ಪ್ರವಾಸ
Temples of India: ಜೀವನದಲ್ಲೊಮ್ಮೆ ನೋಡಲೇಬೇಕಾದ ಭಾರತದ ಅತ್ಯಂತ ಸುಂದರ ಟಾಪ್ 10 ದೇವಾಲಯಗಳಿವು!
ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸುಂದರ ದೇವಾಲಯಗಳು ಭಾರತದಲ್ಲಿ (Temples of India) ಇವೆ. ಅಂಥ ಕಡೆ ಒಮ್ಮೆ ಹೋಗಿಬರಲು ಪ್ಲಾನ್ ಮಾಡಿಕೊಳ್ಳಿ.
ಭಾರತದಲ್ಲಿ ದೇವಸ್ಥಾನಗಳಿಗೆ ಕಡಿಮೆಯಿಲ್ಲ. ಒಂದೊಂದು ಊರಿನಲ್ಲೂ ಆಯಾ ಊರಿಗೆ ವಿಶೇಷವೆನಿಸುವ ದೇವಸ್ಥಾನವಿದ್ದೇ ಇರುತ್ತದೆ. ಆದರೆ ಭಾರತದಲ್ಲಿ ಕೆಲವು ದೇವಸ್ಥಾನಗಳಿಗೆ ಅದರದ್ದೇ ಆದ ವಿಶೇಷ ಮಹತ್ವವಿದೆ. ಭಕ್ತಾದಿಗಳು, ತಪ್ಪದೇ, ಜೀವನದಲ್ಲೊಮ್ಮೆಯಾದರೂ ನೋಡಬೇಕು (Travel Tips) ಎಂದು ಕನಸು ಕಾಣಬಲ್ಲ ಅದ್ಭುತ ದೇವಸ್ಥಾನಗಳಿವೆ. ಭಾರತದಲ್ಲಿರುವ ಅಂಥ ಅತ್ಯಂತ ಸುಂದರ ಜೊತೆಗೆ ಅಷ್ಟೇ ಪ್ರಸಿದ್ಧವಾದ ದೇಗುಲಗಳ (Temples of India) ಪಟ್ಟಿ ಇಲ್ಲಿದೆ.
1. ಬದರಿನಾಥ ದೇವಾಲಯ, ಉತ್ತರಾಖಂಡ: ಉತ್ತರಾಖಂಡದ ಬದರಿನಾಥ ದೇವಾಲಯ ಭಕ್ತಾದಿಗಳು ಜೀವನದಲ್ಲೊಮ್ಮೆ ಭೇಟಿ ಕೊಡಬೇಕು ಎಂದುಕೊಳ್ಳುವ ದೇವಸ್ಥಾನಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ದೇವಾಲಯ ಸುಂದರ ಎನ್ನುವುದ್ಕಿಂತಲೂ, ಹಿಮಾಲಯದ ತಪ್ಪಲಲ್ಲಿ ಅದ್ಭುತವಾಗಿ ಕಾಣುವ ದೇವಾಲಯ ನಿಜವಾದ ದಿವ್ಯಾನುಭೂತಿ ನೀಡುವಲ್ಲಿ ಶಕ್ತವಾಗುತ್ತದೆ. ಚಾರ್ಧಾಮ್ಗಳಲ್ಲಿ ಒಂದಾದ ಬದರಿನಾಥ ಭಾರತದ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದು.
2. ವಿಶ್ವನಾಥ ದೇವಾಲಯ, ಕಾಶಿ: ವಿಶ್ವದ ಅತ್ಯಂತ ಪುರಾತನ ಪಟ್ಟಣ ಎಂದೇ ಹೆಸರಾಗಿರುವ, ಸ್ವತಃ ಶಿವನೇ ನಿರ್ಮಿಸಿದ ಪಟ್ಟಣ ಎಂಬ ನಂಬಿಕೆಯ ಕಾಶಿಯ ವಿಶ್ವನಾಥ ದೇವಾಲಯ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದು. ಇತ್ತೀಚೆಗೆ ನಡೆದ ಪುನರುಜ್ಜೀವನ ಕಾರ್ಯಗಳಿಂದ ದೇವಾಲಯ ಸಮುಚ್ಛಯ ಇನ್ನಷ್ಟು ಸುಂದರವಾಗಿ ಕಾಣುತ್ತಿದೆ.
3. ಬೃಹದೀಶ್ವರ ದೇವಾಲಯ, ತಂಜಾವೂರು: ತಮಿಳುನಾಡಿನ ತಂಜಾವೂರಿನ ಬೃಹದೀಶ್ವರ ದೇವಲಾಯ ಕೇವಲ ತಮಿಳುನಾಡಷ್ಟೇ ಅಲ್ಲ, ಭಾರತದಲ್ಲಿಯೇ ಅತ್ಯಂತ ಸುಂದ ವಾಸ್ತುಶಿಲ್ಪ ಹೊಂದಿದ ಅಪೂರ್ವವಾದ ದೇವಾಲಯ. ಇದು ಐತಿಹಾಸಿಕವಾಗಿಯೂ ಅತ್ಯಂತ ಹಳೆಯ ದೇವಾಲಯಗಳಲ್ಲೊಂದು.
4. ದಿಲ್ವಾರಾ ದೇವಾಲಯಗಳು, ರಾಜಸ್ಥಾನ: ರಾಜಸ್ಥಾನದ ಮೌಂಟ್ ಅಬುವಿನಲ್ಲಿರುವ ದಿಲ್ವಾರಾ ಜೈನ ದೇವಾಲಯಗಳು ಅತ್ಯಂತ ಸುಂದರ ವಾಸ್ತುಶಿಲ್ಪ ಹೊಂದಿದ ಅಪರೂಪದ ದೇವಾಲಯಗಳಲ್ಲೊಂದು.
5. ಗೋಲ್ಡನ್ ಟೆಂಪಲ್, ಪಂಜಾಬ್: ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ವಿಶ್ವದಲ್ಲೇ ಪ್ರಸಿದ್ಧವಾದ ಸಿಖ್ಖರ ದೇವಾಲಯ. ಸಾವಿರಾರು ಮಂದಿ ನಿತ್ಯವೂ ಇಲ್ಲಿಗೆ ಬರುತ್ತಾರೆ. ನೋಡಲು ಅತ್ಯಂತ ಸುಂದರವಾಗಿ ಕಾಣುವ ಚಿನ್ನದ ದೇಗುಲವನ್ನು ರಾತ್ರಯಲ್ಲಿ ನೋಡುವುದು ಇನ್ನೂ ಸೊಗಸು.
6. ಜಗನ್ನಾಥ ದೇಗುಲ, ಪುರಿ: ಒಡಿಶಾದ ಪುರಿಯ ಜಗನ್ನಾಥ ದೇವಾಲಯವೂ ಅತ್ಯಂತ ಪ್ರಸಿದ್ಧವಾದ ಭಾರತದ ದೇಗುಲಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಲ್ಲಿನ ರಥಯಾತ್ರೆ ಜಗತ್ಪ್ರಸಿದ್ದ.
7. ಕೇದಾರನಾಥ ದೇವಾಲಯ, ಉತ್ತರಾಖಂಡ: ಹಿಮಾಲಯದ ಮಡಿಲಲ್ಲಿರುವ ಕೇದಾರನಾಥ ದೇವಾಲಯದ ದರ್ಶನಕ್ಕೆ ಭಕ್ತಾದಿಗಳು ಕಾಲ್ನಡಿಗೆಯಲ್ಲಿಯೇ ಸಾಗಬೇಕಾಗುತ್ತದೆ. ಕಷ್ಟಗಳನ್ನು ಸಹಿಸಿಕೊಂಡು ಕಡೆಗೆ ದೇವರ ದರ್ಶನ ನೀಡುವ ಈ ತಾಣ ಭಗವಂತನ ಚರಣ ಸ್ಪರ್ಶ ಮಾಡುವ ದಿವ್ಯಾನುಭೂತಿಯನ್ನೂ ನೀಡಬಲ್ಲುದು. ಅದ್ಭುತ ಪ್ರಾಕೃತಿಕ ಸೌದರ್ಯವಿರುವ ಈ ದೇವಾಲಯ ಕೇವಲ ಕೆಲವೇ ತಿಂಗಳುಗಳ ಕಾಲ ತೆರೆದಿರುತ್ತದೆ.
8. ಮೀನಾಕ್ಷಿ ದೇವಾಲಯ, ಮಧುರೈ: ದೇವಾಲಯಗಳ ತವರೂರು ತಮಿಳುನಾಡಿನ ಅತ್ಯಂತ ಸಂದರವಾದ ಮೀನಾಕ್ಷಿ ಅಮ್ಮನ ಈ ದೇಗುಲವೂ ಕೂಡಾ ಜಗತ್ಪ್ರಸಿದ್ಧ. ಅತ್ಯಂತ ವಿಶಾಲವಾದ ಈ ದೇಗುಲ ಕೇವಲ ಧಾರ್ಮಿಕವಾಗಿ ಅಷ್ಟೇ ಅಲ್ಲ, ವಾಸ್ತುಶಿಲ್ಪದಿಂದಲೂ ಅತ್ಯಂತ ಒಳ್ಳೆಯ ಅನುಭೂತಿ ನೀಡುವಂಥದ್ದು.
