ಹೊಸ ಪುಸ್ತಕ| Animal farm: ಮನುಷ್ಯನನ್ನು ಓಡಿಸಿದ ಬಳಿಕ... - Vistara News

ಕಲೆ/ಸಾಹಿತ್ಯ

ಹೊಸ ಪುಸ್ತಕ| Animal farm: ಮನುಷ್ಯನನ್ನು ಓಡಿಸಿದ ಬಳಿಕ…

ಪ್ರಾಣಿಗಳು ಬಂಡೆದ್ದು ಮನುಷ್ಯರನ್ನು ಓಡಿಸಿದ ದಂಗೆಯ ನಂತರದ ದಿನಗಳು ಸುಂದರವಾಗಿದ್ದವು. ಎಲ್ಲ ಪ್ರಾಣಿಗಳೂ ದಣಿವರಿಯದೆ ಕೆಲಸ ಮಾಡುತ್ತಿದ್ದವು. ಎಲ್ಲರಿಗೂ ಸಾಕಷ್ಟು ಆಹಾರ ಸಿಗುತ್ತಿತ್ತು. ಒಲ್ಲದ ಮನಸ್ಸಿನಿಂದ ಮನುಷ್ಯ ಒದಗಿಸುವ ಆಹಾರಕ್ಕಾಗಿ ಕಾಯಬೇಕಾಗಿರಲಿಲ್ಲ- animal farm ಆಯ್ದ ಭಾಗ.

VISTARANEWS.COM


on

animal farm
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
  • ಮೂಲ ಇಂಗ್ಲಿಷ್‌: ಜಾರ್ಜ್‌ ಆರ್ವೆಲ್‌
  • ಅನುವಾದ: ಸಹನಾ ಹೆಗಡೆ

ಇಂಗ್ಲಿಷ್‌ ಸಾಹಿತ್ಯದ ಕ್ಲಾಸಿಕ್‌ ಕೃತಿಗಳಲ್ಲಿ ಒಂದು ಜಾರ್ಜ್‌ ಆರ್ವೆಲ್‌ ಅವರ animal farm. ರಷ್ಯದ ಕಮ್ಯುನಿಸ್ಟ್‌ ಕ್ರಾಂತಿ ಮತ್ತು ಅದರಿಂದ ಕಾಲಾನಂತರದಲ್ಲಿ ಉಂಟಾದ ನಿರಂಕುಶ ಅಧಿಪತ್ಯದ ಬೆಳವಣಿಗೆಗಳನ್ನು ಅನ್ಯೋಕ್ತಿಯ ಮೂಲಕ ವರ್ಣಿಸುವ ಈ ಕೃತಿ ಸಾಕಷ್ಟು ಚರ್ಚೆ, ಶ್ಲಾಘನೆಗೆ ಪಾತ್ರವಾಗಿದೆ. ಕೋಟ್ಯಂತರ ಮಂದಿ ಅದನ್ನು ಓದಿದ್ದಾರೆ. ಈ ಕೃತಿಯನ್ನು ಸಹನಾ ಹೆಗಡೆ ಅವರು ಕನ್ನಡಕ್ಕೆ ತಂದಿದ್ದು, ಅದರ ಆಯ್ದ ಭಾಗ ಇಲ್ಲಿದೆ.

ಆ ಇಡೀ ಬೇಸಿಗೆ, ತೋಟದ ಕೆಲಸಗಳು ಗಡಿಯಾರದಂತೆ ನಿಯತ, ನಿಖರ ಹಾಗೂ ನಿರಂತರವಾಗಿ ನಡೆದವು. ಇಂತಹದೊಂದು ಕೆಲಸ ಸಾಧ್ಯವಾಗುತ್ತದೆಯೆಂದು ಊಹಿಸಿಯೂ ಇರದಿದ್ದ ಪ್ರಾಣಿಗಳಿಗೆ ಇದರಿಂದ ಸಂತೋಷವಾಯಿತು. ಈಗ ಅವು ಬಾಯ್ತುಂಬಿಕೊಳ್ಳುವ ಆಹಾರದ ಒಂದೊಂದು ತುತ್ತೂ, ತುಣುಕೂ ಅವುಗಳಿಗೆ ನಿಶ್ಚಿತವಾಗಿಯೂ ಅತೀವ ಸುಖವನ್ನು ನೀಡುವಂತಹದಾಗಿತ್ತು. ಈಗ ಆಹಾರವು ನಿಜಕ್ಕೂ ಅವುಗಳದೇ ಆಗಿತ್ತು. ತಮಗಾಗಿ ತಾವೇ ಬೆಳೆದುಕೊಂಡಿದ್ದಾಗಿತ್ತು. ಯಾರೋ ಒಲ್ಲದ ಮನಸ್ಸಿನ ಒಡೆಯ ಅವರಿಗೆ ದಯಪಾಲಿಸಿದ ಅನ್ನವಾಗಿರಲಿಲ್ಲ.

sahana hegade
ಸಹನಾ ಹೆಗಡೆ

ಅಯೋಗ್ಯ, ನಿಷ್ಪ್ರಯೋಜಕ, ಪರಾವಲಂಬಿ ಮನುಷ್ಯರು ತೊಲಗಿ ಹೋಗಿದ್ದ ಕಾರಣ, ಪ್ರತಿಯೊಂದು ಪ್ರಾಣಿಗೂ ತಿನ್ನಲು ಹೆಚ್ಚು ಆಹಾರ ಸಿಗುತ್ತಿತ್ತು. ಪ್ರಾಣಿಗಳು ಅನನುಭವಿಗಳಾಗಿದ್ದವು ನಿಜ. ಆದರೆ ಅಷ್ಟೊಂದು ಕೆಲಸ-ಕಾರ್ಯಗಳ ನಡುವೆಯೂ ಅವುಗಳಿಗೆ ಮೊದಲಿಗಿಂತ ಹೆಚ್ಚು ಬಿಡುವು, ವಿರಾಮ ಸಿಗುತ್ತಿತ್ತು. ಅವು ಹಲವಾರು ತೊಂದರೆಗಳನ್ನು ಎದುರಿಸಬೇಕಾಯಿತು. ಉದಾಹರಣೆಗೆ, ವರ್ಷದ ಕೊನೆಗೆ, ಜೋಳವು ಕಟಾವಿಗೆ ಬಂದಾಗ, ಅದನ್ನು ಪುರಾತನ ವಿಧಾನದಲ್ಲಿಯೇ ಕಾಲಿನಿಂದ ತುಳಿದು, ಒಕ್ಕಿ ಕಾಳನ್ನು ಬೇರ್ಪಡಿಸಬೇಕಿತ್ತು ಮತ್ತು ಬಾಯಿಂದ ಊದಿ, ಕಾಳನ್ನು ತೂರಿ, ಹೊಟ್ಟನ್ನು ತೆಗೆಯಬೇಕಿತ್ತು. ಏಕೆಂದರೆ, ತೋಟದಲ್ಲಿ ತೆನೆಯನ್ನು ಬಡಿಯುವ, ಒಕ್ಕುವ ಯಂತ್ರವಿರಲಿಲ್ಲ. ಆದರೆ ಹಂದಿಗಳು ತಮ್ಮ ಚಾತುರ್ಯದಿಂದ ಮತ್ತು ಬಾಕ್ಸರ್‌ ತನ್ನ ಅಗಾಧ ಸ್ನಾಯುಬಲದಿಂದ ಅವುಗಳನ್ನೆಲ್ಲ ಸದಾ ನಿಭಾಯಿಸಿಬಿಡುತ್ತಿದ್ದವು.

ಬಾಕ್ಸರ್‌ ಎಂದರೆ ಎಲ್ಲರಿಗೂ ಮೆಚ್ಚುಗೆ. ಅದು ಜೋನ್ಸ್‌ ಒಡೆಯನಾಗಿದ್ದಾಗಲೂ ಶ್ರಮಜೀವಿಯೇ ಆಗಿತ್ತು. ಈಗಂತೂ ಅದು ಮಾಡುವ ಕೆಲಸವನ್ನು ನೋಡಿದರೆ, ಒಂದಲ್ಲ, ಮೂರು ಕುದುರೆಗಳು ಮಾಡುವಷ್ಟು ಕೆಲಸವನ್ನು ಅದೊಂದೇ ಮಾಡುತ್ತಿರುವಂತೆ ಕಾಣುತ್ತಿತ್ತು. ಇಡೀ ತೋಟದ ಕೆಲಸವು ಅದರ ಬಲಶಾಲಿ ಹೆಗಲುಗಳ ಮೇಲಿದ್ದಂತೆ ತೋರುವ ದಿನಗಳೂ ಇದ್ದವು. ಬೆಳಗಿನಿಂದ ರಾತ್ರಿಯವರೆಗೂ ಒಂದಲ್ಲ ಒಂದು ಭಾರವನ್ನು ಎಳೆಯುತ್ತ, ನೂಕುತ್ತ, ಸದಾ ಅತ್ಯಂತ ಕಠಿಣ ಕೆಲಸವಿದ್ದಲ್ಲಿಯೇ ಇರುತ್ತಿತ್ತು. ಬೆಳಿಗ್ಗೆ ಮತ್ತೆಲ್ಲರೂ ಏಳುವುದಕ್ಕಿಂತ ಅರ್ಧ ತಾಸು ಮೊದಲೇ ತನ್ನನ್ನು ಕೂಗಿ ಕರೆಯುವಂತೆ ಎಳೆಯ ಹುಂಜವೊಂದಕ್ಕೆ ಹೇಳಿ ವ್ಯವಸ್ಥೆ ಮಾಡಿಕೊಂಡಿತ್ತು. ಯಾವ ಕೆಲಸವು ತುಂಬಾ ಅಗತ್ಯವಾದುದೆಂದು ತೋರುತ್ತಿತ್ತೋ ಅದನ್ನು ದಿನದ ನಿತ್ಯ ಕೆಲಸಗಳು ಆರಂಭವಾಗುವುದಕ್ಕೂ ಮೊದಲೇ ಸ್ವಇಚ್ಛೆಯಿಂದ ಮಾಡಿ ಮುಗಿಸಿಬಿಡುತ್ತಿತ್ತು. ಪ್ರತಿಯೊಂದು ಸಮಸ್ಯೆ, ಹಿನ್ನಡೆಗೂ “ನಾನು ಇನ್ನೂ ಕಷ್ಟಪಟ್ಟು ಕೆಲಸ ಮಾಡುತ್ತೇನೆ !ʼʼ ಎನ್ನುವುದೇ ಅದರ ಉತ್ತರವಾಗಿತ್ತು ಮತ್ತು ಅದನ್ನು ತನ್ನ ವೈಯಕ್ತಿಕ ಧ್ಯೇಯವಾಕ್ಯವನ್ನಾಗಿ ಮಾಡಿಕೊಂಡಿತ್ತು.

