿಗುಬಹುದಾದ ಸಾಧ್ಯತೆಯೂ ನೆನಪಿಗೆ ಬಂತು. ಬೆಳಗ್ಗೆ ಏನೂ ತಿನ್ನದೆ ಬಂದಿದ್ದಕ್ಕೋ ಹೆಚ್ಚು ಓಡಾಡಿದ್ದಕ್ಕೋ ಹಸಿವು ಹೊಟ್ಟೆಯನ್ನು ಸುಡುತ್ತಿರುವ ಅನುಭವವಾಯಿತು.ಅಲ್ಲೂ ಹಿಂಗೆ ಏನಾದರೂ ಆಗಿದ್ದರೆ ಅನಿಸಿ ಮತ್ತೂ ದಿಗಿಲುಗೊಂಡ. ಇತ್ತಕಡೆ ಸಾಕವ್ವ ತಟ್ಟೆಯ ಮುಂದೆ ಕೂತು ಗಂಡನಿಗೆ ಕಾಯುತ್ತಿದ್ದಳು. ಸ್ವಲ್ಪ ಹೊತ್ತು ಕಾದು ಅಳಿಯನನ್ನು ಕಳುಹಿಸುವ ಯೋಚನೆಯಲ್ಲಿದ್ದಳು. ನರಸುಮ್ಮನಿಗೆ ವರ್ಷದ ಕೂಳಿನ ಮುಂದೆ ಎಲ್ಲವೂ ನಗಣ್ಯ ಎನಿಸಿತು. ಮನೆಯ ದಾರಿಯ ಕಡೆ ತಿರುಗಲಿಲ್ಲ.

ದೊಡ್ಡ ಮಧುರೆಯ ಕೆರೆಯ ಏರಿ ಹತ್ತಿ ಇಳಿದರೆ ಸ್ವಾಂದೇನಾಹಳ್ಳಿಗೆ ಎರಡು ಮೈಲಿಯ ದಾರಿ. ನೀರಿಲ್ಲದೆ ಬಣಗುಡುತ್ತಿದ್ದ ಮಧುರೆಯ ಕೆರೆ ಇವನ ದಾಹ ತೀರಿಸುವ ಶಕ್ತಿಯನ್ನು ಕಳೆದುಕೊಂಡಿತ್ತು. ಊರು ಹತ್ತಿರವಾಗುತ್ತ ಹೆಜ್ಜೆಗಳು ಶಕ್ತಿ ಕಳೆದುಕೊಳ್ಳುತ್ತಿದ್ದವು. ಕಂಕುಳಲ್ಲಿ ಇದ್ದ ಗೋಣಿಚೀಲ ಬೆವರನ್ನ ಹೊದ್ದಿಕೊಂಡಿತ್ತು. ಮಾರಮ್ಮ ಗುಡಿಯ ಬಳಿ ಬರುತ್ತಿದ್ದಂತೆ ಕೋಣ ಕಂಡಂತಾಗಿ ಹೊಸ ಚೈತನ್ಯ ಮೂಡಿತು. ತನ್ನ ಮುಂದಿದ್ದ ಸಾವನ್ನು ಕಡೆಗಣಿಸಿ ತಂದು ಹಾಕಿದ್ದ ಒಣ ಹುಲ್ಲನ್ನು ಸಾವಕಾಶವಾಗಿ ಮೆಲ್ಲುತ್ತಿತ್ತು. ಕಣ್ಣು ಎವೆಯಿಕ್ಕದೆ ಅದನ್ನೆ ನರಸುಮ್ಮ ನೋಡುತ್ತಿದ್ದ. ಇನ್ನೆರಡು ದಿನ ಜೀವ ಹಿಂಗಿದರೂ ಈ ಜಾಗ ಬಿಟ್ಟು ಒಂದಿಂಚೂ ಕದಲಬಾರದೆಂದು ನಿರ್ಧರಿಸಿದ. ನಿಧಾನವಾಗಿ ಅದರ ಹತ್ತಿರ ಹೋಗಬೇಕೆಂದೆನಿಸಿತು.

ಹತ್ತಿರವಾಗುತ್ತಿದ್ದಂತೆ ಯಾರೋ ಕೈ ಹಿಡಿದು ಜಗ್ಗಿದರೆನಿಸಿ ತಿರುಗಿದ. ಖಾಕಿ ಬಟ್ಟೆ ತೊಟ್ಟಿದ್ದ ಕ್ಯಾತ್ಸಂದ್ರ ಠಾಣೆಯ ದಪ್ಪೆದಾರ್ “ನಿಂತ್ಕಳೋ ಕುಡುಕ್ ಬೇವರ್ಸಿ ನನ್ ಮಗನೆ. ಎಲ್ಲಿಗ್ ದನ ನುಗ್ದಂಗೆ ನುಗ್ತಿದ್ಯಾ…” ಎನ್ನುತ್ತಾ ಹಿಂಬದಿ ಕೊರಳಪಟ್ಟಿ ಹಿಡಿದು ಎಳೆದು ಬಿಸಾಡಿದ.ಬಿದ್ದ ರಭಸಕ್ಕೆ ಮೈಯೆಲ್ಲಾ ಕೊಂಚ ಮಣ್ಣಾದಂತಾಯಿತು. ಯಾವುದೋ ಟೆಂಪೊ ಹಿಂಬದಿಯಿಂದ ಒಂದು ಹಲಗೆ ಇಳಿಬಿಟ್ಟು ಕೋಣವನ್ನು ಅದರ ಮೂಲಕ ಅದರೊಳಗೆ ಹತ್ತಿಸಿದರು. “ತುಮಕೂರು ಜಿಲ್ಲಾಡಳಿತ” ಎಂದು ವಾಹನದ ಮೇಲೆ ಮಾಡಿದ್ದ ಪೈಂಟು ಅಲ್ಲಲ್ಲಿ ಬಣ್ಣ ಕಳೆದುಕೊಂಡಿತ್ತು. ಜಿಲ್ಲಾಡಳಿತದ ವತಿಯಿಂದ ಬಂದಿದ್ದ ಒಂದಿಬ್ಬರು ಊರಿನ ಗೋಡೆಯ ಮೇಲೆ ನಿಷೇಧ ಕಾಯ್ದೆಯ ಪೋಸ್ಟರ್ ಅಂಟಿಸಿದರು. ಕೋಣ ತನ್ನ ಬಾಯಲ್ಲಿದ್ದ ಒಣ ಹುಲ್ಲು ಹಾಗೆ ನಿಧಾನವಾಗಿ ಮೆಲ್ಲುತ್ತಾ ಟೆಂಪೋದೊಳಗಿಂದ ನಿರ್ಭಾವುಕತೆಯಿಂದ ಊರ ಜನರನ್ನು ನೋಡುತ್ತಿತ್ತು. ಟೆಂಪೋಗಾಡಿ ದೂಳಿನ ಮರೆಯಲ್ಲಿ ಕಾಣದಾಯಿತು. ಅದರ ಹಿಂದೆ ಕ್ಯಾತ್ಸಂದ್ರ ಪೋಲೀಸರ ಗಾಡಿ ಕೂಡ ಓಡತೊಡಗಿತು. ಊರಿನ ಯಾವ ಗಂಡಾಳೂ ಇದನ್ನು ತಡೆಯಲಿಲ್ಲ.

ಸಾವರಿಸಿಕೊಂಡು ಎದ್ದ ನರಸುಮ್ಮನಿಗೆ ಆಕಾಶವೇ ಕಳಚಿ ತನ್ನ ಮೇಲೆ ಬಿದ್ದಂತಾಯಿತು. ಜಾತ್ರೆಯ ಸಿದ್ದತೆಯಲ್ಲಿದ್ದ ಊರಿನ ಹಟ್ಟಿಯ ಯಜಮಾನ್ರು ಕೂಡ ವಾಹನ ತಡೆಯದೆ ಹಾಗೆ ನಿಂತಿದ್ದರು. ದೇವಾಲಯದ ಪ್ರಾಂಗಣದಲ್ಲಿ ಜಾತ್ರೆಯ ಸಿದ್ಧತೆಗೆ ವಾದ್ಯ ಹೊತ್ತಿದ್ದ ಸ್ವಾಂದೆನಹಳ್ಳಿಯ ಯುವಕರು “ನೆನ್ನೆನೆ ಕಡ್ದಾಕಿದ್ರೆ ಆಗಿರದು ಮದ್ರೆ ಹುಡ್ಗುರಂಗೆ…” ಎನ್ನುತ್ತಾ ತಪ್ಪಿದ ಅವಕಾಶಕ್ಕೆ ಕೈ ಕೈ ಹಿಸುಕಿಕೊಂಡರು. ನರಸುಮ್ಮನಿಗೆ ಕಣ್ಣಿಗೆ ಕತ್ತಲು ಕವಿದಂತಾಯಿತು. ಕಣ್ಣಿಂದ ಧಾರಾಕಾರವಾಗಿ ನೀರು ಹರಿಯಲು ಶುರುವಾದವು. ತಂದೆ ಕುಂಭಯ್ಯ, ಹೆಂಡತಿ ಸಾಕವ್ವ, ಸೀನಪ್ಪ, ಮೊಟಪ್ಪ, ಮಗಳು ಪುಟ್ಟವ್ವ ಎಲ್ಲರೂ ಕಣ್ಣ ಮುಂದೆ ಬಂದರು. ಚೀಲ ಚೂರಿ ಬಿಸುಟು ಮಾರಮ್ಮ ಗುಡಿಯ ಮುಂದೆ ನಿಂತು ರೋಧಿಸತೊಡಗಿದ. ಕೆಲವರಿಗಷ್ಟೆ ಅಲ್ಲಿ ಪರಿಚಯವಿದ್ದುದರಿಂದ ಕಂಡೂ ಕಾಣದಂತೆ ಸುಮ್ಮನಾದರು.

