Chia seeds: ಚಿಯಾ ಬೀಜಗಳನ್ನು ಸೇವಿಸುತ್ತಿದ್ದೀರಾ? ಹಾಗಾದರೆ, ಈ ಎಚ್ಚರಿಕೆ ನಿಮ್ಮಲ್ಲಿರಲಿ! - Vistara News

ಆರೋಗ್ಯ

Chia seeds: ಚಿಯಾ ಬೀಜಗಳನ್ನು ಸೇವಿಸುತ್ತಿದ್ದೀರಾ? ಹಾಗಾದರೆ, ಈ ಎಚ್ಚರಿಕೆ ನಿಮ್ಮಲ್ಲಿರಲಿ!

Chia seeds: ನೀವು ಚಿಯಾ ಬೀಜಗಳನ್ನು ಸೇವಿಸುತ್ತಿದ್ದರೆ, ಕೊಂಚ ಎಚ್ಚರಿಕೆಯೂ ಅಗತ್ಯ. ನೀವು ಮಧುಮೇಹಿಗಳಾಗಿದ್ದರೆ, ಅದಕ್ಕಾಗಿ ಔಷಧಿ ಸೇವಿಸುತ್ತಿದ್ದರೆ, ಹೃದಯ, ರಕ್ತದೊತ್ತಡದ ಸಮಸ್ಯೆಯಿದ್ದು ಅದಕ್ಕಾಗಿ ನಿತ್ಯವೂ ಔಷಧ ಸೇವಿಸುತ್ತಿದ್ದರೆ ಚಿಯಾ ಬೀಜಗಳಿಂದಾಗಿ ನಿಮ್ಮ ಆರೋಗ್ಯದಲ್ಲಿ ಏರುಪೇರೂ ಆಗಬಹುದು. ಈ ಕುರಿತ ಮಾಹಿತಿ ಈ ಲೇಖನದಲ್ಲಿದೆ.

VISTARANEWS.COM


on

chia seeds
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಯಾ ಬೀಜಗಳು (Chia seeds) ಎಂಬ ಪುಟಾಣಿ ಬೀಜಗಳು ಇಂದು ತಮ್ಮ ಆರೋಗ್ಯಕರ ಗುಣಗಳಿಂದ ಮನೆಮಾತಾಗಿದೆ. ಎಲ್ಲರೂ ತಮ್ಮ ಡಯಟ್‌ನಲ್ಲಿ ಚಿಯಾ ಬೀಜಗಳನ್ನು ಸೇರಿಸಲಾರಂಭಿಸಿದ್ದಾರೆ. ಚಿಯಾ ಬೀಜಗಳಿಂದ ತೂಕ ಇಳಿಸುವುದೂ ಸೇರಿದಂತೆ ಹಲವಾರು ಲಾಭಗಳನ್ನು ಪಡೆಯುವ ಉದ್ದೇಶದಿಂದ ಆರೋಗ್ಯಕರ ಶೈಲಿಯತ್ತ ಹೊರಳುತ್ತಿದ್ದಾರೆ. ಇದೆಲ್ಲ ನಿಜವೇ ಆದರೂ, ನೀವು ಚಿಯಾ ಬೀಜಗಳನ್ನು ಸೇವಿಸುತ್ತಿದ್ದರೆ, ಕೊಂಚ ಎಚ್ಚರಿಕೆಯೂ ಅಗತ್ಯ. ನೀವು ಮಧುಮೇಹಿಗಳಾಗಿದ್ದರೆ, ಅದಕ್ಕಾಗಿ ಔಷಧಿ ಸೇವಿಸುತ್ತಿದ್ದರೆ, ಹೃದಯ, ರಕ್ತದೊತ್ತಡದ ಸಮಸ್ಯೆಯಿದ್ದು ಅದಕ್ಕಾಗಿ ನಿತ್ಯವೂ ಔಷಧಿ ಸೇವಿಸುತ್ತಿದ್ದರೆ ಚಿಯಾ ಬೀಜಗಳಿಂದಾಗಿ ನಿಮ್ಮ ಆರೋಗ್ಯದಲ್ಲಿ ಏರುಪೇರೂ ಆಗಬಹುದು. ಬನ್ನಿ, ಈ ಬಗ್ಗೆ ವಿಸ್ತೃತವಾಗಿ ತಿಳಿಯೋಣ.

Blood Pressure

ರಕ್ತದೊತ್ತಡ ಹೆಚ್ಚು ಇಳಿಯಬಹುದು

ಚಿಯಾ ಬೀಜಗಳು ರಕ್ತದೊತ್ತಡದ ಸಮಸ್ಯೆ ಇದ್ದವರಿಗೆ ಒಳ್ಳೆಯದು ಎಂದು ನೀವು ಹೇಳಿರುವುದನ್ನು ಕೇಳಿರಬಹುದು. ನಿಜವೇ ಇದು. ಚಿಯಾ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಪೆಪ್ಟೈಡ್‌ಗಳಿದ್ದು ಇವು ನೈಸರ್ಗಿಕವಾಗಿಯೇ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಆ ಮೂಲಕ ಹೃದಯದ ಆರೋಗ್ಯಕ್ಕೂ ಇವು ಸ್ನೇಹಿಯಾಗಿಯೇ ವರ್ತಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುವ ತಾಕತ್ತು ಚಿಯಾ ಬೀಜಗಳಿಗಿರುವುದು ಹೌದೇ ಆದರೂ, ನೀವು ರಕ್ತದೊತ್ತಡಕ್ಕೆ ಈಗಾಗಲೇ ಔಷಧಿ ಸೇವಿಸುತ್ತಿದ್ದರೆ ಒಮ್ಮೆ ಯೋಚಿಸಿ. ಯಾಕೆಂದರೆ, ರಕ್ತದೊತ್ತಡಕ್ಕಾಗಿ ನೀವು ಸೇವಿಸುವ ಆಂಟಿ ಹೈಪರ್‌ಟೆನ್ಸಿವ್‌ ಮಾತ್ರೆಗಳ ಜೊತೆಗೆ ಚಿಯಾ ಬೀಜಗಳನ್ನೂ ಸೇವಿಸುವುದರಿಂದ ನೀವು ಅಂದುಕೊಂಡದ್ದಕ್ಕಿಂತಲೂ ರಕ್ತದ ಒತ್ತಡ ಹೆಚ್ಚು ಇಳಿಯುವ ಸಾಧ್ಯತೆಗಳಿವೆ!

ಬ್ಲಡ್‌ ಥಿನ್ನರ್‌ ತೆಗೆದುಕೊಳ್ಳುತ್ತಿದ್ದರೆ ಎಚ್ಚರ

ಚಿಯಾ ಬೀಜಗಳಲ್ಲಿ ಆಂಟಿ ಪ್ಲೇಟ್‌ಲೆಟ್‌ ಗುಣವಿದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ಹೃದಯದ ಆರೋಗ್ಯಕ್ಕೆ ಪೂರಕವೇ ಆದರೂ, ನೀವು ಈಗಾಗಲೇ ಬ್ಲಡ್‌ ಥಿನ್ನರ್‌ನಂತಹ ಔಷಧಿಗಳನ್ನು ನಿಮ್ಮ ಹೃದಯದ ಸಮಸ್ಯೆಗಾಗಿ ತೆಗೆದುಕೊಳ್ಳುತ್ತಿದ್ದರೆ, ರಕ್ರಸ್ರಾವದಂತಹ ಸಮಸ್ಯೆಗೂ ದೂಡಬಹುದು! ಹಾಗಾಗಿ ಈ ಬಗ್ಗೆ ಎಚ್ಚರಿಕೆ ಇರಲಿ.

heart attack and Diabetes control

ಸಕ್ಕರೆ ಅಂಶ ಹೆಚ್ಚು ಇಳಿಯಬಹುದು

ಚಿಯಾ ಬೀಜಗಳು ಮಧುಮೇಹಕ್ಕೆ ಬಹಳ ಒಳ್ಳೆಯದು. ಯಾಕೆಂದರೆ ಇದು ರಕ್ತದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಪ್ರಚೋದಿಸಿ, ರಕ್ತಕ್ಕೆ ಸಕ್ಕರೆಯಂಶ ಸೇರುವುದನ್ನು ನಿಧಾನಗೊಳಿಸುತ್ತದೆ. ಇದೆಲ್ಲ ಒಳ್ಳೆಯದೇ ಆದರೂ, ನೀವು ಈಗಾಗಲೇ ಮಧುಮೇಹಕ್ಕಾಗಿ ಇನ್ಸುಲಿನ್‌ನಂತಹ ಔಷಧಿಗಳನ್ನು ಪಡೆಯುತ್ತಿದ್ದರೆ, ನಿಮ್ಮ ಶುಗರ್‌ ಲೆವೆಲ್‌ ಅನ್ನು ಪರೀಕ್ಷೆ ಮಾಡಿಕೊಳ್ಳಿ. ಚಿಯಾ ಬೀಜಗಳೂ ಸ್ವಲ್ಪ ಪ್ರಮಾಣದಲ್ಲಿ ಈ ಕೆಲಸ ಮಾಡುವುದರಿಂದ ಸಕ್ಕರೆಯ ಮಟ್ಟ ಅಂದುಕೊಂಡದ್ದಕ್ಕಿಂತ ಹೆಚ್ಚು ಇಳಿಯಬಹುದು. ಹೀಗಾಗಿ, ವೈದ್ಯರನ್ನು ಸಂಪರ್ಕಿಸಿ, ಔಷಧಿಯ ಮಟ್ಟವನ್ನು ಬೇಕಾದಷ್ಟಕ್ಕೆ ಬದಲಾಯಿಸಿಕೊಳ್ಳಿ.

