ದೇಶ
Women’s Reservation Bill : ರಾಜೀವ್ ಗಾಂಧಿಯಿಂದ ಹಿಡಿದು ಮೋದಿಯವರೆಗೆ; ಮಹಿಳಾ ಮೀಸಲಾತಿ ವಿಧೇಯಕ ಸಾಗಿ ಬಂದ ಹಾದಿ
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಮಸೂದೆಯನ್ನು (Women’s Reservation Bill) ಅಂಗೀಕರಿಸಿದ ಕೀರ್ತಿಯನ್ನು ಪಡೆಯುತ್ತದೆ. ಆದರೆ ಈ ಹಿಂದೆ ಸತತ ಸರ್ಕಾರಗಳು ಭಾರತೀಯ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯದ ಪ್ರಶ್ನೆಯನ್ನು ಚರ್ಚಿಸಿವೆ.
ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸಚಿವ ಸಂಪುಟ ಸೋಮವಾರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕ (Women’s Reservation Bill) ಅಂಗೀಕರಿಸಿದೆ. ಮಹಿಳೆಯರಿಗೆ ಸಂಸತ್ತಿನಲ್ಲಿ ಶೇಕಡಾ 33ರಷ್ಟು ಮೀಸಲಾತಿ ನೀಡುವ ಈ ಮಸೂದೆ ಇದಾಗಿದೆ. ಅಂದರೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಕಲ್ಪಿಸಲಿದೆ. ಇದು ಭಾರತೀಯ ರಾಜಕೀಯದಲ್ಲಿ ದೀರ್ಘಕಾಲದಿಂದ ಬಿಸಿಬಿಸಿ ಚರ್ಚೆಗೆ ಕಾರಣವಾದ ವಿಷಯವೂ ಹೌದು.
ಲೋಕ ಸಭೆ ಚುನಾವಣೆ ಸಮೀಪವಿರುವ ಕಾರಣ ಮೋದಿ ಸರ್ಕಾರವು ಮಹಿಳೆಯರ ಮತದ ಮೇಳೆ ಕಣ್ಣಿಟ್ಟು ವಿಧೇಯಕ ಮಂಡಿಸುತ್ತಿದೆ ಎಂಬ ವಿಶ್ಲೇಷಣೆಯೂ ಇದೆ. ಆದಾಗ್ಯೂ ಮಸೂದೆಯು ದೀರ್ಘಕಾಲದಿಂದ ಆಗಾಗ ಮುನ್ನಲೆಗೆ ಬರುತ್ತಿತ್ತು ಪುರುಷ ಪ್ರಾಬಲ್ಯದ ಪಕ್ಷಗಳು ಮಾತ್ರ ಇದನ್ನು ನಿರಂತರ ವಿರೋಧಿಸಿದ್ದವು. ಹೀಗಾಗಿ ಎಂದೋ ಜಾರಿಯಾಗಬೇಕಾಗಿದ್ದ ಕಾನೂನು ಇಷ್ಟೊಂದು ವಿಳಂಬವಾಗಿದೆ. 2014 ಮತ್ತು 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಸ್ವತಃ ಬಿಜೆಪಿಯೇ ಕಾಯಿದೆ ಮಾಡುವ ಭರವಸೆ ಕೊಟ್ಟಿತ್ತು. ಮೋದಿ ಎರಡೂ ಅವಧಿಯಲ್ಲಿ ಪೂರ್ಣ ಬಹುಮತದ ಸರ್ಕಾರವನ್ನು ಮುನ್ನಡೆಸಿದ್ದರು. ಆದಾಗ್ಯೂ ಅಧಿಕಾರ ಹಿಡಿದು 10ನೇ ವರ್ಷ ಸಾಗುತ್ತಿರುವ ಅವಧಿಯಲ್ಲಿ ವಿಧೇಯಕ ಮಂಡಿಸಿದೆ. ಬಹುಮತ ಸರ್ಕಾರವಾಗಿರುವ ಕಾರಣ ಕಾಯಿದೆಯಾಗುವುದು ನಿಶ್ಚಿತ. ಇವೆಲ್ಲದರ ನಡುವೆಯೂ ಈ ಹಿಂದೆ ರಾಜೀವ್ ಗಾಂಧಿ, ಪಿ.ವಿ.ನರಸಿಂಹ ರಾವ್, ಕರ್ನಾಟಕದವರೇ ಆದ ಎಚ್.ಡಿ.ದೇವೇಗೌಡ ಅವರೂ ಮಹಿಳಾ ಪ್ರಾತಿನಿಧ್ಯ ನೀಡಲು ಈ ಕಾಯಿದೆಗೆ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.
ಮೀಸಲಾತಿಯ ಬಗ್ಗೆ ಚರ್ಚೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದರೂ, 1987ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊದಲ ಬಾರಿಗೆ ಇದನ್ನು ಪ್ರಸ್ತಾಪಿಸಿತ್ತು.
