ಧಾರ್ಮಿಕ
Ugadi 2023 : ಜಗದ ಆದಿ ಈ ಯುಗಾದಿ!
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಎಂಬಂತೆ ಯುಗಾದಿ (Ugadi 2023) ಮರಳಿ ಬಂದಿದೆ. ಈ ಹಬ್ಬದ ಸಂಪೂರ್ಣ ಮಾಹಿತಿ ನೀಡುವ ವಿಶೇಷ ಲೇಖನ ಇಲ್ಲಿದೆ.
ಸುಬ್ರಹ್ಮಣ್ಯ ಸೋಮಯಾಜಿ
ಶುಭಕೃತ್ ಸಂವತ್ಸರವು ಉರುಳಿ ಶೋಭನಕೃತ್ ಸಂವತ್ಸರಕ್ಕೆ ತನ್ನ ಒಡೆತನವನ್ನು ವಹಿಸಿದೆ. ಯುಗಾದಿಯು (Ugadi 2023) ಆಸೇತು ಹಿಮಾಲಯ ಆಚರಿಸುವ ನಮ್ಮ ಸಂಭ್ರಮದ ಹಬ್ಬ. ಭಾರತೀಯ ಮಹರ್ಷಿಗಳು ನಿಸರ್ಗದ ಅಧ್ಯಯನದಿಂದ ವಿಶ್ವ ವಿಕಾಸಚಕ್ರದ ಆರಂಭದ ಬಿಂದುವನ್ನು ಗುರುತಿಸಿ ತಂದುಕೊಟ್ಟ ಪರ್ವದಿನ. ಕಾಲಾತೀತನಾದ ಭಗವಂತನು ಕಾಲಚಕ್ರದಲ್ಲೂ ವ್ಯಾಪಿಸಿ ಪ್ರಕೃತಿಮಾತೆಯನ್ನು ಸಸ್ಯಶ್ಯಾಮಲೆಯನ್ನಾಗಿಸುವ ಆರಂಭದ ದಿನ.
ಎಲ್ಲೆಲ್ಲೂ ಕಣ್ಮನಗಳನ್ನು ಸೆಳೆಯುವ ಬಣ್ಣ ಬಣ್ಣದ ಹೊಸ ಚಿಗುರುಗಳು ಹೊಸವರ್ಷದ ಹರ್ಷವನ್ನು ತರುತ್ತಿವೆ. ವಿಕಾಸದ ಹಾದಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿ, ನಮ್ಮೆಡೆಗೆ ಬಂದವರಿಗೆಲ್ಲ ತಂಪನ್ನು ನೀಡಿ, ತಾವಿದ್ದ ವೃಕ್ಷದ ಶೋಭೆಯಾಗಿದ್ದು, ಹಣ್ಣಾದ ಎಲೆಗಳು ಯೋಗಿಯಂತೆ ನಿರ್ಲಿಪ್ತ ಭಾವದಿಂದ ಹೊಸ ಚಿಗುರೆಲೆಗೆ ದಾರಿ ಮಾಡಿ ಕೊಟ್ಟು ತಮ್ಮ ಜಾಗದಿಂದ ಕಳಚಿಕೊಂಡಿವೆ. ಆ ಎಡೆಯಲ್ಲಿ ಹೊಸ ತಳಿರುಗಳು ಮುಂದಿನ ವಿಕಾಸದ ಹೊಣೆಹೊತ್ತು ಕರ್ತವ್ಯಪರವಾಗಿ ನಿಂತಿವೆ. ನಿಸರ್ಗವೆಲ್ಲವೂ ಹೊಸಬಗೆಯ ಚೈತನ್ಯದಿಂದ, ಕೋಗಿಲೆಯ ಇಂಚರದಿಂದ, ಸ್ನಾತೆಯಾಗಿ ಶುಭ್ರವಸ್ತ್ರವೇಷ್ಟಿತಳಾಗಿ, ಶುಚಿಸ್ಮಿತೆಯಾಗಿ ಕಂಗೊಳಿಸುವ ಮಹೋತ್ಸವದ ಪರ್ವಕಾಲ.
ಭಾರತೀಯ ಹಬ್ಬಗಳ ಹಿನ್ನೆಲೆ ಏನು?
ಭಾರತೀಯ ಸಂಸ್ಕೃತಿಯಲ್ಲಿ ದಿನಕ್ಕೊಂದು ಹಬ್ಬದಂತೆ ಹಬ್ಬಗಳ ಸಾಲು ಸಾಲು. ಒಂದೊಂದು ಹಬ್ಬದ ಆಚರಣೆ ಒಂದೊಂದು ಬಗೆಯದು. ಅಲ್ಲಿ ಆರಾಧಿಸುವ ಒಂದೊಂದು ದೇವತೆಗೆ ಒಂದೊಂದು ಬಗೆಯ ಭಕ್ಷ್ಯಗಳು. ಇದೆಲ್ಲ ಏಕೆ? ಬೇರೆ ಸಂಸ್ಕೃತಿಗಳಲ್ಲಿ ಇರುವಂತೆ ಕೆಲವೇ ಹಬ್ಬಗಳಿದ್ದರೆ ಅದನ್ನು ಸಂಭ್ರಮದಿಂದ, ವೈಭವದಿಂದ ಆಚರಿಸಬಹುದಲ್ಲವೇ? ಇಷ್ಟಾರು ಬಗೆಯ ಆಚರಣೆಗಳ ವೈವಿಧ್ಯವಾದರೂ ಏಕೆ, ಇನ್ನು ನಾವು ವಿಧ ವಿಧ ಭಕ್ಷ್ಯಗಳನ್ನು ಮಾಡಿ ದೇವರಿಗೆ ಕೊಡಬೇಕೇ? ದೇವರಿಗೆ ನಮ್ಮಂತೆ ನಾಲಿಗೆ ಚಪಲವೇ? ನಾವು ಕೊಟ್ಟ ಭಕ್ಷ್ಯಗಳಿಂದ ತೃಪ್ತಿ ಹೊಂದುವ ದೇವರು, ಸ್ವತಃ ಪರಾವಲಂಬಿ ಆದರೆ ನಮ್ಮನ್ನು ಹೇಗೆ ತಾನೇ ಕಾಪಾಡಿಯಾನು? ಎಂಬೆಲ್ಲ ಪ್ರಶ್ನೆಗಳು ಏಳಬಹುದು.
ಆದರೆ ಭಾರತೀಯ ಮಹರ್ಷಿಗಳು ತಂದ ಹಬ್ಬಗಳು ಕೇವಲ ತಿನ್ನುವ, ಕುಡಿಯುವ ಕುಣಿದಾಡುವ, ಹರಟೆ ಹೊಡೆಯುವ ಸಮಾರಂಭಗಳು ಮಾತ್ರವಲ್ಲ. ಅವು ಪರಮಾತ್ಮನ ಕಾಲ ಶರೀರದಲ್ಲಿ ಗಿಣ್ಣಿನಂತೆ ಇರುವ ಜಾಗಗಳು. ಶಕ್ತಿಯ ಕೆಂದ್ರಸ್ಥಾನಗಳು. “ತನ್ನ ಕಾಲರೂಪವಾದ ಶರೀರದಲ್ಲಿ ಭಗವಂತನು ಗೊತ್ತಾದ ಸ್ಥಾನಗಳಲ್ಲಿ ಜೀವಿಗಳಿಗೆ ಅವುಗಳ ಉದ್ಧಾರಕ್ಕಾಗಿ ಒದಗಿಸಿಕೊಡುವ ಸೌಲಭ್ಯಗಳೇ ಪರ್ವಗಳು; ಆ ಅನುಗ್ರಹದ ಉಪಯೋಗವನ್ನು ಕಳೆದುಕೊಳ್ಳಬಾರದು ” ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.
ಕಬ್ಬಿನ ಗಿಣ್ಣುಗಳಲ್ಲಿ ಒಂದೊಂದು ಗಿಣ್ಣೂ ಸಸ್ಯದ ಹೊಸ ಬೆಳವಣಿಗೆಗೆ ಬೀಜಭೂತವಾಗಿರುತ್ತದೆ. ಅಲ್ಲಿ ಎಷ್ಟು ಗಿಣ್ಣುಗಳು ಇರಬೇಕು ಎಂದು ನಿಸರ್ಗವೇ ತೀರ್ಮಾನಿಸುತ್ತದೆ. ಅದರ ಜಾತಿ ಮತ್ತು ಬೆಳವಣಿಗೆಗೆ ತಕ್ಕಂತೆ ಆ ಪರ್ವಗಳ ಸಂಖ್ಯೆ ಪ್ರಕೃತಿಯಲ್ಲಿ ನಿಯತವಾಗಿರುತ್ತದೆ. ಅದರ ಸಂಖ್ಯೆ ಹೆಚ್ಚಾಗಿದ್ದರೆ ಅದನ್ನೆಲ್ಲಾ ನೆಟ್ಟು ಬೆಳೆಸಿ ಗಿಡದ ಸಂತಾನವನ್ನು ವೃದ್ಧಿಪಡಿಸುವುದಕ್ಕೆ ಸಹಾಯವಾಗುತ್ತದೆ. ಅದನ್ನು ನಾವು ಉಪಯೋಗಿಸಲಿ, ಬಿಡಲಿ ಅದರ ಸಂಖ್ಯೆ ಎಷ್ಟಿರಬೇಕೋ ಅಷ್ಟು ಇದ್ದೇ ಇರುತ್ತದೆ. ಹಾಗೆಯೇ ಕಾಲವೃಕ್ಷದಲ್ಲಿರುವ ಹಬ್ಬಗಳಿಗೂ ಇದೇ ನಿಯಮ ಅನ್ವಯಿಸುತ್ತದೆ.
ಒಂದು ದಿನದಲ್ಲಿ ಪ್ರಾತಃಕಾಲ, ಮಧ್ಯಾಹ್ನ ಕಾಲ, ಸಾಯಂಕಾಲ ಇವುಗಳಿರುವುದು ಸ್ಥೂಲ ದೃಷ್ಟಿಗೂ ಗೋಚರವಾಗುತ್ತದೆ. ಅದನ್ನೇನೂ ಬದಲಾಯಿಸಬೇಕು ಎಂದು ನಾವು ಬಯಸದೇ ನಮ್ಮ ಭೌತಿಕ ಪ್ರಯೋಜನಗಳಿಗೆ ಅವನ್ನು ಬಳಸಿಕೊಳ್ಳುತ್ತೇವೆ. ಹಾಗೆಯೇ ಮಹರ್ಷಿಗಳ ಸೂಕ್ಷ್ಮ ದೃಷ್ಟಿಗೆ ಗೋಚರವಾದ ಈ ಪರ್ವಕಾಲ-ಹಬ್ಬಗಳನ್ನು ಹೀಗೆಯೇ ಅರಿತು ಉಪಯೋಗಿಸಿಕೊಳ್ಳುವುದು ಜಾಣತನ. ಈ ಪರ್ವಕಾಲಗಳು ಕೇವಲ ಭೌತಿಕ ಜೀವನಕ್ಕೆ ಮಾತ್ರವೇ ಸಂಬಂಧಿಸದೇ, ದೈವಿಕ- ಆಧ್ಯಾತ್ಮಿಕ ಉನ್ನತಿಗೂ ಕಾರಣವಾಗುವುದನ್ನು ಗುರುತಿಸಿ ಲೋಕಹಿತದ ದೃಷ್ಟಿಯಿಂದ ನಮಗೆ ತಂದುಕೊಟ್ಟಿದ್ದಾರೆ. ಅವು ನಾವು ಹೇಳಿದಾಗ ಬರುವುದಿಲ್ಲ. ಅವು ಬಂದಾಗ ಅವನ್ನು ವ್ಯರ್ಥಗೊಳಿಸದೆ ಉಪಯೋಗಿಸಿಕೊಳ್ಳಬೇಕು. ಹಬ್ಬಗಳ ಸಂಖ್ಯೆಯನ್ನು ನಾವು ತೀರ್ಮಾನ ಮಾಡುವ ಅವೈಜ್ಞಾನಿಕ ಪದ್ಧತಿ ನಮ್ಮಲ್ಲಿಲ್ಲ. ಅದನ್ನು ನಿಸರ್ಗವೇ ತೀರ್ಮಾನಿಸುತ್ತದೆ. ಅದನ್ನು ತಮ್ಮ ತಪಸ್ಯೆಯಿಂದ ಗುರುತಿಸಿ ಜೀವಲೋಕಹಿತದ ದೃಷ್ಟಿಯಿಂದ ತಿಳಿಸುವ ಕೆಲಸವನ್ನು ನಮ್ಮ ಮಹರ್ಷಿಗಳು ಮಾಡಿದ್ದಾರೆ ಎಂಬುದನ್ನು ನಾವು ನೆನಪಿಡಬೇಕು.
