ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ - Vistara News

ಅಂಕಣ

ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ

ಪ್ರಜಾವತ್ಸಲ ರಾಮನೆನ್ನುವ ಬಿರುದು ರಾಮನಿಗೆ ಸಿಕ್ಕಿರುವುದು ಪ್ರಜೆಗಳ ಮೇಲೆ ಆತನಿಗಿರುವ ಕಾಳಜಿಗಳಿಂದಾಗಿ. ರಾಮ ಕುಟುಂಬವತ್ಸಲ, ಸಮರ್ಥ ರಾಜ ಆಗಿರುವ ಜೊತೆಗೆ ಆತ ಆದರ್ಶ ಪುರುಷನೂ ಆಗಿದ್ದಾನೆ. ಇಂಥ ಪುರುಷೋತ್ತಮ ಸ್ವರೂಪಿಯ ಬಗ್ಗೆ ಒಂದು ವಿಶ್ಲೇಷಣೆ.

VISTARANEWS.COM


on

rama narayana yaji
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಋಣದ ಅರಿವಿನಲ್ಲಿ ಹೊಣೆಗಾರಿಕೆ ನಿಭಾಯಿಸಿದ ಕರ್ತವ್ಯ ಪ್ರಜ್ಞೆ

dhavala dharini

ರಾಮನಾಮೈವ ನಾಮೈವ ನಾಮೈವ ಮಮ ಜೀವನಮ್ I
ಕಲೌ ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರನ್ಯಥಾ II

“ಶ್ರೀ ರಾಮನಾಮವೇ ಜಯರಾಮನಾಮವೇ ಜಯ ಜಯ ರಾಮನಾಮವೇ ನನ್ನ ಜೀವನವು. ಕಲಿಯುಗದಲ್ಲಿ ಪರಮಗತಿಯನ್ನು ಹೊಂದಲು ಬೇರೆ ಯಾವ ಉಪಾಯವೂ ಇಲ್ಲ, ಇಲ್ಲ, ಇಲ್ಲವೇ ಇಲ್ಲ”

ವಾಲ್ಮೀಕಿ ರಾಮಾಯಣದ ಮೊದಲು ಬರುವ ರಾಮಾಯಣದ ಮಹಿಮೆಯಲ್ಲಿ ಬರುವ ಶ್ಲೋಕವಿದು. ರಾಮನೆನ್ನುವ ಶಬ್ದ ಒಂದು ಪ್ರಜ್ಞಾ ಪ್ರವಾಹವಾಗಿ ಯುಗ ಯುಗಗಳಿಂದ ಹರಿದು ಬಂದಿದೆ. ಈ ವಾಚಕಶಬ್ದ ಬದುಕಿಗೊಂದು ಸ್ಫೂರ್ತಿಯಾಗಿದೆ. ರಾಮನೆಂದಾಗ ಆತನನ್ನು ಕುಟುಂಬವತ್ಸಲನೆಂದೋ, ಸಮರ್ಥ ರಾಜನೆಂದೋ ಹೇಳುವುದರ ಜೊತೆಗೆ ಆತನು ಆದರ್ಶ ಪುರುಷನೂ ಆಗಿದ್ದಾನೆ. ಕನ್ನಡಿಗೂ ಆದರ್ಶವೆನ್ನುವ ಹೆಸರಿದೆ. ಆದರ್ಶವೆಂದರೆ ನಮ್ಮ ಮುಖಾವಲೋಕನವನ್ನು ಮಾಡಿಕೊಳ್ಳುವುದು.

ರಾಮ ಕಾಡಿಗೆ ಹೋಗುವಾಗ ತಂದೆಯಾದ ದಶರಥ ತನ್ನ ಸಂಗಡ ಒಂದು ಹೊತ್ತಿನ ಊಟವನ್ನಾದರೂ ಮಾಡಿ ಹೋಗು ಎಂದರೆ, ಯಾವಾಗ ಕೈಕೆಯಿ ನ್ಯಾಸವಾಗಿಟ್ಟ ವರಗಳನ್ನು ಪಡೆದುಕೊಂಡಳೋ, ಆ ಕ್ಷಣದಿಂದಲೇ ತಾನು ಈ ರಾಜ್ಯದಲ್ಲಿರುವುದು ಉಚಿತವಲ್ಲವೆಂದು ನಯವಾಗಿಯೇ ತಿರಸ್ಕರಿಸಿ ವನಕ್ಕೆ ಹೊರಟವನ ಮನಸ್ಸಿನಲ್ಲಿ ಇದ್ದಿರುವುದು ಕರ್ತವ್ಯದ ಕುರಿತು ನಿಷ್ಠೆಯೇ ಹೊರತು ಬೇರೇನೂ ಅಲ್ಲ. ಭರತನಿಗೆ ರಾಜ್ಯವನ್ನು ಕೊಡಬೇಕು ಮತ್ತು ನೀನು ಅರಣ್ಯಕ್ಕೆ ಹೋಗಬೇಕೆಂದು ಹೇಳಿದಾಗ ಆತ ಮೊದಲು ಆತಂಕಿತನಾಗಿದ್ದು ತನ್ನ ತಂದೆ ಆಘಾತದಿಂದ ಕುಳಿತಿರುವುದರ ಕುರಿತು. ಆ ಹೊತ್ತಿನಲ್ಲಿ ತನ್ನ ತಂದೆ ಕಳವಳಗೊಂಡು ತಲೆತಗ್ಗಿಸಿ ಮೌನವಾಗಿ ಕುಳಿತಿರುವ ಘಟನೆ ಆತನಿಗೆ ಎಲ್ಲವನ್ನೂ ಹೇಳಿತ್ತು. ರಾಮ ಕೈಕೆಯಿಗೆ “ಅಮ್ಮಾ ನೀನು ನನ್ನ ಸ್ವಭಾವವನ್ನು ಈ ಮೊದಲು ಕಂಡಿಲ್ಲವೇ. ನೀನು ಈ ಮಾತುಗಳನ್ನು ನನಗೇ ನೇರವಾಗಿ ಹೇಳಬಹುದಿತ್ತಲ್ಲ. ನಿನಗೆ ಅಧಿಕಾರವಿತ್ತಲ್ಲವೆ? ನೀನು ಈ ವಿಷಯದಲ್ಲಿ ರಾಜನಾಗಿರುವ ನನ್ನ ತಂದೆಯನ್ನು ನಿರ್ಬಂಧಿಸಿ ಕೇಳಬೇಕಾದ ಅವಶ್ಯಕತೆಯೇನಿತ್ತು” ಎನ್ನುತ್ತಾ ಮುಂದುವರೆದು “ನೂನಂ ಮಯಿ ಕೈಕಯಿ! ಕಿಞ್ಚಿದಾಶಂಸಸೇ ಗುಣಮ್”. ನಿಸ್ಸಂಶಯವಾಗಿ ಇಷ್ಟು ವರ್ಷ ನಿನ್ನ ಹತ್ತಿರ ಇದ್ದರೂ ನಿನ್ನಲ್ಲಿರುವ ಈ ಗುಣಗಳು ನನಗೆ ತಿಳಿಯದೇ ಹೋಯಿತು!” ಎನ್ನುವ ಮಾತುಗಳು ಬಹುಶಃ ಕೈಕೆಯ ಎದೆಯಲ್ಲಿಯೂ ನಡುಕ ಹುಟ್ಟಿಸಿರಲೂ ಸಾಕು.

ರಾಮನ ಬದುಕಿನ ಆದರ್ಶವೇನೆಂದರೆ ಆತನ ಕರ್ತವ್ಯ ಪರಾಯಣತೆ. ಹಿರಿಯ ಮಗನಾಗಿ ತಾನು ತನ್ನ ತಂದೆಯನ್ನು ನೋಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನೂ ಆತ ಬಲ್ಲ. ಹಾಗಾಗಿ ಕೈಕೆಯಿಯ ಈ ಬೇಡಿಕೆಯನ್ನು ಅರಿತ ಮೇಲೆ ತನ್ನ ತಂದೆ ತಾಯಿಯ ಯೋಗಕ್ಷೇಮದ ಚಿಂತೆ ಅವನಿಗೆ ಸಹಜವಾಗಿಯೇ ಬಾಧಿಸಿದೆ. ಒಂದು ವೇಳೆ ಈ ತಾಯಿ ಮತ್ತು ಮಗ ಅವರನ್ನು ನಿರ್ಲಕ್ಷಿಸಿದರೆ ಎನ್ನುವ ಚಿಂತೆ ಆತನನ್ನು ಕಾಡಿದೆ. ಆಗ ಆತ ಕಠೋರವಾಗಿ ಕೈಕೆಯಿಗೆ ತನ್ನ ತಂದೆಯನ್ನು ನೋಡಿಕೊಳ್ಳಬೇಕಾದ ಆಕೆಯ ಕರ್ತವ್ಯದ ಕುರಿತು ಎಚ್ಚರಿಸುತ್ತಾನೆ. “ಭರತಃ ಪಾಲಯೇದ್ರಾಜ್ಯಂ ಶುಶ್ರೂಷೇಚ್ಚ ಪಿತುರ್ಯಥಾ৷ ತಥಾ ಭವತ್ಯಾ ಕರ್ತವ್ಯಂ ಸ ಹಿ ಧರ್ಮ ನಾತನಃ৷৷2.19.26৷৷ “ತನ್ನ ತಂದೆಯನ್ನು ಭರತ ಸರಿಯಾದ ಕ್ರಮದಲ್ಲಿ ಶುಶ್ರೂಷೆ ಮಾಡುವಂತೆ ನೋಡಿಕೊಳ್ಳಬೇಕಾದುದು ನಿನ್ನ ಹೊಣೆ. ಪಿತೃಶುಶ್ರೂಷೆಯೆನ್ನುವದಕ್ಕಿಂತ ಸನಾತನವಾದ ಧರ್ಮ ಮತ್ಯಾವುದೂ ಇಲ್ಲ” ಎನ್ನುವ ಮಾತುಗಳು ಬಲು ಮಹತ್ವದ್ದು.

