ಅಂಕಣ
ಮೊಗಸಾಲೆ ಅಂಕಣ: ಸಿಎಂ ಪದವಿ ಹಂಚಿಕೆ: ʼಕೈʼಕಮಾಂಡ್ ಮೌನದ ಹಿಂದೆ ಏನು ಸಂದೇಶವಿದೆ?
ಎಂ.ಬಿ ಪಾಟೀಲರ ಹೇಳಿಕೆಗೆ ಖರ್ಗೆ, ಸೋನಿಯಾ ಯಾರೂ ಪ್ರತಿಕ್ರಿಯಿಸಿಲ್ಲ. ದಿನದ 24 ತಾಸೂ ಮಾಧ್ಯಮದವರ ಮುಂದೆ ಠಳಾಯಿಸುತ್ತಿದ್ದ ನಾಯಕರು ಸದ್ಯ ತೆನಾಲಿರಾಮನಂತೆ ಮುಖಕ್ಕೆ ಮಡಕೆ ಕವುಚಿಕೊಂಡು ಅಡ್ಡಾಡುತ್ತಿದ್ದಾರೆ!
ಮೇ ಮಾಹೆ 13ರಂದು ಶನಿವಾರ ರಾಜ್ಯ ವಿಧಾನ ಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದು ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟ ಜನರ ಐತೀರ್ಪು ಬಹಿರಂಗವಾಗಿತ್ತು. ಮೂರೂವರೆ ದಶಕಾನಂತರ ಇಷ್ಟು ದೊಡ್ಡ ಜಯ ಕರ್ನಾಟಕದಲ್ಲಿ 137 ವರ್ಷ ಹಳೆಯದಾದ ಪಕ್ಷದ ಕೈ ಹಿಡಿದಿತ್ತು. ದೇಶದ ಅಲ್ಲಲ್ಲಿ ನಡೆದ ಚುನಾವಣೆಗಳಲ್ಲಿ ಸತತ ಎಂಬಂತೆ ಸೋಲನ್ನೇ ಕಾಣುತ್ತಿದ್ದ ಕಾಂಗ್ರೆಸ್ಗೆ ಸಂಜೀವಿನಿ ಆಗಿದ್ದು ರಾಜ್ಯದಲ್ಲಿ ಕೈಗೊಲಿದ ಜಯ. ಕರ್ನಾಟಕದವರೇ ಆದ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮರ್ಯಾದೆಯನ್ನೂ ಕಾಪಾಡಿದ ಜಯ ಇದು. ಸತತ ಸೋಲಿನಿಂದ ಬಸವಳಿದಿದ್ದ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ತ್ರಯರಿಗೆ ರಾಜಕೀಯ ಮಾಡಲು ಇನ್ನೂ ಅವಕಾಶವಿದೆ ಎಂಬ ನಂಬಿಕೆಯನ್ನು ಮೂಡಿಸಿದ ಜಯ ಕರ್ನಾಟಕದ್ದು. ಸಂಭ್ರಮಾಚರಣೆಗೆ ಏನೆಲ್ಲ ಬೇಕೋ ಅದೆಲ್ಲವನ್ನೂ ರಾಶಿವೊಡ್ಡಿದ್ದು ಕರ್ನಾಟಕದ ಜಯ.
ಈ ಸಂಭ್ರಮ ಒಮ್ಮಿಂದೊಮ್ಮೆಗೇ ಮುಗ್ಗರಿಸಿದ್ದು ಫಲಿತಾಂಶ ಪ್ರಕಟವಾದ 9-10 ದಿನ ನಂತರದ ಬೆಳವಣಿಗೆ. ಹೊಸ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ವಿಜಾಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ. ಪಾಟೀಲರು ಹಾಕಿದ ಬಾಂಬು ಆ ಪಕ್ಷದ ಚುನಾವಣಾ ಜಯದ ಸಂಭ್ರಮವೆಲ್ಲವಕ್ಕೂ ನಿಗಿನಿಗಿ ಉರಿಯುವ ಕೊಳ್ಳಿ ಇಟ್ಟಿದೆ. “ಸಿದ್ದರಾಮಯ್ಯ ಐದು ವರ್ಷ ಪೂರ್ತಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ” ಎಂಬ ಅವರ ಹೇಳಿಕೆ ಆ ಪಕ್ಷದೊಳಗಣ ಡಿ.ಕೆ.ಶಿವಕುಮಾರ್ ನೇತೃತ್ವದ ಬಣದಲ್ಲಿ ಅಡಿಯಿಂದ ಮುಡಿವರೆಗೂ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ಐದು ವರ್ಷದ ಅಧಿಕಾರಾವಧಿಯನ್ನು ಸಮಸಮ ಎರಡೂವರೆ ವರ್ಷಕ್ಕೆ ವಿಭಜಿಸಿ ಮೊದಲ ಅವಧಿ ಸಿದ್ದರಾಮಯ್ಯ ನಂತರದ ಅವಧಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದಲ್ಲಿ ಇರುತ್ತಾರೆಂದು ಮಾಡಿಕೊಂಡ ಒಡಂಬಡಿಕೆಗೆ ತದ್ವಿರುದ್ಧವಾಗಿ ಪಾಟೀಲರ ಹೇಳಿಕೆ ಬಂದಿದ್ದು ಮುಖ್ಯವಾಗಿ ಡಿಕೆಶಿ ನೇತೃತ್ವದ ಒಕ್ಕಲಿಗ ಬಣದಲ್ಲಿ ಒಪ್ಪಿಕೊಳ್ಳಲಾಗದ ಸ್ಥಿತಿ ನಿರ್ಮಿಸಿದೆ. ಹಾಗಂತ ಹೇಳಬಾರದ್ದೇನನ್ನೋ ಹೇಳಿಬಿಟ್ಟೆ ಎಂದು ಪಾಟೀಲರಿಗೆ ಅನಿಸಿಲ್ಲ. ಮರುದಿನ ನೀಡಿದ ವಿವರಣೆಯಲ್ಲಿ ತಾವು ಹಾಗೆ ಹೇಳೇ ಇಲ್ಲ; ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂಬಿತ್ಯಾದಿ ಸಬೂಬನ್ನು ಅವರು ಕೊಟ್ಟಿಲ್ಲ. ತಮ್ಮ ಹೇಳಿಕೆಗೆ ತಾವು ಬದ್ಧರೆಂದೂ ಏಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಹೇಳಿದ್ದನ್ನು ತಾವು ಪುನರುಚ್ಚರಿಸಿದ್ದಾಗಿಯೂ ಅವರು ಸ್ಪಷ್ಟಪಡಿಸಿ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಒದ್ದಿದ್ದಾರೆ.
ತಥಾಕಥಿತ ಒಡಂಬಡಿಕೆ ನಡೆದ ಸಂದರ್ಭದಲ್ಲಿ ಹಾಜರಿದ್ದವರು ಸೋನಿಯಾ, ರಾಹುಲ್, ಖರ್ಗೆ ಮತ್ತು ವೇಣುಗೋಪಾಲ್ ಮಾತ್ರ. ಸತ್ಯ ಏನೆನ್ನುವುದು ಈ ನಾಲ್ವರಿಗೆ ಮಾತ್ರ ಗೊತ್ತಿದೆ. “ಮುಖ್ಯಮಂತ್ರಿ ಸ್ಥಾನದಲ್ಲಿ ಪವರ್ ಶೇರಿಂಗ್ ಎನ್ನುವುದೇನೂ ಇಲ್ಲ. ಅಂಥದ್ದೇನಾದರೂ ಇದ್ದರೆ ಅದು ಕರ್ನಾಟಕದ ಜನತೆಯೊಂದಿಗೆ ಮಾತ್ರ” ಎಂದು ಆ ಸಭೆಯಲ್ಲಿದ್ದ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ. ಅಂದಮೇಲೆ ಪೂರ್ಣಾವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಎನ್ನುವುದರಲ್ಲಿ ಅನುಚಿತವಾದುದಾದರೂ ಏನಿದೆ ಎನ್ನುವುದು ಪಾಟೀಲರ ಪ್ರಶ್ನೆ.
ಈ ಹೇಳಿಕೆಯಿಂದ ತಳಮಳಗೊಂಡಿರುವ ಶಿವಕುಮಾರ್ ಅತ್ಯಂತ ಜಾಗರೂಕತೆಯಲ್ಲಿ ತಾಳ್ಮೆಯ ಗೆರೆಯನ್ನು ತಿಲಾಂಶವೂ ಉಲ್ಲಂಘಿಸದೆ ಪ್ರತಿಕ್ರಿಯಿಸಿದ್ದಾರೆ. ಪಾಟೀಲರ ಹೇಳಿಕೆಯನ್ನು ಪುಷ್ಟೀಕರಿಸುವ ಅಥವಾ ನಿರಾಕರಿಸುವ ಜವಾಬ್ದಾರಿಯನ್ನು ಅವರು ಹೈಕಮಾಂಡ್ಗೇ ಬಿಟ್ಟುಕೊಟ್ಟಿದ್ದಾರೆ. ಏತನ್ಮಧ್ಯೆ ರಾಜ್ಯ ಉಸ್ತುವಾರಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾರು “ಯಾರೂ ಅನಗತ್ಯ ಹೇಳಿಕೆ ನೀಡಕೂಡದು” ಎಂದು ಸಾರಾಸಗಟು ಫರ್ಮಾನು ಹೊರಡಿಸಿದ್ದಾರೆ. ತಪ್ಪಿಯೂ ಎಂ.ಬಿ. ಪಾಟೀಲರ ಹೆಸರನ್ನು ತಮ್ಮ ಹೇಳಿಕೆಯಲ್ಲಿ ಅವರು ತಂದಿಲ್ಲ ಎನ್ನುವುದು ಕೇವಲ ಆಕಸ್ಮಿಕವಿರಲಾರದು. ಇನ್ನು ಸುರ್ಜೇವಾಲಾರು ಬಳಸಿರುವ “ಅನಗತ್ಯ” ಪದದ ವಿಚಾರ. ಕಾಂಗ್ರೆಸ್ನೊಳಗೆ ಈ ವಿವಾದ ಕೆಲವರಿಗೆ “ಅನಗತ್ಯ” ಎನಿಸಿದರೆ ಮತ್ತೆ ಕೆಲವರಿಗೆ “ಅಗತ್ಯ” ಎನಿಸಿಬಿಟ್ಟಿದೆ. ಅಗತ್ಯವೆನಿಸಿರುವ ಎರಡನೇ ಗುಂಪಿನ ನಾಯಕತ್ವ ಸದ್ಯ ಪಾಟೀಲರ ಹಿಡಿತದಲ್ಲಿದೆ.
ಕಾಂಗ್ರೆಸ್ ಜಯದ ಬೆನ್ನೇರಿ ಬಂದುದು ಸಿಎಂ ಯಾರೆಂಬ ಚರ್ಚೆ. ಸಿದ್ದರಾಮಯ್ಯ, ಡಿಕೆಶಿಯವರಿಬ್ಬರೂ ಆ ಕುರ್ಚಿ ಮೇಲೆ ಟವೆಲ್ ಹಾಕಿ, ತಮ್ಮ ಕೈಲಾದಷ್ಟೂ ಒತ್ತಡ ಹೇರಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಚಾತಕ ಪಕ್ಷಿಯಂತೆ ಕಾದಿದ್ದರು. ಹಗ್ಗ ಜಗ್ಗಾಟ, ಗುದಮುರಗಿಗಳೆಲ್ಲವೂ ಮುಗಿದು ಅಂತಿಮವಾಗಿ ತಥಾಕಥಿತ ಒಡಂಬಡಿಕೆಗೆ ಡಿಕೆಶಿ ಮಣಿದು ಉಪಮುಖ್ಯಮಂತ್ರಿ ಹುದ್ದೆ ಒಪ್ಪಿ ಸಹಕರಿಸುವ ಭರವಸೆ ನೀಡುವುದರೊಂದಿಗೆ ಕಥೆ “ಸುಖಾಂತ್ಯ” ಆಯಿತೆಂದು ಭಾವಿಸಲಾಗಿತ್ತು. ಈಗ ಪಾಟೀಲರು ಸಿಡಿಸಿರುವ ಬಾಂಬ್ನ ಶಕ್ತಿ ಸಾಮರ್ಥ್ಯ ನೋಡಿದರೆ ಸುಖಾಂತ್ಯದ ಮಾತು ಒತ್ತಟ್ಟಿಗೆ ಇರಲಿ, ಕಥೆ ಮುಕ್ತಾಯ ಕಾಣುವುದೂ ಕಷ್ಟವಾಗಿದ್ದು ಈಗ ಕಥೆ ಹೊಸ ತಿರುವಿನೊಂದಿಗೆ ಮತ್ತೆ ಶುರುವಾಗುತ್ತಿದೆ ಎನ್ನುವುದು ಪಾಟೀಲ್ ಬಣದ ನಿಲುವು.
ಅವರು ಹೇಳುವ ಕಥೆಗೆ ಮುನ್ನುಡಿ ಬರೆದುದು ಫಲಿತಾಂಶ ನಿಚ್ಚಳಗೊಂಡ ಮೇ 13ರ ಇಳಿಸಂಜೆ ಹೊತ್ತು. ಗೋಧೂಳಿ ಮುಹೂರ್ತ. ಬಬಲೇಶ್ವರದ ಮತ ಎಣಿಕೆ ಕೇಂದ್ರದ ಆಜೂಬಾಜಿನಲ್ಲಿ. ಪಾಟೀಲರು ಗೆಲ್ಲುವುದರಲ್ಲಿ ಯಾರಿಗೂ ಅನುಮಾನ ಇರಲಿಲ್ಲ. ಲಿಂಗಾಯತ ಕೋಟಾದಲ್ಲಿ ಅವರು ಉಪ ಮುಖ್ಯಮಂತ್ರಿ ಆಗುತ್ತಾರೆಂಬ ಸುದ್ದಿ ಆ ಹೊತ್ತಿಗೆ ಢಾಳಾಗಿ ಹರಡಿತ್ತು. ಹೈಕಮಾಂಡ್ ಹಂತದಲ್ಲಾದ ತೀರ್ಮಾನದ ರೀತ್ಯ ಸಿದ್ದರಾಮಯ್ಯ ಮೊದಲ ಎರಡೂವರೆ ವರ್ಷದ ಅವಧಿಗೆ ಮುಖ್ಯಮಂತ್ರಿ, ಒಕ್ಕಲಿಗ ಡಿಕೆಶಿ, ಲಿಂಗಾಯತ ಎಂ.ಬಿ.ಪಾಟೀಲ, ದಲಿತ ಸಮುದಾಯದಿಂದ ಡಾ.ಜಿ.ಪರಮೇಶ್ವರ ಇಲ್ಲವೇ ಕೆ.ಎಚ್.ಮುನಿಯಪ್ಪ ಹೀಗೆ ಮೂವರು ಡಿಸಿಎಂ ಆಗುತ್ತಾರೆಂಬ ಸುದ್ದಿ ಹರಡಿತ್ತು. ಇದನ್ನು ಹರಡಿದ್ದು ಸ್ವತಃ ಪಕ್ಷದ ದೆಹಲಿ ವರಿಷ್ಟ ಮಂಡಳಿಯೇ.
