ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪರವೇಶ್ಮಸ್ಥನ ಫಿಕ್ಹ್‌ ಪ್ರಸಂಗವು... - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪರವೇಶ್ಮಸ್ಥನ ಫಿಕ್ಹ್‌ ಪ್ರಸಂಗವು…

ಬಡ್ಡಿಹಣವನ್ನು ಸುಟ್ಟು ಹಾಕಬೇಕು ಎಂದು ಒತ್ತಾಯಿಸಿದ ಮುಸ್ಲಿಯಾರರ ಮುಂದೆ ಹಲವು ಸವಾಲುಗಳು ಎದ್ದು ನಿಂತವು. ಅವರ ಮನದಲ್ಲಿ ಜಿನುಗುವ ದುಃಖವೊಂದು ಒಸರುತ್ತಿತ್ತು.

VISTARANEWS.COM


on

bm haneef story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
bm haneef

:: ಬಿ.ಎಂ ಹನೀಫ್

‘ಅಬ್ಬಾ.. ಇಲ್ಲಿ ಕೇಳಿ. 30 ವರ್ಷಗಳಿಂದ ಆ ಮಸೀದಿಯಲ್ಲಿ ಇಮಾಮ್‌ ಆಗಿ ಕೆಲಸ ಮಾಡಿದ್ರೀ.. ಏನ್‌ ನಿಮ್ಮನೆಗೆ ಬಂದು ಜುಜುಬಿ ಶಾಲು ಹಾಕಿಯಾದ್ರೂ ಸನ್ಮಾನ ಮಾಡಿದ್ರಾ? 30 ವರ್ಷ ದುಡಿದದ್ದಕ್ಕೆ ಸರ್ವಿಸ್‌, ಗ್ರಾಚ್ಯುಟಿ ಕೊಡ್ತಾರಾ? ಇದ್ಯಾವುದೂ ಇಲ್ಲ. ಈಗಲೂ ಜುಜುಬಿ ಸಂಬಳ. ಅದೂ ಕುಗ್ರಾಮದಲ್ಲಿ ಕಾಡಿನ ನಡುವೆ ಬದುಕಬೇಕು. ಒಂದು ಸರಿಯಾದ ಆಸ್ಪತ್ರೆ ಇಲ್ಲ. ಇರೋದೊಂದು ಉರ್ದು ಶಾಲೆ. ಜಮಾತ್‌ನ ಒಳರಾಜಕೀಯದ ಸುಳಿಯಲ್ಲಿ ನೀವ್ಯಾಕೆ ಸಿಕ್ಕಿ ಬೀಳ್ತೀರಿ? ಸಾಕು ಜಮಾತನ್ನು ಉದ್ಧಾರ ಮಾಡಿದ್ದು. ಮುಂಬೈಗೆ ಬಂದು ಇಲ್ಲೇ ನಮ್ಜೊತೆಗೆ ಇದ್ದುಬಿಡಿ. ಉಮ್ಮನಿಗೆ ಹೇಳಿದ್ದೇನೆ, ಅವರು ಬರೋದಕ್ಕೆ ರೆಡಿ. ನಿಮ್ದೇ ಪ್ರಾಬ್ಲಮ್ಮು…!’

– ರಾತ್ರಿ ಫೋನ್‌ ಮಾಡಿದ ಮಗ ಸಿದ್ದೀಕ್‌ ಸಿಟ್ಟಿಗೆದ್ದು ಹೇಳಿದ ಮಾತುಗಳು ಅಬ್ದುಲ್‌ ಖಾದರ್‌ ಮುಸ್ಲಿಯಾರರ ಕಿವಿಯಲ್ಲಿ ಬೆಳಿಗ್ಗೆಯಿಂದಲೂ ಗುಂಯ್‌ಗುಡುತ್ತಿವೆ. ಒಂದು ವರ್ಷದಿಂದ ಇದನ್ನೇ ಸೌಮ್ಯವಾಗಿ ಹೇಳುತ್ತಿದ್ದ. ಈಗ ಅವನಿಗೂ ಹತಾಶೆ ಉಕ್ಕೇರಿದ್ದಕ್ಕೆ ಕಾರಣಗಳಿವೆ. ಜಮಾತಿನ ಪ್ರೆಸಿಡೆಂಟ್‌ ಕಂಟ್ರಾಕ್ಟರ್‌ ಅಬ್ದುಲ್ಲಾ ಹಾಜಿ ಮತ್ತು ತನ್ನ ನಡುವೆ ಕಳೆದ ಶುಕ್ರವಾರ ಜುಮಾ ನಮಾಜಿನ ಬಳಿಕ ಮಸೀದಿಯಲ್ಲಿ ನಡೆದ ಖಡಾಖಡಿ ಜಗಳದ ಸುದ್ದಿ ಅವನಿಗೂ ಮುಟ್ಟಿದೆ.

‘ಯಾವ ಸಬೂಬನ್ನೂ ಈ ಸಲ ನಾನು ಕೇಳಿಸಿಕೊಳ್ಳುವುದಿಲ್ಲ ಅಬ್ಬಾ. ಅಲ್ಲಿರೋದು ಮಸೀದಿಯವರ ಬಾಡಿಗೆ ಮನೆ, ಸ್ವಂತದ್ದಲ್ಲ. ಬಿಟ್ಟು ಬರಲು ಸಂಬಂಧಿಕರೂ ಇಲ್ಲವಲ್ಲ! ಇಲ್ಲಿ ಸಣ್ಣದಾದರೂ ಸ್ವಂತ ಫ್ಲ್ಯಾಟ್‌ ಇದೆ. ಮುಂದಿನ ತಿಂಗಳು ಬರುತ್ತೇನೆ. ಊರು ಬಿಡಲು ರೆಡಿಯಾಗಿ. 20 ವರ್ಷಗಳಿಂದ ಅಲ್ಲಿದ್ದೀನಿ ಅಂತೆಲ್ಲಾ ಎಮೋಷನಲ್‌ ಆಗಬೇಡಿ. ಮಸೀದಿ ಅಧ್ಯಕ್ಷರಿಗೆ ಈಗಲೇ ಹೇಳಿ. ಅವರು ಬೇಕಿದ್ರೆ ಬೇರೆ ಮುಸ್ಲಿಯಾರರ ವ್ಯವಸ್ಥೆ ಮಾಡಿಕೊಳ್ತಾರೆ.. ಅಷ್ಟೇ..’– ನಿರ್ಧಾರದ ಧ್ವನಿಯಲ್ಲಿ ಹೇಳಿ ಮರುಮಾತಿಗೂ ಅವಕಾಶವಿಲ್ಲದಂತೆ ಫೋನ್‌ ಕಟ್‌ ಮಾಡಿದ್ದ.

***   

60 ದಾಟಿದ ಅಜಾನುಬಾಹು ಖಾದರ್‌ ಮುಸ್ಲಿಯಾರ್‌ ಕಣ್ಣು ಮುಚ್ಚಿಕೊಂಡು ಯೋಚನೆಯ ಮಡುವಿಗೆ ಬಿದ್ದರು. ಅರ್ಧ ಕಾಡು, ಅರ್ಧ ಊರು ಎನ್ನುವಂತಿದ್ದ ಈ ಪುಟ್ಟ ಗ್ರಾಮಕ್ಕೆ 30 ವರ್ಷಗಳ ಹಿಂದೆ ಅವರು ಬಂದಿಳಿದದ್ದು ಒಂದು ಅನಿರೀಕ್ಷಿತ ಸನ್ನಿವೇಶದಲ್ಲಿ. ಈ ಊರಿಗೇ ಬರಬೇಕೆಂದು ಬಂದವರಲ್ಲ. ಹೆದ್ದಾರಿಯಲ್ಲಿ ಬಸ್ಸಿಳಿದಾಗ ಕಂಡ ತಿರುವಿನಲ್ಲಿ ಊರಿನ ಬೋರ್ಡ್‌ ಕಾಣಿಸಿತು. ಇಲ್ಲೊಂದು ಪುರಾತನ ಮಸೀದಿ ಇದೆಯೆಂದೂ ಶೇಕಡಾ 90ರಷ್ಟು ಮುಸ್ಲಿಮರೇ ಇದ್ದಾರೆಂದೂ ಕೇಳಿದ್ದು ನೆನಪಿತ್ತು. ಅಷ್ಟೇ.. ಬೆಳ್ಳಂಬೆಳಿಗ್ಗೆಯ ಹೊತ್ತು ಪರಮ ದಯಾಮಯನು ದಾರಿ ತೋರಿಸಿದಂತೆ ಜಮಾತ್‌ ಪ್ರೆಸಿಡೆಂಟರ ಮನೆಯ ಮುಂದೆ ಬ್ಯಾಗು ಹಿಡಿದು ನಿಂತಿದ್ದರು.

ತೀಕ್ಷ್ಣ ಕಣ್ಣು. ಸಹೃದಯಿ. ಸದಾ ಉದ್ದನೆಯ ಬಿಳಿಜುಬ್ಬಾ, ಬಿಳೀ ಮುಂಡು ಮತ್ತು ತಲೆಗೊಂದು ಬಿಳಿ ಮುಂಡಾಸು. ಕಾಲಲ್ಲಿ ಚರ್‌ ಎನ್ನುವ ಚರ್ಮದ ಚಡಾವು. ಸ್ವಲ್ಪ ದೊಡ್ಡದೇ ಎನ್ನಬಹುದಾದ ಹೊಟ್ಟೆಯಿದ್ದರೂ, ಪ್ರತಿದಿನ ಐದು ಹೊತ್ತು ನಮಾಜಿನ ಸಾಷ್ಟಾಂಗದಲ್ಲಿ ನೆತ್ತಿ ನೆಲಕ್ಕೆ ಚುಂಬಿಸಿ ಮೇಲೇಳುವಾಗ ಎಂದೂ ಏದುಸಿರು ಬಿಟ್ಟಿಲ್ಲ ಎನ್ನುವಷ್ಟು ಕಳಕಳೆಯ ಗಟ್ಟಿ ಆರೋಗ್ಯ. ಸ್ವಚ್ಛಂದ ಗಾಳಿಗೆ ಅಲ್ಲಾಡಿ ನಿಲುವಂಗಿಯ ಮೊದಲ ಬಟನನ್ನು ಸದಾ ಬ್ರಶ್ಶು ಮಾಡುವ  ನೀಳಗಡ್ಡ. ಅವರ ಜೊತೆಗೇ ಬಂದವರು ಬೆಳ್ಳಾನೆ ಬೆಳದಿಂಗಳ ಮೈಬಣ್ಣದ ತುಂಬು ಸುಂದರಿ ಧರ್ಮಪತ್ನಿ ನಫೀಸಮ್ಮ. ಎಲ್ಲಿಂದ ಬಂದರೆಂದು ಕೇಳಿದಾಗ, ಚಂದ್ರಗಿರಿ ನದಿಯಾಚೆಗಿನ ಕಾಡುಗುಡ್ಡದ ಕೊನೆಯ ಕೇರಳದ ಕುಗ್ರಾಮವೊಂದರ ಹೆಸರು ಹೇಳಿದ್ದರೂ, ಆ ಹೆಸರನ್ನು ಆವರೆಗೆ ಈ ಊರಿನ ಒಬ್ಬರೂ ಕೇಳಿರಲಿಲ್ಲ.

ನೂರು ವರುಷಗಳ ಹಿಂದೆ ಕಟ್ಟಿಸಿದ ಚಂದದ ಮರದ ಕೆತ್ತನೆಯ, ಆರುಮೂಲೆಗಳ, ಸಾವಿರದ ಆರುನೂರು ಹೆಂಚುಗಳ, ನೋಡಿದರೆ ಶೈವ ದೇವಸ್ಥಾನವೋ ಎಂಬಂತೆ ಕಾಣಿಸುವ ಪುರಾತನ ಮಸೀದಿಯಲ್ಲಿ ಇಮಾಮರಾಗಿ ಕೆಲಸ ಕೇಳಿ ಅಬ್ದುಲ್‌ ಖಾದರ್‌ ಮುಸ್ಲಿಯಾರರು ಬರುವುದಕ್ಕೂ, ಈ ಹಿಂದೆ ಇದ್ದ ಮುಸ್ಲಿಯಾರರು ಹೇಳದೆ ಕೇಳದೆ ಕೆಲಸ ಬಿಟ್ಟು ಹೋಗುವುದಕ್ಕೂ ಸರಿ ಹೋಗಿತ್ತು. ಪ್ರೆಸಿಡೆಂಟರೂ ಹೂಂ ಎಂದು ಮಾರು ದೂರದಲ್ಲಿದ್ದ ಮಸೀದಿಯ ಬಾಡಿಗೆ ಮನೆಯ ಕೀಲಿಕೈ ಕೊಟ್ಟರು. ಸುಲಭವಾಗಿ ಕೆಲಸವೊಂದು ಸಿಕ್ಕಿ ಹೊಟ್ಟೆ ಬಟ್ಟೆಗೆ ತಾಪತ್ರಯವಿಲ್ಲ ಎನ್ನುವಂತಾಯಿತು. ಬೆಳಿಗ್ಗೆ ಮತ್ತು ರಾತ್ರಿ ಮಕ್ಕಳಿಗೆ ಮಸೀದಿಯಲ್ಲೇ ಮುಸಾಬು, ಕಿತಾಬು ಓದಿಸುತ್ತಾ ಐದು ಹೊತ್ತಿನ ನಮಾಜಿಗೆ ಮುಂಚೂಣಿಯಲ್ಲಿ ಇಮಾಮರಾಗಿ ನಿಲ್ಲುತ್ತಾ ಕೆಲವೇ ತಿಂಗಳಲ್ಲಿ ಮುಸ್ಲಿಯಾರರು ಊರಿನವರೇ ಆಗಿಬಿಟ್ಟಿದ್ದರು. ವರ್ಷಗಳು ಉರುಳಿದರೂ, ಅವರ ಸಂಬಂಧಿಕರೆಂಬ ಒಂದು ನರಪಿಳ್ಳೆಯೂ ಈ ಊರಿಗೆ ಬಂದದ್ದಿಲ್ಲ. ಮುಸ್ಲಿಯಾರರೂ ಸಂಬಂಧಿಕರ ಮನೆಗೆಂದು ಒಂದು ದಿನವೂ ಹೋಗಿ ಬಂದವರಲ್ಲ. ಹೀಗೆ ಅಚಾನಕ್ಕಾಗಿ ಬಂದವರನ್ನು ನೋಡಿ ಕೆಲವರು ಊಹೆಗಳನ್ನು ಹರಿಯಬಿಟ್ಟದ್ದೂ ಸುಳ್ಳಲ್ಲ. ಅದರಲ್ಲೊಂದು – ‘ಯಾರೋ ನಂಬೂದಿರಿಯ ಮನೆಯ ಹೆಣ್ಣುಮಗಳನ್ನು ಪ್ರೀತಿಸಿ ನಿಖಾಹ್‌ ಮಾಡಿಕೊಂಡು ಊರು ಬಿಟ್ಟು ಓಡಿಬಂದಂತಿದೆ’ ಎಂಬ ಗುಸುಗುಸು. ನಫೀಸಾಳ ದಂತದ ಮೈಬಣ್ಣ ಮತ್ತು ಅಪರೂಪದ ನಿಲುವು ಕೂಡಾ ಅದಕ್ಕೆ ತಕ್ಕಂತೆಯೇ ಇತ್ತು. ಆದರೆ ಒಂದು ಮಾತು ಹೆಚ್ಚಿಲ್ಲ, ಒಂದು ಮಾತು ಕಡಿಮೆಯಿಲ್ಲ ಎಂಬಂತೆ ತಾನಾಯಿತು, ತನ್ನ ಕೆಲಸವಾಯಿತು ಎನ್ನುವ ಸ್ವಭಾವ ಆಕೆಯದ್ದು. ಆಡುವ ಬಾಯಿಗಳಿಗೆ ಯಾವತ್ತೂ ಮೇವು ಒದಗಿಸಲಿಲ್ಲ.

ಸದಾ ಸಮಾಧಾನದಿಂದ ಇರುತ್ತಿದ್ದ ಮುಸ್ಲಿಯಾರರು ಕೆಲವೊಮ್ಮೆ ಸಿಟ್ಟಿಗೆದ್ದಾಗ ಮಾತ್ರ ಇಸ್ಲಾಮಿನ ಎರಡನೇ ಖಲೀಫಾ ಉಮರ್‌ ಬಿನ್‌ ಖತ್ತಾಬರಂತೆ ರೌದ್ರಾವತಾರಿ ಆಗುತ್ತಿದ್ದುದುಂಟು. ಒಮ್ಮೆ ಮದ್ರಸಾದಲ್ಲಿ ಕುರಾನಿನ ಫಾತಿಹಾ ಎಂಬ ಪುಟ್ಟ ಅಧ್ಯಾಯವನ್ನು ಕಂಠಪಾಠ ಮಾಡದೆ ಕುಂಟುತ್ತಿದ್ದ ಒಂಭತ್ತು ವರ್ಷದ ಹುಡುಗನೊಬ್ಬನಿಗೆ ಹುಣಿಸೆ ಮರದ ಬಡಿಯಿಂದ ಹೇಗೆ ಬಡಿದರೆಂದರೆ, ಆತ ಮನೆಗೆ ಹೋಗುವಾಗ ಕುಂಟಲಾಗದೆ ಕುಂಟುತ್ತಾ ಹೋಗಿ, ಕ್ರುದ್ಧನಾದ ಅವನಪ್ಪ ಅದ್ದುರ್ರಹ್ಮಾನ್‌ ಮನೆಯಲ್ಲಿದ್ದ ಪಿಕಾಸಿಯ ಬಡಿಗೆಯನ್ನೇ ಕಿತ್ತು ಕೈಯಲ್ಲಿ ಹಿಡಿದು ಮಸೀದಿಗೆ ಬಂದು ಉಸ್ತಾದರ ತಲೆ ಒಡೆಯುತ್ತೇನೆಂದು ಶರಂಪರ ಜಗಳವಾಡಿದ್ದ. ಇನ್ನೊಮ್ಮೆ ಮಾರ್ನಮಿಯ ವೇಷದ ಸಮಯದಲ್ಲಿ ಮನೆ ಬಾಗಿಲಿಗೆ ಬಂದ ಪರವೂರಿನ ಸ್ತ್ರೀವೇಷಧಾರಿಯೊಬ್ಬ ‘ಎಲ್ಲಿದ್ದೀರಿ ಉಸ್ತಾದರೇ, ಅಲ್ಲಿ ನಮ್ಮ ಮಗು ಅಪ್ಪ ಬೇಕೂ ಅಂತ ನಿಮ್ಮನ್ನೇ ನೆನೆಸಿ ಅಳುತ್ತಿದೆಯಲ್ಲ…’ ಎಂದು ಕುಶಾಲು ಮಾತನಾಡಿ ಕುಣಿಯುತ್ತಾ ಕಾಸು ಕೇಳತೊಡಗಿದಾಗ ಸಿಟ್ಟಿಗೆದ್ದ ಉಸ್ತಾದರು ಕೈಗೆ ಸಿಕ್ಕಿದ ಹಿಡಿಸೂಡಿಯಲ್ಲಿ ಆ ವೇಷಧಾರಿಗೆ ರಪರಪನೆ ಬಾರಿಸಿ, ಆತ ಕಂಯ್‌ ಕುಂಯ್‌ ಎನ್ನುತ್ತಾ ನೆಲದಲ್ಲುರುಳಿ, ಎದ್ದು ಬಿದ್ದು ಹಿಂತಿರುಗಿ ನೋಡದೇ ಓಟಕಿತ್ತಿದ್ದ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್

