ಅಂಕಣ
ವಿಸ್ತಾರ ಅಂಕಣ: ಗ್ಯಾರಂಟಿ ಮರೆಮಾಚಲು ʼಗೋಹತ್ಯೆʼ ಗುರಾಣಿಯಾಗಬೇಕೆ?
ಗೋಹತ್ಯೆ ನಿಷೇಧವೇ ಇರಲಿ, ಪಠ್ಯ ಪರಿಷ್ಕರಣೆಯೇ ಇರಲಿ. ಎಲ್ಲವನ್ನೂ ವ್ಯಾಪಾರಿ ದೃಷ್ಟಿಕೋನದಲ್ಲಿ ಏಕೆ ನೋಡಬೇಕು? ತನಗೆ ಮತ ನೀಡಿರುವ ಮುಸ್ಲಿಮರನ್ನು ಉದ್ಧರಿಸಲು ಕಾಂಗ್ರೆಸ್ ಮುಂದಾಗಲಿ; ಆದರೆ ಆ ಸಮುದಾಯವನ್ನು ಓಲೈಸಿ, ಮತ್ತಷ್ಟು ಹಿಂದಕ್ಕೆ ತಳ್ಳುವ ಹೆಜ್ಜೆಗಳನ್ನು ಅದು ಇಡುವಂತೆ ಕಾಣುತ್ತಿದೆ.
ತುರ್ಕಿಯ ಕುರಿತು ಬ್ರಿಟಿಷರ ಧೋರಣೆ ವಿರುದ್ಧ ಹಾಗೂ ಸುನ್ನಿ ಮುಸಲ್ಮಾನರ ಪರಮೋಚ್ಛ ನಾಯಕ ಎಂದು ಪರಿಗಣಿತನಾಗಿದ್ದ ಖಲೀಫನನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು ಎಂಬ ವಿಚಾರ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಪ್ರಬಲವಾಗಿಯೇ ಪ್ರತಿಧ್ವನಿಸಿತು. ಅದರ ಹೆಸರು ಖಿಲಾಫತ್ ಆಂದೋಲನ.
1919-24ರ ನಡುವಿನ ಈ ಅವಧಿಯಲ್ಲಿಯೇ ಭಾರತದಲ್ಲಿ ಮಹತ್ವದ ಹಾಗೂ ಘೋರ ಘಟನಾವಳಿಗಳು ನಡೆದವು. ಮುಸ್ಲಿಂ ಸಮುದಾಯವನ್ನು ಬೆಂಬಲಿಸಿ ಹಿಂದುಗಳು ಖಿಲಾಫತ್ ಆಂದೋಲನದಲ್ಲಿ ಭಾಗವಹಿಸಿ ಎಂದು ಮಹಾತ್ಮಾ ಗಾಂಧೀಜಿ ಕರೆ ನೀಡಿದರು. ಹೀಗಿದ್ದರೂ, ಕೇರಳದಲ್ಲಿ ಮಾಪಿಳ್ಳೆಗಳು ಹಿಂದುಗಳ ವಿರುದ್ಧವೇ ದೌರ್ಜನ್ಯವೆಸಗಿ ಅತ್ಯಾಚಾರ, ಅನಾಚಾರ ಮಾಡಿದರು.
ಇತಿಹಾಸದ ಗರ್ಭದಲ್ಲಿ ಅವಿತಿಟ್ಟಿದ್ದ ಈ ಸತ್ಯವನ್ನು ಮೋಪ್ಲಾ ದಂಗೆಗಳು ಎಂಬ ಹೆಸರಿನಲ್ಲಿ ಹೊರ ಜಗತ್ತಿಗೆ ಪರಿಚಯಿಸಿದವರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್. ಈ ವಾರದ ಅಂಕಣ ಬರಹ ಪ್ರಕಟವಾಗುವ ಮರುದಿನ, ಅಂದರೆ ಮೇ 28ರಂದು ಸಾವರ್ಕರ್ ಜಯಂತಿ. ಈ ಸಂದರ್ಭದಲ್ಲಿ ಅವರನ್ನು ನೆನೆಯೋಣ. ಆದರೆ ಈ ಲೇಖನ ಸಾವರ್ಕರರಿಗೆ ಸಂಬಂಧಿಸಿದ್ದಲ್ಲ. ಆದರೆ, ಹಿಂದೂಗಳ ಉದಾತ್ತ ಧೋರಣೆಗೆ ಸಂಬಂಧಿಸಿದ್ದು !
ಅಂದಹಾಗೆ, ಇಡೀ ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ, ಅದ್ಯಾವುದೋ ದೇಶದ ಖಲೀಫನಿಗೆ ಸಂಬಂಧಿಸಿದ ಖಿಲಾಫತ್ ಹೋರಾಟ ಎದುರಾಯಿತು. ಹಿಂದೂಗಳು ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮುಸ್ಲಿಂ ಸಮುದಾಯದ ನಾಯಕರುಗಳಾದ ಹಕೀಂ ಅಜಮಲ್ ಖಾನ್ ಹಾಗೂ ಆಸಫ್ ಅಲಿ ಮುಂತಾದವರು ಬಯಸಿದರು. ಇದಕ್ಕಾಗಿ ಸ್ವಾಮಿ ಶ್ರದ್ಧಾನಂದರ ಜತೆಗೆ ಮಹಾತ್ಮಾ ಗಾಂಧಿಯವರನ್ನೂ ಸಭೆಯೊಂದಕ್ಕೆ ಆಹ್ವಾನಿಸಲಾಯಿತು. ಮುಸ್ಲಿಮರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಹಿಂದೂಗಳು ಏಕೆ ಬೆಂಬಲ ಕೊಡುತ್ತಾರೆ? ಅವರಿಗೆ ಉಪಯೋಗ ಆಗುವ ಯಾವುದಾದರೂ ಸಾರ್ವಜನಿಕ ವಿಷಯವನ್ನೂ ಈ ಸಭೆಯಲ್ಲಿ ಸೇರಿಸಿ ಅವರನ್ನು ಸಂತೋಷಪಡಿಸೋಣ ಎಂದು ಸಭೆಯ ಆಯೋಜಕರಾದ ಮುಸ್ಲಿಂ ಮುಖಂಡರು ಆಲೋಚಿಸಿದರು. ಆಗ ಅವರಿಗೆ ಹೊಳೆದಿದ್ದೇ ಗೋ ಹತ್ಯೆ ನಿಷೇಧ. ಈ ವಿಷಯ ಹೇಳಿದರೆ ಹಿಂದುಗಳು ಖುಷಿಯಾಗುತ್ತಾರೆ ಎಂದು ಅವರು ಭಾವಿಸಿದ್ದರು.
ಇದಕ್ಕಾಗಿ ಮಹಾತ್ಮಾ ಗಾಂಧೀಜಿಯವರನ್ನು ಸಭೆಗೆ ಆಹ್ವಾನಿಸಲು ಬರೆದ ಪತ್ರದಲ್ಲಿ ಹೀಗೆ ಇತ್ತು; “ಈ ಸಮ್ಮೇಳನದಲ್ಲಿ ಖಿಲಾಫತ್ ಪ್ರಶ್ನೆ ಮಾತ್ರವಲ್ಲ, ಗೋರಕ್ಷಣೆಯ ಪ್ರಶ್ನೆಯೂ ಚರ್ಚಿಸಲ್ಪಡುವುದು. ಗೋವಿನ ಪ್ರಶ್ನೆಯನ್ನು ತೀರ್ಮಾನಿಸಲು ಇದು ಸುವರ್ಣ ಸಂಧಿ”
ಗೋ ಸಂರಕ್ಷಣೆ ಎನ್ನುವುದು ಗಾಂಧೀಜಿಯವರ ಹೃದಯಕ್ಕೆ ಹತ್ತಿರದ ವಿಚಾರ. ಈ ವಿಚಾರವನ್ನು ಪ್ರಸ್ತಾಪಿಸಿದರೆ ಅವರು ಒಪ್ಪಿ ಖಿಲಾಫತ್ ಆಂದೋಲನಕ್ಕೆ ಬೆಂಬಲ ನೀಡುತ್ತಾರೆ ಎನ್ನುವುದು ಮುಸ್ಲಿಮರ ಉದ್ದೇಶವಾಗಿತ್ತು. ಆದರೆ ಈ ಪ್ರಸ್ತಾಪವನ್ನು ಗಾಂಧೀಜಿ ಸ್ಪಷ್ಟ ಶಬ್ದಗಳಲ್ಲಿ ತಿರಸ್ಕರಿಸಿದರು. ಈ ಕುರಿತು ಮುಸ್ಲಿಂ ಮುಖಂಡರಿಗೆ ಪತ್ರ ಬರೆದರು. “ನಿಜಕ್ಕೂ ನಿಮಗೆ ಅನ್ಯಾಯ ಆಗಿದೆ ಎನ್ನುವುದಾದರೆ ಅದಕ್ಕೆ ಹಿಂದೂಗಳು ಬೆಂಬಲ ನೀಡುತ್ತಾರೆ. ಆದರೆ ಹಿಂದುಗಳು ಬೆಂಬಲ ಪಡೆಯಬೇಕು ಎಂಬ ಕಾರಣಕ್ಕೆ ಗೋ ಸಂರಕ್ಷಣೆಯ ವಿಚಾರವನ್ನು ಈ ಸಭೆಗೆ ತರುವುದು ಬೇಡ. ಖಿಲಾಫತ್ ಮತ್ತು ಗೋರಕ್ಷಣೆ ವಿಚಾರವನ್ನು ಬೆರೆಸಬಾರದು. ಎರಡೂ ಪ್ರಶ್ನೆಗಳ ಸಮಾಲೋಚನೆಯನ್ನು ವ್ಯಾಪಾರಿ ದೃಷ್ಟಿಯಿಂದ ನಡೆಸಬಾರದು. ಪ್ರತಿಯೊಂದು ಪ್ರಶ್ನೆಯನ್ನೂ ಅದರದರ ಯೋಗ್ಯತೆಯ ಮೇಲೆ ಬೇರೆಬೇರೆಯಾಗಿ ಪರಿಗಣಿಸಬೇಕು” ಎಂದು ಆಯೋಜಕರಿಗೆ ಪತ್ರದಲ್ಲಿ ತಿಳಿಹೇಳಿದರು.
ಮುಂದೆ ಅವರು ಸಮ್ಮೇಳನದಲ್ಲಿ ಭಾಗವಹಿಸಿದಾಗಲೂ ಇದೇ ಮಾತನ್ನು ಪುನರುಚ್ಛರಿಸಿದರು. “ಮುಸಲ್ಮಾನರಿಗೆ ಸಹಾಯ ಮಾಡುವ ಸಂದರ್ಭವನ್ನು ಉಪಯೋಗಿಸಿಕೊಂಡು ಗೋಹತ್ಯೆ ನಿಷೇಧ ಮಾಡುವುದು ಸರಿಯಲ್ಲ. ಇದರ ಬದಲು ಮುಸಲ್ಮಾನರು ಹಿಂದೂಗಳ ಭಾವನೆಯನ್ನು ಪ್ರಾಮಾಣಿಕವಾಗಿ ಗೌರವಿಸಬೇಕು. ನಾವೂ, ಹಿಂದುಗಳೂ ಒಂದೇ ನೆಲದ ಮಕ್ಕಳು. ಅವರು ಆರಾಧಿಸುವ ಗೋವನ್ನು ಹತ್ಯೆ ಮಾಡುವುದಿಲ್ಲ. ಇದು ನಮ್ಮ ಕರ್ತವ್ಯ ಎಂದು ಸ್ವಂತ ಇಚ್ಛೆಯಿಂದಲೇ ಗೋಹತ್ಯೆಯನ್ನು ನಿಲ್ಲಿಸಿದರೆ ಅದು ಉತ್ತಮ ವಿಚಾರ. ಇದು ಮುಸಲ್ಮಾನರಿಗೆ ಗೌರವವನ್ನುಂಟುಮಾಡುತ್ತದೆ. ಇದು ತಮ್ಮ ಕರ್ತವ್ಯ ಎಂದು ಮುಸಲ್ಮಾನರು ಭಾವಿಸಬೇಕು. ಹಿಂದುಗಳು ಖಿಲಾಫತ್ನಲ್ಲಿ ಸಹಾಯ ಮಾಡಲಿ ಬಿಡಲಿ ಅವರು ಗೋವಧೆಯನ್ನು ನಿಲ್ಲಿಸಬೇಕು. ಈ ವಿಷಯವನ್ನು ವ್ಯಾಪಾರಿ ಮನೋಭಾವನೆಯಿಂದ ನೋಡುವುದು ಬೇಡ” ಎಂದರು.
ಗಾಂಧೀಜಿ ತಮ್ಮ ಹೃದಯಕ್ಕೆ ಹತ್ತಿರವಾಗಿದ್ದ ವಿಷಯದಲ್ಲೂ ಇಂತಹ ಕಠಿಣ ನಿಲುವನ್ನು ತಳೆದರು. ಮುಸಲ್ಮಾನರ ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಬಲವಂತವಾಗಿ ಗೋಹತ್ಯೆ ನಿಷೇಧದ ವಾಗ್ದಾನ ಪಡೆಯಬಹುದಾಗಿತ್ತು. ಆದರೆ ಸನಾತನಿ ಗಾಂಧೀಜಿ ಹಾಗೆ ಮಾಡಲಿಲ್ಲ. ಮುಸಲ್ಮಾನದ ಮೇಲೆ ಮಾತ್ರವಲ್ಲ, ಒಟ್ಟಾರೆ ದೇಶದ ಮೇಲೆಯೂ ಗೋಹತ್ಯಾ ನಿಷೇಧವನ್ನು ಹೇರಲಿಲ್ಲ. ಗೋಹತ್ಯೆ ತಡೆಯುವುದು ಹಾಗೂ ಗೋಸಂರಕ್ಷಣೆಯನ್ನು ಸಂವಿಧಾನದ ಮುಖ್ಯಭಾಗದಲ್ಲೇ ಸೇರಿಸಬೇಕು ಎಂದಿದ್ದರೂ, ಇನ್ನೂ ದೇಶದಲ್ಲಿ ಈ ಕುರಿತು ಒಮ್ಮತ ಮೂಡಲಿ ಎಂಬ ಕಾರಣಕ್ಕೆ ನಿರ್ದೇಶಕ ತತ್ವಗಳಲ್ಲಿ ಇದನ್ನು ಸೇರಿಸಲಾಯಿತು. ತಳಿಗಳನ್ನು ಸಂರಕ್ಷಿಸುವ ಸಲುವಾಗಿ ಹಸುಗಳ ಮತ್ತು ಕರುಗಳ ಹಾಗೂ ಇತರ ಹಾಲು ಕೊಡುವ ಮತ್ತು ಭಾರ ಎಳೆಯುವ ಜಾನುವಾರುಗಳ ವಧೆಯನ್ನು ನಿಷೇಧಿಸುವುದಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳತಕ್ಕದ್ದು ಎಂದು ತಿಳಿಸಲಾಯಿತು.
ಇಷ್ಟೆಲ್ಲ ದೀರ್ಘ ಪೀಠಿಕೆ ಏಕೆ ಬೇಕಾಯಿತು ಎಂದರೆ ಇಂದಿನ ಅಜ್ಞಾನದ ಕಾರಣಕ್ಕೆ. ಈಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬದಲಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೇ 13ರಂದು ಫಲಿತಾಂಶ ಹೊರಬಂದು ಮೇ 20ರಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ 8 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ, ಇನ್ನೂ ಯಾರಿಗೂ ಖಾತೆಗಳ ಹಂಚಿಕೆಯೂ ಆಗಿಲ್ಲ. ಆದರೆ ಸರ್ಕಾರದ ಭಾಗವಾದ ಸಚಿವರುಗಳು ಪುಂಖಾನುಪುಂಖವಾಗಿ ನಾಲಗೆಯನ್ನು ಹರಿಬಿಡುತ್ತಿದ್ದಾರೆ. ಬಿಜೆಪಿ ಸರ್ಕಾರ ಮಾಡಿದ ಪಠ್ಯಪುಸ್ತಕ ಪರಿಷ್ಕರಣೆ, ಗೋಹತ್ಯೆ ನಿಷೇಧ ಸೇರಿದಂತೆ ಎಲ್ಲವನ್ನೂ ಹಿಂಪಡೆಯಲಾಗುತ್ತದೆ. ಆಗತ್ಯಬಿದ್ದರೆ ಬಜರಂಗದಳವನ್ನಷ್ಟೆ ಅಲ್ಲ, ಆರ್ಎಸ್ಎಸ್ ಅನ್ನೂ ನಿಷೇಧಿಸಲಾಗುವುದು ಎಂದು ಸಚಿವರೊಬ್ಬರು ಪದೇಪದೆ ಹೇಳುತ್ತಿದ್ದಾರೆ.