ಬಬಲೇಶ್ವರದಲ್ಲಿ ನಡೆದ ಸಂಭ್ರಮ, ಪಟಾಕಿ ಸಿಡಿಸಿ ಹರ್ಷಾಚರಣೆ ನಡೆಸಿದ್ದಕ್ಕೆ ದೊಡ್ಡ ಕಾರಣ ನಮ್ಮ ಪಾಟೀಲರು ಡಿಸಿಎಂ ಆಗ್ತಾರೆ ಎನ್ನುವುದೇ ಆಗಿತ್ತು. ಆದರೆ ಅತ್ತ ದೆಹಲಿಯಲ್ಲಿ ಡಿಕೆಶಿ ಹಾಕಿದ ಒತ್ತಡ ಕಾರಣವಾಗಿ ಅವರೊಬ್ಬರಿಗೆ ಮಾತ್ರವೇ ಡಿಸಿಎಂ ಹುದ್ದೆ ಎಂಬ ತೀರ್ಮಾನಕ್ಕೆ ಬರಲಾಯಿತು. ಈ ಸುದ್ದಿ ಹರಡುತ್ತಿದ್ದಂತೆ ಸಂಕಟದ ಸರಮಾಲೆಯೇ ಸಂಭವಿಸಿತು. ಇತ್ತ ಕೊರಟಗೆರೆಯಲ್ಲಿ ಗೆದ್ದ ಜಿ.ಪರಮೇಶ್ವರ, ದೇವನಹಳ್ಳಿಯಲ್ಲಿ ಗೆದ್ದ ಕೆ.ಎಚ್. ಮುನಿಯಪ್ಪ, ಬಬಲೇಶ್ವರದ ಎಂ.ಬಿ. ಪಾಟೀಲರು “ನಾಟ್ ಅಟ್ ಆಲ್ ಹ್ಯಾಪಿ” ಎಂದು ಉದ್ಗರಿಸಿದ್ದು ಈ ಬೆಳವಣಿಗೆಯ ಕ್ಲೈಮ್ಯಾಕ್ಸ್. ಪರಮೇಶ್ವರ ಮತ್ತು ಮುನಿಯಪ್ಪ ಮೇಲ್ನೋಟಕ್ಕಾದರೂ ಡಿಸಿಎಂ ಪಟ್ಟದಿಂದ ವಂಚಿತರಾದ ದುಃಖವನ್ನು ಬಲವಂತದಿಂದ ನುಂಗಿಕೊಂಡರು.
ಪಾಟೀಲರು ಮಾತ್ರ ಸಿಡಿದೆದ್ದರು. ಮೈಸೂರಿನ ಸುತ್ತೂರು ಮಠಕ್ಕೆ ತೆರಳಿ ಸ್ವಾಮಿಗಳ ದರ್ಶನ ಪಡೆಯುವುದಕ್ಕೆ ಮುನ್ನಾ ದಿವಸ ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯೊಂದರಲ್ಲಿ ಡಿಕೆಶಿ ದರ್ಪದರ್ಶನಕ್ಕೆ ಪಾಟೀಲರು ಮುಖಾಮುಖಿಯಾಗಿದ್ದರು. ಆ ಸಭೆಯಲ್ಲಿ ಸಿದ್ದರಾಮಯ್ಯ, ಪಾಟೀಲರು ಏನೋ ಹರಟುತ್ತಿದ್ದುದು ಮೈಕ್ ಹಿಡಿದು ಭಾಷಣಕ್ಕೆ ಸಜ್ಜಾಗಿದ್ದ ಡಿಕೆಶಿಗೆ ಸರಿ ಬರಲಿಲ್ಲ. ಮಧ್ಯ ಮಾತಾಡಬೇಡಿರೆಂದು (ಡೋಂಟ್ ಡಿಸ್ಟರ್ಬ್) ಅವರು ಮಾಡಿದ ತಾಕೀತನ್ನು ಜೀರ್ಣಿಸಿಕೊಳ್ಳುವುದು ಪಾಟೀಲರಿಗೆ ಕಷ್ಟವಾಗಿತ್ತು. “ಎಲಾ ಇವನಾ, ಡಿಸಿಎಂ ಆದಾಕ್ಷಣ ಕೋಡು ಮೂಡಿತೇನು” ಎಂದು ಮನಸ್ಸಿನಲ್ಲಿ ಅಂದುಕೊಂಡಿರಬಹುದಾಗಿದ್ದ ಪಾಟೀಲರು ಸೇಡು ತೀರಿಸಿಕೊಳ್ಳಲು ಕಾದಿದ್ದ ಮುಹೂರ್ತ ಸುತ್ತೂರಿನಲ್ಲಿ ಎದುರಾಗಿತ್ತು.
ಸ್ವಾಮಿಗಳು ಮತ್ತು ಪಾಟೀಲರ ನಡುವೆ ನಡೆದ ಮಾತುಕತೆ ಏನೋ ಗೊತ್ತಿಲ್ಲ. ಆದರೆ ಅಲ್ಲಿ ಸೇರಿದ್ದ ಲಿಂಗಾಯತ ಸಮುದಾಯದ ಮುಖಂಡರಿಗೆ ಸ್ಥಾನ ವಂಚಿತ ಅವಮಾನವನ್ನು ನುಂಗಿಕೊಂಡು ಮೌನ ತಾಳುವುದು ಕಷ್ಟವಾಗಿತ್ತು. ಕಾಂಗ್ರೆಸ್ನಲ್ಲಿ ಲಿಂಗಾಯತ ಶಾಸಕರು 39 ಜನ, ಒಕ್ಕಲಿಗ ಶಾಸಕರು 31 ಜನ. ಅವರಿಗೆ ಡಿಸಿಎಂ ಪಟ್ಟ, ನಿಮಗೆ…? ಎಂಬ ಪ್ರಶ್ನೆಯ ಬೆನ್ನೇರಿ ಬಂದುದು ಸುಮ್ಮನೆ ಒಪ್ಪಿಕೊಳ್ಳಬಾರದೆಂಬ ಖಡಕ್ ಸಂದೇಶ. ಒಪ್ಪಿಕೊಳ್ಳದೇ ಇರುವ ಮಾರ್ಗ ಪಾಟೀಲರ ಮುಂದೆ ಇರಲಿಲ್ಲ. ಆ ಕ್ಷಣದಲ್ಲಿ ಅವರಿಗೆ ವರ ಪ್ರಸಾದ ರೂಪದಲ್ಲಿ ನೆನಪಿಗೆ ಬಂದಿದ್ದು ಕೆ.ಸಿ. ವೇಣುಗೋಪಾಲರು ಆಡಿದರೆಂದು ಅವರೇ ಹೇಳಿದ ಮಾತು. “ಬ್ರೇಕಿಂಗ್ ನ್ಯೂಸ್”ಗೆ ಮಾಧ್ಯಮದವರು ಕಾದಿದ್ದಕ್ಕೂ ಪಾಟೀಲರ ನೆನಪಿನಲ್ಲಿ ವೇಣುಗೋಪಾಲ್ ಬಂದುದಕ್ಕೂ ತಾಳೆಯಾಗಿತ್ತು. ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ ಕಾಂಗ್ರೆಸ್ ಪಕ್ಷ ಕೋಲಾಹಲದ ಮಡುವಾಗಿತ್ತು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮುಖ್ಯಮಂತ್ರಿಗಿರಿಗೆ ಡಿಕೆಶಿ ಪಟ್ಟು ಸಡಿಲಿಕೆಯ ಹಿಂದೆ ಏನೇನಿದೆ?
ಈ ಅಂಕಣ ಬರಹ ಸಿದ್ಧವಾಗುತ್ತಿದ್ದ ಗುರುವಾರ ಮಧ್ಯಾಹ್ನದವರೆಗೂ ಕೆ.ಸಿ. ವೇಣುಗೋಪಾಲರು ಹರಶಿವ ಎಂದಿಲ್ಲ. ಅವರ ಮೌನದ ಕಾರಣ ಸ್ಪಷ್ಟವಾಗಿಲ್ಲ. ಏಐಸಿಸಿ ಅಧ್ಯಕ್ಷ ಖರ್ಗೆಯವರೂ ಮಾತಾಡುತ್ತಿಲ್ಲ. ಪಕ್ಷದ ವರ್ಚಸ್ಸಿಗೆ ಇಷ್ಟೆಲ್ಲ ಹಾನಿಯಾಗುತ್ತಿದ್ದರೂ ಸೋನಿಯಾ ಗಾಂಧಿ, ರಾಹುಲ್ಗಾಂಧಿ ತುಟಿಪಿಟಿಕ್ ಎಂದಿಲ್ಲ. ಇದರರ್ಥ ಪಾಟೀಲರು ಹೇಳಿದ್ದರಲ್ಲಿ ತಪ್ಪಿಲ್ಲ ಎಂದಲ್ಲದೆ ಮತ್ತೇನೂ ಅಲ್ಲ. ಇದಕ್ಕೆ ಇನ್ನೊಂದು ಆಯಾಮವೂ ಇದೆ. ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕೆಂಬ ಷರತ್ತು ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನ, ಚತ್ತೀಸ್ಘಡದಲ್ಲೂ ಇತ್ತು. ಅದನ್ನು ಸಿಎಂ ಸ್ಥಾನಕ್ಕೆ ಬಂದ ಅಶೋಕ್ ಗೆಹ್ಲೋಟ್ ಮತ್ತು ಬಘೇಲರಿಬ್ಬರೂ ಮರೆತರು. ಹೈಕಮಾಂಡ್ ಆದೇಶವನ್ನು ಕಸದ ಬುಟ್ಟಿಗೆ ಎಸೆದು ಸವಾಲಾದರು. ಪಕ್ಷಕ್ಕೆ ಭಾರೀ ಮುಜುಗರ ತಂದರು. ಅದೇ ಸ್ಥಿತಿ ಕರ್ನಾಟಕದಲ್ಲೂ ಆಗಬಹುದಲ್ಲವೆ ಎಂದು ಡಿಸಿಎಂ ಸ್ಥಾನ ಒಪ್ಪಿಕೊಳ್ಳುವ ಮುನ್ನ ಡಿಕೆಶಿ ಕೇಳಿದ್ದರು. ಹಾಗೇನೂ ಇಲ್ಲ ಎಂಬ ಸೋನಿಯಾ ಮಾತನ್ನು ನಂಬಿದರೆ ಇಲ್ಲಿ ಪಾಟೀಲರು ಬಾಂಬ್ ಸಿಡಿಸಿದ್ದಾರೆ. ತನ್ನ ಅನುಮಾನ ಇಷ್ಟು ಬೇಗ ನಿಜವಾಯಿತೇ ಎಂಬ ಆತಂಕ ಡಿಕೆಶಿ ಬಾಯನ್ನು ಕಟ್ಟಿದೆ.
ಡಿಕೆಶಿ ಮತ್ತು ಅವರ ಸಂಸದ ಸಹೋದರ ಡಿ.ಕೆ. ಸುರೇಶ್ ಸಮಯಕ್ಕೆ ಕಾದಿದ್ದಾರೆ. ಸಂಪುಟ ವಿಸ್ತರಣೆ ಕಸರತ್ತು ನಡೆದಿರುವ ಈ ಸಮಯದಲ್ಲಿ ಭರ್ಜರಿ ಖಾತೆಗಳನ್ನು ಕೈವಶ ಮಾಡಿಕೊಂಡ ಬಳಿಕ ಮುಂದಿನ ಅಧ್ಯಾಯವಾಗಿ ಪಾಟೀಲರ ಹೇಳಿಕೆ ಮತ್ತು ಹೈಕಮಾಂಡ್ನ ಮೌನವನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ. ಡಿಕೆಶಿ ಸಿಎಂ ಆಗುತ್ತಾರೆಂದು ಅಖಂಡ ಬೆಂಬಲ ನೀಡಿದ ಒಕ್ಕಲಿಗ ಸಮುದಾಯಕ್ಕೆ ತಾಳ್ಮೆಯಿಂದಿರುವಂತೆ ಸಂದೇಶ ರವಾನೆಯಾಗಿದೆ. ನಗುವಿನ ಮುಖವಾಡ ಧರಿಸಿರುವ ಡಿಕೆಶಿ ಸರಬರ ಓಡಾಡುತ್ತಿದ್ದಾರೆ. ಪಾಟೀಲರ ಹೇಳಿಕೆ ಹೊರಬಿದ್ದಂದಿನಿಂದಲೂ ಖರ್ಗೆ, ವೇಣುಗೋಪಾಲರಾದಿಯಾಗಿ ಹೈಕಮಾಂಡ್ ಮುಖಂಡರು ಬೆಂಗಳೂರಿನಲ್ಲಿ ಕಾಣಿಸಿಕೊಂಡಿಲ್ಲ. ದಿನದ 24 ತಾಸೂ ಮಾಧ್ಯಮದವರಿಗಾಗಿ ಕಾಯುತ್ತಿದ್ದ ಮುಖಂಡರು ಸದ್ಯಕ್ಕೆ ತೆನಾಲಿ ರಾಮನಂತೆ ಮುಖಕ್ಕೆ ಮಡಿಕೆ ಕವುಚಿಕೊಂಡು ಅಡ್ಡಾಡುತ್ತಿದ್ದಾರೆನಿಸುತ್ತಿದೆ.
