ಸಂಪಾದಕೀಯ
ವಿಸ್ತಾರ ಸಂಪಾದಕೀಯ: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ರೌರ್ಯಕ್ಕೆ ಮದ್ದೇನು?
ಇಂದಿನ ಮಕ್ಕಳಲ್ಲಿ ಹಿಂಸಾಭಾವನೆ ಹೆಚ್ಚಾಗುತ್ತಿದೆಯೇ, ಹೆಚ್ಚಾಗುತ್ತಿದ್ದರೆ ಇದಕ್ಕೆ ಮದ್ದೇನು ಎಂಬುದನ್ನೂ ಈ ಹೊತ್ತಿನಲ್ಲಿ ನಾವು ವಿವೇಚಿಸಬೇಕಿದೆ.
ಅಂಬೆಗಾಲಿಡುವ ಮಕ್ಕಳಲ್ಲಿ ಹಿಂಸಾತ್ಮಕ, ಕ್ರೌರ್ಯದ ಮನೋಭಾವ ಹೆಚ್ಚಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುವಂತಹ ಘಟನೆ ಬೆಂಗಳೂರಿನ ಮಾಂಟೆಸ್ಸರಿ ಶಾಲೆಯೊಂದರಲ್ಲಿ ನಡೆದಿದೆ. ಪುಟ್ಟ ಹುಡುಗನೊಬ್ಬ ಮತ್ತೊಬ್ಬನಿಗೆ ಮನಸೋ ಇಚ್ಛೆ ಹೊಡೆಯುವುದು, ಕಚ್ಚುವುದು ಮಾಡಿದ್ದಾನೆ. ಒಂದು ಬಾರಿಯಲ್ಲ ಐದಾರು ಸಲ ಹೀಗೆ ಹಲ್ಲೆ ನಡೆಸಿದ್ದಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಮಗು ಚೀರಾಡುತ್ತಿದ್ದರೂ ಯಾವ ಒಬ್ಬ ಸಿಬ್ಬಂದಿ ಕೂಡ ಬಂದು ನೋಡಿಲ್ಲ. ಇದು ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದು ಸಿಸಿ ಟಿವಿಯಲ್ಲಿ ದಾಖಲಾಗಿರುವುದರಿಂದ ಸಾರ್ವಜನಿಕರ ಗಮನಕ್ಕೆ ಬಂದಿದೆ. ಇಂಥ ಘಟನೆ ಇದೊಂದೇ ಆಗಿರಬಹುದೇ, ಅಥವಾ ಇಂಥ ಇನ್ನಷ್ಟು ಘಟನೆಗಳು ವರದಿಯಾಗದೆ ಹೋಗುತ್ತಿರಬಹುದೇ ಎಂಬ ಆತಂಕವೂ ಇದರಿಂದ ಮೂಡಿದೆ.
ಈ ಘಟನೆ ಹಲವು ನೆಲೆಯಲ್ಲಿ ನಾವು ಚಿಂತೆಗೀಡಾಗುವಂತೆ ಮಾಡಿದೆ. ಈ ನಿರ್ದಿಷ್ಟ ಘಟನೆಯನ್ನೇ ನೋಡುವುದಾದರೆ, ಇಲ್ಲಿ ಹಲ್ಲೆಗೀಡಾಗಿರುವ ಮಗುವನ್ನು ಸಂತೈಸುವುದೂ ಮುಖ್ಯ; ಅದರೊಂದಿಗೆ ಇಲ್ಲಿ ನಡೆದಿರುವ ಹಲ್ಲೆಯು ಯಾವ ಪ್ರಮಾಣದ್ದು, ಹಲ್ಲೆ ನಡೆಸಿರುವ ಮಗುವಿನ ಮನಸ್ಸಿನಲ್ಲಿ ಏನಿದೆ ಎಂಬುದೂ ಮುಖ್ಯವಾಗುತ್ತದೆ. ಈ ಪ್ರಮಾಣದ ಹಿಂಸೆಗೆ ಇಳಿಯಲು ಆ ಮಗುವಿಗೆ ಪೋಷಕವಾದ ಅಂಶಗಳು ಯಾವುದು ಎಂಬುದನ್ನು ಆ ಮಗು ಹಾಗೂ ಮಗುವಿನ ಪೋಷಕರ ಕೌನ್ಸೆಲಿಂಗ್ ಮಾಡಿ ತಿಳಿದುಕೊಳ್ಳುವ ಅಗತ್ಯವಿದೆ. ಮಕ್ಕಳು ಹಿಂಸೆಯನ್ನು ಕಲಿಯಲು ನಾನಾ ಕಾರಣಗಳಿರಬಹುದು. ಕೇವಲ ಮನೆಯ ವಾತಾವರಣದಿಂದ ಬರುತ್ತದೆ ಎಂದೇನಿಲ್ಲ. ಮಗು ನೋಡುವ ದೃಶ್ಯ ಮಾಧ್ಯಮ, ಸುತ್ತಮುತ್ತಲಿನವರ- ಬಂಧುಗಳ ವರ್ತನೆ, ಸ್ಮಾರ್ಟ್ಫೋನ್ ಬಳಕೆ ಹೀಗೆ ಯಾವುದೂ ಕಾರಣವಾಗಿರಬಹುದು. ಕೆಲವೊಮ್ಮೆ ನಿಖರ ಕಾರಣವೂ ಗೊತ್ತಾಗದೇ ಇರಲೂ ಸಾಧ್ಯವಿದೆ. ಅದೇನೇ ಇದ್ದರೂ, ಇಂಥ ವರ್ತನೆಯನ್ನು ʼಅಪರಾಧ-ಶಿಕ್ಷೆʼಯ ಮಾದರಿಯಲ್ಲಿ ಕಾಣದೆ, ʼಸಮಸ್ಯೆ- ಕೌನ್ಸೆಲಿಂಗ್ʼನ ಮಾದರಿಯಲ್ಲಿ ನೋಡಬೇಕಿದೆ.