ಕೆಲವೊಮ್ಮೆ ಐದಾರು ದಿನ ಯಾರ ಜೊತೆಗೂ ಮಾತನಾಡದೆ ಮುಸ್ಲಿಯಾರರು ಮೌನವಾಗಿರುವುದುಂಟು. ರಾತ್ರಿ ಅಂಗಳದಲ್ಲಿ ಕುರ್ಚಿಯೊಂದನ್ನು ಹಾಕಿ ಆಕಾಶದ ನಕ್ಷತ್ರಗಳನ್ನು ನೋಡುತ್ತಾ ಕೈಬೆರಳುಗಳಲ್ಲಿ ಏನನ್ನೋ ಲೆಕ್ಕ ಹಾಕುವುದುಂಟು. ಹೀಗೆ ಆಕಾಶ ನೋಡುತ್ತಾ ಕುಳಿತಿರುತ್ತಿದ್ದ ಉಸ್ತಾದರನ್ನು ಊರವನೊಬ್ಬ ಹೊಗಳುತ್ತಾ ‘ಇವರು ಖಗೋಳಶಾಸ್ತ್ರದ ಮಹಾಜ್ಞಾನಿಯೆಂದೂ, ಲಕ್ಷದ್ವೀಪದಿಂದ ಬಂದಿರುವ ಸೂಫಿಸಂತರೇ ಇರಬೇಕೆಂದೂ, ಸುಲೇಮಾನ್‌ ಎಂಬ ಕ್ರಿಸ್ತಪೂರ್ವ ನೆಬಿಯ ಕಾಲದ ವೃದ್ಧ ಜಿನ್ನೊಂದು ಇವರಿಗೆ ಹಸ್ತಗತವಾಗಿದೆಯೆಂದೂ’ ಊರೆಲ್ಲಾ ಪ್ರಚಾರ ಮಾಡತೊಡಗಿದ್ದ. ಇದ್ದರೂ ಇರಬಹುದೆಂದು ಅನೇಕರು ನಂಬತೊಡಗಿದ್ದ ಒಂದು ದಿನ, ಆ ಹೊಗಳುಭಟನನ್ನು ಮಸೀದಿಯ ಅಂಗಳದಲ್ಲೇ ಮುಸ್ಲಿಯಾರರು ಅಟ್ಟಾಡಿಸಿಕೊಂಡು ಎಲ್ಲೆಂದರಲ್ಲಿ ಗುದ್ದಿ, ‘ಇನ್ನೊಮ್ಮೆ ಇಂತಹ ಸುಳ್ಳು ಪ್ರಚಾರ ಮಾಡಿದರೆ, ಶುಕ್ರವಾರ ಜುಮಾ ನಮಾಜಿನ ದಿನ ಉಪನ್ಯಾಸಕ್ಕೆಂದು ಕೈಯಲ್ಲಿ ಹಿಡಿದುಕೊಳ್ಳುವ ಬಡ್ಡು ತಲವಾರಿನಿಂದಲೇ ಕೊರಳು ಕತ್ತರಿಸಿಬಿಡುತ್ತೇನೆಂದು’ ಅಬ್ಬರಿಸಿದ್ದರು. ಹೊಡೆತಕ್ಕೆ ನಡುಗಿಹೋಗಿದ್ದ ಆತ ಗೋಗರೆದು ಕ್ಷಮೆ ಕೇಳಿ ಬಚಾವಾಗಿದ್ದ. ಆದರೆ ಬಿಗಿಮುಷ್ಠಿಯ ಹೊಡೆತ ತಿಂದ ಬಳಿಕ ನಿಜಕ್ಕೂ ಅವರ ದೇಹದಲ್ಲಿ ಯಾವುದೋ ಒಂದು ಜಿನ್ನ್‌ ನೆಲೆಸಿದೆಯೆಂದು ಆತನಿಗೆ ಖಾತ್ರಿಯಾಗಿತ್ತು. ಅದನ್ನು ಊರಲ್ಲಿ ಯಾರ ಬಳಿಯೂ ಬಾಯಿಬಿಟ್ಟು ಹೇಳಲಾಗದೆ, ಒಳಗೂ ಇರಿಸಿಕೊಳ್ಳಲಾಗದೆ ಆತ ವೇದನೆ ಅನುಭವಿಸುತ್ತಿದ್ದ.

ಮುಸ್ಲಿಯಾರರ ಕಂಠಸಿರಿ ಅದ್ಭುತವಾಗಿತ್ತು. ಉಪನ್ಯಾಸಕ್ಕೆಂದು ನಿಂತರೆ ಮಲಾಮೆ ಮಿಶ್ರಿತ ಮಲಯಾಳಂನಲ್ಲಿ ಸುಶ್ರಾವ್ಯವಾಗಿ ಪ್ರವಾದಿ ನೂಹ್‌, ಈಸಾ, ಮೂಸಾ, ಹಾರೂನ್‌, ದಾವೂದ್‌, ಸುಲೈಮಾನ್‌ ಮುಂತಾದವರ ಕಿಸ್ಸಾಗಳಿಗೆ ನವರಸಗಳನ್ನು ತುಂಬಿ, ನಡುನಡುವೆ ನಫೀಸತ್‌ ಮಾಲಾ, ಮಂಕೂಸ್‌ ಮೌಲೂದುಗಳ ಹಾಡುಗಳನ್ನು ರಾಗವಾಗಿ ಹಾಡುತ್ತಾ ಇತಿಹಾಸದ ಪಾತ್ರಗಳಿಗೆ ಜೀವ ತುಂಬುತ್ತಿದ್ದುದನ್ನು ಕೇಳಿ ಜನರು ತನ್ಮಯರಾಗುತ್ತಿದ್ದರು. ಅವರ ಕುರಾನ್‌ ಪಾರಾಯಣವೂ ಮೃದುಮಧುರ. ಎರಡೂ ಅಂಗೈಗಳನ್ನು ಆಕಾಶಕ್ಕೆ ಎತ್ತಿ ಅವರು ಗದ್ಗದ ಕಂಠದಿಂದ ಕಣ್ಣಂಚಿನಲ್ಲಿ ನೀರು ಜಿನುಗಿಸುತ್ತಾ ದುವಾ ಮಾಡಿದರೆ ಅಲ್ಲಾಹು ಆ ಪ್ರಾರ್ಥನೆಗೆ ತಕ್ಷಣವೇ ಉತ್ತರ ಕೊಡುತ್ತಾನೆಂದು ಬಹುತೇಕರು ನಂಬಿದ್ದರು. ನಂಬಿಕೆಗೆ ಅನುಗುಣವಾಗಿಯೇ ಮುಸ್ಲಿಯಾರರ ದುವಾದ ಬಳಿಕ ಹಲವರ ವ್ಯಾಪಾರ ಕುದುರಿತ್ತು, ಕೈಯಲ್ಲಿ ಕಾಸು ಓಡಾಡುತ್ತಿತ್ತು. ಕೆಲವು ಮಹಿಳೆಯರು ತಮಗೆ ಮಕ್ಕಳಾದದ್ದೂ ಉಸ್ತಾದರ ವಿಶೇಷ ದುವಾದ ಫಲ ಎಂದು ನಂಬಿಕೊಂಡದ್ದುಂಟು. ಜಮಾತ್‌ ಕಮಿಟಿಯ ಪದಾಧಿಕಾರಿಗಳು ಮುಸ್ಲಿಯಾರರ ಫ್ಯಾನ್‌ಗಳೇ ಆಗಿದ್ದ ಹಿನ್ನೆಲೆಯಲ್ಲಿ ಅವರ ರೌದ್ರಾವತಾರದ ಘಟನೆಗಳಿಗೂ ಊರವರಿಂದ ಮಾಫಿ ದೊರಕುತ್ತಿತ್ತು. ಊರಲ್ಲಿರುವ ಕೆಲವು ಕೆಳಜಾತಿಯ ಅಮ್ಮಂದಿರು ಅಳುವ ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು ಮಸೀದಿಯ ಅಂಗಳಕ್ಕೆ ಬರುತ್ತಿದ್ದರು. ಈ ಗುರುಗಳು ಅರಬೀಯಲ್ಲಿ ಮಣಮಣ ಮಂತ್ರ ಹೇಳಿ, ಕಂದಮ್ಮಗಳ ತಲೆಯ ಮೇಲೆ ಕೈಬೆರಳಾಡಿಸಿ ಇಸುಫ್… ಎಂದೊಮ್ಮೆ ಊದಿದರೆ ಮಕ್ಕಳು ಚಂಡಿ ಹಿಡಿದ ಅಳು ನಿಲ್ಲಿಸುತ್ತಿದ್ದುದನ್ನು ಕಣ್ಣಾರೆ ಕಂಡ ಅಮ್ಮಂದಿರೂ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಹೀಗೆ ಊರವರಿಗೆಲ್ಲ ಪ್ರಿಯವಾಗಿದ್ದ ಮುಸ್ಲಿಯಾರರ ಮನಸ್ಸಿನಲ್ಲಿ ಮಾತ್ರ, ಆಮೆಯೊಂದು ಮರಳತೀರಕ್ಕೆ ಬಂದು ಗುಂಡಿ ತೋಡಿ ಮೊಟ್ಟೆಯಿಟ್ಟು ಮರಳಿ ಸಮುದ್ರಕ್ಕೆ ಓಡಿಹೋಗುವಂತೆ, ಜಿನುಗುವ ದುಃಖವೊಂದು ಒಸರುತ್ತಿತ್ತು. ಇಲ್ಲಿಗೆ ಬಂದು ನೆಲೆಸಿ ಐದು ವರ್ಷಗಳಾದರೂ ತನ್ನ ಪ್ರೀತಿಯ ನಫೀಸಾ ಒಂದು ಕರುಳಕುಡಿಯನ್ನು ಹೆತ್ತು ಕೊಡಲಿಲ್ಲವೇ ಎಂಬ ವೇದನೆಯು ಮುಸ್ಲಿಯಾರರ ಮನಸೊಳಗೇ ಮರಕುಟುಕದಂತೆ ಕುಟುಕುತ್ತಿತ್ತು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು

ಕೊನೆಗೊಂದು ದಿನ ಅಲ್ಲಾಹು ಅವರ ವೇದನೆಗೂ ಪರಿಹಾರವೊಂದನ್ನು ಒದಗಿಸಿಕೊಟ್ಟಂತೆ ನಫೀಸಾ, ಶಾಬಾನ್‌ ತಿಂಗಳ 21ರಂದು ಬೆಳದಿಂಗಳ ತುಂಡಿನಂತಹ ಗಂಡು ಮಗುವೊಂದಕ್ಕೆ ಜನ್ಮ ನೀಡಿದಳು. ಮಗುವನ್ನು ಇಸ್ಲಾಮಿನ ಪ್ರಕಾಂಡ ಪಂಡಿತನಾಗಿ ಬೆಳೆಸಬೇಕೆಂದು ಅಂದೇ ನಿರ್ಧರಿಸಿದ್ದ ಉಸ್ತಾದರು ಮಗುವಿಗೆ ಮೊದಲ ಖಲೀಫಾ ಅಬೂಬಕರ್‌ ಸಿದ್ದೀಕರ ಹೆಸರನ್ನೇ ಇಟ್ಟಿದ್ದರು. ಅಂಗಳಕ್ಕೆ ಒಯ್ದರೆ ಕಾಗೆ ಎತ್ತೊಯ್ಯಬಹುದು, ಮನೆಯೊಳಗೆ ಮಲಗಿಸಿದರೆ ಇರುವೆ ಕಚ್ಚಬಹುದು ಎಂಬಂಥ ಮುಚ್ಚಟೆಯಲ್ಲಿ ಮಗುವನ್ನು ಸದಾ ಹೆಗಲಲ್ಲಿ ಹೊತ್ತುಕೊಂಡು ಇಬ್ಬರೂ ಓಡಾಡಿದರು. ಮದ್ರಸಾ ಶಿಕ್ಷಣದ ಜೊತೆಜೊತೆಗೇ ಉರ್ದು ಶಾಲೆಯಲ್ಲಿ ಏಳನೇವರೆಗೆ ಓದಿದ ಸಿದ್ದೀಕನನ್ನು  ಕಲ್ಲಿಕೋಟೆಯ ಅರೆಬಿಕ್‌ ಕಾಲೇಜಿಗೆ ಸೇರಿಸಬೇಕೆಂದು ಮುಸ್ಲಿಯಾರ್‌ ನಿರ್ಧರಿಸಿದ್ದರು. ನಫೀಸಾ ಬಿಲ್‌ಕುಲ್‌ ಒಪ್ಪಲಿಲ್ಲ. ತಿಂಗಳ ಕಾಲ ಗಂಡನ ಜೊತೆಗೆ ಮುನಿದು ಮನವೊಲಿಸಿದ ನಫೀಸಾ ಮಗನನ್ನು ಕೊನೆಗೂ 120 ಮೈಲಿ ದೂರದಲ್ಲಿದ್ದ ಮಂಗಳೂರಿನ ಖಾಸಗಿ ಹೈಸ್ಕೂಲಿಗೆ ಸೇರಿಸುವಲ್ಲಿ ಯಶಸ್ವಿಯಾದಳು. ಮಂಗಳೂರಿನಲ್ಲಿ ಯಾರು ಯಾರದೋ ಕೈಕಾಲು ಹಿಡಿದು ಮುಸ್ಲಿಂ ಹಾಸ್ಟೆಲ್‌ನಲ್ಲಿ ಕೂರಿಸಿದರು. ಹೊಟ್ಟೆಬಟ್ಟೆ ಕಟ್ಟಿ ಮಗನ ಓದಿಗೆ ದುಡ್ಡು ಹೊಂದಿಸಿದರು. ಎಸೆಸೆಲ್ಸಿ ಮುಗಿದ ಬಳಿಕ ಸಿದ್ದೀಕ್‌ ಅಲ್ಲೇ ಐಟಿಐ ಮಾಡುತ್ತೇನೆಂದ. ಕೋರ್ಸ್‌ ಮುಗಿಸಿದ ತಕ್ಷಣವೇ ಕೆಲಸ ಸಿಗುತ್ತದಂತೆ ಎಂದ. ಮುಸ್ಲಿಯಾರರು ತಾನು ದುಡಿದ ಅಲ್ಪಹಣವನ್ನು ಅಲ್ಲಲ್ಲಿಗೇ ಹೊಂದಿಸಿಕೊಂಡರು. ಹಾಗೆ ಮಂಗಳೂರಿನಲ್ಲಿ ಐಟಿಐ ಮುಗಿಸಿದ ಸಿದ್ದೀಕನನ್ನು ಮುಷ್ತಾಕ್‌ ಸಾಹೇಬ್‌ ಎಂಬವರೊಬ್ಬರು ಮುಂಬೈಗೆ ಕರೆದೊಯ್ದು ಫ್ಯಾಕ್ಟರಿಯೊಂದರಲ್ಲಿ ಕೆಲಸವನ್ನೂ ಕೊಡಿಸಿದರು. ಕರೆದೊಯ್ದವರು ಕೆಲಸ ಮಾತ್ರ ಕೊಡಿಸಲಿಲ್ಲ, ಮದುವೆಗೆಂದು ತನಗಿದ್ದ ಒಬ್ಬಳೇ ಮಗಳನ್ನೂ ಕೊಟ್ಟುಬಿಟ್ಟರು!

ಅದಾದದ್ದೂ ಸ್ವಲ್ಪ ವಿಚಿತ್ರವಾಗಿಯೇ. ಮುಂಬೈಯಿಂದ ಆಗಾಗ್ಗೆ ವ್ಯಾಪಾರಕ್ಕೆ ಮಂಗಳೂರಿಗೆ ಬರುತ್ತಿದ್ದ ಮುಷ್ತಾಕ್‌ ಸಾಹೇಬರು ಸಿದ್ದೀಕನ ಮುಸ್ಲಿಂ ಹಾಸ್ಟೆಲ್‌ ಪಕ್ಕದ ಹೋಟೆಲಲ್ಲಿ ಉಳಿದುಕೊಳ್ಳುತ್ತಿದ್ದರಂತೆ. ಸಹಜವಾಗಿ ಪರಿಚಯವಾಯಿತು. ಆಮೇಲಾಮೇಲೆ ಬರುವಾಗ ಅವರು ಸಿದ್ದೀಕನಿಗೆಂದು ಬಟ್ಟೆ ಬರೆ, ಸೆಂಟುಗಳನ್ನು ತರುವುದು ವಾಡಿಕೆಯಾಯಿತು. ಮೈಯದ್ದಿ ಬ್ಯಾರಿಯ ಮೂನ್‌ಲೈಟ್‌ ಹೋಟೆಲ್ಲಿಗೆ ಕರೆದೊಯ್ದು ಪರೋಟ ಮತ್ತು ಬೀಫ್‌ ಸುಕ್ಕ ತಿನ್ನಿಸುವುದೂ ಅಭ್ಯಾಸವಾಯಿತು. ನಿಕಟವಾದ ಮುಷ್ತಾಕ್ ಸಾಹೇಬರು ಐಟಿಐ ಮುಗಿಸಿದ ತಕ್ಷಣ ಮುಂಬೈಗೆ ಜೊತೆಯಲ್ಲಿ ಬರಬೇಕೆಂದೂ ಒಳ್ಳೆಯ ಕೆಲಸ ಕೊಡಿಸುವುದಾಗಿಯೂ ಭರವಸೆ ನೀಡಿದರು. ಅವರ ಪೂರ್ವಜರೂ ಮಂಗಳೂರಿನವರಂತೆ. ಉರ್ದು ಮನೆಮಾತು. ಇವರು ಬಾಲ್ಯದಲ್ಲೇ ಮನೆಬಿಟ್ಟು ಮುಂಬೈಗೆ ಹೋಗಿ ಅಲ್ಲೇ ಬದುಕು ಕಟ್ಟಿಕೊಂಡರಂತೆ. ಮುಂಬೈಯಲ್ಲಿ ಕೆಲಸಕ್ಕೆ ಸೇರಿದ ಬಳಿಕ ಮುಷ್ತಾಕ್‌ ಸಾಹೇಬರ ಏಕೈಕ ಪುತ್ರಿಯನ್ನು ಕಂಡು ಸಿದ್ದೀಕನಿಗೆ ಅಲ್ಲೇ ಸೆಟ್ಲ್‌ ಆಗುವುದರಲ್ಲಿ ಅರ್ಥವಿದೆ ಅನ್ನಿಸಿದ್ದೂ, ಅದನ್ನು ಊರಿಗೆ ಬಂದಾಗ ಹೆತ್ತವರಲ್ಲಿ ಯಾವ ಹಿಂಜರಿಕೆಯಿಲ್ಲದೇ ಹೇಳಿದ್ದನ್ನೂ ಬರೆಯಲು ಹೋದರೆ ಅದೇ ಇನ್ನೊಂದು ದೊಡ್ಡ ಕತೆಯಾಗುತ್ತದೆ. ಸೊಸೆಯ ಮುದ್ದುಮುಖದ ಫೋಟೊ ಮತ್ತು ಮಗನ ಪ್ರೇಮಮಯಿ ಮುಖವನ್ನು ನೋಡಿದ ಬಳಿಕ ನಫೀಸಾಗೂ ಮಗನ ಮಾತು ಸರಿಯೆನ್ನಿಸಿತ್ತು. ಆದರೆ ಮುಚ್ಚಟೆಯಿಂದ ಬೆಳೆಸಿದ ಮಗನನ್ನು ಹೀಗೆ ಯಾರೋ ಅಚಾನಕ್ಕಾಗಿ, ಕೋಳಿಮರಿಯನ್ನು ಹದ್ದು ಎಗರಿಸಿದಂತೆ ಕೊಂಡೊಯ್ದದ್ದು ಹೇಗೆಂದು ಆಕೆಗೆ ಅರ್ಥವಾಗಲಿಲ್ಲ. ಮಗನಿಲ್ಲದೇ ತಾವು ಊರಿನಲ್ಲೇ ಉಳಿಯುವುದೇ? ‘ಮುಂಬೈಗೆ ಬಂದು ಜೊತೆಗೇ ಇದ್ದುಬಿಡಿ’ ಎಂದು ಸಿದ್ದೀಕ ಒತ್ತಾಯಿಸಿದ. ಆದರೆ ಮುಸ್ಲಿಯಾರರು ಒಪ್ಪಲಿಲ್ಲ. ಎಲ್ಲಿಂದಲೋ ವಲಸೆ ಬಂದವನಿಗೆ ಗೌರವದ ಬದುಕು ಕೊಟ್ಟ ಊರಿದು, ಇದನ್ನು ಬಿಟ್ಟು ಇನ್ನೆಲ್ಲಿಗೂ ಬರುವುದಿಲ್ಲ ಎಂದು ಕಲ್ಲುಮನಸ್ಸು ಮಾಡಿಕೊಂಡರು. ಹಾಗೆ ಅವಸರವಸರವಾಗಿ ಊರ ಮಸೀದಿಯಲ್ಲೇ ನಿಖಾಹ್‌ ನಡೆಯಿತು. ಸಿದ್ದೀಕನಿಗೂ ಫ್ಯಾಕ್ಟರಿಯಲ್ಲಿ ಹೆಚ್ಚು ರಜೆ ಇರಲಿಲ್ಲ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

ವಯಸ್ಸಿಗೆ ಬಂದ ಮುದ್ದಿನ ಮಗ ತಮ್ಮನ್ನೊಂದು ಮಾತೂ ಕೇಳದೆ ಬದುಕಿನ ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಮುಂಬೈಗೆ ಹಾರಿಹೋದದ್ದು ಮುಸ್ಲಿಯಾರರಲ್ಲಿ ಉಂಟು ಮಾಡಿದ ತಳಮಳ ಅಷ್ಟಿಷ್ಟಲ್ಲ. ಯಾರೊಂದಿಗೂ ಹೇಳುವ ಸ್ವಭಾವವೂ ಅವರದ್ದಲ್ಲ. ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ತಡರಾತ್ರಿಯವರೆಗೆ ಆಕಾಶದ ನಕ್ಷತ್ರಗಳನ್ನು ನೋಡುವುದು ಅವರಿಗೆ ಇನ್ನಷ್ಟು ಪ್ರಿಯವಾಯಿತು. ಮನುಷ್ಯನ ವಲಸೆ ಎನ್ನುವುದು ಎಷ್ಟು ವಿಚಿತ್ರ! ಹುಟ್ಟಿದೂರನ್ನು ಬಿಟ್ಟು ನಫೀಸಾಳನ್ನು ಕಟ್ಟಿಕೊಂಡು ಇಲ್ಲಿಗೆ ಬಂದೆ. ಬಳಿಕ ಹುಟ್ಟಿದೂರಿಗೆ ಒಮ್ಮೆಯೂ ಹೋಗಲಿಲ್ಲ. ಈಗ ಮಗ ಈ ಊರನ್ನು ಬಿಟ್ಟು ಮುಂಬೈಗೆ ವಲಸೆ ಹೋಗಿದ್ದಾನೆ. ಅಲ್ಲೇ ಬದುಕು ಕಟ್ಟಿಕೊಂಡಿದ್ದಾನೆ. ಮರಳಿ ಬರುವ ಸಾಧ್ಯತೆಯೇ ಇಲ್ಲ! ಮುಂಬೈಗೆ ಬನ್ನಿ ಎಂದೀಗ ಒತ್ತಾಯಿಸುತ್ತಿದ್ದಾನೆ. ಹಾಗೆ ಒತ್ತಾಯಿಸಲು ಬಲವಾದ ಕಾರಣವೂ ಕೂಡಿಬಂದಿದೆ.