ಕಾಲುಗಳನ್ನು ಅಲ್ಲಿಂದ ಕೀಳಲಾಗಲಿಲ್ಲ. ದಪ್ಪೆದಾರ್ ಬಿಸುಟ ರಭಸಕ್ಕೆ ಕಾಲ್ಬೆರಳ ಸಂದುಗಳಿಂದ ರಕ್ತ ಒಸರತೊಡಗಿತು. ಉರುಳುತ್ತಾ ಅವನು ಕೊಂಡ ಹಾಕುವ ಜಾಗದಲ್ಲಿ ಬಿದ್ದಿದ್ದ. ಅಣ್ಣ ರಂಗಯ್ಯ ಗಾಢವಾಗಿ ನೆನಪಾಗತೊಡಗಿದ. ಮಾರಮ್ಮನ ದೇವಾಲಯದ ಬಾಗಿಲು ತೆರೆದಿತ್ತು. ವಾಪಸ್ಸಾಗುತ್ತಿದ್ದ ಊರ ಜನರು ಆಗುತ್ತಿದ್ದ ಅನಿಶ್ಚಿತ ಘಟನೆ ಕಂಡು ತಿರುಗಿನಿಂತರು. ರೌದ್ರ ಸೋಮನನ್ನು ಹೊತ್ತ ನರಸುಮ್ಮ ಕೋಣವಧೆಯ ಜಾಗದಲ್ಲಿ ನಿಂತು ಉನ್ಮತ್ತನಾಗಿ ಕುಣಿಯತೊಡಗಿದ. ಪ್ರತೀ ಹೆಜ್ಜೆಗೂ ನೆಲ ಕಂಪಿಸಿದಂತಾಗುತ್ತಿತ್ತು. ವಾದ್ಯ ಹೊತ್ತಿದ್ದ ಹುಡುಗರು ತಮಗರಿವಿಲ್ಲದಂತೆ ಶುರುಮಾಡಿದರು. ತಮಟೆ ಹರೆ ದೋಣು ಜಿದ್ದಿಗೆ ಬಿದ್ದವಂತೆ ಊರಿನ ಸುತ್ತ ಆದೆಷ್ಟೋ ಶತಮಾನಗಳಿಂದ ನಿಂತಿದ್ದ ಬೆಟ್ಟಗುಡ್ಡಗಳು ಪ್ರತಿಧ್ವನಿಸುವಂತೆ ಬಾರಿಸತೊಡಗಿದವು. ಊರಿನ ಜನ ಅಪ್ರಚೋದಿತರಾಗಿ ಕೈಮುಗಿದು ನಿಂತರು. ಯಾರೋ ಒಂದು ಬಿಂದಿಗೆಯಲ್ಲಿ ನೀರು ತಂದು ರಕ್ತ ಒಸರುತ್ತಿದ್ದ ನರಸುಮ್ಮನ ಕಾಲಿಗೆ ನೀರು ಸುರಿದು ಅರಿಶಿಣ ಕುಂಕುಮ ಇಟ್ಟರು. ದೇವಸ್ಥಾನದ ಆವರಣದಲ್ಲಿ ಕುಣಿದ ಮೇಲೆ ಬಂದ ದಾರಿಯ ಕಡೆಗೆ ಹಜ್ಜೆಗಳು ಹೋಗತೊಡಗಿದವು. ಕುಣಿಯುತ್ತಾ ದೊಡ್ಡ ಮಧುರೆ ಕೆರೆ ಏರಿ ಮೂಲಕ ಕೊಂಡಜ್ಜಿ ದಾರಿ ಹಿಡಿದಾಗಿತ್ತು. ಬಂದ ದಾರಿಯಲ್ಲಿ ವಾದ್ಯಗಳು ಹೆಜ್ಜೆಗಳಿಗೆ ಅನುಗುಣವಾಗಿ ಝೇಂಕರಿಸುತ್ತಿದ್ದವು. ಸಾಕವ್ವ ಆಗಲೇ ಗಂಡನನ್ನು ಹುಡುಕಿಕೊಂಡು ಊರ ದಾರಿಯಲ್ಲಿ ಕಾಯುತ್ತಿದ್ದಳು. ಗಂಡನನ್ನು ಕಂಡು ದಿಗ್ಬ್ರಾಂತಳಾದಳು. ನರಸುಮ್ಮನಿಗೆ ಯಾರೂ ಕಣ್ಣಿಗೆ ಬೀಳುತ್ತಿರಲಿಲ್ಲ. ಕೊಂಡಜ್ಜಿಗೆ ಬರುವಷ್ಟರಲ್ಲಿ ಮೂರು ಊರಿನ ವಾದ್ಯದವರು ಜೊತೆಗೂಡಿದ್ದರು. ದಿನ ರಾತ್ರಿಗಳು ಉರುಳಿದರೂ ಸೋಮನ ಕುಣಿತ ನಿಲ್ಲಲಿಲ್ಲ. ತ್ರಾಣ ಇರೋಗಂಟ ಕುಣಿತ ಸಾಗಬೇಕಿತ್ತು.

ಕಥೆಗಾರರ ಪರಿಚಯ:
ಚಂದ್ರಶೇಖರ ಡಿ.ಆರ್.‌

ತುಮಕೂರಿನಲ್ಲಿ ಹುಟ್ಟಿ ಬೆಳೆದು ಇದೀಗ ಹತ್ತು ವರ್ಷದಿಂದ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಸೇವೆ. ಪ್ರಸಕ್ತ ಮಧುಗಿರಿಯಲ್ಲಿ ಡೆಪ್ಯುಟಿ ಮ್ಯಾನೇಜರ್. ಅಕ್ಷರಗಳೆಂದರೆ ಖುಷಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ನನ್ನ ದೇಶ ನನ್ನ ದನಿ ಅಂಕಣ: ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ.

VISTARANEWS.COM


on

nanna desha nanna dani column
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ನನ್ನ ದೇಶ ನನ್ನ ದನಿ ಅಂಕಣ: ಅನುವಾದ ಮತ್ತು ಭಾಷಾಂತರ ಕ್ಷೇತ್ರಗಳ ಮಹತ್ತ್ವವೇ ನಮಗೆ ತಿಳಿಯದು. ಸಾಮಾನ್ಯರಿರಲಿ, ವಿಶ್ವವಿದ್ಯಾಲಯಗಳಲ್ಲಿ ವಿರಾಜಮಾನರಾಗಿರುವ ಬಹುತೇಕ ಪ್ರಭೃತಿಗಳಿಗೂ ತಿಳಿಯದು. ಭಾಷಾಂತರ ಕ್ಷೇತ್ರದ ಆಳ – ಅಗಲಗಳ ಸರಿಯಾದ ಅಂದಾಜೇ ನಮಗಿಲ್ಲ. ಕಳೆದ ಆರೇಳು ದಶಕಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಟ್ಟಹಾಸ, ಅಬ್ಬರಗಳ ಮಹಾಪೂರದಲ್ಲಿ ಭಾರತೀಯ ಭಾಷೆಗಳು ಸೊರಗುತ್ತಿವೆ, ನಿಧಾನವಾಗಿ ನೇಪಥ್ಯಕ್ಕೂ ಸೇರುತ್ತಿವೆ. ಇನ್ನೂ ಹೆಚ್ಚಿನ ದುರಂತವೆಂದರೆ, ನಮ್ಮ ಸೋ ಕಾಲ್ಡ್ ಶಿಕ್ಷಣ ತಜ್ಞರಿಗೆ ಇದರ ಅಂದಾಜೂ ಆಗುತ್ತಿಲ್ಲ. ಇತ್ತೀಚಿನ ಒಂದೆರಡು ದಶಕಗಳಲ್ಲಿ, ಸಂವಾದ – ಚರ್ಚೆ – ಉಪನ್ಯಾಸಮಾಲೆ – ಎಲ್ಲವೂ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಎಂಬಂತಾಗಿವೆ. ಈ ಪಿಡುಗು ಇನ್ನಷ್ಟು ಮುಂದುವರಿದು ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮೊದಲ್ಗೊಂಡು, ಶಾಲಾ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳನ್ನೂ ಇಂಗ್ಲಿಷ್ ಭಾಷೆ ಆವರಿಸಿಕೊಂಡುಬಿಟ್ಟಿದೆ. ಇನ್ನು ಇಡೀ ದೇಶದ ಬೌದ್ಧಿಕ – ಶೈಕ್ಷಣಿಕ ಕ್ಷೇತ್ರಗಳು, ಇಂಗ್ಲಿಷ್ ಭಾಷೆ – ಇಂಗ್ಲಿಷ್ ಮಾಧ್ಯಮಗಳ ಉಪೋತ್ಪನ್ನಗಳಾಗಿ ಹೋಗಿರುವುದು, ಈ ಎಲ್ಲಾ ಅಪಸವ್ಯಗಳಿಗೆ ಕಲಶವಿಟ್ಟಂತಾಗಿದೆ.

ಪ್ರಾಚೀನ ಭಾರತ, ಅಷ್ಟೇಕೆ, ಪ್ರಾಚೀನ ಜಗತ್ತಿನ ಬಹುಪಾಲು ಆಳರಸರಿಗೆ ಭಾಷಾಂತರ ಕ್ಷೇತ್ರದ ಮಹತ್ತ್ವ ತಿಳಿದಿತ್ತು. ಭಾಷೆಗಳನ್ನು ಯಾರೂ ಸಮಸ್ಯೆಯನ್ನಾಗಿ ಮಾಡಿಕೊಂಡಿರಲಿಲ್ಲ. ಹಿಂದೀ – ತಮಿಳು ಭಾಷೆಗಳನ್ನು ಮತ್ತು ಭಾಷಿಕರನ್ನು ದ್ವೇಷಿಸುವ ನಮ್ಮ ಇಂದಿನ ಯುಗಮಾನದ ಅವಿವೇಕ ಅಂದಿನವರಿಗೆ ಇರಲಿಲ್ಲ. ನಾಲ್ಕೈದು ದಶಕಗಳ ಹಿಂದೆ ಬಂಗಾಳಿ, ತಮಿಳು, ತೆಲುಗು, ಮರಾಠೀ ಮುಂತಾದ ಭಾಷೆಗಳಿಂದ ನೇರವಾಗಿ ಅನುವಾದ ಮಾಡುವವರು ನಮ್ಮಲ್ಲಿಯೇ ಇದ್ದರು. ಈಗ ವಿಚಿತ್ರವೆಂದರೆ, ಭಾರತೀಯ ಭಾಷೆಗಳ ನಡುವಣ ಕೊಡುಕೊಳ್ಳುವಿಕೆಗೂ ಇಂಗ್ಲಿಷ್ ಭಾಷೆಯು ಅನಿವಾರ್ಯ ಮಾಧ್ಯಮ ಎಂಬಂತಾಗುತ್ತಿದೆ. ಇದಕ್ಕಿಂತ ದೊಡ್ಡ ದುರಂತವಿನ್ನೇನು ಇದ್ದೀತು!