ಇದನ್ನೂ ಓದಿ : Women’s Reservation Bill: ಮಹಿಳಾ ಮೀಸಲು ವಿಧೇಯಕ ಮಂಡನೆ! ಹೊಸ ಸಂಸತ್ತಿನ ಮೊದಲ ಬಿಲ್ ಇದು
ಮಹಿಳಾ ಮೀಸಲಾತಿ ವಿಧೇಯಕದ ಸಾಗಿ ಹಾದಿಯ ಸಂಕ್ಷಿಪ್ತ ವಿವರ ಇಲ್ಲಿದೆ
- 1987ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವ ನೇತೃತ್ವದಲ್ಲಿ 14 ಸದಸ್ಯರ ಸಮಿತಿ ರಚಿಸಿತ್ತು. ಈ ಸಮಿತಿಯು ಮಹಿಳಾ ಪ್ರಾತಿನಿಧ್ಯದ ಕುರಿತು ಅಧ್ಯಯನ ನಡೆಸಿತ್ತು. ಸಮಿತಿಯು ಮಾಡಿದ 353 ಶಿಫಾರಸುಗಳಲ್ಲಿ ಪ್ರಮುಖವಾದದ್ದು ಚುನಾವಣಾ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳ ಮೀಸಲಾತಿ ಕಲ್ಪಿಸುವುದು.
- 1992 ರಲ್ಲಿ, ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಸರ್ಕಾರವು 73 ಮತ್ತು 74 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಗಳನ್ನು ಅಂಗೀಕರಿಸಿತು. ಇದು ದೇಶಾದ್ಯಂತ ಅಧ್ಯಕ್ಷರ ಕಚೇರಿ ಸೇರಿದಂತೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ 33.3 ರಷ್ಟು ಮೀಸಲಾತಿಯನ್ನು ಕಡ್ಡಾಯಗೊಳಿಸಿತು.
- 1996 ರಲ್ಲಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸರ್ಕಾರವು ಮೊದಲ ಮಹಿಳಾ ಮೀಸಲಾತಿ ವಿಧೇಯಕ ಮಂಡಿಸಿತ್ತು. ಸಂವಿಧಾನ (81 ನೇ ತಿದ್ದುಪಡಿ) ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳಲ್ಲಿ ಮೀಸಲಾತಿ ಕಲ್ಪಿಸುವುದಾಗಿತ್ತು.
- ಮಹಿಳಾ ಮೀಸಲಾತಿ ವಿಧೇಯಕವು ಹಿಂದುಳಿದ ವರ್ಗಗಳ ಮಹಿಳೆಯರಿಗೂ ಸಮಾನ ಪ್ರಯೋಜನ ನೀಡುತ್ತದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಅಧ್ಯಯನಕ್ಕಾಗಿ ಮಮತಾ ಬ್ಯಾನರ್ಜಿ, ಸುಷ್ಮಾ ಸ್ವರಾಜ್, ನಿತೀಶ್ ಕುಮಾರ್, ಶರದ್ ಪವಾರ್ ಮತ್ತು ಇತರ ಪಕ್ಷಗಳ ಹಲವಾರು ಹಿರಿಯ ನಾಯಕರನ್ನು ಒಳಗೊಂಡ 21 ಸದಸ್ಯರ ಸಂಸತ್ತಿನ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ವರದಿಯ ನಂತರ ಅದೇ ವರ್ಷ ಮಸೂದೆಯನ್ನು ಮತ್ತೆ ಮಂಡಿಸಲಾಯಿತು. ಆದರೆ ಆ ಬಾರಿ ಅದಕ್ಕೆ ರಾಜಕೀಯ ಇಚ್ಛಾಶಕ್ತಿಯ ನೆರವು ದೊರೆಯಲಿಲ್ಲ.
- 1997ರಲ್ಲಿ ದೇವೇಗೌಡರಿಂದ ಅಧಿಕಾರ ವಹಿಸಿಕೊಂಡ ಐ.ಕೆ.ಗುಜ್ರಾಲ್ ಅವರ ಅಡಿಯಲ್ಲಿ, ಸರ್ಕಾರವು ಎರಡು ಸುತ್ತಿನ ಸರ್ವಪಕ್ಷ ಸಭೆಗಳನ್ನು ನಡೆಸಿತು. ಮೇ 1997 ರಲ್ಲಿ ಮಸೂದೆಯನ್ನು ಮತ್ತೆ ಕೈಗೆತ್ತಿಕೊಂಡಾಗ ಒಬಿಸಿ ನಾಯಕರಿಂದ ವಿರೋಧ ಎದುರಾಯಿತು. ಎಸ್ಸಿ-ಎಸ್ಟಿ ಮಹಿಳೆಯರಂತೆ ಒಬಿಸಿ ಮಹಿಳೆಯರಿಗೆ ಮೀಸಲಾತಿ ಇಲ್ಲದಿದ್ದರೆ, ವಿಧೇಯಕ ವ್ಯರ್ಥ ಎಂಬುದೇ ಅವರ ಆಕ್ಷೇಪವಾಗಿತ್ತು.
- 1997ರಲ್ಲಿ, ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ನ್ಯಾಯಮೂರ್ತಿ ಎಂ.ಸಿ.ಜೈನ್ ಆಯೋಗದ ವರದಿಯ ಬಗ್ಗೆ ಆಕ್ರೋಶ ವ್ಯಕ್ತಗೊಂಡಿತು. ಇದರ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಐಕೆ ಗುಜ್ರಾಲ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡಿತು. ಈ ವೇಳೆ ವಿಧೇಯಕ ರದ್ದಾಯಿತು.