****

ಮಸೀದಿಯಲ್ಲಿ ಅವತ್ತು ಪ್ರೆಸಿಡೆಂಟ್‌ ಅಬ್ದುಲ್ಲಾ ಹಾಜಿ ಮತ್ತು ಖಾದರ್ ಮುಸ್ಲಿಯಾರ್‌ ನಡುವಣ ಖಡಾಖಡಿ ಜಗಳಕ್ಕೆ ಮುಖ್ಯ ಕಾರಣ ಜಮಾತಿಗೆ ಬಂದ ಬ್ಯಾಂಕಿನ ಪತ್ರದಲ್ಲಿ ನಮೂದಿಸಿದ್ದ ಬಡ್ಡಿಯ ಹಣ ಐವತ್ತು ಸಾವಿರ ರೂಪಾಯಿ!

ಬೇರೆ ಮುಸ್ಲಿಂ ಜಮಾತ್‌ಗಳಲ್ಲಿ ಮುಸ್ಲಿಯಾರರೆಂದರೆ ಸಂಬಳಕ್ಕಿರುವವರೇ ಹೊರತು, ಜಮಾತ್‌ ಕಮಿಟಿಯಲ್ಲಿ ಸ್ಥಾನವಿರುವುದಿಲ್ಲ. ಆದರೆ ಊರಿನ ವಿಶೇಷವೆಂದರೆ ಮುಸ್ಲಿಯಾರರು ಜಮಾತ್‌ ಕಮಿಟಿಯ ಪರ್ಮನೆಂಟ್‌ ಉಪಾಧ್ಯಕ್ಷರು. ಅಧ್ಯಕ್ಷರು ಮತ್ತು ಕಮಿಟಿ ಎರಡು ವರ್ಷಕ್ಕೊಮ್ಮೆ ಬದಲಾಗುತ್ತಿದ್ದರೂ ಮುಸ್ಲಿಯಾರರು ಶಾಶ್ವತ ಉಪಾಧ್ಯಕ್ಷರೆಂದು ಜನರಲ್‌ ಬಾಡಿಯಲ್ಲಿ ಇಪ್ಪತ್ತು ವರ್ಷಗಳ ಹಿಂದೆಯೇ ನಿರ್ಧರಿಸಲಾಗಿತ್ತು.

ಪಕ್ಕದೂರಿನ ಬ್ಯಾಂಕಿನಲ್ಲಿ ಎಷ್ಟೋ ವರ್ಷಗಳ ಹಿಂದೆ ಇಟ್ಟಿದ್ದ ಫಿಕ್ಸೆಡ್‌ ಡೆಪಾಸಿಟ್‌ನ ಹಣವೊಂದು ಮರಿ ಹಾಕುತ್ತಾ ಹೋಗಿದ್ದುದನ್ನು ಜಮಾತಿನವರು ಗಮನಿಸಿರಲಿಲ್ಲ. ಹೊಸದಾಗಿ ಬ್ಯಾಂಕಿಗೆ ಬಂದ ಮುಸ್ಲಿಂ ಮ್ಯಾನೇಜರ್‌ ಗಮನಿಸಿ, ವಿವರವಾದ ಪತ್ರವೊಂದನ್ನು ಜಮಾತ್‌ಗೆ ಬರೆದಿದ್ದರು. ‘ಸಾಮಾನ್ಯವಾಗಿ ಮಸೀದಿಯವರು ಬಡ್ಡಿಯ ಹಣವನ್ನು ಪಡೆಯುವುದಿಲ್ಲ. ನಿಮ್ಮ ಬಡ್ಡಿ ಹಣವನ್ನು ಏನು ಮಾಡಬೇಕೆಂದು ಸೂಚಿಸಿ’ ಎಂದಿದ್ದ ಪತ್ರ, ಜಮಾತಿನಲ್ಲಿ ಹೊಸ ಚರ್ಚೆ ಹುಟ್ಟುಹಾಕಿತ್ತು. ಜೊತೆಗೆ ಅಬ್ದುಲ್ಲಾ ಮತ್ತು ಮುಸ್ಲಿಯಾರರ ಮಧ್ಯೆ ಜಗಳವನ್ನೂ.

ಮೀಟಿಂಗಿನಲ್ಲಿ ಮುಸ್ಲಿಯಾರರು ಖಡಾಖಂಡಿತವಾಗಿ ಹೇಳಿದ್ದು– ‘ಇಸ್ಲಾಮಿನಲ್ಲಿ ಬಡ್ಡಿಯ ಹಣ ಹರಾಮ್‌. ಅದನ್ನು ಕೈಯಿಂದ ಮುಟ್ಟುವುದಲ್ಲ, ಕಣ್ಣೆತ್ತಿಯೂ ನೋಡುವಂತಿಲ್ಲ. ಬಡ್ಡಿಯ ಹಣ ತಿಂದವನು ಯಾವ ಕಾರಣಕ್ಕೂ ಉದ್ಧಾರ ಆಗುವುದಿಲ್ಲ. ಆ ಹಣದಲ್ಲಿ ಊಟ ಮಾಡಿದ ಅವನ ಸಂತಾನಕ್ಕೂ ಕಷ್ಟಗಳು ತಪ್ಪಿದ್ದಲ್ಲ. ಮರಣದ ಬಳಿಕ ಜಹನ್ನಮಾ ಎಂಬ ರೌರವ ನರಕದ ಬೆಂಕಿಯಲ್ಲಿ ಧಗಧಗನೆ ಆತ ಉರಿದು ನರಳುತ್ತಾನೆ..!’

ಮುಸ್ಲಿಯಾರರ ಮಾತು ಅಲ್ಲಿದ್ದ ಹಲವರ ಮುಖದಲ್ಲಿ ರಕ್ತ ಬತ್ತಿಸಿದ್ದು ಸುಳ್ಳಲ್ಲ. ಅಲ್ಲಿರುವ ಬಹುತೇಕರು ಬ್ಯಾಂಕಿನ ಸಾಲಕ್ಕೆ ಬಡ್ಡಿ ಕಟ್ಟುವವರೇ. ಮಂಗಳೂರಿನಲ್ಲಿ ಬ್ಯಾಂಕೊಂದರಲ್ಲಿ ಕ್ಲಾರ್ಕ್‌ ಆಗಿದ್ದ ಅಬ್ದುಲ್ಲಾ ಹಾಜಿಯ ಬಾಮೈದನೊಬ್ಬ ಅವತ್ತು ಸಭೆಯಲ್ಲಿದ್ದವನು ಮುಸ್ಲಿಯಾರರ ಮಾತಿಗೆ ಉರಿಯತೊಡಗಿದ್ದ. ಆದರೆ ಯಾರೂ ಎದುರು ಮಾತನಾಡುವಂತಿರಲಿಲ್ಲ.

ಕೊನೆಗೊಬ್ಬ ಕೇಳಿದ– ‘ಅದೇನೋ ಸರಿ ಮುಸ್ಲಿಯಾರರೇ, ಈಗ ಬಡ್ಡಿ ಹಣವನ್ನು ಏನು ಮಾಡಬೇಕು?’

‘ಷರೀಯತ್‌ನಲ್ಲಿ ಅದಕ್ಕೂ ದಾರಿಗಳಿವೆ. ಹಣವನ್ನು ಎಲ್ಲರೆದುರೇ ಬೆಂಕಿಯಲ್ಲಿ ಹಾಕಿ ಸುಡಬೇಕು. ಅಥವಾ ದೂರ ಸಮುದ್ರಕ್ಕೆ ತೆರಳಿ ಚೂರುಚೂರಾಗಿ ಕತ್ತರಿಸಿ ನೀರಿನಲ್ಲಿ ವಿಸರ್ಜಿಸಬೇಕು’ ಎಂದರು ಮುಸ್ಲಿಯಾರ್‌.

ಸಭೆಯಲ್ಲಿ ಗುಜುಗುಜು ಶುರುವಾಯಿತು.

‘ಸೈಲೆನ್ಸ್‌ ಪ್ಲೀಸ್‌..’ ಎಂದರು ಪ್ರೆಸಿಡೆಂಟ್‌ ಅಬ್ದುಲ್ಲಾ ಹಾಜಿ. ‘ನಮ್ಮ ಹಿಂದಿನವರು ಎಫ್‌ಡಿಯಲ್ಲಿ ಎಷ್ಟೋ ವರ್ಷಗಳ ಹಿಂದೆ ಹಣ ಇಟ್ಟಿದ್ದಾರೆ. ಅವರೇನೋ ಬಡ್ಡಿಯ ಆಸೆಗೆ ಇಟ್ಟದ್ದಲ್ಲ. ಯಾರೋ ದಾನಿಗಳು ಕೊಟ್ಟ ಡೊನೇಷನ್ನು ಅದು. ಬ್ಯಾಂಕಿನವರು ಅವರಾಗಿ ಬಡ್ಡಿ ಕೊಟ್ಟಿದ್ದಾರೆ. ನೋಟುಗಳನ್ನು ಸುಡುವುದಕ್ಕಿಂತ ಮಂಗಳೂರಿಗೆ ಹೋಗಿ ಬೋಟ್‌ನಲ್ಲಿ ಸಮುದ್ರದ ಮಧ್ಯೆ ನೀರಿಗೆಸೆಯೋಣ. ನಾನೇ ಕೊಂಡೊಯ್ಯುತ್ತೇನೆ. ನನ್ನ ಸ್ನೇಹಿತರೊಬ್ಬರ ಫಿಷಿಂಗ್‌ ಬೋಟಿದೆ. ಸಮಸ್ಯೆಯೇ ಇಲ್ಲ!’

‘ನಿಮಗೆ ಅಷ್ಟೆಲ್ಲ ಕಷ್ಟ ಯಾಕೆ? ಜಮಾತಿನ ಎಲ್ಲ ಸದಸ್ಯರ ಕಣ್ಣೆದುರೇ ಖರ್ಚಿಲ್ಲದೆ ಸುಟ್ಟು ಹಾಕಿದರೇನು ತೊಂದರೆ?’ ಮುಸ್ಲಿಯಾರರು ಪಟ್ಟು ಹಿಡಿದರು.

‘ಏನು.. ನನ್ನ ಮೇಲೆಯೇ ವಿಶ್ವಾಸವಿಲ್ಲವೇ? ನಾನೇನು ಕಳ್ಳನ ತರಹ ಕಾಣಿಸ್ತೀನಾ?’ ಪ್ರೆಸಿಡೆಂಟರು ಗರಂ ಆದರು.

‘ಹಾಗಂತ ನಾನೆಲ್ಲಿ ಹೇಳಿದೆ? ಇದು ಷರೀಯತ್ತಿಗೆ ಸಂಬಂಧಿಸಿದ ಪ್ರಶ್ನೆ. ಏನು ಮಾಡುವುದಿದ್ದರೂ ಎಲ್ಲರಿಗೂ ಗೊತ್ತಾಗಲಿ..’ ಮುಸ್ಲಿಯಾರರು ಪಟ್ಟು ಬಿಡಲಿಲ್ಲ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು

‘ಮುಸ್ಲಿಯಾರರೇ.. ಬರೀ ಷರೀಯತ್ತಿನ ಪ್ರಶ್ನೆ ಅಲ್ಲವಿದು. ಕಾನೂನಿನ ಪ್ರಶ್ನೆಯೂ ಇದೆ. ಅದೆಲ್ಲ ನಿಮಗರ್ಥ ಆಗಲ್ಲ. ನೋಟುಗಳಿಗೆ ಬೆಂಕಿ ಹಾಕಿ ಪೊಲೀಸ್ ಕೇಸಾಗಿ, ನಮ್ಮನ್ನೆಲ್ಲ ಮತ್ತೆ ಸ್ಟೇಷನ್ನಿಗೆ ಓಡಾಡಿಸಬೇಕೆಂದು ಮಾಡಿದ್ದೀರಾ? ಕಳೆದ ವರ್ಷ ಹೀಗೇ ನಿಮ್ಮ ಮೂರ್ಖತನದಿಂದ ಜೈಲು ಪಾಲಾಗುತ್ತಿದ್ದಿರಿ. ಸ್ಟೇಷನ್ನಿಗೆ ಹೋಗಿ ಇನ್ಸ್‌ಪೆಕ್ಟರ್‌ ಕಾಲು ಹಿಡಿದು ನಿಮ್ಮನ್ನು ರಕ್ಷಿಸಿದವನು ನಾನು! ನನಗೇ ಉಲ್ಟಾ ಮಾತನಾಡ್ತೀರಾ?’ ಪ್ರೆಸಿಡೆಂಟರ ಧ್ವನಿ ತಾರಕಕ್ಕೆ ಏರಿತು.

ಇನ್ನೇನು ಮುಸ್ಲಿಯಾರರೂ ಸಿಟ್ಟಿಗೆದ್ದು ಕೂಗಾಡಿದರೆ ಏನೇನು ಅನಾಹುತವಾಗುತ್ತೋ ಅಂತ ಒಂದಿಬ್ಬರು ಸದಸ್ಯರು ಕುಳಿತಲ್ಲಿಂದ ಎದ್ದು ನಿಂತರು. ಎಲ್ಲರೂ ಮುಸ್ಲಿಯಾರರ ಬಿಗಿಯುತ್ತಿದ್ದ ಮುಷ್ಠಿಗಳತ್ತ ನೋಡುತ್ತಿದ್ದರು.

ಅಬ್ದುಲ್ಲಾ ಹಾಜಿ ಮತ್ತು ಮುಸ್ಲಿಯಾರರ ಸಂಘರ್ಷಕ್ಕೆ ಕಾರಣವಾದ ಆ ಹಳೆಯ ಪ್ರಕರಣಕ್ಕೆ ಹತ್ತು ತಿಂಗಳೂ ತುಂಬಿಲ್ಲ. ಮಸೀದಿಯ ಸುತ್ತಲೂ ಬೆಳೆದು ನಿಂತಿದ್ದ ತೇಗದ ತರಗೆಲೆಗಳು ನೆಲಕ್ಕುದುರುತ್ತಿದ್ದ ಚಳಿಗಾಲದ ದಿನಗಳವು.  ಮುಸ್ಲಿಯಾರರು ಬೆಳಿಗ್ಗೆದ್ದು ಮಸೀದಿಯಲ್ಲಿ ಸಾಮೂಹಿಕ ನಮಾಜ್‌ ಮುಗಿಸಿ, ಕುರಾನ್‌ ಪಠಿಸಿ, ಊರ ಹೊರಗಿನ ಹಳೇ ಕಾಲುಸಂಕದ ರಸ್ತೆಯಲ್ಲಿ ಎಂದಿನಂತೆ ವಾಕಿಂಗ್‌ ಹೊರಟಿದ್ದರು. ಚಳಿ ಸ್ವಲ್ಪ ಹೆಚ್ಚಿದ್ದುದರಿಂದಲೋ ಏನೋ ಅವತ್ತು ವಾಕಿಂಗಿಗೆ ಹೆಚ್ಚು ಜನರಿರಲಿಲ್ಲ. ನೀರಿಲ್ಲದ ಹಳ್ಳದ ಕಾಲುಸಂಕ ದಾಟಿದರೆ ಸ್ವಲ್ಪ ದೂರ ನಿರ್ಜನ ದಾರಿ. ಮುಳ್ಳುಕಂಟಿಗಳ ದಾರಿಯಲ್ಲಿ ಒಂದು ಪಾಳುಬಿದ್ದ ಮನೆಯಿತ್ತು. ಪಕ್ಕದಲ್ಲೊಂದು ಸಣ್ಣ ಬುಗುರಿ ಮರ. ಇನ್ನೂ ಸರಿಯಾಗಿ ಬೆಳಕು ಮೂಡಿರಲಿಲ್ಲ. ಮಸ್ಲಿಯಾರ್‌ ಬೀಸುಗಾಲಲ್ಲಿ ನಡೆಯುತ್ತಾ ಸಹಜವಾಗಿ ಬಲಕ್ಕೆ ನೋಡಿದರೆ ಮರದ ಕೊಂಬೆಗೆ ನೇತು ಬಿದ್ದಿದೆ ಒಂದು ಹೆಣ್ಣುಜೀವ!