ಡಿಕೆಶಿ ಕ್ಯಾಂಪಿನ ಮುಖಂಡರೊಬ್ಬರು ಆಡಿದ ಮಾತನ್ನು ಕೇಳಿಸಿಕೊಂಡರೆ ಹೀಗೂ ಉಂಟೆ ಅನಿಸುತ್ತದೆ. ನಾನು ಕೇಳಿಸಿಕೊಂಡಿದ್ದನ್ನು ನೀವೂ ಓದಿ: ಸಂಪುಟ ರಚನೆಯನ್ನು ಇಡಿಯಾಗಿ ರಚಿಸುವುದರ ಪೌರೋಹಿತ್ಯ ವಹಿಸಬೇಕಿದ್ದ ಏಐಸಿಸಿ ಅಧ್ಯಕ್ಷ ಖರ್ಗೆಯವರು ತಮ್ಮ ಕುಟುಂಬದ ಬೇಕು ಬೇಡವೆಂಬ ಮಟ್ಟಕ್ಕೆ ಪಕ್ಷವನ್ನು ಇಳಿಸಿ ದೆಹಲಿಗೆ ಹೊರಟುಬಿಟ್ಟರು. ಅವರು ಮರೆಯದೆ ಮಾಡಿದ ಕೆಲಸವೆಂದರೆ ಸಂಪುಟದ ಮೊದಲ ಪಟ್ಟಿಯಲ್ಲಿ ತಮ್ಮ ಮಗ ಪ್ರಿಯಾಂಕ್ ಖರ್ಗೆ ಹೆಸರು ಸೇರುವಂತೆ ನೋಡಿಕೊಂಡಿದ್ದು. ಅಧ್ಯಕ್ಷರಾಗಿ ಅವರು ಮಾಡಿದ ಸಾರ್ಥಕ ಕೆಲಸ ಇದೊಂದೇ!
ಇದನ್ನೂ ಓದಿ: ಮೊಗಸಾಲೆ ಅಂಕಣ: ನಿನ್ನೆವರೆಗೂ ಮತದಾರರೇ ಗತಿ, ಇಂದು ದೇವರೇ ಗತಿ
ಅಂಕಣ
Raja Marga Column : ಸೆ. 27, ವಿಶ್ವ ಪ್ರವಾಸೋದ್ಯಮ ದಿನ; ನೀವು ಹೋಗಲೇಬೇಕಾದ ಭಾರತದ TOP 10 ತಾಣ
Raja Marga Column: ಸೆಪ್ಟೆಂಬರ್ 27 – ಇಂದು ವಿಶ್ವ ಪ್ರವಾಸೋದ್ಯಮ ದಿನ.
ಭಾರತದ ಟಾಪ್ ಟೆನ್ ಪ್ರವಾಸೀ ತಾಣಗಳ ನೋಟ ಇಲ್ಲಿದೆ. ಜೀವನದಲ್ಲಿ ಒಮ್ಮೆಯಾದರೂ ಸಂದರ್ಶನ ಮಾಡಬೇಕಾದ ಸ್ಥಳಗಳು ಇವು. ಯುರೋಪ್ ಮೀರಿಸುವ ಪ್ರಾಕೃತಿಕ ಸೌಂದರ್ಯ ನಮ್ಮದು.
ಭಾರತವು ಎಲ್ಲ ವಿಭಾಗದಲ್ಲಿ ಕೂಡ ವಿಶ್ವಗುರು ಆಗಿರುವ ಹಾಗೆ ಪ್ರಾಕೃತಿಕ ಸೌಂದರ್ಯದಲ್ಲಿ (Beauty of Nature) ಕೂಡ ಶ್ರೇಷ್ಠವೇ ಆಗಿದೆ. ಹುಡುಕುತ್ತ ಹೋದರೆ ಹೆಜ್ಜೆಗೆ ಒಂದರಂತೆ ಅಚ್ಚರಿಯ ಮತ್ತು ವಿಸ್ಮಯದ ತಾಣಗಳು ಕಾಲಿಗೆ ತೊಡರುತ್ತವೆ. ಇಂದು (ಸೆಪ್ಟೆಂಬರ್ 27) ವಿಶ್ವ ಪ್ರವಾಸೋದ್ಯಮ ದಿನದ (September 27 World Tourism day) ನೆಪದಲ್ಲಿ ಭಾರತದ ಟಾಪ್ ಟೆನ್ ಪ್ರವಾಸಿ ತಾಣಗಳನ್ನು (Top 10 Tourist spots of INDIA) ಸುತ್ತಾಡಿಕೊಂಡು ಬರೋಣ ಬನ್ನಿ (Raja Marga Column).
1. ಆಗ್ರಾ – ನೆನಪುಗಳ ಮೆರವಣಿಗೆ
ಭಾರತದಲ್ಲಿ ಅತೀ ಹೆಚ್ಚು ಪ್ರವಾಸಿಗಳು ಭೇಟಿ ನೀಡುವ ತಾಣ ಎಂದರೆ ತಾಜ್ ಮಹಲ್ (Taj Mahal). ಆಗ್ರಾದ ಹೃದಯ ಭಾಗದಲ್ಲಿ ಯಮುನಾ ನದಿಯ ದಡದಲ್ಲಿ ಇರುವ ಮೋಹಕ ವಾಸ್ತುಶಿಲ್ಪ ಇದು. ಅದರ ಐತಿಹಾಸಿಕ ಹಿನ್ನೆಲೆ ಏನೇ ಇದ್ದರೂ ಅದರ ಸೌಂದರ್ಯಕ್ಕೆ ಮಾರು ಹೋಗದವರು ಯಾರೂ ಇಲ್ಲ. ಸಂಪೂರ್ಣ ಅಮೃತಶಿಲೆಯ ಕಟ್ಟಡ ಇದು. ನಾಲ್ಕು ಕಡೆಯಿಂದ ನೋಡಿದರೂ ಒಂದೇ ರೀತಿ ಕಾಣುವ ಸೌಂದರ್ಯ. ಹುಣ್ಣಿಮೆ ರಾತ್ರಿಯಂದು ಇಲ್ಲಿ ಬಂದು ಕೂತರೆ ಹಿಂದೆ ಬರಲು ಮನಸ್ಸೇ ಆಗುವುದಿಲ್ಲ. ಅದಕ್ಕೆ ತಾಗಿ ಕೊಂಡಿರುವ ಆಗ್ರಾ ಕೋಟೆ, ಅಕ್ಬರ್ ಕಟ್ಟಿದ ಫತ್ತೇಪೂರ ಸಿಕ್ರಿ ನೋಡದೇ ಹಿಂದೆ ಬರುವ ಹಾಗೆ ಇಲ್ಲ. ಆಗ್ರಾ ಅಂದರೆ ನೆನಪುಗಳ ಮೆರವಣಿಗೆ.
2. ಗೋವಾ – ಬಿಳಿ ಮರಳಿನ ಬೀಚುಗಳೇ ಆಕರ್ಷಣೆ
ಗೋವಾದಲ್ಲಿ ಇರುವ 51 ಅತ್ಯದ್ಭುತ ಬೀಚುಗಳೇ ಪ್ರವಾಸಿಗಳ ಸ್ವರ್ಗಗಳು (White Beaches of Goa)! ತಾಳೆ ಮರದ ನೆರಳಿನಲ್ಲಿ ಮೈ ಚಾಚಿ ಮಲಗಿರುವ ಬಿಳಿ ಮರಳಿನ ಚಾದರಗಳು. ಕಲಂಗೂಟ್ ಬೀಚ್ ಅವುಗಳಲ್ಲಿ ನಿಜವಾಗಿಯು ಮೈ ಮರೆಸುತ್ತದೆ. ಸಾರಸ್ವತರ ಶ್ರೀಮಂತ ದೇವಸ್ಥಾನಗಳು, ಕೋಟೆಗಳು, ಪೋರ್ಚುಗೀಸರ ಆಳ್ವಿಕೆಯ ಅವಶೇಷಗಳು, ಬೆಸ್ತರ ಬಸ್ತಿಗಳು ಗೋವಾವನ್ನು ಆಕರ್ಷಣೆಯ ಕೇಂದ್ರವನ್ನಾಗಿ ಮಾಡಿವೆ. ಗೋವಾದಲ್ಲಿ ಪ್ರವಾಸೋದ್ಯಮವೇ ಪ್ರಮುಖ ಆದಾಯದ ಮೂಲ ಅಂದರೆ ಆ ರಾಜ್ಯದ ಶಕ್ತಿ ನಮಗೆ ಗೊತ್ತಾಗುತ್ತದೆ.
3. ಅಮೃತಸರ – ಸ್ವರ್ಣ ದೇಗುಲದ ಆಕರ್ಷಣೆ
ಪಂಜಾಬ್ ರಾಜ್ಯದ ಪ್ರವಾಸೀ ತಾಣಗಳಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ (Golden Temple of Amritsara) ಪ್ರಮುಖ ಆಕರ್ಷಣೆ ಆಗಿದೆ. 1577ರಲ್ಲಿ ಗುರು ರಾಮದಾಸ್ ಅವರಿಂದ ಸ್ಥಾಪನೆ ಆದ ಈ ದೇಗುಲವು ಹೊಳೆಯುವ ಸರೋವರದ ನಡುವೆ ಇದೆ. ಪಕ್ಕದಲ್ಲಿಯೇ ಇರುವ ಅಖಾಲ್ ತಕ್ತ್, ಮಾತಾ ಟೆಂಪಲ್, ಐತಿಹಾಸಿಕ ಪ್ರಾಮುಖ್ಯದ, ಬ್ರಿಟಿಷ್ ಅಧಿಕಾರಿ ಸಾವಿರಾರು ಭಾರತೀಯರನ್ನು ಕೊಂದು ಹಾಕಿದ ಜಲಿಯಾನ್ ವಾಲಾ ಭಾಗ್ ನೋಡಿ ಬಂದರೆ ಕಣ್ಣು ತುಂಬಿ ಬರುತ್ತದೆ ಮಾತ್ರವಲ್ಲ ಸಿಖ್ ಧರ್ಮದ ಶ್ರದ್ಧೆಯ ಸಂಕೇತವಾಗಿಯೂ ಕಂಡು ಬರುತ್ತದೆ.
4. ಶಿಮ್ಲಾ – ಹಿಮಾಲಯದ ಕ್ಯಾನ್ವಾಸ್
ಶಿಮ್ಲಾ ಹಿಮಾಚಲ ಪ್ರದೇಶದ ರಾಜಧಾನಿ ಮತ್ತು ಕೀರ್ತಿ ಪಡೆದ ಹಿಲ್ ಸ್ಟೇಷನ್ (Himalayan Hill Station Shimla). ಎಲ್ಲಿ ನಿಂತು ನೋಡಿದರೂ ಹಿಮಾಲಯದ ಆಹ್ಲಾದಕರ ದೃಶ್ಯ ಕಣ್ಣು ತುಂಬುತ್ತದೆ. ಬೀಸಿ ಬರುವ ಶೀತಲ ಗಾಳಿ ಮೈಯ್ಯನ್ನು ಚುಂಬಿಸುತ್ತಾ ಹೋಗುತ್ತದೆ. ಭೂಮಿಯ ನೆತ್ತಿಯ ಮೇಲೆ ನಿಂತ ಅನುಭೂತಿ ಮೂಡುವುದು ಖಂಡಿತ. ಶಿಮ್ಲಾ ಭೂಮಿಯ ಸೌಂದರ್ಯದ ಶಿಖರ ಎಂದರೆ ಅದರಲ್ಲಿ ಒಂದಕ್ಷರವೂ ಉತ್ಪ್ರೇಕ್ಷೆ ಇಲ್ಲ.
5. ಊಟಿ – ಇಂಚಿಂಚಲ್ಲಿಯೂ ಬ್ಯೂಟಿ
ತಮಿಳುನಾಡಿನ ಉದ್ದಕ್ಕೂ ಹಾದುಹೋಗುವ ಸಹ್ಯಾದ್ರಿ ಪರ್ವತ ಶ್ರೇಣಿಯ ಮಗ್ಗುಲಲ್ಲಿ ಮೊಗ್ಗಾಗಿ ಮಲಗಿರುವ ಉದಕ ಮಂಡಲ(ಊಟಿ) ನಿಜವಾಗಿ ಪ್ರವಾಸಿಗಳ ಸ್ವರ್ಗ (Beauty of Ooty). ಟೀ ತೋಟಗಳ ಉದ್ದಕ್ಕೂ ಹಸಿರು ಹಾಸು, ವಿಶಾಲವಾದ ಮೈದಾನಗಳು, ಕೇಂದ್ರ ಭಾಗದಲ್ಲಿ ಇರುವ ವಿಶಾಲವಾದ ಸರೋವರ, ಪ್ರಕೃತಿಯ ರಮಣೀಯ ಬೊಟಾನಿಕಲ್ ಗಾರ್ಡನ್, ಎತ್ತರಕ್ಕೆ ಬೆಳೆಯುವ ನೀಲಗಿರಿ ಮರಗಳು ಇವುಗಳು ಊಟಿಯ ಪ್ರಮುಖ ಆಕರ್ಷಣೆಗಳು. ಇಡೀ ವರ್ಷ ಒಂದಲ್ಲ ಒಂದು ಸಿನಿಮಾ ಶೂಟಿಂಗ್ ಸ್ಪಾಟ್ ಆಗಿರುವ ಊಟಿ ಪ್ರೇಮಿಗಳ ಹಾಟ್ ಸ್ಪಾಟ್ ಕೂಡ ಹೌದು.
6. ಅಲೆಪ್ಪಿ – ಮಲಬಾರದ ಕರಾವಳಿಯ ಪಚ್ಚೆ ಹವಳ
ಜಗತ್ತಿನ ಅತ್ಯಂತ ಸುಂದರವಾದ ಹತ್ತು ತಾಣಗಳಲ್ಲಿ ಆಲೆಪ್ಪಿ (Back waters of Alleppy) ಒಂದು ಎಂದರೆ ಅದು ಹೆಚ್ಚು ಸರಿ. ಬ್ಯಾಕ್ ವಾಟರಿನಲ್ಲಿ ವೈಭವದ ಬೋಟ್ ಹೌಸಿನಲ್ಲಿ ಇಡೀ ದಿನ ಕಳೆದರೆ ಅದು ಲೈಫ್ ಟೈಮ್ ಮೆಮೊರಿ ಆಗಬಲ್ಲದು. ಅಲೆಪ್ಪಿಯ ವಿಸ್ತಾರವಾದ ಬೀಚುಗಳು ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಅಲ್ಲಿರುವ ಆಯುರ್ವೇದಿಕ್ ರೆಸಾರ್ಟ್ಸ್, ಅಲ್ಲಿ ಇರುವ ಎಣ್ಣೆಯ ಮಸಾಜ್, ಸೂರ್ಯ ಸ್ನಾನ ನಿಮ್ಮನ್ನು ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ.