ರಾಮ ಮಿತಭಾಷಿ, ಹೆಚ್ಚಿಗೆ ವಿವರಣೆ ಆತನಲ್ಲಿಲ್ಲ. ಅದನ್ನು ಮೀರಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆನ್ನುವ ಎಚ್ಚರಿಕೆ ಈ ಮಾತಿನಲ್ಲಿದೆ. ರಾಮನ ಬಾಯಲ್ಲಿ ವಾಲ್ಮೀಕಿ ಆಡಿಸುವ ಇಂತಹ ಮಾತುಗಳ ಮೂಲಕ ರಾಮನ ವ್ಯಕ್ತಿತ್ವವನ್ನು ಬೆಳೆಸುತ್ತಾ ಹೋಗುತ್ತಾರೆ. ವಿಶ್ವಾಮಿತ್ರರು “ಕರ್ತವ್ಯವೇ ನಿನ್ನ ಮುಂದಿನ ದೇವಪೂಜೆ. ಅದೇ ನಿನ್ನ ಧರ್ಮ” ಎಂದು ಉಪದೇಶಿಸಿರುವುದನ್ನು ಕಾಯಾ ವಾಚಾ ಮನಸಾ ಪಾಲಿಸುತ್ತಿರುವವ ಆತ. ಈ ಆದರ್ಶವೇ ಆತ ದೇವರಾಗಲು ಕಾರಣ.

ವಾಲ್ಮೀಕಿಯ ರಾಮ ಪ್ರಜೆಗಳಿಗೂ ಪ್ರೀತಿಪಾತ್ರನಾಗಿದ್ದ. ಅದರ ನಾಡಿಮಿಡಿತ ಅರಿತ ಧಶರಥ ಬಲು ದೀರ್ಘಕಾಲ ಈ ರಾಜ್ಯವನ್ನು ಆಳಿದ. ತನಗಿನ್ನು ಸಾಕು ಈ ಅಧಿಕಾರ, ಇನ್ನು ಮುಂದೆ ರಾಮನಿಗೆ ಪಟ್ಟಕಟ್ಟುವೆ ಎಂದು ನಿಶ್ಚಯಿಸುತ್ತಾನೆ. ಅಯೋಧ್ಯೆಯ ಜನಪದ ರಾಮನನ್ನು ಅಕ್ಕರೆಯಿಂದ ನೋಡುತ್ತಿದ್ದರು. ರಾಜಕುಟುಂಬದೊಡನೆ ಭಾವನಾತ್ಮಕವಾದ ಸಂಬಂಧವನ್ನು ಹೊಂದಿದ ಪ್ರಜೆಗಳು ಬಹುಕಾಲವರೆಗೆ ಮಕ್ಕಳಿಲ್ಲದ ಅರಮನೆಯಲ್ಲಿ ಜನಿಸಿದ ಮೊದಲ ಮಗನ ಕುರಿತು ಒಂದು ಭಾವನಾತ್ಮಕವಾದ ಪ್ರೀತಿಯನ್ನು ಹೊಂದಿರುತ್ತಾರೆ. ಈತ ತಮ್ಮನ್ನು ಮುಂದೆ ಆಳುವವ ಎನ್ನುವ ಒಂದು ಪ್ರಭಾವಳಿ ಆ ರಾಜಕುಮಾರನ ಮೇಲೆ ಬೆಳೆದಿರುತ್ತದೆ. ಭಾವನೆಯೆನ್ನುವುದು ಜಂಗಮ, ಅದು ಸ್ಥಾಯಿಯಾಗಬೇಕಾದರೆ ಸಮಾಜದ ಶೃತಿಗೆ ಸ್ಪಂದಿಸುವ ಶೃತಿ ನಿರಂತರವಾಗಿ ಮೀಟುತ್ತಲೇ ಇರಬೇಕಾಗುತ್ತದೆ.

ರಾಮನಲ್ಲಿಯೂ ಪ್ರಜೆಗಳ ಕುರಿತು ಅಷ್ಟೇ ವಾತ್ಸಲ್ಯವಿತ್ತು. ಅಯೋಧ್ಯೆಯ ಪ್ರಜೆಗಳ ವಿಶೇಷವೆಂದರೆ ರಾಜ ತಪ್ಪುಮಾಡಿದರೆ ಅದನ್ನು ನಿರ್ಭೀತಿಯಿಂದ ಹೇಳಲು ಹಿಂದೆಮುಂದೆ ನೋಡುತ್ತಿರಲಿಲ್ಲ. ಸೂರ್ಯವಂಶದ ರಾಜಮನೆತನ ನಿರಂತರವಾಗಿ ಕೋಸಲದೇಶವನ್ನು ಆಳುತ್ತಾ ಬಂದಿದ್ದರೂ ಅವರು ನಿರಂಕುಶರಾಗಿರಲಿಲ್ಲ. ಅರಮನೆಯಿಂದ ತಪ್ಪುಗಳು ಘಟಿಸಿದಾಗ ನೇರವಾಗಿ ರಾಜನಿಗೇ ದೂರು ಕೊಡಬಹುದಾಗಿತ್ತು. ಮಾಂಧಾತನ ಮಗ ದಂಡಕ, ಇಕ್ಷ್ವಾಕುವಿನ ಮಗ ಶಶಾದ ಇವರೆಲ್ಲರೂ ತಪ್ಪು ಮಾಡಿದಾಗ ಅವರನ್ನು ನಿರ್ದಾಕ್ಷಿಣ್ಯವಾಗಿ ಕಾಡಿಗೆ ಅಟ್ಟಿರುವುದನ್ನು ಗಮನಿಸಬಹುದಾಗಿದೆ. ಸಗರನ ಮಗ ‘ಅಸಮಞ್ಜ’ ಎನ್ನುವವ ಕ್ರೂರಿಯಾಗಿದ್ದ. ಆತ ಅಯೋಧ್ಯೆಯ ಚಿಕ್ಕಮಕ್ಕಳನ್ನು ಸರಯೂ ನದಿಯಲ್ಲಿ ಮುಳುಗಿಸಿ ಅವರು ಅಳುವುದನ್ನು ನೋಡಿ ವಿಕೃತಾನಂದವನ್ನು ಹೊಂದುತ್ತಿದ್ದ. ಈ ಕ್ರೌರ್ಯವನ್ನು ಸಹಿಸಲಾರದ ಅಯೋಧ್ಯೆಯ ಪ್ರಜೆಗಳು ಸಗರನಿಗೆ ದೂರು ಕೊಟ್ಟು ಅವನನ್ನು ಶಿಕ್ಷಿಸಲು ಹೇಳಿದಾಗ ತಡಮಾಡದೇ ದೊರೆ ಆತನನ್ನು ತ್ಯಜಿಸಿ ಅರಣ್ಯಕ್ಕೆ ಕಳುಹಿಸಿದ. ಈ ಪರಂಪರೆ ರಾಮನ ಕಾಲದಲ್ಲಿಯೂ ಇತ್ತು. ಸೀತೆ ರಾವಣನಲ್ಲಿ ಇದ್ದು ಬಂದಿರುವ ಕಾರಣದಿಂದ ಜನಸಾಮಾನ್ಯರು ನಗರಗಳಲ್ಲಿ, ಹಳ್ಳಿಗಳಲ್ಲಿ, ಓಣಿ ಓಣಿಗಳಲ್ಲಿ ಆಕೆಯ ಶೀಲದ ಕುರಿತು ಆಡಿಕೊಳ್ಳುತ್ತಿದ್ದರು. ರಾಮನ ಗೂಢಚಾರರಲ್ಲಿ ಓರ್ವನಾದ ಭದ್ರನೆನ್ನುವವ ತನ್ನ ಇತರ ಸಂಗಾತಿಗಳೊಡನೆ ಈ ಸಂಗತಿಯನ್ನು ರಾಮನಿಗೆ ತಿಳುಹಿದ. ನಂತರ ಇದೇ ವಿಷಯವನ್ನು ವಿಜಯ, ಮಧುಮತ್ತ, ಕಾಶ್ಯಪ, ಪಿಂಗಲ, ಕುಟಿ, ಸುರಾಜ, ಕಾಲಿಯ ದಂತವಕ್ತ್ರ ಮತ್ತು ಸುಮಾಗಧರೆನ್ನುವ ಇತರರೂ ರಾಮನಿಗೆ ಅರುಹುತ್ತಾರೆ. ಈ ಸಾರ್ವತ್ರಿಕ ಜನಪವಾದದ ಕಾರಣ ರಾಮ ಸೀತೆಯನ್ನು ತ್ಯಜಿಸಿದ. ಇಲ್ಲಿ ರಾಮ ಸೀತೆಯನ್ನು ಬಿಟ್ಟಿರುವುದನ್ನು ಸಮರ್ಥನೆಗೂ ಅಥವಾ ವಿರೋಧಕ್ಕೂ ಈ ಸಂಗತಿಗಳನ್ನು ಪ್ರಸ್ತಾಪಿಸಿಲ್ಲ. ಆ ಕಾಲದಲ್ಲಿ ಅಯೋಧ್ಯೆಯ ಪ್ರಜೆಗಳಿಗೆ ರಾಜಮನೆತನವನ್ನೂ ಟೀಕಿಸುವಷ್ಟು ವಾಕ್-ಸ್ವಾತಂತ್ರ್ಯವಿತ್ತೆನ್ನುವುದನ್ನು ತಿಳಿಸಲಿಕ್ಕಷ್ಟೇ ಈ ಸಂಗತಿಯನ್ನು ಪ್ರಸ್ತಾಪಿಸಿರುವುದು.