ಸಾವಿರಾರು ವರ್ಷಗಳ ನಿಜೇತಿಹಾಸಾಧ್ಯಯನ ನಮ್ಮ ದಿಗ್ಭ್ರಮೆಗೆ ಕಾರಣವಾಗುತ್ತದೆ. ನೋಡಿ, ನಮಗೆ ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರಣೆ, ಹಿಂದೆ ಹ್ಯೂ ಎನ್ ತ್ಸಾಂಗ್ ಎನ್ನಲಾಗುತ್ತಿತ್ತು) ಫಾಹಿಯಾನ್ ಮಾತ್ರ ಗೊತ್ತು. ಅವರೆಲ್ಲ ಚೀನಾ ದೇಶದಿಂದ ಇಲ್ಲಿಗೆ ಬಂದು ಜ್ಞಾನಸಂಪತ್ತನ್ನು ಅಲ್ಲಿಗೆ ಕೊಂಡೊಯ್ದವರು. ಅವರು, ಅಂತಹವರು ಭಾಷಾಂತರದಿಂದ ಅದ್ಭುತವಾದ ಸಂಪತ್ತನ್ನು ಸಂಗ್ರಹಿಸಿದರು ಮತ್ತು ಅವರ ದೇಶದಲ್ಲಿ ಕಾಪಿಟ್ಟುಕೊಂಡರು. ನಿಜೇತಿಹಾಸದ ಇನ್ನಷ್ಟು ವಿವರಗಳು ಅಕ್ಷರಶಃ ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಇಲ್ಲಿಂದ ಅಲ್ಲಿಗೆ ಹೋಗಿ ಭಾಷಾಂತರ ಮಾಡಿದ ಭಾರತೀಯ ಮೂಲದ ವಿದ್ವಾಂಸರ ವಿವರಗಳು ಸಹ ದಿಕ್ಸೂಚಿಯಾಗಿವೆ.

ಸಾಮಾನ್ಯ ಯುಗದ ಮೊದಲನೆಯ ಶತಮಾನದಲ್ಲಿ (1st Century of Common Era) ಚೀನಾ ದೇಶದ ಸಮ್ರಾಟ ಮಿಂಗ್-ತಿ ಬೌದ್ಧ ಸಿದ್ಧಾಂತದ ಅಧ್ಯಯನಕ್ಕಾಗಿ 18 ಜನರ ತಂಡವನ್ನು ಭಾರತಕ್ಕೆ ಕಳುಹಿಸಿದ. ಅವರು ಇಲ್ಲಿಂದ ದೊಡ್ಡ ಸಂಖ್ಯೆಯ ಗ್ರಂಥಗಳನ್ನು ಪ್ರತಿ ಮಾಡಿಕೊಂಡು, ಅನುವಾದಿಸಿಕೊಂಡು ತೆಗೆದುಕೊಂಡುಹೋದರು ಮತ್ತು ಕಶ್ಯಪ ಮಾತಂಗ ಮತ್ತು ಧರ್ಮರತ್ನ ಎಂಬ ಬೌದ್ಧ ವಿದ್ವಾಂಸರನ್ನೂ ಕರೆದುಕೊಂಡುಹೋದರು. ಕಶ್ಯಪರು ಆಗ ಗಾಂಧಾರದಲ್ಲಿದ್ದರು (ಗಾಂಧಾರ ಎಂದರೆ ಇಂದಿನ ಆಫಘನಿಸ್ತಾನ. ಅದು ಇಸ್ಲಾಂ ಆಕ್ರಮಣಕ್ಕೆ ಮುಂಚೆ ಸಾವಿರಾರು ವರ್ಷಗಳ ಕಾಲ ಬೌದ್ಧ ಧರ್ಮಕ್ಕೆ ಹೆಸರಾಗಿತ್ತು). ಚೀನಾ ದೇಶದ ತರ್ಕೆಸ್ತಾನ್ ಪ್ರದೇಶದ ಪರ್ವತಗಳನ್ನು ಮತ್ತು ಗೋಬೀ ಮರುಭೂಮಿಯನ್ನು ದಾಟಿಹೋಗಲು ಕಶ್ಯಪರು ಪ್ರಯಾಸಪಡಬೇಕಾಯಿತು. ಆದರೆ, ಅವರ ಆ ಪರಿಶ್ರಮದ ಭೇಟಿಯ ಕಾರಣದಿಂದಲೇ ಅನಂತರದ ಅವಧಿಯಲ್ಲಿ, ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಿಂದ ನೂರಾರು ಜನ ವಿದ್ವಾಂಸರು ಚೀನಾ ದೇಶದಲ್ಲಿಯೇ ಕುಳಿತು ಭಾಷಾಂತರ ಮಾಡುವಂತಹ ವ್ಯವಸ್ಥೆ ಬೆಳೆಯಲು ಸಾಧ್ಯವಾಯಿತು. ಅಗಾಧ ಪ್ರಮಾಣದ ಸಂಸ್ಕೃತ ಗ್ರಂಥಗಳನ್ನು ಅವರೆಲ್ಲ ಪ್ರತಿ ಮಾಡಿಕೊಂಡು ಇಲ್ಲಿಂದ ತೆಗೆದುಕೊಂಡುಹೋದರು. ಹಾಗೆ ಹೋದ ವಿದ್ವಾಂಸರಲ್ಲಿ ಸಂಘವರ್ಮ, ಧರ್ಮಸತ್ಯ, ಧರ್ಮಕಾಲ, ಮಹಾಬಲ, ವಿಘ್ನ, ಧರ್ಮಫಲ, ಕಲಾಸಿವಿ, ಕಲಾರುಚಿ ಮತ್ತು ಲೋಕರುಚಿ ಅವರು ಪ್ರಮುಖರಾದವರು.

nalanda and muslim invaders

ಆಗ ಕಾಶ್ಮೀರವೂ ಪ್ರಾಚೀನ ಭಾರತದ ಬಹಳ ದೊಡ್ಡ ಬೌದ್ಧ ಅಧ್ಯಯನ ಕೇಂದ್ರವಾಗಿತ್ತು. ಕಾಶ್ಮೀರದ ರಾಜವಂಶಕ್ಕೆ ಸೇರಿದ ಗುಣವರ್ಮರು ತಮ್ಮ ಪಾಂಡಿತ್ಯಕ್ಕೇ ಹೆಸರಾಗಿದ್ದರು. ಅವರು ಮೊದಲು ಶ್ರೀಲಂಕಾ ಮತ್ತು ಜಾವಾ ದೇಶಗಳಿಗೆ ಹೋಗಿ ಖ್ಯಾತರಾದರು. ಗುಣವರ್ಮರನ್ನು ಚೀನಾ ದೇಶದ ಚಕ್ರವರ್ತಿ ಆಹ್ವಾನಿಸಿದ. ಅಷ್ಟೇ ಅಲ್ಲ, ನಾಂಕಿಂಗ್ ಎಂಬ ಪಟ್ಟಣಕ್ಕೆ ಹೋಗಿ ಸ್ವತಃ ಗುಣವರ್ಮರನ್ನು ಎದುರುಗೊಂಡ. ಅವರ ಶಿಷ್ಯನೂ ಆದ. ಅವರಿಗಾಗಿ ಒಂದು ಬೌದ್ಧ ದೇವಾಲಯವನ್ನೂ ನಿರ್ಮಿಸಿದ. ಗುಣವರ್ಮರಂತೆಯೇ ಕಾಶ್ಮೀರದಿಂದ ಚೀನಾ ದೇಶಕ್ಕೆ ಹೋದ ವಿದ್ವಾಂಸರೆಂದರೆ ಬುದ್ಧಯಶಸ್, ಧರ್ಮಯಶಸ್, ಧರ್ಮಕ್ಷೇಮ, ಬುದ್ಧಜೀವ ಮತ್ತು ಧರ್ಮಮಿತ್ರ. ಈ ವಿವರಗಳು ಅದೆಷ್ಟು ಸಂತೋಷನೀಡುತ್ತವೆ ಎಂದರೆ, ನೋಡಿ, ದಕ್ಷಿಣ ಭಾರತದಿಂದಲೂ ಹಲವಾರು ವಿದ್ವಾಂಸರು ಚೀನಾ ದೇಶಕ್ಕೆ ಹೋದರು. ಹಾಗೆ ಹೋದ ಧರ್ಮರುಚಿ ಇಪ್ಪತ್ತು ವರ್ಷಗಳ ಕಾಲ (ಸಾಮಾನ್ಯ ಯುಗದ 693ರಿಂದ 713) ಚೀನಾ ದೇಶದಲ್ಲಿದ್ದು, ದಾಖಲೆ ಪ್ರಮಾಣದ ಐವತ್ಮೂರು ಗ್ರಂಥಗಳನ್ನು ಭಾಷಾಂತರಿಸಿದರು. ಚೀನೀ ಭಾಷೆಗೆ ವ್ಯವಸ್ಥಿತವಾದ ವ್ಯಾಕರಣವಿಲ್ಲ, ಒಂದು ಪದವನ್ನು ಒಂದು ಅಕ್ಷರವೋ – ಒಂದು ಚಿಹ್ನೆಯೋ ಪ್ರತಿನಿಧಿಸಿಬಿಡುತ್ತದೆ, ಎನ್ನುವ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತವಾದ ಸಂಸ್ಕೃತ ಮತ್ತು ಇನ್ನಿತರ ಭಾರತೀಯ ಭಾಷೆಗಳಿಂದ ಅನುವಾದಿಸುವುದು ಅದೆಷ್ಟು ಶ್ರಮದಾಯಕ, ಕ್ಲಿಷ್ಟಕರ ಎಂಬುದನ್ನು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ಭಾಷಾಂತರದ ಆಯಾಮವೇ ಹಾಗೆ. ಸಂಸ್ಕೃತಿಗಳ – ರೀತಿನೀತಿಗಳ ವ್ಯತ್ಯಾಸ ಮತ್ತು ಅಂತರಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಬಹಳ ಮುಖ್ಯವಾದ ಅಂಶವೊಂದನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ಜ್ಞಾನದ ಸಂಪತ್ತನ್ನು ವಿವಿಧ ಸಮುದಾಯಗಳಿಗೆ, ಅನೇಕ ದೇಶಗಳಿಗೆ ಹಂಚಲು ನೀಡಲು ಭಾಷಾಂತರದ ಇಂತಹ ಪ್ರಮುಖ ಆಯಾಮಕ್ಕೆ ರಾಜಾಶ್ರಯ ಇತ್ತು, ಇರಬೇಕು ಎನ್ನುವುದನ್ನು ಸಹ ನಾವಿಲ್ಲಿ ಗಮನಿಸಬೇಕಿದೆ. ಭಾರತ, ಚೀನಾ ಮುಂತಾದ ದೇಶಗಳಲ್ಲಿ ಅನೇಕ ರಾಜರು ಪ್ರೋತ್ಸಾಹ ನೀಡಿದುದರಿಂದಲೇ ಜ್ಞಾನ ಪರಂಪರೆ ಮುಂದುವರಿಯಲು ಮತ್ತು ಉಳಿದುಕೊಂಡು ಬರಲು ಸಾಧ್ಯವಾಯಿತು.

ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ. ಹಾಗೆಂದೇ, ಕನಿಷ್ಠ ಎಂಬತ್ತು ಪ್ರತಿಶತ ಅನುವಾದಗಳು ಕಳಪೆ ಗುಣಮಟ್ಟದವಾಗಿಬಿಟ್ಟಿವೆ. ಇನ್ನು ಪ್ರಶಸ್ತಿ, ಸ್ಥಾನಮಾನಗಳನ್ನು ಅನುವಾದಕರು ನಿರೀಕ್ಷಿಸುವಂತೆಯೇ ಇಲ್ಲ. ಒಂದೋ ಎರಡೋ ಕು-ಕವನಗಳನ್ನು ಬರೆದವರು ತಾವು ಬರೆದ ಕವನಗಳಿಗಿಂತ ಹೆಚ್ಚು ಸಂಖ್ಯೆಯ ಪ್ರಶಸ್ತಿಗಳನ್ನು ಗಳಿಸಿಬಿಡುತ್ತಾರೆ. ಕನ್ನಡದಲ್ಲಿ “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ”ವು, ಭಾಷಾಂತರಕ್ಕೆ ಒಳ್ಳೆಯ ಸಂಭಾವನೆಯನ್ನು ಕೊಡುತ್ತಿರುವುದು ಸ್ವಾಗತಾರ್ಹವೇ ಆದರೂ, ಮುಖ್ಯ ವಿಷಯ ಅದಲ್ಲ. ನಮ್ಮ ಪರಂಪರೆಯ ಹಾಗೂ ಅನೇಕ ಪ್ರಮುಖ ಗ್ರಂಥಗಳ ಸಮರ್ಥ ಮತ್ತು ಅಧಿಕೃತ ಅನುವಾದಗಳು ಆಗಬೇಕಿದೆ. ಅದು ಬರಿಯ ಸಂಭಾವನೆಯ ಸಂಗತಿಯನ್ನು ಮೀರಿದುದು. ಕೆಲವು ಗ್ರಂಥಗಳ ಅನುವಾದಕ್ಕೆ ಪ್ರತ್ಯೇಕ ಆದ್ಯತೆಯನ್ನೇ ನೀಡಬೇಕಾಗುತ್ತದೆ ಮತ್ತು ಬರಿಯ ಸಂಭಾವನೆ ಸಾಲದೆಹೋಗುತ್ತದೆ. ಈ ಕಾರ್ಯಕ್ಕೆಂದೇ ಪೂರ್ಣಾವಧಿ ಭಾಷಾಂತರಕಾರರ ನೇಮಕವಾಗಬೇಕಾಗಿದೆ.

ಹಿಂದೆ ರಾಜಾಶ್ರಯ ಇದ್ದ ಹಾಗೆ, ಈಗ ಸರ್ಕಾರೀ ಮತ್ತು ಸೇವಾ ಸಂಸ್ಥೆಗಳು ಪೂರ್ಣಾವಧಿ ಭಾಷಾಂತರಕಾರರನ್ನೇ ನೇಮಿಸಿಕೊಂಡು ಈ ಕಾರ್ಯವನ್ನು ಕೈಗೊಳ್ಳಬೇಕು. ಆಗ ಮಾತ್ರ ನಮ್ಮ ಪರಂಪರೆ ಮತ್ತು ನಿಜ-ಇತಿಹಾಸ ಗ್ರಂಥಗಳನ್ನು ಉಳಿಸಿಕೊಳ್ಳಲು ಸಾಧ್ಯ. ಹಾಗಾದಾಗ ಮಾತ್ರವೇ, ಪರೋಕ್ಷವಾಗಿ ಎಲ್ಲ ಭಾರತೀಯ ಭಾಷೆಗಳನ್ನೂ ಉಳಿಸಲು, ಉಳಿಸಿಕೊಳ್ಳಲು ಸಾಧ್ಯ.

ಅದೆಷ್ಟು ಪ್ರಮಾಣದಲ್ಲಿ ಮಹತ್ತ್ವದ ಗ್ರಂಥಗಳು ಬೇರೆ ಬೇರೆ ಭಾಷೆಗಳಲ್ಲಿ ಬರಬೇಕಾಗಿವೆ ಎಂದರೆ, ಭಾರತಾದ್ಯಂತ ಹತ್ತಾರು ಸಾವಿರ ಪೂರ್ಣಾವಧಿ ಭಾಷಾಂತರಕಾರರ ಅಗತ್ಯವಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ

ವಿಚಿತ್ರ ನೋಡಿ. ಅಮೆರಿಕಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ದರೋಡೆಕಾರರಿಗೆ ನಮ್ಮ ಪ್ರಾಚೀನ ಗ್ರಂಥಗಳ ನಿಜ-ಮೌಲ್ಯ ಗೊತ್ತಿತ್ತು. ಈ ಮೂರೂ ದೇಶಗಳ ವಿದ್ವಾಂಸರು ಒಟ್ಟಾಗಿ ಕುಳಿತು, ಸಾಮಾನ್ಯ ಯುಗದ 17 – 18ನೆಯ ಶತಮಾನಗಳಲ್ಲಿ, ನಮ್ಮ “ಸೂರ್ಯ ಸಿದ್ಧಾಂತ” ಗ್ರಂಥವನ್ನು ಅನುವಾದಿಸಿಕೊಂಡು ಹೋದರು. ಖಗೋಳ ಶಾಸ್ತ್ರದ ಆ ಅಮೌಲ್ಯ ಗ್ರಂಥದ ಪ್ರಮುಖ ವೈಜ್ಞಾನಿಕ ಅಂಶಗಳನ್ನು ಅವರು ಬಳಸಿಕೊಂಡರು. ಮೆಕಾಲೆ ಹುಟ್ಟುಹಾಕಿದ ನಮ್ಮ ದೇಶದ ಇಂದಿನ ವಿಕೃತ ಶಿಕ್ಷಣ ವ್ಯವಸ್ಥೆ ಹೇಗಿದೆಯೆಂದರೆ, ಇಂದು ನಮ್ಮ ವಿಶ್ವವಿದ್ಯಾಲಯಗಳ ಮಹಾಶಯರಿಗೆ “ಸೂರ್ಯ ಸಿದ್ಧಾಂತ”ದ ಬಗೆಗೆ ಕೇಳಿದರೆ, ಅವರು “ಅದು ಬೆಕ್ಕೋ – ನಾಯಿಯೋ ಇರಬಹುದು” ಎಂದಾರು. ಕಮ್ಯೂನಿಸ್ಟರು ಅವರ ತಲೆಗೆ ತುಂಬಿರುವಂತೆ, ಪ್ರಾಚೀನ ಭಾರತವೆಂದರೆ ಅವರ ಪಾಲಿಗೆ “ಸತೀ ಸಹಗಮನ, ಅಸ್ಪೃಶ್ಯತೆ, ಜಾತೀಯತೆ, ಮೂಢ ನಂಬಿಕೆಗಳು, ಭೇದಭಾವ, ಶೋಷಣೆ, ಇತ್ಯಾದಿ” ಮಾತ್ರ!

ಅತ್ಯಂತ ನಿರುಪಯುಕ್ತವಾದ ಕೆಮಿಸ್ಟ್ರಿ (ಶಾಲಾ ಕಾಲೇಜುಗಳಲ್ಲಿ ನಾನೂ ಕೆಮಿಸ್ಟ್ರಿ ವಿದ್ಯಾರ್ಥಿಯೇ. ಅದರಿಂದ ಮೂರುಕಾಸಿನ ಪ್ರಯೋಜನವೂ ಇಲ್ಲವೆಂಬುದನ್ನು, ಕಳೆದ ಅರ್ಧ ಶತಮಾನದಲ್ಲಿ ಅರ್ಥ ಮಾಡಿಕೊಂಡಿದ್ದೇನೆ) ಮುಂತಾದವನ್ನು ಕೈಬಿಟ್ಟು, ಆಗಬೇಕಾದ ವಿಭಾಗಗಳಲ್ಲಿ ಆಗಬೇಕಾದ ಕೆಲಸಗಳಿಗೆ ಆದ್ಯತೆ ಕೊಟ್ಟರೆ, ನಮ್ಮ ವಿಶ್ವವಿದ್ಯಾಲಯಗಳೂ ಅರ್ಥಪೂರ್ಣ ಕೊಡುಗೆ ನೀಡಬಹುದು.