- 1998 ರಲ್ಲಿ, ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುಮಿತ್ರಾ ಮಹಾಜನ್ ಅವರಂತಹ ನಾಯಕಿಯರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಮೀಸಲಾತಿ ಮಸೂದೆ ಅಂಗೀಕರಿಸಬೇಕೆಂದು ಒತ್ತಾಯಿಸಿದರು. ವಿಧೇಯಕ ಮಂಡಿಸಲು ಕಾನೂನು ಸಚಿವ ಎಂ.ತಂಬಿ ದುರೈ ಎದ್ದು ನಿಂತಾಗ ಮತ್ತು ಆರ್ಜೆಡಿ ಸಂಸದ ಸುರೇಂದ್ರ ಪ್ರಕಾಶ್ ಯಾದವ್ ವಿರೋಧ ವ್ಯಕ್ತಪಡಿಸಿದರು. ವಿಧೇಯಕದ ಕರಡು ಪ್ರತಿಯನ್ನು ತಂಬಿ ದುರೈ ಅವರ ಕೈಯಿಂದ ಕಿತ್ತು ಹರಿದು ಹಾಕಿದ್ದರು. ಅದಕ್ಕೆ ಲಾಲು ಪ್ರಸಾದ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರಂತಹ ಒಬಿಸಿ ನಾಯಕರ ಬೆಂಬಲವಿತ್ತು. 1998ರ ಡಿಸೆಂಬರ್ನಲ್ಲಿ ಈ ವಿಧೇಯಕವನ್ನು ಮಂಡಿಸಲೇಬೇಕು ಎಂದು ಪಟ್ಟು ಹಿಡಿದಿದ್ದ ಮಮತಾ ಬ್ಯಾನರ್ಜಿ ಸ್ಪೀಕರ್ ಮೇಜಿನ ಕಡೆಗೆ ಹೋಗುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ನಾಯಕ ದರೋಗಾ ಪ್ರಸಾದ್ ಸರೋಜ್ ತಡೆದಿದ್ದರು. ಈ ವೇಳೆ ಮಮತಾ ಬ್ಯಾನರ್ಜಿ ಅವರ ಕಾಲರ್ಪಟ್ಟಿ ಹಿಡಿದು ಎಳೆದಿದ್ದು ದೊಡ್ಡ ಸುದ್ದಿಯಾಗಿತ್ತು.
- 1999ರಲ್ಲಿ ಜಯಲಲಿತಾ ಅವರು ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಲೋಕಸಭೆಯನ್ನು ವಿಸರ್ಜಿಸಲಾಯಿತು. ಈ ವೇಳೆ ಮಸೂದೆ ಮತ್ತೆ ರದ್ದಾಯಿತು. ಮತ್ತೆ ವಾಜಪೇಯಿ ನೇತೃತ್ವ ಕೇಂದ್ರ ಸರ್ಕಾರ ಆಯ್ಕೆಯಾಗಿ ಅದೇ ವರ್ಷದ ಚಳಿಗಾಲದ ಅಧಿವೇಶನದಲ್ಲಿ, ಕಾನೂನು ಸಚಿವ ಸಚಿವ ರಾಮ್ ಜೇಠ್ಮಲಾನಿ ಅವರ ಮೂಲಕ 85 ನೇ ತಿದ್ದುಪಡಿಗೆ ಅನುಮೋದನೆ ನೀಡಲಾಯಿತು. ಈ ವೇಳೆಯೂ ಆರ್ಜೆಡಿ ಹಾಗೂ ಎಸ್ಪಿ ನಾಯಕರು ಕಲಾಪದಲ್ಲಿ ದೊಂಬಿ ಎಬ್ಬಿಸಿದ್ದರು.
- ಆ ಬಳಿಕದ ವರ್ಷಗಳಲ್ಲಿ ಈ ವಿಷಯವು ಬಿಕ್ಕಟ್ಟಿನಲ್ಲೇ ಉಳಿಯಿತು. ಚುನಾವಣಾ ಆಯೋಗವು 2000ರಲ್ಲಿ ಮಹಿಳಾ ಮೀಸಲಾತಿಯ ಬಗ್ಗೆ ರಾಜಕೀಯ ಪಕ್ಷಗಳ ಅಭಿಪ್ರಾಯವನ್ನು ಕೇಳಿತು.
- 2003ರಲ್ಲಿ, ವಾಜಪೇಯಿ ಸರ್ಕಾರವು ಸರ್ವಪಕ್ಷ ಸಭೆಯನ್ನು ಕರೆಯಿತು. ಇದರಲ್ಲಿ ಪ್ರಧಾನಿ ವಾಜಪೇಯಿ ಅವರು ಮತ್ತೊಮ್ಮೆ ಮೀಸಲಾತಿಗೆ ಒಮ್ಮತ ಮತ್ತು ಬೆಂಬಲವನ್ನು ಗಳಿಸಲು ಪ್ರಯತ್ನಿಸಿದರು. ಅಲ್ಲೂ ಅವರು ವಿಫಲರಾದರು.
- ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಅವರ ಪ್ರಯತ್ನಗಳನ್ನು ಮುಂದುವರಿಸಿದರು. 2005ರಲ್ಲಿ ಬೆಂಬಲ ಪಡೆಯುವ ಉದ್ದೇಶದಿಂದ ಸೋನಿಯಾ ಗಾಂಧಿ ಅವರು ಎಡ ಪಕ್ಷಗಳೊಂದಿಗೆ ಸಭೆ ನಡೆಸಿದ್ದರು. ಮಹಿಳಾ ಮೀಸಲಾತಿ ಮಸೂದೆಯನ್ನು ಮರಳಿ ತರುವುದು ಸೇರಿದಂತೆ ಮೂರು ವಿಷಯಗಳ ಬಗ್ಗೆ ಒಮ್ಮತವನ್ನು ಗಳಿಸಲು ಮನಮೋಹನ್ ಸಿಂಗ್ ಅವರು ಬಿಜೆಪಿಯ ನೆರವನ್ನೂ ಕೋರಿದ್ದರು.