Chia Seeds Digestive Boosting Foods

ನಾರಿನ ಹೆಚ್ಚಾದರೂ ಒಳ್ಳೆಯದಲ್ಲ

ಚಿಯಾ ಬೀಜಗಳಲ್ಲಿ ಹೆಚ್ಚು ನಾರಿನಂಶವಿದೆ. ಕೆಲವೊಮ್ಮೆ ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ನಾರಿನಂಶ ಇದರಿಂದ ಲಬ್ಯವಾಗಬಹುದು. ನಿತ್ಯವೂ ಚಿಯಾ ಬೀಜಗಳನ್ನು ಸೇವಿಸುವ ಮಂದಿ ಹಿತಮಿತವಾಗಿ ತೆಗೆದುಕೊಳ್ಳುವ ಬಗ್ಗೆ ಯೋಚಿಸಿ. ನಾರಿನಂಶ ಹೆಚ್ಚಾದರೆ, ಔಷಧ ದೇಹದಲ್ಲಿ ಕರಗುವ ಸಾಮರ್ಥ್ಯ ಕಡಿಮೆಯಾಗುತ್ತದೆ. ನೀವು ಮಾತ್ರೆಗಳನ್ನು ನಿತ್ಯವೂ ಸೇವಿಸುವವರಾಗಿದ್ದರೆ, ಚಿಯಾ ಬೀಜಗಳು ನಿಮ್ಮ ಮಾತ್ರೆಗಳನ್ನು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಹೀರಿಕೆಯಾಗದಂತೆ ಮಾಡಬಹುದು. ಹೀಗಾಗಿ, ನೀವು ಔಷಧಿ ಸೇವಿಸುವ ಹೊತ್ತು ಹಾಗೂ ಚಿಯಾ ಬೀಜಗಳನ್ನು ಸೇವಿಸುವ ಹೊತ್ತಿನ ಸಮತೋಲನ ಮಾಡಿಕೊಳ್ಳಲು ವೈದ್ಯರ ಸಲಹೆ ಪಡೆಯಿರಿ. ಅಗತ್ಯಕ್ಕಿಂತ ಹೆಚ್ಚು ಚಿಯಾಬೀಜಗಳನ್ನು ಸೇವಿಸಬೇಡಿ.

ಇದನ್ನೂ ಓದಿ: Breakfast Tips: ಬೆಳಗಿನ ಉಪಾಹಾರಕ್ಕೆ ಈ 5 ಬಗೆಯ ಆಹಾರಗಳನ್ನು ಸೇವಿಸಬೇಡಿ!

ಕಡಿಮೆ ಪ್ರಮಾಣದಿಂದ ಆರಂಭಿಸಿ

ನೀವು ಚಿಯಾ ಬೀಜಗಳನ್ನು ಸೇವಿಸಲು ಆರಂಭಿಸುವವರಾಗಿದ್ದರೆ, ಒಮ್ಮೆಲೇ ಅಧಿಕವಾಗಿ ತೆಗೆದುಕೊಳ್ಳಬೇಡಿ. ಕಡಿಮೆ ಪ್ರಮಾಣದಿಂದ ಆರಂಭಿಸಿ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಯಿದ್ದರೂ, ವೈದ್ಯರನ್ನು ಸಂಪರ್ಕಿಸಿ, ನಂತರ ಸೇವಿಸಿ. ಚಿಯಾ ಬೀಜಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಒಮೆಗಾ- 3, ನಾರಿನಂಶ, ಆಂಟಿ ಆಕ್ಸಿಡೆಂಟ್‌ಗಳೆಲ್ಲ ಇದ್ದರೂ, ಇವುಗಳು ಔಷಧಿ ಸೇವಿಸುತ್ತಿರಯವ ಮಂದಿಯ ದೇಹದಲ್ಲಿ ವರ್ತಿಸುವ ಪರಿಣಾಮವೇ ಬೇರೆ. ಹಾಗಾಗಿ, ಈಗಾಗಲೇ, ರಕ್ತದೊತ್ತಡ, ಹೃದಯದ ಸಮಸ್ಯೆ, ಮಧುಮೇಹ ಮತ್ತಿತರ ಸಮಸ್ಯೆಗಳಿಗೆ ಔಷಧಿ ಸೇವಿಸುತ್ತಿರುವ ಮಂದಿ ವೈದ್ಯರ ಸಲಹೆ ಪಡೆದು ಸೇವಿಸಿ. ಅಥವಾ, ಔಷಧಿಯ ಸಮಯಕ್ಕೂ ಚಿಯಾ ಬೀಜಗಳ ಸೇವನೆಗೂ ಕೊಂಚ ಅಂತರವಿಟ್ಟು ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಯಾವುದಕ್ಕೂ ವೈದ್ಯರ ಸಲಹೆ ಬಹಳ ಮುಖ್ಯ, ನೆನಪಿಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ರಾತ್ರಿ ಪದೇಪದೆ ಬಾಯಾರಿಕೆ‌ ಆಗುತ್ತದೆಯೆ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು

ರಾತ್ರಿ ಮತ್ತೆ ಮತ್ತೆ ಬಾಯಾರಿಕೆಯಾಗುವುದರ ಹಿಂದೆ ಹಲವು ಕಾರಣಗಳಿರುತ್ತವೆ. ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಉತ್ತಮ ಆರೋಗ್ಯವನ್ನು (Health Tips) ಕಾಪಾಡಿಕೊಳ್ಳಲು ರಾತ್ರಿ ಬಾಯಾರಿಕೆಯನ್ನು ಲಘುವಾಗಿ ಪರಿಗಣಿಸಬೇಡಿ. ರಾತ್ರಿ ಬಾಯಾರಿಕೆಯಾಗಲು ಹಲವು ಕಾರಣಗಳು ಇರುತ್ತವೆ. ಅವು ಯಾವುದು, ಅದಕ್ಕೆ ಪರಿಹಾರವೇನು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Health Tips
Koo

ಅನೇಕ ಬಾರಿ ರಾತ್ರಿಯಲ್ಲಿ ಹೆಚ್ಚು ಬಾಯಾರಿಕೆಯಾಗುತ್ತದೆ (thirst problem). ಇದರಿಂದ ನಿದ್ರೆಗೂ (sleeping problem) ತೊಂದರೆಯಾಗುತ್ತದೆ. ರಾತ್ರಿ ಹೆಚ್ಚು ಬಾಯಾರಿಕೆಯಾಗುವುದು ಸಾಮಾನ್ಯ ಎಂದುಕೊಳ್ಳಬಾರದು. ಇದು ಗಂಭೀರ ಆರೋಗ್ಯ (Health Tips) ಸಮಸ್ಯೆಯ ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ರಾತ್ರಿ ಬಾಯಾರಿಕೆಯನ್ನು (night thirst) ನಿರ್ಲಕ್ಷಿಸುವುದು ಸರಿಯಲ್ಲ.

ರಾತ್ರಿ ಮತ್ತೆ ಮತ್ತೆ ಬಾಯಾರಿಕೆಯಾಗುವುದರ ಹಿಂದೆ ಹಲವು ಕಾರಣಗಳಿರುತ್ತದೆ. ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಹೀಗಾಗಿ ರಾತ್ರಿ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದ್ದರೆ ಅದನ್ನು ಲಘುವಾಗಿ ಪರಿಗಣಿಸಬೇಡಿ. ರಾತ್ರಿ ಬಾಯಾರಿಕೆಯಾಗಲು ಹಲವು ಕಾರಣಗಳು ಇರುತ್ತವೆ.