ನೈವೇದ್ಯ-ಪ್ರಸಾದಗಳ ಋಷಿ ದೃಷ್ಟಿ
ಹಾಗೆಯೇ ಆಯಾ ದೇವತೆಗಳಿಗೆ ಪ್ರೀತಿಕರವಾದ ಭಕ್ಷ್ಯಗಳ ತಯಾರಿಯೂ ಸಹ ನಮ್ಮ ಅಥವಾ ದೇವತೆಗಳ ನಾಲಿಗೆ ಚಾಪಲ್ಯದಿಂದ ಬಂದ ಪದ್ಧತಿಯಲ್ಲ. ಅಂತಹ ಭಕ್ಷ್ಯವನ್ನು ನಿವೇದಿಸಿ ಪ್ರಸಾದ ರೂಪವಾಗಿ ಸೇವಿಸಿದಾಗ ನಮ್ಮ ದೇಹದಲ್ಲಿ ಆ ದೇವತಾ ಪ್ರಬೋಧಕ್ಕೆ, ದರ್ಶನಕ್ಕೆ ಸಂಬಂಧಿಸಿದ ಕೇಂದ್ರಗಳು ತೆರೆದುಕೊಳ್ಳುತ್ತವೆ ಎಂಬುದು ಮಹರ್ಷಿಗಳು ಕಂಡುಕೊಂಡ ಪದಾರ್ಥ ವಿಜ್ಞಾನ; ವೈಜ್ಞಾನಿಕ ಸತ್ಯ. ಅದಕ್ಕಾಗಿ ಬಂದ ಆಚರಣೆಗಳಿವು ಎಂಬುದು ಜ್ಞಾನಿಜನರ ಮಾತು. ಇಷ್ಟು ಹಿನ್ನೆಲೆಯಲ್ಲಿ ಮತ್ತು ಪರಮ ಪೂಜ್ಯ ಶ್ರೀರಂಗಪ್ರಿಯ ಸ್ವಾಮಿಗಳು ಈ ವಿಷಯವಾಗಿ ಅನುಗ್ರಹಿಸಿದ ವಿಷಯಗಳ ನೋಟದಲ್ಲಿ ಪ್ರಸ್ತುತ ಯುಗಾದಿ ಹಬ್ಬದ ಬಗ್ಗೆ ಆಲೋಚಿಸೋಣ.
ವರ್ಷಾರಂಭ ಯಾವ ದಿನ?
ಯಾವುದಾದರೂ ನಿರ್ದಿಷ್ಟ ದಿನವನ್ನು ವರ್ಷದ ಪ್ರಾರಂಭದ ದಿನವೆಂದು ಭಾವಿಸಿ ಅಂದು ಸಂತೋಷವನ್ನು ಆಚರಿಸುವ ಪದ್ಧತಿಯು ಎಲ್ಲಾ ಜನಾಂಗದಲ್ಲೂ ಇದೆ. ಆದರೆ ಪುರುಷಾರ್ಥ ಸಾಧನೆಗೆ ಪೂರ್ಣವಾಗಿ ಹೊಂದಿಕೊಳ್ಳುವ ಯುಗಾದಿ ಪರ್ವಕ್ಕೆ ತಕ್ಕ ಕಾಲವನ್ನು ಆರಿಸಿಕೊಂಡಿರುವುದು ಈ ದೇಶದ ಮಹರ್ಷಿಗಳ ವಿವೇಕಕ್ಕೆ ಸೇರಿದ್ದು. ಇದಕ್ಕೆ ಅವರು ಆರಿಸಿಕೊಂಡಿರುವ ಅಯನ, ಋತು, ಮಾಸ, ಪಕ್ಷ,ತಿಥಿ ಎಲ್ಲವೂ ಅಂದಿನ ಕರ್ಮ ಮತ್ತು ಉದ್ದೇಶಗಳಿಗೆ ಸಮರ್ಥವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ನಾವು ಗಮನಿಸಬೇಕು.
ಉತ್ತರಾಯಣ-ವಸಂತ ಋತು
ಉತ್ತರಾಯಣವು ದೇವತೆಗಳ ಹಗಲು. ದೇವತಾರಾಧನೆಗೆ ಪ್ರಶಸ್ತವಾದ ಅಯನ. ಯುಗಾದಿಯು ದೇವತಾರಾಧನೆಗೆ ನಿಯತವಾಗಿರುವ ಶುಭಪರ್ವ. ದೇವಮಾರ್ಗಕ್ಕೆ ಹಿತಕರವಾಗಿರುವ ಉತ್ತರಾಯಣವನ್ನೇ ಈ ಹಬ್ಬಕ್ಕೆ ತೆಗೆದುಕೊಂಡಿರುವುದು ಉಚಿತವಾಗಿದೆ. ವಸಂತ ಋತು, ಋತುಗಳ ರಾಜ. ಮೇಲೆ ತಿಳಿಸಿದಂತೆ ಪ್ರಕೃತಿಯು ಹೊಸ ಹೂವು, ತಳಿರುಗಳಿಂದ ತನ್ನನ್ನು ಸಿಂಗರಿಸಿಕೊಂಡು ಜಗತ್ತಿಗೆ ಹೊಸತನದ ಸಂದೇಶವನ್ನು ಸಾರುವ ಋತು. ಜೀವಲೋಕಕ್ಕೆ ಹಳೆಯ ಹೇವರಿಕೆಯ ಸಂಸ್ಕಾರಗಳನ್ನು ಕೊಡವಿ ಸತ್ಯ-ಶಿವ-ಸುಂದರವಾದ ಧರ್ಮ-ಅರ್ಥ-ಕಾಮಗಳನ್ನು ಪಡೆಯುವ ಸಾಧನೆಯ ಮಾರ್ಗದಲ್ಲಿ ಹೊಸ ಹೆಜ್ಜೆಯನ್ನಿಡಲು ಪ್ರೇರಿಸುವ ಋತುರಾಜ. ಶುಭಾಶಂಸನೆ, ಶುಭ ಪ್ರತಿಜ್ಞೆ, ಶಿವ ಸಂಕಲ್ಪಗಳನ್ನು ಮಾಡಲು ಪ್ರೇರಕವಾದ ಕಾಲ. “ತನ್ಮೇ ಮನಃ ಶಿವ ಸಂಕಲ್ಪಮಸ್ತು” ಎಂಬ ಪಲ್ಲವಿಯ ವೇದಮಂತ್ರಗಳನ್ನುಅರ್ಥಪೂರ್ಣವಾಗಿಸುವ ಕಾಲ.
ಐಹಿಕವಾಗಿ ಈ ಸಂಕಲ್ಪಗಳಾದರೆ, ಪಾರಮಾರ್ಥಿಕವಾಗಿ ಒಳಗಿನ ಪ್ರಕೃತಿಯಲ್ಲೂ ಸಹಜವಾಗಿ ಪ್ರಸನ್ನತೆ ಉಂಟಾಗಿ “ತದೇವ ರಮ್ಯಂ ಪರಮ ನಯನೋತ್ಸವ ಕಾರಣಂ” ಎಂದು ಜ್ಞಾನಿಗಳು ಸ್ವಾನುಭವದಿಂದ ಗಾನಮಾಡುವ ಪರಮಪುರುಷನ ಸೌಂದರ್ಯದ ಅನುಭವಕ್ಕೂ ಒಳಮುಖವಾದ ಆಕರ್ಷಣೆ ಉಂಟಾಗುವ ಪರ್ವಕಾಲ ಎಂಬುದು ಅನುಭವಿಗಳ ಮಾತು. ಅಲ್ಲದೇ ಈ ಋತುವಿನ ಸಮಶೀತೋಷ್ಣವಾದ ವಾತಾವರಣವೂ ದೇವತಾಪೂಜೆಗೆ ಬೇಕಾದ ಅರ್ಥ ಸಂಗ್ರಹ, ಪೂಜಾ ಕಾರ್ಯ ಎಲ್ಲಕ್ಕೂ ಹಿತಕರ.
ವಸಂತವೇ ಮುಂತಾದ ಮೂರು ಋತುಗಳು ಉಷ್ಣತಾ ಪ್ರಧಾನವಾಗಿವೆ. ಅವು ಅಗ್ನಿ ಅಥವಾ ಶಿವ ಸ್ವರೂಪದ ಪ್ರತೀಕ. ಶರತ್ತು ಮುಂತಾದ ಮೂರು ಋತುಗಳು ಶೈತ್ಯ ಪ್ರಧಾನ. ಅವು ಸೋಮ ಅಥವಾ ಶಕ್ತಿಸ್ವರೂಪದ ಪ್ರತೀಕ. ಈ ಅಗ್ನಿ ಮತ್ತು ಸೋಮ ಅಥವಾ ಶಿವ-ಶಕ್ತಿಗಳ ಯೋಗದಿಂದಲೇ ಈ ಜಗತ್ತಿನ ಸೃಷ್ಟಿ ಎಂಬುದನ್ನೇ ಬ್ರಹ್ಮಪುರಾಣವು ಸಾರುತ್ತದೆ. ಅದರಿಂದ ಈ ಶೈತ್ಯ ಉಷ್ಣತೆಗಳ ಸಂಗಮಕಾಲವನ್ನು ಸೃಷ್ಟಿಕರ್ತನು ಸೃಷ್ಟಿಯನ್ನು ಪ್ರಾರಂಭಿಸಿದ ದಿನ ಎಂದು ಭಾವಿಸಿರುವುದೂ ಸಹ ಸರ್ವಥಾ ಉಚಿತವಾಗಿದೆ. ಶಿವ-ಶಕ್ತಿಗಳು ಹೊರಮುಖವಾಗಿ ಸೇರಿದರೆ ಸೃಷ್ಟಿ. ಒಳಮುಖವಾಗಿ ಸೇರಿದರೆ ಸಮಾಧಿ. ಅಂತಹ ಸಮಾಧಿಯೋಗಕ್ಕೂ ಅದಕ್ಕನುಗುಣವಾದ ಲೋಕಯಾತ್ರೆಯ ಆಯೋಜನೆಗೂ ಸ್ಫೂರ್ತಿ ನೀಡುವ ಸಂಧಿಸಮಯ ಇದು.
ಚೈತ್ರಮಾಸ-ಶುಕ್ಲಪಕ್ಷ-ಪ್ರಥಮಾ
ಇನ್ನು ಚೈತ್ರಮಾಸದಲ್ಲೇ ಪುಷ್ಪಪಲ್ಲವಗಳು ಬಿರಿಯುವುದು ಮತ್ತು ಅದಕ್ಕಾಗಿ ಮಧುವು ಸೃಷ್ಟಿಯಾಗುವುದು. ಈ ದೃಷ್ಟಿಯಿಂದಲೂ ವರ್ಷಾರಂಭಕ್ಕೆ ತಕ್ಕುದಾದ ಮಾಸ ಚೈತ್ರಮಾಸ. ಶುಕ್ಲಪಕ್ಷವು ದೇವತಾರಾಧನೆಗೂ ಕೃಷ್ಣ ಪಕ್ಷವು ಪಿತೃಗಳ ಆರಾಧನೆಗೂ ಶ್ರೇಷ್ಠವಾಗಿವೆ. ದೇವತಾರಾಧನೆಯೇ ಪ್ರಧಾನವಾಗಿರುವ ಯುಗಾದಿ ಪರ್ವದ ಆಚರಣೆಗೆ ತಕ್ಕ ಪಕ್ಷವೇ ಶುಕ್ಲಪಕ್ಷ. ಓಷಧಿ-ವನಸ್ಪತಿಗಳ ಅಭಿವೃದ್ಧಿಗೆ, ಅವುಗಳ ರಾಜನಾದ ಸೋಮನ ಅಭ್ಯುದಯಕ್ಕೆ ಕಾರಣವಾದ ಪಕ್ಷವೇ ಶುಕ್ಲಪಕ್ಷ. ಎಂದೇ ಶುಕ್ಲಪಕ್ಷವನ್ನು ಆರಿಸಿರುವುದು ಅತ್ಯಂತ ಉಚಿತವಾಗಿದೆ. ಇನ್ನು ಪ್ರಥಮಾ ತಿಥಿಯು, ಚಂದ್ರನ ಪ್ರಥಮ ಕಲೆಯು ಕಾಣಿಸಿಕೊಳ್ಳುವ ದಿನ. ಅದರಿಂದ ವರ್ಷದ ಪ್ರಥಮ ದಿನವನ್ನಾಗಿ ಅದನ್ನು ಪರಿಗಣಿಸಿರುವುದು ಯುಕ್ತವಾಗಿದೆ. ಇವಿಷ್ಟೂ ಚಾಂದ್ರಮಾನ ಯುಗಾದಿಯನ್ನು ಆಚರಿಸುವ ಕಾಲದ ಮಹತ್ವವಾಯಿತು.
ಸೌರಮಾನ ಯುಗಾದಿ
ಇನ್ನು ಸೌರಮಾನ ಯುಗಾದಿಯ ಕಾಲದ ವಿಷಯ. ಅದಕ್ಕೆ ನಿಯತವಾಗಿರುವ ಕಾಲ ಮೇಷಮಾಸದ ಸಂಕ್ರಮಣ. ಅಯನ, ಮಾಸಗಳು ಚಾಂದ್ರಮಾನ ಯುಗಾದಿಯ ಅಯನ ಮಾಸಗಳೇ. ಇದಲ್ಲದೇ ದಿನದ ವಿಶೇಷವನ್ನು ಗಮನಿಸಿದರೆ ಅದು ಸಂಕ್ರಮಣದ ದಿನ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು ಸಂಕ್ರಮಣ ಎನ್ನುತ್ತಾರೆ. ವರ್ಷದಲ್ಲಿ 12 ಸಂಕ್ರಮಣಗಳು. ಇವೆಲ್ಲವೂ ಪರ್ವ ಕಾಲಗಳೇ. ಮೇಲೆ ತಿಳಿಸಿದಂತೆ ಕಾಲವೃಕ್ಷದಲ್ಲಿರುವ ಗಿಣ್ಣಿನ ಜಾಗಗಳೇ.
