ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪಿಂಕ್ ಟ್ರಂಪೆಟ್ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪಿಂಕ್ ಟ್ರಂಪೆಟ್

ಗಂಡನಿಲ್ಲದ ಅವಳ ಹೆಸರು ಶರಾವತಿ. ಹೆಂಡತಿ ತೊರೆದ ಅವನ ಹೆಸರು ರತ್ನಾಕರ. ವರ್ಷಕ್ಕೊಮ್ಮೆ ಹೂ ಬಿಟ್ಟು ದಾರಿಯಲ್ಲಿ ಚೆಲ್ಲುವ ಪಿಂಕ್‌ ಟ್ರಂಪೆಟ್‌ನಂತೆ ಅವರ ನಡುವಿನ ಮಧುರ ಭೇಟಿ. ಓದಿ, ವಿಸ್ತಾರ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕಥೆ.

VISTARANEWS.COM


on

kannada short story pink trumpet
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

:: ಚೈತ್ರಿಕಾ ಹೆಗಡೆ

ಶರಾವತಿ ಸಂಜೆಯಾಗುವುದನ್ನೇ ಕಾಯುತ್ತಿದ್ದಳು. ಊರಿನಂತೆ ಬೆಂಗಳೂರಿನಲ್ಲಿ ನಿಧಾನಕ್ಕೆ ಸಂಜೆಯಾಗುವುದಿಲ್ಲ. ಊರಲ್ಲಿದ್ದರೆ ಮೂರು ಗಂಟೆಗೆ ಚಹಾ ಕುಡಿದು, ತಲೆ ಬಾಚಿ, ಒಂದೆರಡು ಗಿದ್ನ ಅಡಕೆ ಸುಲಿದು, ಕೊಟ್ಟಿಗೆಗೆ ಹೋಗಿ ಹಾಲು ಕರೆದು, ಓರಿ ಬಾಗಿಲಿನಿಂದ ಒಳಗೆ ಬರುವಾಗ ಬೆಳಕು ಫೇರಿ ಕೀಳುತ್ತಿರುತ್ತದೆ. ಆದರೆ ಬೆಂಗಳೂರಿನಲ್ಲಿ ಮಧ್ಯಾಹ್ನದ ಮೇಲೆ ಮಲಗಿ, ಎದ್ದು, ನೀರಿಗೆ ಬಿದ್ದ ಚಹಾಪುಡಿ ಬಣ್ಣ ಬಿಡುವಷ್ಟರಲ್ಲಿ ಆಕಾಶದಲ್ಲೂ ಕೆಂಬಣ್ಣ! ಮಜಾ ಎಂದರೆ ಇವತ್ತು ಮಾತ್ರ ಶರಾವತಿಗೆ ಸಂಜೆ ಬೇಗ ಆಗುತ್ತಲೇ ಇಲ್ಲ ಅನಿಸುತ್ತಿತ್ತು. ನಾಲ್ಕುವರೆಗೇ ಚಹಾ ಕುಡಿದು, ಲೆಗ್ಗಿನ್ನು ಕುರ್ತಾ ಹಾಕಿ, ಜಡೆ ಕಟ್ಟಿಕೊಂಡು, ಸೇವಂತಿಗೆ ಎಸಳುಗಳ ಚಿಕ್ಕ ಮಾಲೆಯನ್ನು ಸಿಕ್ಕಿಸಿಕೊಂಡು, ವಾಕಿಂಗ್ ಶೂಗಳನ್ನು ತೊಟ್ಟು ರಸ್ತೆಗಿಳಿಯುವಾಗ ಇನ್ನೂ ಐದಕ್ಕೆ ಐದು ನಿಮಿಷ ಇತ್ತು! ಎಷ್ಟೊತ್ತಿಗೆ ರತ್ನಾಕರನನ್ನು ನೋಡುತ್ತೇನೋ ಎಂದು ಹಪಹಪಿಸುತ್ತ ಪಕ್ಕದ ಬೀದಿ ಕಡೆ ಹೆಜ್ಜೆ ಹಾಕಿದರೆ ಅವಳ ಸ್ವಾಗತಕ್ಕೆ ರತ್ನಾಕರನೇ ಹೂಗಳನ್ನು ಹಾಸಿ ಕಾಯುತ್ತಿರುವನೇನೋ ಎಂಬಂತೆ ಅವನ ಮನೆಯ ಬೀದಿಯ ತುಂಬ ತಿಳಿ ಗುಲಾಬಿ ಬಣ್ಣದ ಟ್ರಂಪೆಟ್ ಹೂಗಳು ಉದುರಿಬಿದ್ದಿದ್ದವು. ಹೂಗಳ ಮೇಲೆ ಹೆಜ್ಜೆ ಇಡದಂತೆ ನಿಗಾ ವಹಿಸುತ್ತ ‘ಗಾಯತ್ರಿ’ ಎಂಬ ಮನೆಯ ಬಳಿ ಬರುವಾಗ ಹೊಟ್ಟೆಯೊಳಗೆಲ್ಲ ವಿಚಿತ್ರ ಸಂಕಟ! ರತ್ನಾಕರ ಇವತ್ತಾದರೂ ಕಾದಂಬರಿಯನ್ನು ತೆರೆದು ನೋಡಿರಬಹುದೇ? ಎಂಬ ಹುಚ್ಚು ಕಾತರ. ಆದರೆ ರತ್ನಾಕರ ಅವನ ಮನೆಯ ಬಳಿ ಕಾಣಿಸದೇ ಹೋಗಿದ್ದರಿಂದ ಒಂದೋ ಮುಂದೆ ಹೋಗಿರಬಹುದು ಇಲ್ಲ ತಡವಾಗಿ ಬರಬಹುದೆಂದು ದೇವಸ್ಥಾನದ ಕಡೆ ತುಸು ನಿರಾಸೆಯಲ್ಲೇ ಹೊರಟಳು ಶರವಾವತಿ.

ಹೋದ ವರ್ಷ ಪುಟ್ಟುವಿಗೆ ಕೆಲಸ ಸಿಕ್ಕು ಆತ ರಾಜರಾಜೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದಾಗ ಒಂದಷ್ಟು ದಿನಕ್ಕೆಂದು ಬಂದ ಶರಾವತಿ ಪುಟ್ಟುವಿನ ಹಠಕ್ಕೆ ಜೂನ್ವರೆಗೂ ಉಳಿದಿದ್ದಳು. ಆಗ ಪರಿಚಯವಾದವನು ರತ್ನಾಕರ. ಸ್ವಲ್ಪ ದಪ್ಪಗೆ, ಎಣ್ಣಗಪ್ಪಿನ ಐವತ್ತರ ಹರೆಯದ ರತ್ನಾಕರ ಇಂಥದ್ದೇ ಸಂಜೆಯಲಿ ಶರವಾತಿ ಪಕ್ಕದ ಬೀದಿಯ ಮಾಲಾ ಮತ್ತು ಸುಜಾತಾ ಜೊತೆ ವಾಕಿಂಗು ಮಾಡುತ್ತಿದ್ದಾಗ ಸಿಕ್ಕವನು. ಅವಳ ಹೆಸರು, ಊರು ಕೇಳಿ ‘ನಿಮ್ ಊರಿನ ಹತ್ತಿರ ಇರೋದು ಅಘನಾಶಿನಿ ನದಿ ಅಲ್ವಾ ಮತ್ಯಾಕೆ ಶರಾವತಿ ಅಂತ ಹೆಸರು ನಿಮ್ಗೆ?’ ಎಂದು ಪಕಪಕನೇ ನಕ್ಕವನು. ‘ಹುಟ್ಟಿದ್ದು ಶರಾವತಿ ನದಿ ಅಂಚಿನ ಹೊನ್ನಾವರದಲ್ಲಿ, ಅಲ್ಲಿಂದ ಹರ್ದು ಬಂದಿದ್ದು ಅಘನಾಶಿನಿ ಅಂಚಿನ ಬಾಳೆಹಳ್ಳಿಗೆ’ ಎನ್ನುತ್ತ ಇವಳೂ ನಕ್ಕಿದ್ದಳು. ಒಮ್ಮೊಮ್ಮೆ ತೀರ ಅಪರಿಚಿತರೊಬ್ಬರು ಏಕ್ದಮ್ ಆಪ್ತರು ಅನಿಸುವುದಕ್ಕೆ ಯಾವ ಜಾದೂ ಆಗುವುದೂ ಬೇಕಾಗುವುದಿಲ್ಲ! ಏನೂ ಕಾರಣವೇ ಇಲ್ಲದೆ ಹತ್ತಿರವಾಗಿಬಿಡುತ್ತಾರೆ.

ಶರಾವತಿಗೂ ರತ್ನಾಕರ ಹತ್ತಿರವಾಗಿದ್ದು ಹೀಗೆಯೇ. ಅವತ್ತಿನಿಂದ ಅವರಿಬ್ಬರೂ ಜೊತೆಗೇ ವಾಕಿಂಗ್ ಹೋಗುವುದು ಖಾಯಮ್ ಆಯಿತು! ಮಾಲಾ, ಸುಜಾತ, ಫಸ್ಟ್ ಕ್ರಾಸಿನ ಬಾಬು ಇವರೆಲ್ಲ ಬರಲಿ ಬಿಡಲಿ ಶರವಾತಿ ಬರುವುದು ಕಾಣಿಸಿದರೆ ರತ್ನಾಕರ ಅವಳ ಜೊತೆಯೇ ನಡೆಯುತ್ತಿದ್ದ. ಅಲ್ಲಿಂದ ಪಕ್ಕದ ಬೀದಿಗೆ ಹೋಗಿ ಬಲಕ್ಕೆ ತಿರುಗಿದರೆ ದೇವಸ್ಥಾನವೊಂದಿತ್ತು, ಅಲ್ಲೊಂದಷ್ಟು ಹೊತ್ತು ಕೂತು ಮರಳುವುದು ರೂಢಿ. ಒಮ್ಮೊಮ್ಮೆ ಮೇಯ್ನ್ ರೋಡಿಗೆ ಹೋಗಿ ನರ್ಸರಿ ಹೊಕ್ಕು ಗಿಡಗಳನ್ನು ಚೌಕಾಶಿ ಮಾಡಿ ಮಾಡಿ ರತ್ನಾಕರ ಕೊಳ್ಳುತ್ತಿದ್ದ. ಆಗೆಲ್ಲ ಶರಾವತಿಗೆ ‘ನಮ್ಮನೆಗೆ ಬನ್ನಿ ಚಂದ್ ಚಂದದ ಹೂವಿನ್ ಗಿಡ ಕೊಡ್ತೇನೆ, ಒಂದ್ ರೂಪಾಯೂ ಬೇಡ ಮತ್ತೆ’ ಎಂದು ಹೇಳಬೇಕೆನಿಸುತ್ತಿತ್ತು. ಆದರೆ ಅವನು ಕೊಳ್ಳುತ್ತಿದ್ದ ಕಳ್ಳಿ ಗಿಡಗಳನ್ನೆಲ್ಲ ಅವಳು ಅದೇ ಮೊದಲು ನೋಡಿದ್ದಾಗಿತ್ತು. ‘ಇದಕ್ಕೆ ಅಷ್ಟು ದುಡ್ ಕೊಟ್ರ? ಹೂವೂ ಬಿಡೂದಿಲ್ಲ’ ಎಂದಾಗ, ‘ಕ್ಯಾಕ್ಟಸ್ ನಂಗಿಷ್ಟ’ ಎಂದಿದ್ದ . ‘ನಾನಂತೂ ಹೂವಿನ ಮಳ್ಳು’ ಎಂದಿದ್ದಳು ಇವಳು. ‘ಬೆಂಗಳೂರಿನ ಮನೇಲಿ ಹೊತ್ತೇ ಹೋಗಲ್ಲ’ ಅಂದವಳಿಗೆ ‘ನಂಗೆ ಚಪಾತಿ ಮಾಡಿಕೊಡಿ ನನ್ನ ಹೆಂಡತಿಗೂ ಕೆಲಸ ಕಡಿಮೆಯಾಗತ್ತೆ, ಫ್ರೀಯಾಗೆನೂ ಬೇಡ, ಮತ್ತೆ ನೀವು ಇಲ್ಲಿ ಇರೋಷ್ಟು ದಿನ ಸಾಕು’ ಎಂದಿದ್ದ. ಪುಟ್ಟುವಿಗಿದು ಇಷ್ಟವಿಲ್ಲ ಎಂದು ಗೊತ್ತಿದ್ದರೂ ಶರಾವತಿ ಒಪ್ಪಿದ್ದಳು. ಅವತ್ತಿನಿಂದ ದಿನ ಆರು ಚಪಾತಿ, ಒಂದು ಬಗೆಯ ಪಲ್ಯ, ಜೊತೆಗೆ ಮೊಳಕೆ ಕಾಳು ತಯಾರಿಸಿ ರತ್ನಾಕರನ ಮನೆಗೆ ಕೊಟ್ಟು ಬರುತ್ತಿದ್ದಳು. ಆಗಲೇ ಗಾಯತ್ರಿಯ ಪರಿಚಯವಾಗಿತ್ತು. ಮನೆಯ ಗೋಡೆಗೆ ಅಂಟಿಕೊಂಡಿದ್ದ ಗಾಯತ್ರಿಯ ಮಂಡಲ ಚಿತ್ರಗಳು ಆಕರ್ಷಕ ಎನಿಸಿದ್ದವು. ರತ್ನಾಕರ ಬಿಡಿಸಿದ್ದ ಡೂಡಲ್ ಆರ್ಟ್ ಶರಾವತಿಗೆ ಅರ್ಥವೇ ಆಗಿರಲಿಲ್ಲ, ಅವನ ಪುಸ್ತಕಗಳ ಶೆಲ್ಫ್ ನೋಡಿ ಕಣ್ಣರಳಿಸಿದ್ದಳು. ‘ನಿಮಗ್ಯಾವ ಪುಸ್ತಕ ಬೇಕಾದ್ರೂ ತಗೊಂಡೋಗಿ, ತುಂಬ ಜನ ತಗೊಂಡೋಗ್ತಾರೆ ನಮ್ಮನೆಯಿಂದ’ ಎಂದಿದ್ದಕ್ಕೆ ಒಂದು ಕಾದಂಬರಿಯನ್ನು ತಗೊಂಡಿದ್ದಳು. ದಿನವೂ ರತ್ನಾಕರನ ಮನೆಗೆ ಹೋಗುತ್ತ, ಗಾಯತ್ರಿಯ ಜೊತೆ ಹರಟುತ್ತ, ಪದಬಂಧ ತುಂಬುತ್ತ, ಮತ್ತೆ ಐದೂವರೆಗೆ ರತ್ನಾಕರನೊಟ್ಟಿಗೆ ವಾಕಿಂಗು ಮಾಡಲು ರಸ್ತೆಗಿಳಿಯುತ್ತ, ಬೆಂಗಳೂರೆಂಬ ದೊಡ್ಡ ಪ್ರಪಂಚದಲ್ಲಿ ಪುಟ್ಟ ಗೂಡೊಂದನ್ನು ಕಟ್ಟಿಕೊಂಡ ಶರಾವತಿಗೆ ಎರಡು ತಿಂಗಳುಗಳು ಹೇಗೇ ಕಳೆದವೆಂದೇ ಗೊತ್ತಾಗಿರಲಿಲ್ಲ.