7. ಜೈಪುರ – ಖಗೋಳ ವಿಜ್ಞಾನದ ವಿಸ್ಮಯ
ಭಾರತದ ‘ಪಿಂಕ್ ಸಿಟಿ’ ಎಂಬ (Pink City Jaipur) ಕೀರ್ತಿಯು ಒಂದೆಡೆ ಆದರೆ ರಾಜಾ ಜಯಸಿಂಹನ ಖಗೋಳ ವಿಜ್ಞಾನದ ಸಂಕೇತವಾದ ಹವಾ ಮಹಲ್, ಸಿಟಿ ಪ್ಯಾಲೇಸ್, ಜಂತರ್ ಮಂತರ್ ಎಲ್ಲವೂ ಜೈಪುರದ ಚುಂಬಕ ಆಕರ್ಷಣೆಗಳು. ಅಮಿತಾಬ್ ಬಚ್ಚನ್ ನಿರೂಪಣೆ ಮಾಡಿದ ಅಂಬರ್ ಕೋಟೆಯ ದೃಶ್ಯಗಳು ನಮ್ಮನ್ನು ಹಿಂದೆ ಬರಲು ಬಿಡುವುದಿಲ್ಲ.
8. ಲಡಾಖ್ – ತಂಪು ತಂಪು ಸರೋವರಗಳ ಗಣಿ
ಜಮ್ಮು ಕಾಶ್ಮೀರಕ್ಕೆ ಹೋದವರು ಲಡಾಖ್ (Beauty of Ladakh) ನೋಡದೆ ಬಂದರೆ ಅದು ಖಾಲಿ ಖಾಲಿ. ತಂಪು ಗಾಳಿ ಬೀಸಿ ಬರುವ ಹಿಮ ಶಿಖರಗಳ ತೆಕ್ಕೆಯಲ್ಲಿ ಇರುವ ಸರೋವರಗಳನ್ನು ಸೀಳಿಕೊಂಡು ಹೋಗುವ ಬೋಟ್ ಪ್ರಯಾಣ ನಿಮಗೆ ಆನಂದದ ಶಿಖರದ ಅನುಭವ ಕೊಡದಿದ್ದರೆ ಮತ್ತೆ ಹೇಳಿ. ಲಡಾಖ್ ಅಂದರೆ ಹಿಮ ಪರ್ವತಗಳ ಶಿರೋಮಣಿ ಅಂದರೆ ಅದು ಉತ್ಪ್ರೇಕ್ಷೆ ಅಲ್ಲ. ಹಳದಿ ಮರಳ ದಿಬ್ಬಗಳು ಇಲ್ಲಿ ಹೆಚ್ಚುವರಿ ಆಕರ್ಷಣೆಗಳು.
9. ಮೈಸೂರು – ಚಾಮುಂಡಿ ಹರಸಿದ ಸೂರು
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಏನುಂಟು ಏನಿಲ್ಲ? 1399-1947ರವರೆಗೆ ಅದು ಮೈಸೂರು ಒಡೆಯರ ರಾಜಧಾನಿ ಆಗಿತ್ತು. ಅಲ್ಲಿ ರಾಜ ವೈಭವವು ಹೆಜ್ಜೆ ಹೆಜ್ಜೆಗೂ ಕಣ್ಣಿಗೂ ರಾಚುತ್ತದೆ. ಮೈಸೂರು ನಗರದ ನಡುವೆ ಇರುವ ಅಂಬಾ ವಿಲಾಸ ಅರಮನೆ (Mysore Palace) ಜಗತ್ತಿನ ಅತೀ ಶ್ರೀಮಂತ ಅರಮನೆ ಎಂದೇ ಕರೆಯಲ್ಪಡುತ್ತದೆ. ಚಾಮುಂಡಿ ಬೆಟ್ಟ, ದೊಡ್ಡ ಮೃಗಾಲಯ, ಲಲಿತ ಮಹಲ್ ಅರಮನೆ, ಬೃಂದಾವನ ಗಾರ್ಡನ್, ಸಂಗೀತ ಕಾರಂಜಿ ನಮ್ಮನ್ನು ಮೋಹಕವಾಗಿ ಸೆಳೆದು ಬಿಡುತ್ತವೆ. ಮೈಸೂರು ಕರ್ನಾಟಕದ ಹೆಮ್ಮೆ ಎಂದರೆ ಅದು ನಿಜವಾದ ಮಾತು.
10. ಡಾರ್ಜಿಲಿಂಗ್ – ಹಿಮಾಲಯದ ಡಾರ್ಲಿಂಗ್
ಹಿಮಾಲಯದ ತಪ್ಪಲಿನಲ್ಲಿ ಚಳಿ ಗಾಳಿಯನ್ನು ಹೊದ್ದು ಮಲಗಿದ ವೈಭವದ ನಗರ ಡಾರ್ಜಿಲಿಂಗ್ (Darjiling). ಎಲ್ಲಿ ನಿಂತು ನೋಡಿದರೂ ಹಿಮಾಲಯದ ಎತ್ತರದ ಶಿಖರ ಕಾಂಚನ ಜಂಗಾ ಕಣ್ಣಿಗೆ ತಂಪು ಅನುಭವ ನೀಡುತ್ತದೆ. ಸಮುದ್ರ ಮಟ್ಟದಿಂದ 2050 ಮೀ. ಎತ್ತರ ಇರುವ ಈ ಬೆಟ್ಟದಾಣದ ಉದ್ದಕ್ಕೂ ಹಸಿರು ಚೆಲ್ಲುವ ಟೀ ತೋಟಗಳ ಸಾಲು, ಸ್ವರ್ಗಸದೃಶವಾದ ಹಿಮಾಲಯದ ಶಿಖರಗಳು ಮರೆಯಾಗುವುದೆ ಇಲ್ಲ. ಅಲ್ಲಿರುವ ಆಟಿಕೆ ರೈಲಿನಲ್ಲಿ ನಗರವನ್ನು ಒಂದು ಸುತ್ತು ಬಂದರೆ ಡಾರ್ಜಿಲಿಂಗ್ ನಮಗೆ ಡಾರ್ಲಿಂಗ್ ಅನುಭವ ನೀಡುತ್ತದೆ.
ಇದನ್ನೂ ಓದಿ: Raja Marga Column : ನಿಮ್ಮ ಮಕ್ಕಳನ್ನು ಸೂಪರ್ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!
ಭರತ ವಾಕ್ಯ
ಈ ತಾಣಗಳ ಒಂದು ಪ್ರವಾಸ ಮುಗಿಸಿಕೊಂಡು ಬಂದು ನನಗೆ ಹೇಳಿ. ನೀವು ಭಾರತವನ್ನು ಮೊದಲಿಗಿಂತ ಹೆಚ್ಚು ಪ್ರೀತಿ ಮಾಡಲು ನಿಮಗೆ ಸಾಧ್ಯವಾಗದೆ ಹೋದರೆ ನಾನು ಮತ್ತೆ ಲೇಖನ ಬರೆಯುವುದಿಲ್ಲ!!
ಅಂಕಣ
ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!
ಯಾಕಷ್ಟು ಆಸಕ್ತಿ ನಮಗೆ ಪ್ರವಾಸ ಹೋಗುವುದೆಂದರೆ? ಪ್ರವಾಸ, ಪ್ರಯಾಣಗಳಿಗಾಗಿ ಅಷ್ಟೊಂದು ಖರ್ಚು ಮಾಡುವುದು ನಮಗೆ ಹೇಗೆ ಹೊರೆ ಎನಿಸುವುದಿಲ್ಲ? ಪ್ರವಾಸದ ಅನುಭವದ ಮೂಲಕ ಏನನ್ನು ನಿರೀಕ್ಷಿಸುತ್ತೇವೆ? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹೋಗುವ ತವಕ ಹೀಗೆ ವ್ಯಕ್ತವಾಗುತ್ತದೆಯೇ?
ಈ ಅಂಕಣವನ್ನು ಇಲ್ಲಿ ಆಲಿಸಿ:
ಟ್ರಾಫಿಕ್ ಸಿಗ್ನಲ್ನಲ್ಲಿದ್ದೆ. ನಾ ಪ್ರಯಾಣಿಸುತ್ತಿದ್ದ ಆಟೋದ ಚಾಲಕ ಸ್ವಲ್ಪ ಸಿಡಿಮಿಡಿ ಮಾಡುತ್ತಿದ್ದ. ಹೇಳುವಂಥ ಟ್ರಾಫಿಕ್ ಇಲ್ಲದ ನಮ್ಮೂರಲ್ಲಿ ಹಬ್ಬದ ವಾರಾಂತ್ಯಗಳು (weekend with festival) ಬಂದರೆ ಇದ್ದಕ್ಕಿದ್ದಂತೆ ರಸ್ತೆಗಳು ತುಂಬಿಬಿಡುತ್ತವೆ. ಹೆಚ್ಚಿನ ಸಾರಿ ಯಾವ್ಯಾವುದೋ ಊರು, ರಾಜ್ಯಗಳ ನೋಂದಣಿ ಹೊಂದಿರುವ ಕಾರುಗಳದ್ದೇ ಕಾರುಭಾರು. ಅದರಲ್ಲೂ ಊರಿನ ನಡುವೆ ಹಾದುಹೋಗುವ ಹೆದ್ದಾರಿಯ ಸಿಗ್ನಲ್ಗಳು ಕಳೆಯುವಾಗ ನಾಲ್ಕಾರು ಬಾರಿ ಕೆಂಪುದೀಪ ಬರಬೇಕು. ಆನಂತರವೇ ನಮ್ಮ ಪಾಲಿಗೆ ಮುಂದೆ ಹೋಗಲು ಗ್ರೀನ್ ಸಿಗ್ನಲ್ ಸಿಗುವುದು. ಅಂದೂ ಸಹ ಗಣೇಶ ಚತುರ್ಥಿಯ (Ganesh chaturthi) ವಾರಾಂತ್ಯವಾದ್ದರಿಂದ ಸಿಗ್ನಲ್ನಲ್ಲಿ ಸಿಲುಕಿ ಆಟೋದವ ಚಡಪಡಿಸುತ್ತಿದ್ದ. ʻಇನ್ನೂ ದಸರಾ ಬರ್ಲಿ, ಬೇರೆ ಊರ್ಗೊಳಿಂದ ಜನ ಯದ್ವಾತದ್ವಾ ಬತ್ತರೆ. ರಸ್ತೆ ಮೇಲೆ ಗಾಡಿ ಓಡ್ಸದೇ ಹಿಂಸೆʼ ಎಂದು ತನ್ನ ಕಷ್ಟ ಹೇಳಿಕೊಳ್ಳುತ್ತಿದ್ದ.
ಆತನ ಮಾತು ಸುಳ್ಳಲ್ಲ ಬಿಡಿ. ರಜೆ ಬಂತೆಂದರೆ ಎಲ್ಲಿಗೆ ಪ್ರವಾಸ (travel plan) ಹೊರಡುವುದೆಂದೇ ಲೆಕ್ಕ ಹಾಕುತ್ತೇವೆ. ಕೆಲವು ದೇಶಗಳಲ್ಲಿ ವರ್ಷದ ಆರಂಭಕ್ಕೆ ಮಾಡುವ ಮೊದಲ ಕೆಲಸವೆಂದರೆ ಈ ವರ್ಷ ಯಾವ್ಯಾವ ರಜೆಯಲ್ಲಿ ಎಲ್ಲೆಲ್ಲಿ ಪ್ರವಾಸ ಮಾಡುವುದು ಎಂಬ ತಿರುಗಾಟದ ನಿಶ್ಚಯ. ಎಷ್ಟೊ ತಿಂಗಳ ಮೊದಲು ವಿಮಾನ, ಹೊಟೇಲ್ಗಳನ್ನೂ ಕಾಯ್ದಿರಿಸಿಬಿಡುತ್ತಾರೆ ಇಂಥವರು. ಅದಕ್ಕಾಗಿಯೇ ಮೀಸಲಾದ ಟ್ರಾವೆಲ್ ವೆಬ್ಸೈಟ್ಗಳು (Travel website) ಸಿಕ್ಕಾಪಟ್ಟೆ ಇವೆ. ಈ ಪೈಕಿ ಯಾವುದರಲ್ಲಿ ಕಡಿಮೆ ಬೆಲೆಗೆ ವಿಮಾನ, ಕಾರು, ಹೊಟೇಲ್ ಇತ್ಯಾದಿಗಳ ಬುಕಿಂಗ್ ಲಭ್ಯವಿದೆ ಎಂಬುದನ್ನು ಅಳೆದು- ತೂಗಿ ಬದುಕುತ್ತಿರುವ ವೆಬ್ಸೈಟ್ಗಳಿಗೆ ಬರವಿಲ್ಲ. ಅಂದರೆ ಅಷ್ಟೊಂದು ಉತ್ಸಾಹದಿಂದ ನಾವೆಲ್ಲ ಪ್ರವಾಸ ಹೊರಡುತ್ತೇವೆ ಎಂದರ್ಥವಲ್ಲವೇ?
ಯಾಕಷ್ಟು ಆಸಕ್ತಿ ನಮಗೆ ಪ್ರವಾಸ ಹೋಗುವುದೆಂದರೆ? ಪ್ರವಾಸ, ಪ್ರಯಾಣಗಳಿಗಾಗಿ ಅಷ್ಟೊಂದು ಖರ್ಚು ಮಾಡುವುದು ನಮಗೆ ಹೇಗೆ ಹೊರೆ ಎನಿಸುವುದಿಲ್ಲ? ಪ್ರವಾಸದ ಅನುಭವದ ಮೂಲಕ ಏನನ್ನು ನಿರೀಕ್ಷಿಸುತ್ತೇವೆ? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹೋಗುವ ತವಕ ಹೀಗೆ ವ್ಯಕ್ತವಾಗುತ್ತದೆಯೇ? ಹೊಸದೇನನ್ನೋ ಹುಡುಕುವ ತುಡಿತವೇ? ನಂನಮ್ಮ ಆಸಕ್ತಿಗಳನ್ನು ಪೋಷಿಸಿಕೊಳ್ಳುವ ದಾರಿಗಳಲ್ಲಿ ಇದೂ ಒಂದೇ? ಒಂಟಿಯಾಗಿ, ಜಂಟಿಯಾಗಿ, ಗುಂಪಿನಲ್ಲಿ- ಹೇಗೇ ಪ್ರವಾಸ ಹೋದರೂ ಬಂದಿದ್ದಕ್ಕೆಲ್ಲಾ ಹೊಂದಿಕೊಳ್ಳುವ ನಾವು, ಉಳಿದಂತೆ ಬದುಕಿನಲ್ಲಿ ಸಣ್ಣ ಹೊಂದಾಣಿಕೆಗೂ ಸಿಡಿಮಿಡಿ ಮಾಡುತ್ತೇವಲ್ಲ, ಏನಿದರರ್ಥ? ಹಾಗಾದರೆ ಕೋಶ ಓದುವುದಕ್ಕಿಂತ ದೇಶ ಸುತ್ತುವುದೇ ಸೂಕ್ತವೇ?