ಇವುಗಳಲ್ಲಿ ಮೇಷಸಂಕ್ರಮಣವು “ಮಹಾವಿಷುವ” ಎಂದು ಕರೆಯಲ್ಪಡುವ ವಿಶೇಷ ಪರ್ವಕಾಲ. ಈ ವಿಷುವ ಕಾಲದಲ್ಲಿ ಹೊರಗಿನ ಸೂರ್ಯನು ರಾಶಿಯಲ್ಲಿ ಹೆಜ್ಜೆ ಹಾಕುವಂತೆಯೇ ಸಮಕಾಲದಲ್ಲಿ ಒಳಗಿನ ಜೀವ ಸೂರ್ಯನೂ ಸುಷುಮ್ನೆಯ ಗ್ರಂಥಿಯೊಳಗೆ ಸಂಗಮ ಹೊಂದುತ್ತಾನೆ; ಸಹಜವಾಗಿ ಸಮಾಧಿ ಸ್ಥಿತಿಯಲ್ಲಿ ಅವಗಾಹನೆ ಮಾಡ ತೊಡಗುತ್ತಾನೆ ಎಂಬುದು ಯೋಗಿಗಳ ಅನುಭವವೇದ್ಯವಾದ ವಿಷಯ. ಅದರಿಂದಲೇ ಈ ಸಂಗಮ ಕಾಲವು ಧ್ಯಾನಕ್ಕೆ, ಪೂಜೆ ದಾನಗಳಿಗೆ ಮತ್ತು ತರ್ಪಣಗಳಿಗೆ ಅತ್ಯಂತ ಶ್ರೇಷ್ಠವಾಗಿದೆ.
ಈ “ಸಂಗಮ” “ಸಾಮ್ಯ”ಗಳೆಲ್ಲ ಕೇವಲ ಆಕಸ್ಮಿಕ ಘಟನೆಗಳಲ್ಲ. ಪ್ರಕೃತಿನಿಯಮದಂತೆ ಸಹಜವಾಗಿ ಐಕ್ಯ ಹೊಂದುವ ಒಳ-ಹೊರ ಸಂಗಮ, ಸಾಮ್ಯಗಳು ಅವು. ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಈ ಪರ್ವ ಕಾಲಗಳ ಮಹಾ ಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ಹೀಗೆ ಯುಗಾದಿ ಪರ್ವಕ್ಕೆ ಮಹರ್ಷಿಗಳು ನಿಗದಿಸಿರುವ ಕಾಲವಿಶೇಷವು ಆಧಿ ಭೌತಿಕ-ಹೊರಗಿನ ಕ್ಷೇತ್ರಕ್ಕೆಸಂಬಂಧಿಸಿದುದು, ಆಧಿ ದೈವಿಕ-ಒಳಗೆ ನಿಯಾಮಕರಾಗಿರುವ ದೇವತೆಗಳಿಗೆ ಸೇರಿದ್ದು, ಮತ್ತು ಆಧ್ಯಾತ್ಮಿಕ-ಎಲ್ಲಕ್ಕೂ ಅಂತರ್ಯಾಮಿಯಾದ ಆತ್ಮಕ್ಕೆ ಸೇರಿದ್ದು–ಈ ಮೂರೂ ಕ್ಷೇತ್ರಗಳ ಅಭಿವೃದ್ಧಿಗೆ ಕಾರಣವಾಗಿದೆ. ದೇವತಾನುಗ್ರಹದಿಂದ ಮತ್ತು ಪುರುಷ ಪ್ರಯತ್ನದಿಂದ ಈ ಮೂರೂ ಕ್ಷೇತ್ರಗಳಲ್ಲಿ ದೊರೆಯಬಹುದಾದ ಎಲ್ಲಾ ಪುರುಷಾರ್ಥ ಸಾಧನೆಗೂ ಹೊಂದಿಕೆಯಾಗಿ ಮಹರ್ಷಿಗಳ ಅದ್ಭುತವಾದ ಕಾಲವಿಜ್ಞಾನದ ಕೈಗನ್ನಡಿಯಾಗಿದೆ.
ಆಚರಣೆ, ದ್ರವ್ಯ-ಕರ್ಮಗಳ ಔಚಿತ್ಯ
ಈ ದಿನದಲ್ಲಿ ಬಳಸುವ ದ್ರವ್ಯಗಳು ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕೂ ಪುರುಷಾರ್ಥಗಳನ್ನು ಪಡೆಯುವ ಸಾಧನಗಳಾಗಿರುವಂತೆ ಜ್ಞಾನಿಗಳು ಅಳವಡಿಸಿದ್ದಾರೆ.
ಅಭ್ಯಂಗ ಸ್ನಾನ
ಅಂದು ಅಭ್ಯಂಗ ಸ್ನಾನ ಮಾಡಬೇಕು. ಅಭ್ಯಂಗ ಸ್ನಾನದಿಂದ ಮುಪ್ಪು, ಆಯಾಸ ಮತ್ತು ವಾತದ ದೋಷಗಳ ನಿವಾರಣೆ, ದೃಷ್ಟಿ ಪಾಟವ, ಪ್ರಸನ್ನತೆ, ಪುಷ್ಟಿ, ಆಯುರ್ವೃದ್ಧಿ, ನಿದ್ರಾ ಸೌಖ್ಯ, ಚರ್ಮದ ಆರೋಗ್ಯ, ಸೌಂದರ್ಯ ವೃದ್ಧಿ ಇತ್ಯಾದಿ ಭೌತಿಕ ಪ್ರಯೋಜನಗಳಂತೂ ಇದ್ದೇ ಇವೆ ಎಂದು ಆಯುರ್ವೇದವು ಸಾರುತ್ತದೆ. ಯುಗಾದಿಯಾದರೋ ಪರ್ವ ಕಾಲ. ಶೀಘ್ರಫಲ ಕೊಡುವ ಶಕ್ತಿಯಿಂದ ಕೂಡಿದ ಕಾಲ.
ಇಂದಿನ ಅಭ್ಯಂಗ ಸ್ನಾನದಿಂದ ಮನೋಬಲವೂ ವೃದ್ಧಿಯಾಗಿ ಫಲವು ವೀರ್ಯವತ್ತರವಾಗುತ್ತದೆ. ಈ ಭೌತಿಕ ಪ್ರಯೋಜನಗಳ ಜೊತೆಗೇ ಒಳಗೆ ಧಾತುಸಾಮ್ಯವೂ ಉಂಟಾದರೆ ದೇವತಾರಾಧನೆಗೆ ಅತ್ಯಂತ ಸಹಕಾರಿಯಾದ ಸ್ಥಿತಿ ನಮಗೆ ಬರುತ್ತದೆ. “ಧಾತುಪ್ರಸಾದಾನ್ಮಹಿಮಾನಮೀಶಂ” ಎಂದು ಉಪನಿಷತ್ತು ಸಾರುವಂತೆ ಧಾತುಗಳ ಪ್ರಸನ್ನತೆ ಇರುವವನು ಒಳಗಿನ ಪ್ರಕಾಶವನ್ನು ಅನುಭವಿಸಲು ಸಮರ್ಥನಾಗುತ್ತಾನೆ.
ಗೃಹಾಲಂಕಾರ
ಅಂದು ತಳಿರು ತೋರಣಗಳಿಂದ ಮನೆಯನ್ನೂ, ಮನೆಯನ್ನೂ ಮನಸ್ಸು ದಿವ್ಯ ಭಾವಕ್ಕೆ ಏರುವಂತೆ ಅಲಂಕರಿಸಬೇಕೆಂದು ಶ್ರೀರಂಗ ಮಹಾಗುರುಗಳ ಅಭಿಪ್ರಾಯವಾಗಿತ್ತು. ಭಗವಂತನ ಚಿಹ್ನೆಗಳಿಂದ ಕೂಡಿದ ಧ್ವಜವನ್ನು ಹಾರಿಸಬೇಕು.”ಆ ಪತಾಕೆಯು ತನ್ನ ಸಂದೇಶಾಮೃತದ ಭಾವದಿಂದ ಭಗವಂತನ ಪರಮೋನ್ನತವಾದ ಪಾದಾರವಿಂದವನ್ನೇ ಮುಟ್ಟಬೇಕು ” ಎಂಬ ಅವರ ಮಾತು ಇಲ್ಲಿ ಸ್ಮರಣೀಯ.
ಸಂಕಲ್ಪ
ವರ್ಷಪ್ರತಿಪತ್ತಿನ ವ್ರತವನ್ನು ನಾನು ಆಚರಿಸುತ್ತೇನೆ ಎಂಬ ಸಂಕಲ್ಪ. “ಹರಿಃ ಓಂ ತತ್ಸತ್” ಎಂದು ದೇಶ-ಕಾಲಾತೀತನಾದ ಪರಮಾತ್ಮನನ್ನು ಸ್ಮರಿಸಿ ನಂತರ ಕಾಲದೇಶಗಳನ್ನೂ, ಕರ್ಮ, ಅದರ ಉದ್ದೇಶಗಳನ್ನೂ ಸ್ಮರಿಸುತ್ತೇವೆ. ಇದರಿಂದ ಭಗವಂತನು ದೇಶಕಾಲಾತೀತನಾಗಿದ್ದರೂ ದೇಶ ಕಾಲಗಳು ಅವನ ಶರೀರವೇ ಆಗಿವೆ ಎಂಬ ತತ್ತ್ವವು ಸ್ಮರಣೆಗೆ ಬರುತ್ತದೆ. ತಾನು ಆಚರಿಸುವ ಕರ್ಮದ ಗೊತ್ತು-ಗುರಿಗಳೂ ಮನಸ್ಸಿನಲ್ಲಿ ಬೇರೂರುತ್ತವೆ. ಇವೆಲ್ಲವುಗಳ ಅರಿವಿನಿಂದ ಮಾಡಿದ ಕರ್ಮವೇ ವೀರ್ಯವತ್ತರವಾಗುವುದು.
“ಯದೇವ ವಿದ್ಯಯಾ ಕರೋತಿ, ತದೇವ ವೀರ್ಯವತ್ತರಂ ಭವತಿ” ಎಂಬಂತೆ. ಯಾವ ಕಾಮನೆಗಳನ್ನೂ ಇಟ್ಟುಕೊಳ್ಳದೇ ಎಲ್ಲವೂ ಭಗವಂತನ ಪ್ರೀತಿಗಾಗಿ ಎಂಬ ಸಂಕಲ್ಪದಿಂದ ವ್ರತವನ್ನು ಆಚರಿಸುವುದು ಉತ್ತಮ ಕಲ್ಪ. ಆದರೂ ಭಗವಂತನ ಪ್ರೀತಿಗೆ ವಿರೋಧವಲ್ಲದ ಒಳ್ಳೆಯ ಕಾಮನೆಯಿಂದ ಕೂಡಿದ ಸಂಕಲ್ಪದಿಂದ ಆಚರಿಸಿದರೂ ಒಳ್ಳೆಯದೇ. ಧರ್ಮಕ್ಕೆ ವಿರೋಧವಲ್ಲದ ಕಾಮವು ಪವಿತ್ರವಾದುದು. ಗೀತೆಯಲ್ಲಿ ಭಗವಂತನು ಅಪ್ಪಣೆ ಕೊಡಿಸಿದಂತೆ-“ಧರ್ಮಾವಿರುದ್ಧೋ ಭೂತೇಷು ಕಾಮೋsಸ್ಮಿ ಭರತರ್ಷಭ” – ಧರ್ಮಕ್ಕೆ ಅವಿರೋಧವಾದ ಕಾಮವೇ ನಾನು ಎಂದಿದ್ದಾನೆ.
ದೇವತಾ ಪೂಜೆ
ಇಷ್ಟದೇವತಾಪೂಜೆಯ ಜೊತೆಗೇ ಇಂದು ಬ್ರಹ್ಮದೇವರ ಮತ್ತು ಅವರ ಶರೀರದಂತಿರುವ ಕಾಲಪುರುಷನ ಆರಾಧನೆಯನ್ನು ವಿಧಿಸಿದ್ದಾರೆ. “ಸತ್ಯಯುಗದ ಸೃಷ್ಟಿಯು ಪ್ರಾರಂಭವಾದ ದಿವಸವಿದು” ಎಂಬ ಮಾತಿನ ತಾತ್ತ್ವಿಕ ಅರ್ಥದಲ್ಲಿಯೂ ಸೃಷ್ಟಿಕರ್ತನನ್ನು ಪೂಜಿಸುವುದು ಉಚಿತವಾಗಿಯೇ ಇದೆ. “ಓ ಭಗವಂತ! ನಿನ್ನ ದೇಹವಾಗಿರುವ ಈ ಕಾಲದಲ್ಲಿರುವ ಪರ್ವಸ್ಥಾನಗಳನ್ನು ಅರಿತು ಅವುಗಳನ್ನು ಧರ್ಮಾರ್ಥಕಾಮಗಳನ್ನು ಸಾಧಿಸುವುದಕ್ಕೂ ಮತ್ತು ಕಾಲವನ್ನೇ ದಾಟಿಬಿಡುವ ಮಹೋದ್ಯಮಕ್ಕೂ ಉಪಯೋಗಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸು” ಎಂದು ಅವನಲ್ಲಿ ಪ್ರಾರ್ಥಿಸುತ್ತೇವೆ.