ಆದರೆ ಅವತ್ತೊಂದಿನ ಗಾಯತ್ರಿ ರತ್ನಾಕರ ಜೋರು ಜಗಳ ಮಾಡಿಕೊಂಡ ಮೇಲೆ ಅವರ ಮನೆಯೊಳಗೆ ಹೋಗಲಿಕ್ಕೇ ಮನಸ್ಸಾಗಿರಲಿಲ್ಲ. ಗಾಯತ್ರಿಯದು ಯಾವುದೋ ಕಂಪನಿ ಕೆಲಸ, ಒಮ್ಮೊಮ್ಮೆ ಆಫೀಸಿಗೆ ಹೋಗುವುದಿರುತ್ತದೆ ಎಂದು ಅವಳೇ ಹೇಳಿದ್ದಳು. ಆದರೆ ರತ್ನಾಕರನದ್ದು ಒಂದು ಕೆಲಸ ಅಂತ ಇರಲಿಲ್ಲ. ಒಂದಷ್ಟು ದಿನ ಪೇಪರಿಗೆ ಅಂಕಣ ಬರೆಯುತ್ತಾನೆ, ಇನ್ನೊಂದಷ್ಟು ದಿನ ಬುಕ್ ಪಬ್ಲಿಶಿಂಗ್, ಆಮೇಲೇ ತಿಂಗಳಾನುಗಟ್ಟಲೇ ಏನೂ ಕೆಲಸ ಮಾಡದೆ ಇದ್ದುಬಿಡುತ್ತಾನೆ, ಮನಸ್ಸು ಬಂದರೆ ಚಿತ್ರ ಬಿಡಿಸುತ್ತಾನೆ. ತಲೆ ಕೆಟ್ಟರೆ ಕಾರ್ ಎತ್ತಿಕೊಂಡು ಏನೂ ಎತ್ತ ಹೇಳದೇ ಮೂರ್ನಾಲ್ಕು ದಿನ ನಾಪತ್ತೆ. ಇದಿಷ್ಟು ಶರಾವತಿಗೆ ಅವನ ಒಡನಾಟದಿಂದ ಅರ್ಥವಾಗಿತ್ತು. ಈ ವಿಷಯಕ್ಕೇ ಸುಮಾರು ಸಲ ಗಾಯತ್ರಿ ರತ್ನಾಕರ ವಾದ ಮಾಡಿಕೊಂಡು ಅದು ಜಗಳದವರೆಗೂ ಹೋಗುತ್ತಿತ್ತು, ಆಗೆಲ್ಲ ಶರಾವತಿ ಹೊರಟರೆ ಒಂದೋ ಗಾಯತ್ರಿ ‘ಅಯ್ಯೋ ನೀವ್ ಕೂತ್ಕೊಳಿ ನಮ್ದಿದ್ದಿದ್ದೇ’ ಎಂದು ತಡೆಯುತ್ತಿದ್ದಳು, ಇಲ್ಲವೇ ರತ್ನಾಕರ ತಡೆಯುತ್ತಿದ್ದ. ಏನು ಮಾಡುವುದೆಂದೇ ತೋಚದೇ ಯಾವುದೋ ಪುಸ್ತಕ ಓದಿದಂತೆ ಮಾಡುತ್ತ ಅಲ್ಲೇ ಕೂತಿರುತ್ತಿದ್ದಳು. ಆದರೆ ಆ ದಿನ ದೊಡ್ಡ ಜಗಳವಾಗುತ್ತಿರುವಾಗ ಅಲ್ಲಿರಲಾಗದೇ ಹೊರಡಬೇಕಾಯಿತು, ಇಬ್ಬರಲ್ಲಿ ಯಾರೊಬ್ಬರೂ ತಡೆಯಲೂ ಇಲ್ಲ. ಮರುದಿನ ಎಂದಿನಂತೆ ಚಪಾತಿ ಮಾಡಿ ಗಾಯತ್ರಿಗೆ ಫೋನ್ ಮಾಡಿದರೆ ಉತ್ತರವಿರಲಿಲ್ಲ. ಶರವಾತಿ ಬಳಿ ರತ್ನಾಕರನ ಫೋನ್ ನಂಬರೂ ಇರಲಿಲ್ಲ. ಅದಾಗಿ ಒಂದು ವಾರದ ನಂತರ ರತ್ನಾಕರ ಸಿಕ್ಕಾಗಲೇ ಗಾಯತ್ರಿ ಅಮ್ಮನ ಮನೆಗೆ ಹೋದಳೆಂಬ ವಿಚಾರ ತಿಳಿದಿತ್ತು, ಹಿಂದೆ ಹೀಗೆ ಎಷ್ಟೋ ಸಲ ಹೋಗಿ ತಿಂಗಳುಗಟ್ಟಲೇ ಬಂದಿಲ್ಲ, ಯಾವತ್ತೋ ಒಂದಿನ ‘ಸಾರಿ ಡುಮ್ಮ’ ಅಂತ ಬಂದ್ಬಿಡ್ತಾಳೆ ಎಂದು ನಕ್ಕಿದ್ದ. ಆದರೆ ಗಾಯತ್ರಿ ತಿಂಗಳು ಕಳೆದರೂ ಬಂದಿರಲಿಲ್ಲ. ಶರಾವತಿ ರತ್ನಾಕರ ಮಾತ್ರ ಯಾವತ್ತಿನಂತೆ ವಾಕಿಂಗಿಗೆ ಹೋಗುತ್ತಿದ್ದರು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್

ಈ ಬೆಂಗಳೂರಿನಲ್ಲಿ ದಿನಗಳು ಪುಟಗಳಂತೆ ಸರಸರನೇ ಮಗಚುತ್ತಿವೆ ಅನಿಸಿದ್ದರೂ ಇಷ್ಟವಾದ ಪುಟದಲ್ಲೇ ಇದ್ದುಬಿಡಲಾಗುದಿಲ್ಲವಲ್ಲ! ಶರಾವತಿ ಊರಿಗೆ ಹೊರಡುವ ದಿನ ಬಂದಿತ್ತು. ಪುಟ್ಟು ‘ಇನ್ ಸ್ವಲ್ಪ ದಿನ ಉಳ್ಕಳೇ ಅಮ್ಮಾ’ ಎಂದಾಗ ‘ಶೀ.. ತ್ವಾಟಕ್ ಮದ್ ಹೊಡ್ಯಲ್ಲೆ ಬಪ್ಪರತಿಗೆ ಮನಿಗೋಗವು ಪುಟು, ಮತೇ ರಾಶಿ ಡೇರೆ ಗಿಡ ಮಾಡವು ಈಸಲ’ ಎಂದು ಹೊರಟಿದ್ದಳು, ಬ್ಯಾಗಿನ ಜೊತೆ ಅರ್ಥವೇ ಆಗದ ಸಣ್ಣದೊಂದು ನೋವನ್ನೂ ಎದೆಯೊಳಗೆ ತುಂಬಿಕೊಂಡು ಹೊರಟಿದ್ದು ಮಾತ್ರ ಊರಿಗೆ ಹೋದಮೇಲೇಯೇ ಅರಿವಾಗಿತ್ತು! ಪುಟ್ಟುವನ್ನು ಬಿಟ್ಟು ಹೊರಡುವುದು ಒಂದು ತ್ರಾಸಾದರೆ, ರತ್ನಾಕರ ನಾಳೆಯಿಂದ ಸಿಗುವುದಿಲ್ಲ ಎಂಬ ವಿಚಿತ್ರ ತಳವಳ ಶರವಾತಿಯನ್ನು ಆವರಿಸಿದ್ದು ಅವಳಿಗೇ ಅಚ್ಚರಿ ಎನಿಸಿತ್ತು. ಹಳೆ ಕೊಟ್ಟೆಯಲ್ಲಿದ್ದ ಡೇರೆ ಗಡ್ಡೆಗಳನ್ನು ಹೊಸ ಕೊಟ್ಟೆಗೆ ವರ್ಗಾಯಿಸಿ, ಮಣ್ಣು ಹಾಕಿ, ಸಾಲಾಗಿ ಅಂಗಳದಲ್ಲಿಟ್ಟು, ನೇತ್ರಳ ಬಳಿ ಮಾಡಿಸಿಕೊಂಡ ಒಂದೇ ನಮೂನಿಯ ಕೋಲುಗಳನ್ನು ಗಿಡದ ಆಸೆರೆಗೆಂದು ಊರುತ್ತಿದ್ದರೂ ಮನಸ್ಸು ಮಾತ್ರ ಬೆಂಗಳೂರಿನ ಬೀದಿಯಲ್ಲಿ ರತ್ನಾಕರನ ಜೊತೆಗೇ ಹೆಜ್ಜೆ ಹಾಕುತ್ತಿತ್ತು. ‘ವಾಕಿಂಗಿಗೆ ಚಪ್ಪಲಿ ಕಂಫರ್ಟ್ ಅಲ್ಲ ಶೂ ತಗೊಳಿ’ ಎಂದು ಪರಿಚಯವಾದ ಶುರುವಿನಲ್ಲೇ ಹೇಳಿದ್ದ. ಪುಟ್ಟು ಮರುದಿನವೇ ಶೂ ಕೊಡಿಸಿದ್ದ. ಬೆಂಗಳೂರಿನಲ್ಲಿ ಇರುವಷ್ಟು ದಿನವೂ ಅದನ್ನು ಹಾಕಿಯೇ ನಡೆದಿದ್ದಳು ಶರಾವತಿ. ವಾರಕ್ಕೊಂದು ಸಲವಾದರೂ ಅವುಗಳನ್ನು ತೊಳೆದುಕೊಳ್ಳುತ್ತಿದ್ದಳು, ಯುಟ್ಯೂಬ್ ನೋಡಿ ಲೇಸು ಪೋಣಿಸಿಕೊಳ್ಳುತ್ತಿದ್ದಳು. ಊರಿಗೆ ಬರುವಾಗ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಭದ್ರವಾಗಿಟ್ಟು ಬಂದಿದ್ದಳು. ಮನೆಗೆ ಬರುತ್ತಿದ್ದಂತೆ ಸವೆದು ಹೋದ ಕೊಟ್ಟಿಗೆ ಚಪ್ಪಲಿಗಳನ್ನು ಮೆಟ್ಟಿಕೊಂಡು ತೋಟದ ನಿತ್ಗಟ್ಟೆಯ ಮೇಲೇ ನಡೆಯುತ್ತ ರತ್ನಾಕರನ ಜೊತೆ ವಾಕಿಂಗು ಮಾಡಿದ ದಿನಗಳನ್ನು ಮೆಲಕು ಹಾಕುತ್ತಿದ್ದರೆ ಬೆಂಗಳೂರಿನಲ್ಲಿದ್ದ ಶರಾವತಿ ತಾನೇ ಹೌದೆ ಅನಿಸಿತ್ತು ಶರಾವತಿಗೆ..!

ಮನೆಯಲ್ಯಾವತ್ತೂ ಪತ್ತಲ ಉಡುತ್ತಿದ್ದ ಶರಾವತಿ ಬೆಂಗಳೂರಿಗೆ ಬಂದ ಮೇಲೇಯೇ ಕುರ್ತಾ ಲೆಗ್ಗಿನ್ನು ಹಾಕಲು ಕಲಿತುಕೊಂಡಿದ್ದಾಗಿತ್ತು. ಪುಟ್ಟುವಿನೊಟ್ಟಿಗೆ ಬೈಕಿನಲ್ಲಿ ಓಡಾಡುವಾಗ ಸೀರೆ ಕಷ್ಟವೆಂದು ಕುರ್ತಾಗಳನ್ನು ತಗೊಂಡಿದ್ದಳು. ಆದರೆ ಶರವಾತಿಯ ಆಸೆ ಕುರ್ತಾ ತೊಡವುದಾಗಲಿ, ಶೂಗಳನ್ನು ಹಾಕಿಕೊಳ್ಳುವುದಾಗಲಿ, ಬೈಕಿನಲ್ಲಿ ಸುತ್ತುವುದಾಗಲೀ, ಮಾಲಿನ ಎಸ್ಕಲೇಟರಿನಲ್ಲಿ ಎಡವದೇ ಕಾಲಿಟ್ಟು ಹೋಗಬೇಕೆನ್ನುವುದಾಗಲಿ ಆಗಿರಲಿಲ್ಲ. ಈ ಬೆಂಗಳೂರಿನಲ್ಲಾದರೂ ನಿರ್ಭಿಡೆಯಿಂದ ಹೂವನ್ನು ಸೂಡಿಕೊಳ್ಳಬೇಕೆಂಬುದು ಅವಳ ಕೆಟ್ಟ ಬಯಕೆಯಾಗಿತ್ತು. ಅಷ್ಟೇ! ಸತ್ಯ ಹೋದ ಮೇಲೇ ಅರಿಷಿಣ ಕುಂಕುಮವನ್ನಂತೂ ಯಾರೂ ಅವಳಿಗೆ ಹಚ್ಚುತ್ತಿರಲಿಲ್ಲ ಆದರೆ ಒಂದು ಹೂವು ಸೂಡಿಕೊಂಡರೂ ‘ಗಂಡ ಸತ್ತವು ಹೂ ಸೂಡ್ಕ್ಯಳ್ಳಾಗ’ ಎಂಬ ಮಾತು ಬಾಣದಂತೆ ಬರುತ್ತಿತ್ತು. ಇನ್ನು ಪೂಜೆ ಮುಗಿದ ಮೇಲೆ ಪ್ರಸಾದ ಕೊಡವಾಗಲೂ ಅವಳಿಗೆ ಹುಡುಕಿ ಹುಡುಕಿ ತುಳಸಿ ದಳವನ್ನೇ ಕೊಡುತ್ತಿದ್ದರು. ಮುತ್ತುಮಲ್ಲಿಗೆ ಜೊತೆ ಅಲ್ಲಲ್ಲಿ ಅಬ್ಬಲಿಗೆ ಹೂ ಹಾಕಿ ಮಾಲೆ ಮಾಡಿ ಮನೆಯ ಹೆಂಗಸರಿಗೆಲ್ಲ ಹಂಚಿ ತಾನೂ ಮುಡಿಯುತ್ತಿದ್ದವಳಿಗೆ, ಮಳೆಗಾಲದಲ್ಲಿ ಕಡ್ಡಿ ಡೇರೆ ಹೂಗಳನ್ನು ಆಸೆಯಿಂದ ಸೂಡಿಕೊಳ್ಳುತ್ತಿದ್ದವಳಿಗೆ, ಗುಲಾಬಿ ಹೂವನ್ನು ಎರಡು ಮೂರು ದಿನ ನೀರಿನಲ್ಲಿಟ್ಟು ಬಾಡದಂತೆ ನೋಡಿಕೊಳ್ಳುತ್ತಿದ್ದವಳಿಗೆ ಬದುಕಿನ ಎಲ್ಲ ಕನಸುಗಳೂ ಒಮ್ಮೇಲೇ ಬಾಡಿ ಹೋಗಿದ್ದು ಸತ್ಯ ತೀರಿ ಹೋದ ಮೇಲೆ! ಮತ್ತವು ಯಾವತ್ತೂ ಚಿಗುರುವುದಿಲ್ಲವೆಂದು ಚಿವುಟಿ ಚಿವುಟಿ ಅರ್ಥ ಮಾಡಿಸಿದ್ದು ಅವಳ ಮನೆಯವರೇ. ಸುಮ್ಮನೆ ಹೇಳಿಸಿಕೊಳ್ಳುವುದ್ಯಾಕೆಂದು ಹಬ್ಬ ಗಿಬ್ಬಗಳಲ್ಲಿ ದೇವರ ಮನೇಗೇ ಬರುತ್ತಿರಲಿಲ್ಲ, ವಿಶೇಷದ ಮನೆಗೂ ಹೋಗುತ್ತಿರಲಿಲ್ಲ, ಬಾವಂದಿರ ಮಕ್ಕಳ ಮದುವೆಯಲ್ಲೂ ಮಂಟಪದ ಬಳಿ ಸುಳಿದಿರಲಿಲ್ಲ. ಇನ್ನು ಹೂವಿನ ಆಸೆಯನ್ನಂತೂ ಬಿಟ್ಟೇ ಬಿಟ್ಟಿದ್ದಳು. ಆದರೆ ಬೆಂಗಳೂರು ಊರಿನ ಏಕತಾನತೆಯಿಂದ, ಇಷ್ಟು ವರ್ಷಗಳಿಂದ ಸಿಂಬೆಯಾಗಿ ರಾಶಿ ಬಿದ್ದ ಮೌನದಿಂದ, ಎಲ್ಲ ಇದ್ದೂ ಯಾರೂ ಇಲ್ಲದಂತೆ ಕಂಗೆಡಿಸುವ ಒಂಟಿತನದಿಂದ ತಪ್ಪಿಸಿಕೊಳ್ಳುವ ದಾರಿಯಾಗುತ್ತದೆ ಎಂದಷ್ಟೇ ಅಂದುಕೊಂಡವಳಿಗೆ, ಮನೆಯಲ್ಲಿದ್ದಾಗ ತನ್ನ ಹತ್ತಿರವೂ ಸುಳಿಯದೇ ದೊಡ್ಡಪ್ಪ , ಚಿಕ್ಕಪ್ಪ, ಅಣ್ಣಂದಿರ ಜೊತೆಗೇ ಬೆಳೆದುಬಿಟ್ಟ ಪುಟ್ಟುವಿನ ಹತ್ತಿರ ಮತ್ತೆ ತಾನು ಹೋಗುವಂತೆ ಮಾಡಿದ್ದೇ ಈ ಮಾಯಾನಗರಿ ಎಂದು ಕೃತಜ್ಞತೆ ಇಟ್ಟುಕೊಂಡವಳಿಗೆ ಈ ಊರು, ಈ ಊರಿನ ಯಾವುದೋ ಬೀದಿ ತಾನು ಯಾವತ್ತೂ ಕಾಣದ ಕನಸಿನ ಬೇರೊಂದನ್ನು ಎದೆಗೆ ಇಳಿಸುತ್ತದೆಯೆಂಬ ಅಂದಾಜೂ ಇರಲಿಲ್ಲ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು

ಬೆಂಗಳೂರಿಗೆ ಬಂದಾಗ ಇಲ್ಲಿ ಎಲ್ಲರೂ ತನಗೆ ಅಪರಿಚಿತರೇ ತಾನೇ? ತಾನು ಹೂವು ಸೂಡಿಕೊಳ್ಳಲಿ ಬಿಡಲಿ ಯಾರ ತಕರಾರು ಇರುವುದಿಲ್ಲವಲ್ಲ ಎಂದು ಪುಟ್ಟುವಿನ ಬಳಿ ಹೂವು ತರಿಸಿಕೊಂಡು, ಫ್ರಿಜ್ಜಿನಲ್ಲಿಟ್ಟುಕೊಂಡು, ದಿನ ಅಷ್ಟಷ್ಟೇ ಹೂವುಗಳನ್ನೆತ್ತಿ ಒಂದೊಂದು ಥರದ ಮಾಲೆ ಮಾಡಿಕೊಂಡು, ಮಧ್ಯಾಹ್ನ ಪಟ್ಟಗೆ ಜಡೆ ಹಾಕಿ ಸೂಡಿಕೊಳ್ಳಲು ಶುರು ಮಾಡಿದ್ದಳು. ನಿಜ ಹೇಳಬೇಕೆಂದರೆ ಅವಳಿದ್ದ ಅಪಾರ್ಟ್ಮೆಂಟಿನ ಹಾಗೂ ಅಕ್ಕಪಕ್ಕದ ಮನೆಯ ಹೆಂಗಸರು ‘ನಿಮ್ಮ ಯಜಮಾನ್ರು?’ ಎಂದು ಕೇಳಿದಾಗ ‘ಅವರಿಲ್ಲ’ ಎನ್ನಲು ಬಾಯೇ ಬರದೇ ಅಥವಾ ಗಂಡ ಇಲ್ಲದವಳೆಂದು ಗೊತ್ತಾದರೆ ತಾನಿಷ್ಟಪಡುವ ಈ ಬೆಂಗಳೂರು ಬದಲೇ ಆಗಿಬಿಡಬಹುದೆಂಬ ಭಯಕ್ಕೋ ಏನೋ “ಯಜಮಾನ್ರು ಊರಲ್ಲಿದ್ದಾರೆ” ಎಂದುಬಿಟ್ಟಿದ್ದಳು. ಅಷ್ಟನ್ನು ಹೇಳುವುದು ಹೇಳಿ ಯಾಕಾದರೂ ಹಾಗೇ ಹೇಳಿದೆನೋ ಎಂದು ಒದ್ದಾಡಿದ್ದಳು. ಕೆಲವೊಂದನ್ನು ಹೇಳಿದ ಮೇಲೆ ಮತ್ತೆ ತಿದ್ದಲಾಗುವುದೇ ಇಲ್ಲ! ಆದರೆ ರತ್ನಾಕರ ಕೇಳಿದಾಗ ಮಾತ್ರ ನಿಜವನ್ನೇ ಹೇಳಿದ್ದಳು, ಆಗ ರತ್ನಾಕರ ಕೇಳಿದ್ದ ಪ್ರಶ್ನೆ ಶರವಾತಿಯ ಇಷ್ಟ ದಿನದ ಬದುಕನ್ನೇ ಅಲ್ಲಾಡಿಸಿಬಿಟ್ಟಿತ್ತು. ‘ನೀವ್ಯಾಕೆ ಮತ್ತೊಂದು ಮದ್ವೆ ಆಗ್ಲಿಲ್ಲ?’ ಎಂದು ಎಷ್ಟು ತಣ್ಣಗೆ, ಎಷ್ಟೊಂದು ಸಹಜವಾಗಿ, ಮತ್ತೆ ಒಂದಿಷ್ಟೂ ಕನಿಕರವಿಲ್ಲದೇ ಪೂರ್ತಿ ಕಾಳಜಿ ಮಾತ್ರದಿಂದ ಆ ಪ್ರಶ್ನೆಯೆತ್ತಿದ್ದನಲ್ಲ ಅವನು..? ಸತ್ಯ ತೀರಿ ಹೋದ ನಂತರದ ಈ ಹದಿನೆಂಟು ವರ್ಷಗಳಲ್ಲಿ ಯಾರೂ ಕೇಳದ, ಸ್ವತಃ ತನಗೇ ತಾನೂ ಕೇಳಿಕೊಳ್ಳದ ಪ್ರಶ್ನೆಯನ್ನು ರತ್ನಾಕರ ಕೇಳಿಬಿಟ್ಟಿದ್ದ. ಆದಿನ ರಾತ್ರಿ ಪೂರ ಶರಾವತಿಗೆ ರೆಪ್ಪೆಗೆ ರೆಪ್ಪೆ ಹಚ್ಚಲು ಆಗಿರಲೇ ಇಲ್ಲ. ‘ಹೌದು ತಾನ್ಯಾಕೆ ಮತ್ತೊಂದು ಮದುವೆ ಆಗಲಿಲ್ಲ?’ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳಿಕೊಂಡಿದ್ದಳು. ಮೊನ್ನೆ ಮೊನ್ನೆ ಪಕ್ಕದೂರಿನ ಸುಬ್ಬು ಮಾವಿನ ಮರದಿಂದ ಬಿದ್ದು ಹೋಗಿಬಿಟ್ಟಾಗ ಅವನ ಹೆಂಡತಿ ಮತ್ತೊಂದು ಮದುವೆ ಆದಳಲ್ಲ? ಅಷ್ಟೇ ಯಾಕೇ ತನ್ನ ಊರಿನ ಸುಮಾ ಕೂಡ ಮದುವೆ ಆಗಿ ಈಗ ಹುಬ್ಳಿಯಲ್ಲಿದ್ದಾಳೆ. ಗಂಡನ ಜೊತೆ ನಗುತ್ತಿರುವ ಫೊಟೋಗಳ ಸಾಲು ಸಾಲು ಸ್ಟೇಟಸನ್ನು ತಾನೇ ನೋಡುತ್ತಿರುತ್ತೇನಲ್ಲ..? ಮತ್ತೆ ತಾನ್ಯಾಕೆ? ಆಗಿನ ಕಾಲದಲ್ಲಿ ಈ ಎರಡನೆ ಮದುವೆ ಹೆಂಗಸರ ಪಾಲಿಗೆ ಚಾಲ್ತಿಯಲ್ಲಿರಲಿಲ್ಲ ಎಂದೇ..? ಯಾಕೇ? ಯಾಕೇ? ಎಂದು ಎಷ್ಟು ಕೇಳಿಕೊಂಡರೂ ಉತ್ತರವಿರಲಿಲ್ಲ., ಮತ್ತೆ ಮರುಕ್ಷಣವೇ ‘ಶೀ ಇದೆಂಥ ಮಳ್ಳು ಹಿಡತ್ತು ನಂಗೇ’ ಎಂದು ತಲೆ ಕೊಡವಿಕೊಂಡರೂ ಮನಸ್ಸಿಂದ ಆ ಪ್ರಶ್ನೆ ಹೋಗಿರಲಿಲ್ಲ.

ಬಾಳೆಹಳ್ಳಿ ಊರಿಗೆ ಶರಾವತಿ ಬಂದಿದ್ದು ಹೈಸ್ಕೂಲಿಗೆ ಹೋಗಲಿಕ್ಕಾಗಿತ್ತು. ಮನೆಯಲ್ಲಷ್ಟೇನೂ ಅನುಕೂಲವಿಲ್ಲದ ಕಾರಣ ಯಾರ್ಯಾರದ್ದೋ ಪರಿಚಯದಿಂದಾಗಿ ಇಷ್ಟು ದೂರದ ಊರಿಗೆ ಬಂದು ಮಾಬಲಣ್ಣನ ಮನೆಯಲ್ಲಿ ಉಳಿದು ಹೈಸ್ಕೂಲಿಗೆ ಹೋಗುತ್ತಿದ್ದಾಗ ಅದೇ ಊರಿನ ಸತ್ಯನ ಪರಿಚಯವಾಗಿ ಪ್ರೀತಿಯೂ ಆಗಿತ್ತು. ಊರಿನ ಹುಡುಗರ ಜೊತೆ ಲಗೋರಿ ಆಡುತ್ತ, ಹುಣಸೇಹಣ್ಣಿನ ಕಟ್ಟಮಿಟ್ಟ ಮಾಡಿ ಹೊಳೆಯಂಚಲ್ಲಿ ಕೂತು ತಿನ್ನುತ್ತ, ಶಾಲೆಗೆ ಹೋಗಿ ಬರುತ್ತಿದ್ದ ಶರಾವತಿಗೆ ಹೈಸ್ಕೂಲು ಮುಗಿಯುತ್ತಿದ್ದಂತೆಯೇ ಸತ್ಯನೊಟ್ಟಿಗೆ ಮದುವೆ ಮಾಡಿದ್ದರು. ನಾಲ್ಕು ಅಣ್ಣ ತಮ್ಮಂದಿರ ದೊಡ್ಡ ಕುಟುಂಬದಲ್ಲಿ ಶರಾವತಿ ಚಿಕ್ಕವಳೇ ಆದರೂ ಮನೆ ಕೆಲಸಗಳನ್ನೆಲ್ಲ ಕಲಿತು, ಹೊಂದುಕೊಂಡಿದ್ದಳು. ಅಡಕೆ ಸುಲಿಯುವುದನ್ನೂ ಕಲಿತಳು, ಸಂಜೆ ಹೊತ್ತಿಗೆ ಅಕ್ಕಪಕ್ಕದ ಮನೆಯವರೊಟ್ಟಿಗೆ ಚೌಕಾಬಾರ ಆಡುವಾಗ ಅವಳದ್ದೇ ಮೊದಲು ಪಟ್ಟ ಆಗುತ್ತಿತ್ತು, ಇನ್ನು ವೀಶೆಷಗಳಲ್ಲಿ ಇಸ್ಪೀಟು ಮಂಡಲವಿದ್ದಾಗ ದೊಡ್ಡ ಭಾವ ಕವಳ ತುಪ್ಪಿ ಬರಲು ಎದ್ದಾಗ ಅವನ ಕೈ ತಗೊಂಡು ಇಸ್ಪೀಟಿನ ಒಂದಾಟವನ್ನೂ ಆಡಿಬಿಡುತ್ತಿದ್ದಳು. ಅವಳದ್ದು ಚಿಕ್ಕ ವಯಸ್ಸಾಗಿದ್ದರಿಂದ ಅವಳು ಎಲ್ಲರಿಗೂ ಮಗಳಂತೆ ಇದ್ದಳು. ಸತ್ಯನೂ ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದ. ಶರು ಎಂದು ತೊಡೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ. ಬಾಣಂತನವೂ ಗಂಡನ ಮನೆಯಲ್ಲೇ ಆಗಿತ್ತು. ಆದರೆ ಬೈಕಿನಿಂದ ಬಿದ್ದು ಸತ್ಯ ಸತ್ತು ಹೋದ ಮೇಲೇ ಎಲ್ಲ ಬದಲಾಗಿಹೋಯಿತು. ಅವಳ ಜೊತೆ ಮನೆಯ ಭಾವ ಮೈದುನರು, ಊರಿನ ಗಂಡಸರು ಗಂಡ ಸತ್ತವಳ ಜೊತೆ ಸಲುಗೆಯಿಂದ ಮಾತಾಡಿದರೆ ಬೇರೆ ನಮೂನೇಯ ಹೆಸರು ಬೀಳುತ್ತದೆಯೆಂದು ಮೊದಲಿನಂತೆ ಮಾತಾಡುವುದನ್ನೇ ಬಿಟ್ಟುಬಿಟ್ಟರು. ಆ ಬದಲಾವಣೆಗೆ ಹೊಂದಿಕೊಳ್ಳಲು ಸುಮಾರು ದಿನಗಳೇ ಬೇಕಾಯ್ತು ಅವಳಿಗೆ. ಯಾವ ಗಂಡಸರ ಜೊತೆಯೂ ಮುಖಕ್ಕೆ ಮುಖ ಕೊಟ್ಟು ಎರಡಕ್ಕಿಂತ ಹೆಚ್ಚು ಮಾತಾಡುವಾಗ ಯಾರು ಏನಂದುಕೊಳ್ಳುವರೋ ಎಂದು ಯೋಚಿಸಬೇಕಾದ ಸ್ಥಿತಿ ಅವಳಿಗೆ ಅರಿವಿಲ್ಲದೇ ಏರ್ಪಾಡಾಗಿತ್ತು. ಆದರೆ ರತ್ನಾಕರನ ಜೊತೆ ಹೇಗೇ ಮಾತಿಗಿಳಿದೆ..? ಯೋಚಿಸುತ್ತಿದ್ದಳು. ಗಾಯತ್ರಿ ಬಿಟ್ಟು ಹೋಗಿದಕ್ಕೇ ರತ್ನಾಕರನ ಮೇಲೇ ಮಮತೆಯೇ..? ಅಥವಾ ತಾನು ಇನ್ನೊಂದು ಮದುವೆ ಆಗಬಹುದಿತ್ತು ಎಂಬ ಹೊಸ ಹೊಳಹು ಹುಟ್ಟುಹಾಕಿದ್ದಕ್ಕೇ ಅವನು ವಿಶೇಷ ಎನಿಸಿದನೇ? ಅಥವಾ ಕಾರಣವೇ ಇಲ್ಲದ ಸೆಳೆತವೊಂದು ಅವನನ್ನು ನೋಡಿದಾಗಿನಿಂದ ಇದೆಯೇ? ಉತ್ತರ ಸಿಕ್ಕಿರಲಿಲ್ಲ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