Health Tips
Health Tips


ಮಧುಮೇಹ

ರಾತ್ರಿಯಲ್ಲಿ ಹೆಚ್ಚು ಬಾಯಾರಿಕೆ ಅನುಭವಿಸಲು ಸಾಮಾನ್ಯ ಕಾರಣವೆಂದರೆ ಮಧುಮೇಹ. ದೇಹದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ ಮೂತ್ರಪಿಂಡವು ಅದನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಇದು ದೇಹದಲ್ಲಿ ನೀರಿನ ಕೊರತೆಯನ್ನು ಉಂಟು ಮಾಡುತ್ತದೆ ಮತ್ತು ಬಾಯಾರಿಕೆಯನ್ನು ಹೆಚ್ಚಿಸುತ್ತದೆ.

ನಿರ್ಜಲೀಕರಣ

ದಿನವಿಡೀ ಸಾಕಷ್ಟು ನೀರು ಕುಡಿಯದಿದ್ದರೆ ರಾತ್ರಿಯಲ್ಲಿ ದೇಹವು ಹೆಚ್ಚು ನೀರಿನ ಅಗತ್ಯವನ್ನು ಅನುಭವಿಸಬಹುದು. ಇದು ರಾತ್ರಿಯಲ್ಲಿ ಆಗಾಗ್ಗೆ ಬಾಯಾರಿಕೆಗೆ ಕಾರಣವಾಗಬಹುದು. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯುವುದು ಮುಖ್ಯ.

Health Tips
Health Tips


ನಿದ್ರೆಯ ತೊಂದರೆ

ನಿದ್ರಾ ಸಮಸ್ಯೆಗಳು ರಾತ್ರಿಯಲ್ಲಿ ಬಾಯಾರಿಕೆಗೆ ಕಾರಣವಾಗುತ್ತವೆ. ಉಸಿರಾಟದ ತೊಂದರೆ ಉಂಟು ಮಾಡುವ ಸ್ಲೀಪ್ ಅಪ್ನಿಯದಿಂದ ಬಾಯಿ ಒಣಗುವುದು, ಹೆಚ್ಚಿನ ಬಾಯಾರಿಕೆಗೆ ಕಾರಣವಾಗುತ್ತದೆ. ಈ ಸಮಸ್ಯೆಯಾದಾಗ ನಿದ್ರೆಯ ಸಮಯದಲ್ಲಿ ಉಸಿರಾಟ ತೊಂದರೆ ಉಂಟಾಗುತ್ತದೆ. ದೇಹವು ಸಾಕಷ್ಟು ಆಮ್ಲಜನಕವನ್ನು ಪಡೆಯದೇ ಇದ್ದಾಗ ಬಾಯಿ ಒಣಗಲು ಪ್ರಾರಂಭಿಸುತ್ತದೆ. ಇದು ರಾತ್ರಿಯಲ್ಲಿ ಆಗಾಗ್ಗೆ ಬಾಯಾರಿಕೆಗೆ ಕಾರಣವಾಗುತ್ತದೆ ಮತ್ತು ನಿದ್ರೆಗೆ ತೊಂದರೆಯಾಗುತ್ತದೆ. ಸರಿಯಾದ ಚಿಕಿತ್ಸೆಯಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.

ಮೂತ್ರನಾಳದ ಸೋಂಕು

ಮೂತ್ರನಾಳದ ಸೋಂಕು ರಾತ್ರಿಯಲ್ಲಿ ಹೆಚ್ಚು ಬಾಯಾರಿಕೆಗೆ ಕಾರಣವಾಗಬಹುದು. ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಹೆಚ್ಚಿದ ಬಾಯಾರಿಕೆ ಈ ಸೋಂಕಿನ ಸಾಮಾನ್ಯ ಲಕ್ಷಣಗಳಾಗಿವೆ. ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾವು ಮೂತ್ರದ ಪ್ರದೇಶದಲ್ಲಿ ಸೋಂಕನ್ನು ಹರಡುತ್ತದೆ, ಇದು ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡುತ್ತದೆ. ಇದು ರಾತ್ರಿಯಲ್ಲಿ ಬಾಯಾರಿಕೆಯನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ ಮತ್ತು ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಇದರಿಂದ ಸರಿಯಾದ ಚಿಕಿತ್ಸೆಯನ್ನು ಮಾಡಬಹುದು.

ಇದನ್ನೂ ಓದಿ: Almonds For Health: ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು?

ಔಷಧಗಳ ಪರಿಣಾಮ

ಕೆಲವು ಔಷಧಗಳು ಸಹ ಬಾಯಾರಿಕೆಯನ್ನು ಹೆಚ್ಚಿಸಬಹುದು. ಅಂತಹ ಔಷಧವನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ.

ಪರಿಹಾರ

1. ರಾತ್ರಿಯಲ್ಲಿ ಬಾಯಾರಿಕೆಯಾಗದಂತೆ ತಡೆಯಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

2. ನಿರಂತರವಾಗಿ ಬಾಯಾರಿಕೆಯನ್ನು ಅನುಭವಿಸುತ್ತಿದ್ದರೆ ಖಂಡಿತವಾಗಿಯೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.

3. ಉತ್ತಮ ನಿದ್ರೆ ಮಾಡಿ. ನಿದ್ರಾ ಸಮಸ್ಯೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ.

4. ಸರಿಯಾದ ಮತ್ತು ಸಮತೋಲಿತ ಆಹಾರ ಸೇವಿಸಿ. ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರಲಿ.

5. ಬಾಯಾರಿಕೆಯ ಸಮಸ್ಯೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ ಮತ್ತು ಸಂಪೂರ್ಣ ತಪಾಸಣೆ ಮಾಡಿಸಿ.

Continue Reading

ಆರೋಗ್ಯ

Walking for Weight Loss: ಇಲ್ಲಿವೆ ಬಗೆಬಗೆಯ ವಾಕಿಂಗ್‌; ತೂಕ ಇಳಿಸಲು ಇವುಗಳಿಂದಲೂ ಸಾಧ್ಯ! ಟ್ರೈ ಮಾಡಿ ನೋಡಿ

Walking for Weight Loss: ತೂಕ ಇಳಿಸಲು ಹೊರಟ ಮಂದಿ ಯಾವ ಬಗೆಯ ವ್ಯಾಯಾಮದಲ್ಲಿ ತೂಕವನ್ನು ಖಂಡಿತ ಇಳಿಸಬಹುದು ಎಂಬ ಪ್ರಶ್ನೆಗೆ ಉತ್ತರವನ್ನು ಅಪೇಕ್ಷಿಸುತ್ತಾರೆ. ಇನ್ನೂ ಕೆಲವರಿಗೆ, ಯಾವ ಬಗೆಯ ವ್ಯಾಯಾಮವನ್ನೂ ನಿಯಮಿತವಾಗಿ ಮಾಡಲು ಸಾಧ್ಯವಾಗುವುದಿಲ್ಲ. ತೂಕ ಇಳಿಸುವುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಉಳಿಯುತ್ತದೆ. ನಿಯಮಿತ ನಡಿಗೆಯಿಂದಲೂ ತೂಕ ಇಳಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ ಮಂದಿಯೂ ಅನೇಕರಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