Sri Ramachandra

ಇನ್ನೇನು ನಾಳೆ ರಾಮನ ಪಟ್ಟಾಭಿಷೇಕ, ತಮ್ಮ ದೊರೆಯಾಗಬೇಕಾಗಿದ್ದವ ತಮ್ಮ ವಿಶ್ವಾಸಕ್ಕೆ ಮತ್ತು ಒಲವಿಗೆ ಪಾತ್ರನಾದವ ಅರಣ್ಯಕ್ಕೆ ಹೋಗುತ್ತಿದ್ದಾನೆಂದು ತಿಳಿದಾಗ ಸಹಜವಾಗಿ ಅವರಲ್ಲಿ ಭಾವಾವೇಶದ ಕಟ್ಟೆ ಒಡೆಯಿತು. ರಾಮನಿಲ್ಲದ ಅಯೋಧ್ಯೆ ತಮಗೂ ಬೇಡವೆನ್ನುತ್ತಾ ಪ್ರಜೆಗಳು ರಾಮನನ್ನು ಅನುಸರಿಸಿ ಅರಣ್ಯಕ್ಕೆ ಬರುತ್ತೇವೆ ಎನ್ನುವ ಸಮೂಹ ಸನ್ನಿ ಪಟ್ಟಣದಲ್ಲಿ ಹರಡಿತು. ಅವರೆಲ್ಲರೂ ರಾಮನನ್ನು ನೋಡಬೇಕೆಂದು ಹಾತೊರೆಯುತ್ತಿದ್ದರಂತೆ. ವಾಲ್ಮೀಕಿ ಅವರ ಈ ಭಾವಾವೇಶವನ್ನು ವರ್ಣಿಸುವುದು ಹೀಗೆ:

ಸಂಯುಚ್ಛ ವಾಜಿನಾಂ ರಶ್ಮೀನ್ಸೂತ ಯಾಹಿ ಶನ್ಯೆಃ ಶನ್ಯೇಃ ৷
ಮುಖಂ ದ್ರಕ್ಷ್ಯಾಮ ರಾಮಸ್ಯ ದುರ್ದಶಂ ನೋ ಭವಿಷ್ಯತಿ ৷৷2.40-22৷৷

“ಸೂತ! ಕುದುರೆಗಳ ಕಡಿವಾಣವನ್ನು ಎಳೆದು ಬಿಗಿಯಾಗಿ ಹಿಡಿದುಕೊ. ಮೆಲ್ಲ ಮೆಲ್ಲಗೆ ಹೋಗು. ಶ್ರೀರಾಮನ ಮುಖವನ್ನು ನೋಡುತ್ತೇವೆ. ಮುಂದೆ ಬಹಳ ಕಾಲದವರೆಗೆ ಇವನ ಸುಂದರವಾದ ಮುಖಾರವಿಂದವು ನೋಡಲು ಲಭಿಸದು”. ರಾಮನಿಗೆ ಈ ದುಃಸ್ಥಿತಿಯನ್ನು ತಂದ ದಶರಥನನ್ನು ಕೈಕೆಯಿಯನ್ನು ಬಯ್ಯುತ್ತಿದ್ದರು. ಹೆಚ್ಚೇನು, ಆತನ ತಾಯಿಯಾದ ಕೌಸಲ್ಯೆಯನ್ನೂ ಸಹ ಇಂತಹ ಮಗನನ್ನು ಕಾಡಿಗೆ ಕಳುಹಿಸುವ ಮನಸ್ಸು ಆ ತಾಯಿಗೆ ಬಂತೆಂದರೆ ಅವಳ ಹೃದಯ ನಿಸ್ಸಂಶಯವಾಗಿ ಕಬ್ಬಿಣದ್ದೇ ಆಗಿರಬೇಕೆಂದು ದೂಷಿಸುತ್ತಿದ್ದರು. ಆದರೆ ರಾಮ ಮಾತ್ರ ನಿರ್ಲಿಪ್ತನಾಗಿ “ಯಾಹಿ ಸೂತ! ಶೀಘ್ರಂ ಯಾಹಿ- ಸೂತನೇ ಬೇಗ ಹೋಗು, ತಡಮಾಡಬೇಡ” ಎನ್ನುತ್ತಾ ರಥವನ್ನು ಹಾರಿಸಿಕೊಂಡು ಹೋದನಂತೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ

ದಶರಥ, ಕೌಸಲ್ಯೆ ಮತ್ತು ಸುಮಿತ್ರೆಯನ್ನು ಬಿಟ್ಟುಬರುವಾಗ ರಾಮ ಕಠಿಣಹೃದಯಿಯಾಗಿ ಕಾಣಿಸಿದರೂ ಅವನಿಗೆ ಅವರ ಸ್ಥಿತಿಯನ್ನು ನೆನೆದು ದುಃಖ ಒಳಗೊಳಗೇ ಇತ್ತು. ಅದನ್ನು ಹೊರಗೆ ತೋರಿಸಿಕೊಂಡಿಲ್ಲ. ಅವರು ತಮಸಾ ನದಿತೀರಕ್ಕೆ ಬಂದು ಅಲ್ಲಿ ರಾತ್ರಿಯನ್ನು ಕಳೆಯಲು ನಿರ್ಧರಿಸುತ್ತಾರೆ. ರಾಮನ ರಥ ಎಷ್ಟೇ ವೇಗವಾಗಿ ಚಲಿಸಲಿ, ಅವನನ್ನು ಅನುಸರಿಸಿಕೊಂಡು ಅನೇಕ ಪ್ರಜಾವರ್ಗದವರೂ ಓಡುತ್ತಾ, ಕುದುರೆಯನ್ನೇರಿ, ಹೇಗೋ ಹೇಗೋ ಬಂದುಬಿಟ್ಟಿದ್ದರು. ಅವರೆಲ್ಲರೂ ರೋದಿಸುತ್ತಿದ್ದರು. ಆಗ ರಾಮನಿಗೆ ತನ್ನ ತಂದೆ, ತಾಯಿಯನ್ನು ನೆನೆದು ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಯೋಧ್ಯೆಯ ಪ್ರಜೆಗಳು ಸದ್ಗುಣ ಸಂಪನ್ನನಾದ ತಮ್ಮ ರಾಜನನ್ನು ಬಹಳವಾಗಿ ಪ್ರೀತಿಸುತ್ತಾರೆ. ಹಾಗಾಗಿ ತನಗೆ ತನ್ನ ತಮ್ಮಂದಿರಾದ ಭರತ ಮತ್ತು ಶತ್ರುಘ್ನರ ಕುರಿತು ಚಿಂತೆಯಿಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಿರುವಾಗ ಅವನಿಗೆ ತನ್ನ ತಂದೆ ಮತ್ತು ತಾಯಿಯ ನೆನಪಾಗುತ್ತದೆ. “ಏನು ಮಾಡಲಿ ಹೇಳು, ನನಗೆ ನನ್ನ ತಂದೆ ಮತ್ತು ಯಶಸ್ವಿನಿಯಾದ ನನ್ನ ಅಮ್ಮ ಕೌಸಲ್ಯೆಯ ನೆನಪಾಗುತ್ತದೆ. ನಮ್ಮ ಅಗಲುವಿಕೆಯ ನೋವಿನಿಂದ ಅವರು ಬಾರಿ ಬಾರಿಗೂ ಅತ್ತೂ ಅತ್ತೂ ವಿರಹದ ವ್ಯಥೆಯಲ್ಲಿ ಕಣ್ಣು ಇಂಗಿ ಕುರುಡರಾಗಿಬಿಡುತ್ತಾರೇನೋ” ಎನ್ನುತ್ತಾ ಬಿಕ್ಕುತ್ತಾನೆ.

ಪಿತರಂ ಚಾನುಶೋಚಾಮಿ ಮಾತರಂ ಚ ಯಶಸ್ವಿನೀಮ್৷
ಅಪಿ ವಾನ್ಧೌ ಭವೇತಾಂ ತು ರುದನ್ತೌ ತಾವಭೀಕ್ಷ್ಣಶಃ৷৷2.46.6৷৷