We received a disturbing video of a preschool where toddlers are left unattended in a closed room. A senior kid is seen hitting repeatedly a junior school. The school's name is Tenderfoot, Chikkalasandra, Bengaluru- 560061. Please don’t send your kid there! 🙏🏻 #childabuse pic.twitter.com/IeGsj2M9b2
— Citizens Movement, East Bengaluru (@east_bengaluru) June 22, 2023
ಇಲ್ಲಿ ಎದುರಾಗುವ ಇನ್ನೊಂದು ಪ್ರಶ್ನೆಯೆಂದರೆ, ಡೇ ಕೇರ್ಗಳಲ್ಲಿ ನಮ್ಮ ಮಕ್ಕಳು ಸುರಕ್ಷಿತರಾಗಿದ್ದಾರೆಯೇ? ನೋಡಲು ಅತ್ಯಾಧುನಿಕವಾಗಿರುವ ಡೇ ಕೇರ್ಗಳಲ್ಲಿ ನಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಿಬ್ಬಂದಿ ಇರುತ್ತಾರೆ. ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ ಎಂದುಕೊಳ್ಳುತ್ತೇವೆ. ಆದರೆ ಈ ಗ್ರಹಿಕೆಯನ್ನು ಮರುಪರಿಶೀಲಿಸಿಕೊಳ್ಳಬೇಕಿದೆ. ಹಣ ಸಂಪಾದನೆಯೇ ಮುಖ್ಯವೆಂದುಕೊಂಡಿರುವ ಡೇ ಕೇರ್ಗಳು ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಇಂಥ ಸನ್ನಿವೇಶಕ್ಕೆ ತುತ್ತಾಗಿಸುವ ಸಾಧ್ಯತೆ ಸಾಕಷ್ಟಿದೆ. ಇದನ್ನು ತಡೆಗಟ್ಟುವ ಸಾಧ್ಯತೆಗಳನ್ನೂ ನಾವು ಪರಿಶೀಲಿಸಬೇಕಿದೆ. ಡೇ ಕೇರ್ಗಳ ಮಾಲಿಕರು, ಸಿಬ್ಬಂದಿಗಳೇ ಇದಕ್ಕೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೇ ಇವುಗಳಿಗೆ ಶಾಲಾಡಳಿತ ಮಂಡಳಿಗಳಂತೆ ಪೋಷಕರ ಮಂಡಳಿಗಳನ್ನು ರೂಪಿಸುವುದು ಹಾಗೂ ಅಲ್ಲಿನ ಆಗುಹೋಗುಗಳ ಬಗ್ಗೆ ಸೂಕ್ಷ್ಮ ನಿಗಾ ಇಡುವಂತೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳುವುದು ಉತ್ತಮ ಕ್ರಮಗಳಾಗಬಲ್ಲುದು. ಸದ್ಯ ಘಟನೆ ನಡೆದ ಡೇ ಕೇರ್ ಕೇಂದ್ರವನ್ನು ಉತ್ತರದಾಯಿಯಾಗಿಸಬೇಕಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮೋದಿ ಫಲಪ್ರದ ಅಮೆರಿಕ ಭೇಟಿ, ದ್ವಿಪಕ್ಷೀಯ ಸಂಬಂಧ ವೃದ್ಧಿ
ಇಂದಿನ ಮಕ್ಕಳಲ್ಲಿ ಹಿಂಸಾಭಾವನೆ ಹೆಚ್ಚಾಗುತ್ತಿದೆಯೇ, ಹೆಚ್ಚಾಗುತ್ತಿದ್ದರೆ ಇದಕ್ಕೆ ಮದ್ದೇನು ಎಂಬುದನ್ನೂ ಈ ಹೊತ್ತಿನಲ್ಲಿ ನಾವು ವಿವೇಚಿಸಬೇಕಿದೆ. ಹೈಸ್ಕೂಲ್ ಹಾಗೂ ಕಾಲೇಜು ಮಕ್ಕಳಲ್ಲಿ ಹಿಂಸಾ ಮನೋಭಾವನೆ ಹೆಚ್ಚುತ್ತಿರುವುದನ್ನು ನಾವು ವ್ಯಕ್ತವಾಗಿಯೇ ಇಂದು ಕಾಣಬಹುದು. ಇದು ಇನ್ನೂ ಸಣ್ಣಪ್ರಾಯದ ಮಕ್ಕಳಲ್ಲಿಯೂ ಕಾಣಿಸಿಕೊಳ್ಳಬಹುದು ಎಂಬುದು ಮಾತ್ರ ಗಾಬರಿಯಾಗುವ ವಿಷಯ. ಹಿಂಸೆಯ ಮಾತುಗಳು, ನೋಟಗಳು, ಪೋಷಕರ ವರ್ತನೆಗಳು, ಬಂಧುಗಳ ನಡವಳಿಕೆ, ಸುತ್ತಮುತ್ತಲಿನ ವಾತಾವರಣ, ದೃಶ್ಯಮಾಧ್ಯಮದಲ್ಲಿ ಪದೇ ಪದೇ ನೋಡುವ ವಿಚಾರಗಳು, ಎಲ್ಲವೂ ಇದಕ್ಕೆ ಕಾರಣವಾಗಿರಬಹುದು. ಹಿಂಸೆಗೆ ಪೋಷಕವಾಗಬಹುದಾದ ಮಾಧ್ಯಮಗಳನ್ನು ಕಡಿಮೆ ಮಾಡಲು ಪೋಷಕರು ಸ್ವಯಂಪ್ರೇರಿತವಾಗಿ ಮುಂದಾಗುವುದಷ್ಟೇ ಇದಕ್ಕೆ ಪರಿಹಾರ. ಇದನ್ನೂ ಮೀರಿ ಮುಂದುವರಿದರೆ ಕೌನ್ಸೆಲಿಂಗ್ ಅಗತ್ಯವಾದೀತು. ಅದನ್ನು ಪಡೆಯಲು ಹಿಂಜರಿಯಬಾರದು.
ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ಗಲಭೆಕೋರರನ್ನು ಶಿಕ್ಷಿಸಿ, ವೋಟ್ ಬ್ಯಾಂಕ್ ಪಾಲಿಟಿಕ್ಸ್ ಬೇಡ
ರಾಜ್ಯದ ಕಾಂಗ್ರೆಸ್ ಸರಕಾರ ರಾಜಕೀಯ ಕಾರಣಕ್ಕಾಗಿ ಒಂದು ಸಮುದಾಯವನ್ನು ಓಲೈಸುತ್ತಿದೆ, ನಿರ್ದಿಷ್ಟ ಸಮುದಾಯದ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ರಾಜ್ಯ ಸರ್ಕಾರ ತನ್ನ ರಾಜಕೀಯ ಹಿತಾಸಕ್ತಿ, ವೋಟ್ ಬ್ಯಾಂಕ್ ರಾಜಕೀಯ ಪಕ್ಕಕ್ಕಿಟ್ಟು ಗಲಭೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ.
ಶಿವಮೊಗ್ಗದ ರಾಗಿಗುಡ್ಡದಲ್ಲಿ ಭಾನುವಾರ ಈದ್ ಮಿಲಾದ್ ಮೆರವಣಿಗೆ (Eid milad procession) ಸಂದರ್ಭದಲ್ಲಿ ಗಲಭೆ (Shivamogga Violence) ಸೃಷ್ಟಿಯಾಗಿದೆ. ಸೋಮವಾರ ಇದು ಸ್ವಲ್ಪ ತಣ್ಣಗಾಗಿದ್ದರೂ ಭಯದ ವಾತಾವರಣ ಮುಂದುವರಿದಿದೆ. ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆದಿತ್ತು. ಹಿಂದುಗಳ ಏಳು ಮನೆಗಳ ಮೇಲೆ ದಾಳಿ ನಡೆದಿದೆ. ಮೆರವಣಿಗೆಯಲ್ಲಿ ಬಹಿರಂಗವಾಗಿ ಕತ್ತಿ ಝಳಪಿಸಿದ್ದು ಪರಿಸ್ಥಿತಿಯ ಗಂಭೀರತೆಯನ್ನು ಸಾರುತ್ತಿವೆ. ಜತೆಗೆ ಮಚ್ಚು, ಲಾಂಗುಗಳು ಇದ್ದವು ಎನ್ನುವುದು ಸಾರ್ವಜನಿಕರ ಹೇಳಿಕೆ. ಎರಡು ದಿನದ ಹಿಂದಷ್ಟೇ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಶಾಂತಿಯುತವಾಗಿ ನಡೆದಿದ್ದು ಎಲ್ಲರಿಗೂ ನೆಮ್ಮದಿ ತಂದಿತ್ತು. ಆದರೆ ಭಾನುವಾರ ಈದ್ ಮಿಲಾದ್ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿದ್ದು, ಮೆರವಣಿಗೆಯಲ್ಲಿದ್ದ ಕೆಲ ಕಿಡಿಗೇಡಿಗಳು, ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಿಕೊಂಡು, ಕೇವಲ ಹಿಂದೂಗಳ ಮನೆಗಳನ್ನೇ ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ. ಕಿಟಕಿ, ಬಾಗಿಲುಗಳು ಕಲ್ಲಿನಿಂದ, ಮಚ್ಚಿನಿಂದ ಜಖಂಗೊಳಿಸಿದ್ದರೆ, ವಾಹನಗಳ ಮೇಲೆ ಕಲ್ಲು ಎತ್ತಿ ಹಾಕಿ ಕ್ರೌರ್ಯ ಮೆರೆದಿದ್ದಾರೆ. ಅಲ್ಲದೇ, ಹಿಂದೂಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಇದರಿಂದ ಶಿವಮೊಗ್ಗದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಇದಕ್ಕೆಲ್ಲ ಕಲಶವಿಟ್ಟಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ʼಶಿವಮೊಗ್ಗದಲ್ಲಿ ನಡೆದಿರುವುದು ಸಣ್ಣ ಗಲಾಟೆʼ ಎಂದಿದ್ದಾರೆ. ಈ ಹೇಳಿಕೆ ಹಾಸ್ಯಾಸ್ಪದವೂ ಹೌದು, ಆತಂಕಕಾರಿಯೂ ಹೌದು. ಹಾಗಾದರೆ ʼದೊಡ್ಡ ಗಲಾಟೆʼ ಎನಿಸಬೇಕಾದರೆ ಎಷ್ಟು ಜೀವಗಳಿಗೆ ಹಾನಿಯಾಗಬೇಕು? ಎಷ್ಟು ಜನರಿಗೆ ಗಾಯವಾದರೆ, ಎಷ್ಟು ಮನೆಗಳು ಹೊತ್ತಿ ಉರಿದರೆ ಸರ್ಕಾರ ಅದನ್ನು ʼಗಂಭೀರʼ ಎಂದು ಪರಿಗಣಿಸುತ್ತದೆ? ಈ ಬಗೆಗಿನ ಒಂದು ಪಟ್ಟಿಯನ್ನೂ ಗೃಹ ಸಚಿವರು ತಯಾರು ಮಾಡಿ ಬಹಿರಂಗಗೊಳಿಸುವುದು ಒಳ್ಳೆಯದು; ಮುಂದಾಗಬಹುದಾದ ಗಲಭೆಗಳು ಗಂಭೀರವೋ ಅಲ್ಲವೋ ಎಂದು ನಿರ್ಣಯಿಸಲು ಸುಲಭವಾಗುತ್ತದೆ!