walking
Koo

ತೂಕ ಇಳಿಸಲು ಇಂದು ನೂರಾರು (Walking for Weight Loss) ದಾರಿಗಳಿವೆ. ಪ್ರತಿಯೊಬ್ಬರೂ ತಾವು ಮಾಡಿ ಯಶಸ್ವಿಯಾದ ಬಗೆಯನ್ನು ತಮ್ಮ ಹತ್ತಿರದವರಲ್ಲಿ ಹೇಳಿಕೊಳ್ಳುತ್ತಾರೆ. ಅದು ಡಯಟ್‌ ಇರಬಹುದು, ವ್ಯಾಯಾಮಗಳಿರಬಹುದು. ಒಟ್ಟಾರೆಯಾಗಿ, ತೂಕ ಇಳಿಸಲು ಹೊರಟ ಮಂದಿ ಯಾವ ಬಗೆಯ ವ್ಯಾಯಾಮದಲ್ಲಿ ತೂಕವನ್ನು ಖಂಡಿತ ಇಳಿಸಬಹುದು ಎಂಬ ಪ್ರಶ್ನೆಗೆ ಉತ್ತರವನ್ನು ಅಪೇಕ್ಷಿಸುತ್ತಾರೆ. ಇನ್ನೂ ಕೆಲವರಿಗೆ, ಯಾವ ಬಗೆಯ ವ್ಯಾಯಾಮವನ್ನೂ ನಿಯಮಿತವಾಗಿ ಮಾಡಲು ಸಾಧ್ಯವಾಗುವುದಿಲ್ಲ. ತೂಕ ಇಳಿಸುವುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಉಳಿಯುತ್ತದೆ. ಎಲ್ಲಿ ತಾನು ತಪ್ಪುತ್ತಿದ್ದೇನೆ ಎಂಬುದೂ ಅರ್ಥವಾಗುವುದಿಲ್ಲ. ಇನ್ನೂ ಕೆಲವರು, ಯಾವ ವ್ಯಾಯಾಮ, ಜಿಮ್‌ಗೂ ಗಂಟು ಬೀಳದೆ, ಕೇವಲ ವಾಕ್‌ ಮಾಡುವುದರಿಂದ ತಾನು ತೂಕ ಇಳಿಸುತ್ತೇನೆ, ಫಿಟ್‌ ಇರುತ್ತೇನೆ ಎಂದು ನಡಿಗೆಯನ್ನೇ ನಂಬುತ್ತಾರೆ. ನಿಯಮಿತ ನಡಿಗೆಯಿಂದಲೂ ತೂಕ ಇಳಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ ಮಂದಿಯೂ ಅನೇಕರಿದ್ದಾರೆ. ಬನ್ನಿ, ಕೇವಲ ನಡಿಗೆಯನ್ನೇ ನೀವು ನೆಚ್ಚಿಕೊಂಡಿರುವವರಾದರೆ, ನಡಿಗೆಯಿಂದ ತೂಕ ಇಳಿಸುವುದು ಹೇಗೆ ಎಂಬುದನ್ನು ನೋಡೋಣ.

Walking

ಇಂಟರ್ವಲ್‌ ವಾಕಿಂಗ್‌

ವಾಕ್‌ ಮಾಡುವಾಗ ಆಗಾಗ ಮಧ್ಯ ಮಧ್ಯ ಜೋರಾಗಿ ವೇಗವಾಗಿ ವಾಕ್‌ ಮಾಡುವುದು ಇಂಟರ್ವಲ್‌ ವಾಕಿಂಗ್‌. ಸ್ವಲ್ಪ ಕಾಲ ಜೋರಾದ ನಡಿಗೆ, ನಂತರ ನಿಧಾನವಾಗಿ ನಡಿಗೆಯ ವೇಗ ಕಡಿಮೆ ಮಾಡುವುದು, ಮತ್ತೆ ಜೋರಾಗಿ ನಡೆಯುವುದು, ಮತ್ತೆ ಸಾಮಾನ್ಯ ಸ್ಥಿತಿಯ ನಡಿಗೆ ಹೀಗೆ, ಇದನ್ನೇ ನಿತ್ಯವೂ ಮಾಡುವುದು. ಇಂತಹ ನಡಿಗೆಯಿಂದ ಹೆಚ್ಚು ಕ್ಯಾಲರಿಗಳು ಬರ್ನ್‌ ಆಗುವುದಲ್ಲದೆ, ಇದು ಒಳ್ಳೆಯ ಕಾರ್ಡಿಯೋನಂತೆ ಕೆಲಸ ಮಾಡುತ್ತದೆ. ಹೃದಯ ಬಡಿತ ಹೆಚ್ಚಾಗಿ, ದೇಹ ಚುರುಕಾಗಿತ್ತದೆ.

ಇನ್‌ಕ್ಲೈನ್‌ ವಾಕಿಂಗ್‌

ಈ ಬಗೆಯ ವಾಕಿಂಗ್‌ ಕೂಡಾ ತೂಕ ಇಳಿಸಲು ಹೆಚ್ಚು ಸೂಕ್ತವಾದ ವಾಕಿಂಗ್‌. ನಿಮ್ಮ ಮನೆಯ ಸುತ್ತಮುತ್ತ ಎಲ್ಲಾದರೂ ಏರುತಗ್ಗುಗಳ ಜಾಗವಿದ್ದರೆ ಹೀಗೆ ಮಾಡಬಹುದು. ಏರುಹಾದಿಯಲ್ಲಿ ವಾಕ್‌ ಮಾಡುವುದರಿಂದ ಮಾಂಸಖಂಡಗಳಿಗೆ ಒಳ್ಳೆಯ ವ್ಯಾಯಾಮ ದೊರಕಿ ಹೆಚ್ಚು ಕ್ಯಾಲರಿ ಬರ್ನ್‌ ಆಗುತ್ತದೆ.

The incidence of blood clots in the leg is reduced Benefits Of Walking

ಪವರ್‌ ವಾಕಿಂಗ್‌

ಇದು ಕಡಿಮೆ ಸಮಯದಲ್ಲಿ ಹೆಚ್ಚು ನಡಿಗೆ ಕ್ರಮ. ಇದರಲ್ಲಿ, ನೀವು ಪ್ರತಿದಿನ ವೇಗವಾಗಿ ನಡೆಯುತ್ತೀರಿ. ಆರಂಭದಿಂದ ಅಂತ್ಯದವರೆಗೂ ಒಂದೇ ಬಗೆಯಲ್ಲಿ ವೇಗವಾಗಿ ನಡೆದು ಬಹುಬೇಗನೆ ಒಂದು ಸೀಮಿತ ದೂರವನ್ನು, ಟಾರ್ಗೆಟ್‌ ಅನ್ನು ತಲುಪುತ್ತೀರಿ. ಇದರಿಂದ ಹೃದಯ ಬಡಿತ ಹೆಚ್ಚಾಗಿ, ಮೈಬೆವರಿ, ಹೆಚ್ಚು ಕ್ಯಾಲರಿ ಬರ್ನ್‌ ಆಗುತ್ತದೆ.

ಬ್ಯಾಕ್‌ವೆರ್ಡ್‌ ವಾಕಿಂಗ್‌

ಯಾವಾಗಲೂ ನಡೆಯುವುದಕ್ಕಿಂತ ಉಲ್ಟಾ ನಡೆದು ನೋಡಿ! ಹಿಮ್ಮುಖವಾಗಿ ನಡೆಯುವುದು ಅಷ್ಟು ಸುಲಭವಲ್ಲ. ಇದಕ್ಕೆ ನಮ್ಮ ಬೇರೆಯದೇ ಮಾಂಸಖಂಡಗಳು ಬಳಕೆಯಾಗುತ್ತವೆ. ಸಹಜವಾಗಿಯೇ, ನಿತಯವೂ ಮಾಡದ ಕೆಲಸವನ್ನು ಮಾಡುವ ಕಾರಣ, ಕಷ್ಟವಾಗುವುದರಿಂದ ಬಹುಬೇಗನೆ ಕ್ಯಾಲರಿ ಬರ್ನ್‌ ಆಗುತ್ತದೆ.

images of Walking Tips

ವೈಟೆಡ್‌ ವಾಕಿಂಗ್‌

ಈ ಬಗೆಯ ನಡಿಯಲ್ಲಿ ನಿಮ್ಮ ಎರಡೂ ಕೈಗಳಲ್ಲಿ ಭಾರವನ್ನೂ ಎತ್ತಿರುತ್ತೀರಿ. ಜಿಮ್‌ನಲ್ಲಿ ವ್ಯಾಯಾಮಕ್ಕೆ ಬಳಸುವ ಡಂಬಲ್ಸ್‌ ಎತ್ತಿಕೊಂಡು ವಾಕ್‌ ಮಾಡುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಕ್ಯಾಲರಿ ಬರ್ನ್‌ ಆಗುತ್ತದೆ.

ವಾಕಿಂಗ್‌ ಲೂಂಜಸ್‌

ವ್ಯಾಯಾಮಗಳನ್ನು ಮಾಡಿ ಅಭ್ಯಾಸ ಇರುವವರಿಗೆ ಲೂಂಜಸ್‌ ಬಗ್ಗೆ ತಿಳಿದಿಬಹುದು. ಈ ಲೂಂಜಸ್‌ ಅನ್ನು ಮಧ್ಯದಲ್ಲಿ ಮಾಡುತ್ತಾ ವಾಕ್‌ ಮಾಡುವುದರಿಂದ ಹೆಚ್ಚು ಕ್ಯಾಲರಿ ವರ್ನ್‌ ಮಾಡಬಹುದು.

walking after dinner

ಹೈ ನೀ ವಾಕಿಂಗ್‌

ಮೊಣಕಾಲನ್ನು ಎತ್ತರೆತ್ತರಕ್ಕೆ ಎತ್ತಿ ಇಡುತ್ತಾ ನಡೆಯುವುದು ಈ ಬಗೆಯ ವಾಕಿಂಗ್‌. ಇದರಲ್ಲೂ ಬೇಗನೆ ತೂಕ ಇಳಿಯುತ್ತದೆ.