george orwell
ಜಾರ್ಜ್‌ ಆರ್ವೆಲ್‌

ಆದರೆ ಅದೊಂದೇ ಅಲ್ಲ, ತೋಟದಲ್ಲಿನ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕೆಲಸ ಮಾಡುತ್ತಿದ್ದರು. ಉದಾಹರಣೆಗೆ, ಕೊಯ್ಲು ಮಾಡುವಾಗ ಹೊಲದಲ್ಲಿ ಚದುರಿ ಬಿದ್ದಿದ್ದ ಜೋಳದ ಕಾಳುಗಳನ್ನು ಕೋಳಿ ಮತ್ತು ಬಾತುಗಳು ಒಟ್ಟುಗೂಡಿಸಿ, ಉಳಿಸಿದ್ದೇ ಸುಮಾರು ಐದು ಕೊಳಗದಷ್ಟಾಗಿತ್ತು. ಯಾರೂ ಕದಿಯಲಿಲ್ಲ. ತಮಗೆ ಸಿಕ್ಕ ಪಡಿತರದ ಬಗ್ಗೆ ಗೊಣಗಲಿಲ್ಲ. ಹಿಂದೆ ಬದುಕಿನ ಸಹಜ ಲಕ್ಷಣಗಳೇ ಆಗಿಹೋಗಿದ್ದ ಜಗಳ, ತಂಟೆ, ಕಚ್ಚಾಟ, ನಿಂದೆ, ಅಸೂಯೆಗಳು ಬಹುತೇಕ ನಾಪತ್ತೆಯಾಗಿದ್ದವು. ಯಾರೂ ಅಥವಾ ಬಹುತೇಕವಾಗಿ ಯಾರೂ ಕೆಲಸದಿಂದ ನುಣುಚಿಕೊಳ್ಳುತ್ತಿರಲಿಲ್ಲ. ಮೊಲ್ಲಿ ಬೆಳಿಗ್ಗೆ ಅಷ್ಟು ಬೇಗ ಏಳುತ್ತಿರಲಿಲ್ಲ ಎನ್ನುವುದು ನಿಜ ಮತ್ತು ಆಗಾಗ ತನ್ನ ಗೊರಸಿನಲ್ಲಿ ಕಲ್ಲು ಸೇರಿಕೊಂಡಿದೆ ಎಂದು ಹೇಳಿ, ಬೇಗ ಕೆಲಸ ಬಿಟ್ಟು ಹೋಗಿಬಿಡುವ ಅಭ್ಯಾಸ ಅದಕ್ಕಿತ್ತು. ಬೆಕ್ಕಿನ ವರ್ತನೆಯೇ ಏನೋ ವಿಚಿತ್ರವಾಗಿತ್ತು. ಏನಾದರೂ ಕೆಲಸ ಮಾಡಬೇಕಿದ್ದಾಗಲೇ ಅದು ಯಾರ ಕಣ್ಣಿಗೂ ಬೀಳುತ್ತಿರಲಿಲ್ಲ ಎನ್ನುವುದು ಬೇಗ ಎಲ್ಲರ ಗಮನಕ್ಕೆ ಬಂದಿತು. ಗಂಟೆಗಟ್ಟಲೇ ಕಾಣೆಯಾಗಿಬಿಡುತ್ತಿತ್ತಾದರೂ ಊಟದ ಸಮಯಕ್ಕೆ ಸರಿಯಾಗಿ ಅಥವಾ ಸಂಜೆ ಕೆಲಸಗಳೆಲ್ಲ ಮುಗಿದ ಮೇಲೆ ಏನೂ ಆಗಿಯೇ ಇಲ್ಲವೆಂಬಂತೆ ತಿರುಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಯಾವಾಗಲೂ ಅದೆಂತಹ ಅದ್ಭುತವಾದ ನೆಪಗಳನ್ನು ಹೇಳುತ್ತಿತ್ತೆಂದರೆ, ಪ್ರೀತಿಯಿಂದ ಗುರುಗುಟ್ಟುತ್ತಿತ್ತೆಂದರೆ, ಅದರ ಸದುದ್ದೇಶವನ್ನು ನಂಬದಿರಲು ಸಾಧ್ಯವೇ ಇರಲಿಲ್ಲ.

ದಂಗೆಯ ದಿನದಿಂದೀಚೆಗೆ ಹಳಬ ಕತ್ತೆ ಬೆಂಜಮಿನ್‌ನಲ್ಲಿ ಯಾವ ಬದಲಾವಣೆಯೂ ಆದಂತೆ ಕಂಡುಬರಲಿಲ್ಲ. ಜೋನ್ಸ್‌ನ ಸಮಯದಲ್ಲಿ ಮಾಡುತ್ತಿದ್ದ ಹಾಗೇ ನಿಧಾನಕ್ಕೆ ಪಟ್ಟುಬಿಡದಂತೆ ತನ್ನ ಕೆಲಸ ಮಾಡುತ್ತಿತ್ತು. ನುಣುಚಿಕೊಳ್ಳುತ್ತಲೂ ಇರಲಿಲ್ಲ, ಹೆಚ್ಚುವರಿ ಕೆಲಸ ಮಾಡುತ್ತೇನೆಂದು ತಾನಾಗಿಯೇ ಮುಂದೆ ಬರುತ್ತಿರಲೂ ಇಲ್ಲ. ದಂಗೆ ಮತ್ತದರ ಪರಿಣಾಮಗಳ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರಲಿಲ್ಲ. ಜೋನ್ಸ್‌ ತೊಲಗಿ ಹೋಗಿರುವ ಕಾರಣ, ಈಗ ಅದು ಮೊದಲಿಗಿಂತ ಹೆಚ್ಚು ಸಂತೋಷವಾಗಿಲ್ಲವೇ ಎಂದು ಕೇಳಿದರೆ, ಅದು ‘ಕತ್ತೆಗಳು ದೀರ್ಘಕಾಲ ಬದುಕುತ್ತವೆ. ನಿಮ್ಮಲ್ಲಿ ಯಾರೂ ಸತ್ತ ಕತ್ತೆಯನ್ನು ನೋಡಿಯೇ ಇಲ್ಲ,’ ಎಂದಷ್ಟೇ ಹೇಳುತ್ತಿತ್ತು. ಇತರ ಪ್ರಾಣಿಗಳು ಅದು ಕೊಡುತ್ತಿದ್ದ, ಅರ್ಥಮಾಡಿಕೊಳ್ಳಲು ಕಷ್ಟವಾದ ಇಂತಹ ನಿಗೂಢ, ಸಂದಿಗ್ಧ ಉತ್ತರದಿಂದಲೇ ಸಂತೃಪ್ತರಾಗಬೇಕಿತ್ತು.