ಮಲೆನಾಡು ಜಿಲ್ಲೆಯಾದ ಶಿವಮೊಗ್ಗದಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ಕೋಮು ಸಂಘರ್ಷ ನಡೆಯುತ್ತದೆ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಈ ಸಲ ಕೋಮು ಸಾಮರಸ್ಯ ಕದಡುವ, ಅಶಾಂತಿ ಸೃಷ್ಟಿಸುವ ಉದ್ದೇಶ ಈ ಮೆರವಣಿಗೆಯ ಮುನ್ನವೇ ಕಾರ್ಯಪ್ರವೃತ್ತವಾಗಿರುವುದು ಸ್ಪಷ್ಟ. ಗಲಭೆ ವೇಳೆ ತಲ್ವಾರ್, ಮಚ್ಚುಗಳು ಝಳಪಿಸಲಾಗಿದೆ. ಇವು ಏಕಾಏಕಿ ಮೆರವಣಿಗೆಯ ನಡುವೆ ಸಿದ್ಧತೆಯಿಲ್ಲದೇ ಹೇಗೆ ಬರಲು ಸಾಧ್ಯ? ಪ್ರಮುಖ ಸರ್ಕಲ್ ಒಂದರಲ್ಲಿ ಎರಡು ಅಲಗಿನ ಕತ್ತಿಯ ದೊಡ್ಡದೊಂದು ಪ್ರತಿಕೃತಿ ಇಡಲಾಗಿತ್ತು. ಇದರ ಅರ್ಥವೇನು? ಇದು ಏನನ್ನು ಸಂಕೇತಿಸುತ್ತದೆ? ಈದ್ ಮಿಲಾದ್ ಶಾಂತಿ ಹಾಗೂ ಭ್ರಾತೃತ್ವದ ಹಬ್ಬವೇ ಆಗಿದ್ದರೆ, ಅಲ್ಲಿ ಚೂರಿಯ ಪ್ರತಿಕೃತಿಗೆ ಕೆಲಸವೇನು?
ಈದ್ ಮಿಲಾದ್ ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯದ ಕೆಲವು ಪುಂಡರು ಔರಂಗಜೇಬ್ ಬಾವುಟ ಪ್ರದರ್ಶಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈದ್ ಮೆರವಣಿಗೆಯ ಮೇಲೆ ಔರಂಗಜೇಬನಿಗೆ ಏನು ಕೆಲಸ? ಇದರರ್ಥ ಇಷ್ಟೆ, ಔರಂಗಜೇಬ ಬಹಿರಂಗವಾಗಿ ಹಿಂದೂಗಳನ್ನು ʼಕಾಫಿರರುʼ ಅರ್ಥಾತ್ ʼಧರ್ಮದ್ರೋಹಿಗಳುʼ ಎಂದು ಕರೆದಿದ್ದ. ಹಿಂದೂಗಳನ್ನು ದೊಡ್ಡ ಸಂಖ್ಯೆಯಲ್ಲಿ ಇಸ್ಲಾಂಗೆ ಮತಾಂತರ ಮಾಡುವುದಕ್ಕೆ ಪ್ರೇರಣೆ, ಸಹಾಯ ಒದಗಿಸುತ್ತಿದ್ದ. ಇವನ ಆಡಳಿತದ ಕಾಲದಲ್ಲಿ ಲಕ್ಷಾಂತರ ಮಂದಿ ಹಿಂದೂಗಳನ್ನು ಬಲವಂತವಾಗಿ ಮುಸ್ಲಿಮರನ್ನಾಗಿಸಲಾಯಿತು. ಕಾಶಿ, ಮಥುರಾ ಮುಂತಾದ ದೇವಾಲಯ ನಗರಿಗಳನ್ನು ಈತ ನೆಲಸಮ ಮಾಡಿದ. ಕಾಶಿಯಲ್ಲಿ ಈತ ಮಾಡಿದ ಹಾನಿ ಇಂದಿಗೂ ಧಾರ್ಮಿಕ ಹಿಂದೂಗಳನ್ನು ಆಕ್ರೋಶಕ್ಕೊಳಪಡಿಸುತ್ತದೆ. ಇಂಥ ನರರಕ್ಷಾಸನನ್ನು ಮಾದರಿಯಾಗಿ, ಐಕಾನ್ ಆಗಿ ಪ್ರದರ್ಶಿಸುವ ಮೂಲಕ ಇವರು ಯಾವ ಸಂದೇಶ ನೀಡಹೊರಟಿದ್ದಾರೆ?
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ‘ಸ್ವಚ್ಛತೆಯೇ ಸೇವೆ’ ಜನಾಂದೋಲನ ನಿರಂತರವಾಗಿರಲಿ
ಇಷ್ಟೆಲ್ಲ ಕಣ್ಣೆದುರು ನಡೆಯುತ್ತಿದ್ದರೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಾಗಿದ್ದು ನಾಚಿಕೆಗೇಡಿನ ಸಂಗತಿ. ಶಿವಮೊಗ್ಗದಲ್ಲಿ ಆಗಾಗ ಕೋಮು ಗಲಭೆಗಳು ನಡೆಯುತ್ತಲೇ ಇರುತ್ತವೆ. ಇದರ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ಕೈವಾಡ ಇರುವುದು ಹಗಲಿನಷ್ಟೇ ನಷ್ಟ. ಈ ಹಿಂದೆ ಹರ್ಷ ಎಂಬ ಹಿಂದೂ ಸಂಘಟನೆಯ ಯುವಕನನ್ನು ಅಮಾನುಷವಾಗಿ ಇಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈಗ ದುಷ್ಕರ್ಮಿಗಳು ಎಸ್ಪಿ ಮೇಲೆಯೇ ಕಲ್ಲು ತೂರಿದ್ದಾರೆ. ಇನ್ನು ಜನ ಸಾಮಾನ್ಯರ ಕತೆ ಏನು? ರಾಜ್ಯದ ಕಾಂಗ್ರೆಸ್ ಸರಕಾರ ರಾಜಕೀಯ ಕಾರಣಕ್ಕಾಗಿ ಒಂದು ಸಮುದಾಯವನ್ನು ಓಲೈಸುತ್ತಿದೆ, ನಿರ್ದಿಷ್ಟ ಸಮುದಾಯದ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ರಾಜ್ಯ ಸರ್ಕಾರ ತನ್ನ ರಾಜಕೀಯ ಹಿತಾಸಕ್ತಿ, ವೋಟ್ ಬ್ಯಾಂಕ್ ರಾಜಕೀಯ ಪಕ್ಕಕ್ಕಿಟ್ಟು ಗಲಭೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇದು ಬೇರೆ ಪ್ರದೇಶಗಳಿಗೂ ವ್ಯಾಪಿಸಬಹುದು. ಗಲಭೆಕೋರರನ್ನು ಮಟ್ಟ ಹಾಕಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು. ಈ ಗಲಭೆಯ ಹಿಂದಿನ ಶಕ್ತಿ ಯಾವುದು, ಇದು ಪೂರ್ವ ಯೋಜಿತವೇ? ಎಂಬ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು.
ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ಉಜ್ಜಯಿನಿಯ ಹೀನ ಕೃತ್ಯ; ಒಮ್ಮೆ ಆ ಬಾಲಕಿಯ ಜಾಗದಲ್ಲಿ ನಮ್ಮವರನ್ನು ಕಲ್ಪಿಸಿಕೊಂಡರೆ…
ಒಂದು ನಾಗರಿಕ ಸಮಾಜವಾಗಿ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಬಾಲಕಿಗೆ ಸಹಾಯ ಮಾಡದ ಜನರ ನಡುವೆ ಇದ್ದಿದ್ದರೆ ನಾವೇನು ಮಾಡುತ್ತಿದ್ದೆವು ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಿದೆ. ಇದರ ಉತ್ತರದಲ್ಲಿ, ನಾವು ನಾಗರಿಕರೇ ಅಲ್ಲವೇ ಎಂಬುದಕ್ಕೂ ಉತ್ತರ ಸಿಗಲಿದೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ನಡೆದಿದೆ. 12 ವರ್ಷದ ಬಾಲಕಿ ಮೇಲೆ ಘೋರ ಲೈಂಗಿಕ ದೌರ್ಜನ್ಯ (Pocso case) ನಡೆದಿದೆ. ಆದರೆ ಇದರ ನಂತರ ನಡೆದಿರುವುದು ನಾವೆಲ್ಲ ಇನ್ನಷ್ಟು ನಾಚಿಕೆಪಡಬೇಬೇಕಾದ ಸಂಗತಿ. ಸಂತ್ರಸ್ತಳಾದ ಆಕೆ ಮೈತುಂಬ ಗಾಯಳಾಗಿ ರಕ್ತಸಿಕ್ತವಾಗಿ ನರಳುತ್ತ ಬೀದಿಯಲ್ಲಿ ಸಹಾಯಕ್ಕಾಗಿ ಮನೆ ಮನೆಗೆ ತೆರಳಿ ಮೊರೆಯಿಟ್ಟರೂ ಯಾರೂ ಆಕೆಗೆ ಸಹಾಯ ಮಾಡಿಲ್ಲ. ಹೀಗೆ ಆಕೆ ಆಕೆ 8 ಕಿಲೋಮೀಟರ್ನಷ್ಟು ದೂರ ನಡೆದಿದ್ದಾಳೆ. ಕೊನೆಗೆ ಆಕೆ ಬದ್ನಗರ ರಸ್ತೆ ಬಳಿ ಇದ್ದ ಆಶ್ರಮಕ್ಕೆ ತೆರಳಿದ್ದು, ಅಲ್ಲಿದ್ದ ರಾಹುಲ್ ಶರ್ಮಾ ಎಂಬ ಸನ್ಯಾಸಿಯೊಬ್ಬರು ಬಾಲಕಿಗೆ ಬಟ್ಟೆ ಹೊದಿಸಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ʼʼಆಕೆಗೆ ತೀವ್ರವಾಗಿ ರಕ್ತಸ್ರಾವ ಆಗುತ್ತಿತ್ತು. ಮೈತುಂಬ ಗಾಯಗಳಾಗಿದ್ದವು, ಆಕೆಯ ಕಣ್ಣುಗಳು ಊದಿಕೊಂಡಿದ್ದವು. ಮಾತನಾಡಲು ಕೂಡ ಬಾಲಕಿಗೆ ಸಾಧ್ಯವಾಗುತ್ತಿರಲಿಲ್ಲʼʼ ಎಂದು ಸನ್ಯಾಸಿ ತಿಳಿಸಿದ್ದಾರೆ.
ಬಾಲಕಿ ಸಹಾಯಕ್ಕಾಗಿ ಹಲವರ ಮುಂದೆ ಯಾಚಿಸುತ್ತಿರುವ ಸಿಸಿಟಿವಿ ಫೂಟೇಜ್ಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಅದರಲ್ಲಿ ಹಲವು ಫೂಟೇಜ್ಗಳು ಸಾರ್ವಜನಿಕಗೊಂಡಿವೆ. ಅದರಲ್ಲಿ, ಬಾಲಕಿಯ ಪಕ್ಕದಲ್ಲೇ ಹಲವಾರು ವಾಹನಗಳು ಸಾಗಿಹೋಗುವುದನ್ನು ಕಾಣಬಹುದಾಗಿದೆ; ಯಾರೂ ನಿಲ್ಲಿಸಿ ಆಕೆಗೆ ಏನಾಯಿತೆಂದು ಕೇಳಿಲ್ಲ. ಆಕೆ ಒಂದು ಟೋಲ್ಗೇಟನ್ನು ದಾಟಿ ಹೋಗಿದ್ದಾಳೆ. ಅಲ್ಲಿಯೂ ಸಿಬ್ಬಂದಿ ಆಕೆಗೆ ಸ್ವಲ್ಪ ಮಟ್ಟಿನ ಹಣ ನೀಡಿದ್ದಾರೆ ಬಿಟ್ಟರೆ, ಬೇರೇನೂ ಸಹಾಯ ಮಾಡಿಲ್ಲ. ಹೀಗೇ ಆಕೆ 8 ಕಿ.ಮೀ ನಡೆದಿದ್ದಾಳೆ ಎಂದರೆ, ಎಷ್ಟು ಮಂದಿಯ ಮುಂದೆ ಆಕೆ ಆರ್ತತೆಯಿಂದ ಅಲವತ್ತುಕೊಂಡಿರಬಹುದು, ಎಷ್ಟು ಮಂದಿ ನೆರವು ನಿರಾಕರಿಸಿರಬಹುದು ಎಂಬುದನ್ನು ಊಹಿಸಬಹುದು. ಇನ್ನ ಕೆಲವರು ಆಕೆ ಮನೆ ಮುಂದೆ ಬಂದಾಗ ಆಕೆಯನ್ನು ಬೈದು ಓಡಿಸಿಯೂ ಇದ್ದಾರೆ. ಇದು ನಾಗರಿಕ ಸಮಾಜದ ಮೌಲ್ಯಗಳಿಗೆ ಧಕ್ಕೆ ತರುವ ಸಂಗತಿಯಷ್ಟೇ ಅಲ್ಲ; ನಮ್ಮ ಸಮಾಜ ಅದೆಷ್ಟು ಪೈಶಾಚಿಕಗೊಂಡಿದೆ ಎಂಬುದನ್ನೂ ನಮ್ಮ ಗಮನಕ್ಕೆ ತರುವ ಸಂಗತಿಯಾಗಿದೆ.
ಇಂಥ ಸ್ಥಿತಿಯಲ್ಲಿ ಆಕೆ ಎಂಟು ಕಿ.ಮೀ ಜನರ ನಡುವೆಯೇ ನಡೆದರೂ ಕಾಡಿನಲ್ಲಿ ನಡೆದಂತಾಯಿತು ಎಂಬುದೇ ವಿಪರ್ಯಾಸ. ನಾಗರಿಕರಾದ ಯಾರೇ ಆಗಲಿ ಆಕೆಗೆ ಒಂದು ಸಹಾಯಹಸ್ತವನ್ನು ಚಾಚಬಹುದಿತ್ತು. ಅದು ಕನಿಷ್ಠ ಮಾನವೀಯ ಮೌಲ್ಯದ ಸಂಗತಿಯಾಗಿತ್ತು. ಇದನ್ನು ಯಾರೂ ಯಾರಿಗೂ ಬೋಧಿಸಬೇಕಾಗಿಲ್ಲ. ಮನುಷ್ಯಮಾತ್ರರಾದವರು ಮಾಡಬೇಕಾದ ಸಂಗತಿಯೇ ಇದು. ಅಪ್ತಾಪ್ತ ವಯಸ್ಸಿನ ಬಾಲಕಿ ಇಂಥ ಸ್ಥಿತಿಯಲ್ಲಿರುವಾಗ, ಆಕೆ ಏನೋ ಅಪಾಯಕ್ಕೆ ತುತ್ತಾಗಿದ್ದಾಳೆ ಎಂದು ಅರ್ಥ ಮಾಡಿಕೊಳ್ಳದಿರುವಷ್ಟು ದಡ್ಡರು ಯಾರೂ ಇಲ್ಲ. ಒಂದು ಕ್ಷಣ ನಿಂತು ಆಕೆಗೆ ಬಟ್ಟೆ ನೀಡುವುದೋ, ಅಥವಾ ಆಕೆಯ ಅಳಲನ್ನು ಕೇಳಿ ಪೊಲೀಸರಿಗೆ ಫೋನ್ ಮಾಡುವುದೋ ಮಾಡಬಹುದಿತ್ತು. ಅಪಘಾತಗಳು ಸಂಭವಿಸಿದಾಗ ನೆರವಾಗುವವರು, ಅತ್ಯಾಚಾರ ಸಂತ್ರಸ್ತರಿಗೆ ನೆರವು ನೀಡುವವರನ್ನು ಪೊಲೀಸರು ಯಾವ ಕಾರಣಕ್ಕೂ ಪೊಲೀಸ್ ಠಾಣೆಗೆ ಕರೆಸುವುದಾಗಲೀ ವಿಚಾರಣೆಯ ಹೆಸರಿನಲ್ಲಿ ಹಿಂಸಿಸುವುದಾಗಲೀ ಮಾಡುವಂತಿಲ್ಲ ಎಂಬ ನಿಯಮ ಇದೆ. ಇಷ್ಟಿದ್ದೂ ಯಾರೂ ನೆರವಿಗೆ ಬರಲಿಲ್ಲ.