ಮುಸ್ಲಿಯಾರಿಗೆ ಜೀವ ಧಿಗ್ಗೆಂದಿತು. ದೂರದಿಂದ ನೋಡಿದರೆ ಇನ್ನೂ ಜೀವ ಹೋಗಿಲ್ಲ ಎಂಬಂತಿತ್ತು. ನೇತಾಡುತ್ತಿದ್ದ ಎರಡೂ ಕೈಗಳು ಸ್ವಲ್ಪ ಚಲಿಸಿದಂತೆಯೂ, ಕಾಪಾಡಿ ಎಂಬಂತೆ ಬೆರಳುಗಳನ್ನು ಅಲ್ಲಾಡಿಸುತ್ತಿರುವಂತೆಯೂ ಕಾಣಿಸಿ ಮುಸ್ಲಿಯಾರರು ಮರದತ್ತ ಉಸಿರು ಬಿಗಿಹಿಡಿದು ಓಡಿದರು. ಆ ಹೆಣ್ಣುಜೀವದ ಎರಡೂ ತೊಡೆಗಳನ್ನು ಅಪ್ಪಿ ಹಿಡಿದು ಕುತ್ತಿಗೆಯ ಕುಣಿಕೆ ಸಡಿಲಾಗುವಂತೆ ದೇಹವನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿದರು. ಒಬ್ಬರೇನು ಮಾಡಲಾಗುತ್ತದೆ? ಹೇಗೆ ಇಳಿಸುವುದೆಂದು ತಿಳಿಯದೆ ಗೊಂದಲದಿಂದ ಮುಸ್ಲಿಯಾರರು ಏದುಸಿರು ಬಿಡುತ್ತಾ ದೇಹವನ್ನು ಹಿಡಿದು ನಿಂತಿದ್ದಾಗ ಪಕ್ಕದ ಊರಿನಿಂದ ರಸ್ತೆಯಲ್ಲಿ ಈ ಕಡೆಗೆ ಬರುತ್ತಿದ್ದವನನೊಬ್ಬ ಕಿಟಾರನೆ ಕಿರುಚುತ್ತಾ ವಾಪಸ್‌ ಓಟಕಿತ್ತ! ಮುಸ್ಲಿಯಾರ್‌ ಗಾಬರಿಯಾದರೂ ಹೆಣ್ಣುಜೀವವನ್ನು ಬಿಡಲಿಲ್ಲ. ಮೇಲುಸಿರು ಬಿಡುತ್ತಾ ಎಷ್ಟೋ ಹೊತ್ತು ದಿಗ್ಮೂಢರಂತೆ ನಿಂತೇ ಇದ್ದರು. ಆಗಾಗ್ಗೆ ಕೊರಳೆತ್ತಿ ಆ ಹೆಣ್ಣು ಜೀವದ ಮುಖದ ಕಡೆಗೆ ನೋಡುತ್ತಿದ್ದರು.

ಪಕ್ಕದೂರಿನಲ್ಲಿ ಸುದ್ದಿ ಹಬ್ಬಿ, ಅಲ್ಲಿಂದ ಹತ್ತಿಪ್ಪತ್ತು ಮಂದಿ ಓಡೋಡಿ ಬಂದು ಬುಗುರಿ ಮರದ ಬಳಿ ಸೇರಿದರು. ಮುಸ್ಲಿಯಾರರ ಬಿಗಿಮುಷ್ಟಿಯಿಂದ ಮೃತದೇಹವನ್ನು ಬಿಡಿಸಿ ಮರದಿಂದ ಕೆಳಗಿಳಿಸಿದರು. ಮೈಮೇಲೆ ಪರಿವೆಯೇ ಇಲ್ಲದಂತಿದ್ದ ಮುಸ್ಲಿಯಾರ್‌ ಜನರ ಗುಂಪನ್ನು ಸೀಳಿ ಮಸೀದಿಯತ್ತ ಸರಸರನೆ ನಡೆದರು. ಈ ಮಧ್ಯೆ ಮುಸ್ಲಿಯಾರನ್ನು ನೋಡಿ ಓಡಿ ಹೋಗಿದ್ದ ವ್ಯಕ್ತಿ, ‘ಅವರು ಆಕೆಯ ಕತ್ತಿಗೆ ಉರುಳು ಹಾಕಿ ಕೊಂಬೆಗೆ ನೇತಾಡಿಸಿ ಹಗ್ಗ ಎಳೆಯುತ್ತಿದ್ದುದನ್ನು ‘ಕಣ್ಣಾರೆ’ ಕಂಡೆ ಎಂದು ಊರವರ ಮುಂದೆ ಬಣ್ಣಿಸಿ ಹೇಳತೊಡಗಿದ. ಜನರೂ ಕ್ರುದ್ಧರಾಗಿದ್ದರು. ಕೇಸರಿ ಲುಂಗಿಯವನೊಬ್ಬ ‘ನೋಡಲು ಸಂಭಾವಿತರಂತೆ ಕಾಣುತ್ತಾರೆ.. ಈ ಗಡ್ಡದವರೆಲ್ಲ ಮಾಡುವುದು ಇಂತಹ ಹಲ್ಕಾ ಕೆಲಸವೇ..’ ಎಂದು ಕಿಡಿಕಾರಿದ. ಗುಂಪು ಸೇರಿದವರಲ್ಲಿ ಅಬ್ದುಲ್ಲಾ ಹಾಜಿಯ ಮೇಸ್ತ್ರಿಯೂ ಇದ್ದವನು ಧಣಿಗಳ ಮನೆಗೋಡಿ ಸುದ್ದಿ ಮುಟ್ಟಿಸಿದ. ಮಸೀದಿಯಲ್ಲೂ ಜನ ಸೇರತೊಡಗಿದರು. ಸಣ್ಣ ಧ್ವನಿಯಲ್ಲಿ ಶುರುವಾದ ಎರಡೂ ಕಡೆಯವರ ಮಾತುಕತೆ ಸೂರ್ಯ ಮೇಲೇಳುತ್ತಿದ್ದಂತೆಯೇ ಜೋರಾಗಿ ಇನ್ನೇನು ಹೊಯ್‌ಕೈ ಆಗಬೇಕೆನ್ನುವಾಗ ಯಾರೋ ಒಬ್ಬ ಸತ್ತು ಮಲಗಿದ್ದ ಆ ಹೆಣ್ಣುಜೀವದ ಗಂಡನೆಂಬ ತೆಳ್ಳನೆಯ ಪ್ರಾಣಿಯನ್ನು ಎಳೆದುಕೊಂಡು ಬಂದ.

ರಾತ್ರಿಯಿಡೀ ಗಡಂಗಿನ ಹೊರಗೆ ಬರಿಮೈಯಲ್ಲಿ ಮಲಗಿದ್ದ ಆ ಗಂಡ ಎಳೆದೊಯ್ದು ಬಂದ ರಭಸಕ್ಕೆ ಮತ್ತಿನಿಂದ ಪೂರ್ತಿ ಎಚ್ಚರವಾಗಿದ್ದ. ಹೆಗಲ ಮೇಲಿದ್ದ ಸಣ್ಣ ಬೈರಾಸಿನಿಂದ ಕಣ್ಣೀರು ಒರೆಸಿಕೊಳ್ಳುತ್ತಾ ಹೇಳಿದ. ‘ರಾತ್ರಿ ಕಂಠಪೂರ್ತಿ ಕುಡಿದು ಹೆಂಡತಿಯನ್ನು ಬಾಸುಂಡೆ ಬರುವಂತೆ ಬಡಿದೆ. ಎಷ್ಟು ಹೊಡೆದರೂ ಅವಳು ಹಣ ಕೊಡಲಿಲ್ಲ. ಸಿಟ್ಟಿನಿಂದ ಕೂಗಾಡಿ ಜೀವ ಕಳೆದುಕೊಳ್ಳುತ್ತೇನೆಂದು ಚೀರುತ್ತಾ ಮನೆಯಿಂದ ಓಡಿ ಹೋದಳು. ನಾನು ಮತ್ತೆ ಗಡಂಗಿನ ಕಡೆಗೆ ತೆರಳಿದೆ.. ಬೆಳಿಗ್ಗೆ ಯಾರೋ ಬಂದು ಎಬ್ಬಿಸಿದಾಗಲೇ ವಿಷಯ ಗೊತ್ತಾದದ್ದು.. ’ ಎಂದಾತ ಕೈಮುಗಿದು ನಿಂತಿದ್ದ. ಅವತ್ತು ಎರಡೂ ಊರಿನವರಿಗೆ ಮುಸ್ಲಿಯಾರರ ಮೇಲಿನ ನಂಬಿಕೆ ಇಮ್ಮಡಿಯಾಗಿತ್ತು. ಆದರೆ ಅಬ್ದುಲ್ಲಾ ಹಾಜಿ ಮಾತ್ರ ‘ಈ ಮುಸ್ಲಿಯಾರ್ ನಮ್ಮ ಮಸೀದಿಗೆ ಬೇಡ. ನಾಳೆ ಪೊಲೀಸರು ಮಸೀದಿಗೆ ಬಂದು ತನಿಖೆಯ ಹೆಸರಲ್ಲಿ ಕಿರುಕುಳ ಕೊಡುತ್ತಾರೆ. ಅವರ ಸಂಬಳದ ಲೆಕ್ಕಾ ಚುಕ್ತಾ ಮಾಡಿ ಕಳಿಸಿಬಿಡೋಣ..’ ಎಂದು ಹಠ ಹಿಡಿದು ಕೂತಿದ್ದು ಊರವರಿಗೆ ಸರಿಯೆನ್ನಿಸಲಿಲ್ಲ. ಜಮಾತಿನ ಸದಸ್ಯರು ಪ್ರೆಸಿಡೆಂಟರ ಒತ್ತಡಕ್ಕೆ ಮಣಿದಿರಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಅಬ್ಬುಲ್ಲಾ ಹಾಜಿ ಗೊಣಗುತ್ತಾ ತನ್ನ ಒತ್ತಾಯದಿಂದ ಹಿಂದೆ ಸರಿದು, ಪೊಲೀಸ್‌ ಠಾಣೆಗೆ ತಾನೇ ಹೋಗಿ ಅಧಿಕಾರಿಗಳ ಜೊತೆಗೆ ಮಾತನಾಡಿ ಕೇಸು ಗೀಸು ಆಗದಂತೆ ತಡೆದಾಗಿತ್ತು.

ಈಗ ಬಡ್ಡಿಯ ಹಣದ ಚರ್ಚೆ ತಾರಕಕ್ಕೇರಿದಂತೆಯೇ ಅಬ್ದುಲ್ಲಾ ಹಾಜಿ ಹಳೆಯ ಪ್ರಕರಣಕ್ಕೆ ಜೀವ ಕೊಡಲು ಹೊರಟಿದ್ದು ಹಲವರಲ್ಲಿ ಕಸಿವಿಸಿ ಉಂಟುಮಾಡಿತು. ಮುಸ್ಲಿಯಾರರನ್ನು ಮಸೀದಿಯಿಂದ ಹೊರಗೆ ಅಟ್ಟಲೇಬೇಕೆಂದು ಹಾಜಿ ನಿರ್ಧರಿಸಿದಂತಿತ್ತು. ‘ಮುಸ್ಲಿಯಾರರೇ ಇಲ್ಲಿ ಕೇಳಿ. ಷರೀಯತ್ತು ನಿಮಗೆ ಮಾತ್ರ ಗೊತ್ತಿರುವುದಲ್ಲ. ಬಡ್ಡಿಯ ಹಣವನ್ನು ಬೆಂಕಿಗೆ ಹಾಕುವುದೋ, ಸಮುದ್ರದಲ್ಲಿ ವಿಸರ್ಜಿಸುವುದೋ ಸಾಧ್ಯವಿಲ್ಲದಿದ್ದರೆ ಇನ್ನೊಂದು ದಾರಿಯಿದೆ. ಆ ಹಣದಿಂದ ಸಾರ್ವಜನಿಕ ಪಾಯಿಖಾನೆ ಕಟ್ಟಿಸಬಹುದು. ಕಳೆದ ವಾರ ಮಂಗಳೂರಿನ ದೊಡ್ಡ ಮಸೀದಿಯಲ್ಲಿ ಖಾಜಿಯವರ ಉಪನ್ಯಾಸದಲ್ಲಿ ಅದನ್ನೇ ಹೇಳಿದ್ದಾರೆ. ಹೇಗೂ ಉರ್ದು ಶಾಲೆಯಲ್ಲಿ ಪಾಯಿಖಾನೆ ಇಲ್ಲ. ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಹೋಗಿ ಬೇಡುತ್ತಾರೆ. ಅದಕ್ಕೊಂದು ಪರಿಹಾರವೂ ಆಯಿತು. ಈಗಲೇ ಖಾಜಿಗಳಿಗೊಂದು ಫೋನ್‌ ಮಾಡಿ, ಅವರೇನು ಹೇಳುತ್ತಾರೋ ಅದರಂತೆ ಮಾಡುವ..’– ಅಬ್ದುಲ್ಲಾ ಹಾಜಿಯ ಧ್ವನಿ ತಾರಕಕ್ಕೆ ಏರಿತ್ತು.

ಮುಸ್ಲಿಯಾರರು ಇಕ್ಕಟ್ಟಿಗೆ ಸಿಲುಕಿದರು. ಬಡ್ಡಿಯ ಕುರಿತ ಈ ಫಿಕ್ಹ್‌ ವಿಧಿಯನ್ನು ಅವರೂ ಓದಿಕೊಂಡಿದ್ದವರೇ. ಅಬ್ದುಲ್ಲಾ ಹಾಜಿಯ ಹಣ ಮಾಡುವ ದಂಧೆಯ ಕುರಿತೂ ಅವರಿಗೆ ಮಾಹಿತಿಗಳಿದ್ದವು. ಆದರೆ ಅದನ್ನು ಊರವರ ಎದುರು ಸಾಕ್ಷಿಯಿಲ್ಲದೆ ಹೇಳಿದರೆ ಜನ ನಂಬಬೇಕಲ್ಲ? ‘ಉರ್ದು ಶಾಲೆಗೆ ಶೌಚಾಲಯ ಬೇಕಿದ್ದರೆ ಶಿಕ್ಷಣ ಇಲಾಖೆಗೆ ನಾವೇ ಅರ್ಜಿ ಸಲ್ಲಿಸುವ. ಈಗ ಜಮಾತಿಗೆ ಬರುವ ಬಡ್ಡಿ ಹಣವನ್ನು ಖುದ್ದಾಗಿ ತರಿಸಿಕೊಂಡು ಬೆಂಕಿಗೆ ಹಾಕುವುದೊಂದೇ ದಾರಿ. ಅದರ ಹೊರತಾಗಿ ಬೇರೆ ಯಾವುದಕ್ಕೂ ನಾನು ಒಪ್ಪುವುದಿಲ್ಲ’ ಎಂದಂದು ಉದ್ವೇಗದಿಂದ ಎದ್ದು ನಿಂತ ಮುಸ್ಲಿಯಾರ್‌, ಪಂಚೆಯನ್ನು ಸೊಂಟಕ್ಕೆ ಬಲವಾಗಿ ಕಟ್ಟಿಕೊಂಡರು.

‘ಯಾವುದೋ ಊರಿಂದ ಹಿಂದುಮುಂದಿಲ್ಲದೆ ಓಡಿಬಂದು ಮಸೀದಿಯಲ್ಲಿ ನೌಕರಿಗೆ ಸೇರಿಕೊಂಡ ನಿಮಗೇ ಮುಂಡಾಸಿನ ಅಹಂಕಾರ ಇಷ್ಟಿದೆಯೆಂದರೆ…, ಅದ್ಯಾವ ಗಂಡಸು ಬ್ಯಾಂಕಿಗೆ ಹೋಗಿ ಹಣ ತಂದು ಇಲ್ಲಿ ಮಸೀದಿಯ ಮುಂದೆ ಸುಟ್ಟು ಬಿಡುತ್ತಾನೋ ನಾನೂ ನೋಡ್ತೀನಿ. ಪೊಲೀಸ್‌ ಕಂಪ್ಲೇಂಟ್‌ ಕೊಟ್ಟು ಒದ್ದು ಒಳಗೆ ಹಾಕಿಸ್ತೀನಿ. ಅವತ್ತು ಹುಣಸೇ ಮರಕ್ಕೆ ನೇಣು ಹಾಕಿಕೊಂಡ ಆ ಕಾಫಿರ ಹೆಣ್ಣಿಗೂ ಈ ಮುಸ್ಲಿಯಾರಿಗೂ ಏನು ಸಂಬಂಧವಿತ್ತು ಎನ್ನುವುದೂ ನನಗೆ ಗೊತ್ತಿದೆ. ಎಲ್ಲವನ್ನೂ ಬಯಲು ಮಾಡ್ತೀನಿ. ಸೂಸೈಡ್‌ ಕೇಸಿನ ಫೈಲು ರಿಓಪನ್‌ ಮಾಡಿಸ್ತೀನಿ. ಈ ಮುಸ್ಲಿಯಾರ್‌ ಮುಂಡಾಸು ಬಿಚ್ಚಿ ಮಸೀದಿಯಲ್ಲಿ ಇಟ್ಟು ಊರು ಬಿಡುವಂತೆ ಮಾಡದಿದ್ದರೆ ನಾನು ತಲ್ವಾರ್‌ ಖಾದರ್‌ ಹಾಜಿಯ ಮಗನೇ ಅಲ್ಲ…’ ಎನ್ನುತ್ತಾ ಅಬ್ದುಲ್ಲಾ ಹಾಜಿಯೂ ಎದ್ದು ಶರ್ಟಿನ ತೋಳನ್ನು ಮಡಚತೊಡಗಿದ.

****

ಮುಂಬೈಯ ಅಂಧೇರಿಯಿಂದ ಜುಹೂಗೆ ಹೋಗುವ ದಾರಿಯಲ್ಲಿ ತಲೆಯೆತ್ತಿ ನಿಂತಿದ್ದ 40 ಮಹಡಿಗಳ ಹಳೆಯ ಕಟ್ಟಡವದು. 30ನೇ ಮಹಡಿಯ ಬಲಪಾರ್ಶ್ವದ 610 ನಂಬರಿನ ಮನೆಯ ಬಾಲ್ಕನಿಯಲ್ಲಿ ಕುಳಿತು ಅಬ್ದುಲ್‌ ಖಾದರ್‌ ಮುಸ್ಲಿಯಾರ್‌ ಶುಭ್ರ ಆಕಾಶದಲ್ಲಿ ಮಿನುಗುತ್ತಿದ್ದ ನಕ್ಷತ್ರಗಳನ್ನು ತದೇಕಚಿತ್ತರಾಗಿ ನೋಡುತ್ತಿದ್ದರು. ಅಬೂಬಕರ್‌ ಸಿದ್ದೀಕ್‌ ಅಪ್ಪನ ಮುಖವನ್ನೇ ದಿಟ್ಟಿಸುತ್ತಾ ಕುಳಿತಿದ್ದ.

‘ಅಬ್ಬಾ.. ನೀವು ಸತ್ಯದ ಪರವಾಗಿ ಗಟ್ಟಿಯಾಗಿ ನಿಲ್ಲಲು ಯಾವತ್ತೂ ಹೆದರಿದವರಲ್ಲ. ಅವತ್ತು ಮಸೀದಿಯ ಮೀಟಿಂಗಿನಲ್ಲಿ ಅಬ್ದುಲ್ಲಾ ಹಾಜಿ ಅಷ್ಟೊಂದು ಸೊಕ್ಕಿನಿಂದ ಮಾತನಾಡಿದಾಗ ನೀವು ಏನನ್ನೂ ಹೇಳದೆ ಹಠಾತ್ತಾಗಿ ಎದ್ದುಬಂದು ಮನೆ ಸೇರಿದ್ದೇಕೆ? ನೀವು ಹಾಗೆ ಬಿಟ್ಟುಕೊಡುವವರಲ್ಲವಲ್ಲ…?’

‘ಯಾಕೋ ಯಾವುದೂ ಬೇಡವೆನ್ನಿಸಿತು ಮೋನೇ. ಯಾವ ಜಗಳಕ್ಕೂ ಇಲ್ಲಿ ಅರ್ಥವಿಲ್ಲ. ಅಮ್ಮನ ಗರ್ಭದೊಳಗಿಂದ ಈ ಬಾಡಿಗೆಯ ಭೂಮಿಗೆ ವಲಸೆ ಬರುವವರು ನಾವು. ಸತ್ತ ಬಳಿಕ ಇಲ್ಲಿಂದ ಭೂಗರ್ಭದೊಳಕ್ಕೆ ಮತ್ತೆ ವಲಸೆ. ಈ ಮಹಾವಲಸೆಯ ನಡುವೆ ಊರಿಂದ ಊರಿಗೆ ಎಷ್ಟೊಂದು ವಲಸೆಗಳು! ಅಲ್ಲಿ ದೂರದಲ್ಲಿ ಕಾಣಿಸುತ್ತಿರುವ ಜುಹೂ ಏರ್‌ಪೋರ್ಟ್‌ನಲ್ಲಿ ಇಡೀ ರಾತ್ರಿ ಎಷ್ಟೊಂದು ವಿಮಾನಗಳು ಯಾವಯಾವುದೋ ದೇಶಗಳಿಂದ ವಲಸಿಗರನ್ನು ತಂದು ಇಳಿಸುತ್ತಿವೆ ನೋಡು! ಇವರಲ್ಲಿ ಎಷ್ಟು ಮಂದಿ ಕೆಲಸಕ್ಕಿದ್ದ ದೇಶವನ್ನು ತೊರೆದು ಬಂದವರೋ? ಎಷ್ಟು ಮಂದಿ ಹುಟ್ಟಿದ ದೇಶವನ್ನೇ ಬಿಟ್ಟು ವಲಸೆ ಹೋಗುವವರೋ..!’