ಪ್ರವಾಸಕ್ಕೆ ಸುದೀರ್ಘ ಇತಿಹಾಸವಿದೆ. ಭಾರತಕ್ಕೆ ಬಂದ ಪ್ರವಾಸಿಗರ ಚರಿತ್ರೆ ಪ್ರಾರಂಭವಾಗುವುದು ಕ್ರಿಸ್ತ ಪೂರ್ವದಲ್ಲಿ. ಗ್ರೀಕ್ ದೊರೆ ಸೆಲ್ಯೂಕಸ್ ನಿಕೇಟರ್ನ ರಾಯಭಾರಿ ಮೆಗಾಸ್ತನೀಸ್ನು ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಭೇಟಿ ನೀಡಿದ್ದ. ನಂತರ ಚಂದ್ರಗುಪ್ತನ ಮಗ ಬಿಂದುಸಾರನ ಕಾಲದಲ್ಲಿ ಡಿಮಾಕಸ್, ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ ವಿಕ್ರಮಾದಿತ್ಯನ ಕಾಲದಲ್ಲಿ ಫಾಹಿಯಾನ್, ಹರ್ಷವರ್ಧನನ ಕಾಲದಲ್ಲಿ ಹ್ಯೂಯೆನ್ ತ್ಸಾಂಗ್… ಹೀಗೆ ಅರಬ್, ಪರ್ಷಿಯಾ, ಗ್ರೀಸ್, ಪೋರ್ಚುಗಲ್ ಮುಂತಾದ ಹಲವಾರು ದೇಶಗಳ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದರು. ಭಾರತಕ್ಕೆ ಬರುವುದಕ್ಕೆ ಪ್ರತಿಯೊಬ್ಬರಿಗೂ ಅವರವರದ್ದೇ ಕಾರಣಗಳಿದ್ದರೂ, ಅವರು ತಮ್ಮ ಭಾರತ ಭೇಟಿಯನ್ನು ವರ್ಣಿಸಿದ ಪುಸ್ತಕಗಳಿಂದು ಆ ಕಾಲಘಟ್ಟದ ಚಾರಿತ್ರಿಕ ದಾಖಲೆಗಳಾಗಿ ಮಹತ್ವ ಪಡೆದಿವೆ. ವ್ಯಾಪಾರದ ನೆವದಲ್ಲಿ ಭಾರತಕ್ಕೆ ಬಂದವರು ಮಾಡಿದ ಅನಾಹುತಗಳನ್ನಂತೂ ಮರೆಯಲೇ ಸಾಧ್ಯವಿಲ್ಲ.
ಇವೆಲ್ಲಾ ಯಾರಾರೋ ಪ್ರವಾಸಿಗರ ಮಾತಾಯಿತು. ನಮ್ಮದೂಂತ ಒಂದಿಷ್ಟು ಅನುಭವಗಳು ಇರಬೇಡವೇ? ಮಕ್ಕಳಿದ್ದಾಗ ಹೆತ್ತವರ ಮಡಿಲಲ್ಲಿ ಕೂತು ಲೋಕ ನೋಡಿದ್ದು ಬಿಟ್ಟರೆ, ನಮ್ಮದೇ ಅನುಭವಗಳು ಬಿಚ್ಚಿಕೊಳ್ಳುವುದು ಸಾಮಾನ್ಯವಾಗಿ ಶಾಲೆಯ ಪ್ರವಾಸದ ದಿನಗಳಲ್ಲಿ. ಶಾಲೆಯ ಪ್ರವಾಸವೆಂದರೆ ಅಂದಿನ ಕಾಲದ ಕೆಂಪು ಬಸ್ಸಿನ ಸವಾರಿ. ಡಿಸೆಂಬರ್ ಚಳಿಯಲ್ಲಿ ನಡುಗುತ್ತ ಬೆಳಗ್ಗೆ ಬೇಗ ಆರಂಭವಾಗುತ್ತಿದ್ದ ಬಸ್ ಪ್ರಯಾಣ, ಕಿಟಕಿ ಪಕ್ಕದ ಜಾಗಕ್ಕೆ ಜಗಳಾಟ, ಪ್ರಯಾಣದ ಮೋಜು-ಮಸ್ತಿ, ಜಗಳದಲ್ಲಿ ಅಂತ್ಯವಾಗುತ್ತಿದ್ದ ಅಂತ್ಯಾಕ್ಷರಿ, ಇಂಥ ಜಗಳವನ್ನೆಲ್ಲಾ ಮರೆಸುತ್ತಿದ್ದ ಗುಬ್ಬಿ ಎಂಜಲಿನ ತಿನಿಸುಗಳು, ಬಿಸಿಬೇಳೆಭಾತ್-ಮೊಸರನ್ನದ ಬುತ್ತಿಯೂಟ, ಇವೆಲ್ಲ ಮುಗಿದು ದಿನವಿಡೀ ತಿರುಗಿ ಸುಸ್ತಾಗಿ ರಾತ್ರಿ ಎನ್ನುವಾಗ ಒಬ್ಬರ ಮೇಲೊಬ್ಬರು ಒರಗಿ ಬಿದ್ದಾಗಿರುತ್ತಿತ್ತು. ನಡುರಾತ್ರಿಗೆ ಮನೆ ಸೇರುವಷ್ಟರಲ್ಲಿ ನಿದ್ದೆಗಣ್ಣಲ್ಲೇ ನಡೆಯುತ್ತಿದ್ದೇವೆ ಎಂಬ ಭಾವ ಬರುತ್ತಿತ್ತು. ಮಾರನೇ ದಿನಕ್ಕೆ ಒಂದಿಷ್ಟು ಮಕ್ಕಳಿಗೆ ಕೈನೋವು- ಕಾಲು ನೋವು, ಥಂಡಿ, ಕೆಮ್ಮು, ಜ್ವರ ಬಂದರೆ ಪ್ರವಾಸದ ಅನುಭವ ಪೂರ್ಣಗೊಂಡಂತೆ.
ಕಾಲೇಜಿಗೆ ಬರುತ್ತಿದ್ದಂತೆ ಈ ಅನುಭವಗಳು ಇನ್ನಷ್ಟು ವಿಸ್ತಾರವಾಗುತ್ತಿದ್ದವು. ವಾರ್ಷಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ಸಾಂಸ್ಕೃತಿಕ ವಿನಿಮಯ ಮುಂತಾದ ನಾನಾ ಹೆಸರಿನ ಪ್ರವಾಸಗಳು ಹಲವಾರು ದಿನಗಳ ಮಟ್ಟಿಗೆ ಇರುತ್ತಿದ್ದವು. ಶಾಲೆಯ ಮುಗ್ಧ ಜಗತ್ತಿನ ಬದಲಿಗೆ ಕಾಲೇಜಿನಲ್ಲಿ ಕಾಣುತ್ತಿದ್ದ ರಂಗಿನ ಜಗತ್ತು ಈ ಪ್ರವಾಸಗಳ ಮೇಲೂ ಪರಿಣಾಮ ಬೀರುತ್ತಿತ್ತಲ್ಲ. ಆದರೆ ತರಗತಿಯಲ್ಲಿನ ಸ್ಪರ್ಧೆ, ಮತ್ಸರ, ಜಗಳ, ಮುನಿಸು ಮುಂತಾದವೆಲ್ಲಾ ಒಂದಿಷ್ಟು ಹಿಂದಾಗಿ ಸ್ನೇಹಿತರು, ಗೆಳೆತನ, ಆತ್ಮೀಯತೆ, ಅಲ್ಲೊಂದಿಲ್ಲೊಂದು ಪ್ರೀತಿ- ಇಂಥವೆಲ್ಲಾ ಗರಿಗೆದರುವುದು ಪ್ರವಾಸಗಳಲ್ಲೇ. ಶಾಖಾಹಾರಿ ಎನಿಸಿಕೊಂಡವರು ಚಿಕನ್ ಜಗಿಯುವುದು, ಗೌರಮ್ಮನಂತಿದ್ದವರು ಮಿನಿ ಹಾಕುವುದು, ʻಗಾಂಧಿʼ ಎಂಬ ಬಿರುದಾಂಕಿತರು ಅಮಲ್ದಾರರಾಗುವುದು- ಈ ರೀತಿಯ ಅಚ್ಚರಿಗಳೆಲ್ಲ ಸಂಭವಿಸುವುದಕ್ಕೆ ಇಂಥ ಸಂದರ್ಭಗಳೇ ಬೇಕು. ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ನೆಪದಲ್ಲಿ ಕನ್ನಡ ಓದುಗರ ಜ್ಞಾನದ ಮಟ್ಟವನ್ನೇ ಏರಿಸಿದ ಅದ್ಭುತ ಕೃತಿ ʻಹಸಿರುಹೊನ್ನುʼನ್ನು ಇಲ್ಲಿ ನೆನಪಿಸಿಕೊಳ್ಳದಿದ್ದರೆ ಹೇಗೆ? ಈ ಕೃತಿಯ ಲೇಖಕ ಬಿ.ಜಿ.ಎಲ್. ಸ್ವಾಮಿ ಅವರ ಹಲವಾರು ದಶಕಗಳ ಹಿಂದಿನ ಶೈಕ್ಷಣಿಕ ಪ್ರವಾಸದ ವಿವರಣೆಗಳು ಇಂದಿಗೂ ನಗೆಯುಕ್ಕಿಸುತ್ತವೆ.
ಮಕ್ಕಳ ಕಥೆಗಳಲ್ಲಿ, ಗೊತ್ತಿಲ್ಲದ ಅನೂಹ್ಯ ಲೋಕಕ್ಕೆ ಕರೆದೊಯ್ಯುವ ಸರಣಿಗಳು ಎಷ್ಟೊಂದು ಹುಚ್ಚು ಹಿಡಿಸಿದ್ದವಲ್ಲ. ಗಲಿವರನ ಸಾಹಸ ಯಾತ್ರೆ, ಮ್ಯಾಜಿಕ್ ಟ್ರೀ ಹೌಸ್, ಫೇಮಸ್ ಫೈವ್ ಮುಂತಾದ ಸರಣಿಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಾ ಏನೇನೋ ಸಾಹಸ ಮಾಡುವ ಮಕ್ಕಳ ವಿವರಗಳು ಎಳೆಯ ಮನಸ್ಸುಗಳ ತುಂಬಾ ಬಣ್ಣದ ಚಿತ್ತಾರ ಮೂಡಿಸುತ್ತಿರಲಿಲ್ಲವೇ. ಲೋಕ ಸುತ್ತುತ್ತಲೇ ಕಥೆ ಹೇಳುತ್ತಿದ್ದ ಪೂರ್ಣಚಂದ್ರ ತೇಜಸ್ವಿ (Purnachandra Tejaswi) ಅವರ ಸಾಹಿತ್ಯವನ್ನು ಎದೆಗವಚಿಕೊಳ್ಳದೇ ಇರುವವರು ಯಾರು? ಭಾರತಕ್ಕೆ ಮರಳಿದ ಆರಂಭದ ದಿನಗಳಲ್ಲಿ ದೇಶದ ಉದ್ದಗಲ ಸಂಚರಿಸಿದ್ದರಲ್ಲ ಗಾಂಧೀಜಿ… ಪ್ರವಾಸದ ಹರವು ವಿಸ್ತರಿಸಿದಂತೆ, ಅರಿವೂ ವಿಸ್ತರಿಸುತ್ತದೆ ಎಂದರ್ಥವೇ?
ಪ್ರವಾಸಗಳೆಂದರೆ ಎಲ್ಲವೂ ಒಂದೇ ಅಲ್ಲ; ನಾನಾ ಬಗೆಯುಂಟು. ಕೃಷಿ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಆರೋಗ್ಯ- ಸಂಬಂಧೀ ಪ್ರವಾಸಗಳು, ಆಹಾರ ಸವಿಯಲೆಂದು, ಪರಂಪರೆಯ ದರ್ಶನಕ್ಕೆ, ಧಾರ್ಮಿಕ ಕಾರಣಗಳಿಗಾಗಿ- ಹೀಗೆ ಬಹಳಷ್ಟು ಇವೆ. ಒಂಟಿಯಾಗಿ ಲೋಕ ಸುತ್ತುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದಂತೆಯೇ, ಸೈಕಲ್, ಬೈಕ್ಗಳ ಮೇಲೆ ವಿಶ್ವ ಪರ್ಯಟನೆ (world tour) ಮಾಡುವ ಉಮೇದುವಾರರ ಬಳಗ ಬೆಳೆದಿದೆ. ತೀರ್ಥಯಾತ್ರೆಯೆಂದರೆ ತಿರುಗಿಬಾರದ ಯಾತ್ರೆ ಎಂದೇ ಹೇಳಲಾಗುತ್ತಿದ್ದ ಕಾಶಿ- ರಾಮೇಶ್ವರದಂಥ ಯಾತ್ರೆಗಳು ಈಗ ಪಕ್ಕದ ಮನೆಗೆ ಹೋದಷ್ಟೇ ಸುಲಭವಾಗಿವೆ. ತಿರುಗಾಟದ ಕಾರಣ ಏನೇ ಇರಲಿ, ಪ್ರವಾಸದ ಪ್ರಯಾಸ, ಪ್ರಹಸನ ಇತ್ಯಾದಿ ಯಾವುದಕ್ಕೂ ಜಗ್ಗದೆ ಬ್ಯಾಕ್ಪ್ಯಾಕ್ ಬೆನ್ನಿಗೇರಿಸುವವರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಿರುವುದಂತೂ ನಿಜ.