ಇಲ್ಲಿ ಇನ್ನೂ ಒಂದು ಪ್ರಮುಖ ಸಂಗತಿಯನ್ನು ಪ್ರಸ್ತಾಪಿಸಬಹುದು. ಮೇಲೆ ಉಲ್ಲೇಖಿಸಿದ ಉದಾಹರಣೆಗಳು, ಮತಧರ್ಮಗಳ ಶಾಸ್ತ್ರಗ್ರಂಥಗಳ ಅನುವಾದಕ್ಕೆ ಸಂಬಂಧಿಸುತ್ತವೆ, ಅದರ ಹಿಂದೆ ಧರ್ಮಶ್ರದ್ಧೆಯ ಆಯಾಮವಿದೆ ಎಂದು ಕೆಲವರು ಮೂಗು ಮುರಿಯಬಹುದು. ಚೀನಾ ದೇಶದ ಈ ಮೇಲಿನ ಯೋಜನೆಗಳಲ್ಲಿ, ಅವರಿಗೆ ಜೊತೆಜೊತೆಯಲ್ಲಿಯೇ ತರ್ಕಶಾಸ್ತ್ರ, ಔಷಧಶಾಸ್ತ್ರ, ಆಯುರ್ವೇದ ಮುಂತಾದ ಅನೇಕ ಜ್ಞಾನಶಾಖೆಗಳ ಲಾಭವೂ ಆಯಿತು. ನಮ್ಮ ಭಾರತ-ಮೂಲದ ಗಣಿತ, ಅಂಕಿಗಳು, ಕ್ಯಾಲ್ಕುಲಸ್, ಬುದ್ಧಿವಂತರ ಆಟ ಎಂದೇ ಹೆಸರಾದ ಚದುರಂಗದಾಟ (Chess) ಇತ್ಯಾದಿ ಮಹತ್ತ್ವದ ಸಂಗತಿಗಳು ಅರೇಬಿಯಾ ಮೂಲಕ ಯೂರೋಪಿಗೆ ಪರಿಚಯವಾದವು. ಪರೋಕ್ಷವಾಗಿ ಯೂರೋಪಿನಲ್ಲಿ ಆಧುನಿಕ ವಿಜ್ಞಾನದ ವಿಕಾಸ ಸಂಶೋಧನೆಗಳಿಗೆ ಇವೆಲ್ಲಾ ಸಾಧನಗಳಾದವು, ಎಂಬುದನ್ನೂ ನಾವು ಮರೆಯುವಂತಿಲ್ಲ.

ಹೌದು, ಭಾಷಾಂತರ ಕ್ಷೇತ್ರಕ್ಕೆ ಈಗಲಾದರೂ ಆದ್ಯತೆ ದೊರೆಯಬೇಕಿದೆ. ಭಾರತೀಯ ಸಮಾಜದ ಬೌದ್ಧಿಕ ಲೋಕದ ಚುಕ್ಕಾಣಿ ಹಿಡಿದವರು ಈ ನಿಟ್ಟಿನಲ್ಲಿ ತೀವ್ರ ಗಮನ ನೀಡಬೇಕಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

Continue Reading

ಬೆಂಗಳೂರು

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Music Festival: ಬೆಂಗಳೂರಿನ ಮಲ್ಲೇಶ್ವರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾ ಭವನದಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Music Festival
Koo

ಬೆಂಗಳೂರು: ಸಪ್ತಕ ಸಂಸ್ಥೆಯ 19ನೇ ವಾರ್ಷಿಕ ಸಂಗೀತ ಉತ್ಸವದ ನಿಮಿತ್ತ ಮೇ 12ರಂದು ಸಂಜೆ 5.30ಕ್ಕೆ ಸಂಗೀತ ಸಂಭ್ರಮ 552ನೇ ಕಾರ್ಯಕ್ರಮವನ್ನು (Music Festival) ನಗರದ ಮಲ್ಲೇಶ್ವರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಕ ಸಂಚಾಲಕರಾದ ಜಿ.ಎಸ್‌.ಹೆಗಡೆ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಕಾಡೆಮಿ ಆಫ್‌ ಮ್ಯೂಸಿಕ್‌ ಪ್ರಾಯೋಕತ್ವದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಕೆ ಧರಿಣಿದೇವಿ ಮಾಲಗತ್ತಿ ಭಾಗವಹಿಸಲಿದ್ದಾರೆ.

ಕೋಲ್ಕೊತಾ ಗಾಯಕಿ ವಿದುಷಿ ರುಚಿರಾ ಪಾಂಡಾ, ಬೆಂಗಳೂರಿನ ತಬಲಾ ವಾದಕ ಪಂ. ರಾಜೇಂದ್ರ ನಾಕೋಡ, ಹಾರ್ಮೋನಿಯಂ ವಾದಕ ಪಂ. ವ್ಯಾಸಮೂರ್ತಿ ಕಟ್ಟಿ, ಮುಂಬಯಿಯ ತಬಲಾ ಸೋಲೋ ಕಲಾವಿದ ಪಂ. ಯೋಗೀಶ ಸಂಸಿ, ಪುಣೆಯ ಹಾರ್ಮೋನಿಯಮ್ ಲೆಹರಾ ಕಲಾವಿದರಾದ ತನ್ಮಯ ದೇವಚಕೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Continue Reading

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಧವಳ ಧಾರಿಣಿ ಅಂಕಣ: ಕಾಮವೆನ್ನುವುದು ಎಂತಹವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುತ್ತಾನೆ.

VISTARANEWS.COM


on

king dasharatha kaikeyi dhavala dharini column
Koo

ಪ್ರಾಣಕ್ಕಿಂತ ಪ್ರಿಯಳಾದ ಸತಿಯಿಂದ ಪ್ರಾಪ್ತವಾದ ಪುತ್ರ ವಿಯೋಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ
ಪಾಣ್ಡುರಾಭ್ರಮಿವಾಕಾಶಂ ರಾಹುಯುಕ್ತಂ ನಿಶಾಕರಃ ৷৷ಅ.ಯೋ.10.11৷৷

ಬಿಳಿಯದಾದ ಮೋಡಗಳಿಂದ ಕೂಡಿದ ಆಕಾಶದಲ್ಲಿ ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ ಮಹಾಯಶೋವಂತನಾದ ರಾಜನು ಭವ್ಯವಾದ ಕೈಕೇಯಿಯ ಅಂತಃಪುರವನ್ನು ಪ್ರವೇಶಿಸಿದನು.

ಕವಿಸಮಯವೆನ್ನುವದು ರಾಮಾಯಣ ಕಾವ್ಯದ ವಿಶೇಷ. ವಾಲ್ಮೀಕಿ ಕಾವ್ಯವನ್ನು ಕೇವಲ ಉಅಪದೇಶಕ್ಕಾಗಿಯಲ್ಲ, ಅದನ್ನು ತಾಳವಾದ್ಯಗಳೊಂದಿಗೆ ರಾಗವಾಗಿ ಹಾಡಲು ಅನುಕೂಲವಾಗುವಂತೆ ಬರೆದಿದ್ದಾನೆ. ಹಾಡುಗಾರಿಕೆಯಲ್ಲಿ ವರ್ಣನೆಗೆ ಮಹತ್ವ ಬರುತ್ತದೆ. ಕಾವ್ಯದ ಮುಂಗಾಣ್ಕೆ ಅಲ್ಲಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಕೈಕೇಯಿಯ ಅರಮನೆಗೆ ಹೋಗುವ ರಾಜನ ಕುರಿತು ವರ್ಣಿಸುವಾಗ ಬಿಳಿಯದಾದ ಮೋಡ, ರಾಹು, ಆಕಾಶ, ಚಂದ್ರ ಎನ್ನುವ ಉಪಮೆಗಳ ಮೂಲಕ ಹೇಳಿದ್ದಾನೆ. ಆಕಾಶ ಎನ್ನುವುದು ಮನಸ್ಸಿನಲ್ಲಿ ಆಸೆಗಳ ವಿಸ್ತಾರದವನ್ನು ಸೂಚಿಸಿದೆ. ಬಿಳಿಯದಾದ ಮೋಡವೆನ್ನುವದು ಅರ್ಥಪೂರ್ಣವಾದ ಉಪಮೆ. ನೀರಿನಿಂದ ಯುಕ್ತವಾದ ಮೋಡ ಕಪ್ಪಾಗಿರುತ್ತದೆ. ಮನಸ್ಸಿನಲ್ಲಿ ತನ್ನ ಮಗನ ಪಟ್ಟಾಭಿಷೇಕದ ಕುರಿತು ಯಾವ ಆಸೆಯನ್ನೇ ಇರಿಸಿಕೊಳ್ಳಲಿ, ಅದೆಲ್ಲವೂ ನೀರಿಲ್ಲದ ಮೋಡದಂತೆ ವ್ಯರ್ಥವಾಗಿ ಹಾರಿಹೋಗುತ್ತದೆ ಎನ್ನುವುದನ್ನು ಹೇಳುತ್ತಾನೆ. ರಾಹು ಮತ್ತು ಕೇತುಗಳು ಭಾರತೀಯ ಖಗೋಳಶಸ್ತ್ರದ ಪ್ರಕಾರ ಎರಡು ವಿರುದ್ಧದಿಕ್ಕುಗಳಲ್ಲಿರುವ ಬಿಂದುಗಳು. ಈ ಬಿಂದುವಿಗೆ ಸೂರ್ಯಚಂದರು ಬಂದಾಗ ಗ್ರಹಣವಾಗುತ್ತದೆ. ಚಂದ್ರ ಮನಸ್ಸಿನ ಕಾರಕ. ಸಂತೊಷ ಮತ್ತು ಕಾಮವಿಕಾರಗಳು ಮನಸ್ಸಿನಲ್ಲಿ ಉತ್ಪನ್ನವಾಗುವಂತವು. ಚಂದ್ರ ತನ್ನ ಪರಿಭ್ರಮಣದಲ್ಲಿ ರಾಹುವಿನ ಬಿಂದುವಿಗೆ ಬಂದಾಗ ಗ್ರಹಣವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೋ ಅದೇರಿತಿ ರಾಜ ತನ್ನೆಲ್ಲ ಕನಸನ್ನು ಕಳೆದುಕೊಂಡು ನಿಶ್ಚಿತವಾಗಿ ಮರಣದತ್ತ ಸಾಗಲು ಬಂದಿದ್ದಾನೆ ಎನ್ನುವುದನ್ನು ಉಪಮಾಮಲಂಕಾರದಲ್ಲಿ ಕವಿ ವರ್ಣಿಸಿದ್ದಾನೆ.