ಒಮ್ಮೆ ರತ್ನಾಕರನ ಜೊತೆ ನಡೆಯುತ್ತಿದ್ದಾಗ ರಸ್ತೆಯಲ್ಲಿ ಬಿದ್ದ ತಿಳಿ ಗುಲಾಬಿಯ ಹೂವೊಂದನ್ನು ಶರವಾತಿಯ ಕೈಲಿಡುತ್ತಾ ‘ಈ ಹೂವು ರಾಶಿ ರಾಶಿ ಬಿದ್ದಿದೆ ನೋಡಿ, ಬೇಕಿದ್ರೆ ಮಾಲೆ ಮಾಡ್ಕೊಂಡು ಮುಡ್ಕೊಳಿ’ ಎಂದು ಅವಳ ಹೂವಿನ ಮಳ್ಳನ್ನು ಆಡಿಕೊಂಡು ನಕ್ಕಿದ್ದ. ಅವನು ಮಾಡಿದ್ದು ತಮಾಶೆಯೇ ಆದರೂ ಸತ್ಯ ಹೋದ ಮೇಲೇ ಅವಳ ಕೈಗೊಬ್ಬರು ಹೂವು ಕೊಟ್ಟು ಮುಡಿದುಕೋ ಎಂದಿದ್ದು ಅದೇ ಮೊದಲಾಗಿತ್ತು. ಬಣ್ಣ ಬಿಟ್ಟು ತುಸು ಹಳಸಿದಂತೆ ಕಾಣುವ, ಗಟ್ಟಿ ಮುಟ್ಟಿದರೆ ಹಿಸಿದು ಹೋಗುವಷ್ಟು ಮೆತ್ತಗಿದ್ದ ಆ ಹೂವನ್ನು ಪ್ರೀತಿಯಿಂದ ನೋಡುತ್ತಾ ‘ಇದೆಂತ ಹೂವು’ ಎಂದು ಕೇಳಿದ್ದಳು. ಬೆಂಗಳೂರಿನ ಎಲ್ಲ ಬೀದಿಯಲ್ಲೂ ಗೊಂಚಲು ಗೊಂಚಲಾಗಿ ಹುಚ್ಚಂಪರಿ ಅರಳಿದ್ದ ಆ ಹೂಗಳನ್ನು ದಿನವೂ ನೋಡುತ್ತಿದ್ದರೂ ಅದರ ಹೆಸರೇನೆಂದು ಗೊತ್ತಿರಲಿಲ್ಲ ಅವಳಿಗೆ. ‘ಪಿಂಕ್ ಟ್ರಂಪೆಟ್’ ಎಂದಿದ್ದ ರತ್ನಾಕರ. ‘ನಂಗೆ ಇಂಥ ಹೆಸರೆಲ್ಲ ನೆನಪಿರಲ್ಲ’ ಎಂದು ಅವಳಂದಾಗ, ‘ತಬೆಬುಯಾ ಅಂತ ಇನ್ನೊಂದು ಹೆಸರಿದೆ ಆದ್ರೆ ಪಿಂಕ್ ಟ್ರಂಪೆಟ್ ನೆನಪಿಟ್ಕೊಳೋದೇ ಈಸಿ’ ಎಂದಿದ್ದ. ಆದರೆ ಶರವಾತಿಗೆ ಆ ಹೆಸರನ್ನು ನೆನಪಿಟ್ಟುಕೊಳ್ಳಲು ಹೆಚ್ಚು ಕಷ್ಟಪಡಬೇಕಾಗೇ ಇರಲಿಲ್ಲ. ಎಷ್ಟೋ ವರ್ಷಗಳ ಮೇಲೆ ಅವಳಿಗೊಬ್ಬರು ಹೀಗೇ ಆಪ್ತವಾಗಿ ಹೂವು ಕೊಟ್ಟಿದ್ದು, ಅದರಲ್ಲೂ ರತ್ನಾಕರ, ಅದರಲ್ಲೂ ಮುಡಿದುಕೋ ಎಂದು ಹೇಳುತ್ತ ಕೊಟ್ಟಿದ್ದು ಒಂದು ಅಪರೂಪದ ನೆನಪೇ ಆಗಿತ್ತು. ಅವಳ ಉಸಿರಿರುವಷ್ಟು ದಿನವೂ ಆ ಕ್ಷಣ ನೆನಪಿನಲ್ಲಿರುವಲ್ಲಿ ಅನುಮಾನವೇ ಇರಲಿಲ್ಲ. ಆ ಹೂವನ್ನು ರತ್ನಾಕರನಿಂದ ತಂದುಕೊಂಡಿದ್ದ ಕಾದಂಬರಿಯ ಪುಟದ ನಡುವಲ್ಲೇ ಇಟ್ಟಿದ್ದಳು. ಕಾದಂಬರಿಯನ್ನು ಓದಿ ಮುಗಿಸಿದ್ದರೂ, ದಿನಕ್ಕೊಮ್ಮೆಯಾದರೂ ಆ ಹೂವನ್ನು ನೋಡಿ ಸವರಿ ಪುಳಕಗೊಳ್ಳುವುದು ಮುಗಿಯಲಿಲ್ಲ. ಅವಳ ಜೊತೆ ಆ ಕಾದಂಬರಿ ಆ ಹೂವಿನ ಸಮೇತವಾಗಿ ಊರಿಗೂ ಹೋಗಿತ್ತು. ಭರ್ತಿ ಎಂಟು ತಿಂಗಳುಗಳ ಕಾಲ ಊರಿನಲ್ಲೇ ಮೆತ್ತಿನ ಕೋಣೆಯ ಕಪಾಟಿನ ಮೇಲ್ಬದಿಗೆ ತಣ್ಣಗಿತ್ತು.

ಪುಟ್ಟುವಿಗೆ ಫೋನು ಮಡಿದಾಗಲೆಲ್ಲ ‘ಗಾಯತ್ರಿ ವಾಪಾಸ್ ಬಂದ್ರಾ?’ ಎಂದು ಕೇಳುತ್ತಿದ್ದಳು. ‘ನಂಗೆಂತ ಗೊತ್ತಿದ್ದೆ ಅಮಾ?’ ಎಂದು ಪುಟ್ಟು ಅಲವತ್ತುಕೊಳ್ಳುತ್ತಿದ್ದರೆ ರತ್ನಾಕರನ ನಂಬರೂ ತನ್ನ ಬಳಿ ಇಲ್ಲವಲ್ಲ ಎಂದು ಹಳಹಳಿಸಿದ್ದಳು. ರತ್ನಾಕರನಿಗೂ ತಾನು ನೆನಪಾಗುತ್ತಿದ್ದರೆ ಗಾಯತ್ರಿ ಬಳಿ ನಂಬರ್ ತಗೊಂಡು ಫೋನ್ ಮಾಡಬಹುದಿತ್ತಲ್ಲ ಎಂದೂ ಅನಿಸುತ್ತಿತ್ತು. ಆದರೆ ಇದೆಲ್ಲದರ ಮಧ್ಯೆ ಒಂದಂತೂ ಖಾತ್ರಿಯಾಗಿತ್ತು, ತಾನು ರತ್ನಾಕರನನ್ನು ಇಷ್ಟಪಡುತ್ತಿದ್ದೇನೆ ಎಂಬುದು. ಇಷ್ಟ ಎಂದರೆ.. ಮದುವೆಯಾಗುವುದೇ? ಅಥವಾ ಇಷ್ಟ ಎಂದು ಹೇಳಿಕೊಳ್ಳುವುದೆ? ಹೇಳಿಕೊಳ್ಳದೇ ಸುಮ್ಮನಿರುವುದೇ? ಏನೂ ಈ ಇಷ್ಟ ಎಂದರೆ? ಬೆಳಗಿನ ಹೂ ಬಿಸಿಲಲ್ಲಿ ಅಟ್ಟ ಹತ್ತಿ, ಕಾಟನ್ನು ಸೀರೆ ಹಾಸಿ, ಕಾಳು ಬೇಳೆಗಳನ್ನು ಹರವುತ್ತಿದ್ದಾಗ ಅವನು ಎದುರಿಗೆ ಬಂದು ಕೂತಂತೆ ಭಾಸವಾಗುವುದೇ? ಹೊಳೆಯ ಮುರ್ಕಿಯಲಿ ಪೇಟೆಗೆ ಹೋಗಲು ಬಸ್ಸು ಕಾಯುತ್ತ ನಿಂತಾಗ ಅವನ ದನಿ ಕೇಳಿದಂತೆ ಬೆಚ್ಚಿ ತಿರುಗುವುದೇ? ದೊಡ್ಡ ಬ್ಯಾಣದ ಕಡೆ ಹೋದಾಗೆಲ್ಲ ಸತ್ಯನನ್ನು ಸುಟ್ಟ ಜಾಗ ಕಾಣುತ್ತಿದ್ದಂತೆ ನಿನ್ನೆಗಳಲ್ಲಿ ಮನಸ್ಸನ್ನು ಅದ್ದಿ ಹಿಂಡಲು ರತ್ನಾಕರನ ನೆನಪು ಬಿಡದಿರುವದೇ? ಏನು ಈ ಇಷ್ಟ ಎಂದರೆ? ಗೊತ್ತಿರಲಿಲ್ಲ. ಆದರೂ ಇಷ್ಟ ಅಷ್ಟೇ! ಅವನಿಂದ ದೂರವಿದ್ದಾಗ ಮನಸ್ಸು ಭಾರ, ಹತ್ತಿರದಲ್ಲಿದ್ದರೆ ಏನೋ ಹಿತ, ಅವನು ಪಕ್ಕದಲ್ಲಿ ನಡೆಯುವಾಗ ಒಂದು ಧೈರ್ಯ. ಅವನ ಅಸ್ಥವ್ಯಸ್ಥದ ಬದುಕಿನಲ್ಲಿ ತಾನೂ ಒಂದು ವಸ್ತುವಿನಂತೆ ಕಳೆದು ಹೋಗದೇ, ಆತನ ಹರಗಾಣವನ್ನೆಲ್ಲ ಪಟ್ಟಗಿಡುತ್ತ, ಅವನ ಆಲಸ್ಯವನ್ನು ಬೈಯ್ಯುತ್ತ, ಅವನು ಸುತ್ತುವ ಊರುಗಳಿಗೆ ಸಾಥಿಯಾಗುತ್ತ ಉಳಿದ ಬದುಕನ್ನು ಪ್ರೀತಿಯಿಂದ ಅವನಿಗಾಗಿ ಬದುಕಿಬಿಡಬೇಕಂಬ ಆಸೆ. ಅವಳಲ್ಲಿ ಇಷ್ಟವೆಂಬುದುಕ್ಕೆ ಇರುವ ವ್ಯಾಖ್ಯಾನ ಇದೇ! ತಾನ್ಯಾಕೆ ರತ್ನಾಕರನನ್ನು ಮದುವೆ ಆಗಬಾರದು ಎಂಬ ತಿಳಿ ಯೋಚನೆಯೊಂದು ನಿಧಾನಕ್ಕೆ ಇದರೊಟ್ಟಿಗೆ ಸೇರಿಕೊಂಡಿತು. ಆದರದು ಗಟ್ಟಿಯಾದ ನಿರ್ಧಾರವಾಗಲು ಹೆಚ್ಚು ದಿನ ಹಿಡಿಯಲಿಲ್ಲ. ಮತ್ತೆ ಇದೆಲ್ಲ ಅವಳಂದುಕೊಂಡಷ್ಟೇನು ಸಸಾರವಲ್ಲ ಎಂಬುದರ ಅರಿವೂ ಇತ್ತು. ಗಂಡ ಇಲ್ಲದೇ ಹದಿನೆಂಟು ವರ್ಷ ಕಳೆದವಳಿಗೆ ಈಗೇನಾಯಿತ್ತಪ್ಪ ಎಂದು ಊರು ಮಾತಾಡಿಕೊಳ್ಳುತ್ತದೆ. ಬೆಂಗಳೂರೆಂದು ಕುಣಿಯುವುದೇ ಇದಕ್ಕಾಗಿ ಎಂಬವರೆಗೂ ಹೋಗಿ ಮುಟ್ಟುತ್ತದೆ. ರಸ್ತೆಯ ಒಂದು ತುದಿಯಲ್ಲಿ ತಾನು ಇನ್ನೊಂದು ತುದಿಯಲ್ಲಿ ಅವನು ನಡೆದ ನಿಶ್ಕಲ್ಮಶ ಹೆಜ್ಜೆಗಳನ್ನು ಯಾರಿಗೆ ತೋರಿಸಿ ಅರ್ಥ ಮಾಡಿಸುವುದು? ಮನೆಯವರಿಗಾದರೂ ಅರ್ಥವಾಗಬಹುದೆ? ಇನ್ನು ಅಪ್ಪನ ಮನೆಯವರ ಪ್ರತಿಕ್ರಿಯೆ ಏನಿರಬಹುದು? ಮುಖ್ಯವಾಗಿ ಪುಟ್ಟು ಇದನ್ನು ಹೇಗೇ ತೆಗೆದುಕೊಳ್ಳಬಹುದು? ಇನ್ನೊಂದೆರಡು ವರ್ಷಗಳುರುಳಿದರೆ ಅವನೇ ಮದುವೆಗೆ ಬರುತ್ತಾನೆ, ಈಗ ತಾನು ಮದುವೆ ಆಗುವುದೆ? ಹೀಗೇ ಸಾವಿರ ಪ್ರಶ್ನೆಗಳು. ರತ್ನಾಕರನ ಮಗ್ಗುಲಿಗೆ ಹೊರಳಿದರೆ ಅವನಿಗೆ ತಾನಿಷ್ಟವೋ ಇಲ್ಲವೋ ಎಂಬುದೇ ಖಾತ್ರಿಯಿಲ್ಲ. ಜೊತೆಗೆ ಗಾಯತ್ರಿ ಅವನು ಈಗ ಒಟ್ಟಾಗಿದ್ದರೆ ಎಂಬ ಭಯ ಬೇರೆ.. ಒಂದೊಂದು ಸಲ ತನ್ನ ಯೋಚನೆಯೇ ತಪ್ಪು ಎನಿಸಿ ಶರಾವತಿ ರತ್ನಾಕರನನ್ನು ಮರೆಯಲು ಯತ್ನಿಸಿದ್ದೂ ಇದೆ, ಆದರೆ ಮುರಿದು ಹೋದ ಪ್ರೀತಿಗಿಂತ, ಮರೆಯಬೇಕಾದ ಪ್ರೀತಿಗಿಂತ, ನಿವೇದಿಸಿಕೊಳ್ಳದ ಪ್ರೀತಿಯೇ ಹೆಚ್ಚು ನೋವು ಕೊಡುವುದು, ಭಾರ ಎನಿಸುವುದು, ಒಪ್ಪಲಿ ಬಿಡಲಿ ಹೇಳಿಕೊಂಡು ಬಿಡಬೇಕೆಂಬ ಹುಂಬು ಧೈರ್ಯ ಕೊಡುವುದು. ಏನಾದರಾಗಲಿ ಈ ಸಲ ಬೆಂಗಳೂರಿಗೆ ಹೋದಾಗ ರತ್ನಾಕರನ ಬಳಿ ಇದನ್ನು ಹೇಳಿಕೊಳ್ಳಲೇಬೇಕೆಂದು ನಿರ್ಧರಿಸಿದ್ದಳು.