ಕೌಸಲ್ಯೆಯನ್ನು ‘ಯಶಸ್ವಿನಿ’ ಎಂದು ಕರೆಯುತ್ತಾನೆ. ಆ ಮಹಾತಾಯಿಯ ಕುರಿತು ರಾಮನ ಭಾವನೆಗಳೆಲ್ಲವೂ ಇದೊಂದೇ ಮಾತುಗಳಲ್ಲಿ ವ್ಯಕ್ತವಾಗಿವೆ. ಅಯೋಧ್ಯೆಯ ಭಾಗ್ಯಲಕ್ಷ್ಮಿ ಆಕೆ ಎನ್ನುತ್ತಾನೆ, ಕೊನೆಗೆ ಭರತ ದಯಾಗುಣದಿಂದ ಕೂಡಿದವನಾಗಿರುವುದರಿಂದ ಅತ ತಂದೆ ಮತ್ತು ತಾಯಿಯಯರನ್ನು ಧರ್ಮಾರ್ಥಕಾಮಸಹಿತವಾದ ಮಾತುಗಳಿಂದ ಸಂತೈಸುತ್ತಾನೆಂದು ತನ್ನಲ್ಲೇ ತಾನು ಸಮಾಧಾನ ಮಾಡಿಕೊಳ್ಳುತ್ತಾನೆ. ಹೊರಗಡೆ ನಿಷ್ಕರುಣೆಯಿಂದ ಕಾಣುವ ರಾಮನಲ್ಲಿ ಒಳಗಡೆ ದಯಾರ್ದೃವಾದ ಹೃದಯವಿತ್ತು. ಇನ್ನು ಅವನಿಗೆ ಬಂದಿರುವ ಸಮಸ್ಯೆಯೆಂದರೆ ತನ್ನನ್ನು ಅನುಸರಿಸಿಕೊಂಡು ಬಂದ ಪ್ರಜೆಗಳ ವಿಷಯದಲ್ಲಿ ಏನು ಮಾಡಬೇಕೆನ್ನುವುದು. ಮುಂದಿನ ನಿರ್ಜನವಾದ ಅರಣ್ಯಪ್ರದೇಶದಲ್ಲಿ ರಾಕ್ಷಸರು ಮತ್ತು ಕ್ರೂರ ಮೃಗಗಳ ಕಾಟವಿದೆ. ಇಂತಹ ಸನ್ನಿವೇಶದಲ್ಲಿ ಅವರೆಲ್ಲರ ರಕ್ಷಣೆ ಸುಲಭವೂ ಅಲ್ಲ. ಅದೂ ಅಲ್ಲದೇ ಅಲ್ಲಿ ತಪಸ್ಸನ್ನಾಚರಿಸುತ್ತಿರುವ ಋಷಿಮುನಿಗಳ ತಪಸ್ಸು ಭಂಗವಾಗಿಬಿಡುವ ಅಪಾಯವುಂಟು. ಮೊದಲೇ ಕೈಕೆಯಿ, ಪ್ರಜೆಗಳಿಲ್ಲದ ರಾಜ್ಯವೆಂದರೆ ಅದು “ಸುರೆಯನ್ನೆಲ್ಲ ಕುಡಿದು ಬಿಸಾಡುವ ಸೋರೆ ಬುರುಡೆಯಂತೆ” ಅಂತಹ ರಾಜ್ಯ ತನಗೆ ಬೇಡವೆಂದು ಹೇಳಿಬಿಟ್ಟಿದ್ದಾಳೆ. ಇಲ್ಲಿ ರಾಮ ಹೇಳುವ ರಾಜನೀತಿ ಮಾರ್ಮಿಕವಾಗಿದೆ. “ರಾಜನಾದವನು ಪ್ರಜೆಗಳನ್ನು ದೈವಿಕವಾದ (ಪ್ರಕೃತಿಯ ವಿಕೋಪಗಳು), ಅಥವಾ ತಾವಾಗಿಯೇ ಉಂಟುಮಾಡಿಕೊಂಡ ಅಂದರೆ ರೋಗರುಜಿನಗಳಿಂದ ತೊಂದರೆಯಾಗದಂತೆ ಕಾಪಾಡಬೇಕು. ಅಂದರೆ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಿದರೆ ಇವೆಲ್ಲವನ್ನೂ ತಡೆಯಬಹುದೆನ್ನುವುದು ಇಲ್ಲಿನ ಮರ್ಮ. ಮತ್ತೆ ಒಂದು ವೇಳೆ ರಾಜನಿಗೇ ತೊಂದರೆ ಉಂಟಾದರೆ ಅದನ್ನು ಪ್ರಜೆಗಳಿಗೆ ಹಂಚಬಾರದು, ತಾನೊಬ್ಬನೇ ಅನುಭವಿಸಬೇಕು” ಎನ್ನುವ ಈ ಮಾತುಗಳು ಆದರ್ಶ ರಾಜ ಹೇಗಿರಬೇಕೆನ್ನುವುದಕ್ಕೆ ಉದಾಹರಣೆಯಾಗಿದೆ.

Ram Navami 2023
Ram Navami 2023

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸುವರ್ಚಲೆ: ಮದುವೆ ಎನ್ನುವುದು ಕನ್ಯೆಯದೇ ಆಯ್ಕೆ

ಈ ಎಲ್ಲಾ ಕಾರಣನಳಿಗಾಗಿ ಬಿಟ್ಟೂ ಬಿಡದೇ ಬೆನ್ನುಹತ್ತಿದ ಅಯೋಧ್ಯೆಯ ಜನರ ಕಣ್ತಪ್ಪಿಸಿ ಕಾಡಿಗೆ ಹೋಗಬೇಕಾಗಿದೆ. ಇದೀಗ ಕಾಡಿನ ಅಂಚಿನಲ್ಲಿದ್ದಾನೆ. ದಶರಥ ಸುಮಂತ್ರನ ಹತ್ತಿರ ರಥವನ್ನು ಕಾಡಿನವರೆಗೆ ಬಿಟ್ಟುಬರಲು ತಿಳಿಸಿದ್ದಾನೆ. ತಮಸಾ ನದಿಯ ದಡದಲ್ಲಿ ಪುರಜನರೆಲ್ಲರೂ ಆಯಾಸದಿಂದ ನಿದ್ರೆ ಮಾಡುತ್ತಿದ್ದಾರೆ. ರಾಮನೊಟ್ಟಿಗೆ ತಾವೂ ಕಷ್ಟಗಳನ್ನು ಸಹಿಸಲು ಅವರೆಲ್ಲರೂ ಅಡವಿಗೆ ಬರಲು ಸಿದ್ಧರಾಗಿಯೇ ಬಂದಿದ್ದಾರೆ. ಅಯೋಧ್ಯೆಯ ಹಿತದ ಮತ್ತು ಪ್ರಜೆಗಳ ಸುರಕ್ಷತಾ ದೃಷ್ಟಿಯಿಂದ ರಾಮ ಹೇಳಿದ ಮಾತುಗಳನ್ನು ಕೇಳಿದ ಕೂಡಲೇ ಇಂಗಿತಜ್ಞನಾದ ಲಕ್ಷ್ಮಣ ರಾಮನಿಗೆ “ಪ್ರಾಜ್ಞನೇ ನನಗೂ ಈ ವಿಚಾರ ಸರಿ ಎನಿಸುತ್ತಿದೆ. ಕೂಡಲೇ ರಥವನ್ನು ಹತ್ತು” ಎಂದು ಸುಮಂತ್ರನನ್ನು ಎಬ್ಬಿಸಿ ರಭಸದಿಂದ ಕೂಡಿದ ತಮಸಾ ನದಿಯ ಸುಳಿಗಳನ್ನು ತಪ್ಪಿಸಿ ನದಿಯನ್ನು ದಾಟಿದರು. ಹಾಗೇ ದಾಟಿದ ರಾಮ ಸುಮಂತ್ರನ ಹತ್ತಿರ “ರಥವನ್ನು ಉತ್ತರ ದಿಕ್ಕಿಗೆ ತೆಗೆದುಕೊಂಡು ಹೋಗಿ ಮತ್ತೆ ಆಚೇ ಈಚೇ ತಿರುಗಿಸಿ ನಾವು ಯಾವ ದಿಕ್ಕಿನ ಕಡೆ ಹೋದೆವೆಂದು ಭ್ರಾಂತಿಯುಂಟಾಗುವಂತೆ ಮಾಡಿಕೊಂಡು ಬಾ” ಎಂದು ಕಳಿಸಿ ಆತ ಹಾಗೇ ಮಾಡಿದ ಮೇಲೆ ರಥವನ್ನು ಕಾಡಿನೊಳಗೆ ತಿರುಗಿಸಿ ಒಳಹೊಕ್ಕನು. ಬೆಳಗಾದ ಮೇಲೆ ತಮಸಾನದಿ ತೀರದಲ್ಲಿ ಮಲಗಿರುವ ಪಟ್ಟಣಿಗರು ರಾಮನನ್ನು ಕಾಣಲಾರದೇ ಅವನಿಗಾಗಿ ಶೋಕಿಸುತ್ತಾ ತಮಸಾ ನದಿಯನ್ನು ದಾಟಿ ಅಲ್ಲಿ ರಥದ ಚಕ್ರದ ಗುರುತು ಅಳಿಸಿಹೋಗಿರುವುದನ್ನು ಕಂಡು ನಿರಾಸೆಗೊಂಡರಂತೆ. ರಾಮನಿಂದ ತಾವು ದೂರವಾಗುವುದಕ್ಕೆ ಕಾರಣವಾದ ತಮ್ಮ ನಿದ್ರೆಗೆ ಧಿಕ್ಕಾರವಿರಲಿ ಎನ್ನುತ್ತಾ ಅಳುತ್ತಾ ಪುನಃ ಅಯೋಧ್ಯೆಯೆಡೆಗೆ ಮರಳಿದರಂತೆ.