9. ಶೋರ್ ಟೆಂಪಲ್, ಮಹಾಬಲಿಪುರಂ: ತಮಿಳುನಾಡಿನ ಮಹಾಬಲಿಪುರಂನ ಶೋರ್ ಟೆಂಪಲ್ ಸಮುದ್ರ ತೀರದಲ್ಲಿರುವ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದು. ಸಮುದ್ರ ತೀರದಲ್ಲಿರುವುದರಿಂದಲೇ ವಿಶೇಷವಾಗಿ ಕಾಣುವ ಈ ದೇವಾಲಯ ತನ್ನ ವಾಸ್ತುಶಿಲ್ಪದಿಂದಲೂ ವಿಶೇಷವಾಗಿ ನಿಲ್ಲುತ್ತದೆ.
10. ಸೋಮನಾಥ ದೇವಾಲಯ, ಗುಜರಾತ್: ಗುಜರಾತಿನ ಸೋಮನಾಥ ದೇವಾಲಯ ತನ್ನದೇ ಆದ ವಿಶೇಷತೆಗಳಿಂದ ಗಮನ ಸೆಳೆಯುತ್ತದೆ. ತನ್ನ ರೋಚಕ ಐತಿಹಾಸಿಕ ಕಥೆಗಳಿಂದ ಸೋಮನಾಥ ಇಂದಿಗೂ ಭಕ್ತಾದಿಗಳನ್ನು ತನ್ನೆಡೆಗೆ ಕೈಬೀಸಿ ಕರೆಯುತ್ತಿದೆ.
ಇದನ್ನೂ ಓದಿ: Travel Tips: ಪ್ರವಾಸದ ಸಂದರ್ಭ ಸೌಂದರ್ಯ ರಕ್ಷಣೆಗೆ ಸುಲಭ ಸೂತ್ರಗಳು!
ಪ್ರಮುಖ ಸುದ್ದಿ
Monsoon Driving: ಮಳೆಗಾಲದಲ್ಲಿ ಖುಷಿಯಾಗಿ ಕಾರು ಪ್ರಯಾಣಕ್ಕೆ ಹೊರಡುವಾಗ ಈ ಟಿಪ್ಸ್ ಗಮನದಲ್ಲಿರಲಿ
ಮಳೆಗಾಲದ ಡ್ರೈವಿಂಗ್ ಆಕರ್ಷಕ; ಆದರೆ ಅಷ್ಟೇ ರಿಸ್ಕ್ ಹೊಂದಿರುವ ಸಂಗತಿ ಕೂಡ. ಹೀಗಾಗಿ ಮಳೆಯಲ್ಲಿ ಡ್ರೈವ್ ಮಾಡುತ್ತಾ ಹೊರಟುಬಿಡುವ ಮುನ್ನ ಕೆಳಗಿನ ಟಿಪ್ಸ್ (Monsoon Driving) ನೆನಪಿನಲ್ಲಿರಲಿ.
ಭಾರತದಲ್ಲಿ ಮಾನ್ಸೂನ್ ಬರಲಿ ಎಂದು ಲಕ್ಷಾಂತರ ಜನ ಎದುರು ನೋಡುತ್ತಾರೆ. ಕೃಷಿ ಚಟುವಟಿಕೆಗೆ ಮಾತ್ರವಲ್ಲ. ಮಳೆಯಲ್ಲಿ ಪ್ರವಾಸ ಹೋಗುವುದು ಕೂಡ ಒಂದು ಆನಂದದ ಅನುಭವ. ಮಳೆಯಲ್ಲಿ ಪ್ರಕೃತಿಯ ಇನ್ನೊಂದು ಮುಖ ತೆರೆದುಕೊಳ್ಳುತ್ತದೆ. ಅದರಲ್ಲೂ ಹಿಲ್ ಸ್ಟೇಶನ್ಗಳಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಡ್ರೈವ್ ಮಾಡಲು ಬಯಸುವವರಿಗೆ ಮಳೆಗಾಲ ಒಂದು ರೀತಿಯಲ್ಲಿ ರೊಮ್ಯಾಂಟಿಕ್. ಮಳೆಗಾಲದ ಡ್ರೈವಿಂಗ್ ಆಕರ್ಷಕ; ಆದರೆ ಅಷ್ಟೇ ರಿಸ್ಕ್ ಹೊಂದಿರುವ ಸಂಗತಿ ಕೂಡ. ರಸ್ತೆ ಜಾರುತ್ತದೆ; ಹೊಂಡಗಳು ನೀರು ತುಂಬಿ ಕಾಣುವುದಿಲ್ಲ. ಮಳೆ ಬರುವಾಗ ಕಾರಿನ ಗಾಜು ಮುಚ್ಚಿಹೋಗಿ ದಾರಿ ಸರಿಯಾಗಿ ಕಾಣದೆ ಹೋಗಬಹುದು. ಹೀಗಾಗಿ ಕಾರು ಚಾಲನೆ ರಿಸ್ಕೀ ಮತ್ತು ಥ್ರಿಲ್ಲಿಂಗ್. ಹೀಗಾಗಿ ಮಳೆಯಲ್ಲಿ ಡ್ರೈವ್ ಮಾಡುತ್ತಾ ಹೊರಟುಬಿಡುವ ಮುನ್ನ ಕೆಳಗಿನ ಟಿಪ್ಸ್ (Monsoon Driving) ನೆನಪಿನಲ್ಲಿರಲಿ.
ಹವಾಮಾನ ಮುನ್ಸೂಚನೆ ಗಮನಿಸಿ
ಭಾರತದಲ್ಲಿ ಮಾನ್ಸೂನ್ ಸಂಪೂರ್ಣವಾಗಿ ಅನಿರೀಕ್ಷಿತ. ಒಂದು ಗಂಟೆ ಬಿಸಿಲಿದ್ದರೆ ಮತ್ತೊಂದು ನಿಮಿಷದಲ್ಲಿ ಮಳೆ ಸುರಿಯಬಹುದು. ಹೀಗಾಗಿ ನೀವು ಭೇಟಿ ನೀಡಲು ಯೋಜಿಸಿರುವ ಸ್ಥಳದ ಹವಾಮಾನದ ಮುನ್ಸೂಚನೆಯನ್ನು ಗಮನಿಸಿ. ಹವಾಮಾನ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಿ. ನಿರಂತರವಾಗಿ ಅದನ್ನು ಗಮನಿಸುತ್ತಿರಿ. ಇತ್ತೀಚೆಗೆ ಬಹಳಷ್ಟು ಗಿರಿಧಾಮಗಳಲ್ಲಿ ಭೂಕುಸಿತಗಳು ಸಂಭವಿಸುತ್ತಿವೆ. ಅದನ್ನೂ ಗಮನದಲ್ಲಿಟ್ಟುಕೊಳ್ಳಿ.
ವಾಹನ ಕೂಲಂಕಷವಾಗಿ ಪರಿಶೀಲಿಸಿ
ಅಂಕುಡೊಂಕಾದ ಘಾಟಿಗಳು, ಕತ್ತಲಿನ ಸುರಂಗಗಳು, ಒದ್ದೆಯಾದ ಮತ್ತು ಕೆಸರು ತುಂಬಿದ ರಸ್ತೆಗಳು ಮಳೆಗಾಲದಲ್ಲಿ ನಿಮಗೆ ಎದುರಾಗುತ್ತವೆ. ಇಂಥ ಸಂದರ್ಭದಲ್ಲಿ ನಿಮ್ಮ ವಾಹನ ಪೂರ್ತಿ ಫಿಟ್ ಆಗಿರಬೇಕು. ಮಳೆಗಾಲದಲ್ಲಿ ಇಳಿಜಾರು ರಸ್ತಗಳಲ್ಲಿ ವಾಹನ ಓಡಿಸುವುದು ದುಃಸ್ವಪ್ನವೇ ಸರಿ. ನಿಮ್ಮ ಪ್ರಯಾಣ ಪ್ರಾರಂಭಿಸುವ ಮೊದಲು ಪೂರ್ತಿ ಸರ್ವಿಸ್ ಮಾಡಿಸಿ. ವಾಹನ ಟೈರ್ಗಳು, ವಿಂಡ್ಶೀಲ್ಡ್ ವೈಪರ್ಗಳು, ಹೆಡ್ಲೈಟ್ಗಳು, ಬ್ರೇಕ್ಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ. ಬಿಡಿ ಟೈರ್ ಒಯ್ಯಲು ಮರೆಯಬೇಡಿ.