ಹೋಮ
ಹೃದಯದಲ್ಲಿ ಚೆನ್ನಾಗಿ ಭಗವಂತನನ್ನು ಆರಾಧಿಸಿದಮೇಲೆ ಹೊರಗೂ ಪ್ರತಿಮೆ, ತೀರ್ಥ, ಅಗ್ನಿ ಇವುಗಳಲ್ಲಿಯೂ ಅವನನ್ನು ಆವಾಹನೆ ಮಾಡಿ ಪೂಜೆ ಮಾಡುವುದೂ ಆ ಅಂತರಂಗ ಪೂಜೆಯ ವಿಸ್ತಾರವೇ ಆಗಿದೆ. ಅಗ್ನಿಯ ತೇಜೋರೂಪವಾದ ದೇಹ, ಪ್ರಕಾಶಸ್ವರೂಪ, ಎಲ್ಲವೂ ಭಗವಂತನ ಪ್ರತೀಕ, ಪ್ರತಿಮೆ, ಪ್ರತಿನಿಧಿ ಎಲ್ಲವೂ ಆಗಿದೆ. ಈ ಮನೋಧರ್ಮದಿಂದ ಅಂದು ಅಗ್ನಿಯಲ್ಲಿ ಹೋಮಮಾಡಬೇಕು. ಯುಗಾದಿಯಂದು ದೇವರ ಪೂಜೆಯ ಮಾಧ್ಯಮವಾದ ಅಗ್ನಿಯನ್ನು “ಯವಿಷ್ಠ”-ಅತ್ಯಂತ ಕಿರಿಯವನು ಎಂದು ಹೆಸರಿಸಿದ್ದಾರೆ.
ಸೃಷ್ಟಿಯ ಆರಂಭದಲ್ಲಿ ಶಕ್ತಿಯು ಅತ್ಯಂತ ಸೂಕ್ಷ್ಮವೆಂದು ಉಪಾಸಿಸಲ್ಪಡುತ್ತದೆ. ಅದರ ಪ್ರತಿನಿಧಿಯಾದ ಅಗ್ನಿಯನ್ನು ಯುಗಾರಂಭದ ದಿನ ಹಾಗೆ ಪೂಜಿಸುವುದು ಉಚಿತವೇ ಆಗಿದೆ. ಅಣುವಿಗಿಂತಲೂ ಅಣುವಾಗಿ ಮಹತ್ತಿಗಿಂತಲೂ ಮಹತ್ತಾಗಿ ಇರುವವನು ಭಗವಂತ ಎಂಬ ಶ್ರುತಿ ವಾಕ್ಯವನ್ನು ಇಲ್ಲಿ ಸ್ಮರಿಸಬಹುದು.
ಪಂಚಾಂಗ ಶ್ರವಣ
ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವು ಕಾಲಕೋಶದ ಪಂಚಾಂಗಗಳು.ಇವುಗಳ ಜ್ಞಾನದೊಡನೆಯೇ ಕರ್ಮಗಳನ್ನು ಮಾಡಬೇಕು. ಯುಗಾದಿಯಂದು ಕಾಲಪುರುಷನ ಆರಾಧನೆಯೇ ಮುಖ್ಯವಾಗಿರುವಾಗ ಅವುಗಳ ಶ್ರವಣ ಮಾಡಿ ಅದರಿಂದ ವರ್ಷದ ಆದಿಮಂಗಲವನ್ನು ಆಚರಿಸುವುದು ಸಹಜವಾಗಿದೆ. ಇಡೀ ಸಂವತ್ಸರದ ಕಾಲದ ಯೋಗವನ್ನು ಕೇಳಿ ತಿಳಿದು ಅದಕ್ಕೆ ತಕ್ಕಂತೆ ವರ್ಷದ ಐಹಿಕ-ಪಾರಮಾರ್ಥಿಕ ಕಾರ್ಯಗಳ ಯೋಜನೆಯನ್ನು ರೂಪಿಸಿಕೊಳ್ಳುವುದಕ್ಕೂ ಇದು ಸಹಕಾರಿ. ಎಂದೇ ಪಂಚಾಗ ಶ್ರವಣ ಈ ಪರ್ವದಿನದ ಒಂದು ಮುಖ್ಯ ಕಲಾಪವಾಗಿದೆ.
ದಾನ
ಎಲ್ಲಾ ಪರ್ವಕಾಲಗಳಲ್ಲೂ ಸತ್ಪಾತ್ರರಿಗೆ ದಾನಮಾಡುವುದು ಶ್ರೇಷ್ಠ ಕರ್ಮವೇ. ಈ ಯುಗಾದಿ ಪರ್ವದಲ್ಲಿ ಅನ್ನದಾನವೇ ಮುಂತಾದ ದಾನಗಳ ಜೊತೆ ಪಂಚಾಂಗ, ಜಲಪಾತ್ರೆ, ವಸ್ತ್ರಭೂಷಣಗಳನ್ನೂ ದಾನ ಮಾಡುವುದನ್ನು ವಿಧಿಸಿದೆ. ಬೇಸಿಗೆ ಕಾಲದ ಆರಂಭವಾಗಿರುವುದರಿಂದ ನೀರಿನ ಪಾತ್ರೆಗಳನ್ನು ದಾನ ಮಾಡುವುದು, ಮತ್ತು ಆ ದಿನದಿಂದ ಆರಂಭಿಸಿ ಬೇಸಿಗೆ ಮುಗಿಯುವವರೆಗೂ ಅರವಟ್ಟಿಗೆಗಳಲ್ಲಿ ಸಿಹಿ ನೀರು,ಮಜ್ಜಿಗೆ,ಪಾನಕಗಳನ್ನು ದಾನಮಾಡುವುದು ಕಾಲೋಚಿತವಾಗಿದೆ. ದಾನ ಮಾಡುವಾಗ-” ವಿಷ್ಣುರ್ದಾತಾ ವಿಷ್ಣುರ್ದ್ರವ್ಯಂ ಪ್ರತಿಗೃಹ್ಣಾಮಿ ವೈ ವದೇತ್ʼʼ-ದಾನ ಮಾಡುವವನು ವಿಷ್ಣು, ದ್ರವ್ಯವೂ ಆ ಭಗವಂತನೇ, ಆ ಭಾವದಿಂದ ಅದನ್ನು ಸ್ವೀಕರಿಸುತ್ತೇನೆ ಎಂಬಂತೆ ಕೊಡುವವನು, ತೆಗೆದುಕೊಳ್ಳುವವನು ಇಬ್ಬರೂ ಈ ಭಾವ ಸಮೃದ್ಧಿಯಿಂದ ಮಾಡಿದಾಗ ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ಪುಣ್ಯ-ಪುರುಷಾರ್ಥ ಎರಡೂ ಲಭಿಸುತ್ತದೆ ಎಂಬುದು ಅನುಭವಿಗಳ ಮಾತು.
ನೈವೇದ್ಯ-ಪ್ರಸಾದ
ಯುಗಾದಿಯ ದಿನದ ವಿಶೇಷ ನೈವೇದ್ಯ ಹೂವಿನೊಡನೆ ಕುಡಿದ ಚಿಗುರುಬೇವು-ಬೆಲ್ಲ.
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಲ ಭಕ್ಷಣಮ್ ||
ವಜ್ರ ದೇಹಿಯಾಗಿ, ಶತಾಯುಶಿಯಾಗಿ, ಐಹಿಕ-ಪಾರಮಾರ್ಥಿಕ ಸಂಪತ್ತಿನಿಂದ ಕೂಡಿರಲು ಮತ್ತು ಎಲ್ಲಾ ಅರಿಷ್ಟಗಳ ನಿವಾರಣೆಗಾಗಿ ಈ ಬೇವು -ಬೆಲ್ಲವನ್ನು ಸೇವಿಸುತ್ತೇನೆ ಎಂಬ ಶ್ಲೋಕವು ಪ್ರಸಿದ್ಧವಾಗಿದೆ. ಬೇವು ಅಸ್ಥಿಗತವಾದ ರೋಗವನ್ನೂ ವಿಷದ ಸೋಂಕನ್ನೂ ನಿವಾರಿಸುವ ಮಹೌಷಧಿ. ಬೆಲ್ಲ ಸೇರಿಸಿದಾಗ ಬೇವಿನಲ್ಲಿನ ವಾತ ದೋಷವು ಶಮನವಾಗುತ್ತದೆ. ದೇಹಕ್ಕೆ ಸಂಬಂಧಿಸಿದಂತೆ ಬೇವು-ಬೆಲ್ಲಗಳ ಯೋಗ ಆರೋಗ್ಯವರ್ಧಕವಾಗಿರುವಂತೆ ಜೀವನದ ಸಿಹಿ-ಕಹಿಗಳನ್ನು ಸಮನಾಗಿ ಭಾವಿಸಿ ಜೀವನವನ್ನು ಸಮಾಹಿತಚಿತ್ತದಿಂದ ನಡೆಸುವ ಧೀರಯೋಗಿಯ ಆದರ್ಶವನ್ನೂ ನೆನಪಿಗೆ ತರುವುದಾಗಿದೆ.
ಯೋಗಿಗೆ ಮಾತ್ರವಲ್ಲದೇ ಗಂಭೀರವಾಗಿ ನೆಮ್ಮದಿಯ ಜೀವನ ನಡೆಸುವ ಸಾಮಾನ್ಯರಿಗೂ ಈ ಪಾಠವು ಅವಶ್ಯಕ. ಆ ದಿನದಿಂದ ಆರಂಭಿಸಿ ಇಡೀ ಸಂವತ್ಸರದಲ್ಲೂ ಕಡೆಗೆ ಇಡೀ ಜೀವನದಲ್ಲೂ ಅಂತಹ ಸಮಸ್ಥಿತಿಯನ್ನು ತಂದುಕೊಳ್ಳುವ ಸ್ಪೂರ್ತಿ ಈ ಪ್ರಸಾದ ಸೇವನೆಯಲ್ಲಿದೆ. ಅಲ್ಲದೇ ಯುಗಾದಿಯ ದೇವತೆಯಾದ ಪ್ರಜಾಪತಿ ಕಾಲಪುರುಷನಿಗೆ ಪ್ರಿಯವಾದ ನೈವೇದ್ಯವಾಗಿದೆ. ಕಾಲಪುರುಷನ ಸುಪ್ರಸನ್ನತೆ-ಸಾಕ್ಷಾತ್ಕಾರಗಳಿಗೆ ಅನುಗುಣವಾದ ಕೇಂದ್ರಗಳು ಒಳಗಿನ ಪ್ರಕೃತಿಯಲ್ಲಿ ವಿಕಾಸಗೊಳ್ಳಲು ಈ ಬೇವು-ಬೆಲ್ಲದ ಸೇವನೆ ಸಹಕಾರಿಯಾಗಿದೆ ಎಂಬ ಋಷಿವಿಜ್ಞಾನವನ್ನು ಮನಗಾಣಬೇಕು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಉಪಸಂಹಾರ
ಹೀಗೆ ಭಾರತೀಯರ ಬೇರೆ ಹಬ್ಬಗಳಂತೆಯೇ ಯುಗಾದಿ ಪರ್ವವು ಕಾಲದ ದೃಷ್ಟಿಯಿಂದ ವಿಶೇಷ ಪರಿಣಾಮಕಾರಿಯಾಗಿದ್ದು ಜೀವಲೋಕದ ಇಹ-ಪರಗಳ ಬಾಳಾಟಕ್ಕೆ ಸಹಕಾರಿಯಾಗಿದೆ. ಆ ಪರ್ವವಿಶೇಷದಲ್ಲಿ ಉಪಯೋಗಿಸುವ ದ್ರವ್ಯಗಳು, ಮಾಡುವ ದೇವತಾರಾಧನೆಗಳು, ಕರ್ಮ-ಕಲಾಪಗಳು ಎಲ್ಲವೂ ನಮ್ಮ ಒಳ-ಹೊರ ಜೀವನದ ಏಳಿಗೆಗೆ, ಪುರುಷಾರ್ಥ ಪ್ರಾಪ್ತಿಗೆ ಅತ್ಯಂತ ಸಹಾಯಕವಾಗುವಂತೆ ನಮ್ಮ ಮಹರ್ಷಿಗಳು ಯೋಜಿಸಿ ತಂದುಕೊಟ್ಟಿದ್ದಾರೆ. ಯಾವುದೋ ಒಂದು ದಿನವನ್ನು ಸುಮ್ಮನೇ ವರ್ಷಾರಂಭ ಎಂದು ಆಚರಿಸದೇ ಸೃಷ್ಟಿಯ ಆರಂಭದ ನಿಸರ್ಗದ ಹೆಜ್ಜೆಯನ್ನು ಅನುಸರಿಸಿ ಜೀವಲೋಕದ ಮೇಲೆ ಆ ಕಾಲವು ಮಾಡುವ ಪರಿಣಾಮದ ಆಧಾರದ ಮೇಲೆ ತಂದ ಪರ್ವದಿನವಾಗಿದೆ.
ಈ ಸಂಸ್ಕೃತಿಯಲ್ಲಿ ಬಂದ ಯಾವ ಆಚರಣೆಯೂ ಅರ್ಥಹೀನವಾಗಿ ಶುಷ್ಕವಾಗಿ ಬಂದುದಲ್ಲ. ಸ್ಥೂಲ ಜೀವನದ ಹಿಂಬದಿಯ ದೇವತಾ ಶಕ್ತಿಗಳ ಸೂಕ್ಷ್ಮಜೀವನ, ಅದರ ಹಿಂಬದಿಯಲ್ಲಿ ಅಂತರ್ಯಾಮಿಯಾಗಿ ಚೈತನ್ಯಮಯವಾಗಿ ಬೆಳಗುತ್ತಿರುವ ಪರಮಾತ್ಮನ ವರೆಗೂ ದೃಷ್ಟಿಯನ್ನು ಹರಿಸಿ ಸರ್ವಾಂಗ ಸುಂದರವಾದ ಜೀವನವನ್ನು ಸವಿಯಲು ಅನುಗುಣವಾಗಿ ಅವರು ಇಲ್ಲಿನ ಜೀವನವಿಧಾನಗಳನ್ನು, ಹಬ್ಬ ಹರಿದಿನಗಳನ್ನು ಗುರುತಿಸಿ ರೂಪಿಸಿದರು. ಅಂತಹ ಮಹರ್ಷಿಮನೋರಮವಾದ ಹಿನ್ನೆಲೆಯಿಂದ ಈ ಪರ್ವಕಾಲವನ್ನು ಆಚರಿಸಿ ಸಂಭ್ರಮಿಸೋಣ.
ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ
ಇದನ್ನೂ ಓದಿ : Ugadi Makeup Trend: ಸ್ತ್ರೀಯರ ಯುಗಾದಿ ಸಂಭ್ರಮಕ್ಕೆ ಸ್ಪೆಷಲ್ ಫೆಸ್ಟಿವ್ ಮೇಕಪ್ ಮಂತ್ರ
ಧಾರ್ಮಿಕ
Navavidha Bhakti : ಶ್ರೀರಾಮ- ಶ್ರೀಕೃಷ್ಣರಿಗೆ ಇವರೆಲ್ಲರೂ ನೆಚ್ಚಿನ ಸಖರು!
ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ಹದಿಮೂರನೇಯ ಲೇಖನ ಇಲ್ಲಿದೆ. ರಾಮ-ಕೃಷ್ಣರ ನೆಚ್ಚಿನ ಸಖರನ್ನು ಇಲ್ಲಿ ಪರಿಚಯಿಸಲಾಗಿದೆ.
ಡಾ. ಸಿ. ಆರ್. ರಾಮಸ್ವಾಮಿ
ಭಕ್ತಿಯಲ್ಲಿ ಮತ್ತೊಂದು ಪ್ರಸಿದ್ಧವಾದ ಪ್ರಕಾರ ‘ಸಖ್ಯಭಕ್ತಿ’ (Sakhya Bhakti). ಈ ಕುರಿತು ಕಳೆದ ವಾರ ಇಲ್ಲಿ ಓದಿದ್ದೇವೆ. ರಾಗ-ಸ್ನೇಹಭಾವದಿಂದ ಕೂಡಿ ಭಗವಂತನನ್ನು ಆರಾಧಿಸುವುದೇ ‘ಸಖ್ಯ-ಭಕ್ತಿ’ . ಈ ರೀತಿಯ ಭಕ್ತಿಗೆ ಹೆಸರಾದವರ ಪರಿಚಯವನ್ನು ಈ ವಾರ ಮಾಡಿಕೊಳ್ಳೋಣ.
ಕುಚೇಲ(ಸುದಾಮ)-ಕೃಷ್ಣ
ಸುದಾಮನು ಶ್ರೀಕೃಷ್ಣನ ಸಹಪಾಠೀ-ಜೊತೆಗಾರ. ಒಮ್ಮೆ ಗುರುಕುಲದಲ್ಲಿದ್ದಾಗ ಇವರಿಬ್ಬರೂ ಸೌದೆಗಾಗಿ ಅರಣ್ಯಕ್ಕೆ ಹೊರಟಿದ್ದರು. ಗುರುಮಾತೆ ಅವಲಕ್ಕಿಯನ್ನು ಕಟ್ಟಿಕೊಟ್ಟಳು. ಜೋರುಮಳೆಯ ಕಾರಣದಿಂದ ರಾತ್ರಿಯೆಲ್ಲಾ ಮರದ ಮೇಲೆ ವಾಸ. ಹಸಿವು ತಡೆಯಲಾಗದೇ ಕೃಷ್ಣನ ಪಾಲಿನ ಅವಲಕ್ಕಿಯನ್ನೂ ಸುದಾಮನೇ ಮುಗಿಸಿ, ನಂತರ ಕೃಷ್ಣನಬಳಿ ಕ್ಷಮಾಪಣೆ ಕೇಳಿಕೊಳ್ಳುತ್ತಾನೆ. ಆಗ ಕೃಷ್ಣನು ವಿನೋದವಾಗಿ “ನನಗೆ ಸೇರಬೇಕಾದ ಪದಾರ್ಥವನ್ನು ನಾನು ಬಿಡುವುದಿಲ್ಲ, ಸಮಯ ಬಂದಾಗ ತೆಗೆದುಕೊಳ್ಳುತ್ತೇನೆ” ಎನ್ನುತ್ತಾನೆ.
ಮುಂದೆ ಸುದಾಮನು ಗೃಹಸ್ಥಾಶ್ರಮದಲ್ಲಿ ದಟ್ಟದರಿದ್ರನಾಗಿರುತ್ತಾನೆ. ಒಮ್ಮೆ ಪತಿವ್ರತಾಶಿರೋಮಣಿಯಾದ ಪತ್ನಿಯ ಸಲಹೆಯಂತೆ ಗೆಳೆಯ ದ್ವಾರಕಾಧೀಶ ಮೋಕ್ಷಪ್ರದ ಮುಕುಂದನಲ್ಲಿ ಲೌಕಿಕಸಂಪತ್ತನ್ನು ಬೇಡುವುದು ಇಷ್ಟವಿಲ್ಲದಿದ್ದರೂ ಕಡುಬಡತನ ಬೇಡುವಂತೆ ಪ್ರೇರೇಪಿಸುತ್ತದೆ. ಪ್ರಿಯ ಸ್ನೇಹಿತನೂ ರಾಜನೂ ಆದ ಕೃಷ್ಣನ ಬಳಿ ರಿಕ್ತಹಸ್ತನಾಗಿ ಹೋಗುವ ಮನಸ್ಸಿಲ್ಲದೇ ಮೂರು ಹಿಡಿ ಅವಲಕ್ಕಿಯನ್ನು ಭಿಕ್ಷೆಬೇಡಿ ತೆಗೆದುಕೊಂಡು ಹೊರಡುತ್ತಾನೆ.
ಕೃಷ್ಣನು ಓಡಿಬಂದು ಅವನನ್ನು ಆಲಿಂಗಿಸಿ ಪಾದಪೂಜೆಗೈದು ತಲೆಗೆ ಪ್ರೋಕ್ಷಣೆ ಮಾಡಿಕೊಳ್ಳುತ್ತಾನೆ. ಸಕಲೋಪಚಾರಗಳನ್ನೂ ಮಾಡಿಸಿ ಏಕಾಂತದಲ್ಲಿ ಕರೆದೊಯ್ದು ಬಾಲ್ಯದ ಘಟನೆಗಳನ್ನೆಲ್ಲಾ ನೆನೆಪಿಸಿಕೊಂಡು ಸಂತೋಷಪಡುತ್ತಾನೆ. ಅವನು ತಂದ ಅವಲಕ್ಕಿಯಲ್ಲಿ ಒಂದು ಹಿಡಿಯನ್ನು ತೆಗೆದು ಕೃಷ್ಣನು ತನ್ನ ಬಾಯಿಗೆ ಹಾಕಿಕೊಳ್ಳುತ್ತಾ ಬಾಲ್ಯದ ಸಂಕಲ್ಪವನ್ನು ಪೂರೈಸಿಕೊಳ್ಳುತ್ತಾನೆ. ಮಧುರವಾದ ಮಾತುಗಳನ್ನಾಡುತ್ತಲೇ ರಾತ್ರಿಯು ಕಳೆಯಿತು. ಬಂದ ಕಾರಣವನ್ನು ಕೃಷ್ಣನು ಕೇಳಲಿಲ್ಲ; ಸುದಾಮನೂ ಹೇಳಲಿಲ್ಲ! ತನ್ನ ಕಷ್ಟಗಳನ್ನು ತೋಡಿಕೊಳ್ಳುವ ವಿಷಯ ಮರತೇಹೋಯಿತು; ಹಾಗೆಯೇ ಹೊರಟುಬಂದ! ಆದರೆ ಮನೆಯ ಕಡೆ ಹೋಗುತ್ತಿರುವಂತೆಯೇ ಪರಮಾಶ್ಚರ್ಯ! ಇವನ ಮನೆ-ಊರು ಎಲ್ಲವೂ ಪರಿವರ್ತನೆಯಾಗಿ ಸೇವಕರೊಂದಿಗೆ ಐಶ್ವರ್ಯವಂತನಾಗುತ್ತಾನೆ.
ಸಾಧ್ವಿನಿಯಾದ ಪತ್ನಿಯೂ ಸುಂದರ ಉಡಿಗೆ-ತೊಡಿಗೆಗಳಿಂದ ಅಲಂಕೃತಳಾಗಿರುತ್ತಾಳೆ. ಎಲ್ಲವೂ ಅವನ ನಿರೀಕ್ಷೆಗಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನಡೆದುಹೋಗುತ್ತದೆ. ಆದರೂ ವಿವೇಕ-ವೈರಾಗ್ಯಗಳಿಂದ ಕೂಡಿದ ದಂಪತಿಗಳು ಎಲ್ಲವನ್ನೂ ಭಗವಂತನ ಪ್ರಸಾದ-ಅನುಗ್ರಹವೆಂದು ಸ್ವೀಕರಿಸಿ ಶುದ್ಧಜೀವನವನ್ನು ನಡೆಸುತ್ತಾರೆ. ಸಖ್ಯಭಕ್ತಿಭಾವವನ್ನು ಎತ್ತಿ ತೋರಿಸುವಂತಹ ಕೃಷ್ಣ-ಕುಚೇಲನ ಒಂದು ಸಮ್ಮಿಲನದ ವೃತ್ತಾಂತವಿದಾಗಿದೆ.
ಬಾಲ್ಯದಲ್ಲಿ ಕೃಷ್ಣನು ಸಮಾನವಯಸ್ಕರ ಜೊತೆಯಲ್ಲಿಯೇ ಆಟವಾಡುತ್ತಿರುತ್ತಾನೆ. “ಮಾಕನ್ ಕಾ ಚೋರ್”ಆಗಿ ಬೆಣ್ಣೆ ಕದಿಯುವಾಗ ಇವನು ಅವರುಗಳ ಬೆನ್ನು-ಹೆಗಲಮೇಲೆ ಹತ್ತುವುದರ ಮೂಲಕ ತನ್ನ ಪಾದಸ್ಪರ್ಶದಿಂದ ಅವರನ್ನು ಪಾವನರನ್ನಾಗಿಸುತ್ತಾನೆ. ಅವರ ಸಖನಾಗಿಯೂ ಬಾಲಸೇನಾನಾಯಕನಾಗಿಯೂ ಅಘಾಸುರ, ಬಕಾಸುರನಂತಹ ರಾಕ್ಷಸರುಗಳ ದೆಸೆಯಿಂದ ಇವರನ್ನು ರಕ್ಷಿಸುತ್ತಾನೆ.
ಶ್ರೀರಾಮನ ಸಖ-ಗುಹ
ಶ್ರೀರಾಮನು ಗಂಭೀರವ್ಯಕ್ತಿಯಾದರೂ ಮಿತ್ರನಂತೆ ಸುಲಭನಾಗಿ ವರ್ತಿಸಿದ ಕೆಲವು ಘಟನೆಗಳು: ಗುಹನು ಒಬ್ಬ ನಿಷಾದ. ವನವಾಸಕ್ಕೆ ರಾಮನ ಆಗಮನವನ್ನರಿತು ಓಡಿಬಂದು ಪೂಜಿಸಿ ಕೆಳಗೆ ಕೂರುತ್ತಾನೆ. ಆದರೆ ರಾಮನು “ನೀನು ನನ್ನ ಮಿತ್ರ” ಎಂದು ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡು ಹೆಗಲಮೇಲೆ ಕೈಹಾಕಿ ಪ್ರೀತಿಯಿಂದ ಮಿತ್ರಭಾವವನ್ನು ವ್ಯಕ್ತಪಡಿಸಿಕೊಳ್ಳುತ್ತಾನೆ. ಮಿತ್ರಭಾವದಲ್ಲಿ ವಿಶೇಷವೆಂದರೆ ಪರಸ್ಪರ ಮಾತುಗಳಲ್ಲಿ ಹೆಚ್ಚುಕಮ್ಮಿಯಾದರೂ ಸಂತೋಷವಾಗಿ ಸ್ವೀಕರಿಸುತ್ತಾರೆ.
ರಾಮಚರಿತಮಾನಸದಲ್ಲಿ ಒಂದು ಸ್ವಾರಸ್ಯ ಪ್ರಸಂಗ. ರಾಮ-ಲಕ್ಷ್ಮಣ-ಸೀತೆಯರನ್ನು ದೋಣಿಯಲ್ಲಿ ಕೂರಿಸಿ ಸರಯೂ ನದಿಯನ್ನು ದಾಟಿಸಬೇಕಿತ್ತು. ಕೂರಿಸುವ ಮುನ್ನ ವಿನೋದವಾಗಿ ಒಂದು ಮಾತುಕೊಡಬೇಕೆನ್ನುತ್ತಾನೆ ಗುಹ – “ನನಗೊಂದು ಭಯವಿದೆ. ನಿನ್ನ ಪಾದದಲ್ಲಿ ಅದೇನೋ ಒಂದು ಮೂಲಿಕೆ ಇದೆಯಂತೆ. ಅದರ ಪ್ರಭಾವದಿಂದ ನಿನ್ನ ಪಾದಸ್ಪರ್ಶವಾದ ಕಲ್ಲು ಸ್ತ್ರೀಯಾಗಿಬಿಟ್ಟಿತಂತೆ. ಅಂತೆಯೇ ನನ್ನ ದೋಣಿಯೂ ಸ್ತ್ರೀಯಾಗಿಬಿಟ್ಟರೆ ನನ್ನ ಜೀವನೋಪಾಯವೇನಾಗುವುದು? ಸ್ತ್ರೀರಕ್ಷಣೆಯ ಹೊರೆಯೂ ಸೇರಿಕೊಳ್ಳುವುದಲ್ಲ! ಪರಿಹಾರವಾಗಿ ಮೊದಲು ನಿನ್ನ ಪಾದವನ್ನು ಚೆನ್ನಾಗಿ ತೊಳೆದು ಆ ಮೂಲಿಕೆಯನ್ನು ತೆಗೆದುಹಾಕಿಬಿಡುತ್ತೇನೆ” ಎಂದು ಪ್ರಾರ್ಥಿಸಿದ ಗುಹಸಖನ ಭಕ್ತಿಭಾವವನ್ನೂ ಚತುರತೆಯನ್ನೂ ಮೆಚ್ಚಿದ ಶ್ರೀರಾಮನು ಪಾದಗಳನ್ನು ನೀಡುತ್ತಾನೆ.