ಸೈಡ್‌ ಸ್ಟೆಪ್ಸ್‌

ದೇಹದ ಬೇರೆ ಬೇರೆ ಮಾಂಸಖಂಡಗಳಿಗೆ ವ್ಯಾಯಾಮ ನೀಡಲು ವಾಕಿಂಗ್‌ ನಡುವೆ ಈ ಬದಲಾವಣೆ ಮಾಡಿಕೊಳ್ಳಬಹುದು. ಸೈಡ್‌ ಸ್ಟೆಪ್ಸ್‌ ಹಾಕುತ್ತಾ ನಡೆಯುವುದರಿಂದ ಹೆಚ್ಚು ಕ್ಯಾಲರಿ ಕರಗಿಸಬಹುದು.

jogging girl

ಜಾಗಿಂಗ್‌ ಇಂಟರ್ವಲ್ಸ್‌

ವಾಕ್‌ ಮಾಡುತ್ತಾ ಮಧ್ಯದಲ್ಲಿ ಸ್ವಲ್ಪ ದೂರ ಜಾಗಿಂಗ್‌ ಮಾಡುವುದು ಕೂಡಾ ದೇಹವನ್ನು ಚುರುಕಾಗಿಸಿ, ಹೃದಯ ಬಡಿತ ವೇಗವಾಗಿಸಿ, ಒಳ್ಳೆಯ ವ್ಯಾಯಾಮ ನೀಡುತ್ತದೆ.

ಇದನ್ನೂ ಓದಿ: Almonds For Health: ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು?

ಮೈಂಡ್‌ಫುಲ್‌ ವಾಕಿಂಗ್‌

ದೇಹದ ಭಂಗಿ, ಉಸಿರಾಟದ ಕ್ರಮ ಎಲ್ಲವನ್ನೂ ಗಮನಿಸುತ್ತಾ, ಒಂದು ರಿದಮ್‌ನಲ್ಲಿ ಒಂದು ನಿಗದಿತ ದೂರವನನು ನಿಯಮಿತವಾಗಿ ಕ್ರಮಿಸುವುದು. ಇಡೀ ನಡಿಗೆಯನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಅನುಭವಿಸುವ ಕ್ರಮ ಇದರಲ್ಲಿದೆ. ಇದರಿಂದ ಮಾನಸಿಕವಾಗಿಯೂ, ದೈಹಿಕವಾಗಿಯೂ ಲಾಭ ಪಡೆಯಬಹುದು.

Continue Reading

ಆರೋಗ್ಯ

Almonds For Health: ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು?

Almonds for Health: ಬಾದಾಮಿಯು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ನೆರವಾಗುತ್ತದೆ. ವಿಟಮಿನ್‌ ಇ, ಕ್ಯಾಲ್ಶಿಯಂ, ಫಾಸ್ಫರಸ್‌, ಜಿಂಕ್‌, ಸೆಲೆನಿಯಂ, ತಾವ್ರ, ನಯಾಸಿನ್‌, ಕಬ್ಬಿಣ, ಮೆಗ್ನೀಶಿಯಂ ಮುಂತಾದ ಹಲವಾರು ಒಳ್ಳೆಯ ಅಂಶಗಳನ್ನು ಒಳಗೊಂಡಿರುವ ಇದನ್ನು ಎಷ್ಟು ತಿನ್ನಬೇಕು? ನಮಗಿಷ್ಟ ಬಂದಷ್ಟು ತಿನ್ನಬೇಕೆ ಅಥವಾ ಅದಕ್ಕೊಂದು ಪ್ರಮಾಣ ಇದೆಯೇ? ಈ ಕುರಿತ ಮುಖ್ಯ ಮಾಹಿತಿ ಇಲ್ಲಿದೆ.

VISTARANEWS.COM


on

Almonds
Koo

ಬೀಜಗಳೆಲ್ಲ ಸದ್ಗುಣಿಗಳೇ, ಅದರಲ್ಲಿ (Almonds for Health) ಅನುಮಾನ ಬೇಡ! ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಇರುವವರೆಲ್ಲ ಸಮರ್ಥರೇ ಆದರೂ ಚಿನ್ನ, ಬೆಳ್ಳಿ, ಕಂಚು ಎಂದು ಪದಕಗಳನ್ನು ನೀಡುವುದಿಲ್ಲವೇ? ಹಾಗೆಯೇ, ಬೀಜಗಳಲ್ಲಿ ಚಿನ್ನದ ಪದಕ ಸಲ್ಲುವುದು ಬಾದಾಮಿಗೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಇದು ನೆರವಾಗುತ್ತದೆ. ವಿಟಮಿನ್‌ ಇ, ಕ್ಯಾಲ್ಶಿಯಂ, ಫಾಸ್ಫರಸ್‌, ಜಿಂಕ್‌, ಸೆಲೆನಿಯಂ, ತಾವ್ರ, ನಯಾಸಿನ್‌, ಕಬ್ಬಿಣ, ಮೆಗ್ನೀಶಿಯಂ ಮುಂತಾದ ಹಲವಾರು ಒಳ್ಳೆಯ ಅಂಶಗಳನ್ನು ಒಳಗೊಂಡಿರುವ ಇದನ್ನು ಎಷ್ಟು ತಿನ್ನಬೇಕು? ನಮಗಿಷ್ಟ ಬಂದಷ್ಟು ತಿನ್ನಬೇಕೆ ಅಥವಾ ಅದಕ್ಕೊಂದು ಪ್ರಮಾಣ ಇದೆಯೇ? ಸೇವಿಸಬೇಕಾದ ಬಾದಾಮಿಯ ಪ್ರಮಾಣ ನಿರ್ಧಾರವಾಗುವುದು ಆಯಾ ವ್ಯಕ್ತಿಗಳ ಆರೋಗ್ಯ ಸ್ಥಿತಿ, ಆಹಾರ ಪದ್ಧತಿ ಮತ್ತು ಪ್ರಾದೇಶಿಕ ಹವಾಮಾನಗಳ ಮೇಲೆ. ಚಳಿ ದೇಶಗಳಲ್ಲಿ ಸೇವಿಸುವಷ್ಟು ಬಾದಾಮಿಗಳ ಸೇವನೆ ಉಷ್ಣವಲಯದ ದೇಶಗಳಲ್ಲಿ ಅಗತ್ಯವಿಲ್ಲ. ಇಡಿಯಾದ ಒಣ ಬಾದಾಮಿಗಳು ಭಾರತದಂಥ ಉಷ್ಣವಲಯದ ಹವಾಮಾನಗಳಲ್ಲಿ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹಾಗಾಗಿ ಅವುಗಳನ್ನು ನೀರು ಅಥವಾ ಹಾಲಿನಲ್ಲಿ ರಾತ್ರಿಡೀ ನೆನೆಸಿ, ಬೆಳಗ್ಗೆ ಸೇವಿಸುವುದು ಕ್ಷೇಮ. ಸಾಮಾನ್ಯ ವ್ಯಕ್ತಿಗೆ ಬೆಳಗಿನ ಉಪಾಹಾರದೊಂದಿಗೆ, ನೆನೆಸಿದ ಏಳೆಂಟು ಬಾದಾಮಿಗಳು ಸಾಕಾಗಬಹುದು. ಆದರೆ ಕಠಿಣ ದೇಹಶ್ರಮದ ಕೆಲಸ ಮಾಡುವ ಯುವಜನರಿಗೆ ೨೦-೨೨ ಬಾದಾಮಿಗಳವರೆಗೂ ಬೇಕಾಗಬಹುದು. ತಮಗೆಷ್ಟು ಬೇಕು ಎಂಬುದನ್ನು ಆಯಾ ವ್ಯಕ್ತಿಗಳೇ ನಿರ್ಧರಿಸಿಕೊಳ್ಳಬಹುದು.

Almonds Dry Fruits For Hair Fall

ಪೌಷ್ಟಿಕಾಂಶಗಳು ಏನಿವೆ?