ಇಲ್ಲಿ ರಾಮನ ಪ್ರಜ್ಞೆಯ ದೂರದೃಷ್ಟಿಯನ್ನು ಕಾಣಬಹುದಾಗಿದೆ. ಹಾಗಂತ ರಾಮ ತನ್ನ ಈ ಕಾರ್ಯಕ್ಕಾಗಿ ಸಂತಸ ಪಟ್ಟಿಲ್ಲ. ಅಯೋಧ್ಯೆಯ ಪ್ರಜಾಸಮೂಹದ ರಾಜನಿಷ್ಟೆಯನ್ನು ಕಂಡು ಒಳಗೋಳಗೇ ಹೆಮ್ಮೆಪಟ್ಟಿದ್ದ. ಅಂತಹ ನಿಸ್ಪೃಹ ಪ್ರಜೆಗಳನ್ನು ವಂಚಿಸಿ ತಾನು ಅರಣ್ಯಕ್ಕೆ ಬರಬೇಕಾಯಿತೆಂದು ಅವನಿಗೆ ದುಃಖ ಉಮ್ಮಳಿಸಿಬಂತು ಎಂದು ವಾಲ್ಮೀಕಿ ವರ್ಣಿಸುತ್ತಾರೆ. ಪ್ರಜಾವತ್ಸಲ ರಾಮನೆನ್ನುವ ಬಿರುದು ರಾಮನಿಗೆ ಸಿಕ್ಕಿರುವುದು ಪ್ರಜೆಗಳಮೇಲೆ ಆತನಿಗಿರುವ ಇಂತಹ ಕಾಳಜಿಗಳಿಂದಾಗಿ.

ಕಾವ್ಯವೆಂಬ ಟೊಂಗೆಯ ಮೇಲೆ ಕುಳಿತು ರಾಮ ರಾಮ ಎಂದು ಸುಮಧುರವಾಗಿ ಕೂಗುವ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೃಷ್ಟಿಯ ಹಿಂದಿರುವ ಪೂರ್ಣತೆಯೇ ಅರ್ಧನಾರೀಶ್ವರತ್ವ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಅಂಕಣ

JEE Main 2024 Result: ದೇಶಕ್ಕೇ ಮೊದಲ ರ‍್ಯಾಂಕ್ ಪಡೆದ ರೈತನ ಮಗ! ಈತನ ಯಶಸ್ಸು ಸ್ಫೂರ್ತಿದಾಯಕ

JEE Main 2024 Result: ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು.

VISTARANEWS.COM


on

Nilkrishna Gajare JEE main 2024 result AIR 1
Koo

ಹೊಸದಿಲ್ಲಿ: ಮಹಾರಾಷ್ಟ್ರದ ವಾಶಿಮ್‌ನ ರೈತರ ಮಗ (farmer’s son) ನೀಲಕೃಷ್ಣ ಗಜರೆ (Nilkrishna Gajare) ಅವರು ಜೆಇಇ ಮೇನ್ 2024 ಪರೀಕ್ಷೆಯಲ್ಲಿ (JEE Main 2024 Result) ದೇಶಕ್ಕೇ ಅಗ್ರಸ್ಥಾನ (AIR 1, First Rank) ಪಡೆದಿದ್ದಾರೆ. ಪರೀಕ್ಷೆಯಲ್ಲಿ ಪರಿಪೂರ್ಣ ಅಂಕಗಳನ್ನು (100) ಗಳಿಸಿದ್ದಾರೆ. ದಕ್ಷೇಶ್ ಸಂಜಯ್ ಮಿಶ್ರಾ ಮತ್ತು ಆರವ್ ಭಟ್ ಕ್ರಮವಾಗಿ AIR 2 ಮತ್ತು 3 ಪಡೆದಿದ್ದಾರೆ. ದೇಶದ ವಿವಿಧ ರಾಜ್ಯಗಳ ಒಟ್ಟು 56 ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿದ್ದಾರೆ.

ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು. “ಪರೀಕ್ಷೆಯನ್ನು ತೆಗೆದುಕೊಂಡ ನಂತರ, ನಾನು ಪ್ರಶ್ನೆ ಪತ್ರಿಕೆಯನ್ನು ವಿಶ್ಲೇಷಿಸಿದೆ. ನಾನು ದುರ್ಬಲ ವಿಷಯಗಳ ಮೇಲೆ ವಿಶೇಷ ಗಮನವನ್ನು ನೀಡುತ್ತಿದ್ದೇನೆ. JEEಯಂತಹ ಪರೀಕ್ಷೆಯನ್ನು ಉತ್ತರಿಸಲು ಸ್ಪಷ್ಟ ಪರಿಕಲ್ಪನೆಗಳನ್ನು ಹೊಂದಿರುವುದು ಬಹಳ ಮುಖ್ಯ. ಇದಲ್ಲದೆ ನಾನು ಒಂದಕ್ಕಿಂತ ಹೆಚ್ಚು ಬಾರಿ ಪ್ರಶ್ನೆಗಳನ್ನು ಅಭ್ಯಾಸ ಮಾಡುತ್ತೇನೆ” ಎಂದು ಗಜರೆ ಹೇಳಿದ್ದಾರೆ.

IIT- JEEಗೆ ತಯಾರಾಗಲು ಗಜರೆ 11ನೇ ತರಗತಿಯಲ್ಲಿ ALLEN ವೃತ್ತಿ ಸಂಸ್ಥೆಗೆ ಸೇರಿದರು. ಅವರು ತಮ್ಮ ಪ್ರಯಾಣದ ಅಡೆತಡೆಗಳನ್ನು ಹೇಗೆ ನಿವಾರಿಸಿಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ.

“ನನ್ನ ಜೆಇಇ ಪ್ರಯಾಣ 11ನೇ ತರಗತಿಯಲ್ಲಿ ಪ್ರಾರಂಭವಾದ ಮೊದಲ ಒಂದು ಅಥವಾ ಎರಡು ತಿಂಗಳುಗಳಲ್ಲಿ ನಾನು ಸ್ವಲ್ಪ ತೊಂದರೆಗಳನ್ನು ಎದುರಿಸಿದೆ. ಅಂದರೆ, 10ನೇ ತರಗತಿಗೆ ಹೋಲಿಸಿದರೆ 11 ಮತ್ತು 12ನೇ ತರಗತಿಗಳ ಪಠ್ಯಕ್ರಮವು ಸಾಕಷ್ಟು ವಿಸ್ತಾರವಾಗಿದೆ. ಆದ್ದರಿಂದ ನಾನು ಆರಂಭದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದೆ. ಆದರೆ ನಾನು ಕೈಬಿಡಲಿಲ್ಲ. ನನ್ನ ಅಧ್ಯಯನವನ್ನು ನಿರಂತರವಾಗಿ ಮುಂದುವರಿಸಿದೆ. ನಾನು ವಿದ್ಯಾರ್ಥಿಗಳಿಗೆ ನೀಡಲು ಬಯಸುವ ಸಂದೇಶ ಏನೆಂದರೆ, ನೀವು ಅಂತಹ ತೊಂದರೆಗಳನ್ನು ಎದುರಿಸಿದರೆ ಅಥವಾ ನನ್ನಿಂದ ಸಾಧ್ಯವೇ ಇಲ್ಲ ಎಂದು ಭಾವಿಸಿದರೆ, ಕೈಬಿಡಬೇಡಿ. ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮುಂದುವರಿಸಿ. ಒಳ್ಳೆಯ ಫಲಿತಾಂಶ ದಕ್ಕುತ್ತದೆ” ಎಂದು ಅವರು ಇನ್‌ಸ್ಟಿಟ್ಯೂಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೇಳೆ ಹೇಳಿದರು.

“ಜೆಇಇ ಅಡ್ವಾನ್ಸ್ಡ್‌ನಲ್ಲಿ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ ಸೀಟು ಪಡೆಯುವುದು ನನ್ನ ಗುರಿ. ಪ್ರಸ್ತುತ ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ” ಎಂದು ಗಜರೆ ಹೇಳಿದ್ದಾರೆ. ಐಐಟಿ-ಜೆಇಇ ಆಕಾಂಕ್ಷಿಗಳಿಗೆ ಗಜರೆ ಸಲಹೆಯನ್ನೂ ಹಂಚಿಕೊಂಡಿದ್ದಾರೆ. “ನಿಮ್ಮ ಗುರಿಯನ್ನು ಖಚಿತಪಡಿಸಿ. ಅದರ ಪ್ರಕಾರ ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮಾಡಿ. ವಿಷಯಗಳನ್ನು ನಿಜವಾದ ಆಸಕ್ತಿಯಿಂದ ಅಧ್ಯಯನ ಮಾಡಿ. ಇದರಿಂದ ಅವು ಹೊರೆಯಾಗುವುದಿಲ್ಲ. ನಿಮ್ಮ ಸಿದ್ಧತೆಯನ್ನು ಸ್ಥಿರವಾಗಿ ಮತ್ತು ನಿರಂತರವಾಗಿ ಮಾಡಿ.”

56 ಅಭ್ಯರ್ಥಿಗಳಿಗೆ ಶೇ.100 ಅಂಕ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಜೆಇಇ ಮುಖ್ಯ 2024 ಸೆಷನ್ 2 ಪರೀಕ್ಷಾ ಫಲಿತಾಂಶ (JEE Main 2024 Result session 2) ಪ್ರಕಟವಾಗಿದೆ. ಒಟ್ಟು 56 ಅಭ್ಯರ್ಥಿಗಳು (Students) ಶೇ.100 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿಗಿಂತ 13 ಹೆಚ್ಚು ವಿದ್ಯಾರ್ಥಿಗಳು ಇದನ್ನು ಪಡೆದಿದ್ದಾರೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ. ಕಟ್‌ಆಫ್‌ (Cut off marks) ಅಂಕಗಳನ್ನು ಕೂಡ 2.45%ರಷ್ಟು ಹೆಚ್ಚಿಸಲಾಗಿದೆ.