ಭಾನುವಾರಗಳಂದು ಕೆಲಸವಿರುತ್ತಿರಲಿಲ್ಲ. ಬೆಳಗಿನ ತಿಂಡಿಯನ್ನು ಎಂದಿಗಿಂತಲೂ ಒಂದು ಗಂಟೆ ತಡವಾಗಿ ನೀಡಲಾಗುತ್ತಿತ್ತು. ತಿಂಡಿ ಮುಗಿದ ಮೇಲೆ ಸಮಾರಂಭವೊಂದು ಇರುತ್ತಿತ್ತು. ಅದನ್ನು ಪ್ರತೀ ವಾರವೂ ತಪ್ಪದೇ ಆಚರಿಸಲಾಗುತ್ತಿತ್ತು. ಮೊದಲು ಧ್ವಜಾರೋಹಣ. ಸಾಮಾನು- ಸರಂಜಾಮುಗಳನ್ನಿಡುವ ಕೋಣೆಯಲ್ಲಿ ಸ್ನೋಬಾಲ್‌ಗೆ ಹಸಿರು ಬಣ್ಣದ ಹಳೆಯ ಮೇಜುವಸ್ತ್ರವೊಂದು ಸಿಕ್ಕಿತ್ತು. ಅದು ಜೋನ್ಸ್‌ ಮಹಾಶಯನ ಹೆಂಡತಿಯದಾಗಿತ್ತು. ಅದರ ಮೇಲೆ ಬಿಳಿಯ ಬಣ್ಣದಲ್ಲಿ ಒಂದು ಗೊರಸು ಮತ್ತು ಒಂದು ಕೋಡಿನ ಚಿತ್ರವನ್ನು ಸ್ನೋಬಾಲ್‌ ಬರೆದಿತ್ತು. ಪ್ರತೀ ಭಾನುವಾರದಂದು ಬೆಳಿಗ್ಗೆ ಅದನ್ನು ತೋಟದ ಮನೆಯ ಉದ್ಯಾನವನದಲ್ಲಿದ್ದ ಧ್ವಜಸ್ತಂಭದ ಮೇಲಕ್ಕೆ ಏರಿಸಲಾಗುತ್ತಿತ್ತು. ಧ್ವಜದ ಹಸಿರು ಬಣ್ಣವು ಇಂಗ್ಲೆಂಡಿನ ಹಸಿರು ಹೊಲಗಳನ್ನು ಪ್ರತಿನಿಧಿಸಿದರೆ ಗೊರಸು- ಕೋಡುಗಳು, ಕೊನೆಯದಾಗಿ ಮನುಕುಲವನ್ನು ಉರುಳಿಸಿದ ಮೇಲೆ ಉದಯಿಸಲಿರುವ ಪ್ರಾಣಿಗಳ ಗಣತಂತ್ರವನ್ನು ಸೂಚಿಸುತ್ತದೆ ಎಂದು ಸ್ನೋಬಾಲ್‌ ವಿವರಿಸಿತು. ಧ್ವಜಾರೋಹಣವಾದ ಮೇಲೆ ಮೀಟಿಂಗ್‌ ಎಂದು ಹೆಸರಾಗಿದ್ದ ಸರ್ವ ಸಾಧಾರಣ ಸಭೆಯಲ್ಲಿ ಭಾಗವಹಿಸಲು ಎಲ್ಲಾ ಪ್ರಾಣಿಗಳೂ ಗುಂಪುಗುಂಪಾಗಿ ದೊಡ್ಡ ಕೊಟ್ಟಿಗೆಯೊಳಕ್ಕೆ ಹೋಗುತ್ತಿದ್ದವು. ಅಲ್ಲಿ, ಮುಂಬರುವ ವಾರದಲ್ಲಿ ಆಗಬೇಕಾದ ಕೆಲಸಕಾರ್ಯಗಳನ್ನು ಯೋಜಿಸಲಾಗುತ್ತಿತ್ತು, ಠರಾವುಗಳನ್ನು ಮಂಡಿಸಲಾಗುತ್ತಿತ್ತು ಹಾಗೂ ಚರ್ಚಿಸಲಾಗುತ್ತಿತ್ತು. ಇತರ ಪ್ರಾಣಿಗಳು ಹೇಗೆ ಮತ ಚಲಾಯಿಸಬೇಕೆಂಬುದನ್ನು ಅರ್ಥಮಾಡಿಕೊಂಡಿದ್ದವು. ಆದರೆ ಅವುಗಳಿಗೆ ತಮ್ಮದೇ ಆದ ಯಾವುದೇ ಠರಾವುಗಳ ಬಗ್ಗೆ ಯೋಚಿಸಲೂ ಸಾಧ್ಯವಿರಲಿಲ್ಲ.

ಇದನ್ನೂ ಓದಿ: ಹೊಸ ಪುಸ್ತಕ : ಯಕ್…!‌

ಸ್ನೋಬಾಲ್‌ ಮತ್ತು ನೆಪೋಲಿಯನ್‌ ಚರ್ಚೆಗಳಲ್ಲಿ ಇದುವರೆಗೆ ಅತ್ಯಂತ ಸಕ್ರಿಯವಾಗಿದ್ದವರು. ಆದರೆ ಇವೆರಡರಲ್ಲಿ ಎಂದಿಗೂ ಸಹಮತವಿಲ್ಲ ಎಂಬುದು ಎಲ್ಲರ ಗಮನಕ್ಕೂ ಬಂದಿತು. ಎರಡರಲ್ಲಿ ಯಾರೇ ಒಂದು ಸಲಹೆಯೊಂದನ್ನು ನೀಡಿದರೂ ಮತ್ತೊಂದು ಅದನ್ನು ವಿರೋಧಿಸಿಯೇ ಸಿದ್ಧ ಎಂದು ಹೇಳಬಹುದಿತ್ತು. ಹಣ್ಣಿನ ತೋಟದ ಪಕ್ಕದಲ್ಲಿದ್ದ ಚಿಕ್ಕ ಹುಲ್ಲುಗಾವಲಿನ ಜಾಗವು ಕೆಲಸದಿಂದ ನಿವೃತ್ತಿ ಹೊಂದಿದ ಪ್ರಾಣಿಗಳಿಗೆ ವಿಶ್ರಾಂತಿ ಗೃಹವಾಗಿ ಇರಬೇಕೆಂದು ಮತ್ತು ಅದನ್ನು ಬೇರೆ ಯಾವ ಕೆಲಸಕ್ಕೂ ಬಳಸಬಾರದೆಂದು ತೀರ್ಮಾನಿಸಲಾಗಿತ್ತು. ಆ ವಿಷಯವು ಅದರಷ್ಟಕ್ಕೇ ಯಾರೂ ಆಕ್ಷೇಪಿಸುವಂತಹದಾಗಿರಲಿಲ್ಲ. ಆದರೂ ಪ್ರತಿಯೊಂದು ವರ್ಗದ ಪ್ರಾಣಿಗೂ ಸೂಕ್ತವಾದ ನಿವೃತ್ತಿಯ ವಯಸ್ಸು ಯಾವುದಾಗಿರಬೇಕು ಎನ್ನುವ ವಿಷಯದ ಮೇಲೆ ಬಿರುಸಿನ ಚರ್ಚೆ ನಡೆಯಿತು. ಯಾವಾಗಲೂ ಮೀಟಿಂಗ್‌ ‘ಇಂಗ್ಲೆಂಡಿನ ಪ್ರಾಣಿಗಳು’ ಹಾಡನ್ನು ಹಾಡುವುದರ ಮೂಲಕವೇ ಕೊನೆಗೊಳ್ಳುತ್ತಿತ್ತು ಮತ್ತು ಮಧ್ಯಾಹ್ನದ ಸಮಯವು ಮನೋರಂಜನೆಗೆ ಮೀಸಲಾಗಿತ್ತು.

ಹಂದಿಗಳು ಸಾಮಾನು- ಸರಂಜಾಮುಗಳ ಕೋಣೆಯನ್ನು ತಮ್ಮ ಕೇಂದ್ರ ಕಚೇರಿಯನ್ನಾಗಿಸಿಕೊಂಡಿದ್ದವು. ಅಲ್ಲಿ, ಸಾಯಂಕಾಲದ ಹೊತ್ತು ಅವು, ತೋಟದ ಮನೆಯಿಂದ ತಂದುಕೊಂಡಿದ್ದ ಪುಸ್ತಕಗಳಿಂದ ಕಮ್ಮಾರಿಕೆ, ಮರಗೆಲಸ ಹಾಗೂ ಇನ್ನಿತರ ಆವಶ್ಯಕ ಕೌಶಲ್ಯಗಳನ್ನು ಅಭ್ಯಾಸ ಮಾಡುತ್ತಿದ್ದವು. ಸ್ನೋಬಾಲ್‌ ಕೂಡ ಇನ್ನಿತರ ಪ್ರಾಣಿಗಳನ್ನು, ಪ್ರಾಣಿ ಸಮಿತಿಗಳಲ್ಲಿ ಸಂಘಟಿಸುವ ಕಾರ್ಯದಲ್ಲಿ ನಿರತವಾಗಿತ್ತು. ಈ ಕೆಲಸದಲ್ಲಿ ಅದಕ್ಕೆ ದಣಿವೆಂಬುದೇ ಇರಲಿಲ್ಲ. ಓದು- ಬರಹದ ತರಗತಿಗಳನ್ನು ನಡೆಸಲು ವಿದ್ಯಾಸಂಸ್ಥೆಗಳನ್ನು ಆರಂಭಿಸುವುದರ ಜೊತೆಗೆ, ಅದು ಕೋಳಿಗಳಿಗೆ ಮೊಟ್ಟೆ ಉತ್ಪಾದನಾ ಸಮಿತಿಯನ್ನು, ಹಸುಗಳಿಗೆ ಸ್ವಚ್ಛ ಬಾಲಗಳ ಸಂಘ, ಕಾಡಿನ ಕಾಮ್ರೇಡ್‌ಗಳ ಮರು ಶಿಕ್ಷಣ ಸಮಿತಿ (ಹೆಗ್ಗಣ ಮತ್ತು ಮೊಲಗಳನ್ನು ಪಳಗಿಸುವುದು ಇದರ ಉದ್ದೇಶವಾಗಿತ್ತು), ಕುರಿಗಳಿಗಾಗಿ ಬಿಳಿ ತುಪ್ಪಟ ಆಂದೋಲನ ಮತ್ತು ಇನ್ನಿತರ ಹಲವಾರು ಸಂಘ–ಸಂಸ್ಥೆ-ಸಮಿತಿಗಳನ್ನು ರೂಪಿಸಿತು.