ಇದರ ನಂತರ ಪೊಲೀಸ್ ತನಿಖೆ ನಡೆದಿದೆ. ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ತಂದೆ ʼʼಆತನನ್ನು ನಾನು ಸಮರ್ಥಿಸಿಕೊಳ್ಳಲು ಹೋಗಲಾರೆ. ಅವನಿಗೆ ಮರಣದಂಡನೆ ಆಗಲಿʼʼ ಎಂದು ಹೇಳಿದ್ದಾರೆ. ಇದೆಲ್ಲ ಸರಿ. ಇದರ ಜತೆಗೆ, ಬಾಲಕಿಗೆ ಸಹಾಯ ಮಾಡದ ವ್ಯಕ್ತಿಗಳ ಮೇಲೂ ಲೈಂಗಿಕ ದೌರ್ಜನ್ಯ ಕಾನೂನುಗಳ ಅಡಿಯಲ್ಲಿ (POCSO) ಕೇಸು ದಾಖಲಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಸಂತ್ರಸ್ತೆಗೆ ʼಸಹಾಯ ನೀಡದ ಅಥವಾ ಇದನ್ನು ವರದಿ ಮಾಡಲು ವಿಫಲರಾದ’ ಆರೋಪಗಳನ್ನು ಅಂಥವರ ಮೇಲೆ ಹಾಕಬಹುದು ಎಂಬುದು ನಿಜ. ಇದರ ನಡುವೆ ಆಶಾವಾದದ ಬೆಳ್ಳಿ ಕಿರಣದಂತೆ, ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಮತ್ತು ಮದುವೆಯ ಹೊಣೆಯನ್ನು ಮಹಾಕಲ್ ಪೊಲೀಸ್ ಠಾಣೆಯ ಪ್ರಭಾರಿ ಅಜಯ್ ವರ್ಮಾ ಹೊತ್ತುಕೊಂಡಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಬೆಂಬಲಿಸಲು ಅನೇಕರು ಮುಂದೆ ಬಂದಿದ್ದಾರೆ ಎಂದಿದ್ದಾರೆ. ಇದು ಕೆಟ್ಟದ್ದರ ನಡುವೆಯೂ ಒಳ್ಳೆಯ ಸುದ್ದಿ. ಉಜ್ಜಯಿನಿ ಅತ್ಯಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ತಮಿಳುನಾಡಿಗೆ ನೀರು, ಕರ್ನಾಟಕಕ್ಕೆ ಕಣ್ಣೀರು; ಅನ್ಯಾಯಕ್ಕೆ ಕೊನೆ ಎಲ್ಲಿ?
ಆದರೆ ಒಂದು ನಾಗರಿಕ ಸಮಾಜವಾಗಿ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಬಾಲಕಿಗೆ ಸಹಾಯ ಮಾಡದ ಜನರ ನಡುವೆ ಇದ್ದಿದ್ದರೆ ನಾವೇನು ಮಾಡುತ್ತಿದ್ದೆವು ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಿದೆ. ಇದರ ಉತ್ತರದಲ್ಲಿ, ನಾವು ನಾಗರಿಕರೇ ಅಲ್ಲವೇ ಎಂಬುದಕ್ಕೂ ಉತ್ತರ ಸಿಗಲಿದೆ. ಒಂದು ಸಲ, ಆ ಬಾಲಕಿಯ ಜಾಗದಲ್ಲಿ ನಮ್ಮ ಮನೆಯ ಹೆಣ್ಣುಮಕ್ಕಳನ್ನು ಕಲ್ಪಿಸಿಕೊಂಡರೂ ಇದಕ್ಕೆ ಉತ್ತರ ನೀಡಿಕೊಳ್ಳುವುದು ಸುಲಭ. ಬಾಲಕಿಯ ಮೊರೆಯ ಸ್ಪಂದಿಸದವರ ಮೇಲೆ ಕೇಸ್ ಹಾಕುವುದು ಸುಲಭ. ಆದರೆ ಇವರು ಇಂಥ ಸನ್ನಿವೇಶಗಳಲ್ಲಿ ನೆರವಿಗೆ ಧಾವಿಸುವಂಥ ಮಾನವೀಯತೆಯನ್ನು ಇಲ್ಲಿ ಬೆಳೆಸುವುದು, ಈ ಸಮಾಜದಲ್ಲಿ ಅದನ್ನು ರೂಢಿಸುವುದು ಹೇಗೆ, ಯಾವಾಗ? ಇದನ್ನು ನಾವು ಕಂಡುಕೊಳ್ಳಬೇಕಿದೆ.
ಕರ್ನಾಟಕ
ವಿಸ್ತಾರ ಸಂಪಾದಕೀಯ: ತಮಿಳುನಾಡಿಗೆ ನೀರು, ಕರ್ನಾಟಕಕ್ಕೆ ಕಣ್ಣೀರು; ಅನ್ಯಾಯಕ್ಕೆ ಕೊನೆ ಎಲ್ಲಿ?
Vistara Editorial: ಜನತೆಯ ಆಕ್ರೋಶ ಈ ಎರಡು ಬಂದ್ಗಳಲ್ಲಿ ಇದುವರೆಗೆ ಶಾಂತವಾಗಿಯೇ ವ್ಯಕ್ತವಾಗಿದೆ. ಪರಿಸ್ಥಿತಿ ಕೈಮೀರಿದರೆ ಅದು ಯಾವ ಸ್ವರೂಪ ಪಡೆಯುತ್ತದೋ ಗೊತ್ತಿಲ್ಲ. ಅದಕ್ಕೂ ಮುನ್ನ ಕರ್ನಾಟಕಕ್ಕೆ ನ್ಯಾಯ ಸಿಗಲಿ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery water Management Authority) ಶುಕ್ರವಾರ ನಡೆಸಿದ ಸಭೆಯಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದೆ. ಸೆ. 28ರಿಂದ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water regulation Committee) ಆದೇಶವನ್ನೇ ಪ್ರಾಧಿಕಾರವೂ ಎತ್ತಿ ಹಿಡಿದಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ನಡೆದಿತ್ತು. ಶುಕ್ರವಾರ ಕರ್ನಾಟಕ ಬಂದ್ ನಡೆದಿದೆ. ಎರಡೂ ಬಂದ್ಗಳೂ ಬಹುತೇಕ ಯಶಸ್ವಿಯಾಗಿವೆ. ಎರಡಕ್ಕೂ ಜನ ಸ್ಪಂದಿಸಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ಆಕ್ರೋಶವಿದೆ. ಆದರೆ ರಾಜ್ಯದ ಆಕ್ರೋಶಕ್ಕೆ ಪ್ರಾಧಿಕಾರಗಳು, ಕೋರ್ಟ್ಗಳು ಯಾವಾ ಸ್ಪಂದಿಸುತ್ತವೆಯೋ ಗೊತ್ತಿಲ್ಲ. ತಮಿಳುನಾಡಿನಲ್ಲಿ ಕುಳಿತಿರುವ ಕಟುಕರಿಗೆ ಕರ್ನಾಟಕದ ಬವಣೆ ಅರ್ಥವಾಗುತ್ತಿಲ್ಲ(Vistara Editorial).
ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ, ಬರ ಪರಿಸ್ಥಿತಿ ತೀವ್ರವಾಗಿದೆ ಎಂಬ ರಾಜ್ಯದ ಯಾವ ವಾದವನ್ನೂ ಲೆಕ್ಕಿಸದೆ ಕಾವೇರಿ ಪ್ರಾಧಿಕಾರ ತನ್ನದೇ ಹಠಮಾರಿ ನಿಲುವನ್ನು ಮುಂದುವರಿಸಿದೆ. ಈ ಕಾರಣದಿಂದಾಗಿಯೇ ತಮಿಳುನಾಡಿಗೆ ನೀರು ಬಿಡಬೇಕು ಎಂಬ CWRCಯ ಆದೇಶವನ್ನು ಮತ್ತೆ ಎತ್ತಿ ಹಿಡಿದಿದೆ. CWRC ಕಳೆದ ಸೆ. 26ರಂದು ನಡೆಸಿದ ಸಭೆಯಲ್ಲಿ ತಮಿಳುನಾಡಿಗೆ ಸೆ. 28ರಿಂದ ಅ.15ರವರೆಗೆ ಪ್ರತಿ ದಿನವೂ 3000 ಕ್ಯೂಸೆಕ್ ನೀರು ಬಿಡಬೇಕು ಎಂದು ಆದೇಶಿಸಿತ್ತು. ಇದೀಗ ಕರ್ನಾಟಕವು ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವೊಂದೇ ಬಾಕಿ ಉಳಿದಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ನ್ಯಾಯಮೂರ್ತಿಗಳೊಂದಿಗೆ ಮುಂದಿನ ಹೆಜ್ಜೆಯ ಬಗ್ಗೆ ಸಮಾಲೋಚಿಸಿದ್ದಾರೆ. ಕಾವೇರಿ ಪ್ರಾಧಿಕಾರದ ಸಭೆಗೂ ಮುನ್ನವೇ ಸುಪ್ರೀಂ ಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಬಹುದು ಎಂದು ವಿರೋಧ ಪಕ್ಷಗಳು ಸಲಹೆ ನೀಡಿದ್ದವು. ಆದರೆ, ಸರ್ಕಾರ ಪ್ರಾಧಿಕಾರದ ಆದೇಶಕ್ಕಾಗಿ ಕಾಯುತ್ತಿತ್ತು. ಈಗ ಕಾವೇರಿ ನದಿ ಪ್ರಾಧಿಕಾರದ ಆದೇಶವೂ ಕರ್ನಾಟಕಕ್ಕೆ ಹಿನ್ನಡೆಯಾಗಿರುವುದರಿಂದ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದಾಗಿದೆ.
ಕಾವೇರಿ ಪ್ರಾಧಿಕಾರದ ಶುಕ್ರವಾರದ ಸಭೆಯಲ್ಲೂ ತಮಿಳುನಾಡು ತನ್ನ ಮೊಂಡುವಾದವನ್ನೇ ನಡೆಸಿತು. ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶವೇ ಸರಿಯಿಲ್ಲ. ನಮಗೆ ಕೊಡಬೇಕಾಗಿರುವುದು 3000 ಕ್ಯೂಸೆಕ್ ನೀರಲ್ಲ. 12500 ಕ್ಯೂಸೆಕ್ ನೀಡಬೇಕು ಎಂದೇ ವಾದಿಸಿತು. ಕರ್ನಾಟಕವು ರಾಜ್ಯದ ಪರಿಸ್ಥಿತಿ ಜಲಾಶಯದಲ್ಲಿರುವ ನೀರಿನ ಮಟ್ಟವನ್ನು ವಿವರಿಸಿದರೂ ವಾದಕ್ಕೆ ಬೆಲೆ ಸಿಗಲಿಲ್ಲ. ಬಹುಶಃ ಬಿಟ್ಟರೆ ಇಡೀ ಕಾವೇರಿ ನೀರೆಲ್ಲಾ ತನಗೇ ಬೇಕು ಎಂದು ವಾದಿಸುವುದಕ್ಕೂ ತಮಿಳುನಾಡು ಹೇಸುವುದಿಲ್ಲ. ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವು ತಮಿಳುನಾಡಿನ ಪರ ನಿಲ್ಲುತ್ತಿರುವುದು ಇದು ಮೂರನೇ ಬಾರಿ. ಮೊದಲು ಆಗಸ್ಟ್ 26ರಂದು 5000 ಕ್ಯೂಸೆಕ್, ಬಳಿಕ ಸೆ. 12ರಂದು ಮತ್ತೆ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ಮಾಡಿದ್ದ ಸಮಿತಿ ಇದೀಗ ಮೂರನೇ ಸಲ ಆದೇಶ ನೀಡಿದೆ. ಹಿಂದಿನ ಎರಡೂ ಸಂದರ್ಭದಲ್ಲೂ ಅದು ಕರ್ನಾಟಕದ ವಾದಗಳಿಗೆ ಮನ್ನಣೆ ನೀಡಿಲ್ಲ. ಸುಪ್ರೀಂ ಕೋರ್ಟ್, ಪ್ರಾಧಿಕಾರ ಹೇಳಿದ್ದು ಸರಿ ಇರುತ್ತದೆ ಎಂದಿತ್ತು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತವೇ ನಮ್ಮ ಫೇವರಿಟ್ ತಂಡ, ಕ್ರಿಕೆಟ್ ವಿಶ್ವಕಪ್ ಗೆಲ್ಲಲಿ
ಹಾಗಿದ್ದರೆ ಈ ಸಮಸ್ಯೆ ಪರಿಹಾರಕ್ಕೆ ದಾರಿ ಏನು? ಎರಡೂ ರಾಜ್ಯಗಳಿಗೆ ಸೇರದ ಸ್ವತಂತ್ರ ಸಮಿತಿಯೊಂದನ್ನು ರಚಿಸಿ ರಾಜ್ಯಗಳ ನೀರಿನ ಪರಿಸ್ಥಿತಿಯ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಲು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಬೇಕಾಗಿದೆ. ಇದೇ ಮಾತನ್ನು ನೀರಾವರಿ ವಿಚಾರದಲ್ಲಿ ಸಾಕಷ್ಟು ಅಧ್ಯಯನ ಹಾಗೂ ಅನುಭವವನ್ನು ಹೊಂದಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರೂ ಇತ್ತೀಚೆಗೆ ಹೇಳಿದ್ದರು. ಎರಡೂ ರಾಜ್ಯಗಳಿಗೆ ಸೇರದ ಮೂರನೆಯ ತಜ್ಞರಿಂದ ವಸ್ತುನಿಷ್ಠತೆ ನಿರೀಕ್ಷಿಸಬಹುದು. ಸಂಕಷ್ಟ ಸೂತ್ರವಿಲ್ಲ ಎಂಬ ಮಾತನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೃಷ್ಣರಾಜಸಾಗರ ಅಣೆಕಟ್ಟು ಲೋಕಾರ್ಪಣೆಗೊಂಡು 90 ವರ್ಷಗಳಾದವು. ಇಂದಿಗೂ ಇದರ ನೀರನ್ನು ಹಂಚಿಕೊಳ್ಳುವ ಉಭಯ ರಾಜ್ಯಗಳ ನಡುವೆ ಸಂಕಷ್ಟ ಸೂತ್ರವೊಂದು ಇಲ್ಲದಿರುವುದು ವಿಚಿತ್ರ. ಎಷ್ಟು ನೀರು ಇದ್ದಾಗ ಎಷ್ಟು ಪ್ರಮಾಣದಲ್ಲಿ ಬಿಡಬೇಕು ಎಂಬ ಸೂತ್ರವೊಂದು ಮೊದಲಾಗಿ ರೂಪುಗೊಳ್ಳಬೇಕಿದೆ.