ಇಲ್ಲಿ ಅಜ್ಞಾನದ ವಿಚಾರ ಎಂದರೆ, ಗೋಹತ್ಯೆ ನಿಷೇಧ ಎನ್ನುವುದು ತನ್ನ ಚುನಾವಣಾ ವಿಷಯ, ವೋಟು ತಂದುಕೊಡುವ ಅಜೆಂಡಾ ಎಂದು ಬಿಜೆಪಿಯ ಕೆಲ ನಾಯಕರು ಭಾವಿಸಿದ್ದಾರೆ. ಅದೇ ರೀತಿ, ಗೋಹತ್ಯೆ ನಿಷೇಧ ಎನ್ನುವುದು ಬಿಜೆಪಿಯ ಅಜೆಂಡಾ ಎಂದು ಭಾವಿಸಿರುವ ಕಾಂಗ್ರೆಸ್ ಸಹ, ತಾನು ಅಧಿಕಾರಕ್ಕೆ ಬಂದರೆ ಈ ಕಾನೂನನ್ನು ಹಿಂಪಡೆಯುವೆ ಎನ್ನುತ್ತಿದೆ. ಬಿಜೆಪಿಯಲ್ಲಿ ಕೆಲವರಿಗೆ ಮಾತ್ರ ಅಜ್ಞಾನವಿದ್ದರೆ, ಕಾಂಗ್ರೆಸ್ನಲ್ಲಿ ಎಲ್ಲರಿಗೂ ಇದೆ.
ಗೋಹತ್ಯೆ ನಿಷೇಧ ಎನ್ನುವುದು ಭಾರತೀಯ ಸಂವಿಧಾನದ ನಿರ್ದೇಶಕ ತತ್ವಗಳಲ್ಲೇ ಅಡಕವಾಗಿದೆ. ಕೃಷಿಗೆ ಪೂರಕವಾದ ಜಾನುವಾರಾದ್ದರಿಂದ ಗೋವನ್ನು ಹತ್ಯೆ ಮಾಡಬಾರದು ಎಂದು ಬ್ರಿಟಿಷ್ ಕಾಲದಿಂದಲೂ ವಿವಿಧ ಕಾನೂನುಗಳಿವೆ. ಆದರೆ ತಾನು ಈ ದೇಶದ ಅತ್ಯಂತ ಹಳೆಯ ಪಕ್ಷ, ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ಗೆ ತನ್ನ ಇತಿಹಾಸವೇ ಮರೆತುಹೋಗಿದೆ. ತನ್ನದೇ ಪಕ್ಷ ಜಾರಿಗೆ ತಂದ ಯೋಜನೆಗಳನ್ನು, ನೀತಿಗಳನ್ನು, ಬಿಜೆಪಿ ಪೊಲಿಟಿಕಲ್ ಮೈಲೇಜ್ ತೆಗೆದುಕೊಳ್ಳುತ್ತದೆ ಎಂಬ ಒಂದೇ ಕಾರಣಕ್ಕೆ ವಿರೋಧಿಸಲು ಮುಂದಾಗಿದೆ. ಇದರಲ್ಲಿ ಗೋಹತ್ಯೆ ನಿಷೇಧವೂ ಒಂದು. ಕಾಂಗ್ರೆಸ್ ಈಗ ದೇಶದ ಮಟ್ಟದಲ್ಲಿ ಹೊಂದಿರುವ ಅಧಃಪತನಕ್ಕೆ ಈ ಅಜ್ಞಾನವೂ ಒಂದು ಕಾರಣ.
ಗೋಹತ್ಯೆ ನಿಷೇಧವೇ ಇರಲಿ, ಪಠ್ಯ ಪರಿಷ್ಕರಣೆಯೇ ಇರಲಿ. ಎಲ್ಲವನ್ನೂ ವ್ಯಾಪಾರಿ ದೃಷ್ಟಿಕೋನದಲ್ಲಿ ಏಕೆ ನೋಡಬೇಕು? ಮುಸ್ಲಿಂ ಸಮುದಾಯ ಈ ಬಾರಿ ಕಾಂಗ್ರೆಸ್ಗೆ ಹೆಚ್ಚಿನ ಮತ ನೀಡಿದೆ ಎನ್ನುವುದು ನಿರ್ವಿವಾದ. ಆದರೆ ಆ ಸಮುದಾಯದ ಏಳಿಗೆಗೆ ಏನು ಮಾಡಿದರೆ ಆ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರುತ್ತದೆ ಎಂದು ಆಲೋಚಿಸುವುದು ಕಾಂಗ್ರೆಸ್ ಕರ್ತವ್ಯ. ತನಗೆ ಮತ ನೀಡಿರುವ ಮತದಾರರನ್ನು ಉದ್ಧಾರ ಮಾಡಬೇಕಾಗಿರುವುದು ಕಾಂಗ್ರೆಸ್ ಪಕ್ಷದ ಆದ್ಯತೆಯಾಗಬೇಕು. ಆದರೆ ಆ ಸಮುದಾಯವನ್ನು ಓಲೈಸಿ, ಮತ್ತಷ್ಟು ಹಿಂದಕ್ಕೆ ತಳ್ಳುವ ಹೆಜ್ಜೆಗಳನ್ನು ಇಡುವಂತೆ ಕಾಣುತ್ತಿದೆ ಸರ್ಕಾರ. ಮುಸ್ಲಿಂ ಸಮುದಾಯದಲ್ಲಿ ಕೆಲವರು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ ಗೋಹತ್ಯೆ ನಿಷೇಧವನ್ನು ಹಿಂಪಡೆಯುವುದಾದರೆ ಸಂವಿಧಾನದ ನಿರ್ದೇಶಕ ತತ್ವಕ್ಕೆ, ಮಹಾತ್ಮ ಗಾಂಧೀಜಿಗೆ ಏನು ಬೆಲೆ ನೀಡುತ್ತಿದೆ ಕಾಂಗ್ರೆಸ್?
ಬಿಜೆಪಿ ಅವಧಿಯಲ್ಲಿ ನಡೆಸಿದ ಪಠ್ಯಪುಸ್ತಕ ಪರಿಷ್ಕರಣೆಯನ್ನು ರದ್ದುಪಡಿಸಲಾಗುತ್ತದೆ ಎಂದೂ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಇದಕ್ಕೆ ಶಿಕ್ಷಣ ತಜ್ಞರು ಎನ್ನಿಸಿಕೊಂಡ ಕೆಲವರೂ ಒತ್ತಾಯ ಮಾಡುತ್ತಿದ್ದಾರೆ. ಈಗಾಗಲೆ ಅನೇಕ ಕಡೆಗಳಲ್ಲಿ ಶಾಲೆ ಆರಂಭವಾಗಿದೆ. ಇನ್ನು ನಾಲ್ಕೈದು ದಿನದಲ್ಲಿ ಸಂಪೂರ್ಣ ಶಾಲೆಗಳು ಆರಂಭವಾಗುತ್ತವೆ. ಈ ಸಮಯದಲ್ಲಿ ಪಠ್ಯ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳುವುದು ಸರಿಯೆ? ಹಿಜಾಬ್ ವಿಚಾರವನ್ನು ಮುಸ್ಲಿಂ ಸಮಾಜದ ಕೆಲವರು ಇಷ್ಟಪಡುತ್ತಿರುವಂತೆ ನಿರ್ಧಾರ ಮಾಡಬೇಕೆ? ಅಥವಾ ನಿಜವಾಗಿಯೂ ಈಗಿನ ಜಗತ್ತಿನ ಅವಶ್ಯಕತೆಗೆ ತಕ್ಕಂತೆ ನಿರ್ಧಾರ ಮಾಡಬೇಕೆ ಎಂಬ ಕುರಿತೂ ಸರ್ಕಾರದಲ್ಲಿ ಸ್ಪಷ್ಟತೆ ಇದ್ದಂತಿಲ್ಲ. ಇನ್ನು, ಅನವಶ್ಯಕವಾಗಿ ಬಜರಂಗದಳ ಹಾಗೂ ಆರ್ಎಸ್ಎಸ್ ನಿಷೇಧದ ಮಾತನ್ನು ಆಡುತ್ತಿರುವುದಾದರೂ ಏತಕ್ಕೆ?
ನಿಜಕ್ಕೂ ರಾಜ್ಯ ಸರ್ಕಾರಕ್ಕೆ ಈ ಅಧಿಕಾರವಾದರೂ ಇದೆಯೇ? ಇದನ್ನಾದರೂ ಆಲೋಚನೆ ಮಾಡಬೇಕಲ್ಲವೇ? ಆರ್ಎಸ್ಎಸ್ 1925ರಲ್ಲಿ ಆರಂಭವಾಗಿ ಇನ್ನು 2 ವರ್ಷದಲ್ಲಿ ಶತಮಾನೋತ್ಸವ ಆಚರಿಸುವ ಸಂಘಟನೆ. ಭಾರತವಷ್ಟೆ ಅಲ್ಲದೆ ವಿದೇಶಗಳಲ್ಲೂ ವಿವಿಧ ರೂಪಗಳಲ್ಲಿ ತನ್ನ ಬಾಹುಗಳನ್ನು ಚಾಚಿಕೊಂಡಿದೆ. ಈ ಹಿಂದೆ ಮೊದಲಿಗೆ ಗಾಂಧಿ ಹತ್ಯೆ ಸಂದರ್ಭದಲ್ಲಿ, ನಿಷೇಧ, ನಿರ್ಬಂಧಕ್ಕೆ ಒಳಗಾಗಿದ್ದರೂ ನಂತರ ಕಾನೂನಾತ್ಮಕವಾಗಿ ಹೋರಾಡಿ ನಡೆಯುತ್ತಿರುವ ಸಂಘಟನೆ. ಹಾಗೆಂದು ಈ ಸಂಘಟನೆಯ ಸಿದ್ಧಾಂತವನ್ನು ಎಲ್ಲರೂ ಒಪ್ಪಲೇಬೇಕು, ಅದನ್ನು ಪ್ರಶ್ನೆಯೇ ಮಾಡಬಾರದು ಎಂದು ಹೇಳುತ್ತಿಲ್ಲ. ಆದರೆ ನಮಗೆ ಆ ಸಿದ್ಧಾಂತ ಇಷ್ಟವಿಲ್ಲ ಎಂಬ ಕಾರಣಕ್ಕೆ ನಿಷೇಧವನ್ನೇ ಮಾಡಬೇಕು ಎನ್ನುವುದು ಸರಿಯೇ? ಗಾಂಧೀ ವಿಚಾರಗಳು ತನಗೆ ಹಿಡಿಸಲಿಲ್ಲ, ಅದು ದೇಶಕ್ಕೆ ಮಾರಕ ಎಂದು ತಾನು ಭಾವಿಸಿದ ಕೂಡಲೆ ಅವರನ್ನು ಕೊಂದುಬಿಡಬೇಕೆಂಬ ಆಲೋಚನೆ ಮಾಡಿದ ನಾಥೂರಾಮ್ ಗೋಡ್ಸೆಗೂ ಈ ಆಲೋಚನೆಗೂ ಏನು ವ್ಯತ್ಯಾಸ ಉಳಿಯುತ್ತದೆ?
ಪೊಲೀಸರು ಆಯುಧ ಪೂಜೆಯ ದಿನ ಕೇಸರಿ ಶಲ್ಯ ಅಥವಾ ಅಂಗಿಯನ್ನು ಧರಿಸಿದ್ದು ಹೇಗೆ ಸಂವಿಧಾನಕ್ಕೆ ವಿರುದ್ಧವಾಗುತ್ತದೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಬೇಕು. ದೇಶದ ತ್ರಿವರ್ಣ ಧ್ವಜದಲ್ಲಿ ಕೇಸರಿ ಬಣ್ಣವಿದೆ. ಹಾಗೆ ಬಟ್ಟೆ ಧರಿಸಿದ ಪೊಲೀಸರು ಯಾರ ಮೇಲಾದರೂ ದಾಳಿ ಮಾಡಿದ್ದಾರೆಯೇ? ತಮ್ಮ ಪಾಡಿಗೆ ಕುಟುಂಬದೊಂದಿಗೆ ಸಂತಸಪಟ್ಟಿದ್ದರು. ಇದೊಂದೇ ವಿಷಯ ಇಟ್ಟುಕೊಂಡು, ʼಕೇಸರೀಕರಣಕ್ಕೆ ಅವಕಾಶ ನೀಡುವುದಿಲ್ಲʼ ಎಂದು ಅವರನ್ನೇ ಬೆದರಿಸಲು ಹೋಗುವುದು ಜನಪ್ರತಿನಿಧಿಗಳಿಗೆ ಶೋಭಿಸುವುದಿಲ್ಲ. ಶಾಸಕಾಂಗವು ಕಾರ್ಯಾಂಗವನ್ನು ವಿಶ್ವಾಸಕ್ಕೆ ತಂದುಕೊಂಡು ಕೆಲಸವನ್ನು ಸಾಧಿಸಿಕೊಳ್ಳಬೇಕು. ಅದು ಬಿಟ್ಟು ಧಮ್ಕಿ ಹಾಕಿದರೆ ಅವರು ಕೇಳುತ್ತಾರೆಯೇ?
ಇದನ್ನೂ ಓದಿ: ವಿಸ್ತಾರ ಅಂಕಣ: ಜನಕಲ್ಯಾಣದ ಕನಸಿಗೆ ಕಾರ್ಯಾಂಗವೂ ಕೈ ಜೋಡಿಸಲಿ
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ, ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ, ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ ಧನ, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎನ್ನುವ ಸ್ಪಷ್ಟ ಘೋಷಣೆಗಳನ್ನು ಕಾಂಗ್ರೆಸ್ ಮಾಡಿತ್ತು. ಬೆಲೆಯೇರಿಕೆಯ ಬಿಸಿಲಿಗೆ ಬಳಲಿರುವ ಬಡವರು, ಕೆಳ ಮಧ್ಯಮ ವರ್ಗದವರು, ಮಧ್ಯಮವರ್ಗದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಯೋಜನೆ ಯಾವಾಗ ಜಾರಿ ಎಂದು ಕೇಳಿದರೆ, “ಹಾದಿ ಬೀದಿಯಲ್ಲಿ ಹೋಗುವವರಿಗೆ ಕೊಡುವುದಕ್ಕೆ ಆಗುತ್ತದೆಯೇ?” ಎಂಬ ಮಾತನ್ನು ಕಾಂಗ್ರೆಸ್ ಆಡುತ್ತಿದೆ.