ಒಂದಿನ ಅಡಕೆ ಸುಲಿಯುತ್ತಿದ್ದಾಗ ನೇತ್ರಳಿಗೆ ಹೇಳಿದಳು “ನೇತ್ರಾ ಯಾವತ್ತೂ ಕನ್ಸಲ್ ಬರ್ದೇ ಹೋಗಿದ್ ಸತ್ಯ ಹೆಗಡ್ರು ಮೊನ್ನೆ ಕನಸಲ್ ಬಂದ್ರು ಮಾರಾಯ್ತಿ, ಒಂಥರ ಹೆದ್ರಕೆ ಆಗೋತು.’ ನೇತ್ರಳಿಗೆ ಏನು ಹೇಳಬೇಕೋ ತೋಚದೆ ‘ಅಮ್ಮ ಹಂಗಿದ್ ಕನಸೆಲ್ಲ ಬೀಳ್ತಾ ಇರ್ತೈತಿ ಬಿಡ್ರೀ’ ಎಂದು ಅದನ್ನು ಸಹಜವಾಗಿ ತೆಗೆದುಕೊಳ್ಳುವಂತೆ ಮಾಡಲು ನೋಡಿದ್ದಳು. ಆದರೆ ಕುರ್ಚಿ ಕಟ್ಟಿಲ ಮೇಲೇ ಸತ್ಯ ಕುಳಿತ ಹಾಗೇ, ತನ್ನನ್ನೇ ಎವೆಯಿಕ್ಕದೇ ನೋಡಿದ ಹಾಗೇ ಬಿದ್ದ ಆ ವಿಚಿತ್ರ ಕನಸನ್ನು ನೆನೆಸಿಕೊಂಡಾಗಲೆಲ್ಲ ಶರಾವತಿಗೆ ನಡುಕ ಬರುತ್ತಿತ್ತು. ರತ್ನಾಕರನ ಕುರಿತು ತಾನು ಯೋಚಿಸುತ್ತಿರುವುದಕ್ಕೇ ಸತ್ಯ ಕನಸಲ್ಲಿ ಬಂದಿದ್ದು ಎನಿಸುತ್ತಿತ್ತು. ಇಷ್ಟು ವರ್ಷಗಳಲ್ಲಿ ಎಷ್ಟೇ ಹಂಬಲು ಮಾಡಿಕೊಂಡರೂ ಸತ್ಯನ ಮುಖ ಸರಿಯಾಗಿ ಕಣ್ಮುಂದೆ ಬರುತ್ತಿರಲಿಲ್ಲ. ಹೆಬ್ಬಾಗಿಲಿನ ಗೋಡೆಗಿದ್ದ ಅವನ ಫೋಟೋ ನಿಧಾನಕ್ಕೆ ಜಗುಲಿಗೆ ಸರಿದು, ಅಲ್ಲಿಂದ ಮೆತ್ತಿಗೆ ಸೇರಿ ಅಲ್ಲಿಂದ ಶರಾವತಿಯ ಕೋಣೆಯ ನಾಗಂದಿಗೆಯ ಪಾಲಾದಲಾಗಾಯ್ತು ದಿನ ಅವನನ್ನು ನೋಡುವುದೇ ಇರುತ್ತಿರಲಿಲ್ಲ, ಎಲ್ಲಾದರೂ ಕೋಣೆ ಚೊಕ್ಕ ಮಾಡುವಾಗ ಧೂಳು ಕೊಡವಿ ಇಡುತ್ತಿದ್ದಳಷ್ಟೆ. ಕಡೆ ಕಡೆಗೆ ಅದಕ್ಕೆ ಸುರುಳಿ ಸುರಿಳಿಯಾಗಿ ಹುಳ ಹಿಡಿದು ಸತ್ಯನ ಮುಖವೇ ಕಾಣದಂತಾಗಿತ್ತು. ಆದರೆ ಕನಸ್ಸಿನಲ್ಲಿ ಮಾತ್ರ ಎಷ್ಟು ನಿಚ್ಚಳವಾಗಿ ಸತ್ಯ ಕಾಣಿಸಿದ್ದನಲ್ಲ..! ಮತ್ತೆ ನೇತ್ರಳನ್ನು ಕೇಳಿಯೇ ಬಿಟ್ಟಳು ‘ನೀನೆಂತಕ್ಕೆ ಶಂಕ್ರ ಸತ್ತೋದ್ಮೇಲೆ ಇನ್ನೊಂದ್ ಮದ್ವೆ ಆಗ್ಲಿಲ್ಲ’ ಎಂದು. ’ಮಳ್ಳನ್ರ ಅಮಾ?’ ಎನ್ನುತ್ತ ದೊಡ್ಡ ನಗೆಯಾಡಿ ನೇತ್ರ ಮತ್ತೆಲ್ಲೋ ನೋಡಿದ್ದಳು. ತಾನು ಹಾಗೆ ಕೇಳಬಾರದಿತ್ತು ಎಂದು ಆಮೇಲೆ ಅನ್ನಿಸಿತ್ತು ಶರವಾತಿಗೆ. ತನ್ನಂತೆ ನೇತ್ರಳ ಎದೆಯೊಳಗೂ ಒಂದು ಬಿರುಗಾಳಿ ಹುಟ್ಟಿದರೆ ಎಂಬ ಭಯವೂ ಆಯಿತು.

ಶರಾವತಿಗೆ ಕೊಂಚ ಬಿಡುವಾಗುವುದೇ ಕೊನೆಕೊಯ್ಲು ಮುಗಿದ ಮೇಲೇ. ಆದರೆ ಅಟ್ಟದ ಮೇಲೆ ಅಡಕೆ ಇರುವಷ್ಟು ದಿನ ಎಲ್ಲಿಗೂ ಹೋಗಲಾಗುತ್ತಿರಲಿಲ್ಲ. ಭಾವಂದಿರು ಮತ್ತವರ ಮಕ್ಕಳೆಲ್ಲ ಆಲೆಮನೆಯತ್ತ ನಡೆದರೆ ಅಟ್ಟದ ಮೇಲಿನ ಅಡಕೆ ಒಬ್ಬಳಿಸುವ ಪಾಳಿ ಶರಾವತಿಯದೇ. ಆದರೂ ಇದೆಲ್ಲ ಮುಗಿದು ಯಾವತ್ತು ಬೆಂಗಳೂರಿಗೆ ಹೋಗುತ್ತೆನೋ ಎಂದು ಅವಳಿಗೂ ಅನಿಸುತ್ತಿತ್ತು. ಪುಟ್ಟುವೂ ಕರೆಯುತ್ತಿದ್ದ. ಫೆಬ್ರುವರಿ ಮೊದಲ ವಾರದಲ್ಲಿದ್ದ ಮಾವನ ಶ್ರಾದ್ಧ ಮುಗಿಸಿ ಕಡೆಗೂ ಬೆಂಗಳೂರಿನ ಬಸ್ಸು ಹತ್ತಿದ್ದಳು. ಹೋಗುವಾಗ ದೊಡ್ಡಕ್ಕ ‘ಈ ಸಲ ಚಾಲಿ ನಾವೇ ಸುಲ್ಯದಡ ಶರು’ ಎಂದಿದ್ದರ ಅರ್ಥ ಈ ಸಲ ಅವಳು ಮೂರ್ನಾಲ್ಕು ತಿಂಗಳುಗಳೆಲ್ಲ ಅಲ್ಲೇ ಉಳಿಯಬಾರದು ಎಂಬುದಾಗಿತ್ತು, ಅದು ಶರಾವತಿಗೂ ಗೊತ್ತಿತ್ತು.

ಬೆಂಗಳೂರಿಗೆ ಬರುತ್ತಿದ್ದಂತೆ ಮತ್ತದೆ ಅವಳಿಷ್ಟದ ದಿನಚರಿ. ಪುಟ್ಟುವನ್ನು ಆಫೀಸಿಗೆ ಕಳುಹಿಸುವ ಗಡಿಬಿಡಿಯ ಬೆಳಗುಗಳು, ಹೂವಿನ ಪರಿಮಳದ ಮಧ್ಯಾಹ್ನಗಳು, ಪಿಂಕ್ ಟ್ರಂಪೆಟ್ ಮರಗಳ ನೆರಳಲ್ಲಿ ಏನೇನೋ ಕತೆ ಹೇಳುತ್ತ ರತ್ನಾಕರನ ಜೊತೆ ಕಳೆವ ವಾಕಿಂಗಿನ ಸಂಜೆಗಳು, ಅವನ ಬಳಿ ಹೇಳುವುದೋ ಬೇಡವೋ ಎಂಬ ಜಿಜ್ಞಾಸೆಯ ರಾತ್ರಿಗಳು ಒಂದಕ್ಕೊಂದು ಖೋ ಕೊಟ್ಟು ಓಡುತ್ತಿದ್ದವು. ಬೆಂಗಳೂರಿಗೆ ಬಂದ ದಿನವೇ ರತ್ನಾಕರನ ಬಳಿ ‘ಗಾಯತ್ರಿಯವ್ರು..?’ ಎಂದು ಕೇಳಿದ್ದಕ್ಕೆ ‘ಮತ್ತೆ ಬರೋ ಆಲೋಚನೇಲಿ ಇಲ್ಲ, ಮೂರ್ನಾಲ್ಕು ಸಲ ಹೋಗಿ ಕರ್ದಿದ್ದಾಯ್ತು’ ಎಂದಿದ್ದ. ಪಾಪ ಅನ್ನಿಸಿದರೂ ಒಳಗೊಳಗೆ ಶರಾವತಿಗೆ ಖುಷಿಯೂ ಆಗಿತ್ತು ಎನ್ನದಿದ್ದರೆ ತಪ್ಪಾಗುತ್ತದೆ. ಮತ್ತಿದರಿಂದ ಅವನ ಬಳಿ ಎರಡನೇ ಮದುವೆ ಬಗ್ಗೆ ಕೇಳುವ ಧೈರ್ಯವೂ ಹೆಚ್ಚಾಗಿತ್ತು. ಒಂದಿನ ಅವಳ ಬಳಿ ಉಳಿದು ಹೋಗಿದ್ದ ಅವನ ಕಾದಂಬರಿಯನ್ನು ಮನೆಗೇ ಹೋಗಿ ಕೊಟ್ಟು ಬಂದಿದ್ದಳು. ‘ಶರಾವತಿ ರತ್ನಾಕರನನ್ನು ಸೇರಬಹುದಾ? ತನ್ನದೆಲ್ಲವನ್ನೂ ಬಗಲಲ್ಲಿ ಅವುಚಿಕೊಂಡೇ ಹರಿಯುತ್ತಾ.. ಅವನದೆಲ್ಲವನ್ನೂ ಇದ್ದಂತೇ ಒಪ್ಪಿಕೊಳ್ಳುತ್ತಾ.. ಶರಾವತಿ ರತ್ನಾಕರನನ್ನು ಸೇರಬಹುದಾ?’ ಎಂದು ಹಾಳೆಯೊಂದರಲ್ಲಿ ಬರೆದು ಅದರಲ್ಲಿಟ್ಟುಬಿಟ್ಟಿದ್ದಳು. ಅದೇ ಕಾದಂಬರಿಯಲ್ಲಿ ಬೆಚ್ಚಗಿದ್ದ ರತ್ನಾಕರನೇ ಕೊಟ್ಟ ಒಣಗಿದ ಪಿಂಕ್ ಟ್ರಂಪೆಟ್ ಹೂವಿಗೆ ಆ ಸಾಲುಗಳನ್ನೋದಿ ಬಣ್ಣ ಬಂದಿತ್ತೇ? ಗೊತ್ತಿಲ್ಲ. ಶೆಲ್ಫಿನಲ್ಲಿಡಲು ಹೋದಾಗ ಪತ್ರ ಸಿಗುತ್ತದೆ, ಓದುತ್ತಾನೆ ಎಂದು ಅಂದಾಜಿಸಿದ್ದ ಶರಾವತಿ ಓದಿ ಏನೂ ಹೇಳುತ್ತಾನೋ ಎಂಬ ಪುಕಪುಕಿಯಲ್ಲಿದ್ದಳು. ಆದರೆ ಮರುದಿನ ಸಿಕ್ಕಾಗ ಒಮ್ಮೆಯೂ ಪತ್ರದ ಪ್ರಸ್ತಾಪವೇ ಬರಲಿಲ್ಲ. ಆದರೂ ಶರಾವತಿ ಮಾತ್ರ ಕಾಯುತ್ತಲೇ ಇದ್ದಳು. ಮಧ್ಯೆ ಮಧ್ಯೆ ಗಾಯತ್ರಿಯ ವಿಷಯ ಬಂದಾಗಲೆಲ್ಲ ಶರಾವತಿ ಮಾತೇ ಆಡುತ್ತಿರಲಿಲ್ಲ. ಒಂದಷ್ಟು ದಿನ ಕಳೆದ ಮೇಲೆ ಸ್ವಪ್ನ ಬುಕ್ ಹೌಸಿಗೆ ಕರೆದುಕೊಂಡು ಹೋಗಿ ಆತ ಪುಸ್ತಕಗಳನ್ನು ಕೊಳ್ಳುತ್ತಿದ್ದಾಗ ಹುಚ್ಚು ಧೈರ್ಯ ಮಾಡಿ ಕೇಳಿಬಿಟ್ಟಳು ‘ನೀವು ಇನ್ನೊಂದ್ ಮದ್ವೆ ಆಗುದಿಲ್ವಾ?’ ಎಂದು. ಅವನೇ ಹಾಗೆ ತಣ್ಣಗೆ ಪ್ರಶ್ನೆ ಕೇಳಲು ಕಲಿಸಿಕೊಟ್ಟಿದ್ದು, ಮತ್ತು ನೇತ್ರಳ ಬಳಿ ಇದೇ ರೀತಿ ಪ್ರಶ್ನಿಸಿ ತಾಲೀಮೂ ಆಗಿದ್ದರಿಂದ ಹಿಂಜರಿಕೆಯಿಲ್ಲದೆ ಕೇಳಿದ್ದಳು. ರತ್ನಾಕರ ಒಂದಷ್ಟು ಕ್ಷಣ ಮೌನವಾಗಿದ್ದು ಕಡೆಗೆ ‘ಅಯ್ಯೋ ಒಂದ್ ಮದ್ವೆ ಸಾಕಾಗಿದೆ’ ಎಂದು ನಕ್ಕಿದ್ದ. ಅವನು ಹೀಗೆಯೇ ಎಲ್ಲ ಮಾತಿಗೂ ನಗುವನ್ನು ಅಂಟಿಸುತ್ತಾನೆ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಮಾತಾಡುತ್ತಾನೆ. ಆದರೆ ಒಂದಷ್ಟು ಸೆಕೆಂಡು ಮೌನವಾಗಿದ್ದನಲ್ಲ? ಮುಖಕ್ಕೆ ಮುಖ ಕೊಡದೆ ಉತ್ತರಿಸಿದನಲ್ಲ? ಬೇರೆ ಕಾರಣವೇನಾದರೂ ಇರಬಹುದೆ? ಅದು ತಾನೇ? ಎಂದು ಹುಡುಕಾಡಿದ್ದಳು. ಆದರೆ ‘ಈ ಆಥರ್ ಬುಕ್ಕು ಗಾಯತ್ರಿಗಿಷ್ಟ, ಈ ಪೆನ್ನುಗಳು ಅವಳಿಗೆ ಮಂಡಲ ಬಿಡ್ಸೋಕೆ ಬೇಕಾಗತ್ತೆ’ ಎಂದು ಒಂದು ರಾಶಿ ಪೆನ್ನು ಪುಸ್ತಕಗಳನ್ನು ಕೊಂಡು ಕಾರಿಗೆ ಆತ ತುಂಬುತ್ತಿದ್ದರೆ ಈ ಇವುಗಳ ರಾಶಿಯಲ್ಲಿ ತನ್ನ ಪತ್ರವಿರುವ ಕಾದಂಬದರಿ ಕಳೆದು ಹೋಗುವ ಭಯವಾಯಿತು ಶರಾವತಿಗೆ. ತಾನೇ ದುಡುಕಿಬಿಟ್ಟೆ ಎನಿಸುತ್ತಿತ್ತು. ಅವರ ಮನೆಗೆ ಹೋಗಿ ಆ ಪುಸ್ತಕದಲ್ಲಿರುವ ಪತ್ರವನ್ನು ವಾಪಾಸು ತಂದುಬಿಡಲೇ? ಎನಿಸಿದರೂ ಇನ್ನೊಂದು ದಿನ ಕಾಯೋಣ ಕಾಯೋಣ ಎನ್ನುತ್ತಾ ಮುಂದೂಡಿ ದೂಡಿ ಊರಿಗೆ ಮರಳುವ ದಿನವೂ ಬಂದುಬಿಟ್ಟಿತ್ತು.