ಸಂಸ್ಥೆಯು ಇಂದು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ 2024 ಫಲಿತಾಂಶವನ್ನು ಬಿಡುಗಡೆ ಮಾಡಿದೆ. 2024ರ ಪರೀಕ್ಷೆಗಳಲ್ಲಿ ಒಟ್ಟು 9.24 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 8.2 ಲಕ್ಷ ಜನರು ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆದ JEE ಮುಖ್ಯ 2023 ಪರೀಕ್ಷೆಗಳಿಗೆ ಹಾಜರಾಗಿದ್ದರು. ಜೆಇಇ ಮುಖ್ಯ ಏಪ್ರಿಲ್ ಸೆಷನ್‌ಗೆ ಹಾಜರಾದವರು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು: jeemain.nta.ac.in.

ಇದನ್ನೂ ಓದಿ: JEE Main 2024 Result: ಜೆಇಇ ಮೇನ್‌ ಫಲಿತಾಂಶ ಪ್ರಕಟ, 56 ಅಭ್ಯರ್ಥಿಗಳಿಗೆ ಶೇ.100 ಅಂಕ, ಕಟ್‌ಆಫ್‌ 2.45% ಹೆಚ್ಚಳ

Continue Reading

ಅಂಕಣ

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

ರಾಜಮಾರ್ಗ ಅಂಕಣ (Rajamarga column): ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

VISTARANEWS.COM


on

arijit singh rajamarga column 2
Koo

ದ ಮ್ಯೂಸಿಕಲ್ ಲೆಜೆಂಡ್, ಜೇನು ದನಿಯ ಸರದಾರ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ (Rajamaraga Column): ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಸಿಂಗ್‌ (Arijit singh)) ಹುಟ್ಟಿದ ಹಬ್ಬ (Birthday)!

ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಆತನ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು….ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು!

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು.

ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು! ಮುಂದೆ TIPS ಸಂಗೀತ ಕಂಪೆನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ! ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟವು ಆತನಿಗಿಂತ ಮುಂದೆ ಇತ್ತು! ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ!

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು! ಅರ್ಜಿತ್ ಒಂದು ದೊಡ್ಡ ಬ್ರೇಕ್ ಥ್ರೂ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

arijit singh rajamarga column 2

2011ರಲ್ಲಿ ಅರ್ಜಿತ್ ಭಾಗ್ಯದ ಬಾಗಿಲು ತೆರೆಯಿತು!

ಆ ವರ್ಷ ಬಿಡುಗಡೆ ಆದ ಮರ್ಡರ್ 2 ಸಿನೆಮಾದ ‘ಫೀರ್ ಮೊಹಬ್ಬತೆ ‘ ಹಾಡು ಸೂಪರ್ ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ ( ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರೀ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಇಡೀ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿಯು ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದೀ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಯಿತು. ಭಾರೀ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರೀ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ.

ಸ್ಟುಡಿಯೋ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೋ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ!

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.

ಅಂತಹ ಅನನ್ಯ ಪ್ರತಿಭೆ, ಜೇನು ದನಿಯ ಸರದಾರ ಅರ್ಜಿತ್ ಸಿಂಗ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Continue Reading

ಅಂಕಣ

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ದಶಮುಖ ಅಂಕಣ: ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ?

VISTARANEWS.COM


on

dashamukha column madness
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ʻಹುಚ್ಚುʼ (madness) ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆ ನೆನಪಾಗುವ ಚಿತ್ರಗಳ ಬಗ್ಗೆ ಹೆಚ್ಚು ಹೇಳುವುದು ಬೇಡವಲ್ಲ. ಯಾವುದೇ ದೇಶ, ಭಾಷೆ, ಸಂಸ್ಕೃತಿಗಳಲ್ಲಿ ನೋಡಿದರೂ ʻಹುಚ್ಚಿಗೆʼ ಹೆಚ್ಚಿಗೆ ಅರ್ಥಗಳಿಲ್ಲ… ಅದೊಂದೇ ಅರ್ಥ! ಹಾಗಾಗಿಯೇ ʻಅದೊಂಥರಾ ಹುಚ್ಚು, ಅವನಿಗೊಂದು ಹುಚ್ಚುʼ ಎಂಬಿತ್ಯಾದಿ ಮಾತುಗಳ ಬೆನ್ನಿಗೇ ʻಅಲ್ಲೇನೋ ಒಂದು ಅತಿರೇಕವಿದೆʼ ಎಂಬ ಭಾವ ಬಂದುಬಿಡುತ್ತದೆ. ಅದಕ್ಕಾಗಿಯೇ ʻಹುಚ್ಚು ಸಾಹಸ, ಹುಚ್ಚು ಪ್ರೀತಿʼ ಮುಂತಾದ ಪ್ರಯೋಗಗಳನ್ನು ಮಾಡುತ್ತಾ, ಬೈಯ್ಯುವುದಕ್ಕೆ, ವ್ಯಂಗ್ಯಕ್ಕೆ, ಕುಹಕಕ್ಕೆ, ಟೀಕೆಗೆ, ತಮಾಷೆಗೆ… ಅಥವಾ ಇಂಥದ್ದೇ ಋಣಾತ್ಮಕ ಎನ್ನಬಹುದಾದ ಛಾಯೆಗಳಲ್ಲಿ ಈ ಶಬ್ದವನ್ನು ಬಳಸುತ್ತೇವೆ. ನಿಜಕ್ಕೂ ಈ ಶಬ್ದವನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಬದುಕಿನಲ್ಲಿ ಪ್ರೀತಿ, ಸೌಖ್ಯ, ಖುಷಿಯನ್ನು ಅರಸುವವರಿಗೂ ಇದನ್ನು ಬಳಸಬಹುದೇ? ಸಾಹಿತ್ಯ-ಸಿನೆಮಾಗಳಲ್ಲಿ ಕಾಣುವ ಪ್ರೀತಿ, ಪ್ರೇಮಗಳಿಗೆ ಹುಚ್ಚನ್ನು ಪರ್ಯಾಯವಾಗಿ ಬಳಸುವುದು ಹೊಸದೇನಲ್ಲ. ಆದರೆ ಇಲ್ಲೀಗ ಅಂಥ ಹರೆಯದ ಪ್ರೀತಿಯ ಬಗ್ಗೆಯಲ್ಲ ಹೇಳುತ್ತಿರುವುದು. ಇತರರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವವರಿಗೂ ಈ ಶಬ್ದ ಸಲ್ಲುತ್ತದೆಯೇ?

ಇತ್ತೀಚೆಗೆ ಭೇಟಿ ಮಾಡಿದ ಒಂದಿಬ್ಬರು ವ್ಯಕ್ತಿಗಳು ಇಂಥದ್ದೊಂದು ಮಂಥನವನ್ನು ಹುಟ್ಟು ಹಾಕಿದ್ದು ಹೌದು. ಎಲ್ಲರಿಗಿಂತ ಭಿನ್ನವಾದ ಬದುಕನ್ನು ಆಯ್ದುಕೊಳ್ಳುವವರು, ತಮ್ಮ ಜೀವನದ ರೀತಿ-ನೀತಿಗಳನ್ನು ಅಥವಾ ಧ್ಯೇಯ-ಆದರ್ಶಗಳನ್ನು ʻಹುಚ್ಚುʼ ಎನ್ನುವಷ್ಟು ಪ್ರೀತಿಸದಿದ್ದರೆ, ಖುಷಿಯಿಂದ ಬದುಕುವುದು ಸಾಧ್ಯವೇ? ಎಷ್ಟೇ ಸುಭಿಕ್ಷವಾದ ಬದುಕನ್ನೂ ಹಳಿಯುತ್ತಲೇ ಬದುಕುವ ಇಂದಿನ ದಿನಗಳಲ್ಲಿ, ಇರುವ ಬದುಕಲ್ಲಿ ಸುಭಿಕ್ಷವನ್ನು ಸೃಷ್ಟಿಸುವ ಅವರನ್ನು ಹುಚ್ಚರೆಂದರೆ ಅತಿರೇಕವಾದೀತೇ? ಬದುಕನ್ನು ಕೊರಗಿನಲ್ಲೇ ಕಳೆಯುವುದು ಹುಚ್ಚೋ ಅಥವಾ ಇತರರ ಕೊರಗನ್ನು ಕಳೆಯುವುದು ಹುಚ್ಚೋ?

ಹೀಗೆನ್ನುವಾಗ ಅನಂತ್‌ ಸರ್‌ ನೆನಪಾಗುತ್ತಾರೆ. ಬದುಕಲ್ಲಿ ವಿದ್ಯೆ ದೊರೆಯದ ಮಕ್ಕಳನ್ನು ಶಿಕ್ಷಣದ ಹಾದಿಗೆ ಹಚ್ಚಿ, ನೆಲೆ ಕಾಣಿಸುವ ಅವರ ಸಾಹಸವನ್ನು ವರ್ಣಿಸುವುದಕ್ಕೆ ಬೇರೆ ಪದಗಳಿಗೆ ಸಾಧ್ಯವಿಲ್ಲ. ಮನೆ ಇದ್ದೂ ಇಲ್ಲದಂತಾದವರು, ಮನೆಯೇ ಇಲ್ಲದವರು, ಪಾಲಕರು ಇಲ್ಲದವರು, ಪಾಲಕರು ಯಾಕಾದರೂ ಇದ್ದಾರೋ ಎನ್ನುವಂಥ ಹಲವು ನಮೂನೆಯ ವಾತಾವರಣದಿಂದ ಬಂದ ಮಕ್ಕಳಿಗೆ ಊಟ, ವಸತಿಯ ಜೊತೆಗೆ ವಿದ್ಯೆ ನೀಡುವುದನ್ನೇ ಧ್ಯೇಯವಾಗಿಸಿಕೊಂಡವರು. ಹತ್ತು-ಹನ್ನೆರಡು ವರ್ಷಗಳವರೆಗೆ ಶಾಲೆಯ ಮುಖವನ್ನೂ ಕಾಣದವರು, ಎಂದೊ ಶಾಲೆಗೆ ಹೋಗಿ ನಡುವಲ್ಲೇ ಕಳೆದುಹೋದವರು- ಇಂಥ ನೂರಾರು ಮುಖಗಳಲ್ಲಿ ನಗು ಅರಳಿಸುವುದಕ್ಕೆ ಇರಬೇಕಾದ ಅದಮ್ಯ ಪ್ರೀತಿಯೂ ಒಂದು ಬಗೆಯ ಹುಚ್ಚೇ ತಾನೇ? ಹಾಗಿಲ್ಲದಿದ್ದರೆ, ಇಂಥ ಸಾಹಸಿಗಳು ಲೋಕದಲ್ಲಿ ನಮಗೆ ವಿರಳವಾಗಿ ಕಾಣುವುದೇಕೆ?