ನಿಧಾನ ಮತ್ತು ಸ್ಥಿರವಾದ ಡ್ರೈವಿಂಗ್
ʼಸ್ಲೋ ಮತ್ತು ಸ್ಟೆಡಿʼ ಎಂಬುದು ಪ್ರಸಿದ್ಧವಾದ ಮಾತು. ನಿಧಾನವಾದ ಮತ್ತು ಸ್ಥಿರವಾದ ಓಟ ಗೆಲ್ಲುತ್ತದೆ. ಮಳೆಯ ಸಂದರ್ಭದಲ್ಲಿ ವಾಹನ ಚಾಲನೆಗೂ ಇದು ಅನ್ವಯ. ವಿಶೇಷವಾಗಿ ಘಾಟಿ ರಸ್ತೆಗಳ ಏರುವಿಕೆ ಮತ್ತು ಇಳಿಯುವಿಕೆ. ಮುಂದಿನ ವಾಹನದಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ. ವಿಶೇಷವಾಗಿ ಅಪಘಾತಗಳು ಸಂಭವಿಸುವ ಭೂಪ್ರದೇಶದ ಮೂಲಕ ಪ್ರಯಾಣಿಸುತ್ತಿದ್ದಾಗ.
ಪ್ರವಾಸದ ಪ್ಲಾನಿಂಗ್
ನಿಮ್ಮ ಸಂಪೂರ್ಣ ಪ್ರವಾಸವನ್ನು ಮುಂಚಿತವಾಗಿಯೇ ಮ್ಯಾಪ್ ಮುಂದಿಟ್ಟುಕೊಂಡು ಪ್ಲಾನ್ ಮಾಡಿಕೊಳ್ಳಿ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಬೇಕಾದ ಸಮಯ, ವಿರಾಮದ ಅವಧಿ, ಇವುಗಳನ್ನು ಲೆಕ್ಕ ಹಾಕಿ. ಪ್ಲಾನ್ ಮಾಡಿದ ಸಮಯಕ್ಕೆ ಸರಿಯಾಗಿ ಎಲ್ಲವೂ ನಡೆಯುವಂತೆ ನೋಡಿಕೊಳ್ಳಿ. ಮಳೆಗಾಲದಲ್ಲಿ ರಾತ್ರಿ ವೇಳೆ ವಾಹನ ಚಲಾಯಿಸುವುದನ್ನು ಆ ಮೂಲಕ ತಪ್ಪಿಸಿ.
ಆಫ್-ರೋಡಿಂಗ್ ತಪ್ಪಿಸಿ
ಡ್ರೈವಿಂಗ್ ಸಾಹಸಿಗಳಿಗೆ ಚಾಲನೆ ಮಾಡುವಾಗ ಉಂಟಾಗುವ ಅಡ್ರಿನಾಲಿನ್ ರಷ್ ತುಂಬಾ ಪ್ರಿಯ. ನಿಯಮಗಳನ್ನು ಉಲ್ಲಂಘಿಸುವುದು, ವೇಗವಾಗಿ ಚಲಾಯಿಸುವುದೇ ಇಂಥವರಿಗೆ ಪ್ರಿಯ. ಆದರೆ ಮಳೆಗಾಲದಲ್ಲಿ ಇದು ಅಪಾಯಕಾರಿ. ಯಾಕೆಂದರೆ ಭಾರತದ ರಸ್ತೆಗಳು ಮಳೆಗಾಲದಲ್ಲಿ ಕುಖ್ಯಾತ. ಅನಿವಾರ್ಯ ಅಲ್ಲದಿದ್ದರೆ ಆಫ್ ರೋಡ್ ಪ್ರಯಾಣ ತಪ್ಪಿಸಿ. ಯಾಕೆಂದರೆ ವಾಹನದ ಟೈರ್ಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಳ್ಳಬಹುದು.
ಟೈರ್ಗಳು ಸೂಕ್ತ ಸ್ಥಿತಿಯಲ್ಲಿರಲಿ
ತೇವವಿರುವ ರಸ್ತೆ ಮೇಲೆ ಓಡಿಸುವಾಗ ಟೈರ್ಗಳು ಸುಸ್ಥಿತಿಯಲ್ಲಿರಬೇಕು. ಇದರ ಟ್ರೆಡ್ಗಳು ನೀರನ್ನು ಚದುರಿಸುವ ಚಾನಲ್ಗಳಾಗಿ ಕಾರ್ಯನಿರ್ವಹಿಸುತ್ತವೆ. ನಿಖರವಾದ ಟ್ರೆಡ್ಗಳನ್ನು ಹೊಂದಿದ ಟೈರ್ಗಳು ಅಗತ್ಯ. ಫ್ಲ್ಯಾಟ್ ಆದ ಟೈರ್ಗಳು ನೀರಿನ ಮೇಲೆ ಚಲಾಯಿಸಿದಾಗ ಜಾರುತ್ತವೆ. ಚಕ್ರದ ಹೊರಮೈಯ ಟ್ರೆಡ್ಗಳ ಆಳವು ಕನಿಷ್ಠ 2 ಮಿಮೀ ಇರಬೇಕು. ಸವೆದ ಟೈರ್ಗಳು ಪಂಕ್ಚರ್ ಆಗಬಹುದು. ಕೆಲವು ಸಂದರ್ಭಗಳಲ್ಲಿ ಸಿಡಿಯಬಹುದು. ಹೀಗಾಗಿ ಚಕ್ರಗಳ ಆಳ ಸವೆಯುವ ಮುನ್ನ ಬದಲಾಯಿಸಿಕೊಳ್ಳಿ.
ಬ್ರೇಕ್ಗಳು ಸುಸ್ಥಿತಿಯಲ್ಲಿರಲಿ
ಎಲ್ಲಾ ಪರಿಸ್ಥಿತಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವ ಬ್ರೇಕ್ಗಳನ್ನು ಹೊಂದಿರುವುದು ಮುಖ್ಯ. ಮಳೆಗಾಲದಲ್ಲಿ ರಸ್ತೆ ಜಾರುವುದರಿಂದ, ಮುಂದಿನ ವಾಹನದಿಂದ ಸ್ವಲ್ಪ ಹೆಚ್ಚಿನ ಅಂತರವನ್ನೇ ಕಾಪಾಡಿಕೊಳ್ಳಬೇಕು. ಆದ್ದರಿಂದ ನಿಮ್ಮ ಬ್ರೇಕ್ಗಳು ಟಿಪ್ಟಾಪ್ ಆಗಿರಬೇಕು. ಭಾರೀ ಮಳೆಯ ಸಮಯದಲ್ಲಿ ಅಥವಾ ಕೆಸರು ರಸ್ತೆಯಲ್ಲಿ ಚಾಲನೆ ಮಾಡಿದ ನಂತರ ಬ್ರೇಕ್ಗಳನ್ನು ಲಘುವಾಗಿ ಟ್ಯಾಪ್ ಮಾಡುವ ಮೂಲಕ ಒಣಗಿಸಿಕೊಳ್ಳಿ. ಇತ್ತೀಚಿನ ಹೊಸ ಕಾರುಗಳು ಆರ್ದ್ರ ನೆಲದಲ್ಲಿ ಬ್ರೇಕಿಂಗ್ ಅನ್ನು ಹೆಚ್ಚು ಸುರಕ್ಷಿತಗೊಳಿಸಿವೆ.
ವೈಪರ್ಗಳು ಸ್ವಚ್ಛವಾಗಿರಲಿ
ಮಾನ್ಸೂನ್ನಲ್ಲಿ ಚಾಲನೆ ಮಾಡುವಾಗ ನಿಮ್ಮ ಎದುರಿನ ಗಾಜನ್ನು ಸ್ವಚ್ಛವಾಗಿಡುವ ವೈಪರ್ಗಳು ತುಂಬಾ ಅಗತ್ಯ. ಗೆರೆಗಳಿಲ್ಲದ ವಿಂಡ್ಶೀಲ್ಡ್ ಮುಂದಿರಬೇಕು. ಗೆರೆಗಳಿದ್ದರೆ ಅದು ದೃಷ್ಟಿಗೆ ಅಡ್ಡಿಯಾಗಬಹುದು. ವೈಪರ್ ಬ್ಲೇಡ್ಗಳು ಸ್ವಚ್ಛವಾಗಿ ಒರೆಸುತ್ತಿವೆ ಎಂದು ಖಚಿತಪಡಿಸಿಕೊಳ್ಳಿ. ಇತರ ಕಾರುಗಳ ಚಕ್ರಗಳಿಂದ ಸಿಡಿದ ಕೆಸರು ಇತ್ಯಾದಿ ಸ್ವಚ್ಛಗೊಳಿಸಲು ವೈಪರ್ ವಾಷರ್ ದ್ರವ ತುಂಬಿಸಿಕೊಳ್ಳಿ.
ಅಗತ್ಯವಿದ್ದಾಗ ಲೈಟ್ ಬಳಸಿ
ಮಳೆ ಸುರಿಯುತ್ತಿರುವಾಗ, ರಸ್ತೆ ಸರಿಯಾಗಿ ಕಾಣದಾಗ ಚಾಲನೆ ಮಾಡುವುದು ಅನಿವಾರ್ಯವಾದರೆ ನಿಮ್ಮ ಕಾರಿನ ಹೆಡ್ಲೈಟ್ ಆನ್ ಇಟ್ಟುಕೊಳ್ಳಿ. ಮಳೆಗಾಲದಲ್ಲಿ ಹೆಚ್ಚಾಗಿ ಪ್ರಯಾಣಿಸುವವರಾದರೆ ಫಾಗ್ ಲೈಟ್ ಹಾಕಿಸಿಕೊಳ್ಳಿ. ಎಮರ್ಜೆನ್ಸಿ ಲೈಟ್ ಅಥವಾ ಬ್ಲಿಂಕರ್ ಬಳಸುವುದನ್ನು ತಪ್ಪಿಸಿ- ಯಾಕೆಂದರೆ ಇವು ಇರುವುದು ಅಪಾಯಕಾರಿ ಸನ್ನಿವೇಶದಲ್ಲಿ ಬಳಸಲು ಮಾತ್ರ.