ಅಂದು ಮತ ಕೇಳುವಾಗ ಇದ್ದ ಬದ್ಧತೆ, ವಿಶ್ವಾಸ, ಆತ್ಮೀಯತೆ ಕೇವಲ ಒಂದೇ ವಾರಕ್ಕೆ ಕಾಣೆಯಾಗುವಂತೆ ಕಾಣುವುದು ಒಳ್ಳೆಯ ಲಕ್ಷಣವಲ್ಲ. ಹಾದಿಬೀದಿಯಲ್ಲಿ ಹೋಗುವವರಿಗೆ ಯೋಜನೆ ನೀಡಲಾಗುವುದಿಲ್ಲ ಎನ್ನುವ ಸರ್ಕಾರದ್ದೇ ಭಾಗವಾಗಿರುವವರು, ಗೋಹತ್ಯೆ ನಿಷೇಧ ವಾಪಸ್, ಪಠ್ಯ ಪರಿಷ್ಕರಣೆ ವಾಪಸ್, ಬಜರಂಗ ದಳ ನಿಷೇಧ, ಆರ್ಎಸ್ಎಸ್ ನಿಷೇಧದಂತಹ ವಿಚಾರಗಳನ್ನು ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಬಹುಶಃ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಹೆಣಗಾಡುತ್ತಿರುವ ಸರ್ಕಾರ ಹೇಗಾದರೂ ಮಾಡಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿರಬಹುದು. ಇದರ ಭಾಗವಾಗಿ ಇಂತಹ ಅನೇಕ ವಿಚಾರಗಳನ್ನು ಹರಿಯಬಿಟ್ಟು ತಮಾಷೆ ನೋಡುತ್ತಿರಬಹುದು. ಅದು ರಾಜಕೀಯ ತಂತ್ರಗಾರಿಕೆಯ ಭಾಗ.
ಆದರೆ ಭಾರತದ ಸಂವಿಧಾನದಲ್ಲೇ ಅಡಕವಾಗಿರುವ ವಿಚಾರದ ಕುರಿತು, ದೇಶದ ಮುಂದಿನ ಭವಿಷ್ಯವಾದ ಮಕ್ಕಳ ಪಠ್ಯದ ಕುರಿತು, ಸಮಾಜದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ವ್ಯಕ್ತಿ ಹಾಗೂ ಸಂಘಟನೆಗಳ ಕುರಿತು ಹಾದಿಬೀದಿಯಲ್ಲಿ ಮಾತನಾಡುವುದನ್ನು ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಬಳಸುವುದು ಸರಿಯಲ್ಲ. ಇಂತಹ ತಂತ್ರಗಾರಿಕೆಗಳನ್ನು ಕೈಬಿಟ್ಟು, ನಿಜವಾಗಿಯೂ ತಾವು ನೀಡಿರುವ ಘೋಷಣೆಗಳನ್ನು ಈಡೇರಿಸುವತ್ತ ಸರ್ಕಾರ ಗಮನಹರಿಸುವುದು ಒಳಿತಲ್ಲವೇ?
ಇದನ್ನೂ ಓದಿ: ವಿಸ್ತಾರ ಅಂಕಣ: ಅಮೃತ ಕಾಲದ ಶಾಸಕರು ಯಾವ ಮನಸ್ಸಿನಿಂದ ವಿಧಾನಸೌಧ ಪ್ರವೇಶಿಸಬೇಕು?
ಅಂಕಣ
ರಾಜಮಾರ್ಗ ಅಂಕಣ: ಇವರ ಬದುಕು ಒಂದು ಥ್ರಿಲ್ಲರ್ ಸಿನೆಮಾಗಿಂತ ರೋಚಕ ಆಗಿದೆ!
ಸಾವು ಬದುಕಿನ ಹೋರಾಟವನ್ನು ನಡೆಸುವ ವೃತ್ತಿಗೆ ನಾನು ಅನಿವಾರ್ಯವಾಗಿ ಬಂದಾಗಿತ್ತು. ಒಬ್ಬ ಸಾಮಾನ್ಯ ಹುಡುಗಿ ಆಗಿದ್ದ ನಾನು ಸ್ಟಂಟ್ ಹುಡುಗಿ ಆದ ಕತೆ ಅದು. ಧೈರ್ಯ ಮಾತ್ರ ನನಗೆ ಅಂದು ಬಂಡವಾಳ ಆಗಿತ್ತು. ನನ್ನಲ್ಲಿ ಫೈಟಿಂಗ್ ಸ್ಪಿರಿಟ್ ಇದೆ ಅಂತ ನನಗೆ ಗೊತ್ತಿತ್ತು. ಆದರೆ ನನಗೆ ಸ್ಟಂಟ್ ಮಾಡಲು ಯಾವುದೇ ವೃತ್ತಿಪರ ತರಬೇತಿ ಕೂಡ ಆಗಿರಲಿಲ್ಲ.
ಇವರ ಬದುಕು ಯಾವ ಥ್ರಿಲ್ಲರ್ ಸಿನೆಮಾದ ಕಥೆಗಿಂತ ಕಡಿಮೆ ಇಲ್ಲ ಅನ್ಸುತ್ತೆ! ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯರಾದ ಈ ‘ಸಲ್ವಾರ್ ಕಮೀಜ್’ ಹುಡುಗಿಯು ಇಂದು ಬಾಲಿವುಡ್ ಸಿನೆಮಾರಂಗದಲ್ಲಿ ಲೀಡ್ ಸ್ಟಂಟ್ ಹುಡುಗಿಯಾಗಿ ಬೆಳೆದದ್ದು ನಿಜಕ್ಕೂ ಅದ್ಭುತವೇ ಸರಿ.
ಆಕೆ ಗೀತಾ ಟಂಡನ್ – ಬಾಲಿವುಡ್ ಸಿನೆಮಾ ರಂಗದ ಲೀಡ್ ಸ್ಟಂಟ್ ವುಮನ್.
ನಾವು ಸಿನೆಮಾ ನೋಡುವಾಗ ಹೀರೋ ಅಥವಾ ಹೀರೋಯಿನ್ ಎತ್ತರದ ಬಿಲ್ಡಿಂಗ್ ಮೇಲಿಂದ ಕೆಳಗೆ ಹಾರುವಾಗ, ಫೈಟ್ ಮಾಡುವಾಗ, ಗ್ಲಾಸು ಒಡೆದು ಹಾರುವಾಗ, ವೇಗವಾಗಿ ಬೈಕ್ ಅಥವಾ ಕಾರನ್ನು ಓಡಿಸುವಾಗ, ಬೆಂಕಿಯ ಕೆನ್ನಾಲಿಗೆಯ ಮೂಲಕ ಹಾರುವಾಗ ಶಿಳ್ಳೆ ಹೊಡೆದು ಖುಷಿಪಡುತ್ತೇವೆ. ಆದರೆ ತೆರೆಯ ಹಿಂದೆ ಆ ಸಾಹಸವನ್ನು ಮಾಡುವವರು ಬೇರೆ ಯಾರೋ ಆಗಿರುತ್ತಾರೆ. ಜೀವದ ಹಂಗು ತೊರೆದು ಅವರು ಈ ಸಾಹಸಗಳನ್ನು ಮಾಡುತ್ತಾರೆ. ಅವರನ್ನು ‘ಸ್ಟಂಟ್ ಮಾಸ್ಟರ್’ ಅನ್ನುತ್ತಾರೆ. ಇದೀಗ ಈ ಕ್ಷೇತ್ರದಲ್ಲಿ ಒಬ್ಬಳು ಮಹಿಳೆಯು ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಅವರೇ ಇಂದಿನ ಕಥಾ ನಾಯಕಿ ಗೀತಾ ಟಂಡನ್!
ಆಕೆಯ ಕಥೆಯನ್ನು ಆಕೆಯ ಬಾಯಿಂದ ಕೇಳುವುದೇ ಒಳ್ಳೆಯದು. ಓವರ್ ಟು ಗೀತಾ.
ನನಗೂ ಬ್ರಹ್ಮಾಂಡ ಕನಸುಗಳು ಇದ್ದವು
ನಾನು ಹುಟ್ಟಿದ್ದು ಮುಂಬೈಯ ಒಂದು ಸಾಮಾನ್ಯವಾದ ಕುಟುಂಬದಲ್ಲಿ. ನನಗೂ ದೊಡ್ಡ ದೊಡ್ಡ ಕನಸುಗಳು ಇದ್ದವು. ನನಗೆ ನಾಲ್ಕು ಜನ ಒಡಹುಟ್ಟಿದವರು. 7ನೆಯ ವರ್ಷಕ್ಕೆ ನನ್ನ ಅಮ್ಮ ತೀರಿದರು. 10ನೆಯ ವರ್ಷದಲ್ಲಿ ಅಪ್ಪ ಸತ್ತರು. ನನ್ನ ಚಿಕ್ಕಪ್ಪ ನನ್ನನ್ನು 10ನೇ ತರಗತಿಯವರೆಗೆ ಓದಿಸಿದರು. ನನಗೆ 14ನೆಯ ವರ್ಷಕ್ಕೆ ಬದುಕು ಅರ್ಥ ಆಗುವ ಮೊದಲೇ ಮದುವೆ ಆಗಿ ಹೋಯಿತು. ಅಲ್ಲಿಂದ ನನಗೆ ದಿನವೂ ನರಕ ದರ್ಶನವೆ ಆರಂಭ ಆಯಿತು.
ನನ್ನ ಗಂಡ ಅನ್ನಿಸಿಕೊಂಡವನು ಮಹಾಕುಡುಕ ಮತ್ತು ಲಂಪಟ. ಅತ್ತೆ ಮಹಾ ಕ್ರೂರಿ. ಕೈ ಹಿಡಿದ ಗಂಡ ದಿನವೂ ನನ್ನನ್ನು ಹೊಡೆದು, ಬಡಿದು ದೌರ್ಜನ್ಯ ಮಾಡಿ ‘ ನಾನು ಗಂಡಸು’ ಎಂದು ಪ್ರೂವ್ ಮಾಡುತ್ತಿದ್ದ. ಅತ್ತೆಯಂತು ಯಾವಾಗಲೂ ತನ್ನ ಮಗನಿಗೆ ಸಪೋರ್ಟ್ ಆಗಿ ನಿಂತು ಬಿಡುತ್ತಿದ್ದರು. “ಹೋಗು, ನಿನ್ನ ಹೆಂಡತಿಯ ಮೇಲೆ ಬಲಾತ್ಕಾರ ಮಾಡು” ಎಂದು ಹೇಳೋರು!
ನಾನು ಏನು ಮಾಡಬಹುದಿತ್ತು?
ಪೋಲಿಸ್ ಸ್ಟೇಷನ್ನಿಗೆ ಒಮ್ಮೆ ದೂರು ಕೊಡಲು ಹೋಗಿದ್ದೆ.
ಪೊಲೀಸರು ” ಹೋಗಮ್ಮ ಹೋಗು. ಇದು ಗಂಡ ಹೆಂಡತಿ ಜಗಳ. ಇವತ್ತು ನೀವು ಹೊಡೆದಾಡುತ್ತೀರಿ. ನಾಳೆ ಒಂದಾಗುತ್ತೀರಿ. ಸದ್ಯಕ್ಕೆ ನಿನ್ನ ಅಕ್ಕನ ಮನೆಗೆ ಹೋಗು” ಅಂದಿದ್ದರು. ಅಕ್ಕನ ಮನೆಗೆ ಹೋದರೆ ತಿರಸ್ಕಾರದ ಭಾವನೆಯಿಂದ ಉಸಿರು ಕಟ್ಟಿತು. ಅಲ್ಲಿಂದ ಮತ್ತೆ ಗಂಡನ ಮನೆಗೆ ಬಂದಾಗ ಹಿಂಸೆ ಮತ್ತೂ ಹೆಚ್ಚಾಯಿತು. ನಾನು ಇಷ್ಟ ಪಡದೇ ಎರಡು ಮಕ್ಕಳು ಬಂದು ನನ್ನ ಮಡಿಲಲ್ಲಿ ಕೂತವು! ನಾನು ಬೇರೆ ಏನು ಮಾಡಲು ಸಾಧ್ಯವಿತ್ತು?
ನಾನು ಜೀವ ಉಳಿಸಿಕೊಳ್ಳಲು ಮನೆ ಬಿಟ್ಟು ಓಡಿದ್ದೆ!
ಒಂದು ದಿನ ನನ್ನ ಗಂಡ ಕುಡಿದು ಬಂದು ನನ್ನ ಜುಟ್ಟು ಹಿಡಿದು ಹೊಡೆಯಲು ತೊಡಗಿದ್ದ. ಆಗ ಪ್ರಾಣವನ್ನು ಉಳಿಸಲು ನನ್ನ ಎರಡು ಪುಟ್ಟ ಮಕ್ಕಳನ್ನು ಗಟ್ಟಿಯಾಗಿ ಹಿಡಿದು ಓಡಲು ತೊಡಗಿದೆ. ಬೀದಿಯಲ್ಲಿ ನಿಂತವರು ಎಲ್ಲರೂ ನನ್ನನ್ನು ನೋಡುವರೆಂದು ನನಗೆ ಗೊತ್ತಿತ್ತು. ಆದರೆ ನನಗೆ ನನ್ನ ಮಕ್ಕಳ ಪ್ರಾಣವನ್ನು ಉಳಿಸುವುದು ಮುಖ್ಯ ಆಗಿತ್ತು. ರಸ್ತೆ ಬದಿಯಲ್ಲಿ ಮಲಗಲು ಭಯ. ಕೊನೆಗೆ ಒಂದು ಗುರುದ್ವಾರದಲ್ಲಿ ಮಲಗುವ ವ್ಯವಸ್ಥೆ ಆಯಿತು. ಆಗ ನನಗೆ ಕೇವಲ 20 ವರ್ಷ!
ಒಬ್ಬ ಗೆಳತಿಯು ನನ್ನ ಸಹಾಯಕ್ಕೆ ಬಂದಳು. ” ಒಂದು ಕೆಲ್ಸ ಇದೆ ಗೀತಾ. ಮಾಡ್ತೀಯಾ? ” ಅಂದಳು.
“ನನ್ನ ಮಕ್ಕಳಿಗಾಗಿ ಯಾವ ಕೆಲಸವನ್ನು ಬೇಕಾದರೂ ಮಾಡುತ್ತೇನೆ” ಎಂದು ಚೀರಿ ಹೇಳಿದ್ದೆ. ಕೇವಲ ಎಸೆಸೆಲ್ಸಿ ಕಲಿತ ನನಗೆ ಯಾರು ಕೆಲಸ ಕೊಡುತ್ತಾರೆ? ಹಸಿವು, ಹತಾಶೆ ಎರಡೂ ಜೊತೆಗೆ ಸೇರಿ ನಾನು ದೊರೆತ ಯಾವ ಕೆಲಸವನ್ನು ಬೇಕಾದರೂ ಮಾಡಲು ಸಿದ್ಧ ಎಂದಿದ್ದೆ. ಸ್ವಾಭಿಮಾನದ ಬದುಕು ಕಟ್ಟುವುದು ನನಗೆ ಮುಖ್ಯವಾಗಿತ್ತು. ಆತ್ಮಹತ್ಯೆಯನ್ನು ಮಾಡುವ ಯೋಚನೆ ಬಂದಾಗಲೆಲ್ಲ ಮಕ್ಕಳ ಮುಖ ನೋಡುತ್ತಿದ್ದೆ. ಆಗ ಆತ್ಮಹತ್ಯೆಯ ಯೋಚನೆ ಮರೆತುಹೋಗ್ತಿತ್ತು.
ನಾನು ಆರಿಸಿಕೊಂಡದ್ದು ಸ್ಟಂಟ್ ಮಾಸ್ಟರ್ ವೃತ್ತಿ!