ಇದನ್ನೂ ಓದಿ: Dashamukha Column: ದಶಮುಖ ಅಂಕಣ: ಅಗಲುವಿಕೆಯೆಂಬ ಅಳು-ನಗುವಿನ ರಸಪಾಕ
ಪ್ರವಾಸದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಸಾಹಿತ್ಯಗಳು ಯಾವುದೇ ಭಾಷೆಯ ದೊಡ್ಡ ಆಸ್ತಿ. ಕನ್ನಡದಲ್ಲಿ ಪ್ರವಾಸ ಸಾಹಿತ್ಯಕ್ಕೆ ದೀರ್ಘ ಇತಿಹಾಸವೇ ಇದೆ. ೧೮೯೦ರಲ್ಲಿ ಪ್ರಕಟವಾದ, ಕರ್ಕಿ ವೆಂಕಟರಮಣ ಶಾಸ್ತ್ರಿ ಅವರ ʻದಕ್ಷಿಣ ಭಾರತ ಯಾತ್ರೆʼ ಎಂಬ ಪ್ರವಾಸ ಗ್ರಂಥ ಈ ನಿಟ್ಟಿನಲ್ಲಿ ನಾಂದಿ ಹಾಡಿರಬಹುದು. ವಿ. ಸೀತಾರಾಮಶಾಸ್ತ್ರಿ ಅವರ ʻಪಂಪಾಯಾತ್ರೆʼ, ವಿ.ಕೃ. ಗೋಕಾಕರ ʻಸಮುದ್ರದೀಚೆಯಿಂದʼ, ಶಿವರಾಮ ಕಾರಂತರ ʻಅಪೂರ್ವ ಪಶ್ಚಿಮʼ, ದಿನಕರ ದೇಸಾಯಿಯವರ ʻನಾ ಕಂಡ ಪಡುವಣʼ, ಬಿ. ಜಿ. ಎಲ್. ಸ್ವಾಮಿ ಅವರ ʻಅಮೆರಿಕೆಯಲ್ಲಿ ನಾನುʼ, ಶ್ರೀರಂಗ ಅವರ ʻಶ್ರೀರಂಗಯಾತ್ರೆʼ ಎ. ಎನ್. ಮೂರ್ತಿರಾಯರ ʻಅಪರವಯಸ್ಕನ ಅಮೆರಿಕಾ ಯಾತ್ರೆʼ, ಗೊರೂರು ರಾಮಸ್ವಾಮಿ ಅಯ್ಯಂಗಾರರ ʻಅಮೆರಿಕಾದಲ್ಲಿ ಗೊರೂರುʼ- ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಕುರಿತ ಪುಸ್ತಕ ಮತ್ತು ಬಿಡಿ ಲೇಖನಗಳನ್ನು ಸೇರಿಸಿದರೆ- ಲೆಕ್ಕ ಇಡುವುದಕ್ಕೇ ಸಾಧ್ಯವಿಲ್ಲದಷ್ಟಿದೆ ಪ್ರವಾಸ ಸಾಹಿತ್ಯ.
ಇವೆಲ್ಲಾ ಗದ್ಯ ಸಾಹಿತ್ಯದ ಮಾತಾಯಿತು. ಈ ಬಗ್ಗೆ ಮುದ ನೀಡುವಂಥ ಪದ್ಯಗಳೂ ದೊರೆಯಬಹುದು. ಪು.ತಿ.ನ ಅವರ ಪಯಣಿಗರ ಹಾಡನ್ನು ಮರೆಯಲಾಗದು. “ಗುಡಿಯಾಚೆ ಗಡಿಯಾಚೆ ಗಿಡದಾಚೆಗೆ/ ಹೋಗೋಣ ಬನ್ನಿರೋ ಹೊಸನಾಡಿಗೆ/ ಹೊಚ್ಚಹೊಸ ನೋಟಕ್ಕೆ ಅಚ್ಚ ಬಾಳಾಟಕ್ಕೆ/ ನೆಚ್ಚುಗೆಯ ಕೆಳೆಯರೇ ಹೊಸ ನಾಡಿಗೆ/ … ಒಂದು ಯಾದವಗಿರಿ ನಾಳೆ ಹಳೆಬೀಡು/ ಮುಂದೆ ಜಗದಚ್ಚರಿ ಗೊಮ್ಮಟನ ಮೇಡು/ ಕಡಲು ಕರೆಯಲು ಹಿರಿಯ ಕಮರಿಯನೆ ನೆಗೆವ/ ಪ್ರಣಯ ರುದ್ರೆಯ ಕಂಡು ಸೋಜಿಗವ ಪಡುವ” – ಹೀಗೆ ಕೂತಲ್ಲೇ ಬಹಳಷ್ಟು ಕಂಡರಿಸುವ ಕಾಣ್ಕೆ ಈ ಸಾಲುಗಳಿಗಿವೆ.
ಅಂದಹಾಗೆ, ನಾಳೆ ವಿಶ್ವ ಪ್ರವಾಸೋದ್ಯಮ ದಿನ (world tourism day). ಆ ನೆವದಲ್ಲಿ ಕೂತಲ್ಲೇ ಲೋಕ ಸುತ್ತಿದ್ದಾಯ್ತು. ಇದರಿಂದ ತಿರುಗಾಟದ ಉತ್ಸಾಹ ಬಂದರೆ, ತಡ ಮಾಡಬೇಡಿ; ಏಳಿ… ಹೊರಡಿ!
ಇದನ್ನೂ ಓದಿ: ದಶಮುಖ ಅಂಕಣ: ತರ್ಕ ಮೀರಿದ ಭಾವಗಳ ಆಪ್ತಗೊಳಿಸುವುದೇ ಹಬ್ಬ!
ಅಂಕಣ
Raja Marga Column : ನಿಮ್ಮ ಮಕ್ಕಳನ್ನು ಸೂಪರ್ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!
Raja Marga Column : ಟಿವಿ ವಾಹಿನಿಗಳ ಮಕ್ಕಳ ರಿಯಾಲಿಟಿ ಶೋಗಳಿಗೆ ಸ್ವಲ್ಪ ಬ್ರೇಕ್ ಬೇಕಿದೆ! ಯಾಕೆಂದರೆ ಅವು ಮಕ್ಕಳ ಬಾಲ್ಯವನ್ನು ಕಸಿಯುತ್ತಿವೆ. ದುಡ್ಡಿನ ದಂಧೆಯಾಗುತ್ತಿವೆ. ಈ ಬಗ್ಗೆ ಎಚ್ಚರವಿರಲಿ.
ಪ್ರಣವ್ ಧನವಾಡೇ : ಈ ಹೆಸರನ್ನು ಎಲ್ಲೋ ಕೇಳಿದ ನೆನಪು ನಿಮಗಿದೆಯಾ?
ಹೌದು! 2016ರಲ್ಲಿ ಮುಂಬೈಯ ಈ 16 ವರ್ಷದ ಹುಡುಗ (Pranav Dhanawade) ಒಂದು ಕ್ಲಾಸ್ ಒನ್ ಕ್ರಿಕೆಟ್ ಪಂದ್ಯದಲ್ಲಿ ಬರೋಬ್ಬರಿ 1000+ ರನ್ ಬಾರಿಸಿ ಮಿಂಚಿದ್ದ! ಅವನಿಗೆ ಆ ದಿನಗಳಲ್ಲಿ ಜಾಗತಿಕ ಮಟ್ಟದ ಪ್ರಚಾರ ಸಿಕ್ಕಿತ್ತು. ಸಚಿನ್ ತೆಂಡುಲ್ಕರ್ (Sachin Tendulkar) ಜೊತೆಗೆ ಆತನ ಭರ್ಜರಿ ಹೋಲಿಕೆಯು ಕೂಡ ನಡೆಯಿತು.ನೂರಾರು ಸನ್ಮಾನಗಳು ಮತ್ತು ನಗದು ಬಹುಮಾನಗಳು ಆತನಿಗೆ ದೊರೆತವು!
ಆದರೆ ಅವನು ಅದೇ ವೇಗದಲ್ಲಿ ಮುಂದೆ ಹೋಗಿರುತ್ತಿದ್ದರೆ ಅವನಿಗೆ ಈಗ 23 ವರ್ಷ ಆಗಿರಬೇಕಿತ್ತು! ಅವನು ಕನಿಷ್ಠ ಪಕ್ಷ ರಣಜಿ ಪಂದ್ಯ ಆದರೂ ಆಡಬೇಕಿತ್ತು! ಆದರೆ ಅವನು ಈಗ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎನ್ನುವುದು ನಮಗೆ ಯಾರಿಗೂ ಗೊತ್ತಿಲ್ಲ! (Raja Marga Column)
ನಮ್ಮ ಹೆಚ್ಚಿನ ಟಿವಿ ರಿಯಾಲಿಟಿ ಶೋ (Reality Show) ಹೀರೋಗಳ ಕಥೆ ಕೂಡ ಹೀಗೆಯೇ ಇದೆ!
ಖಾಸಗಿ ಟಿವಿಯ ವಾಹಿನಿಗಳಲ್ಲಿ (Private TV Channels) ಇಂದು ಪ್ರಸಾರ ಆಗುತ್ತಿರುವ ನೂರಾರು ರಿಯಾಲಿಟಿ ಶೋಗಳು ಮತ್ತು ಸ್ಪರ್ಧೆಗಳು ಹೆಚ್ಚು ಪ್ರಚಾರದಲ್ಲಿವೆ. ಅಂತ ಹಲವು ಟಿವಿ ಶೋಗಳು ಹಿಂದೆ ಕೂಡ ನಡೆದಿವೆ. ಅದರ ಎಲ್ಲ ವಿಜೇತರ ಪ್ರತಿಭೆಯ ಮೇಲೆ ಗೌರವ ಇರಿಸಿಕೊಂಡು ನಾನು ಕೇಳುವ ಒಂದೇ ಪ್ರಶ್ನೆ — ಅದರ ಸಾವಿರಾರು ವಿಜೇತರು ಮುಂದೆ ಎಲ್ಲಿಗೆ ಹೋಗುತ್ತಾರೆ? ಅವರ ಅನನ್ಯ ಪ್ರತಿಭೆಗಳನ್ನು ಅವರು ಎಷ್ಟು ಬೆಳೆಸಿದ್ದಾರೆ? ಅದರಿಂದ ನಾಡಿನ ಸಂಸ್ಕೃತಿಗೆ ಎಷ್ಟು ಲಾಭ ಆಗಿದೆ?
ಶಾಲಾ ಮಟ್ಟದಲ್ಲಿ ನೂರಾರು ಸಾಂಸ್ಕೃತಿಕ ಸ್ಪರ್ಧೆಗಳು, ಪ್ರತಿಭಾ ಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲಿ ವಿಜೇತರ ಘೋಷಣೆ ಆಗುತ್ತದೆ. ಅದರಲ್ಲಿ ಎಷ್ಟು ಜನರು ಮುಂದೆ ಅವರ ಪ್ರತಿಭೆಯನ್ನು ತಮ್ಮ ಹೊಟ್ಟೆಪಾಡಾಗಿ ಮಾಡಿಕೊಳ್ಳುತ್ತಾರೆ? ಎಷ್ಟು ಮಂದಿ ತಮ್ಮ ಕಲೆಯನ್ನು ಪ್ರೀತಿಸುತ್ತಾರೆ? ತಮ್ಮ ಕಲೆಯಿಂದ ಸಮಾಜವನ್ನು ಬೆಳಗುತ್ತಾರೆ? ಕನಿಷ್ಠ ಪಕ್ಷ ಆತ್ಮ ಸಂತೋಷಕ್ಕಾಗಿ ಆದರೂ ಆ ಕಲೆಯನ್ನು ಮುಂದೆ ಕಲಿಯುತ್ತಾರಾ?
ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಾಗ ನಮಗೆ ಹಲವು ಕಡೆ ನಿರಾಸೆಯೇ ಆಗುತ್ತದೆ ಮತ್ತು ಕಹಿ ಸತ್ಯಗಳು ಗೋಚರ ಆಗುತ್ತವೆ.
ಹಾಗಾದರೆ ಟಿವಿ ವಾಹಿನಿಗಳಿಂದ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಂದ ಪ್ರತಿಭಾ ಶೋಧ ಆಗ್ತಾ ಇಲ್ಲವೇ ಎನ್ನುವ ಪ್ರಶ್ನೆ ನೀವು ಕೇಳಬಹುದು. ಖಂಡಿತ ಆಗುತ್ತಿದೆ! ಆದರೆ ಅದರ ಅಡ್ಡ ಪರಿಣಾಮಗಳ ಬಗ್ಗೆ ಇದುವರೆಗೆ ಯಾರೂ ಯೋಚನೆ ಮಾಡಿದ ಹಾಗಿಲ್ಲ.
ಉದಾಹರಣೆಗೆ ಇಂದು ಬಾಲಿವುಡನ ಹಿನ್ನೆಲೆ ಗಾಯನ ಲೋಕದ ಸೂಪರ್ ಸ್ಟಾರ್ಗಳಾದ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಇವರೆಲ್ಲರೂ ಬೇರೆ ಬೇರೆ ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದವರು. ಕನ್ನಡದಲ್ಲಿಯೂ ಅಂತವರು ತುಂಬಾ ಮಂದಿ ಇದ್ದಾರೆ. ಆದರೆ ಅವರಲ್ಲಿ ಹೆಚ್ಚಿನ ಸ್ಟಾರ್ಗಳು ಒಳ್ಳೆಯ ನಿರ್ಣಾಯಕರ ಮೂಲಕ ಆಯ್ಕೆ ಆದವರು. ಇನ್ನೂ ವಿವರವಾಗಿ ಹೇಳಬೇಕೆಂದರೆ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಆಯ್ಕೆ ಆಗುವಾಗ ಲತಾ ಮಂಗೇಶ್ಕರ್ ಅಂತವರು ನಿರ್ಣಾಯಕರಾಗಿದ್ದರು!
ಪ್ರತಿಭೆಗಳಿಗೆ ಆಗ ಒಂದಿಷ್ಟೂ ಅನ್ಯಾಯ ಆಗುತ್ತಾ ಇರಲಿಲ್ಲ.
ಅಪಾಯಕಾರಿ ಆದ ಇಂಟರ್ನೆಟ್ ವೋಟಿಂಗ್!
ಆದರೆ ಮುಂದೆ ಯಾವಾಗ ಇಂಟರ್ನೆಟ್ ಮೆಸೇಜ್ಗಳ ಮೂಲಕ ವೋಟಿಂಗ್ ಆರಂಭ ಆಯಿತೋ ಅಲ್ಲಿಗೆ ದುಡ್ಡು, ಪ್ರಭಾವ ಇದ್ದವರು ವೋಟುಗಳನ್ನು ಖರೀದಿ ಮಾಡುವುದು ಆರಂಭ ಆಯಿತು. ನಮಗೆ ವೋಟ್ ಮಾಡಿ ಎಂದು ಕೈ ಮುಗಿದು ಭಿಕ್ಷೆ ಬೇಡುವ ದೈನ್ಯತೆಯು ಆ ಪ್ರತಿಭೆಗಳಿಗೆ ಬರಬಾರದಿತ್ತು.
ಕನ್ನಡದಲ್ಲಿ ಕೂಡ ಆರಂಭದ ಎದೆ ತುಂಬಿ ಹಾಡುವೆನು, ಕಾಮಿಡಿ ಕಿಲಾಡಿ, ಮಜಾ ಟಾಕೀಸ್, ಡ್ರಾಮಾ ಜೂನಿಯರ್ ರಿಯಾಲಿಟಿ ಶೋನಲ್ಲಿ ಗೆದ್ದವರು ಮುಂದೆ ನೂರಾರು ಅವಕಾಶಗಳನ್ನು ಪಡೆದರು. ಅವರ ಪ್ರತಿಭೆಯನ್ನು ನಾಡು ಗುರುತಿಸಿ ಬೆಳೆಸಿತು.