ಅಂತರ ಮತ್ತು ವೇಗ ನಿಯಂತ್ರಣದಲ್ಲಿಡಿ
ಒದ್ದೆಯಾದ ರಸ್ತೆಯ ಮೇಲ್ಮೈಗಳಲ್ಲಿ ಬ್ರೇಕಿಂಗ್ ಅಂತರ ಹೆಚ್ಚಿರುತ್ತದೆ. ಹೀಗಾಗಿ ಮುಂಭಾಗದಲ್ಲಿರುವ ವಾಹನದಿಂದ ನಿಮ್ಮ ಅಂತರವನ್ನು ಕಾಯ್ದುಕೊಳ್ಳುವುದು ಅಪಘಾತವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಮಳೆಯ ಸಮಯದಲ್ಲಿ ನಿಮ್ಮ ವೇಗವನ್ನು ನಿಯಂತ್ರಿಸಿ. ಇದು ನಿಮಗೆ ಬ್ರೇಕ್ ಹಾಕಲು ಸಾಕಷ್ಟು ಸ್ಥಳಾವಕಾಶವನ್ನು ನೀಡುತ್ತದೆ.
ಇದನ್ನೂ ಓದಿ: Monsoon Health Tips : ಮಳೆಗಾಲದಲ್ಲಿ ವೈರಲ್ ಸೋಂಕು ತಡೆಯುವುದು ಹೇಗೆ?
ಎಸ್ಕೇಪ್ ಸಲಕರಣೆ
ತುಂಬಾ ಕೆಟ್ಟ ಸನ್ನಿವೇಶ ಒದಗಿತು ಎಂದಿಟ್ಟುಕೊಳ್ಳಿ. ಉದಾಹರಣೆಗೆ ಕಾರಿನ ಡೋರ್ ಜಾಮ್ ಆಗಿದ್ದರೆ? ಹೊಸ ಕಾರುಗಳಲ್ಲಿ ಹಿಂಬದಿ ಚಿಮ್ಮುವ ಸೀಟುಗಳಿವೆ. ಆದರೆ ಹಳೆಯ ಕಾರುಗಳಲ್ಲಿ ಅವು ಇಲ್ಲ. ಇನ್ನೊಂದು ಆಯ್ಕೆ ಅಂದರೆ ಕಿಟಕಿ ಒಡೆಯುವುದು. ಕಾರಿನಲ್ಲೊಂದು ಸುತ್ತಿಗೆ ಇದ್ದರೆ ಚೆನ್ನ. ಅಥವಾ ಹೆಡ್ರೆಸ್ಟ್ನ ಲೋಹದ ಸ್ಲೈಡರ್ ಅಥವಾ ಪಾದಗಳನ್ನು ಇದಕ್ಕೆ ಬಳಸಿ. ಸೀಟ್ಬೆಲ್ಟ್ ಕಟ್ ಮಾಡಲು ಕತ್ತರಿ, ಟಾರ್ಚ್, ಅಗ್ನಿಶಾಮಕ ಕೂಡ ಇದ್ದರೆ ಒಳ್ಳೆಯದು.
ರಸ್ತೆಯಲ್ಲಿ ನಿಂತ ನೀರು
ರಸ್ತೆಯಲ್ಲಿ ನಿಂತ ನೀರು ಎಷ್ಟು ಆಳವಾಗಿದೆ ಎಂದು ತಿಳಿಯದೆ ಅದರ ಮೇಲೆ ಚಲಾಯಿಸುವುದು ಅಪಾಯಕಾರಿ. ಇತರ ಕಾರುಗಳು ಚಲಿಸುತ್ತಿರುವುದನ್ನು ಗಮನಿಸಿದರೆ ತಿಳಿಯಬಹುದು. ಇಂಥ ಕಡೆ ಮೊದಲ ಗೇರ್ನಲ್ಲಿ ಚಲಾಯಿಸಿ. ಎಕ್ಸಾಸ್ಟ್ಗೆ ನೀರು ಪ್ರವೇಶಿಸಿ ಎಂಜಿನ್ ಹಾಳಾಗುವುದನ್ನು ತಡೆಯಲು ಆರ್ಪಿಎಮ್ ಏರಿಸಿ. ನೀರು ಎಕ್ಸಾಸ್ಟ್ಗೆ ಹೋಗಿದೆ ಅನಿಸಿದರೆ ಕಾರನ್ನು ಸ್ಟಾರ್ಟ್ ಮಾಡಲು ಯತ್ನಿಸಬೇಡಿ. ನೀರಿನಿಂದ ಆಚೆ ಬಂದ ಬಳಿಕ ಬ್ರೇಕ್ಗಳನ್ನು ಮೆತ್ತಗೆ ತುಳಿದು ಡ್ರೈ ಮಾಡಿಕೊಳ್ಳಿ.
ಎಮರ್ಜೆನ್ಸಿ ಕಿಟ್ ಒಯ್ಯಿರಿ
ಮಾನ್ಸೂನ್ ಪ್ರಯಾಣದ ವೇಳೆ ಎಮರ್ಜೆನ್ಸಿ ಕಿಟ್ ನಿಮ್ಮ ಬಳಿ ಇರಲಿ. ನಿಮ್ಮ ದೇಹಾರೋಗ್ಯದ ಹಾಗೇ ವಾಹನದ ಆರೋಗ್ಯದ ಕಿಟ್ ಕೂಡ ಬಳಿಯಿರಲಿ. ಸ್ಪೇರ್ ಟೈರ್, ಜ್ಯಾಕ್ ಮುಂತಾದ ಟೈರ್ ಬದಲಿಸುವ ಸಲಕರಣೆಗಳು ಅಗತ್ಯವಾಗಿ ಇರಲಿ. ವಿಮೆ ಮುಂತಾದ ಅಗತ್ಯ ವಾಹನ ದಾಖಲಾತಿಗಳು ಜತೆಗಿರಲಿ.
ಇದನ್ನೂ ಓದಿ: Monsoon Season : ಏನು ನಿನ್ನ ಹನಿಗಳ ಲೀಲೆ… ಭಾರತದಲ್ಲಿ ಮುಂಗಾರು ಸೃಷ್ಟಿ ಹೇಗೆ? ಮಳೆ ವ್ಯಾಪಿಸುವುದು ಯಾವ ರೀತಿ?
ಪ್ರವಾಸ
Travel Tips: ಪಾರ್ಟಿಪ್ರಿಯರಷ್ಟೇ ಅಲ್ಲ, ಶಾಂತಿಪ್ರಿಯರೂ ಈ ಗೋವಾದ ಈ ಬೀಚ್ಗಳಿಗೆ ಹೋಗಬೇಕು!
ಬನ್ನಿ, ಗೋವಾದ ಹೆಚ್ಚು ಜನಪ್ರಿಯವಲ್ಲದ, ಪ್ರವಾಸಿಗಿಂದ ಗಿಜಿಗುಟ್ಟದ, ಸ್ವಚ್ಛ ಸುಂದರ ನೆಮ್ಮದಿಯ ಬೀಚ್ಗಳನ್ನೊಮ್ಮೆ ಸುತ್ತು ಹಾಕಿಕೊಂಡು ಬರೋಣ.
ಸಮುದ್ರ ತೀರಕ್ಕೂ ಮಾನವನಿಗೂ ಅವಿನಾಭಾವ ಸಂಬಂಧ. ಎಷ್ಟೇ ಜಂಜಡಗಳಿದ್ದರೂ, ಕೆಲಸದ ಒತ್ತಡವಿದ್ದರೂ, ಸಮುದ್ರ ತೀರದಲ್ಲೊಮ್ಮೆ ಮರಳಿನ ಮೇಲೆ ಸುಮ್ಮನೆ ತೀರಕ್ಕಪ್ಪಳಿಸುವ ಅಲೆಗಳನ್ನು ನೋಡುತ್ತಾ ಒಂದು ಗಂಟೆ ಕಳೆದರೂ ಸಾಕು ಮನಸ್ಸಿಗೆ ಎಷ್ಟೋ ಸಮಾಧಾನ ಸಿಗುತ್ತದೆ. ಒತ್ತಡ ದುಗುಡಗಳೆಲ್ಲ ಮಾಯವಾಗಿ ನೆಮ್ಮದಿ ಮೂಡಿದಂತಾಗುತ್ತದೆ. ಸಮುದ್ರ ತೀರಕ್ಕೆ ಕಾಲಿಟ್ಟರೆ ಸಾಕು ಮನಸ್ಸು ಮಗುವಾಗುತ್ತದೆ. ತೀರದಲ್ಲಿ ಮಗುವಿನಂತೆ ಮಣ್ಣಾಟ, ನೀರಾಟವಾಡುವುದರಲ್ಲಿ ಎಲ್ಲ ಮರೆಯಬೇಕನಿಸುತ್ತದೆ. ಅದಕ್ಕೇ, ಪ್ರವಾಸ (Travel Tips) ಎಂದಾಗ ಒಂದೋ ಬೆಟ್ಟದೂರಿನ ಕಡೆ ಮನಸ್ಸು ಸೆಳೆದರೆ, ಇನ್ನೊಂದೆಡೆ, ಸಮುದ್ರ ತೀರದೆಡೆಗೆ ಹೋಗಿ ಬರಲು ಮನಸ್ಸು ಕಾತರಿಸುತ್ತದೆ.