ಶ್ರೀರಾಮ- ಸುಗ್ರೀವ
ಸುಗ್ರೀವ-ಸಖ್ಯದಲ್ಲಿ ಕೈಹಿಡಿದು ಅಗ್ನಿಪ್ರದಕ್ಷಿಣೆ ಮಾಡುವುದರ ಮೂಲಕ ಮಿತ್ರತ್ವವನ್ನು ಸಾಬೀತುಪಡಿಸುತ್ತಾನೆ. ಕಿಷ್ಕಿಂಧೆಯಲ್ಲಿ ಆಂಜನೇಯನು ರಾಮ-ಲಕ್ಷ್ಮಣರನ್ನು ಪರಿಚಯಿಸಿದ ಕೂಡಲೇ ಹತ್ತಿರವಿದ್ದ ಒಂದು ವೃಕ್ಷವನ್ನು ಮುರಿದುಹಾಕಿ ರಾಮನನ್ನು ಕೂರಿಸಿ ತಾನೂ ಪಕ್ಕದಲ್ಲೇ ಕುಳಿತುಕೊಳ್ಳುತ್ತಾನೆ. ಇದು ಸುಗ್ರೀವನ ಉಪಚಾರ-ಮಿತ್ರಭಾವ.
ಇವನಿಗೆ ಭಕ್ತಿಯಿಲ್ಲವೆಂದಲ್ಲ. ರಾಮನಿಗೆ ಸಖ್ಯಭಾವದಲ್ಲೇ ಪರೀಕ್ಷೆ ಕೊಡುತ್ತಾನೆ. ಕಾರಣ ಅವನ ಮೇಲೆ ಅಪನಂಬಿಕೆಯಿಂದಲ್ಲ. ವಾಲಿಯನ್ನು ಸಂಹಾರ ಮಾಡಬೇಕಾದರೆ ರಾಮನ ಶಕ್ತಿಪರೀಕ್ಷೆ ಆಗಲೇಬೇಕೆಂದು ಒಂದು ಸಾಲವೃಕ್ಷವನ್ನು ಭೇದಿಸಲು ಯೋಜಿಸಿದ. ಪರೀಕ್ಷೆಯಲ್ಲಿ ಏಳು ಸಾಲವೃಕ್ಷಗಳನ್ನು ಒಂದೇ ಬಾಣದಿಂದ ಭೇದಿಸಿದ ಶೂರ ಶ್ರೀರಾಮ. ಮತ್ತೊಂದು, ಮಹಾಪರಾಕ್ರಮಿ ಅಸುರನಾದ ದುಂದುಭಿಯ ಅಸ್ಥಿಪಂಜರವನ್ನು ತನ್ನ ಪಾದಾಂಗುಷ್ಠದಿಂದ ಎಷ್ಟೋ ಯೋಜನ ದೂರ ಎಸೆದ ಧೀರ-ರಾಮನನ್ನು ಪೂರ್ಣವಾಗಿ ಒಪ್ಪಿಕೊಳ್ಳುತ್ತಾನೆ ಸುಗ್ರೀವ. ಶ್ರೀರಾಮನು ಮಿತ್ರಭಾವದಿಂದಲೇ ತನ್ನನ್ನು ಪರೀಕ್ಷೆಗೊಳಪಡಿಸಿಕೊಂಡನಲ್ಲವೇ?
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಶ್ರೀರಾಮ- ವಿಭೀಷಣ
‘ದೇಶ-ಹೆಂಡತಿ-ಮಕ್ಕಳು-ಐಶ್ವರ್ಯವೆಲ್ಲವನ್ನೂ ತ್ಯಾಗಮಾಡಿ ಶರಣಾಗತನಾಗಿ ಬಂದಿದ್ದೇನೆ ಸ್ವೀಕರಿಸುವುದು-ಬಿಡುವುದು ನಿನಗೆ ಸೇರಿದ್ದು’ ಎಂದು ಘೋಷಣೆಮಾಡಿ ಬಂದವನು ಭಕ್ತವಿಭೀಷಣ. ರಾಜ್ಯದಾಸೆ ಇಲ್ಲ ಇವನಿಗೆ. ನನ್ನ ಮಿತ್ರನಂತೆ ನೋಡಿಕೊಳ್ಳುತ್ತೇನೆ ಎಂದು ಅಭಯ ನೀಡುತ್ತಾನೆ ಶ್ರೀರಾಮ. ಇಂದ್ರಜಿತನು ಯುದ್ಧದಲ್ಲಿ ವಿಭೀಷಣನನ್ನು ನೋಡಿ ಕೋಪದಿಂದ ನಿಂದಿಸಿ ಅವನ ಸಂಹಾರಕ್ಕಾಗಿ ದಿವ್ಯಾಸ್ತ್ರ ಒಂದನ್ನು ಅವನಮೇಲೆ ಪ್ರಯೋಗಿಸುತ್ತಾನೆ. ಆಗ ತಕ್ಷಣವೇ ಪಕ್ಕದಲ್ಲಿದ್ದ ಶ್ರೀರಾಮ ಅವನನ್ನು ಪಕ್ಕಕ್ಕೆ ಸರಿಸಿ ಆ ಅಸ್ತ್ರವನ್ನು ತಾನು ಸ್ವೀಕರಿಸಿಬಿಡುತ್ತಾನೆ. ಅಮೋಘವಾದ ಅಸ್ತ್ರದಿಂದ ಒಂದು ಕ್ಷಣ ರಾಮನೇ ಮೂರ್ಛೆಬೀಳುವಂತಾದರೂ ನಂತರ ಚೇತರಿಸಿಕೊಂಡು ಹೇಳುತ್ತಾನೆ: “ಮಿತ್ರನಾದ ನಿನ್ನನ್ನು ಕಾಪಾಡುವ ಜವಾಬ್ದಾರಿ ನನಗಿದೆ; ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ನಿನ್ನನ್ನು ಕಾಪಾಡುವುದು ನನ್ನ ಧರ್ಮ.” ಇದೇ ಮಿತ್ರತ್ವದ ಆದರ್ಶ.
ಮಿತ್ರತ್ವವನ್ನು ವ್ಯಕ್ತಪಡಿಸುವುದರಲ್ಲಿ ರಾಮ-ಕೃಷ್ಣರು ನಿಸ್ಸೀಮರು. ಇಬ್ಬರನ್ನೂ ಮಿತ್ರರನ್ನಾಗಿ ಆರಿಸಿಕೊಂಡವರೆಲ್ಲರೂ ನಿಜಕ್ಕೂ ಧನ್ಯರು. ಸಖ್ಯದಲ್ಲಿರುವ ಸ್ನೇಹವೇ(ಅಂಟೇ) ಭಕ್ತಿಗೆ ಕಾರಣ. ಇದು ಒಂದು ತರಹದ ದಾಸ್ಯಭಕ್ತಿಯೇ. ಇವರೆಲ್ಲರೂ ಶರಣಾಗತರಾಗಿರುವುದನ್ನೂ ಗಮನಿಸಬಹುದು. ಈ ಹಂತದಲ್ಲಿ ದಾಸ್ಯಭಕ್ತಿಗೂ, ಸಖ್ಯಭಕ್ತಿಗೂ, ಶರಣಾಗತಭಕ್ತಿಗೂ ಹೆಚ್ಚು ಅಂತರವಿರುವುದಿಲ್ಲ.
– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ, ಬೆಂಗಳೂರು
ಇದನ್ನೂ ಓದಿ : Prerane : ಕಿವುಡ, ಕುರುಡ ಮತ್ತು ಮೂಕ; ಎಲ್ಲರೂ ದೃತರಾಷ್ಟ್ರರೇ!
ಧಾರ್ಮಿಕ
Prerane : ಕನ್ಯೆ ಎಂದರೆ ಯಾರು? ಈ ಪದಕ್ಕಿರುವ ಮಹತ್ವವೇನು?
“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಕನ್ಯೆ ಪದದ ಮಹತ್ವವನ್ನು ತಿಳಿಸುವ ಲೇಖನ ಇಲ್ಲಿದೆ.
ನರಸಿಂಹ ಭಟ್ಟ
ಅನೇಕ ಸಹಸ್ರಮಾನಗಳಿಂದಲೂ ಭಾರತೀಯ ಸಂಸ್ಕೃತಿಯು ವಿಶಿಷ್ಟಸ್ಥಾನವನ್ನು ಪಡೆದುಕೊಂಡಿದೆ. ಅದಕ್ಕೆ ಕಾರಣ ಪ್ರಕೃತಿ. ‘ದ್ವಿಧಾ ಕೃತ್ವಾ ಆತ್ಮನೋ ದೇಹಮ್ ಅರ್ಧೇನ ಪುರುಷೋಽಭವತ್ ಅರ್ಧೇನ ನಾರೀ’ ಎಂದು ಉಪನಿಷತ್ತು ಕೂಡಾ ಪ್ರಕೃತಿಯ ಪ್ರಾಧಾನ್ಯವನ್ನು ಪ್ರತಿಪಾದಿಸುತ್ತದೆ. ಪ್ರಕೃತಿ ಇಲ್ಲದೆ ಪುರುಷನಿಗೆ ಚೈತನ್ಯವಿಲ್ಲ. ಆದ್ದರಿಂದ ನಮ್ಮ ಪರಂಪರೆಯೂ ಕೂಡಾ ಪ್ರಕೃತಿಗೆ ಚೈತನ್ಯದಾಯಿತ್ವವನ್ನು ಪ್ರತಿಪಾದಿಸುತ್ತದೆ. ಈ ಪ್ರಕೃತಿಯು ನಾನಾ ದೆಶೆಯನ್ನು ಪಡೆಯುತ್ತದೆ. ಅವುಗಳಲ್ಲಿ ಮೊದಲನೆಯದೇ ‘ಕನ್ಯಾ’ ಎಂದು. ಆದಕಾರಣ ಕನ್ಯೆಯ ಸ್ವರೂಪ ಸ್ವಭಾವ ಮತ್ತು ಅದರ ಕಾರ್ಯಕ್ಷೇತ್ರವನ್ನು ಅನುಸಂಧಾನ ಮಾಡಬೇಕಾಗಿದೆ.
‘ಕನ –ದೀಪ್ತೌ’ ಧಾತುವಿಗೆ ‘ಯಕ್’ ಎಂಬ ಉಣಾದಿಪ್ರತ್ಯಯವನ್ನು ಸೇರಿಸಿದಾಗ ಕನ್ಯಾ ಎಂಬ ಶಬ್ದವು ಕುಮಾರೀ ಎಂಬ ಅರ್ಥವನ್ನು ಕೊಡುತ್ತದೆ. ‘ಕನ್ಯಾಯಾಃ ಕನೀನ ಚ’ ಎಂಬ ಪಾಣಿನಿ ಸೂತ್ರಪ್ರಕಾರವಾಗಿ ಇಲ್ಲಿ ‘ಙೀಷ್’ ಎಂಬ ಸ್ತ್ರೀ ಪ್ರತ್ಯಯದ ಬದಲಾಗಿ ‘ಟಾಪ್’ ಎಂಬ ಪ್ರತ್ಯಯವು ಬರುತ್ತದೆ. ಕನ್ಯಾ ಶಬ್ದವು ಹನ್ನೆರಡು ರಾಶಿಗಳಲ್ಲಿ ಒಂದಾಗಿಯೂ ಮತ್ತು ಒಂದು ಬಗೆಯ ಓಷಧಿ ಎಂಬ ಅರ್ಥವನ್ನೂ ಸುತಾ ಮೊದಲಾದ ಅರ್ಥಗಳಲ್ಲಿಯೂ ಬಳಕೆಯಲ್ಲಿದೆ.