ಇದನ್ನೂ ಓದಿ: ಹೊಸ ಪುಸ್ತಕ: ಇದು ಮತ್ತೊಂದು ಕರ್ಣಕುಂಡಲಗಳ ಕಥೆ

ಒಟ್ಟಾರೆಯಾಗಿ ಈ ಕಾರ್ಯಯೋಜನೆಗಳು ವಿಫಲಗೊಂಡವು. ಉದಾಹರಣೆಗೆ, ವನ್ಯ ಜೀವಿಗಳನ್ನು ಪಳಗಿಸುವ ಪ್ರಯತ್ನವು ಬಹುತೇಕ ಆರಂಭಗೊಂಡ ತಕ್ಷಣವೇ ಮುರಿದುಬಿತ್ತು. ಅವು ಮೊದಲಿನ ವರ್ತನೆಯನ್ನೇ ಮುಂದುವರೆಸಿದವು ಹಾಗೂ ಒಂದೊಮ್ಮೆ ಔದಾರ್ಯ ತೋರಿದರೆ, ಅದರಿಂದ ಆರಾಮವಾಗಿ ಲಾಭ ಪಡೆದುಕೊಂಡವು. ಮರುಶಿಕ್ಷಣ ಸಮಿತಿಯನ್ನು ಸೇರಿದ ಬೆಕ್ಕು ಕೆಲ ದಿನಗಳ ಕಾಲ ಅಲ್ಲಿ ಸಕ್ರಿಯವಾಗಿತ್ತು. ಒಂದು ದಿನ ಅದು ಮಾಡೊಂದರ ಮೇಲೆ ಕುಳಿತು, ತನಗೆ ಸಿಗದಷ್ಟು ದೂರದಲ್ಲಿದ್ದ ಕೆಲ ಗುಬ್ಬಿಗಳೊಡನೆ ಮಾತನಾಡುತ್ತಿರುವುದು ಕಂಡಿತು. ಎಲ್ಲಾ ಪ್ರಾಣಿಗಳು ಈಗ ಕಾಮ್ರೇಡ್‌ಗಳು ಮತ್ತು ಇಷ್ಟವಿದ್ದರೆ ಯಾವ ಗುಬ್ಬಿಯಾದರೂ ಬಂದು ತನ್ನ ಮುಂಗಾಲಿನ ಮೇಲೆ ಕುಳಿತುಕೊಳ್ಳಬಹುದು ಎಂದು ಹೇಳುತ್ತ ಇತ್ತು. ಆದರೆ ಗುಬ್ಬಿಗಳು ಮಾತ್ರ ತಮ್ಮ ಅಂತರವನ್ನು ಕಾಯ್ದುಕೊಂಡವು.

ಕೃತಿಯ ಹೆಸರು: ಅನಿಮಲ್‌ ಫಾರ್ಮ್‌

ಮೂಲ ಇಂಗ್ಲಿಷ್‌: ಜಾರ್ಜ್‌ ಆರ್ವೆಲ್‌

ಅನುವಾದ: ಸಹನಾ ಹೆಗಡೆ

ಪ್ರಕಾಶಕರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಪುಟಗಳು: 116

ಬೆಲೆ: 80

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ಗುರು ಸಕಲಮಾ ಆತ್ಮಕಥನ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳುʼ ಮುಖಪುಟ ಅನಾವರಣ

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ಅಧ್ಯಾತ್ಮದ ಹಾದಿಯಲ್ಲಿ ಪಯಣಿಸಬಹುದು. ತಂತ್ರಮಾರ್ಗದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ ಎಂದು ಗುರು ಸಕಲಮಾ ನುಡಿದರು. ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕೃತಿಯ ಮುಖಪುಟವನ್ನು ಸಾಹಿತಿ ಜೋಗಿ ಅನಾವರಣಗೊಳಿಸಿದರು.

VISTARANEWS.COM


on

ಹಿಮಾಲಯ book cover page launch 2
Koo

ಹಿಮಾಲಯದ ಗುರು ಪರಂಪರೆ ಅವಿನಾಶಿ: ಗುರು ಸಕಲಮಾ

ಬೆಂಗಳೂರು: ಅಧ್ಯಾತ್ಮದ (Spirituality) ಬಗ್ಗೆ ಸಮಾಜದಲ್ಲಿ ಇರುವ ತಪ್ಪು ತಿಳುವಳಿಕೆಗಳು, ಭಯಗಳಿಂದಾಗಿ ಮೊದಲಿನಷ್ಟು ಮೌಲ್ಯಯುತವಾಗಿ ಅದನ್ನು ನಮಗೆ ಉಳಿಸಿಕೊಳ್ಳಲಾಗಿಲ್ಲ. ಆದರೆ, ನಾವು ಅದನ್ನು ಕಳೆದುಕೊಂಡಿಲ್ಲ. ಯಾರು ಏನೇ ಪ್ರಯತ್ನ ಮಾಡಿದರೂ ಇದನ್ನು ನಾಶ ಮಾಡಲು ಸಾಧ್ಯವಿಲ್ಲ. ಈ ನಮ್ಮ ಸಂಸ್ಕೃತಿ ಅವಿನಾಶಿ ಎಂದು ಹಿಮಾಲಯ ಯೋಗಿ ಸ್ವಾಮಿ ರಾಮ (Swami Rama) ಹಾಗೂ ಬಹುಶ್ರುತ ವಿದ್ವಾಂಸ ಡಾ. ಆರ್‌ ಸತ್ಯನಾರಾಯಣ (Dr. R Satyanarayana) ಅವರ ನೇರ ಶಿಷ್ಯೆ, ಶ್ರೀವಿದ್ಯಾ ಗುರು ಸಕಲಮಾ (Guru Sakalamaa) ಅವರು ಹೇಳಿದ್ದಾರೆ.

ಅವರು ತಮ್ಮ, ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಪುಸ್ತಕದ ಇಂಗ್ಲೀಷ್‌ ಹಾಗೂ ಕನ್ನಡ ಆತ್ಮಚರಿತ್ರೆಯ ಮುಖಪುಟ ಅನಾವರಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಆದರೆ ಇದಕ್ಕೆ ಇನ್ನೊಂದು ಮುಖವಿದೆ ಅದು ತಂತ್ರಶಾಸ್ತ್ರ. ತಂತ್ರ ನಿಮ್ಮನ್ನು ನೀವು ಹೇಗಿದ್ದೇವೋ ಹಾಗೆಯ ಸ್ವೀಕರಿಸುತ್ತದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ನೀವು ಅಧ್ಯಾತ್ಮ ದ ಹಾದಿಯಲ್ಲಿ ಪಯಣಿಸಬಹುದು. ಈ ತಂತ್ರದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ. ಇದು ಇವತ್ತಿನ ಸಮಸ್ಯೆಯಲ್ಲ. ಶಂಕರಾಚಾರ್ಯರ ಕಾಲದಿಂದಲೂ ಇತ್ತು. ಅವರು ಇದಕ್ಕೆ ಅಂಟಿದ ಜಾಡ್ಯಗಳನ್ನು ಕಿತ್ತೆಸೆದು ಅದನ್ನು ಪ್ರವರ್ಧಮಾನಕ್ಕೆ ತರಲು ಶ್ರಮಿಸಿದರು ಎಂದರು.