ದಶರಥನ ಪಾತ್ರವನ್ನು ವಿವೇಚಿಸುವಾಗ ಮೊದಲಿನಿಂದಲೂ ಕಂಡುಬಂದ ಅಂಶವೆಂದರೆ ಮಹಾನ್ ರಾಜರ್ಶಿಯಾಗಿದ್ದ ದೊರೆ ರಾಮನ ಕುರಿತು ಕಡುಲೋಭಿಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ದಶರಥನ ವ್ಯಕ್ತಿತ್ವವೆನ್ನುವುದು ಸಂಕೀರ್ಣವೇನೂ ಅಲ್ಲ. ಶೂರನಾಗಿದ್ದ; ಸೂರ್ಯವಂಶದ ಧ್ಯೇಯೋದ್ಧಶವಾದ ಧರ್ಮಸ್ಥಾಪನೆಯ ವಿಷಯದಲ್ಲಿ ಸದಾ ನಿರತನಾಗಿದ್ದ. ಅದೇ ಕಾಲಕ್ಕೆ ಅಯೋಧ್ಯೆಯ ಸಿಂಹಾಸನವೆನ್ನುವುದು ಗಣತಂತ್ರವ್ಯವಸ್ಥೆಯಲ್ಲಿ ಇತ್ತು. ರಾಜರಾಗುವವರು ಯಾರೇ ಆದರೂ ಅದಕ್ಕೆ ಪ್ರಜೆಗಳ ಒಪ್ಪಿಗೆ ಪಡೆಯಬೇಕಾಗಿತ್ತು. ಪ್ರಾಚೀನ ಗ್ರೀಸಿನಲ್ಲಿದ್ದ ರೀತಿಯ ಗಣತಂತ್ರವ್ಯವಸ್ಥೆ ಅಯೋಧ್ಯೆಯಲ್ಲಿ ಇತ್ತು ಎನ್ನುವುದಕ್ಕೆ ವಾಲ್ಮೀಕಿಯ ರಾಮಾಯಣವನ್ನು ಮತ್ತು ಮತ್ತು ಪ್ಲೇಟೋವಿನ “The Republic” ಕೃತಿಯನ್ನು ತುಲನೆ ಮಾಡಿದಾಗ ಅನಿಸುತ್ತದೆ. ಅದನ್ನು ಕೇವಲ ತೋರಿಕೆಗಾಗಿ ಆಚರಣೆಯಲ್ಲಿ ಇಟ್ಟು ತನಗೆ ಬೇಕಾದಂತೆ ಉತ್ತರಾಧಿಕಾರಿಯನ್ನು ಆರಿಸುವ ತಂತ್ರವನ್ನು ದಶರಥ ಅನುಸರಿಸಿರುವುದು ರಾಮನಿಗೆ ಪಟ್ಟಗಟ್ಟಬೇಕೆನ್ನುವ ಸಂದರ್ಭದಲ್ಲಿ ಕಾಣಬಹುದು. ಆತನ ಚಾಣಾಕ್ಷನಡೆಯ ಒಳಗಿರುವದು ತನ್ನದು ಎನ್ನುವ ಮೋಹದ ಅರಿವು ಎನ್ನುವುದು ಯಾರ ಗಮನಕ್ಕೂ, ಹೆಚ್ಚೇನು ರಾಮನ ಅರಿವಿಗೂ ಬಾರದ ಹಾಗೆ ನಡೆದುಕೊಂಡಿದ್ದಾನೆ. ಪರಿಪೂರ್ಣ ವ್ಯಕ್ತಿತ್ವದ ರಾಮನಂತಹ ದೊರೆ ತಮಗೆ ಸಿಗುತ್ತಾನೆ ಎನ್ನುವ ಕಾರಣಕ್ಕೆ ಪ್ರಜೆಗಳು ಸಂಭ್ರಮಿಸುವುದು ಸಹಜವೇ ಆಗಿದೆ. ತಾನು ಅಶ್ವಪತಿಗೆ ಕೊಟ್ಟ ಮಾತುಗಳು ಹೀಗೆ ಮರೆಯಾದ ಕಾರಣ ಅದು ದೊರೆಗೆ ಅಪರಿಮಿತ ಸಂತೋಷವನ್ನು ಕೊಟ್ಟಿದೆ. ಇಳಿವಯಸ್ಸಿನಲ್ಲಿ ಕಿರಿಯ ಚಲುವೆಯಾದ ಕೈಕೇಯಿಯ ಹಿಂದೆ ಬಿದ್ದಿದ್ದ ದೊರೆಗೆ ವೃದ್ದಾಪ್ಯದಲ್ಲಿ ಮಕ್ಕಳಾದ ಮೇಲೆ ರಾಮ ಎನ್ನುವ ಕುರುಡು ಮೋಹ ಆವರಿಸಿಕೊಂಡಿತ್ತು. ಆತನ ಕುರಿತು ಮಂಥರೆ ಹೇಳುವ ಮಾತು

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧಭಾವೇ ನ ಜಾನೀಷೇ ತೇನೈವ ಮತಿಸಂಧಿತಾ৷৷ಬಾ.ಕಾಂ.7.24৷৷

ನಿನ್ನ ಗಂಡನು ಮೇಲೆಮೇಲೆ ಧರ್ಮಸಮ್ಮತವಾದ ಮಾತುಗಳನ್ನು ಆಡುತ್ತಿದ್ದರೂ ಅಂತರಂಗದಲ್ಲಿ ಬಹಳ ಕಪಟಸ್ವಭಾವದವನು. ಬಾಯಲ್ಲಿ ಮೃದುವಾದ ಮಾತುಗಳನ್ನು ಆಡುತ್ತಿದ್ದರೂ ನಂಬಿಸಿ ಮೋಸಮಾಡುವುದು ಹೇಗೆಂದು ಯೋಚಿಸುತ್ತಿರುತ್ತಾನೆ. ಕರುಣೆಯೆನ್ನುವುದೇ ಇಲ್ಲ, ಬಹಳ ಋಜುಸ್ವಭಾವದವಳಾದ ನೀನು ಆತನ ಕಪಟವನ್ನು ಅರಿಯದೇ ಹೋದೆಯಲ್ಲವೇ.

ಮಂಥರೆ ಇಲ್ಲಿ ಕೈಕೇಯಿಯ ಮನಸ್ಸನ್ನು ತಿರುಗಿಸಲು ಹೇಳಿರುವಳಾದರೂ ಪಾಯಸವನ್ನು ತನ್ನ ರಾಣಿಯರಿಗೆ ಹಂಚುವಲ್ಲಿಂದ ಹಿಡಿದು ರಾಮಪಟ್ಟಾಭಿಷೇಕದ ವರೆಗೆ ದಶರಥ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ಗಮನಿಸಿದಾಗ ನಮ್ಮ ದೌರ್ಬಲ್ಯ ಶತ್ರುಗಳಿಗೆ ಆಯುಧ ಎನ್ನುವ ನೀತಿಶಾಸ್ತ್ರದ ಮಾತನ್ನು ನೆನಪಿಸುತ್ತದೆ. ಅಂತೂ ತನ್ನ ಕಾರ್ಯವಾದ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಯಾವ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುವುದು ಎನ್ನುವ ನಂಬಿಕೆಯೊಂದಿಗೆ ಸಂತೊಷವೆನ್ನುವುದು ಅತಿರೇಕಕ್ಕೆ ಹೋಗಿತ್ತು. ಸಂತೋಷ ಅತಿರೇಕಕ್ಕೆ ಹೋದಾಗ ಅದು ಮದಕ್ಕೆ ತಿರುಗುತ್ತದೆ. ಮದವೆನ್ನುವುದು ಕಾಮಕ್ಕೆ ಮೂಲ. ಅದನ್ನು ಇಳಿಸಿಕೊಳ್ಳಲು ಸಂಗಾತಿಯನ್ನು ಹುಡಿಕಿಕೊಳ್ಳುವುದು ಜೀವಿಗಳ ಸಹಜ ಕ್ರಿಯೆ. ಅರಸನಿಗೆ ತನ್ನ ಆಲೋಚನೆಯನ್ನು ಹಂಚಿಕೊಳ್ಳುವ ಸಂಗಾತಿಯ ಅಗತ್ಯ ತುರ್ತಾಗಿ ಎದುರಾಯಿತು. ವಶಿಷ್ಠರಲ್ಲಿಯಾಗಲಿ, ವಾಮದೇವರಲ್ಲಿಯಾಗಲಿ ಇದನ್ನೆಲ್ಲವನ್ನು ಹಂಚಿಕೊಳ್ಳಲು ಅವರೇನು ಸಾಮಾನ್ಯದವರಾಗಿರಲಿಲ್ಲ.