ಸಾವು ಬದುಕಿನ ಹೋರಾಟವನ್ನು ನಡೆಸುವ ವೃತ್ತಿಗೆ ನಾನು ಅನಿವಾರ್ಯವಾಗಿ ಬಂದಾಗಿತ್ತು. ಒಬ್ಬ ಸಾಮಾನ್ಯ ಹುಡುಗಿ ಆಗಿದ್ದ ನಾನು ಸ್ಟಂಟ್ ಹುಡುಗಿ ಆದ ಕತೆ ಅದು. ಧೈರ್ಯ ಮಾತ್ರ ನನಗೆ ಅಂದು ಬಂಡವಾಳ ಆಗಿತ್ತು. ನನ್ನಲ್ಲಿ ಫೈಟಿಂಗ್ ಸ್ಪಿರಿಟ್ ಇದೆ ಅಂತ ನನಗೆ ಗೊತ್ತಿತ್ತು. ಆದರೆ ನನಗೆ ಸ್ಟಂಟ್ ಮಾಡಲು ಯಾವುದೇ ವೃತ್ತಿಪರ ತರಬೇತಿ ಕೂಡ ಆಗಿರಲಿಲ್ಲ. ಮೊದಲು ಬೈಕ್,ಕಾರ್ ಅತ್ಯಂತ ವೇಗವಾಗಿ ಓಡಿಸುವುದನ್ನು ಕಲಿತೆ. ಮಾರ್ಷಿಯಲ್ ಆರ್ಟ್ ಕಲಿತೆ. ಫಿಸಿಕಲ್ ಫಿಟ್ನೆಸ್ ತಂತ್ರಗಳನ್ನು ಕಲಿತೆ. ಹಸಿವು ನನಗೆ ಎಲ್ಲವನ್ನೂ ಕಲಿಸಿತು. ಹಲವು ಸಿನೆಮಾ ಮಂದಿಯ ಪರಿಚಯ ಆಯಿತು. ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ನನಗೆ ದೇವರಂತೆ ಅವಕಾಶಗಳನ್ನು ಕೊಟ್ಟರು. ನನ್ನ ಬದುಕಿನಲ್ಲಿ ನಾನು ತಿಂದ ಪೆಟ್ಟುಗಳು ನನ್ನನ್ನು ಗಟ್ಟಿ ಮಾಡಿದವು.
ಹೆಜ್ಜೆ ಹೆಜ್ಜೆಗೂ ಅಪಾಯ, ಪ್ರಾಣ ಭಯ
ನಾನೀಗ ನಿತ್ಯ ಮಾಡುತ್ತಿರುವುದು ತುಂಬಾ ಅಪಾಯದ ಕೆಲಸ! ಹಲವು ಬಾರಿ ನನಗೆ ಗಾಯ ಆಗಿದೆ. ಎಲುಬು ಮುರಿದಿದೆ. ಲಡಾಕ್ ಶೂಟಿಂಗ್ ಹೊತ್ತಿಗೆ ಬೆಂಕಿಯ ನಡುವಿಂದ ಹಾರುವಾಗ ನನ್ನ ಮುಖ, ಅರ್ಧ ದೇಹ ಸುಟ್ಟು ಹೋಗಿತ್ತು. ಆದರೆ ಬದುಕಿ ಬಂದೆ! ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್, ಪರಿಣಿತಾ ಚೋಪ್ರ, ಬಿಪಾಶಾ ಬಸು, ಐಶ್ವರ್ಯ ರೈ ಇವರಿಗೆಲ್ಲ ಸ್ಟಂಟ್ ಮಾಡಿದ್ದೇನೆ. ಚೆನ್ನೈ ಎಕ್ಸಪ್ರೆಸ್, ಸಿಂಗ್ ಸಾಬ್ ಗ್ರೇಟ್, ಹಸೀ ತೋ ಫಸೀ, ಲಮ್ಹಾ, ರಾಗಿಣಿ ಎಂಎಂಎಸ್……….. ಮೊದಲಾದ ಹಲವು ಸಿನೆಮಾಗಳಲ್ಲಿ ಫೈಟ್ ಕಂಪೋಸ್ ಮಾಡಿದ್ದೇನೆ. ಮೊದಲೆಲ್ಲ ಫೈಟ್ ಮಾಡುವಾಗ ಭಯ ಆಗುತಿತ್ತು. ಆದರೆ ಈಗ ನಾನೊಬ್ಬ ವೃತ್ತಿನಿರತ ಸ್ಟಂಟ್ ವುಮನ್!
ಕಲರ್ಸ್ ಟಿವಿ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ‘ಖತರೊಂ ಕಾ ಖಿಲಾಡಿ’ ಯಲ್ಲಿ ಭಾಗವಹಿಸಿ ನಾನು ಬಹುಮಾನ ಗೆದ್ದಿದ್ದೆ. ಆಗ ನನ್ನ ಫೈಟಿಂಗ್ ಸಾಮರ್ಥ್ಯವನ್ನು ಇಡೀ ದೇಶವೇ ನೋಡಿತು.
ಇದನ್ನೂ ಓದಿ: ರಾಜಮಾರ್ಗ ಅಂಕಣ: ಗಣಿತ ಕಲಿಸಿದ ಜೀವನದ ಪಾಠ – ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ!
ಇಂದು ನಾನೊಬ್ಬ ಸ್ವಾವಲಂಬಿ ಮಹಿಳೆ ಆಗಿದ್ದೇನೆ. ಮುಂಬೈಯಲ್ಲಿ ಸ್ವಂತ ಮನೆ ಇದೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ನನಗೀಗ ನನ್ನದೇ ಆದ ಕನಸುಗಳಿವೆ.
ಭರತ ವಾಕ್ಯ
‘ಯಾವುದೇ ಹೆಣ್ಣು ಮಕ್ಕಳು ಜೀವನದಲ್ಲಿ ಸೋಲನ್ನು ಒಪ್ಪಿಕೊಳ್ಳಬೇಡಿ. ಕೊನೆಯ ಕ್ಷಣದವರೆಗೂ ಎದ್ದು ನಿಂತು ಹೋರಾಡಿ. ಆಗ ಮಾತ್ರ ನಿಮ್ಮ ಬದುಕಿನಲ್ಲಿ ಬಣ್ಣ ಬಣ್ಣದ ಕಾಮನಬಿಲ್ಲು ಮೂಡುವುದು’ ಎಂದು ಆಕೆ ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು!
ಅಂದ ಹಾಗೆ ಗೀತಾ ಅವರಿಗೆ ಈಗ 37 ವರ್ಷ!
ಅಂಕಣ
ಮೊಗಸಾಲೆ ಅಂಕಣ: AIIMS ಸಂಸ್ಥೆ ಹೆಸರಿನಲ್ಲಿ ರಾಯಚೂರು v/s ಕಲಬುರಗಿ ಶೀತಲ ಸಮರ ಶುರು
ಎಐಐಎಂಎಸ್ ಸಂಸ್ಥೆ ರಾಯಚೂರಿಗೆ ಬೇಕು ಎಂದು ಕಾಂಗ್ರೆಸ್ನ ಒಂದು ಬಣದ ಬೇಡಿಕೆ; ಕಲಬುರಗಿಯಲ್ಲಿ ಆಗಬೇಕು ಎಂದು ಇನ್ನೊಂದು ಬಣ. ಇದು ಶೀತಲ ಸಮರಕ್ಕೆ ಕಾರಣವಾಗಲಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೆಂದರೆ ಕಲಬುರಗಿ ಅಭಿವೃದ್ಧಿಯೊಂದೇ ಅಲ್ಲ ಎಂಬ ನಿಲುವಿಗೆ ರಾಜ್ಯ ಸರ್ಕಾರ ಬರಬೇಕಿದೆ.
ಸುಭದ್ರ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ರಚನೆ ಪ್ರಕ್ರಿಯೆಯಲ್ಲಿ ಮುಳುಗಿದ್ದಾರೆ. ಜುಲೈ ಏಳರಂದು ವಿಧಾನ ಮಂಡಲದಲ್ಲಿ ಅವರ ಹೆಸರಿನಲ್ಲಿ ಹದಿನಾಲ್ಕನೇ ಬಜೆಟ್ ಮಂಡನೆಯಾಗಲಿದೆ. ಸಹಜ ಕುತೂಹಲ ಕೆರಳಿಸಿರುವ ಈ ಮುಹೂರ್ತಕ್ಕೆ ಸಾರ್ವಜನಿಕರು ಎದುರು ನೋಡುತ್ತಿದ್ದಾರೆ. ಹಲವು ಸವಾಲನ್ನು ಮೈಮೇಲೆ ಪಕ್ಷವಾಗಿ ಎಳೆದುಕೊಂಡಿರುವ ಕಾಂಗ್ರೆಸ್ಸು ಅವೆಲ್ಲವನ್ನೂ ಸರ್ಕಾರವಾಗಿ ನಿಭಾಯಿಸಬೇಕಾಗಿದೆ. ಈ ನಿಭಾವಣೆ ಹೇಗೆ ಎನ್ನುವುದಕ್ಕೆ ಒಂದಿಷ್ಟು ಉತ್ತರ ಬಜೆಟ್ನಲ್ಲಿ ಸಿಗುವ ಸಾಧ್ಯತೆ ಇದೆಯೆಂದೇ ಕುತೂಹಲ ಗರಿಗೆದರಿದೆ.
ರಾಜಧಾನಿ ಬೆಂಗಳೂರು ಮಟ್ಟದಲ್ಲಿ ನಡೆದಿರುವ ಬೇಕು ಬೇಡಗಳ ಪಟ್ಟಿ ಬಹಳ ಉದ್ದನೆಯದು. ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿ, ಹತ್ತಿರದಲ್ಲಿರುವವರನ್ನು ಇನ್ನಷ್ಟು ಹತ್ತಿರಕ್ಕೆ ಒಳಬಿಟ್ಟುಕೊಂಡು, ದೂರದಲ್ಲಿರುವವರನ್ನು ಮತ್ತಷ್ಟು ದೂರವೇ ಇಡುವ ಜಾಯಮಾನ ಅನೂಚಾನ. ಈ ಮಾತಿಗೆ ಸಿದ್ದರಾಮಯ್ಯ ಸರ್ಕಾರ ಒಂದು ಅಪವಾದವಾಗಿ ನಡೆದುಕೊಂಡೀತೇ ಎಂಬ ಆಶಾಭಾವನೆ ಇದೀಗ ಕಲ್ಯಾಣ ಕರ್ನಾಟಕದಲ್ಲಿ ಗರಿಗೆದರಿದೆ.
ಹೈದರಾಬಾದ್ ಕರ್ನಾಟಕವೆಂದಿದ್ದುದು ಕಲ್ಯಾಣ ಕರ್ನಾಟಕವಾಗಿದ್ದು ಒಂದು ಇತಿಹಾಸವಾದರೆ, ಅಭಿವೃದ್ಧಿ ಮಾನದಂಡದಲ್ಲಿ ತೀವ್ರ ಅಸಮತೋಲನಕ್ಕೆ ಒಳಗಾದ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆಂದೇ ಸಂವಿಧಾನಕ್ಕೆ 371 (ಜೆ) ವಿಶೇಷ ತಿದ್ದುಪಡಿ ತಂದು ಅಭಿವೃದ್ಧಿಗೆ ಚುರುಕು ಗತಿ ತಂದಿದ್ದು ಮತ್ತೊಂದು ಇತಿಹಾಸ.
ಇದಕ್ಕೂ ಪೂರ್ವದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆಯಾಗಿದ್ದರೂ ಆದ ಅಭಿವೃದ್ಧಿ ಶೂನ್ಯಕ್ಕಿಂತ ಅತ್ತತ್ತ. ಪ್ರದೇಶದ ಎಲ್ಲ (ಎಂಎಲ್ಸಿ ಒಳಗೊಂಡಂತೆ) ಶಾಸಕರು, ರಾಜ್ಯಸಭೆ, ಲೋಕಸಭೆಯ ಎಲ್ಲ ಸದಸ್ಯರು ಮಂಡಳಿಯ ಸದಸ್ಯರು. ಅವರಲ್ಲೇ ಒಬ್ಬರು (ಸಾಮಾನ್ಯವಾಗಿ ಅವರು ಆಡಳಿತ ಪಕ್ಷದ ಶಾಸಕರೇ ಆಗಿರುತ್ತಾರೆ!) ಅಧ್ಯಕ್ಷರು. ಮಂಡಳಿಗೆ ಒಂದಿಷ್ಟು ಜನರನ್ನು ನಾಮನಿರ್ದೇಶನ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ, ಅದರಂತೆ ನಾಮಕರಣಗೊಳ್ಳುವವರು ಆಡಳಿತ ಪಕ್ಷಕ್ಕೆ ಸೇರಿದ ಮುಖಂಡರು. ಐಎಎಸ್ ಅಧಿಕಾರಿಯೊಬ್ಬರು ವ್ಯವಸ್ಥಾಪಕ ನಿರ್ದೇಶಕರು. ಯಥಾ ಪ್ರಕಾರ ಸರ್ಕಾರದ ಸಿಬ್ಬಂದಿ. ಸರ್ಕಾರದ ಕೆಲಸವೆಂದರೆ ತಾನು ಘೋಷಿಸಿದ ಹಣವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುವುದು. ತಮ್ಮ ಅಭಿವೃದ್ಧಿಗೆ ಏನೆಲ್ಲ ಅಗತ್ಯವೆಂದು ಮಂಡಳಿ ಮಂಡಿಸುವ ಪ್ರಸ್ತಾವಗಳಿಗೆ ಅನುಮೋದನೆ ಕೊಟ್ಟು ಜಾರಿಗೆ ಬೇಕಾದ ವ್ಯವಸ್ಥೆ ಕಲ್ಪಿಸುವುದು.
ಘೋಷಿತ ಮೊತ್ತವನ್ನು ಯಾವ ಸರ್ಕಾರವೂ ಒಮ್ಮೆಯೂ ಬಿಡುಗಡೆ ಮಾಡಲಿಲ್ಲ ಎನ್ನುವುದು ಹೈಕ ಅಭಿವೃದ್ಧಿ ಮಂಡಳಿಯ ಕಹಿ ವೃತ್ತಾಂತ. ಮಂಡಳಿ ಮುಂದಿಟ್ಟ ಎಷ್ಟೋ ಯೋಜನೆ ಕಾರ್ಯಾನುಷ್ಟಾನವಾಗಿದ್ದು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಪ್ರಸ್ತಾಪ ಬಂದಾಗ ಈ ನತದೃಷ್ಟ ಪ್ರದೇಶದ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತದೆಂಬ ಒಕ್ಕೊರಲ ಕೂಗು ಮಂಡಳಿಯಲ್ಲಿ ಏಕಧ್ವನಿಯಾಗಿ ಮೊಳಗಲಿಲ್ಲ. ಸರ್ಕಾರದ ನಕಾರಾತ್ಮಕ ನಿಲುವನ್ನು ಖಂಡಿಸುವ ಒಮ್ಮತದ ಠರಾವು ಮೂಡಲಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಆಡಳಿತ ಪಕ್ಷದ ಶಾಸಕರು ತಂತಮ್ಮ ಸರ್ಕಾರದ ಇಲ್ಲವೇ ತಂತಮ್ಮ ಪಾಲುದಾರಿಕೆ ಸರ್ಕಾರದ ಪರವಾಗಿ ಬಾಯಿ ಮುಚ್ಚಿ ಕುಳಿತರೇ ಹೊರತೂ ತಮ್ಮನ್ನು ಆಯ್ಕೆ ಮಾಡಿದ ಮತಕ್ಷೇತ್ರದ ಜನರ ಪರವಾಗಿ ನಿಂತಿದ್ದು ಅಪರೂಪ. ಹೈಕ ಪ್ರದೇಶ ಅಭಿವೃದ್ಧಿ ಮಂಡಳಿ ಸೋತು ಕೈಚೆಲ್ಲಿದ್ದರ ಹಿಂದೆ ಈ ಮತ್ತು ಇಂಥ ಎಷ್ಟೋ ಕಥಾನಕಗಳಿವೆ. ನೌಟಂಕಿ ಕಾರಣವಾಗಿ ಭ್ರಮನಿರಸನಗೊಂಡ ಜನ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುವಂತಾಗಿದ್ದು; ಸಂವಿಧಾನದ ತಿದ್ದುಪಡಿಗೆ ಒತ್ತಾಯಿಸಿ ಬೀದಿಗೆ ಇಳಿಯುವಂತಾಗಿದ್ದು. ಪ್ರತ್ಯೇಕ ರಾಜ್ಯವೊಂದೇ ಪರಿಹಾರವೆಂಬ ಕೂಗು ತಾತ್ಕಾಲಿಕವಾಗಿಯಾದರೂ ಶಮನವಾಗಿದೆ. ಅದು ಶಾಂತಸ್ಥಿತಿಯಲ್ಲಿರುವ ಅಶಾಂತ ಜ್ವಾಲಾಮುಖಿಯಂತೆ ಎನ್ನುವುದನ್ನು ಆಡಳಿತ ನಡೆಸುವವರು ಉಪೇಕ್ಷಿಸಬಾರದು.