ಭಾರತದಲ್ಲಿ ಸಮುದ್ರ ತೀರ ಎಂದರೆ ಸಾಕು, ಪ್ರವಾಸಿಗರಿಗೆ ನೆನಪಾಗುವುದು ಗೋವಾ (goa beach). ಸದಾ ಗಿಜಿಗುಟ್ಟುವ, ವಿದೇಶೀಯರಿಂದ ತುಂಬಿ ತುಳುಕುವ ಗೋವಾ ಎಂದರೆ ಪ್ರತಿ ಪ್ರವಾಸಿಗನಿಗೆ ಅದೇನೋ ಸೂಜಿಗಲ್ಲಿನ ಸೆಳೆತ. ಆದರೆ, ಮಜಾ ಬಿಟ್ಟು ಶಾಂತಿಯನ್ನರಸಿ ಹೋಗಲು ಗೋವಾ ತಕ್ಕ ಜಾಗವಲ್ಲ ಎಂಬ ಭಾವನೆ ಅನೇಕರಿಗಿದೆ. ಆದರೆ, ವಿಶೇಷವೆಂದರೆ, ಗೋವಾದಲ್ಲಿ ಎರಡೂ ಮಾದರಿಯ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸಮುದ್ರ ತೀರಗಳಿವೆ. ಗಿಜಿಗುಟ್ಟುವ, ಕ್ಯಾಸಿನೋಗಳಿರುವ, ಸುಖಾಸುಮ್ಮನೆ ಕಾಲುಜಾಚಿ ಬಿಸಿಲು ಕಾಯಿಸಿಕೊಂಡು, ಮಸಾಜ್ ಮಾಡಿಸಿಕೊಂಡು, ಮದಿರೆಯನ್ನು ಗುಟುಕು ಗುಟುಕಾಗಿ ಮಂದಬೆಳಕಿನಲ್ಲಿ ಹೀರುವ ತಾಣಗಳೂ ಇವೆ. ಅಷ್ಟೇ ಅಲ್ಲ, ಯಾರ ತಂಟೆ ತಕರಾರೂ ಇಲ್ಲದೆ, ಖಾಲಿ ಬೀಚಿನಲ್ಲಿ ಕಾಲು ಚಾಚಿ ಕೂತು ಶಾಂತಿ, ನೆಮ್ಮದಿಯಿಂದ ಒಂದೆರಡು ದಿನ ಇದ್ದು ಬರಬೇಕು ಅಂದುಕೊಂಡಿದ್ದರೆ ಅಂಥ ತಾಣಗಳೂ ಇವೆ. ಹಾಗಾದರೆ ಬನ್ನಿ, ಗೋವಾದ ಹೆಚ್ಚು ಜನಪ್ರಿಯವಲ್ಲದ, ಪ್ರವಾಸಿಗಿಂದ ಗಿಜಿಗುಟ್ಟದ, ಸ್ವಚ್ಛ ಸುಂದರ ನೆಮ್ಮದಿಯ ಬೀಚ್ಗಳನ್ನೊಮ್ಮೆ ಸುತ್ತು ಹಾಕಿಕೊಂಡು ಬರೋಣ.
1. ಬಟರ್ಫ್ಲೈ ಬೀಚ್: ದಕ್ಷಿಣ ಗೋವಾದ ಯಾರಿಗೂ ಹೆಚ್ಚಿ ತಿಳಿಯದ ಚೆಂದನೆಯ ಬೀಚ್ ಇದು. ಬೋಟ್ ಮೂಲಕ ಹೋಗಿ ಬರಬಹುದಾದ, ಸ್ವಲ್ಪ ನಡೆಯುವ ಹಾದಿಯಿರುವ ಪ್ರವಾಸಿಗರು ಅಷ್ಟಾಗಿ ಹೋಗದ ಶಾಂತವಾದ ಅಷ್ಟೇ ಸುಂದರ ಬೀಚ್ ಇದು.
2. ಕೋಲಾ ಬೀಚ್: ದಕ್ಷಿಣ ಗೋವಾದ ಕೋಲಾ ಬೀಚ್ ಅತ್ಯದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ಗೋವಾದ ಎಲೆಮರೆಯ ಕಾಯಿಯಂತಿರುವ ಬೀಚ್. ಇದು ತನ್ನ ತೀರದುದ್ದಕ್ಕೂ ಹೊದಿರುವ ತೆಂಗಿನ ಮರಗಳ ಸೌಂದರ್ಯದಿಂದ ನೀಲಿ ಹಸಿರು ಬಣ್ಣದಿಂದ ಕಂಗೊಳಿಸುವ ಬೀಚ್.
3. ಗಾಲ್ಗಿಬಾಗಾ ಬೀಚ್: ಇದೂ ಕೂಡಾ ಪ್ರಕೃತಿಯ ರಮ್ಯಾದ್ಭುತವನ್ನು ತನ್ನಲ್ಲಿ ಹುದುಗಿಸಿಟ್ಟಿರುವ ಬೀಚ್. ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ ಎಂಬ ಕಡಲಾಮೆ ಈ ಬೀಚ್ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
4. ಮೋರ್ಜಿಮ್ ಬೀಚ್: ಉತ್ತರ ಗೋವಾದಲ್ಲಿ ಶಾಂತವಾದ ಬೀಚ್ ಬೇಕು ಎಂದು ಹುಡುಕುವ ಮಂದಿಗೆ ಮೋರ್ಜಿಮ್ ಬೀಚ್ ಹೇಳಿ ಮಾಡಿಸಿದ ಜಾಗ. ಪಕ್ಷಿ ವೀಕ್ಷಣೆಯಲ್ಲಿ ಆಸಕ್ತಿ ಇರುವ ಮಂದಿಗೂ ಇದು ತಕ್ಕ ಜಾಘ.
5. ಕಾಕೋಲೆಮ್ ಬೀಚ್: ದಕ್ಷಿಣ ಗೋವಾದಲ್ಲಿ ಅಷ್ಟಾಗಿ ಪ್ರಸಿದ್ಧವಲ್ಲದ ಆದರೆ ಬಹಳ ಸುಂದರವಾಗಿರುವ ಬೀಚ್ಗಳಲ್ಲಿ ಇದೂ ಒಂದು. ಈಜು ಹಾಗೂ ಸರ್ಫಿಂಗ್ ಶಾಂತವಾಗಿ ಮಾಡಬಯಸುವ ಮಂದಿಗೆ ಇದು ಹೇಳಿ ಮಾಡಿಸಿದ ಜಾಗ.
6. ಅಗೋಂಡಾ ಬೀಚ್: ರಿಲ್ಯಾಕ್ಸ್ ಆಗಿ ಶಾಂತವಾದ ಸಮುದ್ರ ತೀರದಲ್ಲಿ ಹೊಟೇಲುಗಳಲ್ಲಿ ಉಳಿದುಕೊಂಡು ತನ್ನ ಪಾಡಿಗೆ ತಾನಿರುತ್ತಾ ಸುಮ್ಮನೆ ಕಡಲು ನೋಡುತ್ತಾ ಇರಬೇಕು ಅನ್ನುವ ಮಂದಿಗೆ ಈ ಬೀಚ್ ಬೆಸ್ಟ್. ಕಯಾಕಿಂಗ್, ಪ್ಯಾಡಲ್ ಬೋರ್ಡಿಂಗ್ ಕೂಡಾ ಇಲ್ಲಿ ಲಭ್ಯ. ಸಮುದ್ರ ತೀರದಲ್ಲಿ ಕಿಲೋಮೀಟರುಗಟ್ಟಲೆ ಸುಮ್ಮನೆ ಬೆಳಗ್ಗೆದ್ದು ನಡೆಯಬೇಕು ಎನ್ನುವವರಿಗೂ ಇದು ಬೆಸ್ಟ್ ಜಾಗ.
ಹಾಗಾದರೆ, ಗೋವಾ ಎಂದರೆ ಗಿಜಿಗಿಜಿ ಎಂದು ದೂರ ಉಳಿದ ಶಾಂತಿಪ್ರಿಯ ಪ್ರವಾಸಿಗರು ಈ ಜಾಗಗಳನ್ನು ನೋಡಲಾದರೂ ಗೋವಾಕ್ಕೆ ಹೋಗಬೇಕು.