ವಿಶೇಷವಾಗಿ ಕನ್ಯಾ ಶಬ್ದಕ್ಕೆ ದೀಪ್ತಿಮತೀ-ಕಾಂತಿ ಉಳ್ಳವಳು ಎಂಬ ಅರ್ಥವನ್ನು ನಾವಿಲ್ಲಿ ತೆಗೆದುಕೊಳ್ಳೋಣ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರದ್ಧಾಳುಗಳಾದ ನಾವು ಪ್ರತಿದಿನ ಬೆಳಗ್ಗೆ ಎದ್ದು ಈ ಶ್ಲೋಕವನ್ನು ಪಠಿಸುತ್ತೇವೆ;
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ |
ಪಂಚಕನ್ಯಾಃ ಸ್ಮರೇನ್ನಿತ್ಯಂ ಮಹಾಪಾತಕನಾಶನಮ್ ||
ಎಂದು. ಈ ಕನ್ಯೆಯರು ನಮಗೆ ಆದರ್ಶರು. ಯಾಕೆ ಇಷ್ಟು ಆದರ್ಶರು? ಎಂಬುದಕ್ಕೆ ಅಷ್ಟಾಂಗಯೋಗ ವಿಜ್ಞಾನಮಂದಿರದ ಸಹಜಾಧ್ಯಕ್ಷರೂ ಯೋಗಿಗಳೂ ಆದ ಶ್ರೀರಂಗ ಮಹಾಗುರುಗಳು ಇವರ ಕನ್ಯಾ ಶ್ರೇಷ್ಠತ್ವವನ್ನು ವಿವರಿಸಿರುವುದನ್ನು ನೋಡಿದರೆ ಅವರ ಮೇಲೆ ನಮ್ಮ ಗೌರವ ಇಮ್ಮಡಿಯಾಗುವುದು. “ಸಾಮಾನ್ಯವಾಗಿ ವಿವಾಹದ ಅನಂತರದಲ್ಲಿ ಕನ್ಯೆಯರ ದೀಪ್ತಿಯು ನಶಿಸುತ್ತಾ ಹೋಗುತ್ತದೆ. ಆದರೆ ಅಹಲ್ಯಾದಿ ಈ ಕನ್ಯೆಯರ ಕಾಂತಿಯು ದಿನದಿಂದ ದಿನಕ್ಕೆ ದೇದೀಪ್ಯಮಾನವಾಗಿ ಹೋಗುತ್ತಿತ್ತು. ಇದಕ್ಕಾಗಿಯೇ ಇವರು ಪ್ರಾತಃಸ್ಮರಣೀಯರು. ಯಾರು ಆತ್ಮ ದೀಪ್ತಿಯ ಕಡೆಗೆ ಆಕರ್ಷಿಸುತ್ತಾರೋ ಅವರು ಪ್ರಾತಃಸ್ಮರಣೀಯರಾಗುತ್ತಾರೆ” ಎಂಬುದಾಗಿ. ಆದ್ದರಿಂದಲೇ ಭಾರತೀಯ ಪರಂಪರೆಯು ಕನ್ಯೆಗೆ ಅನುಪಮ ಮರ್ಯಾದೆಯನ್ನು ಕೊಟ್ಟಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಭಾರತೀಯರ ವಿವಾಹ ಸಂದರ್ಭದಲ್ಲಿ ಈ ವಿಷಯ ಅತ್ಯಂತ ಸ್ಪಷ್ಟವಾಗುತ್ತದೆ. ಅಲ್ಲಿ ಕನ್ಯೆಯ ತಂದೆಯಾದವನು ಈ ರೀತಿಯಾಗಿ ಸಂಕಲ್ಪ ಮಾಡುತ್ತಾನೆ. “ಲಕ್ಷ್ಮೀರೂಪಾಮ್ ಇಮಾಂ ಕನ್ಯಾಂ ಶ್ರೀಧರರೂಪಿಣೇ ವರಾಯ ಪ್ರದಾಸ್ಯಾಮಿ’ʼ ಎಂದು. ಕನ್ಯೆಯಲ್ಲಿ ಲಕ್ಷ್ಮಿಯನ್ನೋ ಪಾರ್ವತಿಯನ್ನೋ ಸರಸ್ವತಿಯನ್ನೊ ಭಾವಿಸುತ್ತಾರೆ. ಮತ್ತು ಎಲ್ಲಿ ಸ್ತ್ರೀಯರಿಗೆ ಸಮಾಜವು ಗೌರವಿಸುವುದೋ ಅಲ್ಲಿ ಸಕಲ ದೇವತೆಗಳೂ ನಲಿದು ನರ್ತಿಸುತ್ತಾರೆ. ಈ ಕಾರಣದಿಂದಲೇ ತಾಯಿಗೆ ಮೊದಲ ಪೂಜೆ ಸಲ್ಲುತ್ತದೆ; “ಮಾತೃದೇವೋ ಭವ | ಲಕ್ಷ್ಮೀನಾರಾಯಣಾಭ್ಯಾಂ ನಮಃ ಉಮಾಮಹೇಶ್ವರಾಭ್ಯಾಂ ನಮಃ ವಾಣೀವಿಧಾತೃಭ್ಯಾಂ ನಮಃ ಅರುಂಧತೀವಸಿಷ್ಠಾಭ್ಯಾಂ ನಮಃ” ಇತ್ಯಾದಿಯಾಗಿ. ಕೊನೆಯದಾಗಿ ಹೇಳುವುದಾರೆ ಕಾಂತಿಮತ್ವ ಮತ್ತು ಆತ್ಮದೀಪ್ತಿಕರ್ಷಣದಂತಹ ಅನೇಕ ಸದ್ಗುಣಗಳ ಗಣಿಯಾಗಿರುವುದರಿಂದ ಕನ್ಯೆಗೆ ಮಹತ್ವ ಬಂದಿದೆ.
– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ
ದೇಶ
Sharada Devi Idol: ತಿತ್ವಾಲ್ ಶಾರದಾ ದೇವಿ ದೇಗುಲಕ್ಕೆ ಶೃಂಗೇರಿ ವಿಧುಶೇಖರ ಭಾರತೀ ಶ್ರೀಗಳ ಭೇಟಿ
ಜನವರಿ 24ರಂದು ಶೃಂಗೇರಿಯಿಂದ ಹೊರಟಿದ್ದ ಪಂಚಲೋಹದ ಶಾರದಾಂಬೆ ಮೂರ್ತಿಯ ರಥಯಾತ್ರೆಗೆ ಶೃಂಗೇರಿಯ ಗುರುತ್ರಯರು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು.
ಚಿಕ್ಕಮಗಳೂರು: ತಿತ್ವಾಲ್ನಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಶಾರದಾಂಬೆ ದೇವಾಲಯಕ್ಕೆ (sharadamba temple) ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಶ್ರೀಗಳು (Sri Vidhushekhara Bharati) ಭೇಟಿ ನೀಡಿ ಪೂಜೆ ಸಲ್ಲಿಸಿದರು.
ತಿತ್ವಾಲ್ನಲ್ಲಿದ್ದ ಪುರಾತನ ಶಾರದಾಂಬಾ ದೇವಾಲಯ ಪಾಳುಬಿದ್ದಿತ್ತು. ಇದು ಪಾಕ್ ಆಕ್ರಮಿತ ಪ್ರದೇಶದಲ್ಲಿದೆ. ಇಲ್ಲಿನ ಶಾರದಾಂಬಾ ದೇವಾಲಯವನ್ನು ನವೀಕರಣ ಮಾಡಲಾಗಿದ್ದು, 75 ವರ್ಷಗಳ ಬಳಿಕ ಇಲ್ಲಿ ಶಾರದಾಂಬೆ ಮೂರ್ತಿಯ ಪ್ರತಿಷ್ಠಾಪನೆಯಾಗಿದೆ.
ಜನವರಿ 24ರಂದು ಶೃಂಗೇರಿಯಿಂದ ಹೊರಟಿದ್ದ ಪಂಚಲೋಹದ ಶಾರದಾಂಬೆ ಮೂರ್ತಿಯ ರಥಯಾತ್ರೆಗೆ ಶೃಂಗೇರಿಯ ಗುರುತ್ರಯರು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು. ಶೃಂಗೇರಿಯಿಂದ 4000 ಕಿ.ಮೀ. ದೂರದಲ್ಲಿರುವ ತಿತ್ವಾಲ್ನ ದೇವಾಲಯವನ್ನೂ ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದರು ಎಂಬ ಇತಿಹಾಸ ಇದೆ. ವಿಶೇಷ ವಿಮಾನದಲ್ಲಿ ಕಾಶ್ಮೀರ ತಲುಪಿ, ಅಲ್ಲಿಂದ ತಿತ್ವಾಲ್ಗೆ ಭೇಟಿ ನೀಡಿದ ವಿಧುಶೇಖರ ಭಾರತೀ ಶ್ರೀಗಳಿಂದ ಶಾರದಾಂಬೆಗೆ ವಿಶೇಷ ಪೂಜೆ ನೆರವೇರಿತು.
ಇದನ್ನೂ ಓದಿ: Sharada Devi Idol: ಶೃಂಗೇರಿಯಿಂದ ತೀತ್ವಾಲ್ನತ್ತ ಹೊರಟಿದ್ದಾಳೆ ʻಕಾಶ್ಮೀರ ಪುರವಾಸಿನಿʼ; ಮಾ. 24ರಂದು ಪ್ರತಿಷ್ಠಾಪನೆ
ಧಾರ್ಮಿಕ
ತಾತಯ್ಯ ತತ್ವಾಮೃತಂ : ನಿನ್ನ ನಾಮದ ಬಲವೊಂದಿದ್ದರೇ ಸಾಕೋ…!
ಅವಸಾನ ಕಾಲ ಎಂದರೆ ಮರಣಕಾಲದ ಸಮಯದಲ್ಲಿ ಹಾದಿಯನ್ನು ತೋರುತ್ತದೆ ನಾಮಸ್ಮರಣೆ ಎನ್ನುತ್ತಿದ್ದಾರೆ ಶ್ರೀ ಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್. ತಾತಯ್ಯರ ವಚನಗಳ ಒಳಾರ್ಥವನ್ನು ತಿಳಿಸುವ ಅವರ ಅಂಕಣ ಬರಹ ʻತಾತಯ್ಯ ತತ್ವಾಮೃತಂʼ ಇಲ್ಲಿದೆ.
“ನಿನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೇ ಸಾಕೋ” ಎಂದು ದಾಸಶ್ರೇಷ್ಠರಾದ ಪುರಂದರದಾಸರು ಪರಮಾತ್ಮನ ನಾಮಸ್ಮರಣೆಯ ಮಹತ್ವವನ್ನು ಸಾರಿ ಹೇಳಿದ್ದಾರೆ. ಹುಟ್ಟು ಸಾವುಗಳೆಂಬ ಭವರೋಗವನ್ನು ಪರಿಹರಿಸುವ ಶಕ್ತಿ ಪರಮಾತ್ಮನ ನಾಮಸ್ಮರಣೆಗೆ ಇದೆ. ನಾಮಸ್ಮರಣೆಯ ಮಹಿಮೆಯನ್ನು ತಮ್ಮ ಕೀರ್ತನೆಯಲ್ಲಿ ಕೈವಾರದ ತಾತಯ್ಯನವರು ಹೀಗೆ ಹೇಳಿದ್ದಾರೆ.
“ಆತ್ಮಧ್ಯಾನಿಸೋ ಮನುಜ ಹರಿಪುಣ್ಯನಾಮ
ಬಲವಂತವಾದ ಭವಹರ ಮಾಡೋ ನಾಮ” ಎಂದಿದ್ದಾರೆ.
ಆತ್ಮದಲ್ಲಿ ಪರಮಾತ್ಮನ ಪುಣ್ಯವಾದ ನಾಮಸ್ಮರಣೆಯನ್ನು ಮಾಡು, ಇದು ಎಷ್ಟು ಪ್ರಭಾವಶಾಲಿಯಾದದು ಎಂದರೆ ಎಷ್ಟೋ ಸಾವಿರಾರು ವರ್ಷಗಳಿಂದ ಇರುವ ಹುಟ್ಟುಸಾವಿನ ಚಕ್ರವನ್ನೇ ನಾಶ ಮಾಡಿ, ಭವಹರ ಮಾಡುವ ಶಕ್ತಿ ನಾಮಸ್ಮರಣೆಗೆ ಇದೆ ಎನ್ನುತ್ತಾರೆ ತಾತಯ್ಯನವರು. ನಾಮಸ್ಮರಣೆ ಮಾಡು ಎಂದು ಹೇಳಿ ತಾತಯ್ಯನವರು ಸುಮ್ಮನಾಗುವುದಿಲ್ಲ. ನಮಗೆ ಅಂತರಂಗದಲ್ಲಿ ಮಾಡುವ ನಾಮಸ್ಮರಣೆಯ ಮಹಿಮೆಯನ್ನು ಅರ್ಥಮಾಡಿಸಲು ಉದಾಹರಣೆಯ ಸಹಿತವಾಗಿ ತಿಳಿಸಿಕೊಡುತ್ತಾರೆ.
ಘೋರಪಾತಕ ಅಜಾಮಿಳನ ಸಲಹಿದ ನಾಮ
ವಾಲ್ಮೀಕಿಮುನಿಗೆ ವರಕೊಟ್ಟ ನಾಮ
ದಾಸಿ ಮಗನಿಗೆ ತನ್ನ ಮಹಿಮೆ ತೋರಿದ ನಾಮ
ದ್ರೌಪದಿಯ ಮಾನಭಂಗ ಕಾಯ್ದ ನಾಮ||
ಆಜಾಮಿಳನು ಮಾಡಿರುವ ಪಾಪಗಳನ್ನು ಕಂಡು ತಾತಯ್ಯನವರು ಅವನನ್ನು ಘೋರಪಾತಕ ಎಂದಿದ್ದಾರೆ. ಭಾಗವತದ ಆರನೇಯ ಸ್ಕಂದದಲ್ಲಿ ಬರುವ ಆಜಾಮಿಳನ ಕಥೆಗೆ ಬಹಳ ಮಹತ್ವವಿದೆ. ಅಜಾಮಿಳನು ತಂದೆ, ತಾಯಿ ಮತ್ತು ಹೆಂಡತಿಯನ್ನು ತ್ಯಜಿಸಿ, ಅನ್ಯಸ್ತ್ರೀಯ ಸಂಪರ್ಕವನ್ನು ಮಾಡಿ, ದುರಾಚಾರದಿಂದ ಮಾಡಬಾರದ ಪಾಪಗಳನ್ನು ಮಾಡಿರುತ್ತಾನೆ. ಕೊನೆಗೆ ತನ್ನ ಮರಣದ ಸಂದರ್ಭದಲ್ಲಿ ಪರಮಾತ್ಮನ ನಾಮಸ್ಮರಣೆಯಿಂದ ಕೂಡಿದ ಮಗನ ಹೆಸರನ್ನು ಕರೆದು ಮುಕ್ತಿಯನ್ನು ಹೊಂದುತ್ತಾನೆ. ಇದರಿಂದ ನಮಗೆ ತಿಳಿಯುವುದೆನೆಂದರೆ ಪರಮಾತ್ಮನಿಗೂ, ಪರಮಾತ್ಮನ ನಾಮಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಹೃದಯದ ಭಾವನೆಗೆ ತಕ್ಕಂತೆ ಒಲಿಯುವವನು ಪರಮಾತ್ಮ..