‘ಅಬ್ಬಾ… ಮಾತು ಮರೆಸಬೇಡಿ. ಸತ್ಯ ಹೇಳಿ. ನೀವ್ಯಾಕೆ ಉರ್ದು ಶಾಲೆಯಲ್ಲಿ ಪಾಯಿಖಾನೆ ಕಟ್ಟಲು ಆ ಬಡ್ಡಿಯ ಹಣ ಕೊಡಲು ಒಪ್ಪಲಿಲ್ಲ? ಫಿಕ್ಹ್‌ ನಿಮಗೂ ಗೊತ್ತಿತ್ತಲ್ವಾ?’

‘ಅಬ್ದುಲ್ಲಾ ಹಾಜಿ ಪರಮನೀಚ. ಕಳೆದ ವರ್ಷ ಉರ್ದು ಶಾಲೆಯಲ್ಲಿ ಪಾಯಿಖಾನೆ ಕಟ್ಟಿಸಲೆಂದು 50,000 ರೂಪಾಯಿ ಸರ್ಕಾರದ ಅನುದಾನ ಪಡೆದು ನುಂಗಿ ಹಾಕಿದ್ದ. ಅದು ಜಿಲ್ಲಾ ಪಂಚಾಯ್ತಿಯಿಂದ ಎನ್‌ಕ್ವೈರಿಗೆ ಬಂದಿತ್ತು. ಎರಡು ವಾರದ ಹಿಂದೆ ನನ್ನ ಬಳಿ ಬಂದು ಇದನ್ನೆಲ್ಲ ಹೇಳಿ ಕಣ್ಣೀರು ಸುರಿಸಿ ದುವಾ ಮಾಡಲು ಬೇಡಿಕೊಂಡಿದ್ದ. ಈಗ ಮಸೀದಿಯ ಬಡ್ಡಿಯ ಹಣ ಸಿಕ್ಕಿದರೆ ಅದರಲ್ಲೇ ಪಾಯಿಖಾನೆ ಕಟ್ಟಿ ಸರಕಾರಕ್ಕೆ ಲೆಕ್ಕ ತೋರಿಸುವುದು ಅವನ ದುರುದ್ದೇಶವಾಗಿತ್ತು.’

‘ಅದನ್ಯಾಕೆ ನೀವು ಎಲ್ಲರೆದುರು ಹೇಳಲಿಲ್ಲ? ಅವನ ಸೊಕ್ಕು ಇಳಿಸಬಹುದಾಗಿತ್ತಲ್ಲ?’

‘ನನ್ನಲ್ಲಿ ಸಾಕ್ಷಿ ಇರಲಿಲ್ಲ ಮೋನೇ..? ಹಾಗೆಯೇ ಹೇಳಿದರೆ ಜನ ನಂಬುತ್ತಿದ್ದರಾ? ಜಮಾತಿನಲ್ಲಿ ಬಹುತೇಕ ಎಲ್ಲರೂ ಬ್ಯಾಂಕ್‌ ಬಡ್ಡಿಯ ವ್ಯವಹಾರ ಮಾಡುವವರೇ. ನಾನು ಇದನ್ನೆಲ್ಲ ಹೆಚ್ಚು ಮಾತನಾಡಿದರೆ ಅವರಿಗೆ ರುಚಿಸುವುದೂ ಇಲ್ಲ..’

‘ಅದ್ಸರಿ. ಅವತ್ತು ನೇಣು ಹಾಕಿಕೊಂಡ ಮಹಿಳೆ ಯಾರು? ಅಬ್ದುಲ್ಲಾ ಹಾಜಿಗೆ ಆ ವಿಷಯದಲ್ಲಾದರೂ ಎದುರುತ್ತರ ಕೊಡಬೇಕಿತ್ತಲ್ವಾ?’

‘ಮೋನೇ… ಕೆಲವು ದಾರುಣ ದುಃಖಗಳನ್ನು ಎದೆಯೊಳಕ್ಕೆ ಎಷ್ಟು ಒತ್ತಿ ಹಿಡಿದರೂ ಒಂದಲ್ಲ ಒಂದು ದಿನ ಅವು ಆಕಾಶಕ್ಕೆ ಚಿಮ್ಮುವುದನ್ನು ತಡೆಯಲಾಗದು….’ ದೀರ್ಘ ನಿಟ್ಟುಸಿರು ಬಿಡುತ್ತಾ ಮುಸ್ಲಿಯಾರ್‌ ನೆನಪಿನ ಲೋಕವೊಂದಕ್ಕೆ ಜಾರಿದರು. ‘ನಾನು ಅವತ್ತು ಬೆಳಿಗ್ಗೆ ನಸುಬೆಳಕಿನಲ್ಲಿ ಬಿರುಸಾಗಿ ನಡೆಯುತ್ತಿದ್ದೆ. ಸಣ್ಣದಾಗಿ ಮಂಜು. ಹಠಾತ್ತಾಗಿ ಹುಣಸೆ ಮರದಲ್ಲಿ ನೇತಾಡುತ್ತಿದ್ದ ದೇಹ ಕಾಣಿಸಿತು. ಒಮ್ಮೆಲೆ ಅಲ್ಲಿ ನನಗೆ ನನ್ನ ಹೆತ್ತು ಹೊತ್ತು ಬೆಳೆಸಿದ ಉಮ್ಮಾ ಕಾಣಿಸಿದಳು. 30 ವರ್ಷಗಳ ಹಿಂದೆ ಅವತ್ತೊಂದು ದಿನ… ನನ್ನ ಉಮ್ಮಾ ಹೀಗೆಯೇ ನಡುರಾತ್ರಿ ಮನೆಯ ಜಂತಿಗೆ ಸೀರೆ ಕಟ್ಟಿ ನೇಣು ಬಿಗಿದುಕೊಂಡಿದ್ದಳು. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ನಫೀಸಾಗೆ ಎಚ್ಚರವಾಗದ ನಿದ್ರೆ. ನಾನು ಪರವೂರಿಗೆ ವ್ಯಾಪಾರಕ್ಕೆಂದು ಹೋದವನು ಬೆಳಿಗ್ಗೆಯ ಜಾವ ರೈಲು ಇಳಿದು ಮನೆಯ ಬಳಿ ಬಂದಾಗ ಎದುರಿನ ಬಾಗಿಲು ಸ್ವಲ್ಪ ತೆರೆದಿತ್ತು. ಅವತ್ತೂ ಹಾಗೆಯೇ ಕತ್ತಲು.. ಸಣ್ಣಗೆ ಮಂಜು ಆವರಿಸಿತ್ತು. ಬಾಗಿಲನ್ನು ತಳ್ಳಿ ಮನೆಯೊಳಕ್ಕೆ ಹೋದರೆ ನನ್ನ ಉಮ್ಮಾ ನೇತಾಡುತ್ತಿದ್ದಳು… ಗಂಡನ ಜೊತೆ ಸಂಸಾರ ನಡೆಸಿದ್ದು ಎರಡೇ ವರ್ಷ. ಇದ್ದ ಒಬ್ಬನೇ ಮಗನಿಗಾಗಿ ಜೀವ ಸವೆಸಿದಳು. ಗಂಡ ತೀರಿಕೊಂಡು ವರ್ಷಗಳಾದ ಬಳಿಕ ಶುರುವಾದದ್ದು ಅಸಾಧ್ಯ ಹೊಟ್ಟೆನೋವು. ಅವಳಿಗೆ ಯಾವ ಔಷಧಿಯೂ ನಾಟುತ್ತಿರಲಿಲ್ಲ. ಕೆಲವೊಮ್ಮೆ ರಾತ್ರಿಯಿಡೀ ನರಳುತ್ತಿದ್ದಳು. ಅವತ್ತು ಸಹಿಸಲಾಗದೆ ನಿರ್ಧಾರ ಮಾಡಿಬಿಟ್ಟಿದ್ದಳು. ಆ ಹುಣಸೇ ಮರದಲ್ಲಿ ನೇತಾಡುತ್ತಿದ್ದ ದೇಹವನ್ನು ನನ್ನ ಅಮ್ಮನದ್ದೆಂದೇ ಭಾವಿಸಿ ನಾನು ದಿಗ್ಭ್ರಾಂತನಾಗಿದ್ದೆ. ಬಹಳ ಹೊತ್ತು ನಾನು ಈ ಲೋಕದಲ್ಲೇ ಇರಲಿಲ್ಲ…’ ದೀರ್ಘ ನಿಟ್ಟುಸಿರು ಬಿಟ್ಟು ಆಕಾಶ ನೋಡಿದರು ಮುಸ್ಲಿಯಾರ್‌.

ಸಿದ್ದೀಕ್ ಎರಡೂ ಹಸ್ತಗಳಲ್ಲಿ ತನ್ನ ಕಣ್ಣುಗಳನ್ನು ಉಜ್ಜಿ ಕೆನ್ನೆಯ ಮೇಲೆ ಹಸ್ತಗಳನ್ನು ನೀವುತ್ತಾ ಕೆಳಗಿಳಿಸಿ ಅಪ್ಪನನ್ನು ನೋಡಿ ದೀರ್ಘ ಉಸಿರೆಳೆದ. ‘ಅಬ್ಬಾ… ಉಮ್ಮನ ಬಗ್ಗೆ ಅಜ್ಜಿಗೆ ಅಸಹನೆ ಇತ್ತಾ? ಅವರಿಬ್ಬರಿಗೂ ಜಗಳವಾಗುತ್ತಿತ್ತಾ?’

‘ಹೌದು ಮೋನೇ. ನಿನ್ನ ಉಮ್ಮ, ನನ್ನ ನಫೀಸಾ ಕೂಡಾ ವಲಸೆ ಬಂದವಳೇ.. ಆ ಧರ್ಮದಿಂದ..’

ದೂರದ ಏರ್‌ಪೋರ್ಟಿನ ಆಕಾಶದಲ್ಲಿ ಮತ್ತೊಂದು ವಿಮಾನ ಹೊಟ್ಟೆಯ ತಳಭಾಗದಲ್ಲಿ ಬೆಳಕು ಮಿನುಗಿಸುತ್ತಾ ನಿಧಾನಕ್ಕೆ ಕೆಳಗಿಳಿಯತೊಡಗಿತ್ತು.

******

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಮೇ 19ರಂದು ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ

Bengaluru News: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ.ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

VISTARANEWS.COM


on

7 books release programme on May 19 in Bengaluru
Koo

ಬೆಂಗಳೂರು: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ (Bengaluru News) ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ.

ಇದನ್ನೂ ಓದಿ: SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ. ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

ವೀರಕಪುತ್ರ ಆಶಯನುಡಿಗಳನ್ನಾಡಲಿದ್ದಾರೆ. ಶೋಭಾ ರಾವ್‌ ಮತ್ತು ಅನಂತ ಕುಣಿಗಲ್‌ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.

ಇದನ್ನೂ ಓದಿ: Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

ಲೋಕಾರ್ಪಣೆಗೊಳ್ಳಲಿರುವ ಕೃತಿಗಳು ಹಾಗೂ ಕೃತಿಕಾರರ ವಿವರ

ಡಾ. ಲಕ್ಷ್ಮಣಕೌಂಟೆ ಅವರ ಮಹಾವಿನಾಶ (ಕಾದಂಬರಿ), ಕೌಂಡಿನ್ಯ ಅವರ ಬೆಳವಡಿ ಮಲ್ಲಮ್ಮ (ಕಾದಂಬರಿ), ರಾಘವೇಂದ್ರ ಪ್ರಭು ಎಂ. ಅವರ ಬಹುತ್ವ ಭಾರತ ಕಟ್ಟಿದವರು (ಬದುಕು ಬರಹಗಳು), ವಿ. ಗೋಪಕುಮಾರ್‌ ಅವರ ಕಗ್ಗಕ್ಕೊಂದು ನ್ಯಾನೋ ಕಥೆ (ನ್ಯಾನೋ ಕತೆಗಳು), ಗೀತಾ ದೊಡ್ಮನೆ ಅವರ ನೀಲಿ ಶಾಯಿಯ ಕಡಲು (ಕವಿತೆಗಳು), ಮೇದಿನಿ ಕೆಸವಿನಮನೆ ಅವರ ಮಿಸ್ಸಿನ ಡೈರಿ (ಅನುಭವ ಕಥನ), ಪಾರ್ವತಿ ಪಿಟಗಿ ಅವರ ಪುನರುತ್ಥಾನ (ಕಾದಂಬರಿ) ಲೋಕಾರ್ಪಣೆಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ಕಲೆ/ಸಾಹಿತ್ಯ

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್- ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಕೃತಿಯನ್ನು ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Konkani Book Release ) ಬಿಡುಗಡೆಗೊಳಿಸಿದರು. ಕರಾವಳಿಯಲ್ಲಿ ಕೊಂಕಣಿ ಮಾತನಾಡುವ ಜಿಎಸ್‌ಬಿ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇದೊಂದು ಅಪೂರ್ವ ಕೃತಿಯಾಗಿದೆ.

VISTARANEWS.COM


on

By

Konkani Book Release
Koo

ಮಂಗಳೂರು: ಇಟಾಲಿಯನ್- ಬ್ರಿಟಿಷ್ ಲೇಖಕ (Italian-born British citizen) ಗಿನೋ ಡಿ’ಕ್ಲೆಮೆಂಟೆ ಅವರು ಸಂಪಾದಿಸಿದ ಕೃತಿ ”ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ’ ಕೃತಿಯನ್ನು (Konkani Book Release) ಕೇರಳದ (kerala) ಎರ್ನಾಕುಲಂನಲ್ಲಿರುವ (Ernakulam) ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Samyameendra Thirtha Swamiji ) ಬಿಡುಗಡೆಗೊಳಿಸಿದರು.

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್-ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಸಂವಾದಾತ್ಮಕ ಜಿಎಸ್‌ಬಿ (ಗೌಡ ಸಾರಸ್ವತ ಬ್ರಾಹ್ಮಣ) ಕೊಂಕಣಿ ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ರಚಿಸಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಪ್ರತಿಷ್ಠಿತ ದಿಗ್ವಿಜಯ್ ಮಹೋತ್ಸವದಲ್ಲಿ ಅನಾವರಣಗೊಂಡ ಈ ಮಾರ್ಗದರ್ಶಿ ಕೃತಿ ಶ್ರೀಮಂತ ಭಾರತೀಯ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ಮಹತ್ವದ ಮೈಲುಗಲ್ಲನ್ನು ಗುರುತಿಸುತ್ತದೆ.


Gino’s Guide for Conversational GSB Konkani ಕೃತಿಯು ಜಿ ಎಸ್ ಬಿ ಸಮುದಾಯದ ಪರಂಪರೆಯನ್ನು ಪೋಷಿಸುವ ಸಮರ್ಪಿತ ಸಂಸ್ಥೆಯಾದ ಜಿಎಸ್ ಬಿ ವರ್ಲ್ಡ್‌ವೈಡ್‌ನ ಯುವಜನರಿಂದ ಸುಗಮಗೊಳಿಸಲ್ಪಟ್ಟ ಅಡ್ಡ-ಸಾಂಸ್ಕೃತಿಕ ತಿಳುವಳಿಕೆ ಮತ್ತು ಭಾಷಾ ಸಂರಕ್ಷಣೆಗೆ ಅಸಾಧಾರಣ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಕೃತಿಯ ಕುರಿತು ಮಾತನಾಡಿದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಇದು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳ ಮೇಲೆ ಬೀರುವ ಮಹತ್ವದ ಪರಿಣಾಮವನ್ನು ಒತ್ತಿ ಹೇಳುತ್ತದೆ ಎಂದರು.

ಗಿನೋ ಡಿ ಕ್ಲೆಮೆಂಟೆ ಅವರ ಕೆಲಸವು ಸಮರ್ಪಣಾ ಶಕ್ತಿ ಮತ್ತು ಸಾಂಸ್ಕೃತಿಕ ಮೆಚ್ಚುಗೆಗೆ ಸಾಕ್ಷಿಯಾಗಿದೆ. ನಮ್ಮ ಸಮುದಾಯದ ಹೊರಗಿನವರಿಂದ ಅಂತಹ ಆಳವಾದ ತೊಡಗಿಸಿಕೊಳ್ಳುವಿಕೆಯನ್ನು ನೋಡುವುದು ಅಪರೂಪ. ಈ ಮಾರ್ಗದರ್ಶಿ ನಮ್ಮ ಭಾಷಾ ಸಂರಕ್ಷಣೆಯ ಪ್ರಯತ್ನಗಳಲ್ಲಿ ಒಂದು ಸ್ಮಾರಕ ಸಾಧನೆಯಾಗಿದೆ ಎಂದು ಹೇಳಿದರು.

ಮಾರ್ಗದರ್ಶಿಯು ದೈನಂದಿನ ಸಂಭಾಷಣೆಗಳಿಗೆ ಪ್ರಾಯೋಗಿಕ ನುಡಿಗಟ್ಟುಗಳು ಮತ್ತು ಉದಾಹರಣೆಗಳೊಂದಿಗೆ ಉಚ್ಚಾರಣೆ, ವ್ಯಾಕರಣ ಮತ್ತು ಶಬ್ದಕೋಶದ ವಿವರವಾದ ಅವಲೋಕನವನ್ನು ನೀಡುತ್ತದೆ. ಇದು ಆರಂಭಿಕ ಮತ್ತು ಮುಂದುವರಿದ ಕಲಿಯುವವರಿಬ್ಬರನ್ನೂ ಪೂರೈಸುತ್ತದೆ, ಜಿಎಸ್ ಬಿ ಕೊಂಕಣಿಯನ್ನು ಕರಗತ ಮಾಡಿಕೊಳ್ಳಲು ಉತ್ಸುಕರಾಗಿರುವ ಯಾರಿಗಾದರೂ ಇದೊಂದು ಬಹುಮುಖ್ಯ ಸಂಪನ್ಮೂಲವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Narayana Murthy: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಕತ್ತರಿ? ನಾರಾಯಣ ಮೂರ್ತಿ ಶಾಕಿಂಗ್‌ ಹೇಳಿಕೆ

ಲೇಖಕರ ಹಿನ್ನೆಲೆ ಏನು?

ಜಿನೋ ಡಿ ಕ್ಲೆಮೆಂಟೆ ಮೂಲತಃ ಇಟಲಿಯವರಾಗಿದ್ದು, ಈಗ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಮದುವೆಯ ಮೂಲಕ ಜಿ ಎಸ್ ಬಿ ಸಂಸ್ಕೃತಿಗೆ ಆಳವಾದ ವೈಯಕ್ತಿಕ ಸಂಪರ್ಕವನ್ನು ಹೊಂದಿದ್ದಾರೆ. ಅವರ ಸಂಗಾತಿಯು ಕರ್ನಾಟಕದ ಕಾರ್ಕಳ ತಾಲೂಕಿನ ಮೂಲದವರಾಗಿದ್ದಾರೆ. ಈ ಕೌಟುಂಬಿಕ ಬಂಧವು ಜಿನೋ ಅವರ ಜಿಎಸ್‌ಬಿ ಕೊಂಕಣಿಯ ತಲ್ಲೀನಗೊಳಿಸುವ ಅಧ್ಯಯನಕ್ಕೆ ಪ್ರೇರೇಪಿಸಿತು. ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಉತ್ಸಾಹವು ಈ ಸಮಗ್ರ ಮಾರ್ಗದರ್ಶಿಯಲ್ಲಿ ಉತ್ತುಂಗಕ್ಕೇರಿತು. ಭಾರತೀಯ ಭಾಷೆಗಳ ದಾಖಲೀಕರಣ ಮತ್ತು ಪ್ರಚಾರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ.

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

ಧವಳ ಧಾರಿಣಿ ಅಂಕಣ: ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು.