ಇದನ್ನೂ ಓದಿ: Travel Tips: ರಾತ್ರಿಗಳಲ್ಲಿ ಹೊಳೆವ ಅಲೆಗಳ ಬೀಚ್ಗಳಿಗೆ ಪ್ರವಾಸ ಮಾಡಿ!
ಪ್ರವಾಸ
Viral Post: ಹವ್ಯಾಸವೇ ವೃತ್ತಿ: ಕೆಲಸಕ್ಕೆ ಗುಡ್ಬೈ ಹೇಳಿ ತಿರುಗಾಟವೇ ಕೆಲಸ!
ಲಿಂಕ್ಡ್ ಇನ್ನಲ್ಲಿ ಮಾಡುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ ಈಗ ಪ್ರಪಂಚ ಸುತ್ತುವುದನ್ನೇ ನನ್ನ ಕೆಲಸವನ್ನಾಗಿ ಮಾಡಿ ಒಂದು ವರ್ಷವಾಯಿತು ಎಂದು ಯುವತಿಯೊಬ್ಬಳು ಬರೆದುಕೊಂಡಿರುವ ಪೋಸ್ಟ್ ಈಗ ಸಾಕಷ್ಟು ವೈರಲ್ (Viral post) ಆಗಿದ್ದು ಅಷ್ಟೇ ಚರ್ಚೆಯನ್ನೂ ಹುಟ್ಟು ಹಾಕಿದೆ.
ವೃತ್ತಿ ಹಾಗೂ ಹವ್ಯಾಸ ಇವೆರಡರನ್ನು ಮುಂದಿಟ್ಟು ಒಂದನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದರೆ ಬಹುತೇಕರು, ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುವುದು ಸಹಜ. ಕಾರಣ ಇಷ್ಟೇ, ವೃತ್ತಿ ನೀಡುವ ಆರ್ಥಿಕ ಭದ್ರತೆಯನ್ನು ಹವ್ಯಾಸ ನೀಡಲಾರದು. ಹವ್ಯಾಸದ ಹಿಂದೆ ಬಿದ್ದು, ವೃತ್ತಿಯನ್ನು ನಿರ್ಲಕ್ಷ್ಯ ಮಾಡಿದರೆ ಖಂಡಿತಾ ಊಟಕ್ಕೆ ಗತಿಯಿಲ್ಲದಂತಾಗುತ್ತದೆ ಎಂಬುದು ಹಲವರ ಅಭಿಪ್ರಾಯ. ಅದಕ್ಕಾಗಿಯೇ. ಅನೇಕರು, ಮನಸ್ಸಿದ್ದರೂ, ಇಲ್ಲದಿದ್ದರೂ ವೃತ್ತಿಗೆ ಆತುಕೊಂಡೇ ಇರುತ್ತಾರೆ. ಇನ್ನೂ ಕೆಲವರು ಹವ್ಯಾಸವನ್ನೇ ವೃತ್ತಿಯನ್ನಾಗಿ ಬದಲಾಯಿಸಿಕೊಂಡು ಯಶಸ್ಸು ಸಾಧಿಸುವವರೂ ಇದ್ದಾರೆ. ಆದರೆ, ಅದಕ್ಕೆ ಸಾಕಷ್ಟು ಶ್ರಮ, ತಾಳ್ಮೆ ಹಾಗೂ ಕಠಿಣ ಪರಿಶ್ರಮದ ಅಗತ್ಯ ಇದ್ದೇ ಇರುತ್ತದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಚರ್ಚೆಯನ್ನು ಹುಟ್ಟು ಹಾಕುತ್ತಲೇ ಇರುತ್ತದೆ.
ಇತ್ತೀಚೆಗೆ ಯುವ ಮನಸ್ಸುಗಳು, ಹವ್ಯಾಸಗಳನ್ನೂ ಬದುಕಿನ ಆದ್ಯತೆಗಳಲ್ಲಿ ಒಂದಾಗಿ ಪರಿಗಣಿಸಿ ಬದುಕನ್ನು ಇಷ್ಟ ಬಂದ ಹಾಗೆ ಜೀವಿಸಬೇಕು ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸುವುದುಂಟು. ಪ್ರವಾಸ ಮಾಡುತ್ತಾ ಬದುಕು ಕಳೆಯಬೇಕು ಎಂದು ಬಯಸುವ ಯುವಜನರು ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ. ತಿರುಗಾಡುವುದೇ ಜೀವನ. ತಿರುಗಾಟಕ್ಕೆ ಬೇಕಾದ ಹಣವನ್ನು ತಿರುಗಾಡುತ್ತಲೇ ಕೆಲಸ ಮಾಡಿ ಸಂಪಾದಿಸುತ್ತೇವೆ ಎಂದು ಹೊರಟ ಅನೇಕರ ಉದಾಹರಣೆಗಳು ಇಂದು ಸಿಗುತ್ತಿವೆ. ಇದೂ ಕೂಡಾ ಅಂಥದ್ದೇ ಒಂದು ಉದಾಹರಣೆ. ಸಾಮಾಜಿಕ ಜಾಲತಾಣದಲ್ಲಿ ದೆಹಲಿ ಮೂಲದ ಯುವತಿ ಆಕಾಂಕ್ಷಾ ಮೋಂಗಾ ಎಂಬಾಕೆ 2022ರಲ್ಲಿ ತಾನು ಲಿಂಕ್ಡ್ ಇನ್ನಲ್ಲಿ ಮಾಡುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ ಈಗ ಪ್ರಪಂಚ ಸುತ್ತುವುದನ್ನೇ ನನ್ನ ಕೆಲಸವನ್ನಾಗಿ ಮಾಡಿ ಒಂದು ವರ್ಷವಾಯಿತು ಎಂದು ಬರೆದುಕೊಂಡಿರುವ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗಿದ್ದು ಅಷ್ಟೇ ಚರ್ಚೆಯನ್ನೂ ಹುಟ್ಟು ಹಾಕಿದೆ.
ಕಳೆವ ವರ್ಷ ಇದೇ ಸಮಯಕ್ಕೆ ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಪ್ರಪಂಚ ಸುತ್ತಲು ಹೊರಟೆ. ನಾನು ನನ್ನ ಈ ಕನಸನ್ನು ನನಸಾಗಿಸಲು ಬಹಳ ಕಷ್ಟ ಪಟ್ಟೆ. ಒಬ್ಬಳೇ ಕೆಲಸ ಮಾಡಿದೆ. ಸುಮಾರು ಎರಡೂವರೆ ಲಕ್ಷ ಫಾಲೋವರ್ಗಳನ್ನು ಇನ್ಸ್ಟಾದಲ್ಲಿ ಪಡೆದೆ. ಹೇಗೆ ಇವನ್ನೆಲ್ಲಾ ಮಾಡಿದೆ ಎಂದು ತಿಳೆಯಬೇಕೇ?ʼ ಎಂದು ಆಕೆ ತನ್ನ ಫಾಲೋವರ್ಸ್ಗೆ ಪ್ರಶ್ನೆ ಎಸೆದಿದ್ದರು. ಈಕೆ ಕೆಲಸಕ್ಕೆ ರಾಜೀನಾಮೆ ಕೊಡುವ ಮೊದಲು ಆರು ತಿಂಗಳ ಕಾಲ ಲಿಂಕ್ಡ್ ಇನ್ನಲ್ಲಿ ಕಾರ್ಯ ನಿರ್ವಹಿಸಿದ್ದರು.
ಮೊಂಗಾ ಒಂದು ವರ್ಷದಲ್ಲಿ ತನ್ನ ಕನಸನ್ನು ನನಸಾಗಿಸಲು ಸುಮಾರು 12 ದೇಶಗಳಲ್ಲಿ ಸುತ್ತಾಡಿದ್ದು, ಅವುಗಳ ಪೈಕಿ ಎಂಟು ದೇಶಗಳಲ್ಲಿ ಸೋಲೋ ಪ್ರವಾಸ ಮಾಡಿದ್ದಾರೆ. ಟ್ರಾವೆಲ್ ಅ ಮೋರ್ ಎಂಬ ವೆಬ್ಸೈಟ್ ಒಂದನ್ನೂ ಈಕೆ ನಡೆಸುತ್ತಿದ್ದು ಈಕೆಯ ಜೊತೆಗೆ ಆರು ಜನರು ಕೆಲಸ ಮಾಡುತ್ತಿದ್ದಾರೆ. 30ಕ್ಕೂ ಹೆಚ್ಚು ಬ್ರ್ಯಾಂಡ್ಗಳ ಜೊತೆಗೆ ಕೆಲಸ ಮಾಡಿರುವುದಲ್ಲದೆ, 300ಕ್ಕೂ ಹೆಚ್ಚು ವಿಡಿಯೋಗಳನ್ನು ಈಕೆ ಮಾಡಿದ್ದು ಇವೆಲ್ಲವನ್ನೂ ತನ್ನ ಪ್ರವಾಸ ಮಾಡುತ್ತಲೇ ಮಾಡಿದ್ದಾಳೆ. ರಾತ್ರಿ ಹಗಲೆನ್ನದೆ, ತಿಂಗಳುಗಟ್ಟಲೆ ಇದಕ್ಕಾಗಿ ಕೆಲಸ ಮಾಡಿದ್ದು ಸಾಕಷ್ಟು ಶ್ರಮ ಹಾಕಿದ್ದೇನೆ ಎಂದೂ ಆಕೆ ವಿವರಿಸಿದ್ದಾರೆ.