ನನ್ನಮ್ಮ ನನಗೆ ಋಷಿಮುನಿಗಳ ಕತೆಗಳನ್ನೆಲ್ಲ ಹೇಳುವಾಗ ಈ ಕತೆಗಳ ಋಷಿಮುನಿಗಳಿಗೂ ನಮಗೂ ಸಂಬಂಧವಿಲ್ಲ, ಅವರು ಯಾವುದೋ ಲೋಕದಲ್ಲಿ ಕೂತಿರುವವರು. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದೇ ನಾನಂದುಕೊಂಡಿದ್ದೆ. ಆದರೆ, ಶ್ರದ್ಧೆಯಿಂದ ನೀವು ಈ ಲೋಕಕ್ಕೆ ಬಂದರೆ, ಇವು ಕತೆಗಳಲ್ಲ, ಅಧ್ಯಾತ್ಮಿಕ ಸತ್ಯಗಳು ಎಂಬುದು ನಿಮಗೆ ಗೋಚರವಾಗಬಹುದು. ನೀವು ಬಯಸಿದಲ್ಲಿ, ಈ ಪುಸ್ತಕದಲ್ಲಿ ಬಂದಿರುವ ಋಷಿಮುನಿಗಳನ್ನೆಲ್ಲ ನೀವು ಭೇಟಿ ಮಾಡಬಹುದು. ನಿಮ್ಮ ಕನಸಿನಲ್ಲೂ ಅವರು ಬಂದು ನಿಮ್ಮ ಜೊತೆ ಮಾತನಾಡಬಹುದು. ಪಕ್ಕದಲ್ಲೇ ಗೆಳೆಯನ ರೀತಿಯಲ್ಲಿ ಬಂದು ನಿಮಗೆ ಅರಿವು ಮೂಡಿಸಿ ಹೋಗಬಹುದು. ಅವರೆಲ್ಲ ಬೇರೊಂದು ಲೋಕದಲ್ಲಿ ಕುಳಿತು, ಈ ಲೋಕಕಲ್ಯಾಣಕ್ಕಾಗಿ ಕಂಕಣ ಬದ್ಧರಾಗಿ ನಿಂತಿದ್ದಾರೆ, ಸದಾ ನಮ್ಮನ್ನು ಪೊರೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಬದುಕಿನ ಪಯಣದಲ್ಲಿ ಗುರುವಿನ ಸ್ಥಾನ ದೊಡ್ಡದು. ನಾನು, ನನ್ನದು ಎಂಬುದನ್ನು ಬಿಟ್ಟಾಗ ಗುರು ಸಿಕ್ಕುತ್ತಾನೆ. ಗುರುವಿನ ಅನ್ವೇಷಣೆಯಲ್ಲಿ ನಾವಿದ್ದೇವೆ ಎಂಬುದು ಅನೇಕ ಸಾರಿ ನಮಗೆ ಅರಿವೇ ಇರುವುದಿಲ್ಲ. ಅದಕ್ಕಾಗಿಯೇ, ಅರಿವೇ ಗುರುವು ಗುರುವೇ ಅರಿವು. ಗುರು ಸಿಕ್ಕ ಮೇಲೆ ಕೆಲವರಿಗೆ ಅರಿವು ಸಿಕ್ಕರೆ, ಇನ್ನು ಕೆಲವರಿಗೆ ಅರಿವಾಗಿ ಗುರು ಬೇಕು ಅನಿಸುತ್ತದೆ ಎಂದು ಹೇಳಿದರು.

ಹಿಮಾಲಯ book cover page launch 2

ಕನ್ನಡಪ್ರಭದ ಪುರವಣಿ ಸಂಪಾದಕ, ಸಾಹಿತಿ ಜೋಗಿ (Writer Jogi) ಮಾತನಾಡಿ, ಒಂದು ಪುಸ್ತಕವನ್ನು ಗೆಲ್ಲಿಸುವ ಅಂಶಗಳೆಂದರೆ ಮುಗ್ದತೆ ಹಾಗೂ ಪ್ರಾಮಾಣಿಕತೆ. ಇಂದು ಎಷ್ಟೋ ಪುಸ್ತಕಗಳು ಅಪ್ರಾಮಾಣಿಕವಾಗಿ ಇರುತ್ತದೆ, ಪುಸ್ತಕದ ಕೆಲವು ಪುಟಗಳನ್ನು ತೆರೆದು ನೋಡಿದ ತಕ್ಷಣ ಇದು ಪ್ರಾಮಾಣಿಕವೋ, ಅಪ್ರಾಮಾಣಿಕವೋ ಎಂಬುದು ಅರ್ಥವಾಗುತ್ತದೆ. ಈ ಪುಸ್ತಕ ಕೆಲವು ಪುಟಗಳನ್ನು ಮುಂಚಿತವಾಗಿ ಓದಿದ್ದರಿಂದ ನನಗೆ ಇದರಲ್ಲಿ ಮುಗ್ಧತೆ ಹಾಗೂ ಪ್ರಾಮಾಣಿಕತೆ ಎದ್ದು ಕಾಣುತ್ತಿವೆ. ಹಾಗಾಗಿ ಇದು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ ಎಂದರು.

ಇಂದು ಪಾರಲೌಕಿಕ ಅಂದ ತಕ್ಷಣ ನಮಗೊಂದು ತಪ್ಪು ಕಲ್ಪನೆಯಿದೆ. ನಮಗೆ ಆ ವೇಷವನ್ನು ತೊಟ್ಟುಕೊಳ್ಳುವ ಧೈರ್ಯ ಇದೆಯೇ? ನಾವು ಆ ಜಗತ್ತಿಗೆ ಹೋಗಬಲ್ಲೆವಾ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡಿ ನಾವು ಅದರ ಗೊಡವೆಗೇ ಹೋಗುವುದಿಲ್ಲ. ಪುರಂದರ ದಾಸರೇ ʻಇಷ್ಟು ದಿನ ಈ ವೈಕುಂಠ ಎಷ್ಟು ದೂರ ಎನ್ನುತಲಿದ್ದೆʼ ಎಂದು ಬರೆಯುವ ಮೂಲಕ ವೈಕುಂಠ ಇಲ್ಲೇ ಇದ್ದರೂ, ಅಲ್ಲಿದೆ ಎಂದು ತಿಳಿದಿದ್ದೆ ಎನ್ನುವ ಸತ್ಯವನ್ನು ಹೇಳಿದ್ದಾರೆ. ಈ ಪುಸ್ತಕ ಈ ರೀತಿಯಲ್ಲಿ ಅಂಜಿಕೆಗಳನ್ನು ದೂರ ಮಾಡಿ ಸಂಕೋಚದ ತೆರೆಯನ್ನು ಸರಿಸಲು ದಾರಿದೀಪವಾಗಬಹುದು ಎಂದರು.

ಜೀವನದಲ್ಲಿ ನಾವು ಕಳೆದುಕೊಳ್ಳುವುದು ಅಪನಂಬಿಕೆಯಿಂದ. ನಮ್ಮಲ್ಲಿ ಅಪನಂಬಿಕೆಯಿದೆ ಎಂದರೆ ಅದು ನಮ್ಮ ವ್ಯಕ್ತಿತ್ವದ ದೋಷವೇ ಹೊರತು ಗುರುವಿನ ದೋಷವಲ್ಲ. ಒಂದು ಕತೆಯ ಒಳಗೆ ನನಗೆ ಹೋಗಲಾಗದಿದ್ದರೆ, ಅದು ಆ ಕಥನದ ದೋಷವಲ್ಲ, ಆ ಕಥನವನ್ನು ಸ್ವೀಕರಿಸುವ ಅನುಭವದ ಕೊರತೆಯೇ ಕಾರಣ. ಮನುಷ್ಯ ಎಲ್ಲ ದುಃಖಗಳನ್ನೂ, ಸುಖವನ್ನು ಬದುಕಿನಲ್ಲಿ ಅನುಭವಿಸಿದ ಮೇಲೆ ಒಂದು ಹುಡುಕಾಟ ಹಾದಿಯತ್ತ ಹೊರಳುತ್ತಾನೆ. ಈ ಹಾದಿಯಲ್ಲಿ ಸಿಗುವ ಗುರು ಯಾವುದೇ ರೂಪದಲ್ಲಿರಬಹುದು. ಇಂಥ ಸಂದರ್ಭ ನಂಬಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಪುಸ್ತಕ ಜಗತ್ತಿಗೆ ಇಂಥದ್ದೊಂದು ಸಮಾರಂಭ ಬೇಕಿದೆ. ಮುಖಪುಟ ಅನಾವರಣವನ್ನೂ ಸಂಭ್ರಮಿಸುವ ಈ ನಡೆ ಪುಸ್ತಕ ಜಗತ್ತಿನಲ್ಲಿ ಸ್ವಾಗತಾರ್ಹ ಎಂದೂ ಅವರು ಹೇಳಿದರು.

ಸಕಲಮಾ ಅವರ ಯುಟ್ಯೂಬ್ ಅನಾವರಣಗೊಳಿಸಿದ ಕಾಂತಾರ (Kantara Movie) ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಮಾತನಾಡಿ, ಮುಖಪುಟವನ್ನು ನೋಡಿ ಪುಸ್ತಕವನ್ನು ಅಳೆಯಬೇಡಿ ಎಂಬ ಇಂಗ್ಲೀಷ್‌ ನುಡಿಗಟ್ಟಿದೆ. ಆದರೆ, ಸಾಮಾನ್ಯವಾಗಿ ನಾವು ಮುಖಪುಟವನ್ನು, ಟ್ರೈಲರ್‌ಗಳನ್ನು ನೋಡಿ ಅಳೆಯುವ ಪರಿಸ್ಥಿತಿ ಈಗ ಎಲ್ಲೆಡೆ ಇದೆ. ಒಳ ಹೂರಣ ಇದ್ದರೆ ಸಿನಿಮಾವಿರಲಿ, ಪುಸ್ತಕವಿರಲಿ ಗೆದ್ದೇ ಗೆಲ್ಲುತ್ತದೆ ಎಂಬುದು ನಾನು ಕಾಂತಾರದಿಂದ ಕಲಿತ ಪಾಠ ಎಂದರು.