VISTARANEWS.COM


on

king dasharatha dhavala dharini
Koo

ಕರ್ಮಫಲವನ್ನು ತಾನೇ ಅರಿತು ಅನುಭವಿಸಿದ ಸೂರ್ಯವಂಶದ ಮಹಾನ್ ಚಕ್ರವರ್ತಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕವೆನ್ನುವುದು ದಶರಥನಿಗೆ ಮಹಾನ್ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ಆತ ಏನೆಲ್ಲ ಕಸರತ್ತನ್ನು ಮಾಡಿದ್ದ ಎನ್ನುವುದನ್ನು ನೋಡಿದ್ದೇವೆ.

ಕೈಕೇಯಿ ಮಂಥರೆಯ ದುರ್ಬೋಧನೆಯಿಂದ ಎಷ್ಟರಮಟ್ಟಿಗೆ ಪ್ರಭಾವಿತಳಾಗಿದ್ದಳೆಂದರೆ ಅರಸನ ಯಾವ ಒದ್ದಾಟವೂ ಅವಳನ್ನು ಕರಗಿಸಲಿಲ್ಲ. ರಾಮನನ್ನು ಬಿಟ್ಟರೆ ತಾನು ಬದುಕಿರಲಾರೆ ಎನ್ನುವ ಮಾತುಗಳು ಕಾದ ಮರಳಲ್ಲಿ ಬಿದ್ದ ನೀರಿನಂತೆಯೇ ಇಂಗಿಹೋಯಿತು. ಕೈಕೇಯಿ ತಿರುಗಿ ರಾಜನಿಗೆ ಧರ್ಮೋಪದೇಶ ಮಾಡುತ್ತಾಳೆ. ಶೈಭ್ಯ, ಅಲರ್ಕ ಮೊದಲಾದ ರಾಜರ್ಷಿಗಳು ಪ್ರತಿಜ್ಞಾಬದ್ಧರಾಗಿ ತಮ್ಮ ತಮ್ಮ ಜೀವವನ್ನೇ ಒತ್ತೆಯಾಗಿರಿಸಿದ ಸಂಗತಿಯನ್ನು ಹೇಳುತ್ತಾ ಪರೋಕ್ಷವಾಗಿ ದೊರೆಯ ಸಾವಿನ ಕುರಿತು ತಾನು ಅಂಜುವವಳಲ್ಲ ಎನ್ನುತ್ತಾಳೆ. ಅವಳಿಗೆ ತನ್ನ ಮಗ ಭರತ ಪಟ್ಟಕ್ಕೇರಲೇ ಬೇಕಾಗಿದೆ. ಆಕೆ ಕೌಸಲ್ಯೆಯನ್ನು ಎಷ್ಟರಮಟ್ಟಿಗೆ ದ್ವೇಷಿಸುತ್ತಿದಳೆಂದರೆ “ರಾಮ ಪಟ್ಟಾಭಿಷೇಕವಾದೊಡನೆಯೇ ರಾಜಮಾತೆಯಾಗಿ ಸಕಲಪ್ರಜೆಗಳಿಂದ ಗೌರವವನ್ನು ಸ್ವೀಕರಿಸುವ ಕೌಸಲ್ಯೆಯನ್ನು ತಾನು ಒಂದು ದಿನವೂ ನೋಡಿಸಹಿಸಲಾರೆ ಎನ್ನುತ್ತಾಳೆ. ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿ ಕೌಸಲ್ಯೆಯೊಂದಿಗೆ ನಿತ್ಯವೂ ರಮಿಸಲು ಇಚ್ಛಿಸುವ ನಿನ್ನ ಹುನ್ನಾರ ತನಗೆ ಗೊತ್ತು ಎಂದು ಜರಿಯುತ್ತಾಳೆ.

ದಶರಥನಿಗೆ ಮಾತು ಬಾರದಾಗಿದೆ. ಆತ ರಾಮನನ್ನು ಕಾಡಿಗೆ ಕಳುಹಿಸುವುದು ಬೇಡವೆಂದು ಬಗೆಬಗೆಯಲ್ಲಿ ಗೋಳಾಡುತ್ತಾನೆ. ಸ್ತ್ರೀಸುಖಕ್ಕೊಸ್ಕರವಾಗಿ ತನ್ನ ಪ್ರಿಯಸುತನನ್ನೇ ಅರಣ್ಯಕ್ಕೆ ಕಳುಹಿಸಿದ ತನ್ನನ್ನು ಅತಿಕಾಮಿಯೆಂದು ಪುರಜನರು ಆಡಿಕೊಳ್ಳುವರು, ಆ ಅಪವಾದ ಬರುತ್ತದೆಯೆಂದು ಗೋಗೆರೆಯುತ್ತಾನೆ. “ಹೆಂಗಸರೆಲ್ಲ ಮೋಸಗಾರರು, ಸ್ವಾರ್ಥಪರಾಯಣರು ಎಂದು ಉದ್ವೇಗದಿಂದ ಕೂಗಾಡುತ್ತಾನೆ. ಬಹುಶಃ ಆಗ ಆತನಿಗೆ ತನ್ನ ಹಿರಿಯ ಹೆಂಡತಿಯರಾದ ಕೌಸಲ್ಯೆ ಮತ್ತು ಸುಮಿತ್ರೆಯರ ನೆನಪಾಗಿರಬೇಕು. ಇಲ್ಲ, ಪ್ರಪಂಚದಲ್ಲಿ ಎಲ್ಲಾ ಹೆಂಗಸರೂ ಹಾಗಿಲ್ಲ’ ಕೇವಲ ಭರತನ ತಾಯಿಗೆ ಮಾತ್ರ ತನ್ನ ಮಾತು ಅನ್ವಯಿಸುತ್ತದೆ ಎಂದು ಕೂಗಾಡುತ್ತಾನೆ. ರಾಮನನ್ನು ಅರಣ್ಯಕ್ಕೆ ಕಳುಹಿಸುವ ಒಂದು ಮಾತನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು ಎನ್ನುವ ಮಾತುಗಳು ಕೈಕೇಯಿಯ ಮೇಲೆ ಪರಿಣಾಮ ಬೀರದಿದ್ದಾಗ ಕೊನೆಯ ಅಸ್ತ್ರವೆನ್ನುವಂತೆ ದಶರಥ ಲೋಕಮರ್ಯಾದೆಯನ್ನು ಮೀರಿ ಅನಾಥನಂತೆ ಗೋಳಾಡುತ್ತಾ ಆಕೆಯ ಕಾಲಿಗೆ ನಮಸ್ಕರಿಸಲು ಹೋಗುತ್ತಾನೆ. ಆಗ ಕೈಕೇಯಿ ತಿರಸ್ಕಾರದಿಂದ ತನ್ನ ಕಾಲನ್ನು ದೂರಕ್ಕೆ ಚಾಚಿದುದರಿಂದ ಅವೂ ಆತನಿಗೆ ಸಿಕ್ಕದೇ ರೋಗಿಯೊಬ್ಬ ತತ್ತರಿಸಿ ಬೀಳುವಂತೆ ನೆಲದಮೇಲೆ ಬೀಳುತ್ತಾನೆ. ಅವನ ಈ ಸ್ಥಿತಿಯನ್ನು ನೋಡಿದ ರಾಮಾಯಣದ ಕವಿ ವಾಲ್ಮೀಕಿಗೂ ದಶರಥನ ಮೇಲೆ ಹೇಸಿಗೆಯುಂತಾಗುತ್ತದೆ. ಚಕ್ರವರ್ತಿ ತನ್ನ ಘನತೆಯನ್ನು ಮರೆತು ಹೀಗೆ ಮಾಡಬಾರದಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ.

ಅತದರ್ಹಂ ಮಹಾರಾಜಂ ಶಯಾನಮತಥೋಚಿತಮ್.
ಯಯಾತಿಮಿವ ಪುಣ್ಯಾನ್ತೇ ದೇವಲೋಕಾತ್ಪರಿಚ್ಯುತಮ್৷৷ಅಯೋ. .13.1৷৷

ರಾಜಾಧಿರಾಜನಾದಂತಹ ದಶರಥನು ಕೈಕೇಯಿಯ ಪಾದಗಳ ಮೇಲೆ ಬೀಳಲು ಹೋಗಬಾರದಿತ್ತು(ಅತದರ್ಹಂ) ಎಂದು ಬಹಿರಂಗವಾಗಿಯೇ ಸಿಡಿಮಿಡಿಗೊಳ್ಳುತ್ತಾನೆ. ರಾಮಾಯಣದ ಈ ಸನ್ನಿವೇಶ ವಾಲ್ಮೀಕಿಯ ಕಣ್ಣಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಕಾಣುತ್ತಿದೆ. ನಿರುಧ್ವಿಘ್ನವಾಗಿ ಕಥೆಯನ್ನು ಹೇಳುತ್ತಾಹೋಗಬೇಕಾದ ಕವಿ ಸೀತೆಗೆ ತೊಂದರೆಯಾದ ಉತ್ಕಟಕ್ಷಣಗಳಲ್ಲಿ ರಸಭಾವವನ್ನು ಹತ್ತಿಕ್ಕಲಾರದೇ ತಾನೇ ಕಥೆಯೊಳಗೆ ಪ್ರವೇಶಿಸುವುದುಂಟು. ಆದರೆ ಇಲ್ಲಿ ಮಾತ್ರ ಆತನಿಗೆ ದಶರಥನ ಒಟ್ಟಾರೆಯ ವ್ಯವಹಾರವೇ ರೇಜಿಗೆ ಹುಟ್ಟಿಸಿದೆ. ಕೈಕೇಯಿಯನ್ನು ಇಕ್ಷಾಕುವಂಶಕ್ಕೇ ಅನರ್ಥಕಾರಿಣಿಯೆಂದು ತಿರಸ್ಕಾರದಿಂದ ಕವಿಹೇಳುತ್ತಾನೆ. ಸೂರ್ಯವಂಶದ ಪುಣ್ಯದ ಕಾರಣದಿಂದ ದಶರಥನಿಗೆ ಕೈಕೇಯಿಯ ಪಾದಗಳು ಸಿಗಲಿಲ್ಲ. ಎನ್ನುತ್ತಾನೆ. ಈ ಭಾಗವನ್ನು ದಶರಥವಿಲಾಪವೆನ್ನುವ ಹೆಸರಿನಿಂದ ಕರೆದರೂ ಇಲ್ಲಿ ಕಾಳಿದಾಸನ ಪ್ರಸಿದ್ಧಕಾವ್ಯ ರಘುವಂಶದ ಅಜವಿಲಾಪ ನೆನಪಿಗೆ ಬರುತ್ತದೆ. ರಘುವಂಶದಲ್ಲಿ ಅಜ ಮತ್ತು ಇಂದುಮತಿ ದಂಪತಿಗಳ ಪ್ರೇಮದ ವಿಷಯ ಪ್ರಸಿದ್ಧ. ದಿವ್ಯಪುಷ್ಪಮಾಲೆಯೊಂದು ಅಜನ ಪತ್ನಿ ಇಂದುಮತಿಯಮೇಲೆ ಬಿದ್ದಾಗ ಅವಳು ಮೃತಳಾಗುತ್ತಾಳೆ. ಆಗ ಅಜ ತನ್ನ ಪತ್ನಿಗಾಗಿ ಮಾಡುವ ದುಃಖವು ಅಜವಿಲಾಪವೆಂದೇ ಪ್ರಸಿದ್ಧಿಯಾಗಿದೆ. ಪತ್ನಿಯ ವಿರಹವನ್ನು ತಾಳಲಾರದೇ ಕುಗ್ಗಿ ಕುಗ್ಗಿ ಸಾಯುವ ಅಜನೂ ಸ್ತ್ರೀ ಕಾರಣದಿಂದ ಸಾಯುತ್ತಾನಾದರೂ ಅದು ಪ್ರೇಮಕಾವ್ಯದ ಉತ್ತುಂಗಗಳಲ್ಲೊಂದೆಂದು ಪರಿಗಳಿಸಲ್ಪಟ್ಟಿದೆ. ಅದರ ವಿರುದ್ಧವಾಗಿ ಅಜನ ಮಗನಾದ ದಶರಥನ ಒದ್ದಾಟವಿದೆ. ಅವನ ವಿಲಾಪಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಯಾರೂ ಬರುವುದಿಲ್ಲ. ಅವನ ವಿಲಾಪಕ್ಕೆ ರಾತ್ರಿಯೇ ಹೆದರಿ ಓಡಿಹೋಯಿತು.

ಬೆಳಗಾದರೂ ದೊರೆ ಗೋಳಾಡುವುದನ್ನು ಬಿಟ್ಟು ರಾಮನನ್ನು ಪಟ್ಟಗಟ್ಟುವ ಯಾವ ಸೂಚನೆಯನ್ನೂ ನೀಡುವುದಿಲ್ಲ. ಎಲ್ಲಿಯಾದರೂ ಬೇರೆಯವರಿಗೆ ತಿಳಿದರೆ ತನ್ನ ಕೆಲಸ ಕೆಟ್ಟಿತೆನ್ನುವ ಚಿಂತೆ ಕೈಕೇಯಿಯಲ್ಲುಂಟಾಯಿತು. ರಾಜನನ್ನು ಧರ್ಮಪರಿಪಾಲನೆಯೆನ್ನುವ ಹಗ್ಗದಲ್ಲಿ ಕಟ್ಟಿಹಾಕಿದ್ದಳು.

ಸತ್ಯಮೇಕಪದಂ ಬ್ರಹ್ಮ ಸತೇ ಧರ್ಮಃ ಪ್ರತಿಷ್ಠಿತಃ
ಸತ್ಯಮೇವಾಕ್ಷಯಾ ವೇದಾಃ ಸತ್ಯೇನೈವಾಪ್ಯತೇ ಪರಮ್ II ಅಯೋ.14-7II

ಸತ್ಯವೆನ್ನುವುದೇ ಬ್ರಹ್ಮವಾಚಕವಾದ ಪ್ರಣವಸ್ವರೂಪವು. ಸತ್ಯದಲ್ಲಿಯೇ ಸಮಸ್ತ ಧರ್ಮಗಳೂ ಅಡಗಿರುವವು. ಕ್ಷಯವೃದ್ಧಿಗಳಿಲ್ಲದ ವೇದಗಳು ಸತ್ಯದ ಸ್ವರೂಪಗಳೇ ಆಗಿವೆ. ಪರಮೋತ್ಕ್ರಷ್ಟವಾದ ಲೋಕಗಳೂ ಸತ್ಯದ ಅವಲಂಬನೆಯಿಂದಲೇ ಲಭಿಸುತ್ತವೆ.

ಸಮಗ್ರವಾದ ಉಪನಿಷತ್ತಿನ ಸಾರವನ್ನು ಸಾರುವ ಈ ಮಾತು ಕೈಕೇಯಿಯಿಂದ ಬೇರೆ ಯಾವ ಸಂದರ್ಭದಲ್ಲಿಯಾದರೂ ಬಂದಿದ್ದರೆ ಆಕೆಯನ್ನು ಗಾರ್ಗಿ, ಲೋಪಾಮುದ್ರಾ ಮೊದಲಾದವರಸಾಲಿಗೆ ಸೇರಿಸಿಬಿಡುತ್ತಿದ್ದರೇನೋ. ಆಕೆಯ ತಂದೆ ಅಶ್ವಪತಿ ವೈಶ್ವಾನರ ವಿದ್ಯೆಯನ್ನು ಉದ್ಧಾಲಕನಿಗೆ ಕಲಿಸಿದ ಕುರಿತು “ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ”. ರಾವಣನೂ ಸಹ ಎಲ್ಲಾ ವೇದಗಳನ್ನು ಓದಿಕೊಂಡಿದ್ದ. ಮೂಲತಃ ಸ್ವಭಾವದಲ್ಲಿ ಸಾತ್ವಿಕ ಗುಣಗಳಿಲ್ಲದಿದ್ದರೆ ಅವೆಲ್ಲವೂ ವ್ಯರ್ಥವಾಗುತ್ತದೆ. ಕೈಕೇಯಿಗಾಗಿರುವುದೂ ಅದೇ. ತನಗೆ ತಿಳಿದಿರುವ ಧರ್ಮಸೂತ್ರಗಳನ್ನು ತನ್ನ ಸ್ವಾಥಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ. ಗಂಗಾನದಿಯೇ ಆದರೂ, ಬಚ್ಚಲುಮನೆಯಿಂದ ಹೊರಬಂದರೆ ಅದನ್ನು ಯಾರೂ ತೀರ್ಥವೆಂದು ಪರಿಗಣಿಸುವುದಿಲ್ಲ. ರಾಜನನ್ನು ಕರೆದೊಯ್ಯಲು ಸುಮಂತ್ರ ಕೈಕೇಯಿಯ ಅರಮನೆಗೆ ಬಂದಾಗ ಎಲ್ಲದರಲ್ಲಿಯೂ ಸೋತ ರಾಜನೇ “ರಾಮನನ್ನು ನೋಡಬೇಕೆಂದಿದ್ದೇನೆ, ಅವನನ್ನಿಲ್ಲಿಗೆ ಕರೆದುಕೊಂಡು ಬಾ” ಎನ್ನುತ್ತಾನೆ. ಆಗಲೆಂದು ಹೊರಟ ಸುಮಂತ್ರನಿಗೆ ಮನಸ್ಸಿನಲ್ಲಿ ಏನೋ ಒಂಡು ಸಂಶಯಕಾಡಿತು. ಸಭೆಗೆಬಂದವ ಅದಾಗಲೇ ಬಂದುಸೇರಿದ್ದ ಅರಸರ ವಿಷಯಗಳನ್ನು ತಿಳಿಸುವ ನೆವಮಾಡಿ ಮತ್ತೊಮ್ಮೆ ಕೈಕೇಯಿಯ ಅಂತಃಪುರಕ್ಕೆ ಬಂದ. ಕೈಕೇಯಿಗೆ ರಾಮನನ್ನು ಗುಪ್ತವಾಗಿ ಅರಣ್ಯಕ್ಕೆ ಕಳುಹಿಸಿ ಭರತನನ್ನು ಪಟ್ಟಾಭಿಷೇಕಕ್ಕೆ ಏರಿಸಬೇಕಿತ್ತು. ಚಾಣಾಕ್ಷಳಾಗಿದ್ದ ಆಕೆಗೆ ಈ ವಿಷಯ ಬಹಿರಂಗಕ್ಕೆ ಬಂದರೆ ಸಾಮಂತರೆಲ್ಲರೂ ತಿರುಗಿಬೀಳುವರು ಎನ್ನುವುದರ ಅರಿವಿತ್ತು. ಅದಕ್ಕಾಗಿಯೇ ಅವಳು ರಾಮ ತನ್ನ ಮನೆಗೇ ಬರಲಿ ಎಂದು ರಾಜನನ್ನು ಒತ್ತಾಯಿಸಿದಳು. ಎರಡನೆಯ ಸಾರಿ ಸುಮಂತ ಬಂದಾಗ ಸ್ವಲ್ಪ ಸಿಟ್ಟಿನಿಂದಲೇ ರಾಮನನ್ನು ಇಲ್ಲಿಗೆ ಕರೆತರಬೇಕು. ಇದು ತನ್ನ ಆಜ್ಞೆ ಎಂದು ಕಠೋರವಾಗಿಯೇ ಹೇಳುತ್ತಾನೆ. “ದಶರಥನ ಮಾತು ಸೋತ ಹೊತ್ತು ಅದು”. ದೊರೆ ಅಸಹಾಯಕನಾಗಿದ್ದ. ತನ್ನೆದುರೇ ತನ್ನ ಪರವಾಗಿ ಕೈಕೇಯಿ ರಾಮನಲ್ಲಿ ತನ್ನ ವರದ ಕುರಿತು ಒಡಂಬರಿಸುತ್ತಿರುವಾಗ ಮೌನವಾಗಿದ್ದ. ನಾಲಿಗೆ ಮಾತನ್ನು ಆಡುವುದು ಬುದ್ಧಿಯಬಲದಿಂದ. ದಶರಥನ ಬುದ್ಧಿಯನ್ನು ಸಂಪೂರ್ಣವಾಗಿ ಕೈಕೇಯಿ ಆಕ್ರಮಿಸಿಕೊಂಡಿದ್ದಳು. ರಾಮನ ಪ್ರಿಯಮಾತೆ ಕೈಕೇಯಿ ರಾಜನ ಪರವಾಗಿ ಆಡುವ ಮಾತಾಗಿದ್ದಳು. ಸಮಯ ಸರಿದಷ್ಟೂ ತನಗೇ ಅಪಾಯವೆಂದು ಅವಳಿಗೆ ಅರಿವಾಗತೊಡಗಿತು. ತಂದೆಯ ನೋಡಲು ಬಂದ ರಾಮ ಆತನ ಚಿಂತೆಗೆ ಕಾರಣವನ್ನು ಕೇಳೆದರೆ ಆತನಲ್ಲಿ ದೊರೆಯ ಮನಸ್ಸಿನಲ್ಲಿರುವುದು ಭರತನು ರಾಜನಾಗುವ ಮತ್ತು ರಾಮನ ಅರಣ್ಯಗಮನದ ವರಗಳನ್ನು ಹೇಳುತ್ತಾಳೆ. ಅಷ್ಟೇ ಅಲ್ಲ,’ “ಎಲ್ಲಿಯವರೆಗೆ ನೀನು ಈ ಅಯೋಧ್ಯೆಯನ್ನು ಬಿಟ್ಟು ಅರಣ್ಯಕ್ಕೆ ಹೋಗುವುದಿಲ್ಲವೋ ಅಲ್ಲಿಯವರೆಗೆ ರಾಜನು ಸ್ನಾನವನ್ನೂ ಮಾಡುವುದಿಲ್ಲ, ಊಟವನ್ನೂ ಮಾಡುವುದಿಲ್ಲ” ಎನ್ನುವ ಮಾತನ್ನು ಹೇಳಿದಾಗ ರಾಮ ಇನ್ನು ತಡಮಾಡುವುದು ಸರಿಯಲ್ಲವೆಂದು ಅರಣ್ಯಕ್ಕೆ ಹೊರಟಕಥೆ ಎಲ್ಲರಿಗೂ ಚಿರಪರಿಚಿತ.