ಇದನ್ನೂ ಓದಿ: Viral Video: ಹಾರುವ ಸೋಫಾದ ವಿಡಿಯೊ ನೋಡಿ ಅಲ್ಲಾವುದ್ದೀನ್ ಮ್ಯಾಜಿಕ್ ಕಾರ್ಪೆಟ್ ನೆನಪಿಸಿಕೊಂಡ ಜನರು
ಈಕೆಯ ಈ ಪೋಸ್ಟ್ಗೆ ಹಲವಾರು ಪ್ರತಿಕ್ರಿಯೆಗಳು ಬಂದಿದ್ದು. ಬಹುತೇಕರು, ಹವ್ಯಾಸವನ್ನೇ ವೃತ್ತಿಯನ್ನಾಗಿ ಮಾಡಿದ ನಿಮಗೆ ಅಭಿನಂದನೆಗಳು, ಖುಷಿಯಾಗಿರಿ ಎಂದಿದ್ದಾರೆ. ಇನ್ನೂ ಕೆಲವರು, ಇವು ನಮಗೆ ಸ್ಪೂರ್ತಿ ಎಂದಿದ್ದಾರೆ. ಹವ್ಯಾಸವನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿ ದೇಶ ಸುತ್ತುವುದು ಅನೇಕರ ಕನಸು. ಆದರೆ, ಅದನ್ನು ನನಸಾಗಿ ಮಾಡುವ ಕೆಲವೇ ಮಂದಿಯಲ್ಲಿ ನೀವೂ ಒಬ್ಬರು. ಶುಭವಾಗಲಿ ಎಂದಿದ್ದಾರೆ.
ಆದರೆ, ವಿಶೇಷವೆಂದರೆ, ಇಂತಹ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗಳ ಮಧ್ಯದಲ್ಲಿ ಕೆಲವರು ಚರ್ಚೆಯನ್ನೂ ಹುಟ್ಟು ಹಾಕಿದ್ದಾರೆ. ʻಮನೆಯಲ್ಲಿ ಅಪ್ಪ ಅಮ್ಮ ಮಾಡಿದ ಆಸ್ತಿ ಬೆನ್ನಿಗಿದ್ದರೆ ಹೀಗೆ ಹೇಳುವುದು ಸುಲಭ. ಹವ್ಯಾಸದ ಹೆಸರಿನಲ್ಲಿ ಮಹಾನ್ ಸಾಧನೆಗೈದವರಂತೆ ಹೇಳುತ್ತಿರುವ ನೀವು ಕಷ್ಟಪಟ್ಟು ದುಡಿಯುತ್ತಿರುವ ನಮ್ಮಂಥ ಸಾಮಾನ್ಯ ಜನರದ್ದೇನೂ ಸಾಧನೆಯೇ ಅಲ್ಲ ಎಂಬ ಭಾವನೆ ಬರುವಂತೆ ಮಾಡುತ್ತಿದ್ದೀರಿʼ ಎಂದಿದ್ದಾರೆ. ಈಕೆ ಒಮ್ಮೆ ತನ್ನ ಹಿರಿಯರು ಮಾಡಿಟ್ಟ ಆಸ್ತಿಯನ್ನು ತ್ಯಜಿಸಿ ಇದೇ ಮಾತು ಹೇಳಲಿ ನೋಡೋಣ ಎಂದೂ ಸವಾಲು ಹಾಕಿದ್ದಾರೆ!
ಇದನ್ನೂ ಓದಿ: Viral News : ಗೂಗಲ್ ಸಿಇಒ ಸುಂದರ್ ಪಿಚ್ಚೈ ಹುಟ್ಟಿ, ಬೆಳೆದ ಮನೆ ಈಗ ತಮಿಳು ನಟನ ಸ್ವತ್ತು
ಪ್ರವಾಸ
Travel Tips: ಪ್ರವಾಸದ ಸಂದರ್ಭ ಸೌಂದರ್ಯ ರಕ್ಷಣೆಗೆ ಸುಲಭ ಸೂತ್ರಗಳು!
ಸ್ವಲ್ಪ ಮುತುವರ್ಜಿ, ಕಾಳಜಿ ವಹಿಸಿದರೆ ಪ್ರವಾಸದ ಸಮಯದಲ್ಲಿ ಚರ್ಮ ಹಾಗೂ ಕೂದಲ ಮೇಲಾಗುವ ಹಾನಿಯನ್ನು ಬಹುತೇಕ ತಗ್ಗಿಸಬಹುದು. ಹಾಗಾದರೆ, ಪ್ರವಾಸದ ಸಮಯದಲ್ಲಿ ನಮ್ಮ ಚರ್ಮ ರಕ್ಷಣೆ ಹೇಗೆ ಎಂದು ನೋಡೋಣ ಬನ್ನಿ.
ಬಹಳಷ್ಟು ಜನರ ಪ್ರವಾಸಪ್ರಿಯರ ದೂರು ಎಂದರೆ ಎಲ್ಲಿಗೇ ಪ್ರವಾಸ ಮಾಡಿ ಬಂದರೆ ಸಾಕು, ಕೂದಲು ಹಾಗೂ ಚರ್ಮ ಹಾಳಾಗಿ ಹೋಯಿತು ಎಂದು ಅಲವತ್ತುಕೊಳ್ಳುತ್ತಾರೆ. ಪ್ರವಾಸ ಮಾಡುವುದೇನೋ ಸರಿ, ಆದರೆ ಬಂದ ಮೇಲೆ ನಮ್ಮ ಮುಖವನ್ನು ನಾವೇ ಕನ್ನಡಿಯಲ್ಲಿ ನೋಡಲಾಗುವುದಿಲ್ಲ, ಅಷ್ಟು ಟ್ಯಾನ್ ಆಗಿಬಿಟ್ಟಿರುತ್ತದೆ ಎಂಬುದು ಹಲವರ ದೂರಾದರೆ, ಬಿಸಿಲಿಗೆ, ನೀರಿನ ಬದಲಾವಣೆಯಿಂದ ಕೂದಲು ಯದ್ವಾತದ್ವಾ ಉದುರುತ್ತಿವೆ, ಹೀಗೆ ಆದರೆ, ಒಂದು ದಿನ ನಮ್ಮ ತಲೆ ಬೊಕ್ಕತಲೆಯಾಗಿಬಿಡುತ್ತದೆ ಎಂದು ಗಾಬರಿಯಾಗುವ ಮಂದಿಯೂ ಇದ್ದಾರೆ. ವಿಷಯ ಏನೇ ಇದ್ದರೂ, ಪ್ರವಾಸ ಮಾಡಿ ಬಂದರೆ, ಎಲ್ಲಾದರೂ ಚಾರಣ ಮಾಡಿ ಬಂದರೆ, ಚರ್ಮ, ಕೂದಲು ಹದಗೆಟ್ಟು ಹೋಗುವುದು ನಿಜ. ಬೇರೆಯ ತಾಪಮಾನ, ಹವಾಮಾನ, ಎತ್ತರದ ಪ್ರದೇಶದಲ್ಲಿ ಹೆಚ್ಚು ಸೂರ್ಯ ರಶ್ಮಿ ಚರ್ಮ ಸ್ಪರ್ಷಿಸುವ ಕಾರಣ, ಇಡೀ ದಿನ ಬಿಸಿಲಿನಲ್ಲೇ ಕಳೆಯುವುದರಿಂದ, ತಿರುಗಾಟದಿಂದ ನಮ್ಮ ದೇಹದ ಬಗ್ಗೆ ಗಮನ ಕೊಡಲಾಗದೇ ಇರುವುದು ಸೇರಿದಂತೆ ನಾನಾ ಕಾರಣಗಳಿಂದ ನಮ್ಮ ಚರ್ಮ (Skin care) ಹಾಗೂ ಕೂದಲು (Hair Care) ಎಂದಿನಂತೆ ಇರುವುದಿಲ್ಲ. ಆದರೆ, ಇವೆಲ್ಲವನ್ನೂ ಮರೆತರೆ ದಕ್ಕುವ ಪ್ರವಾಸದ ಅನುಭವ ಅಲ್ಲಿ ಮುಖ್ಯವಾಗುತ್ತದೆ ಎಂಬುದು ಸತ್ಯ.
ಏನೇ ಇರಲಿ, ಸ್ವಲ್ಪ ಮುತುವರ್ಜಿ, ಕಾಳಜಿ ವಹಿಸಿದರೆ ಚರ್ಮ ಹಾಗೂ ಕೂದಲ ಮೇಲಾಗುವ ಹಾನಿಯನ್ನು ಬಹುತೇಕ ತಗ್ಗಿಸಬಹುದು. ಹಾಗಾದರೆ, ಪ್ರವಾಸದ ಸಮಯದಲ್ಲಿ ನಮ್ಮ ಚರ್ಮ ರಕ್ಷಣೆ ಹೇಗೆ ಎಂದು ನೋಡೋಣ ಬನ್ನಿ.