ಒಂದು ಸಿನಿಮಾ ಮಾಡುವಂತೆ, ಪುಸ್ತಕ ಬರೆಯುವುದೂ ಕೂಡಾ ಸಾಕಷ್ಟು ಶ್ರಮ ಬೇಡುವ ಕೆಲಸ. ಅದರ ಹಿಂದೆ ಅಪಾರ ಶ್ರದ್ಧೆಯಿದೆ. ಸಿನಿಮಾ ಮಂದಿ ತಮ್ಮ ಸಿನಿಮಾದ ಕುತೂಹಲ ಮೊದಲೇ ಹೆಚ್ಚಿಸಲು ಟ್ರೈಲರ್, ಟೀಸರ್‌ ಬಿಡುಗಡೆಯನ್ನು ಇಟ್ಟುಕೊಳ್ಳುತ್ತಾರೆ. ಹಾಗಾಗಿ, ಪುಸ್ತಕವನ್ನೂ ಹೆಚ್ಚು ಮಂದಿಗೆ ತಲುಪಿಸಲು, ಕುತೂಹಲ ಹುಟ್ಟು ಹಾಕಿಲು ಇಂಥ ಮುಖಪುಟ ಅನಾವರಣದಂತಹ ಕಾರ್ಯಕ್ರಮಗಳು ನಡೆಯಬೇಕು. ಜನರು ಸೇರಬೇಕು. ಓದುವ ಪರಂಪರೆ ಹೆಚ್ಚಬೇಕು ಎಂದರು.

ಗುರು ಯಾರೇ ಇರಲಿ, ಅವರ ಮೇಲೆ ನಮಗೆ ನಂಬಿಕೆ ಇರಬೇಕು. ಜೀವನದಲ್ಲಿ ಕಲಿಯುವ ಹಾದಿ ದೊಡ್ಡದಿದೆ. ಆ ಸಂದರ್ಭ ಗುರು ತಿದ್ದಿದ್ದನ್ನು ನಾವು ಕಲಿತುಕೊಳ್ಳುವ ಆಸಕ್ತಿ ಇರಬೇಕು. ಅದಕ್ಕಾಗಿ ಗುರು ತೋರಿದ ಹಾದಿಯಲ್ಲಿ ನಾವು ನಡೆಯಬೇಕು ಎಂದೂ ಹೇಳಿದರು.

ಜುಲೈ 21ರಂದು ಚಂಡೀಗಢದಲ್ಲಿ ಆಂಗ್ಲ ಭಾಷೆಯ `Messages from the Himalayan Sages- Timely and Timeless’ ಹಾಗೂ ಸೆಪ್ಟೆಂಬರ್22ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕನ್ನಡ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಗುರು ಸಕಲಮಾ ಅವರ ಯುಟ್ಯೂಬ್‌ ಲಿಂಕ್- https://youtube.com/@gurusakalamaa?feature=shared

ಇದನ್ನೂ ಓದಿ: ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

Continue Reading

ವಿದೇಶ

Youngest Artist: ಅಂಬೆಗಾಲಿಡುವ ಬಾಲಕ ಈಗ ವಿಶ್ವದ ಅತಿ ಕಿರಿಯ ಚಿತ್ರ ಕಲಾವಿದ!

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ವಿಶ್ವದ ಕಿರಿಯ ಚಿತ್ರಕಲಾವಿದ (Youngest Artist) ಘಾನಾದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ್ದಾನೆ! ಈ ಅತಿ ಕಿರಿಯ ಕಲಾವಿದನ ಕುರಿತು ವ್ಯಾಪಕ ಕುತೂಹಲ ಉಂಟಾಗಿದೆ.

VISTARANEWS.COM


on

By

Youngest Artist
Koo

ಅಂಬೆಗಾಲಿಡುವ (Toddler) ಮಗು ವರ್ಣಚಿತ್ರಗಳನ್ನು (Youngest Artist) ರಚಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records) ಬರೆದಿದೆ. ವಿಶ್ವದ ಅತ್ಯಂತ ಕಿರಿಯ ಚಿತ್ರ ಕಲಾವಿದ ಎನ್ನುವ ಖ್ಯಾತಿಗೆ ಈ ಮಗು ಪಾತ್ರವಾಗಿದೆ. ಘಾನಾದ (Ghana) 1 ವರ್ಷ 152 ದಿನಗಳ ಏಸ್-ಲಿಯಾಮ್ ನಾನಾ ಸ್ಯಾಮ್ ಆಂಕ್ರಾ (Ace-Liam Nana Sam Ankrah) ತಾನೇ ರಚಿಸಿದ 9 ವರ್ಣಚಿತ್ರಗಳನ್ನು ಮಾರಾಟ ಮಾಡಿ ಈ ದಾಖಲೆ ನಿರ್ಮಿಸಿದೆ.

ಏಸ್- ಲಿಯಾಮ್ ನಾನಾ ಸ್ಯಾಮ್ ಆಂಕ್ರಾ ವಿಶ್ವದ ಅತ್ಯಂತ ಕಿರಿಯ ಪುರುಷ ಚಿತ್ರ ಕಲಾವಿದನಾಗಿ ಪ್ರತಿಷ್ಠಿತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ. ಆಂಕ್ರಾನ ಈ ಸಾಧನೆ ಹಲವಾರು ಮಂದಿಯ ಗಮನ ಸೆಳೆದಿದ್ದ್ದು, ಜಾಗತಿಕ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ವಿಶ್ವ ದಾಖಲೆ ಪಟ್ಟಿಯಲ್ಲಿ ಆಂಕ್ರಾ ಹೆಸರು ಸೇರ್ಪಡೆಗೆ ಸಾಕಷ್ಟು ಮಂದಿ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.


ಯಾವಾಗ ಚಿತ್ರಕಲೆ ಪ್ರಾರಂಭಿಸಿದ್ದು?

ಈಗಷ್ಟೇ ಅಂಬೆಗಾಲಿಡುತ್ತಿರುವ ಆಂಕ್ರಾ ಕೇವಲ ಆರು ತಿಂಗಳಲ್ಲೇ ಚಿತ್ರಕಲೆಯನ್ನು ಪ್ರಾರಂಭಿಸಿದನು ಎನ್ನುತ್ತಾರೆ ಆತನ ತಾಯಿ. ಚಿತ್ರಕಲೆಯ ಮೇಲಿನ ಆತನ ಉತ್ಸಾಹವು ಚಿಕ್ಕ ವಯಸ್ಸಿನಿಂದಲೂ ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆತ ಕಲಿಯಲು ಪ್ರಾರಂಭ ಮಾಡಿದಾಗಲೇ ಕ್ಯಾನ್ವಾಸ್‌ನ ತುಂಡನ್ನು ನೆಲದ ಮೇಲೆ ಹರಡಿ ಅದರ ಮೇಲೆ ಸ್ವಲ್ಪ ಬಣ್ಣವನ್ನು ಬೀಳಿಸಿದೆ. ಕ್ಯಾನ್ವಾಸ್‌ನಾದ್ಯಂತ ಆತ ಬಣ್ಣವನ್ನು ಹರಡಿ ಕೊನೆಗೊಳಿಸಿದ. ಇದು ಆತನ ಮೊದಲ ವರ್ಣಚಿತ್ರ ‘ದಿ ಕ್ರಾಲ್’ ಎಂದು ಅವರು ವಿವರಿಸಿದರು.


ಅಂಬೆಗಾಲಿಡುವ ಘಾನಾದ ಆಂಕ್ರಾ ಈಗ ಸೆಲೆಬ್ರಿಟಿಯಾಗಿದ್ದಾನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಮಾತ್ರವಲ್ಲದೆ ಘಾನಾ ಗಣರಾಜ್ಯದ ಪ್ರಥಮ ಮಹಿಳೆಯ ಗಮನವನ್ನೂ ಆತ ಸೆಳೆದಿದ್ದಾನೆ.

ಮೊದಲ ಪ್ರದರ್ಶನ

ಏಸ್- ಲಿಯಾಮ್ ಆಂಕ್ರಾ ಇತ್ತೀಚೆಗೆ ತನ್ನ ಚಿತ್ರಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನ ನಡೆಸಿದ. ಇದರಲ್ಲಿ ಆತನ ಹತ್ತು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಅವುಗಳಲ್ಲಿ ಒಂಬತ್ತು ಮಾರಾಟವಾಗಿವೆ. ಏಸ್- ಲಿಯಾಮ್‌ನ ಕಲೆಯು ನಿರ್ದಿಷ್ಟ ಸಂದೇಶಗಳನ್ನು ರವಾನಿಸುವುದಕ್ಕಿಂತ ಹೆಚ್ಚಾಗಿ ಅಭಿವ್ಯಕ್ತಿ ಮತ್ತು ಅನ್ವೇಷಣೆಯ ಬಗ್ಗೆ ಹೆಚ್ಚಾಗಿದೆ ಎಂದು ಆತನ ತಾಯಿ ಹೇಳಿದ್ದಾರೆ.

ಅವನ ಅಮೂರ್ತ ವರ್ಣಚಿತ್ರಗಳು ಸುತ್ತಲಿನ ಪ್ರಪಂಚದಿಂದ ಪ್ರೇರಿತವಾಗಿವೆ. ಬಣ್ಣ, ಆಕಾರ, ಟೆಕಶ್ಚರ್ ಮತ್ತು ಅವನ ಮನಸ್ಥಿತಿಯನ್ನು ಇದು ಅವಲಂಬಿಸಿದೆ. ಪ್ರತಿ ಚಿತ್ರಕಲೆಯು ಹೊಸ ವಿಷಯಗಳನ್ನು ಕಂಡುಹಿಡಿಯುವಲ್ಲಿ ಆತನ ಕುತೂಹಲ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ ಎಂದಿದ್ದಾರೆ ಅವರು.