- 2008 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಎಲ್ಲಾ ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಕಾಯ್ದಿರಿಸಲು ಸಂವಿಧಾನ (108 ನೇ ತಿದ್ದುಪಡಿ) ಕಾಯಿದೆ 2008 ಅನ್ನು ರಾಜ್ಯಸಭೆಯಲ್ಲಿ ಮಂಡಿಸಿತ . 2010ರಲ್ಲಿ ಸಿಂಗ್ ಅವರ ಕ್ಯಾಬಿನೆಟ್ ವಿಧೇಯಕವನ್ನು ಅನುಮೋದಿಸಿತು. ರಾಜ್ಯಸಭೆಯಲ್ಲಿಯೂ ಅಂಗೀಕರಿಸಲಾಯಿತು. ಆದಾಗ್ಯೂ, ಇದು ಲೋಕಸಭೆಯಲ್ಲಿ ಮಂಡನೆಯಾಗಲೇ ಇಲ್ಲ. ಲೋಕ ಸಭೆಯ ವಿಸರ್ಜನೆ ಬಳಿಕ ವಿಧೇಯಕಕ್ಕೆ ಮತ್ತೆ ತೊಡಕುಂಟಾಯಿತು.
- 2013ರಲ್ಲಿ ಮನ್ಮೋಹನ್ ಸಿಂಗ್ ನೇತೃತ್ವದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಹಿಳೆಯರ ಸ್ಥಿತಿಯ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚಿಸಿತು. ಚುನಾವಣಾ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಸ್ಥಾನಗಳನ್ನು ಕಾಯ್ದಿರಿಸಬೇಕು ಎಂದು ಶಿಫಾರಸು ಮಾಡಿತು.
- 2014ರಿಂದ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ (2014, 2019) ಮಹಿಳಾ ಮೀಸಲಾತಿಯ ಭವರಸೆ ನೀಡುತ್ತಲೇ ಬಂದಿದೆ. ಅಂತಿಮವಾಗಿ ಇದೀಗ ಮಂಡನೆ ಮಾಡಿದೆ.
ದೇಶ
Stadium row: ಕ್ರೀಡಾಂಗಣದಲ್ಲಿ ನಾಯಿ ಜತೆ ವಾಕಿಂಗ್ ಮಾಡಿದ್ದ ಅಧಿಕಾರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ!
Stadium Row: ದೆಹಲಿಯ ಕ್ರೀಡಾಂಗಣದಲ್ಲಿ (Delhi’s Thyagraj Stadium) ಅಭ್ಯಾಸ ನಡೆಸುತ್ತಿದ್ದ ಕ್ರೀಡಾಳುಗಳನ್ನು ಹೊರಗೆ ಕಳುಹಿಸಿ ಅಲ್ಲಿ ತಮ್ಮ ನಾಯಿ ಜತೆಗೆ ಮಾಕಿಂಗ್ ಮಾಡುತ್ತಿದ್ದ ಐಎಎಸ್ (IAS) ಅಧಿಕಾರಿ ರಿಂಕು ದುಗ್ಗ ಅವರಿಗೆ ಈಗ ಸರ್ಕಾರ ಕಡ್ಡಾಯ ನಿವೃತ್ತಿಯ ಸೂಚನೆ ನೀಡಿದೆ.
ದೆಹಲಿ: ದೆಹಲಿಯ ತ್ಯಾಗರಾಜ ಕ್ರೀಡಾಂಗಣದಿಂದ (Delhi’s Thyagraj Stadium) ಕ್ರೀಡಾಳುಗಳನ್ನು ಹೊರಗಟ್ಟಿ ನಾಯಿಯೊಂದಿಗೆ ವಾಕಿಂಗ್ ಮಾಡಿದ್ದ ಐಎಎಸ್ (IAS) ಅಧಿಕಾರಿ ರಿಂಕು ದುಗ್ಗ (54) ಅವರನ್ನು ಸರ್ಕಾರ ಕಡ್ಡಾಯ ನಿವೃತ್ತಿಗೊಳಿಸಿದೆ. 1994ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ರಿಂಕು ದುಗ್ಗ ಅರುಣಾಚಲ ಪ್ರದೇಶದ ಸ್ಥಳೀಯ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ರಿಂಕು ದುಗ್ಗ ಅವರ ಪತಿ ಸಂಜೀವ್ ಖೈರ್ವಾರ್ ಕೂಡ 1994ರ ಬ್ಯಾಚ್ನ ಐಎಎಸ್ ಅಧಿಕಾರಿ. ಅವರನ್ನು ಕಳೆದ ವರ್ಷ ದೆಹಲಿಯಿಂದ ಲಡಾಕ್ಗೆ ವರ್ಗಾಯಿಸಲಾಗಿತ್ತು. ಇವರು ತಮ್ಮ ನಾಯಿಯ ಜತೆ ವಾಕಿಂಗ್ಗೆ ಹೋಗಲೆಂದು ದೆಹಲಿಯ ತ್ಯಾಗರಾಜ ಸ್ಟೇಡಿಯಂಅನ್ನು ಸಂಜೆ ಏಳು ಗಂಟೆಗೇ ಖಾಲಿ ಮಾಡಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಇಬ್ಬರನ್ನೂ ದೆಹಲಿಯಿಂದ ವರ್ಗಾಯಿಸಿ ಕಳೆದ ವರ್ಷ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತ್ತು.