ವಿಟಮಿನ್‌ ಇ, ವಿಟಮಿನ್‌ ಬಿ1, ಥಿಯಮಿನ್‌, ವಿಟಮಿನ್‌ ಬಿ೩, ಫೋಲೇಟ್‌, ವಿಟಮಿನ್‌ ಬಿ9, ಪ್ರೊಟೀನ್‌, ನಾರು, ಮೆಗ್ನೀಶಿಯಂ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳು ಪ್ರಧಾನವಾಗಿವೆ. ಕೆಲವು ಸೂಕ್ಷ್ಮ ಪೋಷಕಾಂಶಗಳು ಸಹ ಇದರಿಂದ ದೊರೆಯುತ್ತವೆ. ಇದರಿಂದ ಮೂಳೆಗಳ ಸಾಂದ್ರತೆ ಬಲಗೊಳ್ಳುತ್ತದೆ, ಕೆಂಪು ರಕ್ತಕಣಗಳ ಸಂಖ್ಯೆ ವೃದ್ಧಿಗೊಳ್ಳುತ್ತದೆ, ಸ್ನಾಯುಗಳು ಸದೃಢವಾಗುತ್ತವೆ. ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಹೃದ್ರೋಗಿಗಳು ಮತ್ತು ಮಧುಮೇಹಿಗಳು ಸಹ ಸೇವಿಸಬಹುದಾದ ಆಹಾರವಿದಾಗಿದ್ದು, ಕೊಲೆಸ್ಟ್ರಾಲ್‌ ಮತ್ತು ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ. ಜೀರ್ಣಾಂಗದ ಕ್ಯಾನ್ಸರ್‌ ತಡೆಗಟ್ಟಲು ನೆರವಾಗುವ ಈ ಪುಟ್ಟ ಬೀಜಗಳು, ಅಲ್ಜೈಮರ್ಸ್‌ ಉಲ್ಭಣಿಸುವುದನ್ನು ತಡೆಯಲು ಸಹಕಾರಿ. ತೆಂಗಿನ ಹಾಲಿನಂತೆ ಬಾದಾಮಿಯ ಹಾಲು ಸಹ ಲಭ್ಯವಿದೆ. ಮಾತ್ರವಲ್ಲ, ಬಾದಾಮಿ ಎಣ್ಣೆ ಮತ್ತು ಪೀನಟ್‌ ಬಟರ್‌ನಂತೆ ಬಾದಾಮಿ ಬೆಣ್ಣೆ ಸಹ ದೊರೆಯುತ್ತವೆ.
ದಿನದಲ್ಲಿ ಹಸಿವಾದಾಗ ಸಿಕ್ಕಿದ್ದನ್ನು ಬಾಯಿಗೆ ಹಾಕುವ ಬದಲು, ಒಂದಿಷ್ಟು ಬಾದಾಮಿಗಳನ್ನು ಬಾಯಾಡುವುದು ಎಲ್ಲಾ ಲೆಕ್ಕದಲ್ಲೂ ಸೂಕ್ತವಾದದ್ದು. ಹೆಚ್ಚಿನ ಬಾದಾಮಿಗಳ ಸೇವನೆಯಿಂದ ನಮ್ಮ ಜಠರದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುವ ಬ್ಯೂಟರೇಟ್‌ನಿಂದ ದೇಹಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಜೀರ್ಣಾಂಗದಿಂದ ನಮ್ಮ ರಕ್ತವನ್ನು ಪ್ರವೇಶಿಸುವ ಈ ರಾಸಾಯನಿಕದಿಂದ ಶ್ವಾಸಕೋಶ, ಯಕೃತ್ತು ಮತ್ತು ಮೆದುಳಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಮಾತ್ರವಲ್ಲ, ಹಾನಿಕಾರಕ ಬ್ಯಾಕ್ಟೀರಿಯಾಗಳು ನಮ್ಮ ಪರಿಚಲನಾ ವ್ಯವಸ್ಥೆ ಪ್ರವೇಶಿಸುವುದನ್ನು ತಡೆಯುವ ಬ್ಯೂಟರೇಟ್‌, ಹೊಟ್ಟೆಯ ಉರಿಯೂತವನ್ನೂ ಶಮನಗೊಳಿಸುತ್ತದೆ. ಬಾದಾಮಿಯಿಂದ ಚರ್ಮದ ಕಾಂತಿ ಹೆಚ್ಚುವುದೇ ಅಲ್ಲದೆ, ಕೂದಲಿನ ಆರೋಗ್ಯವೂ ವೃದ್ಧಿಸುತ್ತದೆ.

ಹೆಚ್ಚಾದರೇನಾಗುತ್ತದೆ?

ಇದರಲ್ಲಿ ಸತ್ವ ಮಾತ್ರವಲ್ಲ, ಕ್ಯಾಲರಿಯೂ ಹೆಚ್ಚು. ಹಾಗಾಗಿ ಅತಿಯಾಗಿ ತಿಂದರೆ ತೂಕ ಹೆಚ್ಚುವುದು ನಿಶ್ಚಿತ. ಅದರಲ್ಲೂ ಬಾದಾಮಿಯಲ್ಲಿ ಉತ್ತಮವಾದ ಕೊಬ್ಬಿನಂಶ ಹೇರಳವಾಗಿದೆ. ಹಾಗಾಗಿ ತಿಳಿದು ತಿನ್ನುವುದು ಒಳ್ಳೆಯದು.

Improved Digestion Tea Benefits

ಜೀರ್ಣಾಂಗಗಳ ಸಮಸ್ಯೆ

ಈ ಬೀಜಗಳಲ್ಲಿ ನಾರು ವಿಫುಲವಾಗಿದೆ. ನಾರಿನಂಶ ಜೀರ್ಣಾಂಗಗಳಿಗೆ ಒಳ್ಳೆಯದೇ ಎನ್ನುವುದು ಹೌದಾದರೂ, ಅದನ್ನು ಅತಿಯಾಗಿ ತಿಂದರೆ ಹೊಟ್ಟೆ ಏರುಪೇರಾಗುತ್ತದೆ. ಆಗ ಸಾಕಷ್ಟು ನೀರು ಕುಡಿಯಬೇಕು. ಅದೂ ಕಡಿಮೆಯಾದರೆ ಹೊಟ್ಟೆ ಉಬ್ಬರಿಸಿ, ಅಜೀರ್ಣದ ಬಾಧೆ ಕಾಡುತ್ತದೆ.

ಆಕ್ಸಲೇಟ್‌ಗಳು

ಬಾದಾಮಿಯಲ್ಲಿ ಆಕ್ಸಲೇಟ್‌ ಅಂಶವಿದೆ. ಇದರಿಂದ ಹೆಚ್ಚಿನವರಿಗೆ ತೊಂದರೆಯಿಲ್ಲ. ಆದರೆ ಕಿಡ್ನಿ ಕಲ್ಲಿನ ಸಮಸ್ಯೆ ಇರುವವರಿಗೆ ಆಕ್ಸಲೇಟ್‌ ಇರುವ ಆಹಾರಗಳು ಸೂಕ್ತವಲ್ಲ. ಅಂಥವರು ಬಾದಾಮಿಯನ್ನು ಅಧಿಕ ಪ್ರಮಾಣದಲ್ಲಿ ತಿನ್ನುವುದು ತೊಂದರೆ ನೀಡಬಹುದು.

ಇದನ್ನೂ ಓದಿ: Beetroot Side Effects: ಬೀಟ್‌ರೂಟ್‌ ಎಲ್ಲರಿಗೂ ಒಳ್ಳೆಯದಲ್ಲ! ಯಾರು ಇದನ್ನು ತಿನ್ನಬಾರದು ಗೊತ್ತೇ?

ಫೈಟಿಕ್‌ ಆಮ್ಲ

ಪೋಷಕಾಂಶಗಳನ್ನು ಹೀರಿಕೊಳ್ಳಲು ತೊಂದರೆ ನೀಡುವಂಥ ಅಂಶವಿದು. ಇದು ಬಾದಾಮಿಯಲ್ಲಿದೆ. ಸಮತೋಲಿತ ಆಹಾರ ಸೇವಿಸುತ್ತಿರುವವರಿಗೆ ಇದರಿಂದ ಅಂಥ ತೊಂದರೆಯೇನೂ ಆಗುವುದಿಲ್ಲ. ಆದರೆ ಅಧಿಕ ಪ್ರಮಾಣದಲ್ಲಿ ಬಾದಾಮಿಯನ್ನು ದೀರ್ಘ ಕಾಲದವರೆಗೆ ತಿನ್ನುತ್ತಿದ್ದರೆ ಫೈಟಿಕ್‌ ಆಮ್ಲದಿಂದ ಸಮಸ್ಯೆ ಆದರೆ ಅಚ್ಚರಿಯಿಲ್ಲ.