ಭವಿಷ್ಯದ ಯೋಜನೆಗಳು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ವಿಶ್ವದ ಅತ್ಯಂತ ಕಿರಿಯ ಕಲಾವಿದ ಲಿಯಾಮ್ ಅವರ ದಾಖಲೆಯನ್ನು ಅನುಮೋದಿಸಿದ ಬಳಿಕ ಆತನ ಕುಟುಂಬವು ಆತನ ಕಲಾತ್ಮಕ ಪ್ರತಿಭೆಗೆ ಗುಣಮಟ್ಟದ ಶಿಕ್ಷಣದ ಮೂಲಕ ಪೋಷಿಸಲು ಅವಕಾಶಗಳನ್ನು ಹುಡುಕುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನದ ಅವಕಾಶಗಳು ಅವರಿಗೆ ದೊರೆಯುತ್ತದೆ ಮತ್ತು ಆತನ ಕಲಾಕೃತಿಗಳನ್ನು ಮಾರಾಟ ಮಾಡಲು ಬಯಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

ಏಸ್-ಲಿಯಾಮ್ ತಾಯಿಯ ಸಲಹೆ ಏನು?

ತಮ್ಮ ಆಸಕ್ತಿಗಳನ್ನು ಕಂಡುಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಲು ಪೋಷಕರಿಗೆ ಸಲಹೆ ನೀಡಿದ ಅವರು, ಪ್ರತಿ ಮಗು ಅನನ್ಯವಾಗಿದೆ ಮತ್ತು ಅವರ ಭಾವೋದ್ರೇಕಗಳನ್ನು ಪೋಷಿಸುವುದು ಅದ್ಭುತ ಆವಿಷ್ಕಾರಗಳು ಮತ್ತು ಸಾಧನೆಗಳಿಗೆ ಕಾರಣವಾಗಬಹುದು. ಅದನ್ನು ಪ್ರಯತ್ನಿಸುವ ಮೊದಲು ಅದನ್ನು ಮತ್ತೆ ಮತ್ತೆ ಓದಿ ಮತ್ತು ನೆನಪಿಡಿ. ಪ್ರಯಾಣ ಮತ್ತು ಅದು ತರುವ ಸಂತೋಷವು ತುಂಬಾ ತೃಪ್ತಿಕರವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

Bengaluru News: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ನಲ್ಲಿ ನಡೆಯಲಿದೆ. ಸಾಹಿತಿ ಎಸ್‌.ಎಲ್‌.ಭೈರಪ್ಪ ಕೃತಿ ಬಿಡುಗಡೆ ಮಾಡಲಿದ್ದಾರೆ.

VISTARANEWS.COM


on

Bharathada dheera chethanagalu kruthi lokarpane in Bengaluru on May 26
Koo

ಬೆಂಗಳೂರು: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಗರದ (Bengaluru News) ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಜರುಗಲಿದೆ.

ಇದನ್ನೂ ಓದಿ: COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಎಸ್‌.ಎಲ್‌. ಭೈರಪ್ಪನವರ ಇಂಗ್ಲೀಷ್‌ ಅನುವಾದಿತ 3 ಕಾದಂಬರಿಗಳನ್ನು ಡಾ. ವಿಕ್ರಮ್‌ ಸಂಪತ್‌ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

ಕಾರ್ಯಕ್ರಮದಲ್ಲಿ ಡಾ. ವಿಕ್ರಮ್‌ ಸಂಪತ್‌ ಅವರೊಂದಿಗೆ ಅರ್ಧಗಂಟೆಯ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅನುವಾದಕರಾದ ಎಲ್‌.ವಿ. ಶಾಂತಕುಮಾರಿ, ಪ್ರೊ. ಜಿ.ಎಲ್‌. ಶೇಖರ್‌ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಎಂ.ಎ. ಸುಬ್ರಮಣ್ಯ ಮತ್ತು ಎಂ.ಎಸ್‌. ಋತ್ವಿಕ್‌ ತಿಳಿಸಿದ್ದಾರೆ.

Continue Reading

ಕರ್ನಾಟಕ

ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

ಉತ್ತರದ ಹಿಮಾಲಯ ಭಾರತೀ ಗುರು ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಗುರು ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿ ಇದೀಗ ಸಕಲಮಾ ಆಗಿ, ಸಾವಿರಾರು ಮಂದಿಗೆ ಶ್ರೀವಿದ್ಯಾ ಸಾಧನೆಯ ಅರಿವು ಹೆಚ್ಚಿಸುತ್ತಿರುವ ಗುರು ಸಕಲಮಾ ಅವರ ಆತ್ಮಕಥನ ಸದ್ಯದಲ್ಲೇ ಹೊರಬರಲಿದೆ.

VISTARANEWS.COM


on

ಗುರು ಸಕಲಮಾ guru sakalamaa
Koo

ಹಿಮಾಲಯದ ಮಹಾನ್‌ ಯೋಗಿ ಸ್ವಾಮಿ ರಾಮ (Himalayan Yogi Swami Rama) ಹಾಗೂ ಬಹುಶ್ರುತ ವಿದ್ವಾಂಸ, ಶ್ರೀವಿದ್ಯಾ ಗುರು, ಪದ್ಮಶ್ರೀ ಪುರಸ್ಕೃತ ಡಾ. ರಾ. ಸತ್ಯನಾರಾಯಣ (R Satyanarayana) ಅವರುಗಳ ನೇರ ಶಿಷ್ಯೆ, ಶ್ರೀವಿದ್ಯಾ (Shrividya) ಸಾಧಕಿ ಸಕಲಮಾ ಅವರ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಆತ್ಮಕಥನ ಪುಸ್ತಕ ರೂಪದಲ್ಲಿ ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ (Messages from Himalayan Sages- Timely and Timeless) ಸದ್ಯದಲ್ಲೇ ಹೊರಬರಲಿದೆ. ಈ ಹಿನ್ನೆಲೆಯಲ್ಲಿ, ಕೃತಿಯ ಮುಖಪುಟ ಅನಾವರಣ (cover page launch) ಇದೇ ಮೇ 26ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆಯಲಿದೆ. ಸಂಸದ ತೇಜಸ್ವಿ ಸೂರ್ಯ (Tejaswi Surya), ಸಾಹಿತಿ, ಪತ್ರಕರ್ತ ಜೋಗಿ (Jogi), ಕಾಂತಾರ (Kantara) ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗುರು ಸಕಲಮಾ ತಮ್ಮ ಪೂರ್ವಾಶ್ರಮದಲ್ಲಿ ಜ್ಯೋತಿ ಪಟ್ಟಾಭಿರಾಂ ಹೆಸರಿನಿಂದಲೇ ನೃತ್ಯವಲಯದಲ್ಲಿ, ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಹೆಸರು ಮಾಡಿದವರು. ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಪ್ರೊಫೆಸರ್‌ ಆಗಿ ಸಾವಿರಾರು ಮಕ್ಕಳಿಗೆ ಇಂಗ್ಲೀಷ್‌ ಬೋಧನೆ ಮಾಡಿದವರು. ಇದರ ಜೊತೆಜೊತೆಗೇ, ತಾನು ಬಾಲ್ಯದಿಂದ ಕಲಿತ ಭರತನಾಟ್ಯವನ್ನೂ ಪೋಷಿಸಿ, ತನ್ನದೇ ಆದ ನೃತ್ಯ ಸಂಸ್ಥೆಯನ್ನು ಕಟ್ಟಿ ನೀರೆರೆದು, ಹಲವಾರು ನೃತ್ಯಪ್ರತಿಭೆಗಳನ್ನು ಬೆಳೆಸಿದವರು. ನೃತ್ಯಕ್ಷೇತ್ರದ ಇವರ ಸಾಧನೆಗೆ ಕರ್ನಾಟಕ ಸರ್ಕಾರ ಕೊಡುವ ಉನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿರುವುದು ಇವರ ಸಾಧನೆಯ ಹಾದಿಯ ಮೈಲುಗಲ್ಲುಗಳಲ್ಲಿ ಒಂದು. ಇವಿಷ್ಟೇ ಅಲ್ಲದೆ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಯೋಗ- ನಾಟ್ಯ ಸರಸ್ವತಿ, ಆಸ್ಟ್ರೇಲಿಯಾ ಕನ್ನಡ ಸಂಘ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರ ಸನ್ಮಾನಗಳು ಇವರಿಗೆ ಸಂದಿವೆ. ನೂರಾರು ಪ್ರದರ್ಶನಗಳನ್ನೂ ನೀಡಿ ಅಪಾರ ನೃತ್ಯಾಭಿಮಾನಿಗಳನ್ನೂ ಹೊಂದಿದ್ದಾರೆ.

