ದೇಶ
Mohan Bhagwat: ಪಾಕ್ ಜನಕ್ಕೆ ನೆಮ್ಮದಿ ಇಲ್ಲ, ದೇಶ ವಿಭಜನೆ ಪ್ರಮಾದ ಎಂಬ ಭಾವನೆ ಇದೆ: ಮೋಹನ್ ಭಾಗವತ್
Mohan Bhagwat: ಭಾರತವು ಎಂದಿಗೂ ಬೇರೊಂದು ದೇಶದ ಮೇಲೆ ಆಕ್ರಮಣ ಮಾಡಿಲ್ಲ. ಹಾಗಂತ, ನಮ್ಮ ದೇಶದ ಮೇಲೆ ಬೇರೆಯವರು ದಾಳಿ ನಡೆಸಿದಾಗ ಸುಮ್ಮನೆ ಕುಳಿತಿಲ್ಲ. ಸರ್ಜಿಕಲ್ ಸ್ಟ್ರೈಕ್ ಇದಕ್ಕೆ ಉತ್ತಮ ಉದಾಹರಣೆ ಎಂದು ಮೋಹನ್ ಭಾಗವತ್ ಹೇಳಿದರು.
ಭೋಪಾಲ್: ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಆ ರಾಷ್ಟ್ರದ ಜನರು ಸಂತೋಷದಿಂದ ಇಲ್ಲ. ಅವರಿಗೆ ಈಗಲೂ ಭಾರತದಿಂದ ವಿಭಜನೆ ಆಗಿದ್ದು ಪ್ರಮಾದ ಎಂಬ ಭಾವನೆಯೇ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಭಾರತದ ಸಂಸ್ಕೃತಿ, ಬೇರೆಯವರ ಮೇಲೆ ದಾಳಿ ಮಾಡದಿರುವುದು, ಸ್ವಯಂ ರಕ್ಷಣೆ, ಸರ್ಜಿಕಲ್ ಸ್ಟ್ರೈಕ್ ಸೇರಿ ಹಲವು ವಿಷಯಗಳನ್ನು ಭಾಗವತ್ ಪ್ರಸ್ತಾಪಿಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ ಯುವ ಕ್ರಾಂತಿಕಾರಿ ಹೇಮು ಕಲಾನಿ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವತ್ ಮಾತನಾಡಿದರು. “1947ರಲ್ಲಿ ನಡೆದ ವಿಭಜನೆಗೂ ಮೊದಲು ಸಂಪೂರ್ಣ ಭಾರತ ಆಗಿತ್ತು. ಆದರೆ, ಭಾರತದಿಂದ ವಿಭಜನೆಗೊಂಡವರು ಈಗಲೂ ನೆಮ್ಮದಿಯಿಂದ ಇದ್ದಾರೆಯೇ? ಅವರಿಗೆ ಸಂತೋಷ ಎಂಬುದಿದೆಯೇ? ಈಗಲೂ ಅವರಿಗೆ ವಿಭಜನೆಯ ನೋವಿದೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದೇಶದ ಹಲವೆಡೆಯಿಂದ ಆಗಮಿಸಿದ ಸಿಂಧಿಗಳು ಭಾಗವಹಿಸಿದ್ದರು.
ಆಕ್ರಮಣಕಾರಿ ಮನಸ್ಥಿತಿ ನಮ್ಮದಲ್ಲ
ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧವು ಕೆಲ ವರ್ಷಗಳಿಂದ ಮತ್ತಷ್ಟು ಬಿಗಡಾಯಿಸಿರುವ ಕುರಿತು ಮಾತನಾಡಿದ ಅವರು, “ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕು ಎಂದು ಬಯಸುತ್ತಿಲ್ಲ. ಭಾರತವು ಇನ್ನೊಬ್ಬರ ಮೇಲೆ ದಾಳಿ ನಡೆಸುವ ಸಂಸ್ಕೃತಿಯನ್ನೇ ಹೊಂದಿಲ್ಲ. ನಮ್ಮ ಇತಿಹಾಸದಲ್ಲಿ ಎಲ್ಲಿಯೂ ನಾವು ದಾಳಿ ಮಾಡಿದ ನಿದರ್ಶನಗಳು ಇಲ್ಲ. ನಾವು ಯಾವಾಗಲೂ ನಮ್ಮ ರಕ್ಷಣೆಗೆ ಆದ್ಯತೆ ನೀಡಿದ್ದೇವೆಯೇ ಹೊರತು, ಆಕ್ರಮಣಕಾರಿ ನೀತಿ ನಮ್ಮದಾಗಿರಲಿಲ್ಲ” ಎಂದು ತಿಳಿಸಿದರು.