dhavala dharini king dasharatha

ದಶರಥನಿಗೆ ರಾಮನ ಅಗಲುವಿಕೆಯ ದುಃಖಕ್ಕಿಂತ ಆತ ಸುಮಂತ್ರನ ಹತ್ತಿರ ತನ್ನ ತಂದೆ ಮತ್ತು ತಾಯಿಗೆ ಹೇಳುವ ಸಂದೇಶ ಇನ್ನಷ್ಟು ಶೋಕವನ್ನು ಕೊಡುತ್ತದೆ. ರಾಮ ತನ್ನ ತಾಯಿಗೆ ತಾಳ್ಮೆಯಿಂದ ಇರಲು ಹೇಳಿಕಳುಹಿಸುತ್ತಾನೆ. ಹದಿನಾಲ್ಕುವರ್ಷಗಳ ತನಕ ಹೇಗೋ ಭರತನ ಜೊತೆ ಹೊಂದಿಕೊಂಡು ಹೋಗು ಎಂದಿದ್ದ. ಭರತನಿಗೂ ಕೈಕೇಯಿಯಂತೇ ತನ್ನ ತಾಯಯಿಂದರನ್ನು ನೋಡಿಕೊಳ್ಳುವಂತೆ ಕಾಠಿಣ್ಯದಿಂದ ತುಂಬಿದ ಎಚ್ಚರಿಕೆಯ ಸಂದೇಶನ್ನು ಕಳಿಹಿಸುತ್ತಾನೆ. ಕೌಸಲ್ಯಯ ಕುರಿತು ಹೇಳುವಾಗ ರಾಮನ ಕಣ್ಣಲ್ಲಿ ನೀರು ಹರಿಯುತ್ತಿರುವುದನ್ನು ಕಂಡ ಲಕ್ಷ್ಮಣ ಕ್ರುದ್ಧನಾಗಿರುವ ವಿಷಯವನ್ನು ಹೇಳುವಾಗ ಅರಸನಿಗೆ ಕಾಮಮೋಹಿತನಾಗಿದ್ದ ತಾನೇ ಅವಸರದಿಂದ ಕೈಕೇಯಿಯನ್ನು ಓಲೈಸಲು ಹೋದೆ ಅನಿಸುತ್ತದೆ. ರಾಜ ಯಾವ ನಿರ್ಣಯಗಳನ್ನು ಕೈಗೊಳ್ಳುವಾಲೂ ಮೊದಲು ಅಮಾತ್ಯರೊಡನೆ ಸಮಾಲೋಚಿಸಿ ಅವರ ಸಲಹೆಪಡೆದು, ಅದು ಧರ್ಮಸಮ್ಮತವಾಗಿದ್ದರೆ ತನಗೆ ಯುಕ್ತವಾದ ನಿರ್ಣಯವನ್ನು ಕೈಗೊಳ್ಳಬೇಕು. ಇಲ್ಲಿ ಅದೇನನ್ನೂ ಮಾಡದೇ ಇರುವ ಅಪರಾಧೀ ಭಾವ ಕಾಡುತ್ತದೆ. ವನವಾಸಕ್ಕೆ ಹೊರಟ ರಾಮ, ಸೀತಾ ಲಕ್ಷ್ಮಣರು ನಗುತ್ತಲೇ ಹೊರಟರು, ಗುಹನಲ್ಲಿ ಆಲದ ಹಾಲನ್ನು ತರಿಸಿ ತಪಸ್ವಿಗಳಂತೆ ಜಟಾಧಾರಿಯಾದ ವಿಷಯವನ್ನು ಕೇಳಿದ ಕೌಸಲ್ಯೆಯ ಮಾತ್ರಭಾವಕ್ಕೆ ಬಲವಾದ ನೋವನ್ನು ಕೊಡುತ್ತದೆ. ಅನೇಕವರ್ಷಗಳಕಾಲ ಧಶರಥನಿಂದ ಅಲಕ್ಷಕ್ಕೆ ಒಳಗಾದರೂ ಆಕೆ ಅದನ್ನೆಲ್ಲ ಸಹಿಸಿಕೊಂಡು ಮೌನಿಯಾಗಿದ್ದವಳು ಬಲುತೀಕ್ಷ್ಣವಾದ ಮಾತುಗಳಿಂದ ಗಂಡನನ್ನು ನಿಂದಿಸುತ್ತಾಳೆ. ಕೊನೆಯದಾಗಿ “ಮಹರಾಜಾ! ನಿನ್ನ ಈ ದುಶ್ಚರ್ಯೆಯಿಂದಾಗಿ ನಾನು ಮತ್ತು ನನ್ನ ಮಗನು ಮಾತ್ರ ವಿನಾಶ ಹೊಂದಲಿಲ್ಲ. ರಾಮನನ್ನು ಕಾಡಿಗಟ್ಟಿ ರಾಷ್ಟ್ರಸಹಿತವಾದ ರಾಜ್ಯವನ್ನು ಹಾಳುಮಾಡಿದೆ. (ಹತಂ ತ್ವಯಾ ರಾಜ್ಯಮಿದಂ ಸರಾಷ್ಟ್ರಂ ಹತಸ್ತಥಾತ್ಮಾ ಸಹ ಮಂನ್ತ್ರಿಭಿಶ್ಚ) ಮಂತ್ರಿಗಳೊಡನೇ ನೀನೂ ಹಾಳಾದೆ” ಎನ್ನುವ ಕಠೋರಮಾತುಗಳನ್ನಾಡುತ್ತಾಳೆ.

ಅದುತನಕ ಅದುಮಿಟ್ಟುಕೊಂಡ ಅವಮಾನ, ತಿರಸ್ಕಾರಗಳೆಲ್ಲವೂ ಸ್ಪೋಟಗೊಂಡಹೊತ್ತು ಅದು. ಆಕೆಯ ಮಾತುಗಳು ಎಷ್ಟು ತೀಕ್ಷ್ಣವಾಗಿತ್ತೆಂದರೆ ದಶರಥ ಅದನ್ನು ಕೇಳಿದವನೇ ಮೂರ್ಛಿತನಾದ. ಆತನನ್ನು ಉಪಚರಿಸಿದ ಕೌಸಲ್ಯೆ ತಾನು ಹಾಗೇ ಮಾತಾಡಬಾರದಾಗಿತ್ತೆಂದು ದುಃಖಪಡುತ್ತಾಳೆ. ದಶರಥನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಾಳೆ. ಕೌಸಲ್ಯಾ ಮತ್ತು ಸುಮಿತ್ರಾ ಇಬ್ಬರೂ ಸೇರಿ ಗಂಡನ ಶುಶ್ರೂಷೇ ಮಾಡುತ್ತಾ ತಾವೇ ದುಃಖಿಸುತ್ತಲೂ ಇರುತ್ತಾರೆ. ದಶರಥನಿಗೆ ತಾನು ಇಷ್ಟೆಲ್ಲಾ ಒಳ್ಳೆಯ ಕಾರ್ಯವನ್ನು ಮಾಡಿದರೂ ತನಗೆ ಏಕೆ ಹೀಗೆ ಆಯಿತು ಎಂದು ಚಿಂತಿಸುತ್ತಾ ಯಾವುದೋ ಒಂದು ವಿಷಯವನ್ನು ಹೇಳಲೋ ಬೇಡವೋ ಎನ್ನುವಂತೆ ಇದ್ದ. ಆರನೆಯದಿನದ ಅರ್ಧರಾತ್ರಿಯಲ್ಲಿ ಇದ್ದಕ್ಕಿದ್ದಂತೆ ತನ್ನ ಪುತ್ರವಿಯೋಗಕ್ಕೆ ಕಾರಣವಾದ ತನ್ನ ಕರ್ಮಫಲದ ಕುರಿತು ಹೇಳಲು ನಿಶ್ಚಯಿಸಿದ. ಅದು ಎಲ್ಲರಿಗೂ ತಿಳಿದ ಕಥೆಯಾದ ಶ್ರವಣಕುಮಾರನ ಕಥೆ, ರಾಮಾಯಣದಲ್ಲಿ ಶ್ರವಣಕುಮಾರ ಎನ್ನುವ ಹೆಸರಿಲ್ಲ. ಕರಣ ಎಂದು ಆತನ ಹೆಸರು. ಆತನ ತಂದೆ ಓರ್ವ ಋಷಿಯಾಗಿದ್ದ. ಈ ಕಥೆ ಒಂದೇ ರೀತಿಯದಾದರೂ ಕಾಲಾಂತರದಲ್ಲಿ ಬೇರೆ ಬೇರೆ ರಾಮಾಯಣಗಳಲ್ಲಿ ಶ್ರವಣಕುಮಾರ ಎನ್ನುವ ಹೆಸರು ಬಂತು.

ಈ ಘಟನೆ ನಡೆಯುವಾಗ ದಶರಥನಿಗೆ ಪ್ರಾಯದ ಕಾಲ. ಆತ ಶಬ್ದವೇಧಿ ವಿದ್ಯೆಯಲ್ಲಿ ಮಹಾಚತುರ ಎನ್ನುವ ಕೀರ್ತಿ ಹಬ್ಬಿತ್ತು. ಅದನ್ನು ಪ್ರಯೋಗಿಸುವ ಹವ್ಯಾಸ ದೊರೆಗೆ. ಹಾಗಾಗಿ ಕಾಡಿಗೆ ಹೋಗಿ ಬೇಟೆಯಾಡುವ ವ್ಯಸನವನ್ನು ಹಚ್ಚಿಕೊಂಡಿದ್ದ. ಯುವರಾಜನಾಗಿದ್ದ ಆತನಿಗೆ ಆಗಿನ್ನೂ ಮದುವೆಯಾಗಿರಲಿಲ್ಲ (ದೇವ್ಯನೂಢಾ ತ್ವಮಭವೋ ಯುವರಾಜೋ ಭವಾಮ್ಯಹಮ್). ಮಳೆಗಾಲದ ಒಂದು ದಿನ ಬೇಟೆಗೆ ಹೋದಾಗ ಅನೆ ನೀರು ಕುಡಿಯುತ್ತಿರುವ ಸದ್ದು ಕೇಳಿಬಂತು. ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು. ಆತನೇ ಕುರುಡರಾದ ತನ್ನ ತಂದೆಯ ವಿಷಯವನ್ನು ಹೇಳಿ ಅವರಿಗೆ ನೀರನ್ನು ತೆಗೆದುಕೊಂಡು ಹೋಗು ಎಂದು ಕೇಳಿದ. ದಶರಥ ಯೌವನ ಮದದಿಂದ ಅಪರಾಧವನ್ನು ಮಾಡಿದರೂ ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಕುರುಡ ದಂಪತಿಗಳ ಬಳಿಗೆ ಬಂದು ಪ್ರಾಮಾಣಿಕವಾಗಿ ನಡೆದ ಸಂಗತಿಯನ್ನು ಹೇಳಿದ. ಬಾಲಕನ ಶವ ಸಂಸ್ಕಾರವನ್ನು ಅವರ ಹತ್ತಿರವೇ ಮಾಡಿಸಿದ. ಉದ್ಧೇಶಪೂರ್ವಕವಾಗಿ ತನ್ನ ಮಗನನ್ನು ಕೊಲ್ಲದ ಕಾರಣ ದೊರೆಗೆ ಬ್ರಹ್ಮಹತ್ಯಾ ಶಾಪವು ತಟ್ಟದು ಎಂದು ಹೇಳಿದರು. ಸಾಯುವ ಕಾಲದಲ್ಲಿ ತಮಗೆ ಆದ ರೀತಿಯಲ್ಲಿಯೇ ನಿನಗೂ ಪುತ್ರವಿಯೋಗವುಂಟಾಗಲಿ ಎಂದು ಶಾಪವನ್ನಿತ್ತು ಮಗನ ಚಿತೆಯನ್ನು ಏರಿ ದಿವ್ಯ ಶರೀರವನ್ನು ಧರಿಸಿ ಸ್ವರ್ಗಕ್ಕೆ ಹೋದರು.

king dasharatha kaikeyi dhavala dharini column

ರಾಜ ಕಾಲಾಂತರದಲ್ಲಿ ಅದನ್ನೆಲ್ಲ ಮರೆತಿದ್ದ. ಈಗ ರಾಮನ ಅಗಲುವಿಕೆಯೆನ್ನುವದು ಆತನಲ್ಲಿ ಅಪರಾಧೀ ಭಾವವನ್ನು ಮೂಡಿಸಿದೆ. ತನ್ನ ಕೊನೆಯ ದಿನಗಳು ಹತ್ತಿರ ಬಂತು ಎಂದು ದೊರೆಗೆ ಅನಿಸಲು ಸುರುವಾಯಿತು. ಸತ್ಯವಂತನಾದ, ಧರ್ಮಮಾರ್ಗದಲ್ಲಿ ನಡೆದ ತನಗೆ ಈ ಗತಿ ಏಕೆ ಬಂತು ಎಂದು ಚಿಂತಾಮಗ್ನನಾಗಿರುವಾಗ ಅವನಿಗೆ ತಾನೆಸಗಿದ ಈ ದುಷೃತ್ಯ ನೆನಪಿಗೆ ಬಂತು. ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಮುನಿಯ ಶಾಪ ಫಲಿಸುವ ಕಾಲ ಬಂತು ಎಂದು ಕೌಸಲ್ಯೆಗೆ ಹೇಳಿ ಇದಕ್ಕೆ ಕಾರಣ ತನ್ನ ಕರ್ಮಫಲ ಎನ್ನುತ್ತಾನೆ. ಮಾಡಿದ್ದಕ್ಕೆ ತಕ್ಕ ಕರ್ಮಫಲವನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆ ಪುನರ್ಜನ್ಮದಷ್ಟೇ ಪ್ರಾಚೀನವಾದುದು. ತಾನು ಬದುಕಬೇಕೆಮ್ದರೆ ರಾಮ ಬಂದು ತನ್ನನ್ನು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ತಾನು ಬದುಕುವೆ ರಾಘವನ ವಿಷಯದಲ್ಲಿ ಘನತೆಯಿಂದ ತಾನು ನಡೆದುಕೊಳ್ಳಲಿಲ್ಲ ವೆಂದು ನಿರಂತರವಾಗಿ ಶೋಕಿಸುತ್ತಾನೆ. ಇಷ್ಟಾದರೂ ಪಾಯಸದ ಮಹಿಮೆಯಿಂದ ಜನಿಸಿದ ಮಕ್ಕಳು ಎನ್ನುವ ವಿಷಯವೇ ಮರೆತುಹೋಗಿದೆ. ಋಷಿಮುನಿಗಳಿಗೆ ಕಂಡ ರಾಮನ ನಿಜರೂಪದ ಅರಿವು ದಶರಥನಿಗೆ ಆಗಲೇ ಇಲ್ಲ. ಅತನನ್ನು ಸಮಾಧಾನ ಮಾಡುತ್ತಾ ಕೌಸಲ್ಯೆ ಮತ್ತು ಸುಮಿತ್ರೆಯರು ತಮ್ಮ ನಡುವೆ ಮಲಗಿಸಿಕೊಂಡಿದ್ದರು ಆರುದಿನಗಳಿಂದಲೂ ಬಾರದ ನಿದ್ರೆ ಇಬ್ಬರೂ ರಾಣಿಯರಿಗೂ ತಡರಾತ್ರಿ ಬಂತು. ರಾಘವನ ನೆನಪು ಮಾಡುತ್ತಲೇ ಇದ್ದ ರಾಜನನ್ನು ಚಿರನಿದ್ರೆ ಸೆಳೆದುಬಿಟ್ಟಿತು.

ರಘುವಂಶದ ಘನತೆಯ ಚಕ್ರವರ್ತಿಯೆಂದು ಹೆಸರು ಮಾಡಿದ ಯಶೋವಂತನಾದ ದೊರೆ ತನ್ನ ಕರ್ಮ ಫಲವನ್ನು ಅನುಭವಿಸಿ ಕೊನೆಗಾಲವನ್ನು ಕಂಡ. ಯಾವಾತ ತನ್ನ ಕರ್ಮಫಲವನ್ನು ಜೀವಿತಾವಧಿಯಲ್ಲಿ ಅನುಭವಿಸುತ್ತಾನೆಯೋ, ಆ ಕಾರಣದಿಂದ ಅವರು ಪಶ್ಚಾತ್ತಾಪ ಪಡುತ್ತಾರೆಯೋ ಅಂತವರು ಸತ್ತಮೇಲೆ ನರಕದಲ್ಲಿ ಆ ಶಿಕ್ಷೆ ಅನುಭವಿಸುವುದಿಲ್ಲ. ಈ ಎಲ್ಲಾ ಅವಸ್ಥೆಯನ್ನು ಅನುಭವಿಸಿದ ಸೂರ್ಯವಂಶದ ಯಶೋವಂತ ಅರಸನೂ ಸಹ ಸ್ವರ್ಗಕ್ಕೆ ನಡೆದ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Continue Reading

ಬೆಂಗಳೂರು

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Award Ceremony: 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ಡಾ. ಬಿ. ಎಸ್. ಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

VISTARANEWS.COM


on

Award Ceremony
Koo

ಬೆಂಗಳೂರು: ಅ. ನ. ಕೃ. ಪ್ರತಿಷ್ಠಾನ ವತಿಯಿಂದ ಕಾದಂಬರಿ ಸಾರ್ವಭೌಮ ಅ. ನ. ಕೃ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 19ರಂದು ಬೆಳಗ್ಗೆ 10ಗಂಟೆಗೆ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್. ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ಡಾ. ಬಿ. ಎಸ್. ಸ್ವಾಮಿ ಅವರಿಗೆ ಪ್ರದಾನ (Award Ceremony) ಮಾಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರು ರಾಷ್ಟೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾಗಿದ್ದು, ಡಾ. ಬಿ. ಎಸ್. ಸ್ವಾಮಿ ಅವರು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ.