ರಿಂಕು ದುಗ್ಗ ಅವರ ಕೆಲಸದ ದಾಖಲೆಗಳನ್ನು ಪರಿಶೀಲಿಸಿ ಕಡ್ಡಾಯ ನಿವೃತ್ತಿಗೆ ಸೂಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸೆಂಟ್ರಲ್ ಸಿವಿಲ್ ಸರ್ವಿಸಸ್ (CCS) ಪೆನ್ಶನ್ ರೂಲ್ಸ್, 1972ರ ಫಂಡಮೆಂಟಲ್ ರೂಲ್ಸ್ (FR) 56(j), ರೂಲ್ 48 ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಒಮ್ಮತದ ಅಭಿಪ್ರಾಯ ಇದ್ದರೆ ಯಾವುದೇ ಸರ್ಕಾರಿ ಉದ್ಯೋಗಿಗೆ ಕಡ್ಡಾಯ ನಿವೃತ್ತಿ ಸೂಚಿಸುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಮೂಲಗಳು ತಿಳಿಸಿವೆ. ಸದ್ಯ ರಿಂಕು ದುಗ್ಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿವಾದವೇನು?
ದೆಹಲಿಯ ಕಂದಾಯ ವಿಭಾಗದ ಪ್ರಿನ್ರಿಪಾಲ್ ಸೆಕ್ರೆಟರಿ ಅಗಿದ್ದ ಖೈರ್ವಾರ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತ್ಯಾಗರಾಜ ಸ್ಟೇಡಿಯಂನಿಂದ ಎಲ್ಲ ಕ್ರೀಡಾಳುಗಳನ್ನು ಏಳು ಗಂಟೆಗೆ ಹೊರ ಹೋಗುವಂತೆ ನೋಡಿಕೊಂಡು ಬಳಿಕ ಅವರು ತಮ್ಮ ಪತ್ನಿ ರಿಂಕು ದುಗ್ಗ ಮತ್ತು ನಾಯಿ ಜತೆ ಅಲ್ಲಿ ವಾಕಿಂಗ್ ಮಾಡುತ್ತಿದ್ದರು! ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ಕೇಳಿ ಬಂದಿತ್ತು.
ಇದನ್ನೂ ಓದಿ: UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
ವಿವಾದದ ಬಳಿಕ 1994ರ ಬ್ಯಾಚ್ನ ಎಜಿಎಂಯುಟಿ ಕೇಡರ್ಗೆ ಸೇರಿದ ರಿಂಕು ದುಗ್ಗ ಅವರನ್ನು 2022ರ ಮೇ ತಿಂಗಳಲ್ಲಿ ಅರುಣಾಚಲ ಪ್ರದೇಶಕ್ಕೆ ನಿಯೋಜಿಸಲಾಗಿತ್ತು. ಅವರನ್ನು ಈಶಾನ್ಯ ರಾಜ್ಯದ ಸ್ಥಳೀಯ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.
ಇನ್ನಷ್ಟು ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ದೇಶ
Lok Sabha Election 2024: 2.5 ಲಕ್ಷ ಗ್ರಾಮಗಳಲ್ಲಿ ಬಿಜೆಪಿ ‘ರಥ’ಯಾತ್ರೆ; ‘ಲೋಕ’ ಸಮರಕ್ಕೆ ರಣತಂತ್ರ
Lok Sabha Election 2024: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲು ಬಿಜೆಪಿಯು ರಣತಂತ್ರ ರೂಪಿಸಿದೆ. ಗ್ರಾಮೀಣ ಸಂವಾದ ಯಾತ್ರೆ ಮೂಲಕ ಗ್ರಾಮೀಣ ಭಾಗದ ಜನರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ. ಇದರ ಮಾಹಿತಿ ಇಲ್ಲಿದೆ.
ನವದೆಹಲಿ: 2024ರ ಲೋಕಸಭೆ ಚುನಾವಣೆಗೆ (Lok Sabha Election 2024) ಬಿಜೆಪಿ ಸೇರಿ ಎಲ್ಲ ಪಕ್ಷಗಳು ಸಕಲ ರೀತಿಯಲ್ಲಿ ಸಜ್ಜಾಗುತ್ತಿವೆ. ಸುಮಾರು 26 ಪಕ್ಷಗಳನ್ನು ಒಗ್ಗೂಡಿಸಿಕೊಂಡು ಪ್ರತಿಪಕ್ಷಗಳು ಇಂಡಿಯಾ ಒಕ್ಕೂಟ (INDIA Bloc) ರಚಿಸಿದರೆ, ಬಿಜೆಪಿಯೂ ಎನ್ಡಿಎ (NDA) ಮೈತ್ರಿಕೂಟವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿದೆ. ಅದರಲ್ಲೂ, ಲೋಕಸಭೆ ಚುನಾವಣೆಗೆ ಬಿಜೆಪಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದು, ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಲು ಹೊಸ ಮಾದರಿಯಲ್ಲಿ ರಥಯಾತ್ರೆ (Grameen Samvaad Yatra) ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಹೌದು, ಬಿಜೆಪಿಯು ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಗ್ರಾಮೀಣ ಸಂವಾದ ಯಾತ್ರೆ’ ಕೈಗೊಳ್ಳಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವುದು, ಕೇಂದ್ರದ ಸಾಧನೆ, ಪ್ರಮುಖ ತೀರ್ಮಾನಗಳನ್ನು ಜನರಿಗೆ ತಿಳಿಸುವುದು ಗ್ರಾಮೀಣ ಸಂವಾದ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದರೊಂದಿಗೆ, ಲೋಕಸಭೆ ಚುನಾವಣೆಯಲ್ಲಿ ಗ್ರಾಮೀಣ ಭಾಗದ ಜನರನ್ನು ತನ್ನತ್ತ ಸೆಳೆಯುವುದು ಬಿಜೆಪಿಯ ರಣತಂತ್ರವಾಗಿದೆ ಎನ್ನಲಾಗಿದೆ.