ಇವತ್ತು ರಾತ್ರಿಗೇ ಬಸ್ಸು ಬುಕ್ಕಾಗಿತ್ತು. ರತ್ನಾಕರನ ಬಳಿ ಊರಿಗೆ ಹೊರಟೆ ಎಂದದರೆ ಅವನಿಗೇನಾದರೂ ಇಷ್ಟೊತ್ತಿನ ಒಳಗೇ ಆ ಪತ್ರ ಸಿಕ್ಕಿ ತನ್ನ ಮನಸ್ಸು ಅರ್ಥವಾಗಿದ್ದರೆ ಅದಕ್ಕೆ ಉತ್ತರ ಕೊಟ್ಟೇ ಕೊಡುತ್ತಾನೆ ಎಂಬ ಆಸೆಯಲ್ಲಿ ದೇವಸ್ಥಾನದ ಬಳಿ ಕಪ್ಪಾಗುಗುವವರೆಗೂ ಕಾದಳು. ರತ್ನಾಕರ ಬರದಿದ್ದಕ್ಕೆ ವಾಪಾಸಾಗುವಾಗ ಅವನ ಮನೆ ಹೊಕ್ಕಳು. ಅವನೇನೋ ಬರೆಯುತ್ತಿದ್ದ. ಇವಳನ್ನು ನೋಡಿದ್ದೆ ‘ಕಾಫಿ ಕುಡಿಯೋಕೊಬ್ರು ಸಿಕ್ರು’ ಎಂದು ಎದ್ದ. ಶರಾವತಿ ಪದಬಂಧ ತುಂಬುತ್ತಾ ‘ಇವತ್ ನಾನು ಊರಿಗ್ ಹೊರ್ಟೆ’ ಎಂದಳು. ‘ಯಾಕೇ..? ಈಸಲ ಇಷ್ಟ್ ಬೇಗ’ ಎಂದು ಅಚ್ಚರಿಯಲ್ಲಿ ಕೇಳಿದ. ‘ಚಾಲಿ ಸುಲಿಯೋದುಂಟು, ಹೋದ್ವರ್ಷ ಮಿಷನ್ನಿಗೆ ಕಳ್ಸಿದ್ರಿಂದ ಗೋಟೇ ಹೆಚ್ಚಾಯ್ತು, ಮತ್ತೆ ಒಡಕು ಅಡಕೆನೇ ಜಾಸ್ತಿ , ಅದ್ಕೇ ಈ ಸಲ ನಾವೇ ಸುಲ್ದು ಮುಗಿಸ್ತೇವೆ’ ಎಂದಳು., ‘ಹಾಗಿದ್ರೆ ಮತ್ತೆ ಬರೋದು ಮುಂದಿನ ವರ್ಷನೇ ಅಲ್ವಾ?’ ಎಂದು ನಕ್ಕ. ಶರಾವತಿ ನಗಲಿಲ್ಲ. ‘ಯಾವುದಾದರೂ ಪುಸ್ತಕ ಬೇಕಿದ್ರೆ ತಗೊಂಡ್ಹೋಗಿ’ ಎಂದಾಗ ಶರಾವತಿಗೂ ಆ ಕಾದಂಬರಿಯಲ್ಲಿ ಪತ್ರ ಹಾಗೇ ಇದೆಯೇ ಎಂದು ನೋಡುವ ಕುತೂಹಲವಾಗಿ ಪುಸ್ತಕದ ಶೆಲ್ಫಿನಲ್ಲಿ ಆ ಕಾದಂಬರಿಯನ್ನು ಹುಡುಕೇ ಹುಡುಕಿದಳು, ಸಿಗಲಿಲ್ಲ. ರತ್ನಾಕರನನ್ನು ಕೇಳಿದರೆ ‘ನೀವ್ ತಂದ್ಕೊಟ್ಟ ಮರುದಿನನೇ ನನ್ ಫ್ರೆಂಡ್ ಒಬ್ರು ತಗೊಂಡೋದ್ರು’ ಎಂದುಬಿಟ್ಟ. ಇನ್ಯಾವತ್ತು ಆ ಪತ್ರ ಸಿಕ್ಕು ಏನು ಬಾನಗಡಿ ಆಗುವುದಿಯೋ ಎಂದು ಭಯವಾಯಿತು, ಒಂದುವೇಳೆ ಗಾಯತ್ರಿ ವಾಪಾಸು ಬಂದು ಅವಳ ಕೈಗೆ ಸಿಕ್ಕರೆ ಎಂದು ಢವ ಢವಗುಟ್ಟಿತು. ಪತ್ರ ಇಟ್ಟಿದ್ದೆ ಎಂದು ಹೇಳಿಬಿಡಲೇ? ಹೇಳುವುದಾರೂ ಹೇಗೇ? ಕೆಲವೊಂದನ್ನು ಬಾಯೊಡೆದು ಹೇಳಲು ಸಾದ್ಯವಿಲ್ಲ. ಅವನು ಮಾಡಿಕೊಟ್ಟಿದ್ದ ಕಾಫಿ ಕುಡಿಯುವಷ್ಟರಲ್ಲಿ ಮೈಯ್ಯೆಲ್ಲ ಬೆವೆತು ಅಲ್ಲಿರಲಾಗದೇ ಹೊರಟುಬಿಟ್ಟಳು. ಹಿಂದೆಯೇ ಬಂದ ರತ್ನಾಕರ ‘ಪರಿಚಯ ಆಗಿ ವರ್ಷ ಆದ್ರೂ ನಿಮ್ ನಂಬರೂ ಇಲ್ಲ, ಬೆಸ್ಟ್ ಫ್ರೆಂಡ್ಸ್ ಅನ್ನೋದು ದಂಡಕ್ಕೆ’ ಎಂದು ನಕ್ಕ. ಶರವಾತಿಯ ಕಣ್ಣಲ್ಲಿ ತೆಳ್ಳಗೆ ನೀರು ಆವರಿಸುತ್ತಿತ್ತು. ಅವಳ ನಂಬರನ್ನು ಸೇವ್ ಮಾಡಿಕೊಂಡು, ನಕ್ಕು, ‘ಪಿಂಕ್ ಟ್ರಂಪೆಟ್’ ಎಂದ. ಶರಾವತಿ ಅಪ್ರತಿಭಳಾಗಿ ನೋಡಲು ‘ಹಾಗೇ ಸೇವ್ ಮಾಡ್ಕೊಂಡಿದೀನಿ.. ನೀವೂ ಈ ಹೂವಿನ್ ಹಾಗೇ ಅಲ್ವಾ? ಫೆಬ್ರುವರಿ ಮಾರ್ಚ್ ಅಂದ್ರೆ ಬರ್ತೀರ, ಒಂದೆರಡ್ ತಿಂಗಳು ಅಬ್ಬರ ಮಾಡ್ತೀರ, ಹೊರಟೋಗ್ತೀರ.. ಮತ್ತೆ ನಿಮ್ಮನ್ನ ನೋಡಬೇಕಂದ್ರೆ ಇನ್ನೊಂದ್ ಪಿಂಕ್ ಟ್ರಂಪೆಟ್ ಸೀಸನ್ ಬರೋತನಕ ಕಾಯಬೇಕು’ ಎಂದು ಜೋರಾಗಿ ನಕ್ಕ. ಶರಾವತಿಯೂ ನೋವನ್ನೆಲ್ಲ ಒಳಗೆಳೆದುಕೊಂಡು ನೇತ್ರಳ ಹಾಗೇ ದೊಡ್ಡಕೆ ನಕ್ಕುಬಿಟ್ಟಳು..


ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಅಂಕಣ

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

ರಾಜಮಾರ್ಗ ಅಂಕಣ (Rajamarga column): ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

VISTARANEWS.COM


on

arijit singh rajamarga column 2
Koo

ದ ಮ್ಯೂಸಿಕಲ್ ಲೆಜೆಂಡ್, ಜೇನು ದನಿಯ ಸರದಾರ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ (Rajamaraga Column): ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಸಿಂಗ್‌ (Arijit singh)) ಹುಟ್ಟಿದ ಹಬ್ಬ (Birthday)!

ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಆತನ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು….ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು!

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು.

ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು! ಮುಂದೆ TIPS ಸಂಗೀತ ಕಂಪೆನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ! ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟವು ಆತನಿಗಿಂತ ಮುಂದೆ ಇತ್ತು! ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ!

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು! ಅರ್ಜಿತ್ ಒಂದು ದೊಡ್ಡ ಬ್ರೇಕ್ ಥ್ರೂ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

arijit singh rajamarga column 2

2011ರಲ್ಲಿ ಅರ್ಜಿತ್ ಭಾಗ್ಯದ ಬಾಗಿಲು ತೆರೆಯಿತು!

ಆ ವರ್ಷ ಬಿಡುಗಡೆ ಆದ ಮರ್ಡರ್ 2 ಸಿನೆಮಾದ ‘ಫೀರ್ ಮೊಹಬ್ಬತೆ ‘ ಹಾಡು ಸೂಪರ್ ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ ( ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರೀ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಇಡೀ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿಯು ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದೀ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಯಿತು. ಭಾರೀ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರೀ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ.

ಸ್ಟುಡಿಯೋ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೋ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ!

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.

ಅಂತಹ ಅನನ್ಯ ಪ್ರತಿಭೆ, ಜೇನು ದನಿಯ ಸರದಾರ ಅರ್ಜಿತ್ ಸಿಂಗ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Continue Reading

ಪ್ರಮುಖ ಸುದ್ದಿ

Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

ವರನಟ, ಗಾನಗಂಧರ್ವ ಡಾ.ರಾಜ್‌ಕುಮಾರ್‌ ಅವರು ಕನ್ನಡಿಗರಿಗೆ ಸದಾ ಕಾಲ ಸ್ಫೂರ್ತಿ ನೀಡುವಂಥ ನೂರಾರು ಹಾಡುಗಳನ್ನು ಕೊಟ್ಟು ಹೋಗಿದ್ದಾರೆ. ಅವುಗಳಲ್ಲಿ ಬೆಸ್ಟ್‌ ಅನಿಸುವ 7 ಹಾಡುಗಳು ಇಲ್ಲಿವೆ. ಇದು ಡಾ.ರಾಜ್‌ ಬರ್ತ್‌ಡೇ ವಿಶೇಷ.

VISTARANEWS.COM


on

Koo

1. ಯಾರೇ ಕೂಗಾಡಲಿ ಊರೇ ಹೋರಾಡಲಿ

ʼಸಂಪತ್ತಿಗೆ ಸವಾಲ್‌ʼ ಚಿತ್ರದಲ್ಲಿ ಅಣ್ಣಾವ್ರು ಎಮ್ಮೆಯ ಮೇಲೆ ಕುಳಿತು ಹಾಡುತ್ತಾ ಸಾಗುವ ಈ ದೃಶ್ಯ ಕನ್ನಡ ಚಲನಚಿತ್ರ ರಂಗದ ಐಕಾನಿಕ್‌ ಅನಿಸುವ ಹಾಡು. ʼಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆʼ ಎಂದು ಎಮ್ಮೆಯ ನೆಮ್ಮದಿಯ ಸೂತ್ರವನ್ನು ಮನುಷ್ಯನಿಗೆ ಅನ್ವಯಿಸಿ, ಪ್ರಾಣಿಗಳ ಗುಣಗಳಿಂದ ಮನುಷ್ಯರು ಕಲಿಯಬೇಕಾದ್ದನ್ನು ಉದಾಹರಿಸಿ ಹಾಡಿದ್ದಾರೆ.

2. ನಗುತನಗುತ ಬಾಳು ನೀನು ನೂರು ವರುಷ
ʼಪರಶುರಾಮ್‌ʼ ಫಿಲಂನ ʼನಗುತಾ ನಗುತಾ ಬಾಳು ನೀನು ನೂರು ವರುಷʼ ಹಾಡು ಕನ್ನಡದ ಎರಡು ಬೆಲೆಬಾಳುವ ಮುತ್ತುಗಳನ್ನು ಒಳಗೊಂಡ ಮಾಣಿಕ್ಯ. ಇದರಲ್ಲಿ ವರನಟ ರಾಜ್‌ ಅವರು ಮುದ್ದು ಬಾಲನಟ ಪುನೀತ್‌ ರಾಜ್‌ಕುಮಾರ್‌ಗೆ ಬರ್ತ್‌ಡೇ ಕೇಕ್‌ ತಿನ್ನಿಸುತ್ತಾ ಹಾಡುತ್ತಾರೆ. ʼದೇವರು ತಂದ ಸೃಷ್ಟಿಯ ಅಂದ ಎಲ್ಲರು ನಗಲೆಂದೇʼ ಎಂಬಂಥ ಅರ್ಥಪೂರ್ಣವಾದ ಸಾಲುಗಳನ್ನು ಇದು ಒಳಗೊಂಡಿದೆ.