ಪ್ರಜಾವಾಣಿ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, ಲೇಖಕ, ಉಪನ್ಯಾಸಕ ಡಾ. ಬಂಡ್ಲಹಳ್ಳಿ ವಿಜಯಕುಮಾ‌ರ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಇದನ್ನೂ ಓದಿ | ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ಡಾ. ಕೆ.ಆರ್. ಸಂಧ್ಯಾರೆಡ್ಡಿ, ಶಾ.ಮಂ. ಕೃಷ್ಣರಾವ್, ಎಂ. ವೆಂಕಟೇಶ್ ಅವರು ಉಪಸ್ಥಿತರಿರಲಿದ್ದು, ಮಾಜಿ ಅಡ್ವೊಕೇಟ್ ಜನರಲ್ ಹಾಗೂ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅ. ನ. ಕೃ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಗೌತಮ್ ಅ. ನ. ಕೃ, ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿರಲಿದ್ದಾರೆ.

2022ರ ಪ್ರಶಸ್ತಿ ಪುರಸ್ಕೃತರು: ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ

ಆರೂವರೆ ದಶಕಗಳ ಕಾಲ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಮಾಜಕಾರ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಎಸ್. ಆರ್. ರಾಮಸ್ವಾಮಿ ಅವರು (ಜನನ: 29-10-1937) ಕಳೆದ 45 ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆ ಮತ್ತು ‘ರಾಷ್ಟ್ರೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರಾಗಿದ್ದಾರೆ.

ಸುಭಾಷ್‌ಚಂದ್ರ ಬೋಸ್ ಅವರ ಸಮಗ್ರ ಜೀವನಚರಿತ್ರೆ ‘ಕೋಲ್ಮಿಂಚು’ ಜಯಪ್ರಕಾಶ್ ನಾರಾಯಣ್ ವಲ್ಲಭಭಾಯಿ ಪಟೇಲ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಭಗಿನಿ ನಿವೇದಿತಾ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಜೀವನಚರಿತ್ರೆಗಳೂ ಸೇರಿ ಸುಮಾರು 60 ಗ್ರಂಥಗಳನ್ನು ಬರೆದಿದ್ದಾರೆ. ‘ಭಾರತದಲ್ಲಿ ಸಮಾಜಕಾರ್ಯ’, ‘ಸ್ವಾತಂತ್ರ್ಯೋದಯದ ಮೈಲಿಗಲ್ಲುಗಳು’ ಮೊದಲಾದ ಹಲವಾರು ಪ್ರತಿಷ್ಠಿತ ಕೃತಿಗಳಿಗೆ ವಿಸ್ತತ ಸ್ವತಂತ್ರ ಅವಲೋಕನ ಪ್ರಬಂಧಗಳನ್ನು ಬರೆದು ಸಂಪಾದನ ಮಾಡಿದ್ದಾರೆ.

ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮ ಮಾಡಿರುವ ಇವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ ಅರ್ಥಶಾಸ್ತ್ರ ಕ್ಷೇತ್ರದ ಒಂದು ಉನ್ನತ ಕೃತಿಯೆಂದು ಪರಿಗಣಿತವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಅರ್ಥಿಕ ಯೋಜನೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿರುವ ರಾಮಸ್ವಾಮಿಯವರ ‘ಶತಮಾನದ ತಿರುವಿನಲ್ಲಿ ಭಾರತ’ ಸಮಾಜವಿಜ್ಞಾನ ಕ್ಷೇತ್ರದ ಆ ವರ್ಷದ ಶ್ರೇಷ್ಠ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಬ್ರಿಟಿಷ್-ಪೂರ್ವ ಭಾರತದ ಉನ್ನತ ಸ್ಥಿತಿ ಕುರಿತ ಖ್ಯಾತ ಸಂಶೋಧಕ ಧರ್ಮಪಾಲ್ ಅವರ ಕೃತಿಗಳನ್ನು ಇವರು ಕನ್ನಡಕ್ಕೆ ಪರಿಚಯಿಸಿದ್ದಾರೆ. ಸ್ವದೇಶೀ ಚಿಂತನೆಯ ಪ್ರತಿಪಾದಕಗಳಾದ ಇವರ ಹಲವಾರು ಕೃತಿಗಳು ಪಥದರ್ಶಕವೆನಿಸಿವೆ.

ಅನೇಕ ಹಿರಿಯ ಸಾಹಿತಿಗಳ ಒಡನಾಟದಲ್ಲಿದ್ದ ರಾಮಸ್ವಾಮಿಯವರು, ಡಿ.ವಿ.ಗುಂಡಪ್ಪ, ಸೀತಾರಾಮಯ್ಯ, ರಾಕ್ಲಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರಿ, ತಿ. ತಾ. ಶರ್ಮ, ಪಿ. ಕೋದಂಡರಾವ್, ತೋಟಗಾರಿಕೆ ಋಷಿ ಎಂ. ಎಚ್. ಮರಿಗೌಡ ಮೊದಲಾದ ಧೀಮಂತರನ್ನು ಕುರಿತು ಬರೆದ ‘ದೀವಟಿಗೆಗಳು’, ‘ದೀಪ್ತಿಮಂತರು’ ಮತ್ತು ‘ದೀಪ್ತಶೃಂಗಗಳು’ – ಇವು ಅನುಪಮ ವ್ಯಕ್ತಿಚಿತ್ರಮಾಲಿಕೆಗಳಾಗಿವೆ. ಈಗಿನ ಜಗದ್‌ವ್ಯಾಪಿ ತುಮುಲಗಳ ಬೇರುಗಳಿರುವುದು ಎರಡು ಭಿನ್ನ ಜೀವನದೃಷ್ಟಿಗಳಲ್ಲಿ – ಎಂದು ಅವರ ‘ನಾಗರಿಕತೆಗಳ ಸಂಘರ್ಷ’ ಕೃತಿ ಪ್ರತಿಪಾದಿಸಿದೆ. ಅವರ ‘ಕೆಲವು ಇತಿಹಾಸ-ಪರ್ವಗಳು’ ಮತ್ತು ‘ಮರೆಯಬಾರದ ಇತಿಹಾಸಾಧ್ಯಾಯಗಳು’ ಮೈಲಿಗಲ್ಲುಗಳೆಂದು ಅಂಕಿತಗೊಂಡಿರುವ ಕೆಲವು ಇತಿಹಾಸ ಘಟನಾಸರಣಿಗಳ ಪರಾಮರ್ಶನೆಯಾಗಿವೆ. ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ರಾಜಾ ರಾಮಮೋಹನರಾಯ್ ಅವರಿಂದ ಜಯಪ್ರಕಾಶ ನಾರಾಯಣ್ ವರೆಗಿನ ಹತ್ತಾರು ಮಹನೀಯರ ಜೀವಿತಕಥನಗಳು `ನವೋತ್ಥಾನದ ಅಧ್ವರ್ಯುಗಳು’ ಮತ್ತು ‘ಹಲವರು ರಾಷ್ಟ್ರಾರಾಧಕರು’. ರಾಮಸ್ವಾಮಿಯವರ ‘ಕವಳಿಗೆ’ ಮತ್ತು ‘ಸಾಹಿತ್ಯ ಸಾನ್ನಿಹಿತ್ಯ ಉನ್ನತಮಟ್ಟದ ಸಾಹಿತ್ಯ ಪರಾಮರ್ಶಕ ಕೃತಿಗಳಾಗಿವೆ. ರಾಮಸ್ವಾಮಿಯವರು ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ 2000ಕ್ಕೂ ಹೆಚ್ಚು ಅಧ್ಯಯನಪೂರ್ಣ ಲೇಖನಗಳನ್ನು ಬರೆದಿದ್ದಾರೆ.

ಪತ್ರಿಕೋದ್ಯಮ ಸೇವೆಗಾಗಿ 2006ರಲ್ಲಿ ಇವರಿಗೆ ‘ಆರ್ಯಭಟ ಪ್ರಶಸ್ತಿ’ ದೊರೆತಿದೆ. ಸಾಹಿತ್ಯಸೇವೆಗಾಗಿ 2008ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಇವರಿಗೆ ದೊರೆತಿದೆ. 2011ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇವರ ಸುದೀರ್ಘ ಸಾಹಿತ್ಯಸೇವೆಗಾಗಿ ಗೌರವಾರ್ಥ ಡಾಕ್ಟರೇಟ್ ನೀಡಿದೆ. ದೀರ್ಘ ಪತ್ರಿಕೋದ್ಯಮ ಸೇವೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ‘ವರ್ಷದ ಶ್ರೇಷ್ಠ ವ್ಯಕ್ತಿ’ ಸಮ್ಮಾನ ದೊರೆತಿದೆ (2012). ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳ ಜೀವಮಾನ ಸಾಧನೆಗಾಗಿ 2015ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪದವಿಯನ್ನು ಇವರಿಗೆ ನೀಡಲಾಗಿದೆ. ಕರ್ನಾಟಕ ಸರಕಾರವು 2022-23ರ ‘ಪಂಪಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

2023ರ ಪ್ರಶಸ್ತಿ ಪುರಸ್ಕೃತರು : ಡಾ. ಬಿ. ಎಸ್. ಸ್ವಾಮಿ

ಬಿ. ಸಿದ್ಧಲಿಂಗ ಸ್ವಾಮಿಯವರು ಮೂಲತಃ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯವರು. ವಿ. ಬಸವಲಿಂಗಪ್ಪ – ಶಿವನಾಗಮ್ಮ ದಂಪತಿಯ ಸುಪುತ್ರರಾದ ಇವರು ಎಂ. ಎ., ಪಿಎಚ್. ಡಿ. ಪದವೀಧರರು. ಐದು ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಇಪ್ಪತ್ತು ವರ್ಷ ಕಾರ್ಯನಿರ್ವಹಿಸಿ ಅನಂತರ ಗುಲ್ಬರ್ಗ, ಬೆಂಗಳೂರು, ಮಂಗಳೂರು ಬಾನುಲಿಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಹದಿನಾಲ್ಕು ವರ್ಷ ದುಡಿದು ನಿವೃತ್ತರಾದರು.

ಬಾನುಲಿಯ ಸುದೀರ್ಘ ಸೇವೆಯಲ್ಲಿ ಇವರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಪ್ರತಿಭಾವಂತರನ್ನು ಹುಡುಕಿ ಅವರನ್ನು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿ ಜನಾನುರಾಗಿಯಾದರು.
1967ರಲ್ಲಿ ಇವರ ಮೊದಲ ಕವನಸಂಗ್ರಹ ‘ಅಮೃತ’ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಆರು ದಶಕ ಲೇಖನಿಯನ್ನು ಕೆಳಗಿಡದೆ ಒಂದೇ ಸಮನೆ ಬರೆಯುತ್ತ ಸುಮಾರು ನಾಲ್ಕುನೂರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ‘ಕಲಿ ಭಾರತ’, ‘ಅಲ್ಲಮಪ್ರಭು’, ‘ಅಕ್ಕಮಹಾದೇವಿ’, ‘ಬಸವಣ್ಣ’ ಮಹಾಕಾವ್ಯಗಳೂ, ‘ಬೆಂಕಿಯಲ್ಲಿ ಅರಳಿದ ಹೂವು’ ನಂತಹ ಆತ್ಮಕಥನವೂ ಸೇರಿದೆ.

ಇವರ ಸಾಹಿತ್ಯಸೃಷ್ಟಿಗೆ ಯಾವ ಸರಹದ್ದುಗಳೂ ಇಲ್ಲ. ಕಥೆ, ಕಾದಂಬರಿ, ಕವನ, ನಾಟಕ, ರೂಪಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಸಂಪಾದನೆ, ವೈಚಾಲಕ, ಹಾಸ್ಯ, ಜಾನಪದ, ಪ್ರವಾಸಕಥನ, ಜೀವನ ಚರಿತ್ರೆ, ವಚನಸಾಹಿತ್ಯ, ದಾಸಸಾಹಿತ್ಯ, ಮಕ್ಕಳ ಸಾಹಿತ್ಯ, ಬಿಡಿ ಬರೆಹಗಳು – ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದಾರೆ. ಅನೇಕ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳನ್ನು ಬರೆದ ಕೈಗಳಿಂದಲೇ ಜಾನಪದ ಸಾಹಿತ್ಯಚರಿತ್ರೆಯ ಹದಿನೈದು ಸಂಪುಟಗಳು, ಮಲೆ ಮಾದೇಶ್ವರ ಕಾವ್ಯ ಸಂಪಾದನೆ ಮಾಡಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕ್ಷೇತ್ರಕಾರ್ಯ, ಸಂಪಾದನೆ, ವಿಶ್ಲೇಷಣ, ಸಂಗ್ರಹ ಮಾಡಿದ್ದಾರೆ. ಶಿಷ್ಟಸಾಹಿತ್ಯದಲ್ಲಿ ಡಾ. ಸ್ವಾಮಿಯವರ ಕೊಡುಗೆ ಸಣ್ಣದಲ್ಲ. ಕಾಳಿದಾಸನ ಸಾಹಿತ್ಯದ ಕುರಿತು ಬರೆಯಬಲ್ಲ ಡಾ. ಸ್ವಾಮಿಯವರು ಸೂರದಾಸನ ಸಾಹಿತ್ಯದ ಬಗೆಗೂ ಬರೆಯಬಲ್ಲರು. ಹರಿದಾಸ ಪರಂಪರೆಯ ಕುರಿತು ಹಲವು ವರ್ಷ ಸಂಶೋಧನೆ ಮಾಡಿ ಒಂದು ಬೃಹತ್ ಗ್ರಂಥ ಪ್ರಕಟಿಸಿದ್ದಾರೆ. ಅದಕ್ಕಾಗಿ ಅವರು ಊರೂರು ಅಲೆದು ಹಲಕಥಾಕಾರರನ್ನು ಸಂದರ್ಶಿಸಿ, ವಾಚನಾಲಯಗಳಲ್ಲಿ ತಿಂಗಳುಗಟ್ಟಲೆ ಕುಳಿತು ಸಂಶೋಧನೆ ಮಾಡಿದ್ದಾರೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ಇವರ ಸಾಹಿತ್ಯಸೇವೆಯನ್ನು ಗಮನಿಸಿ ಕನ್ನಡಿಗರು ಅವರಿಗೆ ‘ಮಧುವೃತ’ ಎಂಬ ಗೌರವಗ್ರಂಥ ಅರ್ಪಿಸಿದ್ದಾರೆ.
ಇವರ ‘ಕವಿಚಕ್ರೇಶ್ವರ’ ಕಾದಂಬರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ(1974), ‘ಜಾನಪದ ಕಥಾಸಂಗಮ’ಕ್ಕೆ ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯ ಬಹುಮಾನ(1987), ‘ಮಹಾಜ್ಯೋತಿ ಮಾದೇಶ್ವರ’ ಕೃತಿಗೆ ಮುದ್ದಣ- ರತ್ನಾಕರವರ್ಣಿ ಪ್ರಶಸ್ತಿ, ‘ಜಾನಪದ ಸೌರಭ’, ಅಕ್ಕಮ್ಮ ಗಿರಿಗೌಡ ರುದ್ರಪ್ಪ ಪ್ರಶಸ್ತಿ (1996), ‘ತುಳುನಾಡ ಐಸಿರಿ’ಗೆ ಗೊರೂರು ಪ್ರತಿಷ್ಠಾನದ ಪ್ರಶಸ್ತಿ (1997), ಕದಂಬೋತ್ಸವದಲ್ಲಿ ಅಭಿನಂದನೆ(1998), ‘ಸಮಗ್ರ ನಾಟಕಗಳು’ಗೆ ಆರ್ಯಭಟ ಪ್ರಶಸ್ತಿ, ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ(2002), ‘ನಾಟಕ ರೂಪಕ’ ಕೃತಿಗೆ ಅತ್ತಿಮಬ್ಬೆ ಸಾಹಿತ್ಯಪ್ರತಿಷ್ಠಾನದ ಪ್ರಶಸ್ತಿ, ‘ಜಾನಪದಶ್ರೀ’ಗೆ ಕರ್ನಾಟಕ ಜಾನಪದ ಅಕಾಡೆಮಿ ಬಹುಮಾನ, ಇಂಥ ಅನೇಕ ಸಂಘಸಂಸ್ಥೆಗಳ ಬಹುಮಾನಗಳು, ಪ್ರಶಸ್ತಿಗಳು ಇವರಿಗೆ ಸಂದಿವೆ.

Continue Reading
Advertisement
Aishwarya Rai undergo surgery post her return from Cannes Film Festival
ಬಾಲಿವುಡ್23 mins ago

Aishwarya Rai:   ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಮುಗಿದ ಬಳಿಕ ಐಶ್ವರ್ಯಾ ರೈ ಕೈಗೆ ಶಸ್ತ್ರ ಚಿಕಿತ್ಸೆ

IPL 2024
ಐಪಿಎಲ್ 202424 mins ago

IPL 2024: ಸಿಎಸ್‌ಕೆ ತಂಡವನ್ನು ಸೋಲಿಸಿದ ಆರ್‌ಸಿಬಿ; ಪ್ಲೇ ಆಫ್‌ನಲ್ಲಿ ಯಾರು ಯಾರಿಗೆ ಎದುರಾಳಿ? ಇಲ್ಲಿದೆ ವೇಳಾಪಟ್ಟಿ

viral video
ವೈರಲ್ ನ್ಯೂಸ್34 mins ago

Viral Video: ಛೀ…ಈತನೆಂಥಾ ಕಾಮುಕ! ಸಾರ್ವಜನಿಕ ಸ್ಥಳದಲ್ಲಿ ಈ ಪಾಪಿ ಬಾಲಕಿಗೆ ಮಾಡಿದ್ದೇನು ಗೊತ್ತಾ?

Kalki 2898 AD Keerthy Suresh Lends Her Voice To Bujji Car
ಟಾಲಿವುಡ್39 mins ago

Kalki 2898 AD: ಪ್ರಭಾಸ್‌ ಜೀವನದಲ್ಲಿ ಎಂಟ್ರಿ ಆದ ವ್ಯಕ್ತಿ ಇವರೇನಾ? ಏನದು ʻಬುಜ್ಜಿʼ?

Vijay Sethupathi Starrer Tamil Movie Teaser Released
ಕಾಲಿವುಡ್1 hour ago

Vijay Sethupathi: ವಿಜಯ್ ಸೇತುಪತಿ- ರುಕ್ಮಿಣಿ ವಸಂತ್ ನಟನೆಯ ತಮಿಳು ಸಿನಿಮಾ ಟೀಸರ್‌ ಔಟ್‌!  

Arvind Kejriwal
ದೇಶ1 hour ago

Arvind Kejriwal: “ತಾಕತ್‌ ಇದ್ರೆ ಅರೆಸ್ಟ್‌ ಮಾಡಿ…”; ಪ್ರಧಾನಿ ಮೋದಿಗೆ ಕೇಜ್ರಿವಾಲ್‌ ಓಪನ್‌ ಚಾಲೆಂಜ್‌

Cyber Crime
ಕ್ರೈಂ2 hours ago

Cyber Crime: ಸೈಬರ್ ಕ್ರೈಂ ಜಾಲ ಪತ್ತೆ; ಬಲೆಗೆ ಬಿದ್ದ ಸಿಮ್ ಕಾರ್ಡ್ ಪೂರೈಸುತ್ತಿದ್ದ ವ್ಯಕ್ತಿ

ಸೈಬರ್‌ ಸೇಫ್ಟಿ cyber safety rules
ಅಂಕಣ2 hours ago

ಸೈಬರ್‌ ಸೇಫ್ಟಿ ಅಂಕಣ: ಸ್ಮಾರ್ಟ್‌ ಫೋನಿನ ಸ್ಮಾರ್ಟ್ ಬಳಕೆಗೆ 12 ಸೂತ್ರಗಳು

Swati Maliwal Case
ದೇಶ2 hours ago

Swati Maliwal case: ಸ್ವಾತಿ ಮಲಿವಾಲ್‌ ಹಲ್ಲೆ ಕೇಸ್‌; ಕೇಜ್ರಿವಾಲ್‌ ಆಪ್ತ 5ದಿನ ಪೊಲೀಸ್‌ ಕಸ್ಟಡಿಗೆ

IPL 2024
ಐಪಿಎಲ್ 20242 hours ago

IPL 2024: ರಾಯಲ್‌ ಆಗಿ ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು; ಮುಗಿಲು ಮುಟ್ಟಿದ ಸಂಭ್ರಮ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ5 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20245 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