ಬೀದರ್, ಕಲಬುರಗಿ, ಯಾದಗೀರ್, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ… ಏಳು ಜಿಲ್ಲೆ ಒಳಗೊಂಡ ಕಲ್ಯಾಣ ಕರ್ನಾಟಕ, ಡಾ.ಡಿ.ಎಂ. ನಂಜುಂಡಪ್ಪ ವರದಿ (ಆಗಿನ್ನೂ ವಿಜಯನಗರ, ಯಾದಗೀರ್ ಪ್ರತ್ಯೇಕ ಜಿಲ್ಲೆ ಆಗಿರಲಿಲ್ಲ) ಪ್ರಕಾರ ಅಭಿವೃದ್ಧಿ ಹೀನ ಪ್ರದೇಶ. ಈ ಅಸಮತೋಲನದ ನಿವಾರಣೆಗೆ ಡಿಎಂಎನ್ ವರದಿ ಸೂಚಿಸಿರುವ ಬಹುತೇಕ ಪರಿಹಾರ ಇನ್ನೂ ಕಾಗದದಲ್ಲೇ ಉಳಿದಿರುವುದಕ್ಕೆ ಕಲಬುರಗಿ ಹೊರತಾದ ಜಿಲ್ಲೆಗಳಲ್ಲಿ ಕಣ್ಣಿಗೆ ರಾಚುವಷ್ಟು ನಿದರ್ಶನಗಳಿವೆ. ನ್ಯಾಯದ ಉಡುಗೊರೆ ಕೊಡುವ ಅವಕಾಶ ಸಿಕ್ಕ ಸಂದರ್ಭದಲ್ಲೆಲ್ಲ ಆಯಾ ಸಂದರ್ಭದಲ್ಲಿದ್ದ ಸರ್ಕಾರ ಅನ್ಯಾಯವನ್ನು ಬಳುವಳಿಯಾಗಿ ನೀಡಿದ್ದಕ್ಕೂ ಸಾಕಷ್ಟು ಉದಾಹರಣೆಗಳಿವೆ. ಇವುಗಳನ್ನು ಗಮನಿಸುವ ಮುನ್ನ ರಾಯಚೂರಿನಿಂದ ಕೇಳಿಬರುತ್ತಿರುವ ಕೂಗಿನತ್ತ ಕಿವಿಗೊಡುವುದು ಅಗತ್ಯವಾಗಿದೆ. ಸಿದ್ದರಾಮಯ್ಯ ಸರ್ಕಾರ ಆಲಿಸಲೇಬೇಕಿರುವ ಕೂಗು ಇದು. ರಾಯಚೂರು ಜಿಲ್ಲೆಯಿಂದ ಕೇಳಿಬಂದು ನಿರರ್ಥಕವಾದ ಮತ್ತೊಂದು ಅರಣ್ಯರೋದನ ಇದಾಗದಂತೆ ನೋಡಿಕೊಳ್ಳುವ ಜಮೇದಾರಿ ಪ್ರಸಕ್ತ ಸರ್ಕಾರದ ಮೇಲಿದೆ ಎನ್ನುವುದನ್ನು ಒತ್ತಿ ಹೇಳುತ್ತಿರುವ ಕೂಗು ಇದು.
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (ಎಐಐಎಂಎಸ್- AIIMS) ಕರ್ನಾಟಕದಲ್ಲಿ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಎಲ್ಲಿ ಅದನ್ನು ಸ್ಥಾಪಿಸಬೇಕೆಂಬ ಸ್ವಾತಂತ್ರ್ಯವನ್ನು ಅದು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಟ್ಟಿದೆ. ಅದನ್ನು ರಾಯಚೂರಿನಲ್ಲಿ ಸ್ಥಾಪಿಸಬೇಕೆಂಬ ಕೂಗು ಈಗ ಜೋರಾಗಿದೆ. ಅದಕ್ಕಾಗಿ ಬರೋಬ್ಬರಿ 400 ದಿನಗಳ ಹಕ್ಕೊತ್ತಾಯ ಚಳವಳಿಯೂ ನಡೆದಿದೆ. ಇದನ್ನು ಮನಗಂಡಿರುವ ಕಾಂಗ್ರೆಸ್ಸು ವಿಧಾನ ಸಭೆ ಚುನಾವಣೆ ಪ್ರಣಾಳಿಕೆಯಲ್ಲಿ “ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ರಾಯಚೂರಿನಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು” ಎಂಬ ಭರವಸೆಯನ್ನೂ ನೀಡಿದೆ.
ವಿಪರ್ಯಾಸವೆಂದರೆ ಅಧಿಕಾರಕ್ಕೆ ಬಂದ ನಂತರದಲ್ಲಿ ಕಾಂಗ್ರೆಸ್ ಮುಖಂಡರಲ್ಲಿ ಕೆಲವರು ರಾಗದ ಪ್ಲೇಟನ್ನು ಬದಲಾಯಿಸುತ್ತಿರುವ ಲಕ್ಷಣ ಕಾಣುತ್ತಿದೆ. ಶರಣ ಪ್ರಕಾಶ ಪಾಟೀಲರು ಸಿದ್ದರಾಮಯ್ಯ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲೂ ಅವರು ಇದೇ ಖಾತೆ ಹೊಂದಿದ್ದರು. ಕಲಬುರ್ಗಿ ಜಿಲ್ಲೆ ಸೇಡಂ ವಿಧಾನ ಸಭೆ ಕ್ಷೇತ್ರದ ಶಾಸಕರಾಗಿರುವ ಅವರು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಖಾಸಾ ಬಳಗದ ಮುಖ್ಯಸ್ಥರಲ್ಲಿ ಒಬ್ಬರು ಮಾತ್ರವೇ ಅಲ್ಲ ಪ್ರಮುಖರು ಕೂಡಾ. ಪಾಟೀಲರು ಸಚಿವರಾದ ಬಳಿಕ ತಮ್ಮದೇ ಪಕ್ಷದ ಪ್ರಣಾಳಿಕೆಯನ್ನು ಮರೆತವರಂತೆ “ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕಲಬುರ್ಗಿಯಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುವುದು” ಎಂದಿದ್ದಾರೆ. ಈ ಸಂಸ್ಥೆಯನ್ನು ರಾಯಚೂರಿನಲ್ಲಿ ಸ್ಥಾಪಿಸಲು ಆಗ್ರಹಿಸಲಾಗುವುದು ಎನ್ನುವುದು ಪ್ರಣಾಳಿಕೆ ಭರವಸೆಯಷ್ಟೇ ಆಗಿರದೆ ಚುನಾವಣಾ ಪ್ರಚಾರಕ್ಕೆಂದು ರಾಯಚೂರಿಗೆ ಬಂದಾಗ ಸ್ವತಃ ಸಿದ್ದರಾಮಯ್ಯ ಜನತೆಗೆ ಇತ್ತ ವಚನವೂ ಹೌದು. ಇದ್ಯಾವುದರ ನಜರೇ ಇಲ್ಲದವರಂತೆ ಶರಣಪ್ರಕಾಶ ಪಾಟೀಲರು ರಾಗ ಬದಲಿಸಿ ಹೊಸ ಪ್ಲೇಟು ಹಾಕಿರುವುದಕ್ಕೆ ಏನಾದರೂ ಬಲವತ್ತರ ಕಾರಣ ಇರಬೇಕಲ್ಲವೇ….? ಸಿದ್ದರಾಮಯ್ಯನವರನ್ನು ವಚನಭ್ರಷ್ಟರ ಸಾಲಿಗೆ ಸೇರಿಸುವ ಕರಾಮತ್ತು ಒಳಗಿಂದೊಳಗೇ ಕೆಲಸ ಮಾಡುತ್ತಿರಬಹುದೇ…?
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕಲಬುರಗಿಯಲ್ಲಿ ಸ್ಥಾಪಿಸುವಂತೆ ಕೇಂದ್ರದ ಮನವೊಲಿಸುವ ಇರಾದೆ ಮಲ್ಲಿಕಾರ್ಜುನ ಖರ್ಗೆಯವರಲ್ಲಿರುವುದು ಗುಟ್ಟಿನ ಸಂಗತಿಯಲ್ಲ. ಈ ವಿಚಾರವಾಗಿ ಸಂದರ್ಭ ಸಿಕ್ಕಾಗಲೆಲ್ಲ ಅವರು ಇದನ್ನು ಪ್ರತಿಪಾದಿಸಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಮಾತ್ರಕ್ಕೆ ಅದೇ ವೇದವಾಕ್ಯವಲ್ಲ ಎಂದು ಈಗಾಗಲೇ ಸಚಿವ ಚೆಲುವರಾಯಸ್ವಾಮಿಯಂಥವರು ಹೇಳುತ್ತಿರುವುದನ್ನು ಶರಣಪ್ರಕಾಶ ಪಾಟೀಲರು ಕೂಡಾ ಹೇಳಲಾರರು ಎನ್ನುವುದಕ್ಕೆ ಖಾತ್ರಿಯೇನೂ ಇಲ್ಲ. ಇಷ್ಟಕ್ಕೂ ಖರ್ಗೆಯವರು ಸಾರ್ವಜನಿಕವಾಗಿ ಹೇಳಲಾಗದ ಅವರ ಅಂತರಂಗದ ಭಾವನೆಗಳನ್ನು ಒಡೆದು ಹೇಳುವವರ ಸಾಲಿನಲ್ಲಿ ಶರಣಪ್ರಕಾಶ ಪಾಟೀಲರು ಇದ್ದಾರೆ. ಎಂದೇ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕಲಬುರಗಿಯಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂಬ ಮಾತು ಅವರ ಬಾಯಿಂದ ಹೊರಬಂದಿದೆ ಎಂಬ ಅನುಮಾನ ರಾಯಚೂರು ಜನರಲ್ಲಿ ಹೆಚ್ಚುತ್ತಿದೆ.
ಕಲಬುರಗಿಯಲ್ಲಿ ಮತ್ತಷ್ಟು ಹೊಸ ಯೋಜನೆಗಳ ಅನುಷ್ಟಾನಕ್ಕೆ ಜಾಗವೇ ಇಲ್ಲ ಎಂಬ ಜನರ ಮಾತಿನಲ್ಲಿ ತುಸು ಉತ್ಪ್ರೇಕ್ಷೆ ಇರುವುದು ನಿಜ; ಆದರೆ ಬಹಳಷ್ಟು ತಥ್ಯವಿರುವುದೂ ನಿಜ. ಅಂಥ ಜಿಲ್ಲೆಗೆ ಮತ್ತೊಂದು ಕೇಂದ್ರದ ಯೋಜನೆಯಾಗಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ತಂದು ಕೂರಿಸುವುದು ಅಸಮತೋಲನ ನಿವಾರಿಸುವ ಕ್ರಮವಂತೂ ಅಲ್ಲವೇ ಅಲ್ಲ. ಸಂಭವನೀಯ ಈ ಅನ್ಯಾಯದತ್ತ ಸ್ವತಃ ಕಾಂಗ್ರೆಸ್ ಮುಖಂಡರೂ, ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಪಾರಸಮಲ್ ಸುಖಾಣಿ, ಮುಖ್ಯ ಮಂತ್ರಿಯ ಗಮನ ಸೆಳೆದಿದ್ದಾರೆ. ಶರಣಪ್ರಕಾಶ ಪಾಟೀಲರ ಹೇಳಿಕೆ ಪಕ್ಷದ ಚುನಾವಣಾ ಪ್ರಣಾಳಿಕೆಗೆ ತದ್ವಿರುದ್ಧವಾಗಿರುವ ನಿಲುವಿನಿಂದ ಕೂಡಿದೆ ಎಂದು ಎಂದು ಪ್ರತಿಪಾದಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಎರಡು ಬಾರಿ ಬಂದಾಗಲೂ ಸಿದ್ದರಾಮಯ್ಯನವರು ರಾಯಚೂರು ಜನತೆಗೆ ನೀಡಿದ್ದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ರಾಯಚೂರಿನಲ್ಲೇ ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಜನರಿಗೆ ನೀಡಿದ್ದ ವಚನವನ್ನು ನೆನಪಿಸಿಕೊಟ್ಟಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2013-18ರ ಅವಧಿಯಲ್ಲಿ ಆಡಳಿತ ನಡೆಸಿದಾಗ ರಾಯಚೂರಿಗೆ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಐಐಟಿ ಸಂಸ್ಥೆಯನ್ನು ಮಂಜೂರು ಮಾಡಿಸುವ ಅವಕಾಶ ಸಿಕ್ಕಿತ್ತು. ನಂಜುಂಡಪ್ಪ ಸಮಿತಿ ರಾಯಚೂರಿನಲ್ಲಿ ಐಐಟಿ ಸ್ಥಾಪಿಸಬೇಕೆಂದು ಶಿಫಾರಸು ಮಾಡದೆ. ಆಗಲೂ ಸ್ಥಳದ ಹೆಸರನ್ನು ಸೂಚಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಳಿತ್ತು. ರಾಜ್ಯ ಸರ್ಕಾರ ಔಚಿತ್ಯ ಜ್ಞಾನ ಮರೆತು ರಾಯಚೂರು ಇಲ್ಲವೇ ಧಾರವಾಡದಲ್ಲಿ ಸ್ಥಾಪಿಸಬಹುದೆಂದು ಡೋಲಾಯಮಾನ ನಿಲುವಿಗೆ ಬಂದ ಕಾರಣ ಸ್ಥಳದ ಆಯ್ಕೆ ಸ್ವಾತಂತ್ರ್ಯ ಕೇಂದ್ರದ್ದಾಗಿ ಐಐಟಿ ಧಾರವಾಡಕ್ಕೆ ಹೋಯಿತು. ಇಂಥದೇ ಎಡವಟ್ಟುತನ ಪುನರಾವರ್ತನೆ ಆಗಬಾರದು; ಆಗಕೂಡದು ಎಂಬುದು ಸುಖಾಣಿ ಪತ್ರದ ಆಶಯ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸುವುದಕ್ಕೆ ಏಕೈಕ ಹೆಸರಾಗಿ ರಾಯಚೂರು ಮಾತ್ರವೇ ಕೇಂದ್ರಕ್ಕೆ ಶಿಫಾರಸು ಆದಲ್ಲಿ ಕಿಂಚಿತ್ ನ್ಯಾಯವಾದರೂ ಸಂದಂತೆ ಆಗಬಹುದೆಂಬ ಸದಾಶಯ ರಾಯಚೂರು ಜಿಲ್ಲೆಯ ಹತ್ತೂ ಸಮಸ್ತರದಾಗಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಸಿಎಂ ಪದವಿ ಹಂಚಿಕೆ: ʼಕೈʼಕಮಾಂಡ್ ಮೌನದ ಹಿಂದೆ ಏನು ಸಂದೇಶವಿದೆ?
ರಾಯಚೂರು ಜಿಲ್ಲೆ ಆರು ವಿಧಾನ ಸಭಾ ಕ್ಷೇತ್ರ ಒಳಗೊಂಡಿದೆ. ಆರರಲ್ಲಿ ಮೂವರು ಕಾಂಗ್ರೆಸ್ ಶಾಸಕರು. ರಾಯಚೂರು ಜಿಲ್ಲೆಯವರೇ ಆಗಿರುವ ಏಐಸಿಸಿ ಕಾರ್ಯದರ್ಶಿ ಎನ್. ಎಸ್. ಬೋಸರಾಜು, ಸಿದ್ದರಾಮಯ್ಯ ಸಂಪುಟದಲ್ಲಿ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವರು. ವಿಧಾನ ಸಭೆ ಅಥವಾ ವಿಧಾನ ಪರಿಷತ್ ಸದಸ್ಯರಲ್ಲದ ಅವರು ಇಷ್ಟರಲ್ಲಿಯೇ ಎಂಎಲ್ಸಿ ಆಗಲಿದ್ದಾರೆ. ವಿಧಾನ ಪರಿಷತ್ನಿಂದ ಏಕೈಕ ಸಚಿವರಾಗಿರುವುದರಿಂದ ಅವರೇ ಸಭಾ ನಾಯಕರೂ ಆಗಲಿದ್ದಾರೆ. ಸಂಪುಟದಲ್ಲಿ ಕೇವಲ ಕಲಬುರಗಿಯದಷ್ಟೇ ಅಲ್ಲದೆ ರಾಯಚೂರಿನ ಗಟ್ಟಿ ಧ್ವನಿಯಾಗಿ ಬೋಸರಾಜು ಕೆಲಸ ಮಾಡಲಿದ್ದಾರೆನ್ನುವುದು ಜಿಲ್ಲೆಯ ಜನರ ಸಮಾಧಾನಕ್ಕೆ ಕಾರಣವಾಗಿರುವ ಬೆಳವಣಿಗೆ. ಶರಣಪ್ರಕಾಶ ಪಾಟೀಲರ ಹೇಳಿಕೆ ಹಿಂದೆ ಯಾರೇ ಇರಲಿ ಅದು ಸಿದ್ದರಾಮಯ್ಯನವರಿಗೆ ಮುಖ್ಯವಾಗುವುದಿಲ್ಲ ಎಂದು ನಂಬಬಹುದು.