“ಪಾಕಿಸ್ತಾನದ ಜನರಿಗೆ ಈಗ ಅರ್ಥವಾಗುತ್ತಿದೆ. ಭಾರತದಿಂದ ಇಬ್ಭಾಗವಾಗಿರುವುದಕ್ಕೆ ಈಗ ಅವರಿಗೆ ಬೇಸರವಾಗಿರುತ್ತದೆ. ಭಾರತದಿಂದ ವಿಭಜನೆ ಆಗಿರುವುದು ತಪ್ಪು ಎಂಬುದು ಈಗ ಅವರಿಗೆ ಮನವರಿಕೆ ಆಗಿದೆ. ಹಾಗಾಗಿ ಪಾಕಿಸ್ತಾನದ ಜನ ಸಂತೋಷದಿಂದ ಇಲ್ಲ” ಎಂದರು. ಸರ್ಜಿಕಲ್ ಸ್ಟ್ರೈಕ್ ಕುರಿತು ಕೂಡ ಪ್ರಸ್ತಾಪಿಸಿದ ಅವರು, “ಭಾರತವು ಯಾವಾಗೂ ಸ್ವಯಂ ರಕ್ಷಣೆಗೆ ಆದ್ಯತೆ ನೀಡಿದೆ. ಹಾಗಂತ, ನಮ್ಮ ಮೇಲೆ ದಾಳಿ ನಡೆಸಿದರೆ ಸುಮ್ಮನಿರುವುದಿಲ್ಲ. ಇದಕ್ಕೆ ಸರ್ಜಿಕಲ್ ದಾಳಿಯೇ ಸಾಕ್ಷಿಯಾಗಿದೆ. ಮುಂದೆಯೂ ದೇಶದ ರಕ್ಷಣೆಗಾಗಿ ಇಂತಹ ದಾಳಿಗಳು ಮುಂದುವರಿಯುತ್ತವೆ” ಎಂದರು.
ಇತ್ತೀಚೆಗೆ ಮೋಹನ್ ಭಾಗವತ್ ಅವರು ಬ್ರಿಟಿಷ್ ಶಿಕ್ಷಣ ಪದ್ಧತಿ ಕುರಿತು ಮಾತನಾಡಿದ್ದರು. “ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಶುರುವಾಗುವುದಕ್ಕೂ ಮೊದಲಿನ ಕಾಲದಲ್ಲಿ ಇಲ್ಲಿನ ಶೇ.70ರಷ್ಟು ಜನರು ಸುಶಿಕ್ಷಿತ (ವಿದ್ಯಾವಂತ)ರಾಗಿದ್ದರು. ಅದೇ ಸಮಯದಲ್ಲಿ ಇಂಗ್ಲೆಂಡ್ನಲ್ಲಿ ಶೇ.17ರಷ್ಟು ಜನರು ಮಾತ್ರ ವಿದ್ಯಾವಂತರಾಗಿದ್ದರು. ಆಗ ಭಾರತದಲ್ಲಿ ನಿರುದ್ಯೋಗ ಸಮಸ್ಯೆಯೇ ಇರಲಿಲ್ಲ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದೇ ಬ್ರಿಟಿಷರು” ಎಂದು ತಿಳಿಸಿದ್ದರು.
“ಬ್ರಿಟಿಷರು ಇಲ್ಲಿಗೆ ಬರುವುದಕ್ಕೂ ಮೊದಲು ನಮ್ಮ ದೇಶದಲ್ಲಿ ಶೇ.70ರಷ್ಟು ಮಂದಿ ಸುಶಿಕ್ಷಿತರು ಇದ್ದರು. ಇಂಗ್ಲೆಂಡ್ನಲ್ಲಿ ಶಿಕ್ಷಣ ಪಡೆಯುವಿಕೆ ಪ್ರಮಾಣ ಶೇ.17ರಷ್ಟು ಇತ್ತು. ಇಲ್ಲಿಗೆ ಬಂದ ಬ್ರಿಟಿಷರು ನಮ್ಮಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ತಮ್ಮ ದೇಶದಲ್ಲಿ ಅನುಷ್ಠಾನಕ್ಕೆ ತಂದರು. ಹಾಗೇ, ಅವರ ದೇಶದ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ದೇಶದಲ್ಲಿ ಜಾರಿಗೊಳಿಸಿದರು. ಅದೇ ಕಾರಣಕ್ಕೆ ಭಾರತದ ಶಿಕ್ಷಣ ವ್ಯವಸ್ಥೆ ಹಾಳಾಯಿತು. ನಮ್ಮಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಾಗಿ, ಅವರ ದೇಶದಲ್ಲಿ ಸುಶಿಕ್ಷಿತರ ಪ್ರಮಾಣ ಜಾಸ್ತಿಯಾಯಿತು” ಎಂದಿದ್ದರು.
ಕ್ರೀಡೆ
Heart Attack: ಬ್ಯಾಡ್ಮಿಂಟನ್ ಆಡುತ್ತಿದ್ದವನ ಬಾಳಲ್ಲಿ ಆಟವಾಡಿದ ವಿಧಿ; ಹೃದಯಾಘಾತದಿಂದ ವ್ಯಕ್ತಿ ಸಾವು
Heart Attack: ನೊಯ್ಡಾ 11ನೇ ಸೆಕ್ಟರ್ ನಿವಾಸಿ ಮಹೇಂದ್ರ ಶರ್ಮಾ ಅವರು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಕಳೆದ ಐದು ವರ್ಷದಿಂದ ಅವರು ನಿತ್ಯ ಬ್ಯಾಡ್ಮಿಂಟನ್ ಆಡುತ್ತಿದ್ದರು. ಆದರೆ, ಅವರಿಗೆ ಶನಿವಾರ ಬೆಳಗ್ಗೆ ಹೃದಯಾಘಾತವಾಗಿದೆ. ಇದಾದ ಕೆಲವೇ ನಿಮಿಷದಲ್ಲಿ ಅವರು ಮೃತಪಟ್ಟಿದ್ದಾರೆ.
ನೊಯ್ಡಾ: ಇತ್ತೀಚೆಗೆ ಹೃದಯಾಘಾತಕ್ಕೀಡಾಗಿ, ಮೃತಪಡುತ್ತಿರುವವರ ಸಂಖ್ಯೆ ಜಾಸ್ತಿಯಾದ ಕಾರಣ ಜನರ ಬದುಕು ಮತ್ತಷ್ಟು ಅನಿಶ್ಚಿತತೆಯಿಂದ ಕೂಡಿದೆ. ನಮ್ಮೆದುರು ಚೆನ್ನಾಗಿ ಇರುವವರು ಕೆಲವೇ ಗಂಟೆಯಲ್ಲಿ ಹೃದಯಾಘಾತದಿಂದ ಸಾವಿಗೀಡಾಗುತ್ತಿರುವುದು ಭೀತಿ ಹುಟ್ಟಿಸಿದೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ ನೊಯ್ಡಾದಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಹೃದಯಾಘಾತದಿಂದ (Heart Attack) ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಸೆಕ್ಟರ್ 21 ಎನಲ್ಲಿರುವ ನೊಯ್ಡಾ ಸ್ಟೇಡಿಯಂನಲ್ಲಿ 52 ವರ್ಷದ ಮಹೇಂದ್ರ ಶರ್ಮಾ ಅವರು ಬ್ಯಾಡ್ಮಿಂಟನ್ ಆಡುತ್ತಿದ್ದರು. ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಅವರು ಕುಸಿದುಬಿದ್ದಿದ್ದಾರೆ. ಅವರು ಕುಸಿದು ಬೀಳುತ್ತಲೇ ಸ್ಟೇಡಿಯಂನಲ್ಲಿದ್ದ ತುರ್ತು ವೈದ್ಯಕೀಯ ತಂಡ ಆಗಮಿಸಿ ತಪಾಸಣೆ ಮಾಡಿದೆ. ವೈದ್ಯರು ಮಹೇಂದ್ರ ಶರ್ಮಾ ಅವರ ಎದೆ ಒತ್ತಿ, ತಿಕ್ಕಿದ್ದಾರೆ. ಆದರೂ, ಮಹೇಂದ್ರ ಶರ್ಮಾ ಅವರು ಸುಧಾರಿಸಿಕೊಳ್ಳದ ಕಾರಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹೇಂದ್ರ ಶರ್ಮಾ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. “ಶನಿವಾರ ಬೆಳಗ್ಗೆ 7.30ರ ಸುಮಾರಿಗೆ ಮಹೇಂದ್ರ ಶರ್ಮಾ ಅವರು ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಆಂಬ್ಯುಲೆನ್ಸ್ನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Heart attack: 16,000 ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಹೃದಯಾಘಾತಕ್ಕೆ ಬಲಿ
ಸೆಕ್ಟರ್ 11ನೇ ನಿವಾಸಿಯಾಗಿರುವ ಮಹೇಂದ್ರ ಶರ್ಮಾ ಅವರು ಕಳೆದ ಐದು ವರ್ಷದಿಂದ ಬ್ಯಾಡ್ಮಿಂಟನ್ ಆಡುತ್ತಿದ್ದರು. ಅಷ್ಟರಮಟ್ಟಿಗೆ ಅವರು ಆರೋಗ್ಯದ ಕಡೆ ಗಮನ ಹರಿಸುತ್ತಿದ್ದರು. ಆದರೆ, ಏಕಾಏಕಿ ಹಾರ್ಟ್ ಅಟಾಕ್ ಆಗಿ ಅವರು ಮೃತಪಟ್ಟಿರುವುದು ದುಃಖದ ವಿಚಾರ ಎಂದು ಮಹೇಂದ್ರ ಶರ್ಮಾ ಗೆಳೆಯರು ವಿಷಾದ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ, ಕಡಿಮೆ ವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ.
ದೇಶ
Narendra Modi: 14 ಪ್ರಧಾನಿಗಳು ಮಾಡಿದ್ದ ಸಾಲ 55 ಲಕ್ಷ ಕೋಟಿ ರೂ., ಮೋದಿ ಒಬ್ಬರೇ ಮಾಡಿದ ಸಾಲವೆಷ್ಟು?
Narendra Modi: ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಅವರು ಸುದ್ದಿಗೋಷ್ಠಿ ನಡೆಸಿ, ನರೇಂದ್ರ ಮೋದಿ ಅವರ ಅವಧಿಯಲ್ಲಿ ಮಾಡಲಾದ ಸಾಲದ ಮಾಹಿತಿಯನ್ನು ನೀಡಿದ್ದಾರೆ. ಹಾಗೆಯೇ, ಕಳೆದ ಒಂಬತ್ತು ವರ್ಷದಲ್ಲಿ ಮಾಡಿದ ಸಾಲವು ಎಷ್ಟುಪಟ್ಟು ಹೆಚ್ಚಾಗಿದೆ ಎಂಬುದನ್ನೂ ವಿವರಿಸಿದ್ದಾರೆ. ಅವರು ನೀಡಿದ ಮಾಹಿತಿಯ ಪ್ರಮುಖಾಂಶ ಹೀಗಿದೆ…
ನವದೆಹಲಿ: ಸ್ವಾತಂತ್ರ್ಯದ ಬಳಿಕ ದೇಶವನ್ನು ಮುನ್ನಡೆಸಿದ ಪ್ರಧಾನಿಗಳು ಮಾಡಿದ ಸಾಲ ಹಾಗೂ ನರೇಂದ್ರ ಮೋದಿ ಅವರ ಅವಧಿಯಲ್ಲಿ ಮಾಡಲಾದ ಸಾಲದ ಅಂಕಿ-ಅಂಶವನ್ನು ಇಟ್ಟುಕೊಂಡು ಮೋದಿ ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ನರೇಂದ್ರ ಮೋದಿ (Narendra Modi) ಅವರು ಆಡಳಿತ ನಡೆಸುತ್ತಿರುವ 9 ವರ್ಷದ ಅವಧಿಯಲ್ಲಿ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಅವರು ಸುದ್ದಿಗೋಷ್ಠಿ ನಡೆಸಿ ಮೋದಿ ಅವಧಿಯಲ್ಲಾದ ಸಾಲದ ಕುರಿತು ಮಾಹಿತಿ ನೀಡಿದರು. “2014ರಲ್ಲಿ ದೇಶದ ಸಾಲ 55 ಲಕ್ಷ ಕೋಟಿ ರೂಪಾಯಿ ಇತ್ತು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ. ಸದ್ಯ, ದೇಶದ ಸಾಲ 155 ಲಕ್ಷ ಕೋಟಿ ರೂಪಾಯಿ ಇದೆ. ಒಂಬತ್ತು ವರ್ಷದಲ್ಲಿಯೇ 100 ಲಕ್ಷ ಕೋಟಿ ರೂಪಾಯಿ ಸಾಲ ಮಾಡಲಾಗಿದೆ” ಎಂದು ಅಂಕಿ-ಅಂಶಗಳ ಸಮೇತ ಕುಟುಕಿದರು.
“ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರವನ್ನು ತೆಗಳುತ್ತಿದ್ದರು. ಭ್ರಷ್ಟ, ಅಸಮರ್ಥ ಎಂದೆಲ್ಲ ಟೀಕಿಸುತ್ತಿದ್ದರು. ಆದರೆ, ಒಂಬತ್ತು ವರ್ಷದಲ್ಲಿ ದೇಶದ ಸಾಲದ ಪ್ರಮಾಣ ಏರಿಕೆಯಾಗಿದ್ದು ನೋಡಿದರೆ, ಟೀಕೆಗಳು ಮೋದಿ ಅವರಿಗೇ ಹೆಚ್ಚು ಸಮಂಜಸ ಎನಿಸುತ್ತವೆ. ದೇಶದ ಆರ್ಥಿಕತೆ ಹಾಳು ಮಾಡಿದ್ದು, ನಿರುದ್ಯೋಗ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಹಣದುಬ್ಬರ ಹೆಚ್ಚಳ ಸೇರಿ ಹಲವು ದಿಸೆಯಲ್ಲಿ ದೇಶವನ್ನು ಮೋದಿ ಸರ್ಕಾರ ಹಾಳುಮಾಡಿದೆ. ಎಲ್ಲ ನಕಾರಾತ್ಮಕ ಏರಿಕೆಗಳು ಎಚ್ಚರಿಕೆಯ ಗಂಟೆಗಳಾಗಿವೆ” ಎಂದು ಹೇಳಿದರು.
ಇದನ್ನೂ ಓದಿ: Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ
“ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದ 67 ವರ್ಷದಲ್ಲಿ 14 ಪ್ರಧಾನಿಗಳು 55 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದರು. ಆದರೆ, ಮೋದಿ ಅವರೊಬ್ಬರೇ 100 ಕೋಟಿ ರೂಪಾಯಿ ಸಾಲ ಮಾಡಿರುವುದು ಅಪಾಯಕಾರಿ ಸಂಗತಿಯಾಗಿದೆ. ಸದ್ಯದ ಆರ್ಥಿಕ ಬೆಳವಣಿಗೆಯ ಕುರಿತ ಮಾಹಿತಿಯು ಹೆಡ್ಲೈನ್ ಮ್ಯಾನೇಜ್ಮೆಂಟ್ ರೀತಿಯೇ ಆಗಿದೆ. ಇದರಿಂದ ದೇಶದ ವಿತ್ತೀಯ ಸ್ಥಿತಿ ಸುಧಾರಣೆಯಾಗುವುದಿಲ್ಲ” ಎಂದು ತಿಳಿಸಿದರು.
ದೇಶ
Garbha Sanskar: ‘ರಾಷ್ಟ್ರಭಕ್ತ’ ಮಕ್ಕಳ ಜನನಕ್ಕಾಗಿ ಆರೆಸ್ಸೆಸ್ ‘ಗರ್ಭ ಸಂಸ್ಕಾರ’ ಅಭಿಯಾನ, ಭಾನುವಾರ ಚಾಲನೆ
Garbha Sanskar: ಜನಿಸುವ ಮಕ್ಕಳಲ್ಲಿ ದೇಶಭಕ್ತಿ, ಸಂಸ್ಕಾರ, ಮೌಲ್ಯಗಳು ಅಡಕವಾಗಿರಬೇಕು ಎಂಬ ದೃಷ್ಟಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾನುವಾರ ಗರ್ಭಸಂಸ್ಕಾರ ಅಭಿಯಾನವನ್ನು ಆರಂಭಿಸಲಿದೆ.
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (RSS) ದೇಶಾದ್ಯಂತ ಸೋಮವಾರದಿಂದ ‘ಗರ್ಭ ಸಂಸ್ಕಾರ’ ಅಭಿಯಾನಕ್ಕೆ ಚಾಲನೆ ನೀಡಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇಶದಲ್ಲಿ ಸಂಸ್ಕಾರವಂತ ಹಾಗೂ ದೇಶಭಕ್ತ ಮಕ್ಕಳ ಜನನಕ್ಕಾಗಿ ಗರ್ಭಿಣಿಯರು ಭಗವದ್ಗೀತೆ, ರಾಮಾಯಣ ಗ್ರಂಥಗಳನ್ನು ಓದುವಂತೆ ಪ್ರೋತ್ಸಾಹಿಸಲು ಆರ್ಎಸ್ಎಸ್ ಅಭಿಯಾನ ಕೈಗೊಳ್ಳುತ್ತಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಿಳಾ ಘಟಕವಾದ ರಾಷ್ಟ್ರ ಸೇವಿಕಾ ಸಂಘದ ಅಂಗಸಂಸ್ಥೆಯಾದ ಸಂವರ್ಧಿನಿ ನ್ಯಾಸ್ (Samvardhinee Nyas) ಎಂಬ ಅಂಗಸಂಸ್ಥೆಯಿಂದ ದೇಶಾದ್ಯಂತ ಅಭಿಯಾನ ಕೈಗೊಳ್ಳಲಾಗುತ್ತಿದೆ. “ಜನಿಸುವ ಮಕ್ಕಳಲ್ಲಿ ಸಂಸ್ಕೃತಿ, ಮೌಲ್ಯಗಳು ಹಾಗೂ ದೇಶಭಕ್ತಿ ಅಡಕವಾಗಿರಬೇಕು ಎಂಬ ದೃಷ್ಟಿಯಿಂದ ವೈಜ್ಞಾನಿಕ ದೃಷ್ಟಿಯಿಂದಲೇ ಗರ್ಭ ಸಂಸ್ಕಾರ ಅಭಿಯಾನ ಕೈಗೊಳ್ಳಲಾಗುತ್ತಿದೆ” ಎಂದು ಸಂವರ್ಧಿನಿ ನ್ಯಾಸ್ ಸಂಸ್ಥೆ ತಿಳಿಸಿದೆ.
ಹೇಗೆ ನಡೆಯುತ್ತದೆ ಅಭಿಯಾನ?
“ಗರ್ಭಿಣಿಯರು ಭಗವದ್ಗೀತೆ, ರಾಮಾಯಣದಂತಹ ಧರ್ಮಗ್ರಂಥಗಳನ್ನು ಓದಲು ಪ್ರೋತ್ಸಾಹಿಸುವುದು, ಸಂಸ್ಕೃತದ ಶ್ಲೋಕಗಳನ್ನು ಪಠಿಸುವುದು, ಗರ್ಭವತಿಯಾದ ಬಳಿಕ ಸಾತ್ವಿಕ ಆಹಾರ ಸೇವಿಸುವುದು, ಯೋಗಾಭ್ಯಾಸ ಮಾಡುವುದು ಅಭಿಯಾನದ ಉದ್ದೇಶವಾಗಿದೆ. ಗರ್ಭಿಣಿಯರು ಇಷ್ಟೆಲ್ಲ ಚಟುವಟಿಕೆಗಳು ಆರಂಭಿಸಿ, ಮಗುವಿಗೆ ಎರಡು ವರ್ಷ ತುಂಬುವವರೆಗೆ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸಲಾಗುತ್ತದೆ” ಎಂದು ಮಾಹಿತಿ ನೀಡಿದೆ.
“ಅಭಿಯಾನದ ಜಾರಿಗಾಗಿ ದೇಶದಲ್ಲಿ ಐದು ಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ. ಇದಕ್ಕಾಗಿ ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡದಲ್ಲಿ 10 ವೈದ್ಯರು ಇರುತ್ತಾರೆ. ಪ್ರತಿಯೊಬ್ಬ ವೈದ್ಯರು ಆಯಾ ಸೀಮಿತ ಪ್ರದೇಶದ ವ್ಯಾಪ್ತಿಯಲ್ಲಿ ತಲಾ 20 ಗರ್ಭಿಣಿಯರಿಗೆ ಅಭಿಯಾನದ ಜಾರಿ, ಚಟುವಟಿಕೆ ಕೈಗೊಳ್ಳುವ ಕುರಿತು ಮಾರ್ಗದರ್ಶನ ನೀಡಲಿದ್ದಾರೆ” ಎಂದು ಸಂಸ್ಥೆಯು ವಿವರಿಸಿದೆ.
ಇದನ್ನೂ ಓದಿ: RSS: ʼಆರ್ಎಸ್ಎಸ್ʼಗೆ ನೀಡಿದ್ದ ಭೂಮಿ ಹಿಂಪಡೆಯಲಿದೆಯೇ ಸರ್ಕಾರ?: ಮಾಹಿತಿ ಕೇಳಿದ ಸಿಎಂ ಸಿದ್ದರಾಮಯ್ಯ
ವಾಷಿಂಗ್ಟನ್ ವಿಶ್ವವಿದ್ಯಾಲಯದ ವರದಿಯ ಪ್ರಕಾರ, ಗರ್ಭದಲ್ಲಿರುವಾಗಲೇ ಶಿಶುಗಳು ಭಾಷೆಯನ್ನು ಕಲಿತುಕೊಳ್ಳಲು ಪ್ರಾರಂಭಿಸುತ್ತವೆ. ಗರ್ಭಾವಸ್ಥೆಯ 30 ವಾರಗಳಲ್ಲಿ ಶ್ರವಣೇಂದ್ರಿಯ ಮತ್ತು ಮೆದುಳಿನ ಕಾರ್ಯವಿಧಾನಗಳು ಅಭಿವೃದ್ಧಿಯಾಗುತ್ತದೆ. ಗರ್ಭದಲ್ಲಿರುವ ಮಕ್ಕಳು ಗರ್ಭಾವಸ್ಥೆಯ ಕೊನೆಯ 10 ವಾರಗಳಲ್ಲಿ ತಮ್ಮ ತಾಯಂದಿರ ಮಾತುಗಳನ್ನು ಕೇಳುತ್ತಾರೆ ಎಂದು ತಿಳಿದುಬಂದಿದೆ.
ದೇಶ
Kshama Bindu: ತನ್ನನ್ನು ತಾನೇ ಮದುವೆ ಆಗಿದ್ದ ಯುವತಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಹೇಗಿತ್ತು ಜರ್ನಿ?
Kshama Bindu: ಕಳೆದ ವರ್ಷದ ಜೂನ್ 9ರಂದು ಕ್ಷಮಾ ಬಿಂದು ತಮ್ಮನ್ನು ತಾವೇ ಮದುವೆಯಾಗಿದ್ದರು. ನನಗೆ ವರ ಬೇಡ, ಸ್ವಯಂ ಮದುವೆಯಾಗುತ್ತೇನೆ ಎಂದು, ತಮಗೆ ತಾವೇ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಈಗ ಅವರ ಸ್ವಯಂ ವಿವಾಹಕ್ಕೆ ಮೊದಲ ವಾರ್ಷಿಕೋತ್ಸವದ ಸಂಭ್ರಮ.
ಗಾಂಧಿನಗರ: ಕಳೆದ ವರ್ಷ ಗುಜರಾತ್ನಲ್ಲಿ ತನ್ನನ್ನು ತಾನೇ ಮದುವೆಯಾಗುವ (Sologamy) ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಕ್ಷಮಾ ಬಿಂದು (Kshama Bindu) ಅವರು ಮೊದಲ ವರ್ಷದ ಸ್ವಯಂ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಅಲ್ಲದೆ, ಕಳೆದ ಒಂದು ವರ್ಷದ ವೈವಾಹಿಕ ಜೀವನದ ಕುರಿತು ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಅವರ ವಿವಾಹ ವಾರ್ಷಿಕೋತ್ಸವ ಜರ್ನಿಯ ವಿಡಿಯೊ ಈಗ ವೈರಲ್ ಆಗಿದೆ.
ಕ್ಷಮಾ ಬಿಂದು ಅವರು ಕಳೆದ ವರ್ಷ ತಮ್ಮನ್ನು ತಾವೇ ಮದುವೆಯಾಗಿದ್ದು, ಮದುವೆಯಾದ ಸುಂದರ ಕ್ಷಣಗಳು, ಸ್ವಯಂ ಮದುವೆಯ ಮೊದಲ ವಾರ್ಷಿಕೋತ್ಸವದ ಆಚರಣೆ, ಒಂದು ವರ್ಷದಲ್ಲಿ ಮಾಡಿದ ಪ್ರವಾಸ, ಅನುಭವಿಸಿದ ಮಧುರ ಕ್ಷಣಗಳು ಇರುವ ವಿಡಿಯೊವನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಸ್ವಯಂ ವಿವಾಹವಾದ ಒಂದು ವರ್ಷದಲ್ಲಿ ಹೇಗೆ ಬದುಕನ್ನು ಖುಷಿಯಿಂದ ಕಳೆದೆ ಎಂಬುದನ್ನು ಅವರು ವಿಡಿಯೊ ಮೂಲಕ ಜನರ ಎದುರಿಟ್ಟಿದ್ದಾರೆ. ಇದಕ್ಕೆ ಜನ ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಕ್ಷಮಾ ಬಿಂದು ಅವರು ತಮಗೆ ತಾವೇ “Happy Anniversary” ಎಂದು ವಿಶ್ ಮಾಡಿಕೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೊ
ಇದನ್ನೂ ಓದಿ: ತನ್ನನ್ನು ತಾನೇ ಮದುವೆಯಾಗಿ 24 ಗಂಟೆಯಲ್ಲೇ ವಿಚ್ಛೇದನ ಪಡೆದ ಯುವತಿ; ಒಂದಿನವೂ ಕಳೆಯಲಾಗಲಿಲ್ಲವಂತೆ!
ಕ್ಷಮಾ ಬಿಂದು 2022 ಜೂ.11 ರಂದು ಗುಜರಾತ್ನ ದೇವಸ್ಥಾನವೊಂದರಲ್ಲಿ ನನ್ನನ್ನು ನಾನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ ಬಿಜೆಪಿ ನಾಯಕಿ ಸುನೀತಾ ಶುಕ್ಲಾ, ʼಇಂಥ ಸ್ವಯಂ ಮದುವೆಗಳಿಗೆ ನನ್ನ ವಿರೋಧವಿದೆ. ಇದರಿಂದ ಹಿಂದು ಜನಸಂಖ್ಯೆ ಕಡಿಮೆಯಾಗುತ್ತದೆ. ಕ್ಷಮಾ ಬಿಂದು ಯಾವುದೇ ದೇವಸ್ಥಾನದಲ್ಲೂ ಸ್ವಯಂ ವಿವಾಹವಾಗಲು ನಾವು ಅವಕಾಶ ಕೊಡುವುದಿಲ್ಲʼ ಎಂದು ಹೇಳಿದ್ದರು. ಇವರಷ್ಟೇ ಅಲ್ಲ, ಕಾಂಗ್ರೆಸ್ನ ಕೆಲವು ರಾಜಕಾರಣಿಗಳೂ ಇದನ್ನು ವಿರೋಧಿಸಿದ್ದರು. ತಮ್ಮ ಸೋಲೊಗಮಿಗೆ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ ಕ್ಷಮಾ ಬಿಂದು ಜೂನ್ 9ರಂದೇ ತಮ್ಮನ್ನು ತಾವು ವರಿಸಿದ್ದರು. ಇದು ದೇಶದ ಮೊದಲ ಸ್ವಯಂ ಮದುವೆ ಎಂದು ಕೂಡ ಖ್ಯಾತಿಯಾಗಿತ್ತು.
ಗುಜರಾತ್ನ ಗೋತ್ರಿ ಏರಿಯಾದಲ್ಲಿರುವ ತಮ್ಮ ಮನೆಯಲ್ಲಿಯೇ ಕ್ಷಮಾ ಮದುವೆಯಾಗಿದ್ದರು. ಸುಮಾರು 40 ನಿಮಿಷಗಳ ಕಾಲ ವಿವಾಹ ಕಾರ್ಯಕ್ರಮ ನಡೆದಿತ್ತು. ಇನ್ನೊಂದು ಬಹುಮುಖ್ಯ ಅಂಶವೆಂದರೆ ಪುರೋಹಿತರೂ ಇರಲಿಲ್ಲ. ಆದರೆ ಕ್ಷಮಾ ಇಚ್ಛೆಯೇ ಹಾಗಿತ್ತು. ಅವರಿಗೆ ವರನೇ ಬೇಕಾಗಿಲ್ಲ ಎಂದ ಮೇಲೆ ಪುರೋಹಿತರು ಬಂದೇನು ಮಾಡುತ್ತಾರೆ? ಇಷ್ಟೆಲ್ಲ ಆದ ಮೇಲೆ ತನ್ನನ್ನು ತಾನು ವಿವಾಹಿತ ಮಹಿಳೆ ಎಂದೇ ಕ್ಷಮಾ ಬಿಂದು ಕರೆದುಕೊಂಡಿದ್ದರು. ಮತ್ತು ಹೀಗೆ ಕರೆದುಕೊಳ್ಳಲು ಸಂತೋಷವಾಗುತ್ತಿದೆ ಎಂದೂ ತಿಳಿಸಿದ್ದರು. ಅದರಂತೆ, ಅವರು ಒಂದು ವರ್ಷವನ್ನು ಸಂತಸದಿಂದ ಕಳೆದಿದ್ದಾರೆ.
-
ಪ್ರಮುಖ ಸುದ್ದಿ2 hours ago
Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!
-
ಆರೋಗ್ಯ21 mins ago
Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!
-
ಕ್ರಿಕೆಟ್21 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್21 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ18 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್19 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
ಕರ್ನಾಟಕ17 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ
-
South Cinema18 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