Continue Reading

ಆರೋಗ್ಯ

Shravan Recipes: ಶ್ರಾವಣ ಮಾಸದಲ್ಲಿ ಸಾಬುದಾನದ ಈ 5 ಖಾದ್ಯಗಳನ್ನು ಮಾಡಿ ನೋಡಿ

Shravan Recipes: ಶ್ರಾವಣ ಮಾಸದಲ್ಲಿ (Shravan 2024) ಉಪವಾಸ ವ್ರತಗಳನ್ನು ಆಚರಿಸುವವರು ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವ ನಿಯಮಗಳಿವೆ. ಉಪವಾಸ ನಿರತರಿಗೆ ತಾಜಾ ತರಕಾರಿ ಮತ್ತು ಹಣ್ಣುಗಳ ಜೊತೆಗೆ, ಸಾಬುದಾನವು ಭಾರತದಲ್ಲಿ ಅತ್ಯಂತ ಜನಪ್ರಿಯ ಆಹಾರವಾಗಿದೆ. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಾಬುದಾನವನ್ನು ಪ್ರತಿ ದಿನ ಒಂದೇ ರೀತಿಯಾಗಿ ತಿನ್ನುವುದು ಬೇಸರ ಮೂಡಿಸಬಹುದು. ಅದಕ್ಕಾಗಿ ಸಾಬುದಾನದ ವಿವಿಧ ರೀತಿಯ ಖಾದ್ಯಗಳ ವಿವರ ಇಲ್ಲಿದೆ.

VISTARANEWS.COM


on

By

shravan foods
Koo

ಭಾರತದಲ್ಲಿ ಶ್ರಾವಣ ಮಾಸವು ಹೆಚ್ಚಿನ ಪ್ರಾಮುಖ್ಯತೆಯನ್ನು (Shravan Recipes) ಹೊಂದಿದೆ. ಶಿವನ ಆಶೀರ್ವಾದವನ್ನು ಪಡೆಯಲು ಹೆಚ್ಚಿನ ಭಕ್ತರು (Shravan 2024) ಉಪವಾಸ ವ್ರತಾಚರಣೆ (fast) ಮಾಡುತ್ತಾರೆ. ಉಪವಾಸ ನಿರತರು ಸಾತ್ವಿಕ ಆಹಾರವನ್ನು (fasting food) ಮಾತ್ರ ಸೇವಿಸುತ್ತಾರೆ. ಉಪವಾಸ ವ್ರತಗಳನ್ನು ಆಚರಿಸುವವರು ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವ ನಿಯಮಗಳಿವೆ. ಉಪವಾಸ ನಿರತರಿಗೆ ತಾಜಾ ತರಕಾರಿ (Vegetables) ಮತ್ತು ಹಣ್ಣುಗಳ (fruits) ಜೊತೆಗೆ, ಸಾಬುದಾನವು (Sabudana) ಭಾರತದಲ್ಲಿ ಅತ್ಯಂತ ಜನಪ್ರಿಯ ಉಪವಾಸದ ಆಹಾರವಾಗಿದೆ.

ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಾಬುದಾನವನ್ನು ಪ್ರತಿ ದಿನ ಒಂದೇ ರೀತಿಯಾಗಿ ತಿನ್ನುವುದು ಬೇಸರ ಮೂಡಿಸಬಹುದು. ಅದಕ್ಕಾಗಿ ಸಾಬುದಾನದ ವಿವಿಧ ರೀತಿಯ ಖಾದ್ಯಗಳನ್ನು ಮಾಡಿ ಸೇವಿಸಬಹುದು.

ಮರಗೆಣಸಿನ ಬೇರುಗಳಿಂದ ತಯಾರಿಸುವ ಸಾಬುದಾನ ವ್ರತ ಸ್ನೇಹಿ ಆಹಾರಗಳಲ್ಲಿ ಒಂದು. ಇದನ್ನು ಉಪವಾಸ ನಿರತರು ಸೇವಿಸುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವವನ್ನು ಪಡೆಯಬಹುದು. ಹಲವಾರು ಪೋಷಕಾಂಶಗಳನ್ನು ಹೊಂದಿರುವ ಸಾಬುದಾನ ನಂಬರ್ ಒನ್ ಫಾಸ್ಟಿಂಗ್ ಫುಡ್ ಎಂದೇ ಪರಿಗಣಿಸಲಾಗಿದೆ.

ಟಪಿಯೋಕಾ ಮುತ್ತುಗಳು ಎಂದೂ ಕರೆಯಲ್ಪಡುವ ಸಾಬುದಾನವು ಅನೇಕ ಭಾರತೀಯ ಮನೆಗಳಲ್ಲಿ ಪ್ರಧಾನವಾಗಿ ಬಳಸಲಾಗುತ್ತದೆ. ವಿಶೇಷವಾಗಿ ನವರಾತ್ರಿ, ಜನ್ಮಾಷ್ಟಮಿ ಮತ್ತು ಶ್ರಾವಣ ಮಾಸದ ಉಪವಾಸದ ಅವಧಿಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಸಾಬುದಾನ ಅಥವಾ ಸಾಗೋ ಮೂಲತಃ ಸಣ್ಣ ಪಿಷ್ಟದ ಮುತ್ತುಗಳು. ಇದರಲ್ಲಿ ಹೆಚ್ಚಿನ ಪಿಷ್ಟದ ಅಂಶವಿರುವುದರಿಂದ ಸುಲಭವಾಗಿ ಬೇಯಿಸಬಹುದು. ಸಿಹಿ ಮತ್ತು ಖಾರ ಎರಡಕ್ಕೂ ಹೊಂದಿಕೆಯಾಗುವ ಸಾಗುವಿನ ರುಚಿ ಮಕ್ಕಳಿಂದ ಹಿಡಿದು ವೃದ್ಧರಿಗೂ ಪ್ರಿಯವಾಗುವುದು.

ಆರೋಗ್ಯ ಪ್ರಯೋಜನಗಳು ಏನು?

ಉಪವಾಸ ನಿರತರು ಸಾಮಾನ್ಯವಾಗಿ ಆಹಾರ ಸೇವಿಸದೇ ದೀರ್ಘಕಾಲದವರೆಗೆ ಇರಬೇಕಾಗುತ್ತದೆ. ಹೀಗಾಗಿ ನಿರಂತರ ಶಕ್ತಿಯನ್ನು ಒದಗಿಸುವ ಯಾವುದನ್ನಾದರೂ ಸ್ವಲ್ಪ ಸಾತ್ವಿಕ ಆಹಾರ ಸೇವಿಸುವುದು ಬಹುಮುಖ್ಯವಾಗಿರುತ್ತದೆ. ಆದ್ದರಿಂದ ಪ್ರಾಥಮಿಕವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವ ಸಬುದಾನವು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸುತ್ತದೆ.

ಉಪವಾಸದ ಸಮಯದಲ್ಲಿ ಸಾಬುದಾನಕ್ಕೆ ಆದ್ಯತೆ ನೀಡಲು ಮತ್ತೊಂದು ಪ್ರಮುಖ ಕಾರಣವೆಂದರೆ ಅದು ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆಯನ್ನು ಭಾರಗೊಳಿಸುವುದಿಲ್ಲ. ಹೊಟ್ಟೆಗೆ ಸಂಬಂಧಿಸಿ ಯಾವುದೇ ಅಸ್ವಸ್ಥತೆ ಅಥವಾ ಉಬ್ಬುವಿಕೆಯನ್ನು ಉಂಟುಮಾಡುವುದಿಲ್ಲ.

ಸಾಬುದಾನದಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಹೀಗಾಗಿ ಇದರ ಸೇವನೆ ಉಪವಾಸ ನಿರತರಿಗೆ ಅತ್ಯಗತ್ಯ.


1. ಸಾಬುದಾನ ಖಿಚಡಿ

ಬೆಳಗ್ಗಿನ ಉಪಾಹಾರ, ಸಂಜೆಯ ಫಲಾಹಾರಕ್ಕೆ ಸಾಬುದಾನ ಖಿಚಡಿ ಒಂದು ಜನಪ್ರಿಯ ಉಪವಾಸ ಖಾದ್ಯ. ರಾತ್ರಿಯಿಡೀ ನೆನೆಸಿಟ್ಟ ಸಾಬುದಾನಕ್ಕೆ ಹುರಿದ ಕಡಲೆಕಾಳು, ಜೀರಿಗೆ, ಹಸಿರು ಮೆಣಸಿನಕಾಯಿ ಮತ್ತು ಬೇಯಿಸಿದ ಆಲೂಗಡ್ಡೆಯನ್ನು ಬೆರೆಸಿ ಖಿಚಿಡಿ ತಯಾರಿಸಲಾಗುತ್ತದೆ.