ಇವೆಲ್ಲ ಸಾಧನೆಯ ಜೊತೆಜೊತೆಗೇ, ಜ್ಯೋತಿ ಪಟ್ಟಾಭಿರಾಂ ಅವರು ಇನ್ನೊಂದು ಕ್ಷೇತ್ರದಲ್ಲೂ ಸಮನಾಗಿ ಹೆಜ್ಜೆಯೂರಿ ಬೆಳೆದಿದ್ದೇ ಒಂದು ವಿಸ್ಮಯದ ಗಾಥೆ. ಅದು ಅಧ್ಯಾತ್ಮ. 1992ರವರೆಗೆ ಜ್ಯೋತಿ ಪಟ್ಟಾಭಿರಾಂ ಅವರು ತಮ್ಮ ಬದುಕಿನ ಹಾದಿ ಈ ದಿಕ್ಕಿನಲ್ಲಿ ಹೊರಳೀತು ಎಂಬ ಕಲ್ಪನೆಯನ್ನೂ ಹೊಂದಿರಲಿಲ್ಲ. ಯೋಗಾಚಾರ್ಯ ಪಟ್ಟಾಭಿರಾಂ ಅವರ ಜೀವನ ಸಂಗಾತಿಯಾಗಿ, ತನ್ನ ಕಾಲೇಜು, ನೃತ್ಯ ತರಗತಿಗಳು, ನೃತ್ಯ ಪ್ರದರ್ಶನಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರಿಗೆ ಹಿಮಾಲಯನ್‌ ಯೋಗಿ ಸ್ವಾಮಿ ರಾಮ ಅವರ ಭೇಟಿಯಾದದ್ದೇ ಒಂದು ಆಸಕ್ತಿದಾಯಕ ಕತೆ. ಅಲ್ಲಿಂದ ನಂತರ ಬದುಕು ಬೇರೆಯದೇ ದಿಕ್ಕಿನತ್ತ ಮುಖ ಮಾಡಿದರೂ, ಅಧ್ಯಾತ್ಮವನ್ನೂ, ನೃತ್ಯವನ್ನೂ, ತನ್ನ ಉದ್ಯೋಗವನ್ನೂ ಸಮದೂಗಿಸಿಕೊಂಡು ಕೆಲಸ ಮಾಡಿದರು. ತಮ್ಮ ಗುರು ಸ್ವಾಮಿ ರಾಮ ಅವರಿಂದ ಶ್ರೀವಿದ್ಯೆಯಲ್ಲಿ ಅತ್ಯಂತ ಶ್ರೇಷ್ಠವಾದ ಶಾಂಭವ ದೀಕ್ಷೆಯನ್ನು ಪಡೆದ ಇವರು, ಗುರುವಿನ ದೇಹತ್ಯಾಗದ ನಂತರವೂ ಅವರಿಂದ ಮಾರ್ಗದರ್ಶನಗಳನ್ನು ಪಡೆಯುತ್ತಾ ಬಂದವರು. ಅವರ ಈ ಅಧ್ಯಾತ್ಮದ ಹಾದಿಗೆ ಇನ್ನಷ್ಟು ಬಲ ಬಂದಿದ್ದು ಸ್ವಾಮಿ ರಾಮ ಅವರ ಮಾರ್ಗದರ್ಶನದ ಮೇರೆಗೆ ಮೈಸೂರಿನ ಖ್ಯಾತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ರಾ ಸತ್ಯನಾರಾಯಣ ಅವರ ಬಳಿ ದಕ್ಷಿಣದ ವಿದ್ಯಾರಣ್ಯ ಪರಂಪರೆಯಲ್ಲಿ ಶ್ರೀವಿದ್ಯೆಯ ಹೆಚ್ಚಿನ ಕಲಿಕೆಗೆ ತೆರಳಿದ ಮೇಲೆ.

ಹೀಗಾಗಿ ಉತ್ತರದ ಹಿಮಾಲಯನ್‌ ಭಾರತೀ ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿ ಇದೀಗ ಸಕಲಮಾ ಆಗಿ, ಈಗ ಸಾವಿರಾರು ಮಂದಿಗೆ ಶ್ರೀವಿದ್ಯಾ ಸಾಧನೆಯ ಅರಿವು ಹೆಚ್ಚಿಸುವಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಅವರ ಈ ಬದುಕಿನ ಪುಟಗಳಲ್ಲಿ ನೂರಾರು ರೋಮಾಂಚನಗೊಳಿಸುವ ಅಧ್ಯಾತ್ಮದ ಅನುಭವಗಳಿವೆ. ಸುಮಾರು 30 ವರ್ಷಗಳ ಸುದೀರ್ಘ ಅಧ್ಯಾತ್ಮ ಸಾಧನೆಯ ವಿವಿಧ ಮಜಲುಗಳೆಲ್ಲವೂ, ಮೈನವಿರೇಳಿಸುವಂತ ಹಲವಾರು ಅನುಭವಗಳ ಜೊತೆಗೆ ಪುಸ್ತಕದ ಮೂಲಕ ಅಧ್ಯಾತ್ಮ ಆಸಕ್ತರನ್ನೂ ಸಾಧಕರನ್ನೂ, ಜನಸಾಮಾನ್ಯರನ್ನೂ ತಲುಪಲಿದ್ದು, ಋಷಿ ಪರಂಪರೆಯ ಬಗೆಗಿನ ಸಾಮಾನ್ಯರ ಅರಿವಿನ ವಿಸ್ತಾರಕ್ಕೆ ಹೊಸ ಭಾಷ್ಯ ಬರೆಯಲಿದ್ದಾರೆ.

ಕೃತಿ ಮುಖಪುಟ ಅನಾವರಣ, ಸ್ಥಳ: ಸುಚಿತ್ರಾ ಫಿಲಂ ಸೊಸೈಟಿ
ದಿನಾಂಕ: ಮೇ 26, ಭಾನುವಾರ
ಸಮಯ: ಬೆಳಗ್ಗೆ 10.30
ಸಾನಿಧ್ಯ: ಗುರು ಸಕಲಮಾ
ಅತಿಥಿಗಳು: ಸಾಹಿತಿ ಜೋಗಿ, ಸಂಸದ ತೇಜಸ್ವಿ ಸೂರ್ಯ, ನಟಿ ಸಪ್ತಮಿ ಗೌಡ

ಇದನ್ನೂ ಓದಿ: Daredevil Mustafa: ಪುಸ್ತಕ ರೂಪ ಪಡೆದ ʻಡೇರ್ ಡೆವಿಲ್‌ ಮುಸ್ತಾಫಾʼ ಸಿನಿಮಾ!

Continue Reading
Advertisement
Vijayapura news
ಪ್ರಮುಖ ಸುದ್ದಿ4 hours ago

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Prajwal Revanna Case
ಪ್ರಮುಖ ಸುದ್ದಿ5 hours ago

Prajwal Revanna Case : ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಚೇತನ್​ಗೆ ಎಸ್ಐಟಿ ನೋಟಿಸ್

Yuvraj Singh
ಕ್ರೀಡೆ5 hours ago

Yuvraj Singh : ಅಪಾರ್ಟ್​ಮೆಂಟ್ ವಿತರಣೆಯಲ್ಲಿ ಮೋಸ, ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ನೋಟಿಸ್​ ಕೊಟ್ಟ ಯುವರಾಜ್ ಸಿಂಗ್

Kavya Maran
ಪ್ರಮುಖ ಸುದ್ದಿ6 hours ago

Kavya Maran : ಸೋತಾಗ ಕಣ್ಣೀರು ಹಾಕಿದ ಕಾವ್ಯಾ ಮಾರನ್​, ​ ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನೇ ನಗಿಸಿದರು; ಇಲ್ಲಿದೆ ವಿಡಿಯೊ

Viral Video
ದೇಶ6 hours ago

Viral Video: ಬೆಂಗಳೂರಿನಲ್ಲಷ್ಟೇ ಅಲ್ಲ, ಮೌಂಟ್ ಎವರೆಸ್ಟ್ ನಲ್ಲೂ ಈಗ ಟ್ರಾಫಿಕ್ ಜಾಮ್!!

Samsung Galaxy F55 5G Smartphone Released With Exciting Classy Veegan Leather Design
ದೇಶ6 hours ago

Samsung Galaxy: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್ 55 5ಜಿ ಸ್ಮಾರ್ಟ್‌ಫೋನ್ ರಿಲೀಸ್‌; ಏನಿದರ ವಿಶೇಷತೆ?

Kannada New Movie
ಕರ್ನಾಟಕ6 hours ago

Kannada New Movie: ʼಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿʼ ಚಿತ್ರದ ಅನಿಮೇಷನ್‌ ಟೀಸರ್‌ ರಿಲೀಸ್‌

Golden Star Ganesh Krishnam Pranaya Sakhi movie first song release in Mysore
ಕರ್ನಾಟಕ6 hours ago

Golden Star Ganesh: ಮೊದಲ ಹಾಡಿನಲ್ಲೇ ಮೋಡಿ ಮಾಡಿದ ʼಕೃಷ್ಣಂ ಪ್ರಣಯ ಸಖಿʼ

Mandya News
ಪ್ರಮುಖ ಸುದ್ದಿ6 hours ago

Mandya News : ಬೆಳ್ಳೂರಿನಲ್ಲಿ ಮುಸ್ಲಿಮ್ ಯುವಕರ ಗುಂಪಿನಿಂದ ಅಭಿಲಾಷ್​ ಎಂಬುವರ ಮೇಲೆ ಮಾರಕ ಹಲ್ಲೆ

11th Annual Mahotsav of Sri Annapurneswari Temple in Belagavi from 29th May
ಬೆಳಗಾವಿ6 hours ago

Belagavi News: ಬೆಳಗಾವಿಯಲ್ಲಿ ಮೇ 29ರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ11 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು7 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