1,500 ರಥಗಳು ಸಜ್ಜು
ದೇಶದ ಸುಮಾರು 2.5 ಲಕ್ಷ ಗ್ರಾಮಗಳಲ್ಲಿ ರಥಗಳ ಮೂಲಕ ಗ್ರಾಮೀಣ ಸಂವಾದ ಯಾತ್ರೆ ಕೈಗೊಳ್ಳುವುದು ಬಿಜೆಪಿಯ ಯೋಜನೆಯಾಗಿದೆ. ಇದಕ್ಕಾಗಿ 1,500 ಅತ್ಯಾಧುನಿಕ ರಥಗಳನ್ನು ಕೂಡ ಸಿದ್ಧಪಡಿಸಲಾಗುತ್ತಿದೆ. ಜಿಪಿಎಸ್ ಅಳವಡಿಕೆ ಮಾಡಲಾದ, ಡ್ರೋನ್ಗಳ ನಿರ್ವಹಣೆ ಸೇರಿ ಹಲವು ರೀತಿಯಲ್ಲಿ ಜನರ ಜತೆ ಸಂವಾದ ನಡೆಸಲು ಸಾಧ್ಯವಾಗುವ ಅತ್ಯಾಧುನಿಕ ರಥಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Lok Sabha Election 2024 : ಸೀಟು ಹಂಚಿಕೆ ಚರ್ಚೆ ಆಗಿಲ್ಲ; ಸುಮಲತಾ ʼಅತಂತ್ರʼದ ಬಗ್ಗೆ ಎಚ್ಡಿಕೆ ಹೇಳಿದ್ದೇನು?
ಕೇಂದ್ರದ ಸಚಿವರು, ಸಂಸದರು, ಬಿಜೆಪಿ ನಾಯಕರು, ಶಾಸಕರು ಸೇರಿ ಹಲವರು ಗ್ರಾಮೀಣ ಸಂವಾದ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಇಳಿಸಿದೆ. ಇದರ ಜತೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನೂ ಇಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಭಾರಿ ಪ್ರಮಾಣದ ಪ್ರಚಾರಕ್ಕೂ ಬಿಜೆಪಿ ಎಲ್ಲ ರೀತಿಯಲ್ಲಿ ಸಜ್ಜಾಗುತ್ತಿದೆ.
ದೇಶ
Push Up Challenge: ಚಲಿಸುವ ಮೆಟ್ರೋದಲ್ಲೇ ಪುಶ್ಅಪ್ ಮಾಡಿದ ಅಂಕಲ್; ನಿಬ್ಬೆರಗಾದ ಯುವಕರು!
Push Up Challenge: ಮುಂಬೈ ಮೆಟ್ರೋ ರೈಲೊಂದರಲ್ಲಿ ಮಧ್ಯ ವಯಸ್ಕರೊಬ್ಬರು ಪುಶ್ ಅಪ್(pushup)ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬೈ: ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲುಗಳು (metro train) ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿವೆ. ದೆಹಲಿ ಮೆಟ್ರೋದಲ್ಲಿ ಇತ್ತೀಚೆಗೆ ಯುವ ಜೋಡಿ ಅಶ್ಲೀಲವಾಗಿ ವರ್ತಿಸುವ ಮೂಲಕ ಸುದ್ದಿಯಾಗಿತ್ತು. ಇದೀಗ ವೈರಲ್ ಆಗಿರುವ ವಿಡಿಯೊ ಒಂದರಲ್ಲಿ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಪುಶ್ ಅಪ್ (Pushup)ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ವಯಸ್ಸು ಯಾವುದಾದರೇನು ಫಿಟ್ ಆಗಿರುವುದು ಮುಖ್ಯ ಎಂಬ ಪಾಠವನ್ನು ಅವರು ಈ ಮೂಲಕ ತಿಳಿಸಿ ಕೊಟ್ಟಿದ್ದಾರೆ.