1. ಎಲ್ಲೇ ಹೋಗುವುದಿದ್ದರೂ ಆಯಾ ಪ್ರದೇಶದಲ್ಲಿ ವಾತಾವರಣ ಹೇಗಿದೆ ಎಂಬುದನ್ನು ಅಂತರ್ಜಾಲದಲ್ಲಿ ಮೊದಲೇ ನೋಡಿ ತಿಳಿದುಕೊಳ್ಳಿ. ಆ ಜಾಗದ ಹವಾಮಾನ ಹಾಗೂ ಇತರೇ ಮಾಹಿತಿಗಳನ್ನು ಕಲೆ ಹಾಕಿ. ಅಲ್ಲಿನ ತಾಪಮಾನಕ್ಕೆ ತಕ್ಕ ಹಾಗೆ ಚರ್ಮದ ರಕ್ಷಣೆಗೆ ಅಗತ್ಯ ಬೇಕಾಗಿರುವ ವಸ್ತುಗಳನ್ನು ತೆಗೆದುಕೊಳ್ಳಿ. ಉದಾಹರಣೆಗೆ, ನಿಮ್ಮ ನಿತ್ಯವೂ ಬಳಸುವ ಮಾಯ್ಶ್ಚರೈಸರ್, ಸನ್ಸ್ಕ್ರೀನ್ ಲೋಶನ್ ಇತ್ಯಾದಿಗಳನ್ನು ಮರೆಯಬೇಡಿ.
2. ನೀವು ನಿತ್ಯವೂ ನಿಮ್ಮ ಚರ್ಮದ ರಕ್ಷಣೆಗಾಗಿ ಮನೆಯಲ್ಲಿ ಮಾಡಿಕೊಳ್ಳುವ ಅಭ್ಯಾಸವನ್ನು ಪ್ರವಾಸದಲ್ಲಿ ಬಿಡಬೇಡಿ. ಮನೆಯಲ್ಲಿ ಎದ್ದ ಕೂಡಲೇ, ಚೆನ್ನಾಗಿ ಮುಖ ತೊಳೆದ ಮೇಲೆ ಬಳಸುವ ಕ್ರೀಮ್, ಸನ್ಸ್ಕ್ರೀನ್ ಲೋಶನ್, ಇತ್ಯಾದಿಗಳ ಬಳಕೆಯನ್ನು ಇಲ್ಲೂ ಮಾಡಿ. ನೀವು ಬಂದ ಸ್ಥಳ ಸೂರ್ಯನ ಬಿಸಿಲು ಹೆಚ್ಚು ಬೀಳುವ ತಾಣವಾಗಿದ್ದರೆ, ಆ ಜಾಗಕ್ಕೆ ಅಗತ್ಯವಿರುವಷ್ಟು ಎಸ್ಪಿಎಫ್ ಮಟ್ಟವಿರುವ ಲೋಶನ್ ಬಳಸಿಕೊಳ್ಳಿ. ರಾತ್ರಿ ಮಲಗುವಾಗಲೂ ನೀವು ಮನೆಯಲ್ಲಿ ಮಾಡುವ ಕ್ರಮಗಳನ್ನೇ ಇಲ್ಲೂ ಫಾಲೋ ಮಾಡಿ. ಮೇಕಪ್, ಮೇಕಪ್ ವೈಪ್, ನೈಟ್ ಕ್ರೀಮುಗಳು ಎಲ್ಲವೂ ಇರಲಿ.
3. ಪ್ರವಾಸದಲ್ಲಿ ಹೊರಗೆ ಹೋಗುವಾಗ ನಿಮ್ಮ ಪರ್ಸ್ನಲ್ಲಿ ಮಾಯ್ಶ್ಚರೈಸರ್ ಹಾಗೂ ಸನ್ಸ್ಕ್ರೀನ್ ಲೋಶನ್ ಇಟ್ಟುಕೊಂಡಿರಿ. ಹಾಗೂ ಅಗತ್ಯ ಬಂದಲ್ಲಿ ಬಳಸಿ.
4. ಎಲ್ಲಕ್ಕಿಂತ ಮುಖ್ಯವಾಗಿ ಪ್ರವಾಸದಲ್ಲಿ ಹಾಳುಮೂಳು ತಿನ್ನುವುದೂ ಕೂಡಾ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ನಿಮ್ಮ ಚರ್ಮದ ಆರೋಗ್ಯಕ್ಕೆ ಹೊಂದದ ಆಹಾರಗಳಿಂದ ದೂರವಿರಿ.
ಇದನ್ನೂ ಓದಿ: Travel Tips: ಮಕ್ಕಳಲ್ಲಿ ಕಾಡಿನ ಬಗ್ಗೆ ಪ್ರೀತಿ ಬೆಳೆಸಲು ಈ ಬೇಸಿಗೆಯಲ್ಲಿ ಕಾಡಿಗೆ ಕರೆದೊಯ್ಯದಿದ್ದರೆ ಹೇಗೆ?!
5. ಹೆಚ್ಚು ನೀರು ಕುಡಿಯಿರಿ. ಪ್ರವಾಸದಲ್ಲಿ ಬಹುತೇಕರು ನೀರು ಕುಡಿಯುವುದನ್ನೇ ಮರೆಯುತ್ತಾರೆ. ಆದರೆ, ದೇಹಕ್ಕೆಪ್ರವಾಸದ ಸಂದರ್ಭ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಹಾಗಾಗಿ ನೀರು ಕುಡಿಯುವುದು ಅತ್ಯಂತ ಮುಖ್ಯ.
6. ಕೂದಲು ಹಾಳಾಗುತ್ತದೆ ಎಂಬ ಭಯ ನಿಮ್ಮದಾಗಿದ್ದರೆ, ತಲೆಯನ್ನು ಶಾಲಿನಿಂದ ಮುಚ್ಚಿಕೊಳ್ಳುವುದು ಅಥವಾ ಸ್ಕಾರ್ಫ್ನಿಂದ ಸುತ್ತಿಕೊಳ್ಳಬಹುದು.
7. ಕೂದಲನ್ನು ಹರವಿಕೊಳ್ಳುವ ಬದಲು, ಕಟ್ಟಿ. ಪೋನಿಟೇಲ್ ಹಾಕಿ. ಫೋಟೋ ಹಾಗೂ ಅಗತ್ಯ ಸಂದರ್ಭಗಳಿಗೆ ಮಾತ್ರ ಕೂದಲನ್ನು ಬೇಕಿದ್ದರೆ ಹರವಿಕೊಳ್ಳಿ. ಯಾಕೆಂದರೆ ಹರಡಿಕೊಂಡ ಕೂದಲು ಬೇಗ ಸಿಕ್ಕುಗಟ್ಟುತ್ತದೆ. ಧೂಳು, ಕಶ್ಮಲಗಳು ಸೇರಿಕೊಂಡು ಕೂದಲು ಬೇಗ ಹಾಳಾಗುತ್ತದೆ.
8. ಮುಖ್ಯವಾಗಿ ಪ್ರವಾಸದಿಂದ ಮನೆಗೆ ಬಂದ ಮೇಲೆ ನಿಮ್ಮ ಕೂದಲು ಹಾಗೂ ಚರ್ಮಕ್ಕೆ ಸ್ವಲ್ಪ ಹೆಚ್ಚೇ ಕಾಳಜಿ ಆರೈಕೆ ಮಾಡಿ. ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿ ಒಂದೆರಡು ಗಂಟೆ ಬಿಟ್ಟು ಸ್ನಾನ ಮಾಡಿಕೊಳ್ಳಬಹುದು. ಮುಖದ ಚರ್ಮಕ್ಕೂ ಮಸಾಜ್ ಮಾಡಿಕೊಳ್ಳಬಹುದು ಹಾಗೂ ಫೇಸ್ ಪ್ಯಾಕ್ ಹಚ್ಚಿಕೊಳ್ಳಬಹುದು.
ಇದನ್ನೂ ಓದಿ: Travel Tips: ಬೇಸಿಗೆಯಲ್ಲಿ ಹಿಮಬೆಟ್ಟ: ಕಣ್ಣಿಗೂ ಮನಸ್ಸಿಗೂ ತಂಪು ತಂಪು ಕೂಲ್ ಕೂಲ್!
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ23 hours ago
Odisha Train Accident: ಅಪಘಾತ ನಡೆದು 51 ಗಂಟೆಯಲ್ಲೇ ಹಳಿ ಸಿದ್ಧ, ರೈಲು ಸಂಚಾರ; 36 ತಾಸು ಸ್ಥಳದಲ್ಲೇ ಇದ್ದ ಸಚಿವ
-
ಕರ್ನಾಟಕ24 hours ago
Ullal News: ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ. ಖಾದರ್
-
ಕರ್ನಾಟಕ16 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ23 hours ago
Shivamogga News: ಶಿಕಾರಿಪುರದಲ್ಲಿ ರಾಷ್ಟ್ರಕೂಟರ ಕಾಲದ ಪ್ರಾಚ್ಯಾವಶೇಷಗಳು ಪತ್ತೆ
-
ಕರ್ನಾಟಕ13 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ದೇಶ11 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ15 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