ರಾಮ ಯುವರಾಜ ಪಟ್ಟಕ್ಕೆ ಅರ್ಹನಾಗಿದ್ದರೂ, ಅಯೋಧ್ಯೆಯಲ್ಲಿ ಆ ಸಾಯಂಕಾಲ ನಡೆದ ಸಿದ್ಧತೆ ದಶರಥನ ವೈಯಕ್ತಿಕ ಕಾಮನೆಯ ಫಲವಾಗಿತ್ತು. ಪ್ರಜೆಗಳು ರಾಮನನ್ನು ರಾಜನ್ನಾಗಿ ನೋಡಲು ಬಯಸಿದ್ದರೆನ್ನುವುದು ನಿಜವಾದರೂ ಇಲ್ಲಿಮೊದಲ ಸಾರಿ ರಾಮನ ಪಟ್ಟಾಭಿಷೇಕಕ್ಕಾಗಿ ದಶರಥ ಹೇಗೆಲ್ಲಾ ಮಂಡಿಗೆಯನ್ನು ಹಾಕಿದ್ದ ಎನುವುದನ್ನು ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ. ರಾಮನನ್ನು ಕೇವಲ ಮಗನಾಗಿ ಮಾತ್ರ ನೋಡಿದ್ದಾನೆಯೇ ಹೊರತು ವಿಶ್ವಾಮಿತ್ರ, ವಶಿಷ್ಠರು, ಪರಶುರಾಮ ಮೊದಲಾದವರಿಗೆ ರಾಮನ ಅವತಾರದ ಹಿಂದಿರುವ ದೈವತ್ವದ ದರ್ಶನ ಅರಸನಿಗೆ ಸಾಯುವವರೆಗೂ ಆಗಲೇ ಇಲ್ಲ. ರಾಮನಿಗೆ ಪಟ್ಟಗಟ್ಟುವ ತನ್ನ ಮನಸ್ಸಿನ ಮಂಡಿಗೆ ಯಶಸ್ವಿಯಾದ ವಿಷಯವನ್ನು ವಿವರವಾಗಿ ವರ್ಣಿಸಿ ಹೇಳಲು ಕಿರಿಯ ರಾಣಿಯಷ್ಟು ಆಪ್ತರು ಬೇರೆ ಯಾರೂ ಇಲ್ಲ. ಕೌಸಲ್ಯೆಗೆ ಹೇಳಿದರೆ ಆಕೆಗೆ ಸಂತೋಷವೇನೋ ಆಗಬಹುದಾದರೂ ಆಕೆಯಲ್ಲಿ ಕಾಮದ ಆಕರ್ಷಣೆ ದೊರೆಗೆ ಬತ್ತಿಹೋಗಿತ್ತು. ಸುಮಿತ್ರೆಯೂ ಅಷ್ಟೇ. ಚಿಕ್ಕವಯಸ್ಸಿನ ಕೈಕೆಯಿಯನ್ನು ಚೆನ್ನಾಗಿ ಮರಳುಮಾಡಿ ಇಟ್ಟುಕೊಂಡಿದ್ದ. ತನಗೆ ಬೇಕಾದ ಹಾಗೆ ಸುಖವನ್ನು ಅವಳಿಂದ ಪಡೆಯುತ್ತಿದ್ದ. ಆಕೆ ರಾಜನಿಗೋಸ್ಕರ ಅಲಂಕರಿಸಿಕೊಂಡು ನಗುಮುಖದಿಂದ ಯಾವತ್ತಿಗೂ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಕೈಕೇಯಿ ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಜನನ್ನು ಮಣಿಸಲೇ ಬೇಕೆಂದು ಕೋಪಾಗಾರವನ್ನು ಸೇರಿದರೆ ಇಳಿವಯಸ್ಸಿನ ರಾಜ “ರಾಮಾಭಿಷೇಕದ ಸಂತೋಷದ ವಾರ್ತೆಯನ್ನು ಕೈಕೇಯಿಗೆ ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿ ಅತ್ಯಾಸೆಯಿಂದ ಕೈಕೇಯಿಯ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ”.

ಕೈಕೇಯಿ ಅಂತಃಪುರದಲ್ಲಿ ಇಲ್ಲವಾಗಿರುವುದನ್ನು ಕಂಡವನಿಗೆ ವ್ಯಾಕುಲವಾಯಿತು. ಪ್ರತಿಹಾರಿ ಹೇಳಿದ “ದೇವ ದೇವಿ ಬೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ-ಪರಮ ಕ್ರುದ್ಧೆಯಾಗಿ ದೇವಿ ಕೋಪಾಗಾರವನ್ನು ಸೇರಿದ್ದಾಳೆ” ಎನ್ನುವ ಮಾತನ್ನು ಕೇಳಿ ಕಂಗಾಲಾದ. ಕೋಪಾಗಾರಕ್ಕೆ ಧಾವಿಸಿ ನೋಡಿದರೆ ತನ್ನ ಪ್ರೇಯಸಿ ಅಸ್ತವ್ಯಸ್ತವಾಗಿ ನೆಲದ ಮೇಲೆ ಮಲಗಿದ್ದಾಳೆ. ಪ್ರಿಯತಮೆಯನ್ನು ಆಕಾಶದಿಂದ ಚ್ಯುತಳಾದ ಅಪ್ಸರೆಯಂತೆ ಕಂಡವನಿಗೆ ಎದೆಯೊಡೆದು ಹೋಯಿತು. “ನಿಷ್ಕಳಂಕನಾದ ದಶರಥ ಪಾಪಸಂಕಲ್ಪವನ್ನು ಹೊತ್ತ ಕೈಕೇಯಿಯನ್ನು ಕಂಡ” ಎನ್ನುವ ಮಾತು ಇಲ್ಲಿ ಬರುತ್ತದೆ. ಸಂಕಲ್ಪವೆನ್ನುವುದು ಹೊಸ ಕಾರ್ಯಕ್ಕೆ ಹೇತು. ಮುಂದಿನ ಘಟನೆಗೆ ಇಲ್ಲಿ ನಾಂದಿಯಾಗುತ್ತಿದೆ. ಧರ್ಮಮಾರ್ಗದಲ್ಲಿ ಸದಾ ನಡೆಯುತ್ತಿದ್ದ ಅರಸ ಕಾಮಮೋಹಿತನಾಗಿ ಕೈಕೇಯಿಯನ್ನು ಸಮಾಧಾನ ಮಾಡಲು ಹೇಳುವ ಮಾತುಗಳು ಸೂರ್ಯವಂಶಕ್ಕೆ ಹೇಳಿಸಿದ್ದಲ್ಲ.

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋವಾ ವಿಮುಚ್ಯತಾಮ್.
ದರಿದ್ರಃ ಕೋ ಭವದಾಢ್ಯೋ ದ್ರವ್ಯವಾನ್ಕೋSಪ್ಯಕಿಂಚನಃ৷৷ಅ. ಕಾಂ.10.33৷৷

ಕಾಮವೆನ್ನುವುದು ಎಂತವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುವ ಮಾತುಗಳು ದೊರೆತನಕ್ಕೆ ತಕ್ಕುದಲ್ಲ. ಆತ ಅವಳನ್ನು ಸಮಾಧಾನಿಸುತ್ತಾ “ಪ್ರಿಯತಮೆಯಲ್ಲಿ ನನಗೆ ನಿನಗಿಂತ- ಮನುಜರಲ್ಲಿ ರಾಮನಿಗಿಂತ ಹೆಚ್ಚಿನವರು ಯಾರೂ ಇಲ್ಲ” ಎನ್ನುವಲ್ಲಿ ರಾಮನ ಹೆಸರನ್ನು ಕೇಳಿದ ಆಕೆಗೆ ಮತ್ತುಷ್ಟು ಉರಿ ಹತ್ತಿತು. ದೊರೆ ಮನ್ಮಥನ ಬಾಣಕ್ಕೆ ಈಡಾಗಿರುವುದನ್ನು ಪಕ್ಕಾ ಮಾಡಿಕೊಂಡಳು. ಸ್ವಲ್ಪ ಹೊತ್ತು ಕಾಡಿಸಬೇಕು ಎಂದು ಸುಮ್ಮನಾದವಳು. ದಶರಥನಿಗೆ ಸಹಿಸಲಾಗಿಲ್ಲ. ಆಕೆಯ ರೂಪಲಾವಣ್ಯಕ್ಕೆ ಸೋತಿದ್ದ. ಅವಳ ನೋವನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯವೆಂದು ಬಗೆದ.. ಅದು ತನಕ ತಾನು ಗಳಿಸಿದ ಸುಕೃತದ ಮೇಲೆ ಆಣೆಯಿಟ್ಟು ಅವಳ ಬಯಕೆಯನ್ನು ಈಡೇರಿಸುವೆ ಎಂದು ಅಂಗಲಾಚಿದ.

dhavala dharini king dasharatha

ಆದರೂ ಸುಮ್ಮನಿದ್ದ ಕೈಕೇಯಿಗೆ ಕೊನೆಯದಾಗಿ “ನನ್ನ ರಾಮನಾಣೆಗೂ ನೀನು ಹೇಳುವ ಕಾರ್ಯವನ್ನು ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿಬಿಟ್ಟ. ಗಾಳದಲ್ಲಿ ಚಿಕ್ಕಮೀನನ್ನು ಚುಚ್ಚಿ ದೊಡ್ಡಮೀನನ್ನು ಸೆಳೆಯುವಂತೆ ಚಕ್ರವರ್ತಿಯನ್ನು ಮಟ್ಟುಹಾಕಿ ತನ್ನ ಕಾರ್ಯಸಾಧಿಸಲು ಇದೇ ಸಮಯವೆಂದು ತಿಳಿದ ಕೈಕೇಯಿ ಬಯಕೆಯನ್ನು ಹೇಳುವ ಮುನ್ನ ರಾಜನಲ್ಲಿನ ಧರ್ಮಪ್ರಜ್ಞೆಯನ್ನು ಜಾಗ್ರತಗೊಳಿಸಲು “ನೀನು ಮಾಡಿದ ಈ ಪ್ರತಿಜ್ಞೆಯನ್ನು ಮೂವತ್ತುಮೂರು ಕೋಟಿ ದೇವತೆಗಳು ಕೇಳಲಿ, ಚಂದ್ರಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ನವಗ್ರಹಗಳು, ಹಗಲು-ರಾತ್ರಿಗಳು, ಎಂಟುದಿಕ್ಕುಗಳು,ಗಂಧರ್ವರಾಕ್ಷಸರನ್ನೊಳಗೊಂಡಿರುವ ಸ್ವರ್ಗ-ಮರ್ತ್ಯ-ಪಾತಾಳ, ನಿಶಾಚರರೂ, ಪಿಶಾಚಗಳೂ, ಭೂತಗಣಗಳೂ, ಗೃಹದೇವತೆಗಳೂ ಸಹಿತ ಎಲ್ಲರೂ ನೀನು ಹೇಳಿದ ಈ ಪ್ರತಿಜ್ಞಾವಾಕ್ಯಕ್ಕೆ ಸಾಕ್ಷಿಗಳಾಗಲಿ” ಎಂದವಳೇ ಆತನನ್ನು ಸಂಪೂರ್ಣವಾಗಿ ಖೆಡ್ಡಾಕ್ಕೆ ತೋಡುವ ಈ ಮಾತನ್ನು ಆಡುತ್ತಾಳೆ.