ವಿಡಿಯೊ ವೈರಲ್
ಈ ವಿಡಿಯೊವನ್ನು ಕಂಟೆಂಟ್ ಕ್ರಿಯೇಟರ್ ಭರತ್ ರಗತಿ ತಮ್ಮ ಖಾತೆಯಯಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಮೆಟ್ರೋ ರೈಲೊಂದರ ಒಳಗೆ ಪ್ರಯಾಣಿಕರು ನೋಡುತ್ತಿದ್ದಂತೆ ಮೊದಲು ರಗತಿ ವಿವಿಧ ರೀತಿಯ ಪುಶ್ ಅಪ್ ಪ್ರಕಾರಗಳನ್ನು ಪ್ರದರ್ಶಿಸಿದರು. ಬಳಿಕ ಅಲ್ಲೇ ನಿಂತಿದ್ದ ಮಧ್ಯ ವಯಸ್ಕ ವ್ಯಕ್ತಿಯೊಬ್ಬರ ಬಳಿ ಪ್ರಯತ್ನಿಸಲು ಹೇಳಿದರು. ಮೊದಲು ಅವರು ನಿರಾಕರಿಸಿದರು. ಬಳಿಕ ಪುಶ್ ಅಪ್ ಮಾಡುತ್ತ ತಮ್ಮ ಸಾಮರ್ಥ್ಯ ಪ್ರದರ್ಶಿಸತೊಡಗಿದರು. ಅವರ ಈ ಸಾಹಸವನ್ನು ಉಳಿದ ಪ್ರಯಾಣಿಕರು ನಿಬ್ಬೆರಗಾಗಿ ನೋಡುತ್ತಿದ್ದರು.
ಸ್ಟ್ರಾಂಗೆಸ್ಟ್ ಅಂಕಲ್
ಸ್ಟ್ರಾಂಗೆಸ್ಟ್ ಅಂಕಲ್ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಈಗಾಗಲೇ ಈ ವಿಡಿಯೊವನ್ನು 3 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ʼಅಂಕಲ್ʼನ ಫಿಟ್ನೆಸ್ಗೆ ಅನೇಕರು ಫಿದಾ ಆಗಿದ್ದಾರೆ.
ತರಹೇವಾರಿ ಕಮೆಂಟ್
ಅನೇಕರು ಈ ವಿಡಿಯೊ ನೋಡಿ ತಮ್ಮ ಕಣ್ಣನ್ನು ತಾವೇ ನಂಬಲಾರದ ಸ್ಥಿತಿ ತಲುಪಿದ್ದಾರೆ. ಬಳಿ ಷರ್ಟ್, ಕಪ್ಪು ಪ್ಯಾಂಟ್ ಧರಿಸಿ ಇನ್ಶರ್ಟ್ ಮಾಡಿಕೊಂಡಿದ್ದ ಆ ವ್ಯಕ್ತಿ ಈ ರೀತಿ ಎಲ್ಲರನ್ನೂ ಬೆರಗುಗೊಳಿಸುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇದನ್ನೇ ಅನೇಕರು ಕಮೆಂಟ್ ಮೂಲಕ ತಿಳಿಸಿದ್ದಾರೆ. ʼʼಇವರು ಖಂಡಿತವಾಗಿ ಸೈನಿಕರಾಗಿದ್ದಿರಬೇಕುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಈ ಅಂಕಲ್ ರೀತಿ ತಾಳ್ಮೆಯಿಂದ, ಪ್ರಬುದ್ಧರಾಗಿ, ಸರಳವಾಗಿ ಇರುವುದನ್ನು ಕಲಿಯಬೇಕುʼʼ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ʼʼಆರಂಭದಲ್ಲಿ ಅವರು ಸ್ವಲ್ಪ ತಯಾರಿ ನಡೆಸಿಕೊಂಡು ಬಳಿಕ ಸರಾಗವಾಗಿ ಪುಶ್ ಅಪ್ ತೆಗೆದರುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼʼಈ ಅಂಕಲ್ ಯುವ ಜನತೆಗೆ ಸ್ಫೂರ್ತಿʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ʼʼಕವರ್ ನೋಡಿ ಪುಸ್ತಕವನ್ನು ನಿರ್ಧರಿಸಬೇಡಿ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆʼʼ ಎಂದು ಕಮೆಂಟ್ ಮಾಡಿದ್ದಾರೆ ಇನ್ನೊಬ್ಬರು. ಅನೇಕರು ಬೆಂಕಿ ಮತ್ತು ಹೃದಯದ ಎಮೋಜಿ ಕಳುಹಿಸುವ ಮೂಲಕ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: Viral News: ತುಂಬಿ ಹರಿವ ಹಳ್ಳದಲ್ಲಿ ಶಾಲಾ ಬಸ್ ಚಲಾಯಿಸಿ ಮಕ್ಕಳ ಜೀವದ ಜೊತೆಗೆ ಚಾಲಕನ ಚೆಲ್ಲಾಟ!
ಸದ್ಯ ಈ ಪುಶ್ ಅಪ್ ಚಾಲೆಂಜ್ ಮೊದಲೇ ಪ್ಲಾನ್ ಆಗಿತ್ತಾ ಅಥವಾ ಆಕಸ್ಮಿಕವಾಗಿ ಜರುಗಿದ್ದೇ ಎನ್ನುವುದು ಸ್ಪಷ್ಟವಾಗಿಲ್ಲ. ಅದೇನೇ ಇರಲಿ ಒಟ್ಟಿನಲ್ಲಿ ಅಂಕಲ್ ಪುಶ್ ಅಪ್ ಚಾಲೆಂಜ್ ಸ್ವೀಕರಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಹಲವರ ಮನಸ್ಸು ಬದಲಾಯಿಸಿದ್ದಂತೂ ಸುಳ್ಳಲ್ಲ.