3. ಬಾನಿಗೊಂದು ಎಲ್ಲೆ ಎಲ್ಲಿದೆ
ʼಬೆಳದಿಂಗಳಾಗಿ ಬಾʼ ಚಲನಚಿತ್ರದಲ್ಲಿ ನಾಯಕಿ ಆರತಿ ಅವರಿಗೆ ಡಾ.ರಾಜ್‌ ಬುದ್ಧಿವಾದ ಹೇಳುವ ಹಾಡು ಇದು. ಚಿಕ್ಕಮಗಳೂರಿನ ಹಸಿರು ಸಿರಿಯ ನಡುವೆ ಕಾರು ಚಲಾಯಿಸುತ್ತಾ ʼಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆʼ ʼಹೂವೂ ಮುಳ್ಳೂ ಎರಡೂ ಉಂಟು ನಮ್ಮ ಬಾಳಲಿʼ ಎಂದು ಹಾಡುತ್ತಾ ಸಾಗುವ ಈ ದೃಶ್ಯ ಮನಮೋಹಕವಾಗಿದೆ.

4. ಬಾಳುವಂಥ ಹೂವೆ ಬಾಡುವಾಸೆ ಏಕೆ?
ʼಆಕಸ್ಮಿಕʼ ಚಲನಚಿತ್ರದಲ್ಲಿ ಅಣ್ಣಾವ್ರು ನಾಯಕಿ ಮಾಧವಿಗೆ ಬುದ್ಧಿ ಹೇಳುವ ಹಾಡು ʼಬಾಳುವಂಥ ಹೂವೆ ಬಾಡುವಾಸೆ ಏಕೆ?ʼ ʼಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು, ವ್ಯರ್ಥವ್ಯಸನದಿಂದ ಸಿಹಿಯು ಕೂಡ ಬೇವುʼ ʼಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯʼ ʼಸಣ್ಣ ಬಿರುಕು ಸಾಲದೇ ತುಂಬು ದೋಣಿ ತಳ ಸೇರಲು?ʼ ಎಂಬಂಥ ಸಾರ್ವಕಾಲಿಕವಾದ ನೀತಿಮುತ್ತುಗಳನ್ನು ಹೇಳುತ್ತಾರೆ.

5. ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ
ಶಿವರಾಜ್‌ ಕುಮಾರ್‌ ಅವರು ನಟಿಸಿರುವ ʼರಣರಂಗʼ ಚಿತ್ರಕ್ಕೆ ಡಾ.ರಾಜ್‌ ಅವರು ಹಾಡಿರುವ ಹಾಡು ಇದು. ಇದರ ಬೀಟ್‌ ಹಾಗೂ ಒಕ್ಕಣೆಗಳು ಎಂಥವನನ್ನೂ ಹೋರಾಡಲು ಪ್ರಚೋದಿಸುವಂತಿವೆ. ಹಿಡಿಯೋ ಆತ್ಮಬಲದಸ್ತ್ರ, ಅದುವೇ ಜಯದ ಮಹಾ ಮಂತ್ರ, ನಿನ್ನ ದಾರಿಯಲ್ಲಿ ಎಲ್ಲೂ ಸೋಲೇ ಇಲ್ಲ, ಬಾಳ ಯುದ್ಧದಲ್ಲಿ ನಿನ್ನ ಗೆಲ್ಲೋರಿಲ್ಲ, ಛಲವೇ ಬಲವು ಮುಂದೆ ನುಗ್ಗಿ ನುಗ್ಗಿ ಬಾʼ ಎಂದು ಧೈರ್ಯ ತುಂಬುತ್ತಾರೆ ಇದರಲ್ಲಿ.

6. ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ
ಕನ್ನಡ ನಾಡಿನ ಮೊದಲ ಸಾಮ್ರಾಟ ಕದಂಬರ ಮಯೂರವರ್ಮನಾಗಿ ʼಮಯೂರʼ ಫಿಲಂನಲ್ಲಿ ನಟಿಸಿದ ರಾಜ್‌, ʼನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ, ಬಾಳುವಿರೆಲ್ಲ ಹಾಯಾಗಿʼ, “ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾʼʼ ಎಂದು ಧೈರ್ಯ ಹೇಳಿದ್ದು ಒಂದು ಕಾಲದ ನಾಡಿನ ಜನತೆಯಲ್ಲಿ ಧೈರ್ಯವನ್ನು ತುಂಬುವ ನಾಯಕ ಗುಣವನ್ನು ಸ್ಪಷ್ಟವಾಗಿ ಚಿತ್ರಿಸಿತು.

7. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ʼಜೀವನಚೈತ್ರʼ ಚಿತ್ರದಲ್ಲಿ ಹಳದಿ ಪೇಟ ಕಟ್ಟಿಕೊಂಡು ಜಟಕಾ ಬಂಡಿಯನ್ನು ಹೊಡೆಯುತ್ತಾ ಅಣ್ಣಾವ್ರು ಸಾಗುವ ಈ ಹಾಡು ಐತಿಹಾಸಿಕ, ಕನ್ನಡ ಹೋರಾಟಕ್ಕೆ ಸದಾ ಸ್ಫೂರ್ತಿ ತುಂಬುವ ಒಂದು ಹಾಡು. ʼʼಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ, ಕಸ್ತೂರಿ ಕನ್ನಡʼ ಎಂದು ಅವರು ಸಾರಿದ್ದು ಇಂದೂ ಮುಂದೂ ಕನ್ನಡ ನಾಡಿನ ಆತ್ಮಗೀತೆಯಂತೆ ಇದ್ದೇ ಇರುತ್ತದೆ, ನಮಗೆ ಸ್ಫೂರ್ತಿ ತುಂಬುವಂತಿದೆ.

ಇದನ್ನೂ ಓದಿ: Dr.Rajkumar Memory: ಪ್ಯಾನ್‌ ಇಂಡಿಯಾ ಫಿಲಂಗಳ ಕಾಲದಲ್ಲಿ ಅಣ್ಣಾವ್ರ ಚಿತ್ರ ನೋಡೋಕೆ 8 ಕಾರಣಗಳು

Continue Reading

ಅಂಕಣ

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ದಶಮುಖ ಅಂಕಣ: ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ?

VISTARANEWS.COM


on

dashamukha column madness
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ʻಹುಚ್ಚುʼ (madness) ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆ ನೆನಪಾಗುವ ಚಿತ್ರಗಳ ಬಗ್ಗೆ ಹೆಚ್ಚು ಹೇಳುವುದು ಬೇಡವಲ್ಲ. ಯಾವುದೇ ದೇಶ, ಭಾಷೆ, ಸಂಸ್ಕೃತಿಗಳಲ್ಲಿ ನೋಡಿದರೂ ʻಹುಚ್ಚಿಗೆʼ ಹೆಚ್ಚಿಗೆ ಅರ್ಥಗಳಿಲ್ಲ… ಅದೊಂದೇ ಅರ್ಥ! ಹಾಗಾಗಿಯೇ ʻಅದೊಂಥರಾ ಹುಚ್ಚು, ಅವನಿಗೊಂದು ಹುಚ್ಚುʼ ಎಂಬಿತ್ಯಾದಿ ಮಾತುಗಳ ಬೆನ್ನಿಗೇ ʻಅಲ್ಲೇನೋ ಒಂದು ಅತಿರೇಕವಿದೆʼ ಎಂಬ ಭಾವ ಬಂದುಬಿಡುತ್ತದೆ. ಅದಕ್ಕಾಗಿಯೇ ʻಹುಚ್ಚು ಸಾಹಸ, ಹುಚ್ಚು ಪ್ರೀತಿʼ ಮುಂತಾದ ಪ್ರಯೋಗಗಳನ್ನು ಮಾಡುತ್ತಾ, ಬೈಯ್ಯುವುದಕ್ಕೆ, ವ್ಯಂಗ್ಯಕ್ಕೆ, ಕುಹಕಕ್ಕೆ, ಟೀಕೆಗೆ, ತಮಾಷೆಗೆ… ಅಥವಾ ಇಂಥದ್ದೇ ಋಣಾತ್ಮಕ ಎನ್ನಬಹುದಾದ ಛಾಯೆಗಳಲ್ಲಿ ಈ ಶಬ್ದವನ್ನು ಬಳಸುತ್ತೇವೆ. ನಿಜಕ್ಕೂ ಈ ಶಬ್ದವನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಬದುಕಿನಲ್ಲಿ ಪ್ರೀತಿ, ಸೌಖ್ಯ, ಖುಷಿಯನ್ನು ಅರಸುವವರಿಗೂ ಇದನ್ನು ಬಳಸಬಹುದೇ? ಸಾಹಿತ್ಯ-ಸಿನೆಮಾಗಳಲ್ಲಿ ಕಾಣುವ ಪ್ರೀತಿ, ಪ್ರೇಮಗಳಿಗೆ ಹುಚ್ಚನ್ನು ಪರ್ಯಾಯವಾಗಿ ಬಳಸುವುದು ಹೊಸದೇನಲ್ಲ. ಆದರೆ ಇಲ್ಲೀಗ ಅಂಥ ಹರೆಯದ ಪ್ರೀತಿಯ ಬಗ್ಗೆಯಲ್ಲ ಹೇಳುತ್ತಿರುವುದು. ಇತರರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವವರಿಗೂ ಈ ಶಬ್ದ ಸಲ್ಲುತ್ತದೆಯೇ?

ಇತ್ತೀಚೆಗೆ ಭೇಟಿ ಮಾಡಿದ ಒಂದಿಬ್ಬರು ವ್ಯಕ್ತಿಗಳು ಇಂಥದ್ದೊಂದು ಮಂಥನವನ್ನು ಹುಟ್ಟು ಹಾಕಿದ್ದು ಹೌದು. ಎಲ್ಲರಿಗಿಂತ ಭಿನ್ನವಾದ ಬದುಕನ್ನು ಆಯ್ದುಕೊಳ್ಳುವವರು, ತಮ್ಮ ಜೀವನದ ರೀತಿ-ನೀತಿಗಳನ್ನು ಅಥವಾ ಧ್ಯೇಯ-ಆದರ್ಶಗಳನ್ನು ʻಹುಚ್ಚುʼ ಎನ್ನುವಷ್ಟು ಪ್ರೀತಿಸದಿದ್ದರೆ, ಖುಷಿಯಿಂದ ಬದುಕುವುದು ಸಾಧ್ಯವೇ? ಎಷ್ಟೇ ಸುಭಿಕ್ಷವಾದ ಬದುಕನ್ನೂ ಹಳಿಯುತ್ತಲೇ ಬದುಕುವ ಇಂದಿನ ದಿನಗಳಲ್ಲಿ, ಇರುವ ಬದುಕಲ್ಲಿ ಸುಭಿಕ್ಷವನ್ನು ಸೃಷ್ಟಿಸುವ ಅವರನ್ನು ಹುಚ್ಚರೆಂದರೆ ಅತಿರೇಕವಾದೀತೇ? ಬದುಕನ್ನು ಕೊರಗಿನಲ್ಲೇ ಕಳೆಯುವುದು ಹುಚ್ಚೋ ಅಥವಾ ಇತರರ ಕೊರಗನ್ನು ಕಳೆಯುವುದು ಹುಚ್ಚೋ?

ಹೀಗೆನ್ನುವಾಗ ಅನಂತ್‌ ಸರ್‌ ನೆನಪಾಗುತ್ತಾರೆ. ಬದುಕಲ್ಲಿ ವಿದ್ಯೆ ದೊರೆಯದ ಮಕ್ಕಳನ್ನು ಶಿಕ್ಷಣದ ಹಾದಿಗೆ ಹಚ್ಚಿ, ನೆಲೆ ಕಾಣಿಸುವ ಅವರ ಸಾಹಸವನ್ನು ವರ್ಣಿಸುವುದಕ್ಕೆ ಬೇರೆ ಪದಗಳಿಗೆ ಸಾಧ್ಯವಿಲ್ಲ. ಮನೆ ಇದ್ದೂ ಇಲ್ಲದಂತಾದವರು, ಮನೆಯೇ ಇಲ್ಲದವರು, ಪಾಲಕರು ಇಲ್ಲದವರು, ಪಾಲಕರು ಯಾಕಾದರೂ ಇದ್ದಾರೋ ಎನ್ನುವಂಥ ಹಲವು ನಮೂನೆಯ ವಾತಾವರಣದಿಂದ ಬಂದ ಮಕ್ಕಳಿಗೆ ಊಟ, ವಸತಿಯ ಜೊತೆಗೆ ವಿದ್ಯೆ ನೀಡುವುದನ್ನೇ ಧ್ಯೇಯವಾಗಿಸಿಕೊಂಡವರು. ಹತ್ತು-ಹನ್ನೆರಡು ವರ್ಷಗಳವರೆಗೆ ಶಾಲೆಯ ಮುಖವನ್ನೂ ಕಾಣದವರು, ಎಂದೊ ಶಾಲೆಗೆ ಹೋಗಿ ನಡುವಲ್ಲೇ ಕಳೆದುಹೋದವರು- ಇಂಥ ನೂರಾರು ಮುಖಗಳಲ್ಲಿ ನಗು ಅರಳಿಸುವುದಕ್ಕೆ ಇರಬೇಕಾದ ಅದಮ್ಯ ಪ್ರೀತಿಯೂ ಒಂದು ಬಗೆಯ ಹುಚ್ಚೇ ತಾನೇ? ಹಾಗಿಲ್ಲದಿದ್ದರೆ, ಇಂಥ ಸಾಹಸಿಗಳು ಲೋಕದಲ್ಲಿ ನಮಗೆ ವಿರಳವಾಗಿ ಕಾಣುವುದೇಕೆ?

ಆರೇಳು ವರ್ಷದವರನ್ನು ಒಂದನೇ ಕ್ಲಾಸಿಗೆ ಕೂರಿಸುವಲ್ಲಿ ಅಷ್ಟೇನು ಸಮಸ್ಯೆಯಾಗಲಿಕ್ಕಿಲ್ಲ. ವರ್ಷದ ಆಧಾರದ ಮೇಲೆಯೇ ತಾನೆ ನಮ್ಮ ಶಿಕ್ಷಣ ವ್ಯವಸ್ಥೆ ರೂಪುಗೊಂಡಿರುವುದು. ಆದರೆ ಹದಿಹರೆಯಕ್ಕೆ ಕಾಲಿಟ್ಟವರು ಇನ್ನೂ ಶಾಲೆಯ ಮೆಟ್ಟಿಲನ್ನೇ ಹತ್ತದಿರುವಾಗ ಅವರನ್ನೂ ಒಂದನೇ ಕ್ಲಾಸಿಗೆ ಕೂರಿಸುವುದು ಹೇಗೆ? ʻಹಾಗಾಗಿಯೇ ದೈಹಿಕ ವಯಸ್ಸಿನ ಆಧಾರದ ಮೇಲಲ್ಲದೆ, ಮಕ್ಕಳ ಬೌದ್ಧಿಕ ವಯಸ್ಸಿಗೆ ಅನುಗುಣವಾಗಿ ಕಲಿಯುವ ಗುಂಪುಗಳನ್ನಾಗಿ ವಿಂಗಡಿಸಿಕೊಳ್ಳುತ್ತೇವೆ. ಹಾಗೆಯೇ ಅವರ ಕಲಿಕೆ ಮುಂದುವರಿಯುತ್ತದೆʼ ಎನ್ನುವುದು ಅನಂತ್‌ ಸರ್‌ ಹೇಳುವ ಮಾತು. ದೂರದ ಅಸ್ಸಾಂ, ಬಿಹಾರಗಳಿಂದ ಬಂದ ಮಕ್ಕಳಿಗೆ ಶಾಲೆಯ ಕಲ್ಪನೆಯೂ ಇಲ್ಲದಿರುವಾದ, ಇವರ ಭಾಷೆ ಅವರಿಗೆ-ಅವರ ಭಾಷೆ ಇವರಿಗೆ ತಿಳಿಯದಿರುವಾಗ, ವಿದ್ಯೆಯ ಶ್ರೀಕಾರ ಆಗುವುದು ಹೇಗೆ? ʻಇದೊಂಥರಾ ಹುಚ್ಚು. ಇದೂ ಆಗತ್ತೆʼ ಎನ್ನುವಾಗಿನ ಇವರ ಮುಖದ ನಗುವನ್ನು ಏನೆಂದು ಅರ್ಥ ಮಾಡಿಕೊಳ್ಳುವುದು?

ಈ ಚೌಕಟ್ಟಿನಾಚೆಯ ಮನೆಯಲ್ಲಿ ಕಲಿತು ಹೊರಬಿದ್ದು, ದುಡಿದು ಸಂಪಾದಿಸಿ ಬದುಕುತ್ತಿರುವ ತಮ್ಮ ಮಕ್ಕಳ ಬಗ್ಗೆ ಹೇಳುವಾಗ ಅವರ ಮುಖದ ನಗುವಿಗಿರುವ ಅರ್ಥದ ಅರಿವಾಗುತ್ತದೆ ನಮಗೆ. ಹುಚ್ಚಿಗೂ ಎಷ್ಟೊಂದು ಸುಂದರ, ಸಲ್ಲಕ್ಷಣಗಳಿವೆ ಎಂಬುದನ್ನು ತಿಳಿಯುವುದಕ್ಕೆ ಅದೊಂದು ನಗು ಸಾಕು. ಕೊರಗಿ ಕಳೆಯುವುದಕ್ಕಿಂತ, ಹೀಗೆ ಕೊರಗು ಕಳೆಯುವ ಹುಚ್ಚು ಒಳ್ಳೆಯದಲ್ಲವೇ? ನಮಗಿರುವ ಹುಚ್ಚು ಯಾವುದು ಎಂದು ಎಂದಾದರೂ ಯೋಚಿಸಿದ್ದೇವೆಯೇ?

ಈ ಎಲ್ಲ ಮಾತಿನ ನಡುವೆ ಪ್ರದೀಪ ಎನ್ನುವ ಆ ವ್ಯಕ್ತಿ ನೆನಪಾಗುತ್ತಾನೆ. ಕಪ್ಪು ಬಣ್ಣದ ಸಾಧಾರಣ ಮೈಕಟ್ಟಿನ ಆತ ಪುಟ್ಟ ದ್ವೀಪ ರಾಷ್ಟ್ರವೊಂದರ ನಿವಾಸಿ. ಅರಳಿದಂತಿರುವ ಕನ್ನಡಿಗಣ್ಣು, ಅವನದ್ದೇ ಆದ ವಿಶಿಷ್ಟ ಲಯದ ಇಂಗ್ಲಿಷ್‌ ಭಾಷೆಯ ಆತ ನಮಗೆ ಪರಿಚಯವಾಗಿದ್ದು ಪ್ರವಾಸವೊಂದರ ಭಾಗವಾಗಿ. ಅಲೆಯುವ ಹುಚ್ಚಿರುವ ಜನ ಲೋಕದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ ಜೊತೆಗೆ ತಿರುಗಾಡುವವರ ಸೌಖ್ಯವೇ ತನಗೆ ಪ್ರೀತಿ ಎನ್ನುವವರೂ ಇದ್ದಾರೆಂಬುದು ತಿಳಿದಿದ್ದು ಆಗಲೇ. ಈತ ವೃತ್ತಿಯಲ್ಲಿ ಪ್ರವಾಸಿ ಗೈಡ್‌. ನಮ್ಮ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೆ ಅಲ್ಲಿ ʻಗೈಡ್‌ ಬೇಕೆ?ʼ ಎಂದು ಮುತ್ತಿಗೆ ಹಾಕುವ ಗುಂಪಿನಲ್ಲಿ ಆತನೂ ಇರಬಹುದಾಗಿದ್ದವ. ಆದರೆ ತಮಗೆ ತಿಳಿದಷ್ಟನ್ನು ತೋಚಿದಂತೆ ಒದರಿ, ಬಂದವರಿಂದ ದುಡ್ಡು ಕಿತ್ತು ಕಳಿಸುವ ಗೈಡ್‌ಗಳ ಸಾಲಿನಿಂದ ಗಾವುದಗಟ್ಟಲೆ ದೂರದಲ್ಲಿ ಇರುವವ ಈತ.

ʻತಿರುಗಾಡಿದಷ್ಟೇ, ತಿರುಗಾಡಿಸುವುದೂ ನನಗಿಷ್ಟʼ ಎನ್ನುವ ಈತ, ತನ್ನ ಕಾರು ಓಡುವ ಪ್ರತಿಯೊಂದು ರಸ್ತೆಯ ಪರಿಚಯವನ್ನೂ ಮಾಡಿಕೊಡಬಲ್ಲ. ಯಾವ ಊರಿನ ಮಳೆ-ಬೆಳೆ ಹೇಗೆ ಎಂಬುದರಿಂದ ಹಿಡಿದು ಅಲ್ಲಿನ ಡೆಮಗ್ರಾಫಿಕ್‌ ವಿಶ್ಲೇಷಣೆಯನ್ನೂ ನೀಡಬಲ್ಲ. ʻಈ ಭಾಗದಲ್ಲಿ ತುಂಬಾ ಎಮ್ಮೆ ಸಾಕುತ್ತಾರೆ. ಮಣ್ಣಿನ ಗಡಿಗೆಯಲ್ಲಿ ಹಾಲು ಹೆಪ್ಪಾಕಿ, ಮೊಸರು ಮಾರುತ್ತಾರೆ. ಅದನ್ನೊಮ್ಮೆ ತಿನ್ನದಿದ್ದರೆ ಈ ರಸ್ತೆಯಲ್ಲಿ ಪ್ರಯಾಣ ಮಾಡಿದ್ದೇ ವ್ಯರ್ಥʼ ಎಂದು ಸರಕ್ಕನೆ ಗಾಡಿ ನಿಲ್ಲಿಸಿ, ಎರಡು ಪುಟ್ಟ ಗಡಿಗೆಗಳನ್ನು ಹಿಡಿದು ತರುತ್ತಾನೆ. ʻಇಷ್ಟು ದೂರ ಬಂದವರು ಈ ಸಿಹಿ ತಿನ್ನದಿದ್ದರೆ, ನಿಮ್ಮ ತಿರುಗಾಟವೇ ಅಪೂರ್ಣʼ ಎನ್ನುತ್ತಾ ಯಾವುದೋ ಸಿಹಿ ಎದುರಿಗಿಡುತ್ತಾನೆ. ʻಇಲ್ಲಿ ಭರಪೂರ ತರಕಾರಿ ಬೆಳೆಯುತ್ತಾರೆ. ಇದರಲ್ಲೊಂದು ಸಲಾಡ್‌ ಮಾಡುತ್ತೇನೆ ನೋಡಿ, ತಿನ್ನುವುದಕ್ಕೆ ಪುಣ್ಯ ಬೇಕುʼ ಎಂದು ಉಪಚಾರ ಮಾಡುತ್ತಾನೆ. ಇಂಥ ಯಾವುದನ್ನೂ ಮಾಡಬೇಕಾದ ಅಗತ್ಯ ಆತನಿಗಿಲ್ಲ. ನಮ್ಮ ಜಾಗಕ್ಕೆ ಕರೆದೊಯ್ದರೆ ಅವನ ಕೆಲಸ ಮುಗಿಯಿತು; ಅವನ ದುಡ್ಡು ಅವನ ಕೈ ಸೇರುತ್ತದೆ. ʻತಿರುಗಾಡುವುದು, ತಿರುಗಾಡಿಸುವುದು ನಂಗೊಂಥರಾ ಹುಚ್ಚು. ಹೊಸ ಜನರೊಂದಿಗೆ ನಂಟು ಬೆಸೆಯುವುದು, ಅವರನ್ನು ಖುಷಿಯಾಗಿಡುವುದು ನಂಗಿಷ್ಟʼ ಎನ್ನುತ್ತಾ ಹಿಂದಿ ನಟ ದೇವಾನಂದ್‌ ರೀತಿಯಲ್ಲಿ ನಗೆ ಬೀರುತ್ತಾನೆ.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಗುರಿ ತಲುಪುವುದಕ್ಕಿಂತ ಖುಷಿ ನೀಡುವುದು ಗಮ್ಯದೆಡೆಗಿನ ದಾರಿಗಳಲ್ಲವೇ? ಯಾವುದೇ ದಾರಿಯಲ್ಲಿ ಎದುರಾಗುವ ಊರೊಂದರ ಹೆಸರಿನ ಹಿಂದಿನ ಗಮ್ಮತ್ತು ತಿಳಿಸುವುದು, ಯಾವುದೋ ದೇಶದಿಂದ ಬರುವ ಚಿತ್ರವಿಚಿತ್ರ ಅಲೆಮಾರಿಗಳ ಜಾಯಮಾನ ವಿಸ್ತರಿಸುವುದು- ಇವೆಲ್ಲ ತನ್ನ ಪ್ರಯಾಣಿಕರ ದಾರಿಯನ್ನು ಬೋರಾಗದಂತೆ ಕಳೆಯುವ ಮತ್ತು ಅವರೊಂದಿಗೆ ನಂಟು ಬೆಸೆಯುವ ಆತನ ಉದ್ದೇಶಕ್ಕೆ ಒದಗುವಂಥವು. ವಿಹಾರಕ್ಕೆ, ವಿರಾಮಕ್ಕೆ, ಅಧ್ಯಯನಕ್ಕೆ ಮುಂತಾದ ಹಲವು ಕಾರಣಗಳನ್ನು ಹೊತ್ತು ಬರುವ ಜನರ ಕಥೆಗಳು ಆತನ ಸಂಚಿಯಲ್ಲಿವೆ. ಎಲ್ಲರಿಗೂ ಅವರವರ ಉದ್ದೇಶ ಈಡೇರುವಂತೆ ಶ್ರಮಿಸುವುದು ತನಗೆ ಪ್ರಿಯವಾದ ಸಂಗತಿ ಎನ್ನುವ ಇಂಥವರು ಜೊತೆಗಿದ್ದರೆ, ಅಲ್ಲಾವುದ್ದೀನನ ಮಾಂತ್ರಿಕ ಚಾಪೆಯ ಮೇಲೆ ತೇಲಿದಂತೆ ದಾರಿ ಸಾಗುತ್ತದೆ. ಇಂಥವರನ್ನು ನೋಡಿದಾಗ, ಇನ್ನೊಬ್ಬರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವ ಸ್ವಭಾವದ ಬಗ್ಗೆ ಬೇರೆ ಶಬ್ದಗಳು ನೆನಪಾಗುತ್ತಿಲ್ಲ.

ಹಣ, ಸಂಪತ್ತು, ಖ್ಯಾತಿ, ಅಧಿಕಾರಗಳ ಹುಚ್ಚು ಅಂಟಿಸಿಕೊಂಡವರು ನಮ್ಮೆದುರಿಗೆ ಮೆರವಣಿಗೆ ಹೊರಟಿದ್ದಾರೆ ಈಗ. ಚುನಾವಣೆಯ ಕಣದಲ್ಲಿಳಿದು ಅಧಿಕಾರ ದಕ್ಕಿಸಿಕೊಳ್ಳಲು, ದಕ್ಕದಿದ್ದರೆ ಯಾವ ಮಟ್ಟಕ್ಕೂ ಇಳಿಯುವಷ್ಟು ಹುಚ್ಚರಾಗಿದ್ದಾರೆ ಇಂದು. ಯಾರಿಗಾಗಿ ತಾವು ಆಯ್ಕೆಯಾಗುತ್ತಿದ್ದೇವೆಯೋ ಅವರ ಸೌಖ್ಯವನ್ನು ಗಮನಿಸುವುದೇ ಮರುಳು ಎನಿಸುತ್ತಿದೆ ಅಭ್ಯರ್ಥಿಗಳಿಗೆ. ಇಂಥವುಗಳನ್ನು ನೋಡಿದಾಗ ಮತ್ತದೇ ಪ್ರಶ್ನೆಗಳು ಮೂಡುತ್ತವೆ. ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ? ಹುಚ್ಚಿಗೆ ಹೆಚ್ಚಿಗೆ ಅರ್ಥಗಳಿಲ್ಲವೆಂದು ಈಗಲೂ ಹೇಳಬಹುದೇ?

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading
Advertisement
lok sabha election
ಪ್ರಮುಖ ಸುದ್ದಿ5 mins ago

ವಿಸ್ತಾರ ಸಂಪಾದಕೀಯ: ಗ್ರಾಮಾಂತರ ಜನರ ಮತೋತ್ಸಾಹ ನಗರದ ‘ಬುದ್ಧಿವಂತ’ ಮತದಾರರಲ್ಲಿ ಏಕಿಲ್ಲ?

Neha Murder Case
ಕರ್ನಾಟಕ23 mins ago

Neha Murder Case: ನೇಹಾ ತಂದೆಗೆ ಗನ್ ಮ್ಯಾನ್, ಮನೆಗೆ ಪೊಲೀಸ್ ಭದ್ರತೆ ಏರ್ಪಡಿಸಿದ ರಾಜ್ಯ ಸರ್ಕಾರ

IPL 2024
ಪ್ರಮುಖ ಸುದ್ದಿ24 mins ago

IPL 2024 : ಬೈರ್​ಸ್ಟೋವ್​ ಸ್ಫೋಟಕ ಶತಕ; ಕೆಕೆಆರ್​ ವಿರುದ್ಧ ಪಂಜಾಬ್​​ಗೆ ವಿಶ್ವ ದಾಖಲೆಯ ವಿಜಯ

Bike Accident
ಕರ್ನಾಟಕ1 hour ago

Bike Accident: ಮತದಾನ ಮಾಡಿ ತೆರಳುತ್ತಿದ್ದ ವೇಳೆ ಬೈಕ್‌ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ

lok sabha election
Lok Sabha Election 20241 hour ago

Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ

Hassan News
ಕರ್ನಾಟಕ1 hour ago

Hassan News: ಎರಡು ಗುಂಪುಗಳ ನಡುವೆ ಮಾರಾಮಾರಿ; ಕೈ ಕಾರ್ಯಕರ್ತನಿಗೆ ಗಂಭೀರ ಗಾಯ

Pandya brothers
ಕ್ರೀಡೆ2 hours ago

Pandya Brothers : ಪಾಂಡ್ಯ ಸಹೋದರರ ಮನೆಗೆ ಹೊಸ ಅತಿಥಿ ಆಗಮನ, ಖುಷಿಯಲ್ಲಿ ಕುಟುಂಬ

ಕರ್ನಾಟಕ2 hours ago

Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!

Mohammad Shami
ಪ್ರಮುಖ ಸುದ್ದಿ3 hours ago

Mohammad Shami : ಸರ್ಜರಿ ಗಾಯದ ನಡುವೆಯೂ ಮತದಾನ ಮಾಡಿದ ಮೊಹಮ್ಮದ್​ ಶಮಿ

Narendra modi
ಪ್ರಮುಖ ಸುದ್ದಿ3 hours ago

Lok Sabha Election : ಎನ್​ಡಿಎಗೆ ಶುಭ ಶಕುನ : 2ನೇ ಹಂತದ ಮತದಾನದ ಬಳಿಕ ಪ್ರಧಾನಿ ಮೋದಿ ಹೀಗಿತ್ತು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ12 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202413 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202413 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ19 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