ವಾಲ್ಮೀಕಿ ಮಹರ್ಷಿ ಶ್ರೇಷ್ಠವಾದ ರಾಮಾಯಣದ ಕರ್ತೃ. ರಾಮನಾಮ ಸ್ಮರಣೆಯಿಂದ ತನ್ನ ಪೂರ್ವಕರ್ಮಗಳೆಲ್ಲವನ್ನೂ ನಾಶಪಡಿಸಿಕೊಂಡು ಜ್ಞಾನಿಯಾಗಿ, ರಾಮನಾಮವನ್ನೇ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲಿಸಿ ಹುತ್ತದಿಂದ ಹೊರಬಂದವರು ವಾಲ್ಮೀಕಿ ಮಹರ್ಷಿಗಳು. ಈ ಕಾರಣದಿಂದಲೇ ತಾತಯ್ಯನವರು ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ ಎಂದಿದ್ದಾರೆ.
ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ ತಾತಯ್ಯನವರು. ಹಸ್ತಿನಾಪುರದ ರಾಣಿಯರಾದ ಅಂಬಿಕ ಮತ್ತು ಅಂಬಾಲಿಕೆಯರ ದಾಸಿಯ ಪುತ್ರ ವಿದುರ. ವಿದುರನು ದಾಸಿಯ ಪುತ್ರನಾದ ಕಾರಣ ರಾಜನೆಂದು ಪರಿಗಣಿಸಲಿಲ್ಲ. ಆದರೆ ಪರಮಾತ್ಮನ ಮಹಾಭಕ್ತ. ನೀತಿ ಮತ್ತು ಸತ್ಯವನ್ನು ಹೇಳುವುದರಲ್ಲಿ ನಿಪುಣನಾಗಿದ್ದನು. ತನ್ನ ನೀತಿ ಮಾತುಗಳಿಂದ ಪಾಂಡವರನ್ನು ಎಚ್ಚರಿಸುತ್ತಿದ್ದನು. ರಾಯಭಾರಕ್ಕೆಂದು ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಬಂದಾಗ ಯಾರ ಆತಿಥ್ಯವನ್ನೂ ಸ್ವೀಕರಿಸದೆ ನೇರವಾಗಿ ವಿದುರನ ಮನೆಗೆ ತೆರಳುತ್ತಾನೆ. ಇದು ನನ್ನ ಸೌಭಾಗ್ಯವೆಂದು ತಿಳಿದ ವಿದುರನು ಶ್ರೀಕೃಷ್ಣ ಪರಮಾತ್ಮನನ್ನು ಸ್ವಾಗತಿಸಿ ಅತಿಥ್ಯವನ್ನು ನೀಡುತ್ತಾನೆ.
ಶ್ರೀಕೃಷ್ಣನು ಬಂದನೆಂಬ ಸಂತೋಷದಲ್ಲಿ ಬಾಳೆಹಣ್ಣನ್ನು ನೀಡುವಾಗ ಹಣ್ಣನ್ನು ಬಿಸಾಕಿ, ಮೇಲಿನ ಸಿಪ್ಪೆಯನ್ನು ಕೃಷ್ಣನಿಗೆ ನೀಡುತ್ತಾನೆ. ಆಗ ಶ್ರೀಕೃಷ್ಣನು ಅವನ ಅಂತರAಗದ ಮುಗ್ಧ ಭಕ್ತಿಯನ್ನು ಕಂಡು ಸಿಪ್ಪೆಯನ್ನೇ ಸ್ವೀಕರಿಸಿ ಅವನನ್ನು ಹರಸಿ ಹಾರೈಸುತ್ತಾನೆ. ಇದನ್ನೇ ತಾತಯ್ಯನವರು ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ.
ದ್ರೌಪದಿಯು ಪಂಚ ಪಾಂಡವರ ಧರ್ಮಪತ್ನಿ. ಧರ್ಮರಾಯನು ಜೂಜಾಟದಲ್ಲಿ ಸರ್ವಸ್ವವನ್ನು ಸೋತಾಗ ಕೊನೆಗೆ ದ್ರೌಪದಿಯನ್ನೇ ಪಣವಾಗಿ ಇಡುತ್ತಾನೆ. ಪಣದಲ್ಲಿ ದ್ರೌಪದಿಯನ್ನು ಸೋತಾಗ ಕೌರವರು ತುಂಬಿದ ಸಭೆಗೆ ದ್ರೌಪದಿಯನ್ನು ಎಳೆತರುತ್ತಾರೆ. ವಸ್ತ್ರಾಪಹರಣದ ಸಂದರ್ಭದಲ್ಲಿ ದ್ರೌಪದಿಯ ರಕ್ಷಣೆಗೆ ಯಾರೂ ಬರದಿದ್ದಾಗ, ತಾನು ನಂಬಿರುವ ಶ್ರೀಕೃಷ್ಣನನ್ನು ಮನಪೂರ್ವಕವಾಗಿ ಪ್ರಾರ್ಥಿಸುತ್ತಾಳೆ. ಶ್ರೀಕೃಷ್ಣನು ಅಕೆಗೆ ಅಭಯವನ್ನು ನೀಡಿ ಅವಮಾನದಿಂದ ರಕ್ಷಿಸುತ್ತಾನೆ. ಇದನ್ನೇ ತಾತಯ್ಯನವರು ದ್ರೌಪದಿಯ ಮಾನಭಂಗ ಕಾಯ್ದ ನಾಮ ಎಂದಿದ್ದಾರೆ.
ರಕ್ಕಸನ ಅನುಜನಿಗೆ ಪಟ್ಟಕಟ್ಟಿದ ನಾಮ
ಪ್ರಹ್ಲಾದನಿಗೆ ಪ್ರಸನ್ನವಾದ ನಾಮ
ಅಜಸುರಾದಿಗಳು ಅನುದಿನವು ಜಪಿಸುವ ನಾಮ
ಗಜವ ಪಾಲಿಸಿದ-ಜಗದೀಶ್ವರನ ನಾಮ||
ರಕ್ಕಸನ ಅನುಜನೆಂದರೆ ರಾವಣನ ಸಹೋದರ ವಿಭೀಷಣ. ವಿಬೀಷಣ ರಾಕ್ಷಸನಾದರೂ ಉತ್ತಮ ಗುಣಗಳನ್ನು ಹೊಂದಿದ್ದನು. ತಪಸ್ಸಿನ ಫಲದಿಂದ ಬ್ರಹ್ಮನಿಂದ ವರವನ್ನು ಪಡೆದಿದ್ದನು ವಿಭೀಷಣ. ವಿಭೀಷನು ಕೇಳಿದ ವರವೆಂದರೆ “ನನಗೆ ಮಹಾವಿಷ್ಣುವಿನ ದರ್ಶನವಾಗಬೇಕು ಹಾಗೂ ಪರಮಾತ್ಮನ ಚರಣಕಮಲಗಳಲ್ಲಿ ಮನಸ್ಸು ಸ್ಥಿರವಾಗಿರಬೇಕು” ಎಂದು ವರ ಪಡೆದಿರುತ್ತಾನೆ. ಅದರಂತೆ ಶ್ರೀರಾಮನ ದರ್ಶನವಾಗುತ್ತದೆ. ಸರ್ವಸ್ವವನ್ನು ತ್ಯಜಿಸಿ ಪರಮಾತ್ಮನ ಪಾದದಲ್ಲಿ ಶರಣಾಗುತ್ತಾನೆ. ಕೊನೆಗೆ ಲಂಕೆಗೆ ರಾಜನಾಗಿ ಪಟ್ಟಾಭಿಷಿಕ್ತನಾಗುತ್ತಾನೆ. ರಕ್ಕಸನ ಅನುಜನಿಗೆ ಪಟ್ಟ ಕಟ್ಟಿದ ನಾಮ ಎಂದಿದ್ದಾರೆ ತಾತಯ್ಯನವರು.
ಹಿರಣ್ಯಕಶ್ಯಪುವಿನ ಪುತ್ರ ಪ್ರಹ್ಲಾದ. ಹಿರಣ್ಯಕಶ್ಯಪು ಅಹಂಕಾರದಿAದ ಮೆರೆಯುತ್ತಿರುತ್ತಾನೆ. ಆದರೆ ಪ್ರಹ್ಲಾದ ಮಾತ್ರ ಭಗವಂತನ ನಾಮಸ್ಮರಣೆಯಲ್ಲಿಯೇ ಮಗ್ನನಾದವನು. ತಂದೆ ಎಷ್ಟೇ ಕಷ್ಟಗಳನ್ನು ಕೊಟ್ಟರೂ ಧೃತಿಗೆಡದೆ ಪರಮಾತ್ಮನಲ್ಲಿ ಶರಣಾದವನು ಪ್ರಹ್ಲಾದ. ನಾಮಸ್ಮರಣೆಯಿಂದಲೇ ಕೊನೆಗೆ ಶ್ರೀನರಸಿಂಹ ಅವತಾರದಲ್ಲಿ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಕಾರಣದಿಂದ ಪ್ರಹ್ಲಾದನಿಗೆ ಪ್ರಸನ್ನವಾದ ನಾಮ ಎಂದಿದ್ದಾರೆ ತಾತಯ್ಯನವರು.
ಬ್ರಹ್ಮಾದಿಯಾಗಿ ದೇವತೆಗಳೆಲ್ಲರೂ ಅನುದಿನವೂ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾರೆ ಎನ್ನುತ್ತಾ ಗಜೇಂದ್ರ ಮೋಕ್ಷದ ಪ್ರಸಂಗವನ್ನು ತಾತಯ್ಯನವರು ನೆನಪಿಸಿಕೊಳ್ಳುತ್ತಾರೆ. ಪರಮಾತ್ಮನು ಆತ್ಮದ ಅಂತರಂಗದ ಭಕ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾನೆ ಎನ್ನುವುದಕ್ಕೆ ಗಜವನ್ನು ರಕ್ಷಿಸುವುದೇ ಸಾಕ್ಷಿಯಾಗಿದೆ.
ಹಂತಕನ ದೂತರನ ಹೊಡೆದು ಓಡಿಸೋ ನಾಮ
ಆಂಜನೇಯನಿಗೆ ಆಧಾರ ನಾಮ
ಅವಸಾನ ಕಾಲಕ್ಕೆ ಹಾದಿ ತೋರುವ ನಾಮ
ನಂಬಿರೋ ಅಮರ ನಾರೇಯಣಸ್ವಾಮಿ ನಾಮ||
ಯಮದೂತರನ್ನು ಹೊಡೆದು ಓಡಿಸುವ ಶಕ್ತಿಯನ್ನು ನಾಮಸ್ಮರಣೆಯು ಪಡೆದುಕೊಂಡಿದೆ ಎನ್ನುತ್ತಿದ್ದಾರೆ ತಾತಯ್ಯನವರು. ಭಗವಂತನ ನಾಮಸ್ಮರಣೆಯ ಬಲದ ಆಧಾರದಿಂದ ಆಂಜನೇಯನು ಎಲ್ಲಾ ಸಾಧನೆಯನ್ನು ಮಾಡಿದ ಎನ್ನುವ ಉದಾಹರಣೆಯನ್ನು ನೀಡುತ್ತಾ ಅವಸಾನ ಕಾಲ ಎಂದರೆ ಮರಣಕಾಲದ ಸಮಯದಲ್ಲಿ ಹಾದಿಯನ್ನು ತೋರುತ್ತದೆ ನಾಮಸ್ಮರಣೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಈ ಎಲ್ಲಾ ಕಾರಣಗಳಿಂದ ಭಗವಂತನ ನಾಮಸ್ಮರಣೆಯನ್ನು ನಂಬಿಕೊಳ್ಳಿ ಎಂದು ಮನದಟ್ಟು ಮಾಡಿಕೊಡುತ್ತಾ, ಕೊನೆಯದಾಗಿ ಶ್ರೀಅಮರನಾರೇಯಣಸ್ವಾಮಿಯ ಅಂಕಿತವನ್ನು ಹಾಕಿ, ಪರಮಾತ್ಮನಿಗೆ ಸಮರ್ಪಣೆಯನ್ನು ಮಾಡಿದ್ದಾರೆ. ಇದೇ ನಾಮಸ್ಮರಣೆಯ ಶ್ರೇಷ್ಠತೆ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಬುದ್ಧನಂತೆ ಆಸೆಯೇ ದುಃಖಗಳ ಆಲಯ ಎಂದಿದ್ದಾರೆ ತಾತಯ್ಯ
-
ಪ್ರಮುಖ ಸುದ್ದಿ45 mins ago
Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!
-
ಅಂಕಣ23 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ಕ್ರಿಕೆಟ್20 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್20 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ17 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್18 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
ಕರ್ನಾಟಕ16 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ
-
South Cinema17 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