ಕ್ರೈಂ
ದೂರು ನೀಡಲು ಹೋದ ದಲಿತ ಮಹಿಳೆ ಮೇಲೆಯೇ ಅತ್ಯಾಚಾರ ಎಸಗಿದ ಪಿಎಸ್ಐ; ಇದೆಂಥಾ ಅನಾಚಾರ!
ಪೊಲೀಸ್ ಠಾಣೆಗೆ ದೂರು ನೀಡಲು ಬಂದ ದಲಿತ ಮಹಿಳೆ ಮೇಲೆಯೇ ಪಿಎಸ್ಐ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹೀನ ಕೃತ್ಯ ಎಸಗಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಲಖನೌ: ಮಳೆ, ಚಳಿ, ಬಿಸಿಲು, ಹಗಲು, ರಾತ್ರಿ ಎನ್ನದೆ ಕಾರ್ಯನಿರ್ವಹಿಸುವ, ಜನರಿಗೆ ರಕ್ಷಣೆ ಒದಗಿಸುವ ಪೊಲೀಸರ ಬಗ್ಗೆ ಸಮಾಜದಲ್ಲಿ ಗೌರವ ಇದೆ. ಸೈನಿಕರು ಗಡಿ ರಕ್ಷಣೆ ಮಾಡಿದರೆ, ಪೊಲೀಸರು ದೇಶವನ್ನು ಆಂತರಿಕವಾಗಿ ರಕ್ಷಣೆ ಮಾಡುತ್ತಾರೆ. ಹೀಗೆ, ಜನರನ್ನು ಕಾಯಬೇಕಾದ, ಅವರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯೊಬ್ಬ ಉತ್ತರ ಪ್ರದೇಶದಲ್ಲಿ (Uttar Pradesh) ಹೀನ ಕೃತ್ಯ ಎಸಗಿದ್ದಾನೆ. ದೂರು ನೀಡಲೆಂದು ಪೊಲೀಸ್ ಠಾಣೆಗೆ ಬಂದ ದಲಿತ ಮಹಿಳೆಯೊಬ್ಬರ (Dalit Woman) ಮೇಲೆಯೇ ಅತ್ಯಾಚಾರ ಎಸಗುವ ಮೂಲಕ ಪೊಲೀಸ್ ವೃತ್ತಿ ಮಾತ್ರವಲ್ಲ ಮನುಷ್ಯ ಕುಲಕ್ಕೇ ಕಂಟಕ ಎನಿಸುವ ಕೆಲಸ ಮಾಡಿದ್ದಾನೆ.
ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಝಂಘಾಯಿ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿರುವ ಸುಧೀರ್ ಕುಮಾರ್ ಎಂಬಾತನು ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 21ರಂದು ಮಹಿಳೆಯೊ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆಕೆಯ ದೂರು ದಾಖಲಿಸಿಕೊಂಡು, ನ್ಯಾಯ ಒದಗಿಸಬೇಕಾದ ಎಸ್ಐ, ಮಹಿಳೆಗೆ ಮತ್ತು ಬರುವ ಔಷಧ ಇರುವ ಪಾನೀಯ ನೀಡಿ, ಬಳಿಕ ಕಾರಿನಲ್ಲಿ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಇದಾದ ಬಳಿಕ ಮಹಿಳೆಯು ಸುಧೀರ್ ಕುಮಾರ್ ಪಾಂಡೆ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 376 (ಅತ್ಯಾಚಾರ), 120 ಬಿ (ಕ್ರಿಮಿನಲ್ ಪಿತೂರಿ) ಹಾಗೂ ಎಸ್ಸಿ, ಎಸ್ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ, ಕೂಡಲೇ ಸುಧೀರ್ ಕುಮಾರ್ ಪಾಂಡೆಯನ್ನು ಅಮಾನತುಗೊಳಿಸಲಾಗಿದೆ. ಕೃತ್ಯ ಎಸಗಿದ ಸುಧೀರ್ ಕುಮಾರ್ ಪಾಂಡೆ ಈಗ ತಲೆಮರಿಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Physical Abuse : ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ; ನೊಂದ ದಂಪತಿಯ ಆತ್ಮಹತ್ಯೆ
ದಲಿತ ಮಹಿಳೆಗೆ ಹಲವು ದಿನಗಳಿಂದ ಕೆಲವು ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದರು. ಹಾಗೆಯೇ, ಆಕೆಗೆ ಜೀವ ಬೆದರಿಕೆಯನ್ನೂ ಹಾಕಿದ್ದರು. ಇದರಿಂದ ವಿಚಲಿತರಾದ ಮಹಿಳೆಯು ಅವರ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, ಆ ಮಹಿಳೆ ಮೇಲೆಯೇ ಪೊಲೀಸ್ ಅಧಿಕಾರಿ ಅತ್ಯಾಚಾರ ಎಸಗಿರುವುದು ನೀಚ ಕೃತ್ಯವಾಗಿದೆ. ಇನ್ನುಮುಂದೆ ಹೆಣ್ಣುಮಕ್ಕಳು ಪೊಲೀಸ್ ಠಾಣೆಗೂ ಒಬ್ಬರೇ ಹೋಗಬಾರದು ಎಂಬ ಸಂದೇಶ ರವಾನೆಯಾದಂತಾಗಿದೆ.
-
ದೇಶ13 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ20 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
South Cinema23 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಸುವಚನ8 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ13 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಕರ್ನಾಟಕ24 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ದೇಶ14 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್20 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು