ವಿಸ್ತಾರ ಸಂಪಾದಕೀಯ | ಕ್ಷೇತ್ರದಿಂದ ದೂರ ಇದ್ದರೂ ಮತದಾನ ಸಾಧ್ಯ! ಚುನಾವಣೆ ಆಯೋಗದ ಕ್ರಾಂತಿಕಾರಕ ಪ್ರಯೋಗ - Vistara News

ದೇಶ

ವಿಸ್ತಾರ ಸಂಪಾದಕೀಯ | ಕ್ಷೇತ್ರದಿಂದ ದೂರ ಇದ್ದರೂ ಮತದಾನ ಸಾಧ್ಯ! ಚುನಾವಣೆ ಆಯೋಗದ ಕ್ರಾಂತಿಕಾರಕ ಪ್ರಯೋಗ

ರಿಮೋಟ್‌ ವೋಟಿಂಗ್‌ ಮೆಷಿನ್‌ ಸಂಪೂರ್ಣ ಪಾರದರ್ಶಕ ಎಂಬುದನ್ನು ಸಾಬೀತುಪಡಿಸುವುದು ಮತ್ತು ಖಚಿತಪಡಿಸುವುದು ಚುನಾವಣೆ ಆಯೋಗದ ಜವಾಬ್ದಾರಿಯಾಗಿದೆ. ಈ ಹೊಸ ಸಾಧನ ಅಕ್ರಮ ಮತದಾನಕ್ಕೆ ದಾರಿ ಆಗದಂತೆ ಎಚ್ಚರ ವಹಿಸುವುದು ಅಗತ್ಯ.

VISTARANEWS.COM


on

Voting
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೇಂದ್ರ ಚುನಾವಣೆ ಆಯೋಗವು ಮತ್ತೊಂದು ಕ್ರಾಂತಿಕಾರಕ ಪ್ರಯೋಗಕ್ಕೆ ಮುಂದಾಗಿದೆ. ಚುನಾವಣೆ ಆಯೋಗ ಪ್ರಸ್ತಾಪಿಸಿರುವ ರಿಮೋಟ್‌ ವೋಟಿಂಗ್‌ ಮೆಷಿನ್‌ (ಆರ್‌ವಿಎಂ) ಯೋಜನೆ ಜಾರಿಗೆ ಬಂದರೆ, ಮತದಾನದ ದಿನ ನಾನಾ ಕಾರಣಗಳಿಂದ ಕ್ಷೇತ್ರದಿಂದ ದೂರ ಇದ್ದರೂ ಮತ ಚಲಾಯಿಸಬಹುದಾಗಿದೆ!

ಕೇಂದ್ರ ಚುನಾವಣೆ ಆಯೋಗದ ಮುಖ್ಯ ಆಯುಕ್ತ ರಾಜೀವ್‌ ಕುಮಾರ್‌ ಅವರು ಚುನಾವಣೆ ವ್ಯವಸ್ಥೆಯಲ್ಲಿನ ಸುಧಾರಣೆಗೆ ಹಲವು ಕ್ರಮ ಕೈಗೊಳ್ಳುತ್ತಿದ್ದಾರೆ. ಅವುಗಳಲ್ಲಿ ಇದೂ ಒಂದು. ಈಗ ಸಿದ್ಧಪಡಿಸಿರುವ ಒಂದು ಆರ್‌ವಿಎಂ ಸಾಧನದ ಮೂಲಕ ಒಟ್ಟು 72 ಮತ ಕ್ಷೇತ್ರಗಳನ್ನು ಸಂಪರ್ಕಿಸಬಹುದಾಗಿದೆ.

ಹಾಗಂತ ಇದನ್ನು ತರಾತುರಿಯಲ್ಲಿ ಜಾರಿ ಮಾಡಲಾಗದು. ಈ ಹೊಸ ವಿಧಾನವನ್ನು ಜಾರಿ ಮಾಡಬೇಕೆಂದರೆ, ಜನ ಪ್ರತಿನಿಧಿ ಕಾಯಿದೆ ಸೇರಿದಂತೆ ಮೂರು ಕಾಯಿದೆಗಳಿಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಆಡಳಿತಾತ್ಮಕವಾಗಿ ಆ ಯಂತ್ರಗಳ ಕಾರ್ಯ ನಿರ್ವಹಣೆ, ಪಾರದರ್ಶಕ ವ್ಯವಸ್ಥೆ ಸೇರಿದಂತೆ ಹಲವು ತಯಾರಿ ಮಾಡಬೇಕಾಗುತ್ತದೆ. ಇದಕ್ಕಿರುವ ತಾಂತ್ರಿಕ ಸವಾಲುಗಳನ್ನೂ ನಿವಾರಿಸಬೇಕಾಗುತ್ತದೆ. ಈ ಬಗ್ಗೆ ಚರ್ಚಿಸಲು ಕೇಂದ್ರ ಚುನಾವಣೆ ಆಯೋಗವು ದೇಶದ 8 ರಾಷ್ಟ್ರೀಯ ಪಕ್ಷಗಳ ಪ್ರಮುಖರ ಸಭೆಯನ್ನು ಜ.16ರಂದು ಕರೆದಿದೆ. ರಾಷ್ಟ್ರೀಯ ಪಕ್ಷಗಳ ಅಭಿಮತವೂ ಇಲ್ಲಿ ಮುಖ್ಯವಾಗುತ್ತದೆ.

ಪ್ರಸ್ತಾಪಿತ ರಿಮೋಟ್ ವೋಟಿಂಗ್ ಮೆಷಿನ್RVMನಿಂದ ಹಲವು ಪ್ರಯೋಜನಗಳಿವೆ. ಎಲೆಕ್ಷನ್‌ ದಿನ ಅನಿವಾರ್ಯ ಕಾರಣಗಳಿಂದ ಕ್ಷೇತ್ರದಿಂದ ಹೊರಗೆ ಹೋಗಿರುವವರೂ ಮತ ಚಲಾಯಿಸಲು ಸಾಧ್ಯ ಆಗುವುದರಿಂದ ಮತದಾನದ ಪ್ರಮಾಣವೂ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ನಗರ ಪ್ರದೇಶದ ಯುವ ಜನ ಎಲೆಕ್ಷನ್ ದಿನವೇ ಪ್ರವಾಸಕ್ಕಾಗಿ ಹೊರ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ನಗರ ಪ್ರದೇಶದಲ್ಲಿ ಮತ ಪ್ರಮಾಣ ಕಡಿಮೆ ಆಗುತ್ತಿದೆ. RVM ವ್ಯವಸ್ಥೆ ಜಾರಿಗೆ ಬಂದರೆ ಅವರೂ ಮತ ಚಲಾಯಿಸಬಹುದು. ಇನ್ನು ಹೊಟ್ಟೆಪಾಡಿಗಾಗಿ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆಯೂ ಗಣನೀಯ. ಹೊಸ ವ್ಯವಸ್ಥೆಯ ಅಡಿ ಅವರೂ ಮತ ಚಲಾಯಿಸಲು ಸಾಧ್ಯ ಆಗುವುದರಿಂದ ಸಹಜವಾಗಿಯೇ ಮತ ಚಲಾವಣೆ ಪ್ರಮಾಣದಲ್ಲಿ ಏರಿಕೆ ಆಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ, ಭಯೋತ್ಪಾಕರ ಬೆದರಿಕೆ ಮತ್ತು ಹತ್ಯಾಕಾಂಡದ ಕಾರಣ ಕಣಿವೆಯಿಂದ ಓಡಿ ಬಂದಿರುವ ಕಾಶ್ಮೀರದ ಮಣ್ಣಿನ ಮಕ್ಕಳಾದ ಲಕ್ಷಾಂತರ ಪಂಡಿತರು ಜಮ್ಮು – ಕಾಶ್ಮೀರ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಬಹುದಾಗಿದೆ. ಈ ಮೂಲಕ ಅಲ್ಲಿಯ ಚುನಾವಣೆ ಮತ್ತು ಸರ್ಕಾರ ಸ್ಥಾಪನೆ ವ್ಯವಸ್ಥೆಯಲ್ಲಿ ಅವರೂ ಶಾಮೀಲಾಗಲು ಸಾಧ್ಯವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ರಿಮೋಟ್‌ ವೋಟಿಂಗ್‌ ಮೆಷಿನ್‌ ವ್ಯವಸ್ಥೆ ಐತಿಹಾಸಿಕ ಆಗಲಿದೆ.

ಆದರೆ ಈ ವಿಧಾನವನ್ನು ಎಲ್ಲ ರಾಜಕೀಯ ಪಕ್ಷಗಳು ತಕ್ಷಣ ಒಪ್ಪುತ್ತವೆ ಎಂದು ನಿರೀಕ್ಷಿಸಲಾಗದು. ಈಗಾಗಲೇ ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌(EVM) ಬಗ್ಗೆ ಅಪಸ್ವರ ಇದ್ದೇ ಇದೆ. ಹಾಗಾಗಿ, ಹೊಸ ವ್ಯವಸ್ಥೆ ಸಂಪೂರ್ಣ ಪಾರದರ್ಶಕ ಎಂಬುದನ್ನು ಸಾಬೀತುಪಡಿಸುವುದು ಮತ್ತು ಖಚಿತಪಡಿಸುವುದು ಚುನಾವಣೆ ಆಯೋಗದ ಜವಾಬ್ದಾರಿಯಾಗಿದೆ. ಈ ಹೊಸ ಸಾಧನ ಅಕ್ರಮ ಮತದಾನಕ್ಕೆ ದಾರಿ ಆಗದಂತೆ ಎಚ್ಚರ ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳನ್ನು ಕೇಂದ್ರ ಚುನಾವಣೆ ಆಯೋಗ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿ ಇಡಬೇಕು. ಹಾಗೆಯೇ ರಾಜಕೀಯ ಪಕ್ಷಗಳು ಕೂಡ ವಿರೋಧಕ್ಕಾಗಿಯೇ ವಿರೋಧ ಮಾಡದೆ ಈ ಹೊಸ ವ್ಯವಸ್ಥೆಯ ಬಗ್ಗೆ ವಸ್ತುನಿಷ್ಠ ಅಭಿಪ್ರಾಯ ನೀಡಬೇಕು. ಏಕೆಂದರೆ, ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಯ ಹೆಜ್ಜೆಗಳನ್ನು ಇರಿಸಲೇಬೇಕಾಗುತ್ತದೆ. 80ರ ದಶಕದಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ ಬಗ್ಗೆ ಚುನಾವಣೆ ಆಯೋಗ ಪ್ರಸ್ತಾಪ ಮಾಡಿದ್ದಾಗಲೂ ಹಲವು ಸವಾಲುಗಳು ಎದುರಾಗಿದ್ದವು. ಇದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿತ್ತು. 1982ರಲ್ಲಿ ಮೊದಲ ಬಾರಿ ಇವಿಎಂಗಳನ್ನು ಕೇರಳದ ಪರವೂರ್‌ ವಿಧಾನಸಭೆ ಕ್ಷೇತ್ರದ 50 ಬೂತ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಆ ಬಳಿಕ 2004ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಇವಿಎಂಗಳನ್ನು ಯಶಸ್ವಿಯಾಗಿ ಬಳಸಲಾಯಿತು. ವಿಶ್ವದ ಹಲವು ದೇಶಗಳಿಗೆ ಇವಿಎಂ ವಿಚಾರದಲ್ಲಿ ಭಾರತವೇ ಮಾದರಿಯಾಗಿದೆ. ಸೋತಾಗ ಪ್ರತಿಪಕ್ಷಗಳು ಮಾಡುವ ಆಪಾದನೆಗಳ ನಡುವೆಯೂ ವಿದ್ಯುನ್ಮಾನ ಮತ ಯಂತ್ರ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮತ ಚೀಟಿ ಕಾಲದಲ್ಲಿ ಕೆಲವೊಮ್ಮೆ ಎರಡು ದಿನ ಕಳೆದರೂ ಫಲಿತಾಂಶ ಸಿಗುತ್ತಿರಲಿಲ್ಲ. ಈಗ ಕೆಲವೇ ಗಂಟೆಯೊಳಗೆ ಎಲೆಕ್ಷನ್‌ ರಿಸಲ್ಟ್‌ ಲಭ್ಯವಾಗುತ್ತಿದೆ. ಮತದಾನ ವ್ಯವಸ್ಥೆಯೂ ಸರಾಗವಾಗಿದೆ. ದೇಶಾದ್ಯಂತ ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುವ ಬಗ್ಗೆಯೂ ಗಂಭೀರ ಚರ್ಚೆ ಕೆಲವು ವರ್ಷಗಳಿಂದ ನಡೆಯುತ್ತಿದೆ. ಹೀಗೆ, ಚುನಾವಣೆ ಸುಧಾರಣೆ ಕ್ರಮಗಳು ಸಹಜ ಮತ್ತು ಸ್ವಾಗತಾರ್ಹ ಕೂಡ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮತ್ತೆ ಅಲ್ ಕೈದಾದ ಒಣ ಬೆದರಿಕೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Nirav Modi: ನೀರವ್‌ ಮೋದಿಗೆ ಲಂಡನ್‌ ಜೈಲೇ ಗತಿ; 5ನೇ ಬಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

Nirav Modi: ನೀರವ್‌ ಮೋದಿ ಜಾಮೀನು ಅರ್ಜಿಯನ್ನು ನ್ಯಾಯಾಧೀಶ ಜಾನ್‌ ಜಾನಿ ಕೈಗೆತ್ತಿಕೊಂಡರು. “ನೀರವ್‌ ಮೋದಿಗೆ ಜಾಮೀನು ನೀಡಿದರೆ ಅವರು ಮತ್ತೆ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ. ಹಾಗೆಯೇ, ಪ್ರಭಾವಿಯಾಗಿರುವ ಕಾರಣ ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯೂ ಇದೆ ಎಂದು ತಿಳಿಸಿ ನೀರವ್‌ ಮೋದಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

VISTARANEWS.COM


on

Nirav modi
Koo

ಲಂಡನ್‌: ದೇಶಭ್ರಷ್ಟ ಆರ್ಥಿಕ ಅಪರಾಧಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (Punjab National Bank) ಸಾವಿರಾರು ಕೋಟಿ ರೂ. ವಂಚಿಸಿ ದೇಶ ತೊರೆದಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ (Nirav Modi) ಸಲ್ಲಿಸಿದ ಜಾಮೀನು ಅರ್ಜಿಯನ್ನು ಲಂಡನ್‌ ಕೋರ್ಟ್‌ ತಿರಸ್ಕರಿಸಿದೆ. ಇದರಿಂದಾಗಿ ನೀರವ್‌ ಮೋದಿಯು ಹಿಸ್‌ ಮೆಜೆಸ್ಟೀಸ್‌ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ. ನೀರವ್‌ ಮೋದಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಲಂಡನ್‌ನಲ್ಲಿರುವ ವೆಸ್ಟ್‌ ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ (Westminster Magistrates Court) ನಿರಾಕರಿಸಿತು. ಇದರೊಂದಿಗೆ ಸತತ ಐದನೇ ಬಾರಿಯೂ ನೀರವ್‌ ಮೋದಿ ಜಾಮೀನು ಅರ್ಜಿಯು ತಿರಸ್ಕೃತಗೊಂಡಂತಾಗಿದೆ.

ನೀರವ್‌ ಮೋದಿ ಜಾಮೀನು ಅರ್ಜಿಯನ್ನು ನ್ಯಾಯಾಧೀಶ ಜಾನ್‌ ಜಾನಿ ಕೈಗೆತ್ತಿಕೊಂಡರು. “ನೀರವ್‌ ಮೋದಿಗೆ ಜಾಮೀನು ನೀಡಿದರೆ ಅವರು ಮತ್ತೆ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ. ಹಾಗೆಯೇ, ಪ್ರಭಾವಿಯಾಗಿರುವ ಕಾರಣ ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯೂ ಇದೆ. ಹಾಗಾಗಿ, ನೀರವ್‌ ಮೋದಿಗೆ ಯಾರೂ ಜಾಮೀನು ನೀಡಲು ಸಾಧ್ಯವಿಲ್ಲ. ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ” ಎಂದು ತಿಳಿಸಿದರು. ಇದು ನೀರವ್‌ ಮೋದಿಗೆ ಮತ್ತಷ್ಟು ಸಂಕಷ್ಟ ತಂದಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸುಮಾರು 13,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿಲುಕಿರುವ ನೀರವ್‌ ಮೋದಿ, 2018ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇವರ ವಿರುದ್ಧ ಸಿಬಿಐ ಹಾಗೂ ಇ.ಡಿ ತನಿಖೆ ನಡೆಸುತ್ತಿದ್ದು, ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಕೇಂದ್ರ ಸರ್ಕಾರವು ಬ್ರಿಟನ್‌ ಸರ್ಕಾರಕ್ಕೆ ಮನವಿ ಮಾಡಿದೆ. ಇವರನ್ನು ಭಾರತವು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದು, ಭಾರತದ ಮನವಿ ಮೇರೆಗೆ 2019ರಲ್ಲಿ ನೀರವ್‌ ಮೋದಿ ಅವರನ್ನು ಬ್ರಿಟನ್‌ನಲ್ಲಿ ಬಂಧಿಸಲಾಗಿದೆ. ಅಂದಿನಿಂದ ಇದುವರೆಗೆ ನೀರವ್‌ ಮೋದಿಯು ಜೈಲಿನಲ್ಲೇ ಇದ್ದಾರೆ. ಇದಕ್ಕೂ ಮೊದಲು ಅವರನ್ನು ವಿಂಡ್ಸ್‌ವರ್ತ್‌ ಜೈಲಿನಲ್ಲಿ ಇರಿಸಲಾಗಿತ್ತು.

ನೀರವ್‌ ಮೋದಿಯು ಹಾಂಕಾಂಗ್‌ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದ 253.62 ಕೋಟಿ ರೂಪಾಯಿ, ವಿವಿಧ ಬಗೆಯ ರತ್ನಗಳು, ಆಭರಣಗಳನ್ನು ಇಡಿ ಜಪ್ತಿಮಾಡಿದೆ. ಹಾಗೆಯೇ, ದೇಶಭ್ರಷ್ಟ ಆರ್ಥಿಕ ಅಪರಾಧಿಯನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರವು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇಲ್ಲಿಯವರೆಗೆ ದೇಶ-ವಿದೇಶ ಸೇರಿ ನೀರವ್‌ ಮೋದಿಯ 2,396.45ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ.ಡಿ. ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ನೀರವ್‌ ಬ್ಯಾಂಕ್‌ ಅಕೌಂಟ್‌ಗಳನ್ನೂ ಸೀಲ್‌ ಮಾಡಲಾಗಿದೆ. 

ಇದನ್ನೂ ಓದಿ: IPL 2024 : ಆರ್​ಸಿಬಿ ತಂಡಕ್ಕೆ ಸವಾಲೆಸೆದ ವಿಜಯ್​ ಮಲ್ಯ; ಏನದು ಚಾಲೆಂಜ್​​?

Continue Reading

ಪ್ರಮುಖ ಸುದ್ದಿ

Haryana Government : ಹರಿಯಾಣದ ಬಿಜೆಪಿ ಸರ್ಕಾರ ಪತನ ಸಾಧ್ಯತೆ; 3 ಪಕ್ಷೇತರರು ಕಾಂಗ್ರೆಸ್ ಕಡೆಗೆ

Nayab Saini: ಸರ್ಕಾರ ರಚಿಸಲು ಅವರಿಗೆ ನಮ್ಮ ಬೆಂಬಲ ಅಗತ್ಯವಿರುವ ಸಮಯದಲ್ಲಿ ನಮ್ಮನ್ನು ಕರೆದಿದ್ದರು. ಮನೋಹರ್ ಲಾಲ್ ಖಟ್ಟರ್ ಅಧಿಕಾರದಲ್ಲಿ ಇರುವವರೆಗೂ ನಾವು ಬೆಂಬಲಿಸುತ್ತೇವೆ ಎಂದು ನಾವು ನಿರ್ಧರಿಸಿದ್ದೆವು. ಅವರು ಇನ್ನು ಮುಂದೆ ಅಧಿಕಾರದಲ್ಲಿಲ್ಲ . ರೈತರ ಹಿತದೃಷ್ಟಿಯಿಂದ ನಾವು ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

VISTARANEWS.COM


on

Haryana Government
Koo

ನವದೆಹಲಿ: ಹರಿಯಾಣದಲ್ಲಿ ರಾಜಕೀಯ ಬಿಕ್ಕಟ್ಟಲು ತಲೆತೋರಿದೆ. ಅಲ್ಲಿನ ನಯಾಬ್​ ಸೈನಿ (Nayab Saini) ನೇತೃತ್ವದ ಬಿಜೆಪಿ ಸರ್ಕಾರಕ್ಕೆ (Haryana Government) ನೀಡಿದ್ದ ಬೆಂಬಲವನ್ನು ಮೂವರು ಪಕ್ಷೇತರ ಶಾಸಕರು (independent MLA) ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ ಸರ್ಕಾರ ಅತಂತ್ರವಾಗಿದೆ. ಅವರೆಲ್ಲರೂ ಪ್ರತಿಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಪುಂಡ್ರಿ ಕ್ಷೇತ್ರದ ರಣಧೀರ್ ಗೋಲನ್, ನಿಲೋಖೇರಿಯ ಧರಂಪಾಲ್ ಗೊಂಡರ್ ಮತ್ತು ದಾದ್ರಿಯ ಸೋಮ್ಬೀರ್ ಸಿಂಗ್ ಸಾಂಗ್ವಾನ್ ಬೆಂಬಲ ವಾಪಸ್ ಪಡೆದ ಶಾಸಕರು. ರೋಹ್ಟಕ್​ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರೆಲ್ಲರೂ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಬಾದ್​ಶಾಪುರ ಕ್ಷೇತ್ರದ ರಾಕೇಶ್ ದೌಲ್ತಾಬಾದ್ ಕೂಡ ಅವರೊಂದಿಗೆ ಸೇರುವ ನಿರೀಕ್ಷೆಯಿದೆ ಆದರೆ ಸಮಯಕ್ಕೆ ಸರಿಯಾಗಿ ಸ್ಥಳವನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಸಂಗ್ವಾನ್ ಹೇಳಿದ್ದಾರೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಧರಂ ಪಾಲ್ ಗೊಂಡರ್​, ಬಿಜೆಪಿ ಸರ್ಕಾರವು ರಾಜ್ಯದ ನಾನಾ ಸಮಸ್ಯೆಗಳನ್ನು ನಿಭಾಯಿಸಿದ ರೀತಿ ಸರಿಯಲ್ಲ ಎಂದು ಹೇಳಿದ್ದಾರೆ.

ಸರ್ಕಾರ ರಚಿಸಲು ಅವರಿಗೆ ನಮ್ಮ ಬೆಂಬಲ ಅಗತ್ಯವಿರುವ ಸಮಯದಲ್ಲಿ ನಮ್ಮನ್ನು ಕರೆದಿದ್ದರು. ಮನೋಹರ್ ಲಾಲ್ ಖಟ್ಟರ್ ಅಧಿಕಾರದಲ್ಲಿ ಇರುವವರೆಗೂ ನಾವು ಬೆಂಬಲಿಸುತ್ತೇವೆ ಎಂದು ನಾವು ನಿರ್ಧರಿಸಿದ್ದೆವು. ಅವರು ಇನ್ನು ಮುಂದೆ ಅಧಿಕಾರದಲ್ಲಿಲ್ಲ . ರೈತರ ಹಿತದೃಷ್ಟಿಯಿಂದ ನಾವು ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಇದೇ ರೀತಿಯ ಮಾತುಗಳನ್ನಾಡಿದಿ ಗೋಲನ್, ಹರಿಯಾಣದಲ್ಲಿ ಬಿಜೆಪಿಯ ಅಧಿಕಾರಾವಧಿಯಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರವು ಬೆಂಬಲವನ್ನು ಹಿಂತೆಗೆದುಕೊಳ್ಳುವ ನಿರ್ಧಾರದಲ್ಲಿ ಪ್ರಮುಖ ಅಂಶ ಎಂದು ಹೇಳಿದರು.

ಕಳೆದ ನಾಲ್ಕೂವರೆ ವರ್ಷಗಳಿಂದ ನಾವು ಬಿಜೆಪಿಗೆ ಬೆಂಬಲ ನೀಡಿದ್ದೇವೆ. ಇಂದು ನಿರುದ್ಯೋಗ ಮತ್ತು ಹಣದುಬ್ಬರವು ಗರಿಷ್ಠ ಮಟ್ಟದಲ್ಲಿದೆ. ಇದನ್ನು ನೋಡಿ, ನಾವು ನಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸರ್ಕಾರದ ಮೇಲಿನ ಜನರ ವಿಶ್ವಾಸದ ಕೊರತೆ ಮತ್ತು ಕಾಂಗ್ರೆಸ್​​ಗೆ ಹೆಚ್ಚುತ್ತಿರುವ ಬೆಂಬಲದ ಪ್ರತೀಕ ಎಂದು ಹೇಳಿದ್ದಾರೆ.

ಇದನ್ನೂ ಓದಿ: Lok Sabha Election : ರಾಜಕೀಯಕ್ಕಾಗಿ ದ್ವೇಷ ಸೃಷ್ಟಿ; ಬಿಜೆಪಿ ವಿರುದ್ಧ ವಿಡಿಯೊ ಮೂಲಕ ಟೀಕೆ ಮಾಡಿದ ಸೋನಿಯಾ ಗಾಂಧಿ

“ಪಕ್ಷೇತರರ ನಿರ್ಧಾರ ಸರಿಯಾಗಿದೆ. ಸರಿಯಾದ ಸಮಯದಲ್ಲಿ ತೆಗೆದುಕೊಂಡ ಸೂಕ್ತ ನಿರ್ಧಾರ ಇದಾಗಿದೆ. ಇದು ಜನರ ಹಿತದೃಷ್ಟಿಯಿಂದ ಉತ್ತಮ. ರಾಜ್ಯದ ಕಾಂಗ್ರೆಸ್ ನ ಅಲೆ ಇದೆ. ನಾನು ಅವರನ್ನು ಸ್ವಾಗತಿಸುತ್ತೇನೆ” ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಉದಯ್ ಭಾನ್, “ಮೂವರು ಸ್ವತಂತ್ರ ಶಾಸಕರಾದ ಸೋಮ್​ಬಿರ್ ಸಾಂಗ್ವಾನ್, ರಣಧೀರ್ ಸಿಂಗ್ ಗೊಲ್ಲನ್ ಮತ್ತು ಧರಂಪಾಲ್ ಗೊಂಡರ್ ಅವರು ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ ಮತ್ತು ಕಾಂಗ್ರೆಸ್​​ಗೆ ಬೆಂಬಲ ನೀಡಿದ್ದಾರೆ” ಎಂದು ಹೇಳಿದರು.

90 ಸದಸ್ಯರ ಹರಿಯಾಣ ವಿಧಾನಸಭೆಯ ಪ್ರಸ್ತುತ ಬಲ 88. ಅದರಲ್ಲಿ ಬಿಜೆಪಿ 40 ಸದಸ್ಯರನ್ನು ಹೊಂದಿದೆ ಬಿಜೆಪಿ ಸರ್ಕಾರಕ್ಕೆ ಸ್ವತಂತ್ರರ ಬೆಂಬಲವಿತ್ತು. ಇದರಿಂದಾಗಿ ನಯಾಬ್ ಸಿಂಗ್ ಸೈನಿ ಸರ್ಕಾರ ಈಗ ಸಂಖ್ಯಾ ಬಲವಿಲ್ಲದ ಸರ್ಕಾರವಾಗಿದೆ

Continue Reading

ದೇಶ

Lok Sabha Election: 3ನೇ ಹಂತದಲ್ಲಿ ಶೇ.60ರಷ್ಟು ಮತದಾನ, ಕಳೆದ ಬಾರಿಗಿಂತಲೂ ಕಡಿಮೆ

Lok Sabha Election: 2019ರ ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನದ ವೇಳೆ ಶೇ.68.40ರಷ್ಟು ಮತದಾನ ನಡೆದಿತ್ತು. ಮಂಗಳವಾರ ಇನ್ನೂ ಒಂದು ಗಂಟೆಯ ಮತದಾನದ ಅಂಕಿ-ಅಂಶ ಲಭ್ಯವಾಗಬೇಕಿದೆ. ಆದರೂ, ಕಳೆದ ಬಾರಿಗಿಂತ ಈ ಬಾರಿ ಮತದಾನ ಪ್ರಮಾಣ ಕುಸಿದಿದೆ ಎಂದು ತಿಳಿದುಬಂದಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಕರ್ನಾಟಕ ಸೇರಿ ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೂರನೇ ಹಂತದ ಮತದಾನವು (Voting) ಬಹುತೇಕ ಶಾಂತಿಯುತವಾಗಿ ನಡೆದಿದೆ. ಕರ್ನಾಟಕದ 14 ಸೇರಿ ಒಟ್ಟು 93 ಲೋಕಸಭೆ ಕ್ಷೇತ್ರಗಳಲ್ಲಿ ಮಂಗಳವಾರ (ಮೇ 7) ಸಂಜೆ 5 ಗಂಟೆ ಸುಮಾರಿಗೆ ಶೇ.60.19ರಷ್ಟು ಮತದಾನ ದಾಖಲಾಗಿದೆ. 2019ರ ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನದ ವೇಳೆ ಶೇ.68.40ರಷ್ಟು ಮತದಾನ ನಡೆದಿತ್ತು. ಮಂಗಳವಾರ ಇನ್ನೂ ಒಂದು ಗಂಟೆಯ ಮತದಾನದ ಅಂಕಿ-ಅಂಶ ಲಭ್ಯವಾಗಬೇಕಿದೆ. ಆದರೂ, ಕಳೆದ ಬಾರಿಗಿಂತ ಈ ಬಾರಿ ಮತದಾನ ಪ್ರಮಾಣ ಕುಸಿದಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ 14, ಗುಜರಾತ್‌ನ 26, ಮಹಾರಾಷ್ಟ್ರ 11, ಉತ್ತರ ಪ್ರದೇಶ 10, ಮಧ್ಯಪ್ರದೇಶ 8 ಸೇರಿ ಒಟ್ಟು 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಸೇರಿ ಹಲವು ಗಣ್ಯರು ಮತದಾನ ಮಾಡಿದರು. ಪಶ್ಚಿಮ ಬಂಗಾಳ ಸೇರಿ ಕೆಲವಡೆ ಮಾತ್ರ ಸಣ್ಣಪುಟ್ಟ ಹಿಂಸಾಚಾರಗಳು ನಡೆದಿವೆ.

ಪ್ರಮುಖ ರಾಜ್ಯಗಳಲ್ಲಿ ಮತದಾನ ಪ್ರಮಾಣ

ಕರ್ನಾಟಕ66.05%
ಪಶ್ಚಿಮ ಬಂಗಾಳ73.93%
ಅಸ್ಸಾಂ75.01%
ಮಹಾರಾಷ್ಟ್ರ53.4%
ಗುಜರಾತ್‌55.22
ಬಿಹಾರ56%
ಉತ್ತರ ಪ್ರದೇಶ55.13
ಮಧ್ಯಪ್ರದೇಶ 62.28

ದೇಶದ ಹಲವೆಡೆ ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಇದು ಕೂಡ 2019ರ ಲೋಕಸಭೆ ಚುನಾವಣೆಗಿಂತ ಕಡಿಮೆ ಪ್ರಮಾಣದ ಮತದಾನವಾಗಿದೆ ಎಂದು ತಿಳಿದುಬಂದಿದೆ. ಏಪ್ರಿಲ್‌ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಿದ್ದು, ಇದುವರೆಗೆ ಮೂರು ಹಂತಗಳ ಮತದಾನ ಮುಕ್ತಾಯವಾಗಿದೆ. ಜೂನ್‌ 1ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮತದಾನದ ವೇಳೆ ಗಲಾಟೆ ನಡೆಯಿತು. ಮುರ್ಷಿದಾಬಾದ್‌ನಲ್ಲಿ ಧನಂಜಯ್‌ ಘೋಷ್‌ ಅವರು ಮತದಾನ ಮಾಡಲು ಹೋದಾಗ ಅವರನ್ನು ಬೂತ್‌ ಏಜೆಂಟ್‌ ಒಬ್ಬರು ತಡೆದಿದ್ದಾರೆ. ಇದೇ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದು ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗೆ ಕಾರಣವಾಗಿದೆ. “ನಾನೊಬ್ಬ‌ ಬಿಜೆಪಿ ಅಭ್ಯರ್ಥಿ. ನನಗೇ ಚುನಾವಣೆ ಏಜೆಂಟ್‌ ಒಬ್ಬ ಬಂದು ಬೆದರಿಕೆ ಹಾಕುತ್ತಾನೆ ಎಂದರೆ, ಸಾಮಾನ್ಯ ಜನರ ಗತಿ ಏನು? ಆತನ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದು” ಎಂದು ಧನಂಜಯ್‌ ಘೋಷ್‌ ತಿಳಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಮತದಾನಕ್ಕೆ ಬಂದು ಇವಿಎಂಗೆ ಬೆಂಕಿ ಹಾಕಿದ ಯುವಕ; ಸುರಪುರದಲ್ಲಿ ಕಲ್ಲು ತೂರಾಟ