ಆರೇಳು ವರ್ಷದವರನ್ನು ಒಂದನೇ ಕ್ಲಾಸಿಗೆ ಕೂರಿಸುವಲ್ಲಿ ಅಷ್ಟೇನು ಸಮಸ್ಯೆಯಾಗಲಿಕ್ಕಿಲ್ಲ. ವರ್ಷದ ಆಧಾರದ ಮೇಲೆಯೇ ತಾನೆ ನಮ್ಮ ಶಿಕ್ಷಣ ವ್ಯವಸ್ಥೆ ರೂಪುಗೊಂಡಿರುವುದು. ಆದರೆ ಹದಿಹರೆಯಕ್ಕೆ ಕಾಲಿಟ್ಟವರು ಇನ್ನೂ ಶಾಲೆಯ ಮೆಟ್ಟಿಲನ್ನೇ ಹತ್ತದಿರುವಾಗ ಅವರನ್ನೂ ಒಂದನೇ ಕ್ಲಾಸಿಗೆ ಕೂರಿಸುವುದು ಹೇಗೆ? ʻಹಾಗಾಗಿಯೇ ದೈಹಿಕ ವಯಸ್ಸಿನ ಆಧಾರದ ಮೇಲಲ್ಲದೆ, ಮಕ್ಕಳ ಬೌದ್ಧಿಕ ವಯಸ್ಸಿಗೆ ಅನುಗುಣವಾಗಿ ಕಲಿಯುವ ಗುಂಪುಗಳನ್ನಾಗಿ ವಿಂಗಡಿಸಿಕೊಳ್ಳುತ್ತೇವೆ. ಹಾಗೆಯೇ ಅವರ ಕಲಿಕೆ ಮುಂದುವರಿಯುತ್ತದೆʼ ಎನ್ನುವುದು ಅನಂತ್‌ ಸರ್‌ ಹೇಳುವ ಮಾತು. ದೂರದ ಅಸ್ಸಾಂ, ಬಿಹಾರಗಳಿಂದ ಬಂದ ಮಕ್ಕಳಿಗೆ ಶಾಲೆಯ ಕಲ್ಪನೆಯೂ ಇಲ್ಲದಿರುವಾದ, ಇವರ ಭಾಷೆ ಅವರಿಗೆ-ಅವರ ಭಾಷೆ ಇವರಿಗೆ ತಿಳಿಯದಿರುವಾಗ, ವಿದ್ಯೆಯ ಶ್ರೀಕಾರ ಆಗುವುದು ಹೇಗೆ? ʻಇದೊಂಥರಾ ಹುಚ್ಚು. ಇದೂ ಆಗತ್ತೆʼ ಎನ್ನುವಾಗಿನ ಇವರ ಮುಖದ ನಗುವನ್ನು ಏನೆಂದು ಅರ್ಥ ಮಾಡಿಕೊಳ್ಳುವುದು?

ಈ ಚೌಕಟ್ಟಿನಾಚೆಯ ಮನೆಯಲ್ಲಿ ಕಲಿತು ಹೊರಬಿದ್ದು, ದುಡಿದು ಸಂಪಾದಿಸಿ ಬದುಕುತ್ತಿರುವ ತಮ್ಮ ಮಕ್ಕಳ ಬಗ್ಗೆ ಹೇಳುವಾಗ ಅವರ ಮುಖದ ನಗುವಿಗಿರುವ ಅರ್ಥದ ಅರಿವಾಗುತ್ತದೆ ನಮಗೆ. ಹುಚ್ಚಿಗೂ ಎಷ್ಟೊಂದು ಸುಂದರ, ಸಲ್ಲಕ್ಷಣಗಳಿವೆ ಎಂಬುದನ್ನು ತಿಳಿಯುವುದಕ್ಕೆ ಅದೊಂದು ನಗು ಸಾಕು. ಕೊರಗಿ ಕಳೆಯುವುದಕ್ಕಿಂತ, ಹೀಗೆ ಕೊರಗು ಕಳೆಯುವ ಹುಚ್ಚು ಒಳ್ಳೆಯದಲ್ಲವೇ? ನಮಗಿರುವ ಹುಚ್ಚು ಯಾವುದು ಎಂದು ಎಂದಾದರೂ ಯೋಚಿಸಿದ್ದೇವೆಯೇ?

ಈ ಎಲ್ಲ ಮಾತಿನ ನಡುವೆ ಪ್ರದೀಪ ಎನ್ನುವ ಆ ವ್ಯಕ್ತಿ ನೆನಪಾಗುತ್ತಾನೆ. ಕಪ್ಪು ಬಣ್ಣದ ಸಾಧಾರಣ ಮೈಕಟ್ಟಿನ ಆತ ಪುಟ್ಟ ದ್ವೀಪ ರಾಷ್ಟ್ರವೊಂದರ ನಿವಾಸಿ. ಅರಳಿದಂತಿರುವ ಕನ್ನಡಿಗಣ್ಣು, ಅವನದ್ದೇ ಆದ ವಿಶಿಷ್ಟ ಲಯದ ಇಂಗ್ಲಿಷ್‌ ಭಾಷೆಯ ಆತ ನಮಗೆ ಪರಿಚಯವಾಗಿದ್ದು ಪ್ರವಾಸವೊಂದರ ಭಾಗವಾಗಿ. ಅಲೆಯುವ ಹುಚ್ಚಿರುವ ಜನ ಲೋಕದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ ಜೊತೆಗೆ ತಿರುಗಾಡುವವರ ಸೌಖ್ಯವೇ ತನಗೆ ಪ್ರೀತಿ ಎನ್ನುವವರೂ ಇದ್ದಾರೆಂಬುದು ತಿಳಿದಿದ್ದು ಆಗಲೇ. ಈತ ವೃತ್ತಿಯಲ್ಲಿ ಪ್ರವಾಸಿ ಗೈಡ್‌. ನಮ್ಮ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೆ ಅಲ್ಲಿ ʻಗೈಡ್‌ ಬೇಕೆ?ʼ ಎಂದು ಮುತ್ತಿಗೆ ಹಾಕುವ ಗುಂಪಿನಲ್ಲಿ ಆತನೂ ಇರಬಹುದಾಗಿದ್ದವ. ಆದರೆ ತಮಗೆ ತಿಳಿದಷ್ಟನ್ನು ತೋಚಿದಂತೆ ಒದರಿ, ಬಂದವರಿಂದ ದುಡ್ಡು ಕಿತ್ತು ಕಳಿಸುವ ಗೈಡ್‌ಗಳ ಸಾಲಿನಿಂದ ಗಾವುದಗಟ್ಟಲೆ ದೂರದಲ್ಲಿ ಇರುವವ ಈತ.