ಕರ್ನಾಟಕದಲ್ಲಿರುವ ಬರದ ಪರಿಸ್ಥಿತಿಯನ್ನು ಪ್ರಾಥಮಿಕವಾಗಿ ಪರಿಗಣಿಸಬೇಕು. ತಮಿಳುನಾಡು ಕೃಷಿಗೆ ನೀರನ್ನು ಅಪೇಕ್ಷಿಸುತ್ತಿದೆ. ಆದರೆ ಕರ್ನಾಟಕದ ಚಿಂತೆ ಕುಡಿಯುವ ನೀರಿನದಾಗಿದೆ. ಈಗಾಗಲೇ ಮಂಡ್ಯ ಸೀಮೆಯ ರೈತರು ಎರಡನೇ ಬೆಳೆಗೆ ನೀರು ದೊರೆಯಬಹುದು ಎಂಬ ಆಸೆಯನ್ನು ಬಿಟ್ಟಿದ್ದಾರೆ. ಕೋರ್ಟ್ ಮತ್ತು ಪ್ರಾಧಿಕಾರ ಇದೇ ಆದೇಶವನ್ನು ಮುಂದುವರಿಸಿದರೆ ಮಂಡ್ಯ, ಮೈಸೂರು, ಬೆಂಗಳೂರು ಮೂರು ನಗರಗಳ ಜನತೆ ಕುಡಿಯುವ ನೀರಿನ ಹಂಬಲವನ್ನೇ ಬಿಡಬೇಕಾಗಿ ಬರುತ್ತದೋ ಏನೋ. ತಮಿಳುನಾಡಿಗೆ ನೈಋತ್ಯ ಮಾನ್ಸೂನ್ನ ಭಾಗ್ಯವಿದೆ. ಆದರೆ ಬೆಂಗಳೂರು, ಮೈಸೂರಿಗೆ ಅದಿಲ್ಲ. ತಮಿಳುನಾಡಿನ ಕೃಷಿಗೆ ಬೇಕಾದಷ್ಟು ಮಳೆಯಾಗಿದೆ. ಕುಡಿಯುವ ನೀರಿಗೂ ಸಂಕಷ್ಟವಿಲ್ಲ. ವ್ಯರ್ಥವಾಗಿ ಸಮುದ್ರಕ್ಕೆ ಹರಿದುಹೋಗುವ ನೀರಿನ ಮೇಲೆ ತಮಿಳುನಾಡು ನಿಗಾ ಇಡುವುದಿಲ್ಲ. ಇದನ್ನೆಲ್ಲ ಗಟ್ಟಿ ದನಿಯಲ್ಲಿ ಕರ್ನಾಟಕ ಹೇಳಬೇಕಿದೆ. ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈಗಲಾದರೂ ಸೆಟೆದು ನಿಲ್ಲುವುದು, ಜೋರಾಗಿ ʼಏನೇ ಬರಲಿ, ನೀರು ಬಿಡುವುದಿಲ್ಲʼ ಎಂದು ಹೇಳಿ ದಕ್ಕಿಸಿಕೊಳ್ಳುವುದು ಕರ್ನಾಟಕಕ್ಕೆ ಸಾಧ್ಯವಾಗಬೇಕು. ಎರಡೆರಡು ಬಂದ್ಗಳು ವ್ಯರ್ಥವಾಗಬಾರದು. ಜನತೆಯ ಆಕ್ರೋಶ ಈ ಎರಡು ಬಂದ್ಗಳಲ್ಲಿ ಇದುವರೆಗೆ ಶಾಂತವಾಗಿಯೇ ವ್ಯಕ್ತವಾಗಿದೆ. ಪರಿಸ್ಥಿತಿ ಕೈಮೀರಿದರೆ ಅದು ಯಾವ ಸ್ವರೂಪ ಪಡೆಯುತ್ತದೋ, ಹೇಳುವವರ್ಯಾರು? ಅದಕ್ಕೂ ಮುನ್ನ ಕರ್ನಾಟಕಕ್ಕೆ ನ್ಯಾಯ ಸಿಗಲಿ.
ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
ವಿಸ್ತಾರ ಸಂಪಾದಕೀಯ: ಭಾರತವೇ ನಮ್ಮ ಫೇವರಿಟ್ ತಂಡ, ಕ್ರಿಕೆಟ್ ವಿಶ್ವಕಪ್ ಗೆಲ್ಲಲಿ
Vistara Editorial: ಸದ್ಯದ ಪ್ರದರ್ಶನ ಮುಂದುವರಿಸಿಕೊಂಡು ಹೋದರೆ ಭಾರತ ಕ್ರಿಕೆಟ್ನ ಜಾಗತಿಕ ಒಡೆಯನಾಗುವುದು ಖಾತರಿ. ಒಟ್ಟಾರೆ ಭಾರತದ ಪಿಚ್ ಹಾಗೂ ಇನ್ನಿತರ ಕಂಡೀಷನ್ಗಳನ್ನು ಪರಿಗಣಿಸಿದರೆ ಭಾರತವೇ ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡವಾಗಿದೆ.
ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುವ ಇವೆಂಟ್ ಎಂದರೆ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ. ವಿಶ್ವ ಕಪ್ನಲ್ಲಿ ಆಡಲಿರುವ ಭಾರತ ಕ್ರಿಕೆಟ್ ತಂಡವನ್ನು ಈ ಹಿಂದೆಯೇ ಪ್ರಕಟಿಸಲಾಗಿತ್ತು; ಈಗ ಅದರಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಏಷ್ಯಾ ಕಪ್ ವೇಳೆ ಗಾಯಗೊಂಡಿದ್ದ ಗುಜರಾತ್ ಮೂಲದ ಎಡಗೈ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ತಂಡಕ್ಕೆ ಅಲಭ್ಯರಾಗುತ್ತಿದ್ದಂತೆ ತಮಿಳುನಾಡು ಮೂಲದ ಬಲಗೈ ಸ್ಪಿನ್ ಆಲ್ರೌಂಡರ್ ಆರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಭಾರತ ತಂಡದ ಮಾಜಿ ವೇಗದ ಬೌಲಿಂಗ್ ಆಲ್ರೌಂಡರ್ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಹಿರಿಯರ ಕ್ರಿಕೆಟ್ ತಂಡ ಆಯ್ಕೆ ಸಮಿತಿ ಈ ಬದಲಾವಣೆ ಮಾಡಿಕೊಂಡಿದೆ. ತಂಡದ ಸದಸ್ಯರ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ(Vistara Editorial).
ಅಕ್ಷರ್ ಪಟೇಲ್ ನಿರ್ಗಮನ ಹಾಗೂ ಅಶ್ವಿನ್ ಆಗಮನದ ಹೊರತಾಗಿಯೂ ಟೀಮ್ ಇಂಡಿಯಾ ಬಲಿಷ್ಠವಾಗಿದೆ. ಹಿರಿಯ ಬ್ಯಾಟರ್ಗಳು ಹಾಗೂ ಅನುಭವಿ ಹಾಗೂ ಅತ್ಯುತ್ತಮ ಫಾರ್ಮ್ನಲ್ಲಿರುವ ಬೌಲರ್ಗಳಿಂದ ತುಂಬಿರುವ 15 ಸದಸ್ಯರ ಭಾರತ ತಂಡ ವಿಶ್ವ ಕಪ್ ಗೆಲ್ಲುವ ಎಲ್ಲ ಸಾಮರ್ಥ್ಯ ಹೊಂದಿದೆ. ಭಾರತ ತಂಡದ ಆಟಗಾರರ ಆಯ್ಕೆ ಅತ್ಯಂತ ಸಮತೋಲಿತವಾಗಿದೆ. ಆರಂಭಿಕ ಜೋಡಿಯಾಗಿ ಶುಬ್ಮನ್ ಗಿಲ್, ರೋಹಿತ್ ಶರ್ಮಾ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ದೊಡ್ಡ ಇನಿಂಗ್ಸ್ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಕ್ಅಪ್ ಆಟಗಾರನಾಗಿ ಸೂರ್ಯಕುಮಾರ್ ಯಾದವ್ ಇದ್ದಾರೆ. ಇವರು ಸ್ಫೋಟಕ ಬ್ಯಾಟರ್ ಆಗಿರುವುದರಿಂದ ಸ್ಲಾಗ್ ಓವರ್ಗಳಲ್ಲಿ ಬೆಸ್ಟ್ ಚಾಯ್ಸ್. ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ವೇಗದ ಬೌಲಿಂಗ್ ಆಲ್ರೌಂಡರ್ಗಳಾದರೆ, ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಸ್ಪಿನ್ ಬೌಲಿಂಗ್ ಆಲ್ರೌಂಡರ್ಗಳು. ಇಬ್ಬರೂ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಪರಿಸ್ಥಿತಿಯಲ್ಲಿ ಚೆನ್ನಾಗಿ ನಿಭಾಯಿಸಬಲ್ಲರು.
ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ವೇಗದ ಬೌಲರ್ಗಳು. ಇವರಲ್ಲಿ ಎಲ್ಲರಿಗೂ ಸಿಡಿದೇಳುವ ಹವ್ಯಾಸವಿದೆ. ಎದುರಾಳಿ ತಂಡದ ಬ್ಯಾಟರ್ಗಳ ಬೆನ್ನೆಲುಬು ಮುರಿಯುವ ತಾಕತ್ತಿದೆ. ಇಶಾನ್ ಕಿಶಾನ್ ವಿಕೆಟ್ ಕೀಪಿಂಗ್ ಬ್ಯಾಟರ್. ಇವರು ಕೆ.ಎಲ್ ರಾಹುಲ್ ಬ್ಯಾಕ್ ಅಪ್. ಆರಂಭಿಕ ಬ್ಯಾಟರ್ ಆಗಿರುವ ಅವರನ್ನು ಯಾವ ರೀತಿ ತಂಡ ಬಳಸಿಕೊಳ್ಳುತ್ತದೆ ಎಂಬ ಮೇಲೆ ಅವರ ಪ್ರದರ್ಶನ ನಿಂತಿದೆ. ಭಾರತ ಉಪಖಂಡ ಸ್ಪಿನ್ ಬೌಲಿಂಗ್ಗೆ ಹೆಚ್ಚು ನೆರವಾಗುತ್ತದೆ. ಹೀಗಾಗಿ ಆಯ್ಕೆಯಾಗಿರುವ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಾಮರ್ಥ್ಯ ಈ ಸ್ಥಿತಿಗೆ ಪೂರಕವಾಗಿದೆ. ಹಿರಿಯ ಆಟಗಾರರಾದ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಭಾರತ ತಂಡದ ಪಾಲಿಗೆ ಪ್ಲಸ್ ಪಾಯಿಂಟ್. ಇವರಿಬ್ಬರು ಅನುಭವಿಗಳು ಹಾಗೂ ವಿಶ್ವ ಕಪ್ಗೆ ಪಾತ್ರರಾಗಲೇಬೇಕಾದ ಆಟಗಾರರು. ರಾಹುಲ್ ಉತ್ತಮ ಬ್ಯಾಟರ್ ಹಾಗೂ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುವುದು ಭಾರತ ತಂಡದ ಪಾಲಿಗೆ ಪೂರಕ ಅಂಶ.
ಅಶ್ವಿನ್ ಕ್ರಿಕೆಟ್ ತಂತ್ರಗಾರಿಕೆಯಲ್ಲಿ ನಿಸ್ಸೀಮರು. ಅವರು ಎದುರಾಳಿ ಬ್ಯಾಟರ್ಗಳ ಮನಸ್ಸನ್ನು ಅರ್ಥ ಮಾಡಿಕೊಂಡು ಆಡುವ ಆಟಗಾರ. ಅವರಿಂದಲೂ ತಂಡಕ್ಕೆ ಲಾಭವಿದೆ. ಎಡಗೈ ಬ್ಯಾಟರ್ಗಳು ಹಾಗೂ ಬೌಲರ್ಗಳ ಕೊರತೆಯೇ ಭಾರತಕ್ಕೆ ಸ್ವಲ್ಪ ಹಿನ್ನಡೆ. ಜಡೇಜಾ ಎಡಗೈ ಬ್ಯಾಟರ್ ಆಗಿದ್ದು ಕಾಯಂ ಸ್ಥಾನ ಪಡೆಯಲಿದ್ದಾರೆ. ಇಶಾನ್ ಎಡಗೈ ಬ್ಯಾಟರ್. ಆದರೆ ರಾಹುಲ್ ಇರುವ ಕಾರಣ ಆಡುವ ಬಳಗದಲ್ಲಿ ಅವಕಾಶ ಪಡೆಯುವ ಖಾತರಿಯಿಲ್ಲ. ಬೌಲಿಂಗ್ನಲ್ಲೂ ಜಡೇಜಾ ಏಕೈಕ ಎಡಗೈ ಬೌಲರ್. ಇದೂ ಕೂಡ ಭಾರತದ ಪಾಲಿನ ಕೊರತೆ. ಇದನ್ನು ಹೊರತುಪಡಿಸಿದರೆ ಭಾರತ ತಂಡದ ಆಟಗಾರರು ತಪ್ಪುಗಳನ್ನು ಎಸಗಿದರೆ ಅಥವಾ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದೇ ಹೋದರೆ ಮಾತ್ರ ವಿಶ್ವ ಕಪ್ ಗೆಲ್ಲುವ ಅವಕಾಶ ಸಿಗದು. ಸದ್ಯದ ಪ್ರದರ್ಶನ ಮುಂದುವರಿಸಿಕೊಂಡು ಹೋದರೆ ಭಾರತ ಕ್ರಿಕೆಟ್ನ ಜಾಗತಿಕ ಒಡೆಯನಾಗುವುದು ಖಾತರಿ. ಒಟ್ಟಾರೆ ಭಾರತದ ಪಿಚ್ ಹಾಗೂ ಇನ್ನಿತರ ಕಂಡೀಷನ್ಗಳನ್ನು ಪರಿಗಣಿಸಿದರೆ ಭಾರತವೇ ಪ್ರಶಸ್ತಿಯ ಫೇವರಿಟ್.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಭಯೋತ್ಪಾದಕರ ಹೆಡೆಮುರಿ ಕಟ್ಟಲೇಬೇಕಿದೆ
ಇದುವರೆಗೂ ಭಾರತ ಎರಡು ಏಕದಿನ ಕ್ರಿಕೆಟ್ ವಿಶ್ವಕಪ್ಗಳನ್ನು ಗೆದ್ದಿದೆ. ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಹಾಗೂ ಎಂ.ಎಸ್ ಧೋನಿ ನೇತೃತ್ವದಲ್ಲಿ 2011ರಲ್ಲಿ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಪಂದ್ಯಾವಳಿ ಏಕದಿನ ಕ್ರಿಕೆಟ್ನ ಸಂಪೂರ್ಣ ಬೆರಗನ್ನೂ ಅದ್ಭುತವನ್ನೂ ಸಾದರಪಡಿಸುತ್ತದೆ. ಅನೇಕ ಪ್ರತಿಭೆಗಳ ಆಗಮನ ನಿರ್ಗಮನಗಳು, ಹಳೆಯ ದಾಖಲೆಗಳ ಭಂಗ, ಹೊಸ ದಾಖಲೆಗಳ ಸೃಷ್ಟಿಗಳಿಗೆ ಕಾರಣವಾಗುತ್ತದೆ. 12 ವರ್ಷಗಳಿಂದ ಭಾರತ ಮತ್ತೊಂದು ಏಕದಿನ ವಿಶ್ವಕಪ್ಗಾಗಿ ಹಸಿದಿದೆ. ನಮ್ಮ ಪ್ರತಿಭೆಗಳು ಇದನ್ನು ಗೆಲ್ಲಬಲ್ಲರು; ಗೆಲ್ಲಲಿ ಎಂದು ಆಶಿಸೋಣ.
ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಪ್ರಮುಖ ಸುದ್ದಿ24 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಕಿರುತೆರೆ14 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ದೇಶ19 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕರ್ನಾಟಕ15 hours ago
Namma Metro: ಮೆಟ್ರೋ ಟ್ರ್ಯಾಕ್ನಲ್ಲಿ ಲಾಕ್ ಆದ ಮೆಂಟೈನ್ಸ್ ವೆಹಿಕಲ್! ಮೇಲೆತ್ತಲು ಕ್ರೇನ್ ಬಳಕೆ
-
ಕ್ರೈಂ20 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?
-
ಕರ್ನಾಟಕ13 hours ago
Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್ ವೆಹಿಕಲ್; ಎಂದಿನಂತೆ ಮೆಟ್ರೋ ಓಡಾಟ
-
ಉತ್ತರ ಕನ್ನಡ15 hours ago
Karwar Tunnel Route : ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗ ಕೊನೆಗೂ ಸಂಚಾರ ಮುಕ್ತ!
-
ಕರ್ನಾಟಕ11 hours ago
Lecturer Death : ಬಿಜಿಎಸ್ ಕಾಲೇಜಿನ ಉಪನ್ಯಾಸಕ ನೇಣಿಗೆ ಶರಣು; ಸಾವಿನ ಸುತ್ತ ಅನುಮಾನದ ಹುತ್ತ