ಕಲಬುರಗಿಯಲ್ಲಿ ಮೂರು ವೈದ್ಯಕೀಯ ಕಾಲೇಜು; ವಿಮಾನ ನಿಲ್ದಾಣ; ರೈಲ್ವೆ ವಿಭಾಗೀಯ ಕೇಂದ್ರ; ಇಎಸ್ಐ ಆಸ್ಪತ್ರೆ; ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರ, ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಮುಂತಾದ ಯೋಜನೆಗಳಿವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೆಂದರೆ ಕಲಬುರಗಿ ಅಭಿವೃದ್ಧಿಯೊಂದೇ ಅಲ್ಲ ಎಂಬ ನಿಲುವಿಗೆ ರಾಜ್ಯ ಸರ್ಕಾರ ಬರಬೇಕಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ : ಮುಂಬರುವ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸರ್ಕಾರದಿಂದ ‘ಗ್ಯಾರಂಟಿ’ಗಳ ಚಲಾವಣೆ!
ಅಂಕಣ
Consumerism: ಮಿತಿಯಿಲ್ಲದ ಖರೀದಿ; ಮನೋರೋಗಕ್ಕೆ ನಾಂದಿ, ಪರಿಸರ ವಿನಾಶದ ಹಾದಿ!
ಕ್ರಿಸ್ಮಸ್ ಹಬ್ಬದಂದು ನ್ಯೂಯಾರ್ಕ್, ವಾಷಿಂಗ್ಟನ್, ಫ್ಲೋರಿಡಾದಂತಹ ನಗರಗಳ ಬೀದಿಗಳು ಮರ, ದೀಪಾಲಂಕಾರ, ಪ್ಲಾಸ್ಟಿಕ್ ಕೈ ಚೀಲ, ವಸ್ತುಮಳಿಗೆಗಳ ಜೊತೆಯಲ್ಲೇ, ನಿರ್ವಿಘಟಿತ ಮಟ್ಟಕ್ಕೆ ತಲುಪಿದ ತ್ಯಾಜ್ಯಗಳಿಂದ ಭರಪೂರವಾಗಿ ಕಂಗೊಳಿಸುತ್ತವೆ.
ಸೋಮೇಶ್ವರ ಗುರುಮಠ
ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯ ಜನಾಂಗವು ತಾನೆಂದುಕೊಂಡಂತೆ ಅತ್ಯಂತ ಪ್ರಗತಿಯ ಹಾದಿಯಲ್ಲಿದೆ. ಆದರೆ ಗಮನಿಸಿ, ತಾನೇ ಎಂದುಕೊಂಡ ಆ ಪ್ರಗತಿಯ ಪಥ ನಿರಂತರವಾದ ಪ್ರಕೃತಿವಿನಾಶಕ್ಕೆ ದ್ಯೋತಕವೆನ್ನಿಸಿದೆ. ಇದರಲ್ಲಿ ತನ್ನತನದ ಮುನ್ನೆಲೆಯ ಹೊರತಾಗಿ ಮತ್ತೇನನ್ನೂ ಕಾಣಲಾರೆವು. ತನ್ನ ಮೂಗಿನ ನೇರಕ್ಕೆ ಇತರೆ ಜೀವವೈವಿಧ್ಯ ಮತ್ತು ಪ್ರಕೃತಿಯ ಸ್ಥಿತಿಗತಿಗಳು ಕಾರ್ಯನಿರ್ವಹಿಸಬೇಕೆನ್ನುವುದೇ ಪರಮೋಚ್ಚ ಗುರಿಯೆನ್ನುವಂತಿದೆ. ಇದರ ಮಧ್ಯೆ ಆಧುನಿಕ ನಾಗರೀಕತೆಗಳೆಲ್ಲವೂ ಏಕಸ್ವರೂಪಿ ಹಿನ್ನೆಲೆಯನ್ನು ಹೊಂದಿರುವುದು ಸರ್ವತೋಮುಖ ಅಭಿವೃದ್ಧಿಯ ಸಂಕೇತವೆಂಬಂತೆ ಕಾಣುವ ಮುಂದುವರಿದ ದೇಶಗಳ ಪರಿಸ್ಥಿಯನ್ನೊಮ್ಮೆ ಗಮನಿಸಿ.
ಜಾಗತೀಕರಣದ ಛಾಯೆಯ ಪ್ರಮುಖ ಭಾಗವೊಂದರಂತಿರುವ ‘ಗ್ರಾಹಕೀಕರಣ’ ಇತ್ತೀಚಿನ ದಿನಮಾನಗಳಲ್ಲಿ ಹವ್ಯಾಸದಿಂದ ವ್ಯಸನಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಅದರ ಪ್ರಭಾವ ಎಷ್ಟರ ಮಟ್ಟಿಗೆ ತೆರಳಿ ನಿಂತಿದೆಯೆಂದರೆ, ತ್ಯಾಗ ಮತ್ತು ಉಳಿತಾಯವೆಂಬ ಕಲ್ಪನೆಗಳಿಲ್ಲಿ ಸಂಪೂರ್ಣವಾಗಿ ಮಾಯವಾಗಿದೆಯೆಂದರೆ ಅತಿಶಯೋಕ್ತಿಯೆನಿಸಿದು. 2009ರಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದಂತೆ ದಕ್ಷಿಣ ಕೋರಿಯಾದ ಸರ್ಕಾರವು ತನ್ನ ಜಿ.ಡಿ.ಪಿಯ ಒಟ್ಟಾರೆ 2% ಭಾಗವನ್ನು ಅಂದರೆ ಸರಿಸುಮಾರು 28.1 ಬಿಲಿಯನ್ ಡಾಲರ್ ಮೊತ್ತವನ್ನು ಪರಿಸರ ಸಂರಕ್ಷಣೆ ನಿಮಿತ್ತ ನಿರ್ವಹಿಸಲಾಗುವ ಗ್ರೀನ್ ಯೋಜನೆಗಳಿಗಾಗಿ ಮುಡಿಪಾಗಿಟ್ಟಿತ್ತು. ಅದರ ಮಗದೊಂದು ಪ್ರಮುಖೋದ್ದೇಶವೆಂದರೆ ಕನಿಷ್ಠವೆಂದರೂ ಒಂದು ಮಿಲಿಯನ್ ಗ್ರೀನ್ ಉದ್ಯೋಗವನ್ನು ಈ ಯೋಜನೆಗಳು ಸೃಷ್ಟಿಸುವುದರ ಜೊತೆಯಲ್ಲೇ, ಕಾರ್ಬನ್ ಹೊರಸೂಸುವಿಕೆಯ ಮೇಲಿನ ನಿಯಂತ್ರಣ ಮತ್ತು ಆರ್ಥಿಕ ಪ್ರಗತಿಯನ್ನು ಹೊಂದಬೇಕೆನ್ನುವುದು ಅದರಿಚ್ಛೆಯಾಗಿತ್ತು. ಅಂದುಕೊಂಡಂತೆ ಕೆಲಕಾಲ ಎಲ್ಲವೂ ನಡೆಯಿತು ಆದರೆ ಯೋಜನೆಯ ಅಂತಸ್ಸತ್ವ ಬಹುಕಾಲ ಉಳಿಯಲಿಲ್ಲ. 2009ರಿಂದ 2014ರ ಮಧ್ಯೆ ಕೋರಿಯಾದ ಕಾರ್ಬನ್ ಉತ್ಸರ್ಜನವು ಮೊದಲಿಗಿಂತ 11.8 % ಏರಿಕೆಯಾಯಿತು. ಸ್ವಚ್ಛ ಶಕ್ತಿಕೇಂದ್ರ ಸ್ಥಾಪನೆ, ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರ ಸ್ನೇಹಿ ರೇಲ್ವೆ ವ್ಯವಸ್ಥೆ ನಿರ್ಮಾಣಗಳೆಲ್ಲವೂ ಜೊತೆಗೂಡಿದರೂ ‘ಹಸಿರು ಅಭಿವೃದ್ಧಿ ಯೋಜನೆಯ’ ತಂತ್ರಗಾರಿಕೆ ಅಂದುಕೊಂಡಂತೆ ಕೈಗೂಡಲಿಲ್ಲ. ಇದಕ್ಕೆ ಪ್ರಮುಖ ಕಾರಣವೇನಿರಬಹುದು? ಹಸಿರು ಶಕ್ತಿ ಕ್ರಾಂತಿಯನ್ನು ದುರ್ಬಲಗೊಳಿಸಿದ ಅಂಶಗಳಾವುವು?
ಇದಕ್ಕೆ ಪ್ರಮುಖ ಕಾರಣವೇ ನಿರಂತರ ಖರೀದಿಸುವ, ಸ್ವೀಕರಿಸುವ ಮತ್ತು ಬಳಸುವ ಮಾನಸಿಕತೆ! ಕನ್ಸೂಮರಿಸಮ್ ಎಂದು ಸಂಬೋಧಿಸಲ್ಪಡುವ ಈ ಮಾನಸಿಕತೆ ನವನಾಗರೀಕತೆಯನ್ನು ಹೇಗೆ ಕಾಡುತ್ತಿದೆ ಎಂಬುದಕ್ಕೆ ‘ಹವಾಮಾನ ಬದಲಾವಣೆಗಿಂತ’ ವರ್ತಮಾನದಲ್ಲಿ ಮಗದೊಂದು ಉದಾಹರಣೆ ಬೇಕೇ? ಪ್ರತೀ ಕ್ರಿಸ್ಮಸ್ ಹಬ್ಬದಂದು ನ್ಯೂಯಾರ್ಕ್, ವಾಷಿಂಗ್ಟನ್, ಫ್ಲೋರಿಡಾದಂತಹ ನಗರಗಳ ಬೀದಿಗಳು ಮರ, ದೀಪಾಲಂಕಾರ, ಪ್ಲಾಸ್ಟಿಕ್ ಕೈ ಚೀಲ, ವಸ್ತುಮಳಿಗೆಗಳ ಜೊತೆಯಲ್ಲೇ, ನಿರ್ವಿಘಟಿತ ಮಟ್ಟಕ್ಕೆ ತಲುಪಿದ ತ್ಯಾಜ್ಯಗಳಿಂದ ಭರಪೂರವಾಗಿ ಕಂಗೊಳಿಸುತ್ತವೆ. ಕ್ರಿಸ್ಮಸ್ ರೀತಿಯ ಹಬ್ಬಗಳನ್ನು ಅಲ್ಲಿನ ಬೃಹತ್ ಕಂಪನಿಗಳು ತಮ್ಮ ವಾರ್ಷಿಕ ಉತ್ಪನ್ನಗಳ ಮಾರಾಟಕ್ಕೆ ಸುಗ್ಗಿಕಾಲವೆಂದೇ ಪರಿಗಣಿಸಿವೆ. ಇದರ ಪರಿಣಾಮವಾಗಿ ಒಬ್ಬ ಸಾಮಾನ್ಯ ಅಮೇರಿಕನ್ ವ್ಯಕ್ತಿಯು ವರ್ಷಕ್ಕೆ 650 ಕಿಲೋ ಕಾರ್ಬನ್ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೇರಿಸುವ ಮತ್ತಲ್ಲಿನ ಒಟ್ಟಾರೆ ಸಮುದಾಯ 2.6 ಬಿಲಿಯನ್ ಡಾಲರ್ ಮೊತ್ತವನ್ನು ರ್ಯಾಪಿಂಗ್ ಪೇಪರ್ಗಳ ಮೇಲೆ ಅದೊಂದೇ ಹಬ್ಬದ ಸಂದರ್ಭದಲ್ಲಿ ವಿನಿಯೋಗಿಸುತ್ತದಂತೆ. ಸ್ಥಳೀಯರೇ ಹೇಳುವಂತೆ 150 ವರ್ಷಗಳ ಹಿಂದೆ ಈಗಿನ ರೀತಿಯಲ್ಲಿ ರ್ಯಾಪ್ ಮಾಡಿದ ಉಡುಗೊರೆಗಳನ್ನು ನೀಡುವ ಪದ್ದತಿಯೇ ಇರಲಿಲ್ಲವಂತೆ. ಬ್ಲಾಕ್ ಫ್ರೈಡೆಯಂತಹ ಸಂದರ್ಭದಲ್ಲಿ ‘ಮೇಸಿ’ಯಂತಹ ಅರ್ಬನ್ ಸ್ಟೋರ್ಗಳು, ಇತರೆ ಉತ್ಪನ್ನ ತಯಾರಕ ಸಂಸ್ಥೆಗಳು ವಿಶೇಷವಾಗಿ ‘ಮೊಬೈಲ್, ಆಟೋಮೊಬೈಲ್, ಗೃಹೋಪಯೋಗಿ ವಸ್ತುಗಳ’ ನಿರ್ಮಾಣಕಾರರು ಜಾಹಿರಾತಿನ, ವಿಶೇಷ ಅವಧಿಗಾಗಿ ಮೀಸಲಿರಿಸುವ ಇ.ಎಂ.ಐ, ಹಬ್ಬಗಳಿಗೋಸ್ಕರವಾಗಿಯೇ ಇರುವ ರಿಯಾಯಿತಿ ದರದ ಮುಖಾಂತರ ಮೇಲ್ಕಂಡ ಸ್ವರೂಪದ ಉಡುಗೊರೆಗಳನ್ನು ನೀಡುವುದು ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುವ ಮಹೋನ್ನತ ರೀತಿ ಹಾಗೂ ಇಂತಹುದೇ ಸಿದ್ಧ ಮಾದರಿಯು ಸೂಕ್ತವಾದುದೆಂದು ಈ ಹಂತಗಳಲ್ಲಿ ಹೇಳುತ್ತಾ ಹೋದರು. ಅವಾವುವೆಂದರೆ ಮೃದುಮನೋಒತ್ತಡ, ಸಾಮಾನ್ಯ ಸಮಾಜವೆಂಬ ತಂತ್ರಗಾರಿಕೆ, ಜಾಹೀರಾತು , ಸಾಮಾಜಿಕ ಒತ್ತಡ ಮತ್ತು ತನ್ನ ಬಳಿ ಇಂತಹ ಉತ್ಪನ್ನಗಳಿವೆ ಎಂಬುದು ವೈಯುಕ್ತಿಕ ಸಾಧನೆಯ ಪ್ರತೀಕವೆಂಬ ಭ್ರಮಾ ಲೋಕದ ಪರಿಕಲ್ಪನೆಗಳನ್ನು ಮೇಲ್ಕಂಡ ಹಂತಗಳಲ್ಲಿ ಬಿತ್ತುತ್ತಾ ಹೊರಟರು.
ಇಂತಹ ಪ್ರಯತ್ನಗಳಿಂದ ಮನುಷ್ಯ ಜೀವನ ಮಟ್ಟ ಸುಧಾರಿಸಿದ್ದಕ್ಕಿಂತ ಹೆಚ್ಚಾಗಿ ಕಾರ್ಪೊರೇಟ್ ಕಂಪನಿಗಳ ಜೇಬು ತುಂಬಿದ್ದೇ ಹೆಚ್ಚು. ರಸ್ತೆಗಳಲ್ಲಿನ ಬಿಲ್ಬೋರ್ಡ್, ವೃತ್ತಪತ್ರಿಕೆಗಳ ಮುಖಪುಟಗಳು, ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಗೊಳ್ಳುವ ಜಾಹೀರಾತುಗಳು ನಮ್ಮನ್ನೆತ್ತ ಕರೆದೊಯ್ಯುತ್ತಿವೆ? ಆ ಉತ್ಪನ್ನ ನಮ್ಮ ಬಳಿಯಿಲ್ಲದಿದ್ದಲ್ಲಿ ಏನೋ ಕಳೆದುಕೊಂಡಿದ್ದೇವೆಂಬ ಭಾವಸೃಷ್ಟಿಯಾಗುವಂತೆ ಮಾಡಿದ್ದಾರೆ ಅಲ್ಲವೇ? ಅಮೆರಿಕನ್ ಸೈಕಾಲಜಿಸ್ಟ್ ಅಸೋಸಿಯೇಷನ್ ವರದಿಯೇ ಹೇಳುವಂತೆ ಅವಶ್ಯಕತೆಗಿಂತ ಹೆಚ್ಚು ಖರೀದಿಸುವುದು ಮಾನಸಿಕ ಕ್ಷೋಭೆಗೆ ಕಾರಣವಾಗುವುದರ ಜೊತೆಯಲ್ಲೇ ‘ಪರಿಸರನಾಶದ ಬೆಲೆ’ ತೆರುವಂತಹ ಪರಿಸ್ಥಿತಿಗೂ ಮುನ್ನುಡಿ ಬರೆಯಬಹುದೆನ್ನುತ್ತಾರೆ. ದಿ ಗಾರ್ಡಿಯನ್ ಪತ್ರಿಕೆ 2017ರಲ್ಲಿ ಪ್ರಕಟಿಸಿದ ವರದಿಯೊಂದರ ಪ್ರಕಾರ ವಿಶ್ವದಲ್ಲಿ ವಾಯುಮಂಡಲವನ್ನು ಸೇರುತ್ತಿರುವ ಹಾನಿಕಾರಕ ಹಸಿರುಮನೆ ಅನಿಲಗಳ ಒಟ್ಟಾರೆ ಪ್ರಮಾಣದ ಶೇಕಡಾ 71 ರಷ್ಟು ಭಾಗ ಕೊಡುಗೆ ನೀಡುತ್ತಿರುವುದು ಕೇವಲ ನೂರು ಕಂಪನಿಗಳು ಮಾತ್ರ. ವಿಪರ್ಯಾಸವೆಂದರೆ ಜನಮಾನಸವು ಬಳಸುವ ಬಹುಪಾಲು ಉತ್ಪನ್ನಗಳನ್ನು ತಯಾರಿಸುವುದು ಅವೇ ಕಂಪೆನಿಗಳಂತೆ! ಇದರಲ್ಲಿ ಮತ್ತಷ್ಟು ಅಚ್ಚರಿ ಹುಟ್ಟಿಸುವ ಸಂಗತಿಯೆಂದರೆ, ಭಾರತಕ್ಕೆ ಹೋಲಿಕೆ ಮಾಡಿ ನೋಡಿದಾಗ ಅಮೇರಿಕಾದ ಒಬ್ಬ ವ್ಯಕ್ತಿಯು ಇಲ್ಲಿನ ಸಾಮಾನ್ಯನಿಗಿಂತ ನೂರುಪಟ್ಟು ಹೆಚ್ಚಿನ ಶಕ್ತಿ ಸಂಪನ್ಮೂಲಗಳನ್ನು ಬಳಸುತ್ತಿದ್ದಾನಂತೆ. ಅವನದೇ ರೀತಿಯಲ್ಲಿ ಜಗತ್ತಿನ ಪ್ರತೀ ರಾಷ್ಟ್ರದ ವ್ಯಕ್ತಿಯೂ ಬದುಕಲು ಆರಂಭಿಸಿದರೆ ನಿಸರ್ಗದ ಅಧೋಗತಿಯು ಅಷ್ಟೇ ವೇಗದಲ್ಲಿ ಬಂದಪ್ಪಳಿಸಲಿದೆ.
ಹೀಗಿರುವಾಗ ಖರೀದಿಸುವ ಈ ಗುಣಸ್ವಭಾವಗಳಿಗೆ ವ್ಯಕ್ತಿಯೋರ್ವನನ್ನು ದೂಷಿಸುವುದು ತರವಲ್ಲ. ಆತ ಇಂತಹ ಮಾನಸಿಕತೆಯನ್ನು ಹೊಂದಲೆಂದೇ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದ, ಅಂತಹ ವಾತಾವರಣವನ್ನು ನಿರ್ಮಿಸುತ್ತಿರುವ ಕಂಪನಿಗಳ ಅಂತರ್ಯವನ್ನೊಮ್ಮೆ ಅರಿತು, ಅದರ ಕುರಿತಂತೆ ಅರಿವು ಮೂಡಿಸುವ ಪ್ರಯತ್ನಗಳಾಗಬೇಕು. ಕಾರ್ಬನ್ ಫೂಟ್ಪ್ರಿಂಟ್ ತಗ್ಗಿಸುವ ನಿಟ್ಟಿನಲ್ಲಿ ಪರಿಸರಸ್ನೇಹಿ ಮುಖವಾಡವನ್ನು ಹೊತ್ತುಬರುವ ಹಲವಾರು ಉತ್ಪನ್ನಗಳು ಮತ್ತಷ್ಟು ಅಪಾಯಕಾರಿಯೆಂದು ಅಮೇರಿಕೆಯ ನಿರ್ಮಾಪಕ ಮತ್ತು ಚಿತ್ರೋದ್ಯಮದ ಪ್ರಮುಖರಾದ ಮಾರ್ಕ್ ಕೌಫ್ಮ್ಯಾನ್ ಹೇಳುತ್ತಾರೆ. ಅದೊಂದು ಉತ್ಪನ್ನ ಮಾರಾಟದ ಜಾಹೀರಾತಿನ ತಂತ್ರಗಾರಿಕೆಯೆಂದೂ ಆರೋಪಿಸುತ್ತಾರೆ. ಆರ್ಥಿಕ ಪ್ರಗತಿ ಎಂಬ ಮಾಯಾಜಾಲದಲ್ಲಿ ಸಿಲುಕಿರುವ ನಾವು ಪ್ರತೀ ಜಿ.ಡಿ.ಪಿ ಹೆಚ್ಚಳ ಕೂಡ ಪರಿಸರಕ್ಕೆ ಹೇಗೆ ಮಾರಕವಾಗಬಲ್ಲದೆಂಬುದನ್ನು ಅರಿಯುವಲ್ಲಿ ಸೋತಿದ್ದೇವೆ. ಕೇವಲ ಒಂದು ಶೇಕಡಾ ಜಿ.ಡಿ.ಪಿ ಬೆಳವಣಿಗೆ 0.5 ರಿಂದ 0.8% ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಬಲ್ಲದು. 2043ರಕ್ಕೆ ವಿಶ್ವ ಆರ್ಥಿಕ ದೈತ್ಯನಾಗಲು ಹೊರಟ ರಾಷ್ಟ್ರಗಳು, ತಮ್ಮ ಪ್ರಜೆಗಳ ಖರೀದಿಸುವ ಶಕ್ತಿಯನ್ನು ಹೆಚ್ಚಿಸುವತ್ತ ದೃಷ್ಟಿಯನ್ನು ನೆಟ್ಟಿದ್ದಾರೆಯೇ ಹೊರತಾಗಿ ಅದರಿಂದ ತಮ್ಮದೇ ನೈಸರ್ಗಿಕ ಸಂಪನ್ಮೂಲಗಳು, ಅರಣ್ಯ ಮತ್ತು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಬಹುದಾದ ಅಂಶಗಳನ್ನು ಗಮನಿಸುವಲ್ಲಿ ಸೋತಿದ್ದಾರೆ. ನಮ್ಮೆಲ್ಲ ಹಸಿರುಅಭಿವೃದ್ಧಿ ಯೋಜನೆಗಳು, ರಾಜತಾಂತ್ರಿಕ ನೀತಿಗಳು, ಆರ್ಥಿಕತೆಯನ್ನೇ ಕೇಂದ್ರವಾಗಿರಿಸಿಕೊಂಡು ನಿರ್ಮಿಸಲ್ಪಡುತ್ತಿವೆಯೇ ವಿನಃ ಪರಿಸರವನ್ನಲ್ಲ. ಅದೇ ಕಾರಣಕ್ಕಾಗಿಯೇ ‘ರಾಯ್ ಟರ್ಸ್’ ಸೂಕ್ಶ್ಮವಾಗಿ 2009ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಯೋಜನೆಯ ವೈಫಲ್ಯಕ್ಕೆ ಪ್ರಮುಖ ಕಾರಣವೊಂದನ್ನು ವರದಿಯ ಮುಖಾಂತರ ಪ್ರಕಟಿಸಿತು. ಜೀರೋ -ಕಾರ್ಬನ್ ಹೊರಸೂಸುವಿಕಾ ಯೋಜನೆ, ಸುಸ್ಥಿರ ಅಭಿವೃದ್ಧಿಯತ್ತ ಮುಖಮಾಡಿದ ತೈಲರಹಿತ ವಿದ್ಯುತ್ ಉತ್ಪಾದನೆ ಮತ್ತು ಇನ್ನೂ ಅನೇಕ ಯೋಜನೆಗಳ ಮುಖಾಂತರ ಯಾವುದನ್ನೆಲ್ಲ ಉಳಿತಾಯ ಮಾಡಿತ್ತೋ ಅವುಗಳನ್ನೆಲ್ಲ ಅದೇ ಐದು ವರ್ಷಗಳಲ್ಲಿನ ಜನಮಾನಸದ ‘ವಿಪರೀತ ಖರೀದಿ ಪ್ರವೃತ್ತಿಯ’ ಹೆಚ್ಚಳಕ್ಕಾಗಿ ಕಳೆದುಕೊಳ್ಳಬೇಕಾದ ಸ್ಥಿತಿ ಬಂದೊದಗಿತು.
ಜಾಗತಿಕ ಮಟ್ಟದ ಈ ಸಮಸ್ಯೆಗೆ ನಾವೂ ಹೇಗೆ ಕೊಡುಗೆಯನ್ನು ನೀಡುತ್ತಿದ್ದೇವೆಂಬುದನ್ನೊಮ್ಮೆ ಆತ್ಮಾವಲೋಕನದ ಮುಖಾಂತರ ಅರಿಯುವ ಪ್ರಯತ್ನ ಮಾಡಬಹುದೇ? ಕಳೆದ ವರ್ಷದ ಜುಲೈನಲ್ಲಿ ಜೀ ಫೈವ್ ಸಂಸ್ಥೆ ನಡೆಸಿದ ಸಾಮಾಜಿಕ ಸಮೀಕ್ಷೆಯ ವರದಿ ಹೇಳುವುದೇನೆಂದರೆ ನಗರ ಪ್ರದೇಶದ, ಅದರಲ್ಲೂ ವಿಶೇಷವಾಗಿ ಟೆಕ್ಕಿಗಳು ಮತ್ತು ಯುವಕರ ಸಮುದಾಯ ತಾವು ಖರೀದಿಸಿದ ಮೊಬೈಲ್ ಅನ್ನು ಕೇವಲ ಆರು ತಿಂಗಳ ಅಥವಾ ಹೆಚ್ಚೆಂದರೆ ವರ್ಷದ ಅವಧಿಯಲ್ಲೇ ಬದಲಾಯಿಸಿ ಮತ್ತೊಂದು ಮೊಬೈಲ್ ಕೊಂಡುಕೊಳ್ಳುತ್ತಿದ್ದಾರಂತೆ. ನಮ್ಮ ಸುತ್ತಮುತ್ತಲಿನ ಸ್ನೇಹಿತರ ವರ್ಗವನ್ನೇ ಒಮ್ಮೆ ಗಮನಿಸಿ. ಕೊಂಡ ಮೊಬೈಲ್, ಲ್ಯಾಪ್ಟಾಪ್, ವಾಚ್, ಬಟ್ಟೆ, ದ್ವಿಚಕ್ರ ವಾಹನ ಇತ್ಯಾದಿಗಳೆಲ್ಲ ಕೆಲ ತಿಂಗಳುಗಳಲ್ಲೇ, ದಿನಗಳಲ್ಲೇ, ಅಥವಾ ಬಂದ ಕ್ಷಣದಲ್ಲೇ ಔಟ್ ಡೇಟ್ ಎಂದು ದೂರಿ ಮಗದೊಂದನ್ನು ಖರೀದಿಸಲು ಕಾದ ಬಕಪಕ್ಷಿಗಳಂತೆ ನಿಂತ ಜೀವನ ಅವರದಾಗಿರುತ್ತದೆ. ಮುಂದೊಮ್ಮೆ ಅವರ ಜೀವನದಿಂದ ನಾವೂ ಬೆಲೆ ತೆರಬೇಕಾಗಿ ಬರಬಹುದು.
ಹಾಗಿದ್ದಲ್ಲಿ ಇದನ್ನೆಲ್ಲಾ ನಿಯಂತ್ರಿಸಲು ಆಯ್ಕೆಗಳೇ ಇಲ್ಲವೇ? ಹಾಗೇನಿಲ್ಲ ಖಂಡಿತಾ ಇದೆ. ಅ ಗ್ಲೋಬಲ್ ಸಿನಾರಿಯೋ ಎಂಬ ಜೋಯೆಲ್ ಎಂ ಹೋಪ್ಕಿನ್ಸ್, ಜೆ.ಕೆ. ಸ್ಟೀನ್ ಬೆರ್ಗೆರ್, ನರಸಿಂಹ ಡಿ ರಾವ್ ಮತ್ತು ಯಾನ್ನಿಕ್ ಆಸ್ವಾಲ್ಡ್ ಎಂಬ ನಾಲ್ಕು ತಜ್ಞರ ವರದಿಯ ಪ್ರಕಾರ 2050 ರ ಹೊತ್ತಿಗೆ ಸದ್ಯದ ಜನಸಂಖ್ಯೆ ಹೆಚ್ಚಿ, ಈಗಿನ ಪರಿಸ್ಥಿತಿಗಿಂತಲೂ ಹೆಚ್ಚು ಖರೀದಿಸುವ ಪ್ರವೃತ್ತಿ ಹಾಗೇ ಉಳಿದರೆ ನಿಸರ್ಗದ ಸ್ಥಿತಿ ಅಧೋಗತಿಗಿಳಿವುದಂತೂ ಖಚಿತ. ಇಂತಿರುವಾಗ 1960 ರ ದಶಕದಲ್ಲಿ ಒಬ್ಬ ಸಾಮಾನ್ಯನ ಬದುಕು ಹೇಗಿತ್ತೋ (ಆತನ ಜೀವನವಿಧಾನ ಮಿತಿಯಾದ ಖರೀದಿಸುವ ಪ್ರವೃತ್ತಿ) ಅದರಂತೆಯೇ ಕೋಟ್ಯಂತರ ನಾಗರೀಕಪ್ರವರ್ಗ ಬದುಕಿ ತೋರಿದಾಗ ಮಾತ್ರವೇ ನಿಸರ್ಗವನ್ನುಳಿಸಿಕೊಳ್ಳಲು ಸಾಧ್ಯವೆಂದಿದ್ದಾರೆ. ಮುಂದುವರಿದ ದೇಶಗಳ ಜನರಂತೂ ತಮ್ಮ ಖರೀದಿಸುವ ಪ್ರವೃತ್ತಿಯನ್ನು ಶೇಕಡಾ 95 ರಷ್ಟು ಇಳಿಸಬೇಕೆಂದು ವರದಿ ಹೇಳಿದೆ. ಇಂತಿರುವಾಗ ಭಾರತೀಯರಾದ ನಮ್ಮ ಪೂರ್ವಜರು ಹಾಕಿಕೊಟ್ಟ ಸರಳ ಜೀವನದ ಪರಿಕಲ್ಪನೆಯನ್ನು ಮತ್ತೆ ಮುನ್ನೆಲೆಗೆ ತರುವುದರ ಮುಖಾಂತರವಾಗಿ ಖರೀದಿಸುವ ಪ್ರವೃತ್ತಿಯನ್ನು ವ್ಯಸನಸ್ವರೂಪಕ್ಕೆ ತಿರುಗುವ ಮುನ್ನವೇ ತಡೆಹಿಡಿಯೋಣ. ಅಷ್ಟೇ ಅಲ್ಲದೇ, ನಮ್ಮ ಜೀವನ ಶೈಲಿ ಇತರ ದೇಶಗಳಿಗೂ ಮಾದರಿಯಾಗುವಂತಿರಲಿ. ಇಲ್ಲದಿದ್ದರೆ ಮಿತಿಯಿಲ್ಲದ ಖರೀದಿ ಮನೋರೋಗಕ್ಕೆ ಹಾದಿಯಾಗುವುದಲ್ಲದೇ, ನಿಸರ್ಗ ವಿನಾಶಕ್ಕೂ ಬುನಾದಿಯಾದೀತು ಎಚ್ಚರ!