ಸತ್ಯಸಂಧೋ ಮಹಾತೇಜಾಃ ಧರ್ಮಜ್ಞಃ ಸುಸಮಾಹಿತಾಃ.
ವರಂ ಮಮ ದದಾತ್ಯೇಷಃ ತನ್ಮೇ ಶ್ರೃಣ್ವನ್ತು ದೈವತಾಃ৷৷ಅಯೋ.11.16৷৷

ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ ಮಹಾತೇಜಸ್ವಿಯಾದ, ಧರ್ಮಜ್ಞನಾದ ಧಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಲಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ವ್ಯಾಧನ ಧ್ವನಿಯಿಂದ ಆಕರ್ಷಿತಳಾಗಿ ಬಲೆಗೆ ಬೀಳುವ ಜಿಂಕೆಯಂತೆ ರಾಜನು ತನ್ನ ವಿನಾಶಕ್ಕಾಗಿ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದು ಹೀಗೆ. ಅವನಿಗೆ ಮುಂದೆ ಮಾತಾಡಲು ಅವಕಾಶಕೊಡದಂತೆ ಆತನನ್ನು ಬಿಗಿದಪ್ಪಿ ತನಗೆ ಹಿಂದೆ ಕೊಟ್ಟಿದ್ದ ವರಗಳನ್ನು ಅಪೇಕ್ಷಿಸಿ ಅದಕ್ಕೆ ರಾಜ ಬೇರೆ ಏನನ್ನಾದರೂ ಹೇಳಬಾರದೆಂದು, “ರಾಮನಿಗೆ ಪಟ್ಟಾಭಿಷೇಕಕ್ಕೆ ಯಾವೆಲ್ಲಾ ಸಿದ್ಧತೆಗಳಾಗಿವೆಯೋ ಅದೇ ಸಾಂಬಾರಪದಾರ್ಥಗಳಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕು. ಎರಡನೇಯ ವರವನ್ನೂ ಹೇಳಿಯೇಬಿಡುವೆ.

ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ.

ಹದಿನಾಲ್ಕು ವರುಷಗಳ ಕಾಲ ರಾಮನು ದಂಡಕಾರಣ್ಯಕ್ಕೆ ಹೋಗಿ ಅಲ್ಲಿ ಅವನು ಜಟಾಧಾರಿಯಾಗಿ ನಾರಮುಡಿಯನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ಇರಬೇಕು.

ಕೈಕೇಯಿ ಇಷ್ಟಕ್ಕೇ ನಿಲ್ಲಿಸುವುದಿಲ್ಲ. “ಆದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನಮ್- ರಾಘವನು ಚೀರಾಜಿನ-ಜಟಾಧಾರಿಯಾಗಿ ಕಾಡಿಗೆ ಹೋಗುವುದನ್ನು ಈಗಲೇ ನಾನು ನೋಡಬೇಕು, ಸತ್ಯವಚನನಾದ ನೀನು ಈಗಲೇ ನಡೆಸಿಕೊಡು” ತನ್ನ ಇಬ್ಬರು ಪ್ರಿಯರಲ್ಲಿ ಒಬ್ಬನಾದ ರಾಮನಿಗೆ ಆಘಾತಕಾರಿಯಾದ ವಿಷಯಗಳನ್ನು ಹೇಳುವ ಮಾತುಗಳು ದಶರಥನ ಕಾಮದ ಪಿತ್ಥವನ್ನು ಜರ್ರನೆ ಇಳಿಸಿಯೇಬಿಟ್ಟಿತು; ಜೊತೆಗೆ ಆತನ ಮನೋಧೈರ್ಯವನ್ನೂ ಸಹ! ಲೋಕದ ಎಲ್ಲಾ ರಾಜರನ್ನು, ಪ್ರಜೆಗಳನ್ನು ಮತ್ತು ವಶಿಷ್ಠರಾದಿಯಾಗಿರುವ ಎಲ್ಲಾ ಋಷಿಗಳನ್ನು ತನ್ನ ಇಷ್ಟಕ್ಕೆ ಒಗ್ಗಿಕೊಳ್ಳುವಂತೆ ತಂತ್ರವನ್ನು ಹೂಡಿದ ಅರಸನ ಇಚ್ಛೆ ಇಲ್ಲಿ ತರಗೆಲೆಗಳಂತೆ ಗಾಳಿಗೆ ಹಾರಿಹೋಯಿತು. ಯಾವ ಉದ್ಧೇಶಕ್ಕಾಗಿ ಕೈಕೇಯಿಯ ಅರಮನೆಗೆ ಬಂದಿದ್ದನೋ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕದಡಿಹೋಯಿತು. ಅವನ ಜೀವನದಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿವದೊಂದೇ ಗುರಿ ಇದ್ದಿದ್ದು. ತನ್ನ ಪ್ರೀತಿಯ ರಾಣಿಯಿಂದಲೇ ಹೀಗೆ ವಿಘ್ನಬರಬಹುದೆಂದು ರಾಜ ಎಣಿಸಿರಲಿಲ್ಲ. ಅಂಥ ಸ್ವಲ್ಪ ಅನುಮಾನ ಬಂದಿದ್ದರೂ ಆತ ಕೈಕೇಯಿಯ ಅರಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆಲೇ ಎಚ್ಚರತಪ್ಪಿ ಬಿದ್ದ. ತನ್ನ ರಾಜತ್ವಕ್ಕೆ ಧಿಕ್ಕಾರ ಹಾಕಿಕೊಂಡ. ಕೊನೆಗೆ ಅನಿವಾರ್ಯವಾಗಿ ಕೈಕೇಯಿಗೆ ನಮಸ್ಕರಿಸಿಕೊಂಡು “ನಿನ್ನ ಕಾಲನ್ನು ಬೇಕಾದರೂ ಹಿಡಿಯುತ್ತೇನೆ, ರಾಮನನ್ನು ರಕ್ಷಿಸು. ವರದಾನವೆನ್ನುವ ಒಂದು ಪ್ರತಿಜ್ಞೆಯಲ್ಲಿ ನನ್ನನ್ನು ಸಿಕ್ಕಿಹಾಕಿಸಿ ನಿರಪರಾಧಿಯನ್ನು ಕಾಡಿಗಟ್ಟಿದ ದೋಷ ನನಗೆ ಬಾರದಿರಲಿ” ಎಂದು ನೆಲದಲ್ಲಿ ಹೊರಳಾಡತೊಡಗಿದ.

ಮೂಂದಿನ ಭಾಗದಲ್ಲಿ ತನ್ನ ಕರ್ಮಫಲವನ್ನು ತಾನು ಉಂಡ ಮಹಾರಾಜ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading
Advertisement
Naxals
ದೇಶ16 mins ago

Naxals: ಮತ್ತೆ ಮೂವರು ನಕ್ಸಲರ ಹತ್ಯೆ, ಎನ್‌ಕೌಂಟರ್‌ನಲ್ಲಿ ಈ ವರ್ಷ ಶತಕ ಬಾರಿಸಿದ ಭದ್ರತಾ ಸಿಬ್ಬಂದಿ!

sslc result
ಶಿಕ್ಷಣ20 mins ago

SSLC Result : ರಾಜ್ಯ ಶಿಕ್ಷಣ ಗುಣಮಟ್ಟ ಕುಸಿತ, ICSE-CBSE ಕಡೆ ವಲಸೆ; ಇಲಾಖೆ ವಿರುದ್ಧ ಕ್ಯಾಮ್ಸ್‌ ಕಟು ಟೀಕೆ

Pavithra Jayaram died in the accident may alive if the ambulance arrived
ಸಿನಿಮಾ24 mins ago

Pavithra Jayaram: ಪವಿತ್ರ ಜಯರಾಂಗೆ ಅಂತಿಮ ವಿದಾಯ; ಭಯದಲ್ಲೇ ಪ್ರಾಣ ಬಿಟ್ರಾ ನಟಿ?

Sequins partywear fashion
ಫ್ಯಾಷನ್25 mins ago

Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್‌ ಔಟ್‌ಫಿಟ್ಸ್‌

Prajwal Revanna Case
ಕರ್ನಾಟಕ38 mins ago

Prajwal Revanna Case: ಪೆನ್‌ಡ್ರೈವ್, ವಿಡಿಯೊ ಇದ್ದವರನ್ನೆಲ್ಲ ಬಂಧಿಸ್ತಾರಾ?; ಆಪ್ತರ ಬಂಧನದ ಬಗ್ಗೆ ಪ್ರೀತಂ ಗೌಡ ಫಸ್ಟ್‌ ರಿಯಾಕ್ಷನ್

Pushpa 2 Allu Arjun fan recreates hook step on graduation day
ಟಾಲಿವುಡ್38 mins ago

Pushpa 2: ಪದವಿ ಪ್ರದಾನ ವೇಳೆ ‘ಪುಷ್ಪ 2’ ಹುಕ್ ಸ್ಟೆಪ್ ಹಾಕಿದ ವಿದ್ಯಾರ್ಥಿ: ವಿಡಿಯೊ ವೈರಲ್‌

IPL 2024
ಪ್ರಮುಖ ಸುದ್ದಿ43 mins ago

IPL 2024 : ಮೈದಾನದಿಂದಲೇ ಅನುಷ್ಕಾಗೆ ಕೈ ಸನ್ನೆ ಮಾಡಿದ ಕೊಹ್ಲಿ; ಇಲ್ಲಿದೆ ವಿಡಿಯೊ

Maldives
ದೇಶ54 mins ago

Maldives: ಭಾರತದ ಯುದ್ಧವಿಮಾನ ಹಾರಿಸುವ ತಾಕತ್ತು ನಮ್ಮ ಪೈಲಟ್‌ಗಳಿಗಿಲ್ಲ ಎಂದ ಮಾಲ್ಡೀವ್ಸ್, ಎಂಥಾ ದುಸ್ಥಿತಿ!

Rahul Gandhi
ದೇಶ1 hour ago

Rahul Gandhi: ಮದ್ವೆ ಬಗ್ಗೆ ಕಾರ್ಯಕರ್ತರ ಪ್ರಶ್ನೆ..ವೇದಿಕೆಯಲ್ಲೇ ಉತ್ತರ ಕೊಟ್ಟ ರಾಹುಲ್‌: ವಿಡಿಯೋ ವೈರಲ್‌

Health Tips Kannada
ಆರೋಗ್ಯ1 hour ago

Health Tips Kannada: ಕಣ್ಣಿನ ಕೆಳಗಿನ ಕಪ್ಪು ಕಲೆ ನಿವಾರಿಸುವುದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ6 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ11 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ12 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ23 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ24 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ24 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ2 days ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

ಟ್ರೆಂಡಿಂಗ್‌