Continue Reading

Lok Sabha Election 2024

Lok Sabha Election 2024: ಕೈಗಳಿಲ್ಲದಿದ್ದರೂ ಮತದಾನ ಮಾಡಿ ಮಾದರಿಯಾದ ಅಂಕಿತ್ ಸೋನಿ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಗುಜರಾತ್ ನ ನಾಡಿಯಾಡ್ ಮತಗಟ್ಟೆಯಲ್ಲಿ 20 ವರ್ಷಗಳ ಹಿಂದೆ ಎರಡೂ ಕೈಗಳನ್ನು ಕಳೆದುಕೊಂಡ ಅಂಕಿತ್ ಸೋನಿ ಎಂಬವರು ಮತಗಟ್ಟೆಗೆ ಬಂದು ಕಾಲಿನ ಬೆರಳುಗಳ ಸಹಾಯದಿಂದ ಮತದಾನ (Lok Sabha Election 2024) ಮಾಡಿ ಮಾದರಿಯಾದರು.

VISTARANEWS.COM


on

By

Lok Sabha Election 2024
Koo

ಲೋಕಸಭಾ ಚುನಾವಣೆಯ (Lok Sabha Election 2024) ಮೂರನೇ ಹಂತದ (phase 3) ಮತದಾನದ (voting) ವೇಳೆ ಗುಜರಾತ್ ನ (gujarat) ನಾಡಿಯಾಡ್ (Nadiad) ಮತಗಟ್ಟೆ ಒಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು. 20 ವರ್ಷಗಳ ಹಿಂದೆ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡ ಅಂಕಿತ್ ಸೋನಿ ( Ankit Soni) ಎಂಬವರು ಮತಗಟ್ಟೆಗೆ ಬಂದು ಕಾಲಿನ ಬೆರಳುಗಳ ಸಹಾಯದಿಂದ ಮತದಾನ ಮಾಡಿ ಮಾದರಿಯಾದರು.

ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಮತದಾನವು ಮಂಗಳವಾರ ಬೆಳಗ್ಗೆ 7 ಗಂಟೆಗೆ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 93 ಕ್ಷೇತ್ರಗಳಲ್ಲಿ ಪ್ರಾರಂಭವಾಯಿತು. ಈ ವೇಳೆ ನಾಡಿಯಾಡ್‌ನ ಮತಗಟ್ಟೆಯಲ್ಲಿ ಅಂಕಿತ್ ಸೋನಿ ಮತದಾನ ಮಾಡಿ ಇತರರು ತಮ್ಮ ಮನೆಗಳಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ವಿದ್ಯುತ್ ಶಾಕ್ ಅಪಘಾತದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರೂ, ನಾನು ಎಂದಿಗೂ ಎದೆಗುಂದಲಿಲ್ಲ. ಶಿಕ್ಷಕರು ಮತ್ತು ಗುರುಗಳಿಂದ ಪ್ರೇರಿತರಾಗಿ ಕಲಿಕೆಯ ಪ್ರಯಾಣವನ್ನು ಪ್ರಾರಂಭಿಸಿದೆ. ಮೊದಲು ಚಿತ್ರಕಲೆ ಮತ್ತು ಬರವಣಿಗೆಯೊಂದಿಗೆ, ಅನಂತರ ಶಿಕ್ಷಣವನ್ನು ಮುಂದುವರಿಸಿದೆ. ಕಠಿಣ ಪರಿಶ್ರಮದಿಂದ ನಾನು ಪದವಿ ಮತ್ತು ಸಿಎಸ್ ಪದವಿ ಪಡೆದು ಎಂಬಿಎ ಗಳಿಸಿದೆ. ಮತದಾನ ನಮ್ಮ ಹಕ್ಕು. ಹಲವಾರು ವರ್ಷಗಳಿಂದ ನನ್ನ ಮತವನ್ನು ಚಲಾಯಿಸಲು ನಾನು ಒಂದು ಮಾರ್ಗವನ್ನು ಕಂಡುಕೊಂಡಿದ್ದೇನೆ. ನಾವೆಲ್ಲರೂ ಇದನ್ನು ಅನುಸರಿಸೋಣ ಮತ್ತು ಈ ಅಮೂಲ್ಯ ಹಕ್ಕನ್ನು ಚಲಾಯಿಸೋಣ ಎಂದು ಹೇಳಿದರು.


ವಿಶೇಷ ಮತಗಟ್ಟೆ

ಸ್ವಾತಂತ್ರ್ಯದ 75 ವರ್ಷಗಳ ಅನಂತರ ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದ ಬುರುದ್ಮಲ್ ಗ್ರಾಮದಲ್ಲಿ ವಿಶೇಷ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಬುರುದ್ಮಾಲ್ ಕೇವಲ 41 ಮತದಾರರನ್ನು ಹೊಂದಿರುವ ಅತ್ಯಂತ ಚಿಕ್ಕ ಕ್ಷೇತ್ರವಾಗಿದೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ನಾಯಕರು ಮತ ಚಲಾಯಿಸಿದರು.

ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿ, ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದರು.

ಮೂರನೇ ಹಂತದಲ್ಲಿ ಅಸ್ಸಾಂನ 4, ಬಿಹಾರದ 5, ಛತ್ತೀಸ್‌ಗಢದ 7, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು 2, ಗೋವಾ 2, ಗುಜರಾತ್ ನ 25, ಕರ್ನಾಟಕದ 14 , ಮಹಾರಾಷ್ಟ್ರದ 11, ಮಧ್ಯಪ್ರದೇಶದ 8, ಉತ್ತರ ಪ್ರದೇಶದ 10 ಮತ್ತು ಪಶ್ಚಿಮ ಬಂಗಾಳದ 4 ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಿತು. ಸೂರತ್‌ ಕ್ಷೇತ್ರವನ್ನು ಈಗಾಗಲೇ ಬಿಜೆಪಿ ಅವಿರೋಧವಾಗಿ ಗೆದ್ದುಕೊಂಡಿದೆ.

ಇದನ್ನೂ ಓದಿ: Lok Sabha Election 2024: ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನ

120 ಮಹಿಳಾ ಅಭ್ಯರ್ಥಿಗಳು

ಮೂರನೇ ಹಂತದ ಚುನಾವಣಾ ಕಣದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1300ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದಲ್ಲಿ 1.85 ಲಕ್ಷ ಮತಗಟ್ಟೆಗಳಲ್ಲಿ ಒಟ್ಟು 17.24 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದು ನಡೆದ 93 ಸ್ಥಾನಗಳಲ್ಲಿ ಬಿಜೆಪಿ 72 ಸ್ಥಾನಗಳನ್ನು ಗೆದ್ದು ಕೊಂಡಿತ್ತು.

Continue Reading
Advertisement
Lok Sabha Election 2024
ಕರ್ನಾಟಕ24 seconds ago

Lok Sabha Election 2024: ಜಿ.ಎಂ.ಸಿದ್ದೇಶ್ವರ್‌ ಮಹಾ ಎಡವಟ್ಟು, ಪತ್ನಿ ಮತವನ್ನೂ ತಾವೇ ಹಾಕಿದ ಸಂಸದ

Nirav modi
ದೇಶ19 mins ago

Nirav Modi: ನೀರವ್‌ ಮೋದಿಗೆ ಲಂಡನ್‌ ಜೈಲೇ ಗತಿ; 5ನೇ ಬಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

Yallapura MLA Shivaram Hebbar voting in Arabail village
ರಾಜಕೀಯ30 mins ago

Lok Sabha Election 2024: ಅಭಿವೃದ್ಧಿ ಕಾರ್ಯಕ್ಕಾಗಿ ನೀತಿ ಸಂಹಿತೆ ಸಡಿಲಿಸಲು ಶಿವರಾಮ ಹೆಬ್ಬಾರ್ ಮನವಿ

Haryana Government
ಪ್ರಮುಖ ಸುದ್ದಿ34 mins ago

Haryana Government : ಹರಿಯಾಣದ ಬಿಜೆಪಿ ಸರ್ಕಾರ ಪತನ ಸಾಧ್ಯತೆ; 3 ಪಕ್ಷೇತರರು ಕಾಂಗ್ರೆಸ್ ಕಡೆಗೆ

Prajwal Revanna Case HD Revanna refuses to face to face with 2nd accused in kidnapping case
ಕ್ರೈಂ36 mins ago

Prajwal Revanna Case: ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ ಜತೆ ಮುಖಾಮುಖಿ ವಿಚಾರಣೆಗೆ ಒಪ್ಪದ ರೇವಣ್ಣ!

Shrikhshetra Siddrabetta Balehonnur Khasa Shakha Math 18th year Anniversary on June 9 says sri veerabhadra shivacharya swamiji
ತುಮಕೂರು40 mins ago

Tumkur News: ಜೂ. 9ಕ್ಕೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವಾರ್ಷಿಕೋತ್ಸವ

Bidar Lok Sabha constituency BJP candidate Bhagwanth Khooba voting in Aurad
ಬೀದರ್‌44 mins ago

Lok Sabha Election 2024: ಔರಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಮತದಾನ

Lok Sabha Election
ದೇಶ45 mins ago

Lok Sabha Election: 3ನೇ ಹಂತದಲ್ಲಿ ಶೇ.60ರಷ್ಟು ಮತದಾನ, ಕಳೆದ ಬಾರಿಗಿಂತಲೂ ಕಡಿಮೆ

Prajwal Revanna Case HD Revanna suffers heartburn and gastric problems Shift to hospital
ರಾಜಕೀಯ1 hour ago

Prajwal Revanna Case: ಎಚ್.ಡಿ. ರೇವಣ್ಣಗೆ ಎದೆ ಉರಿ, ಗ್ಯಾಸ್ಟ್ರಿಕ್‌ ತೊಂದರೆ; ಆಸ್ಪತ್ರೆಗೆ ಶಿಫ್ಟ್

Lok Sabha Election 2024
Lok Sabha Election 20241 hour ago

Lok Sabha Election 2024: ಕೈಗಳಿಲ್ಲದಿದ್ದರೂ ಮತದಾನ ಮಾಡಿ ಮಾದರಿಯಾದ ಅಂಕಿತ್ ಸೋನಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ3 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ4 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

ಟ್ರೆಂಡಿಂಗ್‌