ಇದನ್ನೂ ಓದಿ: Team India : ಟೀಮ್ ಇಂಡಿಯಾದ ಹೊಸ ಜೆರ್ಸಿ ರೇಟ್ ದುಬಾರಿ, ಆದ್ರೂ ಖರೀದಿಗೆ ಮುಗಿಬಿದ್ದ ಅಭಿಮಾನಿಗಳು!
ಅಂಕಣ
ರಾಜಮಾರ್ಗ ಅಂಕಣ: ಗಣಿತ ಕಲಿಸಿದ ಜೀವನದ ಪಾಠ – ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ!
ನಾನೊಬ್ಬ ಗಣಿತ ಅಧ್ಯಾಪಕ. ಗಣಿತವು ಜೀವನಕ್ಕೆ ಹಲವು ಪಾಠಗಳನ್ನು ಕೊಡುತ್ತದೆ. ಅದರಲ್ಲಿ ಒಂದು ಪ್ರಮುಖ ಪಾಠ ಎಂದರೆ – ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ ಎನ್ನುವುದು.
ಜೀವನದಲ್ಲಿ ನಮಗೆ ಬರುವ ಕೆಲವು ಸಮಸ್ಯೆಗಳು ನಮಗೆ ಹೇಳಿ ಬರುತ್ತವೆ. ಕೆಲವು ಹೇಳದೇ ಬರುತ್ತವೆ. ಕೆಲವು ಅದರಷ್ಟಕ್ಕೆ ಬರುತ್ತವೆ. ಇನ್ನೂ ಕೆಲವನ್ನು ನಾವು ನಮ್ಮದೇ ತಪ್ಪುಗಳಿಂದ ಮೈಮೇಲೆ ಎಳೆದುಕೊಳ್ಳುತ್ತೇವೆ.
ಆದರೆ ಸ್ವಲ್ಪ ತಾಳ್ಮೆಯಿಂದ ಯೋಚನೆ ಮಾಡಿ ನೋಡಿದರೆ ಹೆಚ್ಚಿನ ಸಮಸ್ಯೆಗಳು ಅದರಷ್ಟಕ್ಕೆ ಪರಿಹಾರ ಆಗುತ್ತವೆ. ಹೇಳದೇ ಬರುವ ಸಮಸ್ಯೆಗಳಿಗೆ ನಾವು ಹೆಚ್ಚು ಪ್ರಿಪೇರ್ ಆಗಿರಬೇಕು.
ಸಮಸ್ಯೆಗಳು ಬರಲು ಕಾರಣಗಳು ಯಾವುವು?
1) ನಮ್ಮ ದುಡುಕುತನ
2) ತಪ್ಪು ಕಲ್ಪನೆಗಳು.
3) ನಮ್ಮ ಬೇಜವಾಬ್ದಾರಿ.
4) ನಮ್ಮ ತಪ್ಪು ಯೋಜನೆಗಳು.
5) ತಪ್ಪುಗ್ರಹಿಕೆ.
6) ತಪ್ಪು ಯೋಚನೆಗಳು.
7) ಕೆಲವರನ್ನು ತುಂಬಾ ಅವಲಂಬನೆ ಮಾಡುವುದು ಮತ್ತು ನಂಬುವುದು.
8) ಹೆಚ್ಚು ಆತಂಕ ಮಾಡುವುದು.
9) ಕೆಲಸಗಳನ್ನು ಮುಂದೂಡುವುದು.
10) ಆತ್ಮವಿಶ್ವಾಸದ ಕೊರತೆ.
11) ಆರಂಭದಲ್ಲಿ ಉದಾಸೀನ ಮಾಡುವುದು ಮತ್ತು ಬೇಜವಾಬ್ದಾರಿ.
12) ನಿರ್ಧಾರ ತೆಗೆದುಕೊಳ್ಳಲು ತುಂಬಾ ಹೆದರುವುದು.
13) ಇಚ್ಛಾಶಕ್ತಿಯ ಕೊರತೆ.
14) ಯಾವಾಗಲೂ ಕಲ್ಪನೆಯಲ್ಲಿ ತೇಲುವುದು.
15) ತಪ್ಪುಗಳನ್ನು ರಿಪೀಟ್ ಮಾಡುತ್ತಲೇ ಹೋಗುವುದು.
16) ತುಂಬಾ ಭಾವನಾತ್ಮಕವಾಗಿ ಯೋಚನೆ ಮಾಡುವುದು.
17) ಪ್ರಾಕ್ಟಿಕಲ್ ಆಗಿ ಯೋಚನೆ ಮಾಡದೇ ಇರುವುದು.
18) ಅತಿಯಾದ ನಿರೀಕ್ಷೆಗಳು.
19) ಅತಿಯಾದ ಆತ್ಮವಿಶ್ವಾಸ ಮತ್ತು ಭಂಡ ಧೈರ್ಯ.
20) ನೆಗೆಟಿವ್ ಯೋಚನೆಗಳು…..
ಇನ್ನೂ ನೂರಾರು ಕಾರಣಗಳು ಇರಬಹುದು. ಆದರೆ ಹೆಚ್ಚಿನ ಸಮಸ್ಯೆಗಳಿಗೆ ನಮ್ಮ ನೆಗೆಟಿವ್ ಯೋಚನೆಗಳು ಕಾರಣ ಆಗಿರುತ್ತವೆ ಎಂದರೆ ನಿಮಗೆ ನಂಬುವುದು ಕಷ್ಟ ಆಗಬಹುದು. ಆದರೆ ಅದು ಹೌದು.
ಸಮಸ್ಯೆಗಳನ್ನು ಎದುರಿಸಲು ಬೇಕಾದದ್ದು ಮೂರೇ ಮೂರು ಅಂಶಗಳು. ಬೆಟ್ಟದಷ್ಟು ತಾಳ್ಮೆ, ಸರಿಯಾದ ಪ್ಲಾನಿಂಗ್ ಮತ್ತು ಜೀವನ ಪ್ರೀತಿ ಮಾತ್ರ. ಅದು ಹೇಗೆ?
ಇಲ್ಲಿವೆ ಸಮಸ್ಯೆಗಳಿಗೆ ಕೆಲವು ಸಿಂಪಲ್ ಆದ ಪರಿಹಾರಗಳು
1) ಉದಾಹರಣೆಗೆ ಇಂದಿನ ಹೆಚ್ಚು ಸಮಸ್ಯೆಗಳು ದುಡ್ಡಿನ ಕಾರಣಕ್ಕೆ ಬರುವಂಥದ್ದು. ನಮ್ಮ ಅಮ್ಮ ಪ್ರೈಮರಿ ಸ್ಕೂಲ್ ಟೀಚರ್ ಆಗಿದ್ದು ಯಾರ ಹೆಚ್ಚು ಸಪೋರ್ಟ್ ಇಲ್ಲದೆ ತನ್ನ ನಾಲ್ಕು ಮಕ್ಕಳನ್ನು ವಿದ್ಯಾವಂತರಾಗಿ ಮಾಡಿದ್ದರು. ಅವರ ಆರಂಭಿಕ ವೇತನ ಕೇವಲ 60ರೂಪಾಯಿ ಮಾತ್ರ ಆಗಿತ್ತು. ಪಕ್ಕಾ ಯೋಜನೆ ಮತ್ತು ಹಣಕಾಸಿನ ನಿರ್ವಹಣೆ ಮಾಡುವುದರಿಂದ ಅದು ಸಾಧ್ಯವಾಗಿತ್ತು. ಅದರಲ್ಲಿ ಕೂಡ ಅವರು ಐದು ರೂಪಾಯಿ ಉಳಿತಾಯ ಮಾಡುತ್ತಿದ್ದರು ಅಂದರೆ ಗ್ರೇಟ್ ಅಲ್ವಾ? ಈ ದುಡ್ಡಿನ ಸಮರ್ಪಕ ಯೋಜನೆ ಮತ್ತು ನಿರ್ವಹಣೆಯು ನಮ್ಮನ್ನು ಖಂಡಿತವಾಗಿ ಗೆಲ್ಲಿಸುತ್ತದೆ.
2) ಕೆಲವರು ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡದು ಮಾಡಿ ನೋಡುತ್ತಾರೆ. ಸ್ವಲ್ಪ ತಾಳ್ಮೆಯಿಂದ ಅವಲೋಕನ ಮಾಡಿದರೆ ಅವುಗಳು ಕರಗುವ ಮೋಡಗಳ ಹಾಗೆ ಅದರಷ್ಟಕ್ಕೆ ಕರಗಿ ಬಿಡುತ್ತವೆ.
3) ಇನ್ನೂ ಕೆಲವು ಸಮಸ್ಯೆಗಳಿಗೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ಕಾರಣ ಆಗಿರುತ್ತವೆ. ನಾವು ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳಬೇಕಾದ ಕಡೆ ನಿಧಾನ ಮಾಡುತ್ತೇವೆ. ನಿಧಾನವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಕಡೆ ದುಡುಕು ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದು ಸರಿಯಾಗಬೇಕು.
4) ನಾವು ತಪ್ಪು ವ್ಯಕ್ತಿಗಳನ್ನು ತುಂಬಾ ನಂಬುತ್ತೇವೆ ಮತ್ತು ನಮ್ಮ ಹತ್ತಿರ ಎಳೆದುಕೊಳ್ಳುತ್ತೇವೆ. ಸರಿಯಾದ ವ್ಯಕ್ತಿಗಳನ್ನು ಸಂಶಯದಿಂದ ನೋಡುತ್ತೇವೆ ಮತ್ತು ದೂರ ಮಾಡುತ್ತೇವೆ. ಇದು ನಮ್ಮ ಹೆಚ್ಚಿನ ಸಮಸ್ಯೆಗಳಿಗೆ ಕಾರಣ.
5) ನಮ್ಮ ಕೆಲಸವನ್ನು ಮುಂದೂಡುವ ಗುಣ( ಪೋಸ್ಟ್ ಪೋನಮೆಂಟ್)ವು ನಮ್ಮನ್ನು ಸಮಸ್ಯೆಗಳ ಬಾಗಿಲಿನವರೆಗೆ ಕರೆದುಕೊಂಡು ಹೋಗುತ್ತದೆ.
6) ಕೆಲವರು ನಮ್ಮ ಎಲ್ಲ ಸಮಸ್ಯೆಗಳಿಗೆ ವಿಧಿಯೇ ಅಥವಾ ದೇವರೇ ಕಾರಣ ಎಂದು ದೂರುತ್ತಾ ಸಮಯ ಕಳೆಯುತ್ತಾರೆ. ಸಮಸ್ಯೆಗಳ ಪರಿಹಾರಕ್ಕೆ ದಾರಿಯನ್ನು ಹುಡುಕುವುದಿಲ್ಲ.
7) ಒಂದು ಒಳ್ಳೆಯ ಟೀಮನಲ್ಲಿ ಕೆಲಸ ಮಾಡುವುದರಿಂದ, ಸಂಘಟಿತ ಪ್ರಯತ್ನ ಮಾಡುವುದರಿಂದ ಮತ್ತು ಎಲ್ಲರ ಜೊತೆ ಸೇರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆಗಳನ್ನು ಎದುರಿಸಲು ಭಾರೀ ಶಕ್ತಿ ಬರುತ್ತದೆ.
8)ಆತ್ಮೀಯರಲ್ಲಿ ಮನಸ್ಸು ಬಿಚ್ಚಿ ಮಾತಾಡುವುದರಿಂದ ಮನಸ್ಸು ಹಗುರ ಆಗ್ತದೆ ಮತ್ತು ಸಮಸ್ಯೆ ಎದುರಿಸಲು ಧೈರ್ಯ ಬರುತ್ತದೆ. ಅಂತರ್ಮುಖಿ ವ್ಯಕ್ತಿಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಾರೆ.
9) ಸಮಸ್ಯೆಗಳು ಬಂದಾಗ ತಣ್ಣಗೆ ಒಂದು ಕಡೆ ಕೂತು ಆ ಸಮಸ್ಯೆಗಳಿಗೆ ಹಲವು ಪರ್ಯಾಯ ಪರಿಹಾರಗಳನ್ನು ಹುಡುಕಿದಾಗ ಮತ್ತು ಅವುಗಳಲ್ಲಿ
ಸೂಕ್ತವಾದದ್ದನ್ನು ಮತ್ತು ಕಡಿಮೆ ರಿಸ್ಕ್ ಇರುವುದನ್ನು ಆರಿಸಿಕೊಂಡು ಅನುಷ್ಟಾನ ಮಾಡಿದಾಗ ಯಾವ ಸಮಸ್ಯೆಯನ್ನು ಬೇಕಾದರೂ ಬಿಡಿಸಬಹುದು.
10) ನಾನು ಆರಂಭದಲ್ಲಿಯೇ ಹೇಳಿದ ಹಾಗೆ ತಾಳ್ಮೆಯಿಂದ ಅವಲೋಕನ ಮಾಡಿದರೆ, ಸಮಸ್ಯೆಗೆ ಕಾರಣಗಳನ್ನು ಪಟ್ಟಿ ಮಾಡಿದಾಗ ಮತ್ತು ಪಾಸಿಟಿವ್ ಥಿಂಕಿಂಗ್ ಮಾಡಿದರೆ ಯಾವ ಸಮಸ್ಯೆಯೂ ನಮಗೆ ತೊಂದರೆ ಕೊಡದೇ ಹಾಗೇ ಮಾಯವಾಗುತ್ತದೆ.
ಇದನ್ನೂ ಓದಿ: ರಾಜಮಾರ್ಗ ಅಂಕಣ: ತೋಚಿದ್ದನ್ನು ಗೀಚಿ ಮಹಾನ್ ಸಾಹಿತಿ ಆದ ಬೀಚಿ
ಭರತ ವಾಕ್ಯ
ಸಮಸ್ಯೆಗಳನ್ನು ಎದುರಿಸುವ ಶಕ್ತಿಯು ನಮ್ಮ ಒಳಗೆ ಇರುತ್ತದೆ. ನಾವು ಒಳಗಿನಿಂದ ಸ್ಟ್ರಾಂಗ್ ಆದರೆ ಯಾವ ಸಮಸ್ಯೆಯನ್ನೂ ಪರಿಹಾರ ಮಾಡಬಹುದು. ಪ್ರಯತ್ನ ಮಾಡೋಣ ಅಲ್ಲವೇ..?
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema23 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema23 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ದೇಶ18 hours ago
ಬದುಕುಳಿಯಲಿಲ್ಲ ಬೋರ್ವೆಲ್ಗೆ ಬಿದ್ದ ಕಂದಮ್ಮ; ಸಾವಿನ ವಿರುದ್ಧ 50 ಗಂಟೆ ಹೋರಾಟದಲ್ಲಿ ಗೆದ್ದಿದ್ದು ವಿಧಿ
-
ದೇಶ21 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ10 hours ago
Miss World- 2023: 27 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ʼಮಿಸ್ ವರ್ಲ್ಡ್ʼ