ಆದರೆ ಇಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ಯಾವಾಗ ಇಂಟರ್ನೆಟ್ ವೋಟಿಂಗ್ ಆರಂಭ ಆಯಿತೋ ಅಲ್ಲಿಂದ ವೋಟ್ ಖರೀದಿಗಳು, ಪ್ರಭಾವಗಳು ಆರಂಭ ಆದವು. ಆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ತರಬೇತು ಕೊಡುವ ಹಲವು ಶಾಲೆಗಳು ಮಹಾನಗರಗಳಲ್ಲಿ ನಾಯಿಕೊಡೆಗಳ ಹಾಗೆ ಆರಂಭ ಆದವು. ಹೆತ್ತವರು ತಮ್ಮ ಮಕ್ಕಳನ್ನು ಸೂಪರ್ ಹೀರೋ ಮಾಡುವ ಜಿದ್ದಿಗೆ ಬಿದ್ದು ಅಂತಹ ಶಾಲೆಗಳಿಗೆ ದುಡ್ಡು ಸುರಿಯಲು ತೊಡಗಿದರು.
ಆದರೆ ಇಲ್ಲಿ ಕೂಡ ಬಡವರ ಮಕ್ಕಳು, ಗ್ರಾಮಾಂತರ ಭಾಗದ ಪ್ರತಿಭೆಗಳು ನಿಜವಾಗಿಯೂ ಅವಕಾಶಗಳಿಂದ ವಂಚಿತರಾದರು!
ಒಂದು ಸಮೀಕ್ಷೆ ಮಾಡಿ ನೋಡಿ. ಇತ್ತೀಚಿನ ರಿಯಾಲಿಟಿ ಶೋಗಳಲ್ಲಿ ಗೆದ್ದವರಲ್ಲಿ ಎಷ್ಟು ಮಂದಿ ಹಳ್ಳಿಯ ಮಕ್ಕಳು ಇದ್ದಾರೆ? ಎಷ್ಟು ಮಂದಿ ಬಡವರ ಮಕ್ಕಳಿದ್ದಾರೆ? ಎಷ್ಟು ಮಂದಿ ಕನ್ನಡ ಮಾಧ್ಯಮದ ಮಕ್ಕಳಿದ್ದಾರೆ?
ಖಂಡಿತ ಇದ್ದಾರೆ. ಆದರೆ ಅವರ ಪ್ರಮಾಣ ತುಂಬಾ ಕಡಿಮೆ ಇದೆ!
ಜಗತ್ತಿನ ಪ್ರತೀ ಮಗುವೂ ಪ್ರತಿಭಾವಂತ ಮಗುವೇ!
ಈ ಜಗತ್ತಿನ ಪ್ರತೀ ಮಕ್ಕಳೂ ಪ್ರತಿಭಾವಂತರೇ ಆಗಿದ್ದಾರೆ. ಅವರಲ್ಲಿ ಒಂದಲ್ಲ ಒಂದು ಪ್ರತಿಭೆಯನ್ನು ಲೋಡ್ ಮಾಡಿ ಭಗವಂತ ಈ ಜಗತ್ತಿಗೆ ಅವರನ್ನು ಕಳುಹಿಸಿರುತ್ತಾನೆ. ನೀವು ಯಾವ ಮಕ್ಕಳನ್ನು ವಿಶೇಷ ಚೇತನ ಮಕ್ಕಳು ಎಂದು ಕರೆಯುತ್ತೀರೋ ಅವರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯ ಪೋಷಣೆಗೆ ವೇದಿಕೆ ಬೇಕು. ತರಬೇತು ಬೇಕು. ಹೆತ್ತವರ, ಶಿಕ್ಷಕರ, ಸಮಾಜದ ಪ್ರೋತ್ಸಾಹ ಬೇಕು.
ಅವರ ಶಾಪ ಆದರೆ ನಮ್ಮ ಮಕ್ಕಳು ಎಷ್ಟು ಪ್ರತಿಭೆ ಹೊಂದಿದ್ದಾರೆ ಎಂದರೆ ಅವರು ಸ್ಪರ್ಧೆಯ ಸೋಂಕಿಲ್ಲದೆ ಕೂಡ ತಮ್ಮ ಅಗಾಧವಾದ ಪ್ರತಿಭೆಯನ್ನು ಬೆಳೆಸುವ ಸಾಮರ್ಥ್ಯವನ್ನು ಖಂಡಿತವಾಗಿ ಹೊಂದಿರುತ್ತಾರೆ! ಅವರನ್ನು ರೇಸಿನ ಕುದುರೆ ಮಾಡಿ ರೇಸಿಗೆ ನಿಲ್ಲಿಸುವ ಅಗತ್ಯ ಖಂಡಿತ ಇಲ್ಲ!
ಸ್ಪರ್ಧೆಗಳ ಬಗ್ಗೆ ಸಾಹಿತಿ ಶಿವರಾಮ ಕಾರಂತರು ಹೇಳಿದ್ದೇನು?
ಖ್ಯಾತ ಸಾಹಿತಿ ಮತ್ತು ಶಿಕ್ಷಣ ತಜ್ಞರಾದ ಕೋಟ ಶಿವರಾಮ ಕಾರಂತರು ಚಿಕ್ಕ ಮಕ್ಕಳನ್ನು ಸ್ಪರ್ಧೆಗೆ ನಿಲ್ಲಿಸಬೇಡಿ ಎಂದು ಹೇಳುತ್ತಿದ್ದರು. 12 ವರ್ಷಗಳವರೆಗೆ ಮಕ್ಕಳಿಗೆ ಯಾವ ಸ್ಪರ್ಧೆಯನ್ನು ಕೂಡ ಮಾಡಬಾರದು ಎನ್ನುವುದು ಅವರ ಖಚಿತ ಅಭಿಪ್ರಾಯ. ಸ್ಪರ್ಧೆ ಮಾಡಿದರೂ ಎಲ್ಲ ಮಕ್ಕಳಿಗೂ ಸಮಾನ ಬಹುಮಾನ ಕೊಡಿ ಎನ್ನುತ್ತಿದ್ದರು ಕಾರಂತರು.
ಆದರೆ ಇಂದು ಆಗುತ್ತಿರುವುದೆನು?
ಆದರೆ ಸ್ಪರ್ಧೆಯ ಗೆಲುವನ್ನು ತಮ್ಮ ಪ್ರತಿಷ್ಠೆಯನ್ನಾಗಿ ಮಾಡಿಕೊಂಡ ಶಿಕ್ಷಕರು ಮತ್ತು ಹೆತ್ತವರು ಮಕ್ಕಳನ್ನು ರೇಸಿನ ಕುದುರೆ ಮಾಡಿ ಈಗಾಗಲೇ ನಿಲ್ಲಿಸಿ ಆಗಿದೆ! ಈ ಸ್ಪರ್ಧೆಯಲ್ಲಿ ಸೋತವರ ಕಣ್ಣೀರನ್ನು ಮತ್ತು ಗೆದ್ದು ಬೀಗಿದವರ ಆನಂದ ಬಾಷ್ಪವನ್ನು ತಮ್ಮ ಟಿ ಆರ್ ಪಿ ಸರಕನ್ನಾಗಿ ಮಾಡಿಕೊಂಡ ಟಿವಿ ವಾಹಿನಿಗಳಿಗೆ ಈ ಸ್ಪರ್ಧೆಗಳು ಬೇಕೇ ಬೇಕು! ಮಕ್ಕಳ ಗೆಲುವನ್ನು ತಮ್ಮ ಪ್ರತಿಷ್ಠೆ ಎಂದು ಭಾವಿಸುವ ಹೆತ್ತವರು ಇರುವವರೆಗೆ ಈ ಮಕ್ಕಳ ರಿಯಾಲಿಟಿ ಶೋಗಳು ಖಂಡಿತ ನಿಲ್ಲುವುದಿಲ್ಲ. ಈ ಸ್ಪರ್ಧೆಗಳು ಮೆಗಾ ಮನರಂಜನೆಯ ಭಾಗ ಎಂದು ಪರಿಗಣಿಸುವ ವೀಕ್ಷಕರು ಕೂಡ ರಿಯಾಲಿಟಿ ಶೋ ಬೇಕು ಅಂತಾರೆ!
ತಮ್ಮ ಮಕ್ಕಳನ್ನು ಸೂಪರ್ ಹೀರೋ ಅಥವ ಸೂಪರ್ ಹೀರೋಯಿನ್ ಮಾಡಲು ಹೊರಟ ಹೆತ್ತವರು ಮಕ್ಕಳ ಬಾಲ್ಯವನ್ನು ಬರಿದು ಮಾಡುತ್ತಿದ್ದಾರೆ. ತಮ್ಮ ಮಕ್ಕಳು ಒಮ್ಮೆ ಟಿವಿಯಲ್ಲಿ ಕಂಡರೆ ಸಾಕು ಎಂದು ತೆವಲಿಗೆ ಪೋಷಕರು ಬಿದ್ದಿರುವ ಈ ದಿನಗಳಲ್ಲಿ ಅವರು ಬುದ್ಧಿ ಕಲಿಯುವುದು ಯಾವಾಗ?
ಇಲ್ಲೊಬ್ಬರು ತಾಯಿ ತನ್ನ ಎರಡನೇ ಕ್ಲಾಸಿನ ಮುಗ್ಧವಾದ ಮಗಳನ್ನು ದಿನವೂ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಕರಾಟೆ, ಚೆಸ್, ಕ್ರಿಕೆಟ್, ಯಕ್ಷಗಾನ, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್ ಕೋಚಿಂಗ್ ಎಂದೆಲ್ಲ ಉಸಿರು ಬಿಗಿ ಹಿಡಿದು ಓಡುತ್ತಿರುವಾಗ ಆ ಮುಗ್ಧ ಮಗುವಿನ ಮೇಲಾಗುತ್ತಿರುವ ಒತ್ತಡವನ್ನು ನನಗೆ ಊಹೆ ಮಾಡಲು ಕಷ್ಟ ಆಗುತ್ತಾ ಇದೆ! ಯಾವುದೇ ಕಲಿಕೆಯು ಮಕ್ಕಳಿಗೆ ಹೊರೆ ಆಗಬಾರದು ಎಂಬ ಸಾಮಾನ್ಯ ಪ್ರಜ್ಞೆಯು ಅಂತಹ ಹೆತ್ತವರಿಗೆ ಬೇಡವಾ?
ಇದನ್ನೂ ಓದಿ: Raja Marga Column : ನೀವು ಜ್ಯೂಲಿ ನೋಡಿದ್ದೀರಾ? ಇದು KGFಗೂ ಮೊದಲು ಬಾಲಿವುಡ್ನ ಅಹಂ ಮುರಿದ ಸಿನಿಮಾ
ಡ್ಯಾಡಿ ನಂಬರ್ ಒನ್, ಮಮ್ಮಿ ನಂಬರ್ ಒನ್ ಮೊದಲಾದ ನಾನಸೆನ್ಸ್ ಸ್ಪರ್ಧೆಯ ಮೂಲಕ ಅಪ್ಪ, ಅಮ್ಮನ ಪ್ರೀತಿಯು ಅಳೆಯಲ್ಪಡಬೇಕಾ?
ನನ್ನ ಸಲಹೆ ಏನೆಂದರೆ ಮುಂದಿನ ಕೆಲವು ವರ್ಷಗಳ ಕಾಲ ಎಲ್ಲ ಟಿವಿ ವಾಹಿನಿಗಳ ಸ್ಪರ್ಧಾತ್ಮಕವಾದ ರಿಯಾಲಿಟಿ ಶೋಗಳನ್ನು ನಿಲ್ಲಿಸುವುದು ಒಳ್ಳೆಯದು! ಅಥವಾ ಅವುಗಳಿಗೆ ಒಂದು ಸಣ್ಣ ಬ್ರೇಕ್ ಆದರೂ ಬೇಕು. ವರ್ಷಾನುಗಟ್ಟಲೆ ಈ ಸ್ಪರ್ಧೆಗಳು ಮುಂದುವರಿದರೆ ಆ ಮಕ್ಕಳ ಶಿಕ್ಷಣದ ಮೇಲೆ ಆಗುವ ಕರಾಳತೆಯ ಬಗ್ಗೆ ಕೂಡ ನಾವು ಯೋಚನೆ ಮಾಡಬೇಕು ಅಲ್ಲವೇ?
ರಿಯಾಲಿಟಿ ಶೋಗಳ ಹಂಗಿಲ್ಲದೆ ಇಂದು ಸ್ಟಾರ್ ಆಗಿ ಮಿಂಚುತ್ತಿರುವ ನೂರಾರು ಪ್ರತಿಭೆಗಳು ನನ್ನ ಪಟ್ಟಿಯಲ್ಲಿ ಇವೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು.
ಅಂಕಣ
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
ವಿಧಾನಸೌಧ ರೌಂಡ್ಸ್: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾತುಕತೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರಿಂದ ಯಾವ ಪಕ್ಷಕ್ಕೆ ಲಾಭ? ಯಾವ ಪಕ್ಷಕ್ಕೆ ನಷ್ಟ ಎಂಬ ಚರ್ಚೆ ಶುರುವಾಗಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೂರು ಪಕ್ಷಗಳಲ್ಲೂ ಸಂಘಟನೆ ಚುರುಕಾಗಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲುವ ಅನಿವಾರ್ಯತೆ ಇದೆ. ಇತ್ತ ಬಿಜೆಪಿಯು ಜೆಡಿಎಸ್ ಜತೆ ಸಖ್ಯ ಬೆಳೆಸಿ ಕಾಂಗ್ರೆಸ್ಗೆ ತಿರುಗೇಟು ಕೊಡಲು ದೆಹಲಿ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಆದರೆ ಈ ಮೈತ್ರಿಗೆ ರಾಜ್ಯ ಬಿಜೆಪಿ ನಾಯಕರನ್ನು ದೂರವಿಟ್ಟಿದ್ದು ಸ್ಥಳೀಯ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಇನ್ನು ಈ ಮೈತ್ರಿ ಮೂಲಕ ಸುಮಲತಾ ಅವರನ್ನು ಮಂಡ್ಯದಿಂದ ಎತ್ತಂಗಡಿ ಮಾಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಬಹುದು. ಸುಮಲತಾಗೆ ಕ್ಷೇತ್ರ ಹುಡುಕಿಕೊಡುವ ಜವಾಬ್ದಾರಿ ರಾಜ್ಯ ಬಿಜೆಪಿ ನಾಯಕರ ಹೆಗಲಿಗೇರಲಿದೆ. ಈ ನಡುವೆ, ಬೆಂಗಳೂರು ದಕ್ಷಿಣದಿಂದ ಈ ಬಾರಿ ತೇಜಸ್ವಿ ಅನಂತಕುಮಾರ್ ಅವರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈ ನಡುವೆ, ವಲಸಿಗ ಬಿಜೆಪಿ ಶಾಸಕರ ನಡೆಯನ್ನು ಎಲ್ಲರೂ ಕಾತುರದಿಂದ ನೋಡಲಾರಂಭಿಸಿದ್ದಾರೆ.