ʻತಿರುಗಾಡಿದಷ್ಟೇ, ತಿರುಗಾಡಿಸುವುದೂ ನನಗಿಷ್ಟʼ ಎನ್ನುವ ಈತ, ತನ್ನ ಕಾರು ಓಡುವ ಪ್ರತಿಯೊಂದು ರಸ್ತೆಯ ಪರಿಚಯವನ್ನೂ ಮಾಡಿಕೊಡಬಲ್ಲ. ಯಾವ ಊರಿನ ಮಳೆ-ಬೆಳೆ ಹೇಗೆ ಎಂಬುದರಿಂದ ಹಿಡಿದು ಅಲ್ಲಿನ ಡೆಮಗ್ರಾಫಿಕ್‌ ವಿಶ್ಲೇಷಣೆಯನ್ನೂ ನೀಡಬಲ್ಲ. ʻಈ ಭಾಗದಲ್ಲಿ ತುಂಬಾ ಎಮ್ಮೆ ಸಾಕುತ್ತಾರೆ. ಮಣ್ಣಿನ ಗಡಿಗೆಯಲ್ಲಿ ಹಾಲು ಹೆಪ್ಪಾಕಿ, ಮೊಸರು ಮಾರುತ್ತಾರೆ. ಅದನ್ನೊಮ್ಮೆ ತಿನ್ನದಿದ್ದರೆ ಈ ರಸ್ತೆಯಲ್ಲಿ ಪ್ರಯಾಣ ಮಾಡಿದ್ದೇ ವ್ಯರ್ಥʼ ಎಂದು ಸರಕ್ಕನೆ ಗಾಡಿ ನಿಲ್ಲಿಸಿ, ಎರಡು ಪುಟ್ಟ ಗಡಿಗೆಗಳನ್ನು ಹಿಡಿದು ತರುತ್ತಾನೆ. ʻಇಷ್ಟು ದೂರ ಬಂದವರು ಈ ಸಿಹಿ ತಿನ್ನದಿದ್ದರೆ, ನಿಮ್ಮ ತಿರುಗಾಟವೇ ಅಪೂರ್ಣʼ ಎನ್ನುತ್ತಾ ಯಾವುದೋ ಸಿಹಿ ಎದುರಿಗಿಡುತ್ತಾನೆ. ʻಇಲ್ಲಿ ಭರಪೂರ ತರಕಾರಿ ಬೆಳೆಯುತ್ತಾರೆ. ಇದರಲ್ಲೊಂದು ಸಲಾಡ್‌ ಮಾಡುತ್ತೇನೆ ನೋಡಿ, ತಿನ್ನುವುದಕ್ಕೆ ಪುಣ್ಯ ಬೇಕುʼ ಎಂದು ಉಪಚಾರ ಮಾಡುತ್ತಾನೆ. ಇಂಥ ಯಾವುದನ್ನೂ ಮಾಡಬೇಕಾದ ಅಗತ್ಯ ಆತನಿಗಿಲ್ಲ. ನಮ್ಮ ಜಾಗಕ್ಕೆ ಕರೆದೊಯ್ದರೆ ಅವನ ಕೆಲಸ ಮುಗಿಯಿತು; ಅವನ ದುಡ್ಡು ಅವನ ಕೈ ಸೇರುತ್ತದೆ. ʻತಿರುಗಾಡುವುದು, ತಿರುಗಾಡಿಸುವುದು ನಂಗೊಂಥರಾ ಹುಚ್ಚು. ಹೊಸ ಜನರೊಂದಿಗೆ ನಂಟು ಬೆಸೆಯುವುದು, ಅವರನ್ನು ಖುಷಿಯಾಗಿಡುವುದು ನಂಗಿಷ್ಟʼ ಎನ್ನುತ್ತಾ ಹಿಂದಿ ನಟ ದೇವಾನಂದ್‌ ರೀತಿಯಲ್ಲಿ ನಗೆ ಬೀರುತ್ತಾನೆ.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಗುರಿ ತಲುಪುವುದಕ್ಕಿಂತ ಖುಷಿ ನೀಡುವುದು ಗಮ್ಯದೆಡೆಗಿನ ದಾರಿಗಳಲ್ಲವೇ? ಯಾವುದೇ ದಾರಿಯಲ್ಲಿ ಎದುರಾಗುವ ಊರೊಂದರ ಹೆಸರಿನ ಹಿಂದಿನ ಗಮ್ಮತ್ತು ತಿಳಿಸುವುದು, ಯಾವುದೋ ದೇಶದಿಂದ ಬರುವ ಚಿತ್ರವಿಚಿತ್ರ ಅಲೆಮಾರಿಗಳ ಜಾಯಮಾನ ವಿಸ್ತರಿಸುವುದು- ಇವೆಲ್ಲ ತನ್ನ ಪ್ರಯಾಣಿಕರ ದಾರಿಯನ್ನು ಬೋರಾಗದಂತೆ ಕಳೆಯುವ ಮತ್ತು ಅವರೊಂದಿಗೆ ನಂಟು ಬೆಸೆಯುವ ಆತನ ಉದ್ದೇಶಕ್ಕೆ ಒದಗುವಂಥವು. ವಿಹಾರಕ್ಕೆ, ವಿರಾಮಕ್ಕೆ, ಅಧ್ಯಯನಕ್ಕೆ ಮುಂತಾದ ಹಲವು ಕಾರಣಗಳನ್ನು ಹೊತ್ತು ಬರುವ ಜನರ ಕಥೆಗಳು ಆತನ ಸಂಚಿಯಲ್ಲಿವೆ. ಎಲ್ಲರಿಗೂ ಅವರವರ ಉದ್ದೇಶ ಈಡೇರುವಂತೆ ಶ್ರಮಿಸುವುದು ತನಗೆ ಪ್ರಿಯವಾದ ಸಂಗತಿ ಎನ್ನುವ ಇಂಥವರು ಜೊತೆಗಿದ್ದರೆ, ಅಲ್ಲಾವುದ್ದೀನನ ಮಾಂತ್ರಿಕ ಚಾಪೆಯ ಮೇಲೆ ತೇಲಿದಂತೆ ದಾರಿ ಸಾಗುತ್ತದೆ. ಇಂಥವರನ್ನು ನೋಡಿದಾಗ, ಇನ್ನೊಬ್ಬರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವ ಸ್ವಭಾವದ ಬಗ್ಗೆ ಬೇರೆ ಶಬ್ದಗಳು ನೆನಪಾಗುತ್ತಿಲ್ಲ.

ಹಣ, ಸಂಪತ್ತು, ಖ್ಯಾತಿ, ಅಧಿಕಾರಗಳ ಹುಚ್ಚು ಅಂಟಿಸಿಕೊಂಡವರು ನಮ್ಮೆದುರಿಗೆ ಮೆರವಣಿಗೆ ಹೊರಟಿದ್ದಾರೆ ಈಗ. ಚುನಾವಣೆಯ ಕಣದಲ್ಲಿಳಿದು ಅಧಿಕಾರ ದಕ್ಕಿಸಿಕೊಳ್ಳಲು, ದಕ್ಕದಿದ್ದರೆ ಯಾವ ಮಟ್ಟಕ್ಕೂ ಇಳಿಯುವಷ್ಟು ಹುಚ್ಚರಾಗಿದ್ದಾರೆ ಇಂದು. ಯಾರಿಗಾಗಿ ತಾವು ಆಯ್ಕೆಯಾಗುತ್ತಿದ್ದೇವೆಯೋ ಅವರ ಸೌಖ್ಯವನ್ನು ಗಮನಿಸುವುದೇ ಮರುಳು ಎನಿಸುತ್ತಿದೆ ಅಭ್ಯರ್ಥಿಗಳಿಗೆ. ಇಂಥವುಗಳನ್ನು ನೋಡಿದಾಗ ಮತ್ತದೇ ಪ್ರಶ್ನೆಗಳು ಮೂಡುತ್ತವೆ. ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ? ಹುಚ್ಚಿಗೆ ಹೆಚ್ಚಿಗೆ ಅರ್ಥಗಳಿಲ್ಲವೆಂದು ಈಗಲೂ ಹೇಳಬಹುದೇ?

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading
Advertisement
ಕರ್ನಾಟಕ5 mins ago

Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!

Mohammad Shami
ಪ್ರಮುಖ ಸುದ್ದಿ52 mins ago

Mohammad Shami : ಸರ್ಜರಿ ಗಾಯದ ನಡುವೆಯೂ ಮತದಾನ ಮಾಡಿದ ಮೊಹಮ್ಮದ್​ ಶಮಿ

Narendra modi
ಪ್ರಮುಖ ಸುದ್ದಿ1 hour ago

Lok Sabha Election : ಎನ್​ಡಿಎಗೆ ಶುಭ ಶಕುನ : 2ನೇ ಹಂತದ ಮತದಾನದ ಬಳಿಕ ಪ್ರಧಾನಿ ಮೋದಿ ಹೀಗಿತ್ತು

Udupi Sri Krishna Temple
ಕರ್ನಾಟಕ2 hours ago

Udupi Sri Krishna Temple: ಮತದಾನದ ದಿನ ಕಮಲಾರೂಢನಾದ ಉಡುಪಿ ಕೃಷ್ಣ! ಇಲ್ಲಿದೆ ಫೋಟೊ ಝಲಕ್‌

IPL 2024
ಕ್ರೀಡೆ2 hours ago

IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್​ ಜೈಂಟ್ಸ್​​

Lok Sabha Election 2024 2 villagers who boycotted voting cast their votes in evening
ಕರ್ನಾಟಕ2 hours ago

Lok Sabha Election 2024: ಮತದಾನ ಬಹಿಷ್ಕರಿಸಿದ್ದ 2 ಗ್ರಾಮದ ಜನ, ಸಂಜೆಗೆ ಮನವೊಲಿಕೆ; 7 ಗಂಟೆ ದಾಟಿದರೂ ಮುಗಿಯದ ಮತದಾನ

Modi in Karnataka stay in Belagavi tomorrow and Huge gatherings at five places
Lok Sabha Election 20243 hours ago

Modi in Karnataka: ನಾಳೆ ರಾಜ್ಯಕ್ಕೆ ಮೋದಿ, ಬೆಳಗಾವಿಯಲ್ಲಿ ವಾಸ್ತವ್ಯ; 2 ದಿನ ಪ್ರವಾಸ, 5 ಕಡೆ ಬೃಹತ್‌ ಸಮಾವೇಶ

BJP National President JP Nadda Election campaign in Surapura
ಕರ್ನಾಟಕ3 hours ago

Lok Sabha Election 2024: ದೇಶದ ರಕ್ಷಣೆಗಾಗಿ ಮತ್ತೆ ಬಿಜೆಪಿಯನ್ನು ಬೆಂಬಲಿಸಿ: ಜೆ.ಪಿ.ನಡ್ಡಾ

deepfake
ತಂತ್ರಜ್ಞಾನ3 hours ago

Deep Fakes: ಶೇ. 75 ಭಾರತೀಯರು ಡೀಪ್‌ಫೇಕ್‌ಗೆ ಒಳಗಾಗಿದ್ದಾರೆ; ಗೊತ್ತಾಗಿದ್ದು ಶೇ.22 ಮಂದಿಗೆ ಮಾತ್ರ!

Lok Sabha Election 2024 Bjp workers clash in Chikmagalur
Lok Sabha Election 20243 hours ago

Lok Sabha Election 2024: ಚಿಕ್ಕಮಗಳೂರಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆಯೇ ಮಾರಾಮಾರಿ; ಮುಖಂಡನ ತಲೆಗೆ ಏಟು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ10 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202411 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202411 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ17 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