2. ಸಾಬುದಾನ ವಡಾ

ಉಪವಾಸದ ವೇಳೆ ಗರಿಗರಿಯಾದ ಮತ್ತು ರುಚಿಕರವಾದ ತಿಂಡಿಗಳನ್ನು ತಿನ್ನಲು ಬಯಸುವವರು ಸಾಬುದಾನ ವಡಾವನ್ನು ತಯಾರಿಸಬಹುದು. ನೆನೆಸಿದ ಸಾಬುದಾನವನ್ನು ಬೇಯಿಸಿದ ಆಲೂಗಡ್ಡೆ, ಹುರಿದ ಕಡಲೆಕಾಯಿಗಳು ಮತ್ತು ವಿವಿಧ ಮಸಾಲೆಗಳೊಂದಿಗೆ ಬೆರೆಸಿ, ಅನಂತರ ಆಕಾರ ಕೊಟ್ಟು ಎಣ್ಣೆಯಲ್ಲಿ ಕರಿಯಿರಿ. ಇದನ್ನು ಹುಣಸೆ ಹಣ್ಣಿನ ಚಟ್ನಿ ಅಥವಾ ಮಸಾಲೆಯುಕ್ತ ಹಸಿರು ಚಟ್ನಿಯೊಂದಿಗೆ ಸೇವಿಸಲು ರುಚಿಯಾಗಿರುತ್ತದೆ.


3. ಸಾಬುದಾನ ಖೀರ್

ಸಿಹಿ ತಿನ್ನಲು ಬಯಸುವವರಿಗೆ ಸಾಬುದಾನದ ಖೀರ್‌ ಅತ್ಯುತ್ತಮ ಆಯ್ಕೆಯಾಗಿದೆ. ಇದು ಸಾಗು, ಹಾಲು ಮತ್ತು ಸಕ್ಕರೆ ಹಾಕಿ ಇದನ್ನು ತಯಾರಿಸಲಾಗುತ್ತದೆ. ಇದಕ್ಕಾಗಿ ಸಾಬುದಾನವನ್ನು ಮೊದಲು ನೆನೆಸಿ ಇಡಬೇಕು. ಬಳಿಕ ಹಾಲಿನಲ್ಲಿ ಬೇಯಿಸಿ ಸಕ್ಕರೆ, ಏಲಕ್ಕಿ ಸೇರಿಸಿ. ಜೊತೆಗೆ ಒಂದೆರಡು ಕೇಸರಿ ದಳಗಳು, ಕತ್ತರಿಸಿದ ಬೀಜಗಳನ್ನು ಹಾಕಿದರೆ ಸಾಬೂದಾನದ ಖೀರ್ ಸವಿಯಲು ಸಿದ್ಧ.


4. ಸಾಬುದಾನ ದೋಸೆ

ಸಾಬುದಾನ ದೋಸೆಯು ದಕ್ಷಿಣ ಭಾರತದ ಸಾಂಪ್ರದಾಯಿಕ ಉಪಹಾರದ ವಿಶಿಷ್ಟ ಮತ್ತು ಆರೋಗ್ಯಕರ ತಿನಿಸು. ಅಕ್ಕಿಯ ಬದಲಿಗೆ ನೆನೆಸಿದ ಸಾಬುದಾನ, ಹಿಸುಕಿದ ಆಲೂಗಡ್ಡೆ ಮತ್ತು ಮಸಾಲೆಯನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಈ ದೋಸೆಯು ಗ್ಲುಟನ್ ಮುಕ್ತವಾಗಿದೆ ಮತ್ತು ಪೋಷಕಾಂಶಗಳಿಂದ ತುಂಬಿರುತ್ತದೆ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಬಿಸಿಯಾಗಿ ಸವಿಯಬಹುದು.

ಇದನ್ನೂ ಓದಿ: Shravan 2024: ಶ್ರಾವಣ ಮಾಸದಲ್ಲೇಕೆ ಮಾಂಸಾಹಾರ ಮಾಡಬಾರದು? ಇದಕ್ಕಿದೆ ವೈಜ್ಞಾನಿಕ ಕಾರಣ!


5. ಸಾಬುದಾನದ ಲಡ್ಡು

ಸಕ್ಕರೆ ಮತ್ತು ತುಪ್ಪದಿಂದ ತಯಾರಿಸಿದ ಸಾಬುದಾನದ ಲಡ್ಡು ರುಚಿಯ ಜೊತೆಗೆ ಪೌಷ್ಟಿಕ ಖಾದ್ಯವಾಗಿದೆ. ಸಕ್ಕರೆ ಪುಡಿ, ಏಲಕ್ಕಿ ಮತ್ತು ಗೋಡಂಬಿ ಮತ್ತು ಬಾದಾಮಿಗಳಂತಹ ಬೀಜಗಳನ್ನು ಲಡ್ಡುವಿನಲ್ಲಿ ಸೇರಿಸಬಹುದು. ಇದು ತ್ವರಿತ ಶಕ್ತಿಯ ವರ್ಧಕವೂ ಹೌದು.

Continue Reading
Advertisement
Murder case
ಕ್ರೈಂ24 seconds ago

Murder Case: ಪತ್ನಿಯನ್ನು ಕೊಂದು ಪರಾರಿಯಾದ, ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಸತ್ತ!

Health Tips
ಆರೋಗ್ಯ16 mins ago

Health Tips: ರಾತ್ರಿ ಪದೇಪದೆ ಬಾಯಾರಿಕೆ‌ ಆಗುತ್ತದೆಯೆ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು

Bigg Boss Tamil 8 Kamal Haasan Bids Farewell As Host
ಕಿರುತೆರೆ27 mins ago

Bigg Boss Tamil 8: ಬಿಗ್​ ಬಾಸ್​ ಸೀಸನ್ 8​ರ ಹೋಸ್ಟ್​ ನಾನಲ್ಲ ಎಂದ ಕಮಲ್‌ ಹಾಸನ್‌; ಕಾರಣ ಬಿಚ್ಚಿಟ್ಟ ನಟ!

belagavi factory fire tragedy
ಬೆಳಗಾವಿ46 mins ago

Factory Fire Tragedy: ಟೇಪ್‌ ನಿರ್ಮಾಣ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ; ಹತ್ತಾರು ಜೀವಹಾನಿ ಆತಂಕ

Independence Day 2024
ದೇಶ51 mins ago

Independence Day 2024: ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೇಳಲೇಬೇಕಾದ ಟಾಪ್‌ 10 ದೇಶಭಕ್ತಿ ಗೀತೆಗಳಿವು

Vinesh Phogat
ಕ್ರೀಡೆ58 mins ago

Vinesh Phogat: ಚಾಂಪಿಯನ್ಸ್‌ ಫೀಲ್ಡಿನಲ್ಲೇ ಉತ್ತರ ಕೊಡುತ್ತಾರೆ; ಒಲಿಂಪಿಕ್ಸ್‌ ಫೈನಲ್‌ ಪ್ರವೇಶಿಸಿದ ವಿನೇಶ್ ಫೋಗಟ್‌ಗೆ ರಾಹುಲ್‌ ಗಾಂಧಿ ವಿಷ್‌

kali river bridge collapse
ಪ್ರಮುಖ ಸುದ್ದಿ1 hour ago

Kali Bridge Collapse: ಕಾಳಿ ನದಿಗೆ ಕಟ್ಟಿದ ಸೇತುವೆ ಕುಸಿತ, ಟ್ರಕ್‌ ಬಿದ್ದು ಚಾಲಕನಿಗೆ ಗಾಯ

Shravan 2024
ಪ್ರಮುಖ ಸುದ್ದಿ1 hour ago

Shravan 2024: ಶ್ರಾವಣ ಶುಕ್ರವಾರದ ವಿಶೇಷವೇನು? ಅಂದು ಏನು ಮಾಡಬೇಕು? ಏನು ಮಾಡಬಾರದು?

muhammad yunus bangladesh unrest
ಪ್ರಮುಖ ಸುದ್ದಿ2 hours ago

Bangladesh Unrest: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇಮಕ

chia seeds
ಆರೋಗ್ಯ2 hours ago

Chia seeds: ಚಿಯಾ ಬೀಜಗಳನ್ನು ಸೇವಿಸುತ್ತಿದ್ದೀರಾ? ಹಾಗಾದರೆ, ಈ ಎಚ್ಚರಿಕೆ ನಿಮ್ಮಲ್ಲಿರಲಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು15 hours ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ16 hours ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