ರಾಜಕೀಯ ಮೈತ್ರಿ ಮದುವೆ ಫಿಕ್ಸ್!
ಗ್ಯಾರಂಟಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಯುದ್ಧ ಮಾಡಲು ನಿರ್ಧಾರ ಮಾಡಿವೆ. ಹೀಗಾಗಿ ಕಳೆದ ವಾರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ದೆಹಲಿಯಲ್ಲಿ ಸುದೀರ್ಘ ಚರ್ಚೆ ನಡೆಸಿ ಬಿಜೆಪಿ ವರಿಷ್ಠರ ಮುಂದೆ ಮೈತ್ರಿ ಸೂತ್ರ ಇಟ್ಟಿದ್ದಾರೆ. ದೊಡ್ಡ ಗೌಡರ ಕುಟುಂಬ ಇಟ್ಟ ಬಹುದೊಡ್ಡ ಬೇಡಿಕೆ ಈಡೇರಿಕೆ ಕಷ್ಟಸಾಧ್ಯ ಎನ್ನುವುದು ಮನವರಿಕೆ ಆಗಿದೆ. ಬಿಜೆಪಿ ನಾಯಕರುಗಳ ಪ್ರಕಾರ ಜೆಡಿಎಸ್ ಯೋಗ್ಯತೆಗೆ ಎರಡು ಲೋಕಸಭಾ ಕ್ಷೇತ್ರಗಳು ಕೊಟ್ಟರೆ ಅದೇ ಹೆಚ್ಚು. ಒಂದು ಸ್ಥಾನ ಹೆಚ್ಚುವರಿ ಕೊಟ್ಟರೆ ಅದು ಬೋನಸ್. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿದ್ದನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಪಡೆದುಕೊಳ್ಳಬೇಕು ಅನ್ನೋದು ದೊಡ್ಡ ಗೌಡರ ಪ್ಲಾನ್. ಹೀಗಾಗಿ ಗೋವಾ ಸಿಎಂ ಮುಂದೆ ಐದು ಲೋಕಸಭಾ ಕ್ಷೇತ್ರಗಳು, ಎರಡು ಪರಿಷತ್ ಹಾಗೂ ಪರಿಷತ್ನಲ್ಲಿ ವಿಪಕ್ಷ ನಾಯಕ ಸ್ಥಾನ, ಒಂದು ರಾಜ್ಯಸಭೆ ಸ್ಥಾನ, ಜತೆಗೆ ಕೇಂದ್ರದಲ್ಲಿ ಮಂತ್ರಿಗಿರಿ ಕೊಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿದ ಬಿಜೆಪಿ ವರಿಷ್ಠರು ಮೈತ್ರಿ ಓಕೆ, ಆದ್ರೆ ಸೀಟ್ ಹಂಚಿಕೆ ವಿಚಾರವನ್ನ ನಿಧಾನವಾಗಿ ಮಾಡೋಣ ಎಂದು ಹೇಳಿ ಕಳಿಸಿದ್ದಾರೆ.
ಟೀಮ್ ಚೇಂಜ್ ಮಾಡಿದ ವಲಸಿಗ ಬಿಜೆಪಿ ಶಾಸಕರು
ರಾಜ್ಯ ಬಿಜೆಪಿಯಲ್ಲಿ ವಲಸಿಗ ಶಾಸಕರನ್ನು ಇಂದಿಗೂ ಅನುಮಾನದಿಂದಲೇ ನೋಡಲಾಗುತ್ತಿದೆ. ಕಾರಣ ಅವರು ಅಂದು ಸಮ್ಮಿಶ್ರ ಸರ್ಕಾರ ಬೀಳಿಸಿ ಬಂದಿದ್ದು ಸಿದ್ಧಾಂತ್ಕಕ್ಕೋ ಅಭಿವೃದ್ಧಿಗಾಗಿಯೋ ಅಲ್ಲ, ಹಣಕ್ಕಾಗಿ ಅನ್ನೋ ಅಭಿಪ್ರಾಯ ರಾಜ್ಯ ಬಿಜೆಪಿಯಲ್ಲಿ ಇದೆ. ಅದೇ ರೀತಿ ಇವರು ಸಹ ಹಲವು ವಿಚಾರಗಳಲ್ಲಿ ಬಿಜೆಪಿ ನಾಯಕರಿಗೆ ಅನುಮಾನ ಬರುವಂತೆ ನಡೆದುಕೊಂಡಿದ್ದಾರೆ. ಯಡಿಯೂರಪ್ಪ ಇದ್ದಾಗ ಅವರಿಗೆ ಜೈ ಅಂದ್ರು. ಬಳಿಕ ಬೊಮ್ಮಾಯಿ ಸಮಯದಲ್ಲಿ ಬೊಮ್ಮಾಯಿ ಸುತ್ತಲೂ ಇದ್ದಿದ್ದು ಇವರೇ. ಈಗ ಮೈತ್ರಿ ಮಾತುಕತೆ ನಡೆಯುತ್ತಿರುವಾಗ ಕುಮಾರಸ್ವಾಮಿ ಭೇಟಿ ಮಾಡಲು ಸುಧಾಕರ್ ದೆಹಲಿಗೆ ತೆರಳಿದ್ರು. ದೆಹಲಿಯಿಂದ ಎಚ್ಡಿ ಕುಮಾರಸ್ವಾಮಿ ಬೆಂಗಳೂರಿಗೆ ಎಂಟ್ರಿ ಆದ ಕ್ಷಣದಿಂದಲೂ ಮುನಿರತ್ನ ಅವರು ಎಚ್ಡಿಕೆ ಕಾರಿನೊಳಗೆ ಜಿಗಿದಿದ್ದಾರೆ! ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಪಡೆಯಲು ಬಿಜೆಪಿಗಿಂತಲೂ ಮೈತ್ರಿ ನಾಯಕರ ಬೆಂಬಲ ಸಂಪರ್ಕ ಮಾಡ್ತಿರುವುದು ಮೂಲ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.
ಪ್ರಾಣಪಕ್ಷಿ ಹಾರಿ ಹೋಗ್ತಿದ್ದ ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ
ಸದ್ಯ ಮಹಿಳೆ ತಲೆ ಮೇಲೆ ಇರೋ ತೆನೆ ದಿನೇದಿನೇ ಒಣಗಿ ಇನ್ನೇನು ಸುಟ್ಟು ಹೋಗುವ ಹಂತದಲ್ಲಿದ್ದಾಗ ಬಿಜೆಪಿ ಸಂಜೀವಿನಿಯಾಗಿ ಪರಿಣಮಿಸಿದೆ. ಕೇವಲ 19 ಸ್ಥಾನಗಳನ್ನ ಗೆಲ್ಲಲಷ್ಟೇ ಸಾಧ್ಯವಾದ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ನಾಲ್ಕು ಸ್ಥಾನ ಬಿಡಲು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಪರಿಷತ್ನಲ್ಲೂ ಜೆಡಿಎಸ್ ಗೆ ಅವಕಾಶ ಸಿಗಬಹುದು. ಹೀಗಾಗಿ ಈ ಆರು ವರ್ಷ ಪರಿಷತ್ನಲ್ಲಿ ಒಂದು ಸ್ಥಾನ ಗೆಲ್ಲಲು ಆಗದ ಜೆಡಿಎಸ್ ಗೆ ಬಿಜೆಪಿ ಸ್ನೇಹ ಭಾರಿ ಲಾಭ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಬಿಜೆಪಿಗೆ ಇದರಿಂದ ನಷ್ಟ ಆದ್ರೂ ಅಚ್ಚರಿ ಇಲ್ಲ. ಯಾಕೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರು ಕೈ ಮೇಲೆತ್ತಿದ್ದರೂ, ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ನಡುವೆ ಇದ್ದ ಮನಸ್ತಾಪ ಮರೆತು ವೋಟ್ ಹಾಕಿರಲಿಲ್ಲ. ಹೀಗಾಗಿ ಬಿಜೆಪಿ 25+1 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಾಂಗ್ರೆಸ್ಗೆ ಇಷ್ಟು ದೊಡ್ಡ ಮಟ್ಟದ ಲಾಭ ಸಿಗದಿದ್ದರೂ ಕನಿಷ್ಠ 12-15 ಸ್ಥಾನ ಗೆಲ್ಲುವ ವಾತಾವರಣವನ್ನು ಈ ಮೈತ್ರಿ ಸೃಷ್ಟಿ ಮಾಡಬಹುದು.
ಅಂಬರೀಶ್ ಬಳಿಕ ಸಿನಿಮಾದವರಿಗೆ ಮಂಡ್ಯದಲ್ಲಿ ಡಬಲ್ ಚಾನ್ಸ್ ಸಿಕ್ತಿಲ್ಲ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಿನಿಮಾದವರನ್ನ ಜನ ಎರಡನೇ ಬಾರಿ ಆರಿಸಿದ್ದಿಲ್ಲ. 2013ರ ಮಧ್ಯಂತರ ಚುನಾವಣೆಯಲ್ಲಿ ಗೆದ್ದ ನಟಿ ರಮ್ಯ ಅವರನ್ನ ಬಳಿಕ ನಡೆದ ಚುನಾವಣೆಯಲ್ಲಿ ಸೋಲಿಸಿ ಜನ ಮನೆಗೆ ಕಳುಹಿಸಿದ್ರು. ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನ ಗೆಲ್ಲಿಸಿ ಕಳುಹಿಸಿದ್ರು. ಆದ್ರೆ ಈ ಬಾರಿ ಬಿಜೆಪಿಗೆ ಹೋಗಿ ಟಿಕೆಟ್ ಪಡೆಯಬೇಕು ಅನ್ನೋ ಸುಮಲತಾ ಆಸೆ ಈಡೇರುತ್ತಿಲ್ಲ. ಈ ಬಾರಿ ಮಂಡ್ಯ ಮೈತ್ರಿಯಿಂದ ಜೆಡಿಎಸ್ ಪಾಲಾಗುವುದು ಕನ್ಫರ್ಮ್. ಹೀಗಾಗಿ ನಟಿ ಸುಮಲತಾಗೂ ಈ ಬಾರಿ ಮಂಡ್ಯದ ಜನ ಸೆಂಡ್ಆಪ್ ಕೊಡಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: ವಿಧಾನಸೌಧ ರೌಂಡ್ಸ್: ಬಯಲಾಯ್ತು ಎಲೆಕ್ಷನ್ ಟಿಕೆಟ್ ಒಳ ಆಟ; ಕಾಂಗ್ರೆಸ್ಗೆ ಶೀತಲಸಮರದ ಸಂಕಟ
ಬೆಂಗಳೂರು ದಕ್ಷಿಣಕ್ಕೆ ಕೈಗೆ ಅಭ್ಯರ್ಥಿ ಕೊರತೆ, ತೇಜಸ್ವಿ ಅನಂತಕುಮಾರ್ರನ್ನು ಆಹ್ವಾನಿಸಿದ ಡಿಕೆಶಿ
ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಸ್ಪರ್ಧೆ ಮಾಡಿದ್ದ ಕ್ಷೇತ್ರ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯಿಂದ ಯಾರನ್ನ ನಿಲ್ಲಿಸಿದರೂ ಗೆಲುವು ಖಚಿತ. ಆದರೆ ಕಳೆದ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿ ಅನಂತಕುಮಾರ್ಗೆ ಅವಕಾಶ ಕೊಡದೆ, ಬಿಜೆಪಿ ವರಿಷ್ಠರು ಸಂಪ್ರದಾಯ ಮುರಿದು ಯುವ ನಾಯಕನಿಗೆ ಮಣೆ ಹಾಕಿದ್ರು. ಆದ್ರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ. ತೇಜಸ್ವಿ ಅನಂತಕುಮಾರ್ ಪರ ಕೈ ನಾಯಕರು ಮಾತನಾಡುತ್ತಿದ್ದಾರೆ. ಅನಂತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ ಕೆ ಶಿವಕುಮಾರ್, ನಿಮ್ಮನ್ನ ನಂಬಿದ ದೊಡ್ಡ ಕಾರ್ಯಕರ್ತರ ಗುಂಪು ಇದೆ. ಅವರನ್ನ ತಬ್ಬಲಿ ಮಾಡಬೇಡಿ. ಚುನಾವಣೆಗೆ ಧುಮುಕಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟ್ ಕೊಡದಿದ್ರೆ ನಾವು ರೆಡಿ ಇದ್ದೇವೆ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ!
-
ಪ್ರಮುಖ ಸುದ್ದಿ22 hours ago
Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!
-
ಪ್ರಮುಖ ಸುದ್ದಿ12 hours ago
German Shepherd: ಸೀಕ್ರೆಟ್ ಸರ್ವಿಸ್ ಏಜೆಂಟ್ನಿಗೆ ಕಚ್ಚಿದ ಅಮೆರಿಕ ಅಧ್ಯಕ್ಷ ಬೈಡನ್ ಅವರ ‘ಕಮಾಂಡರ್’!
-
ವಿದೇಶ13 hours ago
Most expensive wedding: ಜಗತ್ತಿನ ದುಬಾರಿ ವಿವಾಹ ಯಾವುದು ಗೊತ್ತೆ? ಖರ್ಚಾಗಿದ್ದು ಇಷ್ಟು ಕೋಟಿ ರೂ.
-
ಸುವಚನ1 hour ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕ್ರೈಂ17 hours ago
ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!
-
ಕರ್ನಾಟಕ13 hours ago
Car Accident: ಮರಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವು
-
ದೇಶ14 hours ago
Venus Mission: ಇಸ್ರೋಗೆ ‘ಶುಕ್ರ’ದೆಸೆ; ಚಂದ್ರ, ಸೂರ್ಯನ ಬಳಿಕ ಶುಕ್ರನತ್ತ ಚಿತ್ತ; ಉಡಾವಣೆ ಯಾವಾಗ?
-
ಕ್ರಿಕೆಟ್13 hours ago
IND vs AUS: ಅಂತಿಮ ಪಂದ್ಯದಲ್ಲಿ ತಿರುಗಿ ಬಿದ್ದ ಆಸೀಸ್; ಭಾರತಕ್ಕೆ ಬೃಹತ್ ಮೊತ್ತದ ಗುರಿ